Saturday 27 February 2021

ವಸುಂಧರೆಯ ನೆರೆಯ ಶುಕ್ರ

ಅಸ್ತದ ನೆಪದಲ್ಲಿ ಶುಕ್ರನ ಬಗ್ಗೆ ಅರಿಯುವ ಪ್ರಯತ್ನದ ಈ ಬರಹಕ್ಕೆ ‘ಬೆಳ್ಳಿ ತೆರೆಮರೆಗೆ ಸರಿದಾಗ’ ಎಂಬ ಶೀರ್ಷಿಕೆ ಕೂಡ ಕೊಡಬಹುದಿತ್ತು. ಏಕೆಂದರೆ ಯಾವುದೇ ಶಬ್ದಕೋಶದಲ್ಲಿ ಹಾಗೆಂದು ಉಲ್ಲೇಖ ಇಲ್ಲದಿದ್ದರೂ ವರ್ಷದ ಕೆಲವು ತಿಂಗಳು ಮಾತ್ರ ಸೂರ್ಯೋದಯಕ್ಕಿಂತ ಮುಂಚೆ ಪೂರ್ವ ದಿಗಂತದಲ್ಲಿ ಪ್ರಕಾಶಮಾನವಾಗಿ ಬೆಳಗುವ ಶುಕ್ರನನ್ನು ಜನಪದರು ಕರೆಯುವುದು ಬೆಳ್ಳಿ ಎಂದೇ.  ಕೆಲವು ತಿಂಗಳು ಆತ ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಲ್ಲಿ ಕಾಣಿಸುವುದಾದರೂ ‘ಬೆಳ್ಳಿ ಮೂಡಿತು ಕೋಳಿ ಕೂಗಿತು’ ಹಾಡಿನಲ್ಲಿರುವಂತೆ ಬೆಳ್ಳಿ ಮೂಡಿತು ಎಂದರೆ ಇನ್ನೇನು ಬೆಳಗಾಗುತ್ತದೆ ಎಂದೇ ಅರ್ಥ. ತಮಿಳು ಭಾಷೆಯಲ್ಲಿ ಶುಕ್ರವಾರದ ಅಧಿಕೃತ ಹೆಸರೇ ವೆಳ್ಳಿಕಳಮೈ. ಅಂಥ ಬೆಳ್ಳಿ ಅರ್ಥಾತ್ ಶುಕ್ರ ಈಗ ತೆರೆಮರೆಗೆ ಸರಿದಿದ್ದಾನೆ. ಶಿಷ್ಟ ಭಾಷೆಯಲ್ಲಿ ಹೇಳುವುದಾದರೆ 2021ರ ಫೆಬ್ರವರಿ ಮೂರನೆಯ ವಾರದಿಂದ ಎಪ್ರಿಲ್ ಮಧ್ಯದ ವರೆಗೆ ಶುಕ್ರನಿಗೆ ಅಸ್ತ ಅಥವಾ ಮೌಢ್ಯ. ಸನಾತನ ಸಂಸ್ಕೃತಿಯನ್ನು ಪಾಲಿಸುವವರಿಗೆ ಈ ಅವಧಿಯಲ್ಲಿ ಮದುವೆ ಮುಂಜಿಗಳಂಥ ಶುಭಕಾರ್ಯಗಳಿಗೆ ನಿಷೇಧ. ಹಾಗಿದ್ದರೆ ಅಸ್ತ ಅಥವಾ ಮೌಢ್ಯ ಎಂದರೆ ಏನು ಎಂಬ ಪ್ರಶ್ನೆ ಬರುತ್ತದೆ.  ಆಕಾಶಕಾಯಗಳು ದಿನ ನಿತ್ಯ ಹಗಲು ಕಾಣಿಸಿ ರಾತ್ರೆ ಅಸ್ತವಾಗುವುದು ಅಥವಾ ರಾತ್ರೆ ಕಾಣಿಸಿ ಹಗಲು ಅಸ್ತವಾಗುವುದು ಸಹಜ ಪ್ರಕ್ರಿಯೆಯಾದ್ದರಿಂದ ಅವುಗಳಿಗೆ ಅಂತಹ ಮಹತ್ವವಿಲ್ಲ.  ಆದರೆ ದಿನಾ ಕಾಣಿಸುವ  ಆಕಾಶಕಾಯ ದೀರ್ಘ ಸಮಯದ ವರೆಗೆ ಆಕಾಶದಿಂದ ಮರೆಯಾದರೆ ಮಾನವನಿಗೆ ದಿಗಿಲಾಗುತ್ತದೆ.  ಈ ರೀತಿ ತನ್ನ ಪಥದಲ್ಲಿ ಸುತ್ತುತ್ತಾ ಶುಕ್ರ ಭೂಮಿಯಿಂದ ನೋಡಿದಂತೆ ಈಗ ಸೂರ್ಯನ ಅತಿ ಸಮೀಪಕ್ಕೆ ಬಂದು ನಮ್ಮ ಕಣ್ಣೆದುರೇ ಇದ್ದರೂ ನಮ್ಮ ದೃಷ್ಟಿಯಿಂದ ಮರೆಯಾಗಿದ್ದಾನೆ.  ಅದೇ ಅಸ್ತ ಅಥವಾ ಮೌಢ್ಯ. ಎಲ್ಲ ಆಕಾಶ ಕಾಯಗಳು ಈ ರೀತಿ ಕಣ್ಮರೆಯಾಗುತ್ತವಾದರೂ ನವಗ್ರಹಗಳ ಪೈಕಿ ಶುಕ್ರ ಮತ್ತು ಗುರು ಗ್ರಹಗಳ ಅಸ್ತಕ್ಕೆ ಮಾತ್ರ ಧಾರ್ಮಿಕ ಮಹತ್ವವಿರುವುದು.

ಒಮ್ಮೆ ಪೂರ್ವ ದಿಗಂತದಲ್ಲಿ ಕಾಣುತ್ತಾ, ಕೆಲ ಕಾಲ ಮರೆಯಾಗಿ ಮತ್ತೆ  ಪಶ್ಚಿಮ ದಿಗಂತದಲ್ಲಿ  ಕಾಣಿಸುತ್ತಾ ಆಕಾಶದಲ್ಲಿ ಆಟವಾಡುವ ಶುಕ್ರನನ್ನು ಹಿಂದಿನ ಕಾಲದಲ್ಲಿ  ಪಾಶ್ಚಾತ್ಯರು ಎರಡು ಬೇರೆ ಬೇರೆ ನಕ್ಷತ್ರಗಳೆಂದು ಭಾವಿಸಿ Morning Star, Evening Star ಎಂದು ಗುರುತಿಸುತ್ತಿದ್ದರಂತೆ. ಈಗಲೂ ಹಾಗೆ ಕರೆಯುವ ಪದ್ಧತಿ ಇದ್ದು ನಾವು ಬೇಕಾದರೆ ಅದನ್ನು ಉಷಾ ನಕ್ಷತ್ರ, ಸಂಧ್ಯಾ ನಕ್ಷತ್ರ ಎನ್ನಬಹುದು. ವರ್ಷದ ಕೆಲ ಕಾಲ ಪ್ರಖರ ಬೆಳಕಿನೊಂದಿಗೆ ಹೊಳೆಯುವ ಆತನನ್ನು ಕೆಲವರು ಹಾರುವ ತಟ್ಟೆ ಎಂದು ತಪ್ಪಾಗಿ ತಿಳಿದದ್ದೂ ಉಂಟು.

ಬುಧನ ನಂತರದ ಎರಡನೇ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವ, ಸುಮಾರು ಭೂಮಿಯಷ್ಟೇ ಗಾತ್ರದ ಶುಕ್ರ ಸೂರ್ಯನ ದಿಶೆಯಲ್ಲಿ ನಮ್ಮ ನೆರೆಯವನು. ಸೂರ್ಯನ ಸುತ್ತ ಪರಿಭ್ರಮಿಸಲು 224.7 ಭೂಮಿಯ ದಿನಗಳನ್ನು ತೆಗೆದುಕೊಳ್ಳುವ ಆತನಿಗೆ ತನ್ನ ಅಕ್ಷದಲ್ಲಿ ಒಂದು ಸುತ್ತು ತಿರುಗಲು 243 ದಿನಗಳು ಬೇಕಾಗುತ್ತವೆ. ಅಂದರೆ ಆತನ ಒಂದು ದಿನ ಒಂದು ವರ್ಷಕ್ಕಿಂತ ದೊಡ್ಡದು! ಎಲ್ಲಾ ಗ್ರಹಗಳಿಗೆ ತಮ್ಮ ಅಕ್ಷದಲ್ಲಿ ಸುತ್ತುವ ಸ್ಪರ್ಧೆ ಏರ್ಪಡಿಸಿದರೆ ಶುಕ್ರನಿಗೆ ಸಿಗುವುದು ಕೊನೆಯ ಸ್ಥಾನ.  ಆತ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುವುದು ಇತರ ಗ್ರಹಗಳಂತೆ ಅಪ್ರದಕ್ಷಿಣಾಕಾರದಲ್ಲೇ.  ಆದರೆ ತನ್ನ ಅಕ್ಷದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ತಿರುಗುತ್ತಾನೆ.  ಹೀಗಾಗಿ ಶುಕ್ರನಲ್ಲಿ ನಿಂತು ನೋಡಿದ್ದೇ ಆದರೆ ಸೂರ್ಯ ಸೇರಿದಂತೆ ಎಲ್ಲ ಆಕಾಶ ಕಾಯಗಳು ಪಶ್ಚಿಮದಲ್ಲಿ ಉದಯಿಸಿ ಪೂರ್ವದಲ್ಲಿ ಅಸ್ತಮಿಸಿದಂತೆ ಕಾಣಿಸುತ್ತವೆ. ಈ ರೀತಿ ಅಕ್ಷದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ತಿರುಗುವ ಇನ್ನೊಂದು ಗ್ರಹ ಫ್ಲೂಟೋ. ಶುಕ್ರ ಗ್ರಹದ ಸರಾಸರಿ ತಾಪಮಾನ ಸುಮಾರು 460 ಡಿಗ್ರಿ ಸೆಂಟಿಗ್ರೇಡ್. ಆತನ ಮೇಲ್ಮೈಯನ್ನು ಬಿಳಿಯ ಮೋಡಗಳು ಸುತ್ತುವರಿದಿರುವುದರಿಂದ ಹೆಚ್ಚು ಬೆಳಕು ಪ್ರತಿಫಲಿಸಲ್ಪಟ್ಟು ಆಕಾಶದಲ್ಲಿ ಆತ ಉಜ್ವಲವಾಗಿ ಕಾಣಿಸುತ್ತಾನೆ. 

ಭೂಮಿಗಿಂತ ಒಳಗಿನ ಕಕ್ಷೆಯಲ್ಲಿರುವ ಶುಕ್ರ 224.7 ದಿನಗಳಲ್ಲಿ ಸೂರ್ಯನನ್ನು ಸುತ್ತು ಹಾಕುತ್ತಾ ತನಗಿಂತ ನಿಧಾನವಾಗಿ ಅಂದರೆ 365.26 ದಿನಗಳಲ್ಲಿ ಸೂರ್ಯನನ್ನು ಸುತ್ತುವ ಭೂಮಿಯನ್ನು 584 ದಿನಗಳಿಗೊಮ್ಮೆ ಹಿಂದಿಕ್ಕುತ್ತಾನೆ. ಹೀಗಾಗಿ ಭೂಮಿಯಿಂದ ನೋಡಿದಂತೆ ಆತ ಕೆಲವು ದಿನ ಸೂರ್ಯನ ಮುಂದೆ ಅಂದರೆ ಪಶ್ಚಿಮದ ಕಡೆಗೆ, ಕೆಲವು ದಿನ ಸೂರ್ಯನ ಹಿಂದೆ ಅಂದರೆ ಪೂರ್ವದ ಕಡೆಗೆ ಇರುವಂತೆ ಭಾಸವಾಗುತ್ತದೆ. ಸೂರ್ಯನ ಪಶ್ಚಿಮ ದಿಕ್ಕಿಗೆ ಇರುವಾಗ ಬೆಳಗಿನ ಜಾವ ಸೂರ್ಯೋದಯಕ್ಕಿಂತ ಮೊದಲು ಪೂರ್ವ ದಿಗಂತದಲ್ಲಿ, ಸೂರ್ಯನ ಪೂರ್ವ ದಿಕ್ಕಿಗೆ ಇರುವಾಗ ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಲ್ಲಿ ಬರಿಗಣ್ಣಿಗೆ ಗೋಚರಿಸುತ್ತಾನೆ. ಆತ ಭೂಮಿಗಿಂತ ಒಳಗಿನ ಕಕ್ಷೆಯಲ್ಲಿರುವುದರಿಂದ ಮತ್ತು ಸೂರ್ಯನಿಗಿಂತ ಅತಿ ಹೆಚ್ಚು ಅಂದರೆ 47 ಡಿಗ್ರಿಯಷ್ಟು ಮಾತ್ರ ದೂರಕ್ಕೆ ಸರಿಯುವುದರಿಂದ ಏನಿದ್ದರೂ ಆತ ಹಗಲಿನ ತಾರೆ. ತಡ ರಾತ್ರಿ ಎಂದೂ ಕಾಣಿಸಲಾರ.

ಶುಕ್ರನು ಸೂರ್ಯನನ್ನು ಸುತ್ತುತ್ತಾ 584 ದಿನಗಳಿಗೊಮ್ಮೆ ಭೂಮಿಯನ್ನು ಹಿಂದಿಕ್ಕುತ್ತಾನೆ ಎಂದು ಈಗಾಗಲೇ ನೋಡಿದೆವಷ್ಟೇ. ಆ ಪಯಣದಲ್ಲಿ ಆತ ಸೂರ್ಯ ಮತ್ತು ಭೂಮಿಯ ಸರಿ ನಡುವೆ ಬರುವುದನ್ನು ನಿಮ್ನತಮ ಸಂಯೋಗ(Inferior Conjunction) ಎನ್ನುತ್ತಾರೆ. ಆಗ ಆತ ಭೂಮಿಗೆ ಅತಿ ಸಮೀಪವಾಗಿದ್ದರೂ ಆತನ ಸೂರ್ಯನ ವಿರುದ್ಧ ದಿಕ್ಕಿನ ಅಂದರೆ ರಾತ್ರಿಯ ಮುಖ ನಮಗೆದುರಾಗಿರುವುದರಿಂದ ಅಂದು ನಮಗೆ ಶುಕ್ರನ ಅಮಾವಾಸ್ಯೆ. ಈ ಅಮಾವಾಸ್ಯೆಗಿಂತ 4 ದಿನ ಹಿಂದೆ ಮತ್ತು 4 ದಿನ ಮುಂದೆ ಒಟ್ಟು   8 ದಿನ ಆತ ನಮಗೆ ಕಾಣಿಸಲಾರ. ಭೂಮಿಯನ್ನು ಹಿಂದಿಕ್ಕಿದ ಆತ ತನ್ನ ಕಕ್ಷೆಯಲ್ಲಿ ಮತ್ತೂ ಮುಂದೆ ಮುಂದೆ ಹೋಗುತ್ತಾ elongation ಎನ್ನಲಾಗುವ ಭೂಮಿ, ಸೂರ್ಯ ಮತ್ತು ಶುಕ್ರನ ನಡುವಿನ ಕೋನವು ವೃದ್ಧಿಸುತ್ತಾ  47 ಡಿಗ್ರಿಯಷ್ಟು ಆಗಿ ಮತ್ತೆ ಕಮ್ಮಿಯಾಗುತ್ತಾ ಆತ ಸೂರ್ಯನ ಇನ್ನೊಂದು ಬದಿಯಲ್ಲಿ ಸರಿಯಾಗಿ ಭೂಮಿಯ ಎದುರು ಬರುವಾಗ  ಶೂನ್ಯ ಡಿಗ್ರಿ ಆಗುತ್ತದೆ. ಈ ರೀತಿ ಆತ ಸೂರ್ಯನ ಇನ್ನೊಂದು ಬದಿಯಲ್ಲಿ ಭೂಮಿಯ ಎದುರು ಬರುವುದನ್ನು ಉಚ್ಚತಮ ಸಂಯೋಗ(Superior Conjuction) ಅನ್ನುತ್ತಾರೆ. ನಿಮ್ನತಮ ಸಂಯೋಗ ಸ್ಥಾನದಿಂದ ಹೊರಟು ಉಚ್ಚತಮ ಸಂಯೋಗ ಸ್ಥಾನದ ಶೂನ್ಯಕ್ಕೆ ತಲುಪಲು ಇನ್ನೂ 8 ಡಿಗ್ರಿ ಇರುವಲ್ಲಿ ವರೆಗೆ ತಲುಪಲು ಆತ ತೆಗೆದುಕೊಳ್ಳುವ  263 ದಿನ ಆತ ಸೂರ್ಯನ ಪಶ್ಚಿಮ ದಿಕ್ಕಿನಲ್ಲಿದ್ದು ಸೂರ್ಯೋದಯಕ್ಕಿಂತ ಸ್ವಲ್ಪ ಮೊದಲು ಪೂರ್ವದಿಗಂತದಲ್ಲಿ ಕಾಣಿಸಿಕೊಳ್ಳುತ್ತಾನೆ.  ಈ ಭಾಗದ ಪಯಣದಲ್ಲಿ ಸೂರ್ಯನ ಬೆಳಕನ್ನು  ಪ್ರತಿಫಲಿಸುವ ಭಾಗ ಹೆಚ್ಚು ಹೆಚ್ಚು ಕಾಣಿಸುತ್ತಾ ಹೋಗುತ್ತದೆ.  ಆದರೆ ಆತ ಭೂಮಿಯಿಂದ ದೂರ ದೂರ ಸಾಗುವುದರಿಂದ ಆತನ ಗಾತ್ರ ಚಿಕ್ಕದಾಗುತ್ತಾ ಹೋಗುತ್ತದೆ.  ಆತನ ಪ್ರತಿಫಲಿತ ಭಾಗ  ಆಂಶಿಕವಾಗಿದ್ದರೂ   ನಿಮ್ನತಮ ಸಂಯೋಗದಿಂದ 36ನೇ ದಿನ ಆತ ಭೂಮಿಗೆ ಇನ್ನೂ ಸಾಕಷ್ಟು ಸಮೀಪದಲ್ಲೇ ಇರುವುದರಿಂದ ಅತ್ಯಂತ ಹೆಚ್ಚು  ಪ್ರಕಾಶಮಾನನಾಗಿ ಕಾಣಿಸುತ್ತಾನೆ.

ಉಚ್ಚತಮ ಸಂಯೋಗದ(Superior Conjuction) 8 ಡಿಗ್ರಿ ಈಚೆಯಿಂದ 8 ಡಿಗ್ರಿ ಆಚೆ ವರೆಗೆ ಸಾಗಲು ಆತನಿಗೆ 50 ದಿನಗಳು ಬೇಕಾಗುತ್ತವೆ ಮತ್ತು ಆ ಸಮಯದಲ್ಲಿ ಸೂರ್ಯನ ಸಾಮೀಪ್ಯದ ಪ್ರಭೆಯ ಕಾರಣ ನಮಗೆ ಆತನನ್ನು ನೋಡಲು ಸಾಧ್ಯವಾಗುವುದಿಲ್ಲ.  ಇದನ್ನೇ ಅಸ್ತ ಅಥವಾ ಮೌಢ್ಯ ಅನ್ನುವುದು. ಉಚ್ಚತಮ ಸಂಯೋಗದಂದು(Superior Conjuction)ಆತ ಸೂರ್ಯನ ಇನ್ನೊಂದು ಬದಿಯಲ್ಲಿ ಸರಿಯಾಗಿ ಭೂಮಿಯ ಎದುರು ಬರುವಾಗ ಗಾತ್ರದಲ್ಲಿ ಚಿಕ್ಕದಾಗುವ ಆತನ ಪೂರ್ಣ ಬೆಳಗಿದ ದುಂಡು ಮುಖ ಭೂಮಿಯ ಕಡೆ ಇದ್ದು ಅದು ಆತನ ಹುಣ್ಣಿಮೆ ಎನಿಸಿದರೂ ನಾವದನ್ನು ಕಾಣಲಾರೆವು.  ನಿಮ್ನತಮ ಸಂಯೋಗದ(Inferior Conjuction) 8 ಡಿಗ್ರಿ ಆಚೆಯಿಂದ 8 ಡಿಗ್ರಿ ಈಚೆ ವರೆಗೆ ಸಾಗಲು ಬರೇ 8 ದಿನ ಮತ್ತು ಉಚ್ಚತಮ ಸಂಯೋಗದ(Superior Conjuction) ಅಷ್ಟೇ ಕೋನಕ್ಕೆ 50 ದಿನ ಏಕೆ ಎಂಬ ಸಂದೇಹ ಮೂಡಬಹುದು.  ಹತ್ತಿರದಲ್ಲಿರುವ ಬಸ್ಸು ವೇಗವಾಗಿ ಸಾಗಿದಂತೆ ಮತ್ತು ದೂರದ ವಿಮಾನ ನಿಧಾನವಾಗಿ ಚಲಿಸಿದಂತೆ ನಮಗೆ ಅನಿಸುವ ಹಾಗೇ ಇದು. ಎರಡು ಕಡೆಯೂ ಆತ ಚಲಿಸುವ ವೇಗ ಒಂದೇ.  ನಮ್ಮ ಲೆಕ್ಕಾಚಾರ ಏನಿದ್ದರೂ ನಮಗೆ ಕಂಡಂತೆ.

ಉಚ್ಚತಮ ಸಂಯೋಗದ ನಂತರ ಆತ ಸೂರ್ಯನ ಪೂರ್ವ ಭಾಗಕ್ಕೆ ಚಲಿಸಿ  ಮುಂದಿನ 263 ದಿನ ಆತನ ಬೆನ್ನ ಹಿಂದೆ ಸಾಗುತ್ತಾ ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಲ್ಲಿ ಸಂಧ್ಯಾ ತಾರೆಯಾಗಿ ಸ್ವಲ್ಪ ಹೊತ್ತು ಕಾಣಿಸುತ್ತಿರುತ್ತಾನೆ.  ಈ ಪಯಣದಲ್ಲೂ ಭೂಮಿ, ಸೂರ್ಯ, ಶುಕ್ರರ ನಡುವಿನ ಕೋನ ವೃದ್ಧಿಸುತ್ತಾ  47 ಡಿಗ್ರಿ ತಲುಪಿ ಮತ್ತೆ ಕಮ್ಮಿಯಾಗುತ್ತಾ ಶೂನ್ಯವಾಗುವಾಗ ಮತ್ತೆ ನಿಮ್ನತಮ ಸಂಯೋಗ ಸಂಭವಿಸಿ 263+50+263+8 = 584 ದಿನಗಳ ಚಕ್ರ ಪೂರ್ಣವಾಗುತ್ತದೆ. ಈ ಭಾಗದ ಪಯಣದಲ್ಲಿ ಆತ ಸೂರ್ಯನ ಬೆಳಕನ್ನು  ಪ್ರತಿಫಲಿಸುವ ಭಾಗ ಕಡಿಮೆಯಾಗುತ್ತಾ  ಹೋಗುತ್ತದೆ. ಇಲ್ಲೂ  ನಿಮ್ನತಮ ಸಂಯೋಗಕ್ಕೆ 36 ದಿನ ಇರುವಂದು ಆತ ಆಂಶಿಕವಾಗಿ ಆದರೂ ಅತಿ ಉಜ್ವಲನಾಗಿ ಗೋಚರಿಸುತ್ತಾನೆ.

ಮೇಲೆ ಹೇಳಿದ ವಿವರಗಳನ್ನೆಲ್ಲ ಈ ಅನಿಮೇಟೆಡ್ ವೀಡಿಯೊದಲ್ಲಿ  ಸರಳವಾಗಿ ಮತ್ತು ಬಹಳ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಇದನ್ನು ಒಂದೆರಡು ಸಲ ವೀಕ್ಷಿಸಿ ವಿವರಗಳನ್ನೆಲ್ಲ ಇನ್ನೊಮ್ಮೆ ಓದಿದರೆ ವಿಷಯ ಇನ್ನೂ ಚೆನ್ನಾಗಿ ಮನದಟ್ಟಾಗಬಹುದು. ಬೇಕಿದ್ದರೆ ಸೆಟ್ಟಿಂಗ್ ಬಟನ್ ಒತ್ತಿ ವೀಡಿಯೊ ವೇಗ ಕಮ್ಮಿ ಮಾಡಿಕೊಳ್ಳಬಹುದು.


ನಿಮ್ನತಮ ಸಂಯೋಗದ 8 ದಿನಗಳಂದು ಕೂಡ ಆತ ಕಾಣಿಸದಿದ್ದರೂ ಉಚ್ಚತಮ ಸಂಯೋಗ ಸಮಯದ 50 ದಿನಗಳ ಅಗೋಚರತೆಯನ್ನು ಮಾತ್ರ ಅಸ್ತ ಅಥವಾ ಮೌಢ್ಯ ಎಂದು ಧಾರ್ಮಿಕವಾಗಿ ಪರಿಗಣಿಸುವುದು ವಾಡಿಕೆ.  584 ದಿನಗಳಿಗೊಮ್ಮೆ ಸಂಭವಿಸುವ ಶುಕ್ರಾಸ್ತದ ಚಕ್ರ 8 ವರ್ಷಗಳಿಗೊಮ್ಮೆ ಪುನರಾವರ್ತನೆಯಾಗುತ್ತದೆ. ಅಂದರೆ ಸುಮಾರು 8 ವರ್ಷಗಳಿಗೊಮ್ಮೆ ವರ್ಷದ ಅದೇ ಕಾಲದಲ್ಲಿ ಶುಕ್ರಾಸ್ತ ಸಂಭವಿಸುತ್ತದೆ.  ಭೂಮಿಯ ವರ್ಷದ 365 ದಿನಗಳು ಮತ್ತು ಶುಕ್ರನ ವರ್ಷದ 584 ದಿನಗಳು 5:8ರ ದಾಮಾಶಯದಲ್ಲಿರುವುದು ಇದಕ್ಕೆ ಕಾರಣ.

ಅಗೋಚರತೆಯ ಈ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಂದು ಸೂರ್ಯೋದಯಕ್ಕಿಂತ ಮೊದಲು ಅಥವಾ ಸೂರ್ಯಾಸ್ತದ ನಂತರ ಕೊಂಚ ಹೊತ್ತು ಮಾತ್ರ ಆತ ಸ್ಪಷ್ಟವಾಗಿ ಗೋಚರಿಸುವುದು. ದಿನದ ಉಳಿದ ಸಮಯದಲ್ಲೂ ಸೂರ್ಯನ ಹಿಂದೆ  ಅಥವಾ ಮುಂದೆ  ಆತ ಆಗಸದಲ್ಲಿ ಸಾಗುತ್ತಿರುವುದರಿಂದ ದಿಟ್ಟಿಸಿ ನೋಡಿದರೆ   ಹಗಲಿಡೀ ಆತನನ್ನು ಬರಿಗಣ್ಣಿನಲ್ಲಿ ವೀಕ್ಷಿಸಲು ಸಾಧ್ಯವಂತೆ.

ನಿಮ್ನತಮ ಸಂಯೋಗದ ಸಮಯ ಶುಕ್ರನು ಸರಿಯಾಗಿ ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಆತ ಸೂರ್ಯನಿಗೆ ಗ್ರಹಣ ಉಂಟುಮಾಡುತ್ತಾನೆಯೇ ಎಂಬ ಸಂದೇಹ ಮೂಡಬಹುದು. ಭೂಮಿ ಚಂದ್ರರ ಕಕ್ಷೆಯ ನಡುವೆ ಕೆಲವು ಡಿಗ್ರಿಗಳಷ್ಟು  ಕೋನ ಇರುವ ಕಾರಣ ಪ್ರತಿ ಅಮಾವಾಸ್ಯೆಯಂದು ಹೇಗೆ ಸೂರ್ಯಗ್ರಹಣ ಸಂಭವಿಸುವುದಿಲ್ಲವೋ ಹಾಗೆಯೇ ಭೂಮಿ ಶುಕ್ರರ ಕಕ್ಷೆಯ ಮಧ್ಯೆಯೂ ಇರುವುದರಿಂದ ಪ್ರತಿ ನಿಮ್ನತಮ ಸಂಯೋಗದಂದು ಶುಕ್ರನು ನೇರವಾಗಿ ಸೂರ್ಯನ ಎದುರು ಇರದೆ ಸ್ವಲ್ಪ ಆಚೆ ಅಥವಾ ಈಚೆ ಇರುತ್ತಾನೆ.  ಸುಮಾರು  125  ವರ್ಷಗಳಿಗೊಮ್ಮೆ ಮಾತ್ರ ಆತ ನೇರವಾಗಿ ಸೂರ್ಯನೆದುರು ಬಂದು 8  ವರ್ಷಗಳ ಅಂತರದ ಎರಡು ಶುಕ್ರ ಸಂಕ್ರಮಣಗಳು  ಉಂಟಾಗುತ್ತದೆ.   ಇತ್ತೀಚೆಗೆ 2004ರ ಜೂನ್ 8 ಮತ್ತು 2012ರ ಜೂನ್ 5ರಂದು ಶುಕ್ರ ಸಂಕ್ರಮಣಗಳು ಸಂಭವಿಸಿದ್ದವು.  ಆದರೆ  ಶುಕ್ರನು ಚಂದ್ರನಿಗಿಂತ 100 ಪಾಲು ಹೆಚ್ಚು ದೂರ ಇರುವುದರಿಂದ ಆತ ಗ್ರಹಣದ ಚಂದ್ರನಂತೆ ಸೂರ್ಯನನ್ನು ಮರೆ ಮಾಡದೆ ಆತನೆದುರು ಒಂದು ಸಣ್ಣ ಕಪ್ಪು ಚುಕ್ಕಿಯಂತೆ ಮಾತ್ರ ಕಾಣಿಸುತ್ತಾನೆ. ಮುಂದಿನ ಶುಕ್ರ ಸಂಕ್ರಮಣಗಳು ಡಿಸೆಂಬರ್ 2117 ಮತ್ತು ಡಿಸೆಂಬರ್ 2125ರಲ್ಲಿ ಸಂಭವಿಸಲಿವೆ.

ಪಾಶ್ಚಾತ್ಯರು ಶುಕ್ರನಿಗೆ  ಪ್ರೇಮ ಮತ್ತು ಸೌಂದರ್ಯದ ಪ್ರತೀಕವಾದ ರೋಮನ್ ದೇವತೆ ವೀನಸ್ ಹೆಸರಿಟ್ಟಿದ್ದಾರೆ. ನಮ್ಮ ಬೆಳ್ಳಿ ಇದಕ್ಕೆ ಸಂವಾದಿಯಾಗಬಹುದೇನೋ.

**********

ಈ ಲೇಖನ ಎಪ್ರಿಲ್ 2021ರ ಉತ್ಥಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ.




Saturday 20 February 2021

ಓಹೋ ಅನಿಸುವ ಓಹಿಲೇಶ್ವರ ಆಲ್ಬಂ


1956ರಲ್ಲಿ ತೆರೆಕಂಡ ಓಹಿಲೇಶ್ವರ ಚಿತ್ರದ ಆಲಿಸಿದರೆ ಓಹೋ ಅನ್ನಿಸುವ  ಒಂದು ಡಜನ್ ವೈವಿಧ್ಯಮಯ ಹಾಡುಗಳ ಪೈಕಿ  ಆಲ್ ಟೈಮ್ ಹಿಟ್ ಅನ್ನಿಸಿದ್ದು ಘಂಟಸಾಲ ಅವರ ಈ ದೇಹದಿಂದ ದೂರನಾದೆ ಮಾತ್ರ. ಈಗಿನ ಅಂತರ್ಜಾಲ ಯುಗದಲ್ಲಿ  ರಾಜ್‌ಕುಮಾರ್ ಸ್ವತಃ ಹಾಡಿದ ಮೊದಲ ಹಾಡು ಎನ್ನುವ ನೆಲೆಯಲ್ಲಿ ಶರಣು ಶಂಭೋ ಮತ್ತು ಅವರಿಗಾಗಿ ಪಿ.ಬಿ.ಶ್ರೀನಿವಾಸ್ ಮೊದಲ ಬಾರಿ ಹಾಡಿದ್ದು ಎಂದು  ನಾ ಪಾಪವದೇನಾ ಮಾಡಿದೆನೋ ಸ್ವಲ್ಪ ಮುಂಚೂಣಿಗೆ ಬಂದಿರುವುದು ಬಿಟ್ಟರೆ ಉಳಿದವು ಅಲಭ್ಯ ಅಲ್ಲದಿದ್ದರೂ ಅಲಕ್ಷಕ್ಕೊಳಗಾಗಿವೆ ಎಂದೇ ಹೇಳಬೇಕಾಗುತ್ತದೆ. ಆಗಿನ ಕಾಲದಲ್ಲೂ ನೀನೆಮ್ಮ ಜೀವ ಶರಣು ಮಹಾದೇವ ಮತ್ತು ದೇಹದಿಂದ ದೂರನಾದೆ ಬಿಟ್ಟರೆ ಬೇರೆ ಹಾಡುಗಳು ರೆಡಿಯೋದಲ್ಲಿ ಕೇಳಲು ಸಿಗುತ್ತಿದ್ದುದು ಅಪರೂಪ. ಈಗ ಎಂದೋ ಒಮ್ಮೆ ಬೆಂಗಳೂರು ವಿವಿಧಭಾರತಿಯಲ್ಲೋ, ಎಫ್.ಎಂ. ರೇನ್‌ಬೋದಲ್ಲೋ  ಇನ್ನುಳಿದ ಯಾವುದಾದರೂ ಹಾಡು ಪ್ರಸಾರವಾದರೂ ಈಗಿನ ಬಹುತೇಕ ಕ್ಯಾಶುವಲ್ ಉದ್ಘೋಷಕರಿಗೆ ಹಾಡುಗಳ ವಿವರ ತಿಳಿಸುವ ಅಭ್ಯಾಸವೇ ಇಲ್ಲದ್ದರಿಂದ ಅದು ಯಾರ ಗಮನಕ್ಕೂ ಬರುವುದಿಲ್ಲ.

ಓಹಿಲೇಶ್ವರ ರಾಜ್‌ಕುಮಾರ್ ಅವರ  4ನೇ ಚಿತ್ರ.  1954ರ ಬೇಡರ ಕಣ್ಣಪ್ಪ ಬಿಟ್ಟರೆ 1955ರ ಸೋದರಿ ಮತ್ತು 1956ರಲ್ಲೇ ತೆರೆ ಕಂಡ ಹರಿಭಕ್ತ ಚಿತ್ರಗಳು ಓಹಿಲೇಶ್ವರ ನಿರ್ಮಿಸಿದ ಟಿ. ವಿಶ್ವನಾಥ ಶೆಟ್ಟಿ ಅವರ  ವಿಶ್ವಕಲಾ ಸಂಸ್ಥೆಯ ಕಾಣಿಕೆಗಳೇ ಆಗಿವೆ ಎಂಬುದು ಗಮನಾರ್ಹ. ಆದರೆ ಮೂರಕ್ಕೆ ಮುಕ್ತಾಯ ಎಂಬಂತೆ ಈ ಸಂಸ್ಥೆ ಆ ಮೇಲೆ ಯಾವ ಚಿತ್ರವನ್ನೂ ನಿರ್ಮಿಸಿದಂತಿಲ್ಲ.  ಈ ಮೂರೂ ಚಿತ್ರಗಳನ್ನು ನಿರ್ದೇಶಿಸಿದವರು ಟಿ.ವಿ. ಸಿಂಗ್ ಠಾಕೂರ್. ಮೂರು ಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿದವರು ಜಿ.ಕೆ. ವೆಂಕಟೇಶ್.  ಆದರೆ ಮೊದಲ ಚಿತ್ರ ಸೋದರಿಯಲ್ಲಿ ಪದ್ಮನಾಭ ಶಾಸ್ತ್ರಿ ಕೂಡ ಅವರ ಜೊತೆಗಿದ್ದರು.  ತ್ರಿಭುವನ ಜನನಿ ಜಗನ್ಮೋಹಿನಿ ಹಾಡಿನ ಪ್ರೇಮದ ಪುತ್ರಿ ಚಿತ್ರಕ್ಕೂ ಪದ್ಮನಾಭ ಶಾಸ್ತ್ರಿಗಳದ್ದೇ ಸಂಗೀತ ಇದ್ದದ್ದು. ಆ ಮೇಲೆ ಸಂಗೀತ ನಿರ್ದೇಶನ ಕ್ಷೇತ್ರದಿಂದ ಅವರೇಕೆ ಮರೆಯಾದರೋ ತಿಳಿಯದು.

ಈ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಬರೆಯುವ ಮೂಲಕ  ವಿಜಯನಾರಸಿಂಹ  ಅವರು ಗೀತರಚನಕಾರರಾಗಿ ಚಿತ್ರರಂಗ ಪ್ರವೇಶಿಸಿದರು. ಈ  ದೇಹದಿಂದ ದೂರನಾದೆ ಹಾಡಿನ ಜನಪ್ರಿಯತೆ ಅವರನ್ನು ದಿನ ಬೆಳಗಾಗುವುದರೊಳಗೆ ಪ್ರಸಿದ್ಧರನ್ನಾಗಿಸಿತು.  ಉಳಿದ  ಹಾಡುಗಳನ್ನು ಕು.ರ. ಸೀತಾರಾಮ ಶಾಸ್ತ್ರಿ ಬರೆದಿದ್ದರು.

ಈ ಚಿತ್ರದಲ್ಲಿ ನಟರು ಪರಿಚಿತರಾದವರೇ ಇದ್ದರೂ  ಮುಖ್ಯ ನಟಿಯರಾದ ಶ್ರೀರಂಜಿನಿ ಮತ್ತು ಮೀನಾಕ್ಷಿ ಮೊದಲ ಬಾರಿ ಕಾಣಿಸಿಕೊಂಡವರು.  ಇವರು ರಂಗಭೂಮಿಯಿಂದ ಬಂದವರಿರಬಹುದೇನೋ.  ಆ ಮೇಲೆ ಯಾವ ಚಿತ್ರದಲ್ಲೂ ಇವರನ್ನು ಕಂಡ ನೆನಪಾಗುವುದಿಲ್ಲ. ಕಲ್ಯಾಣ್‌ಕುಮಾರ್  ಆಗಲೇ ನಟಶೇಖರ ಮತ್ತು ಭಾಗ್ಯಚಕ್ರ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದರೂ ಈ ಚಿತ್ರದಲ್ಲಿ ಪೋಷಕ ಪಾತ್ರವೊಂದರಲ್ಲಿ ಕಾಣಿಸಿಕೊಂಡರು.

ಇದರಲ್ಲಿ ಜಿ.ಕೆ. ವೆಂಕಟೇಶ್ ಅವರು ಒಟ್ಟು 12 ಮಂದಿ ಹಿನ್ನೆಲೆ ಗಾಯಕ ಗಾಯಕಿಯರನ್ನು ಬಳಸಿಕೊಂಡದ್ದು  ವಿಶೇಷ.  ರಾಜ್ ಅವರಿಗೆ ಘಂಟಸಾಲ, ಟಿ.ಎಮ್. ಸೌಂದರರಾಜನ್, ಪಿ.ಬಿ.ಶ್ರೀನಿವಾಸ್ ಮತ್ತು ಸ್ವತಃ ರಾಜ್ ಅವರ ಧ್ವನಿಗಳನ್ನು ಬಳಸಿದ್ದು ಇನ್ನೂ ವಿಶೇಷ. ಈ ರೀತಿ ಒಬ್ಬ ನಟನಿಗೆ ನಾಲ್ವರು ಹಿನ್ನೆಲೆ ಹಾಡು ಹಾಡಿರುವ ಉದಾಹರಣೆ ಬೇರೆ ಇರಲಾರದು. ಈ ಚಿತ್ರದಲ್ಲಿ ಒಂದೂ ಯುಗಳ ಗೀತೆ ಇಲ್ಲದಿರುವುದು ಗಮನಿಸಬೇಕಾದ ಅಂಶ.

ಈ ಚಿತ್ರದ ನಂತರ ಪಿ.ಬಿ.ಶ್ರೀನಿವಾಸ್ ಅವರು ಪಿ.ಕಾಳಿಂಗ ರಾವ್ ಸಂಗೀತವಿದ್ದ ಅಬ್ಬಾ ಆ ಹುಡುಗಿ, ವಿಜಯಭಾಸ್ಕರ್ ಸಂಗೀತದ ರಾಣಿ ಹೊನ್ನಮ್ಮ ಮತ್ತು ದಕ್ಷಿಣಾಮೂರ್ತಿ ಸಂಗೀತದ ಆಶಾಸುಂದರಿ ಚಿತ್ರಗಳಲ್ಲಿ ರಾಜ್ ಅವರಿಗೆ ಹಾಡಿದರು. ಎಂ. ವೆಂಕಟರಾಜು ಸಂಗೀತದಲ್ಲಿ ಭಕ್ತ ಕನಕದಾಸದ ಎಲ್ಲ ಹಾಡುಗಳನ್ನು ಹಾಡಿದ ನಂತರ ಪಿ.ಬಿ.ಎಸ್ ರಾಜ್ ಅವರ ಕಾಯಂ ಧ್ವನಿಯಾದರು.  ಆದರೆ ಈ ನಡುವೆ ಬಂದ ಜಿ.ಕೆ.ವೆಂಕಟೇಶ್ ಸಂಗೀತವಿದ್ದ ರಾಜ್‌ಕುಮಾರ್ ಅಭಿನಯದ ಅಣ್ಣ ತಂಗಿ, ಮಹಿಷಾಸುರಮರ್ದಿನಿ, ರಣಧೀರ ಕಂಠೀರವ, ದಶಾವತಾರ ಮುಂತಾದ  ಚಿತ್ರಗಳಲ್ಲಿ ಪಿ.ಬಿ.ಎಸ್ ಇದ್ದರೂ ಅವರು ರಾಜ್  ಧ್ವನಿ ಆಗಿರಲಿಲ್ಲ. ಜಿ.ಕೆ. ವೆಂಕಟೇಶ್ ಸಂಗೀತದಲ್ಲಿ ಪಿ.ಬಿ.ಶ್ರೀನಿವಾಸ್ ಮತ್ತೆ ರಾಜ್ ಅವರಿಗಾಗಿ ಹಾಡಲು 1961ರ ಕಣ್ತೆರೆದು ನೋಡು ವರೆಗೆ ಕಾಯಬೇಕಾಯಿತು. 

ಓಹಿಲನ ಕಥೆ  ಹರಿಹರನ ಓಹಿಲಯ್ಯನ ರಗಳೆ ಮತ್ತು ಸೋಮದೇವನ ಉದ್ಭಟಕಾವ್ಯದಲ್ಲಿ ಇದೆ ಎನ್ನಲಾಗಿದೆ. ಓಹಿಲ  ಒಬ್ಬ ರಾಜಕುಮಾರ.  ಆದರೆ ಆತನಿಗೆ ಬಾಲ್ಯದಿಂದಲೂ ಆಧ್ಯಾತ್ಮದತ್ತಲೇ ಒಲವು.  ಗೌತಮ ಬುದ್ಧನಿಗಾದಂತೆ ಓಹಿಲನಿಗೂ ಹೊರಗೆ ತಿರುಗಾಡಲು ಹೋದಾಗ ಸಾವು ನೋವುಗಳ ಪರಿಚಯವಾಗುತ್ತದೆ. ಬುದ್ಧನ ಕಥೆಯಲ್ಲಿದ್ದಂತೆಯೇ  ಸಾವಿಲ್ಲದ ಮನೆಯಿಂದ ಅಕ್ಕಿ ತರಲು ಪ್ರಯತ್ನಿಸುವ  ಪ್ರಸಂಗವೂ ಕಥೆಯಲ್ಲಿ ಇದೆ. ಜಾತಿ ಮತಗಳ ನಡುವಿನ ತಾರತಮ್ಯವನ್ನು ವಿರೋಧಿಸುವ ಆತ ಅರಮನೆಯಲ್ಲಿ ಬಾಲ್ಯದಿಂದಲೂ ತನ್ನೊಡನೆ ಆಡಿ ಬೆಳೆದ ಉಮೆಯನ್ನು ಮದುವೆಯಾಗಲೊಪ್ಪದೆ ತಾನು ಆಶ್ರಯಕೊಟ್ಟಿದ್ದ ಗೌರಿ ಎಂಬ ಸಮಾಜದ ನಿಮ್ನವರ್ಗಕ್ಕೆ ಸೇರಿದ ಅಂಧ ಹುಡುಗಿಯ ಕೈ ಹಿಡಿಯಬಯಸುತ್ತಾನೆ.  ಇದಕ್ಕೆ ರಾಜಗುರು ಆಕ್ಷೇಪ ವ್ಯಕ್ತ ಪಡಿಸಿದಾಗ ತನಗೆ ಸಂಸಾರ ಬಂಧನವೇ ಬೇಡ ಎಂಬ ನಿರ್ಧಾರ ತಳೆದು ಗೌರಿಯನ್ನು ತನ್ನ ಆಧ್ಯಾತ್ಮಿಕ ಗುರು ಎಂದು ಭಾವಿಸಿ ಅವಳ ಜೊತೆ ಸೌರಾಷ್ಟ್ರದ ಸೋಮನಾಥ ಕ್ಷೇತ್ರಕ್ಕೆ ಹೋಗುತ್ತಾನೆ. ಹದಿನೆಂಟು ತುಂಬುವುದರೊಳಗೆ ಮಗನ ವಿವಾಹವಾಗದಿದ್ದರೆ ಸಾವು ಎಂಬ ಶಾಪ ಇದ್ದುದರಿಂದ ಓಹಿಲನ ತಂದೆ ತಾಯಿಗಳು ಮರಣ ಹೊಂದುತ್ತಾರೆ. ಅವರ ಅಂತ್ಯ ಸಂಸ್ಕಾರ ಮಾಡದೆ ಕರ್ಮಚಂಡಾಲನಾದದ್ದು ಮಾತ್ರವಲ್ಲದೆ ಹೀನಕುಲದ ಗೌರಿಯನ್ನು ಜತೆಗೆ ಕರೆದೊಯ್ದು ಧರ್ಮಭ್ರಷ್ಟನಾಗಿದ್ದಾನೆಂಬ ಆರೋಪ ಹೊರಿಸಿದ ರಾಜಗುರು ಆತನಿಗೆ ಎಲ್ಲೆಡೆ ಬಹಿಷ್ಕಾರ ಹಾಕಿಸುತ್ತಾನೆ.  ಧರ್ಮಾಂಧರ ಉಪಟಳದಿಂದ  ಸೋಮನಾಥೇಶ್ವರನ ಸೇವೆಗೆ ಧೂಪವೂ ಸಿಗದಂತಾದಾಗ ತನ್ನನ್ನೇ ಬೆಂಕಿಯಲ್ಲಿ ಉರಿಸಿ ಶಿವನ ಸಾನ್ನಿಧ್ಯ ಸೇರಿ ಓಹಿಲೇಶ್ವರನೆನ್ನಿಸುತ್ತಾನೆ.

ಚಿತ್ರದಲ್ಲಿ ಗುರುವಿನ ಶಾಪದಿಂದ ಗಿಳಿಯಾಗಿ ಚಂದ್ರೋದಯದಿಂದ ಕೆಲವು ಗಳಿಗೆ ಮಾತ್ರ ಮನುಷ್ಯ ರೂಪ ತಾಳುವ  ಶುಕ ಮುನಿಯ ಪ್ರಸಂಗವನ್ನೂ ಸೇರಿಸಿಕೊಳ್ಳಲಾಗಿದೆ.  ಆತ ಉದ್ಭಟನೆಂಬ ರಾಜಕುಮಾರನನ್ನು ಕರೆತಂದು ರಾಜಕುಮಾರಿ ಉಮೆಯೊಂದಿಗೆ ವಿವಾಹ ಮಾಡಿಸಿ ಶಾಪವಿಮುಕ್ತನಾಗುತ್ತಾನೆ.  ಓಹಿಲನಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡುವ ಸಖನಾಗಿಯೂ ಇರುತ್ತಾನೆ.

ಓಹಿಲೇಶ್ವರ ಚಿತ್ರದ ಎರಡು ಪ್ರತಿಗಳು ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.

ಚಿತ್ರದ ಪಾರಿಭಾಷಿಕ ವಿವರಗಳು
.

ಬ್ಯಾನರ್ : ವಿಶ್ವಕಲಾ ಚಿತ್ರ
ನಿರ್ಮಾಪಕರು : ಟಿ.ವಿಶ್ವನಾಥ ಶೆಟ್ಟಿ, ಟಿ.ವಿ. ಸಿಂಗ್ ಠಾಕೂರ್.
ನಿರ್ದೇಶನ: T.V. ಸಿಂಗ್ ಠಾಕೂರ್.
ತಾರಾಗಣ :
ಶ್ರೀರಂಜಿನಿ, ಮೀನಾಕ್ಷಿ, ರಾಜಕುಮಾರ್, ಕಲ್ಯಾಣಕುಮಾರ್, ಹೆಚ್. ರಾಮಚಂದ್ರ. ಶಾಸ್ತ್ರಿ, ನರಸಿಂಹರಾಜು, ಜಿ.ವಿ.ಅಯ್ಯರ್, ಬೇಬಿ ಉಮಾ ಮತ್ತು ಮಾಸ್ಟರ್ ಆನಂದ್, ಹೆಚ್. ಕೃಷ್ಣ ಶಾಸ್ತ್ರಿ, ಸಿದ್ದಯ್ಯಸ್ವಾಮಿ, ಗಣಪತಿ ಭಟ್, ಬಸವರಾಜ್, ಬಿ.ಶಾಂತಮ್ಮ, ಗುಗ್ಗು ಮತ್ತಿತರರು.
ಹಿನ್ನೆಲೆ ಗಾಯಕರು :
ಪಿ.ಲೀಲಾ, ಪಿ.ಶುಶೀಲಾ, ಎ.ಪಿ. ಕೋಮಲಾ, ಜಮುನಾರಾಣಿ, ಸತ್ಯವತಿ, ಸರೋಜಿನಿ, ಘಂಟಸಾಲ, T.M. ಸೌಂದರರಾಜನ್, ಪಿ.ಬಿ. ಶ್ರೀನಿವಾಸ್, ರಘುನಾಥ ಪಾಣಿಗ್ರಾಹಿ, ರಾಜಕುಮಾರ್, ಜಿ.ಕೆ. ವೆಂಕಟೇಶ್.
ಸಂಭಾಷಣೆ, ಸಹನಿರ್ದೇಶನ : ಜಿ.ವಿ.ಅಯ್ಯರ್.
ಗೀತೆಗಳು : ಕು.ರ. ಸೀತಾರಾಮ ಶಾಸ್ತ್ರಿ, ವಿಜಯನಾರಸಿಂಹ.
ಛಾಯಾ ನಿರ್ದೇಶನ : ಬಿ. ದೊರೈರಾಜ್. ಸಹಾಯಕರು : P.N. ಸುಂದರಂ ಮತ್ತು ಯತೀಂದ್ರನ್
ಶಬ್ದ ನಿರ್ದೇಶನ : ಎ. ಕೃಷ್ಣನ್.
ಶಬ್ದಗ್ರಹಣ :ಈ. ವೆಂಕಟಾಚಲಂ.
ಎಡಿಟಿಂಗ್ : ರಾಜನ್ ಮತ್ತು ವೆಂಕಟರಾಮ್
ಸಂಗೀತ : ಜಿ.ಕೆ. ವೆಂಕಟೇಶ್.
ನೃತ್ಯ : ಪಿ.ಎಸ್. ಗೋಪಾಲಕೃಷ್ಣನ್.
ಲ್ಯಾಬೊರೇಟರಿ : ವಿಜಯಾ.
ಪ್ರೊಸೆಸಿಂಗ್ : S.V. ವೆಂಕಟರಾಮನ್.
ಸ್ಟುಡಿಯೊ : ವಾಹಿನಿ.
ಧ್ವನಿಮುದ್ರಣ : Westrex
ಪಬ್ಲಿಸಿಟಿ : ಕಟಕ.
ಹಂಚಿಕೆ : ಕರ್ನಾಟಕ ಫಿಲಂಸ್ ಮತ್ತು ಶ್ರೀನಿವಾಸ ಪಿಕ್ಚರ್ಸ್

ಹಾಡುಗಳು

01. ಬನ್ನಿ ಬಾಲೆಯರೆ
ರಚನೆ : ಕುರಸೀ
ಹಾಡಿದವರು : ಎ.ಪಿ. ಕೋಮಲಾ, ಸತ್ಯವತಿ, ಸರೋಜಿನಿ ಮತ್ತು ಸಂಗಡಿಗರು.

ಹರಿಕಾಂಬೋಜಿ ರಾಗದ ಸ್ವರಗಳನ್ನು ಹೊಂದಿರುವ ಈ ಸಮೂಹಗಾನ ನೌಷಾದ್ ಅವರ ಆನ್ ಮತ್ತು ಮದರ್ ಇಂಡಿಯಾ ಚಿತ್ರದ ಹಾಡುಗಳನ್ನು ನೆನಪಿಸುತ್ತದೆ.  ಮೊದಲ ಚರಣದ ವರೆಗೆ ಆದಿತಾಳದಲ್ಲಿ ಸಾಗುವ ಈ ಹಾಡಿನ ನಡೆ ನಂತರ 7 ಅಕ್ಷರಗಳ ತ್ರಿಪುಟ ತಾಳಕ್ಕೆ ಬದಲಾಗುತ್ತದೆ. ಬೂತಯ್ಯನ ಮಗ ಅಯ್ಯು ಚಿತ್ರದ ಸೋಬಾನ ಸೋಬಾನ ಹಾಡು ಇದೇ ನಡೆಯಲ್ಲಿರುವುದನ್ನು ನೆನಪು ಮಾಡಿಕೊಳ್ಳಬಹುದು. ಈ ಹಾಡಿನಲ್ಲಿ ಅನೇಕ ಗಾಯಕಿಯರ ಧ್ವನಿಯಿದ್ದು ಪಟ್ಟಿಯಲ್ಲ್ಲಿ ಹೆಸರಿಲ್ಲದಿದ್ದರೂ ಒಂದೆರಡು ಸಾಲುಗಳಲ್ಲಿ ಎಲ್.ಆರ್. ಈಶ್ವರಿ ಧ್ವನಿ ಕೇಳಿದ ಅನುಭವವಾಗುತ್ತದೆ. ಅವರು ಕೋರಸ್ ಭಾಗವಾಗಿ ಹಾಡಿರುವ ಸಾಧ್ಯತೆಯೂ ಇದೆ. ರಾಜೇಶ್ವರಿ ಎಂಬ ಹೆಸರಿನಿಂದ ಅವರು ಕನ್ನಡದಲ್ಲಿ ಮೊದಲು ಹಾಡಿದ್ದು 1958ರ ಅಣ್ಣ ತಂಗಿ ಚಿತ್ರದ ಕಂಡರೂ ಕಾಣದ್‌ಹಾಂಗೆ ಹಾಡು.
 
ಬನ್ನಿ ಬಾಲೆಯರೆ ಹೊನ್ನಿನಾರತಿಯ
ತನ್ನಿ ನಮ್ಮ ಯುವರಾಜನಿಗೆ
ಕೋಟಿಸೂರ್ಯ ಸಮ ತೇಜನಿಗೆ
ಕೋಮಲಾಂಗ ಸುಮಬಾಲನಿಗೆ

ಯುವರಾಜನ ಶುಭ ಯೋಗ
ಭುವಿಗೀಯಲಿ ಸಂಪದವೀಗ
ಆನಂದದ ಭಾವಾವೇಗ
ಮೊರೆಯಲಿ ಹರುಷದ ರಾಗ
ಅನುರಾಗ ಅದೇ ಯೋಗ ಯಾಗ ಭೋಗ
ಸರ್ವಧರ್ಮಗಳ ಸನ್ಮಾರ್ಗ

ಊರು ಹೆಂಗಳ ದೃಷ್ಟಿಯ
ನೂರಾರು ಕಂಗಳ ದೃಷ್ಟಿಯ
ತೆಗೆದು ನೀವಾಳಿಸಲು ಬನ್ನಿರೆ
ಅರಸು ಕುವರನಿಗಾರತಿ ಈ
ಸೊಗಸು ಮೂರುತಿಗಾರತಿ

ಚೆಲುವರಾಯಗೆ ಒಲವಿನಾರತಿ
ಬೆಳಗಿ ನಲವ ತನ್ನಿರೇ
ನಿರುತ ನಿರ್ಮಲ ಹರುಷ ಜೀವನ
ಹರಸಿ ಮೆರೆವ ಬನ್ನಿರೆ


02. ನೀ ಎಮ್ಮ ಜೀವ
ರಚನೆ : ವಿಜಯನಾರಸಿಂಹ
ಹಾಡಿದವರು :ಎ.ಪಿ. ಕೋಮಲಾ, ಸತ್ಯವತಿ


ಶಂಕರಾಭರಣ ಮತ್ತು ಹರಿಕಾಂಬೋಜಿ ಮಿಶ್ರ ಸ್ವರಗಳನ್ನು ಹೊಂದಿದ ಈ ಹಾಡು ತಿಶ್ರ ನಡೆಯಲ್ಲಿದೆ.  ಬಾಲಕ ಓಹಿಲ ಮತ್ತು ಆತನ ಒಡನಾಡಿ ಉಮಾ ದೇವರನ್ನು ಪೂಜಿಸುತ್ತಾ ಹಾಡುವ ಇದರ ಸಾಹಿತ್ಯ ಮಕ್ಕಳಿಗೆ ಸಹಜವಾದ ಸರಳ ಪದಗಳನ್ನು ಹೊಂದಿದೆ.  ಸಿತಾರ್, ಕೊಳಲು, ತಬ್ಲಾಗಳ ಸರಳ ಹಿಮ್ಮೇಳ ಹೊಂದಿದ ಧಾಟಿಯೂ ಸರಳವಾಗಿಯೇ ಇದೆ.  ಚಿತ್ರದಲ್ಲಿ ಈ ಹಾಡು ಸಂದರ್ಭಕ್ಕೆ ತಕ್ಕಂತೆ ಅರ್ಧಕ್ಕೆ ಕೊನೆಗೊಳ್ಳುತ್ತದೆ.  ಸುಗಮ ಕೇಳುವಿಕೆಗಾಗಿ ಅದನ್ನು ಇಲ್ಲಿ ಸರಿಪಡಿಸಿದ್ದೇನೆ.
 
ನೀನೆಮ್ಮ ಜೀವ ಶರಣು ಮಹಾದೇವ
ಶಂಕರನೇ ಕಾಯುವುದೈ ಕರುಣಾಂತರಂಗ
ನೀನೆಮ್ಮ ಜೀವ ಶರಣು ಮಹಾದೇವ

ಅತ್ತಾಗ ಕಣ್ಣೊರಸಿ ತುತ್ತಿಡುವೆಯಂತೆ
ಕತ್ತಲಲಿ ಹೆದರಿದರೆ ನೀ ಕಾಯುವಂತೆ
ಹತ್ತಿರವೇ ಬಾ ಗೌರಿ ಶಿವನೊಡನೆ ತಾಯೇ
ಮುತ್ತಂತೆ ನಮ್ಮನ್ನ ಚೆನ್ನಾಗಿ ಕಾಯೇ

ನೋಡಿದೆನಲ್ಲ ಲೋಕದ ನೋವ
ಬೇಡುವ ಕೈಯ ಮುಪ್ಪಿನ ಮೈಯ
ಕೋಪವಿದೇಕೆ ದೀನರ ಮೇಲೆ
ಸರಿಯೇನೋ ಈ ನೀತಿ ನಿನಗೆ ಮಹೇಶ

ತಂದೆಯೂ ನೀನೇ ತಾಯಿಯು ನೀನೆ
ವಂದಿಸಿ ನಲಿವ ಬಾಲರ ನೋಡು
ನಂದದ ಜ್ಯೋತಿಯ ಬೆಳಗಿಸು ದೇವ
ಸರಿಯೇನೋ ಈ ನೀತಿ ನಿನಗೆ ಮಹೇಶ


03. ಪಾವನ ಪರಶಿವ
ರಚನೆ : ಕುರಸೀ
ಹಾಡಿದವರು : ಸಿ.ಎಸ್. ಸರೋಜಿನಿ, ಪಿ.ಲೀಲಾ.


ಬಾಲಕಿ ಗೌರಿ ಸಿ.ಎಸ್. ಸರೋಜಿನಿಯ ಧ್ವನಿಯಲ್ಲಿ ಶಂಕರಾಭರಣ ಸ್ವರಗಳಲ್ಲಿ ತಬ್ಲಾದ ಮಧ್ಯ ಲಯದ ಲಘು ಶೈಲಿಯಲ್ಲಿ ಹಾಡಲು ಆರಂಭಿಸಿ ಹಾಡಿನ ಮಧ್ಯದಲ್ಲಿ ತರುಣಿಯಾಗಿ ಮಾರ್ಪಟ್ಟು  ವಲಚಿ ರಾಗ ಛಾಯೆಯ ಶಾಸ್ತ್ರೀಯ ಶೈಲಿಯಲ್ಲಿ ದ್ರುತ ಲಯದೊಂದಿಗೆ ಪಿ.ಲೀಲಾ ಅವರ ಧ್ವನಿಯಲ್ಲಿ ಮುಂದುವರಿಸುತ್ತಾಳೆ.  ಪಿ.ಲೀಲಾ ಅವರಿಗೆ ಇಡೀ ಚಿತ್ರದಲ್ಲಿ ಈ ಅರ್ಧ ಹಾಡು ಮಾತ್ರ ಇರುವುದು. ಮಹೇಂದ್ರ ಕಪೂರ್ ಅವರಿಗೆ ಸಂಗಂ ಚಿತ್ರದ ಹರ್ ದಿಲ್ ಜೊ ಪ್ಯಾರ್ ಕರೇಗಾ ಹಾಡಿನ ಒಂದು ಚರಣದಲ್ಲಿ ಮಾತ್ರ ಅವಕಾಶವಿದ್ದಂತೆ.
 
ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಕಣ್ಣು ಕಾಣದೆ ಮಾಡಿದ ತಪ್ಪನು
ಮನ್ನಿಸಿ ಕಾಯೋ ಮಹದೇವ
ದೀನರ ಪಾಲಿನ ಪರದೈವ
ಮನ್ನಿಸಿ ಕಾಯೋ ಮಹದೇವ

ಏನು ಬೇಡಲೂ ತೋರದು ನನಗೆ
ನೀನಿರು ಜತೆಗೆ ಶಂಕರನೇ
ಕಾಣೆನು ದೇವನೆ ದಾರಿಯನೇ
ನೀನಿರು ಜತೆಗೆ ಶಂಕರನೇ

ಕಣ್ಣು ಕಾಣದೆ ಮಾಡಿದ ತಪ್ಪನು
ಮನ್ನಿಸಿ ಕಾಯೋ ಮಹದೇವ
ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ

ಕಾಡುಹೂವಲಿ ಪರಿಮಳ ಬೆರಸಿ
ಬಾಡುವ ಮೊದಲೇ ಮುಡಿಯೊಳಗಿರಿಸಿ
ಮೂರು ಗಳಿಗೆಯ ಬಾಳನು ಮೆರೆಸಿ
ಪಾರುಗಾಣಿಸೋ ಕರುಣೆಯನಿರಿಸಿ

04. ನಿಧಿಯೊಂದ ನಿನಗಾಗಿ
ರಚನೆ : ಕುರಸೀ
ಹಾಡಿದವರು : ಪಿ.ಸುಶೀಲಾ


ಇದು ಶಿವಭಕ್ತನ ಕಥೆಯಾದ್ದರಿಂದ ಬಹುಶಃ ಜಿ.ಕೆ. ವೆಂಕಟೇಶ್ ಅವರು ಶಂಕರಾಭರಣ ಸ್ವರಗಳನ್ನೇ ಹೆಚ್ಚು ಹಾಡುಗಳಲ್ಲಿ ಬಳಸಿದ್ದಾರೆ. ಈ ಹಾಡು ಕೂಡ ನಿಷಾದವನ್ನು ಬದಲಾಯಿಸುತ್ತಾ  ಶಂಕರಾಭರಣ - ಹರಿಕಾಂಬೋಜಿ ಸ್ವರಗಳಲ್ಲೇ ಸಾಗುತ್ತದೆ. ಉಮಾ ಮತ್ತು ಓಹಿಲರ ವಿವಾಹ ನೆರವೇರುತ್ತದೆಂಬ ಕಲ್ಪನೆಯಿಂದ ಗೌರಿಯು ಗೆಳತಿಯನ್ನು ಛೇಡಿಸುವ ಹಾಡಿದು.  ಜಾನಪದ ಸ್ವಾದ ಇರುವ ತಿಶ್ರ ನಡೆಯ ಈ ಹಾಡಲ್ಲಿ ಢೋಲಕ್, ಮ್ಯಾಂಡೊಲಿನ್ ಮುಖ್ಯವಾಗಿ ಕೇಳಿಸುತ್ತವೆ. Interludeನಲ್ಲಿ ಬಾಸ್ ಗಿಟಾರ್, ಕೊಳಲು, ವಯಲಿನ್ಸ್,  ಮ್ಯಾಂಡೊಲಿನ್ ಇವೆ.  ಚರಣಗಳು ಸಾಮಾನ್ಯ ಹಾಡುಗಳಂತೆ 2-3 ಸಾಲು ಇರದೆ ಒಂದಕ್ಕೊಂದು ಜೋಡಿಸಿದ ದಾರದಂತೆ ಉದ್ದವಾಗಿವೆ.  ಹಾಡಿನುದ್ದಕ್ಕೂ ಕುರಸೀ ಅವರ ವೈಶಿಷ್ಟ್ಯವಾದ ಒಳ ಪ್ರಾಸದ ಪದಗಳಿವೆ.  ನಾನು ಈ ಹಾಡು ಮೊದಲು ಕೇಳಿದ್ದು ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಿನ ಭಾಗವಾಗಿ.
 
ನಿಧಿಯೊಂದ ನಿನಗಾಗಿ ವಿಧಿರಾಯ ಕರೆತಂದ
ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ
ನಿನ್ನ ಜೋಡಿ ಅವ ಸಿಂಗಾರ

ಮನವನ್ನೇ ಸೂರೆಗೈವ ಮಾಯ ಮಂತ್ರಗಾರ
ಈ ನರ ನವ ಕಿನ್ನರ
ವನ ಸುತ್ತಿ ವಿಹರಿಸುತ್ತ
ಚಿತ್ತ ಕೆಡುವ ಮತ್ತು
ಮಂತ್ರವನೂದಿದ್ದ ಈ ಚೋರ
ಬಂದು ನೀನಲ್ಲಿ ಬೀರಿದೆ ವೈಯಾರ
ವಾರೆ ನೋಟ ನೂರು ಬಗೆ ಕಣ್ಣಾರ
ಮೂರು ಲೋಕ ನಾಚಿಸುವ ಸಿಂಗಾರ

ಕಣ್ಣ ಕಿರಣದಲ್ಲೆ ಕಳ್ಳ ಗೆಳೆತನವ
ತೋರಿದ ಮೋಹ ತೂರಿದ
ಮೋಹ ಮಲ್ಲೆ ಮಲರುವಲ್ಲೆ
ಸ್ನೇಹ ಮಧುವ ಹೊರ
ನೂಕುವ ಕಾಲ ಓಡಿ ಬಂದಿದೆ
ನಿನ್ನ ಸೌಭಾಗ್ಯ ಮಾಲೆ ಕಾದು ನಿಂತಿದೆ
ನೂರು ಹಾಸ ಭಾಸಗಳ ತಂದಿದೆ
ನಿನ್ನ ಹಾವಭಾವದಲಿ ಒಂದಿದೆ


05. ಹರಿಯಲಿ ವಸಂತ ಧಾರೆ
ರಚನೆ : ಕುರಸೀ
ಹಾಡಿದವರು : ಜಮುನಾರಾಣಿ ಮತ್ತು ಸಂಗಡಿಗರು.


ಅಲ್ಲಿ ಇಲ್ಲಿ ಬೇರೆ ಸ್ವರಗಳನ್ನು ಸ್ಪರ್ಷಿಸುತ್ತಾ ಭೈರವಿ ರಾಗದಲ್ಲಿ ವಿಹರಿಸುವ ಈ ಆನಂದೋಲ್ಲಾಸದ ಹಾಡು  ರಾಜಕುಮಾರಿ ಉಮಾ ಮತ್ತು ಉದ್ಭಟ ರಾಜನ ಮದುವೆಯ ಸಂಭ್ರಮ ಸಂದರ್ಭದ್ದು. ತೆಲುಗಿನ ರಾಜೇಶ್ವರ ರಾವ್, ಪೆಂಡ್ಯಾಲ, ಘಂಟಸಾಲ ಮುಂತಾದವರ ಶೈಲಿಯಲ್ಲಿದೆ. ಇದರಲ್ಲಿ ಬರುವ ಬಿಗುಮಾನ ಸಾಕೆ ತಾವರೆ ಸಾಲು ಅಲೌಕಿಕ ಅನುಭೂತಿ ಉಂಟು ಮಾಡುತ್ತದೆ.  ಶ್ರುತಿಯಲ್ಲಿರುವ ಢೋಲಕ್ ಲಯ ಹಾಡಿಗೆ ಉತ್ತಮ ಉಠಾವ್ ಒದಗಿಸಿದೆ.
 
ಹೊಳೆ ಹರಿಯಲಿ ವಸಂತ ಧಾರೆ
ಕಿರುನಗೆಯ ಬೀರುತ ಬಾರೆ
ರವಿ ಬಂದ ನೋಡೆ ಚದುರೆ
ಬಿಗುಮಾನ ಸಾಕೆ ತಾವರೆ

ಹಗಲು ಬರುವ ಮೊದಲು ಏಕೆ
ಮುಗಿಲು ಕೆಂಪಿನ ಸಾಲು
ರವಿರಾಯನ ರಥದಲ್ಲೂ
ಹೊರ ಚೆಲ್ಲುವ ಕೆಂಧೂಳು
ಸುಳ್ಳು ಸುದ್ದಿ ಪೊಳ್ಳು ಕಥೆ ಬೇಡ
ಜನ ನಂಬದಂಥ ಮಾತ ಹೇಳ ಬೇಡ
ಬಲು ಜಾಣೆ ನೀನೇ ಪೇಳೆ
ಸುರಲೋಕದ ಕೆನ್ನೀರೇ
ಶುಭ ರಾಣಿ ತಂದು ಚೆಲ್ಲಿರೆ
ಕೆಂಪಾದದು ಸೂರ್ಯನ ಮೋರೆ

ಹರೆಯ ಬಂದ ಸಮಯ ಇವ
ಗೆಳೆಯ ಕೋಮಲರಾಯ
ಇವನಾರೇ ಈವಯ್ಯ
ಇದು ಯಾರೋ ಪರಕೀಯ
ಅಲ್ಲಿ ಇಲ್ಲಿ ಸುತ್ತಿ ಬಂದ ಧೀರ ಇವ
ಳಂತರಂಗ ಸೂರೆಗೈದು ಪೂರ
ಭಲೇ ಶೂರ ಭಾರೀ ಚೋರ
ಸರಿ ತನ್ನಿರೆ ಕೆನ್ನೀರ
ಪಿಚಕಾರಿ ತುಂಬಿ ಚೆಲ್ಲಿರೇ
ಕೆಂಪಾಗಲಿ ಈತನ ಮೋರೆ


06. ಓ ಸುರ ಸುಂದರಿ
ರಚನೆ : ಕುರಸೀ
ಹಾಡಿದವರು : ಜಮುನಾರಾಣಿ ಮತ್ತು ಸಂಗಡಿಗರು.


ತನ್ನ ಗುರು ತಪೋಶಕ್ತಿಯಿಂದ  ಸ್ವರ್ಗಲೋಕದ ಅಪ್ಸರೆಯರೊಂದಿಗೆ ಮದಿರಾಪಾನ ಮಾಡುತ್ತಾ ನರ್ತಿಸಿದಂತೆ ಶುಕನಿಗೆ ಭಾಸವಾಗುವ  ಸಂದರ್ಭದ ಹಾಡಿದು. ಆರಂಭ ಸಲಿಲ್ ಚೌಧುರಿ ಅವರ ಯಾವುದೋ ಹಾಡು ಕೇಳುತ್ತಿದ್ದೇವೇನೋ ಎಂಬ ಭ್ರಮೆ ಉಂಟು ಮಾಡುತ್ತದೆ. ತಿಶ್ರ ನಡೆಯಲ್ಲಿದೆ.  ಅನುಮಾನವೇನು ಪದದ ನಂತರ ಚೇಲೋದಲ್ಲಿ ನುಡಿಸುವ ಒಂದು ಸಣ್ಣ ಬ್ರಿಜ್ ಪೀಸ್ ವಿಶೇಷ ಪರಿಣಾಮ ಉಂಟು ಮಾಡಿದೆ.  ಕಥೆಯಲ್ಲಿ ಕಾಲ್ಪನಿಕ ಸಂದರ್ಭವಾದ್ದರಿಂದ ಗಿಟಾರ್, ಕ್ಲಾರಿನೆಟ್ ಇತ್ಯಾದಿಗಳನ್ನು ಬಳಸಿ ಮೆಲೊಡಿ ಕೌಂಟರ್ ಮೆಲೊಡಿಗಳ interlude  ಬಳಸಲಾಗಿದೆ. ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ಋಷಿ ಮುನಿಗಳ ಸುತ್ತ ಅಪ್ಸರೆಯರು ನರ್ತಿಸುವುದುಂಟು.  ಆದರೆ ಇಲ್ಲಿ ಮುನಿಯೂ ನೃತ್ಯದಲ್ಲಿ ಭಾಗಿಯಾಗಿರುವುದು ವಿಶೇಷ.
 
ಓ ಸುರಸುಂದರಿ ಬಾರೆಂದೆಯಾ ಸುಖ ತಾರೆಂದೆಯಾ
ನಾನೂ ನೀನು ಹಾಲು ಜೇನು ಅನುಮಾನವೇನು

ಕೈಲಾಸ ವಾಸ ನೀ ಕೋರಿದಂದು
ನೀ ಕೋರಿದಂದು
ಈ ಪಾನಕಾನೇ ತಂದೀವುದು
ಇದೇ ಸಾಕೇನು ಸದಾ ಬೇಕೇನು
ನಾನೂ ನೀನು ಹಾಲು ಜೇನು ಅನುಮಾನವೇನು

ವೇದಾಂತ ಸಾರ ಈ ನೃತ್ಯ ಗೀತ
ಈ ನೃತ್ಯ ಗೀತ
ಭಾವಾನುರಾಗ  ಧ್ಯಾನಾಮೃತ
ಭಲೇ ಚಾತುರ್ಯ  ಅತಿ ಮಾಧುರ್ಯ
ಏನೀ ಧೈರ್ಯ ಏನಾಶ್ಚರ್ಯ
ಅಪರೂಪ ನ್ಯಾಯ


07. ಕೋ ಜನ್ಮದಾತಾ
ರಚನೆ : ವಿಜಯನಾರಸಿಂಹ
ಹಾಡಿದವರು : ಪಿ.ಸುಶೀಲಾ


ಇದು ಟೈಪಿಂಗ್ ಮಿಸ್ಟೇಕ್ ಅಂದುಕೊಂಡಿರಾ?  ಖಂಡಿತ ಅಲ್ಲ.  ಎಲ್ಲರೂ ಸಹಜವಾಗಿಯೇ ಅಂದುಕೊಳ್ಳುವಂತೆ   ಈ ಹಾಡಿನ ಮೊದಲ ಸಾಲು  ‘ಓ ಜನ್ಮದಾತಾ’ ಅಲ್ಲ. ಅದು  ‘ಕೋ ಜನ್ಮದಾತಾ’.  ಅಂದರೆ ನಾನು ಬೇರೇನೂ ನೀಡಲಾರೆ, ಕಣ್ಣೀರ ಧಾರೆಯನ್ನೇ ಕೋ ಅಂದರೆ ತೆಗೆದು ಕೋ ಎಂದರ್ಥ.  ಅರಮನೆಯನ್ನು ತ್ಯಜಿಸಿ ಬಂದ ಗೌರಿಗೆ ತನ್ನ ತಂದೆಯ ಸಾವಿನ ಸುದ್ದಿ ತಿಳಿದಾಗ ತನ್ನ ದುರ್ವಿಧಿಯನ್ನು ನೆನೆದು ಆಕೆ ಶೋಕಿಸುವ ಸಂದರ್ಭದ ಹಾಡಿದು. 22ನೇ ಮೇಳಕರ್ತ ಖರಹರಪ್ರಿಯ ಜನ್ಯ ಸ್ವರಗಳನ್ನು ಹೊಂದಿದೆ. 5 ಅಕ್ಷರಗಳ ಜಂಪೆ ತಾಳದಲ್ಲಿದೆ. ಚರಣದ ಮಧ್ಯದಲ್ಲಿ ಕ್ಲಿಷ್ಟಕರವಾದ ಆಲಾಪ ಇದೆ.
 
ಕೋ ಜನ್ಮದಾತಾ ಆಜನ್ಮ ಪೂರ್ತ
ಕಣ್ಣೀರ ಧಾರೆ
ಇನ್ನೇನು ಬೇರೆ ನಾ ನೀಡಲಾರೆ

ಹೊರಹೊಮ್ಮಿ ಎದೆಯಿಂದ ಕಣ್ಣಾರೆ ಬಂದ
ಗಂಗೋದಕ
ಹಾರೈಸಿ ಮರೆಯಾದ ನಿನ್ನಾತ್ಮ ತಣಿಸೆ
ಹಾರೈಸಿ ನಾ ತಂದ ಈ ಶೋಕ ಧಾರೆ
ಈ ಅಂತ್ಯ ಧಾರೆ

ಕೈಲಾಸ ನಿನಗಾಗಿ ಕೈ ಚಾಚಿ ಕರೆದು
ಬಾ ಎಂದಿತೇ
ನಿನ್ನಾಯು ಇಂತೇ ಹಣ್ಣಾಯಿತೇಕೆ
ಓ ನನ್ನ ತಂದೆ ನಾ ನೀವುದೊಂದೇ
ಈ ಅಂತ್ಯ ಧಾರೆ

08. ಯಾರಿಗೆ ಯಾರಿಹರೋ
ರಚನೆ : ಕುರಸೀ
ಹಾಡಿದವರು : ರಘುನಾಥ ಪಾಣಿಗ್ರಾಹಿ.


ಮಾಯಾಮಾಳವಗೌಳದಲ್ಲಿ ಅನ್ಯ ಸ್ವರವಾಗಿ  ಗ2 ಅಂದರೆ ಸಾಧಾರಣ ಗಾಂಧಾರ(ಹಿಂದುಸ್ಠಾನಿಯಲ್ಲಿ ಕೋಮಲ ಗಾಂಧಾರ) ಬಳಸಿದ ಶೋಕ ಛಾಯೆಯ ಈ ಹಿನ್ನೆಲೆ ಹಾಡಿನ ಒಂದೇ ಚರಣ ಲಭ್ಯವಿರುವುದು.  ಪ್ರಖ್ಯಾತ ನೃತ್ಯಾಂಗನೆ ಸಂಯುಕ್ತಾ ಪಾಣಿಗ್ರಾಹಿಯ ಪತಿ ರಘುನಾಥ ಪಾಣಿಗ್ರಾಹಿ ಹಿನ್ನೆಲೆಯ ಹಾಡುಗಳಿಗೇ ಸೀಮಿತವಾಗಿದ್ದವರು.  ಪ್ರೇಮದ ಪುತ್ರಿಯ ಪ್ರೇಮವೇ ದೈವ ಇವರ ಪ್ರಸಿದ್ಧ ಹಾಡು.
 
ಯಾರಿಗೆ ಯಾರಿಹರೋ
ಬಾಳಿನ ಜಾತ್ರೆಯು ಸೇರಿಹುದೋ

ಜಾತ್ರೆಯಲಿರುವ ನೆರೆಹೊರೆ ಎಲ್ಲ
ನೆಂಟರು ನಿನಗೆ ಎಲ್ಲಿಯ ವರೆಗೆ
ಆಸೆಯ ಹೂಮಾಲೆ ಮೋಹದ ಲೀಲೆ
ಮೋಸದ ಬಲೆಯೇ ಆ ಮೇಲೆ
ಯಾರಿಗೆ ಯಾರಿಹರೋ
ಬಾಳಿನ ಜಾತ್ರೆಯು ಸೇರಿಹುದೋ

09. ಶರಣು ಶಂಭೋ
ರಚನೆ : ಕುರಸೀ
ಹಾಡಿದವರು : ರಾಜ್‌ಕುಮಾರ್.


ಪಂತುವರಾಳಿ ಮಿಶ್ರ ಸ್ವರಗಳಿರುವ ಈ ಹಾಡನ್ನು ರಾಜ್‌ಕುಮಾರ್ ಅವರು ವೃತ್ತಿಪರ ಗಾಯಕರಿಗೆ ಕಮ್ಮಿ ಇಲ್ಲದಂತೆ ಹಾಡಿದ್ದಾರೆ.  ಅವರ ಮೊದಲ ಹಾಡೆಂದು ಇದಕ್ಕೆ ಚಾರಿತ್ರಿಕ ಮಹತ್ವ. ಮೊದಲ ಚಿತ್ರ ಬೇಡರ ಕಣ್ಣಪ್ಪದಲ್ಲಿ ಅವರಿಗಾಗಿ ಹಾಡಿದ ಸಿ.ಎಸ್. ಜಯರಾಮನ್ ಶೈಲಿಯ ಪ್ರಭಾವ ಕೆಲವು ಸಾಲುಗಳಲ್ಲಿ ಗೋಚರಿಸುತ್ತದೆ. ಆದರೆ ಆ ಕಾಲದಲ್ಲಿ ಈ ಹಾಡಿಗೆ ಸಿಗಬೇಕಾದಷ್ಟು ಮಾನ್ಯತೆ ಸಿಕ್ಕಿಲ್ಲ ಎಂದೇ ಹೇಳಬೇಕು.  ನನಗಿದನ್ನು ರೇಡಿಯೋದಲ್ಲಿ ಎಂದೂ ಕೇಳಿದ ನೆನಪಿಲ್ಲ.  ಇದರ ಗ್ರಾಮಫೋನ್ ತಟ್ಟೆಯೇ ತಯಾರಾಗಿರಲಿಲ್ಲವೇನೋ ಎಂಬ ಅನುಮಾನ ನನಗಿತ್ತು.  ಆದರೆ ಆಗಿತ್ತು ಎಂದು ಈಗ ಗೊತ್ತಾಯಿತು.  ಡಿಸ್ಕ್ ಲೇಬಲ್‌ನಲ್ಲಿ ಅವರ ಹೆಸರು S.P. Rajakumar ಎಂದಿರುವುದನ್ನು ಗಮನಿಸಬಹುದು.


 
ಓಂ ನಮಃ ಶಿವಾಯ  ಓಂ ನಮಃ ಶಿವಾಯ
ಶರಣು ಶಂಭೋ ಶಿವ ಶರಣು ಶಂಭೋ
ಎನ್ನ ಗುರು ತೋರಿದ ಸೋಮೇಶ ಪ್ರಭು

ದಿನ ನೂರು ನೋವು
ಕೊನೆಗೊಂದು ಸಾವು
ದೇಹಕೆ ಬರಲೇಕೆ ಪರಮೇಶ
ಈ ಸ್ಥಿರ ನಾಶ
ಗುರುಚಿರ ಮೋಕ್ಷ
ಒಂದೇ ಅವಿನಾಶ
ಅದನೇ ಪಡೆದೇನೇ ಪ್ರಭು

ಆದಿಮೂಲ ಕರುಣಾಲವಾಲ
ಪರಿಪೂರ್ಣ ಶಾಂತಗುಣ ಸುಶೀಲ
ನೀಲಕಂಠ ನಿಗಮಾಂತಸಾರ
ಸ್ವಾಪಾಂಚಕೇಶನಿವ ನಿವಾಲ

ಸತಿಸೌಖ್ಯದಿಂದ ಮತಿಗೇಡಿಯಾದೆ
ಜಾಡಿಗೆ ಬರುವಲ್ಲಿ ತಡವಾದೆ
ನಾ ತಡವಾದೆ
ಶರಣರು ನಿಂತ ನಿನ್ನ ಹೊಸಿಲಲ್ಲಿ
ಕಸವಾಗಿಸಿ ಕಾಯೋ ಪ್ರಭು

10. ನಾ ಪಾಪವದೇನಾ ಮಾಡಿದೆನೋ
ರಚನೆ : ವಿಜಯನಾರಸಿಂಹ
ಹಾಡಿದವರು: ಪಿ.ಬಿ.ಶ್ರೀನಿವಾಸ್.


ಹರಿಕಾಂಭೋಜಿ ಸ್ವರಗಳ ಈ ಹಾಡು ರಾಜ್‌ಕುಮಾರ್ ಅವರಿಗಾಗಿ ಪಿ.ಬಿ.ಎಸ್ ಪ್ರಥಮವಾಗಿ ಧ್ವನಿ ನೀಡಿದ್ದೆಂಬ ಚಾರಿತ್ರಿಕ ಮಹತ್ವದ್ದು. 1953ರ ಜಾತಕ ಫಲದಲ್ಲಿ ಈ ಮೂಢತನವಿದೇಕೆ  ಮತ್ತು ಚಿಂತಿಸದಿರು ರಮಣಿ ಹಾಡುಗಳ ನಂತರ 1955ರ ಆದರ್ಶ ಸತಿಯ ಪಾಪಿಯ ಜೀವನ ಪಾವನಗೊಳಿಸುವ ಪರಶಿವ ಲಿಂಗ ನಮೋ ಸೂಪರ್ ಹಿಟ್ ಆಗಿ ಪಿ.ಬಿ.ಶ್ರೀನಿವಾಸ್ ಕನ್ನಡದಲ್ಲಿ ಮನೆ ಮಾತಾಗಿದ್ದರು.  ನಂತರ ಬಂದದ್ದೇ ಈ ಹಾಡು. ರಾಜ್‌ಕುಮಾರ್ ಅವರು D Sharp ಶ್ರುತಿಯಲ್ಲಿ ಶರಣು ಶಂಭೋ ಹಾಡಿದ್ದರೆ ಅದಕ್ಕಿಂತ ಒಂದು ಪಟ್ಟಿ ಕೆಳಗೆ  C Sharpನಲ್ಲಿ ಈ ಹಾಡಿತ್ತು.  ಪಿ.ಬಿ.ಎಸ್ ಪ್ರತಿಭೆ ಪೂರ್ಣ ಹೊರ ಹೊಮ್ಮುವುದು ಮಧ್ಯ ಮತ್ತು ಮಂದ್ರ ಸಪ್ತಕಗಳಲ್ಲಿ.  ಈ ಹಾಡಿನ ಬಹುತೇಕ ಭಾಗ   ಮಂದ್ರ ಪಂಚಮದಿಂದ ಆರಂಭಿಸಿ ಅವರಿಗೆ ಅನುಕೂಲವಾದ ಮಧ್ಯ ಸಪ್ತಕದಲ್ಲೇ ಸಂಚರಿಸುತ್ತದೆ. ಆದರೆ  ಕೊನೆಯ ಭಾಗದ ಸಾಲುಗಳು  ತಾರ ಸಪ್ತಕದ ಮಧ್ಯಮದ ವರೆಗೆ ಹೋಗುವುದು ಅವರಿಗೆ ಸ್ವಲ್ಪ ಅನಾನುಕೂಲವಾಯಿತೇನೋ ಎಂದೆನ್ನಿಸುತ್ತದೆ.  ರಫಿಯವರ ಓ ದುನಿಯಾ ಕೇ ರಖ್‌ವಾಲೇಯ ನಂತರ ಹಾಡುಗಳನ್ನು ತಾರ ಸ್ಥಾಯಿಗೊಯ್ಯುವ ಪರಿಪಾಠ ಆರಂಭವಾಗಿತ್ತು.  ಈ ಹಾಡಿನ ತುಣುಕು  ಕೂಡ ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಿನ ಭಾಗವಾಗಿತ್ತು.
 
ನಾ ಪಾಪವದೇನಾ ಮಾಡಿದೆನೋ
ನಿನ್ನ ಪಾದಕೆ ದೂರ ಆಗಿಹೆನೋ
ನಾ ಪಾಪವದೇನಾ ಮಾಡಿದೆನೋ

ಮೋಕ್ಷದ ಮೂಲ ನೀನೆಂದೇ ನಾ
ಧಾವಿಸಿ ಬಂದೆ ಓ ತಂದೆ
ತೀರದ ತಾಪ ಏರುತಿದೆ
ನಿನ್ನ ಕಾಣದೆ ಜೀವ ಬೇಯುತಿದೆ

ನಿನ್ನಡಿಯೊಂದು ತೃಣವಾದರೂ ನಾ
ಎನ್ನನು ಯಾರೋ ನೂಕುವರು
ಹೊನ್ನಿನ ಬಾಳು ಹೂ ಪತ್ರೆಯದೋ
ನಿನ್ನಯ ಪಾದ ಸೇರುವುದೋ
ಪಾಪಿಯ ಜನ್ಮ ಏತಕೊ ಕಾಣೆ
ಭೂಮಿಗೆ ಭಾರ ಆಗಿಹೆನೇ
ಭೂಮಿಗೆ ಭಾರ ಆಗಿಹೆನೇ

ಜಯಜಯ ಮಂಗಳಮಯ ಮಹಿಮೋದಯ
ಸಾಂಬಸದಾಶಿವನೇ
ಜಯಜಯ ನಿತ್ಯ ನಿರಾಕುಳನಿರ್ಮಲ
ಜಯಜಯ ಶಂಕರನೇ
ಸಾಂಬಸದಾಶಿವನೇ


11. ದೇಹದಿಂದ ದೂರನಾದೆ
ರಚನೆ : ವಿಜಯನಾರಸಿಂಹ
ಹಾಡಿದವರು : ಘಂಟಸಾಲ


ಒಂದೆರಡು ಕಡೆ  ಧೈವತವನ್ನು ಸ್ಪರ್ಶಿಸುವುದರಿಂದ ಈ ಹಾಡು ಭೀಮ್‌ಪಲಾಸ್‌ನಲ್ಲಿದೆ ಅನ್ನಬಹುದಾದರೂ  ಶುದ್ಧ ಧನ್ಯಾಸಿ ನಡೆಯೇ ಇದರಲ್ಲಿ ಹೆಚ್ಚು ಇದೆ. ಆದಿಪ್ರಾಸ, ಅಂತ್ಯಪ್ರಾಸಗಳ ಬಂಧವಿಲ್ಲದ ಅರ್ಥಪೂರ್ಣ ಸಾಹಿತ್ಯ  ತಿಶ್ರ ನಡೆಗೆ ಅಚ್ಚುಕಟ್ಟಾಗಿ ಹೊಂದುವ ಸುಲಭವಾಗಿ ಅರ್ಥವಾಗುವ ಸರಳ ಪದಗಳನ್ನು ಹೊಂದಿರುವುದು ಈ ಹಾಡಿನ ಅಪಾರ  ಜನಪ್ರಿಯತೆಗೆ  ಕಾರಣವಾಗಿರಬಹುದು.  ನಮ್ಮ ಮನೆಗೆ 1962ರಲ್ಲಿ ನ್ಯಾಶನಲ್ ಎಕ್ಕೋ ಸೆಕೆಂಡ್ ಹ್ಯಾಂಡ್ ವಾಲ್ವ್ ರೇಡಿಯೋ ಬಂದಾಗ ಆಗ ಬೆಂಗಳೂರು ಕೇಂದ್ರದಿಂದ ಸೋಮವಾರ ರಾತ್ರೆ 8ಗಂಟೆಗೆ ಪ್ರಸಾರವಾಗುತ್ತಿದ್ದ ನೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ನಾನು ಮೊತ್ತ ಮೊದಲು ಕೇಳಿದ ಹಾಡು ಕೂಡ ಇದೇ. ಆದರೆ ಈ ಚಾರ್ಟ್ ಬಸ್ಟರ್ ಹಾಡಿನ  ನಂತರ ಜಿ.ಕೆ. ವೆಂಕಟೇಶ್ ಅವರು ಘಂಟಸಾಲ ಅವರ ಧ್ವನಿಯನ್ನೂ ಒಮ್ಮೆಯೂ ಬಳಸಿಕೊಳ್ಳದಿರುವುದು ಅಚ್ಚರಿಯ ವಿಚಾರ.
 
ಹೇ ಶಂಕರಾ ದಯಾನಿಧೇ

ಈ ದೇಹದಿಂದ ದೂರನಾದೆ ಏಕೆ ಆತ್ಮನೇ
ಈ ಸಾವು ನ್ಯಾಯವೇ
ಆಧಾರ ನೀನೆಂದು ಈ ಲೋಕ ನಂಬಿದೆ
ಈ ದೇಹದಿಂದ ದೂರನಾದೆ ಏಕೆ ಆತ್ಮನೇ

ತಾಯಿಹಾಲು ವಿಷವದಾಗೆ ನ್ಯಾಯವೆಲ್ಲಿದೆ
ಕಾವ ದೇವ ಸಾವು ತರಲು ಎಲ್ಲಿ ರಕ್ಷಣೆ
ಯಾವ ಪಾಪಕೆ ಸಾವು ಕಾಡಿತೋ
ಪರಮಾತ್ಮ ನ್ಯಾಯ ಬೇಡವೇ
ಈ ಸಾವು ನ್ಯಾಯವೇ

ಸೇವೆಗಾಗಿ ಕಾದ ಹೂವು ಕಸವ ಸೇರಿತೇ
ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೇ
ಏನು ತಪ್ಪಿದೆ ಹೇಳಬಾರದೆ
ಸರಿಯೇನು ಮೌನವೇಕಿದು
ಈ ಸಾವು ನ್ಯಾಯವೇ

ಶಿವನಾಮ ಮಂತ್ರವೊಂದೇ ಅಮರ ದೀವಿಗೆ
ಪರಮೇಶ ಪ್ರಾಣಜ್ಯೋತಿ ಮರಳಿ ತಾರೆಯಾ
ಈ ದೇಹದಿಂದ ದೂರನಾದೆ ಏಕೆ ಆತ್ಮನೇ
ಈ ಸಾವು ನ್ಯಾಯವೇ


12. ಪಾತಕಿ ನಾನಾದೆ
ರಚನೆ : ವಿಜಯನಾರಸಿಂಹ
ಹಾಡಿದವರು : ಟಿ.ಎಂ. ಸೌಂದರರಾಜನ್.


ಬಿಳಿ ಮೂರರ ಏರು ಶ್ರುತಿಯಲ್ಲಿ ತಾರ ಸಪ್ತಕದ ಪ್ರತಿ ಮಧ್ಯಮವನ್ನು ಸ್ಪರ್ಶಿಸುವ ಹಂಸಾನಂದಿ ರಾಗದ  ಈ ಶುದ್ಧ ಶಾಸ್ತ್ರೀಯ ಧಾಟಿಯ ಹತಾಶ ಭಾವದ ಪತಾಕಾ ಗೀತೆಗೆ ಸ್ವಲ್ಪ ಒರಟುತನವೂ ಅಗತ್ಯವಿದೆ ಅನಿಸಿದ್ದರಿಂದ ಟಿ.ಎಂ. ಸೌಂದರರಾಜನ್ ಅವರ ಧ್ವನಿಯನ್ನು ಆಯ್ಕೆ ಮಾಡಿರಬಹುದು. ನಾಭಿಯಿಂದ ಹೊರಡುವ ಧ್ವನಿ ಮತ್ತು ವಾಯ್ಸ್ ಥ್ರೋ ಮಟ್ಟಿಗೆ ದಕ್ಷಿಣ ಭಾರತದಲ್ಲಿ ಟಿ.ಎಂ. ಸೌಂದರರಾಜನ್ ಮತ್ತು ಎಲ್.ಆರ್. ಈಶ್ವರಿ ಹಾಗೂ ಹಿಂದಿಯಲ್ಲಿ ಕಿಶೋರ್ ಕುಮಾರ್ ಮತ್ತು ಶಂಶಾದ್ ಬೇಗಂ ಅವರಿಗೆ ಸರ್ಸಾಟಿ ಯಾರೂ ಇಲ್ಲ.  ಟಿ.ಎಂ. ಸೌಂದರರಾಜನ್ ಧ್ವನಿಯನ್ನು ಜಿ.ಕೆ. ವೆಂಕಟೇಶ್ ಕನ್ನಡ ಚಿತ್ರಗಳಲ್ಲಿ ಆ ಮೇಲೆ ಎಂದೂ ಬಳಸಿದ್ದಿಲ್ಲ.
 
ಪಾತಕಿ ನಾನಾದೆ ಪರಮ
ಪಾರ್ವತಿನಾಥನ ವಿಧಿ ಮೀರಿದ ಪರಮ
ಪಾತಕಿ ನಾನಾದೆ

ಪಾಪವ ಸುಡಲೊಂದು ಧೂಪವೆ ಸಾಕೆಂದು
ಆಣತಿ ನೀಗೈದೆ ಅದ ಮುರಿದ ಪರಮ
ಪಾತಕಿ ನಾನಾದೆ

ಅಲಸಿಕೆ ಇಲ್ಲದೆ ಸುಲಭದ ಸೇವೆಯ
ಸಲಿಸದೆ ನಾ ಬಂದೆನೋ
ನಿನ್ನ ಒಲವಿಗೆ ಹೇರಾದೆನೋ
ಕ್ಷುಲ್ಲಕ ಈ ಜನ್ಮ ನೀಗುವುದೇ ಕ್ಷೇಮ
ವರ ನೀಡಿದ ದೊರೆಯ ಸಿರಿಯ
ದೂರ್ಜಟಿಯ ವಂಚಿಸಿ ಪರಮ
ಪಾತಕಿ ನಾನಾದೆ

ಮಾತನು ನಡೆಸದ ಘಾತುಕನೆಂಬುವ
ಯಾತನೆಯ ತೀರಿಸೋ ಎನ್ನ
ಚೇತನವ ಆರಿಸೋ
ಈ ತನು ಇನ್ನೇಕೆ  ಈ ತರ ಬದುಕೇಕೆ
ರೀತಿ ನೀತಿಯಲಿ  ಪಾಪಗೈದ ಕಡು
ಪಾತಕಿ ಜೀವನ ಕೊನೆಗೊಳಿಸೊ
ಹಣೆಯ ಕಣ್ಣಿನ ಕಿಡಿಯ ಸಿಡಿಸೊ
ದಣಿದ ಪಾಪಿಯ ತನು ದಹಿಸೊ
ದೇಹ ಧೂಪಾಗ್ನಿ ಸೇವೆ ಕೈಗೊಂಡು
ದೋಷವ ಪರಿಹರಿಸೊ
ಪಾಪಿಯ ತನು ಉರಿಸೊ

13. ವಚನಗಳು
ಹಾಡಿದವರು : ರಾಜ್‌ಕುಮಾರ್.


ಈ ಚಿತ್ರದಲ್ಲಿ ಸೋಮನಾಥ ಅಂಕಿತದೊಂದಿಗೆ ಬಸವಣ್ಣ ಮುಂತಾದವರ ಅನೇಕ ವಚನಗಳನ್ನು ಬಳಸಿಕೊಳ್ಳಲಾಗಿದ್ದು ಸ್ವತಃ ರಾಜ್‌ಕುಮಾರ್ ಅವುಗಳನ್ನು ಬಲು ಸುಶ್ರಾವ್ಯವಾಗಿ ಹಾಡಿದ್ದಾರೆ.  ಚಿತ್ರದುದ್ದಕ್ಕೂ ಅಲ್ಲಲ್ಲಿ ಇರುವ ಅವುಗಳನ್ನು ಕೇಳುವವರ ಅನುಕೂಲಕ್ಕಾಗಿ ಇಲ್ಲಿ ಒಟ್ಟಿಗೆ ಸೇರಿಸಲಾಗಿದೆ. ಮಂಕುತಿಮ್ಮನ ಕಗ್ಗದ  ಸಾಲುಗಳನ್ನೂ ಬಳಸಲಾಗಿರುವುದು ವಿಶೇಷ.
 
ಹುಲ್ಲಾಗು ಬೆಟ್ಟದಲಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ
ಎಲ್ಲರೊಳು ಒಂದಾಗಿ ಬಾಳಿ ನೀವು

ವಚನದಲಿ ನಿಮ್ಮ ನಾಮಾಮೃತ ತುಂಬಿ
ನಯನದಲಿ ನಿಮ್ಮ ಮೂರುತಿಯ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿಯ ತುಂಬಿ
ಸೋಮನಾಥೇಶ ನಿಮ್ಮ 
ಚರಣ ಕಮಲದೊಳಗಾನು ತುಂಬಿ

ಅಯ್ಯಾ ಅಯ್ಯಾ ಎಂದು ಕರೆವುತ್ತಲಿದ್ದೇನೆ
ಅಯ್ಯಾ ಅಯ್ಯಾ ಎಂದು  ಒರಲುತ್ತಲಿದ್ದೇನೆ
ಓ ಎನ್ನಲಾಗದೇ ಅಯ್ಯಾ
ಆವಾಗಲೂ ನಿಮ್ಮ ಕರೆವುತ್ತಲಿದ್ದೇನೆ
ಮೌನವೇಕೋ ಸೋಮನಾಥೇಶ

ಅಕಟಕಟಾ ಶಿವ ನಿನಗಿನಿತು ಕರುಣವಿಲ್ಲ
ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ
ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ
ಪರಲೋಕ ದೂರನ ಏಕೆ ಹುಟ್ಟಿಸಿದೆ
ಸೋಮನಾಥೇಶ ಹೇಳಯ್ಯ
ಎನಗಾಗಿ ಮತ್ತೊಂದು ತರುಮರಾದಿಗಳಿದ್ದಿಲ್ಲವೇ
ಹೇಳಯ್ಯ ಸೋಮನಾಥೇಶ

ಕಾಗೆ ಒಂದಗಳ ಕಂಡರೆ
ಕರೆಯದೇ ತನ್ನ ಬಳಗವನ್ನು
ಕೋಳಿ ಒಂದು ಕುಟುಕ ಕಂಡರೆ
ಹೋಗಿ ಕರೆಯದೇ ತನ್ನ ಕುಲವೆಲ್ಲವ
ಶಿವಭಕ್ತನಾಗಿ ಶಿವಭಕ್ತಿ ಪಕ್ಷವಿಲ್ಲದಿದ್ದರೆ
ಆ ಕಾಗೆ ಕೋಳಿಗಿಂತ ಕರ ಕಷ್ಟ

ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ ನೆಲವೊಂದೇ
ಜಲವೊಂದೇ ಶೌಚ ಆಚಮನಕ್ಕೆ ಜಲವೊಂದೇ
ಕುಲವೊಂದೇ ತನ್ನ ತಾನರಿತಂಗೆ
ಫಲವೊಂದೇ ಸದ್ದರ್ಶನ ಮುಕ್ತಿಗೆ
ನಿಲೆವೊಂದೇ ನಮ್ಮ ಸೋಮನಾಥೇಶನ ಅರಿತವಂಗೆ

ಹಾಲೆಂಜಲು ಮಗುವಿನ
ಉದಕವೆಂಜಲು ಮೀನಿನ
ಪುಷ್ಪವೆಂಜಲು ತುಂಬಿಯ
ಎಂತು ಪೂಜಿಸುವೆನಯ್ಯ ಶಿವ ಶಿವ
ತಂದುದಕ ಇಕೋ ಸೋಮನಾಥೇಶ

ಮೊರನ ಗೊಟ್ಟಿಗೆ ಬಪ್ಪ
ಕಿರುಕುಳದ ದೈವಕ್ಕೆ
ಕುರಿಯನಿತ್ತಿಹೆನೆಂದು ನಲಿನಲಿದಾಡುವಿರೇ
ಕುರಿ ಸತ್ತು ಕಾಯುವುದೇ ಹರ ಮುಳಿದವರ
ಕುರಿ ಬೇಡ ಮರಿ ಬೇಡ ಬರಿ ಪತ್ರೆ ತಂದು
ಮರೆಯದೇ ಪೂಜಿಸಿದರೆ ಸಾಲದೇ
ನಮ್ಮ ಸೋಮನಾಥೇಶನ

14. ಬೇರೆ ಪಾತ್ರಧಾರಿಗೆ ಹಿನ್ನೆಲೆ ಧ್ವನಿ



ರಾಜ್‍ಕುಮಾರ್ ಅವರು ಮುದ್ದಿನ ಮಾವ ಚಿತ್ರದಲ್ಲಿ ಎಸ್.ಪಿ. ಬಾಲಸುಬ್ರಹ್ಮಣಿಯಂ ಅವರಿಗೆ ಹಿನ್ನೆಲೆ ಹಾಡಿದ್ದು ವಿಶೇಷ ಸುದ್ದಿಯಾಗಿತ್ತು.  ಆದರೆ ಅದಕ್ಕಿಂತಲೂ ಮುಂಚೆ ಈ ಚಿತ್ರದಲ್ಲಿ ಉಧ್ಭಟ ಮಹಾರಾಜನ ಪಾತ್ರ ವಹಿಸಿದ್ದ ಸಿದ್ದಯ್ಯ ಸ್ವಾಮಿ ಅವರಿಗಾಗಿ ರಾಜ್ ಅವರು ಶಂಕರಾಚಾರ್ಯ ವಿರಚಿತ ಶಿವಾಪರಾಧ ಕ್ಷಮಾಪಣಾ ಸ್ತೋತ್ರದ 10ನೇ ಶ್ಲೋಕ ಹಾಡಿದ್ದನ್ನು ಯಾರೂ ಗಮನಿಸಿದಂತಿಲ್ಲ.
 

ಸ್ಥಿತ್ವಾ ಸ್ಥಾನೇ ಸರೋಜ ಪ್ರಣವಮಯಮರುತ್ಕುಂಭಿತೇ ಸೂಕ್ಷ್ಮಮಾರ್ಗೇ
ಶಾಂತೇ ದಾಂತೇ ಪ್ರಲೀನೇ ಪ್ರಕಟಿತದಹನೇ ದಿವ್ಯರೂಪೇ ಶಿವಾಖ್ಯೇ
ಲಿಂಗಾಗ್ರೇ ಬ್ರಹ್ಮವಾಕ್ಯೇ ಸಕಲಗತತನೌ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ

15. ಜ್ಯೋತಿ ಬೆಳಗುತಿದೆ.
ಸಂಗೀತ ನಿರ್ದೇಶಕ  ಜಿ.ಕೆ. ವೆಂಕಟೇಶ್ ಈ ಹಿಂದಿನ ಹರಿಭಕ್ತ ಚಿತ್ರದಲ್ಲಿ ಹರಿಯ ವಿಲಾಸದಾ ಮಹಿಮೆ ಎಂಬ ಒಂದು ಹಾಡು ಹಾಡಿದ್ದರು. ಈ ಚಿತ್ರದಲ್ಲೂ ಎರಡು ಸಾಲು ಹಾಡಿದ್ದಾರೆ.  ಹಾಡುವ ಉತ್ಸಾಹ ಇದ್ದರೂ ಅವರಲ್ಲಿ ಸಾಕಷ್ಟು stamina ಇರಲಿಲ್ಲ ಎಂದು ಓರ್ವ ಹಿರಿಯ ನಿರ್ದೇಶಕರು ಹೇಳಿದ್ದನ್ನು ಕೇಳಿದ್ದೇನೆ. ಹೀಗಾಗಿ ಅವರು ಕೆಲವೇ ಗೀತೆಗಳನ್ನು ಹಾಡಿದರು.  ಅವೆಲ್ಲವೂ ಜನಪ್ರಿಯವೂ ಆದವು.


ಕೆಳಗಿನ ಪಟ್ಟಿಯನ್ನು Scroll  ಮಾಡುತ್ತಾ ಹಾಡುಗಳನ್ನು ಆರಿಸಿ ಆಲಿಸಿ.