Friday 23 December 2016

ಅಲ್ಪಾಯುಷಿಯ ಅಂತಿಮ ಆಲ್ಬಂ - ಜೀವನ ತರಂಗ


ಇವು ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ, ಆದರೆ ದುರದೃಷ್ಟವಶಾತ್ ಅಲ್ಪಾಯುಷಿಯಾಗಿದ್ದ ಸಂಗೀತ ನಿರ್ದೇಶಕ ಎಂ. ವೆಂಕಟರಾಜು ಅವರ ಕೊನೆಯ ಚಿತ್ರ ಜೀವನ ತರಂಗದ ಹಾಡುಗಳು. ಅವರ ಮೆಚ್ಚಿನ ಎಸ್.ಕೆ.ಕರೀಂಖಾನ್ ರಚಿಸಿದ್ದ ಒಂದೊಂದು ಹಾಡೂ ಜೇನಿನಲ್ಲಿ ಅದ್ದಿ ತೆಗೆದಿದೆಯೇನೋ ಅನ್ನಿಸುವಂಥದ್ದು.  ಈ ಚಿತ್ರ 1963ರಲ್ಲಿ ಬಿಡುಗಡೆಯಾಗುವುದರೊಳಗೆ ಅವರು ಇಹಲೋಕ ತ್ಯಜಿಸಿದ್ದರು.  ಆಗಲೇ ಸಂಯೋಜಿಸಿ ಇಟ್ಟಿದ್ದ ಒಂದೆರಡು ಹಾಡುಗಳನ್ನು ಆ ಮೇಲೆ ಚಂದ್ರಕುಮಾರ ಚಿತ್ರದಲ್ಲಿ ಅವರ ಗುರು ಟಿ. ಚಲಪತಿ ರಾವ್  ಬಳಸಿಕೊಂಡರು.  ನಿಮ್ಮ ವಿರಾಮದ ವೇಳೆಯಲ್ಲಿ ಶಾಂತ ಮನಸ್ಸಿನಿಂದ  ಒಂದೊಂದಾಗಿ ಈ ಹಾಡುಗಳನ್ನು ಆಲಿಸಿ.  ಸಾಧ್ಯವಾದರೆ ಹೆಡ್ ಫೋನ್ ಬಳಸಿ. ಇವುಗಳಲ್ಲಿರುವ presence of voice and instruments ಅಂದರೆ ಧ್ವನಿ ಮತ್ತು ವಾದ್ಯಗಳ ಸ್ಪಷ್ಟತೆಯನ್ನು ಅನುಭವಿಸಿ.

ಬಾರಾ ಮಂದಾರ
ಕರಿಂಖಾನ್ ಅವರ ಪ್ರಾಸಬದ್ಧ ಪದಪುಂಜಗಳನ್ನೊಳಗೊಂಡ ಆನಂದಮಯ ಹಾಡು.  ಪದಗಳ ಅರ್ಥಕ್ಕೆ ಇಲ್ಲಿ ಹೆಚ್ಚು ಒತ್ತು ಇಲ್ಲ.  ಉಕ್ಕುವ ಉಲ್ಲಾಸಕ್ಕೆ ಪ್ರಾಮುಖ್ಯ.  ಮಧ್ಯದಲ್ಲಿ ಒಂದೆಡೆ ಬರುವ ಮಂದ್ರ ಕ್ಲಾರಿನೆಟ್ ಮತ್ತು ತಾರ ಕೊಳಲಿನ ಮೇಳ ಗಾಢ ಸಕ್ಕರೆ ಪಾಕದಲ್ಲಿ ನಿಂಬೆಯ ರಸವನ್ನು ಸೇರಿಸಿದಂತಿದ್ದು  ಎಸ್.ಜಾನಕಿ ಅವರ ಜೇನದನಿಗೆ ಸಂವಾದಿಯೇನೋ ಅನ್ನಿಸುವಂತಿದೆ!  ಬೋಲ್ ಗಳನ್ನು ಅನುಸರಿಸುವ ಶ್ರುತಿಬದ್ಧ ಢೋಲಕ್,  ವಯಲಿನ್ಸ್, ಮ್ಯಾಂಡೊಲಿನ್ ಇತ್ಯಾದಿ ವಾದ್ಯಗಳು ಹಾಡಿಗೆ ಮೆರುಗು ನೀಡಿವೆ.




ಹೆಣ್ಣಾಗಿ ಬಂದ ಮೇಲೆ
ಮೊದಲ ಹಾಡಿನ ಉಲ್ಲಾಸಕ್ಕೆ contrast ರೂಪದಲ್ಲಿರುವ ವಿಷಾದ ಭಾವದ ಹಾಡಿದು. ಜಾನಕಿ ಅವರದ್ದೇ ಧ್ವನಿ.  ಇದರಲ್ಲಿ ಆ ಕಾಲದಲ್ಲಿ ಜನಪ್ರಿಯವಾಗಿದ್ದ ಸೋಲೊವಾಕ್ಸ್ ಎಂಬ  ಸಂಗೀತೋಪಕರಣ ಬಳಕೆಯಾಗಿದೆ.  ಅದು ಈಗಿನ ಕೀಬೋರ್ಡುಗಳಂತೆ ಕರ್ಕಶವಾಗಿರದೆ ಇತರ ವಾದ್ಯಗಳ ಜೊತೆ ಶ್ರುತಿಶುದ್ಧವಾಗಿ ಮಿಳಿತವಾಗುತ್ತಿದ್ದುದನ್ನು ಗಮನಿಸಬಹುದು.  ಕನ್ನಡದ ಹಾಸ್ಯ ನಟ ಹನುಮಂತಾಚಾರ್ ಇದರ ನುಡಿಸುವಿಕೆಯಲ್ಲಿ ಪ್ರಾವೀಣ್ಯ ಹೊಂದಿದ್ದರು. 60ರ ದಶಕದಲ್ಲಿ ಬೆಂಗಳೂರು ಆಕಾಶವಾಣಿಯ ಕಾರ್ಮಿಕರ ಕಾರ್ಯಕ್ರಮದಲ್ಲಿ ಬರುತ್ತಿದ್ದ ಚಿತ್ರಗೀತೆಗಳನ್ನಾಧರಿಸಿದ ಗೀತ ರೂಪಕದಲ್ಲಿ ಈ ಹಾಡು ಹೆಚ್ಚಾಗಿ ಸೇರ್ಪಡೆಗೊಳ್ಳುತ್ತಿತ್ತು.  ರಾಜನ್ ನಾಗೇಂದ್ರ ಅವರು ನೀ ನಡೆವ ಹಾದಿಯಲ್ಲಿ ಹಾಡಿಗೆ ಇದರಿಂದ ಸ್ಪೂರ್ತಿ ಪಡೆದಿರಬಹುದು!




ಬಂತಮ್ಮ ಮದುವೆ ಬಂತಮ್ಮ
ಇದೂ ಜಾನಕಿ ಅವರದೇ ಧ್ವನಿಯಲ್ಲಿರುವ, ಸೋದರ ಸೊಸೆಯೊಬ್ಬಳು ತನ್ನ ಅತ್ತೆಯನ್ನು ಛೇಡಿಸುವ ಹಾಡು.  ಸನ್ನಿವೇಶಕ್ಕೆ ತಕ್ಕಂತೆ ನಮ್ಮತ್ತೆ ರಾಣಿ,  ಚಂದದ ಚಿಕ್ಕಪ್ಪ,  ನೋಟಿನ ಕಟ್ಟು, ಮೂರೆಳೆ ಚೈನು ಇತ್ಯಾದಿ ಪದಗಳನ್ನು ಬಳಸಲಾಗಿದೆ.  ಮದುಮಗನನ್ನು ಮದುವಣ್ಣನೆಂದು ಸಂಬೋಧಿಸಿರುವುದು ಗಮನಾರ್ಹ.  ಕರೀಂಖಾನ್ ಅವರು ಮನೆ ಅಳಿಯ ಚಿತ್ರಕ್ಕಾಗಿ ರಚಿಸಿದ ಗೊಲ್ಲರು ಬಾಲೆ ಹಾಡಲ್ಲೂ ಈ ಪದ ಬಳಸಿದ್ದಾರೆ.




ಮನದೆ ಮುನಿದೆ
ಇದು ಪಿ.ಬಿ.ಶ್ರೀನಿವಾಸ್ ಮತ್ತು ಜಾನಕಿ ಅವರ ಧ್ವನಿಯಲ್ಲಿರುವ ಯುಗಳ ಗೀತೆ.  ಇವರಿಬ್ಬರು ಭಕ್ತ ಕನಕದಾಸದ ಕಾಲದಿಂದಲೂ ವೆಂಕಟರಾಜು ಅವರ ನೆಚ್ಚಿನ ಗಾಯಕರಾಗಿದ್ದವರು.  ಹಾಡಿನ ಮೂಡಿಗೆ ತಕ್ಕಂತೆ ವೇಗದ ಲಯ ಇದೆ.  ಕಪ್ಪು ಎರಡರ ಶ್ರುತಿಯಲ್ಲಿ ಮಧ್ಯ ಮತ್ತು ತಾರ ಸಪ್ತಕಗಳಲ್ಲೇ  ಸಂಚರಿಸಿ ಮೇಲಿನ ಮಧ್ಯಮವನ್ನು ಸ್ಪರ್ಶಿಸುವ ಈ ಹಾಡಿನಲ್ಲಿ  ಪಿ.ಬಿ.ಎಸ್ ಅವರು ಕೆಲವೆಡೆ ಫಾಲ್ಸ್ ವಾಯ್ಸ್ ಬಳಸಿದ್ದಾರೆ.  ಬಹಳಷ್ಟು ಜಂಪಿಂಗ್ ನೋಟ್ಸ್ ಇರುವ ಈ ರಚನೆ ಹಾಡಲು ನುಡಿಸಲು ಅಷ್ಟೊಂದು ಸುಲಭವಲ್ಲ.  ಆದರೆ ಆಲಿಸಲು ಬಲು ಆಪ್ಯಾಯಮಾನ.




ಆನಂದ ತುಂಬಿ ತಂದೆ
ಪಿ.ಬಿ.ಎಸ್ ಮತ್ತು ಜಾನಕಿ ಅವರ ಯುಗಳ ಸ್ವರಗಳಲ್ಲಿರುವ ಇದು ರಾಧಾ-ಕೃಷ್ಣ ಸಂವಾದ ರೂಪದಲ್ಲಿದ್ದು ದರ್ಬಾರಿ ಕಾನಡಾ ರಾಗಾಧಾರಿತವಾಗಿದೆ.  ಕೃಷ್ಣನ ಹಾಡಾದರೂ ಆರಂಭದಲ್ಲಿ ಮಾತ್ರ ಕೊಳಲಿನ ತಾನವಿದ್ದು ತಬ್ಲಾದ ಚಿಕ್ಕ ಸೋಲೋದ ನಂತರ  ಹಾಡು ಆರಂಭವಾದ ಮೇಲೆ ಸಿತಾರ್, ವಯಲಿನ್ಸ್ ಮತ್ತು  ತಾರ್ ಶಹನಾಯಿ ಬಳಕೆಯಾಗಿವೆ. ಕೊನೆಯಲ್ಲಿ ಚುಟುಕಾದ ಚಿಟ್ಟೆಸ್ವರಗಳೂ ಇವೆ. ಈ ಹಾಡಿಗೆ ತಬ್ಲಾ ನುಡಿಸಿದ ಕಲಾವಿದರಿಗೆ ನೂರಕ್ಕೆ ನೂರು ಅಂಕ ಕೊಡಲೇ ಬೇಕು.  ಎಸ್.ಕೆ. ಕರೀಂಖಾನ್ ಅವರಂಥ ಅನ್ಯ ಧರ್ಮೀಯ ಕವಿಯೊಬ್ಬರು ಇಂತಹ ಕೃಷ್ಣನ ಗೀತೆಗಳನ್ನು ರಚಿಸುವುದು ಆಗ ವಿಶೇಷ ಸುದ್ದಿಯಾಗುತ್ತಿರಲಿಲ್ಲ.  ಇವರೇ ರಚಿಸಿದ ನಟವರ ಗಂಗಾಧರ ಅಥವಾ ಶಕೀಲ್ ಬದಾಯೂನಿ ರಚಿಸಿದ ಮನ್ ತಡಪತ್ ಹರಿ ದರುಶನ್ ಕೊ ಆಜ್ ಮುಂತಾದ ಹಾಡುಗಳು ಆಗ ಚಿತ್ರರಂಗದ ಸರ್ವಧರ್ಮ ಸಮನ್ವಯದ ಕುರುಹೆಂಬಂತೆ ಸ್ವೀಕರಿಸಲ್ಪಡುತ್ತಿದ್ದವು!




ಬಂತು ನವ ಜೀವನ
ಪ್ರಸಿದ್ಧ ಗಾಯಕರು, ದೊಡ್ಡ ಆರ್ಕೆಷ್ಟ್ರಾ ಯಾವುದೂ ಇಲ್ಲದೆಯೂ ಒಂದು ಉತ್ಕೃಷ್ಟ ಹಾಡನ್ನು  ಸಂಯೋಜಿಸಬಹುದೆಂದು ವೆಂಕಟರಾಜು ಇಲ್ಲಿ ತೋರಿಸಿಕೊಟ್ಟಿದ್ದಾರೆ.  ಕವ್ವಾಲಿ ಶೈಲಿಯ ಈ ಹಾಡಿನಲ್ಲಿ ಬಳಕೆಯಾಗಿರುವುದು ತಬ್ಲಾ, ಹಾರ್ಮೋನಿಯಮ್ ಮತ್ತು ಕ್ಲಾರಿನೆಟ್ ಮಾತ್ರ .  ಇದನ್ನು ಹಾಡಿದವರು  ಸತ್ಯ ರಾವ್ ಮತ್ತು ಸೌಮಿತ್ರಿ ಎಂಬ ಹೆಸರೇ ಕೇಳಿರದ ಕಲಾವಿದರು! ಚಿತ್ರದ ನಾಮಾವಳಿಯಲ್ಲೂ ಇವರ ಉಲ್ಲೇಖವೇ ಇಲ್ಲ! ಆದರೂ ಅದೆಂತಹ ಧ್ವನಿಭಾರ, ಅದೆಂತಹ voice throw, ಅದೆಂತಹ ಶ್ರುತಿ ಶುದ್ಧತೆ, ಅದೆಂತಹ ವೃತ್ತಿಪರತೆ!  ಈ ಗಾಯಕರು ಬಹುಶಃ ನಾಟಕರಂಗದಲ್ಲಿ ಪಳಗಿದವರಿರಬೇಕು.  ವೆಂಕಟರಾಜು ಅವರೂ ನಾಟಕದ ಹಿನ್ನೆಲೆಯಿಂದ ಬಂದವರೇ ಆಗಿದ್ದರಿಂದ ಈ ಪ್ರಯೋಗ ಮಾಡಿರಬಹುದು.  ನಿಮ್ಮಲ್ಲಿ ಹೆಚ್ಚಿನವರು ಖಂಡಿತವಾಗಿಯೂ ಈ ಹಾಡನ್ನು (ಇತ್ತೀಚೆಗೆ) ಕೇಳಿರಲಿಕ್ಕಿಲ್ಲ.  ಆ ಕಾಲದಲ್ಲಿ ಆಕಾಶವಾಣಿ ಬೆಂಗಳೂರು, ಧಾರವಾಡ, ಭದ್ರಾವತಿಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು . 




ಜೀವನ ತರಂಗದ ಹಾಡುಗಳ ವೀಡಿಯೊ ಮಾತ್ರವಲ್ಲ, ಆ ಪೂರ್ತಿ ಚಿತ್ರವೇ ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು. ಈ ಪೋಸ್ಟ್ ಓದಿದ ನಂತರ ವೀಕ್ಷಿಸಿದರೆ ಹೆಚ್ಚಿನ ಆನಂದ ದೊರೆಯಬಹುದು!


Friday 16 December 2016

ಚಂದಮಾಮದ ಜಾಹೀರಾತುಗಳು


    ಈಗ ಟಿವಿಯಲ್ಲಿ ಜಾಹೀರಾತುಗಳು ಆರಂಭವಾದೊಡನೆ ಮನದಲ್ಲೇ ಹಿಡಿಶಾಪ ಹಾಕುತ್ತಾ ರಿಮೋಟ್ ಕೈಗೆತ್ತಿಕೊಳ್ಳುವವರೇ ಜಾಸ್ತಿ.  ಆದರೆ ಹಿಂದಿನ ಕಾಲದಲ್ಲಿ ರೇಡಿಯೋ ಸಿಲೋನ್ ಮತ್ತು ಚಂದಮಾಮದ ಜಾಹೀರಾತುಗಳನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದರು.  ಅವು ಮಿತಿ ಮೀರಿದ ಸಂಖ್ಯೆಯಲ್ಲಿರದೆ ಮನಸ್ಸನ್ನು ಮುದಗೊಳಿಸುವಂತಿರುತ್ತಿದ್ದುದೇ ಇದಕ್ಕೆ ಕಾರಣ. ಜಾಹೀರಾತುದಾರರ ಅವಗಣನೆಗೊಳಗಾದ ರೇಡಿಯೋ ಸಿಲೋನ್ ಈಗ ತನ್ನ ವೈಭವವನ್ನೆಲ್ಲ ಕಳಕೊಂಡು  ಕುಟುಕು ಜೀವ ಹಿಡಿದುಕೊಂಡಿದೆ.  ಪ್ರಕಟಣೆಯನ್ನು ನಿಲ್ಲಿಸಿದ್ದ ಚಂದಮಾಮ ಕೆಲ ವರ್ಷಗಳ ಹಿಂದೆ ಅಂತರ್ಜಾಲದಲ್ಲಿ ಅವತಾರವೆತ್ತಿದಾಗ ಹಳೆಯ ಸಂಚಿಕೆಗಳೊಡನೆ ಹಳೆ ಜಾಹೀರಾತುಗಳದ್ದೇ ಒಂದು ವಿಭಾಗವನ್ನೂ ಅಳವಡಿಸಿಕೊಂಡಿತ್ತು. ಆದರೇಕೋ ಕೆಲ ಕಾಲದ ನಂತರ ಚಂದಮಾಮದ ಜಾಲತಾಣ ನೆನಪುಗಳನ್ನು ಮಾತ್ರ ಉಳಿಸಿ ಅಂತರ್ಜಾಲದಿಂದ ಅಂತರ್ಧಾನವಾಯಿತು. ಆದರೆ ಅಷ್ಟರೊಳಗೆ ಕೆಲವು ನೆನಪುಗಳನ್ನು ಬಾಚಿಕೊಳ್ಳಲು ನನಗೆ ಸಾಧ್ಯವಾಗಿತ್ತು. ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. 


     ಸಿನಿಮಾ ಜಾಹೀರಾತುಗಳಿಗೂ ಚಂದಮಾಮಕ್ಕೂ 40ರ ದಶಕದಲ್ಲಿ ಅದು ಆರಂಭವಾದಾಗಿನಿಂದಲೇ ನಂಟು ಬೆಳೆದಿತ್ತು.  ಚಂದಮಾಮದ ವಿಜಯಾ ಸಂಸ್ಥೆ ಸ್ವತಃ ಚಿತ್ರಗಳನ್ನು ನಿರ್ಮಿಸುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು. ಆಗ ಹೆಚ್ಚಾಗಿ ತಮಿಳು ಚಿತ್ರಗಳೇ  ತಯಾರಾಗುತ್ತಿದ್ದುದರಿಂದ ಸಹಜವಾಗಿಯೇ ಅವುಗಳ ಜಾಹೀರಾತುಗಳು ಹೆಚ್ಚಾಗಿರುತ್ತಿದ್ದವು.  ಆ ಮೇಲೆ ಕ್ರಮೇಣ ತೆಲುಗು, ಕನ್ನಡ, ಹಿಂದಿ ಸಿನಿಮಾ ಜಾಹೀರಾತುಗಳು ಬರತೊಡಗಿದವು.   ಇವುಗಳಿಂದಾಗಿ ಯಾವ ಯಾವ ಊರಿನಲ್ಲಿ ಯಾವ ಯಾವ ಸಿನಿಮಾ ಟಾಕೀಸುಗಳು ಆ ಕಾಲದಲ್ಲಿ ಇದ್ದವು ಎಂಬ ಚಿತ್ರಣವೂ ನಮಗೆ ದೊರೆಯುತ್ತದೆ.  ಮೇಲಿನ ಮೂರು ಜಾಹೀರಾತುಗಳಿಂದ ಮಂಗಳೂರಿನ  ನ್ಯೂ ಚಿತ್ರಾ ಟಾಕೀಸು 51ನೇ ಇಸವಿಗಿಂತಲೂ ಹಿಂದಿನಿಂದ ಇತ್ತೆಂದೂ, ರೂಪವಾಣಿ ಟಾಕೀಸು 1953 ಮತ್ತು ಜ್ಯೋತಿ ಚಿತ್ರಮಂದಿರ  55ರ ಸುಮಾರಿಗೆ ಆರಂಭವಾದವೆಂದು ತಿಳಿಯುತ್ತದೆ.  ನಿಮ್ಮೂರಿನ ಯಾವುದಾದರೂ ಟಾಕೀಸು ಕಾಣಿಸುತ್ತಿದೆಯೇ ನೋಡಿ.  ಮಂಗಳೂರಿನ ಈ ಮೂರೂ ಟಾಕೀಸುಗಳು ಈಗಲೂ ಇದ್ದು ಆಗ ತಮಿಳು, ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ನ್ಯೂ ಚಿತ್ರಾ  ನಂತರ ಇಂಗ್ಲಿಷ್ ಚಿತ್ರಗಳಿಗೆ ಮುಡಿಪಾಯಿತು. ನಾನು 70ರ ದಶಕದಲ್ಲಿ  ನೌಕರಿಗಾಗಿ ಮಂಗಳೂರಿಗೆ ಬಂದಾಗ ರೂಪವಾಣಿ ಟಾಕೀಸು ನನಗೆ ಅಚ್ಚುಮೆಚ್ಚಿನದಾಗಿತ್ತು.  ಅದುವರೆಗೆ ನಾನು ರೇಡಿಯೋದಲ್ಲಿ ಹಾಡುಗಳನ್ನು ಕೇಳುತ್ತಾ ನೋಡಬೇಕೆಂದು ಆಸೆಪಟ್ಟಿದ್ದ ಅದೆಷ್ಟೋ ಹಳೆಯ ಚಿತ್ರಗಳು ಇಳಿಸಿದ ದರಗಳ ಬೆಳಗ್ಗಿನ ದೇಖಾವೆಯಾಗಿ ನನಗೆ ಅಲ್ಲಿ ನೋಡಲು ಸಿಕ್ಕಿದ್ದೇ ಇದಕ್ಕೆ ಕಾರಣ.  ಆ ಟಾಕೀಸಿಗೆ  ವಾರಾಂತ್ಯದಲ್ಲಿ ಬರಲಿರುವ ಹಳೇ ಸಿನಿಮಾದ ಪೋಸ್ಟರನ್ನು  ನಿರ್ದಿಷ್ಟ ಜಾಗವೊಂದರಲ್ಲಿ ಒಂದು ವಾರ ಮೊದಲೇ ಹಚ್ಚಿಟ್ಟಿರುತ್ತಿದ್ದರು.  ಅದನ್ನು ನೋಡಿಕೊಂಡು ಬಂದು ಆ ಚಿತ್ರ ನೋಡುವ ಕನಸು ಕಾಣುತ್ತಾ ಒಂದು ವಾರವನ್ನು ಕಳೆಯುವುದು ನಿಜವಾಗಿ ಚಿತ್ರ ನೋಡಿದ್ದಕ್ಕಿಂತಲೂ ಹೆಚ್ಚಿನ ಖುಶಿ ನೀಡುತ್ತಿತ್ತು!

ಚಂದಮಾಮದ ಜಾಹೀರಾತಿನ ಬಹುತೇಕ ಚಿತ್ರಗಳು ‘ಶರವೇಗ’ದಲ್ಲಿ ಬರುತ್ತಿದ್ದವು!  ಮಾಯಾ ಬಜಾರ್, ಹಮ್ ಪಂಛೀ ಏಕ್ ಡಾಲ್ ಕೆ ಮುಂತಾದ ಚಿತ್ರಗಳ  ಜಾಹೀರಾತಿನೊಂದಿಗೆ ಇಡೀ ಕಥೆಯನ್ನೂ ಹಲವು ಪುಟಗಳಲ್ಲಿ ಪ್ರಕಟಿಸಲಾಗಿತ್ತು. ಕೆಲವು ಸಲ ಬೇರೆ ಭಾಷೆಯ ಸಿನಿಮಾ ಹೆಸರನ್ನು ಕನ್ನಡಕ್ಕೆ ಭಾಷಾಂತರಿಸುವುದೂ ಇತ್ತು. ಉದಾಹರಣೆಗೆ ಸೆಂಗೋಟ್ಟೈ ಸಿಂಗಂ ಎಂಬ ತಮಿಳು ಸಿನಿಮಾ ಕನ್ನಡ ಜಾಹೀರಾತಿನಲ್ಲಿ ಶಂಕೋಟೆ ಸಿಂಹ ಎಂದಿತ್ತು.  ತೆಲುಗಿನ ಅಪ್ಪುಚೇಸಿ ಪಪ್ಪು ಕೂಡು ಸಿನಿಮಾದ  ಹೆಸರಿನ ಅರ್ಥ ಗೊತ್ತಿಲ್ಲದಿದ್ದರೂ ಪ್ರಾಸಬದ್ಧವಾಗಿ ಆಕರ್ಷಕ ಎನ್ನಿಸುತ್ತಿತ್ತು. ಮುಂದೊಮ್ಮೆ ನಮ್ಮ ಇಲಾಖಾ ತರಬೇತಿಗಾಗಿ ಮದರಾಸಿಗೆ ಹೋದಾಗ ಅಲ್ಲಿ ತೆಲುಗು ಬಲ್ಲ ಸಹೋದ್ಯೋಗಿಯೊಬ್ಬರು  ಪಪ್ಪು ಎಂದರೆ ಒಂದು ವ್ಯಂಜನ ವಿಶೇಷವೆಂದೂ, ಋಣಂ ಕೃತ್ವಾ ಘೃತಂ ಪಿಬೇತ್  ಎಂಬಂತೆ ಸಾಲ ಮಾಡಿಯಾದರೂ ಮೃಷ್ಟಾನ್ನ ಉಣ್ಣು ಎಂದು ಇದರರ್ಥವೆಂದೂ ತಿಳಿಸಿ ಒಂದು ಒಳ್ಳೆಯ ಆಂಧ್ರ ಹೋಟಲಿಗೆ ಕರೆದೊಯ್ದು  ಪಪ್ಪುವಿನ ರುಚಿಯನ್ನೂ ಸವಿಯುವಂತೆ ಮಾಡಿದ್ದರು!


     ಚಂದಮಾಮದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದ ಇನ್ನೊಂದು ಜಾಹೀರಾತು ಗ್ರಾಮಫೋನ್ ರೆಕಾರ್ಡುಗಳ ಡೀಲರ್ ಆಗಿದ್ದ ಸೀತಾ ಫೋನ್ ಕಂಪನಿದ್ದು.  30ರ ದಶಕದಿಂದ ಸಕ್ರಿಯವಾಗಿದ್ದ ಅದು ಈಗಲೂ ಬೆಂಗಳೂರಲ್ಲಿ ಇದೆ.  ಆ ಕಾಲದಲ್ಲಿ ಸಿನಿಮಾ ಹಾಡುಗಳ ಜೊತೆ ನಾಟಕ, ಶಾಸ್ತ್ರೀಯ ಸಂಗೀತ  ಇತ್ಯಾದಿಗಳ ರೆಕಾರ್ಡುಗಳು ಹೆಚ್ಚು ಮಾರಾಟವಾಗುತ್ತಿದ್ದಿರಬೇಕು.  ಈ ಚಿತ್ರದಲ್ಲಿ ಕಾಣುವ ‘ನಕಲಿ’ಗಳು ಎಂದರೆ ಪ್ರಸಿದ್ಧ ಹಾಡುಗಳ version songs ಇರಬಹುದೇನೋ. ಅವೆಲ್ಲ ಎಲ್ಲಿ ಹೋದವೋ.  ಜಗನ್ಮೋಹಿನಿ ಸಿನಿಮಾದ ಹಾಡುಗಳ ಜಾಹೀರಾತಂತೂ ಪ್ರತೀ ತಿಂಗಳು ಎಂಬಂತೆ ಕೆಲವು ವರ್ಷ ಬರುತ್ತಿತ್ತು.  ಆದರೆ ದುರದೃಷ್ಟವಶಾತ್  ಆ ಹಾಡುಗಳೂ ಈಗ ಎಲ್ಲೂ ಲಭ್ಯವಿಲ್ಲ.  ಇದ್ದುದೇ ಆದರೆ ಯಾರಾದರೂ ಇಷ್ಟರಲ್ಲಿ ಅಂತರ್ಜಾಲಕ್ಕೇರಿಸುತ್ತಿದ್ದರು.  ಬೆಂಗಳೂರಿನಲ್ಲಿರುವ ಯಾರಾದರೂ ಸೀತಾ ಫೋನ್ ಕಂಪನಿಯಲ್ಲೇ ಈ ಬಗ್ಗೆ ವಿಚಾರಿಸಬಹುದು. ಮಹಾತ್ಮಾ ಫಿಲಂಸ್ ಕುಟುಂಬದ ರಾಜೇಂದ್ರ ಸಿಂಗ್ ಬಾಬು ಅವರ ಪರಿಚಯವಿರುವವರು ಪ್ರಯತ್ನ ಪಟ್ಟರೆ ಈ ಹಾಡುಗಳು ಸಿಗಲೂಬಹುದು. ನಾನೂ ಆ ದಿಸೆಯಲ್ಲಿ ಪ್ರಯತ್ನ ಮುಂದುವರಿಸುತ್ತಿದ್ದೇನೆ.


     ವೀರ ಕಿಟ್ಟು ಮತ್ತು ಬಾಯಿಬಡುಕ ಪುಟ್ಟು ಎಂಬ ಡಾಲ್ಡಾದ ಜಾಹೀರಾತು ಒಂದು ಪುಟ್ಟ ಕಥೆಯ ರೂಪದಲ್ಲಿ ಇರುತ್ತಿತ್ತು.  ಬಾಯಿಬಡುಕ ಪುಟ್ಟು ಎನೋ ಒಂದು ಸಾಹಸ ಮಾಡಲು ಹೋಗಿ ಸೋತಾಗ ಕಿಟ್ಟು ಆತನಿಗೆ ವ್ಯಾಯಾಮ ಮಾಡಿ, ಹಾಲು ಕುಡಿದು, ಡಾಲ್ಡಾದಿಂದ ತಯಾರಿಸಿದ ಆಹಾರ ಸೇವಿಸಿ ಶಕ್ತಿವಂತನಾಗುವಂತೆ ಸಲಹೆ ನೀಡುತ್ತಿದ್ದ!  ಈ ಸಾಹಸಗಳು ಸಂಚಿಕೆಯಿಂದ ಸಂಚಿಕೆಗೆ ಬದಲಾಗುತ್ತಿದ್ದವು.  ಪ್ಯಾರೀಯವರ ಚಾಕೋಲೇಟುಗಳ ಜಾಹೀರಾತು ಬಲು ಮಜವಾಗಿರುತ್ತಿತ್ತು.  ವೈದ್ಯರೆಲ್ಲ ಸಿದ್ಧರಾಗಿ ಆಪರೇಶನ್ ಮಾಡಲು ಬಂದಾಗ ರೋಗಿ ಪ್ಯಾರಿ ಮಿಠಾಯಿ ಕೊಳ್ಳಲು ಹೋಗಿರುತ್ತಿದ್ದ.  ಕೆಲವು ಸಲ ಪೋಲೀಸ್ ಅಧಿಕಾರಿ  ಜೈಲು ಪರಿವೀಕ್ಷಣೆಗೆ ಬಂದಾಗ ಕೈದಿ, ವಿಕ್ಟರಿ ಸ್ಟಾಂಡಲ್ಲಿ ನಿಂತಿರಬೇಕಾಗಿದ್ದ ಬಹುಮಾನ ವಿಜೇತ ಪ್ಯಾರಿ ಮಿಠಾಯಿ ಕೊಳ್ಳಲು ಹೋಗಿರುತ್ತಿದ್ದರು!


     ಕೆಲವು ಸ್ಪರ್ಧಾರೂಪದ ಜಾಹೀರಾತುಗಳೂ ಇರುತ್ತಿದ್ದವು.  ಗಿಬ್ಸ್ ಡೆಂಟಿಫ್ರಿಸ್ ಎಂಬ ವಿಕ್ಸ್ ವೆಪೋರಬ್ ತರಹದ ಡಬ್ಬಿಯಲ್ಲಿ ಬರುತ್ತಿದ್ದ ದಂತಮಂಜನದ್ದು ಬಣ್ಣ ಬಳಿಯುವ ಸ್ಪರ್ಧೆಯೊಂದಿತ್ತು. 1962ರಲ್ಲಿ  7 ನೇ ತರಗತಿಯಲ್ಲಿದ್ದಾಗ ನನಗೆ ಸಿಕ್ಕಿದ ಅಣ್ಣನ ಹಳೆ Rives ವಾಟರ್ ಕಲರ್ ಉಪಯೋಗಿಸಿ ನಾನು ಮೊತ್ತ ಮೊದಲ ಕುಂಚ ಪ್ರಯೋಗ ಮಾಡಿದ್ದು ಈ 1958ರ ಚಂದಮಾಮದ ಮೇಲೆ.  ನನ್ನ ಆಗಿನ ಕೈ ಬರಹವನ್ನೂ ಅದರಲ್ಲಿ ನೋಡಬಹುದು! ಬಲಭಾಗದಲ್ಲಿ C B K ಎಂಬ ಮೊಹರು ಕಾಣುತ್ತಿದೆಯಲ್ಲ, ಅದು ಕಾವಟೆ ಎಂಬ ಮೆದು ಮರದ ಮುಳ್ಳನ್ನು ಕೆತ್ತಿ ತಯಾರಿಸಿದ ಅಚ್ಚಿನ ಗುರುತು.  ಈ ಕುರಿತು ನವೋಲ್ಲಾಸದ ನವರಾತ್ರಿಯಲ್ಲಿ ವಿವರಣೆ ಇದೆ.  ಇಲ್ಲಿ ತಪ್ಪು ಹುಡುಕುವ ಸ್ಪರ್ಧೆ ಆಯೋಜಿಸಿದ್ದ ಬಿನಾಕಾ ಅಂತೂ ಆಗಿನಿಂದಲೂ ಜಾಹೀರಾತಿನ ವಿಷಯದಲ್ಲಿ ಮುಂಚೂಣಿಯಲ್ಲೇ ಇತ್ತು.  ಬಿನಾಕಾ ಗೀತ್ ಮಾಲಾ ಆಗಲೇ ಜನಪ್ರಿಯತೆಯ ತುತ್ತ ತುದಿಯಲ್ಲಿತ್ತು.   ಗ್ರೀನ್, ರೋಸ್, ಟಾಪ್ ಮತ್ತು ಫ್ಲೋರೈಡ್ ಎಂಬ ನಾಲ್ಕು ವಿಧಗಳಲ್ಲಿ ದೊರೆಯುತ್ತಿದ್ದ ಪೇಸ್ಟು ಅದೊಂದೇ.  ಬಿನಾಕಾ ಪೇಸ್ಟುಗಳೊಡನೆ  ಬರುತ್ತಿದ್ದ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಬೊಂಬೆಗಳು ಮತ್ತು ಸ್ಟಿಕ್ಕರುಗಳು ಅನೇಕರಿಗೆ ನೆನಪಿರಬಹುದು. ಆಗಿನ ಕಾಲದ ಜನಪ್ರಿಯ ಕ್ಲಿಕ್ III ಕ್ಯಾಮರಾದ್ದೂ ಒಂದು ಫೋಟೋ ಸ್ಪರ್ಧೆ ಇತ್ತು.    60ರ ದಶಕದಲ್ಲಿ  ಆ ಕ್ಯಾಮರಾ ರೂ 46.50 ಕ್ಕೆ ದೊರಕುತ್ತಿತ್ತು. ಈ ಮೂರೂ ಉತ್ಪನ್ನಗಳು ಈಗ ಕಾಲನ ಹೊಡೆತಕ್ಕೆ ಸಿಕ್ಕಿ ಮರೆಯಾಗಿವೆ.  ಗಿಬ್ಸ್ ದಂತಮಂಜನವನ್ನಂತೂ ನಾನೂ ಈ ಜಾಹೀರಾತಲ್ಲಷ್ಟೇ ನೋಡಿದ್ದು.  ಬಿನಾಕಾ ಇದ್ದದ್ದು ಸಿಬಾಕಾ ಆಗಿ ಕೊನೆಗೆ ತನ್ನ ಪ್ರತಿಸ್ಪರ್ಧಿ ಕೋಲ್ಗೇಟಿನಲ್ಲಿ ವಿಲೀನವಾಯಿತು. ಕ್ಲಿಕ್ III ಕ್ಯಾಮರಾ ಡಿಜಿಟಲ್ ಕ್ರಾಂತಿಗೆ ಶರಣಾಯಿತು. ಕಾಲವನ್ನು ತಡೆಯೋರು ಯಾರೂ ಇಲ್ಲ ಅಲ್ಲವೇ?


     ಈ ಆಟಿಕೆಗಳ  ಜಾಹೀರಾತು ನೋಡಿ ನನ್ನಲ್ಲೂ ಇಂಥದ್ದೊಂದಿದ್ದಿದ್ದರೆ ಎಂದು ಆಸೆ ಹುಟ್ಟಿದ್ದುಂಟು.  ಒಮ್ಮೆ ಇಂತಹ ಬೋಟ್ ಧರ್ಮಸ್ಥಳ ಜಾತ್ರೆಯಲ್ಲಿ  ಕೊಳ್ಳಲು ಸಿಕ್ಕಿದಾಗ  ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿತ್ತು.  ಆದರೆ ಮನೆಗೆ ಬಂದು  ಅದನ್ನು ನೀರಿಗಿಳಿಸಿದಾಗ ಬಕೆಟ್ಟಿನಲ್ಲಿ ಎರಡು ಸುತ್ತು ಹೊಡೆದು ಶಾಶ್ವತ ಮುಷ್ಕರ ಹೂಡಿತು.  ಯಾರಲ್ಲೂ ಸುದ್ದಿ ಹೇಳದೆ ಅದನ್ನು ಮೂಲೆ ಸೇರಿಸಿದೆ.  ಈ ವ್ಯೂ ಮಾಸ್ಟರ್ ಇತ್ಯಾದಿ ಕೊಳ್ಳುವ  ಆರ್ಥಿಕ ಶಕ್ತಿ ಆಗ ನಮಗಿರಲಿಲ್ಲ.  ಆದರೆ ಇದನ್ನೇ ಹೋಲುವ ಚಿಕ್ಕ ಬಯೋಸ್ಕೋಪ್  ಕೆಲವು ಆಣೆಗಳಿಗೆ ಜಾತ್ರೆಯಲ್ಲಿ ಸಿಗುತ್ತಿತ್ತು. ಜೊತೆಗೆ ಸಿಗುತ್ತಿದ್ದ ಹಳೆ ಸಿನಿಮಾ ರೀಲಿನ ತುಂಡುಗಳನ್ನು ಅದರಲ್ಲಿಟ್ಟು ಒಂದು ಕಣ್ಣಿಂದ ನೋಡಿದಾಗ ಸಿಗುತ್ತಿದ್ದ ಖುಶಿ ಈಗ HD ಟಿವಿ ನೋಡಿದರೂ ಸಿಗದು.   ಕಿಟಿಕಿಯಿಂದ ಮನೆಯೊಳಗೆ  ಬೀಳುತ್ತಿದ್ದ ಬಿಸಿಲು ಕೋಲಿನ ಎದುರು ಆ ರೀಲಿನ ತುಂಡುಗಳನ್ನು ಹಿಡಿದು ಮನೆಯಲ್ಲಿದ್ದ ಭೂತಕನ್ನಡಿಯ ಸಹಾಯದಿಂದ ಎದುರಿನ ಗೋಡೆಯ ಮೇಲೆ ದೊಡ್ಡ ಚಿತ್ರ ಬೀಳುವಂತೆಯೂ ನಾನು ಮಾಡುತ್ತಿದ್ದೆ.


     ಚಿತ್ರಗಳೇ ಎಲ್ಲವನ್ನೂ ಹೇಳುವ ನ್ಯೂಟ್ರಿನ್ ಮಿಠಾಯಿಯ ಈ ಜಾಹೀರಾತು ಬಲು ಸುಂದರ.  ಯಾರಾದರೂ ಕೊಟ್ಟಾಗ ತಿನ್ನುವುದಕ್ಕಿಂತ ಯಾರಿಗೂ ತಿಳಿಯದೆ ಇಟ್ಟಲ್ಲಿಂದ ಹಾರಿಸಿ ತಿನ್ನುವ ಮಿಠಾಯಿಯ ರುಚಿ ಹೆಚ್ಚು ಎನ್ನುವ ಅನುಭವ ನಿಮಗೂ ಆಗಿರಬಹುದು!  ಪಕ್ಕದ ಟಿನೋಪಾಲ್ ಅಂದರೆ ಆಗಿನ ಉಜಾಲಾ. ತಿಳಿ ಹಳದಿ ಬಣ್ಣದ ಪೌಡರ್ ರೂಪದಲ್ಲಿದ್ದ ಅದು ಚಿಕ್ಕ ಆಕರ್ಷಕ ಡಬ್ಬಿಯಲ್ಲಿ ದೊರಕುತ್ತಿತ್ತು. ನಾವೆಲ್ಲ ಉಜಿರೆ ಕಾಲೇಜಿಗೆ ಹೋಗುವಾಗ  ಪಂಚೆ ಉಡುತ್ತಿದ್ದೆವು.  ಬೆರಳೆಣಿಕೆಯಷ್ಟು ಪ್ಯಾಂಟುಧಾರಿಗಳಿದ್ದರೋ ಏನೋ.  ಸಂಜೆ ಬಂದೊಡನೆ ಪಂಚೆಯನ್ನು ಶುಭ್ರವಾಗಿ ಒಗೆದು ನೀಲಿ ಮತ್ತು  ಟಿನೋಪಾಲ್ ಮಿಶ್ರಣದಲ್ಲಿ ಅದ್ದಿದರೆ  ಅದು ಕೊಕ್ಕರೆ ಗರಿಯಂತೆ ಬೆಳ್ಳಗಾಗುತ್ತಿತ್ತು.  ರೇಡಿಯೋ ಸಿಲೋನಿನಲ್ಲಿ
Now what is it that whitens best of all
Tinopal
Now what is it that whitens best of all
Tinopal
What is it that whitens best
What is it that whitens best
Tinopal is that  whitens best of all
ಎಂಬ  ಉಷಾ ಉತ್ತುಪ್ ಹಾಡಿದ್ದ ಜಿಂಗಲ್ ಕೂಡ ಬರುತ್ತಿತ್ತು.


     ಬಟ್ಟೆ ಒಗೆಯುವ ವಿವಿಧ ಸೋಪುಗಳ  ಪೈಕಿ ನಮ್ಮೂರಲ್ಲಿ ಹೆಚ್ಚು ಜನಪ್ರಿಯವಾಗಿದ್ದದ್ದು ಕಸ್ತೂರಿ ಬಾರ್ ಸೋಪ್.  ಜನರು ಅಂಗಡಿಗೆ ಹೋಗಿ ‘ಒಂದು ಕಸ್ತೂರಿ ಬಾರ್ ಸೋಪ್ ಸಾಬೂನು ಕೊಡಿ’ ಅನ್ನುತ್ತಾರೆಂಬ ಜೋಕ್ ಕೂಡ ಅಷ್ಟೇ ಜನಪ್ರಿಯವಾಗಿತ್ತು.  ನಮ್ಮ ಮನೆ ಬಳಕೆಗೆ ವರ್ಷವಿಡೀ ಸಾಕಾಗುವಷ್ಟು ಬಾರುಗಳಿರುವ ಒಂದು ಇಡೀ ಪೆಟ್ಟಿಗೆಯನ್ನೇ ಖರೀದಿಸಿ ತಂದಿಟ್ಟಿರುತ್ತಿದ್ದರು. ಬಾರುಗಳನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಲೆಂದೇ  ಉದ್ದವಾದ ಚೂರಿಯೊಂದಿತ್ತು.  ಅಂಗಡಿಯವರು ಸೆಣಬಿನ ದಾರದಿಂದಲೇ ಬಾರನ್ನು ಸುಲಭವಾಗಿ ತುಂಡರಿಸುವುದು ನೋಡಿ ನಮಗೆ ಅಚ್ಚರಿಯಾಗುತ್ತಿತ್ತು. ಈಗ ಇಂತಹ ಸೋಪುಗಳು ಡಿಟರ್ಜೆಂಟುಗಳಿಗೆ ದಾರಿಮಾಡಿಕೊಟ್ಟು  ಬದಿಗೆ ಸರಿದಿವೆ.

      ಆಗಿನ್ನೂ ಬೈಕು, ಕಾರುಗಳು ಸಾಮಾನ್ಯ ಜನರ ಕೈಗೆಟಕುತ್ತಿರಲಿಲ್ಲ. ಹೀಗಾಗಿ ಸೈಕಲ್ ಜಾಹೀರಾತುಗಳು ಹೆಚ್ಚು ಕಾಣಿಸಿಕೊಳ್ಳುತ್ತಿದ್ದವು. ಆದರೆ ಮಗು ನಡೆಯಲು ಕಲಿಯುವುದಕ್ಕೂ ಮುನ್ನ ಮನೆಗೆ ಟ್ರೈಸಿಕಲ್ ಬರುವ ಕಾಲವೂ ಅದಾಗಿರಲಿಲ್ಲ.  ಸೈಕಲ್ ಸವಾರಿಯ ಅನುಭವ ಪಡೆಯಲು ಸಾಮಾನ್ಯವಾಗಿ ಹೈಸ್ಕೂಲ್ ಮೇಟ್ಟಲೇರಿದ ಮೇಲಷ್ಟೇ ಸಾಧ್ಯವಾಗುತ್ತಿತ್ತು. ಗಂಟೆಗೆ ಕೆಲವು ಪೈಸೆಗಳ ಬಾಡಿಗೆಗೆ ಆಗ ಸೈಕಲುಗಳು ದೊರೆಯುತ್ತಿದ್ದವು. ಆಗಲೇ expert ಆಗಿರುತ್ತಿದ್ದ ಅಣ್ಣನನ್ನೋ, ಸ್ನೇಹಿತನನ್ನೋ ಜೊತೆಗಿಟ್ಟುಕೊಂಡು ಊರಿನ ಮೈದಾನಿನಲ್ಲಿ ಸೈಕಲ್ ಸವಾರಿ ಕಲಿಯುವಿಕೆ  ಆರಂಭವಾಗುತ್ತಿತ್ತು.  ಒಂದು ರೂಪಾಯಿ ಬಾಡಿಗೆಗೆ ಇಡೀ ಒಂದು ದಿನಕ್ಕೆ ದೊರೆಯುತ್ತಿದ್ದ ಸೈಕಲನ್ನು ಮನೆಗೆ ತಂದು ಊರ ದೇವಸ್ಥಾನದ ಮಾಡಿನ ನಾಲ್ಕೂ ಮೂಲೆಗಳಿಗೆ ಲಾಟೀನು ತೂಗಾಡಿಸಿ ಸ್ನೇಹಿತರೊಂದಿಗೆ ರಾತ್ರಿಯಿಡೀ ಸರದಿಯಂತೆ ದೇವರಿಗೆ ಪ್ರದಕ್ಷಿಣೆ ಹೊಡೆದದ್ದೂ ಇದೆ. ‘ಹಿಂದಿನ ಚಕ್ರ ತಿರುಗುತ್ತಾ ಇದೆ ನೋಡೋ’ ಎಂದು ಹೊಸತಾಗಿ ಸವಾರಿ ಕಲಿತವರ ಏಕಾಗ್ರತೆ ಭಂಗಗೊಳಿಸಿ ಅವರು ಬ್ಯಾಲನ್ಸ್ ತಪ್ಪಿ ಸೈಕಲ್ ಸಮೇತ ಧೊಪ್ಪನೆ ಬೀಳುವುದನ್ನು ನೋಡಿ ಸಂತೋಷ ಪಡುವುದು ಆಗಿನ ದಿನಗಳಲ್ಲಿ ಸಾಮಾನ್ಯವಾಗಿತ್ತು! ಎಷ್ಟು ಸಲ ಬಿದ್ದು ಎದ್ದರೂ ಸೈಕಲ್ ಮೇಲಿನ ಮೋಹ ಮಾತ್ರ ಕಮ್ಮಿ ಆಗುತ್ತಿರಲಿಲ್ಲ.   ಭಾರತೀಯರ ಮಟ್ಟಿಗೆ ಆಗಿನ ಸಾಮಾನ್ಯ ಸೈಕಲುಗಳ ಎತ್ತರ ಕೊಂಚ ಜಾಸ್ತಿಯೇ ಆಗಿತ್ತು ಅನ್ನಬೇಕು.  ಎಂತಹ ಆಜಾನುಬಾಹುವಾದರೂ ಸೀಟ್ ಮೇಲೆ ಕುಳಿತಾಗ ಕಾಲು ನೆಲಕ್ಕೆ ಎಟಕುತ್ತಿರಲಿಲ್ಲ.  ಹೀಗಾಗಿ ಹುಡುಗರು ಮೊದಲು ಪೆಡಲ್ ಬ್ಯಾಲನ್ಸ್, ಆ ಮೇಲೆ ರೋಲಿನ ಒಳಗಿಂದ ಕಾಲು ತೂರಿಸಿ ಪೆಡಲನ್ನು ತಿರುಗಿಸುವುದು,  ನಂತರ ಸೀಟಾರೋಹಣ ಹೀಗೆ ಹಂತ ಹಂತವಾಗಿ ಪ್ರಾವೀಣ್ಯ ಸಾಧಿಸಬೇಕಾಗುತ್ತಿತ್ತು. ಪೆಡಲ್ ಮೇಲೆ ಪೂರ್ತಿ ದೇಹದ ಭಾರಹಾಕಿ ಸೀಟನ್ನೇರುವ ಪದ್ಧತಿ ನಮ್ಮ ದೇಶದ ಸಾಂಪ್ರದಾಯಿಕ ಸೈಕಲ್ ಸವಾರರು ಮಾತ್ರ ಅನುಸರಿಸುತ್ತಿರುವುದೇನೋ.  ಸೀಟ್  ಮೇಲೆ ಕುಳಿತು ಕಾಲಿಂದ ತಿರುಗಿಸುವ ಉದ್ದೇಶಕ್ಕಾಗಿಯಷ್ಟೇ ಇರುವ ಪೆಡಲ್ ‘ಈ ಭಾರವ ತಾಳೆನು ಬೇರೇನೂ ದಾರಿಯ ಕಾಣೆನು’ ಎಂದು ಅಳಲಾರದೇ ಎಂದು ನನಗೆ ಅನ್ನಿಸುವುದಿದೆ!  ನಾನು ಡಿಗ್ರಿಯ ಎರಡನೇ ವರ್ಷದಲ್ಲಿರುವಾಗ ನಮ್ಮ ಮನೆಗೆ ಸೈಕಲ್ ಬಂತು.  ಆ ಮೇಲೆ ನೌಕರಿಗಾಗಿ ಊರು ಬಿಡುವ ವರೆಗೂ ಅದು ನನ್ನ ನೆಚ್ಚಿನ ಸಂಗಾತಿಯಾಗಿ  ಸವಾರಿಯ ಸುಖ; ಪಂಕ್ಚರ್, ರಿಪೇರಿ  ಇತ್ಯಾದಿಗಳ ಕಷ್ಟ ಎಲ್ಲದರ ಪರಿಚಯ ಮಾಡಿಸಿತು.


     ಟೇಪ್ ರೆಕಾರ್ಡರು ಏನೋ ಬಲು ಸುಂದರವೇ. ಆದರೆ ಚಿನ್ನದ ಬೆಲೆ 10 ಗ್ರಾಮಿಗೆ ಸುಮಾರು 100 ರೂಪಾಯಿ ಆಗಿದ್ದ 50ರ ದಶಕದಲ್ಲಿ 1000ರೂ ಬೆಲೆಬಾಳುವ ಈ ಟೇಪ್ ರೆಕಾರ್ಡರ್ ಕೊಳ್ಳುವ ಸಾಮರ್ಥ್ಯವಿದ್ದ ಚಂದಮಾಮ ಓದುಗರು ಎಷ್ಟಿದ್ದಿರಬಹುದು?

     ಚಂದಮಾಮ ಜಾಹೀರಾತುಗಳ ಮೇಲೆ ಒಂದು ಪಕ್ಷಿ ನೋಟ ಬೀರಿದೆವಲ್ಲ.  ನಾನು ವಾರಕ್ಕೊಂದರಂತೆ ಹಂಚಿಕೊಳ್ಳುತ್ತಿರುವ ಹಳೆ ಸಂಚಿಕೆಗಳನ್ನು ಓದುವಾಗ ಇನ್ನು ನೀವು ಕೂಡ ಎಲ್ಲ ಜಾಹೀರಾತುಗಳನ್ನು  ಗಮನವಿಟ್ಟು ನೋಡುತ್ತೀರಿ ಅಂದುಕೊಂಡಿದ್ದೇನೆ.



      


Sunday 11 December 2016

ಅಬ್ಬಾ! ಆ ಹಾಡುಗಳು!!


     ಪಿ.ಕಾಳಿಂಗರಾಯರ ಚಿತ್ರ ಮತ್ತು ಈ ಉದ್ಗಾರ ನೋಡಿದೊಡನೆ ಈ ಬರಹ ಅವರ ಪ್ರಸಿದ್ಧ ಭಕ್ತಿ ಗೀತೆ, ಭಾವ ಗೀತೆ, ಜಾನಪದ ಗೀತೆಗಳ  ಬಗ್ಗೆ ಇರಬಹುದೆಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.  ಅವುಗಳೆಲ್ಲವು ಕೂಡ ಈ ಉದ್ಗಾರಕ್ಕೆ ಅರ್ಹವೇ ಆಗಿದ್ದರೂ ಇಲ್ಲಿ ನಾನು ಹೇಳ ಹೊರಟಿರುವುದು ಅವರ ಸಂಗೀತ ನಿರ್ದೇಶನವಿದ್ದ ಸಿನಿಮಾ ಒಂದರ ಹಾಡುಗಳ ಬಗ್ಗೆ.  ಹೌದು, ತಾಯಿ ದೇವಿಯನು ಕಾಣೆ ಹಂಬಲಿಸಿ, ಅಂಥಿಂಥ ಹೆಣ್ಣು ನೀನಲ್ಲ ಮುಂತಾದ ಹಾಡುಗಳನ್ನು ಸಿನಿಮಾಗಳಿಗಾಗಿ ಹಾಡಿದ ಅವರು ಕೆಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದರು.  ಅವುಗಳ ಪೈಕಿ 1959ರಲ್ಲಿ ಬಿಡುಗಡೆ ಆದ William Shakespeare ಅವರ  Taming of the shrew  ಆಧಾರಿತ ಹೆಚ್.ಎಲ್.ಎನ್.ಸಿಂಹ ಅವರ ನಿರ್ದೇಶನದ ಅಬ್ಬಾ ಆ ಹುಡುಗಿಯೂ  ಒಂದು.  ರಾಜಕುಮಾರ್, ನರಸಿಂಹರಾಜು, ಮೈನಾವತಿ, ಪಂಢರಿ ಬಾಯಿ ಮುಂತಾದವರ ತಾರಾಗಣವಿದ್ದ ಈ ಚಿತ್ರದಲ್ಲಿ ರಾಜಾ ಶಂಕರ್ ಮೊತ್ತ ಮೊದಲ ಬಾರಿ ಕಾಣಿಸಿಕೊಂಡಿದ್ದರು. ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ ಅವರ ಸುಮಧುರ ಯುಗಳ ಗೀತೆಗಳ ಶುಭಾರಂಭವಾದದ್ದೂ ಈ ಚಿತ್ರದಿಂದಲೇ.


     ಈ ಚಿತ್ರದಲ್ಲಿ ಕಾಳಿಂಗ ರಾವ್ ಅವರಿಗೆ ಅರೇಂಜರ್ ರೂಪದಲ್ಲಿ ಸಹಾಯ ಮಾಡಲು ಹಿಂದಿಯ ಪ್ರಸಿದ್ಧ ಸಂಗೀತ ನಿರ್ದೇಶಕ ಹಾಗೂ ಮ್ಯಾಂಡೊಲಿನ್ ವಾದಕ ಸಜ್ಜಾದ್ ಹುಸೇನ್ ಅವರನ್ನು ವಿಶೇಷವಾಗಿ ಕರೆಸಲಾಗಿತ್ತು. ಸಂಗೀತ ನಿರ್ದೇಶಕರು ಹಾಡುಗಳಿಗೆ ರಾಗ ಸಂಯೋಜಿಸಿದ  ಮೇಲೆ ಅಗತ್ಯವಿರುವ notations ಇತ್ಯಾದಿ ಮಾಡಿಕೊಂಡು ಸೂಕ್ತ ವಾದ್ಯಗಾರರನ್ನು ಆಯ್ಕೆ ಮಾಡಿ ಆರ್ಕೆಷ್ಟ್ರಾವನ್ನು ಹೊಂದಿಸಿ ಹಾಡನ್ನು ಅಲಂಕರಿಸುವುದು ಅರೇಂಜರ್ ಕೆಲಸವಾಗಿರುತ್ತದೆ. ಒಂದು ರೀತಿಯಲ್ಲಿ ಅರೇಂಜರ್ ಅಂದರೆ  ಸಂಗೀತ ನಿರ್ದೇಶಕರ ಬಲಗೈ ಇದ್ದ ಹಾಗೆ. ಹಿಂದಿಯಲ್ಲಿ ಶಂಕರ್ ಜೈಕಿಶನ್, ಓ.ಪಿ.ನಯ್ಯರ್, ಸಲಿಲ್ ಚೌಧರಿ ಮುಂತಾದವರಿಗೆ ಸೆಬಾಸ್ಟಿಯನ್; ಎಸ್.ಡಿ.ಬರ್ಮನ್, ಆರ್.ಡಿ.ಬರ್ಮನ್ ಅವರಿಗೆ ಮಾರುತಿ ರಾವ್ ಮತ್ತು ಬಾಸು-ಮನೋಹಾರಿ ಅರೇಂಜರ್ ಆಗಿದ್ದರು. ದಕ್ಷಿಣ ಭಾರತದಲ್ಲಿ ಆರ್. ಸುದರ್ಶನಂ, ವಿಜಯಾ ಕೃಷ್ಣಮೂರ್ತಿ, ಎಲ್.ವೈದ್ಯನಾಥನ್ ಮುಂತಾದವರು ಪ್ರಸಿದ್ಧ ಅರೇಂಜರ್ಸ್.  ಇಳಯ ರಾಜಾ ಕೂಡ ಮೊದಲು ಜಿ.ಕೆ.ವೆಂಕಟೇಶ್ ಅವರಿಗೆ ಅರೇಂಜರ್ ಆಗಿ ಕೆಲಸ ಮಾಡಿದ್ದರು.  ಲಕ್ಷ್ಮೀಕಾಂತ್ ಪ್ಯಾರೇಲಾಲ್ ಜೋಡಿಯಲ್ಲಿ ಪ್ಯಾರೇಲಾಲ್ ಸ್ವತಃ ಅರೇಂಜರ್ ಆಗಿದ್ದರು.  ಹಾಗೆಯೇ ಕಾಳಿಂಗ ರಾವ್ ಅವರಿಗೆ ಸಹಾಯಕರಾಗಿ ಬಂದ ಸಜ್ಜಾದ್ ಹುಸೇನ್ ಕೂಡ ಸಂಗೀತ ನಿರ್ದೇಶಕ ಮತ್ತು ಅರೇಂಜರ್ ಎರಡೂ ಆಗಿದ್ದವರು. ಅವರ ಸಹಕಾರದೊಂದಿಗೆ ಕಾಳಿಂಗರಾಯರು ಅಬ್ಬಾ ಆ ಹುಡುಗಿ ಚಿತ್ರದಲ್ಲಿ ನೀಡಿದ ಹಾಡುಗಳನ್ನು ಕೇಳಿದರೆ FM ರೇಡಿಯೋ, ಟಿ.ವಿ, mp3ಗಳಲ್ಲಿ ಕೇಳಿದ ಹಾಡುಗಳನ್ನೇ ಮತ್ತೆ ಮತ್ತೆ ಕೇಳಿ ಬೇಸತ್ತಿರಬಹುದಾದ ನಿಮಗೆ ಖಂಡಿತವಾಗಿಯೂ ತಾಜಾತನದ ಅನುಭವವಾಗಬಹುದು.  ಇವು ಚಿತ್ರಗೀತೆಗಳ ಸಿದ್ಧ ಮಾದರಿಗಿಂತ ಕೊಂಚ ಭಿನ್ನ.




ಆಸೆಯ ಗೋಪುರ ನಿರ್ಮಿಸಿಕೊಂಡು

      ತಾನೇ ಹಾಡಬಹುದಾಗಿತ್ತಾದರೂ   ಪಿ.ಬಿ.ಶ್ರೀನಿವಾಸ್ ಅವರಿಗೆ ಹೃದಯ ದೇವಿಯೆ ಮತ್ತು ಈ ಹಾಡನ್ನು ಎಸ್.ಜಾನಕಿ ಅವರೊಂದಿಗೆ ಹಾಡಲು ಅವಕಾಶ ಮಾಡಿಕೊಟ್ಟು  ಅವರಿಬ್ಬರ ಯುಗಳ ಗಾಯನದ ಮೊದಲ ಚಿತ್ರ ಎಂಬ ದಾಖಲೆ ನಿರ್ಮಾಣವಾಗಲು  ಪಿ.ಕಾಳಿಂಗ ರಾವ್ ಕಾರಣರಾದರು.  ಈ ಹಾಡಿನಲ್ಲಿ ಅತಿ ತಾರ ಸ್ಥಾಯಿಯಲ್ಲಿ ಆರಂಭವಾಗುವ   ಜಾನಕಿ ಅವರ ಧ್ವನಿಯನ್ನು ಆಲಿಸಿದರೆ ವಯಲಿನ್ ನುಡಿಯುತ್ತಿದೆಯೇನೋ ಎಂದು ಭಾಸವಾಗುತ್ತದೆ!  ಇದು ಖಂಡಿತವಾಗಿಯೂ ಸಜ್ಜಾದ್ ಹುಸೇನ್ ಅವರದೇ ಪ್ರಯೋಗ ಆಗಿರಬಹುದು. ಹಿಂದಿಯಲ್ಲಿ ಅವರು ರುಸ್ತುಂ ಸೊಹ್ರಾಬ್ ಚಿತ್ರದ ಫಿರ್ ತುಮ್ಹಾರೀ ಯಾದ್ ಆಯೀ ಏ ಸನಮ್ ಹಾಡಿನ ಆರಂಭವನ್ನು ರಫಿ ಅವರ ಅತಿ ತಾರ ಸ್ಥಾಯಿಯ  ಆಲಾಪದಿಂದಲೇ ಮಾಡಿರುವುದು ಇದಕ್ಕೆ ಸಾಕ್ಷಿ.  ನಾಲ್ಕಕ್ಷರದ ಢೋಲಕ್ ನಡೆಯೊಂದಿಗೆ ಆರಂಭವಾಗುವ ಈ ಹಾಡು  ಮಧ್ಯದಲ್ಲಿ ತಬಲಾದ ಐದು ಅಕ್ಷರಕ್ಕೆ ಬದಲಾಗಿ ಮತ್ತೆ ನಾಲ್ಕಕ್ಷರಕ್ಕೆ ಮರಳುವುದು ಒಂದು ಅಪರೂಪದ ಪ್ರಯೋಗ. ವಿಷಾದ ಭಾವದ ಗೀತೆಯಾದರೂ ಗ್ರೂಪ್ ವಯಲಿನ್ಸ್, ಮ್ಯಾಂಡೊಲಿನ್, ಹವಾಯಿಯನ್ ಗಿಟಾರ್, ಟ್ರಂಪೆಟ್, ಕೊಳಲುಗಳ ಸಮರ್ಥ ಬಳಕೆಯಿಂದ ಅದಕ್ಕೊಂದು ಉಠಾವ್ ದೊರೆತಿದೆ. ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿರುವ ಸದಯೇ ಬಾರೆಯಾ ಸಾಲು ಮತ್ತು ಆ ಸಾಲಿನ ಕೊನೆಯಲ್ಲಿ ಬರುವ ಕೊಳಲಿನ ಚೀತ್ಕಾರ ನೇರವಾಗಿ ಎದೆಯನ್ನಿರಿಯುವಂಥದ್ದು. ಈ ಸದಯೇ ಪದದ ಎತ್ತುಗಡೆಯು ಆಹ್ ಚಿತ್ರದ ಆಜಾರೇ ಅಬ್ ಮೇರಾ ದಿಲ್ ಪುಕಾರಾವನ್ನು ಹೋಲುತ್ತದೆ. ಢೋಲಕ್ ನಡೆಯೂ ಅದರಂತೆಯೇ ಇರುವುದು ಈ ಹೋಲಿಕೆಗೆ ಸಮರ್ಥನೆ ನೀಡುತ್ತದೆ.  Interludeನ ಒಂದು ತುಣುಕು ಮಾಯಾ ಬಜಾರ್ ಚಿತ್ರದ ಹಾಡನ್ನು ನೆನಪಿಸುತ್ತದೆ.




ಆನಂದದಾಯಕವು

     ಎಸ್.ಜಾನಕಿ ಧ್ವನಿಯಲ್ಲಿರುವ ಈ ಹಾಡಿನಲ್ಲಿ ಸಜ್ಜಾದ್ ಹುಸೇನ್ ಅವರ ಮ್ಯಾಂಡೊಲಿನಿನದೇ ಪ್ರಾಬಲ್ಯ.  ಗಿಟಾರಿನೊಂದಿಗೆ ಆರಂಭವಾಗುವ ಹಾಡು ಬೊಂಗೋ ರಿದಂ ಜೊತೆಗಿನ ಚಿಕ್ಕ ಆಲಾಪವೊಂದರ ನಂತರ ದೀರ್ಘ ಮ್ಯಾಂಡೊಲಿನ್ prelude ಹೊಂದಿದೆ.  ಚಿಕ್ಕ ಉರುಳಿಕೆಯೊಂದಿಗೆ ಎತ್ತುಗಡೆಯಾಗುವ ಢೋಲಕ್ ರಿದಂ ಜೊತೆ ಎಕಾರ್ಡಿಯನ್ನಿನ ಚಿಕ್ಕ link piece ಹೊಂದಿದ ಪಲ್ಲವಿ ಮುಗಿಯುತ್ತಲೇ ಹಿಂದಿಯ ಜಿ.ಎಸ್.ಕೊಹ್ಲಿ ಶೈಲಿಯ ಚಿಕ್ಕ full weight ತುಣುಕಿನೊಂದಿಗೆ ಮೊದಲ BGM ಆರಂಭವಾಗಿ ಕೊಳಲು, ಕ್ಲಾರಿನೆಟ್, ಗ್ರೂಪ್ ವಯಲಿನ್ಸ್ ಆದಮೇಲೆ ಮತ್ತೆ ಮ್ಯಾಂಡೊಲಿನ್ ಬರುತ್ತದೆ. ಚರಣ ಭಾಗದಲ್ಲಿ ಜಾನಕಿ ಅವರ ತಾರ ಸ್ಥಾಯಿ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗಿದ್ದು ಅಕಾರ್ಡಿಯನ್ ಮತ್ತು ಕೊಳಲು-ಕ್ಲಾರಿನೆಟ್ ಗಳ link pieceಗಳಿವೆ.  ಚರಣದ ಕೊನೆಯ ಭಾಗದಲ್ಲಿ ಅಮರ ಸಂದೇಶ ಎಂಬ ಸಾಲಿಗೆ ಢೋಲಕ್ ಬದಲಿಗೆ ಬೊಂಗೋ ರಿದಮ್ ಇದೆ.  ಎರಡನೆಯ BGM ಮ್ಯಾಂಡೊಲಿನ್ pieceನಿಂದ ಆರಂಭವಾಗಿ ಗ್ರೂಪ್ ವಯಲಿನ್ಸ್ ನೊಂದಿಗೆ ಮುಕ್ತಾಯವಾಗುತ್ತದೆ.  ಎರಡನೆಯ ಚರಣವೂ ಢೋಲಕ್ ಉರುಳಿಕೆಯೊಂದಿಗೆ ಎತ್ತುಗಡೆಯಾಗಿ ಮುಂದುವರೆಯುತ್ತದೆ.ಕೊನೆಯಲ್ಲಿ ಪಲ್ಲವಿ ಭಾಗ ಪೂರ್ತಿ ಪುನರಾವರ್ತನೆಯಾಗಿ ಬೊಂಗೋ ರಿದಂ ಜೊತೆಗಿನ ವಯಲಿನ್ಸ್, ಕ್ಲಾರಿನೆಟ್, ಕೊಳಲುಗಳ climaxನೊಂದಿಗೆ ಮುಗಿಯುತ್ತದೆ.  ಹಿಂದಿಯಲ್ಲಿ ಆರ್ ಪಾರ್ ಎಂಬ ಜೋಡಿ ಪದಗಳನ್ನು ಕಹೀಂ ಆರ್ ಕಹೀಂ ಪಾರ್ ಲಾಗಾ ತೀರೇ ನಜರ್ ಎಂದು ವಿಂಗಡಿಸಿ ಬಳಸಿದಂತೆ ಇಲ್ಲಿ ಹಾವ ಭಾವ ಜೋಡಿ ಪದಗಳನ್ನು ಏನೇನೋ ಹಾವ ಏನೇನೋ ಭಾವ ಎಂದು ವಿಂಗಡಿಸಲಾಗಿದೆ.   ಈ ಹಾಡಿನ ಮೊದಲ ಸಾಲಿನ ಧಾಟಿ ದಿಲ್ ಲೇಕೆ ಜಾತೆ ಹೊ ಕಹಾಂ ಎಂಬ ಹಾಡನ್ನು ಹೋಲುತ್ತದೆ.




ಕಣ್ಣುಮುಚ್ಚಾಲೆ ಆಡುವ

     ಜಿಕ್ಕಿ, ಮೋಹನ್ ಕುಮಾರಿ, ಸೋಹನ್ ಕುಮಾರಿ ಮತ್ತಿತರರು ಹಾಡಿರುವ ಇದು ಸರಳ ಜಾನಪದ ಶೈಲಿಯಲ್ಲಿದ್ದು ಸುಂದರವಾದ ಢೋಲಕ್ ಹಿನ್ನೆಲೆಯಲ್ಲಿ ಮುಂದುವರೆಯುತ್ತದೆ. ಢೋಲಕ್ ‘ಎಡ’ದ ಕೆಲಸ ಗಮನ ಸೆಳೆಯುತ್ತದೆ.  interludeಗೆ ಕ್ಲಾರಿನೆಟ್ - ಕೊಳಲು ಜೋಡಿಯನ್ನು ಮುಖ್ಯವಾಗಿ ಬಳಸಲಾಗಿದೆ. ಹಾಡಿನ ಪೂರ್ವಾರ್ಧದಲ್ಲಿ ಇದ್ದ ತಿಶ್ರ ಢೋಲಕ್ ನಡೆ ಆ ಮೇಲೆ ಚತುರಶ್ರಕ್ಕೆ ಬದಲಾಗುತ್ತದೆ.  ಹಿನ್ನೆಲೆಗೆ ಮ್ಯಾಂಡೊಲಿನ್ ಸೇರಿಕೊಳ್ಳುತ್ತದೆ. ಹೆಣ್ಣುಮಕ್ಕಳ ಆಟದ ಸಂದರ್ಭದ ಹಾಡಾದ್ದರಿಂದ ಅಲ್ಲಲ್ಲಿ ವಿಶೇಷ effects ಬಳಸಿಕೊಳ್ಳಲಾಗಿದೆ.




ಎನಿತು ಮನೋಹರವೀ ನಾಮ

     ಇದು ನರಸಿಂಹರಾಜು ಮೇಲೆ ಚಿತ್ರೀಕರಿಸಿದ ಕಾಮಿಡಿ ಹಾಡಾಗಿದ್ದು ಭಾರತೀಯ ಮತ್ತು ಪಾಶಾತ್ಯ ಶೈಲಿಯ ಮಿಶ್ರಣ ಹೊಂದಿದೆ.  ಮೋಹನ್ ಕುಮಾರಿ ಮತ್ತು ಪಿ. ಕಾಳಿಂಗ ರಾವ್ ಧ್ವನಿ ನೀಡಿದ್ದಾರೆ.  ಮಧ್ಯಭಾಗದಲ್ಲಿ ಬರುವ ಮ್ಯಾಂಡೊಲಿನ್ special effect ಆಕರ್ಷಕವಾಗಿದೆ.  ನಾಲ್ಕಕ್ಷರದ ತಾಳ ಐದಕ್ಷರಕ್ಕೆ ಬದಲಾಗುವ ತಂತ್ರ ಇಲ್ಲೂ ಬಳಸಲಾಗಿದೆ.  ತನ್ನ ಉಬ್ಬುಹಲ್ಲುಗಳನ್ನೇ ಬಂಡವಾಳವಾಗಿಸಿ ಗೆದ್ದ ನರಸಿಂಹರಾಜುವಿಗೆ ದಂತವಕ್ರ ಮತ್ತು ವಕ್ರದಂತ ಎಂಬೆರಡು ಬಿರುದುಗಳು ಹಾಡಿನ ಕೊನೆಯಲ್ಲಿ ಸಿಗುತ್ತವೆ!




ಬಾ ಚಿನ್ನ ಮೋಹನ ನೋಡೆನ್ನ



     ಪಕ್ಕಾ ಕಾಳಿಂಗ ರಾವ್ ಶೈಲಿಯ ಈ ಹಾಡನ್ನು ಅವರು ಮೋಹನ್ ಕುಮಾರಿ ಅವರೊಂದಿಗೆ ಹಾಡಿದ್ದಾರೆ.  ಮ್ಯಾಂಡೊಲಿನ್ ಜೊತೆಗಿನ ಅರೇಬಿಯನ್ ಶೈಲಿಯ ಆಲಾಪದೊಂದಿಗೆ ಆರಂಭವಾಗುವ ಈ ಹಾಡು ಢೋಲಕ್  ತಿಶ್ರ ನಡೆಯಲ್ಲಿ ಮುಂದುವರೆಯುತ್ತದೆ.  ಮೊದಲ ಚರಣ ಮುಗಿಯುತ್ತಲೇ ಚತುರಶ್ರ ನಡೆಯಲ್ಲಿ ವಯಲಿನ್ಸ್, ಕ್ಲಾರಿನೆಟ್, ಕೊಳಲು ಹಾಗೂ ಮ್ಯಾಂಡೊಲಿನ್ interlude ಮುಗಿದೊಡನೆ ಕಾಳಿಂಗರಾವ್ ಪ್ರವೇಶವಾಗುತ್ತದೆ.  ಸಾಲುಗಳ ಮಧ್ಯದ ತಾರ ಸ್ಥಾಯಿ ಕ್ಲಾರಿನೆಟ್  interludeಗೆ ಕೈ ಚಪ್ಪಾಳೆ ತಾಳದ ಜೊತೆ ಇದೆ.  ಮತ್ತೆ ತಿಶ್ರದಲ್ಲಿ ಪಲ್ಲವಿ ಆದೊಡನೆ ಚತುರಶ್ರದಲ್ಲಿ ಮ್ಯಾಂಡೊಲಿನ್ piece ಮುಗಿಯುತ್ತಲೇ ತಿಶ್ರ ನಡೆಯಲ್ಲಿದ್ದ  ಮೊದಲ ಚರಣದ ಸ್ವಲ್ಪ ಭಾಗ ಈಗ  ಚತುರಶ್ರದಲ್ಲಿ ಪುನರಾವರ್ತನೆಯಾಗುತ್ತದೆ. ಕೊನೆಗೆ ತಿಶ್ರನಡೆಯ ಪಲ್ಲವಿಗೆ ಮರಳುವ ಹಾಡು ಇಬ್ಬರ ಆಲಾಪದೊಂದಿಗೆ ಮುಕ್ತಾಯವಾಗುತ್ತದೆ. ಸಮದಲ್ಲಿ ಎತ್ತುಗಡೆಯಾಗುವ ಬಾ ಚಿನ್ನ ಮೋಹನ ನೋಡೆನ್ನ ಸಾಲನ್ನು ಒಂದೆರಡು ಕಡೆ  ಬಾ ಅಕ್ಷರವನ್ನು ಮೊದಲೇ ಎತ್ತಿಕೊಂಡು ಚಿನ್ನ ಮೋಹನ ನೋಡೆನ್ನ ಭಾಗವನ್ನು ಸಮಕ್ಕೆ ಹೊಂದಿಸಿ ಹಾಡುವ ಚಾಕಚಕ್ಯತೆ ಪ್ರದರ್ಶಿಸಲಾಗಿದೆ. ಈ ಹಾಡಿನ  ಗಾಯಕಿಯ voice throw ಅತ್ಯುನ್ನತ ಮಟ್ಟದ್ದು. ಅವರ ಪ್ರತಿಭೆಯನ್ನು ಇತರ ಸಂಗೀತ ನಿರ್ದೇಶಕರು ಏಕೆ ಬಳಸಿಕೊಳ್ಳಲಿಲ್ಲವೋ ತಿಳಿಯದು.




ಹೃದಯ ದೇವಿಯೆ ನಿನ್ನ

     ಪಿ.ಬಿ.ಎಸ್ - ಜಾನಕಿ all time hitsನಲ್ಲಿ ಒಂದಾದ ಇದು  ಈಗಲೂ ಕೆಲವೊಮ್ಮೆ ರೇಡಿಯೋದಲ್ಲಿ ಕೇಳಿ ಬರುವುದಿದೆ. ಉಳಿದ ಹಾಡುಗಳಂತೆ ಇದರಲ್ಲಿ ಆರ್ಕೆಷ್ಟ್ರಾದ ಅಬ್ಬರವಿಲ್ಲ.  ಢೋಲಕ್ ತಬ್ಲಾದಂತಹ ತಾಳ ವಾದ್ಯಗಳೂ ಇಲ್ಲ. ಸುರ್ ಬಹಾರ್ ರೀತಿಯ ತಂತಿ ವಾದ್ಯ, vibro phone, ಮರದ ಎರಡು ತುಂಡುಗಳ castanetsಗಳ ಅತಿ ಸೌಮ್ಯ ಹಿನ್ನೆಲೆ. Interludeಗೆ ಮಾತ್ರ ಇತರ ವಾದ್ಯಗಳ ಸಮೂಹ ಬಳಸಲಾಗಿದೆ.  ಪಿ.ಬಿ.ಎಸ್ ಮತ್ತು ಜಾನಕಿ ಅವರ ಧ್ವನಿ ಹಾಗೂ ಪಹಾಡಿ ರಾಗಾಧಾರಿತ  ಧಾಟಿ ಇವೇ ಹಾಡಿನ ಜೀವಾಳ. ಮರು ವರ್ಷ ಇದೇ ಶೈಲಿಯ ಚೌದವಿಂ ಕಾ ಚಾಂದ್ ಹೋ ಬಂತು!  ಕೊನೆಯ ಚರಣದಲ್ಲಿ ಒಬ್ಬರು ಒಂದು ಧಾಟಿಯಲ್ಲಿ ಹಾಡುವಾಗ ಇನ್ನೊಬ್ಬರು ಅದಕ್ಕೆ ಪೂರಕವಾದ ಬೇರೊಂದು ಧಾಟಿಯಲ್ಲಿ ಹಾಡುವ counter melody ತಂತ್ರವನ್ನು ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ಈ ಹಾಡಿನಲ್ಲಿ ಉಪಯೋಗಿಸಲಾಗಿದೆ.  ಹಾಡುಗಳ Interludeಗಳಲ್ಲಿ ಹಾಗೂ ಹಾಡಿನ ಜೊತೆ ಜೊತೆಗೆ ಹಿನ್ನೆಲೆಯಲ್ಲಿ ಚೇಲೊದಂತಹ ವಾದ್ಯಗಳನ್ನು ನುಡಿಸುವಾಗ ಹೆಚ್ಚಾಗಿ  ಈ ತಂತ್ರ ಬಳಸಲಾಗುತ್ತದೆ. 1959ರಲ್ಲಿ ನಿಂತು ನಾವು ಯೋಚಿಸುವುದಾದರೆ ಕನ್ನಡದ ಮಟ್ಟಿಗೆ ಈ ಹಾಡು ತುಂಬಾ ahead of time.




ಬಾರೆನ್ ಮನೋಹರ
ಪಾಶ್ಚಾತ್ಯ ಶೈಲಿಯ ಹಾಡು. ಪ್ರಸಿದ್ಧರನ್ನು ಹೊರತು ಪಡಿಸಿ ಗಾಯಕಿಯರ ಧ್ವನಿ ಕೇಳಿ ಗುರುತಿಸುವುದು ಬಲು ಕಷ್ಟ.  ಪದ್ಯಾವಳಿ ಅಥವಾ ಗ್ರಾಮಫೋನ್ ತಟ್ಟೆಯ ಮೊರೆಹೋಗಬೇಕಾಗುತ್ತದೆ. ಹೀಗಾಗಿ ಇದನ್ನು ಹಾಡಿದವರು ಯಾರೆಂದು ಖಚಿತವಾಗಿ ಗೊತ್ತಿಲ್ಲ. Prelude ಮತ್ತು interludeಗಳಿಗೆ ಟ್ರಂಪೆಟ್, ಮ್ಯಾಡೊಲಿನ್, ಬೊಂಗೊ ಇತ್ಯಾದಿಗಳನ್ನು  ಬಳಸಲಾಗಿದೆ.  ಹಾಡಿನ ಭಾಗದಲ್ಲಿ ಢೋಲಕ್ ಇದೆ. ಹೆಡ್ ಫೋನಿನಲ್ಲಿ ಆಲಿಸಿದರೆ ಅದರ ಎಡದ ಗುಂಕಿ ನುಡಿತವನ್ನು ಆಸ್ವಾದಿಸಬಹುದು.




ಅಬ್ಬಾ ಆ ಹುಡುಗಿ
ಯ ಹಾಡುಗಳನ್ನು ಕೇಳಿದ ಮೇಲೆ ಅಬ್ಬಾ! ಆ ಹಾಡುಗಳು!! ಎಂದು ನಿಮಗೂ ಅನ್ನಿಸಿತೇ?

Saturday 3 December 2016

ಒಂದು ಗ್ರೂಪ್ ಫೋಟೊದ ಸುತ್ತ



ಯಾವುದಾದರೂ ಸಮಾರಂಭದಲ್ಲಿ ಕುಟುಂಬದ ಎಲ್ಲರನ್ನೂ ಒಂದು ಗ್ರೂಪ್ ಫೋಟೊಗಾಗಿ ಒಟ್ಟುಗೂಡಿಸುವುದು ಎಷ್ಟು ಕಷ್ಟ ಎಂದು ಎಲ್ಲರಿಗೂ ಗೊತ್ತಿದೆ.  ಹಾಗಿರುವಾಗ ಇಲ್ಲದಿರುವವರೂ ಇರುವ ಒಂದು ಗ್ರೂಪ್ ಫೋಟೊ ಬೇಕೆಂದಾದರೆ?  ಇಲ್ಲಿ ಆದದ್ದು ಹಾಗೆಯೇ. ನಾವು ಐದು ಜನ ಅಣ್ಣ ತಮ್ಮಂದಿರು ಮತ್ತು ಐದು ಜನ ಅಕ್ಕ ತಂಗಿಯರು ತಂದೆ ತಾಯಿಗಳೊಟ್ಟಿಗಿರುವ ಫೋಟೊ ತೆಗೆಸಿಟ್ಟುಕೊಳ್ಳುವ  ಸಂದರ್ಭ ಮತ್ತು ಸೌಲಭ್ಯ ನಮಗೆ ಒದಗಿರಲಿಲ್ಲ.  ಈಗ ತಂದೆ-ತಾಯಿ, ಮೂವರು ಹಿರಿ ಅಣ್ಣಂದಿರು ಮತ್ತು ಇಬ್ಬರು ಹಿರಿ ಅಕ್ಕಂದಿರು ನಮ್ಮೊಂದಿಗಿಲ್ಲ. ಹೀಗಾಗಿ ಈ ಒಂದು ಆಸೆ ಕನಸಿನ ಗಂಟಾಗಿಯೇ ಉಳಿದಿತ್ತು.  ಆದರೆ ಮನಸ್ಸಿದ್ದರೆ ಮಾರ್ಗವಿದೆಯಲ್ಲವೇ.  ಪೂನಾದಲ್ಲಿರುವ ನಮ್ಮಣ್ಣ ಮತ್ತು ನಾನು  ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಸಂಯುಕ್ತ ಪ್ರಯತ್ನದಿಂದ 7 ಬೇರೆ ಬೇರೆ ಫೋಟೊಗಳನ್ನು ಸಂಯೋಜಿಸಿ ಕೊನೆಗೂ ನಮ್ಮದೊಂದು ಗ್ರೂಪ್ ಫೋಟೊ ತಯಾರಿಸಿಯೇ ಬಿಟ್ಟೆವು!  ಇದನ್ನು ನೋಡಿದಾಗ ಕೂಡು ಕುಟುಂಬದ ಭಾಗವಾಗಿ ಕಳೆದ ಆ ದಿನಗಳ ನೆನಪುಗಳು ಸಿನಿಮಾ ರೀಲಿನಂತೆ ಬಿಚ್ಚಿಕೊಳ್ಳತೊಡಗುತ್ತವೆ.  ಫೋಟೊದಲ್ಲಿರುವ ಒಬ್ಬೊಬ್ಬರ ಪರಿಚಯದ ಮೂಲಕ ರೀಲಿನ ಕೆಲವು ದೃಶ್ಯಗಳನ್ನು ನೋಡೋಣ.

ಕುಳಿತವರಲ್ಲಿ ಎಡದಿಂದ ಮೊದಲನೆಯವರು ನಮ್ಮ ದೊಡ್ಡ ಅಕ್ಕ ಕಮಲಾ.  ನಾನು ಹುಟ್ಟುವ ಮೊದಲೇ ಅವರು ವಿವಾಹವಾಗಿ ಹೋಗಿದ್ದರಿಂದ ನನಗೆ ಅವರಿಗಿಂತ ನನ್ನ ಸಮಕಾಲೀನರಾದ ಅವರ ಮಕ್ಕಳ ಒಡನಾಟವೇ ಜಾಸ್ತಿ. ಆದರೂ ನನ್ನ ಮೇಲೆ ಅವರಿಗೆ ವಿಶೇಷ ಅಭಿಮಾನ ಕೊನೆ ವರೆಗೂ ಇತ್ತು.   ನಿಂತವರಲ್ಲಿ ಬಲಗಡೆಯಿಂದ ಮೊದಲನೆಯವರು ನಮ್ಮ ದೊಡ್ಡ ಅಣ್ಣ ನಾರಾಯಣ.  ಅವರೂ ನಾನು ಜನಿಸುವ ಮೊದಲೇ ಕಾರ್ಯ ನಿಮಿತ್ತ ಬೇರೆ ಬಿಡಾರ ಹೂಡಿದ್ದರಿಂದ ಮುಂದೆ ಕಾಲೇಜು ದಿನಗಳಲ್ಲಿ ಅವರೊಂದಿಗಿದ್ದರೂ ಬಾಲ್ಯದಲ್ಲಿ ಆಗೊಮ್ಮೆ ಈಗೊಮ್ಮೆ ಮಾತ್ರ ಅವರ ಸಂಪರ್ಕ ಇರುತ್ತಿತ್ತು. ತಮ್ಮ ತಾರುಣ್ಯದಲ್ಲಿ ವಜ್ರಾದಪಿ ಕಠೋರಾಣಿ ಎಂದು  ನಮಗೆ ಅನ್ನಿಸಿದರೂ ನಾವು ಬೆಳೆದಂತೆ ಅವರೂ ಮೃದೂನಿ ಕುಸುಮಾದಪಿ ಆಗಿದ್ದರು. ಇನ್ನುಳಿದವರೆಲ್ಲರೂ ನನ್ನ ಕಾಲದಲ್ಲಿ ಬಹಳ ವರ್ಷ ಒಂದೇ ಸೂರಿನಡಿ ಇದ್ದವರು.  ಅಂಥಿಂಥ ಸೂರಲ್ಲ ಅದು.  14ಕ್ಕೂ ಹೆಚ್ಚು ನಿರ್ದಿಷ್ಟ ಹೆಸರು ಹೊಂದಿದ್ದ ಹಜಾರ, ಕೋಣೆ, ಜಗಲಿಗಳನ್ನು ಒಳಗೊಂಡ ಮೂರಂಕಣದ ಬೃಹತ್ ಮಹಡಿ ಸಂಕೀರ್ಣ. ಮಣ್ಣಿನ ದಪ್ಪ ಗೋಡೆಗಳು, ಅಡಿಕೆ ಸೋಗೆ ಹೊಚ್ಚಿದ ಬೆಚ್ಚಗಿನ ಮಾಡು. ಹುಡುಗರ ಪೈಕಿ ಎಲ್ಲರಿಗಿಂತ ಚಿಕ್ಕವನಾದ ನನಗೆ ಈ ಸೂರಿನಡಿಯಲ್ಲಿ ತಂದೆ ತಾಯಿ ಮಾತ್ರವಲ್ಲ,  ಅಣ್ಣ ಅತ್ತಿಗೆಯಂದಿರು ಹಾಗೂ ಅಕ್ಕಂದಿರ ಛತ್ರ ಛಾಯೆಯಲ್ಲಿ ಬಾಲ್ಯವನ್ನು ಕಳೆಯುವ ಅವಕಾಶ  ಪ್ರಾಪ್ತವಾಗಿತ್ತು. 

ಕುಳಿತವರಲ್ಲಿ ಎಡದಿಂದ ಎರಡನೆಯವರಾದ ನಮ್ಮ ತಂದೆ ಬಾಲಕೃಷ್ಣ ನಾರಾಯಣ ಕಾಕತ್ಕರ್  ಈ ಮನೆಯ ಜನರಲ್ ಮ್ಯಾನೇಜರ್ .  ಅವರಿಗೆ ಕೃಷಿ, ಹೈನುಗಾರಿಕೆ, ಪೌರೋಹಿತ್ಯಗಳಲ್ಲಿ ಸಮಾನ ಪರಿಣಿತಿ ಇತ್ತು.  ಹೈನುಗಾರಿಕೆ ಅವರಿಗೆ ಚೆನ್ನಾಗಿ ಕೂಡಿಯೂ ಬರುತ್ತಿತ್ತು. ಅವರ ಕಾಲದಲ್ಲಿ ಹಟ್ಟಿ ತುಂಬ ಎಮ್ಮೆ, ದನ, ಕರುಗಳು ಇರುತ್ತಿದ್ದು  ಕೆಲಸದಾಳುಗಳು ಬಾಯಾರಿಕೆಗಾಗಿ ನೀರು ಕೇಳಿದರೆ ಮಜ್ಜಿಗೆ ಕೊಡುವಷ್ಟು ಹೈನುತ್ಪನ್ನಗಳು ಯಥೇಚ್ಛವಾಗಿರುತ್ತಿದ್ದವು. ಅಗತ್ಯವಿದ್ದರೆ ಘಟ್ಟದಿಂದ ಇಳಿಯುತ್ತಿದ್ದ ಪೈರಿನಿಂದ ಹೊಸ ಎಮ್ಮೆ ಖರೀದಿಸುತ್ತಿದ್ದರು. ಶ್ರಮದ ಕೆಲಸದಲ್ಲಿ ಎತ್ತಿದ ಕೈ. ಅಕ್ಕಿ ಮುಡಿ, ಅಡಿಕೆ ಗೋಣಿಗಳನ್ನು ಹೊತ್ತುಕೊಂಡು ಸರಸರನೆ ಅಟ್ಟವೇರುತ್ತಿದ್ದರು. ಅಚ್ಚಿನಲ್ಲಿ ಎರಕ ಹೊಯ್ದಂತೆ ಪ್ರತಿ ವರ್ಷ ಒಂದೇ ರೀತಿ ಕಾಣಿಸುವ ಸುಂದರವಾದ ಚೌತಿ ಗಣಪನನ್ನು ತಯಾರಿಸುತ್ತಿದ್ದರು. ಅವರು ಹಂತ ಹಂತವಾಗಿ ತಯಾರಿಸುತ್ತಿದ್ದ ಗಣಪನಿಗೆ ಸೊಂಡಿಲು ಇಡುವ ದಿನ ನಮಗೆಲ್ಲ ವಿಶೇಷ ಸಂಭ್ರಮದ್ದಾಗಿರುತ್ತಿತ್ತು. ಬಣ್ಣ ಹಚ್ಚುವ ದಿನವಂತೂ ಹೆಚ್ಚಿನ ಸಂಭ್ರಮ. ಮೊದಮೊದಲು  ಗಣಪನ ಬೆನ್ನಿಗೆ ಮಾತ್ರ ಮತ್ತು ಸ್ವಲ್ಪ ದೊಡ್ಡವನಾದ ಮೇಲೆ ಇತರ ಭಾಗಗಳಿಗೆ  ಬಣ್ಣ ಹಚ್ಚಲು ನನಗೂ ಅನುಮತಿ ಕೊಡುತ್ತಿದ್ದರು. ಗಣಪ ತಯಾರಿಸಿ ಉಳಿದ ಮಣ್ಣಿನಲ್ಲಿ ಚಿಕ್ಕ ಚಿಕ್ಕ ಬೊಂಬೆಗಳನ್ನು ಮಾಡಿ ಬಣ್ಣ ಹಚ್ಚುವ ಸ್ವಾತಂತ್ರ್ಯವೂ ನಮಗಿತ್ತು.  ಆದರೆ ಮರು ವರ್ಷ ಗಣಪನಿಗಾಗಿ ಕುಂಬಾರ ತಂದುಕೊಡುತ್ತಿದ್ದ  ಮಣ್ಣು ಕಡಿಮೆ ಬಿದ್ದರೆ ಆ ಬೊಂಬೆಗಳು ಹುಡಿಯಾಗುವುದೂ ಇತ್ತು!  ರಾತ್ರಿ ಪಕ್ಕದಲ್ಲಿ  ಮಲಗಿಸಿಕೊಂಡು ಮಕ್ಕಳಿಗೆ ಕಥೆಗಳನ್ನು ಹೇಳುತ್ತಿದ್ದರೂ   ಸ್ವಭಾವದಲ್ಲಿ ಅವರು ಸ್ವಲ್ಪ ಖಡಕ್. ಸಣ್ಣ ತಪ್ಪುಗಳಿಗೆ ‘ಹೂಂ’ ಎಂದು ಗದರಿಸಿ ಸುಮ್ಮನಾಗುತ್ತಿದ್ದವರು ಕೆಲವು ಸಲ ಮಕ್ಕಳು, ಸಾಕು ಪ್ರಾಣಿಗಳನ್ನು ಬೆತ್ತದಿಂದ ಸದೆಯುತ್ತಿದ್ದರು. ಮೊದಲ ದಿನ ಶಾಲೆಗೆ ಹೋಗುವುದಿಲ್ಲ ಎಂದು ಹಟ ಹಿಡಿದಿದ್ದ ನಾನೂ ಅವರ ಬೆತ್ತದ ರುಚಿ ನೋಡಿದ್ದುಂಟು!

ಕುಳಿತವರಲ್ಲಿ ಎಡದಿಂದ ಮೂರನೆಯವರು ನಮ್ಮ ತಾಯಿ ಸರಸ್ವತಿ. ಅತ್ತಿಗೆ, ಅಕ್ಕಂದಿರ ಸಹಕಾರದೊಂದಿಗೆ ಮನೆಯೊಳಹೊರಗಿನ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದ ಚೀಫ್ ಹೋಮ್ ಮಿನಿಸ್ಟರ್.  ಗಂಡುಮಕ್ಕಳು, ಹೆಣ್ಣುಮಕ್ಕಳು ಅಥವಾ ಮೊಮ್ಮಕ್ಕಳು  ಎಂದು ಎಂದೂ  ಭೇದ ಮಾಡಿದವರಲ್ಲ. ವ್ರತ ನೇಮಗಳನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದರು.  ಇಂತಿಂತಹ ದಿನ ಇಂತಿಂತಹ ಹಬ್ಬವೋ ನೇಮವೋ ಇದೆ ಎಂದು ಮೊದಲೇ ಗೊತ್ತುಪಡಿಸಿಕೊಂಡು ಅದಕ್ಕೆ ಬೇಕಾದ ಬಾಳೆಗೊನೆ ಇತ್ಯಾದಿಗಳನ್ನು ಗಂಡು ಮಕ್ಕಳಿಗೆ ಹೇಳಿ  ಸಿದ್ಧಮಾಡಿ ಇಟ್ಟುಕೊಳ್ಳುತ್ತಿದ್ದರು. ಅವರು ಆಚರಿಸುವ ಪ್ರತೀ ನೇಮದ ದಿನ ದೇವರೊಂದಿಗೆ ನಮಗೂ ಏನಾದರೂ ವಿಶೇಷ ನೈವೇದ್ಯ ಅರ್ಪಣೆಯಾಗುತ್ತಿತ್ತು. ದಿನಾ ಬೆಳಗ್ಗೆ ಗಂಜಿ ಊಟದ ಪರಿಪಾಠವಿದ್ದರೂ ವಾರದಲ್ಲಿ ಒಂದೆರಡು ದಿನ ವೈವಿಧ್ಯಮಯ ದೋಸೆ ಇತ್ಯಾದಿಗಳು ಇರುತ್ತಿದ್ದವು. ಮರದ ಒತ್ತುಮಣೆಯಲ್ಲಿ ಶ್ಯಾವಿಗೆ ತಯಾರಿ ಹಮ್ಮಿಕೊಂಡ ದಿನ ನಮಗೆಲ್ಲರಿಗೂ ಉದ್ದದ ಸಲಾಕೆಯನ್ನು ಒತ್ತುವ ಕೆಲಸ ಇರುತ್ತಿತ್ತು.   ಮರಾಠಿ ಸಾಹಿತ್ಯದಲ್ಲಿ ಅವರಿಗೆ ಹೆಚ್ಚು ಆಸಕ್ತಿ.  ಅಪರಾಹ್ನ ಬಿಡುವಿನ ವೇಳೆಯಲ್ಲಿ ಯಾವುದಾದರೂ ಆಧ್ಯಾತ್ಮಿಕ ಪುಸ್ತಕ ಓದುತ್ತಲೇ ಇರುತ್ತಿದ್ದರು. ಮನೆಗೆ ರೇಡಿಯೋ ಬಂದ ಮೇಲಂತೂ ಗುರುವಾರ ಮತ್ತು ಭಾನುವಾರ ಆಕಾಶವಾಣಿ ಮುಂಬಯಿಯಿಂದ ಪ್ರಸಾರವಾಗುತ್ತಿದ್ದ ಮರಾಠಿ ಹರಿಕಥೆಗಳನ್ನು ತಪ್ಪದೆ ಆಲಿಸುತ್ತಿದ್ದರು.  ಆ ದಿನಗಳಂದು ನನ್ನ ಸಿಲೋನ್, ವಿವಿಧ ಭಾರತಿಗಳಿಗೂ ಬಿಡುವು! ಸಮಯ ಸಿಕ್ಕಾಗ ತೋಟಕ್ಕೆ ಹೋಗಿ ಸೋಗೆಗಳನ್ನು ಒಟ್ಟುಮಾಡಿ ಹಾಳೆಗಳನ್ನು ಕಡಿದು ಸಿಪ್ಪೆ ಸುಲಿದು ಒಣಗಿಸಿ ಅಚ್ಚುಕಟ್ಟಾಗಿ ಕಟ್ಟಿ ಇಡುತ್ತಿದ್ದರು.  ಆ ಕಾಲದಲ್ಲಿ ಬೆಳಗಿನ ಗಂಜಿ ಊಟಕ್ಕೆ ಹಾಳೆಗಳನ್ನು ಉಪಯೋಗಿಸುವ ಪರಿಪಾಠವಿತ್ತು. ಕೆಲ ವರ್ಷಗಳ ನಂತರ ಧರ್ಮಸ್ಥಳದಿಂದಲೂ ಹಾಳೆಗಳಿಗೆ ಬೇಡಿಕೆ ಬರತೊಡಗಿದ ಮೇಲೆ ಈ ಮೂಲಕ ಕೊಂಚ ಆರ್ಥಿಕ ಸಂಪನ್ಮೂಲವೂ ಹರಿದು ಬರತೊಡಗಿತ್ತು.  ಶಾಲೆಗೆ ರಜೆ ಸಿಕ್ಕಿದ ಮೇಲೆ ವರ್ಷಕ್ಕೊಮ್ಮೆ ನನ್ನನ್ನೂ ಕರೆದುಕೊಂಡು ತವರು ಮನೆಗೆ ಹೋಗುವ ಅವರ ಪರಿಪಾಠ ನಾನು ಹೈಸ್ಕೂಲು ಸೇರುವ ವರೆಗೂ ಮುಂದುವರೆದಿತ್ತು. ಮುಂದೆ ಕಾಲೇಜು ಮುಗಿಸಿ  ಉದ್ಯೋಗಕ್ಕೆ ಆಯ್ಕೆಯಾಗಿ ಮನೆ ಬಿಟ್ಟು ಹೊರಟು ನಿಂತ ನನಗೆ ನಾನು ಯಾವಾಗಲೂ ಊಟ ಮಾಡುತ್ತಿದ್ದ ಸ್ಟೀಲ್ ತಟ್ಟೆಯನ್ನು ಜೊತೆಗೊಯ್ಯುವಂತೆ ಹೇಳಿದ್ದರು. ಧರ್ಮಸ್ಥಳದಿಂದ 50ರ ದಶಕದಲ್ಲಿ ಖರೀದಿಸಿದ್ದ, ಈಗಿನ ಕಾಲದ ನಾಲ್ಕು ತಟ್ಟೆಗಳಷ್ಟು ದಪ್ಪಗಿರುವ ಅದರಲ್ಲೇ ನಾನೂ ಈಗಲೂ ಉಣ್ಣುವುದು.  ನಾನು ಅವರಿಗಾಗಿ ಒಳಗೆ ಬನ್ನಿ ಎಂಬ ಬೋರ್ಡಿನ ಕಾಲ್ ಬೆಲ್ ಮಾಡಿದ್ದು,  ಪಾತ್ರೆಯಲ್ಲಿ ಇಸ್ತ್ರಿ ಹಾಕಲು ಹೋಗಿ ಅವರ ಹೊಸ ಸಿಲ್ಕ್ ರವಕೆಯನ್ನು ಸುಟ್ಟದ್ದು ಇತ್ಯಾದಿ ಇನ್ನೊಂದೆಡೆ ಈಗಾಗಲೇ ಹೇಳಿದ್ದೇನೆ.  ಅವರಿಗೊಮ್ಮೆ ವಿಮಾನ ಯಾತ್ರೆ ಮಾಡಿಸುವ ಅವಕಾಶ ನಾನು ಉದ್ಯೋಗ ಮಾಡುತ್ತಿದ್ದ ದೂರವಾಣಿ ಇಲಾಖೆಯ ಎಲ್.ಟಿ.ಸಿ ಸೌಲಭ್ಯದ ಮೂಲಕ ನನಗೆ ದೊರಕಿತ್ತು.

ನಿಂತವರಲ್ಲಿ ಎಡದಿಂದ ಮೂರನೆಯವರು ನಮ್ಮ ಎರಡನೆಯ ಅಣ್ಣ ಹರಿಹರ  - ಮನೆಯ ಎಕ್ಸಿಕ್ಯೂಟಿವ್ ಆಫೀಸರ್.  ಏಕೆಂದರೆ ತಂದೆಯವರ ನಿರ್ದೇಶನದಂತೆ ಮನೆಯ ಹೊರಗಿನ ವ್ಯವಹಾರಗಳನ್ನೆಲ್ಲ ಅವರೇ ನೋಡಿಕೊಳ್ಳುತ್ತಿದ್ದುದು. ಪ್ರಗತಿಪರ ಕೃಷಿಯಲ್ಲೂ ಅವರಿಗೆ ಬಹಳ ಆಸಕ್ತಿ.  ವೈವಿಧ್ಯಮಯ ಹಣ್ಣು ಹೂವಿನ ಗಿಡಗಳನ್ನು ಬೆಳೆಸಿದ್ದರು. ಗಿಡಗಳನ್ನು ಕಸಿಮಾಡುವುದರಲ್ಲೂ ಪರಿಣತಿ ಹೊಂದಿದ್ದು ಇದಕ್ಕಾಗಿ ಧರ್ಮಸ್ಥಳದಲ್ಲಿ ವಿಶೇಷ ತರಬೇತಿಯನ್ನೂ ಪಡೆದಿದ್ದರು. ಜೇನುಸಾಕಣೆಯಲ್ಲೂ ತೊಡಗಿಸಿಕೊಂಡಿದ್ದರು.  ಲೆಮನ್ ಗ್ರಾಸ್ ಬೆಳೆಸಿ ಎಣ್ಣೆ  ತಯಾರಿಸಲು ಹೋಗಿ ಕೈ ಸುಟ್ಟುಕೊಂಡದ್ದೂ ಇದೆ. ಮಕ್ಕಳೆಂದರೆ ಅವರಿಗೆ ಅಚ್ಚು ಮೆಚ್ಚು. ಚಿಕ್ಕ ಮಕ್ಕಳನ್ನು ತೊಟ್ಟಿಲಲ್ಲಿ ಕೂರಿಸಿ ತೂಗುತ್ತಾ ‘ಬಾಯಿಪಾಠ’ ಹೇಳಿಕೊಡುತ್ತಿದ್ದರು. ಯಾವತ್ತು ಪೇಟೆಗೆ ಹೋದರೂ ಬರುವಾಗ ಮಕ್ಕಳಿಗೆ ಪೆಪ್ಪರಮಿಂಟು ಕಟ್ಟಿಸಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಮನೆ ಮಂದಿಗೆ ಕಾಯಿಲೆ ಕಸಾಲೆ ಬಂದಾಗ ಔಷಧೋಪಚಾರ ಇವರದೇ ಜವಾಬ್ದಾರಿಯಾಗಿತ್ತು. ಪ್ರಥಮ ಸುತ್ತಿನ ಚಿಕಿತ್ಸೆಗೆ ಬೇಕಾದ ಔಷಧಿಗಳೆಲ್ಲವನ್ನೂ ಸಂಗ್ರಹಿಸಿ ಇಟ್ಟಿರುತ್ತಿದ್ದರು. ಅವರಿಗೆ ಗಿಳಿ ಸಾಕುವ ಹವ್ಯಾಸವಿತ್ತು. ‘ನೆಂಟ್ರು ಬಂದ್ರು ಚಾಪೆ ಹಾಕಿ ಬೆಲ್ಲ ಕೊಡಿ ನೀರು ಕೊಡಿ’ ಅನ್ನುತ್ತಿದ್ದ ಅದು ಮನೆಗೆ ಬಂದವರಿಗೆಲ್ಲ ಆಕರ್ಷಣೆಯ ಕೇಂದ್ರವಾಗಿತ್ತು. ಪುಸ್ತಕ ಸಂಗ್ರಹದಲ್ಲೂ ಅಪಾರ ಆಸಕ್ತಿ ಇತ್ತವರಿಗೆ.  ಪ್ರತೀ ವರ್ಷ ಧರ್ಮಸ್ಥಳ ದೀಪೋತ್ಸವಕ್ಕೆ ಹೋದಾಗ ಒಂದಾದರೂ ಪುಸ್ತಕ ಕೊಳ್ಳುತ್ತಿದ್ದರು. ತಮ್ಮ ಶಾಲಾ ಪಠ್ಯ ಪುಸ್ತಕಗಳನ್ನೂ ಕೊನೆವರೆಗೂ ಜೋಪಾನವಾಗಿ ಕಾಯ್ದಿಟ್ಟುಕೊಂಡಿದ್ದರು. ಪುಸ್ತಕಗಳಿಗೆ ಭದ್ರವಾದ ಬೈಂಡ್ ಹಾಕುವುದನ್ನು ನಮಗೆಲ್ಲ ಕಲಿಸಿ ಕೊಟ್ಟದ್ದು ಅವರೇ. ಊರ ಪರವೂರ ಸಮಾಚಾರಗಳನ್ನು ಒಂದಷ್ಟು ಮಸಾಲೆ ಸೇರಿಸಿ ವರ್ಣರಂಜಿತವಾಗಿ ವಿವರಿಸುವುದರಲ್ಲಿ ಅವರಿಗೆ ಅವರೇ ಸಾಟಿ. ಅವರು ಹೇಳಿದ್ದಕ್ಕೆ 10ರಿಂದ ಭಾಗಿಸಿದಾಗ ಸಿಗುವುದು ವಾಸ್ತವ ಸಂಗತಿಯಾಗಿರುತ್ತದೆ ಎಂದು ನಾವು ಗುಟ್ಟಿನಲ್ಲಿ ಮಾತಾಡಿಕೊಳ್ಳುವುದಿತ್ತು! ಕೆಲವೊಮ್ಮೆ ದಿಟ್ಟ ನಿರ್ಧಾರಗಳನ್ನೂ ಕೈಗೊಳ್ಳುತ್ತಿದ್ದರು. ಆರ್ಥಿಕ ಸ್ಥಿತಿ ಅಷ್ಟೊಂದು ಉತ್ತಮವಾಗಿರದ ಆ ಕಾಲದಲ್ಲೇ  ಮನೆಗೊಂದು ರೇಡಿಯೋ ತಂದದ್ದು  ಇವುಗಳಲ್ಲೊಂದು.  ಅವರ ಈ ನಿರ್ಧಾರವಲ್ಲದಿದ್ದರೆ ನನಗೆ  ರೇಡಿಯೋದೊಂದಿಗೆ  ನಂಟು ಬೆಳೆಯುತ್ತಲೇ ಇರಲಿಲ್ಲ. ಊರಿಗೆ ವಿದ್ಯುತ್ ಸೌಲಭ್ಯ ಬಂದಾಗ ಸಂಪರ್ಕ ಪಡೆದುಕೊಂಡ ಮೊದಲ ಕೆಲವು ಮನೆಗಳಲ್ಲಿ ನಮ್ಮದೂ ಒಂದಾಗಲೂ ಅವರ ನಿರ್ಧಾರವೇ ಕಾರಣ. ತಂದೆಯವರು ತೀರಿದ ಮೇಲೆ ತಮ್ಮಂದಿರು ತಂಗಿಯರೆಂದು ತಾತ್ಸಾರ ಮಾಡದೆ  ನಮಗೆಲ್ಲ ಶಿಕ್ಷಣ  ಕೊಡಿಸಿ ಮದುವೆ ಮಾಡಿಸಿ ಜವಾಬ್ದಾರಿ ನಿಭಾಯಿಸಿದರು.

ನಿಂತವರಲ್ಲಿ ಬಲದಿಂದ ಎರಡನೆಯವರಾದ ನಮ್ಮ ಮೂರನೇ ಅಣ್ಣ ಗಣಪತಿ - ಮನೆಯ ಎಕ್ಸಿಕೂಟಿವ್ ಇಂಜಿನಿಯರ್. ಸಾಂಪ್ರದಾಯಿಕ ಶಿಕ್ಷಣದಲ್ಲಿ ಅಷ್ಟೊಂದು ಆಸಕ್ತಿ ತೋರದಿದ್ದರೂ ಜನ್ಮಜಾತ ಪ್ರತಿಭೆಯ ಅದ್ಭುತ ತಾಂತ್ರಿಕ ತಜ್ಞ. ರೇಡಿಯೋದ ಹಳೆ ಬ್ಯಾಟರಿ, ಗೆರಟೆ ಮತ್ತು ಟೂತ್ ಪೇಸ್ಟಿನ ಮುಚ್ಚಳದ ಸ್ವಿಚ್ ಇತ್ಯಾದಿ ಬಳಸಿ ವಿದ್ಯುತ್ ಬರುವ ಮೊದಲೇ ಚೌತಿ, ನವರಾತ್ರಿ ಸಂದರ್ಭಗಳಲ್ಲಿ ದೇವರ ಮಂಟಪಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿದ್ದವರು.  ಬಡಗಿ ಕೆಲಸವೂ ಬರುತ್ತಿತ್ತು. ಮುಟ್ಟಾಳೆ ಧರಿಸಿ ತೋಟದಲ್ಲಿ ಆಳುಗಳೊಂದಿಗೆ ದುಡಿಯುತ್ತಿದ್ದರು. ಏನನ್ನಾದರೂ ಮಾಡಿದರೆ ಅತ್ಯುತ್ತಮವಾಗಿ, ಇತರರಿಗಿಂತ ಚೆನ್ನಾಗಿ ಮಾಡಬೇಕೆಂಬ ಹಂಬಲವುಳ್ಳವರು.  ಮನೆಗೆ ರೇಡಿಯೋ ಬಂದಾಗ ಅತ್ಯಂತ ಎತ್ತರದ ಬಿದಿರಿಗೆ ಏರಿಯಲ್ ಜೋಡಿಸಿ ಎತ್ತರವಾದ ದಿಬ್ಬದ ಮೇಲೆ ಅದನ್ನು ಸ್ಥಾಪಿಸಿ ಹಗಲು ಹೊತ್ತು ಕೂಡ ದೂರದ ಧಾರವಾಡದಂತಹ ಮೀಡಿಯಂ ವೇವ್ ನಿಲಯಗಳು ಸುಸ್ಪಷ್ಟವಾಗಿ ಕೇಳಿಸುವಂತೆ ಮಾಡಿದ್ದರು.  ದೀಪಾವಳಿ ಸಮಯ ಎತ್ತರವಾದ ಮರವೊಂದಕ್ಕೆ ಇನ್ನೂ ಎತ್ತರವಾದ ಗಳು ಕಟ್ಟಿ ತಮ್ಮ ಗೂಡುದೀಪ ಇತರೆಲ್ಲವುಗಳಿಂದ ಮೇಲಿರುವಂತೆ ನೋಡಿಕೊಳ್ಳುತ್ತಿದ್ದರು. ಸರಸರನೆ ಮರಗಳನ್ನೇರಿ ಅಡ್ಡ ಗೆಲ್ಲುಗಳ ಮೇಲೂ ನಡೆಯಬಲ್ಲವರಾಗಿದ್ದರು.  ಹಲಸಿನ ಹಣ್ಣುಗಳನ್ನು ಕೊಯ್ದು ಹಗ್ಗ ಕಟ್ಟಿ ಇಳಿಸಿ ತೊಳೆ ಬಿಡಿಸುವಲ್ಲಿಯವರೆಗಿನ ಜವಾಬ್ದಾರಿ ಇವರದೇ ಆಗಿರುತ್ತಿತ್ತು.  ಅವರು ತೊಳೆ ಬಿಡಿಸಿ ಹಾಕಿದಂತೆಲ್ಲ ಸುತ್ತಲೂ ಕೂತ ಮಕ್ಕಳಾದ ನಾವು ಅವುಗಳನ್ನು ಮಾಯ ಮಾಡುತ್ತಿದ್ದೆವು!  ವಿವಿಧ ಜಾತಿಯ ಹಲಸು ಮಾವುಗಳ ತಳಿ ಬೆಳೆಸುವಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಜೇನು ಸಾಕಣೆಯಲ್ಲೂ ಅವರು ಎತ್ತಿದ ಕೈ. ನಾನು ಕಾಲೇಜು ಮುಗಿಸುವಷ್ಟರಲ್ಲಿ ಅವರೂ ಬೇರೆ ಜಮೀನಿನಲ್ಲಿ ವಾಸ್ತವ್ಯ ಹೂಡಿ ಸ್ವಂತ ದುಡಿಮೆಯಿಂದ ಅಲ್ಲಿ ನಂದನವನವನ್ನೇ ಸೃಷ್ಟಿಸಿದರು. ಒಂದು ಸಲ ರೇಶ್ಮೆ ಕೃಷಿಯಲ್ಲೂ ಕೈ ಆಡಿಸಿದ್ದುಂಟು. 

ಕುಳಿತವರಲ್ಲಿ ಬಲದಿಂದ ಮೊದಲನೆಯವರು ನನ್ನ ಎರಡನೇ ಅಕ್ಕ ಅಂಬಾ. ಬಾಲ್ಯದಲ್ಲಿ ನನ್ನ ಗವರ್ನೆಸ್ ಆಗಿದ್ದವರು. ಚಿಕ್ಕಂದಿನಿಂದಲೂ ತಾಯಿಗಿಂತ ನನಗೆ ಅವರ ಒಡನಾಟವೇ ಜಾಸ್ತಿ ಇದ್ದುದಂತೆ.  ಎಲ್ಲಿ ಹೋಗುವಾಗಲೂ ನನ್ನನ್ನು ಹೊತ್ತುಕೊಂಡೇ ಹೋಗುತ್ತಿದ್ದರು. ‘ಅಂಬಾ ಹೋದರೆ ನಾನೂ...’ ಎಂಬುದು ನನ್ನ ಬೀಜಾಕ್ಷರಿ ಮಂತ್ರವಾಗಿರುತ್ತಿತ್ತಂತೆ. ಸ್ವಲ್ಪ ಸಂಗೀತಾಭ್ಯಾಸವನ್ನೂ ಮಾಡಿದ್ದ ಅವರು ಅನೇಕ ಮರಾಠಿ,ಕನ್ನಡ ಹಾಡುಗಳನ್ನು ಹಾಡುತ್ತಾ ನನ್ನನ್ನು ತೊಟ್ಟಿಲಲ್ಲಿ ತೂಗುತ್ತಿದ್ದರಂತೆ.  ಹಾಡು ನಿಲ್ಲಿಸಿದರೆ ಮತ್ತೆ ಹಾಡುವಂತೆ ನಾನು ಹಠ ಮಾಡುವುದೂ ಇತ್ತಂತೆ. ಅವರು ಹಾಡುತ್ತಿದ್ದ ಜಗನ್ಮೋಹಿನಿ ಚಿತ್ರದ ಎಂದೋ ಎಂದೋ ಹಾಡಿನ ಬಗ್ಗೆ ತಿಳಿಯಲು ಎಲ್ಲೂ ಇಲ್ಲದ ಹಾಡು ನೋಡಬಹುದು.  ನಾನು ಯಾವಾಗಲೂ ಅವರೊಂದಿಗೇ ಇರುವುದನ್ನು ಕಂಡು ನಮ್ಮ ತಂದೆ ‘ಇವಳ ಮದುವೆಯಾಗುವಾಗ ಈತನನ್ನೂ ವರದಕ್ಷಿಣೆಯಾಗಿ ಕೊಟ್ಟುಬಿಡೋಣ’ ಎಂದು ತಮಾಷೆ ಮಾಡುತ್ತಿದ್ದರಂತೆ!  ಅವರು ಮದುವೆಯಾಗಿ ಇನ್ನೊಂದು ಮನೆಗೆ ಹೋಗುತ್ತಾರೆ ಎಂದು ಯಾರಾದರೂ ಅಂದಾಗ ಹೀಗೆ ಒಬ್ಬೊಬ್ಬರೇ ಹೆಣ್ಣು ಮಕ್ಕಳು ಮದುವೆಯಾಗಿ ಮನೆ ಬಿಟ್ಟು ಹೋದರೆ ನಮಗೆ ಅಡುಗೆ ಮಾಡಿ ಬಡಿಸುವವರು ಯಾರು ಎಂದು ನನಗೆ ದಿಗಿಲಾಗುತ್ತಿತ್ತು!   ಅದ್ಭುತ ಜ್ಜಾಪಕ ಶಕ್ತಿ ಹೊಂದಿದ್ದ ಅವರಿಗೆ ತಮ್ಮ ಮಕ್ಕಳದ್ದು ಮಾತ್ರವಲ್ಲ, ಬಂಧು ಬಳಗದ ಎಲ್ಲರ ಮಕ್ಕಳ ಜನ್ಮ ದಿನಗಳೂ ಕಂಠಪಾಠವಾಗಿದ್ದವು.  ಚಿಕ್ಕಂದಿನಲ್ಲಿ ಕಲಿತ ಎಲ್ಲ ಹಾಡುಗಳನ್ನೂ ಕೊನೆ ವರೆಗೂ ನೆನಪಿಟ್ಟುಕೊಂಡಿದ್ದರು.

ನಿಂತವರಲ್ಲಿ ಎಡದಿಂದ ಎರಡನೆಯವರು ಈಗ ಪೂನಾದಲ್ಲಿರುವ ಈ ಗ್ರೂಪ್ ಫೋಟೊ ತಯಾರಿಯಲ್ಲಿ ಮುಖ್ಯ ಪಾತ್ರ ವಹಿಸಿರುವ ನನ್ನ ನಾಲ್ಕನೇ ಅಣ್ಣ ಪದ್ಮನಾಭ.  ಬಾಲ್ಯದಿಂದಲೂ ಇವರು ನನ್ನ ಟೆಕ್ನಿಕಲ್ ಎಡ್ವೈಸರ್.  ಬಹುಪಾಲು ಪ್ರಪಂಚ ಜ್ಞಾನವನ್ನು ನಾನು ಇವರಿಂದಲೇ ಸಂಪಾದಿಸಿದ್ದು.   ವಯಸ್ಸಿನಲ್ಲಿ  ಹೆಚ್ಚು ಅಂತರ ಇಲ್ಲದೆ ಇದ್ದುದರಿಂದ ನಾವು ಬಾಲ್ಯದಲ್ಲಿ ಚರ್ಚಿಸದಿರುವ ವಿಷಯಗಳೇ ಇಲ್ಲ ಎಂದರೆ ತಪ್ಪಾಗಲಾರದು.  ಈಗಲೂ ಇದು ಮುಂದುವರೆದಿದ್ದು ವಿಷಯಗಳ ಆದಾನ ಪ್ರದಾನ ನಡೆಯುತ್ತಲೇ ಇರುತ್ತದೆ.

ಕುಳಿತವರಲ್ಲಿ ಬಲದಿಂದ ಎರಡನೆಯವರು ಮೂರನೆಯ ಅಕ್ಕ. 9-6-2022ರಂದು ಅಲ್ಪ ಕಾಲದ ಅಸ್ವಾಸ್ಥ್ಯದಿಂದ 74ರ ವಯಸ್ಸಿನಲ್ಲಿ ನಿಧನರಾದರು.  ಸುಧಾ ಕಾಕತ್ಕರ್ ಆಗಿದ್ದ ಅವರು ಮದುವೆಯ ನಂತರ ನಮ್ಮ ಸಂಪ್ರದಾಯದಂತೆ ಸೀತಾ ದಾಮ್ಲೆ ಆಗಿದ್ದರು.  ನಾನು ಅವರ ಬೆನ್ನಿಗೆ ಹುಟ್ಟಿದ ತಮ್ಮ.  ಡಾನ್ಸ್ ಎಂಬ ಪದವನ್ನು ಮೊತ್ತಮೊದಲು ನಮಗೆ ಪರಿಚಯಿಸಿದ್ದು ಅವರೇ.  ಬಾರೊ ಶ್ರೀ ಕೃಷ್ಣ ಬೇಗ ಕೊಳಲನೂದುತ ಎಂಬ ನೃತ್ಯವನ್ನು ಯಾರೋ ಅವರಿಗೆ ಕಲಿಸಿದ್ದರು.  ‘ಒಮ್ಮೆ ಡಾನ್ಸ್ ಮಾಡು’ ಎಂದು ಯಾರಾದರೂ ಹೇಳಿದರೆ ಯಾವ ಅಳುಕೂ ಇಲ್ಲದೆ ಹಾಡುತ್ತಾ ನರ್ತಿಸಿ  ತೋರಿಸುತ್ತಿದ್ದರು. ‘ಶಿಕ್ಕದಲ್ಲಿ ಇದ್ದ ಬೆಣ್ಣೆ ಹಾರಿ ತೆಗೆದ’ ಎಂಬ ಸಾಲಿಗೆ ಅವರು ಮೇಲಕ್ಕೆ ಹಾರಿ ಅಭಿನಯಿಸುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ. ನಾನು ಎರಡನೇ ಕ್ಲಾಸು ಇರುವಾಗ ಅವರು 5ನೇ.  ಹೀಗಾಗಿ ಎರಡು ವರ್ಷ ನಾವು ಒಟ್ಟಿಗೆ ಸಿದ್‌ಬೈಲು ಶಾಲೆಗೆ ಹೋದದ್ದು.    ಒಂದು ಸಲ ಶಾಲೆಯಿಂದ ಬರುವಾಗ ಸುಧಕ್ಕ ತೋಡಿನ ಬದಿಯಲ್ಲಿದ್ದ ಮರದ ಟೊಂಗೆಯೊಂದಕ್ಕೆ ಪುಸ್ತಕದ ಚೀಲ ಸಿಕ್ಕಿಸಿ ಅಲ್ಲಿ ಬೀಳುತ್ತಿದ್ದ ರೆಂಜೆ ಹಣ್ಣು ಹೆಕ್ಕಲೆಂದು ಹೋದರು. ಅಷ್ಟರಲ್ಲಿ ಆ ಟೊಂಗೆ ಮುರಿದು ಅದಕ್ಕೆ ಸಿಕ್ಕಿಸಿದ್ದ ಚೀಲ ಧೊಪ್ಪೆಂದು ತೋಡಿನ ನೀರೊಳಗೆ ಬಿತ್ತು!  ಆ ಮೇಲೆ ಹತ್ತಿರದ ಮನೆಯವರು ಕಷ್ಟಪಟ್ಟು ದೋಟಿಯಿಂದ ಚೀಲ ಎತ್ತಿ ಕೊಟ್ಟರು.  ಪುಸ್ತಕಗಳೆಲ್ಲ ಚಂಡಿಪುಂಡಿ ಆಗಿದ್ದವು. 6ನೇ ತರಗತಿ ಮುಗಿಸಿದಮೇಲೆ ಅವರ ಸಹಪಾಠಿ ಹುಡುಗಿಯರೆಲ್ಲ ಮಾತಾಡಿಕೊಂಡು ತಮಗೆ ಶಾಲಾ ಶಿಕ್ಷಣ ಅಷ್ಟು ಸಾಕು ಎಂದು ಸಾಮೂಹಿಕ ಠರಾವು ಪಾಸು ಮಾಡಿಕೊಂಡರು.  ಮನೆಯವರೂ ಅದಕ್ಕೆ ಸಮ್ಮತಿಯ ಮುದ್ರೆ ಒತ್ತಿದರು. ನಮ್ಮ ಮನೆಯ ಹೆಣ್ಣು ಮಕ್ಕಳ ಪೈಕಿ ಅತ್ಯಂತ ಉದ್ದ ಕೂದಲು ಹೊಂದಿದ್ದ ಅವರು ನೀಳವೇಣಿ ಅನ್ನಿಸಿಕೊಂಡಿದ್ದರು.  ನಮ್ಮ ಅಣ್ಣ ಅವರಿಗೆ ಕೇಶವರ್ಧಿನಿ ಎಂಬ ಸುವಾಸಿತ ತೈಲ ತಂದು ಕೊಡುತ್ತಿದ್ದರು. 1966ರ ಸುಮಾರಿಗೆ ಯಾವುದೋ ಸರ್ಕಾರಿ ಸ್ಕೀಮಿನ ಭಾಗವಾಗಿ ನಡೆಯುತ್ತಿದ್ದ ಹೊಲಿಗೆ ತರಬೇತಿಗೆ ಸೇರಿ ಕಟ್ಟಿಂಗ್ ಮತ್ತು ಹೊಲಿಗೆ ಕಲಿತರು. 1967ರಲ್ಲಿ ಅವರಿಗೆ ಸಬ್ಸಿಡಿ ದರದಲ್ಲಿ ಒಂದೊಂದು  ಉಷಾ ಹೊಲಿಗೆ   ಮೆಷೀನು ದೊರಕಿತು. ಅದೇ ವರ್ಷ ಅವರ ಮದುವೆ ಆಯಿತು. ಆ ಮೆಷೀನನ್ನು ಅವರು ಜೊತೆಗೆ ಕೊಂಡೊಯ್ಯುವುದೆಂದಾಗಿತ್ತು.  ಆದರೆ ಗಂಡನ ಮನೆಯವರು ಬೇರೆ ಮಷೀನು ಖರೀದಿಸುವುದಾಗಿ ನಿರ್ಧರಿಸಿದ್ದರಿಂದ ಅದು ನಮ್ಮಲ್ಲೇ ಉಳಿದು ಅದನ್ನು ತಂಗಿ ಬಳಸತೊಡಗಿ ಹೊಲಿಗೆಯಲ್ಲಿ ಪರಿಣಿತಿ ಸಾಧಿಸಿದಳು.  ಅವರು ಸೇರಿದ ಮನೆ ತುಂಬಾ ಜನರಿದ್ದ ಕೂಡುಕುಟುಂಬವಾಗಿದ್ದು ನಮ್ಮ ಮನೆಯೂ ಹಾಗೇ ಇದ್ದುದರಿಂದ ಹೊಂದಿಕೊಳ್ಳುವುದು ಅವರಿಗೇನೂ ಕಷ್ಟ ಆಗಲಿಲ್ಲ. ಮದುವೆಯಾದ ಹೆಣ್ಣು ಮಕ್ಕಳು ನಿತ್ಯವೂ 18  ಮೊಳದ ಕಚ್ಚೆ ಸೀರೆ ಉಡುವುದು ನಮ್ಮ ಸಮುದಾಯದ ಆಗಿನ ಸಂಪ್ರದಾಯವಾಗಿತ್ತು.  ಕೆಲವು ವರ್ಷ ಅವರೂ ಅದನ್ನು ಪಾಲಿಸಿದರು.  ನಂತರ ಈ ಸಂಪ್ರದಾಯಕ್ಕೆ ಸಾರ್ವತ್ರಿಕ ವಿನಾಯಿತಿ ದೊರಕಿತು. ಈಗ ಮದುವೆ ಮುಂಜಿಯಂತಹ ಸಮಾರಂಭಗಳಂದು ಮಾತ್ರ ಹೆಣ್ಣು ಮಕ್ಕಳು ಇಂಥ ಸೀರೆ ಉಡುತ್ತಾರೆ. ನಮ್ಮ ತಂದೆಯವರಂತೆ ಹೈನುಗಾರಿಕೆ ಅವರಿಗೂ ಕೂಡಿ ಬರುತ್ತಿದ್ದು ಕೊನೆಯ ವರೆಗೂ ಒಂದಾದರೂ ಕರೆಯುವ ದನ ಅವರ ಮನೆಯ ಹಟ್ಟಿಯಲ್ಲಿ ಇರುತ್ತಿತ್ತಂತೆ. ಅವರು ಮೃದು ಭಾಷಿಯಾಗಿದ್ದು ಗಟ್ಟಿ ದನಿಯಲ್ಲಿ ಮಾತಾಡಿದ್ದನ್ನಾಗಲೀ, ಯಾರನ್ನಾದರೂ ಗದರಿಸಿದ್ದನ್ನಾಗಲೀ ನಾನು ನೋಡಿಲ್ಲ.  ಇತರರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವ ಅಭ್ಯಾಸವೂ ಅವರಿಗಿರಲಿಲ್ಲ.  ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ಇದ್ದರು.   

ಮೂರನೇ ಮತ್ತು ನಾಲ್ಕನೆಯವರಾದ ಇಬ್ಬರು ತಂಗಿಯಂದಿರು ಹೇಮಲತಾ ಮತ್ತು ಮನೋರಮಾ ತಮ್ಮ ತಮ್ಮ ಕುಟುಂಬದೊಂದಿಗೆ ಸಂತೃಪ್ತ ಜೀವನ ನಡೆಸುತ್ತಿರುವವರು.  ಅವರು ಹೆಚ್ಚು ಕಮ್ಮಿ ನನ್ನ ಓರಗೆಯವರೇ ಆದ್ದರಿಂದ ನನ್ನ ಅನುಭವಗಳೇ ಅವರ ಅನುಭವಗಳು. ಹೀಗಾಗಿ ಹೆಚ್ಚು ಹೇಳುವುದೇನೂ ಇಲ್ಲ.

ನಮ್ಮ ಕೂಡು ಕುಟುಂಬದ ಆ ಮನೆ ಈಗ ಶಿಥಿಲಾವಸ್ಥೆ ತಾಳಿದೆ.  ಈಗಲೂ ಊರಿಗೆ ಹೋದಾಗ ಅದರ ಎಲ್ಲ ಕೋಣೆಗಳೊಳಗೂ ಒಮ್ಮೆ ಹೊಕ್ಕು ಹಳೆ ನೆನಪುಗಳನ್ನು ನವೀಕರಣಗೊಳಿಸಿಕೊಳ್ಳುವುದಿದೆ.  ಈ ಚಿತ್ರದಲ್ಲಿ ಕಾಣುತ್ತಿರುವ ಕಿಟಿಕಿಯ ಬುಡ ಆ ಮನೆಯಲ್ಲಿ  ಇರುವಷ್ಟು ಕಾಲ ನಾನು ಊಟಕ್ಕೆ ಕುಳಿತುಕೊಳ್ಳುತ್ತಿದ್ದ ಸ್ಥಳವಾಗಿತ್ತು.

Friday 28 October 2016

ನಾಡಿನಂದ ಈ ದೀಪಾವಳಿ


     ಕುಲವಧು ಚಿತ್ರದ ಯುಗ ಯುಗಾದಿ ಕಳೆದರೂ ರೇಡಿಯೊದಲ್ಲಿ ಕೇಳಿ ಬರದಿದ್ದರೆ ಹೇಗೆ ಯುಗಾದಿ ಆಚರಣೆ ಅಪೂರ್ಣವಾದೀತೋ ಹಾಗೆಯೇ ನಂದಾ ದೀಪ ಚಿತ್ರದ ನಾಡಿನಂದ ಈ ದೀಪಾವಳಿ ಹಾಡು ಬೆಳ ಬೆಳಗ್ಗೆ ಕೇಳಿಸದಿದ್ದರೆ ಅದು ದೀಪಾವಳಿಯೇ ಅಲ್ಲವೇನೋ ಅನ್ನಿಸೀತು.  ದೀಪಗಳ ಹಬ್ಬದೊಡನೆ ಅದರದ್ದು ಅಷ್ಟೊಂದು ಅವಿನಾಭಾವ ಸಂಬಂಧ. ಸೋರಟ್ ಅಶ್ವಥ್ ಅವರು ರಚಿಸಿ ಎಂ. ವೆಂಕಟರಾಜು ಅವರ ಸಂಗೀತ ನಿರ್ದೇಶನದಲ್ಲಿ ಎಸ್. ಜಾನಕಿ ಮತ್ತು ಪಿ. ಲೀಲ ಜೊತೆಗೂಡಿ ಹಾಡಿದ  ಈ ಹಾಡಿನ ಎಲ್ಲ ಅಂಗಗಳು ಉಲ್ಲಾಸವೇ ಮೂರ್ತಿವೆತ್ತಂತೆ ಇರುವಂಥವು.  ಆರ್ಕೆಸ್ಟ್ರೇಶನ್ನಿನ್ನಲ್ಲಿ ಎತ್ತಿದ ಕೈಯಾಗಿದ್ದ  ವೆಂಕಟರಾಜು ಆರಂಭದಲ್ಲಿ ಒಂದು ಆಕರ್ಷಕ prelude ಮತ್ತು 3 ಚರಣಗಳಿಗೆ 3 ಬೇರೆ ಬೇರೆ interlude ಬಳಸಿದ್ದಾರೆ. ಹಿಂದಿಯಲ್ಲಿ ಶಂಕರ್ ಜೈಕಿಶನ್ ಹೀಗೆ ಮಾಡುತ್ತಿದ್ದರು. ಮ್ಯಾಂಡೊಲಿನ್, ವಯಲಿನ್ಸ್, ಕ್ಲಾರಿನೆಟ್ ಮತ್ತು ಕೊಳಲುಗಳ ಸಮ್ಮಿಶ್ರಣದೊಂದಿಗೆ ಇಡೀ ಹಾಡನ್ನು ಎತ್ತಿ ಕೊಟ್ಟಿರುವುದು ಅತ್ಯಾಕರ್ಷಕ ಢೋಲಕ್ ನುಡಿತ.  ಎಡದ ಗುಂಕಿ, ಉರುಳಿಕೆ, ಹಾಡಿನ ಬೋಲ್ ಗಳ ಅನುಸರಿಸುವಿಕೆ, ಅಲ್ಲಲ್ಲಿ break, take off ಗಳ ಅಂದವನ್ನು ಕೇಳಿಯೇ ಅನುಭವಿಸಬೇಕು. 3ನೇ ಚರಣಕ್ಕೆ ಮೊದಲಿನ interludeನಲ್ಲಿ ಕ್ಲಾರಿನೆಟ್ ಕೊಳಲುಗಳ ಜೊತೆಗಿನ ಶಕ್ತಿಶಾಲಿ ಢೋಲಕ್ ನುಡಿತವಂತೂ ಎಂಥವರನ್ನೂ ಕಾಲೆತ್ತಿ ಕುಣಿಯುವಂತೆ ಪ್ರೇರೇಪಿಸೀತು. ಜಾನಕಿ ಮತ್ತು ಪಿ. ಲೀಲ ಇಬ್ಬರೂ ಹಾಡಿನ ಮೂಡಿಗೆ ಸರಿಯಾಗಿ ಉಲ್ಲಾಸ ಉಕ್ಕುವಂತೆ ಹಾಡಿದ್ದಾರೆ. ಅವರಿಬ್ಬರು ಜೊತೆಗೆ ಹಾಡಿದ್ದು ಕಮ್ಮಿ.  ಒಂದು ಈ ಅಜರಾಮರ ಹಾಡಾದರೆ ಇನ್ನೊಂದು ವಾಲ್ಮೀಕಿ ಚಿತ್ರದ ಮನದೇ ಮಹಾ ಬಯಕೆ.

     ಈ ಹಾಡು ಮಾತ್ರವಲ್ಲ, ನಂದಾದೀಪ ಚಿತ್ರವೇ  ದೀಪಾವಳಿಯೊಂದಿಗೆ ಬೆಸೆಯಲು ನನ್ನ ಮಟ್ಟಿಗೆ ಇನ್ನೊಂದು ಕಾರಣವೂ ಇದೆ.  1972ರಲ್ಲಿ ಆಗ ತಾನೇ ನನ್ನ graduation ಮುಗಿದಿತ್ತು.  ಈಗಿನಂತೆ campus selection ಇತ್ಯಾದಿ ಆಗ ಇರಲಿಲ್ಲ. ಹೀಗಾಗಿ ಪತ್ರಿಕೆಗಳಲ್ಲಿ ಬಂದ ಬೇಕಾಗಿದ್ದಾರೆ ಜಾಹೀರಾತುಗಳನ್ನು ನೋಡಿ ಅರ್ಜಿ ಸಲ್ಲಿಸುತ್ತಾ ಇರಬೇಕಾಗುತ್ತಿತ್ತು.  ನಾನೂ ಹಾಗೆಯೇ ಮಾಡುತ್ತಿದ್ದೆ. ಒಮ್ಮೆ ಆಕಾಶವಾಣಿ ಧಾರವಾಡದಿಂದ announcer ಹುದ್ದೆಗೆ ಅರ್ಜಿ ಕರೆದಿದ್ದರು. ಮೊದಲೇ ರೇಡಿಯೋ ಪ್ರಿಯನಾದ ನಾನು ಬಿಟ್ಟೇನೇ? ಅರ್ಜಿ ಗುಜರಾಯಿಸಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣನೂ ಆದೆ. ಆಮೇಲೆ ಧ್ವನಿ ಪರೀಕ್ಷೆ, ಇಂಟರ್ ವ್ಯೂಗಳೂ ನಡೆದವು.  ನನಗಿಂತ ಅರ್ಹನಾದ ಯಾರೋ ಆಯ್ಕೆ ಕೂಡ ಆದರು. ಅದಲ್ಲ ವಿಷಯ.  ಆಗ ದೀಪಾವಳಿ ಸಮಯ. ಧಾರವಾಡದ  ಟಾಕೀಸೊಂದರಲ್ಲಿ  ಈ ವಿಶೇಷ ಸಂದರ್ಭಕ್ಕಾಗಿ ನಂದಾದೀಪ ಚಿತ್ರದ ಹೊಸ ಪ್ರಿಂಟ್ ಬಿಡುಗಡೆ ಆಗಿ  ಪ್ರದರ್ಶಿತವಾಗುತ್ತಿದ್ದದ್ದು ನನಗೆ ನೋಡಲು ಸಿಕ್ಕಿ ಸ್ವರ್ಗಕ್ಕೆ ಮೂರೇ  ಗೇಣು ಅನ್ನಿಸಿತ್ತು.  ನಾನು ಆ ಹುದ್ದೆಗೆ ಆಯ್ಕೆ ಆಗಿದ್ದರೂ ಅಷ್ಟು ಖುಶಿಯಾಗುತ್ತಿತ್ತೋ ಇಲ್ಲವೋ!


ದೀಪಾವಳಿಯ ಆನಂದ ಹೆಚ್ಚಿಸಲು ಸಾಹಿತ್ಯದೊಡನೆ ನಂದಾ ದೀಪದ ಹಾಡು ನಿಮಗಾಗಿ ಇಲ್ಲಿದೆ.



ನಾಡಿನಂದ ಈ ದೀಪಾವಳಿ ಬಂತು
ಸಂತೋಷ ತಾಳಿ ನಮ್ಮೀ ಬಾಳ ಕಾರಿರುಳ
ತಾ ನೀಗೆ ಬಂದ ಶುಭ ವೇಳಾ
ಈ ದಿವ್ಯ ಕಾಂತಿ ಮನದಿ  ಪ್ರಶಾಂತಿ
ಹೊಂದಿ ಸಂಪ್ರೀತಿ
ನಾಡಿನಂದ ಈ ದೀಪಾವಳಿ

ಇಂದೀ ಉಲ್ಲಾಸ ಪ್ರೀತಿ ವಿಕಾಸ
ಜ್ಯೋತಿ ನಿನ್ನಿಂದ ಹಾಸ
ನಮ್ಮೀ ಆಸೆ ಮಕರಂದ
ತಾ ಚಿಮ್ಮಿ ತಂದ ಆನಂದ
ಸಿಂಗಾರ ಸಂಗೀತ
ಹಾಡಿ ಓಲಾಡಿ ಕೂಡೆ

ನಾಡಿನಂದ ಈ ದೀಪಾವಳಿ ಬಂತು
ಸಂತೋಷ ತಾಳಿ ನಮ್ಮೀ ಬಾಳ ಕಾರಿರುಳ
ತಾ ನೀಗೆ ಬಂದ ಶುಭ ವೇಳಾ
ಈ ದಿವ್ಯ ಕಾಂತಿ ಮನದಿ  ಪ್ರಶಾಂತಿ
ಹೊಂದಿ ಸಂಪ್ರೀತಿ
ನಾಡಿನಂದ ಈ ದೀಪಾವಳಿ

ಸಿಡಿವ ಮತಾಪು ಮಿಡಿವಂಥ ಕೇಪು
ಸೇರೇ ಕಣ್ಣಾಸೆ ಸೊಂಪು
ತುಂಬಿ ಬಾನ ಹೂಬಾಣ
ತಾ ಹೊಮ್ಮಿ ತಂದ ಹೊಂಬಣ್ನ
ಹೊಸ ಬಾಳ ಸಂಕೇತ
ಎಂದು ಸಂದೇಶ ತಂತು
ನಾಡಿನಂದ ಈ ದೀಪಾವಳಿ

ಬಾಳ ಬಂಗಾರ ಮನದ ಮಂದಾರ
ಸೇರೇ ಆನಂದ ಸಾರ
ನಂದಾ ದೀಪ ನೆಲೆಯಾಗಿ
ಒಲುಮೆ ಎಂದೂ ಜತೆಯಾಗಿ
ನಂದಾ ದೀಪ ನೆಲೆಯಾಗಿ
ಒಲುಮೆ ಎಂದೂ ಜತೆಯಾಗಿ
ಹಾಯಾದ ಆಮೋದ
ನೀಡೆ ಹಾರೈಸಿ ಬಂದ
ನಾಡಿನಂದ ಈ ದೀಪಾವಳಿ ಬಂತು
ಸಂತೋಷ ತಾಳಿ ನಮ್ಮೀ ಬಾಳ ಕಾರಿರುಳ
ತಾ ನೀಗೆ ಬಂದ ಶುಭ ವೇಳಾ
ಈ ದಿವ್ಯ ಕಾಂತಿ ಮನದಿ  ಪ್ರಶಾಂತಿ
ಹೊಂದಿ ಸಂಪ್ರೀತಿ
ನಾಡಿನಂದ ಈ ದೀಪಾವಳಿ
******************


ಚಿತ್ರ ನೋಡುವ ಇಚ್ಛೆ ಇದ್ದರೆ ಯೂಟ್ಯೂಬಿನಲ್ಲಿ ಲಭ್ಯವಿದೆ.  ಈಗ ಇಂತಹ ಅನೇಕ ಹಳೆಯ ಚಿತ್ರಗಳು  ಉಚಿತ ವೀಕ್ಷಣೆಗೆ ಸುಲಭದಲ್ಲಿ ಸಿಗುವುದು ಅಂತರ್ಜಾಲದ ವರದಾನವೇ ಸರಿ.

Saturday 22 October 2016

ಬೆರೆತ ಜೀವದ ಸವಿ ಹಾಡು


      ಈ ಶೀರ್ಷಿಕೆ ಬೆರೆತ ಜೀವ ಚಿತ್ರದ ಒಂದು ಹಾಡಿನದೇ ಸಾಲು.  ಚಿತ್ರ ಸಂಗೀತದ ಸುವರ್ಣಯುಗವೆಂದು ಅನಿಸಿಕೊಂಡಿರುವ 60ರ ದಶಕದಲ್ಲೂ, ಅದು ಕನ್ನಡ ಇರಲಿ, ಹಿಂದಿ ಇರಲಿ ಅಥವಾ ಬೇರೆ ಭಾಷೆ ಇರಲಿ, ಎಲ್ಲ  ಸಿನಿಮಾಗಳ ಎಲ್ಲ ಹಾಡುಗಳು ಚೆನ್ನಾಗಿಯೇ ಇರುತ್ತಿದ್ದವು ಎಂದೇನಿಲ್ಲ. ಹಿಂದಿಯಲ್ಲಿ ಶಂಕರ್ ಜೈಕಿಶನ್ ಅಥವಾ ಓ. ಪಿ. ನಯ್ಯರ್ ಸಂಗೀತದ ಕೆಲವು ಚಿತ್ರಗಳನ್ನು ಬಿಟ್ಟರೆ ಉಳಿದ ಎಲ್ಲ ಭಾಷೆಗಳ ಚಿತ್ರಗಳಲ್ಲಿ ಒಂದೋ ಎರಡೋ ಹಾಡುಗಳಷ್ಟೇ ಉತ್ತಮ ಅನ್ನಿಸಿಕೊಳ್ಳುತ್ತಿದ್ದವು. ಕನ್ನಡದಲ್ಲಂತೂ ಎಲ್ಲ ಹಾಡುಗಳು ಅತ್ಯುತ್ತಮ ಅನ್ನಿಸಿಕೊಂಡದ್ದು ಕೆಲವೇ ಕೆಲವು ಚಿತ್ರಗಳಲ್ಲಿ. ಬೆರೆತ ಜೀವ ಅವುಗಳ ಪೈಕಿ ಒಂದು. 

     1965ರಲ್ಲಿ ಬಂದ ಬೆರೆತ ಜೀವ ತಮಿಳಿನ ಪಾಲುಂ ಪಳಮುಂ ಚಿತ್ರದ ಕನ್ನಡ ರೂಪ. ಕನ್ನಡ, ತಮಿಳು ಎರಡರಲ್ಲೂ ಬಿ.ಸರೋಜಾದೇವಿ ನಾಯಕಿ. ಅಲ್ಲಿ ಶಿವಾಜಿ ಗಣೇಶನ್ ನಾಯಕನಾದರೆ ಇಲ್ಲಿ ಕಲ್ಯಾಣ್ ಕುಮಾರ್ ಹೀರೊ. ಮುಂದೆ ಇದೇ ಚಿತ್ರ ಹಿಂದಿಯಲ್ಲಿ ಸಾಥಿ ಎಂಬ ಹೆಸರಿನಲ್ಲಿ ತಯಾರಾದಾಗ ಸರೋಜಾದೇವಿಯನ್ನು ಬಹಳಷ್ಟು ಹೋಲುತ್ತಿದ್ದ ವೈಜಯಂತಿಮಾಲಾ ನಾಯಕಿಯಾಗಿದ್ದದ್ದು ಕಾಕತಾಳೀಯವೇ ಇರಬಹುದು. ಅಂದಿನ ದಿನಗಳಲ್ಲಿ ಮಧ್ಯ ವಯಸ್ಸಿನ ಹೀರೊಗಳು ಕಾಲೇಜು ಹುಡುಗರ ಪಾತ್ರ ವಹಿಸುತ್ತಿದ್ದುದು ಸಾಮಾನ್ಯವಾಗಿದ್ದರೂ ಈ ಚಿತ್ರದ ನಾಯಕ ತಲೆಗೂದಲು ಹಣ್ಣಾಗತೊಡಗಿದ್ದ ಮಧ್ಯವಯಸ್ಕನೇ ಆಗಿದ್ದುದು ಒಂದು ವಿಶೇಷ. ವಿಶ್ವನಾಥನ್ ರಾಮಮೂರ್ತಿ ಸಂಗೀತವಿದ್ದ ಪಾಲುಂ ಪಳಮುಂ ಚಿತ್ರದ  ನಾನ್ ಪೇಸ ನಿನೈಪದೆಲ್ಲಾಂ, ಪೋನಾಲ್ ಪೋಗಟ್ಟುಂ ಪೋಡಾ ಮುಂತಾದ ಹಾಡುಗಳು ಬಲು ಜನಪ್ರಿಯವಾಗಿದ್ದು ವಿವಿಧಭಾರತಿಯಲ್ಲಿ ಪ್ರಸಾರವಾಗುತ್ತಿದ್ದ ಮಧುರ್ ಗೀತಂ ಕಾರ್ಯಕ್ರಮದಲ್ಲಿ ದಿನನಿತ್ಯವೆಂಬಂತೆ ಕೇಳಿ ಬರುತ್ತಿದ್ದವು. ಕನ್ನಡ ಅವತರಣಿಕೆಯಲ್ಲಿ  ಈ ಜನಪ್ರಿಯ ಧಾಟಿಗಳನ್ನೇ ಬಳಸುವ ಅವಕಾಶವಿದ್ದರೂ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್  ನನ್ನ ಧಾಟಿಯ ನೀನರಿಯೆ ನನ್ನ ಹಾಡೇ ಬೇರೆ ಎಂದು ಸವಾಲು ಹಾಕಿ   ಬೆರೆತ ಜೀವ ಚಿತ್ರದ ನಿರ್ಮಾಪಕ ನಿರ್ದೇಶಕರೂ ಆಗಿದ್ದ ಕು.ರ.ಸೀತಾರಾಮ ಶಾಸ್ತ್ರಿ ಅವರು ಬರೆದ ಅರ್ಥಪೂರ್ಣ ಪ್ರಾಸಬದ್ಧ ಹಾಡುಗಳನ್ನು ಬೇರೆಯೇ ಧಾಟಿಯಲ್ಲಿ ಸಂಯೋಜಿಸಿ ಗೆದ್ದಿದ್ದರು. (ಕೆಲವು ವರ್ಷಗಳ ನಂತರ ಭಲೇ ಭಾಸ್ಕರ್ ಎಂಬ ಚಿತ್ರದ ನನ್ನೆದೆಯ ಹಾಡೆಲ್ಲ ನೀನಾಗಬೇಕು ಎಂಬ ಹಾಡಿಗೆ ಸತ್ಯಂ ಅವರು ನಾನ್ ಪೇಸ ನಿನೈಪದೆಲ್ಲಾಂ ಧಾಟಿಯನ್ನು ಬಳಸಿಕೊಂಡರು). ಬೆರೆತ ಜೀವದ ಹಾಡುಗಳಿಗೆ ಧ್ವನಿಯಾಗಿದ್ದವರು ಆಗ ಕನ್ನಡದಲ್ಲಿ ಏಕವೇವಾದ್ವಿತೀಯರಾಗಿದ್ದ ಪಿ.ಬಿ.ಶ್ರೀನಿವಾಸ್ ಮತ್ತು ಸರೋಜಾದೇವಿ ಅಭಿನಯದ ಚಿತ್ರಗಳಲ್ಲಿ ಹೆಚ್ಚಾಗಿ ಹಾಡುತ್ತಿದ್ದ ಪಿ.ಸುಶೀಲ. ಆ ಕಾಲದಲ್ಲಿ ರೇಡಿಯೋ ನಿಲಯಗಳಿಂದ ಅದರಲ್ಲೂ ನಮ್ಮ ಮನೆಯ ನ್ಯಾಶನಲ್ ಎಕ್ಕೊ ರೇಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿದ್ದ ಆಕಾಶವಾಣಿ ಭದ್ರಾವತಿ  ನಿಲಯದದಿಂದ ಪದೇ ಪದೇ ಬಿತ್ತರವಾಗುತ್ತಿದ್ದ  ಬೆರೆತ ಜೀವದ ಸವಿ ಹಾಡುಗಳು ಈಗ ನಿಮಗಾಗಿ ಇಲ್ಲಿವೆ.

ಏನು ಬೇಕು ಏನು ಬೇಕು ಎಂದೆನ್ನ ಕೆಣಕಿ
     ಇದು ಆದರ್ಶ ದಂಪತಿಗಳ ಹಾಡು.  ಹೆಚ್ಚಿನ ದಾಂಪತ್ಯಗಳಲ್ಲಿ ಪತಿಯು ಪತ್ನಿಯ ಬೇಕು ಬೇಡಗಳನ್ನು ಗಮನಿಸದೆ ತನ್ನದೇ ಸಾಮ್ರಾಜ್ಯದಲ್ಲಿ ಮುಳುಗಿರುತ್ತಾನೆಂಬ ಆರೋಪ ಸಾಮಾನ್ಯವಾಗಿದ್ದರೂ ಇಲ್ಲಿ ಪತ್ನಿಯು ಏನು ಬೇಕು ಎಂದು ಪದೇ ಪದೇ ಏಕೆ ಕೇಳುತ್ತಿರುವೆ ಎಂದು ಪತಿಯನ್ನು  ಪ್ರಶ್ನಿಸುತ್ತಾಳೆ.  ಅದಕ್ಕೆ ಪತಿಯು ಜೀವ ಜೀವಗಳು ಬೆರೆಯುವ ಮುನ್ನ ಆಕೆಯ ಬಯಕೆ ಹರಕೆಗಳನ್ನು ಅರಿಯುವುದು ತನ್ನ ಕರ್ತವ್ಯ ಅನ್ನುತ್ತಾನೆ.  ಕಥೆಯಲ್ಲಿ ಪತಿಯು ದೃಷ್ಟಿಯನ್ನು ಕಳೆದುಕೊಳ್ಳಲಿರುವ ಬಗ್ಗೆ ಮುನ್ಸೂಚನೆಯೂ ಒಂದು ಸಾಲಿನಲ್ಲಿದೆ. ಎರಡನೇ ಚರಣ ಆಗಿ ಹಾಡು ಇನ್ನೇನು ಮುಗಿಯಿತು ಅನ್ನಿಸಿದರೂ ಮತ್ತೂ ಮುಂದುವರಿದು ಕ್ಲೈಮ್ಯಾಕ್ಸ್  ತಲುಪುವುದು ಇದರ ವಿಶೇಷ. ಹಾಡಿನ ನಡೆಯು ಮನ ಮೆಚ್ಚಿದ ಮಡದಿತುಟಿಯ ಮೇಲೆ ತುಂಟ ಕಿರುನಗೆಯನ್ನು ಸ್ವಲ್ಪ ಮಟ್ಟಿಗೆ ಹೋಲುತ್ತದೆ.



ಬಂದದ್ದೆಲ್ಲ ಬರಲಿ
     ಬಂದದ್ದೆಲ್ಲ ಬರಲಿ ಗೋವಿಂದನ ದಯೆಯಿರಲಿ ಎಂಬ ಗಾದೆ ಮಾತೇ ಇಲ್ಲಿ ಹಾಡಿನ ಪಲ್ಲವಿಯಾಗಿದೆ.  ಬಯಸಿದ್ದನ್ನು ಗಳಿಸುವ ಛಲವಿರಬೇಕು.  ಆದರೆ ಅದು ಅಳಿದರೆ ಹಲುಬದ ಸ್ಥಿತಪ್ರಜ್ಞತೆಯೂ ಇರಬೇಕು ಎಂಬ ನೀತಿ ಬೋಧೆ ಇದರಲ್ಲಿದೆ.  ಹಾಡಿನ interludeನಲ್ಲಿ ಶಂಕರ್ ಜೈಕಿಶನ್ ಸಂಗೀತದ ಛಾಯೆ ಗೋಚರಿಸುತ್ತದೆ.  ಮೂರು ಚರಣಗಳನ್ನು ಹೊಂದಿದ್ದು ಸುಮಾರು ನಾಲ್ಕು ನಿಮಿಷ ಅವಧಿಯ ಈ ಹಾಡು ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದಿರಬಹುದು.



ನನ್ನ ಧಾಟಿಯ ನೀನರಿಯೆ
     ವಾಸ್ತವವಾಗಿ ಈ ಹಾಡು ಯಾವುದೇ ಹಾಡಿನ ಧಾಟಿಯ ಬಗ್ಗೆ ಅಲ್ಲ.  ನಾಯಕ ಬಾಳಿನಲ್ಲಿ ತಾನು ಅನುಸರಿಸುತ್ತಿರುವ ದಾರಿಯನ್ನು ಬೇರೆ ಧಾಟಿಯ ಹಾಡಿಗೆ ಹೋಲಿಸುತ್ತಾನೆ.  ನಾಯಕನ ತಪ್ಪಿನ ಬಗ್ಗೆ ಅರಿವಿರುವ ನಾಯಕಿ ಆತನದು ಶ್ರುತಿ ತೊರೆದ ಲಯವಿರದ ಹರಕು ಧಾಟಿಯ ಹಾಡು ಎಂದು ಆತನನ್ನು ಎಚ್ಚರಿಸಲು ಪ್ರಯತ್ನಿಸುತ್ತಾಳೆ. ಸಿತಾರ್, ಸಂತೂರ್, ಗ್ರೂಪ್ ವಯಲಿನ್ಸ್, ಗಿಟಾರ್, ತಬ್ಲಾಗಳನ್ನೊಳಗೊಂಡ ಆಕರ್ಷಕ ಆರ್ಕೆಸ್ಟ್ರೇಶನ್ ಈ ಹಾಡಿನಲ್ಲಿದೆ.



ಅಂಕದ ಪರದೆ ಜಾರಿದ ಮೇಲೆ
     ಇದು ಈ ಚಿತ್ರದ ಅತ್ಯಂತ ಜನಪ್ರಿಯ ಗೀತೆ. ಎರಡು ಗಂಧಾರ, ಎರಡು ಮಧ್ಯಮ, ಎರಡು ದೈವತಗಳನ್ನೊಳಗೊಂಡ ಕ್ಲಿಷ್ಟವಾದ  ಕ್ರೋಮ್ಯಾಟಿಕ್ ಸಂಯೋಜನೆ ಇದು.  ಕೇಳಲು ಬಲು ಇಂಪು. ಹಾಡಲು, ನುಡಿಸಲು ಬಲು ಕಠಿಣ.  ವಿಷಾದದ ಹಾಡುಗಳಿಗೆ ಹೇಳಿಸಿದ ಚೇಲೊ, ಮಂದ್ರ ಕೊಳಲು, ಕ್ಲಾರಿನೆಟ್, ಗ್ರೂಪ್ ವಯಲಿನ್ಸ್ ಇತ್ಯಾದಿಗಳ ಸುಂದರ ಸಮ್ಮಿಶ್ರಣ  ತುಂಬಾ ಪರಿಣಾಮಕಾರಿಯಾಗಿ ಬಳಸಲ್ಪಟ್ಟಿದೆ.   ಬೈಜು ಬಾವ್ರಾ ಚಿತ್ರದ ಮೊಹೆ ಭೂಲ್ ಗಯೆ ಸಾವರಿಯಾ ಹಾಡಿನ ಅಪರೋಕ್ಷ ಪ್ರಭಾವ ಇದರ ಮೇಲಿದೆಯೇನೋ ಎಂದು ಕೆಲವೊಮ್ಮೆ ಅನ್ನಿಸುತ್ತದೆ.



ಕಂಡಂಥ ಕನಸೆಲ್ಲ ನನಸಾಗಲಿ
     ಪಿ.ಬಿ.ಶ್ರೀನಿವಾಸ್ ಅವರ ಕಂಠದ ಮಂದ್ರ ಮಾಧುರ್ಯವನ್ನು ಪೂರ್ಣ ಬಳಸಿಕೊಂಡ ಬಲು ಸುಂದರ ಹಾಡಿದು. ಪಿ.ಬಿ.ಎಸ್ ಗಾಯನದ ಹೆಗ್ಗುರುತಾದ ವಿಶಿಷ್ಟ ಮುರ್ಕಿ ಅರ್ಥಾತ್ ಧ್ವನಿಯ ಬಳುಕುಗಳನ್ನೊಳಗೊಂಡ  ಈ ಹಾಡು ಕೇಳಲು ಸಿಗುವುದು ಬಲು ಕಮ್ಮಿ.  ಕೆಲ ವರ್ಷಗಳ ನಂತರ ಬಂದ ನಮ್ಮ ಮಕ್ಕಳು ಚಿತ್ರದ ನಿನ್ನೊಲುಮೆ ನಮಗಿರಲಿ ತಂದೆ ಹಾಡಿನಲ್ಲಿ ಇದರ ಛಾಯೆಯನ್ನು  ಗುರುತಿಸಬಹುದು.  ಕಿತ್ತೂರು ಚೆನ್ನಮ್ಮಅಹೋರಾತ್ರಿ ನಿಲದೋಡಿ ತಾ ಬಂದಿದೆ ಮತ್ತು ಈ ಹಾಡಿನ ಎತ್ತುಗಡೆಯಲ್ಲೂ ಸಾಮ್ಯವಿದೆ.



ಬೀಳಲು ಮಾಗಿದ ಹಣ್ಣಲ್ಲ
     ಇದು ಹಾಡಲ್ಲ.  ಬರೇ ನಾಲ್ಕು ಸಾಲಿನ ಚೌಪದಿ.  ಕಣ್ಣು ಮುಚ್ಚಿ ಆಲಿಸಿ ನೋಡಿ.  ಮೂರುವರೆ ನಿಮಿಷದ ಹಾಡೊಂದು ಉಂಟುಮಾಡಬಲ್ಲ  ಪರಿಣಾಮ ಈ  ಮೂವತ್ತು ಸೆಕೆಂಡುಗಳಲ್ಲಿ ಅಡಕವಾಗಿದೆ.



     ಆಗಿನ ಕಾಲದ ಬಹುತೇಕ ಚಿತ್ರಗಳ ಒಂದಾದರೂ ಹಾಡಿನಲ್ಲಿ ಆ ಚಿತ್ರದ ಹೆಸರು ಅಡಕವಾಗಿದ್ದು ಅದನ್ನು ಟೈಟಲ್ ಹಾಡು ಎಂದು ಕರೆಯಲಾಗುತ್ತಿತ್ತು.  ರಾಜ್ ಕಪೂರ್ ಅವರ ಸಂಗಂನಲ್ಲಂತೂ ಮೂರು ಹಾಡುಗಳಲ್ಲಿ ಚಿತ್ರದ ಹೆಸರಿನ  ಉಲ್ಲೇಖವಿತ್ತು.  ಈ ಚಿತ್ರದ ಎಷ್ಟು ಹಾಡುಗಳಲ್ಲಿ  ಬೆರೆತ ಜೀವದ ಉಲ್ಲೇಖವಿದೆ ಎಂದು ಅವುಗಳನ್ನು ಗಮನವಿಟ್ಟು ಪೂರ್ತಿ ಕೇಳಿದವರಿಗೆ ತಿಳಿಯುವುದರಿಂದ ನಾನು ಹೇಳುವುದಿಲ್ಲ. ಈ ಚಿತ್ರದ ಎರಡು ರೀಲುಗಳ negetiveಗಳೇ ಕಳೆದು ಹೋಗಿವೆಯಂತೆ!  ಉಳಿದ ಭಾಗ  youtubeನಲ್ಲಿ ಲಭ್ಯವಿದ್ದು  ಆಸಕ್ತರು ವೀಕ್ಷಿಸಬಹುದು.

     ಕೆಳಗಿನ Scrollable  ಪದ್ಯಾವಳಿಯಲ್ಲಿ ಎಲ್ಲ ಹಾಡುಗಳ ಸಾಹಿತ್ಯ ಇದೆ.  ಓದುತ್ತಾ ಹಾಡುಗಳನ್ನು ಆಲಿಸಿ, ಆನಂದ ದ್ವಿಗುಣಗೊಳಿಸಿ.



Wednesday 12 October 2016

ಪೆಟ್ರೊಮ್ಯಾಕ್ಸಿನ ರೆಟ್ರೊಸ್ಪೆಕ್ಟ್



ಸಂತಸವ ನೀಡುವುದು ನೆನಪುಗಳ ಮೆಲುಕು 
ಅಡಗಿಹುದು ಮನದೊಳಗೆ ಏನೇನೊ ಸರಕು
ಆಟವನು ನೋಡಿದ್ದು ಕಂಬಳಿಯ ಹೊದ್ದು
ಗ್ಯಾಸ್ ಲೈಟು ಹೊರಡಿಸಿದ ಹಿಸ್ಸೆಂಬ ಸದ್ದು
    

     ವಿದ್ಯುತ್ ದೀಪಗಳು ವಿವಿಧ  ಅವತಾರಗಳನ್ನು ತಾಳುತ್ತಾ ಬುರುಡೆ ಬಲ್ಬಿನಿಂದ ಟ್ಯೂಬ್ ಲೈಟ್, CFL ಮತ್ತು ಈಗಿನ LED ಬಲ್ಬುಗಳವರೆಗೆ ಬಂದು ಮುಟ್ಟಿದ್ದರೂ ಈಗಲೂ ಅಲ್ಲೊಂದು ಇಲ್ಲೊಂದು ಕಡೆ ಪೆಟ್ರೋಮ್ಯಾಕ್ಸ್ ಅಥವಾ ಗ್ಯಾಸ್ ಲೈಟುಗಳು ಬೆಳಕು ಬೀರುತ್ತಿರುವುದು ಅವುಗಳ ಸಮಯದ ಸೀಮೆಯನ್ನು ಮೀರಿದ ಉಪಯುಕ್ತತೆಯನ್ನು ಸಾರಿ ಹೇಳುತ್ತದೆ.  19ನೇ ಶತಮಾನದ ಕೊನೆಯ ಭಾಗದಲ್ಲಿ Max Graetz ಎಂಬಾತನು ಆವಿಷ್ಕರಿಸಿದ ಈ ದೀಪದಲ್ಲಿ ಮೊದಲು ಪ್ಯಾರಫಿನ್ ಮೇಣವನ್ನು ಇಂಧನವಾಗಿ ಉಪಯೋಗಿಸಲಾಗುತ್ತಿತ್ತಂತೆ. ನಂತರ ಈಗಿರುವಂತೆ ಸೀಮೆ ಎಣ್ಣೆಯ ಬಳಕೆ ಆರಂಭವಾಯಿತು.  ಒಂದು ಚಿಕ್ಕ ಕೈ ಪಂಪ್ ಮೂಲಕ ಟ್ಯಾಂಕಿನಲ್ಲಿ ಉಂಟುಮಾಡುವ ಒತ್ತಡ ಮತ್ತು ಆರಂಭದಲ್ಲಿ ಇಂಧನ ಮೇಲೇರುವ ಕೊಳವೆಯ ಬುಡದಲ್ಲಿ ಸ್ಪಿರಿಟನ್ನು  ಉರಿಸಿ ಉಂಟುಮಾಡುವ ಉಷ್ಣತೆ ಹಾಗೂ ಒಮ್ಮೆ ಉರಿಯತೊಡಗಿದ ಮೇಲೆ ತನ್ನದೇ ಉಷ್ಣತೆಯನ್ನು ಉಪಯೋಗಿಸಿ ಇಂಧನವು ಗ್ಯಾಸ್ ರೂಪವನ್ನು ತಾಳಿ ಕಿರು ರಂಧ್ರವುಳ್ಳ ಪಿನ್  ಮೂಲಕ ಮ್ಯಾಂಟಲಿನೊಳಗೆ ಚಿಮ್ಮಿ ಉಜ್ವಲ ಬೆಳಕು ಬೀರುವಂತೆ ಮಾಡುವ  ಇದರ ತಂತ್ರಜ್ಞಾನ ನಿಜಕ್ಕೂ ಅದ್ಭುತ. ವಿವಿಧ ರಾಸಾಯನಿಕಗಳನ್ನು ಲೇಪಿಸಿದ ಸಿಲ್ಕಿನ ಬಲೆಯಂಥ ರಚನೆ ಹೊಂದಿದ ಮ್ಯಾಂಟಲ್ ಪ್ರಥಮ ಉಪಯೋಗದಲ್ಲೇ ಸುಟ್ಟು ಬೂದಿಯಾದರೂ  ಸೂಕ್ತ ಎಚ್ಚರಿಕೆ ವಹಿಸಿದರೆ ಆ ಬೂದಿಯೇ ಸುದೀರ್ಘ ಸಮಯ ಬಾಳಿಕೆ ಬರುವುದು ಇನ್ನೊಂದು ವಿಸ್ಮಯ. ಉಪಯೋಗಿಸಲ್ಪಡುವ ಪೆಟ್ರೋಲಿಯಮ್ ಮೂಲದ ಇಂಧನ ಮತ್ತು ಆವಿಷ್ಕರಿಸಿದವನ  ಹೆಸರಿನ ಪೂರ್ವಾರ್ಧ ಮ್ಯಾಕ್ಸ್ ಸೇರಿ ಪೆಟ್ರೊಮ್ಯಾಕ್ಸ್ ಹಾಗೂ ಇಂಧನವು ಗ್ಯಾಸ್ ರೂಪಕ್ಕೆ ಪರಿವರ್ತನೆಗೊಂಡು ಬೆಳಕನ್ನೀಯುವುದರಿಂದ ಗ್ಯಾಸ್ ಲೈಟ್ - ಎರಡೂ ಇದಕ್ಕೆ ಅನ್ವರ್ಥ ನಾಮಗಳೇ.

     ಗ್ಯಾಸ್ ಲೈಟಿಗೆ ಹೊಸ ಮ್ಯಾಂಟಲ್ ಅಳವಡಿಸಿ ಅದನ್ನು ಉರಿಸುವುದು ಸುಲಭದ ಕೆಲಸವೇನೂ ಅಲ್ಲ. ಆ ವಿದ್ಯೆ ಗೊತ್ತಿದ್ದವನು ಸಮುದಾಯದ   ದೊಡ್ಡ ಹೀರೊ ಎಂದೇ ಅನ್ನಿಸಿಕೊಳ್ಳುತ್ತಿದ್ದ. ಮ್ಯಾಂಟಲ್ ಹೊಂದಿ ಸಿದ್ಧವಾಗಿರುವ ಗ್ಯಾಸ್ ಲೈಟ್ ಉರಿಸುವುದು, ಬೆಳಕು ಮಂಕಾದಾಗ ಪಿನ್ ಹೊಡೆದು ಗಾಳಿ ಪಂಪ್ ಮಾಡುವುದೂ   ಕೆಲವೇ ಮಂದಿಗೆ ಒಲಿಯುತ್ತಿದ್ದ ವಿದ್ಯೆ. ಪಂಪ್ ಮಾಡುವಾಗ ಕೊಂಚ ಎಡವಟ್ಟಾದರೂ ಮ್ಯಾಂಟಲ್ ಬಿದ್ದು ಹೋಗುವ ಅಪಾಯವಿರುತ್ತಿತ್ತು. ಶಾಸ್ತ್ರೀಯವಾಗಿ ಸ್ಪಿರಿಟ್ ಉಪಯೋಗಿಸಿ ಉರಿಸಬೇಕೆಂದಿದ್ದರೂ ಎಣ್ಣೆಯಲ್ಲಿ ಅದ್ದಿದ ಒಂದು ಬತ್ತಿಯ ಸಹಾಯದಿಂದ ಅಥವಾ ಕೇವಲ ಒಂದು ಬೆಂಕಿ ಕಡ್ಡಿಯ ಸಹಾಯದಿಂದಲೇ ಕಾರ್ಯ ಸಾಧಿಸುವ expert ಗಳೂ ಇದ್ದರು. ಇಂಧನ ಟ್ಯಾಂಕಿನಲ್ಲಿ ಪ್ರೆಶರ್ ಗೇಜ್ ಇರುತ್ತಿದ್ದರೂ ಅಂದಾಜಿನಲ್ಲಿ ಗಾಳಿ ಪಂಪ್ ಮಾಡುತ್ತಿದ್ದರೇ ಹೊರತು ಅದನ್ನು ಯಾರೂ ನೋಡುತ್ತಿರಲಿಲ್ಲ.  ಗ್ಯಾಸ್ ಲೈಟ್ ಉರಿಸುವಾಗ ಮಕ್ಕಳೆಲ್ಲ ಸುತ್ತುಗಟ್ಟಿ ನಿಲ್ಲುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಕೆಲವು ಸಲ ಹಿರಿಯರೂ ಮಕ್ಕಳೊಂದಿಗೆ ಸೇರುವುದಿತ್ತು! ಅವುಗಳ ಹೊಳೆಯುವ ಟ್ಯಾಂಕಲ್ಲಿ ಮುಖದ ವಿಕೃತ ಪ್ರತಿಬಿಂಬ ನೋಡುವುದು ಬಹಳ ಮಜಾ ಅನ್ನಿಸುತ್ತಿತ್ತು. ಗ್ಯಾಸ್ ಲೈಟುಗಳ ಗಾಜು ಎರಡು ರೀತಿಯದಾಗಿರುತ್ತಿತ್ತು.  ಒಂದು ಇತರ ಲ್ಯಾಂಪುಗಳಂತೆ single unit ಆಗಿರುವಂಥದ್ದು ಇನ್ನೊಂದು ಅನೇಕ ಪಟ್ಟಿಗಳನ್ನು ಸೇರಿಸಿ ಮಾಡಿರುವಂಥದ್ದು. ಮೊದಲನೆಯದ್ದು ಒಡೆದರೆ ಇಡೀ ಗಾಜು  ಬದಲಾಯಿಸಬೇಕಾಗುತ್ತಿತ್ತು.  ಎರಡನೆಯ ವಿಧದಲ್ಲಾದರೆ ಒಡೆದ ಪಟ್ಟಿಗಳನ್ನು ಮಾತ್ರ ಬದಲಾಯಿಸಿದರೆ ಸಾಕಾಗುತ್ತಿತ್ತು.  ಫಾರ್ಗೊ ಮ್ಯಾಂಟಲ್ಲುಗಳ   ಆಕರ್ಷಕ   ಗಟ್ಟಿಮುಟ್ಟಾದ ತಗಡಿನ ಪೆಟ್ಟಿಗೆ ಬಹೂಪಯೋಗಿಯಾಗಿರುತ್ತಿತ್ತು.

     ಇಂಧನವನ್ನು ಗಟಗಟನೆ ಕುಡಿಯುವ ಗ್ಯಾಸ್ ಲೈಟುಗಳನ್ನು ವಿಶೇಷ ಸಮಾರಂಭ, ಉತ್ಸವ ಹಾಗೂ ಅಂಗಡಿ ಮುಂಗಟ್ಟುಗಳಲ್ಲಷ್ಟೇ  ಹೆಚ್ಚಾಗಿ ಉಪಯೋಗಿಸುತ್ತಿದ್ದುದು. ವಿದ್ಯುದ್ದೀಪಾಲಂಕೃತವಾದ ಭವ್ಯ ರಂಗ ಮಂಟಪಗಳಿಗಿಂತ ಮುಂಚೆ ಯಕ್ಷಗಾನ ಬಯಲಾಟಗಳಿಗೂ ಗ್ಯಾಸ್ ಲೈಟುಗಳೇ ಬೆಳಕಿನ ಆಸರೆಯಾಗಿದ್ದವು. ಉತ್ಸವ, ಜಾತ್ರೆಗಳಲ್ಲಿ ಅವುಗಳನ್ನು ತಲೆಯ ಮೇಲೆ ಹೊತ್ತುಕೊಳ್ಳಲು ಅನುಕೂಲವಾಗುವಂತಹ ವಿಶೇಷ standಗಳಿರುತ್ತಿದ್ದವು. ಅವು ಹೊರಡಿಸುತ್ತಿದ್ದ ಹಿಸ್ ಶಬ್ದವು ಸಮಾರಂಭಗಳಿಗೊಂದು ಶೋಭೆ. ಮದುವೆ ಮುಂಜಿಗಳಂತಹ ಸಮಾರಂಭಗಳಲ್ಲಿ ರಾತ್ರೆ ಸರಿಯಾದ ದಿಂಬು ಹೊದಿಕೆ ಇಲ್ಲದೆ ಮಲಗಿದ್ದಲ್ಲಿ ಕಾರ್ಯಕರ್ತರಾರಾದರೂ ಗ್ಯಾಸ್ ಲೈಟ್ ಕೈಯಲ್ಲಿ ಹಿಡಿದು ದಾಪುಗಾಲು ಹಾಕುತ್ತಾ ಓಡಾಡಿದರೆ ಅದರ ಪ್ರಖರ ಬೆಳಕು ಕಣ್ಣಿಗೆ ಚುಚ್ಚಿ ಅಸಾಧ್ಯ ಸಿಟ್ಟು ಬರುವುದೂ ಇತ್ತು.


      ನಮ್ಮೂರಿಗೆ ಸಮೀಪದ ಉಜಿರೆಯಲ್ಲಿ ಕೆಲ ಸಮಯ ಗ್ಯಾಸ್ ಲೈಟುಗಳನ್ನು ಬಾಡಿಗೆಗೆ ಕೊಡುವ ವ್ಯವಹಾರ ನಡೆಸುತ್ತಿದ್ದ ಜನಾರ್ದನ ಭಟ್ ಎಂಬುವವರಿಗೆ ಲೈಟ್ ಭಟ್ಟರೆಂಬ ಹೆಸರೇ ಕೊನೆವರೆಗೆ ಅಂಟಿಕೊಂಡು ಬಿಟ್ಟಿತ್ತು!  ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಮುಗಿಯುವವರೆಗೆ ಮಾತ್ರ : ಬೊಂಬೆಯಾಟವಯ್ಯ ಲೇಖನ ನೋಡಬಹುದು.

    ನಮ್ಮ ಮನೆಯಲ್ಲೂ ಯಕ್ಷಗಾನ ಬಯಲಾಟಗಳಿಗೆ ಹಾಗು ಧರ್ಮಸ್ಥಳ ಜಾತ್ರೆಗೆ ಹೋಗಲೆಂದೇ ಒಂದು second hand ಗ್ಯಾಸ್ ಲೈಟ್ ಖರೀದಿಸಿದ್ದರು. ಅದರ ಒಳಹೊರಗುಗಳನ್ನೆಲ್ಲ ಬಲ್ಲ ನಮ್ಮ ಅಣ್ಣ ಅದಕ್ಕೆ incharge. ಅದರ ಬೆಳಕಿನಲ್ಲಿ ಮನೆ ಮಂದಿಯೆಲ್ಲ ಸಾಲಾಗಿ ನಡೆಯುವಾಗ ಬೀಳುತ್ತಿದ್ದ ಕಾಲುಗಳ ಉದ್ದುದ್ದ ನೆರಳುಗಳು ನೋಡಲು ಬಹಳ ಚೆನ್ನಾಗಿರುತ್ತಿದ್ದವು. ಧರ್ಮಸ್ಥಳ ತಲುಪಿದೊಡನೆ ಅದನ್ನು ಆರಿಸಿ ಪರಿಚಯದ ಅಂಗಡಿಯೊಂದರಲ್ಲಿ ಇರಿಸುತ್ತಿದ್ದರು.  ವಾಪಸ್ ಹೊರಡುವ ಸಮಯಕ್ಕೆ  ಅದನ್ನು ಮತ್ತೆ ಉರಿಸಿ ನಡೆಯತೊಡಗಿದರೆ ಜಾತ್ರೆಯ ಜನಜಂಗುಳಿಯಲ್ಲಿ ಬೇರೆ ಬೇರೆಯಾಗುವ ಸಾಧ್ಯತೆಯಿದ್ದ ಮನೆ ಮಂದಿಗೆಲ್ಲ  ಇದು ಗೋಚರಿಸಿ ಮತ್ತೆ ಒಟ್ಟು ಸೇರುವುದಕ್ಕೆ ಅನುಕೂಲವಾಗುತ್ತಿತ್ತು ಏಕೆಂದರೆ ಈ ರೀತಿ ಗ್ಯಾಸ್ ಲೈಟ್ ನೊಂದಿಗೆ ಜಾತ್ರೆಗೆ ಬರುವವರು ಬೇರೆ ಯಾರೂ ಇರಲಿಲ್ಲ!

     ನಿಮ್ಮನ್ನು ಹಳೆಯ ಕಾಲಕ್ಕೊಯ್ಯಬಹುದಾದಂಥ ಪೆಟ್ರೊಮ್ಯಾಕ್ಸ್  ಉರಿಸುವ ದೃಶ್ಯವುಳ್ಳ ಕಿರು ವೀಡಿಯೊ ಒಂದನ್ನು ಇಲ್ಲಿ ನೋಡಬಹುದು.



     ಕೆಲ ಸಮಯ ಹಿಂದೆ ಈ ವೀಡಿಯೊವನ್ನು facebook ಗೆ upload ಸುಮಾರು 6000 ಬಾರಿ ವೀಕ್ಷಿಸಲ್ಪಟ್ಟು ಅನೇಕ ಪ್ರತಿಕ್ರಿಯೆಗಳೂ ದಾಖಲಾಗಿದ್ದವು.  ಅವುಗಳಲ್ಲಿ ಕೆಲವು ಇಲ್ಲಿವೆ.






Sunday 2 October 2016

ನವೋಲ್ಲಾಸದ ನವರಾತ್ರಿ


     ಇದು ಈಗಿನ ನವರಾತ್ರಿಯ ನವೋಲ್ಲಾಸ ಅಲ್ಲ.  ನಮ್ಮ ಬಾಲ್ಯದ ದಿನಗಳದ್ದು. ಆಗ ಪರೀಕ್ಷೆಗಳು ಮುಗಿದು ರಜೆ ಆರಂಭವಾಗಿರುತ್ತಿತ್ತು. ಮನಸ್ಸು ಹಕ್ಕಿಯಂತೆ ಹಗುರಾಗಿರುತ್ತಿತ್ತು.  ರಜಾದ ಮಜಾವನ್ನು ಕೊಲ್ಲುವ ಖಳನಾಯಕರಂಥ ಕೆಲವು ಅಧ್ಯಾಪಕರು ಹೋಮ್ ವರ್ಕ್ ಕೊಡುತ್ತಿದ್ದರೂ ಅದನ್ನು ರಜೆಯ ಕೊನೆಯ ದಿನಕ್ಕೆ ಮೀಸಲಿರಿಸಿ ತತ್ಕಾಲಕ್ಕೆ ಮರೆತು ಬಿಡುತ್ತಿದ್ದೆವು.  ಪಿತೃ ಪಕ್ಷದ ಕೊನೆಯ ದಿನದಂದು  ದೇವರ ಪೀಠ, ಪ್ರಭಾವಳಿ ಇತ್ಯಾದಿ ಎಲ್ಲ ಪರಿಕರಗಳನ್ನು ಸ್ವಚ್ಛವಾಗಿ ತೊಳೆಯುವುದರೊಂದಿಗೆ ನವರಾತ್ರಿಯ ಸಂಭ್ರಮ ಆರಂಭ. ಸಂಜೆಯಾಗುತ್ತಲೇ ಹುಡುಗರೆಲ್ಲರೂ ಒಂದೊಂದು ಚಿಕ್ಕ ಬುಟ್ಟಿ ಹಿಡಿದುಕೊಂಡು ದೇವಿಗೆ ಪ್ರಿಯವಾದ ಕೇಪುಳದ ಹೂವುಗಳನ್ನು ತರಲು ಗುಡ್ಡೆಗೆ ಹೊರಡುತ್ತಿದ್ದೆವು. ಒಂಭತ್ತು ದಿನವೂ ಹೂಗಳು ಬೇಕಾಗಿದ್ದುದರಿಂದ ಇಂಥಿಂಥ ದಿನ ಇಥಿಂಥ ಕಡೆ ನಮ್ಮ ದಂಡಯಾತ್ರೆ ಎಂದು ಮೊದಲೇ ನಿರ್ಧರಿಸಿಕೊಂಡಿರುತ್ತಿದ್ದೆವು.  ಇದಕ್ಕಾಗಿ ಎಷ್ಟೋ ಬೇಲಿಗಳನ್ನು ದಾಟುವ, ಅಗಳುಗಳನ್ನು ಹಾರುವ ಸಂದರ್ಭವೂ ಬರುತ್ತಿತ್ತು. ಏನಾದರೂ ಎಲ್ಲ ಬುಟ್ಟಿಗಳು ಹೂಗಳಿಂದ ತುಂಬದೆ ಮನೆಗೆ ಹಿಂತಿರುಗುವ ಪ್ರಶ್ನೆಯೇ ಇರಲಿಲ್ಲ. ನವರಾತ್ರಿ ಅಂದರೆ ಕೇಪುಳ ಹಣ್ಣುಗಳ ಕಾಲವಲ್ಲವಾದ್ದರಿಂದ ಹೂಗಳ ಮೇಲಷ್ಟೇ ಗಮನ ಕೇಂದ್ರೀಕರಿಸಲು ನಮಗೆ ಸಾಧ್ಯವಾಗುತ್ತಿತ್ತು. (ಬೇಸಗೆಯಲ್ಲಿ ಹಣ್ಣು ಬಿಡಲು ಆರಂಭವಾದ ಮೇಲೆ ನಾವೆಂದೂ ನೇರವಾಗಿ ಶಾಲೆಗೆ ಹೋದದ್ದೇ ಇಲ್ಲ. ಗುಡ್ಡವಿಡೀ ಸುತ್ತಾಡಿ ಜೇಬು ತುಂಬಾ ಕೇಪುಳ ಹಣ್ಣು ತುಂಬಿದ ಮೇಲಷ್ಟೇ  ಶಾಲೆಯ ಹಾದಿ ನಮಗೆ ಕಾಣುತ್ತಿದ್ದುದು.)  ಅಷ್ಟೋತ್ತರ ನಾಮಾವಳಿಗೆ ಬೇಕಾದಷ್ಟು ಹೂಗಳನ್ನು ತೆಗೆದಿರಿಸಿಕೊಂಡು ಉಳಿದವುಗಳ ಮಾಲೆ ತಯಾರಿಸುವುದು ಹೆಚ್ಚಾಗಿ ನಮ್ಮ ಹಿರಿಯಣ್ಣ ಹಾಗೂ ಅಕ್ಕನ ಕೆಲಸವಾಗಿರುತ್ತಿತ್ತು.  ಒಂಭತ್ತು ದಿನಗಳಿಗೂ ಬೇಕಾಗುವಷ್ಟು ಬಾಳೆ ನಾರನ್ನು ಇದಕ್ಕಾಗಿ ಮೊದಲೇ  ಸಿದ್ಧಪಡಿಸಿಟ್ಟುಕೊಳ್ಳಲಾಗುತ್ತಿತ್ತು.  ಪುಷ್ಕಳವಾಗಿ ಅರಳುತ್ತಿದ್ದ ಗೋರಟೆ ಹಾಗೂ ನಾವು ಮೈಸೂರು  ಗೋರಟೆ ಎಂದು ಕರೆಯುತ್ತಿದ್ದ ಹಳದಿ ಹೂಗಳ ಮಾಲೆಗಳನ್ನು ತಯಾರಿಸಲೂ ಇದು ಬೇಕಾಗುತ್ತಿತ್ತು. ಇವುಗಳನ್ನು ಆಯಾ ದಿನ ಬೆಳಗ್ಗೆಯೇ ಕಟ್ಟಲಾಗುತ್ತಿತ್ತು.


     ನವರಾತ್ರಿಯ ಮೊದಲ ದಿನ ಬೆಳಗ್ಗೆ ತೆನೆ ತರುವ ಸಂಭ್ರಮ. ವಾಡಿಕೆಯ ಕೆಲಸದಾಳೊಬ್ಬ ಭತ್ತದ ತೆನೆ, ಮಾವು, ಹಲಸು ಮತ್ತು ಬಿದಿರಿನ ಎಲೆ ಹಾಗೂ ದಡ್ಡಾಲ್ ಎಂಬ ಮರದ ನಾರುಗಳನ್ನು ತಂದು ಮೊದಲೇ ಒಂದು ಗೆರಸೆಯೊಳಗೆ ಸಿದ್ಧವಾಗಿಟ್ಟಿರುತ್ತಿದ್ದ ಒಂದು ಸೇರು ಅಕ್ಕಿ, ಮುಳ್ಳು ಸೌತೆ, ಸುಲಿಯದ ತೆಂಗಿನಕಾಯಿಗಳ ಜೊತೆ ಇಟ್ಟು "ಪೊಲಿಯೇ ಪೊಲಿ ಪೊಲಿ ಪೊಲಿ ಪೊಲಿಚ್ಚೆ" ಅನ್ನುತ್ತಾ  ತುಳಸಿ ಕಟ್ಟೆಯ ಎದುರು ಇರಿಸುತ್ತಿದ್ದ.  ಆತನನ್ನು ಸೂಕ್ತ ಗೌರವದೊಂದಿಗೆ ಸನ್ಮಾನಿಸಲಾಗುತ್ತಿತ್ತು. ಮಧ್ಯಾಹ್ನ ತಂದೆಯವರು ಶಂಖ ಜಾಗಟೆಗಳ ಗೌರವದೊಂದಿಗೆ ತುಲಸಿ ಕಟ್ಟೆ ಎದುರಿಂದ ಆ ಗೆರಸೆಯನ್ನು ಒಳಗೆ ತಂದು ದೇವರ ಪಕ್ಕ ಇರಿಸಿ ಆ ಎಲ್ಲ ಸುವಸ್ತುಗಳಿಗೆ ಪೂಜೆ ಸಲ್ಲಿಸಿ ನಂತರ ನವರಾತ್ರಿ ಪೂಜೆ ಆರಂಭಿಸುತ್ತಿದ್ದರು. ಪೂಜೆಯ ಕೊನೆ ಹಂತದಲ್ಲಿ ಸಿಗುವ ಪಂಚಾಮೃತಕ್ಕಾಗಿ ನಾವೆಲ್ಲ ಕಾದಿರುತ್ತಿದ್ದೆವು. ಪೂಜೆ ಮುಗಿದು  ಮಧ್ಯಾಹ್ನ ಭೋಜನ ತೀರಿದ ಬಳಿಕ  ಮಾವಿನೆಲೆ ಮತ್ತು ಹಲಸಿನೆಲೆಗಳನ್ನು ವಿಶೇಷ ರೀತಿಯಲ್ಲಿ ಮಡಚಿ ಅದರೊಳಗೆ  ಬಿದಿರಿನ ಎಲೆ ಮತ್ತು ಭತ್ತದ ತೆನೆ ಇರಿಸಿ ನಾರಿನಿಂದ ಬಿಗಿದು ವಿವಿಧ ಕಡೆ ಕಟ್ಟಲು ಸಿದ್ಧಗೊಳಿಸುವ ಕೆಲಸ.  ದೇವರ ಕೋಣೆ, ಕುಡಿಯುವ ನೀರಿನ ಪಾತ್ರೆ, ಮಜ್ಜಿಗೆ ಕಡೆಯುವ ಕಂಬ, ಮನೆಯ ಹೆಬ್ಬಾಗಿಲು, ಪಡಸಾಲೆಯ ಕಂಬ, ಮಗುವಿನ ತೊಟ್ಟಿಲು, ಬಾವಿ, ಹಟ್ಟಿ, ಅಡಕೆ ಮರ, ತೆಂಗಿನ ಮರ ಇತ್ಯಾದಿ ಕಡೆ ತೆನೆ ಕಟ್ಟಲಾಗುತ್ತಿತ್ತು.  ಕೊನೆಗೆ ಒಂದಷ್ಟು ತೆನೆಗಳನ್ನು ಒಂದು ಅಡಿಕೆ ಹಾಳೆಯೊಳಗಿರಿಸಿ ಅಕ್ಕಿ ಮುಡಿಯಂತೆ ಕಟ್ಟಿ ಅದನ್ನೊಯ್ದು ಅಡಿಗೆ ಮನೆಯ ಅಟ್ಟದೊಳಗೆ ಧೊಪ್ಪೆಂದು ಸದ್ದು ಬರುವಂತೆ ಒಗೆಯಲಾಗುತ್ತಿತ್ತು.  ಹೆಚ್ಚಾಗಿ ಈ ಕೆಲಸ ನನ್ನ ಪಾಲಿನದಾಗಿರುತ್ತಿತ್ತು.  ವರ್ಷವಿಡೀ ಇದೇ ರೀತಿ ಅಕ್ಕಿ ಮುಡಿಗಳು ಅಟ್ಟಕ್ಕೆ ಬಂದು ಬೀಳಲಿ ಎಂಬ ಆಶಯವಂತೆ ಈ ಆಚರಣೆಯದು.   ದಿನವೂ ಬೆಳಗ್ಗೆ ಅಣ್ಣ ಸಪ್ತಶತಿ ಪಾರಾಯಣ ಮಾಡುತ್ತಿದ್ದರೆ ರಾತ್ರೆ ತಂದೆಯವರು ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡುತ್ತಿದ್ದರು. ಆ ಪುಸ್ತಕದಲ್ಲಿ ದೇವಿಯು ಚಂಡ ಮುಂಡರನ್ನು ವಧಿಸುವ ಸುಂದರವಾದ ವರ್ಣ ಚಿತ್ರವೊಂದಿತ್ತು.  ಅದನ್ನು ತೋರಿಸುವಂತೆ ನಾವು ತಂದೆಯವರನ್ನು ಕೇಳುವುದಿತ್ತು.  ಪಾರಾಯಣದ ಒಂದು ಹಂತದಲ್ಲಿ  ಚಿಟಿಕೆಯಷ್ಟು ಮಂತ್ರಿಸಿದ ಭಸ್ಮವನ್ನು ನಮ್ಮ ಬಾಯಿಗೆ ಹಾಕುತ್ತಿದ್ದರು. ಸಪ್ತಶತಿಯಲ್ಲಿ ಪದೇ ಪದೇ ಬರುವ ನಮಸ್ತಸ್ಯೈ  ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಹಾಗೂ ಲಕ್ಷ್ಮೀನಾರಾಯಣ ಹೃದಯದ ಫಟು ಕುರು ಕುರು ಸ್ವಾಹಾ ಎಂಬ ಸಾಲುಗಳು ನಮಗೆಲ್ಲರಿಗೂ ಕಂಠಪಾಠವಾಗಿದ್ದವು!


     ಆಗಿನ್ನೂ ನಮ್ಮ ಹಳ್ಳಿಗೆ ವಿದ್ಯುತ್ತು ಬಂದಿರಲಿಲ್ಲ.  ಆದರೂ 50 ವೋಲ್ಟಿನ ಬ್ಯಾಟರಿಯಿಂದ ನಡೆಯುವ ರೇಡಿಯೊ ಒಂದು ನಮ್ಮಲ್ಲಿತ್ತು.  ನಮ್ಮ ಒಬ್ಬ ಅಣ್ಣನಿಗೆ ಕಸದಿಂದ ರಸ ತಯಾರಿಸುವ ವಿದ್ಯೆ ಚೆನ್ನಾಗಿ ಗೊತ್ತಿತ್ತು. ರೇಡಿಯೋಗೆ ಉಪಯೋಗಿಸಲಾಗದಂಥ ಹಳೆಯ ನಿರುಪಯೋಗಿ ಬ್ಯಾಟರಿಯೊಂದನ್ನು ಒಡೆದು ಅದರೊಳಗೆ ಟಾರ್ಚಿನಲ್ಲಿ ಉಪಯೋಗಿಸುವಂಥ ಚಿಕ್ಕ ಚಿಕ್ಕ ಸೆಲ್ಲುಗಳಂಥದೇ ರಚನೆ  ಇರುವುದನ್ನು ಅವರು ಕಂಡುಕೊಂಡಿದ್ದರು.  ಆ ಸೆಲ್ಲುಗಳನ್ನು ಎರಡು ವಯರುಗಳ ಮೂಲಕ  ಬಲ್ಬಿಗೆ ಜೋಡಿಸಿದಾಗ  ಅದನ್ನು ಉರಿಸುವಷ್ಟು ವಿದ್ಯುತ್ತು ಅವುಗಳಲ್ಲಿ ಉಳಿದಿರುವುದೂ ಅವರಿಗೆ ಗೊತ್ತಾಗಿತ್ತು. ಇದನ್ನು ದೇವರ ಮಂಟಪದ ಅಲಂಕಾರಕ್ಕೆ ಯಾಕೆ ಉಪಯೋಗಿಸಬಾರದು ಎಂಬ ಯೋಚನೆ ಅವರಿಗೆ ಬಂತು.  ಏನನ್ನಾದರೂ ಯೋಚಿಸಿದರೆ ಅದನ್ನು ಮಾಡಿಯೇ ತೀರುವುದು ಅವರ ಜಾಯಮಾನ. ಅಷ್ಟಿಷ್ಟು ಬಡಗಿ ಕೆಲಸವೂ ಅವರಿಗೆ ಬರುತ್ತಿತ್ತು.   ಮರದ ತುಂಡೊಂದನ್ನು ಕೆತ್ತಿ ಒಂದು ಬ್ಯಾಟರಿ ಬಾಕ್ಸು  ಮತ್ತು ಗೆರಟೆ ಹಾಗೂ ಒಂದು ಹಳೆಯ ಸ್ಪ್ರಿಂಗ್ ಉಪಯೋಗಿಸಿ ಒಂದು ಟಾಗಲ್ ಸ್ವಿಚ್ಚು ತಯಾರಿಸಿ ನವರಾತ್ರಿ ಪೂಜೆಯ ಹೊತ್ತಲ್ಲಿ ದೇವರ ಮೇಲೆ ಬಲ್ಬಿನ ಬೆಳಕು ಬೀಳುವಂತೆ ಮಾಡಿಯೇ  ಬಿಟ್ಟಿದ್ದರು.

     ನವರಾತ್ರಿಯಿಂದ ಆರಂಭವಾಗುವ ಆಶ್ವೀಜ ಮಾಸದ ಭಾನುವಾರಗಳಂದು ಬೆಳಗ್ಗೆ ತಣ್ಣೀರಲ್ಲಿ ಸ್ನಾನ ಮಾಡುವ ಸಂಪ್ರದಾಯ ನಮ್ಮಲ್ಲಿತ್ತು.  ಹಿರಿಯರೆಲ್ಲರೂ ಬಾವಿಯಿಂದ ನೀರೆಳೆದು ಸ್ನಾನ ಮುಗಿಸಿದರೂ ನಾವು  ತೋಟದ ಪಕ್ಕದಲ್ಲಿ ಹರಿಯುವ ಮೃತ್ಯುಂಜಯಾ ನದಿಗೆ ಹೋಗುತ್ತಿದ್ದೆವು.  ಅಷ್ಟರಲ್ಲಿ ಮಳೆ ಕಡಿಮೆಯಾಗಿ ನದಿ ನೀರು ತಿಳಿಯಾಗಿರುತ್ತಿತ್ತು. ಆ ಚುಮು ಚುಮು ಚಳಿಯಲ್ಲಿ ಮೊದಲ ಮುಳುಗು ಹಾಕುವುದು ಕಠಿಣವೆನಿಸಿದರೂ ನಂತರ ಮೇಲೆ ಬರುವ ಮನಸ್ಸೇ ಬರುತ್ತಿರಲಿಲ್ಲ. ಸ್ನಾನ ಮುಗಿಸಿದ ಮೇಲೆ ಕೆಂಪು ಕಲ್ಲೊಂದನ್ನು ಅರೆದು ಗಂಧದಂತೆ ಹಣೆಗೆ ಹಚ್ಚಿಕೊಳ್ಳುತ್ತಿದ್ದೆವು.  ಆ ದಿನ ಅಕ್ಕಿಯ ತಿಂಡಿ ತಿನ್ನಬಾರದೆಂಬ ನಿಯಮವಿದ್ದುದರಿಂದ ಬೆಳಗ್ಗಿನ ಫಲಾಹಾರಕ್ಕೆ ಅರಳಿನ ಮೊಗ್ಗುಗಳ ಉಸ್ಲಿ. ಭತ್ತ ಹುರಿದು ಅರಳು ತಯಾರಿಸುವಾಗ ಪೂರ್ತಿ ಸಿಡಿಯದೆ ಉಳಿದ ಚೂರುಗಳೇ ಈ ಅರಳಿನ ಮೊಗ್ಗುಗಳು.  ಅಕ್ಕಿಯದೇ ಇನ್ನೊಂದು ರೂಪವಾದರೂ ಉರಿಯಲ್ಲಿ ಸುಟ್ಟು ಶುದ್ಧವಾದದ್ದು ಎಂಬ ನಂಬಿಕೆ.  ಮಧ್ಯಾಹ್ನದ ನೈವೇದ್ಯಕ್ಕೆ ದಿನವೂ ಏನಾದರೂ ಸಿಹಿ ಇರುತ್ತಿತ್ತು.  ಮೊದಲ ದಿನ ಹೆಚ್ಚಾಗಿ ಹಾಲುಬಾಯಿ, ನಂತರದ ದಿನಗಳಲ್ಲಿ ಮುಳ್ಳು ಸೌತೆಯ ಕಡುಬು, ಅದರದ್ದೇ ಗುಳಿ ಅಪ್ಪ, ಅಂಬೋಡೆ ಪಾಯಸ,  ಅಕ್ಕಿಯ ಮೋದಕ, ಅತಿರಸ, ಎರಿಯಪ್ಪ, ನೀರುದೋಸೆ ಕಾಯಿ ಹೂರಣ, ಒತ್ತುಶ್ಯಾವಿಗೆ ರಸಾಯನ, ಗೋಧಿಯ ಉಂಡೆ, ಕೇಸರಿ ಭಾತ್, ಪಂಚಕಜ್ಜಾಯದ ಉಂಡೆ  ಇತ್ಯಾದಿ.


     ಈ ಮೊದಲೇ ಹೇಳಿದಂತೆ ದಿನವೂ ಕೇಪುಳದ ಹೂವುಗಳನ್ನು ತರಲು ವಿವಿಧ ಜಾಗಗಳಿಗೆ ಹೋಗುವಾಗ ಕೆಲವೊಮ್ಮೆ ಕಾವಟೆ ಎಂಬ ಮೃದುವಾದ ಮರದ ದೊಡ್ಡ ದೊಡ್ಡ ಮುಳ್ಳುಗಳನ್ನು ಎಬ್ಬಿಸಿ ತಂದು, ಅದರ ತಳವನ್ನು ಕಲ್ಲಿಗೆ ಉಜ್ಜಿ ನಯವಾಗಿಸಿ, ಕೊಡೆ ಕಡ್ಡಿಯಿಂದ ಮಾಡಿದ ಚಾಣದಿಂದ ಕೆತ್ತಿ ನಮ್ಮ ಹೆಸರಿನ ಮುದ್ರೆ ತಯಾರಿಸುವುದೂ ಇತ್ತು.  ಅದಕ್ಕೆ ಸಿಗರೇಟು ಡಬ್ಬಿಯ ಮುಚ್ಚಳದಲ್ಲಿ ಚಿಂದಿ ಬಟ್ಟೆಯೊಂದನ್ನಿರಿಸಿ ಹಳೆ ಬ್ಯಾಟರಿಯೊಳಗಿನ ಮಸಿಯನ್ನು ನೀರಲ್ಲಿ ಕಲಸಿ ಹಚ್ಚಿದ ಇಂಕ್ ಪ್ಯಾಡ್.

     ಧರ್ಮಸ್ಥಳದಲ್ಲಿ ಮಹಾನವಮಿಯಯಂದು ಕುಮಾರಿಕಾ ಸುವಾಸಿನಿಯರಿಗೆ ಸೀರೆ ವಿತರಿಸುವ ಸಂಪ್ರದಾಯವಿದೆ.  ನಮ್ಮ ಮನೆಯ ಹೆಣ್ಣುಮಕ್ಕಳು ಯಾವತ್ತೂ ಈ ಅವಕಾಶ ತಪ್ಪಿಸಿಕೊಳ್ಳುತ್ತಿರಲಿಲ್ಲ.  ಅವರಿಗೆ ಜೊತೆಯಾಗಿ ಹೋಗುವ ಅಣ್ಣಂದಿರೊಡನೆ ನಾನೂ ಸೇರಿಕೊಳ್ಳುವುದಿತ್ತು. ಸುಮಾರು 7 ಕಿಲೋಮೀಟರ್ ದೂರವನ್ನು ನಡೆದೇ ಕ್ರಮಿಸುವುದಾಗಿತ್ತು. ದಾರಿಯುದ್ದಕ್ಕೂ  ಗುಡ್ದ ಹಾಗೂ ಗದ್ದೆಗಳ ಸರಣಿ.  ಗದ್ದೆಯ ಅಗಲ ಕಿರಿದಾದ  ಬದುಗಳ ಮೇಲೆ ನಡೆಯುವಾಗ ಆಚೀಚೆ ನೋಡುತ್ತಾ ಪ್ರಕೃತಿ ಸೌಂದರ್ಯ ಸವಿಯಲು ಹೊರಟರೆ ಕೆಸರಿನೊಳಗೆ ಬೀಳುವುದೇ ಸೈ.  ಒಂದು ಕಡೆಯಂತೂ ಕುತ್ತಿಗೆವರೆಗೆ ಹೂತು ಹೋಗುವಷ್ಟು ಕೆಸರು. ಒಂದಿಬ್ಬರು ಅಜಾಕರೂಕತೆಯಿಂದ ಹಾಗೆ ಹೂತು ಹೋಗಿ ಅವರನ್ನು ಮೇಲೆಳೆಯಲು ಹರಸಾಹಸ ಪಡಬೇಕಾಗಿ ಬಂದಿತ್ತಂತೆ.   ಧರ್ಮಸ್ಥಳ ತಲುಪಿದೊಡನೆ ಹೆಣ್ಣು ಮಕ್ಕಳು ದೇವಸ್ಥಾನದ ಒಳಗಡೆ ಹೋದರೆ ನಾವು ಅಂಗಡಿ ಬೀದಿಗಳಲ್ಲಿ ಒಂದಷ್ಟು ಹೊತ್ತು ಠಳಾಯಿಸಿ ಕಾಲು ಸೋಲತೊಡಗಿದೊಡನೆ  ವಸಂತ ಮಹಲಿನಲ್ಲಿ ಬೆಳಗಿನ ವರೆಗೂ ನಡೆಯುವ ನಾಟಕಕ್ಕೋ ಸಂಗೀತ ಕಾರ್ಯಕ್ರಮಕ್ಕೋ ಪ್ರೇಕ್ಷಕರಾಗುತ್ತಿದ್ದೆವು. ಬೆಳಗಾದೊಡನೆ ಹೆಣ್ಣು ಮಕ್ಕಳು ಸೀರೆ ಸಿಕ್ಕಿದ ಖುಶಿಯೊಂದಿಗೆ, ನಾವು ದಣಿದ ಕಾಲುಗಳೊಂದಿಗೆ ಅವೇ ಗುಡ್ಡ ಗದ್ದೆಗಳನ್ನು ದಾಟಿ ಮನೆ ಸೇರುತ್ತಿದ್ದೆವು.  ನಿದ್ದೆಗಣ್ಣಾಗಿರುತ್ತಿದ್ದುದರಿಂದ ಗದ್ದೆ ಬದುಗಳಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತಿತ್ತು.
 

     ನಮ್ಮ ಹಳ್ಳಿ ಕಡೆ ನವರಾತ್ರಿ ವೇಷಗಳು ಬರುತ್ತಿದ್ದುದು ಕಮ್ಮಿ.  ಕೆಲವೊಮ್ಮೆ ಮುಖಕ್ಕೆ ಮಸಿ ಮೆತ್ತಿ ಕೊಳಲು ನುಡಿಸುವ ಆದಿವಾಸಿ, ಸಿದ್ ಔರ್ ಸಿದ್ ಅನ್ನುತ್ತಾ ಬರುವ ಅನಾರ್ಕಲಿ, ಕರಡಿ ಅಥವಾ ಸಿಂಹದ ವೇಷ ಇತ್ಯಾದಿ ಬರುತ್ತಿದ್ದವು.  ಹುಲಿ ವೇಷವಂತೂ ಇಲ್ಲವೆನ್ನುವಷ್ಟು ಕಮ್ಮಿ.  ಇವುಗಳನ್ನು ನೋಡಿ ನಮಗೂ ಉಮೇದು ಬಂದು ಅಡಿಕೆ ಹಾಳೆಯಿಂದ ಕರಡಿ ಮುಖ ತಯಾರಿಸಿ ಅದಕ್ಕೆ ಕಪ್ಪು ಬಳಿದು ಬಾಯಲ್ಲಿ ಕೆಂಪು ರಬ್ಬರ್ ಹಾಳೆಯ ನಾಲಗೆ ಸಿಕ್ಕಿಸಿ ಅಂಗಳದ ತೊಂಡೆ ಚಪ್ಪರಕ್ಕೆ ತೂಗು ಹಾಕಿ ಸಂಭ್ರಮಿಸುವುದಿತ್ತು.

     ಈ ರೀತಿ ನವರಾತ್ರಿಯ ನವೋಲ್ಲಾಸ ಮುಗಿದ ಮೇಲೆ ಉಳಿಸಿಟ್ಟಿದ್ದ ರಜೆಯ ಹೋಮ್ ವರ್ಕ್ ಇತ್ಯಾದಿ ಮುಗಿಸಿ ಮುಂದೆ ಬರುವ ದೀಪಾವಳಿ ಸಂಭ್ರಮದ ಸವಿಗನಸು ಕಾಣುತ್ತಾ ಶಾಲೆಯ ಕಡೆ ಭಾರವಾದ ಹೆಜ್ಜೆ ಹಾಕುತ್ತಿದ್ದೆವು.

Saturday 3 September 2016

ಸಸೇಮಿರಾ

 

ದೀಪ ದೀಪಾಂತರಕ್ಕೆ ಹೋಗಿ
ಎಣ್ಣೆ ಸಮುದ್ರಕ್ಕೆ ಹೋಗಿ
ಬತ್ತಿ ಪರ್ವತಕ್ಕೆ ಹೋಗಿ
ಅಗತ್ಯವಾದ್ರೆ ಇವತ್ತು ಬನ್ನಿ
ಇಲ್ಲವಾದರೆ ನಾಳೆ ಬನ್ನಿ
ರೈಟೋ ರೈಟು ಫೂ...........
(ನೋಡಿ ಎಣ್ಣೆ ಸಮುದ್ರವೂ ಬತ್ತಿ ಪರ್ವತವೂ)


ಎಂದು ಹೇಳಿ ಚಿಮಿಣಿ ದೀಪವಾರಿಸಿದಮೇಲೆ ನಮ್ಮ ಬಾಲ್ಯದ ಕಥಾಕಾಲ ಆರಂಭವಾಗುತ್ತಿತ್ತು. ನಮ್ಮದು ದೊಡ್ಡ  ಕೂಡು ಕುಟುಂಬವಾದ್ದರಿಂದ ಬೇರೆ ಬೇರೆ ಮೂಲಗಳಿಂದ ಬೇರೆ ಬೇರೆ ತರಹದ ಕತೆಗಳನ್ನು ಕೇಳುವ ಸೌಲಭ್ಯ ನಮಗಿತ್ತು.  ನಮ್ಮ ತಂದೆಯವರು ಗಹಗಹಿಸಿ ನಗುವ ರುಂಡಗಳ ಕಥೆ, ಮರದ ಮೇಲೆ ಬೆಳೆಯುವ ಸಿಹಿ ಅಪ್ಪಗಳ ಕಥೆ, ರಾಜ, ಇಲಿ ಮತ್ತು ಟೊಪ್ಪಿಯ ಕಥೆ ಮುಂತಾದವುಗಳನ್ನು ಹೇಳಿದರೆ ತಾಯಿಯವರು  ಕಬ್ಬಿನಮಾಡು, ದೋಸೆಯ ಹೆಂಚು, ಬೆಲ್ಲದ ಗೋಡೆಯ ಮನೆಯೊಳಗೆ ಮರಿ ಇಟ್ಟಿರುವ ಬೆಕ್ಕಿನ ಕಥೆ, ಸಪ್ತಸಾಗರದಾಚೆಯ ದ್ವೀಪದಲ್ಲಿರುವ ಪಚ್ಚೆ ಗಿಳಿಯೊಳಗೆ ಜೀವ ಇರುವ ರಾಕ್ಷಸನ ಕಥೆ, ಗುಬ್ಬಚ್ಚಿಯ ಮೊಟ್ಟೆಗಳನ್ನು ಕದ್ದು ತಿನ್ನುವ ಕಾಗೆಯ ಕಥೆಗಳನ್ನು ಹೇಳುತ್ತಿದ್ದರು.  ನಮ್ಮ ಅಣ್ಣ ಹೇಳುತ್ತಿದ್ದುದು ಖಡ್ಗದ ಒಂದೇ ಏಟಿಗೆ ತೆಂಗಿನ ಕಾಯಿಯನ್ನು ಮೂರು ತುಂಡು ಮಾಡುವ ರಾಜಕುಮಾರನ ಕಥೆ, ಮರದ ಬೀಳಲುಗಳನ್ನು ಹಿಡಿದು ಕಾಡಿನೊಳಗೆ ಸಂಚರಿಸುವ ಸಾಹಸಿಯ  ಕಥೆಗಳನ್ನು. ಅಣ್ಣನ ಮೆಚ್ಚಿನ ಇನ್ನೊಂದು ಕಥೆ ಸಸೇಮಿರಾ. ಉಳಿದೆಲ್ಲ ಕಥೆಗಳ ಅಲ್ಪ ಸ್ವಲ್ಪ ಭಾಗಗಳು ಸ್ಮೃತಿಪಟಲದಲ್ಲಿದ್ದರೂ ಈ ಸಸೇಮಿರಾ ಕಥೆ ನನಗೆ ಪೂರ್ತಿ ಮರೆತೇ ಹೋಗಿತ್ತು. ಕೆಲ ದಿನ ಹಿಂದೆ ಫೇಸ್ ಬುಕ್ ಮಿತ್ರ ಸುದರ್ಶನ ರೆಡ್ಡಿ ಅವರು ಯಾವುದೋ ವಾಕ್ಯದಲ್ಲಿ ಕೆಲವೆಡೆ ಬಿಲ್ ಕುಲ್ ಅಥವಾ ಎಷ್ಟುಮಾತ್ರಕ್ಕೂ ಎಂಬರ್ಥದಲ್ಲಿ ಬಳಸುವ ಸಸೇಮಿರಾ ಶಬ್ದದ ಉಲ್ಲೇಖ ಮಾಡಿದಾಗ ಈ ಕಥೆಯ ಬಗ್ಗೆ ಮತ್ತೆ ಕುತೂಹಲ ಉಂಟಾಯಿತು.  ಬೇರೊಂದು ಪ್ರದೇಶದಲ್ಲಿ ಸಸೇಮಿರಾ ಎಂಬ ಶಬ್ದ ಇದೆ ಅನ್ನುವಾಗ ಅಂತರ್ಜಾಲದಲ್ಲಿ ಇದರ ಬಗ್ಗೆ ಏನಾದರೂ ಸುಳಿವು ಖಂಡಿತ ಇರಬಹುದು ಎಂದೆನಿಸಿ ಜಾಲಾಡಿದಾಗ ಆಶ್ಚರ್ಯ ಕಾದಿತ್ತು.  ಸಸೇಮಿರಾ ಶಬ್ದ ಮಾತ್ರವಲ್ಲ, ಆ ಕಥೆಯ ವಿವಿಧ ರೂಪಗಳ ವಿವರಗಳೂ ಸಿಕ್ಕಿದವು!  ಕೆಲವು ಮೂಲಗಳು ಇದು ಮೂವತ್ತೆರಡು ಗೊಂಬೆಗಳ ಕಥೆಗಳಲ್ಲೊಂದು ಎಂದು ಹೇಳಿದರೆ ಇನ್ನು ಕೆಲವು ಭೋಜ ರಾಜ ಮತ್ತು ಕಾಳಿದಾಸನಿಗೆ ಸಂಬಂಧಿಸಿದ್ದು ಎಂದು ಉಲ್ಲೇಖಿಸಿವೆ. ಪದ್ಯರೂಪದ ಬಾಲರಾಮನ ಸಾಂಗತ್ಯದಲ್ಲೂ ಈ ಕಥೆಯ ಅಂಶ ಕಂಡು ಬಂತು.  ಆದರೆ ನಮ್ಮ ಮನೆಗೆ ಇದು ಯಾವ ಮೂಲದಿಂದ ಬಂದಿತ್ತು ಎಂದು ತಿಳಿದಿಲ್ಲ. ಸಂಸ್ಕೃತದ ಕಥಾಸರಿತ್ಸಾಗರ ಅಥವಾ ಹಿತೋಪದೇಶದಿಂದ ಬಂದಿರುವ ಸಾಧ್ಯತೆ ಇದೆ.
**********



     ಒಂದಾನೊಂದು ರಾಜ್ಯದಲ್ಲಿ ಒಬ್ಬ ರಾಜನಿದ್ದ.  ಅವನಿಗೊಬ್ಬಳು ರಾಣಿಯಿದ್ದಳು.  ಒಬ್ಬ ರಾಜ ಕುಮಾರನೂ ಇದ್ದ.  ಆ ರಾಜನ ಆಸ್ಥಾನದಲ್ಲಿ ಬಲು ಬುದ್ಧಿಶಾಲಿಯಾದ ಬ್ರಾಹ್ಮಣನೊಬ್ಬನಿದ್ದ.  ಕಣ್ಣಿಗೆ ಕಾಣಿಸದ ವಿಷಯಗಳನ್ನೂ ಕರಾರುವಾಕ್ಕಾಗಿ ಹೇಳುವ ಅಲೌಕಿಕ ಸಾಮರ್ಥ್ಯ ಅವನಲ್ಲಿತ್ತು.  ತನ್ನ ಈ ವಿದ್ಯೆಯಿಂದ ಅವನು ರಾಜನನ್ನು ರಂಜಿಸಿ ಯಥೇಚ್ಛ ಬಹುಮಾನಗಳನ್ನು ಗಳಿಸುತ್ತಿದ್ದ.  ಹೀಗಿರುವಾಗ ಓರ್ವ ಚಿತ್ರಕಾರನು ಆ ರಾಜನ ಆಸ್ಥಾನಕ್ಕೆ ಬಂದು ತಾನು ಬೇರೆ ಬೇರೆ ದೇಶಗಳಲ್ಲಿ ಚಿತ್ರಿಸಿದ ಅನೇಕ ರಾಜಕುಮಾರಿಯರ ಚಿತ್ರಗಳನ್ನು ತೋರಿಸಿದ.  ರಾಜನಿಗೆ ಆ ಚಿತ್ರಕಾರನ ಮೇಲೆ ಗೌರವ ಮೂಡಿ ಮಹಾರಾಣಿಯ ಚಿತ್ರವೊಂದನ್ನು ರಚಿಸುವಂತೆ ಕೇಳಿಕೊಂಡ.  ಅದಕ್ಕೊಪ್ಪಿದ ಚಿತ್ರಕಾರನು ಕೆಲವೇ ದಿನಗಳಲ್ಲಿ ಮಹಾರಾಣಿಯ ಅತಿ ಸುಂದರ ಚಿತ್ರ ರಚಿಸಿ ರಾಜನಿಗೆ ಅರ್ಪಿಸಿದ.  ಆ ಕಲಾವಿದನ ಕಲೆಯ ಪರಿಚಯ ಎಲ್ಲರಿಗೂ ಆಗಲಿ ಎಂಬ ಉದ್ದೇಶದಿಂದ ರಾಜನು ಆ ಚಿತ್ರವನ್ನು ರಾಜಸಭೆಯಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಿದ.  ಎಲ್ಲರೂ ಆ ಚಿತ್ರವನ್ನು ಮೆಚ್ಚಿ ಹೊಗಳಿದರೂ ಬ್ರಾಹ್ಮಣನು ಮಾತ್ರ ಆ ಚಿತ್ರದಲ್ಲಿ ಏನೋ ಕೊರತೆ ಇರುವುದಾಗಿ ಹೇಳಿದ. ಅದೇನು ಕೊರತೆ ಎಂದು ತಿಳಿಸುವಂತೆ ರಾಜ ಒತ್ತಾಯಿಸಿದಾಗ ರಾಣಿಯ ನಾಭಿ ಪ್ರದೇಶದಲ್ಲಿರುವ ಕಿರು ಮಚ್ಚೆಯೊಂದು ಮೂಡಿ ಬರದೆ ಇರುವುದರಿಂದ ಆ ಚಿತ್ರ ಅಪೂರ್ಣ ಎಂದು ಬ್ರಾಹ್ಮಣ ಹೇಳಿದ.  ರಾಜನು ಇದಕ್ಕೆ ಅಪಾರ್ಥ ಕಲ್ಪಿಸಿ ಆ ಬ್ರಾಹ್ಮಣನನ್ನು ತಕ್ಷಣ ಒಯ್ದು ಶಿರಚ್ಛೇದ ಮಾಡುವಂತೆ ಮಂತ್ರಿಗೆ ಆಜ್ಞಾಪಿಸಿದ.  ಈ ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ ಮಂತ್ರಿಯು ಪರಿಪರಿಯಾಗಿ  ಬೇಡಿಕೊಂಡರೂ ರಾಜ ಹಿಡಿದ ಪಟ್ಟು ಬಿಡಲಿಲ್ಲ.  ಬ್ರಾಹ್ಮಣನ ಅಪೂರ್ವ ಶಕ್ತಿಯ ಪರಿಚಯವಿದ್ದ ಮಂತ್ರಿಯು ಒಂದಲ್ಲ ಒಂದು ದಿನ  ರಾಜನಿಗೆ ತನ್ನ ತಪ್ಪಿನ ಅರಿವಾಗಬಹುದೆಂದೆಣಿಸಿ  ಬ್ರಾಹ್ಮಣನನ್ನೊಯ್ದು ತನ್ನ ಮನೆಯ ನೆಲಮಾಳಿಗೆಯಲ್ಲಿರಿಸಿದ.   ಆಜ್ಞೆಯನ್ನು ಶಿರಸಾವಹಿಸಲಾಗಿದೆ ಎಂದು ರಾಜನಿಗೆ ಹೇಳಿದ.

     ಕೆಲ ಕಾಲದ ನಂತರ ರಾಜಕುಮಾರನು ಕುದುರೆಯೇರಿ ಬೇಟೆಗೆಂದು ಕಾಡಿಗೆ ಹೋದ.  ಒಂದು ಸುಂದರವಾದ ಕೃಷ್ಣಮೃಗವನ್ನು ಬೆನ್ನಟ್ಟುತ್ತಾ ಬಲು ದೂರ ಸಾಗಿದ.  ಮೃಗವು ಕಾಡಿನಲ್ಲಿ ಎಲ್ಲೋ ಮಾಯವಾಯಿತು. ಕುದುರೆಯನ್ನು ಮರಕ್ಕೆ ಕಟ್ಟಿ ದಣಿವಾರಿಸಲೆಂದು ಪಕ್ಕದಲ್ಲಿದ್ದ ಕೊಳದಿಂದ ನೀರು ಕುಡಿಯಲೆಂದು ಎರಡು ಹೆಜ್ಜೆಯಿರಿಸುವಷ್ಟರಲ್ಲಿ ಎದುರಿಗೆ ಭಯಂಕರವಾದ ಹುಲಿಯೊಂದು ಗೋಚರಿಸಿತು. ಹುಲಿಯನ್ನು ಕಂಡು ಬೆದರಿದ ಕುದುರೆಯು ಕಟ್ಟು ಬಿಡಿಸಿಕೊಂಡು ನಗರದತ್ತ ಓಡಿತು. ಭಯವಿಹ್ವಲನಾದ ರಾಜಕುಮಾರನು ರಕ್ಷಣೆಗಾಗಿ ಅಲ್ಲೇ ಇದ್ದ ಮರವೊಂದನ್ನೇರತೊಡಗಿದ. ಆ ಮರದ ಮೇಲೆ ಮೊದಲೇ ಕರಡಿಯೊಂದು ಏರಿ ಕುಳಿತಿತ್ತು. ಅದನ್ನು ಕಂಡ ರಾಜಕುಮಾರನ ಕೈ ಕಾಲುಗಳು ನಡುಗತೊಡಗಿದವು. ಆಗ ಆ ಕರಡಿಯು "ಎಲೈ ರಾಜಕುಮಾರನೇ, ನೀನು ನನ್ನ ರಕ್ಷಣೆ ಕೋರಿ ಬಂದಿದ್ದಿಯಾ.  ಆದ್ದರಿಂದ ನಾನು ನಿನಗೇನೂ ಹಾನಿ ಮಾಡೆನು.  ಧೈರ್ಯವಾಗಿ ಮೇಲೆ ಬಾ" ಎಂದಿತು.  ಮೇಲೆ ಬಂದ ರಾಜಕುಮಾರನನ್ನು ಪಕ್ಕದಲ್ಲಿ ಕೂರಿಸಿಕೊಂಡಿತು.  ತುಂಬಾ ದಣಿದಿದ್ದ ರಾಜಕುಮಾರನಿಗೆ ನಿದ್ರೆ ಆವರಿಸಿದಾಗ ಕರಡಿಯು ಆತನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಿತು.  ಆಗ ಕೆಳಗಿದ್ದ ಹುಲಿಯು " ಎಲೈ ಕರಡಿಯೇ,  ವನ್ಯಜೀವಿಗಳ ಶತ್ರುವಾದ ಮಾನವನೋರ್ವನಿಗೆ ಏಕೆ ರಕ್ಷಣೆ ಕೊಟ್ಟಿರುವೆ. ಇಂದಲ್ಲ ನಾಳೆ ಅವನು ತನ್ನ ಸೈನ್ಯದೊಂದಿಗೆ ಬಂದು ನಮ್ಮಿಬ್ಬರನ್ನೂ ಕೊಲ್ಲದೆ ಇರಲಾರ.  ನೀನು ಆತನನ್ನು ಕೆಳಗೆ ತಳ್ಳು.  ನಾನು ನನ್ನ ಹಸಿವೆಯನ್ನು ನೀಗಿಸಿಕೊಂಡು ನನ್ನ ಮನೆಗೆ ಹೋಗುತ್ತೇನೆ.  ನೀನೂ ಸುಖವಾಗಿ ನಿನ್ನ ಕುಟುಂಬದೊಂದಿಗೆ ಜೀವಿಸಬಹುದು" ಎಂದಿತು. ಆಗ ಕರಡಿಯು " ರಕ್ಷಣೆ ಕೋರಿ ಬಂದ ಯಾರಿಗೇ ಆಗಲಿ ಮೋಸ ಮಾಡುವುದು ತರವಲ್ಲ.  ನೀನು ಸುಮ್ಮನೆ ಇಲ್ಲಿಂದ ಹೊರಟು ಹೋಗು" ಎಂದಿತು. ಕೊಂಚ ಹೊತ್ತಿನಲ್ಲಿ ರಾಜಕುಮಾರನಿಗೆ ಎಚ್ಚರವಾಯಿತು.  ಆಗ ಕರಡಿಯು" ಈಗ ನಾನು ವಿಶ್ರಾಂತಿ ಪಡೆಯುತ್ತೇನೆ.  ನೀನು ಕಾವಲಿರು" ಎಂದು ಹೇಳಿ ಕೊಂಬೆಯೊಂದರ ಮೇಲೆ ನಿದ್ರಿಸಿತು.  ಅಲ್ಲೇ ಅಡ್ಡಾಡಿಕೊಂಡಿದ್ದ ಹುಲಿಯು ಇದನ್ನು ಗಮನಿಸಿ " ಎಲೈ ಮನುಜನೇ,  ನಿನ್ನ ರಕ್ಷಕನೆಂದು ನೀನು ತಿಳಿದುಕೊಂಡಿರುವುದು ಹರಿತವಾದ ನಖಗಳುಳ್ಳ ಕ್ರೂರ ಮೃಗ.  ನಿದ್ರೆಯಿಂದ ಎಚ್ಚರವಾದೊಡನೆ ಅದು ನಿನ್ನನ್ನು ಭಕ್ಷಿಸುವುದರಲ್ಲಿ ಯಾವ ಸಂಶಯವೂ ಇಲ್ಲ.  ನಾನು ಹೇಳಿದಂತೆ ಮಾಡು.  ಅದನ್ನು ಕೆಳಗೆ ತಳ್ಳಿ ಬಿಡು. ಹೊಟ್ಟೆ ತುಂಬಿಸಿಕೊಂಡು ನಾನು ಹೊರಟು ಹೋಗುತ್ತೇನೆ.  ನೀನೂ ಸುಖವಾಗಿ ಊರು ಸೇರಬಹುದು" ಎಂದಿತು. ರಾಜಕುಮಾರನಿಗೆ ಇದು ಹೌದೆನ್ನಿಸಿತು.  ಕಾಲಿನಿಂದ ಕರಡಿಯನ್ನು ತಳ್ಳಿ ಬಿಟ್ಟ.  ಆದರೆ ಕರಡಿಯು ಟೊಂಗೆಯನ್ನು ಗಟ್ಟಿಯಾಗಿ ಹಿಡಿದುಕೊಂಡೇ ಮಲಗಿದ್ದುದರಿಂದ ಕೆಳಗೆ ಬೀಳಲಿಲ್ಲ.  ಇದನ್ನು ಕಂಡ ರಾಜಕುಮಾರನ ಜಂಘಾಬಲವೇ ಉಡುಗಿ ಹೋಯಿತು.  ಕರಡಿಯು ತನ್ನನ್ನು ಸುಮ್ಮನೆ ಬಿಡಲಾರದು ಅಂದುಕೊಂಡ.  ಆದರೆ ಕರಡಿಯು"ಹುಲು ಮಾನವನೇ,  ನೀನು ಮಿತ್ರದ್ರೋಹಗೈದರೂ ಶರಣುಕೋರಿ ಬಂದ ನಿನಗೆ ನಾನೇನೂ ಕೇಡುಂಟುಮಾಡೆನು.  ಆದರೆ ಮಾಡಿದುದರ ಫಲವನ್ನುಣ್ಣಲೇ ಬೇಕು.  ಹೀಗಾಗಿ ಇನ್ನು ಮುಂದೆ  ಸಸೇಮಿರಾ ಎಂದು ಉಚ್ಚರಿಸುತ್ತಾ ನೀನು ಊರೂರು ಅಲೆಯುವಂತಾಗಲಿ ಎಂದು ನಿನ್ನನ್ನು ಶಪಿಸುತ್ತೇನೆ. ಈ ಅಕ್ಷರಗಳ ರಹಸ್ಯವನ್ನು ಯಾರಾದರೂ ಭೇದಿಸಿದಾಗಲೇ ನಿನಗೆ ಇದರಿಂದ ಮುಕ್ತಿ" ಎಂದು ಹೇಳಿ ಚಿಕ್ಕ ಟೊಂಗೆಯೊಂದರಿಂದ ಆತನ ನಾಲಗೆಯ ಮೇಲೆ ಸಸೇಮಿರಾ ಎಂದು ಬರೆದು  ಮರದಿಂದಿಳಿದು ಹೊರಟು ಹೋಯಿತು.  ತಡ ರಾತ್ರಿಯಾಗಿದ್ದುದರಿಂದ ಹುಲಿ ಮೊದಲೇ ಹೊರಟು ಹೋಗಿತ್ತು.  ದಿಕ್ಕುಗಾಣದ ರಾಜಕುಮಾರನೂ ಮರದಿಂದಿಳಿದು  ಸಸೇಮಿರಾ ಸಸೇಮಿರಾ ಎನ್ನುತ್ತಾ ಊರೂರು ತಿರುಗತೊಡಗಿದನು.  ಯಾರು ಏನು ಕೇಳಿದರೂ ಸಸೇಮಿರಾ ಎಂದಷ್ಟೇ ಅನ್ನುತ್ತಿದ್ದನು.

     ಇತ್ತ ಕುದುರೆಯೊಂದೇ ಹಿಂತಿರುಗಿದುದರಿಂದ ಅರಮನೆಯಲ್ಲಿ  ದುಃಖದ ಛಾಯೆ ಆವರಿಸಿತು.  ರಾಜಕುಮಾರನನ್ನು ಹುಡುಕಲು ನಾಲ್ಕೂ ದಿಕ್ಕುಗಳಿಗೆ ಭಟರನ್ನು ಅಟ್ಟಲಾಯಿತು.  ಬಹಳ ಹುಡುಕಾಡಿದ ಮೇಲೆ ಸಸೇಮಿರಾ ಅನ್ನುತ್ತಾ  ಓಡಾಡುತ್ತಿದ್ದ ರಾಜಕುಮಾರ ಯಾವುದೋ ಹಳ್ಳಿಯಲ್ಲಿ ಸಿಕ್ಕಿದ.  ಆತನನ್ನು ಅರಮನೆಗೆ ಕರೆತರಲಾಯಿತು.  ಆದರೇನು ಪ್ರಯೋಜನ.  ಆತನಿಗೆ ತಾನು ಯಾರೆಂಬುದೇ ಗೊತ್ತಿರಲಿಲ್ಲ.  ಸಸೇಮಿರಾ ಎಂಬುದನ್ನು ಬಿಟ್ಟರೆ ಬೇರೆ ಮಾತೂ ಹೊರಡುತ್ತಿರಲಿಲ್ಲ.  ರಾಜಕುಮಾರನನ್ನು ಪೂರ್ವಸ್ಥಿತಿಗೆ ತಂದವರಿಗೆ ಅರ್ಧ ರಾಜ್ಯ ಕೊಡುವುದಾಗಿ ರಾಜ ಡಂಗುರ ಹೊಡೆಸಿದ. ಮಂತ್ರಿಯ ಮನೆಯಲ್ಲಿದ್ದ ಬ್ರಾಹ್ಮಣನಿಗೂ ಈ ವಿಷಯ ತಿಳಿಯಿತು.  ತಾನು ಇದನ್ನು ಸರಿಪಡಿಸುವುದಾಗಿ ಹೇಳಿದ.  ಆದರೆ ಬ್ರಾಹ್ಮಣ ತನ್ನ ಮನೆಯಲ್ಲಿದ್ದಾನೆ ಎಂದು ಮಂತ್ರಿ ರಾಜನಲ್ಲಿ ಹೇಳುವಂತಿರಲಿಲ್ಲ.  ಹೀಗಾಗಿ ಎಂತಹ ಸಮಸ್ಯೆಗಳಿಗೂ ಸಮಾಧಾನ ಹುಡುಕುವ ಸಾಮರ್ಥ್ಯ ಉಳ್ಳ ಸ್ತ್ರೀಯೋರ್ವಳು ತನ್ನ ಮನೆಯಲ್ಲಿರುವಳೆಂದೂ,  ಆಕೆ ನಿಶ್ಚಿತವಾಗಿಯೂ ರಾಜಕುಮಾರನನ್ನು ಗುಣಪಡಿಸಬಲ್ಲಳೆಂದೂ ರಾಜನಿಗೆ ಹೇಳಿದ.  ಆಕೆ ಪುರುಷರ ಮುಂದೆ  ಕಾಣಿಸಿಕೊಳ್ಳುವುದಿಲ್ಲವಾದ್ದರಿಂದ ತೆರೆಯ ಹಿಂದೆ ಇರುತ್ತಾಳೆಂಬ ಷರತ್ತನ್ನೂ ವಿಧಿಸಿದ.  ಒಪ್ಪಿದ ರಾಜನು ಸಸೇಮಿರಾ ಸಸೇಮಿರಾ ಅನ್ನುತ್ತಿದ್ದ ರಾಜಕುಮಾರನನ್ನು ಕರೆದುಕೊಂಡು ಮಂತ್ರಿಯ ಮನೆಗೆ ಹೋದ.  ತೆರೆಯ ಹಿಂದಿದ್ದ ಬ್ರಾಹ್ಮಣನು ಸ್ತ್ರೀ ಕಂಠದಲ್ಲಿ  "ದ್ಭಾವ ತೋರಿ ಆಶ್ರಯ ನೀಡಿ ಗೆಲ್ಲ ಮೇಲೆ ಮಲಗಿದವನನ್ನು ವಂಚಿಸುವುದರಲ್ಲಿ ಯಾವ ಪೌರುಷವೂ ಇಲ್ಲ." ಎಂದು ಹೇಳಿದ.  ಆಗ ರಾಜಕುಮಾರನು ಮೊದಲ ಅಕ್ಷರವನ್ನು ತ್ಯಜಿಸಿ ಸಸೇಮಿರಾ ಬದಲಿಗೆ ಸೇಮಿರಾ ಸೇಮಿರಾ ಎಂದು ಹೇಳತೊಡಗಿದ.  ಬ್ರಾಹ್ಮಣನು "ಸೇತುವಿಗೆ ಹೋಗು, ಗಂಗಾ ಸಾಗರ ಸಂಗಮದಲ್ಲಿ ಸ್ನಾನ ಮಾಡು.  ಬ್ರಹ್ಮಹತ್ಯೆಯಂಥ ಮಹಾ ಪಾಪಗಳು ನಾಶ ಆದಾವು.  ಆದರೆ ಮಿತ್ರದ್ರೋಹದ ದೋಷ ನಿವಾರಣೆ ಆಗದು" ಅಂದ.  ಕೂಡಲೇ ರಾಜಕುಮಾರನು ಎರಡು ಅಕ್ಷರಗಳನ್ನು ಬಿಟ್ಟು ಮಿರಾ ಮಿರಾ  ಅನ್ನತೊಡಗಿದ.  ಮುಂದೆ "ಮಿತ್ರದ್ರೋಹಿ, ಕೃತಘ್ನ ಮತ್ತು ವಿಶ್ವಾಸಘಾತಕ ಈ ಮೂವರಿಗೂ ರೌರವ ನರಕ ಕಟ್ಟಿಟ್ಟದ್ದು" ಎಂದು ಬ್ರಾಹ್ಮಣ ಹೇಳಿದೊಡನೆ ರಾಜಕುಮಾರ ರಾ ರಾ ಅನ್ನತೊಡಗಿದ.  ಕೊನೆಗೆ ಬ್ರಾಹ್ಮಣನು "ರಾಜನೆ,  ನಿನ್ನ ಪುತ್ರನ ಒಳಿತನ್ನು ಬಯಸುವಿಯಾದರೆ ಸತ್ಕಾರ್ಯಗಳನ್ನು ಮಾಡು, ಬ್ರಾಹ್ಮಣರನ್ನು ಗೌರವಿಸು,  ದೇವತೆಗಳನ್ನು ಆರಾಧಿಸು" ಎಂದೊಡನೆ ರಾಜಕುಮಾರನು ಮತ್ತೆ ಮೊದಲಿನಂತಾದ.  ಆಗ ಮಂತ್ರಿಯು ತೆರೆಯನ್ನು ಸರಿಸಿದಾಗ ಬ್ರಾಹ್ಮಣನು ಹೊರಗೆ ಬಂದು ರಾಜನಿಗೆ ವಂದಿಸಿದ.  "ನಿನಗೆ ಇದೆಲ್ಲ ಹೇಗೆ ಗೊತ್ತಾಯಿತು" ಎಂದು ರಾಜ ಕೇಳಿದಾಗ "ರಾಣಿಯ ಮಚ್ಚೆಯ ಬಗ್ಗೆ ಹೇಗೆ ಗೊತ್ತಾಯಿತೋ ಅದೇ ಶಕ್ತಿಯಿಂದ ನಿನ್ನ  ರಾಜಕುಮಾರನ  ಕುಕಾರ್ಯದ ಬಗ್ಗೆಯೂ ಗೊತ್ತಾಯಿತು" ಅಂದ.  ರಾಜನಿಗೆ ತನ್ನ ತಪ್ಪಿನ ಅರಿವಾಯಿತು.  ಮತ್ತೆ ಬ್ರಾಹ್ಮಣನನ್ನು ಸಕಲ ಮರ್ಯಾದೆಗಳೊಂದಿಗೆ ಆಸ್ಥಾನಕ್ಕೆ ಕರೆಸಿಕೊಂಡ.  ಸುಖ ಸಮೃದ್ಧಿಗಳನ್ನು ಹೊಂದಿ ಅನೇಕ ವರ್ಷಗಳ ಕಾಲ ರಾಜ್ಯವಾಳಿದ.
**********

ನಮ್ಮಣ್ಣ ಹೇಳುತ್ತಿದ್ದ ಸಸೇಮಿರಾ ಕಥೆ ಹೀಗಿತ್ತು.  ಕೇಳಿದ ನಿಮಗೆ ಸಿಪ್ಪೆ.  ಹೇಳಿದ ನನಗೆ ಬಾಳೆಹಣ್ಣು!
-------

ಶ್ರೀವತ್ಸ ಜೋಷಿ 11-9-2016ರ ವಿಶ್ವವಾಣಿ ಪತ್ರಿಕೆಯ ತಿಳಿರುತೋರಣ ಅಂಕಣದಲ್ಲಿ  ಇದನ್ನು ಅಳವಡಿಸಿಕೊಂಡಿದ್ದು ಅವರ ಧ್ವನಿಯಲ್ಲಿರುವ  ಕಥೆಯ ಶ್ರಾವ್ಯ ರೂಪ ಇಲ್ಲಿ ಆಲಿಸಬಹುದು.

Sunday 14 August 2016

ಏ ಮೇರೆ ವತನ್ ಕೇ ಲೋಗೊ




     1962ರ ಚೀನಾ ಯುದ್ಧದಲ್ಲಿ ಮಡಿದ ವೀರ ಯೋಧರ ನೆನಪಿನಲ್ಲಿ ಕವಿ ಪ್ರದೀಪ್ ಅವರು ರಚಿಸಿದ ಈ ಕವನವನ್ನು ಸಿ.ರಾಮಚಂದ್ರ ಅವರ ಸಂಗೀತ ದಿಗ್ದರ್ಶನದಲ್ಲಿ ಲತಾ ಮಂಗೇಷ್ಕರ್ January 27, 1963 ರಂದು ನೇಶನಲ್ ಸ್ಟೇಡಿಯಂನಲ್ಲಿ ಅಂದಿನ ಪ್ರಧಾನಿ ನೆಹರು ಅವರ ಸಮ್ಮುಖದಲ್ಲಿ ಹಾಡಿದ್ದರು. ಇದಕ್ಕಾಗಿ ಯಾರೂ ರಾಯಲ್ಟಿ ಸ್ವೀಕರಿಸಬಾರದು ಮತ್ತು ಇದನ್ನು ಯಾವ ಚಲನ ಚಿತ್ರದಲ್ಲೂ ಬಳಸಿಕೊಳ್ಳಬಾರದು ಎಂಬ ಶರತ್ತುಗಳೊಡನೆ ನಂತರ ಇದರ ಗ್ರಾಮೊಫೋನ್ ರೆಕಾರ್ಡ್ ಕೂಡ ತಯಾರಿಸಲಾಯಿತು. 50ರ ದಶಕದ ಕೊನೆಯಲ್ಲಿ  ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಉಂಟಾಗಿದ್ದ  ವಿರಸದ ಕಾರಣದಿಂದ ಆಗ ಸಿ. ರಾಮಚಂದ್ರ ಅವರ ಹಾಡುಗಳನ್ನು   ಲತಾ ಮಂಗೇಷ್ಕರ್ ಹಾಡುತ್ತಿರಲಿಲ್ಲ.  ಹೀಗಾಗಿ  ಇದನ್ನು ಆಶಾ ಭೋಸ್ಲೆ ಹಾಡುವುದೆಂದು ತೀರ್ಮಾನವಾಗಿ ರಿಹರ್ಸಲ್ ಕೂಡ ನಡೆಸಿ ಆಗಿತ್ತಂತೆ. ಆದರೆ ಪ್ರಧಾನಿ ಎದುರು ಹಾಡುವ ಅವಕಾಶ ಕಳೆದುಕೊಳ್ಳಬಯಸದ ಲತಾ ತಾತ್ಕಾಲಿಕವಾಗಿ ego ಬದಿಗಿಟ್ಟು ತಾನೇ ಹಾಡಲು ಮುಂದಾದುದರಿಂದ ಆಶಾ ಭೋಸ್ಲೆ ಹಿಂದೆ ಸರಿದರಂತೆ. ಈ ಹಾಡಿನ ಧಾಟಿ ಕವಿ ಪ್ರದೀಪ್ ಅವರದ್ದೇ, ವಾದ್ಯ ಸಂಯೋಜನೆ ಮತ್ತು arrangement ಮಾತ್ರ ಸಿ.ರಾಮಚಂದ್ರ ನಿರ್ವಹಿಸಿದ್ದು ಎಂದೂ ಕೆಲವರು ಹೇಳುತ್ತಾರೆ. ಪ್ರದೀಪ್ ಅವರು ಸಂಗೀತ ಜ್ಞಾನ ಕೂಡ ಉಳ್ಳವರಾಗಿದ್ದು ಆವೋ ಬಚ್ಚೊ ತುಮ್ಹೆ ದಿಖಾಯೆಂ, ದೇಖ್ ತೆರೇ ಸಂಸಾರ್ ಕೀ ಹಾಲತ್ ಮುಂತಾದ ಹಾಡುಗಳನ್ನು ಸ್ವತಃ ಹಾಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.  ಆ ಮೇಲೆ ಲತಾ ಮಂಗೇಷ್ಕರ್ ಅನೇಕ ಸಮಾರಂಭಗಳ ವೇದಿಕೆಗಳಲ್ಲಿ ಇದನ್ನು ಹಾಡಿರುವುದನ್ನು ನೀವು ಕೇಳಿರುತ್ತೀರಿ. ಆದರೆ  ಮೂಲ ಗ್ರಾಮೊಫೋನ್ ರೆಕಾರ್ಡ್ ವರ್ಷನ್ ಕೇಳುವಾಗಿನ ಅನುಭವವೇ ಬೇರೆ. ಆ ಕಾಲದಲ್ಲಿ ದಿನನಿತ್ಯವೆಂಬಂತೆ ವಿವಿಧಭಾರತಿಯಲ್ಲಿ ಇದು ಪ್ರಸಾರವಾಗುತ್ತಿತ್ತು. ನನಗಂತೂ ಇದನ್ನು ಕೇಳಿದಾಗ ನಮ್ಮ ಮನೆಗೆ ಆಗತಾನೇ ಕಾಲಿಟ್ಟಿದ್ದ ಹೊಸ ನ್ಯಾಶನಲ್ ಎಕ್ಕೊ ರೇಡಿಯೋದ ವಾರ್ನಿಷ್ ಪರಿಮಳವೇ ಮೂಗಿಗೆ ಅಡರುತ್ತದೆ!

     ಈ ಹಾಡಿನ ಆರಂಭದಲ್ಲಿರುವ ಡೋಲು ತಮ್ಮಟೆಗಳ ಸದ್ದಿಗೂ ವಿಶೇಷ ಅರ್ಥ ಇದೆ. ಅದು ಜನರು ಸ್ವಾತಂತ್ರ್ಯವನ್ನು ಸಂಭ್ರಮಿಸುವುದರ ಸಂಕೇತ.  ಅದನ್ನು ಕಂಡು ಕವಿಯು "ನೀವು ಬೇಕಾದಷ್ಟು ಸಂಭ್ರಮಿಸಿ.  ಧ್ವಜವನ್ನೂ ಅರಳಿಸಿ.  ಆದರೆ  ಗಡಿಗಳಲ್ಲಿ ಪ್ರಾಣ ತೆತ್ತ ಯೋಧರನ್ನು ಮರೆಯದಿರಿ" ಎಂದು ಎಚ್ಚರಿಸುತ್ತಾನೆ.


  


 ಗ್ರಾಮೊಫೋನ್ ರೆಕಾರ್ಡ್ ರೂಪದಲ್ಲಿ ಕೇಳಬಯಸುತ್ತೀರಾದರೆ ಇಲ್ಲಿದೆ.



ಏ ಮೇರೆ ವತನ್ ಕೆ ಲೋಗೊ ತುಮ್ ಖೂಬ್ ಲಗಾಲೋ ನಾರಾ
ಯೇ ಶುಭ್ ದಿನ್ ಹೈ ಹಮ್ ಸಬ್ ಕಾ ಲಹರಾಲೊ ತಿರಂಗಾ ಪ್ಯಾರಾ
ಪರ್ ಮತ್ ಭೂಲೋ ಸೀಮಾ ಪರ್ ವೀರೋ ನೆ ಹೈ ಪ್ರಾಣ್ ಗವಾಯೆ
ಕುಛ್ ಯಾದ್ ಉನ್ಹೆ ಭೀ ಕರ್ ಲೋ (2)
ಜೊ ಲೌಟ್ ಕೆ ಘರ್ ನ ಆಯೆ (2)

ಏ ಮೇರೆ ವತನ್ ಕೆ ಲೋಗೊ  ಜರಾ ಆಂಖ್ ಮೆ ಭರ್ ಲೊ ಪಾನೀ
ಜೊ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೊ ಕುರಬಾನಿ

ಜಬ್ ಘಾಯಲ್ ಹುವಾ ಹಿಮಾಲಯ್ ಖತರೆ ಮೆಂ ಪಡೀ ಆಜಾದೀ
ಜಬ್ ತಕ್ ಥೀ ಸಾಂಸ್ ಲಡೇ ವೊ(2) ಫಿರ್ ಅಪನೀ ಲಾಶ್ ಬಿಛಾ ದೀ
ಸಂಗೀನ್ ಪೆ ಧರ್ ಕರ್ ಮಾಥಾ ಸೋ ಗಯೇ ಅಮರ್ ಬಲಿದಾನೀ
ಜೊ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೊ ಕುರಬಾನಿ

ಜಬ್ ದೇಶ್ ಮೆಂ ಥೀ ದೀವಾಲೀ ವೊ ಖೆಲ್ ರಹೆ ಥೆ ಹೋಲಿ
ಜಬ್ ಹಮ್ ಬೈಠೆ ಥೆ ಘರೊ ಮೆಂ (2) ವೊ ಝೇಲ್ ರಹೆ ಥೆ ಗೋಲಿ
ಥೆ ಧನ್ಯ್ ಜವಾನ್ ವೊ ಅಪನೆ ಥೀ ಧನ್ಯ್ ವೊ ಉನ್ ಕೀ ಜವಾನೀ
ಜೊ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೊ ಕುರಬಾನಿ

ಕೋಯಿ ಸಿಖ್ ಕೊಯಿ ಜಾಟ್ ಮರಾಠಾ(2)  ಕೋಯಿ ಗುರಖಾ ಕೋಯಿ ಮದರಾಸೀ(2)
ಸರಹದ್ ಪರ್ ಮರನೇವಾಲಾ(2)  ಹರ್ ವೀರ್ ಥಾ ಭಾರತ್ ವಾಸೀ
ಜೊ ಖೂನ್ ಗಿರಾ ಪರಬತ್ ಪರ್ ವೊ ಖೂನ್ ಥಾ  ಹಿಂದುಸ್ತಾನೀ
ಜೋ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೋ ಕುರಬಾನೀ

ಥೀ ಖೂನ್ ಸೆ ಲತ್ ಪಥ್ ಕಾಯಾ ಫಿರ್ ಭೀ ಬಂದೂಕ್ ಉಠಾಕೆ
ದಸ್ ದಸ್ ಕೊ ಏಕ್ ನೆ ಮಾರಾ ಫಿರ್ ಗಿರ್ ಗಯೆ ಹೋಶ್ ಗವಾ ಕೆ
ಜಬ್ ಅಂತ್ ಸಮಯ್ ಆಯಾ ತೋ(2)  ಕಹ್ ಗಯೇ ಕೆ ಅಬ್ ಮರ್ ತೇ ಹೈಂ
ಖುಶ್ ರಹನಾ ದೇಶ್ ಕೆ ಪ್ಯಾರೋ(2) ಅಬ್ ಹಮ್ ತೊ ಸಫರ್ ಕರತೇ ಹೈಂ(2)
ಕ್ಯಾ ಲೋಗ್ ಥೆ ವೊ ದೀವಾನೆ ಕ್ಯಾ ಲೋಗ್ ಥೆ ವೊ ಅಭಿಮಾನೀ
ಜೋ ಶಹೀದ್ ಹುವೆ ಹೈಂ ಉನ್ ಕೀ ಜರಾ ಯಾದ್ ಕರೋ ಕುರಬಾನೀ

ಜೈ ಹಿಂದ್ ಜೈ ಹಿಂದ್ ಕೀ ಸೇನಾ(2)
ಜೈ ಹಿಂದ್  ಜೈ ಹಿಂದ್  ಜೈ ಹಿಂದ್

ಓ ಎನ್ನ ದೇಶ ಬಾಂಧವರೆ ಎಂಬ ಇದರ ಕನ್ನಡ ಅವತರಣಿಕೆಯೂ ಒಂದಿದೆ. ಮೊತ್ತ ಮೊದಲು ಇದು ಕೇಳಿ ಬಂದದ್ದು ಆಕಾಶವಾಣಿ ಮುಂಬಯಿಯ ಸಾಪ್ತಾಹಿಕ ಕನ್ನಡ ಕಾರ್ಯಕ್ರಮದಲ್ಲಿ. ಯಾರ ಧ್ವನಿಯಲ್ಲೆಂದು ನೆನಪಿಲ್ಲ. ಈಗ ಅದನ್ನು ಅನೇಕರು ಹಾಡಿದ್ದಾರೆ. ಬಿ.ಆರ್.ಛಾಯಾ ಹಾಡಿದ್ದನ್ನು ಇಲ್ಲಿ ಕೇಳಬಹುದು.