Wednesday 21 October 2015

ಗುರುವಾರ ಬಂತಮ್ಮ

   
     ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ-  ಇದು ಡಾ|| ರಾಜ್ ಹಾಡಿರುವ ಅತ್ಯಂತ ಜನಪ್ರಿಯ  ಗೀತೆಗಳಲ್ಲೊಂದು. ಚಿ.ಉದಯಶಂಕರ್ ಬರೆದು ಎಂ. ರಂಗರಾವ್ ಅವರು ರಾಗ ಸಂಯೋಜನೆ ಮಾಡಿದ್ದ ಈ ಹಾಡು ಆ  ಮೇಲೆ ಟಿ. ಜಿ. ಲಿಂಗಪ್ಪ ಸಂಗೀತವಿದ್ದ ಭಾಗ್ಯವಂತ ಚಿತ್ರದಲ್ಲಿ ಯಥಾವತ್ ಬಳಕೆಯಾಗಿತ್ತು.

     ಇದು ಮೇಲ್ನೋಟಕ್ಕೆ ಇತರ ಭಕ್ತಿ ಗೀತೆಗಳಂತೆಯೇ ಭಾಸವಾದರೂ ಇದರ ರಾಗ ಸಂಯೋಜನೆಯಲ್ಲೊಂದು ವಿಶೇಷವಿದೆ.  ಸಾಮಾನ್ಯವಾಗಿ 4 ಚರಣಗಳುಳ್ಳ ಹಾಡುಗಳ 1 ಮತ್ತು 3ನೇ ಚರಣಗಳು ಒಂದು ರೀತಿ ಇದ್ದರೆ 2 ಮತ್ತು   4ನೇ ಚರಣಗಳು ಇನ್ನೊಂದು ರೀತಿ ಇರುವುದು ವಾಡಿಕೆ.  ಆದರೆ ಮಧ್ಯಮಾವತಿ ರಾಗಾಧಾರಿತ ಈ ಹಾಡಿನ ಒಂದೊಂದು ಚರಣವೂ ಒಂದೊಂದು ರೀತಿ ಇರುವುದು ವಿಶೇಷ.  ಒಂದನೆ ಚರಣವು ಮಧ್ಯ ಸಪ್ತಕದ ಷಡ್ಜದಿಂದ, ಎರಡನೆ ಚರಣ  ಪಂಚಮದಿಂದ, ಮೂರನೆ ಚರಣ ನಿಷಾದದಿಂದ ಆರಂಭವಾಗುತ್ತವೆ ಮತ್ತು ಕೊನೆಯ ಚರಣವು ತಾರ ಸಪ್ತಕದ ಷಡ್ಜದಿಂದ ಎತ್ತುಗಡೆಯಾಗಿ  ತಾರ ಮಧ್ಯಮವನ್ನು ಸ್ಪರ್ಶಿಸುತ್ತದೆ.  ಭಕ್ತಿಮಾರ್ಗದಲ್ಲಿ ಅತ್ಯಂತ ಕೆಳಮಟ್ಟದಿಂದ ಆರಂಭಿಸಿ ಹಂತ ಹಂತವಾಗಿ ಮೇಲೇರುತ್ತಾ ಉತ್ತುಂಗವನ್ನು ತಲುಪಬೇಕು ಎಂಬ ಸಂದೇಶವನ್ನು ಇದರಿಂದ ಪಡೆಯಬಹುದೇನೋ.

     ಇತ್ತೀಚೆಗೆ ಮಂಗಳಾದೇವಿ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನು ಕೊಳಲಿನಲ್ಲಿ ನುಡಿಸಿದ ಈ ಹಾಡು ಇಲ್ಲಿದೆ.  ಜೊತೆಯಲ್ಲಿ ಹಾಡಿಕೊಳ್ಳಲು ಸಾಹಿತ್ಯವೂ ಇದೆ.





ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ
ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ
ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ
ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ

ಯೋಗಿ ಬರುವನಮ್ಮ ಶುಭ ಯೋಗ ಬರುವುದಮ್ಮ
ರಾಘವೇಂದ್ರ ಗುರುರಾಯ ಬಂದು ಭವ ರೋಗ ಕಳೆವನಮ್ಮ

ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ

ಮನವ ತೊಳೆಯಿರಮ್ಮ ಭಕ್ತಿಯ ಮಣೆಯ ಹಾಕಿರಮ್ಮ
ಧ್ಯಾನದಿಂದ ಕರೆದಾಗ ಬಂದು ಒಳಗಣ್ಣ ತೆರೆವನಮ್ಮ

ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ

ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ
ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ

ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ

ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ
ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ

ವಾರ ಬಂತಮ್ಮ ಗುರುವಾರ ಬಂತಮ್ಮ
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ
ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ


ಮೂಲ ಹಾಡನ್ನು ಇಲ್ಲಿ ಕೇಳಬಹುದು

 
 
ನುಡಿಸಲು,ಹಾಡಲು ಕಲಿಯಬಯಸುವವರಿಗಾಗಿ ಹಾಡಿನ ಸಂಪೂರ್ಣ ಸ್ವರಲಿಪಿ ಇಲ್ಲಿದೆ.