Sunday 20 February 2022

ವೀರ ಸಂಕಲ್ಪ

ಹುಣಸೂರು ಕೃಷ್ಣಮೂರ್ತಿ ಅವರು  ತಮ್ಮ ಎವರ್‌ಗ್ರೀನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಿಸಿದ ವೀರ ಸಂಕಲ್ಪ 1964ರಲ್ಲಿ ತುಂಬಾ ಸದ್ದು ಮಾಡಿದ ಚಿತ್ರ.  ಆಗಿನ ಎಲ್ಲ ಪತ್ರಿಕೆಗಳ ಸಿನಿಮಾ ಪುಟಗಳಲ್ಲಿ ಪ್ರತೀ ವಾರವೂ ಈ ಚಿತ್ರದ ಬಗ್ಗೆ ಏನಾದರೊಂದು ಸುದ್ದಿ ಇದ್ದೇ ಇರುತ್ತಿತ್ತು. ಆಗ ಮಂಗಳೂರಿನಲ್ಲಿದ್ದ ನಮ್ಮ ಅಣ್ಣ ಆ ಚಿತ್ರ ನೋಡಿ ತಂದಿದ್ದ ಪದ್ಯಾವಳಿಯೂ ನಮ್ಮಲ್ಲಿತ್ತು.  ಚಿತ್ರ  ಬಿಡುಗಡೆ ಆಗಿ ಸುಮಾರು ಎರಡು ತಿಂಗಳುಗಳ ನಂತರ  ರೇಡಿಯೋದಲ್ಲೂ ಈ ಚಿತ್ರದ ಹಾಡು ಬಾ ಕೋಗಿಲೆ ಮತ್ತು ಸಿಟ್ಯಾಕೊ ಸಿಡುಕ್ಯಾಕೊ ಹಾಡುಗಳು ದಿನ ನಿತ್ಯ ಬರತೊಡಗಿದವು. ಎಲ್ಲೋ ಒಂದೆರಡು ಸಲ ದುಡುಕದಿರು ಹೃದಯೇಶ ಕೇಳಿದ ನೆನಪಿದೆ. ಚಿತ್ರದ ಒಟ್ಟು ಏಳು ಹಾಡುಗಳ  ಪೈಕಿ ಉಳಿದ ನಾಲ್ಕು ಪದ್ಯಾವಳಿಯಲ್ಲಿ ಮತ್ತು ಅವು ಹೇಗಿರಬಹುದೆಂಬ ಕುತೂಹಲ ಮನಸ್ಸಿನಲ್ಲಿ ಭದ್ರವಾಗಿ ಕುಳಿತಿದ್ದವು. ಅಂತರ್ಜಾಲವೆಂಬ ಅಂಗೈನೆಲ್ಲಿಯಲ್ಲಿ ಹುಡುಕಿದರೆ ಅವುಗಳ ಪೈಕಿ ಯಾವುದಾದರೂ ಸಿಗುತ್ತಿತ್ತೋ ಏನೋ.  ಆದರೆ ನಾನೇಕೋ ಆ ಕಡೆ ಗಮನವನ್ನೇ ಹರಿಸಿರಲಿಲ್ಲ. ನಿನ್ನೆ ಇನ್ನೇನನ್ನೋ ಹುಡುಕುತ್ತಿರಬೇಕಾದರೆ ವೀರಸಂಕಲ್ಪ ಚಿತ್ರದ ಉತ್ತಮ ಕಾಪಿ ಅಂತರ್ಜಾಲದಲ್ಲಿ ಇರುವುದು ಗಮನಕ್ಕೆ ಬಂತು. ಹೇಗಿದೆ ನೋಡೋಣ ಎಂದು ನೋಡಲು ಆರಂಭಿಸಿದರೆ ಪ್ರತಿ ಪಾತ್ರಧಾರಿಯ ಸ್ವಚ್ಛ ಸ್ಪಷ್ಟ ಕನ್ನಡ ಉಚ್ಚಾರ ವೀಕ್ಷಣೆಯನ್ನು ನಡುವಿನಲ್ಲಿ ನಿಲ್ಲಿಸಲು ಬಿಡಲಿಲ್ಲ. ಹಾಡುಗಳೆಲ್ಲವೂ ಕ್ಷತಿರಹಿತವಾಗಿ ಇರುವುದನ್ನು ತಿಳಿದು ಅವುಗಳೆಲ್ಲವನ್ನೂ ಧ್ವನಿಮುದ್ರಿಸಿಕೊಂಡೆ. ಹಾಡುಗಳ ಪೂರ್ತಿ ಆಲ್ಬಂ ಒಳಗೊಂಡ ಲೇಖನವನ್ನು ಬರೆಯಬೇಕೆಂದು ವೀರಸಂಕಲ್ಪವನ್ನೂ ಮಾಡಿದೆ. ಅದರ ಪರಿಣಾಮವೇ  ಈ ಬರಹ.

ಚಿತ್ರವನ್ನು ವೀಕ್ಷಿಸಿದ ಮೇಲೆ ಹುಣಸೂರು ಕೃಷ್ಣಮೂರ್ತಿಯವರು ಮಾಡಿದ್ದುಣ್ಣೋ ಮಹರಾಯಾ, ಮುತ್ತೈದೆ ಭಾಗ್ಯ, ಅಡ್ಡದಾರಿ ಮತ್ತು ಈ ಚಿತ್ರ ಬಿಟ್ಟರೆ ಬೇರೆ ಯಾವುದರಲ್ಲೂ ಸ್ವತಃ ಅಭಿನಯಿಸಲ್ಲಿಲ್ಲವೇಕೆ ಎಂಬ ಸಂದೇಹ  ನನ್ನಲ್ಲಿ ಮೂಡಿತು.  ಈ ಚಿತ್ರದಲ್ಲಿ ಬೇರೆ ಕೆಲವು ವಿಶೇಷತೆಗಳೂ ನನಗೆ ಕಂಡವು.  ಚಿತ್ರದ ತಾರಾಗಣದಲ್ಲಿ ಆದವಾನಿ ಲಕ್ಷ್ಮೀ ದೇವಿ, ಜಯಶ್ರೀ ಮತ್ತು ತಮ್ಮ ಹಿಂದಿನ ಚಿತ್ರ ರತ್ನಮಂಜರಿಯಲ್ಲಿ ಪರಿಚಯಿಸಿದ್ದ ಎಂ.ಪಿ. ಶಂಕರ್ ಬಿಟ್ಟರೆ ಉಳಿದವರೆಲ್ಲರೂ ಅಪರಿಚಿತರೇ.  ಅವರ ಪೈಕಿ ವಿದ್ಯಾಸಾಗರ್ ಹೆಸರಿನೊಂದಿಗೆ ಕಾಣಿಸಿಕೊಂಡವರು ಮುಂದೆ ರಾಜೇಶ್ ಆಗಿ, ಬಿ.ಎಸ್. ದ್ವಾರಕಾನಾಥ್ ಹೆಸರಿನೊಂದಿಗೆ ಪಾತ್ರ ವಹಿಸಿದ ಹುಣಸೂರರ ಸೋದರಳಿಯ ಮುಂದೆ ದ್ವಾರಕೀಶ್   ಆಗಿ ಮಿಂಚಿದರು.  ನಾಯಕ ನಟನಾಗಿ ಪರಿಚಯಿಸಲ್ಪಟ್ಟ ಬಿ.ಎಂ ವೆಂಕಟೇಶ್ ಮುಂದೆಯೂ ಕೆಲವು ಚಿತ್ರಗಳಲ್ಲಿ ನಟಿಸಿದರೂ ಆ ಮೇಲೆ ನಿರ್ಮಾಣ ಕ್ಷೇತ್ರವನ್ನು ಆಯ್ದುಕೊಂಡರು.   ಉಳಿದ ಅಪರಿಚಿತರೆಲ್ಲರೂ ರಂಗಭೂಮಿ ಕಲಾವಿದರಿರಬಹುದು ಅನ್ನಿಸುತ್ತದೆ. ಹೀಗಾಗಿ ಅತಿ ಸಣ್ಣ ಪಾತ್ರ ವಹಿಸಿದ ಕಲಾವಿದರು ಕೂಡ ಸ್ಪಷ್ಟ ಕನ್ನಡ ಮಾತನಾಡಿದ್ದಾರೆ. ಸ್ವಂತ ತಯಾರಿಕೆಯ ಸೀಮಿತ ಬಜೆಟ್ ಖ್ಯಾತನಾಮರನ್ನು ಬಳಸಿಕೊಳ್ಳದಿರಲು ಕಾರಣವಾಗಿರಬಹುದು.

ಗಮನಕ್ಕೆ ಬಂದ ಇನ್ನೊಂದು ವಿಷಯವೆಂದರೆ ಹಿನ್ನೆಲೆ ಗಾಯಕ ಗಾಯಕಿಯರ ಉಲ್ಲೇಖ ಚಿತ್ರದ ಟೈಟಲ್ಸಲ್ಲಾಗಲಿ ಪದ್ಯಾವಳಿಯಲ್ಲಾಗಲಿ  ಇಲ್ಲದಿರುವುದು. ಹೀಗಾಗಿ  ಪರಿಚಯದ ಪೀಠಾಪುರಂ, ಎಲ್.ಆರ್. ಈಶ್ವರಿ ಮತ್ತು ಎಸ್. ಜಾನಕಿ ಬಿಟ್ಟರೆ ಇತರ ಗಾಯಕರು ಯಾರೆಂಬ ಕುತೂಹಲ ಹಾಗೆಯೇ ಉಳಿಯುತ್ತದೆ.  ಹಾಡುಗಳ ಗ್ರಾಮೊಫೋನ್ ಡಿಸ್ಕ್ ದೊರಕಿದರೆ ವಿವರ ಗೊತ್ತಾಗಬಹುದು. ಪ್ರತಿಯೊಬ್ಬ ಕಲಾವಿದ ನಿರ್ವಹಿಸಿದ ಪಾತ್ರದ ಹೆಸರು ಪದ್ಯಾವಳಿಯಲ್ಲಿರುವುದು ಉತ್ತಮ ಅಂಶ.

ಈಗ ಪದ್ಯಾವಳಿಯಲ್ಲಿರುವ ಪಾತ್ರವರ್ಗ, ಪಾರಿಭಾಷಿಕ ವಿವರಗಳು, ಕಥಾ ಸಾರಾಂಶ ಮತ್ತು  ಹಾಡುಗಳತ್ತ ದೃಷ್ಟಿ ಹರಿಸೋಣ. ಅಂದಿನ ಪದ್ಯಾವಳಿಗಳಲ್ಲಿ ಕಥಾಭಾಗದ ಸುಂದರ ನಿರೂಪಣೆ ಮಾಡುತ್ತಿದ್ದವರು ಯಾರೋ ಏನೋ. ಇತರ ಭಾಷೆಯ ಚಿತ್ರಗಳ ಪದ್ಯಾವಳಿಗಳೂ ಸೊಗಸಾಗಿರುತ್ತಿದ್ದವು. ಮುಂದಿನ ಕಥೆಯನ್ನು ರಜತ ಪರದೆಯ ಮೇಲೆ ನೋಡಿ ಆನಂದಿಸಿ ಎಂಬುದು ಕಥೆಯ ಕೊನೆಯಲ್ಲಿ ಇರುತ್ತಿದ್ದ ಸಾಲು.   ಪದ್ಯಾವಳಿಯಲ್ಲಿ ಇರಬಹುದಾದ ಚಿಕ್ಕಪುಟ್ಟ ಮುದ್ರಣದೋಷಗಳನ್ನು ಹೊಟ್ಟೆಗೆ ಹಾಕಿಕೊಳ್ಳಬೇಕಾಗುತ್ತದೆ.




 
 
 
 
 


ಹಾಡುಗಳು

ಈ ಚಿತ್ರದ ಎರಡು ಹಾಡುಗಳು ಮಾತ್ರ ಚಲಾವಣೆಯಲ್ಲಿರುವ ವಿಷಯ ಆಗಲೇ ಪ್ರಸ್ತಾಪಿಸಿದ್ದೇನೆ.  ಹುಣಸೂರರ ಹಿಂದಿನ ಚಿತ್ರ ರತ್ನಮಂಜರಿಯಲ್ಲೂ ಎರಡೇ ಹಾಡುಗಳು ಜನಪ್ರಿಯವಾದದ್ದು ಕಾಕತಾಳೀಯ ಆಗಿರಬಹುದು.  ಆದರೆ ಅವರು ಇತರರಿಗಾಗಿ ನಿರ್ದೇಶಿಸಿದ ಚಿತ್ರಗಳ ಹಾಡುಗಳೆಲ್ಲವೂ ಹಿಟ್ ಆಗುತ್ತಿದ್ದವು!  ಈಗ ಚಿತ್ರದ  ಏಳೂ ಹಾಡುಗಳತ್ತ ಗಮನ ಹರಿಸೋಣ.

1. ಹಾಡು ಬಾ ಕೋಗಿಲೆ.
ರೇಡಿಯೋದಲ್ಲಿ ಈ ಹಾಡು ಬರುತ್ತಿದ್ದುದರಿಂದ ಪೀಠಾಪುರಂ ನಾಗೇಶ್ವರ ರಾವ್ ಜೊತೆಗೆ ದನಿಗೂಡಿಸಿದ ಗಾಯಕಿಯ ಹೆಸರು ಸತ್ಯವತಿ ಎಂದು ಗೊತ್ತಿದೆ. ಚಿತ್ರದಲ್ಲಿ ಈ ಹಾಡು ಎರಡು ಸಲ ಬರುತ್ತದೆ.  ಹೆಚ್ಚಾಗಿ ಕಾಮಿಡಿ ಹಾಡುಗಳನ್ನು ಹಾಡುತ್ತಿದ್ದ ಪೀಠಾಪುರಂ ಅವರನ್ನು ರಾಜನ್ ನಾಗೇಂದ್ರ ಬಳಸಿಕೊಂಡದ್ದು ಬಹುಶಃ ಹುಣಸೂರರ ಚಿತ್ರಗಳಲ್ಲಿ ಮಾತ್ರ.   ಅಂಥ ಹಾಡುಗಳನ್ನು ಹೆಚ್ಚಾಗಿ  ನಾಗೇಂದ್ರ ಅವರೇ ಹಾಡುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು.

2. ಪರಶಿವನೊ ಸಿರಿವರನೊ.

ಚಾರಿತ್ರಿಕ, ಪೌರಾಣಿಕ ಚಿತ್ರಗಳಲ್ಲಿ ಸಾಮಾನ್ಯವಾಗಿ ಇರುವಂಥ ಸಂತಾನ ಸಂಭ್ರಮ ಸಂದರ್ಭದ ಹಾಡು. ಗಾಯಕಿ ಯಾರೆಂದು ಗೊತ್ತಿಲ್ಲ. ನಾನಿದನ್ನು ನಿನ್ನೆ ಚಿತ್ರ ನೋಡುವಾಗ ಮೊದಲ ಬಾರಿ ಕೇಳಿದೆ.

3. ದುಡುಕದಿರು ಹೃದಯೇಶ.
ಎಸ್. ಜಾನಕಿ ಹಾಡಿದ್ದಾರೆ. ರೇಡಿಯೊದಲ್ಲಿ ಒಂದೆರಡು ಸಲ ಕೇಳಿದ್ದಿದೆ. ಚಿತ್ರದಲ್ಲಿ ಶ್ರೀರಂಗರಾಯ ಯುದ್ಧಕ್ಕೆ ಹೊರಟಾಗ ಆತನ ಪತ್ನಿ ಮಲ್ಲೇಶ್ವರಿ ಹಾಡುತ್ತಾಳೆ.

4. ಸಿಟ್ಯಾಕೊ ಸಿಡುಕ್ಯಾಕೊ.
ಎಲ್. ಆರ್. ಈಶ್ವರಿ ಹಾಡಿದ ಇದು ಎಲ್ಲರಿಗೂ ಗೊತ್ತಿರುವಂಥದ್ದು. ಚಿತ್ರದಲ್ಲಿ ಈ ಹಾಡಿಗೆ ಚೆನ್ನಿಯಾಗಿ ಅಭಿನಯಿಸಿದ ರತ್ನಕುಮಾರಿ ಆ ಮೇಲೆ ವಾಣಿಶ್ರೀ ಆಗಿ ತೆಲುಗಿನಲ್ಲಿ ಪ್ರಸಿದ್ಧರಾದರು.

5.  ಯಾವೂರಯ್ಯ.
ಇದು ಕೂಡ ಎಲ್.ಆರ್. ಈಶ್ವರಿ ಅವರು ಚೆನ್ನಿಗಾಗಿ ಹಾಡಿರುವುದು. ಆದರೆ ಅಜ್ಞಾತವಾಗಿ ಉಳಿದಿದೆ.  ಸೆರೆಮನೆಯ ಕಾವಲುಗಾರರನ್ನು ಯಾಮಾರಿಸಲು ಹೆಣ್ಣೊಬ್ಬಳು  ಹಾಡುವ ಇಂಥ ಹಾಡು ಅಂದಿನ ಚಿತ್ರಗಳಲ್ಲಿ ಸಾಮಾನ್ಯವೇ ಆಗಿತ್ತು.

6.  ಕನ್ನಡದ ತಾಯಿ ಭುವನೇಶ್ವರಿ.
ಭಾರತೀಂದ್ರ ಸ್ವಾಮಿಗಳ ರಚನೆ ಇದು ಎಂಬ ಉಲ್ಲೇಖ ಇದೆ. ಗಾಯಕರ ಕುರಿತಾದ ಮಾಹಿತಿ ಇಲ್ಲ. ಧ್ವನಿ ಕೇಳಿದರೆ ಜೆ.ವಿ. ರಾಘವುಲು ಇರಬಹುದೇನೋ ಅನ್ನಿಸುತ್ತದೆ.  ಚಿತ್ರದಲ್ಲಿ ಎರಡು ಸಲ ಇದೆ.  ಒಮ್ಮೆ ಟೈಟಲ್ಸ್‌ಗೆ ಹಿನ್ನೆಲೆಯಾಗಿ, ಇನ್ನೊಮ್ಮೆ ಚಿತ್ರದೊಳಗೆ. ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಮತ್ತು ಕನ್ನಡವೇ ತಾಯ್ನುಡಿಯು ಕೂಡ ಇದೇ ರೀತಿ ಕಣ್ತೆರೆದು ನೋಡು ಮತ್ತು ಅನ್ನಪೂರ್ಣ ಚಿತ್ರಗಳಲ್ಲಿ ಎರಡೆರಡು ಸಲ  ಇರುವುದು ಗಮನಾರ್ಹ. ನಾಡು ನುಡಿಯ ಕುರಿತಾದ ಹಾಡಾದರೂ ನವಂಬರ್ ತಿಂಗಳಲ್ಲೂ ಇದನ್ನು ಕೇಳಿದಂತಿಲ್ಲ!

7.  ಯುದ್ಧ ಯುದ್ಧ.
ಇಷ್ಟು ದಿನ ಪದ್ಯಾವಳಿಯಲ್ಲಿ ಅಡಗಿದ್ದು ಕೇಳಲು ಹೇಗಿರಬಹುದೆಂದು ನನ್ನಲ್ಲಿ ಕುತೂಹಲ ಉಳಿಸಿದ್ದ ಹಾಡಿದು. ಇದನ್ನು ನಾಗೇಂದ್ರ ಸ್ವತಃ ಹಾಡಿದ್ದಿರಬಹುದು ಎಂದುಕೊಂಡಿದ್ದೆ.  ಆದರೆ ಯಾವುದೋ ಅಪರಿಚಿತ ಧ್ವನಿ ಎಂದು ಈಗ ತಿಳಿಯಿತು.  ಆಸಕ್ತ ಮಿತ್ರವರ್ಗದ ಸಹಕಾರದಿಂದ ಕೊಂಚ ಸಂಶೋಧನೆ ನಡೆಸಿದಾಗ ಗಾಯಕನ ಹೆಸರು ಎಸ್.ಸಿ. ಕೃಷ್ಣನ್ ಎಂಬ ಮಾಹಿತಿ ದೊರಕಿತು. ನಾನು ಆ ಹೆಸರು ಕೇಳಿದ್ದು ಇದೇ ಮೊದಲು.  ಬಹಳಷ್ಟು ತಮಿಳು ಚಿತ್ರಗಳಲ್ಲಿ  ಹಾಡಿದ ಗಾಯಕರಿವರೆಂದು ಗೂಗಲೇಶ್ವರ ತಿಳಿಸಿದ. ಕನ್ನಡದಲ್ಲಿ ಹಾಡಿದ್ದು ಬಹುಶಃ ಇದೊಂದೇ ಹಾಡು ಇರಬಹುದು. ಚಿತ್ರದಲ್ಲಿ ಚಿಕ್ಕರಾಯನಾದ ದ್ವಾರಕಾನಾಥ್ ಉರುಫ್ ದ್ವಾರಕೀಶ್ ಈ ಹಾಡಿಗೆ  ಅಭಿನಯಿಸಿದ್ದಾರೆ.

 
 

ಕೆಳಗಿನ ಜ್ಯೂಕ್ ಬಾಕ್ಸಿನಿಂದ ಬೇಕಿದ್ದ ಹಾಡು ಆರಿಸಿ ಆಲಿಸಿ.


 


 

 

 

 


 

Thursday 17 February 2022

ಹೃದಯವೀಣೆ ಮಿಡಿಯೆ ತಾನೆ



     60ರ ದಶಕ ಅಂದರೆ ಅದು ಚಿತ್ರ ಸಂಗೀತ ಕ್ಷೇತ್ರದಲ್ಲಿ ಅನೇಕ ಅಲಿಖಿತ ನಿಯಮಗಳು ಪಾಲಿಸಲ್ಪಡುತ್ತಿದ್ದ ಕಾಲ. ಹಿಂದಿಯಲ್ಲಿ ರಾಜ್ ಕಪೂರ್ ಅವರಿಗೆ ಮುಕೇಶ್, ದೇವಾನಂದ್ ಅವರಿಗೆ ಕಿಶೋರ್ ಕುಮಾರ್, ಉಳಿದವರೆಲ್ಲರಿಗೆ ರಫಿ ಇದ್ದಂತೆ  ಕನ್ನಡದಲ್ಲಿ ಹಾಸ್ಯದ ಹಾಗೂ ಹಿನ್ನೆಲೆಯ ಹಾಡುಗಳನ್ನು ಪೀಠಾಪುರಂ ಹಾಡುತ್ತಿದ್ದುದು ಬಿಟ್ಟರೆ ಕುಮಾರತ್ರಯರಾದ ರಾಜ್, ಕಲ್ಯಾಣ್, ಉದಯ್ ಸಹಿತ ಎಲ್ಲರ ಧ್ವನಿಯಾಗುತ್ತಿದ್ದುದು ಪಿ.ಬಿ.ಶ್ರೀನಿವಾಸ್. ತೆಲುಗಿನಲ್ಲಿ ಘಂಟಸಾಲ, ಮಲಯಾಳಂನಲ್ಲಿ ಜೇಸುದಾಸ್ ಹಾಗೂ ತಮಿಳಿನಲ್ಲಿ ಸೌಂದರರಾಜನ್ ಅವರಿಗೆ ಸಂಬಂಧಿಸಿದಂತೆ ಕೂಡ ಸುಮಾರಾಗಿ ಇದೇ ರೀತಿಯ ನಿಯಮ ಜಾರಿಯಲ್ಲಿತ್ತು. ಆದರೆ ಆಗೊಮ್ಮೆ ಈಗೊಮ್ಮೆ ಈ ನಿಯಮಗಳು ಮುರಿಯಲ್ಪಡುವುದೂ ಇತ್ತು.  ಪೆಂಡ್ಯಾಲ ನಾಗೇಶ್ವರ ರಾವ್ ಅವರ ಸಂಗೀತವಿದ್ದ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ರಾಜ್ ಅವರಿಗೆ ಘಂಟಸಾಲ ಧ್ವನಿಯಾಗಿದ್ದರು. ಟಿ.ಜಿ.ಲಿಂಗಪ್ಪ  ಸಂಗೀತವಿದ್ದ ಗಾಳಿಗೋಪುರ ಚಿತ್ರದಲ್ಲೂ ರಾಜ್ ಹಾಡುಗಳನ್ನು ಘಂಟಸಾಲ ಹಾಗೂ ಕಲ್ಯಾಣ್ ಹಾಡುಗಳನ್ನು ಪಿ.ಬಿ.ಎಸ್ ಹಾಡಿದ್ದರು.  ವಿಜಯಾ ಕೃಷ್ಣಮೂರ್ತಿ ಸಂಗೀತದ ಮುರಿಯದ ಮನೆಯಲ್ಲಿ ರಾಜ್ ಅವರಿಗೆ  ಘಂಟಸಾಲ, ಪಿ.ಬಿ.ಎಸ್ ಇಬ್ಬರೂ ಹಾಡಿದ್ದರು. ಜೇಸುದಾಸ್ ಅವರು ರಾಜ್ ಧ್ವನಿಯಾದದ್ದು ಪ್ರೇಮಮಯಿ ಚಿತ್ರದಲ್ಲಿ. ನಿಯಮ ಮುರಿತದ ಇಂತಹ ಇನ್ನೂ ಹಲವು ಉದಾಹರಣೆಗಳಿವೆ. ಆದರೆ ಗಾಯಕಿಯರಿಗೆ ಸಂಬಂಧಿಸಿದಂತೆ ಈ  ತರಹ ನಿಯಮಗಳು ಇಲ್ಲದಿದ್ದಿದು ಗಮನಾರ್ಹ. ಬಿ.ಸರೋಜಾದೇವಿ ನಾಯಕಿಯಾಗಿದ್ದಾಗ ಪಿ.ಸುಶೀಲ ಅವರೇ ಹಾಡುತ್ತಿದ್ದುದನ್ನು ಬಿಟ್ಟರೆ ಬಹುತೇಕ ಚಿತ್ರಗಳಲ್ಲಿ ಅನುಕೂಲಕ್ಕೆ ತಕ್ಕಂತೆ ಜಾನಕಿ ಮಾತ್ರ, ಸುಶೀಲ ಮಾತ್ರ ಅಥವಾ ಇಬ್ಬರೂ ಹಾಡುತ್ತಿದ್ದರು. ಕ್ಯಾಬರೇ ಸ್ಪೆಷಲಿಸ್ಟ್ ಅನ್ನಿಸಿದ್ದ ಎಲ್.ಆರ್.ಈಶ್ವರಿ ಕೂಡ ಸಂತ ತುಕಾರಾಂ, ಮಹಾಸತಿ ಅನಸೂಯ ಮುಂತಾದ ಚಿತ್ರಗಳಲ್ಲಿ ಮುಖ್ಯ  ಗಾಯಕಿಯಾದದ್ದುಂಟು.  ಅಲಿಖಿತ ನಿಯಮಗಳ ಕುರಿತು ಈ ಪೀಠಿಕೆಗೆ ಕಾರಣ ಇಲ್ಲೀಗ ಚರ್ಚಿಸಲ್ಪಡುವ, ಇಂತಹ ಅನೇಕ ನಿಯಮಗಳನ್ನು ಮುರಿದಿದ್ದ ಅನ್ನಪೂರ್ಣ ಚಿತ್ರದ  ಒಂದು ಮಧುರವಾದ ಹಾಡು.

     ಅನ್ನಪೂರ್ಣ 1964ರಲ್ಲಿ ತೆರೆಕಂಡ ಚಿತ್ರ.  ಎಂ.ಪಂಢರಿಬಾಯಿ ಇದರ ನಿರ್ಮಾಪಕಿ.  ಆರೂರು ಪಟ್ಟಾಭಿ ನಿರ್ದೇಶಕರು.  ಕೆ.ಎಸ್. ಅಶ್ವಥ್ ಮತ್ತು ಸ್ವತಃ ಪಂಢರಿಬಾಯಿ ಮುಖ್ಯ ಕಲಾವಿದರು.  ರಾಜಕುಮಾರ್, ಕಲ್ಯಾಣ್ ಕುಮಾರ್, ಆರ್. ನಾಗೇಂದ್ರ ರಾವ್, ಪಂಢರಿಬಾಯಿಯ ತಂಗಿ ಮೈನಾವತಿ, ತೆಲುಗಿನ ಪ್ರಸಿದ್ಧ ನಟ ವಿ. ನಾಗಯ್ಯ ಮುಂತಾದವರು ಅತಿಥಿ ಕಲಾವಿದರು! ಪಂಢರಿಬಾಯಿ ಮೇಲಿನ ಅಭಿಮಾನದಿಂದ ಇವರೆಲ್ಲ ಅತಿಥಿ ಕಲಾವಿದರಾಗಿ ಸಹಕರಿಸಿರಬಹುದು.  

ಉದಯಶಂಕರ್ ಗೀತರಚನೆಕಾರರಾಗಿ ಹೊಮ್ಮಿದ ಮೊದಲ ಚಿತ್ರ
     ಚಿ.ಉದಯಶಂಕರ್ ಅವರು ಅದಾಗಲೇ ಸಂತ ತುಕಾರಾಂ ಚಿತ್ರದ ಸಂಭಾಷಣೆ  ಹಾಗೂ  ಶಿವರಾತ್ರಿ ಮಹಾತ್ಮೆ ಚಿತ್ರಕ್ಕಾಗಿ ಒಂದು ಹಾಡನ್ನು  ಬರೆದಿದ್ದರೂ ಅವರೇ ಎಲ್ಲ ಹಾಡುಗಳನ್ನು ಬರೆದ ಪ್ರಥಮ ಚಿತ್ರ ಈ ಅನ್ನಪೂರ್ಣ. ಅವರ ತಂದೆ ಚಿ. ಸದಾಶಿವಯ್ಯ ಈ ಚಿತ್ರಕ್ಕೆ ಸಂಭಾಷಣೆ ಬರೆದವರು.  ಅಂದರೆ ಸಂತ ತುಕಾರಾಂ ಚಿತ್ರದಲ್ಲಿ ತಂದೆಯ ಹಾಡುಗಳು ಮತ್ತು ಮಗನ ಸಂಭಾಷಣೆ ಇದ್ದರೆ ಇಲ್ಲಿ ಅದು ಅದಲು ಬದಲಾಗಿ ಮಗನ ಹಾಡುಗಳು ಮತ್ತು ತಂದೆಯ ಸಂಭಾಷಣೆ!  ಚಿತ್ರದ ಸಂಗೀತ ನಿರ್ದೇಶಕರು ರಾಜನ್ ನಾಗೇಂದ್ರಶಂಕರ್ ಜೈಕಿಶನ್ ಅವರಂತೆ ಅತಿ ದೊಡ್ಡ ಆರ್ಕೆಷ್ಟ್ರಾ ನಿರ್ವಹಿಸಬಲ್ಲವರಾಗಿದ್ದ ಇವರು ಅತಿ ಕಡಿಮೆ ವಾದ್ಯಗಳನ್ನು ಉಪಯೋಗಿಸಿಯೂ ಅದೇ ಪರಿಣಾಮ ಉಂಟು ಮಾಡುವುದರಲ್ಲಿ ನಿಷ್ಣಾತರು.


ಮುರಿದ ನಿಯಮಗಳು
     ಸಾಮಾನ್ಯವಾಗಿ ಚಿತ್ರಗಳಲ್ಲಿ ನಾಯಕ ನಾಯಕಿಯರು ಬಹುತೇಕ ಹಾಡುಗಳನ್ನು ಹಾಡುತ್ತಾರೆ.  ಆದರೆ ಇಲ್ಲಿ ಮುಖ್ಯ ಕಲಾವಿದರಾದ ಅಶ್ವಥ್ ಮತ್ತು ಪಂಢರಿಬಾಯಿ ಅಂದ ಚಂದದ ಮಗುವೆ ಎಂಬ ಪಹಾಡಿ ರಾಗದ ಹಾಡನ್ನು ಪಿ.ಲೀಲ ಮತ್ತು ಟಿ.ಆರ್. ಜಯದೇವ್ ಎಂಬ ನವ ಗಾಯಕರ ಧ್ವನಿಯಲ್ಲಿ ಹಾಡಿದ್ದು ಬಿಟ್ಟರೆ  ಉಳಿದೆಲ್ಲ ಹಾಡುಗಳನ್ನು ಹಾಡಿದ್ದು ಅತಿಥಿ ಕಲಾವಿದರು!  ಮೋಹ ಸಿಹಿ ಸಿಹಿ ಮತ್ತು ನಿಲ್ಲು ನಿಲ್ಲೆನ್ನ ನಲ್ಲ ಓಡದೆ ಎಂಬ ಹಾಡುಗಳನ್ನು ಜಾನಕಿ ಧ್ವನಿಯಲ್ಲಿ ಮೈನಾವತಿ ಹಾಡಿದರೆ ಇನ್ನೊಬ್ಬ ಅತಿಥಿ ಕಲಾವಿದ ರಾಜಕುಮಾರ್ ಹಾಡಿದ್ದು ಚೆಲುವಿನ ಸಿರಿಯೇ ಬಾರೆಲೇ ಎಂಬ ಹಾಡನ್ನು.  ಆದರೆ ಧ್ವನಿ ನೀಡಿದ್ದು ಪಿ.ಬಿ.ಶ್ರೀನಿವಾಸ್ ಅಲ್ಲ. ಬದಲಾಗಿ ಎ.ಎಲ್.ರಾಘವನ್ಶೀನು ಸುಬ್ಬು ಸುಬ್ಬು ಶೀನು ಹಾಡನ್ನು ಪಿ.ಬಿ.ಎಸ್ ಜೊತೆಗೆ ಹಾಡಿದವರು ಎಂದರೆ ಎ.ಎಲ್.ರಾಘವನ್ ಪರಿಚಯ ಸುಲಭವಾಗಿ ಆದೀತು. ಬಹಳ ಸಮಯ ಜಿಗಿ ಜಿಗಿಯುತ ನಲಿ ಗಗನದ ಬಯಲಲಿ ಹಾಡಿದ ಜೆ.ವಿ.ರಾಘವಲು ಅವರೇ ಇದನ್ನು ಹಾಡಿದ್ದು ಎಂದೇ ನಾನು ಅಂದುಕೊಂಡಿದ್ದೆ!  ರಾಘವ ಎಂಬುದಷ್ಟೇ ಮನಸ್ಸಲ್ಲಿ ರಿಜಿಸ್ಟರ್ ಆಗಿದ್ದುದು ಇದಕ್ಕೆ ಕಾರಣವಿರಬಹುದು. ಚಿತ್ರದ ಎರಡು ಹಾಡುಗಳನ್ನು ಪಿ.ಬಿ.ಶ್ರೀನಿವಾಸ್ ಹಾಡಿದ್ದು ಅವುಗಳಲ್ಲೊಂದು ಅತಿ ಜನಪ್ರಿಯವಾದ ಕನ್ನಡವೇ ತಾಯ್ನುಡಿಯು ಮತ್ತು ಇನ್ನೊಂದು ಅತಿ ಮಧುರವಾದ ಹೃದಯವೀಣೆ ಮಿಡಿಯೆ ತಾನೆ.   ಈ ಎರಡೂ ಹಾಡುಗಳನ್ನು ತೆರೆಯ ಮೇಲೆ ನಿರ್ವಹಿಸಿದ, ಕೆಲವು ಕೋನಗಳಲ್ಲಿ ಆರ್.ಎನ್.ಸುದರ್ಶನ್ ಅವರನ್ನು ಹೋಲುವ ಸ್ಪುರದ್ರೂಪಿ ನಟ ಯಾರೆಂಬುದರ ಬಗ್ಗೆ ಇಷ್ಟು ವರ್ಷ ಯೋಚಿಸಿರಲೇ ಇಲ್ಲ.  ಈ ಬರಹ ಸಿದ್ಧಪಡಿಸುವಾಗ ಕೆಲವರನ್ನು ಆ ಬಗ್ಗೆ  ಕೇಳಿದರೂ ಸೂಕ್ತ ಮಾಹಿತಿ ಸಿಗಲಿಲ್ಲ.  ಕೊನೆಗೆ facebook ಮಿತ್ರ ಸಿಂಗರ್ ಶ್ರೀನಾಥ್  ಆತ ಕೆ.ಎಸ್. ಅಶ್ವಥ್ ಅವರ ಸಂಬಂಧಿ ಭಾಸ್ಕರ್ ಎಂದು ತಿಳಿಸಿ ಅನುಮಾನ ಪರಿಹರಿಸಿದರು. ಅವರಿಗೆ ವಿಶೇಷ ಧನ್ಯವಾದ. ಕಲಾವತಿ ಚಿತ್ರದಲ್ಲೂ ಭಾಸ್ಕರ್ ಅಭಿನಯಿಸಿರುವುದು ಆ ಮೇಲೆ ತಿಳಿಯಿತು. ಕನ್ನಡವೇ ತಾಯ್ನುಡಿಯು ಮತ್ತು ಕಣ್ತೆರೆದು ನೋಡು ಚಿತ್ರದ ಕನ್ನಡದ  ಮಕ್ಕಳೆಲ್ಲ ಹಾಡುಗಳಲ್ಲಿ ಕೆಲವು ಸಮಾನ ಅಂಶಗಳನ್ನು ಗುರುತಿಸಬಹುದು.  ಎರಡೂ ನಾಡು ನುಡಿಯ ಬಗೆಗಿನ ಹಾಡುಗಳು, ಚಿತ್ರದಲ್ಲಿ ಆಕಾಶವಾಣಿಯಿಂದ ನೇರ ಪ್ರಸಾರಗೊಳ್ಳುತ್ತವೆ, ಎರಡರಲ್ಲೂ ಹಾಡಿನ ಸಂಗೀತ ನಿರ್ದೇಶಕರು ಕಾಣಿಸಿಕೊಂಡಿದ್ದಾರೆ, ಎರಡನ್ನೂ ಚಿತ್ರದ ಟೈಟಲ್ಸ್ ಜೊತೆಗೂ ಬಳಕೆ ಮಾಡಿಕೊಳ್ಳಲಾಗಿದೆ.


ಹೃದಯವೀಣೆ ಮಿಡಿಯೆ ತಾನೆ
     ಬಹುಶಃ ಇದು ಕನ್ನಡದಲ್ಲಿ ಬಂದ ಮೊದಲ ಗಜಲ್ ಶೈಲಿಯ ಪ್ರೇಮ ಗೀತೆ. ಹಿಂದಿಯ ಆನಂದ್ ಬಕ್ಷಿ ಅವರಂತೆ ಆಡುಮಾತಿನ ಶೈಲಿಯಲ್ಲಿ ಚಿ.ಉದಯಶಂಕರ್  ಬರೆದ ಸಾಹಿತ್ಯವನ್ನು  ರಾಜನ್ ನಾಗೇಂದ್ರ  ಅವರು ಬಾಗೇಶ್ರೀ ರಾಗದಲ್ಲಿ ಎಷ್ಟು ಸುಂದರವಾಗಿ ಸಂಯೋಜಿಸಿದ್ದಾರೋ, ಪಿ.ಬಿ.ಶ್ರೀನಿವಾಸ್  ಕೇಳುವವರ ಹೃದಯ ವೀಣೆ ಮಿಡಿಯುವಂತೆ ಅಷ್ಟೇ ಮಧುರವಾಗಿ ಹಾಡಿದ್ದಾರೆ.  ಮಂದ್ರದ ಮಧ್ಯಮವನ್ನು ಸ್ಪರ್ಶಿಸುವ ಆರಂಭದ ಆಲಾಪಕ್ಕೇ ಮನಸೋಲುವ ಕೇಳುಗರು  ತಬ್ಲಾದ ದಾದ್ರಾ ಠೇಕಾದೊಂದಿಗಿನ  ಪಲ್ಲವಿ ಆರಂಭವಾಗುತ್ತಿದ್ದಂತೆ ಯಾವುದೋ ಲೋಕಕ್ಕೆ ಹೊರಟು ಹೋಗುತ್ತಾರೆ. Vibraphone, ವೀಣೆ, ಕೊಳಲು ಮುಂತಾದ ವಾದ್ಯಗಳ ಹಿತಮಿತವಾದ ಹಿಮ್ಮೇಳದೊಂದಿಗೆ ಕೋಗಿಲೆ ಗಾನ, ಸಮುದ್ರದ ಅಬ್ಬರ, ದುಂಬಿಯ ಮೊರೆತಗಳು ಮೇಳೈಸಿದ ಚರಣಗಳ ನಂತರ  ಕಾರಣ ನೀನೆ ಓ ಜಾಣೆ ಎಂಬ ಕೊನೆಯ ಸಾಲು Vibraphoneನೊಂದಿಗೆ ಮುಗಿದು ಮೌನ ಆವರಿಸಿದಾಗಲೆ ಮತ್ತೆ ಇಹಲೋಕದ ಪರಿವೆಯುಂಟಾಗುವುದು.  ಈ ಹಾಡು ಆರಂಭವಾಗುವ ಮೊದಲು ನಾಯಕಿ ‘ನಾನು ಎಷ್ಟೋ ಜನರ ಸಂಗೀತ ಕೇಳಿದ್ದೇನೆ.ಆದರೆ ನಿಮ್ಮ ಹಾಗೆ ಕೇಳುವವರು ಮೈ ಮರೆಯುವಂತೆ ಹಾಡುವವರನ್ನು ನೋಡೆ ಇರ್ಲಿಲ್ಲ. ನೀವು ಹಾಡುವಾಗ ಸಂಗೀತದ ಜತೆಗೆ ರಾಗಮಾಧುರ್ಯಕ್ಕೂ, ಭಾವಕ್ಕೂ, ಸಾಹಿತ್ಯಕ್ಕೂ ಕೊಡುವ ಸಮಾನ ಪ್ರಾಧಾನ್ಯತೆಯಿಂದಾನೇ ನಿಮ್ಮ ಗೀತೆ ಕೇಳುವವರ ಹೃದಯ ಮುಟ್ಟೋದು’ ಎಂದು  ಹೇಳುತ್ತಾಳೆ. ಈ ಮಾತುಗಳು  ಪಿ.ಬಿ.ಶ್ರೀನಿವಾಸ್ ಅವರನ್ನು ಕುರಿತೇ ಹೇಳಿದಂತಿವೆ! ಕ್ಲಿಷ್ಟಕರವಾದ ಪದಪುಂಜಗಳನ್ನು ಹೊಂದಿದ್ದ ಹಾಡುಗಳನ್ನಷ್ಟೇ ಕೇಳಿ ಗೊತ್ತಿದ್ದ  ಆಗಿನ ಪೀಳಿಗೆಗೆ ಉದಯಶಂಕರ್ ಅವರ ಸರಳ ಶಬ್ದಗಳ  ಸಾಹಿತ್ಯವಂತೂ ಒಂದು ಹೊಸ ಲೋಕವನ್ನೇ ತೆರೆದಿಟ್ಟಿತ್ತು.  ಚಂದ್ರ ಮತ್ತು ಕಡಲಿನ ಸ್ನೇಹ, ಮಾಮರ ಮತ್ತು ಕೋಗಿಲೆಯ ಸಂಬಂಧ ಮುಂತಾದವುಗಳ ಉಲ್ಲೇಖ ಉದಯಶಂಕರ್ ಅವರ ಮೇಲೆ ಆಗಲೇ ವಚನಗಳ ಪ್ರಭಾವ ಬಹಳಷ್ಟಿದ್ದುದನ್ನು ಸ್ಪಷ್ಟಪಡಿಸುತ್ತದೆ. ಪಲ್ಲವಿ ಭಾಗದಲ್ಲಿರುವ ಪದಗಳ ಒಳಪ್ರಾಸ ಕು.ರ.ಸೀ ಶೈಲಿಯನ್ನು ನೆನಪಿಸುತ್ತದೆ.  ಇಬ್ಬರೂ ಸಮ ಶ್ರುತಿಯಲ್ಲಿದ್ದರೆ ಮಾತ್ರ resonance ಮೂಲಕ ಹೃದಯ ವೀಣೆ ತಾನಾಗಿ ಮಿಡಿದೀತು ಎಂಬ ವೈಜ್ಞಾನಿಕ ತಥ್ಯವೂ ಈ ಹಾಡಿನಲ್ಲಿದೆ. ‘ಬಿದುರಿನ ಕೊಳಲು ಗಾನದ ಹೊನಲು ಹರಿಸದೇ ಕೃಷ್ಣನ ಕರ ಸೋಕಲು’ - ಇದು ಈ ಕವನದ ಅತ್ಯುತ್ತಮ ಸಾಲು. ಕೊಳಲು ಅದೇ ಆದರೂ ಹೊರಡುವ ನಾದವು ಅದನ್ನು ನುಡಿಸುವವರ ಮೇಲೆ ಹೊಂದಿಕೊಂಡಿರುವಂತೆ  ಜೀವನವೆಂಬ ಕೊಳಲು ಶ್ರುತಿಯಲ್ಲಿರುತ್ತದೋ ಅಥವಾ ಅಪಸ್ವರ ಹೊರಡಿಸುತ್ತದೋ ಎಂಬುದು ಜೀವನ ನಡೆಸುವವರ ಮೇಲೆ ನಿರ್ಭರವಾಗಿರುತ್ತದೆ ಎಂದು ಇದನ್ನು ಅರ್ಥೈಸಬಹುದೋ ಏನೋ!

     ಇದು ಉದಯಶಂಕರ್ ಅವರ ಆರಂಭದ ದಿನಗಳ ರಚನೆಯಾದ್ದರಿಂದ ಚಲನ ಚಿತ್ರ ಭಾಷೆಯಲ್ಲಿ ಮೀಟರ್ ಅನ್ನಲಾಗುವ ಹಾಡಿನ ಪ್ರತಿ ಸಾಲಿನ ಮಾತ್ರೆಗಳ ಹರಹು ಒಂದೇ ರೀತಿ ಇಲ್ಲದಿರುವುದನ್ನು ಗಮನಿಸಬಹುದು.  ಹೀಗಿದ್ದಾಗ ಹಾಡನ್ನು ಲಯಕ್ಕೆ ಹೊಂದಿಸಲು ಸಂಗೀತ ನಿರ್ದೇಶಕ ಮತ್ತು ಹಾಡಲು ಗಾಯಕ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ.  ರಾಜನ್ ನಾಗೇಂದ್ರ ಮತ್ತು ಪಿ.ಬಿ.ಶ್ರೀನಿವಾಸ್ ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಒಂದು ಉಪಕಥೆ

     ವರ್ಷಕ್ಕೊಂದೆರಡು ಬಾರಿ ಯಾವುದಾದರೂ ನೆಪದಲ್ಲಿ ಕಾರ್ಕಳಕ್ಕೋ ಮಂಗಳೂರಿಗೋ ಹೋಗಿ ಒಂದೆರಡು ಸಿನಿಮಾಗಳನ್ನು ವೀಕ್ಷಿಸುವ ಅವಕಾಶ ನನಗೆ ಸಿಗುತ್ತಿತ್ತು.  ಆದರೆ ಈ ಅನ್ನಪೂರ್ಣ ಚಿತ್ರ ನೋಡಿದ ಸಂದರ್ಭ ಮಾತ್ರ ಕೊಂಚ ಭಿನ್ನ.  ನಾನು ಆಗಷ್ಟೇ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಏಳನೆ ತರಗತಿ ಮುಗಿಸಿ ಹೈಸ್ಕೂಲ್ ಸೇರಿದ್ದೆ.  ಅಲ್ಲಿಯ ದೊಡ್ಡ ದೊಡ್ಡ ಕೊಠಡಿಗಳಲ್ಲಿ ಸಾಕಷ್ಟು ದೂರದಲ್ಲಿರುತ್ತಿದ್ದ ಬೋರ್ಡಲ್ಲಿ ಬರೆದುದು ಸ್ಪಷ್ಟವಾಗಿ ಕಾಣಿಸುತ್ತಿಲ್ಲವೆಂದು ಗಮನಕ್ಕೆ ಬಂದುದರಿಂದ  ಕಣ್ಣು ಪರೀಕ್ಷೆ ಮಾಡಿಸಲು ಮಂಗಳೂರಿಗೆ ಹೋಗಬೇಕಾಯಿತು.  ಆಗ ಈಗಿನಂತೆ ಕಣ್ಣನ್ನು ನೇರವಾಗಿ ಪರೀಕ್ಷಿಸಲು ಸಾಧ್ಯವಾಗುವ ಆಧುನಿಕ ಉಪಕರಣಗಳೆಲ್ಲಿದ್ದವು?  ಹೀಗಾಗಿ ಕಣ್ಣಿನ ಒಳ ಭಾಗ ವೀಕ್ಷಿಸಲು ಸುಲಭವಾಗುವಂತೆ ಬೆಳಕಿನ ತೀಕ್ಷ್ಣತೆಗನುಸಾರವಾಗಿ ಹಿರಿದು ಕಿರಿದಾಗುವ ಕನೀನಿಕೆಯನ್ನು ಸದಾಕಾಲ ಹಿರಿದಾಗುವಂತೆ ಮಾಡುವ ಒಂದು ಅಂಜನ ಕೊಟ್ಟು ಹುಲ್ಲಿನ ಕಡ್ಡಿಯಿಂದ ಕಣ್ಣಿಗೆ ಹಚ್ಚಲು ತಿಳಿಸಿ ಮೂರು ದಿನ ಬಿಟ್ಟು ಬರುವಂತೆ ಹೇಳುತ್ತಿದ್ದರು.  ಅದನ್ನು ಹಚ್ಚಿದ ಮೇಲೆ  ಕೆಲವು ದಿನ ಬೆಳಕಿನತ್ತ ನೋಡುವುದೇ ಕಷ್ಟವಾಗುತ್ತದೆ.  ಈ ರೀತಿ ಮೂರು ದಿನದ ನಂತರ ಮತ್ತೆ ಮಂಗಳೂರಿಗೆ ಹೋದಾಗ ಪ್ರಭಾತ್ ಟಾಕೀಸಿನಲ್ಲಿ ಅನ್ನಪೂರ್ಣ ಸಿನಿಮಾ ಪ್ರದರ್ಶಿಸಲ್ಪಡುತ್ತಿತ್ತು!  ನನ್ನನ್ನು ಕರೆದುಕೊಂಡು ಹೋದ ಅಣ್ಣ ಬೇಡವೆಂದರೂ ಕೇಳದೆ ಅರ್ಧ ಕಣ್ಣು ತೆರೆದು ಆ ಸಿನಿಮಾ ಹೇಗೆ ನೋಡಿದೆನೋ ಎಂದು ಈಗ ಆಶ್ಚರ್ಯವಾಗುತ್ತಿದೆ!  ಆ ಪರಿಸ್ಥಿತಿಯಲ್ಲೂ ಚಿತ್ರವನ್ನು ಸಂಪೂರ್ಣ ಆನಂದಿಸಿದ್ದಂತೂ ಹೌದು. ಆಗಲೇ ರೇಡಿಯೋ ಮತ್ತು ವಿವಿಧ ವಾದ್ಯಗಳ ಕಡು ಅಭಿಮಾನಿಯಾಗಿದ್ದ ನನಗೆ ಕನ್ನಡವೇ ತಾಯ್ನುಡಿಯು ಹಾಡಿನಲ್ಲಿ ಆಕಾಶವಾಣಿಯ ಸ್ಟುಡಿಯೊ, ವಿವಿಧ ವಾದ್ಯಗಳನ್ನು ನುಡಿಸುವ ಕಲಾವಿದರು, ಪ್ರಸಾರ ಗೋಪುರದಿಂದ ಸೂಸುವ ತರಂಗಗಳು ಮುಂತಾದವನ್ನು ತೋರಿಸಿದ್ದು ಥ್ರಿಲ್ ಉಂಟುಮಾಡಿತ್ತು. ಆದರೆ ಆ ದೃಶ್ಯದಲ್ಲಿ ಸ್ವತಃ ರಾಜನ್ ಮತ್ತು ನಾಗೇಂದ್ರ ಕೂಡ ಇದ್ದರೆಂದು ಆಗ ಗೊತ್ತಾಗಿರಲಿಲ್ಲ.   ಸಿನಿಮಾದ ಸಂಭ್ರಮ ಮುಗಿದ ಮೇಲೆ ಡಾಕ್ಟರ ಬಳಿ ಹೋದೆವು. ಅವರು short sight ಎಂದು ನಿರ್ಧರಿಸಿ ಕೊಟ್ಟ ಕನ್ನಡಕ ಬಹಳಷ್ಟು ವರ್ಷ ನನ್ನ ಮೂಗಿನ ಮೇಲೆ ರಾರಾಜಿಸುತ್ತಿತ್ತು.  ಆದರೆ ಎಲ್ಲರಿಗೂ ಚಾಳೀಸು ಬರುವ ಕಾಲಕ್ಕೆ ನನ್ನ short sight neutralize ಆಗಿ ಈಗ ಬಹಳ ವರ್ಷಗಳಿಂದ ದೂರದ ವಸ್ತುಗಳನ್ನು ಬರಿಗಣ್ಣಿಂದ ಸ್ಪಷ್ಟವಾಗಿ ನೋಡಬಲ್ಲವನಾಗಿದೇನೆ. ಇದಕ್ಕಾಗಿ ನಾನು ಆ ಅಂತರ್ಯಾಮಿಗೆ ಕೃತಜ್ಞ.  ಈಗ ನಾನು  ಅಕ್ಷರಗಳನ್ನೋದುವ ಸಲುವಾಗಿ reading glass ಮಾತ್ರ ಉಪಯೋಗಿಸುತ್ತಿರುವುದು.

ಇರಲಿ. ಈಗ ಹಾಡಿನ ಸಾಹಿತ್ಯದ ಮೇಲೆ ಕಣ್ಣಾಡಿಸುತ್ತಾ ಕಿರು ಡಯಲಾಗಿನೊಂದಿಗಿನ ಹಾಡು ಆಲಿಸಿ ಮಾಧುರ್ಯದಲ್ಲಿ ಮೀಯಲು ತಯಾರಾಗಿ.  ಸಾಧ್ಯವಾದರೆ headphone  ಬಳಸಿ.

ಹೃದಯವೀಣೆ


ಹೃದಯವೀಣೆ ಮಿಡಿಯೆ ತಾನೆ
ಕಾರಣ ನೀನೆ ಓ ಜಾಣೆ ಕಾರಣ ನೀನೆ ಓ ಜಾಣೇ

ಬಿದುರಿನ ಕೊಳಲು ಗಾನದ ಹೊನಲು
ಹರಿಸದೇ ಕೃಷ್ಣನ ಕರ ಸೋಕಲು ||2||
ಚಂದ್ರನ ಕಾಣಲು ಮೊರೆಯದೇ ಕಡಲು
ತಿಂಗಳ ಬೆಳಕಿನ ರಾತ್ರಿಯೊಳೂ

ಚೈತ್ರ ಮಾಸದೊಳು ಮಾವು ಚಿಗುರಲು
ಕೋಗಿಲೆ ಹಾಡದೆ ಹರುಷದೊಳು ||2||
ಹೂವು ಅರಳಲು ಕಂಪು ಚೆಲ್ಲಲು
ದುಂಬಿಯು ನಲಿಯದೆ ಗಾನದೊಳು
******

ಸದಭಿರುಚಿಯ ಈ ಪೂರ್ತಿ ಚಿತ್ರ  ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.

     ಈಗ ಕೊನೆಗೊಂದು ಬೋನಸ್.  1951ನೇ ಇಸವಿಯ ಚಂದಮಾಮದಲ್ಲಿ ಬಾಲಕ ಚಿ.ಉದಯಶಂಕರ್ ಬರೆದ ಚುಟುಕವೊಂದು ಪ್ರಕಟವಾದದ್ದು ಇಲ್ಲಿದೆ ನೋಡಿ.  ಬೆಳೆಯ ಗುಣ ಮೊಳಕೆಯಲ್ಲಿ ಅನ್ನುವಂತೆ ಸರಳ ಪದಗಳನ್ನುಪಯೋಗಿಸಿ ಹೇಳಬೇಕಾದ್ದನ್ನು ಹೇಳುವ ಕಲೆ ಆಗಲೇ ಆತನಿಗೆ ಸಿದ್ಧಿಸಿತ್ತು ಎಂದು ಇದರಿಂದ ಅರಿವಾಗುತ್ತದೆ.


4-5-2017

Wednesday 16 February 2022

ಗಾನ ಪಂಚವಿಂಶತಿ

ಕಳೆದ 25 ದಿನಗಳಿಂದ ದಿನಕ್ಕೊಂದು ಹಾಡಿನ ಅಭಿಯಾನ ನಡೆಸಿದ್ದೆ. ಇದಕ್ಕೆ ಹಾಡಿನ ಆಯ್ಕೆ, ಸಂಬಂಧ ಪಟ್ಟ ಮಾಹಿತಿ ಕಲೆಹಾಕುವಿಕೆ, ಸೂಕ್ತ ಚಿತ್ರಗಳ ಸಂಯೋಜನೆ, ಹಾಡು ಅಪ್‌ಲೋಡ್ ಮಾಡುವುದು ಇತ್ಯಾದಿ ಸಾಕಷ್ಟು ತಯಾರಿ ಬೇಕಾಗುತ್ತಿತ್ತು. ಇದು ನನ್ನದೇ ಕಾಮ್ಯ ಕಾರ್ಯ ಆದ್ದರಿಂದ ಮಾಡಿದೆ, ಇನ್ಯಾರಾದರೂ ಕೊಟ್ಟ ಟಾಸ್ಕ್ ಆದರೆ ಮಾಡುತ್ತಿದ್ದೆನೋ ಇಲ್ಲವೋ! ಗೃಹಿಣಿಯರಿಗೆ ನಾಳೆ ಬೆಳಗ್ಗಿನ ತಿಂಡಿಗೆ ಏನು ಮಾಡುವುದು ಎಂಬ ಚಿಂತೆ ಕಾಡಿದಂತೆ ನಾಳೆಗೆ ಯಾವ ಹಾಡು ಆಯ್ಕೆ ಮಾಡುವುದು ಎಂಬ ಸಮಸ್ಯೆ ನನಗೂ ಎದುರಾಗುತ್ತಿತ್ತು. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬುದು ಆರ್ಯೋಕ್ತಿ ಆದರೂ ಮಾಡಿದ ಕೆಲಸದ ಪರಿಣಾಮ ಏನು ಎಂದು ತಿಳಿಯುವ ಕುತೂಹಲ ಇದ್ದೇ ಇರುತ್ತದಲ್ಲವೇ. ಹೀಗಾಗಿ ಯಾವ್ಯಾವ ಹಾಡಲ್ಲಿ ಎಷ್ಟು ಮಂದಿ ಆಸಕ್ತಿ ತೋರಿದರು ಎಂದು ಲೆಕ್ಕ ಕೂಡ ಇಡುತ್ತಿದ್ದೆ. ಅದರಂತೆ ಜನಪ್ರಿಯತೆಯ ಅವರೋಹಣ(descending) ಕ್ರಮದಲ್ಲಿ ತಯಾರಿಸಿದ  ಪಟ್ಟಿಯ ಪ್ರಥಮ ಸ್ಥಾನದ ಚೋಟಿ ಕೀ ಪಾಯ್ದಾನ್‌ನಲ್ಲಿ ಲತಾ ಮಂಗೇಶ್ಕರ್ ಹಾಡಿದ ಎಲ್ಯಾರೆ ಇರತೀರು ವಿರಾಜಮಾನವಾಗಿದೆ.


ಪ್ರಸ್ತುತ ಪಡಿಸಿದ  ತಾರೀಕಿನ ಕ್ರಮದಲ್ಲಿ  25 ಹಾಡುಗಳ  ವಿವರ  ಇಲ್ಲಿದೆ. ಕೊನೆಯಲ್ಲಿ ಒದಗಿಸಿದ ಪಟ್ಟಿಯಿಂದ ಆಯ್ದುಕೊಂಡು ಬೇಕಿದ್ದ ಹಾಡನ್ನು ಆಲಿಸಬಹುದು.

1. ಹರಿಯೆ ನಿನ್ನ ವಿರಸ ಭಾವ
23-1-2022

ಚಿತ್ರ : ಹರಿಭಕ್ತ
ಗಾಯಕಿ : ಪಿ.ಸುಶೀಲಾ
ಸಂಗೀತ : ಜಿ.ಕೆ. ವೆಂಕಟೇಶ್
ಸಾಹಿತ್ಯ : ಕು.ರ.ಸೀ.


ಇದನ್ನು ನಾನು ಮೊದಲು ಕೇಳಿದ್ದು ನಮ್ಮ ರಾಮಚಂದ್ರ ಮಾಸ್ತರರ ಪುತ್ರಿಯರು ಶಾಲೆಯಲ್ಲಿ ಹಾಡುವಾಗ. ಆಗ ಇದು ಮೋಹನ ರಾಗ ಎಂದೇನೂ ನನಗೆ ಗೊತ್ತಿರಲಿಲ್ಲ.  ಆದರೂ ಅದರ ಮಾಧುರ್ಯ ನನ್ನನ್ನು ಆವರಿಸಿಕೊಂಡು ಬಿಟ್ಟಿತ್ತು. ಮುಂದೆ ಅನೇಕ ದಿನ ಶಾಲೆಗೆ ಹೋಗುವಾಗ, ಬರುವಾಗ ಇದರ ಸಾಲುಗಳನ್ನು ಗುನುಗುತ್ತಲೇ ಇರುತ್ತಿದ್ದೆ, ಆದರೆ ಹರಿಯೆ ನಿನ್ನ ವೀರ ಸ್ವಭಾವ ಎಂದು ತಪ್ಪು ತಪ್ಪಾಗಿ.  ಆಗ ನಮ್ಮ ಮನೆಗೆ ರೇಡಿಯೋ ಬಂದಾಗಿತ್ತು. ಈ ಹಾಡು ಅದರಲ್ಲಿ ಎಂದಾದರೂ ಬಂದೀತೇ ಎಂದು ಕಿವಿ ನೆಟ್ಟಗೆ ಮಾಡಿ ಕಾಯುತ್ತಿದ್ದೆ. ಆದರೆ ಎಲ್ಲೋ ಒಂದೆರಡು ಸಲ ಮಾತ್ರ ಕೇಳಲು ಸಿಕ್ಕಿತ್ತು.

2.  ಅನುಪಮ ಭಾಗ್ಯವಿದೆ
24-1-2022

ಚಿತ್ರ : ಶ್ರೀ ಶೈಲ ಮಹಾತ್ಮೆ
ಗಾಯಕಿ - ಸಿ.ಎಸ್. ಸರೋಜಿನಿ
ಸಂಗೀತ : ಟಿ.ಎ. ಕಲ್ಯಾಣಂ
ಸಾಹಿತ್ಯ : ವಿಜಯನಾರಸಿಂಹ


ನಮ್ಮೂರಿನ ವಿದ್ವಾಂಸ, ಸಾಹಿತಿ, ಅಧ್ಯಾಪಕ ಶ್ರೀ ಕೆ.ಎನ್. ಭಟ್ ಶಿರಾಡಿಪಾಲ್ ಅವರು ಅಪರೂಪಕ್ಕೊಮ್ಮೆ ನಮ್ಮ ಮನೆಗೆ ಬಂದಿದ್ದಾಗ ರೇಡಿಯೋದಲ್ಲಿ ಶಾರ್ಟ್ ವೇವ್ ವಿವಿಧಭಾರತಿಯ ಮಧುರ್ ಗೀತಂ ಕಾರ್ಯಕ್ರಮದಲ್ಲಿ ಈ ಹಾಡು ಬಂತು. ಚಿತ್ರಗೀತೆಗಳ ಬಗ್ಗೆ ಅಂತಹ ಒಲವೇನೂ ಇಲ್ಲದಿದ್ದ ಅವರು ಇದನ್ನು ತದೇಕಚಿತ್ತರಾಗಿ ಆಲಿಸಿ ಮುಕ್ತ ಕಂಠದಿಂದ ಶ್ಲಾಘಿಸಿದ ದೃಶ್ಯ ನನ್ನ ಕಣ್ಣಿಗೆ  ಕಟ್ಟಿದಂತಿದೆ. ತಬ್ಲಾ ತರಂಗ್ ಮುಂತಾದ ವೈವಿಧ್ಯಮಯ ತಾಳವಾದ್ಯಗಳ ಬಳಕೆ, ಹಿಂದೋಳದ ಮಾಧುರ್ಯ, ಮರದ ಕಪಾಟಿನಲ್ಲಿದ್ದ ವುಡನ್ ಕ್ಯಾಬಿನೆಟ್ಟಿನ ನಮ್ಮ ನ್ಯಾಶನಲ್ ಎಕ್ಕೊ ರೇಡಿಯೋದ ಧ್ವನಿಯ ಗುಣಮಟ್ಟ  ಇತ್ಯಾದಿ ಅವರನ್ನು ಆಕರ್ಷಿಸಿರಬಹುದು.

ಟಿ.ಎ. ಕಲ್ಯಾಣಂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದವರಲ್ಲ. ಅವರು ಅರೇಂಜರ್ ಆಗಿದ್ದವರು ಅನ್ನಿಸುತ್ತದೆ. ಅರೇಂಜರ್‌ಗಳೇ ಸಂಗೀತ ನಿರ್ದೇಶಕರಾಗಿದ್ದಾಗ ಆರ್ಕೆಷ್ಟ್ರಾ ಹೆಚ್ಚು ಶ್ರೀಮಂತವಾಗಿರುತ್ತದೆ!

3. ಪುಟ್ಟ ಪುಟ್ಟ ಹೆಜ್ಜೆ ಇಟ್ಟು
25-1-2022

ಚಿತ್ರ : ಗೌರಿ
ಗಾಯಕರು : ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ, ಬೇಬಿ ಲತಾ
ಸಂಗೀತ : ಜಿ.ಕೆ. ವೆಂಕಟೇಶ್
ಸಾಹಿತ್ಯ : ಕು.ರ. ಸೀತಾರಾಮ ಶಾಸ್ತ್ರಿ.


ಆಲಿಸಿದೊಡನೆ ನಮ್ಮ ಮನೆಗೆ ಆಗ ತಾನೇ ಬಂದಿದ್ದ ಹೊಸ ನ್ಯಾಶನಲ್ ಎಕ್ಕೊ ರೇಡಿಯೋದ ವಾರ್ನಿಶ್ ವಾಸನೆ ಈಗಲೂ ಮೂಗಿಗೆ ಅಡರುವಂತೆ ಮಾಡುವ  ಹಾಡುಗಳ ಪೈಕಿ 1963ರ ಗೌರಿ ಚಿತ್ರದ ಇದು ಕೂಡ ಒಂದು. ಹೆಣ್ಣು ಮಕ್ಕಳನ್ನು ಉಳಿಸಿ ಬೆಳೆಸಲು ಮುಂದೊಂದು ದಿನ ದೇಶವ್ಯಾಪಿ ಚಳವಳಿಯನ್ನೇ ಹಮ್ಮಿಕೊಳ್ಳಬೇಕಾಗಿ ಬರಬಹುದು ಎಂದು ಕು.ರ.ಸೀ ಆಗಲೇ ಮನಗಂಡಿದ್ದರಿಂದ ಅದರ ಮುನ್ನುಡಿಯೆನ್ನಬಹುದಾದ ಇಂತಹ ಕವನ ರಚಿಸಿದರೋ ಏನೋ. ಚಿತ್ರಗೀತೆಗಳನ್ನು ಅಷ್ಟಾಗಿ ಆಸ್ವಾದಿಸದ ನಮ್ಮ ಹಿರಿಯಣ್ಣ ಕೂಡ ಈ ಹಾಡು ರೇಡಿಯೊದಲ್ಲಿ ಮೊದಲ ಬಾರಿ ಬಂದಾಗ ಮನೆಮಠ ಚೊಕ್ಕಟ ಕೈಯಲ್ಲಿ ಕರಟ ಎಂಬ ಸಾಲಿನ ಗೂಢಾರ್ಥವನ್ನು ನಮಗೆ ತಿಳಿಸಿ ಹೇಳಿದ್ದರು.

ನಾನು ಚಿಕ್ಕಂದಿನಿಂದಲೂ ಗಮನಿಸಿದಂತೆ ನಮ್ಮ ಕುಟುಂಬದಲ್ಲಾಗಲಿ, ಬಂಧು ಮಿತ್ರರಲ್ಲಾಗಲಿ ಹೆಣ್ಣು ಹುಟ್ಟಿತೆಂದು ಮನಸ್ಸು ಚಿಕ್ಕದು ಮಾಡಿಕೊಳ್ಳುವ ಪರಿಪಾಠ ಇರಲಿಲ್ಲ.  ಬದಲಾಗಿ ಹೆಣ್ಣು ಮಕ್ಕಳಿಗೆ ಮುದ್ದು, ಕೊಂಡಾಟ ಸ್ವಲ್ಪ ಜಾಸ್ತಿಯೇ.

ಚಿತ್ರದ ಸನ್ನಿವೇಶದಲ್ಲಿ ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂದು ಗಂಡ ಹೆಂಡತಿ ನಡುವೆ  ಚರ್ಚೆ ನಡೆದು ಕೊನೆಗೆ  ಗಂಡ ನಿನಗೆ ತಮ್ಮ ಬೇಕೋ ತಂಗಿ ಬೇಕೋ ಎಂದು ಮಗುವನ್ನು ಕೇಳುತ್ತಾನೆ.  ಮಗು ಅವಲಕ್ಕಿ ಪವಲಕ್ಕಿ ಎಂದು ಎಣಿಸುತ್ತಾ ತಂದೆ ತಾಯಿಯನ್ನು ಸರದಿಯಂತೆ ಮುಟ್ಟುತ್ತಾ ಹೋಗುವಾಗ  ಕೊನೆಯ  ಕೊಠಾರ್ ಶಬ್ದ ತಾಯಿಯ ಪಾಲಾಗಿ ತನಗೆ ತಂಗಿ ಸಿಗುತ್ತಾಳೆ  ಎಂದು ಸಂಭ್ರಮಿಸಿದ ಮಗು ಗಿಡ್ಡು ಪುಟಾಣಿ ಮಕ್ಕಳ ರಾಣಿ ಬರುತ್ತಾಳೆ ಎಂದು  ಹಾಡತೊಡಗುತ್ತದೆ.  ತಂದೆ ತಾಯಿ ಇಬ್ಬರೂ ದನಿಗೂಡಿಸಿ ಚರ್ಚಾ ಸ್ಪರ್ಧೆ ಆರಂಭವಾತ್ತದೆ.  ಕೊನೆಗೆ ಶುಭ ಮಂಗಳೆಯೇ ಜನಿಸಲಿ ಎಂಬ  ಒಮ್ಮತದ ನಿರ್ಧಾರಕ್ಕೆ ಬರಲಾಗುತ್ತದೆ.

4. ಈ ಮಣ್ಣು ನಮ್ಮದು.
26-1-2022

ಸಾಹಿತ್ಯ : ಆರ್.ಎನ್. ಜಯಗೋಪಾಲ್.
ಸಂಗೀತ : ಎಂ.ಬಿ. ಶ್ರೀನಿವಾಸನ್.
ಗಾಯಕರು :  ಮದರಾಸು ಆಕಾಶವಾಣಿ  ಕೋರಲ್ ಗ್ರೂಪ್.



ಸ್ವಾತಂತ್ರ್ಯ ದಿನಾಚರಣೆ, ರಾಜ್ಯೋತ್ಸವ, ಗಣರಾಜ್ಯೋತ್ಸವ ಮೊದಲಾದ ಸಂದರ್ಭಗಳಲ್ಲಿ ಕನ್ನಡನಾಡಿನ ಆಕಾಶವಾಣಿ ಕೇಂದ್ರಗಳಲ್ಲಿ ಬೆಳಗಾಗುತ್ತಿದ್ದುದೇ ಈ ಹಾಡಿನ ಮೂಲಕ. ಕೇಳಿದೊಡನೆ ಪರಿಶುದ್ಧ ತಿಳಿನೀರ ತೊರೆಯಲ್ಲಿ ಕಾಲಾಡಿಸಿದಂಥ ಅನುಭವ ನೀಡುವ ಇದು ಉಳಿದೆಲ್ಲ ಹಾಡುಗಳಿಗಿಂತ ಭಿನ್ನ.  ಸರಳ ಪದಗಳನ್ನೇ ಬಳಸಿದ ಸಾಹಿತ್ಯ,  ವೈಶಿಷ್ಟ್ಯಪೂರ್ಣ ರಾಗ ಸಂಯೋಜನೆ,  ಗಿಟಾರ್, ವೀಣೆ, ಕೊಳಲು ಹಾಗೂ ತಬ್ಲಾ ಇವಿಷ್ಟನ್ನೇ ಒಳಗೊಂಡ  ಹಿತ ಮಿತವಾದ ವಾದ್ಯವೃಂದ,  ಹೆಸರು ತಿಳಿಯದ (ಬಹುಶಃ ಕನ್ನಡವೂ ತಿಳಿಯದ) ಗಾಯಕ ಗಾಯಕಿಯರ ಶ್ರೀಮಂತ  ಧ್ವನಿ,  ಹುಟ್ಟು ಕನ್ನಡಿಗರನ್ನೂ  ನಾಚಿಸುವಂತಹ ಸುಸ್ಪಷ್ಟ   ಉಚ್ಚಾರ   (ವಿಶೇಷವಾಗಿ ವಿಜ್ಞಾನ, ಅಜ್ಞಾನಗಳಲ್ಲಿನ  ಜ್ಞ ಅಕ್ಷರ), ಉತ್ಕೃಷ್ಟ ಗುಣಮಟ್ಟದ ಧ್ವನಿಮುದ್ರಣ ಪ್ರಾಯಶಃ  ಇದನ್ನು ಗುಂಪಿನಿಂದ ಹೊರಗೆ ನಿಲ್ಲಿಸುತ್ತವೆ.

5. ಪಾಪಿಯ ಜೀವನ ಪಾವನಗೊಳಿಸುವ
27-1-2022
ಚಿತ್ರ : ಆದರ್ಶ ಸತಿ
ಗಾಯಕ : ಪಿ.ಬಿ. ಶ್ರೀನಿವಾಸ್
ಸಂಗೀತ : ಆರ್. ಸುದರ್ಶನಂ(ಸಿ.ರಾಮಚಂದ್ರ ಸಂಗೀತ ಇದ್ದ ನಾಸ್ತಿಕ್ ಚಿತ್ರದ ದೇಖ್ ತೆರೇ ಸಂಸಾರ್ ಕೀ ಹಾಲತ್  ಧಾಟಿ).
ಸಾಹಿತ್ಯ : ಕು.ರ.ಸೀ.


ಪಿ.ಬಿ. ಶ್ರೀನಿವಾಸ್ ಅವರು 1953ರಲ್ಲೇ ಆರ್. ನಾಗೇಂದ್ರ ರಾಯರ ಜಾತಕ ಫಲ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇರಿಸಿದ್ದರೂ 1956ರಲ್ಲಿ ಬಂದ ಏ.ವಿ.ಎಂ ರವರ ಆದರ್ಶ ಸತಿ ಚಿತ್ರದ ಈ ಹಾಡು ಅವರ ಹೆಸರನ್ನು ಕನ್ನಡಿಗರ ಮನೆ ಮಾತಾಗಿಸಿತು.

50ರ ದಶಕದಲ್ಲಿ  ಜನಿಸಿದವರಿಗಷ್ಟೇ ಈ ಹಾಡು ಆಪ್ತವೆನಿಸಬಹುದು. ಆ ಕಾಲದಲ್ಲಿ ಶಾಲಾ ವಾರ್ಷಿಕೋತ್ಸವಗಳಿರಲಿ, ಸಿರಿವಂತರ ಮನೆಯ ಮದುವೆ-ಮುಂಜಿ ಸಮಾರಂಭಗಳಿರಲಿ, ಸಿನಿಮಾ ಟಾಕೀಸುಗಳಿರಲಿ, ಯಕ್ಷಗಾನ ಬಯಲಾಟದ ಟೆಂಟುಗಳಿರಲಿ  ಎಲ್ಲೆಲ್ಲಿ ಗ್ರಾಮೊಫೋನ್ ಇರುತ್ತಿತ್ತೋ ಅಲ್ಲೆಲ್ಲ ಈ ಹಾಡು ಅನುರಣಿಸುತ್ತಿತ್ತು.  ಅಬಾಲ ವೃದ್ಧರಾದಿಯಾಗಿ ಎಲ್ಲರ ಬಾಯಲ್ಲೂ ಈ ಹಾಡು ನಲಿದಾಡುತ್ತಿತ್ತು. ಎಷ್ಟು ಭಜನಾಕೂಟಗಳಲ್ಲಿ ಈ ಹಾಡು ಹಾಡಲ್ಪಟ್ಟಿತ್ತೋ, ಈ ಹಾಡಿನ ಧಾಟಿಯಲ್ಲಿ ಅದೆಷ್ಟು ಭಕ್ತಿ ಗೀತೆಗಳು, ನಾಟಕದ ಹಾಡುಗಳು ರಚನೆಯಾಗಿದ್ದವೋ !  ಆದರೆ ವರ್ಷಗಳು ಕಳೆದಂತೆ ಹಿನ್ನೆಲೆಗೆ ಸರಿದ ಈ ಹಾಡು ಈಚೆಗೆ ಯಾಕೋ ಎಲ್ಲೂ ಕೇಳಸಿಗುತ್ತಿರಲಿಲ್ಲ.  ಹಳೆಯ ನಿಲಯಗಳಾದ ಬೆಂಗಳೂರು, ಧಾರವಾಡ ಸೇರಿದಂತೆ ಆಕಾಶವಾಣಿಯ ಯಾವುದೇ ಕೇಂದ್ರಗಳಲ್ಲೂ ಇದರ ಧ್ವನಿಮುದ್ರಿಕೆ ಇದ್ದಂತಿಲ್ಲ. ರೇಡಿಯೊ ಸಿಲೋನಿನಲ್ಲಿ ಇರಲೂ ಬಹುದು.


6.  ಜೊ ವಾದಾ ಕಿಯಾ ವೊ
28-1-2022

ಚಿತ್ರ : ತಾಜ್ ಮಹಲ್
ಗಾಯಕರು : ರಫಿ, ಲತಾ
ಸಂಗೀತ : ರೋಶನ್
ಸಾಹಿತ್ಯ : ಸಾಹಿರ್ ಲುಧಿಯಾನ್ವಿ.


ಜೋಡಿ ಕೊಳಲುಗಳು ಮಧ್ಯಮ ಶ್ರುತಿಯಲ್ಲಿ ಮಾ ಪಾ ದಾ ಮಾ ರೀ ಎಂದು ನುಡಿಸುತ್ತಲೇ ಎದೆಯೊಳಗೆ ಕೈ ಹಾಕಿ ಕಲಸಿದಂತಾಗಿ ಕೇಳುಗ ಹಿಪ್ನೋಟಿಸಂಗೆ ಒಳಗಾಗುತ್ತಾನೆ.  ಆತ ಮತ್ತೆ ಲೋಕಕ್ಕೆ ಮರಳುವುದು ಹಾಡು ಮುಗಿದ ನಂತರವೇ. ಮೊದಲನೇ ಸಲ ಕೇಳಿದಾಗಲೇ ನನ್ನನ್ನು ತನ್ನತ್ತ ಸೆಳೆದದ್ದು ಎರಡೇ ಹಾಡುಗಳು. ಒಂದು ಬಹಾರೋ ಫೂಲ್ ಬರಸಾವೊ. ಇನ್ನೊಂದು ಇದು. ಹಾಗೆಂದು ಇದರ ಸಾಹಿತ್ಯವಾಗಲಿ, ಚಿತ್ರದ ಸನ್ನಿವೇಶವಾಗಲಿ ಹೇಳಿಕೊಳ್ಳುವಂಥದ್ದೇನಲ್ಲ. ಹಾಡಿನ ಸಾಲುಗಳ ಕೆಲವು ಕ್ಲಿಷ್ಟ ಉರ್ದು ಪದಗಳು ಅರ್ಥವಾಗುವುದೂ ಇಲ್ಲ. ಆದರೂ ಈ ಹಾಡೇಕೆ ನಮ್ಮನ್ನು ಅಷ್ಟೊಂದು ಕಾಡುತ್ತದೆ? ಮಾಧುರ್ಯದ ಪರಾಕಾಷ್ಟೆಯಲ್ಲಿದ್ದ  ಸ್ಥಿತಿಯಲ್ಲಿದ್ದ ರಫಿ, ಲತಾ ಧ್ವನಿಗಳು; ಹದವಾಗಿ ಬೆರೆತ ಕೊಳಲು, ವಯಲಿನ್ಸ್, ಬೇಸ್ ಗಿಟಾರ್, ಕಾಂಗೋ ಡ್ರಮ್ಸ್, ಢೋಲಕ್ ಇತ್ಯಾದಿಗಳ ರಸ ಪಾಕ ಇದಕ್ಕೆ ಕಾರಣವಾಗಿರಬಹುದು. ಎಡದ ಗುಂಕಿಗಳು, ಬ್ರೇಕ್, ಟೆಕ್ ಆಫ್, ಹಾಡಿನ ಸಾಹಿತ್ಯಕ್ಕೆ ತಕ್ಕಂತೆ ಬೋಲ್  ಬದಲಾವಣೆ ಇತ್ಯಾದಿಗಳ ಮಾಸ್ಟರ್ ಆಗಿದ್ದ  ದತ್ತಾರಾಂ ನುಡಿಸಿದ ಢೋಲಕ್ ಜೊತೆಗೆ ಬೆರೆಯುವ ಮರದ ತುಂಡುಗಳ ಟಕ್  ಟಕ್ ಲಯವನ್ನು  ಆಲಿಸುವುದೇ ಒಂದು ವಿಶಿಷ್ಟ ಅನುಭವ. ರಫಿ ಮತ್ತು ಲತಾ ಅವರನ್ನು ಅನುಕರಿಸುವವರು, ಅಂಥವೇ ಸಂಗೀತ ಉಪಕರಣಗಳನ್ನು ನುಡಿಸಬಲ್ಲವರು ಈಗಲೂ ಇರಬಹುದಾದರೂ ಅದೇ ನಾದವನ್ನು ಈಗ ಪುನಃ ಸೃಷ್ಟಿಸುವುದು ಆಗದ ಮಾತು. ಮುಂದೆ ಸ್ವತಂತ್ರ ಸಂಗೀತ ನಿರ್ದೇಶಕರಾದ ಸೋನಿಕ್ ಮತ್ತು ಓಮಿ ಆಗ ರೋಶನ್ ಅವರ ಸಹಾಯಕರಾಗಿದ್ದರು.  ಈ ಹಾಡನ್ನು ಇಂತಹ ಮಟ್ಟಕ್ಕೇರಿಸುವಲ್ಲಿ  ಅವರ ಯೋಗದಾನವೂ ಬಲು ದೊಡ್ಡದು. ಸಾಮಾನ್ಯವಾಗಿ ಹಿಂದಿ ಹಾಡುಗಳಲ್ಲಿರುತ್ತಿದ್ದ 1-2-1 ಮಾದರಿಗೆ ಹೊರತಾಗಿ ಈ ಹಾಡಿನ 3 interludeಗಳು ಬೇರೆ ಬೇರೆ ಆಗಿರುವುದು ಗಮನಾರ್ಹ. RCA ಸೌಂಡ್ ಸಿಸ್ಟಂನಲ್ಲಿ ರಫಿಯ ಬೆಣ್ಣೆಯಂತಹ ಧ್ವನಿಯೊಂದಿಗೆ ಲತಾ ಧ್ವನಿ ಸಾಣೆ ಹಿಡಿದ ಕತ್ತಿಯಂತೆ ಹರಿತವಾಗಿ ಕೇಳುವಂತೆ ಮ್ಯಾಜಿಕ್ ಮಾಡಿದವರು ರೆಕಾರ್ಡಿಸ್ಟುಗಳಾದ ಮೀನೂ ಕತ್ರಕ್ ಮತ್ತು ಕೌಶಿಕ್. 

1963ರ ವಾರ್ಷಿಕ ಬಿನಾಕಾ ಗೀತ್ ಮಾಲಾದಲ್ಲಿ ಇದು ಒಂದನೇ ಸ್ಥಾನದ ಚೋಟಿ ಕೀ ಪಾಯ್ದಾನ್‌ನಲ್ಲಿತ್ತು.

ಚಿತ್ರದಲ್ಲಿ ಅನೇಕ ಬಾರಿ ಬರುವ ಭಾಗಗಳನ್ನೆಲ್ಲ ಸೇರಿಸಿ ಒಂದಾಗಿಸಿದ 6 ನಿಮಿಷ ಅವಧಿಯ ಈ ಹಾಡನ್ನು, ಸಾಧ್ಯವಾದರೆ ಹೆಡ್ ಫೋನ್ ಬಳಸಿ, ಕಣ್ಣು ಮುಚ್ಚಿ ಕೇಳಿ. ನಾನಂತೂ ಇದನ್ನು loopನಲ್ಲಿ ಎಷ್ಟು ಬಾರಿಯೂ ಕೇಳಿಯೇನು.


7. ಭಲೇ ಭಲೇ ಗಾರುಡಿ

29-1-2022

ಚಿತ್ರ : ಶ್ರೀಕೃಷ್ಣ ಗಾರುಡಿ.
ಗಾಯಕರು : ಪೀಠಾಪುರಂ ನಾಗೇಶ್ವರ ರಾವ್, ಮಾಧವಪೆದ್ದಿ ಸತ್ಯಂ, ಎಸ್. ಜಾನಕಿ.
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ.

ರೇಡಿಯೋದಲ್ಲಿ ‘ಚಿತ್ರಗೀತೆಗಳನ್ನು ಕೇಳುತ್ತಿರುವಿರಿ.  ಇನ್ನು ಮುಂದೆ ಶ್ರೀಕೃಷ್ಣಗಾರುಡಿ  ಚಿತ್ರಕ್ಕಾಗಿ ಹುಣಸೂರು ಕೃಷ್ಣಮೂರ್ತಿ ರಚಿಸಿದ ಗೀತೆ.  ಸಂಗೀತ ನಿರ್ದೇಶಕರು ಪೆಂಡ್ಯಾಲ ನಾಗೇಶ್ವರ ರಾವ್.  ಹಾಡಿದವರು...’. ಇಷ್ಟನ್ನು ಕೇಳಿದರೆ ಸಾಕು. ಮುಂದಿನ ವಿವರಗಳ ಅಗತ್ಯವೇ ಇಲ್ಲದೆ  ಕಿವಿಗಳಿಗೆ ರಸದೌತಣ ಕಾದಿದೆ ಎಂದು ಖಾತ್ರಿಯಾಗುತ್ತಿತ್ತು.  ಕಾರಣ ಯಾವಾಗಲೂ ರೇಡಿಯೋದಲ್ಲಿ ಕೇಳಿಬರುತ್ತಿದ್ದುದು ಆ ಚಿತ್ರದ ಎರಡೇ ಹಾಡುಗಳು.  ಒಂದೋ ಬೊಂಬೆಯಾಟವಯ್ಯ.  ಇಲ್ಲವಾದರೆ ಭಲೇ ಭಲೇ ಗಾರುಡಿ.  ಎರಡೂ ಆನಂದ ಸಾಗರದಲ್ಲಿ ತೇಲಾಡಿಸುವಂಥ ಹಾಡುಗಳೇ.

1957ರಲ್ಲೇ ಎಸ್. ಜಾನಕಿಯವರು ರಾಯಸ ಸೊಸೆ ಚಿತ್ರದಲ್ಲಿ ತಾಳಲೆಂತು ಶೋಕಾವೇಗ ಎಂಬ ಹಾಡು ಹಾಡಿದ್ದರಾದರೂ ಅವರ ಹೆಸರು ಮೊದಲ ಬಾರಿ ಕನ್ನಡಿಗರ ನಾಲಿಗೆ ಮೇಲೆ ನಲಿದಾಡುವಂತಾದದ್ದು ಈ ಹಾಡಿನ ಮೂಲಕವೇ.  ಆದರೆ ಸಂಗೀತ ನಿರ್ದೇಶಕ ಪೆಂಡ್ಯಾಲ ನಾಗೇಶ್ವರ ರಾವ್  ಆ ಮೇಲೆ ಜಾನಕಿ ಅವರ ಧ್ವನಿಯನ್ನು ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ಬಳಸಿಕೊಂಡಿಲ್ಲ.

ಇದರ ಎರಡನೇ ಮತ್ತು ನಾಲ್ಕನೇ interludeನಲ್ಲಿ ಕೇಳಿಸುವ  ಜೋಡಿ ಕೊಳಲುಗಳ ನಾದ ಮತ್ತು ಅದರ ನಂತರ ಬರುವ ‘ಧಿತ್ತೊಂ ತಾಕಿಟತಕ ಧಿತ್ತೊಂ ತಾಕಿಟತಕ ಧೀಂಕಿಟತಕ ತಾಕಿಟತಕ ತಾಕಿಟತಕ ತಾಕಿಟತಕ ಧೀಂ ತಕ ಧೀಂ ತಕ ಧೀಂ ತಕ ಧಿಂ’ ಎಂಬ ಢೋಲಕ್ ಉರುಳಿಕೆ ಅತಿ ಸುಂದರ. ಈ ತುಣುಕನ್ನು ಶಂಕರ್ಸ್ ವರ್ಲ್ಡ್ ಆಫ್ ಮ್ಯಾಜಿಕ್ಕಿನ ಒಂದು ಜಾನಪದ ಶೈಲಿಯ ಜಾದುವಿಗೆ ಭಾರವಿ ದೇರಾಜೆಯ ಢೋಲಕ್‌ನೋಂದಿಗೆ ನಾನು ನುಡಿಸುತ್ತಿದ್ದೆ.

8. ಕಂಡಂಥ ಕನಸೆಲ್ಲ ನನಸಾಗಲಿ
30-1-22
ಚಿತ್ರ : ಬೆರೆತ ಜೀವ
ಗಾಯಕ : ಪಿ.ಬಿ.ಶ್ರೀನಿವಾಸ್.
ಸಂಗೀತ : ವಿಜಯಭಾಸ್ಕರ್.
ಸಾಹಿತ್ಯ : ಕು.ರ.ಸೀ.


ಪಿ.ಬಿ.ಶ್ರೀನಿವಾಸ್ ಅವರ ಕಂಠದ ಮಂದ್ರ ಮಾಧುರ್ಯವನ್ನು ಪೂರ್ಣ ಬಳಸಿಕೊಂಡ ಬಲು ಸುಂದರ ಹಾಡಿದು. ಅವರ ಗಾಯನದ ಹೆಗ್ಗುರುತಾದ ವಿಶಿಷ್ಟ ಮುರ್ಕಿ ಅರ್ಥಾತ್ ಧ್ವನಿಯ ಬಳುಕುಗಳನ್ನೊಳಗೊಂಡ  ಈ ಹಾಡು ಕೇಳಲು ಸಿಗುವುದು ಬಲು ಕಮ್ಮಿ.  ಬೆರೆತ ಜೀವ ತಮಿಳಿನ ಪಾಲುಂ ಪಳಮುಂ ಸಿನಿಮಾದ ರೀಮೇಕ್ ಆದರೂ ವಿಜಯಭಾಸ್ಕರ್ ಮೂಲ ತಮಿಳು ಧಾಟಿಗಳನ್ನು  ಬಳಸದೆ ‘ನನ್ನ ಧಾಟಿಯ ನೀನರಿಯೆ, ನನ್ನ ಹಾಡೇ ಬೇರೆ’ ಎನ್ನುತ್ತಾ ಸ್ವಂತಿಕೆ ಮೆರೆದು ಗೆದ್ದಿದ್ದರು. ಎಲ್ಲ ಹಾಡುಗಳು ಅತ್ಯುತ್ತಮ ಅನ್ನಿಸಿಕೊಂಡ ಕೆಲವೇ ಕನ್ನಡ ಚಿತ್ರಗಳಲ್ಲಿ. ಬೆರೆತ ಜೀವ ಕೂಡ ಒಂದು.

9. ದೇವರು ದೇವರು ದೇವರೆಂಬುವರು.

31-1-2022

ಚಿತ್ರ : ಕಿತ್ತೂರು ಚೆನ್ನಮ್ಮ.
ಗಾಯಕರು : ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ಜೆ.ವಿ.ರಾಘವುಲು, ರುದ್ರಪ್ಪ ಮತ್ತಿತರರು.
ಸಂಗೀತ : ಟಿ.ಜಿ. ಲಿಂಗಪ್ಪ.
ಸಾಹಿತ್ಯ : ಜಿ.ವಿ.ಅಯ್ಯರ್.


ಆಗೆಲ್ಲ ನಮಗೆ ಸಿನಿಮಾ ನೋಡುವ ಅವಕಾಶ  ಸಿಗುತ್ತಿದ್ದುದು ಬೇಸಗೆ ರಜೆಯಲ್ಲಿ   ನಮ್ಮ ಅಕ್ಕನ ಮನೆಗೆ ಹೋದಾಗ ಕಾರ್ಕಳದ ಜೈಹಿಂದ್ ಟಾಕೀಸಿನಲ್ಲಿ ಮಾತ್ರ.    ಈ ರೀತಿ ಜೇನುಗೂಡು, ಕನ್ಯಾರತ್ನ, ಕಿತ್ತೂರು ಚೆನ್ನಮ್ಮ ಮೊದಲಾದ ಚಿತ್ರಗಳನ್ನು ಅಲ್ಲಿ ನೋಡಿದ್ದೆ.  ಈ ಚಿತ್ರಗಳ ಹಾಡುಗಳು ರೇಡಿಯೋದಲ್ಲಿ ಕೇಳಿಬಂದಾಗ ಹೆಚ್ಚು ಖುಶಿ ನೀಡುತ್ತಿದ್ದವು. ಅದರಲ್ಲೂ ಸಂಭಾಷಣೆಗಳನ್ನೂ ಒಳಗೊಂಡಿದ್ದ  ಯಾವುದಾದರೂ ಹಾಡಿದ್ದರೆ    ಮತ್ತೆ  ಆ   ಸಿನಿಮಾ ನೋಡಿದ ಅನುಭವವಾಗುತ್ತಿತ್ತು.   ಕಿತ್ತೂರು ಚೆನ್ನಮ್ಮ ಚಿತ್ರದ ಅಂತಹುದೇ ಇದೊಂದು ಸವಾಲ್ ಜವಾಬ್  ಹಾಡು  ಆಕಾಶವಾಣಿ ಬೆಂಗಳೂರು ಕೇಂದ್ರದಿಂದ  ಗ್ರಾಮಸ್ಥರ ಕಾರ್ಯಕ್ರಮದಲ್ಲಿ ಆಗಾಗ ಪ್ರಸಾರವಾಗುತ್ತಿತ್ತು.  ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ 6 ನಿಮಿಷದ ಈ ಹಾಡಿನಲ್ಲಿ   ನರಸಿಂಹರಾಜು, ಬಾಲಕೃಷ್ಣ ಮತ್ತಿತರರ ಉತ್ತರ ಕರ್ನಾಟಕ ಶೈಲಿಯ ಸಂಭಾಷಣೆ ಆಲಿಸಿದಾಗ ನಾವು ಸಿನಿಮಾ ಟಾಕೀಸಲ್ಲೇ ಇದ್ದೇವೇನೋ ಅನ್ನಿಸುತ್ತಿತ್ತು.  ಈ ಹಾಡಿಗೆ  ಪಿ.ಬಿ.ಶ್ರೀನಿವಾಸ್ ಅವರ ಕೊಂಚ ಅನುನಾಸಿಕ  ಧ್ವನಿ ವಿಶೇಷ ಮೆರುಗು ನೀಡಿದೆ. ಚೌಡಕಿ, ತಮ್ಮಟೆ, ತಬ್ಲಾ, ಮೋರ್ ಸಿಂಗ್ ಮುಂತಾದ ವಿವಿಧ  ತಾಳವಾದ್ಯಗಳನ್ನು ಒಳಗೊಂಡ ಇದರಲ್ಲಿ ಮಹಾರಾಷ್ಟ್ರದ  ಢೋಲಕಿಯ ಆಕರ್ಷಕ ನುಡಿತವಿದೆ.

HMVಯವರು ಹಳೆ ಚಿತ್ರಗಳ ಕ್ಯಾಸೆಟ್ಟುಗಳನ್ನು ಹೊರತರಲು ಪ್ರಾರಂಭಿಸಿದಾಗ  ಕಿತ್ತೂರು ಚೆನ್ನಮ್ಮ  ಹಾಡುಗಳ ಕ್ಯಾಸೆಟ್ಟನ್ನು ಆಸೆಯಿಂದ ಖರೀದಿಸಿದ್ದೆ. ಆದರೆ ಈ ಹಾಡೇ ಅದರಲ್ಲಿರದಿದ್ದದ್ದು ನೋಡಿ ತುಂಬಾ ನಿರಾಸೆಯಾಗಿತ್ತು.!  ಮತ್ತೊಮ್ಮೆ ದೂರದರ್ಶನದಲ್ಲಿ ಈ ಚಿತ್ರ ಪ್ರಸಾರವಾಯಿತು.  ಅದರಲ್ಲೂ ಈ ಹಾಡು ಕತ್ತರಿಸಿದ್ದರು!  ಈಗ ಈ ಹಾಡಿನ ಸಮೇತ ಕಿತ್ತೂರು ಚೆನ್ನಮ್ಮ ಚಿತ್ರ ಅಂತರ್ಜಾಲದಲ್ಲಿ ಲಭ್ಯವಿದೆ.  ಆಸಕ್ತರು ವೀಕ್ಷಿಸಬಹುದು.


10. ಬಿಂಕದ ಸಿಂಗಾರಿ.
1-2-2022

ಚಿತ್ರ : ಕನ್ಯಾರತ್ನ.
ಗಾಯಕ : ಪಿ.ಬಿ. ಶ್ರೀನಿವಾಸ್.
ಸಂಗೀತ : ಜಿ.ಕೆ. ವೆಂಕಟೇಶ್.
ಸಾಹಿತ್ಯ : ಕು.ರ.ಸೀ.


ಕೆಲವು ಹಾಡುಗಳು ನಮ್ಮ ಮನಸ್ಸಲ್ಲಿ ಹೇಗೆ ಅಚ್ಚೊತ್ತಿವೆಯೋ ಹಾಗೆಯೇ ಕೇಳಿದರೆ ಮಾತ್ರ ಕೇಳಿದಂತಾಗುವುದು. ಉದಾಹರಣೆಗೆ ರತ್ನಗಿರಿ ರಹಸ್ಯದ ಅಮರ ಮಧುರ ಪ್ರೇಮ ಹಾಡು ಆರಂಭವಾಗುವ ಮೊದಲು ಒಂದಷ್ಟು ಹೊತ್ತು ಗ್ರಾಮೋಫೋನಿನ ಚರಚರ ಕೇಳಿಸಬೇಕು ಮತ್ತು ಕೊನೆಯಲ್ಲಿ  ಗಾಜು ಒಡೆಯುವ ಸದ್ದು ಹಾಗೂ ಕಿಟಾರನೆ  ಕಿರಿಚುವಿಕೆ   ಇರಲೇಬೇಕು. ಕನ್ಯಾರತ್ನದ ಬಿಂಕದ  ಸಿಂಗಾರಿ ಹಾಡು ಝಂಜರ ಝಂಜರ ಝೈಂ ಎಂದು ಗಿಟಾರಿನ ಝೇಂಕಾರದೊಂದಿಗೆ ಆರಂಭವಾಗಬೇಕು. ಆದರೆ ರೇಡಿಯೋದಲ್ಲಿ ಆಗಾಗ ಕೇಳಲು ಸಿಗುವ ಈ ಹಾಡಲ್ಲಿ ಆ ಭಾಗ ಇರುವುದಿಲ್ಲ.

ಸಾಮಾನ್ಯವಾಗಿ ಶಂಕರ್ ಜೈಕಿಶನ್ ರಚನೆಗಳನ್ನು ಹೊರತುಪಡಿಸಿದರೆ prelude ಮತ್ತು interludeಗಳು ಹಾಡಿನ ಅವಿಭಾಜ್ಯ ಅಂಗವಾಗಿರುವುದು ಕಮ್ಮಿ. ತಮಿಳಿನ ಶಂಕರ್ ಜೈಕಿಶನ್ ಅನ್ನಬಹುದಾದ ವಿಶ್ವನಾಥನ್ ರಾಮಮೂರ್ತಿಯವರ ಬಳಿ ಸಹಾಯಕರಾಗಿದ್ದು ನಂತರ ಕನ್ನಡದ ಶಂಕರ್ ಜೈಕಿಶನ್ ಅನ್ನಿಸಿಕೊಂಡ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದ ಈ ಹಾಡನ್ನು  ಕೂಡ prelude ಮತ್ತು interludeಗಳಿಲ್ಲದೆ ಕಲ್ಪಿಸಿಕೊಳ್ಳಲೂ ಆಗುವುದಿಲ್ಲ.

ಕನ್ನಡ ಚಿತ್ರಗೀತೆಗಳಲ್ಲಿ ಸಾಮಾನ್ಯವಾಗಿ ಅಂತ್ಯಪ್ರಾಸವಿರುತ್ತದೆ.  ಆದರೆ ಅಂತ್ಯಪ್ರಾಸದ ಜೊತೆಗೆ ಈ ಹಾಡಿನ ಪದ ಪದಗಳೂ   ಆದಿಪ್ರಾಸ, ಒಳಪ್ರಾಸ ಹೊಂದಿವೆ. ಇಡೀ ಹಾಡು ನಾಯಕಿಯ ವರ್ಣನೆಗೆ ಮೀಸಲಾಗಿದ್ದು ಇಲ್ಲಿ ಕು.ರ.ಸೀ. ಅವರು ಉಪಯೋಗಿಸಿದ ಉಪಮೆಗಳೂ ಅನನ್ಯ. ಡೊಂಕು ಇದ್ದರೆ ಕೊಂಕು ಮಾತಾಡುವವರೇ ಜಾಸ್ತಿ.  ಆದರೆ ಇಲ್ಲಿ ಮೈಯ ಡೊಂಕು ಸೌಂದರ್ಯದ ಪ್ರತೀಕವಾಗಿದೆ.  ನಾಯಕಿಯ ತೆಳು ನಡುವನ್ನು ವರ್ಣಿಸಲು ಮಧುಪಾನಪಾತ್ರೆ ಎಂಬ ವಿಶಿಷ್ಟ ಪದಪುಂಜವನ್ನೂ ಅವರು ಬಳಸಿದ್ದಾರೆ.  ಹಿಂದಿ, ಉರ್ದು  ಸಾಹಿತ್ಯದಲ್ಲಿ ಮದ್ಯಪಾನ ಮಾಡಲು ಬಳಸುವ,  ಮರಳು ಗಡಿಯಾರದಂತೆ ನಡು ತೆಳ್ಳಗಾಗಿರುವ ice cream bowlನಂತಹ ಪೈಮಾನಾ ಎಂಬ  ಗಾಜಿನ ಪಾತ್ರೆಯ ಉಲ್ಲೇಖ ಇರುತ್ತದೆ.  ಆ ಪೈಮಾನಾವನ್ನು  ಅವರು ಈ ರೀತಿ ಕನ್ನಡೀಕರಿಸಿದ್ದಾರೆ. ಆಕೆಯನ್ನು ಸಿಂಹಕಟಿ ಅಂದ ಹಾಗೂ ಆಯಿತು, ನಿನ್ನಂತರಂಗ ಮಧುರಂಗ ಅನ್ನುವುದಕ್ಕೆ ಪೂರಕವೂ ಆಯಿತು.

ತೋರಿಕೆಗೆ ಸರಳವೆಂದು ಅನ್ನಿಸಿದರೂ ಪಿ.ಬಿ.ಶ್ರೀನಿವಾಸ್ ಅವರು ಪ್ರತಿ ಸಾಲನ್ನೂ ಸ್ಪಟಿಕ ಸ್ವಚ್ಛ ಉಚ್ಚಾರ ಹಾಗೂ  ತಮ್ಮ ವಿಶಿಷ್ಟ ಮುರ್ಕಿಗಳೊಡನೆ ಇತರರು ಅನುಕರಿಸಲಾಗದಂತೆ ಹಾಡಿದ್ದಾರೆ.  ಗಾಯನದ ದೃಷ್ಟಿಯಿಂದಿರಲಿ, ವಾದನದ ದೃಷ್ಟಿಯಿಂದಿರಲಿ, ಯಾರೂ ಯಥಾವತ್ತಾಗಿ ಮರುಸೃಷ್ಟಿಸಲು ಸಾಧ್ಯವಾಗದ ಹಾಡಿದು.  ಇಂತಹ ರಚನೆಗಳನ್ನು ಕಲ್ಪಿಸಿದವರ, ಹಾಡಿದವರ, ವಾದ್ಯಗಳನ್ನು ನುಡಿಸಿದವರ ಮೈ ಮನಗಳಲ್ಲಿ ಆ ಕ್ಷಣಕ್ಕೆ ಗಂಧರ್ವ ಲೋಕದ ಸಂಗೀತ ದೇವತೆಗಳ ಆವಾಹನೆಯಾಗುತ್ತಿದ್ದಿರಬಹುದು ಎಂದು ನನ್ನ ದೃಢ ನಂಬಿಕೆ.

ಈ ಹಾಡು ಬೃಂದಾವನ್ ಗಾರ್ಡನ್‌ನಲ್ಲಿ ಚಿತ್ರೀಕರಿಸಲ್ಪಟ್ಟಿದ್ದು ರಾಜ್‌ಕುಮಾರ್ ಅವರು ಅಣೆಕಟ್ಟಿಂದ  ಕೆಳಗೆ ಇಳಿದು ಬರುವ ದೃಶ್ಯ ಇದರಲ್ಲಿದೆ. 7ನೇ ಕ್ಲಾಸಲ್ಲಿ ಇರುವಾಗ ನಾನು  ಈ ಚಿತ್ರ ನೋಡಿದ್ದು ಅದೇಕೋ ಆ ದೃಶ್ಯ ನಮ್ಮ ಉಜಿರೆಯ ಮಾಳಿಗೆ ಡಾಕ್ಟ್ರ ಮಾಳಿಗೆಯ ಮೆಟ್ಟಲುಗಳಿಗೆ ತಳುಕು ಹಾಕಿಕೊಂಡಿದ್ದು ಈಗಲೂ ಈ ಹಾಡು ಕೇಳುವಾಗ ಮಾಳಿಗೆ ಡಾಕ್ಟ್ರು ಒಮ್ಮೆ ಮನಸ್ಸಿನಲ್ಲಿ ಹಾದು ಹೋಗುತ್ತಾರೆ!


11. ನಮೋ ನಮೋ ನಟರಾಜ
2-2-2022

ಚಿತ್ರ : ಆದರ್ಶ ಸತಿ.
ಗಾಯನ : ಎಂ.ಎಲ್. ವಸಂತಕುಮಾರಿ ಮತ್ತು ಸಂಗಡಿಗರು.
ಸಂಗೀತ : ಆರ್. ಸುದರ್ಶನಂ.
ಸಾಹಿತ್ಯ : ಕು.ರ.ಸೀ.

ನಮ್ಮ ಸಿದ್ದಬೈಲು ಪರಾರಿ ಶಾಲೆಯ ಪ್ರತಿಭಾವಂತ ಉಪಾಧ್ಯಾಯರಾಗಿದ್ದ ಮಹದೇವ ಚಿಪ್ಳೂಣ್‌ಕರ್ ಅವರು ಈ ಹಾಡಿಗೆ ಸುಂದರ ನೃತ್ಯವನ್ನು ಸಂಯೋಜಿಸಿ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರಸ್ತುತ ಪಡಿಸಿದಾಗ ನಾನು ಮೊದಲು ಈ ಹಾಡು ಕೇಳಿದ್ದು. ಇದು ಒಂದು ಸಿನಿಮಾ ಹಾಡೆಂದು ನನಗೆ ತಿಳಿದದ್ದು  ಎಷ್ಟೋ ವರ್ಷಗಳ ನಂತರ. ರೇಡಿಯೋದಲ್ಲೂ ಇದು ಪ್ರಸಾರವಾದದ್ದು ಇಲ್ಲವೆನ್ನುವಷ್ಟು ಕಮ್ಮಿ. ಎಂದೋ ಒಮ್ಮೆ ರೇಡಿಯೊ ಸಿಲೋನಿನಿಂದ ಇದನ್ನು ಕೇಳಿದ್ದೆ. ಅಂತರ್ಜಾಲ ಯುಗ ತೆರೆದುಕೊಂಡ ಮೇಲೆ ತೆಲುಗು ಸಿನಿಮಾ ನಾಗುಲ ಚವಿತಿಯಲ್ಲಿ ಇದು ನನಗೆ ಸಿಕ್ಕಿತು. ಕನ್ನಡದ ಆದರ್ಶ ಸತಿಯೇ ತೆಲುಗಿನ ನಾಗುಲ ಚವಿತಿ ಎಂದು ಆ ಮೇಲೆ ತಿಳಿಯಿತು. ಮಂಗಳೂರು ಆಕಾಶವಾಣಿಗೆ ನಾನೇ ಈ ಹಾಡನ್ನು ಒದಗಿಸಿದ್ದೆ.

ತಿಲಂಗ್ ರಾಗಾಧಾರಿತವಾದ ಈ ಹಾಡಿನ ಮೂರು ಚರಣಗಳು ಮೂರು ವಿಧ ಇದ್ದು ಸ್ಥಾಯಿ ಏರುತ್ತಾ ಹೋಗುವುದನ್ನು ಗಮನಿಸಬಹುದು.

ಸಂಸ್ಕೃತದ ವಿಶೇಷಣಗಳು ಮಾತ್ರ ಬಳಸಲ್ಪಟ್ಟದ್ದರಿಂದ ಇದು ಯಾವ ಭಾಷೆಗೂ ಸಲ್ಲುವ ಹಾಡು. ಇದೇ ರೀತಿ ಸಂಸ್ಕೃತ ಪದಗಳನ್ನು ಮಾತ್ರ ಹೊಂದಿದ ಇನ್ನೂ ಕೆಲವು ಜನಪ್ರಿಯ ಕನ್ನಡ ಚಿತ್ರಗೀತೆಗಳನ್ನು ನೆನಪು ಮಾಡಿಕೊಳ್ಳಬಲ್ಲಿರಾ?

12. ನಾರಾಯಣ ವನಮಾಲಿ

3-2-2022

ಚಿತ್ರ :  ಮಹಿಷಾಸುರಮರ್ದಿನಿ.
ಗಾಯಕ : ಪಿ.ಬಿ.ಶ್ರೀನಿವಾಸ್.
ಸಂಗೀತ : ಜಿ.ಕೆ. ವೆಂಕಟೇಶ್.
ಸಾಹಿತ್ಯ : ಚಿ. ಸದಾಶಿವಯ್ಯ.


ನಿನ್ನೆಯ ನಮೋ ನಮೋ ನಟರಾಜ ಹಾಡಿನ ಸಂದರ್ಭದಲ್ಲಿ ಅಂಥದೇ ಸಂಸ್ಕೃತ ವಿಶೇಷಣಗಳನ್ನಷ್ಟೇ ಹೊಂದಿದ ಕನ್ನಡ ಹಾಡುಗಳನ್ನು ನೆನಪಿಸಿಕೊಳ್ಳುವಂತೆ ಕೋರಿದ್ದೆ.  ಅನೇಕ ಹಾಡುಗಳನ್ನು ಸೂಚಿಸಿದಿರಿ ಕೂಡ. ಮಹಿಷಾಸುರಮರ್ದಿನಿ ಚಿತ್ರದ ಈ ಹಾಡು ಬಹುಶಃ ಯಾರಿಗೂ ನೆನಪಾಗಲಿಲ್ಲ. ಓಹಿಲೇಶ್ವರ ಮತ್ತು ಅಬ್ಬಾ ಆ ಹುಡುಗಿ ಚಿತ್ರಗಳಲ್ಲಿ ಆಗಲೇ ಪಿ.ಬಿ.ಎಸ್ ರಾಜ್ ಕುಮಾರ್ ಅವರಿಗಾಗಿ ಹಾಡಿದ್ದರೂ ನಂತರ ಬಂದ ಈ ಚಿತ್ರದಲ್ಲಿ ಅವರು ಈ ಹಾಡನ್ನು ನಾರದನಾಗಿದ್ದ ಕೆ.ಎಸ್. ಅಶ್ವತ್ಥ್ ಅವರಿಗಾಗಿಯೂ ಇನ್ನೊಂದು ಹಾಡನ್ನು ನರಸಿಂಹರಾಜು ಅವರಿಗಾಗಿಯೂ ಹಾಡಿದ್ದರು. ಅದನ್ನು ಇನ್ನೊಂದು ದಿನ ಕೇಳಿಸುತ್ತೇನೆ. ರಾಜ್ ಕುಮಾರ್ ಅವರು ತುಂಬಿತು ಮನವ ಹಾಡನ್ನು ತಾವೇ ಎಸ್. ಜಾನಕಿ ಅವರೊಂದಿಗೆ ಹಾಡಿದ್ದರು.

ಮಹಿಷಾಸುರಮರ್ದಿನಿ ಚಿತ್ರವನ್ನು ನಾನು ಬೆಳ್ತಂಗಡಿಯ ನದಿತೀರದಲ್ಲಿದ್ದ ಮರುಳಸಿದ್ದೇಶ್ವರ ಎಂಬ ಸೋಗೆ ಮಾಡಿನ ಸಂಚಾರಿ ಟಾಕೀಸಿನಲ್ಲಿ ಮರದ ಬೆಂಚಿನ ಮೇಲೆ ಕೂತು ನೋಡಿದ್ದು. ಆ ದಿನ ಶಾಲೆಯಲ್ಲಿ ಅಧ್ಯಾಪಕರಿಂದ ವಿಶೇಷ ಅನುಮತಿ ಪಡೆದು ಆಟದ ಪೀರಿಯಡ್ಡಿನಲ್ಲೇ ಹೊರಟಿದ್ದೆವು.  ವೇದಾಧ್ಯಯನಕ್ಕೆಂದು ನಮ್ಮ ಅಣ್ಣನ ಮನೆಯಲ್ಲಿ ನಮ್ಮೊಂದಿಗಿದ್ದ ಮಿತ್ರನ ಮನೆ ಬೆಳ್ತಂಗಡಿಯಲ್ಲಿತ್ತು.  ಅವರ ಮನೆಯಲ್ಲಿ ಅಂದು ಹಾಲ್ಟ್.  ಬೆಳ್ತಂಗಡಿಗೆ ಹೋಗುವಾಗ ಯಾವ ಬಸ್ಸಿನಲ್ಲಿ ಹೋಗಿದ್ದೆವೆಂದು ನೆನಪಿಲ್ಲ. ಮರುದಿನ ಬೆಳಗ್ಗೆ ಶೆಟ್ಟಿ ಬಸ್ಸಿನಲ್ಲಿ ಮುಂಡಾಜೆಗೆ ಮರಳಿದ್ದು.

ಕಾಪಿ ರಾಗಾಧಾರಿತ ಈ ಹಾಡನ್ನು ಪಿ.ಬಿ.ಎಸ್ ಅವರ ಮಂದ್ರ ಧ್ವನಿಯಲ್ಲಿ ಆಲಿಸುವುದೇ ಆನಂದದಾಯಕ. ಇದರ ಒಂದು interlude ಬಬ್ರುವಾಹನದ ಆರಾಧಿಸುವೆ ಮದನಾರಿಯನ್ನು ನೆನಪಿಸಬಹುದು. ಕಾಪಿ ರಾಗವು   ಖರಹರಪ್ರಿಯ ಜನ್ಯವೇ ಆಗಿರುವುದು ಇದಕ್ಕೆ ಕಾರಣ. 

ಇದನ್ನೇ ಸ್ವಲ್ಪ ಮಟ್ಟಿಗೆ ಹೋಲುವ ಪಿ.ಬಿ.ಎಸ್ ಹಾಡೊಂದು ರತ್ನಮಂಜರಿ ಚಿತ್ರದಲ್ಲೂ ಇದೆ. ಯಾವುದೆಂದು ಹೇಳಬಲ್ಲಿರಾ?

13. ಚೆಲುವಯ್ಯ ಚೆಲುವೊ

4-2-22

ಚೆಲುವಯ್ಯ ಚೆಲುವೊ                      
ಚಿತ್ರ: ಮಹಾಕವಿ ಕಾಳಿದಾಸ
ಹಾಡಿದವರು : ಸಿ.ಹೊನ್ನಪ್ಪ ಭಾಗವತರ್ ಮತ್ತು ಸಂಗಡಿಗರು.
ಸಂಗೀತ ನಿರ್ದೇಶನ :   ಸಿ.ಹೊನ್ನಪ್ಪ ಭಾಗವತರ್
ಸಾಹಿತ್ಯ : ಕು.ರ.ಸೀ.


ಈಗ ಒಂದು ವಾರದಿಂದ ಬೆಳಗಿನ ಜಾವ ಪೂರ್ವ ದಿಗಂತದಲ್ಲಿ ಫಳ ಫಳ ಹೊಳೆಯುತ್ತಿರುವ ಶುಕ್ರನನ್ನು ನೋಡಿದರೆ ಡಾ| ರಾಜ್ ಅಭಿನಯದ ಕವಿರತ್ನ ಕಾಳಿದಾಸ ಚಿತ್ರದ  ಬೆಳ್ಳಿ ಮೂಡಿತು ಕೋಳಿ ಕೂಗಿತು ಹಾಡು ನೆನಪಾಗುತ್ತದೆ.  ಇದಕ್ಕಿಂತ ಮೊದಲೇ 50ರ ದಶಕದಲ್ಲಿ ಕು.ರ.ಸೀತಾರಾಮ ಶಾಸ್ತ್ರಿ ನಿರ್ದೇಶನದಲ್ಲಿ ಮಹಾಕವಿ ಕಾಳಿದಾಸ ಚಿತ್ರ ಬಂದಿತ್ತು. ಹೊನ್ನಪ್ಪ ಭಾಗವತರ್, ಸರೋಜಾ ದೇವಿ, ನರಸಿಂಹ ರಾಜು ಮುಂತಾದವರು ತಾರಾಗಣದಲ್ಲಿದ್ದರು.    ಆ ಚಿತ್ರದಲ್ಲಿ ಈ ಸಂದರ್ಭಕ್ಕೆ ಇದ್ದ ಹಾಡು ಯಾವುದು ಗೊತ್ತೇ?  ಅದುವೇ ಕೋಲಾಟ ಅಂದಾಕ್ಷಣ ಥಟ್ಟನೆ ನೆನಪಾಗುವ ಚೆಲುವಯ್ಯ ಚೆಲುವೊ ಹಾಡು. ರಾಜ್ ಅವರಂತೆಯೇ ಗಾಯಕ-ನಟರಾದ ಸಿ. ಹೊನ್ನಪ್ಪ ಭಾಗವತರ್ ಸ್ವತಃ ಈ ಹಾಡು ಹಾಡಿದ್ದರು.  ಈ ಚಿತ್ರಕ್ಕೆ ಸಂಗೀತ ನಿರ್ದೇಶನವೂ ಅವರದೇ. ಇದು ಮೊದಲೇ ಇದ್ದ ಹಾಡನ್ನು ಚಿತ್ರಕ್ಕೆ ಅಳವಡಿಸಿಕೊಂಡದ್ದೇ ಅಥವಾ ಚಿತ್ರಕ್ಕಾಗಿಯೇ ರಚಿಸಿದ್ದೇ ಎಂದು ಖಚಿತವಾಗಿ ಗೊತ್ತಿಲ್ಲ. ಆದರೆ ಆ ಮೇಲೆ ಅದು ಎಷ್ಟೊಂದು ಜನಪ್ರಿಯವಾಯಿತೆಂದರೆ  ಶಾಲಾ ವಾರ್ಷಿಕೋತ್ಸವಗಳ ಅವಿಭಾಜ್ಯ ಅಂಗವೇ ಆಗಿ ಹೋಯಿತು! ಈ ಹಾಡಿನ ಎಷ್ಟೋ remix ಗಳು, version ಗಳೂ ಬಂದಿವೆ.  ಆದರೆ ಹಾಡಿನ ಮೂಲ ಧಾಟಿ ಬದಲಾಗಿಲ್ಲ.  ಇದರ ಸರಳತೆಯೇ ಇದಕ್ಕೆ ಕಾರಣವಿರಬಹುದು.   ಆಧುನಿಕ ಹಾಡುಗಳ ಭರಾಟೆಯ ನಡುವೆಯೂ ಆಗೊಮ್ಮೆ ಈಗೊಮ್ಮೆ ಈ ಹಾಡಿಗೆ ಸಂಯೋಜಿಸಿದ  ಕೋಲಾಟ  ಶಾಲಾ ವಾರ್ಷಿಕೋತ್ಸವಗಳಲ್ಲಿ ಸ್ಥಾನ ಪಡೆಯುತ್ತಿರುವುದನ್ನು ಈಗಲೂ ಕಾಣಬಹುದು.

ಚಿತ್ರಗೀತೆಗಳೆಂದರೆ ಸಾಮಾನ್ಯವಾಗಿ ಇದ್ದೇ ಇರುವ  ಗಿಟಾರ್, ಸಿತಾರ್, ವಯಲಿನ್ ನಂತಹ ತಂತಿ ವಾದ್ಯಗಳಾಗಲೀ, ಕೊಳಲು, ಕ್ಲಾರಿಯೊನೆಟ್ ನಂತಹ ಊದುವ(ಸುಷಿರ) ವಾದ್ಯಗಳಾಗಲಿ  ಇಲ್ಲಿ ಇಲ್ಲವೇ ಇಲ್ಲ.  ಕೇವಲ ದೊಳ್ಳು, ಉತ್ತರ ಕರ್ನಾಟಕದ ಜಾನಪದ ವಾದ್ಯ ಚೌಡಿಕಿ ಹಾಗೂ ಕೋಲಾಟದ ಕೋಲುಗಳನ್ನು ಮಾತ್ರ ತಾಳವಾದ್ಯಗಳಾಗಿ ಉಪಯೋಗಿಸಲಾಗಿರುವುದು ಇಲ್ಲಿಯ ವಿಶೇಷ. ಇದೇ ರೀತಿ ತಾಳವಾದ್ಯಗಳು ಮಾತ್ರ ಇರುವ ಬೇರೆ ಜನಪ್ರಿಯ ಹಾಡು ನೆನಪಿದ್ದರೆ ತಿಳಿಸಿ.

14.  ಕಾಲ ನಮ್ಮ ಆಳು ಎಂಬ
5-2-22

ಚಿತ್ರ : ಗಾಳಿ ಗೋಪುರ
ಗಾಯಕ : ಜೆ.ವಿ.ರಾಘವುಲು.
ಸಂಗೀತ : ಟಿ.ಜಿ.ಲಿಂಗಪ್ಪ.
ಸಾಹಿತ್ಯ : ವಿಜಯನಾರಸಿಂಹ.


ಅಷ್ಟೊಂದು ಜನಪ್ರಿಯವಲ್ಲದಿದ್ದರೂ ನೀತಿ ಸಾರುವ ಹಿನ್ನೆಲೆ ಹಾಡು ಇದು. ಇದರ ಗಾಯಕ ಜೆ.ವಿ.ರಾಘವುಲು ಕೂಡ ಹೆಚ್ಚು ಹಾಡುಗಳನ್ನು ಹಾಡಿದವರಲ್ಲ. ಜೇನುಗೂಡು ಚಿತ್ರದ ಜಿಗಿ ಜಿಗಿಯುತ ನಲಿ ಮೂಲಕ ಜನರಿಗೆ ಅವರ ಹೆಸರು ತಿಳಿದದ್ದು.

ಹಳೆ ಸಿನಿಮಾ ನೋಡುವ ಹುಚ್ಚು ಆಗ ನನಗೆಷ್ಟಿತ್ತೆಂದರೆ ಕಾರ್ಯಕ್ರಮವೊದಕ್ಕೆ ಉಡುಪಿಗೆ ಹೋಗಿದ್ದಾಗ ಸಮಯ ಸಾಧಿಸಿ ದೂರದ ಆಶೀರ್ವಾದ್ ಥಿಯೇಟರಿನಲ್ಲಿ ನಡೆಯುತ್ತಿದ್ದ ಈ ಚಿತ್ರ ನೋಡಿ ಬಂದಿದ್ದೆ. ಯಾರಿಗೆ ಯಾರುಂಟು, ನನ್ಯಾಕೆ ನೀ ಹಾಗೆ, ನೀನೇ ಕಿಲಾಡಿ ಹೆಣ್ಣು, ಅನುರಾಗದೆ ನೀ ಪಾಡಲೇಕೆ ಮುಂತಾದವು ಈ ಚಿತ್ರದ ಇತರ ಹಾಡುಗಳು. ಕನ್ನಡದ ಕುಮಾರತ್ರಯರಾದ ರಾಜ್, ಕಲ್ಯಾಣ್ ಮತ್ತು ಉದಯ್ ಈ ಚಿತ್ರದಲ್ಲಿದ್ದದ್ದು ವಿಶೇಷ.

ಅಂದ ಹಾಗೆ ನಿನ್ನೆಯ ಚೆಲುವಯ್ಯ ಚೆಲುವೋದಂತೆ ಬರೇ ತಾಳವಾದ್ಯಗಳ ಉಪಯೋಗವಾದ ಇನ್ನೊಂದು ಜನಪ್ರಿಯ ಹಾಡು ಯಾವುದು ಎಂದು ಕೇಳಿದ್ದಕ್ಕೆ ಯಾರೂ ಪ್ರತಿಕ್ರಿಯೆ ನೀಡಲಿಲ್ಲ.  ಉತ್ತರ ಸತ್ಯಹರಿಸ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ.  ಬೇರೆ ಹಾಡುಗಳೂ ಇರಬಹುದು.

15. ವಯ್ಯಾರ ತೋರುತ
6-2-22

ಚಿತ್ರ : ವಿಜಯನಗರದ ವೀರ ಪುತ್ರ.
ಗಾಯನ : ಜಮುನಾರಾಣಿ ಮತ್ತು ಸಂಗಡಿಗರು.
ಸಂಗೀತ : ವಿಶ್ವನಾಥನ್ ರಾಮಮೂರ್ತಿ.
ಸಾಹಿತ್ಯ : ಆರ್.ಎನ್. ಜಯಗೋಪಾಲ್.


ತಮ್ಮದೇ ನಿರ್ಮಾಣದ ಚಿತ್ರದಲ್ಲಿ ಆರ್.ನಾಗೇಂದ್ರರಾಯರು ಕನಸಿನ ಸನ್ನಿವೇಶವೊಂದನ್ನು ಸೃಷ್ಟಿಸಿ ತಮಗಾಗಿ ರೂಪಿಸಿಕೊಂಡ ಪಾಶ್ಚಾತ್ಯ ಶೈಲಿಯ ಹಾಡು ಇದು.  ಬೆಂಗಳೂರು ಆಕಾಶವಾಣಿಯ ಗ್ರಾಮಸ್ಥರ ಕಾರ್ಯಕ್ರಮದಲ್ಲಿ  ಇದು ಆಗಾಗ ಬಿತ್ತರಗೊಳ್ಳುತ್ತಿತ್ತು. ಹಳ್ಳಿಯೂರುಗಳ ವಾಲಗದವರು ಉಪಯೋಗಿಸುವ ಸಮ್ಮೇಳವನ್ನು ಹೋಲುವ ತಾಳವಾದ್ಯದ ಬಳಕೆ ಇದರ ವಿಶೇಷ.  ಬಳಸಲಾದ ಕೋರಸ್ ಶಂಕರ್ ಜೈಕಿಶನ್ ಶೈಲಿಯನ್ನು ನೆನಪಿಸುತ್ತದೆ. ಈ ಹಾಡಿನಲ್ಲಿ ಯಾವುದೇ prelude, interludeಗಳಿಲ್ಲದೇ ಇರುವುದು ಗಮನಾರ್ಹ. ವಾಸ್ತವವಾಗಿ interludeಗಳು ಹಾಡಿನ ಅವಿಭಾಜ್ಯ ಅಂಗವಾಗಿರುವುದು ಬಲು ಕಮ್ಮಿ.   ಈಗ TVಯಲ್ಲಿ ಸಿನಿಮಾ ಹಾಡುಗಳ ದೃಶ್ಯಗಳನ್ನು ವೀಕ್ಷಿಸುವಾಗ ಬಹುತೇಕ ಹಾಡುಗಳ interludeಗಳ ಸಮಯದಲ್ಲಿ ನಟ ನಟಿಯರು ಪಡುವ ಪಡಿಪಾಟಲು ನೋಡಿದರೆ ಇವು ಏತಕ್ಕಾಗಿಯಾದರೂ ಬೇಕು ಎಂದು ಅನ್ನಿಸುವುದಿದೆ.  ದೃಶ್ಯದಲ್ಲೇ ವಾದ್ಯಗಳನ್ನು ನುಡಿಸುವ ಸನ್ನಿವೇಶವಿದ್ದರೆ, ನೃತ್ಯಗಳಿದ್ದರೆ,  interlude ಇರಲಿ  ಒಪ್ಪಿಕೊಳ್ಳೋಣ.  ಟ್ರಾಕ್ ಹಾಕಿಕೊಂಡು ಕರೌಕೆ ಹಾಡುವವರ ವೀಡಿಯೊಗಳಲ್ಲಂತೂ ದೀರ್ಘ interlude ಬರುವಾಗ ಅವರ ಮುಖ ನೋಡುವಂತಿರುತ್ತದೆ! 

16. ಏ ಮೇರೆ ವತನ್ ಕೆ ಲೋಗೋ
7-2-22

ಗಾಯಕಿ : ಲತಾ ಮಂಗೇಶ್ಕರ್.
ಸಂಗೀತ : ಸಿ.ರಾಮಚಂದ್ರ.
ಸಾಹಿತ್ಯ : ಪ್ರದೀಪ್.


92 ಸಂವತ್ಸರಗಳ ಸುದೀರ್ಘ ಬಾಳನ್ನು ಬಾಳಿ, 8 ದಶಕಗಳಷ್ಟು ಕಾಲ ವೃತ್ತಿ ಜೀವನದಲ್ಲಿ ಸಕ್ರಿಯರಾಗಿದ್ದು 6-2-22ರಂದು  ನಮ್ಮನ್ನಗಲಿದ ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಈ ಹಾಡು. ಅವರ ನಿಧನ ತುಂಬಲಾರದ ನಷ್ಟ ಎನ್ನುವುದೆಲ್ಲ ಸವಕಲು ಮಾತಾಗುತ್ತದೆ. ತಲೆಮಾರುಗಳ ಮೇಲೆ ತಲೆಮಾರುಗಳು ಸವಿದರೂ ಸವೆಯಲಾರದ ಸಂಪತ್ತನ್ನು ಅವರು ಬಿಟ್ಟು ಹೋಗಿರುವಾಗ ನಷ್ಟ ಎಲ್ಲಿಂದ ಬಂತು. ಅವರ ಈ ಸಾಧನೆಗೆ ಸಹಕಾರ ನೀಡಿದ ಸಂಗೀತ ನಿರ್ದೇಶಕರು, ಸಹ ಗಾಯಕರು, ವಾದ್ಯ ವೃಂದದವರು, ಹಾಡುಗಳನ್ನು ಬರೆದ ಕವಿಗಳು, ನಿರ್ಮಾಪಕರು ಎಲ್ಲರನ್ನೂ ನಾವು ಸ್ಮರಿಸಬೇಕಾಗುತ್ತದೆ.

ಹಿಂದಿ ಚೀನಿ ಭಾಯಿ ಬಾಯಿ ಎನ್ನುವ ಮಂತ್ರ ಪಠಿಸುತ್ತಿದ್ದ ಚೀನಾ 1962ರ ಒಕ್ಟೋಬರ್ 20ರಂದು ಹಠಾತ್ತಾಗಿ ದಾಳಿ ನಡೆಸಿದಾಗ ದೇಶವಿಡೀ ಬೆಚ್ಚಿ ಬಿದ್ದಿತ್ತು.  ಆಧುನಿಕ ಶಸ್ತ್ರಾಸ್ತ್ರಗಳಿಲ್ಲದಿದ್ದರೂ ಕೆಚ್ಚೆದೆಯಿಂದ ಹೋರಾಡಿದ ಭಾರತೀಯ ಸೇನೆಗೆ ದೇಶವಿಡೀ ನೈತಿಕ ಬೆಂಬಲ ಘೋಷಿಸಿತ್ತು. ಸೇನೆಯ ಬಗ್ಗೆ ಕೊಂಕು ನುಡಿಯುವವರು ಆಗ ಇರಲಿಲ್ಲ.  ಮಹಿಳೆಯರು ಸೈನ್ಯಕ್ಕಾಗಿ ಆಭರಣಗಳನ್ನು ದಾನ ಮಾಡಿದರು. ಶಾಲಾ ಮಕ್ಕಳು ದೇಶಭಕ್ತಿಯ ಘೋಷಣೆ ಕೂಗುತ್ತಾ ಪ್ರಭಾತಫೇರಿ ನಡೆಸಿದರು. ಆಕಾಶವಾಣಿಯು  ವಿವಿಧಭಾರತಿಯ ದಿನವಿಡಿಯ ಕಾರ್ಯಕ್ರಮಗಳನ್ನೆಲ್ಲ ಸೈನಿಕರಿಗಾಗಿ ಜಯಮಾಲಾ ಎಂದು ಮರುನಾಮಕರಣ ಮಾಡಿತು.  ‘ಅಪ್‌ನೀ ಆಜಾದೀ ಕೊ ಹಮ್ ಹರ್‌ಗಿಜ್ ಮಿಟಾ ಸಕ್‌ತೇ ನಹೀಂ’ ಯಂತಹ ಹಾಡುಗಳನ್ನು ಚಿತ್ರಗಳಲ್ಲಿ ಅಳವಡಿಸುವ ಮೂಲಕ ಸಿನಿಮಾ ರಂಗವೂ ತನ್ನ ಕಿರುಕಾಣಿಕೆಯನ್ನು ಸಲ್ಲಿಸಿತು. ಚೇತನ್ ಆನಂದ್ ಅವರು ಈ ಯುದ್ಧವನ್ನೇ ಹಿನ್ನೆಲೆಯಾಗಿಸಿ ‘ಕರ್ ಚಲೇ ಹಮ್ ಫಿದಾ ಜಾನೊ ತನ್ ಸಾಥಿಯೋ’ ಎಂಬ ಜನಪ್ರಿಯ ಹಾಡಿದ್ದ ಹಕೀಕತ್ ಎಂಬ ಚಿತ್ರ ನಿರ್ಮಿಸಿದರು. ಆದರೆ ಸಿನಿಮಾದವರೇ ಸೇರಿ ಸಿನಿಮಾದ್ದಲ್ಲದ ಒಂದು ಗೀತೆಯನ್ನು ಹುತಾತ್ಮರಾದ ಸೈನಿಕರಿಗಾಗಿ ಆ ಸಂದರ್ಭದಲ್ಲಿ ಸೃಷ್ಟಿಸಿದ್ದು ಒಂದು ಅಭೂತಪೂರ್ವ ಘಟನೆ.  ಆ ಗೀತೆಯೇ ಇಂದಿಗೂ ಜನಪ್ರಿಯವಾಗಿರುವ  ಏ ಮೇರೆ ವತನ್ ಕೇ ಲೋಗೋ.

ಕವಿ ಪ್ರದೀಪ್ ಅವರು ರಚಿಸಿದ ಈ ಕವನವನ್ನು ಸಿ.ರಾಮಚಂದ್ರ ಅವರ ಸಂಗೀತ ದಿಗ್ದರ್ಶನದಲ್ಲಿ ಲತಾ ಮಂಗೇಶ್ಕರ್ ಜನವರಿ 27, 1963 ರಂದು ನೇಶನಲ್ ಸ್ಟೇಡಿಯಂನಲ್ಲಿ ಅಂದಿನ ಪ್ರಧಾನಿ ನೆಹರು ಅವರ ಸಮ್ಮುಖದಲ್ಲಿ ಹಾಡಿದ್ದರು. ಇದಕ್ಕಾಗಿ ಯಾರೂ ರಾಯಲ್ಟಿ ಸ್ವೀಕರಿಸಬಾರದು ಮತ್ತು ಇದನ್ನು ಯಾವ ಚಲನ ಚಿತ್ರದಲ್ಲೂ ಬಳಸಿಕೊಳ್ಳಬಾರದು ಎಂಬ ಶರತ್ತುಗಳೊಡನೆ ನಂತರ ಇದರ ಗ್ರಾಮೊಫೋನ್ ರೆಕಾರ್ಡ್ ಕೂಡ ತಯಾರಿಸಲಾಯಿತು. ಈ ಹಾಡಿನ ಧಾಟಿ ಕವಿ ಪ್ರದೀಪ್ ಅವರದ್ದೇ, ವಾದ್ಯ ಸಂಯೋಜನೆ ಮತ್ತು arrangement ಮಾತ್ರ ಸಿ.ರಾಮಚಂದ್ರ ನಿರ್ವಹಿಸಿದ್ದು ಎಂದೂ ಕೆಲವರು ಹೇಳುತ್ತಾರೆ. ಪ್ರದೀಪ್ ಅವರು ಸಂಗೀತ ಜ್ಞಾನ ಕೂಡ ಉಳ್ಳವರಾಗಿದ್ದು ಆವೋ ಬಚ್ಚೊ ತುಮ್ಹೆ ದಿಖಾಯೆಂ, ದೇಖ್ ತೆರೇ ಸಂಸಾರ್ ಕೀ ಹಾಲತ್ ಮುಂತಾದ ಹಾಡುಗಳನ್ನು ಸ್ವತಃ ಹಾಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. 

ಆ ಮೇಲೆ ಲತಾ ಮಂಗೇಷ್ಕರ್ ಅನೇಕ ಸಮಾರಂಭಗಳ ವೇದಿಕೆಗಳಲ್ಲಿ ಇದನ್ನು ಹಾಡಿರುವುದನ್ನು ನೀವು ಕೇಳಿರುತ್ತೀರಿ. ನಿಜವಾದ ಲತಾ ಮಂಗೇಷ್ಕರ್ ಸ್ವರದ ಅನುಭೂತಿ ಆಗಬೇಕಿದ್ದರೆ 1975ರ ಮೊದಲಿನ ಅವರ ಹಾಡುಗಳನ್ನು ಕೇಳಬೇಕು. ಈ ಹಾಡಿನ  1963ರ ಮೂಲ ಗ್ರಾಮೊಫೋನ್ ರೆಕಾರ್ಡ್ ವರ್ಷನ್ ಕೇಳುವಾಗ ಎಳೆ ಸಿಯಾಳದ ತಿರುಳು ಸವಿದಂಥ ಆ  ಅನುಭವ ಸಿಗುತ್ತದೆ. ಆ ಕಾಲದಲ್ಲಿ ದಿನನಿತ್ಯವೆಂಬಂತೆ ವಿವಿಧಭಾರತಿಯಲ್ಲಿ ಇದು ಪ್ರಸಾರವಾಗುತ್ತಿತ್ತು.

17. ಬಾ ಬಾರೆ ನಾಗವೇಣಿ
8-2-22

ಚಿತ್ರ : ಮಹಿಷಾಸುರ ಮರ್ದಿನಿ.
ಗಾಯಕರು : ಪಿ.ಬಿ.ಶ್ರೀನಿವಾಸ್, ಎ.ಪಿ. ಕೋಮಲಾ
ಸಂಗೀತ : ಜಿ.ಕೆ. ವೆಂಕಟೇಶ್.
ಸಾಹಿತ್ತ್ಯ : ಚಿ.ಸದಾಶಿವಯ್ಯ.


ಇದು ವ್ಯಗ್ರಸಿಂಹನಾಗಿ ಕಾಣಿಸಿಕೊಂಡ ನರಸಿಂಹರಾಜು ತನ್ನ ಘಟವಾಣಿ ಪತ್ನಿ ಗುಡಾಣಿಯ ಪಾತ್ರದ ರಮಾದೇವಿಯೊಂದಿಗೆ ಹಾಡುವ ಹಾಡು.  ಮಾಧವಪೆದ್ದಿ ಸತ್ಯಂ, ಪೀಠಾಪುರಂ ನಾಗೇಶ್ವರ ರಾವ್, ನಾಗೇಂದ್ರ ಮುಂತಾದವರ ಧ್ವನಿಯಲ್ಲಿ ಹಾಡುತ್ತಿದ್ದ ನರಸಿಂಹರಾಜು ಅವರಿಗೆ ಪಿ.ಬಿ.ಎಸ್ ಹಾಡಿರುವುದು ಒಂದು ವಿಶೇಷವಾದರೆ ಅವರ ಅತ್ತೆ ಅಥವಾ ಅಮ್ಮನಾಗಿ ಕಾಣಿಸುತ್ತಿದ್ದ ರಮಾದೇವಿ ಇಲ್ಲಿ ಅವರ ಪತ್ನಿಯ ಪಾತ್ರದಲ್ಲಿರುವುದು ಇನ್ನೊಂದು ವಿಶೇಷ. ನರಸಿಂಹರಾಜು ನಾಗಲೋಕದಿಂದ ಸಂತಾನಫಲವನ್ನು ತಂದಾಗ ತಮ್ಮಲ್ಲೂ ವಂಶದ ಕುಡಿ ಜನಿಸುತ್ತದೆ ಎಂಬ  ಸಂತೋಷದಲ್ಲಿ ಯಾವಾಗಲೂ ಗಂಡನನ್ನು ಬೆರಳ ತುದಿಯಲ್ಲಿ ಕುಣಿಸುತ್ತಿದ್ದ ರಮಾದೇವಿ ಆತನಿಗೆ 30 ದಿನಗಳ ಸಂಪೂರ್ಣ ಸ್ವಾಂತಂತ್ರ್ಯವನ್ನು ನೀಡುತ್ತಾಳೆ.  ಈ ಖುಶಿಯಲ್ಲಿ ಇಬ್ಬರೂ ಹಾಡುತ್ತಾರೆ. ಅವರ ಸಂತಾನವಾಗಿ ರಕ್ತಬೀಜ ಜನಿಸುತ್ತಾನೆ.  

ಇದು ಅಪರೂಪಕ್ಕೆ ಕೇಳಲು ಸಿಗುವ ಹಾಡು.  ಅಂತರ್ಜಾಲದಲ್ಲಿ ನೋಡಲು ಸಿಗುವ ಚಿತ್ರದಲ್ಲಿ ಇಲ್ಲ.


18. ಅಬ್ಬಬ್ಬಾ ಕೈ ನೋಯುತಿದೆ.
9-2-22

ಚಿತ್ರ : ಭಕ್ತ ವಿಜಯ.
ಗಾಯಕರು : ಮೈನಾವತಿ ಮತ್ತು ಬಾಗೇಪಲ್ಲಿ ಸುಬ್ರಹ್ಮಣ್ಯಂ.
ಸಂಗೀತ : ಪಿ. ಶ್ಯಾಮ್ ಮತ್ತು ಆತ್ಮನಾಥ್.
ಸಾಹಿತ್ಯ : ಆನಂದ್.


ಹೆಚ್ಚಿನವರು ಒಮ್ಮೆಯೂ ಕೇಳಿರಲಾರದ ಹಾಡು. ಇದನ್ನು ಬಾಗೇಪಲ್ಲಿ ಸುಬ್ರಹ್ಮಣ್ಯಂ ಅವರೊಂದಿಗೆ ಹಾಡಿದ ಮೈನಾವತಿ ಅಂದರೆ ಪಂಡರಿ ಬಾಯಿಯವರ ತಂಗಿ ನಟಿ ಮೈನಾವತಿಯೇ. ಆ ಮೇಲೆ ಅವರ ಗಾಯನ ಪ್ರತಿಭೆ ಏಕೆ ಬಳಸಲ್ಪಡಲಿಲ್ಲವೋ. ಆನಂದ್ ಎಂಬ ಅಜ್ಞಾತ ಕವಿ ಬರೆದ ಸಾಲುಗಳಲ್ಲಿ ಗಂಡ ಹೆಂಡಿರು ಸೇರಿ ಎಳೆಯುವ ಗಾಡಿಯ ನೆಪದಲ್ಲಿ ಆಧ್ಯಾತ್ಮವನ್ನು ಹೆಣೆಯಲಾಗಿದೆ. ಯಕ್ಷಗಾನದ ಚಂಡೆಯ ನಾದವನ್ನು ನೆನಪಿಸುವ ಶ್ರುತಿ ಬದ್ಧ ಢೋಲಕ್ ಲಯ ಕೇಳಲು ಹಿತವೆನಿಸುತ್ತದೆ.  ಹಾಡಿನ ಕೊನೆಯ ಭಾಗದ ಲಯ ಚತುರಶ್ರದಿಂದ ತಿಶ್ರಕ್ಕೆ ಬದಲಾಗುತ್ತದೆ. ಇದರ ಸಂಗೀತ ನಿರ್ದೇಶಕರಲ್ಲೊಬ್ಬರಾದ ಪಿ.ಶ್ಯಾಮ್ ಅಂದರೆ ಮಹಾತ್ಮಾ ಸಂಸ್ಥೆಯ ಚಿತ್ರಗಳಲ್ಲಿ ಇರುತ್ತಿದ್ದ  ಹಿಂದಿ ಟ್ಯೂನ್ ಆಧಾರಿತ ಗೀತೆಗಳಿಗೆ ಹೆಸರಾದವರು. ಈ ಹಾಡಿನಲ್ಲೂ ನೌಷಾದ್ ಅವರ ಯಾವುದೋ ಹಳೆ ಹಿಂದಿ ಹಾಡಿನ ಛಾಯೆಯಂತೂ ಇದೆ. ಇನ್ನೋರ್ವರಾದ ಆತ್ಮನಾಥ್ ಎಂದರೆ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ಗೀತೆ ಬರೆದ ಆನಂದ್ ಅಂದರೆ ಈ ಚಿತ್ರದಲ್ಲಿ ತುಕಾರಾಮನ ಪಾತ್ರ ವಹಿಸಿದ ವಿಮಲಾನಂದದಾಸರಾಗಿರಬಹುದೇನೋ.


19. ನಿಂತಲ್ಲಿ ಅವಳು
10-2-22

ಚಿತ್ರ : ಶ್ರೀ ಕನ್ನಿಕಾಪರಮೇಶ್ವರಿ ಕಥೆ.
ಗಾಯಕ : ಪಿ.ಬಿ. ಶ್ರೀನಿವಾಸ್.
ಸಂಗೀತ : ರಾಜನ್ ನಾಗೇಂದ್ರ.
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ.


ಒಲವಿನ ಪ್ರಿಯಲತೆಯನ್ನು ನೆನಪಿಸುವಂತಹ ವಿಪ್ರಲಂಭ ಶೃಂಗಾರದ ಇನ್ನೊಂದು ಗೀತೆ ಇದು. ಒಂದು ಕಾಲದಲ್ಲಿ ತುಂಬಾ ಸದ್ದು ಮಾಡಿ ಈಗ ಗಾನ ತಟ್ಟೆಗಳ ಅಟ್ಟಿಯಲ್ಲಿ ಅಡಿಗೆ ಬಿದ್ದಿದೆ. 1966ರಲ್ಲಿ ಈ ಚಿತ್ರ ಬಂದಾಗ ಬೆಂಗಳೂರು, ಭದ್ರಾವತಿ, ಧಾರವಾಡ ಕೇಂದ್ರಗಳಿಂದ ದಿನ ನಿತ್ಯ ಎಂಬಂತೆ ಪ್ರಸಾರ ಆಗುತ್ತಿತ್ತು. 5 ಅಕ್ಷರದ ಜಂಪೆ ತಾಳದಲ್ಲಿರುವ ಇನ್ನೊಂದು PBS ಗೀತೆ.

ಅಂತರ್ಜಾಲದಲ್ಲಿ ಕನ್ನಿಕಾಪರಮೇಶ್ವರಿ ಕಥೆ ಚಿತ್ರ ವೀಕ್ಷಣೆಗೆ ಲಭ್ಯ ಇದೆ. ಆದರೆ ಈ ಹಾಡಿನ ಭಾಗ ಅಲ್ಲಲ್ಲಿ ಕಟ್ ಆಗಿ ರಸಭಂಗವಾಗುತ್ತದೆ. ನಾನು ಅದನ್ನು ಧ್ವನಿಮುದ್ರಿಸಿಕೊಂಡು ಪ್ಲಾಸ್ಟಿಕ್ ಸರ್ಜರಿ ಮಾಡಿ ಸರಿಪಡಿಸಿದ್ದೇನೆ.  ಎಲ್ಲಾದರೂ ಹೊಲಿಗೆಯ ಗುರುತು ಕಾಣಿಸುತ್ತದೆಯೇ ಎಂದು ಬೇಕಿದ್ದರೆ ಹುಡುಕಿ. ಈ ಹಾಡಿನ ಆಡಿಯೋ ಮಾತ್ರ ಬೇಕಾದರೂ ಅಂತರ್ಜಾಲದಲ್ಲಿ ಇದೆ. ಆದರೆ ಅದರ ಧ್ವನಿಯ ಗುಣಮಟ್ಟ ಯಾಕೋ ಅಷ್ಟೇನೂ ಚೆನ್ನಾಗಿಲ್ಲ.

ಈ ಚಿತ್ರದ ಆರಂಭದಲ್ಲಿ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು ಕಾಣಿಸಿಕೊಳ್ಳುವುದು, ಹುಣಸೂರು ಕೃಷ್ಣಮೂರ್ತಿಯವರು ತೆರೆಯ ಮೇಲೆ ಬಂದು ತೆರೆ ಸರಿಸಿ ಕಥೆ ಆರಂಭಿಸುವುದು ಇತ್ಯಾದಿ ವಿಶೇಷಗಳಿವೆ. ನಿನ್ನೆ ಹುಣಸೂರರ ಜನ್ಮದಿನವಂತೆ. ಆ ನೆನಪಲ್ಲಿ ಅವರ ಈ ಹಾಡು.

20. ಶೃಂಗಾರವಾಹಿನಿ ಮನಮೋಹಿನಿ.
11-2-22
ಚಿತ್ರ : ಮಹಾಕವಿ ಕಾಳಿದಾಸ.
ಗಾಯಕ : ಸಿ. ಹೊನ್ನಪ್ಪ ಭಾಗವತರ್.
ಸಾಹಿತ್ಯ : ಕು.ರ. ಸೀತಾರಾಮ ಶಾಸ್ತ್ರಿ.


1955ರ ಮಹಾಕವಿ ಕಾಳಿದಾಸ ಚಿತ್ರದ ಈ ಹಾಡು ಒಂದು ಕ್ಲಾಸಿಕ್. ಹಾಗೆಯೇ ಇಲ್ಲಿ ಕಾಣಿಸುತ್ತಿರುವ ಫೋಟೊ ಕೂಡ ಒಂದು ಕ್ಲಾಸಿಕ್.   ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಹಾಡುತ್ತಿರುವವರು, ಮೃದಂಗ, ಖಂಜಿರ, ತಂಬೂರಿ ಶ್ರುತಿ, ಘಟ ಮತ್ತು ವಯಲಿನ್  ನುಡಿಸುತ್ತಿರುವವರು ಹೊನ್ನಪ್ಪ ಭಾಗವತರೇ ಎಂಬುದು ಅರಿವಾಗುತ್ತದೆ. ಇದನ್ನು ಎಂಪೈರ್ ಸ್ಟುಡಿಯೊದ ಪ್ರಸಿದ್ಧ ಛಾಯಾಗ್ರಾಹಕ ಎಮ್.ಬಿ. ಗುರಪ್ಪ  ಅವರು ಒಂದೇ ನೆಗೆಟಿವ್ ಮೇಲೆ ಆರು ಸಲ ಎಕ್ಸ್‌ಪೋಸ್ ಮಾಡಿ ತೆಗೆದಿದ್ದಂತೆ.

ಹೊನ್ನಪ್ಪ ಭಾಗವತರ್ ತಮಿಳಿನಲ್ಲಿ ದೊಡ್ಡ ಹೆಸರು.  ಆದರೆ ಕನ್ನಡದಲ್ಲಿ  ಪ್ರತಿಭೆಗೆ ತಕ್ಕ ಪ್ರಸಿದ್ಧಿ ಅದೇಕೋ ಅವರಿಗೆ ದೊರೆಯಲಿಲ್ಲ.

21. ಎಲ್ಯಾರೇ ಇರತೀರು ಎಂದಾರೇ ಬರತೀರು.
12-2-2022

ಚಿತ್ರ : ಸಂಗೊಳ್ಳಿ ರಾಯಣ್ಣ.
ಗಾಯಕಿ : ಲತಾ ಮಂಗೇಶ್ಕರ್.
ಸಂಗೀತ : ಲಕ್ಷ್ಮಣ ಬೇರ್ಲೇಕರ್.
ಸಾಹಿತ್ಯ : ಭುಜೇಂದ್ರ ಮಹಿಷವಾಡಿ.


ಕನ್ನಡದಲ್ಲಿ ಲತಾ ಮಂಗೇಶ್ಕರ್ ಹಾಡಿದ್ದು ಸಂಗೊಳ್ಳಿ ರಾಯಣ್ಣ ಚಿತ್ರದ ಬೆಳ್ಳನ ಬೆಳಗಾಯಿತು ಎಂಬ ಒಂದು ಹಾಡು ಮಾತ್ರ ಎಂದೇ ಎಲ್ಲರಿಗೂ ಗೊತ್ತಿರುವುದು. ನಾನೂ ಹಾಗೆಯೇ ತಿಳಿದುಕೊಂಡಿದ್ದೆ.  ಅವರ ನಿಧನದ ನಂತರ ಬಂದ ಪತ್ರಿಕಾ ವರದಿಗಳನ್ನು ನೋಡಿಯೇ ಅದರಲ್ಲಿ ಅವರು ಹಾಡಿದ ಇನ್ನೊಂದು ಹಾಡು ಇರುವ ವಿಚಾರ ನನಗೆ ತಿಳಿದದ್ದು.  ನಾನು ಪಾತಾಳ ಗರಡಿ ಹಾಕಿ ಹಳೆ ಹಾಡುಗಳನ್ನು ಹುಡುಕುತ್ತಿರುತ್ತೇನಾದರೂ ಈ ಹಾಡು ಯಾಕೋ ನನ್ನ ಕಣ್ಣಿಗೆ, ಕಿವಿಗೆ ಬೀಳದೆ ತಪ್ಪಿಸಿಕೊಂಡಿತ್ತು. ಹಳೆಯ ಮಧುರ ಮರಾಠಿ ಗೀತೆಯೊಂದನ್ನು ಕೇಳಿದಂತಾಗುವ ಈ ಹಾಡಿಗೆ ದಾಖಲೆಯ ದೃಷ್ಟಿಯಿಂದಷ್ಟೇ ಮಹತ್ವ. ಇದರ ಸಂಗೀತ ನಿರ್ದೇಶಕ ಲಕ್ಷ್ಮಣ ಬೇರ್ಲೇಕರ್ ಕಲಾವತಿ ಚಿತ್ರದ ಮನ್ನಾಡೇ ಮತ್ತು ಸುಮನ್ ಕಲ್ಯಾಣಪುರ್ ಹಾಡಿದ್ದ ಗೀತೆಗಳಿಗೂ ಸಂಗೀತ ಸಂಯೋಜಿಸಿದವರು.  ಕಲಾವತಿಯ ಮುಖ್ಯ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಆಗಿದ್ದರು.

22. ವಾರಿನೋಟ ನೋಡಿ ಮಳ್ಳ ಮಾಡಿದನವ್ವಾ
13-2-22

ಗಾಯಕಿ : ಅಮೀರ್ ಬಾಯಿ ಕರ್ನಾಟಕಿ.
ಸಾಹಿತ್ಯ : ಡಿ.ಎಸ್. ಕುಮಟೇಕರ್.

ಸ್ಟೇಶನ್ ಮಾಸ್ಟರ್ ಚಿತ್ರದ ಈ ದೃಶ್ಯದಲ್ಲಿ ಅಮೀರ್ ಬಾಯಿಯವರೊಂದಿಗೆ ಇರುವ ಕಿಶೋರಿ ಸುರೈಯ್ಯಾ.


ಈ ಹಾಡು ಕೇಳಿದಾಕ್ಷಣ ಇದರ ಧಾಟಿ, ಹಿನ್ನೆಲೆ ಸಂಗೀತ ಎಲ್ಲವೂ ಓ.ಪಿ. ನಯ್ಯರ್ ಅವರ ಫಾಗುನ್ ಚಿತ್ರದ ಎಕ್ ಪರ್‌ದೇಸಿ ಮೇರಾ ದಿಲ್ ಲೇಗಯಾದಂತಿರುವುದು ತಿಳಿಯುತ್ತದೆ. ಇದನ್ನು ಹಾಡಿದ ಅಮೀರ್ ಬಾಯಿ ಕರ್ನಾಟಕಿ ಕರ್ನಾಟಕವು ಕರ್ನಾಟಕ ಎಂದೆನಿಕೊಳ್ಳುವ ಮೊದಲೇ ಕರ್ನಾಟಕದ ಹೆಸರನ್ನು ಜಗಜ್ಜಾಹೀರುಗೊಳಿಸಿದ ಕರ್ನಾಟಕದಲ್ಲಿ ಹುಟ್ಟಿ ಬೆಳೆದ  ಪ್ರತಿಭಾವಂತ ಗಾಯಕಿ  ನಟಿ. ರೇಡಿಯೊ ಸಿಲೋನಿನ ಪುರಾನೀ ಫಿಲ್ಮೋಂ ಕಾ ಸಂಗೀತ್ ಕೇಳುವ ಹವ್ಯಾಸ ಇರುವವರಿಗೆ ಅವರು 40ರ ದಶಕದಲ್ಲಿ ಹಾಡಿದ ಗೋರೆ ಗೋರೆ ಓ ಬಾಂಕೆ ಛೋರೆ, ಮಾರ್ ಕಟಾರಿ ಮರ್ ಜಾನಾ, ಅಬ್ ತೇರೆ ಸಿವಾ ಕೌನ್ ಮೇರಾ ಕೃಷ್ಣ ಕನ್ಹಯ್ಯಾ, ಓ ಜಾನೆವಾಲೆ ಬಾಲಮವಾ ಮುಂತಾದ ಹಾಡುಗಳು ಗೊತ್ತಿರುತ್ತವೆ. ಹಿಂದಿ ಚಿತ್ರರಂಗ ಅವರನ್ನು ಕನ್ನಡ ಕೋಯಲ್ ಎಂದೇ ಗುರುತಿಸುತ್ತಿತ್ತು. ಆದರೆ ಪ್ಲೇ ಬ್ಯಾಕ್ ಪದ್ಧತಿ ಆರಂಭವಾಗಿ ಲತಾ ಮಂಗೇಶ್ಕರ್ ಮುಂತಾದವರು  ಆ ಕ್ಷೇತ್ರಕ್ಕೆ ಕಾಲಿರಿಸಿದ ಮೇಲೆ ಅವರ ಬೇಡಿಕೆ ಕಡಿಮೆಯಾಗತೊಡಗಿತು.  ಅವರ ಕೌಟುಂಬಿಕ ಜೀವನವೂ ಸುಖಮಯ ಆಗಿರಲಿಲ್ಲ ಅನ್ನಲಾಗಿದೆ. ಹೀಗಾಗಿ ಜನಪ್ರಿಯ ಹಾಡುಗಳ ಧಾಟಿಯಲ್ಲಿ ಪ್ರೈವೇಟ್ ರೆಕಾರ್ಡುಗಳಿಗಾಗಿ ಹಾಡಬೇಕಾಗಿ ಬಂತೋ ಏನೋ.

23.  ಕುಂತ್ರೆ ನಿಂತ್ರೆ ಅವ್ನ ಧ್ಯಾನ
14-2-22

ಗಾಯಕಿ : ಸಿ.ಎಸ್. ಸರೋಜಿನಿ.
ಸಾಹಿತ್ಯ : ಆರೂರು ಪಟ್ಟಾಭಿ.


ಸರೋಜಿನಿ ಅವರು ಪ್ರಸಿದ್ಧ ನಿರ್ದೇಶಕ ಆರೂರು ಪಟ್ಟಾಭಿ ಅವರ ಪತ್ನಿ. ಬಂಧುವೊಬ್ಬರ ಮದುವೆ ಸಂದರ್ಭಕ್ಕೆಂದು  ಪಟ್ಟಾಭಿ ಅವರು ಈ ಹಾಡು ಬರೆದದ್ದಂತೆ.  ಆ ಮೇಲೆ ಅದು ಧ್ವನಿಮುದ್ರಿಕೆ ಆಗಿ ತುಂಬಾ ಪ್ರಸಿದ್ಧವಾಯಿತು. 62-63ರಲ್ಲಿ ಬೆಂಗಳೂರು, ಧಾರವಾಡ ಕೇಂದ್ರಗಳು ಮಾತ್ರ ಇದ್ದಾಗ ಕಾಳಿಂಗ ರಾಯರ ಹಾಡುಗಳ ಜೊತೆಗೆ ಇದೂ ಹೆಚ್ಚಾಗಿ ಪ್ರಸಾರ ಆಗುತ್ತಿತ್ತು. ಈಗ ಇದರ ಅನೇಕ ರೀಮೇಕುಗಳೂ ಬಂದಿವೆ.  ಆದರೆ ಒರಿಜಿನಲ್ ಯಾವಾಗಲೂ ಒರಿಜಿನಲ್ಲೇ . ಸುವ್ವಿ ಸುವಮ್ಮ ಲಾಲಿ ಸುವ್ವಲಾಲಿ ಎಂಬ ಹಾಡೂ ಆಗ ರೇಡಿಯೋದಲ್ಲಿ ಬರುತ್ತಿತ್ತು. ಅದು ಯಾರು ಹಾಡಿದ್ದೆಂದು ಗೊತ್ತಿಲ್ಲ.

ಸಿ.ಎಸ್. ಸರೋಜಿನಿ ಅವರು ಶಾಸ್ತ್ರೀಯ ಸಂಗೀತವನ್ನೂ ಬಲ್ಲವರಾಗಿದ್ದು ವೈಜಯಂತಿಮಾಲಾ ಅವರ ನೃತ್ಯ ತಂಡದೊಂದಿಗೆ ವಿದೇಶ ಯಾತ್ರೆ ಕೂಡ ಮಾಡಿದ್ದರಂತೆ. ಕೆಲ ದಿನಗಳ ಹಿಂದೆ ನಾವಿಲ್ಲಿ ಕೇಳಿದ ಅನುಪಮ ಭಾಗ್ಯವಿದೇ ಅವರೇ ಹಾಡಿದ್ದು.

24. ಸೊಗಸುಗಾರ ಶೇರೆಗಾರ.
15-2-22

ಚಿತ್ರ : ಮಹಾಶಿಲ್ಪಿ.
ಗಾಯಕರು : ಎಲ್.ಆರ್. ಈಶ್ವರಿ, ಪಿ.ಕಾಳಿಂಗ ರಾವ್ ಮತ್ತಿತರರು.
ಸಂಗೀತ : ಪಿ.ಕಾಳಿಂಗ ರಾವ್.
ಸಾಹಿತ್ಯ : ಹೆಚ್.ಬಿ. ಜ್ವಾಲನಯ್ಯ.


ಎಲ್.ಆರ್. ಈಶ್ವರಿ ಮತ್ತು ಕಾಳಿಂಗ ರಾವ್ ಹೆಸರುಗಳು ಒಟ್ಟಿಗೆ ಕಾಣಿಸುವುದು ವಿಚಿತ್ರ ಅನ್ನಿಸುತ್ತಿದೆಯಲ್ಲವೇ.  ಹಾಗೆಯೇ ಬಲು ಅಪರೂಪವಾದ ಈ ಹಾಡು ನನಗೆ ಸಿಕ್ಕಿದ ಬಗೆಯೂ  ಅಸಾಮಾನ್ಯವೇ. ಇದನ್ನು ನಾನು ಬೆಂಗಳೂರು ಕಾರ್ಪೋರೇಶನ್ ಬಳಿಯ ಸತ್ಕಾರ್ ಎಂಬ ಲಾಡ್ಜಿಂಗಿನ ಡೈನಿಂಗ್ ಟೇಬಲ್ ಮೇಲೆ ಟೇಪ್ ರೆಕಾರ್ಡರ್ ಇಟ್ಟುಕೊಂಡು ರೆಕಾರ್ಡ್ ಮಾಡಿದ್ದು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು.  ಪ್ರೊಫೆಸರ್ ಶಂಕರ್ ಅವರ ಜಾದೂ ತಂಡ ಬೆಂಗಳೂರು ಟೌನ್‌ಹಾಲಲ್ಲಿ ಒಂದು ವಾರದ ಕಾರ್ಯಕ್ರಮ ಹಮ್ಮಿಕೊಂಡಾಗ ನಾವು ಆ ಲಾಡ್ಜಲ್ಲಿ ಉಳಿದುಕೊಂಡಿದ್ದೆವು. ಎಲ್ಲಿ ಹೋಗುವಾಗಲೂ ನನ್ನ ನ್ಯಾಶನಲ್ ಪೆನಾಸೋನಿಕ್ ಟೂ ಇನ್ ವನ್ ಸೆಟ್ಟನ್ನು ಜೊತೆಗೊಯ್ಯುವುದು ನನ್ನ ಅಭ್ಯಾಸ. ಅದರಲ್ಲೂ ಬೆಂಗಳೂರಿಗೆ ಹೋಗುವುದಿದ್ದರೆ ರೇಡಿಯೋದಲ್ಲಿ ಬರುವ ಹಳೆಯ ಹಾಡುಗಳನ್ನು ಧ್ವನಿಮುದ್ರಿಸಿಕೊಳ್ಳಬಹುದು ಎಂಬ ಆಸೆ. ಆ ದಿನ ಚುನಾವಣೆಯೊಂದರ ಫಲಿತಾಂಶ ಘೋಷಣೆ ಇದ್ದ ಕಾರಣ ಮಧ್ಯ ಮಧ್ಯ  ದಿನವಿಡೀ ಚಿತ್ರಗೀತೆಗಳನ್ನು ಪ್ರಸಾರ ಮಾಡುತ್ತಿದ್ದರು. ಇದು ರಾಮಕೃಷ್ಣ ಹೆಗ್ಗಡೆ ಅವರು ಮುಖ್ಯಮಂತ್ರಿ ಆದ 1983ರ ಚುನಾವಣೆಯ ಸಮಯ ಎಂದು ನನ್ನ ನೆನಪು.  ಅಂದು ಹೆಕ್ಕಲು ಸಿಕ್ಕಿದ ಅನೇಕ ಹಾಡುಗಳಲ್ಲಿ ಇದೂ ಒಂದು.  ಆ ಮೇಲೆ ಒಮ್ಮೆಯೂ ನಾನು ಈ ಹಾಡನ್ನು ರೇಡಿಯೋದಲ್ಲಿ ಕೇಳಿಲ್ಲ. ಅಂತರ್ಜಾಲದಲ್ಲೂ ಇದು ಲಭ್ಯವಿಲ್ಲ.

ಇದರ ಮುಖ್ಯ ಗಾಯಕಿ ಎಲ್.ಆರ್. ಈಶ್ವರಿ ಆಗಿದ್ದು ಅಂದು ರೇಡಿಯೋದಲ್ಲಿ ಅವರ ಹೆಸರು ಮಾತ್ರ ಹೇಳಿದ್ದರು. ಆದರೆ  ಮಧ್ಯೆ ಬೇರೆ ಬೇರೆ ಪುರುಷ ಧ್ವನಿಗಳು ಕೇಳಿಸುತ್ತವೆ. ಒಂದು ಧ್ವನಿ ಟಿ.ಆರ್. ಜಯದೇವ್ ಅವರದ್ದಿರಬಹುದೆಂದು ಅನ್ನಿಸುತ್ತದೆ. ಕೊನೆಯಲ್ಲಿ ಒಂದೆರಡು ಸಾಲುಗಳನ್ನು ಕಾಳಿಂಗ ರಾವ್  ಕೂಡ ಹಾಡುತ್ತಾರೆ. ದುಖ್ ಭರೆ ದಿನ್ ಬೀತೆ ರೆ ಭೈಯ್ಯಾ ಮತ್ತು ದಯ್ಯಾರೆ ದಯ್ಯಾ ಚಡ್ ಗಯೊ ಪಾಪಿ ಬಿಛುವಾ ಹಾಡಿನ ಛಾಯೆ ಹಾಡಿನಲ್ಲಿ ಇದೆ. 1966ರ  ಮಹಾಶಿಲ್ಪಿ ಬಹುಶಃ ಕಾಳಿಂಗ ರಾಯರು ಸಂಗೀತ ನೀಡಿದ ಕೊನೆಯ ಚಿತ್ರ ಇರಬಹುದು  ಅನ್ನಿಸುತ್ತದೆ.

25. ಮೈಸೂರ್ ದಸರಾ ಬೊಂಬೆ.
16-2-22

ಚಿತ್ರ : ಕನ್ಯಾರತ್ನ.
ಗಾಯಕ : ಟಿ.ಎ. ಮೋತಿ.
ಸಂಗೀತ : ಜಿ.ಕೆ. ವೆಂಕಟೇಶ್.
ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ.


ಹಿಂದಿ ವಿವಿಧಭಾರತಿಯ ಮಧುರ್ ಗೀತಂ ಕಾರ್ಯಕ್ರಮದಲ್ಲಿ ’ಅಬ್ ಆಪ್ ಸುನೇಂಗೆ ಕನ್ಯಾರತ್ನ ಫಿಲ್ಮ್ ಕಾ ಗೀತ್..’ ಅಥವಾ ಬೆಂಗಳೂರು ಯಾ ಧಾರವಾಡ ಕೇಂದ್ರಗಳಿಂದ ’ಇನ್ನು ಮುಂದೆ ಕನ್ಯಾ ರತ್ನ ಚಿತ್ರದ ಹಾಡು..’  ಎಂದು ಹೇಳಿದಾಕ್ಷಣ ಅದು ಬಿಂಕದ ಸಿಂಗಾರಿ ಅಥವಾ ಮೈಸೂರ್ ದಸರಾ ಬೊಂಬೆ ಆಗಿರಲಿ ಎಂದು ನಾನು ಹಾರೈಸುವುದಿತ್ತು ಮತ್ತು ನನ್ನ ಹಾರೈಕೆ ನಿಜವೂ ಆಗುತ್ತಿತ್ತು. ಮೈಸೂರ್ ದಸರಾ ಬೊಂಬೆ ಎಂದಾದರೆ ನಾನು ರೇಡಿಯೊ ವಾಲ್ಯೂಮ್ ಸ್ವಲ್ಪ ಜಾಸ್ತಿ ಮಾಡುವುದೂ ಇತ್ತು. ಮೇಲ್ನೋಟಕ್ಕೆ ಕಾಮಿಡಿ ಹಾಡು ಅನ್ನಿಸಿದರೂ ಇತರ ಸಿನಿಮಾ ಹಾಡುಗಳಂತಲ್ಲದ ಇದರ ವಿಭಿನ್ನ ಶೈಲಿ, ವೈಧ್ಯಮಯ ತಾಳ ವಾದ್ಯಗಳ ಬಳಕೆ, ಸಾಲಿನಿಂದ ಸಾಲಿಗೆ ಆಗುವ ಬದಲಾವಣೆ, ಒಟ್ಟಾರೆ ಅಚ್ಚುಕಟ್ಟುತನ ಮತ್ತು ಅಂದಿನ RCA ರೆಕಾರ್ಡಿಂಗಿನಲ್ಲಿ ಸಿಗುತ್ತಿದ್ದ presence of voice and instruments  ಯಾರಾದರೂ ಈ ಹಾಡಿನತ್ತ ಆಕರ್ಷಿತರಾಗುವಂತೆ ಮಾಡುತ್ತಿತ್ತು. ತಿಶ್ರ ನಡೆ, ಮಧ್ಯೆ ಶಾಸ್ತ್ರೀಯ ಶೈಲಿಯ ಆಲಾಪಗಳು, ಜೋಡಿ ತಾಳ ಕಂಜರಿ ಸಾಲಿನ ನಂತರ ಕಂಜಿರದ ತನಿ ನುಡಿತ, ಲೈಲಾ ಮಜ್ನು ಉಲ್ಲೇಖ ಬಂದಾಗ ಅರೇಬಿಕ್ ಶೈಲಿಯ ಸಂಗೀತ, ಮಧ್ಯದಲ್ಲೊಮ್ಮೆ ಲಯ ತಿಶ್ರದಿಂದ ಚತುರಶ್ರಕ್ಕೆ  ಬದಲಾಗಿ ಮತ್ತೆ ತಿಶ್ರಕ್ಕೆ ಮರಳುವುದು, ಆಲಾಪ ಮುಗಿದು ಲಯ ಎತ್ತುಗಡೆ ಮಾಡುವಾಗಿನ  ಢೋಲಕ್ ಕೈಚಳಕ ಮುಂತಾದವೆಲ್ಲ ಹಾಡಿನ ಮೌಲ್ಯವರ್ಧನೆ ಮಾಡಿದ್ದವು.  

ಇದರ ಗಾಯಕ ಟಿ.ಎ. ಮೋತಿ ಅವರನ್ನು ಬೇಡರ ಕಣ್ಣಪ್ಪ ಬಿಟ್ಟರೆ ಕನ್ನಡದಲ್ಲಿ  ಬಳಸಿದ್ದು ಜಿ.ಕೆ. ವೆಂಕಟೇಶ ಮಾತ್ರ. ಕಲಾವತಿಯಲ್ಲಿ ಇವರೇ ಮುಖ್ಯ ಗಾಯಕರಾಗಿದ್ದರು.  ಕವಲೆರಡು ಕುಲ ಒಂದು, ಮಧುಮಾಲತಿ, ಬಂಗಾರದ ಮನುಷ್ಯ ಮುಂತಾದ ಚಿತ್ರಗಳಲ್ಲಿ ಇವರ ಹಾಡುಗಳಿದ್ದವು. 50ರ ದಶಕದಲ್ಲಿ ಇವರು ಹಿಂದಿ ಸಿನಿಮಾಗಳಲ್ಲೂ ಹಾಡಿದ್ದುಂಟು.  ಹಿಂದಿಯಿಂದ ತಮಿಳಿಗೆ ಡಬ್ ಆದ ಸಿನಿಮಾಗಳಲ್ಲೂ ಇವರು ಹಾಡುತ್ತಿದ್ದರು.

ವರ್ಷಕ್ಕೊಮ್ಮೆ ಬೇಸಗೆ ರಜೆಯಲ್ಲಿ  ಕಾರ್ಕಳ ಸಮೀಪದ ಅಕ್ಕನ ಮನೆಗೆ ಹೋಗುವಾಗ ಕಾರ್ಕಳದ ಜೈಹಿಂದ್ ಟಾಕೀಸಲ್ಲಿ ಉತ್ತಮ ಚಿತ್ರ ಇದ್ದರೆ ನೋಡುವುದಿತ್ತು.  ಆ ಸಲ ಕಾರ್ಕಳದಲ್ಲಿ ಬಸ್ ಇಳಿದೊಡನೆ ಕನ್ಯಾರತ್ನದ ಪೋಸ್ಟರ್ ಹಚ್ಚಿಕೊಂಡು ನೋಟೀಸುಗಳನ್ನು ಎಸೆಯುತ್ತಾ ಸಾಗುತ್ತಿದ್ದ ಜೈಹಿಂದ್ ಟಾಕೀಸಿನ ಪ್ರಚಾರದ ಎತ್ತಿನ ಗಾಡಿ ಕಾಣಿಸಿದಾಗ ಆ ಚಿತ್ರ ನೋಡಲೇ ಬೇಕು ಎಂಬ ನಿಶ್ಚಯ ಮಾಡಿ ಆಯಿತು. ರೇಡಿಯೋದಲ್ಲಿ ಕೇಳಿ ಚಿತ್ರದ ಹಾಡುಗಳೆಲ್ಲ ಆಗಲೇ ಕಂಠಪಾಠ ಆಗಿದ್ದವು.   ಆ ಚಿತ್ರದ 1st show ಸೋದರ ಸಂಬಂಧಿಯೊಡನೆ ಮತ್ತು  2nd show ಅಣ್ಣನೊಡನೆ ಬೆನ್ನು ಬೆನ್ನಿಗೆ ನೋಡುವ ಸಂದರ್ಭ ನನಗೆ ಆ ದಿನ ಒದಗಿ ಬಂತು!

ಕೆಲ ಕಾಲದ ನಂತರ ಬೆಂಗಳೂರು ಆಕಾಶವಾಣಿಯಿಂದ ಈ ಚಿತ್ರದ ಧ್ವನಿವಾಹಿನಿ ಪ್ರಸಾರವಾದಾಗ ಮೊದಲೇ ಚಿತ್ರ ನೋಡಿದ್ದರಿಂದ ದೃಶ್ಯಗಳು ಮತ್ತೆ ಕಣ್ಣ ಮುಂದೆ ಬಂದವು. ಆಗ ಧ್ವನಿವಾಹಿನಿಯನ್ನು ಒಂದು ಗಂಟೆಗೆ ಸೀಮಿತಗೊಳಿಸುವ ಪದ್ಧತಿ ಇರಲಿಲ್ಲ.  ಕೆಲವು ಸಲ ಹಾಡುಗಳನ್ನು ಮೊಟಕುಗೊಳಿಸುತ್ತಿದ್ದುದುಂಟು. ಆದರೆ ಕೇಳುಗರ ಅಪೇಕ್ಷೆ ಮೇರೆಗೆ ಈ ಚಿತ್ರದ ಧ್ವನಿವಾಹಿನಿಯಲ್ಲಿ ಪೂರ್ತಿ ಹಾಡುಗಳನ್ನು ಕೇಳಿಸಿದ್ದರು.

ಇಲ್ಲಿ ನೀವು ಕೇಳುವುದು ಹಾಡಿನ ಗ್ರಾಮಫೋನ್ ರೆಕಾರ್ಡ್ ವರ್ಷನ್.  ಈ ಚಿತ್ರ ಅಂತರ್ಜಾಲದಲ್ಲಿ ಲಭ್ಯವಿದ್ದು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿರುವ ಹಾಡಿಗೂ ಇದಕ್ಕೂ ಸ್ವಲ್ಪ ವ್ಯತ್ಯಾಸ ಇರುವುದು ಗೊತ್ತಾಗುತ್ತದೆ. ಚಿತ್ರದಲ್ಲಿರುವ ಹಾಡು ನೀರು ಬೆರೆಸಿದ ಸಾರಿನಂತೆ ಸ್ವಲ್ಪ ಸಪ್ಪೆ ಆದಂತೆ ಅನಿಸುತ್ತದೆ!

ಗಂಭೀರ ಗೀತೆಗಳಿಗೆ ಹೆಸರಾದ ಪ್ರಭಾಕರ ಶಾಸ್ತ್ರಿಗಳು ಬರೆದ  ಅಪರೂಪದ ಲಘು ಶೈಲಿಯ ಹಾಡು ಇದು.

*********

ಈ ಎಲ್ಲ ಹಾಡುಗಳನ್ನು ಇಲ್ಲಿರುವ ಪಟ್ಟಿಯಿಂದ ಆಯ್ದು ಆಲಿಸಬಹುದು.
Log in, Sign up ಮೇಲೆ ಕ್ಲಿಕ್ಕಿಸಬೇಡಿ.



Friday 4 February 2022

ಟಾಕೀಸ್ ಟಾಕ್


ಇತ್ತೀಚೆಗೆ ಮಂಗಳೂರಿನ ಜ್ಯೋತಿ ಚಿತ್ರಮಂದಿರ ಧರಾಶಾಯಿಯಾದದ್ದು ದೊಡ್ಡ ಸುದ್ದಿಯಾಯಿತು. ನಾನು ಆ ಚಿತ್ರಮಂದಿರದಲ್ಲಿ ಸ್ವರ್ಣಗೌರಿ, ಕೃಷ್ಣಾರ್ಜುನ ಯುದ್ಧ, ಮುರಿಯದ ಮನೆ, ರೌಡಿ ರಂಗಣ್ಣ, ತುಂಬಿದ ಕೊಡ, ಸೂರಜ್, ಬಿಸತ್ತಿ ಬಾಬು,  ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ, ಕೋಟಿ ಚೆನ್ನಯ, ಎಡಕಲ್ಲುಗುಡ್ಡದ ಮೇಲೆ,   ಗಂಧದ ಗುಡಿ, ಬಂಗಾರದ ಪಂಜರ, ಬೂತಯ್ಯನ   ಮಗ ಅಯ್ಯು, ಉಪಾಸನೆ,    ಬಯ್ಯ ಮಲ್ಲಿಗೆ, ಚಿರಂಜೀವಿ,    ಬಯಲುದಾರಿ, ವಿಜಯವಾಣಿ, ನಾನಿನ್ನ ಮರೆಯಲಾರೆ,   ಬಬ್ರುವಾಹನ, ನಾಗರಹಾವು, ಎರಡು ಕನಸು, ಶ್ರೀನಿವಾಸ ಕಲ್ಯಾಣ ಇತ್ಯಾದಿ ಚಿತ್ರಗಳನ್ನು ನೋಡಿದ್ದರೂ 1978ರ ನಂತರ ಅಲ್ಲಿಗೆ ಒಮ್ಮೆಯೂ ಹೋಗದಿದ್ದ  ನನಗೆ ಈಗ ಅದೇಕೆ ಮುಚ್ಚಿತು ಎಂದು ಕೇಳುವ ಹಕ್ಕಿಲ್ಲ!


1926ರಲ್ಲಿ ಹಿಂದುಸ್ಥಾನ್ ಸಿನೆಮಾ ಎಂಬ ಹೆಸರಲ್ಲಿ ಆರಂಭಗೊಂಡು ಮೂಕಿ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದು ಆಮೇಲೆ 1936ರಲ್ಲಿ ಹೊಸ ನಾಮಧೇಯ  ಹೊಂದಿ ಕರಾವಳಿ ಭಾಗದ ಮೊತ್ತ ಮೊದಲ ಸಿನಿಮಾ ಟಾಕೀಸು ಎನ್ನಿಸಿಕೊಂಡಿದ್ದ ನ್ಯೂಚಿತ್ರಾ ಕೆಲ ಕಾಲ ಹಿಂದೆ  ಫರ್ನಿಚರ್ ಮಾರ್ಟ್ ಆಗಿ ಪರಿವರ್ತನೆ ಹೊಂದಿತು. ಹಳೆ ಚಂದಮಾಮಗಳಲ್ಲಿರುವ ಅನೇಕ ಸಿನಿಮಾ ಜಾಹೀರಾತುಗಳಲ್ಲಿ ಈ ಟಾಕೀಸಿನ ಹೆಸರು ಕಾಣಸಿಗುತ್ತದೆ.   ಹೆಚ್ಚಾಗಿ ಇಂಗ್ಲಿಷ್ ಸಿನಿಮಾಗಳನ್ನೇ ಪ್ರದರ್ಶಿಸುತ್ತಿದ್ದ ಅದು ನನ್ನ ಮೆಚ್ಚಿನ ಟಾಕೀಸೇನೂ ಆಗಿರಲಿಲ್ಲ.  ಆದರೂ ದೂರದ ದಾರಿ ಬದಿಯ ಬೃಹತ್ ಪುರಾತನ ಮರವೊಂದು ಫರ್ನಿಚರಿಗಾಗಿ ಧರೆಗುರುಳಿದಂತೆ ನನಗನ್ನಿಸಿತು.  ಅಲ್ಲಿದ್ದ ಅತ್ಯಂತ ಪುರಾತನ ಸೆಂಚುರಿ ಪ್ರಾಜೆಕ್ಟರ್ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯ ಸೇರಿ ಈ ಭಾಗದ ಪ್ರಥಮ  ಟಾಕೀಸಿನ ನೆನಪು ಶಾಶ್ವತವಾಗಿ ಉಳಿಯುವಂತಾಗಿರುವುದು ಸ್ತ್ಯುತ್ಯರ್ಹ.


ಎಲ್ಲೆಡೆಯಂತೆ ಮಂಗಳೂರಿನಲ್ಲೂ ಹಳೆ ಸಿನಿಮಾ ಮಂದಿರಗಳು ಒಂದೊಂದಾಗಿ ಮುಚ್ಚುತ್ತಿವೆ.  ನಾನು ಅನೇಕ ಮೆಚ್ಚಿನ ಚಿತ್ರಗಳನ್ನು ನೋಡಿದ್ದ ಅಮೃತ್ ಸಿನಿಮಾ ಇದ್ದ ಜಾಗದಲ್ಲಿ ಬೃಹತ್ ವಸತಿ ಸಂಕೀರ್ಣವೊಂದು ತಲೆಯೆತ್ತಿ ವರ್ಷಗಳೇ ಆದವು.  ಹಿಂದಿ ಚಿತ್ರಗಳಿಗಾಗಿ ನಂ 1 ಆಯ್ಕೆಯಾಗಿದ್ದ ಸೆಂಟ್ರಲ್ ಟಾಕೀಸ್ ಇತಿಹಾಸ ಸೇರಿದೆ.  ಮಂಗಳೂರಿನ ಪ್ರಥಮ  ಹವಾನಿಯಂತ್ರಿತ ಥಿಯೇಟರ್ ಪ್ಲಾಟಿನಮ್  ಕೂಡ ಈಗ  ಪ್ರದರ್ಶನ ಸ್ಥಗಿತಗೊಳಿಸಿದೆ.  ಈ  ಥಿಯೇಟರ್ 17-5-1974ರಂದು ಹಿಂದಿ ರಾಜ್‌ಕುಮಾರ್ ಅವರಿಂದ ಉದ್ಘಾಟನೆಗೊಂಡು ಪ್ರಥಮ ಚಿತ್ರವಾಗಿ ಕನ್ನಡ ರಾಜ್‌ಕುಮಾರ್ ಅಭಿನಯದ ಎರಡು ಕನಸು ಪ್ರದರ್ಶಿತವಾಗಿತ್ತು .  ಪ್ರಥಮ ದಿನದ ಪ್ರಥಮ ದೇಖಾವೆಯಲ್ಲಿ ಆ ಚಿತ್ರವನ್ನು ನಮ್ಮ ಆಫೀಸಿನ ಮಿತ್ರ ಗಡಣದೊಂದಿಗೆ  ನಾನೂ ನೋಡಿದ್ದೆ. ವಾಡಿಕೆಗಿಂತ ಭಿನ್ನವಾಗಿ ಅಲ್ಲಿಯ ಬಾಲ್ಕನಿಯಲ್ಲಿ ಮುಂದಿನ ಸೀಟುಗಳಿಗೆ  ಹಿಂಬದಿಯವುಗಳಿಗಿಂತ ಹೆಚ್ಚಿನ ದರ ಇದ್ದುದು ನಮಗೆಲ್ಲ ಅಚ್ಚರಿಯ ವಿಷಯವಾಗಿತ್ತು.  ಹೊಸ ಥಿಯೇಟರಿನ ಪ್ರಥಮ ಚಿತ್ರ ಎಂದು ಬಂದಿದ್ದ ಎಂದೂ ಕನ್ನಡ ಸಿನಿಮಾ ನೋಡದಿದ್ದ  ಕೆಲವು ಪಡ್ಡೆ ಹುಡುಗರು ಇಂದು ಎನಗೆ ಗೋವಿಂದ ಹಾಡು ಬಂದಾಗ ಗೊಣಗುತ್ತಾ ಎದ್ದು ಹೊರಗೆ ಹೋಗಿದ್ದರು!


ಇತ್ತೀಚಿನ ವರ್ಷಗಳಲ್ಲಿ ಟಿ.ವಿಯ ಪ್ರಭಾವದಿಂದ ಮನೆಯ ಡ್ರಾಯಿಂಗ್ ರೂಮ್, ಆ ಮೇಲೆ ಅಂತರ್ಜಾಲ ಮತ್ತು ಸ್ಮಾರ್ಟ್ ಫೋನುಗಳಿಂದಾಗಿ ಅಂಗೈಯೇ ಸಿನಿಮಾ ಮಂದಿರವಾಗಿ ಪರಿವರ್ತನೆ ಹೊಂದಿವೆ. ಹೊಸ ಪೀಳಿಗೆಯವರು ಆಗಾಗ ಮಲ್ಟಿಪ್ಲೆಕ್ಸ್‌ಗಳತ್ತ ಮುಖ ಮಾಡುತ್ತಾರಾದರೂ  ನಾನೂ ಸೇರಿದಂತೆ ಅನೇಕರು ಟಾಕೀಸುಗಳಲ್ಲಿ ಸಿನಿಮಾ ನೋಡದೆ ದಶಕಗಳೇ ಕಳೆದಿವೆ. ಆದರೆ   ಸುಮಾರು 1945ರಿಂದ 1970ರ ಮಧ್ಯೆ  ಜನಿಸಿದವರೆಲ್ಲರೂ ಬಾಲ್ಯದಲ್ಲಿ ಸಿನಿಮಾ ಟಾಕೀಸಿನಲ್ಲಿ ಕೂರುವ ಕನಸು ಮತ್ತು ಯೌವನದಲ್ಲಿ ಸಿನಿಮಾ ಟಾಕೀಸಿನಲ್ಲಿ ಕೂತು ಕನಸು ಕಂಡವರೇ.  ಹೆಚ್ಚಿನವರು ತಾನೂ ಹೀರೋ/ಹಿರೋಯಿನ್‌ನಂತೆ ಕಾಣಿಸಬೇಕು,  ಅಂತಹ ಬಟ್ಟೆಗಳನ್ನೇ ಧರಿಸಬೇಕು ಎಂಬಿತ್ಯಾದಿ ಕನಸು ಕಂಡರೆ ನಾನು ಮಾತ್ರ ಸಿನಿಮಾಗಳಲ್ಲಿ ಆಗಾಗ ಕಾಣಿಸುವ ವಾದ್ಯಗಳನ್ನು ನಾನೂ ಅವರಂತೆ ನುಡಿಸಬೇಕು ಎಂದು ಕನಸು ಕಾಣುತ್ತಿದ್ದೆ.  ಅದರಲ್ಲೂ ನಾಯಕನು ಕೊಳಲೊಂದನ್ನು ತುಟಿಗೆ ತಾಗಿಸಿದೊಡನೆ ಅದರಿಂದ ಮಧುರ ನಾದದ ಅಲೆಗಳು ಹೊರಟು ಸುತ್ತಲಿನವರನ್ನು ಆಕರ್ಷಿಸುವುದು,  ನಾಯಕಿಯು ಆ ನಾದಕ್ಕೆ ಮರುಳಾಗುವುದು ನನ್ನನ್ನೂ ಮರುಳು ಮಾಡುತ್ತಿತ್ತು!

ನನಗೆ ಅರಿವು ಮೂಡುವುದಕ್ಕೂ ಮುನ್ನ ನಾನು ಮನೆ ಮಂದಿಯೊಡನೆ ನೋಡಿದ ಮೊದಲ ಸಿನಿಮಾ ಜಗನ್ಮೋಹಿನಿ ಆಗಿರಬಹುದು.  ಏನೂ ಅರ್ಥವಾಗದಿದ್ದರೂ ಅದರೊಳಗಿನ ಜನರೆಲ್ಲ ಬೂದಿ ರಾಶಿಯ ಮೇಲೇಕೆ ಓಡಾಡುತ್ತಾರೆ ಎಂದು ನನಗನ್ನಿಸಿದ್ದು ನೆನಪಿದೆ.  ಕಪ್ಪು ಬಿಳುಪಿನ ಆ ಸಿನಿಮಾದಲ್ಲಿನ ನೆಲ, ಬೆಟ್ಟ, ಗುಡ್ಡಗಳೆಲ್ಲ ನನಗೆ ಹಾಗೆ ಕಂಡಿರಬಹುದು.  ಆ  ಮೇಲೆ ಅಣ್ಣಂದಿರೊಡನೆ ಕಾರ್ಕಳ ಸಮೀಪದ ಅಕ್ಕನ ಮನೆಗೆ ಹೋಗುವಾಗ ಅಲ್ಲಿಯ ಜೈಹಿಂದ್ ಟಾಕೀಸಿನಲ್ಲಿ ವರ್ಷಕ್ಕೊಂದು ಸಿನಿಮಾ ನೋಡುವ ಅವಕಾಶ ಸಿಗುತ್ತಿತ್ತು. ಅಲ್ಲಿ ಮೊತ್ತ ಮೊದಲು ಬರ್‌ಸಾತ್ ಕೀ ರಾತ್  ನೋಡಿದ್ದು ನೆನಪಿದೆ. ಆ ಸಿನಿಮಾ ಏನೇನೂ ಅರ್ಥವಾಗದಿದ್ದರೂ ಅದರಲ್ಲಿ ಟೊಪ್ಪಿ ಧರಿಸಿದ ಕೆಲವರು ತಲೆ ಅಲ್ಲಾಡಿಸುತ್ತಾ ತಬಲಾ ನುಡಿಸುತ್ತಿದ್ದುದು, ಪರದೆ ತುಂಬಾ ತುಂಬಿಕೊಂಡ ದಪ್ಪ ಮುಖದವನೊಬ್ಬ ಮೈಕ್ ಎದುರು ಹಾಡು ಹಾಡಿದ್ದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ.  ಬಹುಶಃ ಅವು ಆ ಚಿತ್ರದ ನ ತೊ ಕಾರವಾಂ ಕೀ ತಲಾಶ್ ಹೈ ಕವ್ವಾಲಿ ಮತ್ತು ಜಿಂದಗೀ ಭರ್ ನಹೀಂ ಭೂಲೇಗಿ ಹಾಡಿನ ಕ್ಲೋಸ್ ಅಪ್ ದೃಶ್ಯಗಳಿರಬಹುದು.  ಮುಂದೆ  ಕಿತ್ತೂರು ಚೆನ್ನಮ್ಮ, ಜೇನುಗೂಡು, ಕನ್ಯಾರತ್ನ ಮುಂತಾದ ಒಳ್ಳೊಳ್ಳೆಯ ಚಿತ್ರಗಳನ್ನು ಅಲ್ಲಿ ನೋಡುವ ಅವಕಾಶ ಸಿಕ್ಕಿತ್ತು.  ಕನ್ಯಾರತ್ನ ಚಿತ್ರವನ್ನು ಒಂದೇ ದಿನ ಎರಡು ಬಾರಿ ನೋಡಿದ್ದೆ! ಆಗ ನಾನಿನ್ನೂ ಆರನೇ ಕ್ಲಾಸ್. ಆ ಸಲ ಅಕ್ಕನ ಮನೆಗೆ ಹೋಗಿದ್ದಾಗ ಯಾವುದೋ ಕಾರಣದಿಂದ ಅಣ್ಣನಿಗೆ ನನ್ನೊಂದಿಗೆ ಸಿನಿಮಾಗೆ ಬರಲು  ಸಾಧ್ಯವಾಗದೆ  ಕಸಿನ್ ಒಬ್ಬರೊಡನೆ   ಆ ಚಿತ್ರ ನೋಡಿ ಕಾರ್ಕಳದಲ್ಲಿ ಯಾರದೋ ಮನೆಯಲ್ಲಿ halt ಮಾಡುವ ಪ್ರಸಂಗ ಬಂದೊದಗಿತು.  ಆದರೆ  ನಾವು ಪ್ರಥಮ ದೇಖಾವೆಯಲ್ಲಿ ಆ ಚಿತ್ರ ನೋಡಿ ಹೊರಗೆ ಬರುವಷ್ಟರಲ್ಲಿ   ಹೊರಗಡೆ ಅಣ್ಣ ಮತ್ತು ಭಾವ ಹಾಜರ್!  ನಾನು ಇನ್ನೊಬ್ಬರ ಮನೆಯಲ್ಲಿ halt ಮಾಡುವುದು ಇಷ್ಟವಾಗದೆ ಅಕ್ಕ ಅವರನ್ನು ಕಳಿಸಿದ್ದರಂತೆ.  ಅವರಿಬ್ಬರೊಡನೆ ಮತ್ತೆ ಆ ಚಿತ್ರದ 2nd show  ನೋಡಿ ರಾತ್ರೆಯೇ ಅಕ್ಕನ ಮನೆ ಸೇರಿದೆವು. ಹೀಗೆ ಅನೇಕ ನೆನಪುಗಳಿಗೆ ಸಾಕ್ಷಿಯಾಗಿದ್ದ ಕಾರ್ಕಳದ ಜೈಹಿಂದ್ ಟಾಕೀಸ್ ಇತಿಹಾಸದ ಪುಟ ಸೇರಿ ವರ್ಷಗಳೇ ಕಳೆದಿವೆ.  ಕೆಲವು ವರ್ಷಗಳ ನಂತರ ಒಮ್ಮೆ ಅಣ್ಣನೊಡನೆ ಮಂಗಳೂರಿಗೆ ಹೋಗಿದ್ದಾಗ ಇದೇ ರೀತಿಯ ಅನುಭವ ಮರುಕಳಿಸಿತ್ತು.  ಅಲ್ಲಿಯ ಸೆಂಟ್ರಲ್  ಟಾಕೀಸಿನಲ್ಲಿ ಅಂದು ಆರಾಧನಾ ಬಿಡುಗಡೆಗೊಂಡಿತ್ತು.  ಗೇಟು ತೆರೆಯುವುದನ್ನೇ ಕಾದು ಕೂಡಲೇ ಒಳನುಗ್ಗಿ ಕ್ಯೂನಲ್ಲಿ ಸೇರಿಕೊಂಡದ್ದೂ ಆಯಿತು.  ಹೇಗೂ ಒಬ್ಬರಿಗೆ ಎರಡು ಟಿಕೇಟು ಕೊಡುತ್ತಾರಲ್ಲ ಎಂದು ಅಣ್ಣನನ್ನು ಕ್ಯೂನಲ್ಲಿ ನಿಲ್ಲಿಸಿ ನಾನು ಆರಾಧನಾದ lobby cards ನೋಡುತ್ತಾ ಮೈ ಮರೆತೆ. ಆದರೆ ಅಂದು ಚಿತ್ರದ ಪ್ರಥಮ ದಿನವಾದ್ದರಿಂದ ಒಬ್ಬರಿಗೆ ಒಂದೇ ಟಿಕೇಟು ಕೊಟ್ಟರು.  ಕ್ಯೂನಲ್ಲಿ ನಿಲ್ಲದ್ದಕ್ಕೆ ನನಗೆ ಒಮ್ಮೆ ಬೈದ ಅಣ್ಣ  ಟಿಕೆಟು ನನಗೆ ಕೊಟ್ಟು ಸಮೀಪದ ಇನ್ನೊಂದು ಟಾಕೀಸಿನಲ್ಲಿ ಬೇರೆ ಯಾವುದೋ ಚಿತ್ರ ನೋಡಿದರು.  ನಾನು ಚಿತ್ರ ನೋಡಿ ಹೊರಗೆ ಬರುವಷ್ಟರಲ್ಲಿ ಅವರು ಮತ್ತು ಆರಾಧನಾ ನೋಡಲೆಂದೇ ಬಂದ ಇನ್ನೊಬ್ಬ ಸೋದರ ಸಂಬಂಧಿ ಜೊತೆಯಲ್ಲಿ ಬರುವುದು ಕಾಣಿಸಿತು.   ಸೋದರ ಸಂಬಂಧಿಯ ಒತ್ತಾಯದ ಮೇಲೆ ಈ ಸಲ  ಮೂವರೂ ಕ್ಯೂನಲ್ಲಿ ನಿಂತು ಟಿಕೆಟು ಪಡೆದು ಮತ್ತೆ ಆರಾಧನಾ ನೋಡಿದೆ.  ಈಗ ಹಾಡುಗಳನ್ನು ಹೊರತುಪಡಿಸಿದರೆ ಆರಾಧನಾ ಬರೀ ಬೋರ್ ಅನ್ನಿಸುತ್ತಿದ್ದರೂ ಅಂದು  ಎರಡು ಸಲ ನೋಡಿದಾಗಲೂ ಬಲು ಆಪ್ಯಾಯಮಾನವೆನ್ನಿಸಿತ್ತು.


ಆರನೇ ತರಗತಿಯಲ್ಲಿರುವಾಗ ಬೆಳ್ತಂಗಡಿಯ ಮರುಳ ಸಿದ್ದೇಶ್ವರ ಎಂಬ ಟೂರಿಂಗ್ ಟಾಕೀಸಿನಲ್ಲಿಯೂ ಮಹಿಷಾಸುರ ಮರ್ದಿನಿ ಮತ್ತು ತೆಲುಗಿನಿಂದ ಡಬ್ ಆದ ಮೋಹಿನಿ ರುಕ್ಮಾಂಗದ ಎಂಬ ಚಿತ್ರಗಳನ್ನು ನೋಡಿದ್ದೆ.  ನಮ್ಮನ್ನು ಕರೆದೊಯ್ದಿದ್ದ ಸಹಪಾಠಿ  ಮುಂದಿನ ದೇಖಾವೆ ಆರಂಭವಾಗುವವರೆಗೆ ಕಾದು ನಮ್ಮನ್ನು ಟೆಂಟಿನ ಹಿಂಬದಿಗೆ ಕರೆದೊಯ್ದು ಅಲ್ಲಿ  ಕಾಣಿಸುತ್ತಿದ್ದ ಪರದೆಯ ಹಿಂಭಾಗದಲ್ಲಿ free ಉಲ್ಟಾ ಸಿನಿಮಾ ತೋರಿಸಿದ್ದ!  ರಾತ್ರಿ ಆ ಸಹಪಾಠಿಯ ಮನೆಯಲ್ಲೇ ಉಳಿದಿದ್ದೆವು. ಈ ಮರುಳ ಸಿದ್ದೇಶ್ವರ ಟೂರಿಂಗ್ ಟಾಕೀಸನ್ನು ಬೆಳ್ತಂಗಡಿಯ ಉದ್ಯಮಿಯೋರ್ವರು ಖರೀದಿಸಿ ಸ್ಥಾಪಿಸಿದ ಭಾರತ್ ಟಾಕೀಸ್ ಈಗಲೂ ಅಲ್ಲಿದೆ. 

ಮನೆಗೆ ರೇಡಿಯೋ ಬಂದ ಮೇಲೆ ಸಿನಿಮಾ ಜಾಹೀರಾತು ಮತ್ತು ಹಾಡುಗಳನ್ನು ಕೇಳುತ್ತಾ ಸಿನಿಮಾ ಟಾಕೀಸಿನ ಕನಸುಗಳು ಜಾಸ್ತಿಯಾಗತೊಡಗಿದ್ದವು. ನಮ್ಮಣ್ಣ ವಾರ್ಷಿಕ ಖರೀದಿಗಾಗಿ ಮಂಗಳೂರಿಗೆ ಹೋಗುವಾಗ ಜೊತೆಗಾರನ ನೆಲೆಯಲ್ಲಿ ನನ್ನನ್ನೂ ಕರೆದೊಯ್ಯುತ್ತಿದ್ದರು. ಅಂಥ ಭೇಟಿಗಳಲ್ಲಿ ಕನಿಷ್ಠ ಒಂದು ಸಿನಿಮಾ ನೋಡಿಯೇ ನೋಡುತ್ತಿದ್ದೆವು. ಕೆಲವೊಮ್ಮೆ ಒಂದು ಥಿಯೇಟರಿನಲ್ಲಿ ಮ್ಯಾಟಿನಿ ಮತ್ತು ಇನ್ನೊಂದರಲ್ಲಿ ಮೊದಲ ದೇಖಾವೆ ನೋಡುವುದೂ ಇತ್ತು. ಕೆಲವು ಸಲ ನಾನು ಹೋಗದಿದ್ದರೂ ಅವರು ನೋಡಿದ ಸಿನಿಮಾದ ಪದ್ಯಾವಳಿ ತಪ್ಪದೆ ತರುತ್ತಿದ್ದರು.  ಅದನ್ನು ನೋಡಿ ನಾನೆ ಸ್ವತಃ ಸಿನಿಮಾ ನೋಡಿದಷ್ಟು ಖುಶಿಪಡುತ್ತಿದ್ದೆ. ಜಾತ್ರೆಯಲ್ಲಿ ಕೊಳ್ಳಲು ಸಿಗುತ್ತಿದ್ದ ಬಯೋಸ್ಕೋಪ್‌ನಲ್ಲಿ  ಹಳೆ ಫಿಲ್ಮಿನ ತುಂಡುಗಳನ್ನು ನೋಡಿ  ನಿಜವಾದ ಸಿನಿಮಾ ನೋಡಿದಂತೆ ಆನಂದಿಸುತ್ತಿದ್ದೆ.  ಟಾರ್ಚ್ ಉಪಯೋಗಿಸಿದರೆ ಬ್ಯಾಟರಿ ಮುಗಿಯುತ್ತದೆಂಬ ಭಯದಿಂದ    ಕಿಟಿಕಿಯಿಂದ ಒಳನುಗ್ಗುತ್ತಿದ್ದ ಬಿಸಿಲುಕೋಲಿನ ಎದುರು ಆ ಫಿಲ್ಮ್ ತುಂಡುಗಳನ್ನು ಹಿಡಿದು ಪೀನಮಸೂರವೊಂದರ ಮೂಲಕ ಗೋಡೆಯ ಮೇಲೆ ದೊಡ್ಡ ಚಿತ್ರ ಮೂಡಿಸುವ ವಿದ್ಯೆಯನ್ನೂ ಕರಗತ ಮಾಡಿಕೊಂಡಿದ್ದೆ.


ಹೈಸ್ಕೂಲ್ ವಿಧ್ಯಾಭ್ಯಾಸಕ್ಕಾಗಿ ಉಜಿರೆ ಹಾಸ್ಟೆಲ್ ಸೇರಿದ್ದಾಗ ಬೆಳ್ತಂಗಡಿ ಟಾಕೀಸಿಗೆ ಬಂದ ಸಂತ ತುಕಾರಾಂ ಚಿತ್ರ ನೋಡಲು ವಾರ್ಡನ್ ವಿಶೇಷ ಅನುಮತಿ ನೀಡಿದ್ದರು. ನಂತರ ನಾವು ಕೆಲವು ಮಿತ್ರರು  ಅವರ ಕಣ್ಣು ತಪ್ಪಿಸಿ ಜಂಗ್ಲಿ, ಸುಬ್ಬಾಶಾಸ್ತ್ರಿ, ಪೂರ್ಣಿಮಾ, ತೂಗುದೀಪ ಮುಂತಾದ ಚಿತ್ರಗಳನ್ನು ಅಲ್ಲಿ ನೋಡಿದ್ದಿದೆ.  ಇದಕ್ಕಾಗಿ ರೂಮಿನ ಬಾಗಿಲನ್ನು ಒಳಗಿನಿಂದ ಬಂದು ಮಾಡಿಕೊಂಡು ಸರಳು ಕೀಳಲು ಬರುತ್ತಿದ್ದ ಒಂದು ಕಿಟಿಕಿಯ ಮೂಲಕ ಹೊರಬಿದ್ದು ಬಸ್ಸಿನಲ್ಲಿ ಬೆಳ್ತಂಗಡಿಗೆ ಹೋಗುತ್ತಿದ್ದೆವು. ಸಿನಿಮಾ ಮುಗಿದ ಮೇಲೆ ಮಧ್ಯರಾತ್ರೆ ಸಿಕ್ಕಿದ ವಾಹನದಲ್ಲಿ ಉಜಿರೆಗೆ ಬಂದು ಮತ್ತೆ ಅದೇ ದಾರಿಯ ಮೂಲಕ ಒಳಸೇರಿ ಏನೂ ಅರಿಯದವರಂತೆ ಮಲಗಿ ಬಿಡುತ್ತಿದ್ದೆವು.


1973ರಲ್ಲಿ ದೂರವಾಣಿ ಇಲಾಖೆಯಲ್ಲಿ ಉದ್ಯೋಗ ದೊರೆತು ಮಂಗಳೂರು ಸೇರಿದ ಮೇಲೆ ಹಸಿದವನಿಗೆ ಮೃಷ್ಟಾನ್ನ ಬಡಿಸಿದಂತಾಯಿತು. ಆಗ ವಾರಾಂತ್ಯದಲ್ಲಿ   ಹಳೆ ಚಿತ್ರಗಳ ಇಳಿಸಿದ ದರದ ಬೆಳಗಿನ ದೇಖಾವೆಗಳಿರುತ್ತಿದ್ದವು. ಇವುಗಳ ವಿವರ ಇರುತ್ತಿದ್ದ ಶುಕ್ರವಾರದ ಪತ್ರಿಕೆ  ಈ ಮೃಷ್ಟಾನ್ನ ಭೋಜನಕ್ಕೆ ಆಹ್ವಾನಪತ್ರಿಕೆಯಾಗಿರುತ್ತಿತ್ತು. ಕೆಲವು ಹಳೆ ಚಿತ್ರಗಳ ಹೊಸ ಪ್ರಿಂಟುಗಳೂ regular ದೇಖಾವೆಗಳಾಗಿ ಪ್ರದರ್ಶಿಸಲ್ಪಡುತ್ತಿದ್ದವು.  ಅತ್ಯುತ್ತಮ ಧ್ವನಿ ವ್ಯವಸ್ಥೆಯ ಕಾರಣದಿಂದ  ನನ್ನ ಮೆಚ್ಚಿನದಾಗಿದ್ದ ರೂಪವಾಣಿ ಟಾಕೀಸಿನಲ್ಲಿ ಮುಂಬರುವ ಬೆಳಗಿನ ದೇಖಾವೆಯ ಪೋಸ್ಟರನ್ನು ಒಂದು ವಾರ ಮುಂಚಿತವಾಗಿಯೇ ಒಂದು ನಿರ್ದಿಷ್ಟ  ಜಾಗದಲ್ಲಿ ಹಚ್ಚಿಡುತ್ತಿದ್ದರು. ಅದು ನನ್ನ ಮೆಚ್ಚಿನ ಚಿತ್ರವಾಗಿದ್ದರೆ ಆ ಒಂದು ವಾರದ ಕಾಯುವಿಕೆ ಬಲು ರೋಮಾಂಚಕವಾಗಿರುತ್ತಿತ್ತು.   ಆಗ ಬಾಲ್ಕನಿಗೆ regular ದರ 5 ರೂಪಾಯಿ ಮತ್ತು ಇಳಿಸಿದ ದರ 2 ರೂಪಾಯಿ ಇತ್ತು. ಆ ವರ್ಷ ನಾನು ಮೇ ತಿಂಗಳಿಂದ ಡಿಸೆಂಬರ್ ವರೆಗೆ  ಅಲ್ಲಿ ತನಕ  ಕನಸಿನಲ್ಲಿ ಕಾಣುತ್ತಿದ್ದ 56  ಸಿನಿಮಾಗಳನ್ನು ನೋಡಿದೆ!  ಈ trend ಮುಂದುವರಿದು 1974ರಲ್ಲಿ  69  ಮತ್ತು  1975ರಲ್ಲಿ  63  ಬಾರಿ ಟಾಕೀಸುಗಳಿಗೆ ಹಾಜರಿ ಹಾಕಿದೆ!! ಆಗ ನಾನು ನೋಡಿದ ಚಿತ್ರಗಳ ಲಿಖಿತ ದಾಖಲೆ ಇರಿಸುತ್ತಿದ್ದುದರಿಂದ ಈ ನಿಖರ ಅಂಕಿ ಅಂಶಗಳನ್ನು ಒದಗಿಸಲು ಸಾಧ್ಯವಾಯಿತು.  ಆಗ ನನ್ನ ಮೆಚ್ಚಿನ ಗಾಯಕರಾದ  ರಫಿ ಹಿನ್ನೆಲೆಗೆ ಸರಿದಿದ್ದರು. ಕೆಲವೇ ಸಮಯದಲ್ಲಿ ಪಿ.ಬಿ.ಶ್ರೀನಿವಾಸ್ ಕೂಡ ಅದೇ ಹಾದಿ ಹಿಡಿಯಬೇಕಾಯಿತು.  ಅವರ ಹಾಡುಗಳಿಲ್ಲ ಎಂಬ ಕಾರಣಕ್ಕಾಗಿ ನಾನು ಅನೇಕ ಹೊಸ ಚಿತ್ರಗಳನ್ನು ನೋಡುತ್ತಿರಲಿಲ್ಲ.  ಇಲ್ಲದಿದ್ದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಿರುತ್ತಿತ್ತು.  ಮುಂದೆ ಜೂನಿಯರ್ ಇಂಜಿನಿಯರ್ ಆಗಿ ಪದೋನ್ನತಿ ಹೊಂದಿ ತರಬೇತಿಗಾಗಿ ಬೆಂಗಳೂರಿಗೆ ಹೋದಾಗ ಅಲ್ಲಿಯ ಪರಿಮಳ, ಪ್ರದೀಪ್ ಮುಂತಾದ ಟಾಕೀಸುಗಳಲ್ಲಿಯೂ ಬಹಳ ಸಮಯದಿಂದ ನೋಡಲು ಕಾತರಿಸುತ್ತಿದ್ದ ಅನೇಕ ಹಳೆ ಚಿತ್ರಗಳು ನೋಡಲು ಸಿಕ್ಕಿದವು.  ಒಮ್ಮೆ ಪ್ರದೀಪ್ ಟಾಕೀಸಿನಲ್ಲಿ ಧೂಲ್ ಕಾ ಫೂಲ್ ಚಿತ್ರ ನೋಡಲು ಹೋದಾಗ ದೊಡ್ಡ ಕ್ಯೂ ಇದ್ದರೂ ಸುಲಭವಾಗಿ ಟಿಕೇಟು ಸಿಕ್ಕಿದ ಖುಶಿಯಲ್ಲಿ ಕೊಟ್ಟ ದೊಡ್ಡ ನೋಟಿಗೆ ಬಾಕಿ ಚಿಲ್ಲರೆ ಪಡೆಯುವುದನ್ನು ಮರೆತು ಮುಂದೆ ಸಾಗಿದ್ದೆ.  ಮತ್ತೆ ಹಿಂದೆ ಬಂದು ಕ್ಯೂ ಒಳಗೆ ತೂರಿ ಕೌಂಟರಿನವನೊಡನೆ ವಿಚಾರಿಸಲು ಪ್ರಯತ್ನಿಸಿದಾಗ ಆತ ಸಿಟ್ಟುಗೊಂಡು  ಇಂಟರ್‌ವಲ್ ಹೊತ್ತಿಗೆ ಬರಬೇಕೆಂದೂ ಕೊನೆಯಲ್ಲಿ ಎಣಿಸಿ ತಾಳೆ ಮಾಡುವಾಗ ಹೆಚ್ಚುವರಿ ದುಡ್ಡು ಉಳಿದರೆ ಕೊಡುವುದಾಗಿಯೂ ತಿಳಿಸಿದ.  ಇಂಟರ್‌ವಲ್‌ನಲ್ಲಿ ಹೋಗಿ ವಿಚಾರಿಸಿದಾಗ ಹೇಳಿದಂತೆಯೇ ಚಿಲ್ಲರೆ ದುಡ್ಡಿನ ಅಷ್ಟು  ರಾಶಿ ಕೊಟ್ಟ.  ಎಣಿಸುವ ಗೋಜಿಗೆ ಹೋಗದೆ ಕಿಸೆಗೆ ಹಾಕಿದೆ.  ಒಂದೆರಡು ಮಾರ್ನಿಂಗ್ ಶೋಗಳಲ್ಲಿ ಅರ್ಧ ಸಿನಿಮಾ ಆಗುವಾಗ ಪ್ರಾಜೆಕ್ಟರ್ ಕೈ ಕೊಟ್ಟು ಮುಂದಿನ ವಾರದ ಸಿನಿಮಾಗೆ  ಪಾಸ್ ಪಡೆದದ್ದೂ ಇದೆ. 

ಟಾಕೀಸುಗಳಲ್ಲಿ ಪೇವ್‌ಮೆಂಟ್   ಎದುರಿನ ಹಿಂಬದಿಯ ಕೊನೇ ಸಾಲಿನ  ಸೀಟು ಯಾವಾಗಲೂ ನನ್ನ ಆದ್ಯತೆಯಾಗಿರುತ್ತಿತ್ತು. ಏಕೆಂದರೆ ಅಲ್ಲಿ  ಮುಂದೆ ಕೂತವರ ತಲೆ ಅಡ್ಡಬರುವ ಸಮಸ್ಯೆ ಇರುತ್ತಿರಲಿಲ್ಲ. ತೆರೆಯ ಹಿಂದಿನಿಂದ ಕೇಳಿಬರುವ ಅಚ್ಚ ಹೊಸ ಚಿತ್ರಗೀತೆಗಳನ್ನು ಕೇಳುತ್ತಾ ತೆರೆಯ ಮೇಲೆ Welcome ಸ್ಲೈಡ್ ಬೀಳುವುದನ್ನು ಕಾಯುವುದು ಹಿತಕರವಾದ ಅನುಭವವಾಗಿರುತ್ತಿತ್ತು. ಕೆಲವು ಟಾಕೀಸುಗಳಲ್ಲಿ ದೀಪಗಳು ಆರಿ ತೆರೆಯೆ ಮೇಲೆ ಚಿತ್ರಮೂಡಲು ಆರಂಭಿಸುವ ಹೊತ್ತಲ್ಲಿ ಒಂದು ನಿರ್ದಿಷ್ಟ ಗೀತೆ ಅಥವಾ ಟ್ಯೂನ್ ಕೇಳಿಬರುತ್ತಿತ್ತು.    ಜಾಹೀರಾತಿನ slides ಮತ್ತು ಕಿರುಚಿತ್ರಗಳ ನಂತರ ಮುಂಬರುವ ಚಿತ್ರಗಳ ಟ್ರೈಲರ್ ತೋರಿಸುತ್ತಿದ್ದರು.  ಅವುಗಳನ್ನು ಅನೇಕ ಸಲ ನೋಡಿ ಸಿನಿಮಾ ಬರುವುದಕ್ಕೆ ಮೊದಲೇ ಕೆಲವು ಡಯಲಾಗುಗಳು ನಮಗೆ ಕಂಠಪಾಠವಾಗಿರುತ್ತಿದ್ದವು. ಕೆಲವು ಸಲ ಟ್ರೈಲರಲ್ಲಿ ಇದ್ದ ದೃಶ್ಯ ಸಿನಿಮಾದಲ್ಲಿ ಇಲ್ಲದಿರುವುದೂ ಇತ್ತು. ಸಾಮಾನ್ಯವಾಗಿ ಟ್ರೈಲರ್‍ಗಳ ಗುಣಮಟ್ಟ ಕಳಪೆಯಾಗಿರುತ್ತಿತ್ತು. ಅಂದಿನ ದಿನಗಳಲ್ಲಿ ಸಿನಿಮಾ ಆರಂಭದ ಮೊದಲು ವಾರ್ತಾ ಇಲಾಖೆಯ ನ್ಯೂಸ್ ರೀಲ್ ಪ್ರದರ್ಶನ ಕಡ್ಡಾಯವಾಗಿತ್ತು.  ಕೆಲವು ನ್ಯೂಸ್ ರೀಲುಗಳು ಅತಿ ದೀರ್ಘವಾಗಿ ಬೋರ್ ಹೊಡೆಸುವಂತಿರುತ್ತಿದ್ದವು.  ಆಗ ಪ್ರೇಕ್ಷಕರ ಸಿಳ್ಳೆಗಳಿಗೆ ಮಣಿದು ಅದನ್ನು ಅಲ್ಲಿಗೇ ಮೊಟಕುಗೊಳಿಸಿ ಮುಖ್ಯ ಚಿತ್ರ ಆರಂಭಿಸಿದಾಗ ನನಗೂ ಖುಶಿ ಆಗುತ್ತಿತ್ತು. ಕೆಲವು ಇಂಗ್ಲಿಷ್ ಸಿನಿಮಾಗಳ ಅವಧಿ ತುಂಬಾ ಕಮ್ಮಿ ಇರುತ್ತಿದ್ದುದರಿಂದ ಜಾಹೀರಾತು , ಟ್ರೈಲರ್ ಮತ್ತು ನ್ಯೂಸ್ ರೀಲು ಇತ್ಯಾದಿಗಳಗಳ ನಂತರ ಕಾರ್ಟೂನ್ ಚಿತ್ರ ತೋರಿಸುತ್ತಿದ್ದರು.  ಅಷ್ಟರಲ್ಲಿ ಇಂಟರ್‌ವಲ್ ಆಗುತ್ತಿತ್ತು. ಸಿನಿಮಾ ಶುರುವಾದ ಮೇಲೆ ಆಗಾಗ ಹಿಂದೆ ತಿರುಗಿ ಯಾವ ಕಂಡಿಯ ಮೂಲಕ ಪ್ರಾಜೆಕ್ಟರ್ ಬೆಳಕು ಬರುತ್ತಿದೆ ಎಂದೂ ನಾನು ನೋಡುವುದಿತ್ತು.   ನಾವು ಮುಂಗಡ ಬುಕಿಂಗ್ ಮಾಡಿದ ದಿನ ಟಾಕೀಸು ತುಂಬು ತುಳುಕುತ್ತಿದ್ದರೆ, ಬುಕಿಂಗ್ ಮಾಡದ ದಿನ ಖಾಲಿಯಾಗಿದ್ದರೆ ಖುಶಿ ಆಗುತ್ತಿತ್ತು.  ಸಿನಿಮಾ ನೋಡುವಾಗ ಕೆಲವೊಮ್ಮೆ ಅತೀ ಬಾಯಾರಿಕೆಯಾಗುವುದಿತ್ತು.  ಆಗ ಸಿನಿಮಾದಲ್ಲಿ ತಿಳಿ ನೀರ ತೊರೆ ಕಂಡರೆ ಅಥವಾ ಪಾತ್ರವೊಂದು ತಂಪು ಪಾನೀಯ ಕುಡಿಯುವ  ದೃಶ್ಯ ಬಂದರೆ ಬಾಯಾರಿಕೆ ಮತ್ತೂ ಹೆಚ್ಚಾಗುತ್ತಿತ್ತು! 

ಅಂದಿನ ಸಿನಿಮಾಗಳಲ್ಲಿ  ಆಪ್ಟಿಕಲ್ track ಮೂಲಕ ಪುನರುತ್ಪತ್ತಿಯಾಗುತ್ತಿದ್ದ ಆಡಿಯೊ  ಇರುತ್ತಿದ್ದುದರಿಂದ ಟಾಕೀಸುಗಳು ಮಾತ್ರವಲ್ಲ, ಟೆಂಟ್ ಸಿನಿಮಾಗಳಲ್ಲೂ ಸುಸ್ಪಷ್ಟ ಶ್ರೀಮಂತ ಧ್ವನಿ ಕೇಳಿಸುತ್ತಿತ್ತು. ಮೊದಲೇ ರೇಡಿಯೋದಲ್ಲಿ, ಧ್ವನಿವರ್ಧಕಗಳಲ್ಲಿ ಹಾಡುಗಳನ್ನು ಕೇಳಿರುತ್ತಿದ್ದರೂ ಸಿನಿಮಾದ ಭಾಗವಾಗಿ  ಅವುಗಳನ್ನು ಕೇಳುವುದು ಅನನ್ಯ ಅನುಭವ ನೀಡುತ್ತಿತ್ತು.  ಈಗಿನ ಡಿ.ಟಿ.ಎಸ್ , Dolby ಮುಂತಾದ ಯಾವ  ತಂತ್ರಜ್ಞಾನವೂ ಅದನ್ನು ಸರಿಗಟ್ಟಲಾರದು.  ಮೂರು ಗಂಟೆಗಳ ಕಾಲ ಹೊರಗಿನ ಪ್ರಪಂಚವನ್ನು ಮರೆಸಿ ನಮ್ಮನ್ನು ಕನಸಿನ ಲೋಕಕ್ಕೆ ಒಯ್ಯುತ್ತಿದ್ದ ಆ ಸಿನಿಮಾಗಳು ಅಂದಿನ ಆ  ಟಾಕೀಸುಗಳು ಇನ್ನು ಕನಸು ಮಾತ್ರ.


11-2-2018