Wednesday 15 June 2016

ಕ್ಯಾಸೆಟ್ ಲೋಕ

    


     Flash Memoryಯ ಕ್ರಾಂತಿಯಿಂದಾಗಿ ಹಾಡು-ಸಂಗೀತ ಇತ್ಯಾದಿ smart phone/pen driveಗಳಿಗೆ ವಲಸೆ ಹೋದುದರಿಂದ ಕ್ಯಾಸೆಟ್, CD, DVD ಇತ್ಯಾದಿಗಳು ಈಗಾಗಲೇ ಇತಿಹಾಸ ಸೇರಿ ಅನೇಕರು ತಮ್ಮಲ್ಲಿದ್ದ ಕ್ಯಾಸೆಟ್ಟುಗಳನ್ನು ಅಟ್ಟಕ್ಕೆಸೆದಿದ್ದರೂ ನನ್ನ ಕ್ಯಾಸೆಟ್ ಸಂಗ್ರಹ ಈಗಲೂ ಸುಸ್ಥಿತಿಯಲ್ಲಿದೆ. ಸುಮಾರು 25 ವರ್ಷಗಳ ಕಾಲ ವಿವಿಧ ಮೂಲಗಳಿಂದ ಸಂಗ್ರಹಿಸಿದ ಧ್ವನಿಭಂಡಾರ ಇವುಗಳಲ್ಲಿದೆ. ಗ್ರಾಮೊಫೋನ್, ರೇಡಿಯೊ, ಟಿ.ವಿ.ಗಳಿಂದ ನೇರ ಧ್ವನಿಮುದ್ರಿಸಿದವು, ಬೇರೆ ಕ್ಯಾಸೆಟ್ಟುಗಳಿಂದ ಕಾಪಿ ಮಾಡಿದವುಗಳು, ಪೂರ್ವಮುದ್ರಿತವಾದವು , ಮೈಕ್ರೋಫೋನ್ ಮೂಲಕ live ರೆಕಾರ್ಡ್ ಮಾಡಿದವು ಎಲ್ಲವೂ ಇದರಲ್ಲಿವೆ. ಇವುಗಳಲ್ಲಿ ಹೆಚ್ಚಿನವು ಕನ್ನಡ, ಹಿಂದಿ ಹಳೆಯ ಚಿತ್ರಗೀತೆಗಳು. ಕೆಲವು ಖಾಸಗಿ ಅಮೂಲ್ಯ ಧ್ವನಿಗಳು. ಆ ಕಾಲದಲ್ಲಿ ನಾನು ಎಲ್ಲಿಗೆ ಹೋಗುವುದಿದ್ದರೂ ಜೋಳಿಗೆಯಲ್ಲಿ ಟೇಪ್ ರೆಕಾರ್ಡರ್, ಖಾಲಿ ಕ್ಯಾಸೆಟ್ ಮತ್ತು ಒಂದು ep to ep ಕೇಬಲ್  ಇದ್ದೇ ಇರುತ್ತಿದ್ದವು. ಯಾರಲ್ಲಾದರೂ ನನಗೆ ಬೇಕಿದ್ದ ಹಾಡುಗಳಿವೆ ಎಂದಾದರೆ ಕೂಡಲೇ ನನ್ನ ಕ್ಯಾಸೆಟ್ಟಿಗೆ ವರ್ಗಾಯಿಸಿಕೊಂಡು ಬಿಡುತ್ತಿದ್ದೆ. ಧಾರವಾಡ , ಬೆಂಗಳೂರಿಗೆ ಹೋದಾಗ ಸಮಯ ಸಿಕ್ಕಿದಾಗೆಲ್ಲ two in one ಸಿದ್ಧವಾಗಿಟ್ಟುಕೊಂಡು ಅಲ್ಲಿಯ ವಿವಿಧಭಾರತಿಯಲ್ಲಿ ಹಳೆ ಹಾಡುಗಳಿಗೆ ಹೊಂಚು ಹಾಕುವುದೇ ಕೆಲಸ. ಗುಣಮಟ್ಟ ಚೆನ್ನಾಗಿರುವುದಿಲ್ಲ ಎಂದು ಗೊತ್ತಿದರೂ ಎಷ್ಟೋ ಸಲ ರಸ್ತೆ ಬದಿಯಲ್ಲಿ ಮಾರುತ್ತಿದ್ದ ಕ್ಯಾಸೆಟ್ಟುಗಳನ್ನು ಕೊಂಡು ಅವುಗಳಿಂದ ನನಗೆ ಬೇಕಿದ್ದುದನ್ನು ಉತ್ತಮ ಟೇಪಿಗೆ ಭಟ್ಟಿ ಇಳಿಸಿಕೊಳ್ಳುತ್ತಿದ್ದೆ. ಕೆಲವೊಮ್ಮೆ ಸಿನಿಮಾ ಟಾಕೀಸೊಳಗೆ ಟೇಪ್ ರೆಕಾರ್ಡರ್ ಒಯ್ದು ಚಿತ್ರ ನಡೆಯುತ್ತಿರುವಾದ ಹಾಡುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದೇನೆ. ನಾನು ಟೇಪ್ ರೆಕಾರ್ಡರ್ ಕೊಂಡ ಹೊಸತರಲ್ಲಿ ನಮ್ಮ ಬಾಡಿಗೆ ಮನೆ ಪಕ್ಕ ಇದ್ದವರಲ್ಲಿ ಕೆಲವು ಹಳೆ ಹಾಡುಗಳ ಗ್ರಾಮೊಫೋನ್ ತಟ್ಟೆಗಳಿದ್ದವು.  ರೆಕಾರ್ಡ್ ಪ್ಲೇಯರನ್ನು ಫಿಲಿಪ್ಸ್ ರೇಡಿಯೊಗೆ ಜೋಡಿಸಿ ಅವರು ಹಾಡುಗಳನ್ನು ಕೇಳುತ್ತಿದ್ದರು.  ಅಲ್ಲಿ ಕೇಬಲ್ ಮೂಲಕ ನೇರ ರೆಕಾರ್ಡಿಂಗ್ ವ್ಯವಸ್ಥೆ ಇಲ್ಲದ್ದರಿಂದ ಅವರ ರೇಡಿಯೊ ಎದುರುಗಡೆ ಟೇಪ್ ರೆಕಾರ್ಡರ್ ಇಟ್ಟು ತುಮ್ಸಾ ನಹೀಂ ದೇಖಾ ಚಿತ್ರದ LPಯಲ್ಲಿದ್ದ ಅಷ್ಟೂ ಹಾಡುಗಳನ್ನು ಧ್ವನಿಮುದ್ರಿಸಿಕೊಂಡಿದ್ದೆ.  ಅವರ ಪತ್ನಿ ಉರಿಸಿದ್ದ ಸೀಮೆ ಎಣ್ಣೆ ಸ್ಟವ್ ಹೊರಡಿಸುತ್ತಿದ್ದ ಹಿಸ್ ಶಬ್ದವೂ ಜೊತೆಗೇ ರೆಕಾರ್ಡ್ ಆಗಿತ್ತು!  ಪೂನಾದಲ್ಲಿರುವ ನಮ್ಮ ಅಣ್ಣನ ಮನೆಯಲ್ಲೂ ಒಂದು ಗ್ರಾಮೊಫೋನ್ ರೆಕಾರ್ಡ್ ಪ್ಲೇಯರ್ ಇತ್ತು.  ಬಾಡಿಗೆಗೆ ಗ್ರಾಮೊಫೋನ್ ರೆಕಾರ್ಡುಗಳನ್ನು ತಂದು ಅದರಲ್ಲಿ ನುಡಿಸಿ ಅನೇಕ ಹಾಡುಗಳನ್ನು ಕ್ಯಾಸೆಟ್ಟಲ್ಲಿ  ಧ್ವನಿಮುದ್ರಿಸಿಕೊಂಡಿದ್ದೆವು. ಈ ರೀತಿ ಗ್ರಾಮೊಫೋನ್ ರೆಕಾರ್ಡುಗಳಿಂದ ನೇರವಾಗಿ ನಮ್ಮ ಟೇಪ್ ರೆಕಾರ್ಡರಲ್ಲಿ ಧ್ವನಿಮುದ್ರಿಸಿದಾಗ pre recorded ಕ್ಯಾಸೆಟ್ಟುಗಳಲ್ಲೂ ಸಿಗದ ಅತ್ಯುತ್ಕೃಷ್ಟ  ಮಟ್ಟದ ರೆಕಾರ್ಡಿಂಗ್ ಲಭ್ಯವಾಗುತ್ತಿತ್ತು.  ಹಿಂದಿನ ಕಪ್ಪು ಬಿಳುಪು ಟಿ.ವಿ. ಹಾಗೂ ರೇಡಿಯೊದಿಂದ ನೇರವಾಗಿ ಮಾಡಿದ ರೆಕಾರ್ಡಿಂಗ್ ಕೂಡ ಬಲು ಉತ್ತಮವಾಗಿರುತ್ತಿತ್ತು.

     ಇನ್ನು ಸಿಗಲಾರದ ಕೆಲವು ಅಮೂಲ್ಯ ಧ್ವನಿಮುದ್ರಣಗಳನ್ನು ಕೆಲವು ಸಲ ಕಣ್ತಪ್ಪಿನಿಂದ, ಕೆಲವೊಮ್ಮೆ ಇನ್ನೇನನ್ನೋ ರೆಕಾರ್ಡ್ ಮಾಡಲು ಕ್ಯಾಸೆಟ್ ಅಗತ್ಯ ಬಿದ್ದುದರಿಂದ ಅಳಿಸಿ ಹಾಕಿ ಆ ಮೇಲೆ ಪಶ್ಚಾತ್ತಾಪ ಪಟ್ಟದ್ದಿದೆ.  ನಾವು  ಕಲಾನಿಕೇತನ ಸಂಗೀತಶಾಲೆಯ ವಿದ್ಯಾರ್ಥಿಗಳು ನವರಾತ್ರಿ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ್ದ ಸುಮಾರು ಒಂದು ಗಂಟೆಯ ವೀಣಾ-ವೇಣು ಕಾರ್ಯಕ್ರಮದ ಧ್ವನಿಮುದ್ರಣ ಹಾಗೆ ಅಳಿಸಿಹೋದವುಗಳ ಪೈಕಿ ಒಂದು.  ನಮ್ಮ ತಾಯಿಯವರ ಪಂಚಭಾಷಾ ಹಾಡು, ಈಗಿಲ್ಲದ ನಮ್ಮ ಹಿರಿಯಣ್ಣಂದಿರ ಪೂಜಾಮಂತ್ರಗಳು,  ನಮ್ಮ ಆಫೀಸಿನಲ್ಲಿ ಸಂಜೆ ನಡೆಸುತ್ತಿದ್ದ ದಿನ ನಿತ್ಯದ ‘ಆರ್ಕೆಷ್ಟ್ರಾ’,  ಕ್ಲಬ್ ಡೇ ಸಂದರ್ಭದ ರಸಮಂಜರಿ ಭಾಗಗಳು, ಮಕ್ಕಳು ಚಿಕ್ಕವರಾಗಿದ್ದಾಗ ಆಡಿದ ಮಾತುಗಳು, ಹಾಡಿದ ಹಾಡುಗಳು, ನಮ್ಮೂರಿನ ನದಿಯ ಕಟ್ಟ ಕಟ್ಟಿ ಕೆಲವೇ ದಿನಗಳಲ್ಲಿ ಕಡಿದುಹೋದಾಗ ನಡೆದ ಊರವರ ಬಿಸಿ ಬಿಸಿ ವಾಗ್ವಾದ ಮುಂತಾದವುಗಳು ಇನ್ನೂ ಭದ್ರವಾಗಿವೆ. 

    ಕ್ಯಾಸೆಟ್ಟುಗಳನ್ನು ಇತರರು ಕೇಳಿ ಕೊಂಡೊಯ್ಯುವ ಸಂದರ್ಭ ಬರದಂತೆ ಎಚ್ಚರ ವಹಿಸುತ್ತಿದ್ದೆ.  ಏಕೆಂದರೆ ಪ್ರಸಿದ್ಧ ಶ್ಲೋಕವೊಂದನ್ನು ಕೊಂಚ ಬದಲಾಯಿಸಿ ಕ್ಯಾಸೆಟ್ ಚ ಪುಸ್ತಕಂ ವಿತ್ತಂ ಪರಹಸ್ತಗತಂ ಗತಂ| ಯದಿಚೇತ್ ಪುನರಾಯಾತಮ್ ನಷ್ಟಂ ಭ್ರಷ್ಟಂಚ ಖಂಡಿತಂ || (ಕ್ಯಾಸೆಟ್, ಪುಸ್ತಕ ಮತ್ತು ಧನ ಇನ್ನೊಬ್ಬರ ಕೈಗೆ ಹೋದರೆ ಹೋದಂತೆಯೇ. ಒಂದು ವೇಳೆ ಮರಳಿದರೂ ಮೊದಲಿದ್ದಂತೆ ಇರಲಾರವು. ಮೂಲ ಶ್ಲೋಕದಲ್ಲಿ ಕ್ಯಾಸೆಟ್ ಜಾಗದಲ್ಲಿ ಬೇರೆ ಪದವಿದೆ.)ಎಂದು ನಂಬಿದವನು ನಾನು!  ಅಂಥ ಪ್ರಸಂಗ ಬಂದಾಗ "ನೀವೊಂದು ಖಾಲಿ ಕ್ಯಾಸೆಟ್ ಕೊಡಿ, ಅದರಲ್ಲಿ ಧ್ವನಿಮುದ್ರಿಸಿ ಕೊಡುತ್ತೇನೆ " ಅನ್ನುತ್ತಿದ್ದೆ.  ಇದರಿಂದಾಗಿ ಕೆಲವರು ಅಸಮಾಧಾನಗೊಂಡದ್ದೂ ಇದೆ.

     ಈಗ ಈ ಕ್ಯಾಸೆಟ್ಟುಗಳಲ್ಲಿ ಅಡಗಿ ಕುಳಿತಿರುವ ಬಹುತೇಕ ಧ್ವನಿತರಂಗಗಳು  ಡಿಜಿಟಲೀಕರಣಗೊಂಡು ಕಂಪ್ಯೂಟರಿನುದರ ಸೇರಿದ್ದರೂ ಈಗಲೂ ಒಮ್ಮೊಮ್ಮೆ ಟೇಪ್ ರೆಕಾರ್ಡರಲ್ಲಿ ಇವುಗಳ analog ದನಿಯನ್ನು ಆಲಿಸಿ ಆನಂದಿಸುವುದಿದೆ. ವಾಸ್ತವವಾಗಿ  mp3 ಇತ್ಯಾದಿ ವಿಧಗಳಿಗೆ ಪರಿವರ್ತಿತವಾದ  ಧ್ವನಿಯನ್ನು ಕೇಳುವಾಗ ಮೂಲದಲ್ಲಿದ್ದ ಧ್ವನಿಯ ಒಂದಂಶ ಮಾತ್ರ ನಮ್ಮ ಕಿವಿಗೆ ಬಿದ್ದು ವಿಜ್ಞಾನವು ನಮಗೆ ಮಾಡುವ ‘ಮೋಸ’ಕ್ಕೆ ಬಲಿಯಾಗುತ್ತಿರುತ್ತೇವೆ.  ಏಕೆಂದರೆ  PCM(Pulse Code Modulation)ನಲ್ಲಿ sampling ಮೂಲಕ digital ರೂಪಕ್ಕೆ ಪರಿವರ್ತನೆ ನಡೆಯುತ್ತದೆ. ಸ್ಥೂಲವಾಗಿ ಹೇಳುವುದಾದರೆ sampling ಮಾಡುವಾಗ ಧ್ವನಿಯ ವಾಹಿನಿಯನ್ನು ಅತಿ ಚಿಕ್ಕ ಚಿಕ್ಕ ತುಂಡುಗಳಾಗಿ ವಿಭಾಗಿಸಿ ಉದಾಹರಣೆಗೆ 1ನೇ ತುಂಡು, 33ನೇ ತುಂಡು,  65ನೇ ತುಂಡು ಇತ್ಯಾದಿಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. Sampling rate ಹೆಚ್ಚಾಗಿದ್ದಷ್ಟು ಹತ್ತಿರದ ತುಂಡುಗಳನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ಧ್ವನಿಯ ಗುಣಮಟ್ಟ ಚೆನ್ನಾಗಿರುತ್ತದೆ.  128 KBPSಗಿಂತ ಕಮ್ಮಿ bit rate ಮತ್ತು 44.1Khzಗಿಂತ ಕಮ್ಮಿ sampling rate  ಇರುವ mp3 ಧ್ವನಿಯಂತೂ ತುಂಬಾ ನೀರಸವಾಗಿರುತ್ತದೆ. ಒಂದರ್ಥದಲ್ಲಿ ಡೇರಿಯವರು ನಮಗೆ ಕೊಡುವ ಕೆನೆ ರಹಿತ toned milk ಇದ್ದಂತೆ.   ಹೀಗಾಗಿ analog ಧ್ವನಿಯ ಸುಖ digitalನಲ್ಲಿ ಎಂದೂ ಸಿಗಲಾರದು.

     ಕ್ಯಾಸೆಟ್ಟುಗಳ ಆಗಮನದಿಂದ ಅನೇಕ ಸ್ಥಳೀಯ ಕಲಾವಿದರು ಮುಂಚೂಣಿಗೆ ಬರುವಂತಾಯಿತು.  ಅದುವರೆಗೆ ಧ್ವನಿಮುದ್ರಣಕ್ಕಾಗಿ ದೂರದ ಮದರಾಸು, ಮುಂಬಯಿಗಳಿಗೆ ಹೋಗಿ ಗ್ರಾಮೊಫೋನ್ ತಟ್ಟೆಗಳನ್ನೇ ಹೊರತರಬೇಕಾಗುತ್ತಿತ್ತು.  ಕ್ಯಾಸೆಟ್ಟುಗಳಲ್ಲದಿದ್ದರೆ ವಿದ್ಯಾಭೂಷಣ, ರಾಜಕುಮಾರ್, ನರಸಿಂಹ ನಾಯಕ್ ಭಕ್ತಿಗೀತೆಗಳು, ನೂರಾರು ಯಕ್ಷಗಾನ ಪ್ರಸಂಗಗಳು ಮನೆ ಮನೆ ತಲುಪುತ್ತಿರಲಿಲ್ಲ. ಆಗ ಸುಬ್ರಹ್ಮಣ್ಯ ಮಠಾಧೀಶರಾಗಿದ್ದ  ವಿದ್ಯಾಭೂಷಣರ ಹಾಡುಗಾರಿಕೆಗೂ ನನ್ನ ಟೇಪ್ ರೆಕಾರ್ಡರಿಗೂ ವಿಶೇಷ ನಂಟೊಂದಿದೆ.   ಭಕ್ತಿಸಂಗೀತ ಕ್ಷೇತ್ರದಲ್ಲಿ ಆಗಷ್ಟೇ ಪ್ರವರ್ಧಮಾನಕ್ಕೆ ಬರತೊಡಗಿದ್ದ ಅವರ ಕೆಲವು ಹಾಡುಗಳನ್ನು ಮೊತ್ತ ಮೊದಲ ಬಾರಿಗೆ 1979ರಲ್ಲಿ ನಮ್ಮ ಗುರು ಗೋಪಾಲಕೃಷ್ಣ ಅಯ್ಯರ್ ಅವರ  ಕೊಳಲು ವಾದನದ ಹಿಮ್ಮೇಳದೊಂದಿಗೆ ನನ್ನ ಟೇಪ್ ರೆಕಾರ್ಡರಲ್ಲಿ ಧ್ವನಿ ಮುದ್ರಿಸಿ ಅಯ್ಯರ್ ಅವರ ಭಾವ ಟಿ.ವಿ.ಗೋಪಾಲಕೃಷ್ಣನ್  ಅವರ ಸೂಚನೆ ಮೇರೆಗೆ ಮದರಾಸಿಗೆ ಆಡಿಷನ್ನಿಗೆ ಕಳಿಸಲಾಗಿತ್ತು.  ಇದಕ್ಕಾಗಿ ನನ್ನಲ್ಲಿದ್ದ ಹಸಿರು ಬಣ್ಣದ ಹೊಚ್ಚ ಹೊಸ Sony C90 ಕ್ಯಾಸೆಟ್ ಉಪಯೋಗಿಸಿದ ನೆನಪು ನನ್ನಲ್ಲಿನ್ನೂ ಹಸಿರಾಗಿದೆ.  ಇದಕ್ಕಾಗಿ ನಾವು 1979 ಜನವರಿ 20ರಂದು ಸುಬ್ರಹ್ಮಣ್ಯಕ್ಕೆ ಹೋದ ಘಟನೆ ನನ್ನ ದಿನಚರಿಯಲ್ಲಿ ದಾಖಲಾಗಿದೆ.(ಅದರಲ್ಲಿ ಸುಬ್ರಮ್ಹಣ್ಯ ಎಂದು ತಪ್ಪಾಗಿ ಬರೆದಿದ್ದೆ!)  ಆ ಕ್ಯಾಸೆಟ್ಟನ್ನು ಕೂಡಲೇ ಮದರಾಸಿಗೆ ಕಳಿಸಬೇಕಾಗಿದ್ದರಿಂದ ಇನ್ನೊಂದು ಟೇಪ್ ರೆಕಾರ್ಡರ್ ಹುಡುಕಿ ಕಾಪಿ ಮಾಡಿಟ್ಟುಕೊಳ್ಳುವಷ್ಟು ವ್ಯವಧಾನವಿರಲಿಲ್ಲ.



     ಶಾಲಾ ವಾರ್ಷಿಕೋತ್ಸವಗಳಲ್ಲಿ ಅಧ್ಯಾಪಕರು ಕಲಿಸಿಕೊಟ್ಟ ಹಾಡು, ನೃತ್ಯಗಳ ಬದಲಿಗೆ ಫಿಲ್ಮಿ ಡ್ಯಾನ್ಸುಗಳು   ಕಾಣಿಸಿಕೊಳ್ಳುವಂತಾಗಲು ಕ್ಯಾಸೆಟ್ಟುಗಳೇ ಕಾರಣ. ನುಡಿಸಬೇಕಾದ ಕ್ಯಾಸೆಟ್ಟು ಬದಲಾದಾಗ ಅಥವಾ ಕೆಟ್ಟು ನಡುವಿನಲ್ಲಿ ನಿಂತುಬಿಟ್ಟಾಗ ವೇದಿಕೆಯಲ್ಲಿ ಕಾಣಸಿಗುವ ದೃಶ್ಯ ಆ ನೃತ್ಯಕ್ಕಿಂತ ಹೆಚ್ಚು ಮನರಂಜನೆ ನೀಡುತ್ತಿದ್ದುದುಂಟು! ಈಗಂತೂ ಈ ಫಿಲ್ಮಿ ಡ್ಯಾನ್ಸುಗಳು   "ನಿಮಗೆ ಬೇಕಿದ್ದ ಹಾಡು ತಂದು ಡ್ಯಾನ್ಸ್ ಮಾಡಿ ಮಕ್ಕಳೇ" ಎಂದು ಅಧ್ಯಾಪಕರು ಮಕ್ಕಳಿಗೇ ಆಯ್ಕೆಯ ಸ್ವಾತಂತ್ರ್ಯ ಕೊಡುವ  ಹಂತಕ್ಕೆ ಮುಟ್ಟಿವೆ.

     ಟೇಪ್ ಸಿಕ್ಕಿ ಹಾಕಿಕೊಳ್ಳುವುದು, headಗೆ ಟೇಪಿನ ಅಂಶ ಅಂಟಿಕೊಂಡು ಸರಿಯಾಗಿ ಕೇಳಿಸದಂತಾಗುವುದು, ಇದ್ದಕ್ಕಿದ್ದಂತೆ ಕೀಚ್ ಕೀಚ್ ಎಂಬ ವಿಕಾರ ಧ್ವನಿ ಕೇಳಿಸತೊಡಗುವುದು, ಕ್ಯಾಸೆಟ್ಟಿನ ಉತ್ತರಾರ್ಧದಲ್ಲಿ ವೇಗ ಕಮ್ಮಿಯಾಗುತ್ತಾ ಹೋಗಿ ನಿಂತೇ  ಬಿಡುವುದು, ಟೇಪನ್ನು ಕೈಬೆರಳಿಂದಲೂ ತಿರುಗಿಸಲಾಗದಷ್ಟು ಬಿಗಿಯಾಗುವುದು, ಬೇರೆಡೆ ಧ್ವನಿಮುದ್ರಿತ/ಪೂರ್ವ ಮುದ್ರಿತ ಕ್ಯಾಸೆಟ್ ಆಲಿಸುವಾಗ ವೇಗ ವ್ಯತ್ಯಾಸದಿಂದ ರಸಭಂಗವಾಗುವುದು ಮುಂತಾದವು ಕ್ಯಾಸೆಟ್ ಯುಗದಲ್ಲಿ ಅನುಭವಿಸಬೇಕಾಗುತ್ತಿದ್ದ ಕಿರಿಕಿರಿಗಳು.  ಪೆನ್ಸಿಲ್ ಉಪಯೋಗಿಸಿ ಸಡಿಲುಗೊಂಡ ಟೇಪ್ ಬಿಗಿಗೊಳಿಸುತ್ತಿದ್ದುದಂತೂ ಅಂದಿನ ದಿನಗಳಲ್ಲಿ ಕಂಡುಬರುತ್ತಿದ್ದ ಸಾಮಾನ್ಯ ದೃಶ್ಯ.  ಇಷ್ಟೆಲ್ಲ ಇದ್ದರೂ ಆ ಯುಗಕ್ಕೆ ಅದರದ್ದೇ ಆದ ಒಂದು ಮುದವಿತ್ತು.

     ಕೆಳಗಿನ ಚಿತ್ರದಲ್ಲಿರುವ ನನ್ನ ಕ್ಯಾಸೆಟ್ ಸಂಗ್ರಹದಲ್ಲಿ ಸೋನಿ ಟೇಪುಗಳದ್ದೇ ಸಿಂಹಪಾಲು ಎಂಬುದನ್ನು ಗಮನಿಸಬಹುದು. ಮೇಲೆ ಹೇಳಿದ ಕ್ಯಾಸೆಟ್ ಕಿರಿಕಿರಿಗಳು ಸೋನಿಯಲ್ಲಿ ಇಲ್ಲವೆನ್ನುವಷ್ಟು ಕಮ್ಮಿ.  ಹಾಗಾಗಿ ನಾನು ಸೋನಿ ಅಭಿಮಾನಿ.  ನನ್ನ ಅಭಿಮಾನಕ್ಕೆ ಪೂರಕವಾಗಿ ರೇಡಿಯೋ ಸಿಲೋನಿನಲ್ಲಿ ಬರುತ್ತಿದ್ದ ಸೋನಿ ಟೇಪ್ ಕುರಿತ ಜಿಂಗಲ್ ಒಂದನ್ನು ಕೇಳಿ.




     ನಾನು ಕಲಾನಿಕೇತನದಲ್ಲಿ ಕೊಳಲು ಕಲಿಯುತ್ತಿದ್ದಾಗ  1978ರಲ್ಲಿ ಆಕಾಶವಾಣಿಯ ಯುವವಾಣಿಯಲ್ಲಿ ಕೆ.ಹರಿಶ್ಚಂದ್ರನ್ ಮೃದಂಗ ಮತ್ತು ಎ.ಆರ್.ಕೃಷ್ಣಮೂರ್ತಿ ವಯಲಿನ್ ಪಕ್ಕವಾದ್ಯದೊಂದಿಗೆ ನುಡಿಸಿದ ಪರಿಧಾನಮಿಚ್ಚಿತೆ ಕೀರ್ತನೆಯನ್ನು ರೇಡಿಯೊದಿಂದ ನೇರವಾಗಿ ಕ್ಯಾಸೆಟ್ಟಲ್ಲಿ ಧ್ವನಿಮುದ್ರಿಸಿಕೊಂಡಿದ್ದೆ.  ಅದರ mp3 ರೂಪ ಇಲ್ಲಿದೆ.  ಆರಂಭದಲ್ಲಿ ಕೆ.ಟಿ.ಕೃಷ್ಣಕಾಂತ್ ಅವರ announcement ಕೇಳಬಹುದು.

 

  

Friday 3 June 2016

ಹೆಚ್ಚು ಹಾಡದವರು





     50-60ರ ದಶಕಗಳಲ್ಲಿ ಘಂಟಸಾಲ, ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶೀಲ ಅವರು ಮುಖ್ಯ ಗಾಯಕರಾಗಿದ್ದು ಎಲ್.ಆರ್.ಈಶ್ವರಿ, ಪಿ.ಲೀಲ, ಪೀಠಾಪುರಂ ನಾಗೇಶ್ವರ ರಾವ್, ಬಿ.ಕೆ.ಸುಮಿತ್ರ, ಜೇಸುದಾಸ್ ಮುಂತಾದವರು ಕೂಡ ಸಂದರ್ಭಕ್ಕೆ ತಕ್ಕಂತೆ ಸಾಕಷ್ಟು ಹಾಡುಗಳನ್ನು ಹಾಡುತ್ತಿದ್ದರು.   ಇವರಷ್ಟೇ ಅಲ್ಲದೆ ಆ ಕಾಲದಲ್ಲಿ ಕೇವಲ ಬೆರಳೆಣಿಕೆಯ ಹಿಟ್ ಹಾಡುಗಳನ್ನು ಹಾಡಿದ ಗಾಯಕ ಗಾಯಕಿಯರ ದೊಡ್ಡ ಗಡಣವೇ ಇತ್ತು. ಇವರಲ್ಲಿ ಹೆಚ್ಚಿನವರು ಕನ್ನಡಿಗರಾಗಿರಲಿಲ್ಲ.  ಆದರೂ ಎಷ್ಟೋ ಹುಟ್ಟು ಕನ್ನಡಿಗರಿಂದ ಹೆಚ್ಚು ಶುದ್ಧವಾಗಿ ಸ್ಪಷ್ಟವಾಗಿ ಕನ್ನಡ ಪದಗಳನ್ನು ಉಚ್ಚರಿಸುತ್ತಿದ್ದರು.  ಇವರ ಬಗ್ಗೆ ಚರ್ಚೆ ನಡೆದದ್ದಾಗಲೀ, ಪತ್ರಿಕೆಗಳಲ್ಲಿ ಲೇಖನಗಳು ಬಂದದ್ದಾಗಲೀ ಕಮ್ಮಿ. ಮುಂದೆ 70ರ ದಶಕದ ಮಧ್ಯಭಾಗದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ - ವಾಣಿ ಜಯರಾಂ ಯುಗ ಆರಂಭವಾದ ಮೇಲಂತೂ ಇವರೆಲ್ಲ ಪೂರ್ತಿ ಹಿನ್ನೆಲೆಗೆ ಸರಿದು ಹೋದರು. ಏಕತಾನತೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದ್ದ ಅಂಥ ಹೆಚ್ಚು ಹಾಡದ ಪ್ರತಿಭಾನ್ವಿತರ ಬಗ್ಗೆ ಒಂದಷ್ಟು ನೆನಪು ಮಾಡಿಕೊಳ್ಳೋಣ.

1. ಎ.ಪಿ.ಕೋಮಲ

ದಾರಿ ತಪ್ಪಿದ ಮಗ ಚಿತ್ರದ ಕಾಪಾಡು ಶ್ರೀ ಸತ್ಯ ನಾರಾಯಣ ಹಾಡು ನೀವು ಕೇಳಿದ್ದೀರಾದರೆ ಪಿ.ಬಿ.ಎಸ್ ಮತ್ತು ಎಸ್.ಜಾನಕಿ ಅವರೊಂದಿಗೆ ಇವರ ಧ್ವನಿಯನ್ನೂ ನೀವು ಕೇಳಿದ್ದೀರಿ.  ರಣಧೀರ ಕಂಠೀರವ ಚಿತ್ರದ ರತಿ ಸುಖ ಸಾರೆ ಎಂಬ ಜಯದೇವ ಅಷ್ಟಪದಿ, ಭೂಕೈಲಾಸ ಚಿತ್ರದ ಈ ದೇಹ ಮೂರು ದಿನ ಅಲ್ಲವೇನೋ, ಓಹಿಲೇಶ್ವರನೀ ಎನ್ನ ಜೀವ ಶರಣು ಮಹಾದೇವ, ಕಿತ್ತೂರು ಚೆನ್ನಮ್ಮಆಲಕ್ಕೆ ಹೂವಿಲ್ಲ ಇವರು ಹಾಡಿದ ಇನ್ನು ಕೆಲವು ಹಾಡುಗಳು. ಸತಿ ಶಕ್ತಿ ಚಿತ್ರಕ್ಕಾಗಿ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನದಲ್ಲಿ ಅವರು ಹಾಡಿದ ಮಾತೆಗೆ ಮಿಗಿಲಾದ ದೇವರಿಲ್ಲ ಎಂಬ  ಸುಂದರ ಹಾಡು ಇಲ್ಲಿದೆ.



2. ಜಿಕ್ಕಿ

ಇವರ ನಿಜ ನಾಮಧೇಯ ಪಿ.ಜಿ.ಕೃಷ್ಣವೇಣಿ ಎಂದಾದರೂ ಜಿಕ್ಕಿ ಎಂದೇ ಪ್ರಸಿದ್ಧರು.  ಭಕ್ತ ಕನಕದಾಸಬಳ್ಳಿ ಬಳ್ಳಿಯಲ್ಲಿ ಹೂವ ನೋಡೇ ಹೆಣ್ಣೆ ಇವರ  ಪ್ರಸಿದ್ಧ ಹಾಡು. ಹಿಂದಿಯ  ಕುಹೂ ಕುಹೂ ಬೋಲೆ ಕೊಯಲಿಯಾದ ಮೂಲ ತೆಲುಗು ಹಾಡನ್ನು ಘಂಟಸಾಲ ಜೊತೆಗೆ ಇವರೇ ಹಾಡಿದ್ದು.. ಮನೆ ತುಂಬಿದ ಹೆಣ್ಣು ಚಿತ್ರಕ್ಕಾಗಿ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ ಅವರು ಹಾಡಿದ  ಝಣ ಝಣ ತಕತಾ ಎಂಬ ಹಾಡನ್ನು ಈಗ ಕೇಳಿ.



3. ಸೂಲಮಂಗಲಂ ರಾಜಲಕ್ಷ್ಮಿ

ಸೂಲಮಂಗಲಂ ಸಹೋದರಿಯರು ಎಂದು ಭಕ್ತಿಗೀತೆಗಳ ಸಾಮ್ರಾಜ್ಯದಲ್ಲಿ ಖ್ಯಾತರಾದ ಜಯಲಕ್ಷ್ಮಿ ಮತ್ತು ರಾಜಲಕ್ಷ್ಮಿ ಅವರ ಪೈಕಿ ಸಿನಿಮಾ ರಂಗದಲ್ಲಿ ಹೆಚ್ಚು ಮಿಂಚಿದ್ದು ರಾಜಲಕ್ಷ್ಮಿ. ಇವರು ಹಾಡಿದ ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ ಹಾಡನ್ನು ಕೇಳದವರು, ಕೇಳಿ ಮೆಚ್ಚದವರು ಇರಲಾರರು. ವಿಶೇಷವೆಂದರೆ ಕನ್ನಡ ಚಿತ್ರ ರಂಗದಲ್ಲಿ ಇವರ ಪ್ರತಿಭೆಯನ್ನು ಹೆಚ್ಚು ಬಳಸಿಕೊಂಡವರು ಟಿ.ಜಿ.ಲಿಂಗಪ್ಪ ಮಾತ್ರ. ಪಂತುಲು ಅವರ ಶ್ರೀ ಕೃಷ್ಣ ದೇವರಾಯ ಚಿತ್ರದ ಕೃಷ್ಣನ ಹೆಸರೇ ಲೋಕಪ್ರಿಯ ಹಾಡಲ್ಲೂ ಟಿ.ಜಿ.ಲಿಂಗಪ್ಪ ಅವರು ರಾಜಲಕ್ಷ್ಮಿ ಅವರ ಧ್ವನಿಯನ್ನು ಬಳಸಿಕೊಂಡಿದ್ದರು. ಸ್ಕೂಲ್ ಮಾಸ್ಟರ್ ಚಿತ್ರದ ಭಾಮೆಯ ನೋಡಲು ತಾ ಬಂದ ಇವರು ಹಾಡಿದ ಇನ್ನೊಂದು ಬಲು ಪ್ರಸಿದ್ಧ ಹಾಡು.  ಅದೇ ಚಿತ್ರದ ಇನ್ನೇನು ಆನಂದ ಬೇಕಾಗಿದೆ ಎಂಬ ಮಧುರ ಹಾಡು ನಿಮಗಾಗಿ.



4. ಕೆ.ಜಮುನಾರಾಣಿ

ಪ್ರತಿಜ್ಞೆ ಚಿತ್ರದಲ್ಲಿ ಪೀಠಾಪುರಂ ನಾಗೇಶ್ವರ ರಾವ್ ಅವರೊಂದಿಗೆ ಹಾಡಿದ ನಾ ನಿನ್ನ ಮೋಹಿಸೆ ಬಂದಿಹೆನು ಇವರ ಪ್ರಸಿದ್ಧ ಹಾಡುಗಳ ಪೈಕಿ ಒಂದು.  ಆದರೆ ನಾನು ಇಲ್ಲಿ ಕೇಳಿಸಲಿರುವುದು ವಿಜಯನಗರದ ವೀರ ಪುತ್ರ ಚಿತ್ರಕ್ಕಾಗಿ ಇವರು ಹಾಡಿದ ವಿಶ್ವನಾಥನ್ ರಾಮಮೂರ್ತಿ ಅವರ ವೈಶಿಷ್ಟ್ಯಪೂರ್ಣ ರಾಗಸಂಯೋಜನೆಯುಳ್ಳ ವೈಯಾರ ತೋರುತ ಸಿಂಗಾರ ಬೀರುತ ಎಂಬ ಹಾಡು.  Youtubeನಲ್ಲಿ ಲಭ್ಯವಿರುವ ಈ ಚಿತ್ರದಲ್ಲಿ ಆರ್. ನಾಗೇಂದ್ರ ರಾವ್ ಅವರ ಮೇಲೆ ಚಿತ್ರಿತವಾದ ಈ dream sequence ಹಾಡನ್ನು ನೋಡಬಹುದು.  ನಾನು ಕೇಳಿಸಲಿರುವ ಹಾಡಲ್ಲಿ ಚಿತ್ರದಲ್ಲಿಲ್ಲದ ಒಂದು ಚರಣ ಇದೆ.



5. ಸ್ವರ್ಣಲತಾ

70ರ ದಶಕದ ನಂತರ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಇದೇ ಹೆಸರಿನ ಇನ್ನೊಬ್ಬ ಗಾಯಕಿಯೂ ಇದ್ದರು. ಇಲ್ಲಿ ಚರ್ಚಿಸುತ್ತಿರುವುದು ಹಳೆಯ ಕಾಲದ ಸ್ವರ್ಣಲತಾ ಬಗ್ಗೆ. ಕನ್ನಡದಲ್ಲಿ ಇವರು ಹಾಡಿದ್ದು ಬಲು ಕಮ್ಮಿ.  ಆದರೆ ಹಾಡಿದ್ದಷ್ಟೂ ಸೂಪರ್ ಹಿಟ್.  ಒಂದು ಉದಾಹರಣೆ ಮಾಯಾ ಬಜಾರಿಆಹಾ ನನ್ ಮದ್ವೆಯಂತೆ.  ಇನ್ನೊಂದು ಸತ್ಯಹರಿಶ್ಚಂದ್ರ ಚಿತ್ರದ  ನನ್ನ ನೀನು ನಿನ್ನ ನಾನು.  ರೇಡಿಯೊದಲ್ಲಿ ಕೇಳಿಬರುತ್ತಿದ್ದ 78 rpm ಧ್ವನಿಮುದ್ರಿಕೆಯ ಈ ಹಾಡಲ್ಲಿ ಮಳೆಗಾಲ ಮಾಡಿಗಿಳಿದು ಬರಲಾರೆ ಮೆಲ್ಲನೆ ಬಾರಯ್ಯ ಗೋಡೆ ಏರಿ ಎಂಬ ಸಾಲು ಇತ್ತು.  ಆದರೆ ಈಗ ಲಭ್ಯವಿರುವ versionನಲ್ಲಿ  ಆ ಸಾಲು ಮಾಯವಾಗಿದೆ. 



6. ಶ್ರೀರಂಗಂ ಗೋಪಾಲರತ್ನಂ

ಶಾಸ್ತ್ರೀಯ ಹಾಡುಗಾರರಾದ ಇವರು ಚಲನಚಿತ್ರಕ್ಕಾಗಿ ಹಾಡಿದ್ದು ಒಂದೇ ಹಾಡು.  ಆದರೆ ಅದೊಂದೇ ನೂರಕ್ಕೆ ಸಮ.  ಅದೇ ಸುಬ್ಬಾ ಶಾಸ್ತ್ರಿ ಚಿತ್ರದ ಕೃಷ್ಣನ ಕೊಳಲಿನ ಕರೆಪು.ತಿ.ನ ಅವರು ಗೋಕುಲ ನಿರ್ಗಮನ ನಾಟಕಕ್ಕಾಗಿ ರಚಿಸಿದ ಈ ಗೀತೆಯನ್ನು ಚಿತ್ರಕ್ಕಾಗಿ ಸಂಗೀತಕ್ಕೆ ಅಳವಡಿಸಿದವರು ವೀಣಾ ವಿದ್ವಾನ್ ದೊರೆಸ್ವಾಮಿ ಅಯ್ಯಂಗಾರ್. ಈ ಹಾಡಿಗೆ ಸಂಬಂಧಿಸಿದವರು ಯಾರೂ ಚಲನಚಿತ್ರರಂಗದ ವೃತ್ತಿಪರರಲ್ಲದಿದ್ದರೂ ಚಿತ್ರಸಂಗೀತದ ಮೂಲ ಲಕ್ಷಣಗಳಾದ ಅಚ್ಚುಕಟ್ಟುತನ, ಸ್ಪಷ್ಟತೆ, ಸುಶ್ರಾವ್ಯತೆ ಎಲ್ಲವೂ ಈ ಹಾಡಿನಲ್ಲಿ ಮೇಳೈಸಿರುವುದು ಅಚ್ಚರಿ ಹುಟ್ಟಿಸುತ್ತದೆ.



7. ಟಿ.ಜಿ.ಲಿಂಗಪ್ಪ

ಸಂಗೀತ ನಿರ್ದೇಶಕರ ಹೆಸರು ಇಲ್ಲೇಕೆ ಬಂತು ಎಂದು ಅಚ್ಚರಿಗೊಂಡಿರಾ?  ಸ್ಕೂಲ್ ಮಾಸ್ಟರ್ ಚಿತ್ರದ ಸ್ವಾಮಿ ದೇವನೆ ಲೋಕಪಾಲನೆ ಹಾಡು ನೀವು ಕೇಳಿರುತ್ತೀರಾದರೂ ಅದನ್ನು ಟಿ.ಜಿ. ಲಿಂಗಪ್ಪ ಅವರು ಸ್ವತಃ ಹಾಡಿದ್ದು ಎಂದು ಅನೇಕರಿಗೆ ಗೊತ್ತಿರಲಾರದು.  (ಇದೇ ಹಾಡನ್ನು ಪಂತುಲು ಅವರ ಕಿತ್ತೂರು ಚೆನ್ನಮ್ಮ ಚಿತ್ರದಲ್ಲೂ ಆರಂಭದ ಶಾಲಾ ಪ್ರಾರ್ಥನೆ ದೃಶ್ಯದಲ್ಲಿ ಬಳಸಿಕೊಳ್ಳಲಾಗಿತ್ತು.)  ಸ್ಕೂಲ್ ಮಾಸ್ಟರ್ ಚಿತ್ರದ ರಾಧಾ ಮಾಧವ ವಿನೋದ ಹಾಸ ಮತ್ತು ಈಗ ನೀವು ಕೇಳಲಿರುವ ಸೊಂಪಾದ ಸಂಜೆವೇಳೆ ಹಾಡುಗಳನ್ನೂ ಪಿ.ಸುಶೀಲ ಜೊತೆ ಅವರೇ ಹಾಡಿದ್ದು.  ಬಹುಶಃ ಇದು ಮೌತ್ ಆರ್ಗನ್ ಬಳಕೆಯಾದ ಕನ್ನಡದ ಮೊದಲ ಹಾಡು. ಮುಂದೆ ಬೆಟ್ಟದ ಹುಲಿ ಚಿತ್ರದ ಆಡುತಿರುವ ಮೋಡಗಳೆ ಮತ್ತು ದೇವರ ಗುಡಿ ಚಿತ್ರದ ಚೆಲುವೆಯ ಅಂದದ ಮೊಗಕೆ ಹಾಗೂ ಮಾಮರವೆಲ್ಲೋ ಹಾಡುಗಳು ಬಿಟ್ಟರೆ ಕನ್ನಡದಲ್ಲಿ ಮೌತ್ ಆರ್ಗನ್ ಕೇಳಿಬಂದದ್ದು ಕಮ್ಮಿ.  ಟಿ.ಜಿ. ಲಿಂಗಪ್ಪನವರ ಗಾಯನ ಪ್ರತಿಭೆ ಒಂದೇ ಚಿತ್ರಕ್ಕೆ ಸೀಮಿತವಾಗಲು ಕಾರಣವೇನೆಂದು ತಿಳಿದಿಲ್ಲ.  ಬಿ.ಆರ್.ಪಂತುಲು ಅವರು ಜೀವಂತವಿರುವವರೆಗೆ ಪದ್ಮಿನಿ ಪಿಕ್ಚರ್ಸ್‌ನ ಎಲ್ಲ ಕನ್ನಡ ಚಿತ್ರಗಳಿಗೂ  ಸಂಗೀತ ನಿರ್ದೇಶನ ಮಾಡಿದ್ದು ಅವರ ಇನ್ನೊಂದು ಹೆಗ್ಗಳಿಕೆ.



8. ನಾಗೇಂದ್ರ

ರಾಜನ್ ನಾಗೇಂದ್ರ ಜೋಡಿಯ ನಾಗೇಂದ್ರ ಒಳ್ಳೆಯ ಗಾಯಕರೂ ಹೌದು.  ರತ್ನ ಮಂಜರಿಯಾರು ಯಾರು ನೀ ಯಾರು ಇವರ ಸೂಪರ್ ಹಿಟ್ ಹಾಡು.  ನರಸಿಂಹರಾಜು ಅವರಿಗಾಗಿ ಬಹಳಷ್ಟು ಹಾಡುಗಳನ್ನು ಹಾಡಿದ ಇವರು ತಮ್ಮ ಸಂಗೀತ ನಿರ್ದೇಶನದ ಚಿತ್ರಗಳು ಮಾತ್ರವಲ್ಲದೆ ಪೆಂಡ್ಯಾಲ ನಾಗೇಶ್ವರ ರಾವ್ ಸಂಗೀತದ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ಕಾಲ ಕೌಶಿಕನ ಮುಂದೆ ಎಂಬ ಹಾಡು ಮತ್ತು ವಿಜಯಾ ಕೃಷ್ಣಮೂರ್ತಿ ಸಂಗೀತದಲ್ಲಿ ಜೇನುಗೂಡು ಚಿತ್ರಕ್ಕಾಗಿ ಹಾ ಪ್ರಿಯಾ ಕೈಲಾಸ ನಿಲಯಾ ಎಂಬ ಹಾಡನ್ನೂ ಹಾಡಿದ್ದಾರೆ.  ಕಲ್ಯಾಣ್ ಕುಮಾರ್ ಅಭಿನಯದ ಮುತ್ತೈದೆ ಭಾಗ್ಯ ಚಿತ್ರದ ನಮ್ಮೂರೆ ಚಂದ ಹಾಡು ಬಲು ಪ್ರಸಿದ್ಧ.  ಅದೇ ಚಿತ್ರದ ನಾನೊಂದು ಮದುವೆಯ ಮಾಡಿಕೊಂಡೆ ಎಂಬ ನೀವು ಇದುವರೆಗೆ ಕೇಳಿರಲಾರದ ಹಾಡೊಂದು ಇಲ್ಲಿದೆ.



9. ಟಿ.ಎ.ಮೋತಿ

ಬಂಗಾರದ ಮನುಷ್ಯ ಚಿತ್ರದ ಟೈಟಲ್ ಕಾರ್ಡಲ್ಲಿ ಗಾಯಕರ ಪಟ್ಟಿಯಲ್ಲಿ ಇವರ ಹೆಸರನ್ನೂ ನೀವು ನೋಡಿರುತ್ತೀರಿ.  ಅನೇಕ ಗಾಯಕ ಗಾಯಕಿಯರು ಒಟ್ಟು ಸೇರಿ ಹಾಡಿದ ಆ ಚಿತ್ರದ ಹನಿ ಹನಿ ಗೂಡ್ದ್ರೆ ಹಳ್ಳ ಎಂಬ ಹಾಡಿನ ಆರಂಭದ ಸಾಲುಗಳನ್ನು  ಎಂ.ಪಿ.ಶಂಕರ್ ಅವರಿಗಾಗಿ ಹಾಡಿರುವುದು ಇವರೇ. (ಅನೇಕ ಗಾಯಕರಿದ್ದುದರಿಂದ ಗೊಂದಲವುಂಟಾಗಿ ಮುಂದೆ ಎಸ್.ಪಿ.ಬಿ ಧ್ವನಿಗೂ ಎಂ.ಪಿ.ಶಂಕರ್ ಅವರು lip sync ಮಾಡಿರುವುದನ್ನು ಈ ಹಾಡಿನ ವೀಡಿಯೊದಲ್ಲಿ ಗಮನಿಸಬಹುದು!). ಬೇಡರ ಕಣ್ಣಪ್ಪ ಚಿತ್ರದ ಮಾಯೆಗೆ ಸಿಲುಕಿ ಮರುಳಾದೆ ಮನುಜ, ಕನ್ಯಾರತ್ನ ಚಿತ್ರದ ಮೈಸೂರ್ ದಸರಾ ಬೊಂಬೆ , ಮಧುಮಾಲತಿ ಚಿತ್ರದ ಷೋಡಶಿ  ಷೋಡಶಿ  ಇವರು ಹಾಡಿದ ಇನ್ನು ಕೆಲವು ಹಾಡುಗಳು. ದೂರದ ಬೆಟ್ಟ ಚಿತ್ರದ ಟೈಟಲ್ಸ್ ನಲ್ಲಿಯೂ ಗಾಯಕರಾಗಿ ಇವರ ಹೆಸರು ದಾಖಲಾಗಿದೆ.  ಬಹುಶಃ ಆ ಚಿತ್ರದ ಹೋಳಿ ಹಾಡನ್ನು ಗಮನವಿಟ್ಟು ಕೇಳಿದರೆ ಎಲ್ಲಾದರೂ ಇವರ ಧ್ವನಿಯನ್ನು ಗುರುತಿಸಬಹುದೇನೋ.  ಆದರೆ ಇವರ ಪೂರ್ಣ ಪ್ರತಿಭೆ ಅನಾವರಣಗೊಂಡದ್ದು  ಕಲಾವತಿ  ಚಿತ್ರದಲ್ಲಿ.  ಆ ಚಿತ್ರದ ಗಾನ ನಾಟ್ಯ ರಸಧಾರೆ ಹಾಡು ಹೇಗಿದೆ ನೋಡಿ.  ಅವರು ಹಾಡಿದ ಹೆಚ್ಚಿನ ಚಿತ್ರಗಳು ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಇದ್ದವುಗಳು.



10. ಆರ್.ನಾಗೇಂದ್ರ ರಾವ್

ಪ್ರಸಿದ್ಧ ನಿರ್ಮಾಪಕ ನಿರ್ದೇಶಕರಾದ ಇವರೂ  ಸ್ವತಃ ಹಾಡುತ್ತಿದ್ದರೆಂಬ ವಿಷಯ ನಿಮಗೆ ಗೊತ್ತಿತ್ತೇ.  ವಸಂತಸೇನಾ ಚಿತ್ರದಲ್ಲಿ ಕಾಮನು ಕಾಡುವ ಕೋತಿಯ ಹಾಗೆ ಎಂಬ ಹಾಡು ಇವರು ಹಾಡಿದ್ದರಂತೆ.  60ರ ದಶಕದ ಆನಂದಬಾಷ್ಪ ಚಿತ್ರದಲ್ಲೂ ಇವರು ಹಾಡಿದ ಬಾರೋ ಬಾರೋ ಎಲೆ ಮಗುವೆ ಎಂಬ ಹಾಡೊಂದಿತ್ತು.  ಅದನ್ನೀಗ ಕೇಳಿ.



     ಈ ಪಟ್ಟಿ ಪ್ರಾತಿನಿಧಿಕ ಮಾತ್ರ. ಜಿ.ಕೆ.ವೆಂಕಟೇಶ್(ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ, ಆಡಿಸಿದಾತ ಬೇಸರ ಮೂಡಿ, ವಿರಸವೆಂಬ ವಿಷಕೆ), ರಘುನಾಥ ಪಾಣಿಗ್ರಾಹಿ(ಪ್ರೇಮವೇ ದೈವ), ಎ.ಎಂ.ರಾಜಾ(ಅತಿಮಧುರ ಅನುರಾಗ) , ಮಾಧವಪೆದ್ದಿ ಸತ್ಯಂ(ವಿವಾಹ ಭೋಜನವಿದು), ಜೆ.ವಿ.ರಾಘವುಲು(ಜಿಗಿಜಿಗಿಯುತ ನಲಿ), ಟಿ.ಆರ್.ಜಯದೇವ್(ನಿಲ್ಲೆ ಗೊಲ್ಲರು ಬಾಲೆ ನಿಲ್ಲೆ),  ಮನಮೋಹನ ಠಾಕೂರ್(ದಾರಿಲಿ ನಿಂತಿಹುದೇಕೆ ಓ ಚೆನ್ನಯ್ಯ), ಶಿರ್ಕಾಳಿ ಗೋವಿಂದರಾಜನ್(ರಾಮನ ಅವತಾರ), ಟಿ.ಎಮ್. ಸೌಂದರರಾಜನ್(ಚಿನ್ನ ಕೇಳ್ಬ್ಯಾಡ್ವೆ ನನ್ನ ಪುರಾಣ),  ಸಿ.ಎಸ್.ಜಯರಾಮನ್(ಶಿವಪ್ಪ ಕಾಯೊ ತಂದೆ), ವಿ.ಗೋಪಾಲಂ(ಶ್ರಾದ್ಧದೂಟ ಸುಮ್ಮನೆ), ಹೊನ್ನಪ್ಪ ಭಾಗವತರ್(ಮಹಾಕವಿ ಕಾಳಿದಾಸ), ಎಂ.ಎಲ್.ವಸಂತಕುಮಾರಿ(ನಮೋ ನಮೋ ನಟರಾಜ ನಮೋ),  ರಾಮಚಂದ್ರ ರಾವ್(ದೋಣಿ ಸಾಗಲಿ), ಆರ್.ಎನ್.ಸುದರ್ಶನ್(ಇರಬೇಕು ಅರಿಯದ ಕಂದನ ತರಹ, ಹೂವೊಂದು ಬಳಿ ಬಂದು) , ಪಿ.ಕಾಳಿಂಗ ರಾವ್(ಅಂಥಿಂಥ ಹೆಣ್ಣು ನೀನಲ್ಲ, ತಾಯಿ ದೇವಿಯನು ಕಾಣೆ ಹಂಬಲಿಸಿ, ಓಂ ನಮೋ ನಾರಾಯಣ), ಬಾಲಮುರಳಿಕೃಷ್ಣ(ನಟವರ ಗಂಗಾಧರ) , ಭೀಮಸೇನ್ ಜೋಶಿ(ನಂಬಿದೆ ನಿನ್ನ ನಾದ ದೇವತೆಯೆ),  ಹೆಚ್.ಎಮ್.ಮಹೇಶ್(ಗಂಧದ ನೆರಿಗ್ಯೋಳೆ), ರವೀ(ಸೂರ್ಯಂಗೂ ಚಂದ್ರಂಗೂ, ಇಲ್ಲೇ ಸ್ವರ್ಗ ಇಲ್ಲೇ ನರಕ, ಯೌವನದ ಹೊಳೆಯಲ್ಲಿ), ಸತ್ಯವತಿ(ಹಾಡು ಬಾ ಕೋಗಿಲೆ), ಬೆಂಗಳೂರು ಲತಾ(ಚಂದ್ರಮುಖಿ ಪ್ರಾಣಸಖಿ)), ಬಿ.ವಸಂತ(ಮಲ್ಲಿಗೆ ಹೂವಿನಂಥ ಮೈಯಿನೋಳೆ), ಎಲ್.ಆರ್.ಅಂಜಲಿ(ಗುಡಿಯೊಳಿರುವ ಶಿಲೆಗಳೆಲ್ಲ), ಎಂ.ಎಸ್.ಪದ್ಮ(ಸಲ್ಲದೆಲೆ ಶಾಮನೆ ಈ ಸರಸ ),  ರಾಧಾ ಜಯಲಕ್ಷ್ಮಿ(ಭಾಗ್ಯದಾ ಲಕ್ಷ್ಮಿ ಬಾರಮ್ಮ), ಸಿ.ಕೆ.ರಮಾ(ಸಿರಿವಂತನಾದರೂ ಕನ್ನಡ ನಾಡಲ್ಲಿ), ಕಸ್ತೂರಿ ಶಂಕರ್(ರಂಗೇನ ಹಳ್ಳಿಯಾಗೆ), ರೇಣುಕ(ನನ್ಯಾಕೆ ನೀ ಹಾಗೆ)  ಮುಂತಾದ  ಇನ್ನೂ ಎಷ್ಟೋ ಮಂದಿ ಕನ್ನಡ ಚಿತ್ರಗಳಲ್ಲಿ ಹೆಚ್ಚು ಹಾಡದೆಯೂ  ಗಾಯಕರಾಗಿ ತಮ್ಮ ಹೆಜ್ಜೆ ಗುರುತು ಮೂಡಿಸಿದವರಿದ್ದಾರೆ.

     ಇಲ್ಲಿರುವ ಮಾಹಿತಿ ಸಮಗ್ರವಲ್ಲ ಮತ್ತು 70ರ ದಶಕದ ಮಧ್ಯಭಾಗದವರೆಗಿನ ಕಾಲಮಿತಿಗೆ  ಸೀಮಿತ.