Monday 30 November 2020

ಹರಿಶ್ಚಂದ್ರಾಯಣ

‘ಕೆಟ್ಟ ವಸಿಷ್ಠ. ತನ್ನ ಶಿಷ್ಯನೊಬ್ಬನೇ ಸತ್ಯವಂತನಂತೆ. ಆಹಾ! ಹೇಳುವುದಕ್ಕೆ ಆ ದೇವರ್ಷಿ.  ಕುಳಿತು ಕೇಳುವುದಕ್ಕೆ ಈ ದೇವೇಂದ್ರ.  ಸರಿಯಾಗಿದೆ ಜೋಡಿ.’ - ಇದು ನಮ್ಮೂರ ಶಾಲಾ ವಾರ್ಷಿಕೋತ್ಸವದಲ್ಲಿ ಅಭಿನಯಿಸಿದ ಸತ್ಯ ಹರಿಶ್ಚಂದ್ರ ನಾಟಕದಲ್ಲಿ ವಿಶ್ವಾಮಿತ್ರನ ಪ್ರಥಮ ಪ್ರವೇಶದ ಡಯಲಾಗ್. ವಿಶ್ವಾಮಿತ್ರನಾಗಿದ್ದುದು ನಾನಲ್ಲ.  ನಮ್ಮ ಮನೆಯಲ್ಲಿದುಕೊಂಡು ಮುಂಡಾಜೆ ಹೈಯರ್ ಎಲಿಮೆಂಟರಿ ಶಾಲೆಗೆ ಹೋಗುತ್ತಿದ್ದ ನಮ್ಮಕ್ಕನ ಮಗ. ಆತ ಮನೆಯಲ್ಲಿ ತನ್ನ ಪಾತ್ರದ ಸಂಭಾಷಣೆಗಳನ್ನು ಪದೇ ಪದೇ ಅಭ್ಯಾಸ ಮಾಡುತ್ತಿದ್ದುದರಿಂದ ಆಗಿನ್ನೂ ಸಿದ್ದಬೈಲು ಪರಾರಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ನನಗೂ ಈ ಮೊದಲ ಸಾಲುಗಳು ಕಂಠಪಾಠವಾಗಿ ಈಗಲೂ ನೆನಪಿನಲ್ಲುಳಿದಿವೆ.  ವಾರ್ಷಿಕೋತ್ಸವದ ದಿನ ಆತ ದಾಡಿ ಮೀಸೆ ಧರಿಸಿ ಕೆಂಪು ನಾರುಮಡಿಯುಟ್ಟು ಜಟಾಧಾರಿಯಾಗಿ ಕೈಯಲ್ಲಿ ದಂಡ ಕಮಂಡಲು ಹಿಡಿದು ಈ ಡಯಲಾಗ್ ಹೇಳುತ್ತಾ ವೇದಿಕೆಯನ್ನು ಪ್ರವೇಶಿಸಿದ ದೃಶ್ಯವನ್ನೂ ನಾನು ಮರೆತಿಲ್ಲ.  ಆತ್ಯುತ್ತಮ ನಟ ಪ್ರಶಸ್ತಿಯೂ ಅಂದು ಆತನಿಗೆ ದೊರಕಿತು.  ಆ ನಾಟಕದಲ್ಲಿ ಹರಿಶ್ಚಂದ್ರ ಶ್ಮಶಾನ ಕಾಯುತ್ತಾ ಹಾಡುವ ‘ಕಾಯಕೆ ಕವಿಯಿತು ಮಸಣದ ಹೊಗೆಯು, ಆಯಿತು ವಾಸಕೆ  ಮುರುಕಲು ಮನೆಯು’ ಎಂಬ ಹಾಡೂ ಇತ್ತು. ಮನೆಯಲ್ಲಿ ಮಸಣ ಶಬ್ದದ ಉಚ್ಚಾರ ಮಾಡಿದರೆ ಹಿರಿಯರು ಬೈದಾರೆಂಬ ಭಯದಿಂದ ನಾವದನ್ನು ‘ಕಾಯಕೆ ಕವಿಯಿತು ಧೂಪದ ಹೊಗೆಯು, ಆಯಿತು ವಾಸಕೆ ಚಂದದ ಮನೆಯು’ ಎಂದು ಬದಲಾಯಿಸಿ ಹಾಡಿಕೊಳ್ಳುತ್ತಿದ್ದೆವು.  ಕರುಣ, ರೌದ್ರ, ಹಾಸ್ಯ ಎಲ್ಲಾ ರಸಗಳಿಗೆ ವಿಪುಲ ಅವಕಾಶವಿರುವ ಹರಿಶ್ಚಂದ್ರ ನಾಟಕ ಅಂದಿನ ಶಾಲಾ ವಾರ್ಷಿಕೋತ್ಸವಗಳಲ್ಲಿ ಇರುತ್ತಿದ್ದುದು ಸಾಮಾನ್ಯವಾಗಿತ್ತು.

ಕೆಲವು ವರ್ಷಗಳ ನಂತರ  ಆ ಶಾಲೆಯಲ್ಲೇ  ಹರಿಶ್ಚಂದ್ರನೊಂದಿಗೆ ಮತ್ತೆ ನನ್ನ ಮುಖಾಮುಖಿಯಾಯಿತು. ಆದರೆ ರಸಮಯ ನಾಟಕದಲ್ಲಲ್ಲ,  ನನಗೆ ಆಗ ವಧ್ಯ ಎನಿಸಿದ್ದ ಪದ್ಯ ರೂಪದಲ್ಲಿ!  ನಾನು ಸಿದ್ದಬೈಲು ಶಾಲೆಯಲ್ಲಿ 5ನೇ ತರಗತಿ ಮುಗಿಸಿ  ಅದೇ ಮುಂಡಾಜೆ ಹೈಯರ್ ಎಲಿಮೆಂಟರಿ ಶಾಲೆಗೆ ಸೇರಿದ್ದೆ.  6ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ನಮಗೆ ಹೊಸದಾಗಿದ್ದ ಹಳೆಗನ್ನಡದ ಕೆಲವು ಪದ್ಯಗಳಿದ್ದವು. ಅವುಗಳಲ್ಲಿ ಒಂದು ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಪುತ್ರ ರೋಹಿತಾಶ್ವನು ಹಾವು ಕಡಿದು ಮರಣ ಹೊಂದಿದಾಗ ಚಂದ್ರಮತಿಯು ವಿಲಾಪಿಸುವ ಈ ಭಾಗವಾಗಿತ್ತು.

ಲಲನೆ ಮೂಗಿನೊಳುಸುರನಳ್ಳೆಯೊಳು ಹೊಯ್ಲನುಗು
ರೊಳು ರಜವನೆದೆಯೊಳಲ್ಲಾಟಮಂ ಕೈಯ ಮೊದ
ಲೊಳು ಮಿಡುಕನಂಗದೊಳು ನೋವನಕ್ಷಿಯೊಳು ಬೆಳ್ಪಂ ಭಾಳದೊಳು  ಬೆಮರನು  |
ಲಲಿತಕಂಠದೊಳುಲುಕನಂಘ್ರಿಯೊಳು ಬಿಸಿಯನಂ
ಗುಳಿಗಳೊಳು ಚಿಟುಕನುಂಗುಟದೊಳರುಣಾಂಬುವಂ
ಸಲೆ ನಾಲಗೆಯೊಳಿಂಪ ರೋಮದೊಳು ಬಲ್ಪನಾರಯ್ದು ಕಾಣದೆ ನೊಂದಳು ||

ಆದರೆ ಇದು 1,2,4 ಮತ್ತು 5ನೇ ಪಾದಗಳಲ್ಲಿ 5 ಮಾತ್ರೆಯ 4 ಗಣಗಳು(ತಕತಕಿಟ  ತಕತಕಿಟ ತಕತಕಿಟ ತಕತಕಿಟ)   ಹಾಗೂ 3 ಮತ್ತು 6ನೇ ಪಾದಗಳಲ್ಲಿ 5 ಮಾತ್ರೆಯ 6 ಗಣಗಳು ಮತ್ತು ಕೊನೆಯಲ್ಲೊಂದು ಎರಡಕ್ಷರ ಕಾಲದ ಗುರು(ತಕತಕಿಟ ತಕತಕಿಟ ತಕತಕಿಟ ತಕತಕಿಟ ತಕತಕಿಟ ತಕತಕಿಟ ತಾ) ಇರುವ, ಪ್ರತೀ ಪಾದದ ಎರಡನೇ ಅಕ್ಷರ ನಿರ್ದಿಷ್ಟ ವ್ಯಂಜನವಾಗಿರುವ ಆದಿ ಪ್ರಾಸದ ವಾರ್ಧಕ ಷಟ್ಪದಿ ಎಂದು ಈ ಲೇಖನಕ್ಕೆ ವಿಷಯ ಸಂಗ್ರಹಿಸುವಾಗಷ್ಟೇ ನನಗೆ ತಿಳಿದದ್ದು. ನಾವು ಶುಕ್ರವಾರದ  ಭಜನೆಗಳಲ್ಲಿ ಹಾಡುತ್ತಿದ್ದ ಕನಕದಾಸ, ಪುರಂದರದಾಸರ ಬಹುತೇಕ ರಚನೆಗಳಲ್ಲೂ ಆದಿಪ್ರಾಸ ಇರುವುದು ಶಾಲಾ ಕಾಲದಲ್ಲಿ ನನಗೆ ಗೊತ್ತಿರಲಿಲ್ಲ! ಅಂದು ಅಧ್ಯಾಪಕರು ಇದನ್ನೆಲ್ಲ ಹೇಳಿರಲಿಲ್ಲವೋ ಅಥವಾ ನಾನು ಕೇಳಿಸಿಕೊಂಡಿರಲಿಲ್ಲವೋ ಗೊತ್ತಿಲ್ಲ. ಆಗ ಹೇಗೋ ಇದನ್ನು ಯಾಂತ್ರಿಕವಾಗಿ ಕಂಠಪಾಠ ಮಾಡಿ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸಿದ್ದೆ.  ಆದರೆ ನಾಟಕದ ವಿಶ್ವಾಮಿತ್ರನ ಮಾತುಗಳನ್ನು ಉಚ್ಚರಿಸುತ್ತಾ ಮನೆಯಲ್ಲಿ ತಿರುಗಾಡಿದಂತೆ ಈ ಪದ್ಯವನ್ನು ಎಂದೂ ಖುಶಿಯಿಂದ ಗುನುಗಿಕೊಂಡದ್ದಿಲ್ಲ. ಇದು ಹರಿಶ್ಚಂದ್ರನ ಕಥೆಗೆ  ಸಂಬಂಧಿಸಿದ್ದೆಂಬ ಅಂಶ ನನ್ನ ಮನದಲ್ಲಿ ದಾಖಲಾಗಿರಲೂ ಇಲ್ಲ.  ಇದೇ ಪಠ್ಯಪುಸ್ತಕದೊಳಗಿನದ್ದಕ್ಕೂ ಹೊರಗಿನದಕ್ಕೂ ಇರುವ ವ್ಯತ್ಯಾಸವಿರಬಹುದು! 

ನಾನು ಎಂಟರಿಂದ ಹತ್ತನೇ ತರಗತಿ ವರೆಗೆ ಉಜಿರೆ ಹಾಸ್ಟೆಲಲ್ಲಿದ್ದುಕೊಂಡು ಓದಿದ್ದು.  ಮೊದಮೊದಲು ಪ್ರತೀ ವಾರಾಂತ್ಯದಲ್ಲಿ ಮನೆಗೆ ಹಾಜರಿ ಹಾಕುತ್ತಿದ್ದೆ.  ಕ್ರಮೇಣ ಹಾಸ್ಟೆಲ್ ಜೀವನ ಅಭ್ಯಾಸ ಆಗಿ ಹತ್ತನೇ ತರಗತಿಗಾಗುವಾಗ ಹೆಚ್ಚಾಗಿ ತಿಂಗಳಿಗೊಮ್ಮೆಯಷ್ಟೇ ಮನೆಗೆ ಹೋಗುತ್ತಿದ್ದೆ.  ಹೀಗೆ ಬೇಸಿಗೆಯ ಒಂದು ವಾರಾಂತ್ಯದಲ್ಲಿ  ಮನೆಗೆ ಹೋಗಿದ್ದಾಗ ಚಾವಡಿಯಲ್ಲಿರುವ ಟೇಬಲ್ ಮೇಲೊಂದು ಪಂಚಾಂಗದಾಕಾರದಲ್ಲಿದ್ದ ಹೊಳೆಯುವ ಹೊದಿಕೆಯ ಚಂದದ ತೆಳ್ಳಗಿನ ಪುಸ್ತಕ ಕಂಡಿತು. ಆಗ ತಾನೇ ಮಂಗಳೂರಲ್ಲಿ ತಾತ್ಕಾಲಿಕ ನೌಕರಿಗೆ ಸೇರಿದ್ದ ನಮ್ಮಣ್ಣ ನೋಡಿದ್ದ ಸತ್ಯ ಹರಿಶ್ಚಂದ್ರ ಸಿನಿಮಾದ ಪದ್ಯಾವಳಿ ಆಗಿತ್ತದು.  ಇತರ ಸಾಮಾನ್ಯ ಪದ್ಯಾವಳಿಗಳಂತಲ್ಲದೆ ಇದರ ಒಳಪುಟಗಳಲ್ಲಿ ತಿಳಿವರ್ಣದ ಸಿನಿಮಾ ದೃಶ್ಯಗಳ ಮೇಲೆ ಕಥಾ ಸಾರಾಂಶ, ನಟ ನಟಿಯರು ಮತ್ತು ಪಾರಿಭಾಷಿಕ ವರ್ಗದವರ ವಿವರ ಹಾಗೂ ಹಾಡುಗಳನ್ನು  ಮುದ್ರಿಸಲಾಗಿತ್ತು. ಕೂಡಲೇ ಚಾವಡಿಯಿಂದ  ಹೊರಜಗಲಿಗೆ ಬಂದು ಅಲ್ಲಿನ ಕಟ್ಟೆಯ ಮಾಮೂಲಿ ಆಯಕಟ್ಟಿನ ಜಾಗದಲ್ಲಿ  ಕುಳಿತು ಪದ್ಯಾವಳಿಯ ಪುಟಗಳನ್ನು ಒಂದೊಂದಾಗಿ ತಿರುಗಿಸತೊಡಗಿದೆ. ಆಗ ಮಧ್ಯಾಹ್ನದ ಹೊತ್ತಾಗಿದ್ದು ಪದ್ಯಾವಳಿಯಲ್ಲಿದ್ದ ಶ್ರಾದ್ಧದೂಟ ಸುಮ್ಮನೆ ಹಾಡಿನ ಇಂಗು ತೆಂಗು ತಿರುವಿ ಬೆರೆತ ವಡೆ ಗೊಜ್ಜು ಮಜ್ಜಿಗೆ ರಾಯ್ತ ಸಾಲಿನ ಮೇಲೆ ಕಣ್ಣಾಡಿಸುತ್ತಿರುವಾಗ  ಅಡಿಗೆ ಮನೆಯಿಂದಲೂ  ಇಂಗು ತೆಂಗು ತಿರುವಿ ಬೆರೆತ ದಿವಿಹಲಸಿನ ಹುಳಿ ಕುದಿಯುತ್ತಿರುವ ಸುವಾಸನೆ ತೇಲಿ ಬರುತ್ತಿತ್ತು! ಅಂದು ಅಪರಾಹ್ನ ಶಾರ್ಟ್ ವೇವ್ ವಿವಿಧಭಾರತಿಯ ಮಧುರ್ ಗೀತಂ ಕಾರ್ಯಕ್ರಮದಲ್ಲಿ ಅದೇ ಹಾಡು ಕೇಳಲೂ ಸಿಕ್ಕಿತು.  ಸಾಮಾನ್ಯವಾಗಿ ಕನ್ನಡ ಚಿತ್ರಗಳು ತೆರೆ ಕಂಡು ಸುಮಾರು ಒಂದು ಒಂದೂವರೆ ತಿಂಗಳುಗಳ ನಂತರವಷ್ಟೇ  ಹಾಡುಗಳ ಧ್ವನಿಮುದ್ರಿಕೆಗಳು ತಯಾರಾಗಿ ರೇಡಿಯೋ ಸ್ಟೇಶನ್ ತಲುಪುತ್ತಿದ್ದವು. ಆದರೆ ಈ ಚಿತ್ರದ  ಧ್ವನಿಮುದ್ರಿಕೆಗಳು ಬಹು ಬೇಗ ತಯಾರಾಗಿ ದಿನನಿತ್ಯವೆಂಬಂತೆ ಹಾಡುಗಳು ಪ್ರಸಾರವಾಗತೊಡಗಿದ್ದವು.  ಆಗ ನನಗೆ ರೇಡಿಯೋ ಕೇಳುವ ಅವಕಾಶ ಹೀಗೆ ಮನೆಗೆ ಬಂದಾಗ ಮಾತ್ರ ಸಿಗುತ್ತಿದ್ದುದಾದರೂ ಚಿತ್ರಗೀತೆಗಳ ಮಟ್ಟಿಗೆ ನಾನು ಏಕಪಾಠಿಯಾಗಿದ್ದುದರಿಂದ ಸ್ವಲ್ಪವೇ ಸಮಯದಲ್ಲಿ ನಮೋ ಭೂತನಾಥಾ, ನೀನು ನಮಗೆ ಸಿಕ್ಕಿಬಿದ್ದೆಯೋ ರಾಜಾ, ನನ್ನ ನೀನು ನಿನ್ನ ನಾನು, ಶ್ರಾದ್ಧದೂಟ ಸುಮ್ಮನೆ, ವಿಧಿ ವಿಪರೀತ, ಕುಲದಲ್ಲಿ ಕೀಳ್ಯಾವುದೋ ಹಾಡುಗಳು ನನ್ನ ನೆಚ್ಚಿನವಾಗಿಬಿಟ್ಟವು. ಸತ್ಯ ಹರಿಶ್ಚಂದ್ರ ಚಿತ್ರವನ್ನು ವಿಕ್ಷಿಸಲು ನಾನು ಕೆಲವು ವರ್ಷಗಳೇ ಕಾಯಬೇಕಾಯಿತು. ಆ ಚಿತ್ರದ ಬಗ್ಗೆ ಮತ್ತು  ಹಾಡುಗಳ ಬಗ್ಗೆ ಇನ್ನಷ್ಟು ವಿಚಾರಗಳನ್ನು ಆ ಮೇಲೆ  ತಿಳಿಯೋಣ.

ಐತರೇಯ ಬ್ರಾಹ್ಮಣ, ಸಾಂಖ್ಯಾಯನ ಶ್ರೌತಸೂತ್ರ,  ವೇದಾರ್ಥ ದೀಪಿಕೆ, ಬ್ರಹ್ಮಾಂಡ ಪುರಾಣ, ವಾಯು ಪುರಾಣ, ಮತ್ಸ್ಯ ಪುರಾಣ , ಬ್ರಹ್ಮ ವೈವರ್ತ ಪುರಾಣ, ಶೈವ ಪುರಾಣ,  ಮಾರ್ಕಂಡೇಯ ಪುರಾಣ,  ಬ್ರಹ್ಮ ಪುರಾಣ, ಪದ್ಮ ಪುರಾಣ ಇತ್ಯಾದಿಗಳಲ್ಲಿ ಹರಿಶ್ಚಂದ್ರನ ಕಥೆಯು ಉಕ್ತವಾಗಿದ್ದು 12ನೆಯ ಶತಮಾನದ ಕನ್ನಡ ಕವಿ ರಾಘವಾಂಕನ ಹರಿಶ್ಚಂದ್ರ ಕಾವ್ಯವು  ಅತಿ ಪ್ರಸಿದ್ಧವಾಗಿದೆ. ಈ ವಿವಿಧ ಮೂಲಗಳಲ್ಲಿ ಕಥೆಯ ಪಾತ್ರಗಳ ಹೆಸರುಗಳಲ್ಲಿ ಸ್ವಲ್ಪ ವ್ಯತ್ಯಾಸ ಇದೆ.  ಹರಿಶ್ಚಂದ್ರನ ಪತ್ನಿ ಕೆಲವೆಡೆ ಚಂದ್ರಮತಿಯಾದರೆ ಇನ್ನು ಕೆಲವೆಡೆ ವಿಶೇಷವಾಗಿ ಉತ್ತರಭಾರತದಲ್ಲಿ ತಾರಾಮತಿ ಅನ್ನಿಸಿಕೊಳ್ಳುತ್ತಾಳೆ. ಶೈವ್ಯಾ ಎಂಬ ಹೆಸರೂ ಆಕೆಗಿತ್ತೆಂಬ ಉಲ್ಲೇಖ ಇದೆ. ಅವರ ಪುತ್ರನಿಗೆ ಲೋಹಿತಾಶ್ವ, ರೋಹಿತಾಶ್ವ, ಲೋಹಿತಾಸ್ಯ, ಲೋಹಿದಾಸ  ಇತ್ಯಾದಿ ಹೆಸರುಗಳಿವೆ.  ವಿಶ್ವಾಮಿತ್ರನ ಶಿಷ್ಯ ನಕ್ಷತ್ರಿಕನ ಪಾತ್ರ ರಾಘವಾಂಕನ ಸೃಷ್ಟಿಯೆನ್ನಲಾಗುತ್ತಿದ್ದು ಉತ್ತರಭಾರತದ ಕಡೆ ಪ್ರಚಲಿತವಿರುವ ಕಥೆಗಳಲ್ಲಿ ಈ ಪಾತ್ರ ಇಲ್ಲ.

ಹರಿಶ್ಚಂದ್ರ  ಸತ್ಯವಾದಿಯೆಂದೇ ಖ್ಯಾತನಾದರೂ   ಆತ ಮಾತಿಗೆ ತಪ್ಪಿದ ಕಥೆಯೂ ಒಂದಿದೆ.  ಆತನಿಗೆ ಬಹುಕಾಲ ಸಂತಾನ ಪ್ರಾಪ್ತಿ ಆಗಿರಲಿಲ್ಲ. ಮಗ ಹುಟ್ಟಿದರೆ  ವರುಣನಿಗೆ ಬಲಿ ಕೊಡುತ್ತೇನೆಂದು ಹರಸಿಕೊಳ್ಳುತ್ತಾನೆ.  ಆದರೆ ಆ ಮೇಲೆ ಪುತ್ರವ್ಯಾಮೋಹದಿಂದ ಮಗನನ್ನು ಬಚ್ಚಿಟ್ಟು ವರುಣನ ಶಾಪದಿಂದ ಜಲೋದರ ವ್ಯಾಧಿಗೊಳಗಾಗುತ್ತಾನೆ.  ಕೊನೆಗೆ ಮಗನ ಬದಲಿಗೆ ಋಚೀಕ ಮುನಿಯ ಪುತ್ರ ಶುನಶ್ಯೇಪನೆಂಬುವವನನ್ನು ಬಲಿಕೊಟ್ಟು ವ್ಯಾಧಿಯಿಂದ ಮುಕ್ತನಾಗುತ್ತಾನೆ. ಶುನಶ್ಯೇಪನನ್ನು ವಿಶ್ವಾಮಿತ್ರ ಬದುಕಿಸಿಕೊಂಡು  ಪುತ್ರನಾಗಿ ಸ್ವೀಕರಿಸುತ್ತಾನೆಂದೂ ಐತಿಹ್ಯವಿದೆ. ಕೆಲವರು ಒಮ್ಮೆ ಒಂದು ಕ್ಲಾಸಲ್ಲಿ ಫೇಲ್ ಆಗಿ ಮತ್ತೆ rank ವಿದ್ಯಾರ್ಥಿ ಆಗುವ ಹಾಗೆ ಈ ಘಟನೆಯ ನಂತರ ಹರಿಶ್ಚಂದ್ರ ಪೂರ್ತಿ ಸತ್ಯಸಂಧನಾಗಿ ಬದಲಾಗಿರಬೇಕು.  ಆದರೆ ಕಥೆಯ ಜನಪ್ರಿಯ ರೂಪದಲ್ಲಿ ಈ ಭಾಗವನ್ನು ಬಿಟ್ಟೇ ಬಿಡಲಾಗುತ್ತದೆ.  ಇಂದ್ರನ ಆಸ್ಥಾನದಲ್ಲಿ  ವಸಿಷ್ಠನೊಂದಿಗೆ ಹರಿಶ್ಚಂದ್ರನ ಸತ್ಯಸಂಧತೆಯ ಕುರಿತು ವಾಗ್ವಾದ ನಡೆಸುವಾಗ ವಿಶ್ವಾಮಿತ್ರ ಕೂಡ  ಈ ವಿಷಯ ಉಲ್ಲೇಖಿಸುವುದಿಲ್ಲ.

ಚಿತ್ರರಂಗಕ್ಕೂ ಹರಿಶ್ಚಂದ್ರನ ಕಥೆಗೂ ಗಾಢವಾದ ನಂಟಿದೆ. ಚಿತ್ರರಂಗದ ಅನೇಕ ಪ್ರಥಮಗಳಿಗೂ ಈ ಕಥೆ ಸಾಕ್ಷಿಯಾಗಿದೆ.

ಭಾರತೀಯ ಚಿತ್ರರಂಗದ ಪಿತಾಮಹನೆಂದು ಖ್ಯಾತರಾದ ದಾದಾ ಸಾಹೇಬ್ ಫಾಲ್ಕೆ 1913ರಲ್ಲಿ ನಿರ್ಮಿಸಿದ ರಾಜಾ ಹರಿಶ್ಚಂದ್ರ ಭಾರತದ ಮೊದಲ ಕಥಾಚಿತ್ರ ಎಂಬ ಖ್ಯಾತಿಗೊಳಗಾಗಿದೆ. ಲೈಫ್ ಆಫ್ ಕ್ರೈಸ್ಟ್ ಎಂಬ ಪಾಶ್ಚಾತ್ಯ ಚಿತ್ರವನ್ನು ವೀಕ್ಷಿಸುವಾಗ ನಮ್ಮ ದೇವ ದೇವರುಗಳೂ ತೆರೆಯ ಮೇಲೆ ಹೀಗೆ ಕಾಣಿಸಿದರೆ ಎಷ್ಟು ಚೆನ್ನ ಎಂಬ ಆಲೋಚನೆ ಅವರಿಗೆ ಬಂತಂತೆ. ತನ್ನದೆಲ್ಲವನ್ನೂ ಸಿನಿಮಾ ಹುಚ್ಚಿಗಾಗಿ ಮಾರಿಕೊಳ್ಳುತ್ತಿದ್ದ ಫಾಲ್ಕೆ ಅವರನ್ನು ಜನರು ಸತ್ಯ ಹರಿಶ್ಚಂದ್ರ ಎಂದು ಕರೆಯುತ್ತಿದ್ದುದರಿಂದ ರಾಮ ಅಥವಾ ಕೃಷ್ಣನ ಕಥೆಯ ಬದಲಿಗೆ ಈ ಕಥೆಯನ್ನು ಅವರು ಆಯ್ದುಕೊಂಡರಂತೆ.  ಹರಿಶ್ಚಂದ್ರನ ಪತ್ನಿ ಇಲ್ಲಿ ತಾರಾಮತಿ.  ಆಕೆಯ ಪಾತ್ರಕ್ಕೆ ಯಾವ ಸೂಕ್ತ ಸ್ತ್ರೀಯೂ  ಸಿಗದಿದ್ದುದರಿಂದ ಅಣ್ಣಾ ಸಾಲುಂಕೆ ಎಂಬ ನಟ ಆ ಪಾತ್ರದಲ್ಲಿ ನಟಿಸಿದರು.  40 ನಿಮಿಷ ಅವಧಿಯ ಈ ಚಿತ್ರ ಅಂತರ್ಜಾಲದಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸಿನಿಮಾ ರೀಲನ್ನು ವೀಕ್ಷಿಸುತ್ತಿರುವ ಫಾಲ್ಕೆ ಮತ್ತು ಅವರ ನಿರ್ದೇಶನದ ರಾಜಾ ಹರಿಶ್ಚಂದ್ರ ಚಿತ್ರದ ಒಂದು ದೃಶ್ಯ.

1917ರಲ್ಲಿ ಈ ಚಿತ್ರ ಕಲ್ಕತ್ತಾದಲ್ಲಿ ಸತ್ಯವಾದಿ ರಾಜಾ ಹರಿಶ್ಚಂದ್ರ ಎಂಬ ಹೆಸರಲ್ಲಿ ಮರುನಿರ್ಮಾಣವಾಯಿತು. ರುಸ್ತಂಜೀ ಧೋತಿವಾಲಾ ಎಂಬವರು ನಿರ್ದೇಶಿಸಿದ್ದರು. 

ಮೊದಲ ಟಾಕಿ ಚಿತ್ರ ಆಲಂ ಆರಾ ತಯಾರಾದ ಮರುವರ್ಷ ಅಂದರೆ 1932ರಲ್ಲಿ ವಿ. ಶಾಂತಾರಾಮ್ ಅವರು ತನ್ನ ಪ್ರಭಾತ್ ಕಂಪನಿಯ ಮೊದಲ ಟಾಕಿಯಾಗಿ  ಹರಿಶ್ಚಂದ್ರನ ಕಥೆಯನ್ನಾಧರಿಸಿ ಅಯೋಧ್ಯೆ ಚಾ ರಾಜಾ ಎಂಬ ಮರಾಠಿ ಚಿತ್ರ ನಿರ್ಮಿಸಿದರು. ಇದರಲ್ಲಿ ತಾರಾಮತಿಯಾಗಿದ್ದವರು ಪ್ರಸಿದ್ಧ  ನಟಿ ದುರ್ಗಾ ಖೋಟೆ.    ಈ ಕಪ್ಪು ಬಿಳುಪು ಮೂಲ ಚಿತ್ರ ಮತ್ತು ಇತ್ತೀಚೆಗೆ ತಯಾರಾದ   ಬಣ್ಣದ ಆವೃತ್ತಿ  ಎರಡೂ ಅಂತರ್ಜಾಲದಲ್ಲಿ ಇವೆ. ಪುಣೆಯ ರಾಷ್ಟ್ರೀಯ ಚಲನಚಿತ್ರ ಸಂಗ್ರಹಾಗಾರದಲ್ಲಿ ಸಂಭವಿಸಿದ  ಅಗ್ನಿ ಆಕಸ್ಮಿಕದಲ್ಲಿ ಮೊದಲ ಟಾಕಿ ಆಲಂ ಆರಾ ನಾಶವಾಗಿರುವುದರಿಂದ ಲಭ್ಯವಿರುವ ಮೊದಲ ಟಾಕಿ ಚಿತ್ರ ಎಂಬ ಹೆಗ್ಗಳಿಗೆ ಇದಕ್ಕಿದೆ.

ವಿ. ಶಾಂತಾರಾಮ್ ಅವರ ಅಯೋಧ್ಯೇಚಾ ರಾಜಾ ಚಿತ್ರದ ದೃಶ್ಯ.

1935ರಲ್ಲಿ ಟಿ.ಎ. ರಾಮನ್ ಎಂಬವರ ನಿರ್ದೇಶನದಲ್ಲಿ ತೆಲುಗು ಹರಿಶ್ಚಂದ್ರ ನಿರ್ಮಾಣವಾಯಿತು.  ಕೊಲ್ಹಾಪುರದಲ್ಲಿ ತಯಾರಾದ ಇದರಲ್ಲಿ ಮರಾಠಿ ಪ್ರಭಾವ ಹೆಚ್ಚಿತ್ತು.

1943ರಲ್ಲಿ ಎ.ವಿ.ಎಂ ಸಂಸ್ಥೆಯವರು ಆರ್ ನಾಗೇಂದ್ರರಾಯರ ನಿರ್ದೇಶನದಲ್ಲಿ ಕನ್ನಡ ಹರಿಶ್ಚಂದ್ರ ನಿರ್ಮಿಸಿದರು.  ಸುಬ್ಬಯ್ಯ ನಾಯ್ಡು ಹರಿಶ್ಚಂದ್ರ, ಲಕ್ಷ್ಮೀ ಬಾಯಿ ಚಂದ್ರಮತಿ, ಸ್ವತಃ ನಾಗೇಂದ್ರ ರಾವ್ ವಿಶ್ವಾಮಿತ್ರನಾಗಿ ಕಾಣಿಸಿಕೊಂಡರು. ಜಗದೋದ್ಧಾರನ ಖ್ಯಾತಿಯ ಪ್ರಸಿದ್ಧ ಗಾಯಕ ಬಿ.ಎಸ್. ರಾಜಯ್ಯಂಗಾರ್ ನಾರದನ ಪಾತ್ರದಲ್ಲಿ ನಟಿಸಿದ್ದು ಈ ಚಿತ್ರದ ವಿಶೇಷ. ಈ ಚಿತ್ರಕ್ಕೆ ತಮಿಳು ಭಾಷೆಯ ಸಂಭಾಷಣೆಗಳು ಅಳವಡಿಸಲ್ಪಟ್ಟು ಇನ್ನೊಂದು ಭಾಷೆಗೆ ಡಬ್ ಆದ ಮೊದಲ ಭಾರತೀಯ ಚಿತ್ರ ಎಂಬ ದಾಖಲೆ ನಿರ್ಮಾಣವಾಯಿತು.  ಈಗ ಅಂತರ್ಜಾಲದಲ್ಲಿ ಲಭ್ಯವಿರುವ ಈ ಚಿತ್ರದ  ಒಂದಷ್ಟು ಭಾಗದಲ್ಲಿ ತಮಿಳು ಸಂಭಾಷಣೆಗಳಿವೆ!  ಹರಿಶ್ಚಂದ್ರ ಕಾಶಿಗೆ ತಲುಪಿದೊಡನೆ ವಿಶ್ವನಾಥನ ಎದುರು ಹಾಡುವ ಹಾಡು ಭುವನೇಶ್ವರಿಯ ನೆನೆ ಮಾನಸವೇ ಧಾಟಿಯಲ್ಲಿದೆ.

ಆರ್. ನಾಗೇಂದ್ರರಾಯರು ನಿರ್ದೇಶಿಸಿ  ನಟಿಸಿದ 1943ರ ಹರಿಶ್ಚಂದ್ರ ಚಿತ್ರದ ದೃಶ್ಯ.

1955ರಲ್ಲಿ ಮಲಯಾಳಂ ಭಾಷೆಯ ಹರಿಶ್ಚಂದ್ರ ತಯಾರಾಯಿತು. ಇದರಲ್ಲಿ  ಪಿ.ಬಿ. ಶ್ರೀನಿವಾಸ್ ಹಾಡಿದ ಮಹಾನ್ ತ್ಯಾಗಮೇ ಎಂಬ ಹಾಡೊಂದಿದ್ದು  ಇದು ಅವರ ಮೊದಲ ಮಲಯಾಳಂ ಹಾಡು.

1960ರಲ್ಲಿ ಎಸ್.ವಿ. ರಂಗರಾವ್, ಲಕ್ಷ್ಮೀರಾಜ್ಯಂ, ರೇಲಂಗಿ ಮುಂತಾದವರು ಮುಖ್ಯ ಪಾತ್ರಗಳಲ್ಲಿದ್ದ ತೆಲುಗು ಹರಿಶ್ಚಂದ್ರ ಚಿತ್ರ ತಯಾರಾಯಿತು. ಎಸ್. ದಕ್ಷಿಣಾಮೂರ್ತಿ ಅವರ ಸಂಗೀತವಿತ್ತು.  

1963ರಲ್ಲಿ  ಚಿತ್ರರಂಗದ ಹಳೆ ಹುಲಿ ಎಂದು ಖ್ಯಾತರಾಗಿದ್ದ ಪೃಥ್ವಿರಾಜ್ ಕಪೂರ್ ಹರಿಶ್ಚಂದ್ರನ ಪಾತ್ರದಲ್ಲಿ ಕಾಣಿಸಿಕೊಂಡ ಹಿಂದಿ ಹರಿಶ್ಚಂದ್ರ ತಾರಾಮತಿ ಚಿತ್ರ ಬಂತು. ಇದರ ಸಂಗೀತ ನಿರ್ದೇಶಕರು ಆಗ ತಾನೇ ಪಾರಸ್ ಮಣಿ ಚಿತ್ರದ ಮೂಲಕ ಪ್ರಸಿದ್ಧರಾಗತೊಡಗಿದ್ದ ಲಕ್ಸ್ಮೀಕಾಂತ್ ಪ್ಯಾರೇಲಾಲ್. ಅವರ ನಿರ್ದೇಶನದಲ್ಲಿ ಹೇಮಂತ್ ಕುಮಾರ್ ಹಾಡಿದ ಏಕೈಕ  ಹಾಡು ಜಗತ್ ಭರ್ ಕೀ ರೋಶನೀ ಕೆ ಲಿಯೆ ಎಂಬ ಹಾಡು ಇದರಲ್ಲಿತ್ತು.  ಲತಾ ಧ್ವನಿಯ ಮೈ ಎಕ್ ನನ್ಹಾ ಸಾ ಬಚ್ಚಾ ಹೂಂ ಎಂಬ ಹಾಡು ಸಾಕಷ್ಟು ಜನಪ್ರಿಯವಾಗಿ ಬಿನಾಕಾ ಗೀತ್ ಮಾಲಾದಲ್ಲೂ ಕೇಳಿಸಿತ್ತು. ಇದೇ ನಿರ್ಮಾಪಕರು 1970ರಲ್ಲಿ ಪ್ರದೀಪ್ ಕುಮಾರ್ ಅವರನ್ನು ಹರಿಶ್ಚಂದ್ರನನ್ನಾಗಿಸಿ ಮತ್ತೆ ಆ ಚಿತ್ರವನ್ನು ನಿರ್ಮಿಸಿದರು.  ಈ ಸಲ ಸಂಗೀತ ನಿರ್ದೇಶನ ಹೃದಯನಾಥ್ ಮಂಗೇಶ್ಕರ್ ಅವರದಾಗಿತ್ತು.  1955ರಲ್ಲಿ ಮರಾಠಿ ಚಿತ್ರರಂಗ ಪ್ರವೇಶಿಸಿದ್ದ ಅವರ ಮೊದಲ ಹಿಂದಿ ಚಿತ್ರ ಇದಾಗಿರಲೂಬಹುದು.

ಪೃಥ್ವೀರಾಜ್ ಕಪೂರ್ ಹರಿಶ್ಚಂದ್ರನಾಗಿ ನಟಿಸಿದ್ದ ಹರಿಶ್ಚಂದ್ರ ತಾರಾಮತಿ ಹಿಂದಿ ಚಿತ್ರದ ದೃಶ್ಯ.

1968ರಲ್ಲಿ ಶಿವಾಜಿ ಗಣೇಶನ್, ವರಲಕ್ಷ್ಮೀ ಮುಂತಾದವರು ನಟಿಸಿದ್ದ ತಮಿಳು ಹರಿಶ್ಚಂದ್ರ ತೆರೆ ಕಂಡಿತು. ಇದರಲ್ಲಿ ಹರಿಶ್ಚಂದ್ರನ ಪುತ್ರನ ಹೆಸರು ಲೋಹಿದಾಸ. 70ರ ದಶಕದಲ್ಲೂ ತೆಲುಗಿನಲ್ಲಿ ಸಿ.ಎಸ್. ರಾವ್ ನಿರ್ದೇಶನದಲ್ಲಿ ಒಂದು ಕಲರ್ ಸತ್ಯ ಹರಿಶ್ಚಂದ್ರ ತಯಾರಾಯಿತು.

1965ರ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ರಾಜಕುಮಾರ್, ಪಂಢರಿಬಾಯಿ ಮತ್ತು ಬೇಬಿ ಪದ್ಮಿನಿ.

ಇವೆಲ್ಲಕ್ಕಿಂತ ಮಿಗಿಲಾಗಿ 1965ರಲ್ಲಿ ವಿಜಯಾ ಸಂಸ್ಥೆಯವರು ಕನ್ನಡ ಮತ್ತು ತೆಲುಗಿನಲ್ಲಿ ಏಕ ಕಾಲದಲ್ಲಿ ಆದರೆ ವಿಭಿನ್ನ ತಾರಾಗಣದೊಡನೆ ನಿರ್ಮಿಸಿದ ಸತ್ಯ ಹರಿಶ್ಚಂದ್ರವೇ ನಾವೀಗ ಮುಖ್ಯವಾಗಿ ಚರ್ಚಿಸಲಿರುವ ಚಿತ್ರ. ಈ ಹಿಂದೆ ವಿಜಯಾ ಸಂಸ್ಥೆಯವರು ತಮ್ಮ ಮಾಯಾಬಜಾರ್ ಮತ್ತು ಜಗದೇಕವೀರನ ಕಥೆ ತೆಲುಗು ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿದ್ದರು.  ಆದರೆ 60ರ ದಶಕದಲ್ಲಿ ಡಬ್ಬಿಂಗ್ ವಿರುದ್ಧ ಪ್ರಬಲ ಪ್ರತಿರೋಧ ವ್ಯಕ್ತವಾಗತೊಡಗಿದ ಹಿನ್ನೆಲೆಯಲ್ಲಿ ಈ ರೀತಿ ಬೇರೆ ಬೇರೆಯಾಗಿ ನಿರ್ಮಿಸುವ ನಿರ್ಧಾರ ಕೈಗೊಂಡಿರಬಹುದು.  ಕನ್ನಡದಲ್ಲಿ ರಾಜಕುಮಾರ್, ಪಂಡರಿಬಾಯಿ, ನರಸಿಂಹರಾಜು, ಉದಯಕುಮಾರ್, ಅಶ್ವತ್ಥ್, ಎಂ.ಪಿ. ಶಂಕರ್ ಮುಂತಾದವರು ಮುಖ್ಯ ಪಾತ್ರಗಳಲ್ಲಿದ್ದರೆ ತೆಲುಗಿನಲ್ಲಿ ಎನ್.ಟಿ. ರಾಮರಾವ್,  ವರಲಕ್ಷ್ಮೀ,  ಮುಕ್ಕಾಮಲ, ರಮಣ ರೆಡ್ಡಿ ಮುಂತಾದವರು ನಟಿಸಿದ್ದರು.  ಕನ್ನಡದಲ್ಲಿ ಸಂಭಾಷಣೆ, ಹಾಡುಗಳ ಹೊಣೆ ಹೊತ್ತವರು ಹುಣಸೂರು ಕೃಷ್ಣಮೂರ್ತಿ.  ತೆಲುಗಿನಲ್ಲಿ ಪಿಂಗಳಿ ನಾಗೇಂದ್ರ ರಾವ್. ಕನ್ನಡದಲ್ಲಿ ನಿರ್ದೇಶಕರೂ ಹುಣಸೂರರೇ ಆದರೂ ತೆಲುಗಿನಲ್ಲಿ ಕೆ.ವಿ.ರೆಡ್ಡಿ ಅವರ ಹೆಸರಿದೆ. ಪಾತ್ರಗಳ ವೇಷ ಭೂಷಣ,  ಹಾವ ಭಾವ, ಆಗಮನ ನಿರ್ಗಮನ, ಸಂಭಾಷಣೆ ಒಪ್ಪಿಸುವ ರೀತಿ ಎಲ್ಲವೂ ಕನ್ನಡಿಯೊಳಗಿನ ಬಿಂಬ ಪ್ರತಿಬಿಂಬದಂತೆ ಇವೆ. ಹೀಗಾಗಿ ಕನ್ನಡವನ್ನು ತೆಲುಗು ಅನುಸರಿಸಿತೋ ಅಥವಾ ತೆಲುಗನ್ನು ಕನ್ನಡವೋ ಹೇಳುವುದು ಕಷ್ಟ. ಆದರೆ ರಾಜಕುಮಾರ್ ಪಾತ್ರ ನಿರ್ವಹಣೆಯ ಮುಂದೆ ತನ್ನದು ಸಪ್ಪೆ ಎಂದು ಸ್ವತಃ ಎನ್.ಟಿ.ಆರ್ ಒಪ್ಪಿ ರಾಜ್ ಅವರನ್ನು ಅಪ್ಪಿಕೊಂಡಿದ್ದರಂತೆ. ಈ ಚಿತ್ರದ ನಕ್ಷತ್ರಿಕನ ಪಾತ್ರ ನರಸಿಂಹರಾಜು ಅವರಿಗೆ ಹೇಳಿ ಮಾಡಿಸಿದಂಥದ್ದು. ಚಂದ್ರಮತಿ ಮತ್ತು ಲೋಹಿತಾಶ್ವನನ್ನು ಕೊಂಡುಕೊಳ್ಳುವ ಕಾಲಕೌಶಿಕನ ಪಾತ್ರದಲ್ಲಿ ಬಾಲಕೃಷ್ಣ ಇದ್ದಿದ್ದರೆ ಗಯ್ಯಾಳಿ ಕಲಹಕಂಠಿಯಾಗಿದ್ದ ರಮಾದೇವಿಗೆ ಸರಿಯಾದ ಈಡುಜೋಡಾಗುತ್ತಿತ್ತು. ಆದರೆ ಇಲ್ಲಿ ಎಂ.ಎಸ್. ಸುಬ್ಬಣ್ಣ ಆ ಪಾತ್ರದಲ್ಲಿದ್ದಾರೆ. ಅವರ ನಿರ್ವಹಣೆಯೂ  ಚೆನ್ನಾಗಿಯೇ ಇದೆ. ಇವರು ಉತ್ತಮ ಮೇಕಪ್ ಕಲಾವಿದ ಕೂಡ ಆಗಿದ್ದು ಮೇಕಪ್ ಸುಬ್ಬಣ್ಣ ಎಂದು ಕರೆಸಿಕೊಳ್ಳುವುದೇ ಹೆಚ್ಚು. ಆಗಲೇ ತಾಯಿಯ ಪಾತ್ರಗಳಿಗೆ ಬ್ರಾಂಡ್ ಆಗಿದ್ದ ಪಂಡರಿಬಾಯಿ ಅವರನ್ನು ಚಂದ್ರಮತಿಯ ರೂಪದಲ್ಲಿ ರಾಜ್‌ಕುಮಾರ್ ಎದುರು ನಾಯಕಿಯಾಗಿ ಆರಿಸಿದ್ದು ಒಂದು ಅಚ್ಚರಿಯ ಆದರೆ ಅತ್ಯಂತ ಸೂಕ್ತ ನಿರ್ಧಾರವೇ. ರಾಜ್ ಅವರ ಮೊದಲ ಚಿತ್ರ ಬೇಡರ ಕಣ್ಣಪ್ಪ ಚಿತ್ರದಲ್ಲಿ ಪಂಡರಿಬಾಯಿಯೇ ನಾಯಕಿಯಾಗಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.  ಹುಣಸೂರರ ಅಳಿಯ ದ್ವಾರಕೀಶ್ ಕಾಲಕೌಶಿಕನ ಶಿಷ್ಯನೊಬ್ಬನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯಾ ಸಂಸ್ಥೆಯ ಕಾಯಂ ಛಾಯಾಗ್ರಾಕರಾಗಿದ್ದವರು ಮಾರ್ಕಸ್ ಬಾರ್ಟ್ಲೆ ಎಂಬವರು. ಆದರೆ ಈ ಚಿತ್ರಕ್ಕೆ  ಕನ್ನಡದಲ್ಲಿ ಮಾಧವ ಬುಲ್‌ಬುಲೆ, ತೆಲುಗಿನಲ್ಲಿ ಕಮಲ್ ಘೋಷ್ ಆ ಹೊಣೆ ಹೊತ್ತರು. ಈ ರೀತಿ ಛಾಯಾಗ್ರಾಹಕರು ಬೇರೆ ಬೇರೆ ಇರುವುದರಿಂದ ಎರಡು ಭಾಷೆಯ ದೃಶ್ಯಗಳನ್ನು ಸರದಿಯಂತೆ ಒಟ್ಟೊಟ್ಟಿಗೆ ಚಿತ್ರಿಸದೆ ಸೆಟ್ಟುಗಳನ್ನು ಹಾಗೆಯೇ ಇಟ್ಟುಕೊಂಡು ಪ್ರತ್ಯೇಕವಾಗಿ ಚಿತ್ರಿಸಿದ್ದರು ಎಂದು ಊಹಿಸಬಹುದು. ರಾಘವಾಂಕನ  ಕಾವ್ಯವನ್ನಾಧರಿಸಿದ ಈ ಚಿತ್ರದಲ್ಲಿ  ಹರಿಶ್ಚಂದ್ರನ ಪತ್ನಿಯ ಹೆಸರು ಉತ್ತರಭಾರತದ ಚಿತ್ರಗಳಲ್ಲಿದ್ದಂತೆ ತಾರಾಮತಿ ಎಂದಿರದೆ ಚಂದ್ರಮತಿ  ಎಂದಿತ್ತು.  ಪುತ್ರ ಲೋಹಿತಾಶ್ವ ಅಥವಾ ರೋಹಿತಾಶ್ವ ಆಗಿರದೆ ಲೋಹಿತಾಸ್ಯ ಆಗಿದ್ದ.  ಪುರಾಣ ಭಾರತ ಕೋಶ ಮತ್ತು ಪುರಾಣ ನಾಮ ಚೂಡಾಮಣಿಗಳಲ್ಲಿ ಲೋಹಿತಾಸ್ಯ ಎಂಬ ಹೆಸರು ಉಕ್ತವಾಗಿಲ್ಲ. ಈ ಪಾತ್ರದಲ್ಲಿದ್ದದ್ದು ಬೇಬಿ ಪದ್ಮಿನಿ.

ಚಿತ್ರದ ಸಂಗೀತ ನಿರ್ದೇಶಕರು ಪೆಂಡ್ಯಾಲ ನಾಗೇಶ್ವರ ರಾವ್. ರಾಜಕುಮಾರ್ ಅವರ ಅಧಿಕೃತ ಧ್ವನಿಯಾಗಿ ಪಿ.ಬಿ. ಶ್ರೀನಿವಾಸ್ ಗುರುತಿಸಲ್ಪಟ್ಟಿದ್ದರೂ ಈ ಚಿತ್ರದಲ್ಲಿ ಅವರಿಗಾಗಿ ಘಂಟಸಾಲ ಎಲ್ಲ ಹಾಡುಗಳನ್ನು ಹಾಡಿದರು. ಅದಕ್ಕೆ ಮೊದಲು ಓಹಿಲೇಶ್ವರ, ಹರಿಭಕ್ತ, ಸತಿಶಕ್ತಿ, ಗಾಳಿ ಗೋಪುರ, ಮುರಿಯದ ಮನೆ ಮುಂತಾದ ಚಿತ್ರಗಳಲ್ಲಿ ಕೂಡ ಘಂಟಸಾಲ ಅವರು ರಾಜ್ ಧ್ವನಿಯಾಗಿದ್ದುದರಿಂದ ಇದೇನೂ ಅಸಹಜ ಅನ್ನಿಸಲಿಲ್ಲ. 60ರ ದಶಕದ ಕೊನೆ ವರೆಗೆ ಈ ಚಿತ್ರದ ಹಾಡುಗಳೆಲ್ಲ ರೇಡಿಯೊ ನಿಲಯಗಳಿಂದ ಆಗಾಗ ಪ್ರಸಾರವಾಗುತ್ತಿದ್ದವು.  70ರ ದಶಕದಲ್ಲಿ ರೇಡಿಯೊ ಸೇರಿದಂತೆ ಮಾಧ್ಯಮಗಳೆಲ್ಲ  ಒಂದಿಬ್ಬರು ಗಾಯಕರ ಅತಿಯಾದ ಓಲೈಕೆ ಆರಂಭಿಸಿದಾಗ ಇತರ ಹಳೆ ಹಾಡುಗಳೊಂದಿಗೆ  ಇವುಗಳೂ ಹಿನ್ನೆಲೆಗೆ ಸರಿದವು.  ಆದರೆ 80ರ ದಶಕದಲ್ಲಿ ಎಚ್.ಎಂ.ವಿ ಸಂಸ್ಥೆಯವರು ಮತ್ತೆ ಹಳೆ ಚಿತ್ರಗಳ ಹಾಡುಗಳನ್ನು ಕ್ಯಾಸೆಟ್ ರೂಪದಲ್ಲಿ ಬಿಡುಗಡೆ ಮಾಡಲಾರಂಭಿಸಿದರು. ಖ್ಯಾತ ಧ್ವನಿಮುದ್ರಿಕೆಗಳ ಸಂಗ್ರಹಣಕಾರ ವಿ.ಎ.ಕೆ ರಂಗರಾವ್(ಗಮನಿಸಿ - ಎಂ. ರಂಗರಾವ್ ಅಲ್ಲ) ಅವರ ಮುತುವರ್ಜಿಯಲ್ಲಿ ಸತ್ಯ ಹರಿಶ್ಚಂದ್ರ  ಚಿತ್ರದ ಪ್ರಮುಖ ಸಂಭಾಷಣೆ,  ಕಂದಪದ್ಯ, ಶ್ಲೋಕ, ಬಳಕೆಯಾದ ರಾಗಗಳ ವಿವರ ಸಮೇತ ಎಲ್ಲ ಹಾಡುಗಳನ್ನೊಳಗೊಂಡ ಕ್ಯಾಸೆಟ್  ಮಾರುಕಟ್ಟೆಗೆ ಬಂದು ಅಭಿಮಾನಿಗಳ ಸಂಗ್ರಹ ಸೇರಿತು. 

ರಾಜಕುಮಾರ್ ಅಭಿನಯದ ಕನ್ನಡ ಸತ್ಯ ಹರಿಶ್ಚಂದ್ರ ಪ್ರತೀ ಸಲ ಮರು ಬಿಡುಗಡೆಯಾದಾಗ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿತ್ತು. ಹಿಂದಿಯಲ್ಲಿ ಮುಗಲ್-ಎ-ಆಜಮ್ ಮತ್ತು ನಯಾ ದೌರ್ ಮೂಲಕ ಕಪ್ಪು ಬಿಳುಪು ಚಿತ್ರಗಳಿಗೆ   ಕೃತಕವಾಗಿ ವರ್ಣ ಸಂಸ್ಕರಣ ಮಾಡುವ ಪರಿಪಾಠ ಆರಂಭವಾಗಿತ್ತು.. ಇದರಿಂದ ಉತ್ತೇಜಿತರಾದ  ರಾಜ್ ಅಭಿಮಾನಿ ಕೆ.ಸಿ.ಎನ್ ಗೌಡ ಅವರು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸತ್ಯ ಹರಿಶ್ಚಂದ್ರವನ್ನೂ ವರ್ಣರಂಜಿತಗೊಳಿಸುವ ಸಾಹಸಕ್ಕೆ ಕೈ ಹಾಕಿದರು. ಒಂದೊಂದಾಗಿ ಪ್ರತಿ ಫ್ರೇಮಿಗೆ ಬಣ್ಣ ಬಳಿಯುವ  ಈ ಮಹಾಕಾರ್ಯವನ್ನು ಕ್ಯಾಲಿಫೋರ್ನಿಯಾದ ಗೋಲ್ಡ್ ಸ್ಟೋನ್ ಕಂಪನಿ ಕೈಗೆತ್ತಿಕೊಂಡಿತು.  ಆಡಿಯೊವನ್ನು ಈಗಿನ DTS ಸಿಸ್ಟಮಿಗೆ ಹೊಂದುವಂತೆ ಪರಿವರ್ತಿಸಲಾಯಿತು.  2008ರಲ್ಲಿ ಬಿಡುಗಡೆಯಾದ ಈ ಕಲರ್ ವರ್ಷನ್ ಥಿಯೇಟರುಗಳಲ್ಲಿ ಹೇಗೆ ನಿರ್ವಹಣೆ ಮಾಡಿತೆಂದು ಗೊತ್ತಿಲ್ಲ.  ಮಂಗಳೂರಿನಲ್ಲಿ ಕೆಲವು ದಿನ ಮಾತ್ರ ಇತ್ತೆಂದು ನೆನಪು.  ನನಗೆ ನೋಡುವ ಅವಕಾಶವಾಗಲಿಲ್ಲ. ಈಗ ಟಿ.ವಿ.ಯಲ್ಲಿ  ಆಗಾಗ ಪ್ರಸಾರವಾಗುವ ಅದನ್ನು ನೋಡಿ ನನಗೆ ಅನ್ನಿಸಿದ ಪ್ರಕಾರ  ಕಪ್ಪು ಬಿಳುಪಿನಲ್ಲಿ ಇದ್ದ ಆತ್ಮ ಕಲರಿನಲ್ಲಿ ಕಳೆದು ಹೋಗಿತ್ತು. ವೆಸ್ಟ್ರೆಕ್ಸ್ ಸೌಂಡ್ ಸಿಸ್ಟಮಿನಲ್ಲಿ ಧ್ವನಿಮುದ್ರಿತವಾಗಿದ್ದ ಮೂಲ ಆಪ್ಟಿಕಲ್  ಆಡಿಯೋದ ಸ್ಪಷ್ಟತೆ ಕೂಡ DTS ಪರಿವರ್ತನೆಯಲ್ಲಿ ಬಾಧಿತವಾಗಿತ್ತು. ಕಪ್ಪು ಬಿಳುಪನ್ನೇ ಮತ್ತೆ ನೋಡೋಣ ಎಂದರೆ ಅಂತರ್ಜಾಲದಲ್ಲಿದ್ದ ಅದು ಮಾಯವಾಗಿ ಬಿಟ್ಟಿತ್ತು.  ಅಂಗಡಿಗಳಲ್ಲಿ ಕಪ್ಪು ಬಿಳುಪಿನ CD ಹುಡುಕಾಟವೂ ವ್ಯರ್ಥವಾಯಿತು.  ಕೊನೆಗೆ ಒಂದು ಆನ್ ಲೈನ್ ಅಂಗಡಿಯಲ್ಲಿ ಕಪ್ಪು ಬಿಳುಪು CD ಲಭ್ಯ ಇರುವ ಸೂಚನೆ ಸಿಕ್ಕಿತು.  ತಡ ಮಾಡದೆ  ಆರ್ಡರ್ ಮಾಡಿದರೆ  ಅದು ಔಟ್ ಆಫ್ ಸ್ಟಾಕ್ ಎಂದು ದುಡ್ಡು ಹಿಂದೆ ಬಂತು! ಸುಮಾರು ಎರಡು ವರ್ಷದ ಪ್ರಯತ್ನದ ನಂತರ ಇತ್ತೀಚೆಗೆ ಫೇಸ್ ಬುಕ್ ಫ್ರೆಂಡ್ ಒಬ್ಬರ ಮೂಲಕ ಕಪ್ಪು ಬಿಳುಪು CD ನನ್ನ ಕೈ ಸೇರಿ ಸ್ಪಟಿಕದಂತೆ ಸ್ಪಷ್ಟವಾದ ಆಡಿಯೊ ಆಲಿಸುವ ನನ್ನ ಬಹುಕಾಲದ ಬಯಕೆ ನೆರವೇರಿದಂತಾಗಿ ಈ ಹಿಂದೆ ಒಮ್ಮೆ ಬೆಂಗಳೂರಿನ ಶಾಂತಿ, ಮತ್ತೊಮ್ಮೆ ಮಂಗಳೂರಿನ ಪ್ಲಾಟಿನಮ್ ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಿದ್ದ ಚಿತ್ರ ನೋಡಿದ್ದ ನೆನಪು ಮರುಕಳಿಸಿತು. ಈ ಮೂಲಕ ಫೇಸ್ ಬುಕ್ ಮಿತ್ರರೆಲ್ಲ ಲೈಕ್ ಒತ್ತಿ ಕಮೆಂಟ್ ಬರೆಯಲು ಮಾತ್ರ ಇರುವವರಲ್ಲ ಎಂದೂ ಸಾಬೀತಾಯಿತು.  

ಈಗ ಮೂಲ ಕಪ್ಪು ಬಿಳುಪು ಚಿತ್ರದಿಂದ ಧ್ವನಿಮುದ್ರಿಸಿದ  ಹಾಡುಗಳನ್ನು ಅವುಗಳ ವಿಶೇಷತೆ ಗಮನಿಸುತ್ತಾ  ಆಲಿಸೋಣ. ಅನುಕೂಲ ಇದ್ದರೆ ಹೆಡ್ ಫೋನ್ ಬಳಸಿ. ನಿಮ್ಮಲ್ಲಿ ಕಲರ್ ಚಿತ್ರದ CD ಇದ್ದರೆ ಅಥವಾ ಸುವರ್ಣ ವಾಹಿನಿಯಲ್ಲಿ ಅದನ್ನು ನೋಡಿದ್ದರೆ ಆಡಿಯೋ ಗುಣಮಟ್ಟವನ್ನು ಹೋಲಿಸಿ ನೋಡಿ.  ಇನ್ನು ಮುಂದೆ ಯಾರಾದರೂ ಕಪ್ಪು ಬಿಳುಪು ಚಿತ್ರಗಳನ್ನು ಕಲರ್ ಮಾಡುವುದಿದ್ದರೆ ಮೂಲ ಆಪ್ಟಿಕಲ್ ಸೌಂಡ್ ಟ್ರಾಕನ್ನು ಹಾಗೆಯೇ ಉಳಿಸಿಕೊಳ್ಳಿ ಎಂದು ನನ್ನ ವಿನಮ್ರ ವಿನಂತಿ.

01. ವಂದೇ ಸುರಾಣಾಂ

ಚಿತ್ರ ಆರಂಭವಾಗುವುದು ಕುಲದೇವರ ಎದುರು ಹರಿಶ್ಚಂದ್ರ ಹಾಡುವ ಈ ಶ್ಲೋಕದಿಂದ.  ಬಹುತೇಕ ಕನ್ನಡ ಚಿತ್ರಗಳಲ್ಲಿ ಟೈಟಲ್ಸ್ ಆರಂಭವಾಗುವ ಮೊದಲು ದೇವರ ವಿಗ್ರಹದೆದುರು ಹೂ ಹಣ್ಣು ಕಾಯಿ ಇಟ್ಟು ಅಗರಬತ್ತಿ ಹೊತ್ತಿಸಿರುವ ದೃಶ್ಯದೊಡನೆ ಒಂದು ಶ್ಲೋಕ ಇದ್ದೇ ಇರುತ್ತದೆ.  ಆದರೆ ಈ ಶ್ಲೋಕ ಟೈಟಲ್ಸ್ ಮುಗಿದು ಚಿತ್ರ ಆರಂಭವಾಗುವಾಗ ಇರುವುದು. ಆರಭಿ ರಾಗದ ಈ ಶ್ಲೋಕವನ್ನು ನಾನು ಎಷ್ಟು ಸಮಾರಂಭಗಳಲ್ಲಿ ಪ್ರಾರ್ಥನೆಯಾಗಿ ಮತ್ತು ಭೋಜನ ಸಮಾರಂಭಗಳಲ್ಲಿ ಚೂರ್ಣಿಕೆಯಾಗಿ ಹಾಡಿ ಮೆಚ್ಚುಗೆ ಗಳಿಸಿದ್ದೇನೆಂದು ಲೆಕ್ಕವಿಲ್ಲ. ಈ ಚಿತ್ರದ ಟೈಟಲ್ಸ್ ಜೊತೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೊದಲು ಕಲಿಯುವ ಮಾಯಾಮಾಳವಗೌಳ ರಾಗದ ಸರಳ ವರಸೆ ಜಂಟಿ ವರಸೆಗಳು ಇರುವುದು ಒಂದು ವಿಶೇಷ.

 02. ತಿಲ್ಲಾನ

ದೇವೇಂದ್ರನ ಆಸ್ಥಾನದಲ್ಲಿ ವಿಶ್ವಾಮಿತ್ರ ಮತ್ತು ವಸಿಷ್ಠರ ನಡುವೆ ಜಿದ್ದಾಜಿದ್ದಿ ಆರಂಭವಾಗುವ ಮೊದಲು ಮೇನಕೆ ನರ್ತಿಸುತ್ತಿರುವ ತಿಲ್ಲಾನ ಇದು. ಸಾರಮತಿ ರಾಗದಲ್ಲಿ ಪಿ. ಲೀಲಾ ಹಾಡಿದ ಇದರಲ್ಲಿ ಚಿತ್ರದ ನೃತ್ಯ ನಿರ್ದೇಶಕ ಪಸುಮರ್ತಿ ಕೃಷ್ಣಮೂರ್ತಿ ಅವರ ಚುರುಕು ನಾಲಗೆಯ ಜತಿಗಳಿವೆ. ಕುಳಿತ ಹಕ್ಕಿ ಹಾರುವಂತೆ ಮೃದಂಗ ನುಡಿಸಿದ ವಿದ್ವಾಂಸ ಯಾರೆಂದು ತಿಳಿಯದು.  ಸಾಮಾನ್ಯ ನೃತ್ಯ ಪ್ರದರ್ಶನಗಳಲ್ಲಿ ತಿಲ್ಲಾನ ಪ್ರದರ್ಶಿಸುವಾಗ ಮೊದಲ ಸಾಲನ್ನು ಕೇಳುಗರಿಗೆ ಬೋರಾಗುವಷ್ಟು ಬಾರಿ ಪುನರಾವರ್ತನೆ ಮಾಡುತ್ತಾರೆ.  ಆದರೆ ಇಲ್ಲಿ ಹಾಗೆ ಮಾಡದೆ ವಿವಿಧ ವಾದ್ಯಗಳನ್ನು ಬಳಸಿದ ವೈವಿಧ್ಯ ಇದೆ.  ಕಲರ್ ಚಿತ್ರದಲ್ಲಿ ಈ ಹಾಡಿನ ಒಂದು ತುಣುಕಷ್ಟೇ ಇದೆ.

03. ನೀನು ನಮಗೆ ಸಿಕ್ಕಿ ಬಿದ್ದೆಯೋ

ಹರಿಶ್ಚಂದ್ರನನ್ನು ಬಲೆಗೆ ಬೀಳಿಸಲು ವಿಶ್ವಾಮಿತ್ರ ಸೃಷ್ಟಿಸಿದ ಮಾತಂಗ ಕನ್ಯೆಯರ ಜಾನಪದ ಶೈಲಿಯ ಹಾಡಿದು.  ಪಿ. ಲೀಲಾ ಮತ್ತು ಪಿ. ಸುಶೀಲಾ ಹಾಡಿದ್ದಾರೆ.  ಡೋಲು, ತಮ್ಮಟೆ, ಕೊಳಲು ಮುಂತಾದ ಜಾನಪದ ವಾದ್ಯಗಳನ್ನೇ ಬಳಸಲಾಗಿದೆ.

04. ಏನಿದೀ ಗ್ರಹಚಾರವೋ

ಕೋಲು ಕೊಟ್ಟು ಹೊಡೆಸಿಕೊಂಡಂತೆ ವಿಶ್ವಾಮಿತ್ರ ಕೇಳದಿದ್ದರೂ ರಾಜ್ಯವನ್ನು ಬಿಟ್ಟುಕೊಡುತ್ತೇನೆಂದು ಹರಿಶ್ಚಂದ್ರ ತಾನಾಗಿಯೇ ಹೇಳಿ ಸತಿಸುತರ ಜೊತೆ ಕಾಡಿಗೆ ತೆರಳುವಾಗ  ವಸೂಲಿಗಾಗಿ ಅವರನ್ನು ಹಿಂಬಾಲಿಸುವ ನಕ್ಷತ್ರಿಕ ನರಸಿಂಹರಾಜುವಿನ ಈ ಹಾಡು ಘಂಟಸಾಲ ಹಾಡಿರುವುದು.  ಆತ ತನ್ನ ಕಷ್ಟಗಳನ್ನೇ ಹೇಳಿಕೊಳ್ಳುವುದಾದರೂ ಅಪರೋಕ್ಷವಾಗಿ ಇದು ಹರಿಶ್ಚಂದ್ರನ ಕಷ್ಟಗಳ ಪ್ರತಿಧ್ವನಿಯೂ ಹೌದು.

05. ಆನಂದ ಸದನ

ಸುಖ ಸೌಭಾಗ್ಯದ ಕೊನೆಯ ಗುಟುಕಾಗಿ  ರಾಜಕುಮಾರ ಲೋಹಿತಾಸ್ಯನನ್ನು  ಅರಮನೆಯಲ್ಲಿ ಓಲೈಸುವ   ಅಂದದ ಈ ಹಾಡು ಪಿ. ಸುಶೀಲಾ ಅವರ ಧ್ವನಿಯಲ್ಲಿದೆ. ಹೆಡ್ ಫೋನ್ ಬಳಸಿದರೆ ತಬಲಾ ಎಡದ ಕುಸುರಿ ಕೆಲಸವನ್ನೂ ಆಲಿಸಬಹುದು. ಚಿತ್ರದ ಅಂತಿಮ ಭಾಗದಲ್ಲಿ ಪಿ. ಲೀಲಾ ಧ್ವನಿಯಲ್ಲಿ ಈ ಹಾಡಿನ sad version ಕೂಡ ಇದೆ. 

06. ನಮೋ ಭೂತನಾಥ

ಕಾಶಿ ತಲುಪಿದೊಡನೆ ಹರಿಶ್ಚಂದ್ರನು ವಿಶ್ವನಾಥನನ್ನು ಸ್ತುತಿಸುವ ದರ್ಬಾರಿ ಕಾನಡಾ ರಾಗಾಧಾರಿತ ಜನಪ್ರಿಯ ಹಾಡಿದು.  ಘಂಟಸಾಲ, ಪಿ. ಲೀಲಾ ಹಾಡಿದ್ದಾರೆ.  ಘಂಟಸಾಲ ಅವರು ಪೆಂಡ್ಯಾಲ ಅವರದೇ ನಿರ್ದೇಶನದಲ್ಲಿ ಜಗದೇಕವೀರನ ಕಥೆ ಚಿತ್ರದಲ್ಲಿ ಹಾಡಿದ ಇದೇ ರಾಗದ ಶಿವಶಂಕರಿಗೆ ಹೋಲಿಸಿದರೆ ಇದು ಬಹಳ ಸರಳ ರಚನೆ ಅನಿಸುತ್ತದೆ. ಇದರಲ್ಲಿ ಯಾವುದೇ ಕ್ರಿಯಾಪದವಿಲ್ಲದೆ ಸಂಸ್ಕೃತ ವಿಶೇಷಣಗಳು ಮಾತ್ರ ಇರುವುದರಿಂದ ಇದು ಯಾವ ಭಾಷೆಗೂ ಸಲ್ಲುತ್ತದೆ. ಹೀಗಾಗಿ ಇದನ್ನು ತೆಲುಗು ಮತ್ತು ಕನ್ನಡಕ್ಕೆಂದು ಪ್ರತ್ಯೇಕವಾಗಿ ಧ್ವನಿಮುದ್ರಿಸುವ ಅಗತ್ಯವೇ ಬಂದಿರಲಾರದು. ಆದರ್ಶ ಸತಿ ಚಿತ್ರದ ನಮೋ ನಮೋ ನಟರಾಜಾ ಇಂಥ ಇನ್ನೊಂದು ಭಾಷಾತೀತ ಹಾಡು. ಅನೇಕರಿಗೆ ಈ ಹಾಡಿನಲ್ಲಿ   ಇದೇ ರಾಗದ  ಮೊಹಬ್ಬತ್ ಕಿ ಝೂಟಿ ಕಹಾನಿ ಪೆ ರೋಯೆ ಎಂಬ ಮುಗಲ್ ಎ ಆಜಮ್ ಚಿತ್ರದ ಹಾಡಿನ  ಹೋಲಿಕೆ ಕಾಣಿಸುವುದುಂಟು. ಒಮ್ಮೆ ನಮ್ಮೂರಿಗೆ ಬಂದಿದ್ದ ಏಕ ಕಾಲದಲ್ಲಿ ಬಾಯಲ್ಲಿ ಮುಖವೀಣೆ ಮತ್ತು ಪುಂಗಿಯ ಶ್ರುತಿ, ಮೂಗಿನಲ್ಲಿ ಕೊಳಲು ನುಡಿಸುವವರೊಬ್ಬರು ಈ ಹಾಡು ನುಡಿಸಿದ್ದು ನನಗೆ ಯಾವಾಗಲೂ ನೆನಪಾಗುತ್ತಿರುತ್ತದೆ. ಅಂಜನಪ್ಪ ಎಂಬ ಇಂಥ ಕಲಾವಿದರೊಬ್ಬರ ಬಗ್ಗೆ ಒಮ್ಮೆ ಪತ್ರಿಕೆಗಳಲ್ಲಿ ಬಂದಿತ್ತು.

07. ಕಾಲಕೌಶಿಕನ ಮುಂದೆ

ವಾಸ್ತವವಾಗಿ ಅಮ್ಮಾವ್ರ ಗಂಡನಾಗಿರುವ ಕಾಲಕೌಶಿಕ ತನ್ನ ಶಿಷ್ಯರ ಮುಂದೆ ಬಡಾಯಿ ಕೊಚ್ಚಿಕೊಳ್ಳುವ ಹಾಸ್ಯಭರಿತ ಹಾಡಿದು. ಇದನ್ನು ಹಾಡಿದ್ದು ರಾಜನ್ ನಾಗೇಂದ್ರ ಜೋಡಿಯ ನಾಗೇಂದ್ರ ಎಂದು ಬಹಳ ಕಾಲ ನನಗೆ ಗೊತ್ತೇ ಇರಲಿಲ್ಲ. ತೆಲುಗಿನಲ್ಲಿ ಇದನ್ನು ಹಾಡಿದ್ದು ಮಾಧವಪೆದ್ದಿ ಸತ್ಯಂ. ವಿವಾಹ ಭೋಜನವಿದು, ಭಲೇ ಚಾನ್ಸಿದೇ ಮುಂತಾದ ಹಾಡುಗಳಲ್ಲಿ ನಾವು ನೋಡಿದಂತೆ ಅವರು ಬಹಳ ಚೆನ್ನಾಗಿ ಕನ್ನಡದಲ್ಲೂ ಹಾಡಬಲ್ಲವರಾದರೂ ರೆಕಾರ್ಡಿಂಗ್ ಸಮಯದಲ್ಲಿ ಅಲಭ್ಯರಿದ್ದುದರಿಂದ ನಾಗೇಂದ್ರ ಅವರನ್ನು ಬಳಸಿರಬಹುದೋ ಏನೋ. 

08.  ಕುಲದಲ್ಲಿ ಕೀಳ್ಯಾವುದೋ

ವೀರಬಾಹು ತನ್ನ ಸಂಗಡಿಗರೊಂದಿಗೆ ಮೊದಲ ಬಾರಿ ಕಾಣಿಸಿಕೊಳ್ಳುವ ಸನ್ನಿವೇಶದ ಬಹಳ ಜನಪ್ರಿಯವಾದ ಈ ಹಾಡನ್ನು ಘಂಟಸಾಲ ಮತ್ತಿತರರು ಬಲು ಉತ್ಸಾಹಭರಿತವಾಗಿ ಹಾಡಿದ್ದಾರೆ. ಪ್ರತಿ ಪದವು ನೇರವಾಗಿ ಮನಕ್ಕೆ ನಾಟುವಂಥ ವಾಯ್ಸ್ ಥ್ರೋ ಇರುವ ಈ ಹಾಡಲ್ಲಿ. ತಮ್ಮಟೆ, ಡೋಲುಗಳು ಮಾತ್ರ ಬಳಕೆಯಾಗಿದ್ದು ಯಾವುದೇ ತಂತಿ ಅಥವಾ  ಗಾಳಿವಾದ್ಯದ ಬಳಕೆಯಾಗದಿರುವುದು ಮತ್ತು interludeಗಳು ಇಲ್ಲದಿರುವುದು ಗಮನಾರ್ಹ. ಸರಳ ಪದಗಳಲ್ಲಿ ಹುಣಸೂರರು ಈ ಹಾಡಿನಲ್ಲಿ ಜೀವನದ ಅಂತಿಮ ಸತ್ಯವನ್ನು ತೆರೆದಿಟ್ಟಿದ್ದಾರೆ. 1960ರಲ್ಲಿ  ತೆಲುಗಿನಲ್ಲಿ ಬಂದ ಎಸ್.ವಿ. ರಂಗರಾವ್ ನಟನೆಯ ಹರಿಶ್ಚಂದ್ರ ಚಿತ್ರದ ಬಹಳಷ್ಟು ಅಂಶಗಳಿಂದ ಈ ಚಿತ್ರ ಸ್ಪೂರ್ತಿ ಪಡೆದಿರುವುದು ಕಂಡುಬರುತ್ತದೆ.  ಅದರಲ್ಲೂ ವೀರಬಾಹು  ತಮ್ಮಟೆ ನುಡಿಸುತ್ತಾ ಇದೇ ರೀತಿಯ ಹಾಡಿನೊಂದಿಗೆ ಪ್ರವೇಶಿಸುತ್ತಾನೆ.

09. ನನ್ನ ನೀನು ನಿನ್ನ ನಾನು

ವೀರಬಾಹುವಿನೆದುರು ನರ್ತಕಿಯೋರ್ವಳು ಹಾಡುವ ಇದು ಸ್ವರ್ಣಲತಾ ಅವರ ಧ್ವನಿಯಲ್ಲಿದೆ. ಮಾಯಾ ಬಜಾರ್ ಚಿತ್ರದ ಆಹಾ ನನ್ ಮದ್ವೆಯಂತೆ ಕೂಡ ಇವರೇ ಹಾಡಿದ್ದು. ಜೊತೆಗೆ ಜಗನ್ನಾಥ್ ಎಂಬವರ ಮಾತುಗಳೂ ಇವೆ. ಇದರ ಕೊನೆಯಲ್ಲಿ ಬರುವ ‘ಯೀರದಾಸ ಹೆಂಗೈತೆ’ ಎಂಬ ಸಾಲೂ ಪ್ರಾಮುಖ್ಯ ಹೊಂದಿದೆ.  ಧಣಿ ವೀರಬಾಹುವಿನ ಸೇವೆ ಮಾಡುತ್ತಾ ಅಲ್ಲೇ ಇದ್ದರೂ ಹರಿಶ್ಚಂದ್ರ ಆ ನೃತ್ಯ ನೋಡಿರುವುದಿಲ್ಲ. ಇದರ ಗ್ರಾಮೊಫೋನ್ ರೆಕಾರ್ಡಿನಲ್ಲಿ ಮಳೆಗಾಲ ಮಾಡಿಳಿದು ಬರಲಾರೆ ಆದ ಮೇಲೆ ಮೆಲ್ಲನೆ ಬಾರಯ್ಯಾ ಗೋಡೆ ಏರಿ ಎಂಬ ಸಾಲು ಇತ್ತು. ಚಿತ್ರದಲ್ಲಿರುವ ಹಾಡಲ್ಲಿ ಇದಿಲ್ಲ.  ಈ ಹಾಡಿನೊಂದಿಗೆ ತಳಕು ಹಾಕಿಕೊಂಡ ಹಳೆಯ ನೆನಪೊಂದಿದೆ. ಪುಟ್ಟ ಮಗುವಾಗಿದ್ದಾಗ ನಮ್ಮ ಅಣ್ಣನ ಮಗನೊಬ್ಬನಿಗೆ ಅಮ್ಮನನ್ನು ಕಂಡಾಗಲೆಲ್ಲ ಹಾಲುಣ್ಣುವ ಆಸೆ. ಆಗಾಗ ನಮ್ಮ ಮನೆಗೆ ಬಂದು  ಎಲೆಯಡಿಕೆ ಮೆಲ್ಲುತ್ತಾ ಪುಟ್ಟ ಮಕ್ಕಳನ್ನು ಆಡಿಸುವ ಹವ್ಯಾಸವಿದ್ದ ನೆರೆಮನೆಯ ಮಹನೀಯರೊಬ್ಬರು ‘ನನ್ನ ನೀನು ನಿನ್ನ ನಾನು ಕಾದು ಕೊಂಡು  ಅಮ್ಮು ತಿಂದೆ’ ಎಂದು ಅವನನ್ನು ಕಿಚಾಯಿಸುತ್ತಿದ್ದರು!

10. ವಿಧಿ ವಿಪರೀತ

ವಿಧಿವಿಲಾಸವನ್ನು ಬಣ್ಣಿಸುವ ಈ ವೈವಿಧ್ಯಪೂರ್ಣ ಹಾಡು ಘಂಟಸಾಲ ಮತ್ತು ಪಿ. ಲೀಲಾ ಅವರ ಧ್ವನಿಗಳಲ್ಲಿದೆ. ಚಿತ್ರದ ಅತ್ಯಂತ ದೀರ್ಘ ಹಾಡಾದ ಇದು ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದಿರಬಹುದು. ವಿವಿಧ ಭಾವಗಳ ಒಂದು ಕೊಲಾಜ್‌ನಂತಿರುವ  ಈ ಹಾಡು ಶಾರ್ಟ್ ವೇವ್ ವಿವಿಧಭಾರತಿಯ ಮಧುರಗೀತಂ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು.

11. ಶ್ರಾದ್ಧದೂಟ ಸುಮ್ಮನೆ

ಮಾಯಾ ಬಜಾರ್ ಚಿತ್ರದ ವಿವಾಹ ಭೋಜನವಿದು ಹಾಡಿನ ಜನಪ್ರಿಯತೆಯಿಂದ ಈ ಹಾಡು ಪ್ರೇರೇಪಿತವಾಗಿರಬಹುದು.  ವಿವಾಹ ಭೋಜನ ಹಾಡಿನಲ್ಲಿ ಬಣ್ಣಿಸಲ್ಪಟ್ಟ ಭಕ್ಷಗಳೆಲ್ಲ ಪರದೆಯ ಮೇಲೆ ವಸ್ತುಶಃ ಕಾಣಿಸಿಕೊಳ್ಳುತ್ತವೆ.  ಆದರೆ ಇಲ್ಲಿ ಎಲ್ಲವೂ ಮನಸ್ಸಿನ ಮಂಡಿಗೆ ಮಾತ್ರ.  ಜನಪ್ರಿಯವಾಗಬೇಕಾದರೆ  ಪ್ರಸಿದ್ಧ ಗಾಯಕರೇ ಹಾಡಬೇಕೆಂದೇನೂ ಇಲ್ಲ ಎಂದು ಸಾಬೀತುಗೊಳಿಸಿದ ಹಾಡೂ ಹೌದು ಇದು.  ಇದನ್ನು ಹಾಡಿದವರು ಹೆಸರೇ ಕೇಳಿರದ ಬಿ.ಗೋಪಾಲಂ ಎಂಬವರು ಮತ್ತು ಹೆಸರೇ ದಾಖಲಾಗದ ಇನ್ನೂ ಒಂದಿಬ್ಬರು. ಒಂದೆರಡು ಕಡೆ ನಟ ದ್ವಾರಕೀಶ್ ಅವರ ಧ್ವನಿಯನ್ನು ಕೇಳಿದಂತೆನಿಸಿತು. ಈ ಚಿತ್ರದ ಉಳಿದ ಹಾಡುಗಳಲ್ಲಿ ಭಾರತೀಯ ವಾದ್ಯಗಳನ್ನು ಮಾತ್ರ ಬಳಸಲಾಗಿದ್ದರೂ ಈ ಒಂದರಲ್ಲಿ ಫ್ಯಾಂಟಸಿಯ ಪ್ರತೀಕವಾಗಿ ಗಿಟಾರ್, ಟ್ರಂಪೆಟ್ ಇತ್ಯಾದಿಗಳೂ ಇವೆ. ಕಲರ್ ಚಿತ್ರದಲ್ಲಿ ಈ ಹಾಡಿದ್ದೂ ಒಂದು ತುಣುಕು ಮಾತ್ರ ಇರುವುದು. ಮೇಲೆ ಉಲ್ಲೇಖಿಸಿದಂತೆ ಅಡಿಗೆ ಮನೆಯಿಂದ  ಇಂಗು ತೆಂಗು ತಿರುವಿ ಬೆರೆತ ದಿವಿಹಲಸಿನ ಹುಳಿ ಕುದಿಯುತ್ತಿರುವ ಸುವಾಸನೆ ತೇಲಿ ಬರುತ್ತಿದ್ದುದು ಪದ್ಯಾವಳಿಯಲ್ಲಿ ಈ ಹಾಡು ನೋಡುತ್ತಿರುವಾಗಲೇ! ಬಹಳಷ್ಟು ಹಳೆ ಪದ್ಯಾವಳಿಗಳು ನನ್ನ ಸಂಗ್ರಹದಲ್ಲಿದ್ದರೂ ಇದೊಂದು ಈಗ ಎಲ್ಲೋ ಕಳೆದು ಹೋಗಿದೆ.


ಕೆಳಗಿನ ಪಟ್ಟಿಯಲ್ಲಿ ಕ್ಲಿಕ್ಕಿಸಿ ಇವೆಲ್ಲ ಹಾಡುಗಳನ್ನು ಒಂದೊಂದಾಗಿ ಆಲಿಸಿ.


 

Thursday 12 November 2020

ಗೂಡುದೀಪ



ಮಾರುಕಟ್ಟೆಯಲ್ಲಿ ವೈವಿಧ್ಯಮಯ ಗೂಡುದೀಪಗಳು ಕೊಳ್ಳಲು ಸಿಗುತ್ತವಾದರೂ ಈ ಸಲ ದೀಪಾವಳಿಗೆ ಸರಳ ಸಾಂಪ್ರದಾಯಿಕ ಗೂಡುದೀಪವನ್ನು ಮನೆಯಲ್ಲೇ ತಯಾರಿಸಬೇಕೆಂಬ ಉಮೇದು ನನಗೆ ಬಂತು. ಇದಕ್ಕೆ ಬಿದಿರಿನ ಸಪೂರ ಕಡ್ಡಿಗಳು ಬೇಕಾಗುತ್ತವೆ. ನಾನೆಲ್ಲಿಂದ ಅವುಗಳನ್ನು ತರಲಿ? ಅದಕ್ಕೆ ಯಾವುದು ಪರ್ಯಾಯ ಎಂದು ಯೋಚಿಸುತ್ತಿರುವಾಗ ಮನೆಯೊಳಗೆ ಸೇವೆ ಮಾಡಿ ಅರ್ಧ ಸವೆದು ಈಗ ಟೇರೇಸ್ ಗುಡಿಸಲು ಬಳಕೆಯಾಗುತ್ತಿದ್ದ ಮನೆಯಲ್ಲೇ ತಯಾರಿಸಿದ ಗಟ್ಟಿಮುಟ್ಟಾದ ತೆಂಗಿನ ಕಡ್ಡಿಗಳ ಕಸಬರಿಕೆ ಕಣ್ಣಿಗೆ ಬಿತ್ತು. ಅದರಿಂದ ಬೇಕಾಗುವಷ್ಟು ನೇರ ಕಡ್ಡಿಗಳನ್ನು ಆಯ್ದು, ತೊಳೆದು, ಅಳತೆಗೆ ತಕ್ಕಂತೆ ತುಂಡರಿಸಿ ಪ್ರಾಜೆಕ್ಟ್ ಆರಂಭಿಸಿಯೇ ಬಿಟ್ಟೆ. ಕಡ್ಡಿಗಳನ್ನು ಬಿಗಿಯಾಗಿ ಕಟ್ಟಲು ಬಳಸಿದ ಟ್ವೈನ್ ದಾರದ ಶಕ್ತಿವರ್ಧನೆ ಮಾಡಲು ಟೆಲಿಫೋನ್ ಇಲಾಖೆಯಲ್ಲಿ ಕಲಿತ ದಾರಕ್ಕೆ ಮಯಣ ಸವರುವ ವಿದ್ಯೆಯನ್ನು ಪ್ರಯೋಗಿಸಿದೆ. ಅರ್ಧ ದಿನದಲ್ಲಿ ಗೂಡುದೀಪದ ಗೂಡು ತಯಾರಾಯಿತು. ಬಣ್ಣದ ಕಾಗದ ಕತ್ತರಿಸಿ ಹಚ್ಚಲು ಇನ್ನರ್ಧ ದಿನ ಬೇಕಾಯಿತು. ಎಂದೋ ತಂದಿದ್ದ ಫೆವಿಕಾಲ್ ಲಭ್ಯ ಇದ್ದುದರಿಂದ ಹೈಸ್ಕೂಲಿನಲ್ಲಿ ಕಲಿತಂತೆ ಮೈಲುತುತ್ತು ಬೆರೆಸಿದ ಮೈದಾ ಅಂಟು ತಯಾರಿಸುವ ಅಗತ್ಯ ಬೀಳಲಿಲ್ಲ.

ನಾವೇನೋ ಈಗ ಸುಲಭವಾಗಿ ವಿದ್ಯುತ್ ದೀಪವೊಂದನ್ನು ಒಳಗಿರಿಸಿ ಗೂಡುದೀಪವನ್ನು ಮಾಡಿನ ಅಂಚಿಗೆ ನೇತು ಹಾಕುತ್ತೇವೆ. ಹಿಂದಿನ ಕಾಲದಲ್ಲಿ ಎಣ್ಣೆಯ ದೀಪವನ್ನು ಒಳಗಿರಿಸಲು ಅನುಕೂಲವಾಗುವಂತೆ ಗೂಡುದೀಪದೊಳಗೆ ಮಣ್ಣು ಮತ್ತು ಸೆಗಣಿ ಬೆರೆಸಿ ಕಟ್ಟೆಯೊಂದನ್ನು ಕಟ್ಟುತ್ತಿದ್ದರು. ನಮ್ಮಣ್ಣ ಎತ್ತರ ಪ್ರದೇಶದಲ್ಲಿರುವ ಎತ್ತರವಾದ ಮರಕ್ಕೆ ಇನ್ನೂ ಎತ್ತರವಾದ ಗಳುವೊಂದನ್ನು ಕಟ್ಟಿ ಅದರ ತುದಿಗೆ ಅಳವಡಿಸಿದ ರಾಟೆಯೊಂದರ ಮೂಲಕ ಉದ್ದವಾದ ಹಗ್ಗವೊಂದರ ಸಹಾಯದಿಂದ ಎಣ್ಣೆ ತುಂಬಿದ ದೀಪದೊಂದಿಗಿನ ಗೂಡುದೀಪವನ್ನು ಸಂಜೆ ಮನೆಯಂಗಳದಿಂದಲೇ ಮೇಲೇರಿಸಿ ಮರುದಿನ ಬೆಳಗ್ಗೆ ಕೆಳಗಿಳಿಸುವ ವ್ಯವಸ್ಥೆ ಮಾಡುತ್ತಿದ್ದರು. ಆ ಗೂಡುದೀಪ ಎಷ್ಟು ಎತ್ತರದಲ್ಲಿರುತ್ತಿತ್ತು ಎಂದು ಯಾರಾದರೂ ಕೇಳಿದರೆ ಸತ್ಯ ಹರಿಶ್ಚಂದ್ರ ಚಿತ್ರದ ನಕ್ಷತ್ರಿಕ ನರಸಿಂಹರಾಜುವಿನಂತೆ ‘ಒಂದು ಮಹೋನ್ನತವಾದ ಆನೆಯ ಮೇಲೆ ದೀರ್ಘಕಾಯನೂ ಬಲಶಾಲಿಯೂ ಆದ ಮನುಷ್ಯನೊಬ್ಬನು ನಿಂತು ಒಂದು ಕವಡೆಯನ್ನು ರಿವ್ವನೆ ಆಕಾಶಕ್ಕೆ ರಿವ್ವಿದರೆ ಎಷ್ಟು ಎತ್ತರಕ್ಕೆ ಹೋಗುತ್ತದೋ ಅಷ್ಟು’ ಎಂದು ಹೇಳಬೇಕಾದೀತು! ಕೆಲವೊಮ್ಮೆ ಅನಿರೀಕ್ಷಿತವಾಗಿ ಮಳೆ ಬಂದರೆ ರಾತ್ರೆಯೇ ಅದನ್ನು ಕೆಳಗಿಳಿಸುವ ಪ್ರಸಂಗವೂ ಬರುವುದಿತ್ತು.

ಈಗ ದೀಪಾವಳಿ ಸಮಯದಲ್ಲಷ್ಟೇ ಗೂಡುದೀಪಗಳು ಕಾಣಿಸುವುದಾದರೂ ಹಿಂದಿನ ಕಾಲದಲ್ಲಿ ಕೋಜಾಗರಿ ಹುಣ್ಣಿಮೆಯಿಂದ ಮೊದಲುಗೊಂಡು ದೀಪಾವಳಿ ನಂತರದ ಕಾರ್ತೀಕ ಹುಣ್ಣಿಮೆವರೆಗೂ ಗೂಡುದೀಪ ಇರಿಸುವ ಪದ್ಧತಿ ಇತ್ತು. ಈ ಸಮಯದಲ್ಲಿ ಪಿತೃಲೋಕದಲ್ಲಿ ಅಂಧಕಾರ ಕವಿದಿರುವುದರಿಂದ ಪೂರ್ವಜರಿಗೆ ಈ ಮೂಲಕ ಬೆಳಕು ಲಭಿಸಲಿ ಎಂಬುದು ಇದರ ಹಿಂದಿರುವ ನಂಬುಗೆ. ಇದು ಹಗಲು ಸಣ್ಣದಾಗುತ್ತಾ ಹೋಗಿ ಇರುಳು ದೊಡ್ಡದಾಗುವ ಕಾಲವಾಗಿರುವುದು ಈ ನಂಬುಗೆಯ ವೈಜ್ಞಾನಿಕ ಹಿನ್ನೆಲೆ ಇರಬಹುದು. ದೀಪಾವಳಿಯ ಹಣತೆಗಳು, ಕಾರ್ತೀಕ ದೀಪೋತ್ಸವ ಇವೆಲ್ಲವೂ ಇದಕ್ಕೆ ಪೂರಕ. ಗೂಡುದೀಪವನ್ನು ಏರಿಸುವಾಗ
ದಾಮೋದರಾಯ ನಭಸಿ ತುಲಾಯಾಂದೋಲಯಾ ಸಹ|
ಪ್ರದೀಪಂ ತೇ ಪ್ರಯಚ್ಛಾಮಿ ನಮೋನಂತಾಯ ವೇಧಸೇ||

ಎಂಬ ಶ್ಲೋಕವನ್ನು ಉಚ್ಚರಿಸುವ ಸಂಪ್ರದಾಯವೂ ಇದೆ.

ಈ ಹಿಂದೆ ದೀಪದ ಶಾಖದಿಂದ ತಾನಾಗಿ ತಿರುಗುವ ದುಂಡನೆಯ ಗೂಡುದೀಪ ನಾನು ತಯಾರಿಸಿದ್ದುಂಟು. ಆದರೆ ಸಾಂಪ್ರದಾಯಿಕ ಗೂಡುದೀಪ ತಯಾರಿಗೆ ಕೈ ಹಚ್ಚಿದ್ದು ಇದೇ ಮೊದಲು. ಅದು ಎಣಿಸಿದಷ್ಟು ಸುಲಭ ಅಲ್ಲವೆಂದು ಮನದಟ್ಟಾಯಿತು. ಆದರೆ ಕಸ(ಬರಿಕೆ)ದಿಂದ ರಸ ಬರಿಸಿದ ಸಮಾಧಾನವೂ ದೊರಕಿತು.

ಈ ರೀತಿಯ ಗೂಡುದೀಪ ಸ್ವತಃ ತಯಾರಿಸಲು ಇಚ್ಛಿಸುವವರಿಗಾಗಿ DIY ಮಾದರಿಯ ಸಚಿತ್ರ ವಿವರಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.

ಬೇಕಾಗುವ ಸಾಮಗ್ರಿಗಳು.
ಸುಮಾರು 10" ಉದ್ದದ  ಬಿದಿರು, ಅಡಿಕೆ ಸಿಬ್ಬೆ ಅಥವಾ ನಾನು ಬಳಸಿದಂತೆ ತೆಂಗಿನ ಸೋಗೆಯ ಗಟ್ಟಿಯಾದ ಮತ್ತು ನೇರವಾದ ಸಪುರ ಕಡ್ಡಿಗಳು - 32.
ಇಂಥದೇ ಸುಮಾರು 14" ಉದ್ದದ ಕಡ್ಡಿಗಳು - 8.
ಟ್ವೈನ್ ದಾರ.
ದಾರಕ್ಕೆ ಸವರಲು ಜೇನು ಮಯಣ ಅಥವಾ ಕ್ಯಾಂಡಲ್.
ವಿವಿಧ ಬಣ್ಣದ ಟಿಷ್ಯೂ ಕಾಗದಗಳು - 5
ಕಾಗದ ಅಂಟಿಸಲು ಫೆವಿಕಾಲ್ ಅಥವಾ ಮೈದಾ ಅಂಟು.
ಮತ್ತು ಬಹಳಷ್ಟು ತಾಳ್ಮೆ!
 
1. 10 ಇಂಚಿನ ನಾಲ್ಕು ನಾಲ್ಕು ಕಡ್ಡಿಗಳ ತುದಿಗಳನ್ನು ಮಯಣ ಸವರಿದ ಟ್ವೈನ್ ದಾರದಿಂದ ಬಿಗಿಯಾಗಿ ಕಟ್ಟಿ ಚಿತ್ರದಲ್ಲಿರುವಂತೆ 8 ಚೌಕಾಕಾರಗಳನ್ನು ತಯಾರಿಸಬೇಕು. ದಾರಕ್ಕೆ ಮಯಣ ಸವರುವುದರಿದ  ಅದರ ಶಕ್ತಿ ಹೆಚ್ಚುತ್ತದೆ. ಕಡ್ಡಿಗಳ ಹೆಚ್ಚು ಭಾಗ ದಾರದ ಗಂಟುಗಳಿಂದ ಹೊರಗೆ  ಉಳಿಯದ ಹಾಗೆ ಜಾಗ್ರತೆ ವಹಿಸಬೇಕು.
 
2. ಅವುಗಳಲ್ಲಿ ನಾಲ್ಕು ಚೌಕಗಳ ಮೂಲೆಯಿಂದ ಮೂಲೆಗೆ ಚಿತ್ರದಲ್ಲಿರುವಂತೆ 16 ಇಂಚಿನ ಕಡ್ಡಿಯನ್ನು ಎರಡೂ ಬದಿಯಲ್ಲಿ ಸಮಾನ ಭಾಗ ಹೊರಗುಳಿಯುವಂತೆ ಕಟ್ಟಬೇಕು.
 
3. ಈ ನಾಲ್ಕು ಚೌಕಗಳ ಉದ್ದ ಕಡ್ಡಿ ಕಟ್ಟದಿರುವ B ಮೂಲೆಯನ್ನು  Cಗೆ,   Dಯನ್ನು   Eಗೆ,  Fನ್ನು  Gಗೆ ಮತ್ತು   Hನ್ನು Aಗೆ ಜೋಡಿಸಬೇಕು. 
4. ಆಗ ದೊರಕಿದ ಆಕಾರದ ಮೇಲ್ಭಾಗಕ್ಕೆ  ಮತ್ತು ಕೆಳಭಾಗಕ್ಕೆ  ಮೊದಲೇ ಸಿದ್ಧಪಡಿಸಿಟ್ಟಿರುವ 2 +2 ಚೌಕಗಳನ್ನು  ಅಳವಡಿಸಿ ಟ್ವೈನ್ ದಾರದಿಂದ ಕಟ್ಟಿದಾಗ ಹೀಗೆ ಕಾಣಿಸುತ್ತದೆ.
 
5. ಕೆಳಗಿನಿಂದ ಎರಡನೆಯ ಮತ್ತು ಮೇಲಿನಿಂದ ಎರಡನೆಯ ಚೌಕಗಳ ಮೂಲೆಯಿಂದ ಮೂಲೆಗೆ ಎರಡೆರಡು ಉದ್ದದ ಕಡ್ಡಿಗಳನ್ನು ಕಟ್ಟಬೇಕು. ಇವು ಗೂಡುದೀಪದ ಆಕಾರಕ್ಕೆ ದೃಢತೆ ಒದಗಿಸುವುದಷ್ಟೆ ಅಲ್ಲದೆ  ಮೇಲ್ಗಡೆಯ ಕಡ್ಡಿಗಳು ಬಲ್ಬು ತೂಗಾಡಿಸಲೂ ಉಪಯೋಗವಾಗುತ್ತವೆ. ಎಣ್ಣೆಯ ದೀಪ ಇರಿಸುವ ಇಚ್ಛೆ ಇದ್ದರೆ ಕೆಳಗಡೆ ಚೌಕಕ್ಕೆ ಮೂರು ಮೂರು ಹೆಚ್ಚುವರಿ ಕಡ್ಡಿಗಳನ್ನು ಕಟ್ಟಬಹುದು.

ಕೆಳಗಿನ ಚಿತ್ರಗಳು ನಾಲ್ಕೂ ಪಾರ್ಶ್ವಗಳ ನೋಟವನ್ನು ಸ್ಪಷ್ಟವಾಗಿ ತೋರಿಸುತ್ತವೆ.
 
6.  ಇನ್ನು ಬಣ್ಣದ ಕಾಗದಗಳನ್ನು ಹಚ್ಚುವ ಕೆಲಸ.  ಅದಕ್ಕಿಂತ ಮೊದಲು ಗೂಡುದೀಪವನ್ನು ತೂಗಾಡಿಸಲಿಕ್ಕಾಗಿ ಮೇಲಿನ ಚೌಕದ ಮೂಲೆಯಿಂದ ಮೂಲೆಗೆ ಸೂಕ್ತ ಅಳತೆಯ ಗಟ್ಟಿಯಾದ ಹಗ್ಗವೊಂದನ್ನು ಕಟ್ಟಬೇಕು. ಬಣ್ಣದ ಕಾಗದವನ್ನು ಬೇಕಿದ್ದ ಅಳತೆಗೆ ನಾಜೂಕಾಗಿ ಕತ್ತರಿಸಿಕೊಳ್ಳಬೇಕು. ಮೊದಲು 1, 2, 3 ಮತ್ತು 4ನೇ ಚೌಕಗಳಿಗೆ ಒಂದಕ್ಕೊಂದು contrast ಇರುವ ಬಣ್ಣ ಆಯ್ದುಕೊಳ್ಳಬೇಕು.  ಅಂಟನ್ನು ಪೇಪರ್ ಅಂಚಿನ ಬದಲು ಕಡ್ಡಿಗಳಿಗೆ ಹಚ್ಚುವುದು ಅನುಕೂಲಕರ. ನಂತರ 8 ತ್ರಿಕೋಣಾಕಾರಗಳಿಗೆ ಅಕ್ಕಪಕ್ಕದಲ್ಲಿ ಒಂದೇ ಬಣ್ಣ ಬರದಂತೆ ಎಚ್ಚರವಹಿಸಿ ಕಾಗದ ಅಂಟಿಸಬೇಕು.  ನಂತರ ಮೇಲಿನ 4 ಮತ್ತು ಕೆಳಗಿನ 4 ಚಿಕ್ಕ ಆಯತಾಕಾರಗಳಿಗೆ ಸೂಕ್ತ ಬಣ್ಣದ ಕಾಗದ ಅಂಟಿಸಿದರೆ ಮುಖ್ಯ ಕೆಲಸ ಮುಗಿದಂತೆ.  ಗೂಡುದೀಪವನ್ನು ನೆಲದ ಮೇಲಿರಿಸಿಯೇ ಇಷ್ಟು ಕೆಲಸವನ್ನು ಮಾಡುವುದು ಅನುಕೂಲಕರ. ನಂತರ ಅದನ್ನು ಕೊಕ್ಕೆಯೊಂದಕ್ಕೆ ತೂಗಾಡಿಸಿ assorted ಬಣ್ಣಗಳ ಪೇಪರ್ ಪಟ್ಟಿಗಳನ್ನು ಕೆಳಭಾಗದ ಆಯತಾಕಾರದ ಒಳಭಾಗಕ್ಕೆ ಬಾಲಗಳಂತೆ ಅಂಟಿಸಿದಾಗ ನಿಮ್ಮ ಸರಳ ಸಾಂಪ್ರದಾಯಿಕ ಗೂಡು ದೀಪ ರೆಡಿ. ಮೂಲೆಗಳಿಗೆ ಹೂವಿನಾಕಾರಗಳನ್ನು ಅಂಟಿಸುವುದು, ಅಂಚುಗಳಿಗೆ ಬೇರೆ ಬಣ್ಣದ ಪಟ್ಟಿಗಳನ್ನು ಹಚ್ಚುವುದು ಮುಂತಾದ ಎಷ್ಟೂ ಅಲಂಕರಣಗಳನ್ನು ನಿಮ್ಮ ಕಲ್ಪನೆಯ ಪ್ರಕಾರ ಮಾಡಬಹುದು. 
 

Friday 4 September 2020

ಅಮರ ಜೀವಿಯ ಕಿಲಾಡಿ ಹೆಣ್ಣು


ಕೆಲವು ಸಲ ನಮಗಿಷ್ಟವಾದ ಯಾವುದೋ ಸಣ್ಣ ವಸ್ತುವೊಂದು ಕಳೆದು ಹೋಗಿರುತ್ತದೆ.  ಅಥವಾ ಈಗ ಬೇಕೆಂದರೆ ಕೊಳ್ಳಲು ಸಿಗದ ನಿತ್ಯೋಪಯೋಗಿ ಹತ್ಯಾರೊಂದನ್ನು  ಎಲ್ಲಿಟ್ಟಿದ್ದೇವೆ ಎಂದು ಮರೆತು ಹೋಗಿರುತ್ತದೆ. ಇಂಥವು ಅಯಾಚಿತವಾಗಿ ಮತ್ತೆ ದೊರಕಿದಾಗ ಆಗುವ ಸಂತಸ ಅಸದಳ. ಅನೇಕ ವರ್ಷಗಳ ಹಿಂದೆ ನಮ್ಮ ಊರ ಮನೆಯ ಅಟ್ಟದಲ್ಲಿ ಗಂಟು ಕಟ್ಟಿಟ್ಟಿದ್ದ ಹಳೆಯ ಚಂದಮಾಮಗಳಿಂದ ಮೂವರು ಮಾಂತ್ರಿಕರು, ನಾವಿಕ ಸಿಂದಬಾದ್, ರೂಪಧರನ ಯಾತ್ರೆಗಳು, ಅದ್ಬುತ ದೀಪ ಮುಂತಾದ ಧಾರಾವಾಹಿಗಳನ್ನು ಬೇರ್ಪಡಿಸಿ ಪುಸ್ತಕ ರೂಪದಲ್ಲಿ ಒಟ್ಟುಗೂಡಿಸುವ ಕೈಂಕರ್ಯದಲ್ಲಿ ನಾನು ತೊಡಗಿದ್ದಾಗ ಮಧ್ಯದ ಯಾವುದೋ ಸಂಚಿಕೆ ಎಷ್ಟು ಹುಡುಕಿದರೂ ಸಿಗುತ್ತಿರಲಿಲ್ಲ. ಮತ್ತೆಂದಾದರೂ ಅದು  ಧುತ್ತೆಂದು ಕಣ್ಣ ಮುಂದೆ ಕಾಣಿಸಿದಾಗ ಆಗುತ್ತಿದ್ದ ಸಂತಸವೂ ಅಂಥದ್ದೇ. ಅಷ್ಟು ಮಾಡಿಯೂ ಸಿಗದೇ ಇದ್ದ ಒಂದು ಕಂತು ಪಕ್ಕದ ಮನೆಯವರಲ್ಲಿದ್ದ ಚಂದಮಾಮದಲ್ಲಿ ಸಿಕ್ಕಿ ಅವರದನ್ನು ಕೊಡಲು ಸಿದ್ಧರಾದಾಗ ಹೇಗಾಗಬೇಡ. ಈಗ ನನಗೆ ಅಂಥ ಸಂತಸದ ಸಾಕ್ಷಾತ್ಕಾರವಾದದ್ದು ನನ್ನ ಫೇಸ್ ಬುಕ್ ಮಿತ್ರ ಬಿ.ಆರ್. ಉಮೇಶ್ ಅವರ ಪರಿಚಯದ ಶ್ರೀನಾಥ್ ಮಲ್ಯ ನಿನ್ನೆ ತಾವಾಗಿ ನನಗೆ ಫೋನ್ ಮಾಡಿ ‘ನೀವು ಬಹು ಕಾಲದಿಂದ ಹುಡುಕುತ್ತಿದ್ದ ಅಮರಜೀವಿ ಚಿತ್ರದ ಭಲಾರೆ ಹೆಣ್ಣೆ ಕಿಲಾಡಿ ಹೆಣ್ಣೆ ಹಾಡು ನನ್ನಲ್ಲಿದೆ’ ಎಂದು ಹೇಳಿದಾಗ!



ನ್ಯಾಶನಲ್ ಎಕ್ಕೊ ದಿನಗಳಲ್ಲಿ ಆಕಾಶವಾಣಿ ಭದ್ರಾವತಿ ನಿಲಯದಿಂದ ಹೆಚ್ಚಾಗಿ ಪ್ರಸಾರವಾಗುತ್ತಿದ್ದ 1965ರ ಅಮರಜೀವಿ ಚಿತ್ರದ ಹಾಡುಗಳ ಪೈಕಿ ಹಳ್ಳಿಯೂರ ಹಮ್ಮೀರ ಕ್ಯಾಸೆಟ್ ಮತ್ತು CDಗಳಲ್ಲೂ ಬಂದಿದ್ದು ಸುಲಭ ಲಭ್ಯ.  ಮಿಠಾಯಿ ಮಾರುವ ಸುಬ್ಬನ  ಹಾಡನ್ನು ನಾನು ಹೇಗೋ ಸಂಪಾದಿಸಿಕೊಂಡಿದ್ದೆ. ಆದರೆ ನನಗೆ ಹೆಚ್ಚು ಇಷ್ಟದ್ದಾಗಿದ್ದ ಭಲಾರೆ ಹೆಣ್ಣೆ  ಹಾಡು ಮಾತ್ರ ಎಲ್ಲೂ ಸಿಕ್ಕಿರಲಿಲ್ಲ.  ಚಿತ್ರದ ಪ್ರಿಂಟ್ ಕೂಡ ಇಲ್ಲದುದರಿಂದ ಅಂತರ್ಜಾಲದಲ್ಲಿ ಸಿಗುವ ಆಸೆಯನ್ನೂ ಬಿಟ್ಟಿದ್ದೆ. ನಿನ್ನೆ ನನ್ನೊಡನೆ ಸಂಪರ್ಕ ಸಾಧಿಸಿದ ಶ್ರೀನಾಥ್ ಮಲ್ಯ ತಡ ಮಾಡದೆ ಆ ಹಾಡನ್ನು ನನಗೆ ಒದಗಿಸಿದರು. ಕೊಂಚ ರಿಪೇರಿ, ಪ್ಲಾಸ್ಟಿಕ್ ಸರ್ಜರಿ ಇತ್ಯಾದಿಗಳ ನಂತರ ಈಗದು ಸುಲಲಿತವಾಗಿ ಆಲಿಸಲು ಯೋಗ್ಯವಾಗಿದೆ.  ಇದರ ಆಡಿಯೋ ಮುಂದಿನ ದಿನಗಳಲ್ಲಿ ಯೂಟ್ಯೂಬಲ್ಲಿ ಕಾಣಿಸಿಕೊಳ್ಳಲೂ ಬಹುದು.

ಸುಬ್ಬನ ಹಾಡಿನ ಬರಹದಲ್ಲಿ ಆಗಲೇ ಹೇಳಿದಂತೆ ಚಿತ್ರೀಕರಣ ಆರಂಭವಾದಾಗ ಅಮರ ಜೀವಿ ಚಿತ್ರದ  ಹೆಸರು ಹಳ್ಳಿಯ ಹುಡಿಗಿ ಎಂದಾಗಿತ್ತು! ಆ ಹೆಸರಿನೊಂದಿಗೆ ಚಿತ್ರದ ಜಾಹೀರಾತೂ ಬಿಡುಗಡೆಯಾಗಿತ್ತು.  ರಾಜಾ ಶಂಕರ್, ಹರಿಣಿ, ನರಸಿಂಹರಾಜು ಮುಂತಾದವರ ತಾರಾಗಣವಿದ್ದು ವಿಜಯಭಾಸ್ಕರ್ ಸಂಗೀತವಿತ್ತು. ಎಸ್.ಕೆ. ಕರೀಂ ಖಾನ್, ಕು.ರ.ಸೀ, ಕಣಗಾಲ್ ಪ್ರಭಾಕರ ಶಾಸ್ತ್ರಿ ಮತ್ತು ಗೀತಪ್ರಿಯ ಹಾಡುಗಳನ್ನು ಬರೆದಿದ್ದರು.

ಪಿ.ಬಿ.ಶ್ರೀನಿವಾಸ್  ಹಾಡಿರುವ  ಕಿಲಾಡಿ ಹೆಣ್ಣೆ ಹಾಡಿನ ಆರಂಭದಲ್ಲಿ 42 ಸೆಕೆಂಡುಗಳಷ್ಟು ದೀರ್ಘವಾದ ಹಮ್ಮಿಂಗ್ ಇದೆ. ಜೆಮಿನಿಯ ಎಸ್.ಎಸ್. ವಾಸನ್ ಬಹಳ ಹಿಂದೆಯೇ ಘೋಷಿಸಿದಂತೆ ಪಿ.ಬಿ.ಎಸ್ ಅವರ ಹಮ್ಮಿಂಗ್ ಅಂದರೆ ಕಲ್ಲನ್ನೂ ಕರಗಿಸುವಂಥದ್ದು.  ಇದರಲ್ಲಿ ನೀನೇ ನೀರೆ ಮಂದಾರ ಮಂದಿರದಿಂದ ಬಾರೆ, ಇದೇ ಇದೇ ಸವಿ ಬಾಳ ದಿನ, ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ ಹಾಗೂ ಕೊಳಲಿನ ತುಣುಕಲ್ಲಿ ಹಾಡೊಂದ ಹಾಡುವೆಯ ಛಾಯೆ ಗೋಚರಿಸಿದರೆ ನೀವು ಹಳೇ ಹಾಡುಗಳನ್ನು ತುಂಬಾ ಆಲಿಸುತ್ತೀರಿ ಎಂದರ್ಥ.  ಪಲ್ಲವಿ ಭಾಗದ ಓಡಿ ಬಾ ಎಂಬಲ್ಲಿ ಪಿ.ಬಿ.ಎಸ್ ವಿಶೇಷತೆಯಾದ ಮಂದ್ರದ ಸ್ಪರ್ಶ ಇದೆ. ಹಿಂದಿ ಹಾಡುಗಳ ಮಧ್ಯಂತರ ಸಂಗೀತವನ್ನು  recycling ಮಾಡುವ ವಿಜಯಭಾಸ್ಕರ್ ಅವರ ಹವ್ಯಾಸ ಗೊತ್ತಿರುವಂಥದ್ದೇ. ಇಲ್ಲೂ ರವಿ ಸಂಗೀತವಿದ್ದ ಆಜ್ ಔರ್ ಕಲ್ ಚಿತ್ರದ ಯೆ ವಾದಿಯಾಂ ಯೆ ಫಿಜಾಯೆಂ ಹಾಡಿನ interludeಗಳನ್ನು ಕೊಂಚ ಮಾರ್ಪಾಡುಗೊಳಿಸಿ ಬಳಸಿದ್ದಾರೆ. ಆದರವು ಹಾಡಿಗೆ ಅಷ್ಟೊಂದು ಪೂರಕವಾಗಿಲ್ಲ ಎಂದೇ ಹೇಳಬೇಕಾಗಿದೆ.  ಚರಣ ಭಾಗದಲ್ಲಿ ಹಾಡಿನ  ಮೂಡೇ ಬದಲಾದಂತೆನಿಸುತ್ತದೆ. ಆ ಮೇಲೆ ಬಂದ ಮಧು ಮಾಲತಿ ಚಿತ್ರದ ಶೋಡಷ ಚೈತ್ರದ ಸುಂದರಿ ನೀನು ಹಾಡಿನ ಧಾಟಿಯು ಇದನ್ನು ಹೋಲುತ್ತದೆಯೇ ಎಂಬ ಅನುಮಾನವೂ ನಿಮ್ಮನ್ನು ಕಾಡಬಹುದು. ಒಂದೆರಡು ಕಡೆ ಲವ್ ಲವ್ ಎಂದರೇನು ಧಾಟಿಯ ಘಾಟೂ ಹೊಡೆಯಬಹುದು. ಭಲಾರೆ ಹೆಣ್ಣೆ ಸಾಲನ್ನು ಎತ್ತಿಕೊಳ್ಳುವ ಮುನ್ನ ಬರುವ ಆಹಾ, ಒಹೋಗಳಲ್ಲಿ ಏನೋ ಒಂದು ರೀತಿ ಮಾದಕತೆ ಇದೆ.

ಹಾಡಿನ ಸಾಹಿತ್ಯ ಗಮನಿಸಿದರೆ ಕು.ರ.ಸೀ ಅವರ ರಚನೆ ಇರಬಹುದೇನೋ ಎಂದು ಅನ್ನಿಸುತ್ತದೆ.  ಅನುಮಾನ ಮೂಡಿಸುವ ಕೆಲವು ಪದಗಳೂ ಇವೆ.  ಹೆಡ್ ಫೋನ್ ಹಾಕಿ ಆಲಿಸಿದಾಗ ಸ್ಪಷ್ಟವಾಗಿ ಕೇಳಿಸುವ ಕಣ್ಣ ಹಸಿವೆ ಮತ್ತು ಕಾದಲುಸಿವೆ ಪದಗಳಲ್ಲಿ ವಕಾರ ರಕಾರ ಆಗಿ ಅವು ಕಣ್ಣ ಹಸಿರೆ ಕಾದಲುಸಿರೆ ಆಗಬೇಕಿತ್ತೇನೋ. ಆಗ ಕಣ್ಣಿಗೆ ಹಸಿರು ಅಂದರೆ ಅಂದವಾಗಿ ಕಾಣಿಸುವಂಥ ಮತ್ತು ಕಾದಲುಸಿರೆ ಅಂದರೆ ಪ್ರೇಮದುಸಿರೆ ಎಂದು ಅರ್ಥೈಸಬಹುದು. ತಗಾದೆ ಮಾಡುವ ನಲ್ಲೆ  ಶುದ್ಧ ತರಲೆ ಆಗಿ  ಕಾಣಿಸುವುದು ಸಹಜವಾದರೂ ಒಂದನೆ ಚರಣದಲ್ಲಿ ತರಲೆ ಎಂದು ಕೇಳಿಸುವ ಪದ ತರಳೆ ಇರಬಹುದೆಂದು ನನ್ನ ಊಹೆ. ಆದರೆ ನನಗೆ ಈ ಉಚ್ಚಾರಾಂತರಗಳು ಕೇಳಿಸಿದ್ದು ಈಗ ಹೆಡ್ ಫೋನ್ ಧರಿಸಿ ಕೇಳಿದಾಗಲೇ. ನಿಮಗೆ ಹೇಗೆ ಕೇಳಿಸುತ್ತದೆಂದು ಪರೀಕ್ಷಿಸಿ.  ಎರಡನೆ ಚರಣದಲ್ಲಿರುವ  ಚಿಮ್ಮುವ ಜೇನಿನ ಚಿಲುಮೆಗೆ ಜಾರಿ ನೂರು ಬಾರಿ ಒಲವಿನ ದಾರಿ ಕ್ರಮಿಸಬಯಸುವ ನಲ್ಲ ನಲ್ಲೆಯರ ವರ್ಣನೆ ಇದು ಕು.ರ.ಸೀ ಅವರದ್ದೇ ರಚನೆ ಇರಬಹುದು ಎಂಬ ಊಹೆಗೆ ಪುಷ್ಟಿ ನೀಡುತ್ತದೆ. ಪದ್ಯಾವಳಿ ಅಥವಾ ಹಾಡಿನ ಡಿಸ್ಕ್ ದೊರಕಿದರಷ್ಟೇ ಈ ಬಗ್ಗೆ ಖಚಿತವಾಗಿ ಹೇಳಬಹುದು. 

ಒಟ್ಟಿನಲ್ಲಿ  ಗಾಯನ,  ಸಾಹಿತ್ಯ ಮತ್ತು  ರಾಗ ಸಂಯೋಜನೆ ಸಮನಾಗಿ ಮೇಳೈಸಿದ  ಹಾಡು ಚೇತೋಹಾರಿ ಅನುಭವ ನೀಡುತ್ತದೆ. ಒದಗಿಸಿದ ಸ್ನೇಹಿತರನ್ನು ನೆನಸಿಕೊಳ್ಳುತ್ತಾ ಅದನ್ನು ಆಲಿಸಿ ಆನಂದಿಸೋಣ.



ಭಲಾರೆ ಹೆಣ್ಣೆ ಕಿಲಾಡಿ ಹೆಣ್ಣೆ
ಚೆಂದೊಳ್ಳೆ ಚೆನ್ನೆ ಬಾ
ಕಣ್ಣ ಹಸಿರೆ ಕಾದಲುಸಿರೆ
ಬಾಳಿನಾಸರೆ ಬಾ
ಓಡಿ ಬಾ  ಓಡಿ ಬಾ

ಘಲ್ ಘಲ್ ಕಂಕಣ ಕಾಲ್ನಡೆಯಲ್ಲೆ
ನನ್ನೆದೆ ತಲ್ಲಣ ಕೆರಳಿಸಬಲ್ಲೆ
ದೂರ ದೂರ ನೀನಿರಲೊಲ್ಲೆ
ನಾ ಬಲ್ಲೆ ಬಾ ನಲ್ಲೆ
ತಗಾದೆ ಮಾಡದೆ ಬಾರೆ ತರಳೆ
ಓಡಿ ಬಾ  ಓಡಿ ಬಾ

ಹೊಮ್ಮುವ ಹೊಳಪಿನ ಹೊಮ್ಮುಗಿಲೇರಿ
ಚಿಮ್ಮುವ ಜೇನಿನ ಚಿಲುಮೆಗೆ ಜಾರಿ
ನೂರು ಬಾರಿ ಒಲವಿನ ದಾರಿ
ಅರಸೋಣ ವರಿಸೋಣ
ನಿರಾಳ ಜೀವನ ಸಾಗಿಸೋಣ
ಓಡಿ ಬಾ  ಓಡಿ ಬಾ

Monday 24 August 2020

60 ವರ್ಷ ಹಿಂದಕ್ಕೆ ಕರೆದೊಯ್ದ ಜಾತಕ ಬಲ


1960ನೇ ಇಸವಿ. ಮೂರನೇ ಕ್ಲಾಸಿನ ವಾರ್ಷಿಕ ಪರೀಕ್ಷೆ ಕಳೆದು ಬೇಸಗೆ ರಜೆ ಸಿಕ್ಕಿತ್ತು. ಪ್ರತೀ ವರ್ಷದಂತೆ ತಾಯಿಯವರೊಂದಿಗೆ ಮೃತ್ಯುಂಜಯಾ ಮತ್ತು ನೇತ್ರಾವತಿ ನದಿಗಳನ್ನು ದಾಟಿ ಒಂದೂವರೆ ಮೈಲು ನಡೆದು ನಿಡಿಗಲ್ಲಿನಿಂದ ಶೆಟ್ಟಿ ಬಸ್ಸಿನಲ್ಲಿ ಬೆಳ್ತಂಗಡಿಗೆ ಹೋಗಿ ಅಲ್ಲಿಂದ ಹತ್ತೂವರೆಯ ಹನುಮಾನ್ ಬಸ್ಸಿನಲ್ಲಿ ಅಳದಂಗಡಿ ತಲುಪಿ ಮಟ ಮಟ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಮತ್ತೆ  ಒಂದೂವರೆ ಮೈಲು ನಡೆದು ಸೂಳಬೆಟ್ಟಿನ    ಅಜ್ಜಿ ಮನೆಗೆ ಹೋಗಿದ್ದೆ. ಒಂದೆರಡು ದಿನಗಳ ನಂತರ ಸೋದರ ಮಾವನ ಮಗ ‘ಇಲ್ಲೇ ಸಮೀಪದ ಪಿಲ್ಯ ಶಾಲೆಯ ಸ್ಕೂಲ್ ಡೇಗೆ ಬರುತ್ತೀಯಾ?’ ಎಂದಾಗ ಕಾಡು ದಾರಿಯ ಮೂಲಕ ಸಾಕಷ್ಟು ದೂರ ನಡೆದು ಹೋಗಬೇಕಾಗಿದ್ದರೂ ಖುಶಿಯಿಂದ ಒಪ್ಪಿ ಅವರೊಡನೆ ಹೊರಟಿದ್ದೆ. ಆದರೆ ಶಾಲೆಗೆ ರಜೆ ಇರುವಾಗ ಏಕೆ ಸ್ಕೂಲ್‌ ಡೇ ಆಯೋಜಿಸಿದ್ದರು ಎಂದು ನನಗೆ ನೆನಪಿಲ್ಲ. ಪಾಠ ಪ್ರವಚನ, ಪರೀಕ್ಷೆಗಳ ರಗಳೆ ಇಲ್ಲದ ರಜಾ ಸಮಯವೇ ನಿರಾಳವಾದ ಸ್ಕೂಲ್‌ ಡೇಗೆ ಸೂಕ್ತ ಎಂದು ಯೋಚಿಸಿದ್ದರೋ ಏನೋ. ಆಗೆಲ್ಲ ಹಳ್ಳಿ ಶಾಲೆಯ ಸ್ಕೂಲ್ ಡೇಗಳು ರಾತ್ರಿ ಇಡೀ ನಡೆಯುವುದು ವಾಡಿಕೆ.  ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, ಮಕ್ಕಳ ಮನರಂಜನಾ ಕಾರ್ಯಕ್ರಮಗಳು ಇತ್ಯಾದಿ ಆದ ಮೇಲೆ ಆರಂಭವಾಗುವ ಊರ ಹಿರಿಯರ ನಾಟಕ ಮುಗಿಯುವಾಗ ಸಹಜವಾಗಿಯೇ ಬೆಳಗಾಗುತ್ತಿತ್ತು.  ಆದರೆ ಅಂದು ಮಕ್ಕಳು ಯಾವ ಹಾಡು ಹಾಡಿದರು, ಯಾವ ಪೌರಾಣಿಕ ನಾಟಕ ಇತ್ತು, ಊರವರು ಯಾವ ತುಳು ನಾಟಕ ಆಡಿದ್ದರು ಇವೊಂದೂ ನನಗೆ ನೆನಪಿಲ್ಲ.  ಮಧ್ಯರಾತ್ರೆ ಸೋದರ ಮಾವನ ಮಗ ಅಲ್ಲಿಯ ಕ್ಯಾಂಟಿನಿನಲ್ಲಿ ಕೊಡಿಸಿದ ಬಿಸಿ ಬಿಸಿ ಖಾಲಿ ದೋಸೆ ತಿನ್ನುವಾಗ  ನಾಟಕದ ಸೀನುಗಳ ಮಧ್ಯದ  ವಿರಾಮದಲ್ಲಿ ಬೆಳ್ತಂಗಡಿಯ ಸೋಡಾ ನಾರಾಯಣರ ಧ್ವನಿವರ್ಧಕದಿಂದ ಕೇಳಿ ಬಂದ ‘ಜಾತಕ ಬಲವಯ್ಯಾ’ ಎಂಬ ಹಾಡು ಮಾತ್ರ ನನಗೆ ನೆನಪಿರುವುದು. ಧ್ವನಿವರ್ಧಕದಿಂದ ಬೇರೆ ಹಾಡುಗಳೂ ಕೇಳಿಸಿರುತ್ತವೆ.  ಆದರೆ ಅವೊಂದೂ ನೆನಪಿಲ್ಲ. ಆಗ ನಮ್ಮ ಮನೆಯಲ್ಲಿ ರೇಡಿಯೋ ಇರಲಿಲ್ಲ.  ಗಾಯಕರ ಬಗ್ಗೆ, ಸಿನಿಮಾ ಹಾಡುಗಳ ಬಗ್ಗೆ ನನಗೇನೂ ಗೊತ್ತೂ ಇರಲಿಲ್ಲ.  ಆದರೂ ಅದೇಕೋ ಅಂದು ಆ ಒಂದು ಹಾಡು ಮಾತ್ರ ನನ್ನ ಮನದಲ್ಲಿ  ನೆಲೆಯಾಗಿ ಬಿಟ್ಟಿತು.  ಮುಂದೆ ನಮ್ಮ ಮನೆಗೆ ರೇಡಿಯೋ ಬಂದು ಹಳೆ ಚಂದಮಾಮಗಳಲ್ಲಿ ಸಿನಿಮಾ ಜಾಹೀರಾತುಗಳನ್ನು  ಗಮನಿಸತೊಡಗಿದ ಮೇಲೆ ಆ ಹಾಡು ಜಾತಕಫಲ ಚಿತ್ರದ್ದಿರಬಹುದೆಂದು ಊಹಿಸಿದೆ.  ಜಾತಕಫಲದ ಜಾಹೀರಾತಿನಲ್ಲಿ ಆರ್. ನಾಗೇಂದ್ರರಾಯರು ಪೋಲೀಸು ಹ್ಯಾಟ್ ಧರಿಸಿದ ಚಿತ್ರ ನೋಡಿದಾಗಲೆಲ್ಲ ಅದೇ ಹಾಡು ನೆನಪಾಗುತ್ತಿತ್ತು. ಆದರೆ ಆ ಮೇಲೆ ರೇಡಿಯೋದಲ್ಲಾಗಲಿ ಬೇರೆಲ್ಲಾಗಲಿ ಆ ಹಾಡು ನನಗೆ ಕೇಳಲು ಸಿಕ್ಕಿರಲಿಲ್ಲ. ಈ ಅಂತರ್ಜಾಲದ ಯುಗದಲ್ಲೂ ಅದರ ಬಗ್ಗೆ ವಿವರಗಳು ದೊರಕಿರಲಿಲ್ಲ.


ಇತ್ತೀಚೆಗೆ ಒಂದು ದಿನ ಎಂದೂ ಸಿನಿಮಾಗಳನ್ನು ಪ್ರಸಾರ ಮಾಡದ ಬಸವ ಟಿ.ವಿ. ವಾಹಿನಿಯಲ್ಲಿ  ಮಕ್ಕಳ ರಾಜ್ಯ ಸಿನಿಮಾ ಬರುತ್ತಿದ್ದುದನ್ನು ಗಮನಿಸಿದೆ.  ಅದರ ಮಕ್ಕಳ ರಾಜ್ಯ ಪ್ರೇಮದ ರಾಜ್ಯ ಮತ್ತು ಛಲಿಯಾ ಚಿತ್ರದ ಛಲಿಯಾ ಮೇರಾ ನಾಮ್ ಹಾಡುಗಳು ನನಗೆ ಬೆಳ್ತಂಗಡಿ ಹೈಸ್ಕೂಲ್ ಗ್ರೌಂಡಲ್ಲಿ ನಡೆದ ಜೋನಲ್ ಸ್ಪೋರ್ಟ್ಸ್ ನೆನಪಿಗೆ ತರುವಂಥವು.  ಛಲಿಯಾ ಹಾಡು ಅಪರೂಪದ್ದಲ್ಲವಾದರೂ ಮಕ್ಕಳ ರಾಜ್ಯದ ಟೈಟಲ್ ಹಾಡು ನನಗಿನ್ನೂ ಸಿಕ್ಕಿರಲಿಲ್ಲ.  ಇಂದಾದರೂ ಅದು  ಸಿಗಬಹುದೇನೋ ಎಂದು ಧ್ವನಿ ಮುದ್ರಿಸಲು ಸಿದ್ಧತೆ ಮಾಡಿಕೊಂಡು ಚಿತ್ರ ವೀಕ್ಷಿಸತೊಡಗಿದೆ. ಹಳೆ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಹಾಡು ಶುರುವಾಗುವ ಮುನ್ಸೂಚನೆ ಸಿಗುತ್ತದೆ. ಅಂಥ ಒಂದು ಎತ್ತಿನ ಗಾಡಿಯ ದೃಶ್ಯ ಬಂದಾಗ ರೆಕಾರ್ಡ್ ಬಟನ್ ಒತ್ತಿ ಸಿದ್ಧವಾದೆ.  ಏನಾಶ್ಚರ್ಯ!  ಗಾಡಿ ಓಡಿಸುವವ ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ ‘ಜಾತಕ ಬಲವೇ ಬಲವಯ್ಯಾ’ ಎಂದು ಹಾಡತೊಡಗಿದ! ಆ ಹಾಡು ಈ ಚಿತ್ರದ್ದಿರಬಹುದು, ಪಿ.ಬಿ.ಶ್ರೀನಿವಾಸ್ ಹಾಡಿರಬಹುದು ಎಂಬ ಕಲ್ಪನೆಯೂ ನನಗಿರಲಿಲ್ಲ.  ಟೊಮೆಟೊ ಕೊಯ್ಯಲು ಹೋದಾಗ ಸೇಬು ಹಣ್ಣು ಸಿಕ್ಕಿದಂತಾಯಿತು ನನಗೆ. ಆದರೆ ನನ್ನ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ.  ಚಿತ್ರದಲ್ಲಿ ಹಾಡಿನ ಒಂದು ಚರಣ ಮಾತ್ರ ಇತ್ತು.  ಪೂರ್ಣತೆ ಇಲ್ಲದ ಯಾವುದೂ ನನಗೆ ಇಷ್ಟವಾಗುವುದಿಲ್ಲ.  ನಾನು ನಿರೀಕ್ಷಿಸುತ್ತಿದ್ದ ಮಕ್ಕಳ ರಾಜ್ಯ ಪ್ರೇಮದ ರಾಜ್ಯ ಹಾಡೂ ಸಿಗಲಿಲ್ಲ.  ಕೊನೆಗೆ ಅದು ಆರಂಭದ ಟೈಟಲ್ಸ್ ಜೊತೆಗೆ ಬರುವ ಹಾಡೆಂದು ಗೊತ್ತಾಗಿ  ಯೂಟ್ಯೂಬಲ್ಲಿ ಹುಡುಕಿದರೆ ಕನ್ನಡ ಮಕ್ಕಳ ರಾಜ್ಯ ಇರಲಿಲ್ಲ.  ಆದರೆ ಅದರ ತೆಲುಗು ಅವತರಣಿಕೆ ಪಿಲ್ಲಲು ತೇಚಿನ ಚಲ್ಲನಿ ರಾಜ್ಯಂ  ಇತ್ತು. ಕೊನೆಗೆ ಅದರ CD ಹೊಂದಿರುವ ಮಿತ್ರರ ಮೂಲಕ ಆ ಹಾಡನ್ನು ಸಂಪಾದಿಸಿದೆ.  ಜಾತಕ ಬಲದ ವಿಷಯವನ್ನು ಅಲ್ಲಿಗೇ ಬಿಟ್ಟೆ.


ಈ ದಿನ  ಬೆಳಗ್ಗೆ  ನಿತ್ಯದ ಅಭ್ಯಾಸದಂತೆ ಮೊಬೈಲಿನ Indian Radios App ಮೂಲಕ 7 ಗಂಟೆ ವರೆಗೆ ರೇಡಿಯೊ ಸಿಲೋನ್,  ಆ ಮೇಲೆ ಬೆಂಗಳೂರಿನ FM ಕನ್ನಡ ಕಾಮನಬಿಲ್ಲಿನ ಕಾರ್ಯಕ್ರಮವನ್ನು  12 Volt adapter ಅಳವಡಿಸಿ ನಾನು ಮನೆಯಲ್ಲಿ ಬಳಸುತ್ತಿರುವ Pioneer Car Sterioದಲ್ಲಿ  blue tooth ಮೂಲಕ ಆಲಿಸುತ್ತಿದ್ದೆ. ಇಂದು ಬಿ.ಆರ್. ಪಂತುಲು ಚಿತ್ರಗಳ ಗೀತೆಗಳು ಪ್ರಸಾರವಾಗುತ್ತಿದ್ದವು. ಪರಮಾಶ್ಚರ್ಯವೆಂಬಂತೆ ಇದುವರೆಗೆ ನಾನು ರೇಡಿಯೋದಲ್ಲಿ ಎಂದೂ ಕೇಳದಿದ್ದ  ‘ಜಾತಕ ಬಲವೇ’ ಹಾಡು ಇಂದು ಬಂತು! ಈಗಿನ RJಗಳಿಗೆ ಹಾಡುಗಳ ವಿವರ ತಿಳಿಸುವ ಅಭ್ಯಾಸ ಇಲ್ಲದ್ದರಿಂದ ನನಗೆ ಗೊತ್ತಾಗುವಷ್ಟರಲ್ಲಿ ಒಂದು ಸಾಲು ಆಗಿ ಹೋಯಿತು.  ಆದರೂ Indian Radios Appನ ರೆಕಾರ್ಡ್ ಬಟನ್ ತಕ್ಷಣ ಒತ್ತಿದೆ.  ಚಿತ್ರದಲ್ಲಿ ಇರದ ಎರಡನೇ ಚರಣವೂ ಸುಲಲಿತವಾಗಿ ಮೂಡಿ ಬಂದಾಗ ನನ್ನ ಆನಂದಕ್ಕೆ ಪಾರವೇ ಇಲ್ಲದಂತಾಯ್ತು.  ಕಳೆದು ಹೋದ ಮೊದಲ ಸಾಲನ್ನು ಮೊನ್ನೆ TVಯಿಂದ ಧ್ವನಿಮುದ್ರಿಸಿದ್ದ ಹಾಡಿನಿಂದ plastic surgery ಮಾಡಿ ಜೋಡಿಸಿದೆ.  ಅಂತೂ ಆ ಹಾಡಿನ ಜಾತಕದಲ್ಲಿ 60 ವರ್ಷಗಳ ನಂತರ ನನಗೆ ದೊರಕುವ ಗ್ರಹಗಳ ಫಲ ಇತ್ತು!

ಸಾಮಾನ್ಯವಾಗಿ ಪೀಠಾಪುರಂ ನಾಗೇಶ್ವರ ರಾವ್ ಅಥವಾ ಮಾಧವಪೆದ್ದಿ ಸತ್ಯಂ ಹಾಡುವ ಶೈಲಿಯ ಈ ಹಾಡನ್ನು ಪಿ.ಬಿ.ಶ್ರೀನಿವಾಸ್ ಅವರ ಸುಸ್ಪಷ್ಟ ಉಚ್ಚಾರದಲ್ಲಿ, ಮಧುರ ಧ್ವನಿಯಲ್ಲಿ ಈಗ ಕೇಳಿ. ಅಂದು ಅರಿವಿಲ್ಲದಿದ್ದರೂ ಈ ಧ್ವನಿಯೇ ಆ ಹಾಡಿನ ನೆನಪು ಶಾಶ್ವತವಾಗಿ ನನ್ನ ಮನದಲ್ಲಿ ನೆಲೆ ನಿಲ್ಲುವಂತೆ ಮಾಡಿರಬಹುದು. ಪಂತುಲು ಕ್ಯಾಂಪಿನಲ್ಲಿ ಇದು ಪಿ.ಬಿ.ಎಸ್ ಅವರ ಮೊದಲ ಚಿತ್ರ. ಟಿ.ಜಿ. ಲಿಂಗಪ್ಪ ಅವರ ಸಂಗೀತವಿದೆ.  ಜಾತಕಫಲದಲ್ಲಿ ನಂಬಿಕೆ ಇರದವರೂ ಗ್ರಹಗಳ ಬಲದ ಬಗ್ಗೆ ಯೋಚಿಸುವಂತಿದೆ ಗೀತೆಯ ಸಾಹಿತ್ಯ.  ಬರೆದವರು  ಚಿ.ಸದಾಶಿವಯ್ಯ, ಕಣಗಾಲ್ ಪ್ರಭಾಕರ ಶಾಸ್ತ್ರಿ ಇವರಿಬ್ಬರಲ್ಲಿ ಯಾರು ಎಂಬ ಮಾಹಿತಿ ನನ್ನಲ್ಲಿಲ್ಲ.  ಪಿ.ಬಿ. ಶ್ರೀನಿವಾಸ್ ಅವರಿಗೂ ಜಾತಕ ಫಲಕ್ಕೂ ಬಲವಾದ ನಂಟಿದೆ.  ಓರ್ವ ಜ್ಯೋತಿಷಿ ಅವರ ಜಾತಕದಲ್ಲಿ ಹಿನ್ನೆಲೆ ಹಾಡುಗಾರನಾಗುವ ಯೋಗವಿಲ್ಲ ಅಂದಿದ್ದರಂತೆ.  Though science can not be wrong a scientist can be wrong ಎಂದು ಧೈರ್ಯದಿಂದ ತನ್ನಿಚ್ಛೆಯ ಪಥದಲ್ಲಿ ಮುಂದಡಿಯಿಟ್ಟಾಗ ಹಿಂದಿಯ  Mr Sampatನ ನಂತರ ಅವರಿಗೆ ಹಿನ್ನೆಲೆ ಗಾಯನದ  ಸುವರ್ಣಾವಕಾಶ ಸಿಕ್ಕಿದ್ದು ಜಾತಕ ಫಲ ಚಿತ್ರದಲ್ಲಿ.  ಜಾತಕ ಬಲ, ಗ್ರಹಗಳ ಫಲದ ಈ ಹಾಡೂ ಅವರಿಗೇ ಸಿಕ್ಕಿತು.  ಮುಂದೆ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ವಿವಿಧ ಕಾರಣಗಳಿಂದಾಗಿ ಹಿನ್ನೆಲೆಗೆ ಸರಿಯುವಂತಾದದ್ದೂ  ಜಾತಕ ಬಲ, ಗ್ರಹಗಳ ಫಲದಿಂದಲೇ ಇರಬಹುದೇ.



ಜಾತಕ ಬಲವೇ ಬಲವಯ್ಯಾ
ಗ್ರಹಗಳ ಒಲವೇ ಫಲವಯ್ಯಾ
ಗಣಿತ ವಿಜ್ಞಾನ ವಿಲಾಸವಿದಯ್ಯಾ
ಜಾಣರ ಅನುಭವ ಸತ್ಯವಿದಯ್ಯಾ

ಮಡೆಯನ ಒಡೆತನ ಮಾಡಿಪುದಯ್ಯಾ
ಮೂಢನ ಮೇಧಾವಿ ಎನ್ನಿಪುದಯ್ಯಾ
ಬೇಡದ ಭಾಗ್ಯವ ನೀಡುವುದಯ್ಯಾ
ಕಡುಗಲಿ ಪೌರುಷ ಕಲಿಸುವುದಯ್ಯಾ
ಆಡದ ಆಟವ ಆಡಿಪುದಯ್ಯಾ
ನಡೆಯದ ಕುದುರೆಯ ನಡೆಸುವುದಯ್ಯಾ

ಅಡವಿಗೆ ದೂಡುತ ಅಲೆಸುವುದಯ್ಯಾ
ಒಡಲುರಿ ತಾಪದೆ ಕಾಡುವುದಯ್ಯಾ
ಸಾಯಲು ಸಮ್ಮತಿ ಸೂಚಿಸದಯ್ಯಾ
ಬಾಳಲು ಬೆಂಬಲ ತಾ ಕೊಡದಯ್ಯಾ
ಬ್ರಹ್ಮನ ಬರಹದ ಮುನ್ನುಡಿಯಯ್ಯಾ
ಭೂತ ಭವಿಷ್ಯದ ಕನ್ನಡಿಯಯ್ಯಾ

Tuesday 23 June 2020

ಮಕ್ಕಳಾಟದ ಮೂದಲಹಾಡಿಂದ ನೆನಪಾದ ಮಾವನ ಮಗಳು

ಮೂದಲಹಾಡು ಎಂಬ ಪದ ಬಹುಶಃ ಶಬ್ದಕೋಶದಲ್ಲಿ ಹುಡುಕಿದರೆ ಸಿಗಲಾರದು. ಮದುವೆ ಸಂದರ್ಭದಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯವರು ಪರಸ್ಪರರನ್ನು ಮೂದಲಿಸುತ್ತಾ ಹಾಡುವುದನ್ನು   ಮಂಗನ ಮೋರೆಯ ಮುದಿ ಮೂಸಂಗಿ  ಎಂಬ  ಮಲ್ಲಿ ಮದುವೆ  ಚಿತ್ರದ ಅಂಥದೇ ಹಾಡಲ್ಲಿ ಮೂದಲಹಾಡು ಎಂದು ಹೆಸರಿಸಿದವರು  ಕು.ರ.ಸೀತಾರಾಮ ಶಾಸ್ತ್ರಿ. ಇದಕ್ಕೆ ಸಮೀಪವಾದ ಮೂದಲೆವಾತು ಎಂಬ ಪದ ಕಿಟ್ಟೆಲ್ ಶಬ್ದಕೋಶದಲ್ಲಿದೆ.  ಮಲ್ಲಿ ಮದುವೆಯ  ಮಂಗನ ಮೋರೆ  ಹಾಡನ್ನು ನಾನು ‘ಆಡೋಣ ಬಾಬಾ ಗೋಪಾಲಾ’ಕ್ಕಿಂತಲೂ  ಹೆಚ್ಚು ಇಷ್ಟಪಡುತ್ತಿದ್ದೆ. ಇದಕ್ಕೆ ಕಾರಣ ನಾಲ್ಕನೇ ಕಾಲದ ತಬ್ಲಾ ನುಡಿತದೊಂದಿಗಿನ ಅದರ ವೇಗದ ನಡೆ ಮತ್ತು ಚಪ್ಪಟೆ ಮೂಗಿನ ಅಪ್ಪಟ ಚಿಟ್ಟೆ ಮುಂತಾದ ಪ್ರಾಸಬದ್ಧ ಪದಗಳು. ಇದನ್ನು ಬರೆದವರು ಕು.ರ.ಸೀ. ಆದರೂ ಇದನ್ನು ಕೇಳುವಾಗೆಲ್ಲ ನನಗೇಕೋ ಆರ್. ಎನ್. ಜಯ‘ಗೋಪಾಲ್ ’ ಮತ್ತು ಆ ಮೂಲಕ ಬಿಳಿಯ ಟೊಪ್ಪಿ ಧರಿಸಿ ತಲೆ ಅಲ್ಲಾಡಿಸುತ್ತಾ ಹಾಡಿಗೆ ತಬ್ಲಾ ನುಡಿಸುವವರು ಕಣ್ಣ ಮುಂದೆ ಬರುತ್ತಿದ್ದರು. ತಲೆಗೆ ಬಿಳಿ ಟೊಪ್ಪಿ ಧರಿಸುತ್ತಿದ್ದ ಉಜಿರೆ ಹೈಸ್ಕೂಲಿನ ‘ಗೋಪಾಲ’ ಮಾಸ್ಟ್ರು ಮತ್ತು ನಾನು ಕಾರ್ಕಳ ಜೈಹಿಂದ್ ಟಾಕೀಸಿನಲ್ಲಿ ನೋಡಿದ್ದ ಬರಸಾತ್ ಕೀ ರಾತ್ ಚಿತ್ರದ ಕವ್ವಾಲಿಗಳಲ್ಲಿ ತಲೆ ಅಲ್ಲಾಡಿಸುತ್ತಾ ತಬ್ಲಾ ನುಡಿಸುತ್ತಿದ್ದವರ ಚಿತ್ರ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದುದು ಈ ವಿಚಿತ್ರ ಲಿಂಕಿಗೆ ಕಾರಣ! ಆದರೆ ನಾನಿಲ್ಲಿ ಹೇಳ ಹೊರಟದ್ದು ಮಂಗನ ಮೋರೆ ಹಾಡಿನ ಬಗೆಗಲ್ಲ. ಅಂಥದ್ದೇ ಇನ್ನೊಂದು ಮೂದಲಹಾಡಿನ ಬಗ್ಗೆ.

ಶಾರ್ಟ್ ವೇವ್ ವಿವಿಧಭಾರತಿಯಲ್ಲಿ ಸಂಜೆ ನಾಲ್ಕೂವರೆಯ ನಂತರ ಹಿಂದಿ ಅನೌಂಸ್‌ಮೆಂಟಿನೊಂದಿಗೆ ಪ್ರಸಾರವಾಗುತ್ತಿದ್ದ ದಕ್ಷಿಣ ಭಾರತೀಯ ಭಾಷೆಗಳ ಹಾಡುಗಳಿಗೆ ಮೀಸಲಾದ ಮಧುರಗೀತಂ ಕಾರ್ಯಕ್ರಮದ ಬಗ್ಗೆ ಈ ಹಿಂದೆಯೂ ಅನೇಕ ಬಾರಿ ಹೇಳಿದ್ದೇನೆ.  ಬೆಳಗ್ಗೆ ಮತ್ತು ರಾತ್ರಿ ಮಾತ್ರ ಕೇಳಿಸುತ್ತಿದ್ದ ಬೆಂಗಳೂರು ಮತ್ತು ಧಾರವಾಡ ಮೀಡಿಯಂ ವೇವ್ ನಿಲಯಗಳಿಂದ ಸೀಮಿತ ಸಂಖ್ಯೆಯ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದುದರಿಂದ ಬಹುತೇಕ ಕನ್ನಡ ಹಾಡುಗಳ ಪರಿಚಯ ನಮಗಾಗುತ್ತಿದ್ದುದು ಈ ಮಧುರಗೀತಂ ಕಾರ್ಯಕ್ರಮದ ಮೂಲಕವೇ.  ಆ ಹೊತ್ತಿಗೆ ಮನೆಯಲ್ಲಿ ಕಾಫಿ ಬೀಜವನ್ನೋ ಇತರ ಮಸಾಲೆಗಳನ್ನೋ ಹುರಿಯುವ ಸಮಯವೂ ಆಗಿರುತ್ತಿದ್ದುದರಿಂದ ಈ ಕಾರ್ಯಕ್ರಮದ ನೆನಪಿನೊಂದಿಗೆ ಆ ಘಮವೂ ಸಮ್ಮಿಳಿತವಾಗಿ ಬಿಟ್ಟಿದೆ. ನಾನು ಒಂಭತ್ತನೆ ತರಗತಿಯಲ್ಲಿ ಓದುತ್ತಿದ್ದ ಕಾಲದಲ್ಲಿ   ಮಲ್ಲಿಗೆ ಅರಳಿಗೆ ಮುತ್ತಿನ ಚೆಂಡಿಗೆ  ಎಂಬ  ಮಕ್ಕಳು ಹಾಡಿದ ಹಾಡೊಂದು ಅದರಲ್ಲಿ ಪ್ರಸಾರವಾಗುತ್ತಿದ್ದು ಅದು  ಪತಿಯೇ ದೈವ  ಚಿತ್ರದ್ದೆಂದು ನನ್ನ ಮನದಲ್ಲಿ ದಾಖಲಾಗಿ ಹೋಗಿತ್ತು. ಬೇರೆ ನಿಲಯಗಳಿಂದ ಅದನ್ನು ನಾನು ಕೇಳಿದ್ದೇ ಇಲ್ಲ.   ಇತ್ತೀಚೆಗೆ  ಪತಿಯೇ ದೈವ  ಚಿತ್ರದ ಲೇಖನಕ್ಕಾಗಿ ಆ ಹಾಡೊಂದು ಎಲ್ಲಿ ಹುಡುಕಿದರೂ ಸಿಗಲಿಲ್ಲ. ಅನೇಕ ಸಮಾನ ಮನಸ್ಕ ಸ್ನೇಹಿತರನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ.  ಇತ್ತೀಚೆಗೆ ಇನ್ಯಾವುದೋ ಉದ್ದೇಶಕ್ಕಾಗಿ ಅಂತರ್ಜಾಲವನ್ನು ಜಾಲಾಡುತ್ತಿದ್ದಾಗ ‘ಮಲ್ಲಿಗೆ ಅರಳಿಗೆ’ ಎಂಬ ಸಾಲೊಂದು ಕಣ್ಣಿಗೆ ಬಿದ್ದಾಗ ಪರಮಾಶ್ಚರ್ಯವಾಯಿತು.  ನೋಡಿದರೆ ಅದು  ಮಾವನ ಮಗಳು  ಚಿತ್ರದ ಹಾಡಾಗಿತ್ತು!  ಅಂದರೆ ಇದುವರೆಗೆ ನಾನು ಮಾಡಿದ್ದು ‘ಇದ್ದದ್ದೆಲ್ಲೋ  ಹುಡುಕಿದ್ದೆಲ್ಲೋ’ಎಂಬಂತಾಗಿತ್ತು. ಮಧುರಗೀತಂ ಕಾರ್ಯಕ್ರಮದಲ್ಲಿ ಹಾಡುಗಳ ಸಂಪೂರ್ಣ ವಿವರ ಒದಗಿಸುತ್ತಿದ್ದರೂ ನನ್ನ ಮನಸ್ಸಿನಲ್ಲಿ ಈ ತಪ್ಪು ದಾಖಲಾತಿ ಹೇಗಾಗಿತ್ತೋ ಏನೋ. ಈ ಹಾಡಿನ ಬಗ್ಗೆ ನಾನು ಎಷ್ಟೊಂದು ಜನರಲ್ಲಿ ವಿಚಾರಿಸಿದ್ದೆನೆಂಬುದಕ್ಕೆ ಲೆಕ್ಕವಿಲ್ಲ.



ಕನ್ನಡದ ಅಮರ ಚಿತ್ರಗೀತೆಗಳಲ್ಲೊಂದಾಗಿ ಪರಿವರ್ತಿತವಾದ  ಕುವೆಂಪು ವಿರಚಿತ ನಾನೇ ವೀಣೆ ನೀನೇ ತಂತಿ ಕವನದಿಂದಾಗಿ  ಮಾವನ ಮಗಳು ಎಂಬ ಹೆಸರು ಕಿವಿಗೆ ಬೀಳುತ್ತಿದೆಯಷ್ಟೇ ಹೊರತು ಅದು ಎಂದೋ ಮರೆತು ಹೋದ ಚಿತ್ರ. ಈ ಚಿತ್ರದ ಉಳಿದ ಹಾಡುಗಳೂ ಅವಜ್ಞೆಗೊಳಗಾಗಿವೆ.  ಮೊನ್ನೆ ಅವೆಲ್ಲವುಗಳ ಅತ್ಯುತ್ತಮ ಗುಣಮಟ್ಟದ ವೀಡಿಯೊ ಅಂತರ್ಜಾಲದಲ್ಲಿ ಕಾಣಿಸುವವರೆಗೆ ನಾನೂ ಅವುಗಳನ್ನು ಮರೆತಿದ್ದೆ.  ಪೂರ್ತಿ ಚಿತ್ರವೂ ಈಗ ಅಂತರ್ಜಾಲದಲ್ಲಿ ಇದೆ.  ಕಲ್ಯಾಣ್ ಕುಮಾರ್, ಜಯಲಲಿತಾ ಮುಖ್ಯ ಭೂಮಿಕೆಯಲ್ಲಿದ್ದ 1965ರ ಈ ಚಿತ್ರ ಆಶಾಪೂರ್ಣಾದೇವಿ ಎಂಬ ಬಂಗಾಲಿ ಲೇಖಕಿ ಬಾಲ್ಯವಿವಾಹದ ಸುತ್ತ ಹೆಣೆದ ಕಥೆಯನ್ನು ಆಧರಿಸಿತ್ತು. ಎಸ್.ಕೆ.ಎ. ಚಾರಿ ನಿರ್ದೇಶಿಸಿದ್ದರು. ಟಿ ಚಲಪತಿರಾವ್ ಸಂಗೀತವಿತ್ತು. ಇದೇ ಕಥೆಯನ್ನಾಧರಿಸಿ 1959ರಲ್ಲಿ ತೆಲುಗಿನಲ್ಲಿ ಮಾಂಗಲ್ಯ ಬಲಂ ಮತ್ತು ತಮಿಳಿನಲ್ಲಿ ಮಂಜಲ್ ಭಾಗ್ಯಂ   ಹಾಗೂ ಆ ಮೇಲೆ   1967ರಲ್ಲಿ ಹಿಂದಿಯ ಛೋಟೀ ಸೀ ಮುಲಾಕಾತ್  ತಯಾರಾಗಿದ್ದವು.    ಜಯಲಲಿತಾ ಕನ್ನಡದಲ್ಲಿ ನಾಯಕಿಯಾಗಿ ಅಭಿನಯಿಸಿದ ಮಾವನ ಮಗಳು, ಮನೆ ಅಳಿಯ, ಚಿನ್ನದ ಗೊಂಬೆ, ನನ್ನ ಕರ್ತವ್ಯ ಹಾಗೂ ಬದುಕುವ ದಾರಿ ಇವೆಲ್ಲವುಗಳಲ್ಲಿ ಕಲ್ಯಾಣ್ ಕುಮಾರ್ ಅವರೇ ನಾಯಕನಾಗಿದ್ದುದು ಗಮನಾರ್ಹ.

ಮಾವನ ಮಗಳು ಚಿತ್ರದ ಶೂಟಿಂಗ್ ಸಮಯದ ಅಪರೂಪದ ಚಿತ್ರವೊಂದು ಇಲ್ಲಿದೆ.  ಇದು ಆವುದೊ ಆವುದೊ ಹಾಡಿನ ಸಂದರ್ಭದ್ದಿರಬಹುದು.



ನಾನು ನೋಡಿರದ ಮತ್ತು   ನನ್ನಲ್ಲಿ ಪದ್ಯಾವಳಿ ಇಲ್ಲದ ಸಿನಿಮಾಗಳ ಪೈಕಿ  ಮಾವನ ಮಗಳು ಕೂಡ ಒಂದು.  ಇಂಥ ಸಂದರ್ಭದಲ್ಲಿ ನನಗೆ ನೆರವಾಗುವವರು ಸಿನಿಮಾ ಮತ್ತು ಟಿ.ವಿ. ಮಾಧ್ಯಮದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಿತ್ರ ಕೃಷ್ಣಪ್ರಸಾದ್. ತಮ್ಮಲ್ಲಿರುವ ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕದಿಂದ ನನಗೆ ಬೇಕಿದ್ದ ಮಾಹಿತಿಯನ್ನು ಕೇಳಿದಾಕ್ಷಣ ಅವರು ಕಳಿಸಿಕೊಡುತ್ತಾರೆ. ಅದರಲ್ಲಿ ನೋಡುತ್ತೇನಾದರೆ ಈ ಚಿತ್ರದ ಹಾಡುಗಳನ್ನು ಕುವೆಂಪು ಅಲ್ಲದೆ ಎಂ.ನರೇಂದ್ರಬಾಬು, ಕು.ರ.ಸೀ, ಆರ್.ಎನ್. ಜಯಗೋಪಾಲ್ ಮತ್ತು ವಿಜಯನಾರಸಿಂಹ ಬರೆದಿದ್ದಾರೆ. ಇಂಥ ಸಂದರ್ಭದಲ್ಲಿ ಯಾವ ಹಾಡು ಯಾರು ಬರೆದದ್ದು ಎಂದು ತಿಳಿಯಲು ಆಕಾಶವಾಣಿ, ಗ್ರಾಮೊಫೋನ್ ರೆಕಾರ್ಡ್  ಅಥವಾ ಪದ್ಯಾವಳಿ ಮಾತ್ರ ಆಧಾರ. ಈ ಹಿಂದೆ ಅನೇಕ ಬಾರಿ ಸಹಾಯ ಮಾಡಿದ್ದ ಆಕಾಶವಾಣಿ ಮಿತ್ರರಿಂದ ಈ ಸಲ ಮಾಹಿತಿ ದೊರಕಲಿಲ್ಲ. ರೆಕಾರ್ಡ್ ಸಂಗ್ರಹ ಹವ್ಯಾಸವಿರುವ ಮಿತ್ರರಲ್ಲೂ ಈ ಚಿತ್ರದ ಹಾಡುಗಳು ಇರಲಿಲ್ಲ.  ಕೊನೆಗೆ ನೆರವಿಗೆ ಬಂದದ್ದು ಪ್ರಸಿದ್ಧ ಸಾಹಿತಿ ಮತ್ತು ಚಲನಚಿತ್ರ ಇತಿಹಾಸಜ್ಞ ಶ್ರೀಧರಮೂರ್ತಿ ಅವರು.  ವ್ಯಸ್ತತೆಯ ನಡುವೆಯೂ ಈ ಚಿತ್ರದ ಪದ್ಯಾವಳಿಯನ್ನು ತಮ್ಮ ಬೃಹತ್ ಸಂಗ್ರಹದಿಂದ ಹುಡುಕಿ ಛಾಯಾಪ್ರತಿಯನ್ನು ನನಗೆ ಒದಗಿಸಿದರು. ಅದರಲ್ಲಿರುವ ಚಿತ್ರದ ಎಲ್ಲ ಹಾಡುಗಳ ವಿವರ ಮತ್ತು ಸಾಹಿತ್ಯವನ್ನು ಇಲ್ಲಿ scroll  ಮಾಡುತ್ತಾ ನೋಡಬಹುದು.




1. ಮಲ್ಲಿಗೆ ಅರಳಿಗೆ.
ನಾನು ಬಹುಕಾಲದಿಂದ ಹುಡುಕುತ್ತಿದ್ದು ಇದನ್ನೇ. ವಿಜಯನಾರಸಿಂಹ ಬರೆದ ಈ ಮೂದಲಹಾಡನ್ನು ಅಜ್ಞಾತ ಬಾಲಗಾಯಕಿಯರಾದ ಸಾವಿತ್ರಿ, ಸೀತಾ ಮತ್ತಿತರರು ಬಲು ಸೊಗಸಾಗಿ ಹಾಡಿದ್ದಾರೆ. ರೇಡಿಯೋದಲ್ಲಿ ಇವರ ಹೆಸರು ಹೇಳುತ್ತಿದ್ದರೋ ಅಥವಾ ಸುಮ್ಮನೆ ಸಹಗಾನವೆಂದು ಹೇಳುತ್ತಿದ್ದರೋ ನೆನಪಿಲ್ಲ. ಚಲಪತಿ ರಾವ್ ಅವರು ಸಾಮಾನ್ಯ ಸಿನಿಮಾ ಹಾಡುಗಳಿಗಿಂತ ಭಿನ್ನವಾಗಿ ನಿಲ್ಲುವಂತೆ ಇದಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ.  ನಡುವೆ pause ತುಂಬಿಸಲು ಚಪ್ಪಾಳೆಗಳ ಪ್ರಯೋಗ ಗಮನ ಸೆಳೆಯುತ್ತದೆ. ಹಿರಿಯರನ್ನು ಅನುಕರಿಸುವ ಮಕ್ಕಳ ಮದುವೆಯಾಟದ ಈ ಹಾಡಿನಲ್ಲಿ ಗಂಡು ಮತ್ತು ಹೆಣ್ಣಿನ ಕಡೆಯವರು  ಪರಸ್ಪರ ತಮಾಷೆಯಾಗಿ ಮೂದಲಿಸಿಕೊಳ್ಳುತ್ತಾರೆ. ಕೊನೆಗೆ ಹಿರಿಯಳೊಬ್ಬಳು ಜಗಳ, ರಗಳೆ ಎಲ್ಲ ಮದುವೆ ಮನೆಗೆ ಚಂದವೇ, ಆದರೆ ಮದುವೆಯಾದ ಮೇಲೆ ಮನಸು ಮನಸು ಬೆರೆತು ಸಮರಸದ ಸಂಸಾರ ಸಾಗಿಸುವುದು ಮುಖ್ಯ ಎಂದು ಉಪಸಂಹಾರ ಮಾಡುತ್ತಾಳೆ.  ಆ ಕಾಲದಲ್ಲಿ ಈ ಹಾಡನ್ನು ರೇಡಿಯೋದಲ್ಲಿ ಕೇಳುತ್ತಿದ್ದಾಗ ಅಷ್ಟೊಂದು ಹೋಲಿಕೆಯಿಲ್ಲದಿದ್ದರೂ ಆಗ ಪ್ರಚಲಿತವಾಗಿದ್ದ  ಲಾಲಿ ಲಾಲಿ ಡೋಲಿಯಾ ಮೆ ಆಯೀ ರೇ ದುಲ್ಹನಿಯಾ ಎಂಬ ತೀಸ್ರೀ ಕಸಂ ಚಿತ್ರದ ಶಂಕರ್ ಜೈಕಿಶನ್ ಅವರದ್ದೆಂದು ನಂಬಲಾಗದ ಸರಳ ಸುಂದರ ಹಾಡೊಂದು ನೆನಪಾಗುತ್ತಿತ್ತು.




2. ಆವುದೊ ಆವುದೊ.
ಕು.ರ.ಸೀ ರಚನೆ. ಜಾನಕಿ ಧ್ವನಿ.  ಉತ್ಸಾಹದ ಬುಗ್ಗೆಯಾದ ನವ ತರುಣಿಯ ಭಾವನೆಗಳಿಗೆ ಸರಿ ಹೊಂದುವಂತೆ ವೇಗದ ಲಯ.  ಹಾಡಿನ ಮೂಡ್ ಮತ್ತು ಕೆಲವು ಸಾಲುಗಳು ಜಂಗ್ಲಿಯ ಜಾ ಜಾ ಜಾ ಮೇರೇ ಬಚ್‌ಪನ್ ನೆನಪಾಗುವಂತೆ ಮಾಡುತ್ತವೆ.



3. ಇನ್ನೂ ಯಾಕೆ ಅಂಜಿಕೆ.
ಕು.ರ.ಸೀ ಅವರದ್ದೇ ಸಾಹಿತ್ಯ.  ಹಾಡಿದವರು ಪೀಠಾಪುರಂ ನಾಗೇಶ್ವರ ರಾವ್ ಮತ್ತು ಬಿ.ವಸಂತ. ಇದನ್ನು ರೇಡಿಯೋದಲ್ಲಿ ಎಂದೂ ಕೇಳಿದ ನೆನಪಿಲ್ಲ.  ನರಸಿಂಹರಾಜು  ಅಭಿನಯದ ಹಾಡುಗಳು ಸಾಮಾನ್ಯವಾಗಿ ಹಿಟ್ ಆಗುತ್ತವೆ.  ಆದರೆ ಇದ್ಯಾಕೋ ಆಗಿಲ್ಲ.



4. ಮಧುರ ಮಿಲನದಾ ಸವಿ ನೆನಪೊಂದು. 
ಆರ್.ಎನ್. ಜಯಗೋಪಾಲ್ ವಿರಚಿತ ಈ ಗೀತೆ ಎಸ್. ಜಾನಕಿ ಮತ್ತು ಬಿ. ವಸಂತ ಅವರ ಯುಗಳ ಸ್ವರಗಳಲ್ಲಿದೆ. ರೇಡಿಯೋದಲ್ಲಿ ಸಾಕಷ್ಟು ಬಾರಿ ಕೇಳಿಸುತ್ತಿತ್ತು.  ಈಗ ಸಂಪೂರ್ಣ ವಿಸ್ಮೃತಿಗೆ ಒಳಗಾಗಿದೆ.  ಎಂ. ವೆಂಕಟರಾಜು ಅವರ್ ಶೈಲಿಯ ಸಂಗೀತ ನೀಡುತ್ತಿದ್ದ ಚಲಪತಿ ರಾವ್ ಅವರಿಗೆ ವೀಣೆ ಮತ್ತು ಸೋಲೋವಾಕ್ಸ್ ಪ್ರಿಯ ಸಂಗೀತೋಪಕರಣಗಳೆನಿಸುತ್ತದೆ.  ಈ ಹಾಡಲ್ಲೂ ಅವುಗಳ ವ್ಯಾಪಕ ಬಳಕೆ ಇದೆ.



5. ನಾನೆ ವೀಣೆ ನೀನೆ ತಂತಿ.
‘ಮಾವನ ಮಗಳು’ ಚಿತ್ರದ ಹೆಸರು ಉಳಿದಿರುವುದೇ ಕುವೆಂಪು ಅವರ ಈ ರಚನೆಯಿಂದ.  ಆದರೂ ಆಗಲೇ ಬಂದಿದ್ದ ಮಿಸ್. ಲೀಲಾವತಿಯ ದೋಣಿ ಸಾಗಲಿ ಹಾಡಿನ ಎದುರು ನನಗೆ ವೈಯುಕ್ತಿಕವಾಗಿ ಇದು ಸಪ್ಪೆ ಎಂದೇ ಅನಿಸುತ್ತಿದ್ದುದು. ಈಗಲೂ ನನ್ನ ಅಭಿಪ್ರಾಯ ಬದಲಾಗಿಲ್ಲ.  ಇದರ ಹೆಚ್ಚಿನ ಸಾಲುಗಳನ್ನು ಜಾನಕಿಯೇ ಹಾಡಿದ್ದು ಇಡೀ ಚಿತ್ರದಲ್ಲಿ ಪಿ.ಬಿ. ಶ್ರೀನಿವಾಸ್ ಅವರು ಈ ಒಂದೇ ಹಾಡಿನ ಸೀಮಿತ ಸಾಲುಗಳಿಗೆ ಮಾತ್ರ ಧ್ವನಿಯಾಗಿರುವುದು ಗಮನಿಸಬೇಕಾದ ಅಂಶ.

ಇದರ ‘ನನ್ನ ನಿನ್ನ ಹೃದಯಮೀನ‍ಕಲ್ಲಿ ಜೇನ ಸೊಗದ ಸ್ನಾನ’ ಎಂಬ ಭಾಗ ಹೆಚ್ಚು ಚರ್ಚೆಗೆ ಒಳಗಾಗಿದೆ.  ವಿಳಂಬ ಗತಿಯ 4/4 ತಾಳದಲ್ಲಿ ಸಂಯೋಜಿಸಿರುವುದರಿಂದ ಈ ಭಾಗವನ್ನು  ಹಾಡುವಾಗ ಅನಿವಾರ್ಯವಾಗಿ ಮೀನ ಮತ್ತು ಕಲ್ಲಿ ನಡುವೆ ಸುದೀರ್ಘ pause ನೀಡಬೇಕಾಗಿ ಬಂದುದರಿಂದ ಅರ್ಥೈಸುವಲ್ಲಿ ಉಂಟಾಗುವ ಗೊಂದಲ ಇದಕ್ಕೆ ಕಾರಣ. ಇತ್ತೀಚೆಗೆ facebookನಲ್ಲೂ ಇದರ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.  ಅನೇಕರು ಕಲ್ಲಿಯನ್ನು ಮೀನದಿಂದ ಬೇರ್ಪಡಿಸಿ ಅದಕ್ಕೆ ಜೇನ ಸೇರಿಸಿ ಕಲ್ಲಿಜೇನ ಎಂಬ ಪದ ಕಲ್ಪಿಸುತ್ತಾರೆ. ಕಲ್ಲಿಜೇನು ಅಂದರೆ ವಿಶೇಷ ರೀತಿ ಗೂಡು ಕಟ್ಟುವ ಒಂದು ಜಾತಿಯ ಜೇನು ಎಂದು ವ್ಯಾಖ್ಯಾನಿಸುವವರೂ ಇದ್ದಾರೆ!  ಇನ್ನು ಕೆಲವರು ಅದು ಹೃದಯಮೀನಕಲ್ಲಿ(ಮೀನಕೆ ಅಲ್ಲಿ) ಎಂದು  ಹೇಳುತ್ತಾರೆ. ಭುವನವೆಲ್ಲ ಸವಿಯ ಸೊಲ್ಲ ಕವಿಯ ಗಾನ ಎಂಬ ಹಿಂದಿನ ಸಾಲು  ಎರಡನೆಯ ವಿಶ್ಲೇಷಣೆಗೆ ಪೂರಕವಾಗಿ  ಇದೆ. ಒಟ್ಟಿನಲ್ಲ್ಲಿ ನನ್ನ ನಿನ್ನ ಹೃದಯವೆಂಬ ಮೀನಿಗೆ ಅಲ್ಲಿ ಮಾಧುರ್ಯದ ಜೇನಿನ ಸ್ನಾನದ ಜೊತೆಗೆ ಅಮೃತ ಪಾನ  ಎಂಬ ಅರ್ಥ ಮೂಡುತ್ತದೆ.   ನಾನೆ ತಾಯಿ ನಾನೆ ತಂದೆ ನಿನ್ನ ಪಾಲಿಗೆ  ಹಾಡಿನಂತೆ ರೂಪಕ(ದಾದ್ರಾ - 3/4) ತಾಳದಲ್ಲಿ ಇದರ ಸಂಯೋಜನೆ ಇರುತ್ತಿದ್ದರೆ ಹಾಡುವಾಗ ಮೀನ ಮತ್ತು ಕಲ್ಲಿ ಒಟ್ಟೊಟ್ಟಿಗೆ ಬರುವುದರಿಂದ ಈ ಗೊಂದಲ ಉಂಟಾಗುತ್ತಿರಲಿಲ್ಲ. ಕವಿ ಸಹ ನಾನೇ, ನೀನೇ, ಅವನೇ ಎಂಬ ನಾಲ್ಕು ಮಾತ್ರಾಕಾಲದ  ಪದಗಳನ್ನು ಮೂರು ಮಾತ್ರೆಗಳಿಗೆ ಸರಿ ಹೊಂದುವಂತೆ ನಾನೆ, ನೀನೆ, ಅವನೆ ಎಂದೇ ಬರೆದಿರುವುದನ್ನು ಗಮನಿಸಬಹುದು. ಇದಕ್ಕೆ  ಪೂರಕವಾಗಿ ಭೀಮ್‌ಸೇನ್ ಜೋಶಿ ಅವರ ಈ ಧ್ವನಿಮುದ್ರಿಕೆಯನ್ನು ಆಲಿಸಬಹುದು.  ಆದರೆ ಈಗ ಇದ್ದಂತೆ ಆ  ಹಾಡನ್ನು ಕುವೆಂಪು ಸಹ ಖಂಡಿತ ಕೇಳಿರುತ್ತಾರೆ. ಈ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು ಎಂದು ಎಲ್ಲೂ ಓದಿದ ನೆನಪಿಲ್ಲ.

ಪ್ರೇಮಕಾಶ್ಮೀರ ಕವನ ಸಂಕಲದಲ್ಲಿ ಪ್ರಕಟವಾದ ವೀಣಾಗಾನ ಶೀರ್ಷಿಕೆಯ ಮೂಲ ಕವನ ಹೀಗಿದೆ. ಇಲ್ಲಿ ಪಲ್ಲವಿ ಮತ್ತು ಚರಣಗಳು ಎಂಬ ವ್ಯತ್ಯಾಸ ಇಲ್ಲದೆ ಒಂದೇ ರೀತಿಯ ಹರಹಿನ ಮೂರು ಭಾಗಗಳು ಇರುವುದನ್ನು ಗಮನಿಸಬಹುದು.  ಎರಡನೆಯ ಚರಣದಲ್ಲಿ ಹೃದಯಮೀನದ ನಂತರದ ಕಲ್ಲಿ ಮುಂದಿನ ಸಾಲಿಗೆ ಹೋಗಬೇಕಾದಾಗ ಹೃದಯಮೀನಕಲ್ಲಿ ಒಂದೇ ಪದಪುಂಜ ಎಂದು ಸೂಚಿಸಲು ಹೈಫನ್(-) ಇರುವುದನ್ನು ಗಮನಿಸಬಹುದು.

ಸಿನಿಮಾದಲ್ಲಿ ಬಳಸುವಾಗ ಮೊದಲ ಭಾಗದ ಅರ್ಧವನ್ನು ಪಲ್ಲವಿಯಾಗಿಸಿ ಉಳಿದರ್ಧವನ್ನು ಮೊದಲ ಚರಣ ಮಾಡಿಕೊಂಡಿದ್ದಾರೆ.  ಮೂರನೆ ಚರಣ ಬಳಕೆಯಾಗಿಲ್ಲ.




6. ಒಲಿಸಿದ ದೇವನ
ಕು.ರ.ಸೀ ವಿರಚಿತವಾದ ಇದು  ಚಿತ್ರದ ಸರ್ವಶ್ರೇಷ್ಠ ಗೀತೆ ಮತ್ತು ಎಸ್. ಜಾನಕಿ ಅವರ ಅತ್ಯುತ್ತಮ ಗೀತೆಗಳಲ್ಲಿ ಒಂದು ಎಂದು ನನ್ನ ಅನಿಸಿಕೆ. ಒಲಿಸಿದವರ ರಸಪೂಜೆಗೆ ನಿಲುಕದೆ ವರಿಸಿದವರಿಗೆ ಹರಕೆಯ ಮುಡಿಪಾದವರು ಕಥೆ, ಕಾದಂಬರಿ, ಸಿನಿಮಾಗಳಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಸಾಕಷ್ಟು ಇದ್ದಾರೆ. ಸಂಗಂ ಚಿತ್ರದಲ್ಲಿ ವೈಜಯಂತಿಮಾಲಾ ‘ಪ್ಯಾರ್ ಏಕ್ ಎಹಸಾಸ್ ಹೈ. ವೊ ಹೋ ಜಾತಾ ಹೈ.  ಲೆಕಿನ್ ಶಾದೀ ಏಕ್ ಧರಮ್ ಹೈ ಔರ್ ಮೈನೆ ಉಸ್ ಧರಮ್ ಕೊ ನಿಭಾಯಾ ಹೈ’ ಎಂದು ಹೇಳುವ ಸಾಲುಗಳು ನನಗಿಲ್ಲಿ ನೆನಪಾಗುತ್ತವೆ.  ಶಿವರಾಮ ಕಾರಂತರ ಯಾವುದೋ ಕಾದಂಬರಿಯಲ್ಲಿರುವ  ‘ಮುಂದಿನ ಜನ್ಮದಲ್ಲಿಯೂ ಈಗಿರುವ ಪತಿ/ಪತ್ನಿಯೇ ದೊರಕಲಿ ಎಂದು ಮನದಾಳದಿಂದ ಆಶಿಸುವವರು ಬೆರಳೆಣಿಕೆಯಷ್ಟು ಇರಬಹುದು’ ಎಂಬರ್ಥದ ಸಾಲುಗಳೂ ನೆನಪಾಗುತ್ತವೆ!


ನೀಡಿದರಾರೋ ಮಂಗಳ ಸೂತ್ರ
ಅವರೇ ಒಲವಿಗೆ ಪಾತ್ರ
ತನುಮನ ಮೀಸಲು ಅವರಿಗೆ ಮಾತ್ರ
ಅನ್ಯರು ತಂದೆಯ ಗೋತ್ರ
ಎಂಬಂಥ ಸಾಲುಗಳನ್ನು ಕು.ರ.ಸೀ ಅಲ್ಲದೆ ಇನ್ಯಾರು ಬರೆಯಲು ಸಾಧ್ಯ?



7. ಪ್ರೇಮ ಪ್ರೇಮ
ಇದು ಕೂಡ ನರಸಿಂಹರಾಜು  ಅವರ ಮೇಲೆ ಚಿತ್ರೀಕರಿಸಲಾದರೂ ಗಮನ ಸೆಳೆಯದ  ಹಾಡು.  ನಾನು ಒಮ್ಮೆಯೂ ಕೇಳಿರಲಿಲ್ಲ.  ದಾಖಲೆಗಾಗಿ ಇಲ್ಲಿ ಸೇರಿಸಿದ್ದೇನೆ. ಟಿ.ಆರ್. ಜಯದೇವ್ ಮತ್ತು  ಸ್ವರ್ಣಲತಾ ಹಾಡಿದ್ದಾರೆ.



8. ಚಂದ್ರೋದಯ ಮಂದಾನಿಲ
ನರೇಂದ್ರಬಾಬು ಬರೆದು ಎಸ್. ಜಾನಕಿ ಹಾಡಿರುವ ಇದು ನನಗೆ ಅಂದು ಹತ್ತರಲ್ಲಿ ಹನ್ನೊಂದು ಅನ್ನಿಸಿತ್ತು.  ಆದರೆ ಈಗ ಆಲಿಸಿದರೆ ಇದರಲ್ಲೇನೋ ಇದೆ ಅನ್ನಿಸುತ್ತಿದೆ.  ವಿಶೇಷವಾಗಿ ಚರಣ ಭಾಗದಲ್ಲಿ ಜಾನಕಿ ಅವರು ಒಂದೇ ಉಸಿರಲ್ಲಿ  ಹಾಡಿದ 10 ಸೆಕೆಂಡುಗಳಷ್ಟು ದೀರ್ಘ ಸಾಲಿನಲ್ಲಿ ಏನೋ ವಿಶಿಷ್ಟ ಆಕರ್ಷಣೆ ಇದೆ. ಶಂಕರ್ ಜೈಕಿಶನ್ ಶೈಲಿಯ  ವೇಗದ ಲಯದಲ್ಲಿ ವಾದ್ಯಗಳನ್ನು ನುಡಿಸಿದವರ ಕೈ ಚಳಕವೂ ಭಲೇ ಅನ್ನುವಂತಿದೆ.

1965ರ ಈ ಕಾಲಘಟ್ಟದಲ್ಲಿ ನಮ್ಮ ಹಳ್ಳಿಯ ದೊಡ್ಡ ಮನೆಯಲ್ಲಿ ವಿದ್ಯುತ್ ವಯರಿಂಗ್ ಕೆಲಸ ನಡೆಯುತ್ತಿತ್ತು.  ಅದಕ್ಕಾಗಿ ಪುತ್ತೂರಿಂದ ಬಂದ ಸಂಕಪ್ಪ ಮತ್ತು ಭಾಸ್ಕರ ಎಂಬವರು ನಮ್ಮಲ್ಲೇ  ಸುಮಾರು 15-20 ದಿನ ಉಳಿದುಕೊಂಡಿದ್ದರು.  ಒಂದು ದಿನ ಅವರು ರಾತ್ರೆ ಊಟ ಮಾಡುವಾಗ ಅಲ್ಲಿದ್ದ ಚಿಮಿಣಿ ದೀಪದ ಮಿಣುಕು ಬೆಳಕು ಸಾಲದೆಂದು ನನಗೆನಿಸಿ ಲಾಟೀನೊಂದನ್ನು ಅವರಿದ್ದಲ್ಲಿಗೆ ಒಯ್ಯುವಾಗ ರೇಡಿಯೋದಲ್ಲಿ ಈ ಹಾಡು ಬರುತ್ತಿತ್ತು.  ಈಗ ಈ ಹಾಡು ಕೇಳುವಾಗಲೆಲ್ಲ ನನಗೆ ನೆನಪಾಗುವುದು ಸಂಕಪ್ಪ,  ಭಾಸ್ಕರ ಮತ್ತು ಲಾಟೀನು!



ಅತ್ಯುತ್ತಮ ಗುಣಮಟ್ಟದಲ್ಲಿ ಧ್ವನಿಮುದ್ರಿತವಾದ ಈ ಹಾಡುಗಳ ಸಂಪೂರ್ಣ ಆನಂದ ದೊರೆಯಬೇಕಾದರೆ ಹೆಡ್‌ಫೋನ್ / ಇಯರ್‌ಫೋನ್ ಬಳಸಬೇಕು.  ಪದ್ಯಾವಳಿಯ pdf  ತೆರೆದಿಟ್ಟುಕೊಂಡರೆ  ಇನ್ನೂ ಒಳ್ಳೆಯದು.

ಈ ಹಾಡುಗಳನ್ನು ವೀಡಿಯೊ ರೂಪದಲ್ಲಿ ನೋಡಲಿಚ್ಛಿಸುವವರು ಇಲ್ಲಿ ಕ್ಲಿಕ್ಕಿಸಿ.







Friday 5 June 2020

ನವಜೀವನ ಸವಿಗಾನ


ಚಲನಚಿತ್ರ ಸಂಗೀತದ ಸುವರ್ಣಯುಗ ಎಂದು ಗುರುತಿಸಲ್ಪಡುವ 1950-60ರ ದಶಕಗಳಲ್ಲೂ ಒಂದು ಚಿತ್ರದ ಎಲ್ಲಾ ಹಾಡುಗಳು  ಜನಪ್ರಿಯವಾಗಿ ಚಲಾವಣೆಯಲ್ಲಿರುವುದು ಅಪರೂಪದ ವಿದ್ಯಮಾನವೇ ಆಗಿತ್ತು. ಸಾಮಾನ್ಯವಾಗಿ ಚಿತ್ರಗಳ ಒಂದೋ ಎರಡೋ ಹಾಡುಗಳು ಬಲು ಜನಪ್ರಿಯವಾಗಿ ಉಳಿದವು ಹಿನ್ನೆಲೆಗೆ ಸರಿಯುತ್ತಿದ್ದವು. ಹಿಂದಿ, ಕನ್ನಡ, ತಮಿಳು, ತೆಲುಗು ಎಲ್ಲ ಭಾಷೆಗಳಿಗೂ ಈ ಮಾತು ಅನ್ವಯಿಸುತ್ತದೆ. 1964ರಲ್ಲಿ ಬಿಡುಗಡೆಯಾದ ರಾಜನ್ ನಾಗೇಂದ್ರ ಅವರ ಸಂಗೀತವಿದ್ದ ನವಜೀವನ ಚಿತ್ರ ಈ ಸಾಲಿಗೆ ಸೇರುತ್ತದೆ. ಈ ಚಿತ್ರದ ಎಲ್ಲ ಹಾಡುಗಳು ಏಕಪ್ರಕಾರವಾಗಿ ಜನಪ್ರಿಯಗೊಂಡು ಇಂದಿಗೂ ಆಸಕ್ತಿಯಿಂದ ಆಲಿಸಲ್ಪಡುತ್ತಿವೆ.  ತಾರೆ ಹರಿಣಿಯ ಸಹೋದರರಾದ ವಾದಿರಾಜ್-ಜವಾಹರ್ ತಮ್ಮ ‘ಭಾರತಿ ಚಿತ್ರ’ ಲಾಂಛನದಲ್ಲಿ ತಯಾರಿಸಿದ ಎರಡನೆ ಚಿತ್ರ ಇದು. ಮೊದಲನೆ ಚಿತ್ರ ನಂದಾದೀಪಕ್ಕೆ ಎಂ. ವೆಂಕಟರಾಜು ಅವರ ಸಂಗೀತವಿತ್ತು. ಅವರು ಚಿತ್ರದ ಬಜೆಟ್ ಲೆಕ್ಕಿಸದೆ ದೊಡ್ಡ ಆರ್ಕೆಸ್ಟ್ರಾ ಬೇಕೆಂದು ಪಟ್ಟು ಹಿಡಿದುದರಿಂದ ರಾಜನ್ ನಾಗೇಂದ್ರ ಅವರನ್ನು ಆಯ್ಕೆ ಮಾಡಲಾಯಿತು ಎಂದು ವಾದಿರಾಜ್ ಒಂದು ಸಂದರ್ಶನದಲ್ಲಿ ಹೇಳಿದ್ದರು. ಕಮ್ಮಿ ವಾದ್ಯಗಳನ್ನು ಬಳಸಿಯೂ ಉತ್ತಮ ಸಂಗೀತ ಸಂಯೋಜನೆ ಮಾಡಬಹುದು ಎಂದು ರಾಜನ್ ನಾಗೇಂದ್ರ ಸಾಧಿಸಿ ತೋರಿಸಿದರು.

ಒಬ್ಬ ಹೀರೊ, ಒಬ್ಬಳು ಹೀರೊಯಿನ್, ಮರಸುತ್ತುವ ಹಾಡುಗಳ ಜನಪ್ರಿಯ ಫಾರ್ಮುಲಾಗೆ ಹೊರತಾದ ನಿರೂಪಣೆಯುಳ್ಳ ಈ ಚಿತ್ರವನ್ನು ನಿರ್ದೇಶಿಸಿದವರು ಪ್ರಸಿದ್ಧ ಸಂಕಲನಕಾರರಾಗಿದ್ದ ಪಿ.ಎಸ್. ಮೂರ್ತಿ.  ಸೋರಟ್ ಅಶ್ವತ್ಥ್ ಅವರ ಸಂಭಾಷಣೆ ಮತ್ತು ಹಾಡುಗಳಿದ್ದು ಕೆ.ಎಸ್. ಅಶ್ವತ್ಥ್, ಆರ್.ಎನ್. ಸುದರ್ಶನ್, ನರಸಿಂಹರಾಜು, ವಾದಿರಾಜ್, ರತ್ನಾಕರ್, ಹೆಚ್.ಆರ್. ಕೃಷ್ಣ ಶಾಸ್ತ್ರಿ,  ಪಂಢರಿಬಾಯಿ,  ರೇವತಿ, ಚಿಂದೋಡಿ ಲೀಲಾ ಹಾಗೂ ರಂಗಭೂಮಿ ಹಿನ್ನೆಲೆಯ ಇತರರ ತಾರಾಗಣವಿತ್ತು.  ತನ್ನ ಸಹೋದರರ ಚಿತ್ರವೇ ಆದರೂ ಹರಿಣಿ ಇದರಲ್ಲಿ ಕೆಲವೇ ಕ್ಷಣಗಳು ಕಾಣಿಸುವ ಗೆಸ್ಟ್ ಆರ್ಟಿಸ್ಟ್  ಆಗಿದ್ದದ್ದು ವಿಶೇಷ.

ಒಂದು ಹಳ್ಳಿಯೂರಿನಿಂದ ಶಿವಮೊಗ್ಗಕ್ಕೆ ಹೋಗುವ ಕೊನೆಯ ಬಸ್ಸು ತಪ್ಪಿದುದರಿಂದ ಮಮ್ಮದು ಎಂಬವನ ವ್ಯಾನಿನಲ್ಲಿ ಪಯಣಿಸುತ್ತಿರುವ  ಪರಸ್ಪರ ಮರಿಚಯವಿಲ್ಲದ ಅಂತೋಣಿ ಎಂಬ ನಿವೃತ್ತ ಸರಕಾರಿ ನೌಕರ,  ಬಾಲಕೃಷ್ಣಯ್ಯ ಮತ್ತು ಭಾಮಾ ಎಂಬ ನವದಂಪತಿ,  ಶ್ಯಾಮಲಾ ಎಂಬ ಮಧ್ಯವಯಸ್ಸಿನ ಡಾಕ್ಟರ್, ಗೋವಿಂದಯ್ಯ ಎಂಬ ಲೇಖಕ, ರಾಜ ಎಂಬ ರಂಗಭೂಮಿ ನಟ,  ಮನೆಯಿಂದ ಓಡಿ ಬಂದ ಮಾಲತಿ ಎಂಬ ನವಯುವತಿ ಹಾಗೂ ಆ ವ್ಯಾನನ್ನು ಬೈಕಿನಲ್ಲಿ ಹಿಂಬಾಲಿಸುವ  ಶ್ರೀಧರ್ ಎಂಬ ಯುವಕ ಭೀಕರ ಮಳೆಯ ಕಾರಣ  ದಟ್ಟ ಕಾನನ ಮಧ್ಯದ ಒಂದು ಟ್ರವೆಲರ್ಸ್ ಬಂಗಲೆಯಲ್ಲಿ ತಂಗಬೇಕಾಗುತ್ತದೆ. ಆರಂಭ ಮತ್ತು ಕೆಲವು ಫ್ಲಾಷ್ ಬ್ಯಾಕ್‌ಗಳನ್ನು ಹೊರತು ಪಡಿಸಿದರೆ ಸಂಪೂರ್ಣ ಚಿತ್ರ  ಆ ಬಂಗಲೆಯಲ್ಲಿ ಚಿತ್ರೀಕರಿಸಲ್ಪಟ್ಟಿದೆ. ಹಿಂದಿಯ ಗುಮ್‌ನಾಮ್ ಕೂಡ ಕೆಲವು ಆಯ್ದ ಜನರನ್ನು ಒಂದು ಬಂಗಲೆಯಲ್ಲಿ ಸೇರುವಂತೆ ಮಾಡಿ ಚಿತ್ರಿಸಲಾದ ಸಿನಿಮಾ.  ಆದರೆ ಇವೆರಡು ಚಿತ್ರಗಳಲ್ಲಿ ಬೇರೆ ಯಾವ ಸಮಾನತೆಯೂ ಇಲ್ಲ.

ಚಿತ್ರದ ಮೊದಲ ಹಾಡು ವೈಶಿಷ್ಟ್ಯಪೂರ್ಣವಾದುದು.  ಗೋವಿಂದಯ್ಯನ ಪ್ರಾರ್ಥನೆ ರೂಪದಲ್ಲಿ ಭಗವದ್ಗೀತೆಯ 7ನೇ ಅಧ್ಯಾದ 21ನೇ ಶ್ಲೋಕ, ಮಮ್ಮದುವಿನ ನಮಾಜ್ ಹಿನ್ನೆಲೆಯಾಗಿ ಮಸೀದಿಯ ಅಜಾನ್ ಮತ್ತು ಅಂತೋಣಿಗಾಗಿ ಚರ್ಚಿನ ಪ್ರಾರ್ಥನೆಯ ವಾಕ್ಯಗಳನ್ನೊಳಗೊಂಡ ಇದನ್ನು ನಿಜ ಅರ್ಥದಲ್ಲಿ ಹಾಡೆಂದು ಹೇಳಲಾಗದು. ವ್ಯಾಟಿಕನ್ ಉಚ್ಚಾರದ ಮೂರನೆಯ ಚರ್ಚ್ ಭಾಗದಲ್ಲೂ ಪಿ.ಬಿ.ಶ್ರೀನಿವಾಸ್ ಅವರದ್ದೇ ಧ್ವನಿಯಿರುವುದು ಎಂದು ಬಹಳ ಸಮಯ ನನಗೆ ಗೊತ್ತೇ ಆಗಿರಲಿಲ್ಲ.



ಯೋಯೋ ಯಾಂಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ ।
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್ ॥

ಅಲ್ಲಾಹು ಅಕ್ಬರ್  ಅಲ್ಲಾಹು ಅಕ್ಬರ್
ಅಲ್ಲಾಹು ಅಕ್ಬರ್  ಅಲ್ಲಾಹು ಅಕ್ಬರ್
ಅಶ್ಶದು ಅಲ್ಲಾ ಇಲಾಹ ಇಲ್ಲಲ್ಲಾಹ
ಅಶ್ಶದು ಅನ್ನ  ಮುಹಮ್ಮದರ್ ರಸೂಲುಲ್ಲಾಹ
ಹಯ್ಯಾ ಅಲಸ್ ಸಲಾಹ
ಹಯ್ಯಾ ಅಲಲ್ ಫಲಾಹ
ಅಸ್ಸಲಾತು ಖಯ್ರುಂ ಮಿನನ್ ನೋಮ್
ಅಲ್ಲಾಹು ಅಕ್ಬರ್
ಅಲ್ಲಾಹು ಅಕ್ಬರ್
ಲಾ ಇಲಾಹ ಇಲ್ಲಲ್ಲಾಹ

Our father
Who art in heaven
Hallowed be thy name
Thy kingdom com
Thy will be done on earth as it is in heaven
Give us this day our daily bread
And forgive us our trespasses
As we forgive them their trespasses against us
And lead us not into temptation
But deliver us from evil
For thine is the kingdom
The power and the glory
Forever and ever
Amen


ಇದು ಮುಗಿದ ಮರುಕ್ಷಣವೇ ಡಾಕ್ಟರ್ ಶ್ಯಾಮಲಾ ಉಗಾಭೋಗ ರೂಪದಲ್ಲಿ ಬಸವಣ್ಣನವರ ವಚನ ಹಾಗೂ ಲೀಲಾಮಯ ಹೇ ದೇವ ಎಂಬ ಹಾಡನ್ನು ಪಿ.ಸುಶೀಲಾ ಧ್ವನಿಯಲ್ಲಿ ಭಗವಂತನನ್ನು ಪ್ರಾರ್ಥಿಸುತ್ತಾರೆ.  ಜಿಸ್ ದೇಶ್ ಮೆಂ ಗಂಗಾ ಬಹತೀ ಹೈ ಚಿತ್ರದಲ್ಲಿ ಹಮ್ ಭೀ ಹೈಂ ತುಮ್ ಭೀ ಹೋ ಮತ್ತು ಹೋಟೊಂಪೆ ಸಚ್ಚಾಯಿ ರಹತೀ ಹೈ ಹಾಗೂ ಬಾಬ್ಬಿ ಚಿತ್ರದಲ್ಲಿ ನ ಮಾಂಗೂಂ ಸೋನಾ ಚಾಂದಿ ಮತ್ತು ಝೂಟ್ ಬೋಲೆ ಕವ್ವಾ ಕಾಟೇ ಬೆನ್ನುಬೆನ್ನಿಗೆ  ಬಂದು ಒಂದೇ ಹಾಡಿನ ಎರಡು ಭಾಗಗಳೋ ಅಥವಾ ಎರಡು ಸ್ವತಂತ್ರ ಹಾಡುಗಳೋ ಎಂಬ ಜಿಜ್ಞಾಸೆ ಇರುವಂತೆಯೇ ಇಲ್ಲೂ ಇದೆ. ಈ ಹಾಡಲ್ಲಿ ಯಾವುದೇ ನಿರ್ದಿಷ್ಟ ದೇವರ ಉಲ್ಲೇಖ ಇಲ್ಲದಿರುವುದರಿಂದ  ಕನಕದಾಸರ ದೀನ ನಾನು ಸಮಸ್ತ ಲೋಕಕೆ ದಾನಿ ನೀನು ಉಗಾಭೋಗದಂತೆ ಇದೂ ಎಲ್ಲೂ ಸಲ್ಲುವ ಪ್ರಾರ್ಥನೆ. ಪಂತುವರಾಳಿ ರಾಗವನ್ನು ಹೋಲುತ್ತದೆ. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಅಳವಡಿಸಲಾಗಿದ್ದ ತನು ಕರಗದವರಲ್ಲಿ ವಚನದಿಂದ ಸ್ಪೂರ್ತಿ ಪಡೆದಿರಬಹುದು.



ದಯೆಯಿಲ್ಲದ ಧರ್ಮವು ಆವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಳಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಮ ದೇವಾ

ಲೀಲಾಮಯ ಹೇ ದೇವ
ನೀ ತೋರು ದಯಾ ಭಾವ
ಗುರಿ ಕಾಣದಿದೆ ಜೀವ
ನೆರವಾಗೆಲೊ ದೇವ

ಸರಿದಾರಿ ಜಗದೆ ಕಾಣದಿಂತು ಪಯಣ ಸಾಗಿದೆ
ಸುಖ ಶೋಕ ಪಥದೆ ಬಾಳ ಜಾತ್ರೆ ಬರಿದೆ ಕೂಡಿದೆ
ಎದುರಾಗೆ ಕಾಳರಾತ್ರೆ ಬೆಳಕೀಯಬಾರದೆ

ಕುರುಡಂಗೆ ನಿರತ ಊರುಗೋಲೆ ಬದುಕಿಗಾಸರೆ
ಶರಣೆಂದ ಜನಕೆ ಮಾರ್ಗದಾತ ನೀನೆ ಆಗಿರೆ
ಕರುಣಾಳು ಮೌನವೇಕೆ ಮೊರೆ ಕೇಳಬಾರದೆ


ಮುಂದಿನದು ಓಡಿ ಬಂದ ಯುವತಿ ಮಾಲತಿ ಫ್ಲಾಶ್ ಬ್ಯಾಕಿನಲ್ಲಿ ತನ್ನ ಇನಿಯ ಮಾಧವನೊಡನೆ ಹಾಡುವ ಪಿ.ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ ಧ್ವನಿಯಲ್ಲಿರುವ ಯುಗಳ ಗೀತೆ.  ಸಾಕು ಮಗಳು ಚಿತ್ರದ ಒಂದೇ ಒಂದು ಹೊಸ ಹಾಡು ಗೀತೆಯನ್ನು ಸ್ವಲ್ಪ ಹೋಲುವ ಇದರಲ್ಲಿ ಶಂಕರ್ ಜೈಕಿಶನ್ ಅವರ ಸಹಾಯಕರಾಗಿದ್ದು ಸ್ವತಂತ್ರವಾಗಿಯೂ ಕೆಲವು ಚಿತ್ರಗಳಿಗೆ ಸಂಗೀತ ನೀಡಿದ ದತ್ತಾರಾಂ ಅವರು ಪ್ರಚುರಪಡಿಸಿದ ‘ದತ್ತು ಢೋಲಕ್ ಠೇಕಾ’ ಇದೆ. ಸೋರಟ್ ಅಶ್ವತ್ಥ್ ಅವರು ಆದಿ ಪ್ರಾಸ ಅಂತ್ಯ ಪ್ರಾಸ ಎರಡನ್ನೂ ಬಳಸಿದ್ದಾರೆ.



ಇದೇ ಇದೇ ಸವಿಬಾಳ ದಿನ
ಕಾದು ಕಂಡಿತೆ ಮಧುರ ಮನ
ಮೈ ಮರೆಸುವ ಮನ ತಣಿಸುವ
ಪ್ರೇಮ ಮಿಲನದ ದಿನ

ಅನುರಾಗದ ಬಾಳಿನ ಗಾನ
ನೆರೆ ಹೊಮ್ಮಿ ಹಾಡೆ ಮನವೀಣಾ
ನವಜೀವನ ತುಂಬಿದ ಪ್ರಾಣ
ನವ ಪ್ರೇಮವಿಂದೆ ಪರಿಪೂರ್ಣ
ನಾವಾಡಿ ಪಾಡಿ ಮನಸಾರೆ ನೋಡುವ
ಸದಾನಲಿವ ಸದನ ಆಹಾ

ಒಲವೊಂದಿರೆ ನಮ್ಮಯ ಮುಂದೆ
ತನು ಮೆರೆವ ಒಡವೆ ತೃಣವೆಂಬೆ
ಮನ ಹೊಂದಿರೆ ಸ್ವರ್ಗವು ನಮದೆ
ಬಡತನವು ಸಿರಿಯು ಸಮವೆಂದೆ
ನಾವಿಂದು ಸೇರಿ ನಲವಿಂದ ತೇಲುವ
ಸುಧೆ ಸವಿವ ಸುದಿನ ಆಹಾ


ಆ ಮೇಲೆ ಬರುವುದು ನವವಿವಾಹಿತ ಬಾಲಕೃಷ್ಣಯ್ಯ ಕೋಪಿಸಿಕೊಂಡ ತನ್ನ ಹೊಸ ಹೆಂಡತಿ ಭಾಮಾಳನ್ನು  ಸಮಾಧಾನಪಡಿಸಲೆತ್ನಿಸುವ ನಾಗೇಂದ್ರ ಮತ್ತು ಎಲ್.ಆರ್. ಈಶ್ವರಿ ಅವರ ಧ್ವನಿಯಲ್ಲಿರುವ ಡ್ಯುಯೆಟ್.  ಬಾಲಕೃಷ್ಣಯ್ಯ ಮತ್ತು ಭಾಮಾ  ಯಾವಾಗಲೂ ಶುದ್ಧ ಕನ್ನಡದಲ್ಲೇ ಮಾತುಕತೆ ಆಡುವುದಾದರೂ ಈ ಹಾಡಲ್ಲಿ ಅಲ್ಲಲ್ಲಿ ಇಂಗ್ಲಿಷ್ ಪದಗಳಿವೆ!   ನಾಗೇಂದ್ರ ಹಾಡಿದ ಪಲ್ಲವಿ ಮುಗಿದ ಮೇಲೆ ಎಲ್.ಆರ್. ಈಶ್ವರಿ ಅವರ ಪ್ರವೇಶ ನೇರವಾಗಿ ಚರಣದಲ್ಲಿ ಆಗುವುದು ಒಂದು ಅಸಾಮಾನ್ಯ ಅಂಶ. ರತ್ನಮಂಜರಿ ಚಿತ್ರದ ಯಾರು ಯಾರು ನೀ ಯಾರು ಹಾಡಿನ ಪ್ರಭಾವ ಇದರ ಮೇಲಿದೆ.  ನರಸಿಂಹರಾಜು ಮತ್ತು ಚಿಂದೋಡಿ ಲೀಲಾ ಅವರ ಈ ಪಾತ್ರಗಳಿಗೆ ಕಥೆಯಲ್ಲಿ ಯಾವ ಪಾತ್ರವೂ ಇಲ್ಲ.!  ರತ್ನಾಕರ್ ಅಭಿನಯಿಸಿದ ಕಥೆಗಾರನ ಪಾತ್ರ ಮತ್ತು ವಾದಿರಾಜ್ ಅವರ ರಂಗಭೂಮಿ ಕಲಾವಿದನ ಪಾತ್ರಗಳು ಕೂಡ  ಕಥೆಗೆ ನೇರ ಸಂಬಂಧವಿರದೆ  ಮನರಂಜನೆಗಾಗಿಯಷ್ಟೇ ಇರುವಂಥವು.



ಭಾಮಾ ಭಾಮಾ
ನಾನರಿಯೆ ಮನದ ಮರ್ಮ
ಬಿಗುಮಾನ ಬಿಡು ಚಿನ್ನ
ನೀ ನಗುತಿರೆ ಬಲು ಚೆನ್ನ

ಈ ಥಳಕು ಮಾತುಬೇಕಿಲ್ಲ
ನಾ ಬಲ್ಲೆ ನಿಮ್ಮ ಜೋಕೆಲ್ಲ
ನನ ದಾರಿ ಬೇರೆ ನಿಮ್ಮ ದಾರಿ ಬೇರೆ
ಈ ಸಂಸಾರ ಸುಖವಿಲ್ಲ
ಹಾಗೆನ್ನಬೇಡವೇ
heart failure ಆಗುತೇ
ಹಾಗೆನ್ನಬೇಡ ನಾ ಬದುಕಲಾರೆನೇ
wife ಇಲ್ದೆ life ಇಲ್ಲ

ಅಯ್ಯೋ ರಾಮಾ
ಇದು ಏನು ಬಂತು ಖರ್ಮ
ಹೆಣಗಾಟದೀ ಜನ್ಮ ಏಕೆ
ಕೊಟ್ಟನೊ ಆ ಬ್ರಹ್ಮ

ಕೋಮಲೆ ಕೇಳೆ ಮಾತನ್ನ
ಕೋಪಕ್ಕೆ ಹಾಕೆ ಬ್ರೇಕನ್ನ
ಸಾಕಿನ್ನು ಫೈಟು ನಿನ್ನ ಮಾತೆ ರೈಟು
ಮನ ಒಂದಾದ್ರೆ ಸುಖ ಉಂಟು
ಅಂದಂತೆ ನಡೆವಿರಾ
ಆಲ್ ರೈಟು ಮೈ ಡಿಯರ್
ಅಂದಂತೆ ನಡೆದು ಆನಂದ ತಳೆದು
ನಾವೆಂದೆಂದು ಬಾಳೋಣ

ಭಾಮಾ ಭಾಮಾ
ಈಗರಿತೆ ಮನದ ಮರ್ಮ
ಬಿಗುಮಾನ ಬಿಡು ಚಿನ್ನ ನೀ
ನಗುತಿರೆ ಬಲು ಚೆನ್ನ


ಬಂಗಲೆಯಲ್ಲಿ ವಾಸ್ತವ್ಯದ ವೇಳೆ ನಡೆಯುವ ಕೆಲವು ಘಟನೆಗಳಿಂದ ಮಾಲತಿ ತನ್ನ ಮಗಳು ಎಂದು ಡಾಕ್ಟರ್ ಶ್ಯಾಮಲಾಗೆ ಗೊತ್ತಾಗುತ್ತದೆ.  ಸಲ್ಲದ ಅಪವಾದ ಹೊತ್ತು ಪತಿಯಿಂದ ಪರಿತ್ಯಕ್ತಳಾಗುವ ಮುನ್ನ ತನ್ನ ಪುಟ್ಟ ಮಗಳಿಗಾಗಿ ಹಾಡಿದ್ದ  ಜೋಗುಳವೊಂದು ಆಕೆಗೆ ನೆನಪಾಗುತ್ತದೆ. ಪ್ರತಿ ಸಾಲಲ್ಲೂ  ಮಾರ್ಮಿಕ ಮಾರ್ಮಿಕ ಸಾಹಿತ್ಯ ಹೊಂದಿರುವ ಈ ಹಾಡಿನಲ್ಲಿ  ಸಂಗೀತದ ಸ್ವರ ಲಹರಿಗಳ ಮೂಲಕ ರಾತ್ರೆಯ ನೀರವತೆಯನ್ನು ಹೇಗೆ ಸೃಷ್ಟಿಸಬಹುದೆಂದು ರಾಜನ್ ನಾಗೇಂದ್ರ  ತೋರಿಸಿಕೊಟ್ಟಿದ್ದಾರೆ.  ಇದೇ ಮಧ್ಯಮಾವತಿ ರಾಗ ಮತ್ತು ಇದೇ ತಂತ್ರವನ್ನುಪಯೋಗಿಸಿ  ಈ ಸಂಸ್ಥೆಯ ಮುಂದಿನ ಚಿತ್ರ  ನಾಂದಿಯಲ್ಲಿ ವಿಜಯಭಾಸ್ಕರ್ ಹಾಡೊಂದು ಹಾಡುವೆ  ಹಾಡು ಸೃಷ್ಟಿಸಿದರು. ಮುಂದೆ ಇದೇ ಶೈಲಿಯಲ್ಲಿ ಬ್ರಹ್ಮಚಾರಿ ಚಿತ್ರದ ಮೈ ಗಾವೂಂ ತುಮ್ ಸೋ ಜಾವೋ ಹಾಡು ಬಂತು. ಈ ಹಾಡಿನ ಆರಂಭದಲ್ಲಿ ಬರುವ ಹಿನ್ನೆಲೆ ಸಂಗೀತದ ತುಣುಕೊಂದು ಪ್ಯಾಸಾ ಚಿತ್ರದ ಜಿನ್ಹೆ ನಾಜ್ ಹೈ ಹಿಂದ್ ಪರ್ ವೊ ಕಹಾಂ ಹೈಂ ಮತ್ತು ಸುಜಾತಾ ಚಿತ್ರದ ಜಲ್ತೆ ಹೈಂ ಜಿಸ್ ಕೆ ಲಿಯೆ ಹಾಡಿನಲ್ಲಿ ಎಸ್.ಡಿ.ಬರ್ಮನ್ ಬಳಸಿದ ತುಣುಕನ್ನು ನೆನಪಿಸುತ್ತದೆ.



ಪ್ರೀತಿ ಹೊನಲೇ ಹಾಯಾಗಿರೆಲೇ
ಬಾಳಲ್ಲಿ ಬಂಗಾರವಾಗೆ
ಜೋ ಜೋ

ಹೂವಂಥ ಚೆಲುವೇ ಹಾಲಂಥ ಮನವೇ
ತಾಯಾಸೆ ಒಲವೆಲ್ಲ ಏಕೆಂದೆ
ನನ ನೋಡಿ ನಗುವೆ ನೆನೆದೇನು ಅಳುವೆ
ಈ ನೋಟ ಸಂಕೇತ ಏನೆಂದೆ
ಹೇಳೆ ಕಂದ ಬಾಳಿಗಂದ
ನಗು ಮುಂದೆ ಅಳು ಹಿಂದೆ ನೀನೆಂಬೆಯಾ

ಅನುವಾಗಿ ಬರುವ ನಿನಗಾದ ದಿನವ
ಈ ತಾಯ ಮಡಿಲಲ್ಲಿ ನೀ ನೋಡೆ
ಮಗುವಾಗಿ ಇರುವೆ ತಾಯಾಗಿ ಮೆರೆವೆ
ನನ್ನಂತೆ ಈ ಹಾಡ ನೀ ಹಾಡೆ
ಕಾದು ನಿಂದ ನಾಳಿಗಂದ
ನಿನಗಾಗಿ ಗೆಲುವಿಂದ ಕೈ ನೀಡಿದೆ


ಕಾಡಿನ ಮಧ್ಯೆ ಸಿಲುಕಿಕೊಂಡು ಬಂಗಲೆಯಲ್ಲಿ  ಸಿಲುಕಿಕೊಂಡಿದ್ದವರಿಗೆ ದೇವರಂತೆ ಸಮಯಕ್ಕೊದಗಿದವರು ಆ ಹಳ್ಳಿಯ ಸಾಹುಕಾರ ಹೊಂಬಾಳಯ್ಯ.  ಮಾಲತಿ ವೀಣೆ ನುಡಿಸಬಲ್ಲಳೆಂದು ತಿಳಿದ ಅವರು ತನ್ನ ಮನೆಯಲ್ಲಿದ್ದ ವೀಣೆಯನ್ನು ಹೊರಿಸಿಕೊಂಡು ಬಂಗಲೆಗೆ ಬರುತ್ತಾರೆ.  ಮಾಲತಿ ವೀಣೆ ನುಡಿಸುತ್ತಾ ತನ್ನಿಂದ ದೂರಾದ ಪ್ರಿಯಕರ ಮಾಧವನಿಗೆ ಪ್ರಿಯವಾದ   ಕರೆಯೇ ಕೋಗಿಲೆ ಮಾಧವನ ಹಾಡನ್ನು ಎಸ್. ಜಾನಕಿ ಧ್ವನಿಯಲ್ಲಿ ಹಾಡುತ್ತಾಳೆ.  ದರ್ಬಾರಿ ಕಾನಡಾ ರಾಗಾಧಾರಿತ ಈ ಹಾಡಿನಲ್ಲಿ ವೀಣೆಯನ್ನು ಅದ್ಭುತವಾಗಿ ನುಡಿಸಿದ ವಿದ್ವಾಂಸ ಯಾರೆಂದು ತಿಳಿದಿಲ್ಲ.



ಕರೆಯೆ ಕೋಗಿಲೆ ಮಾಧವನ
ಕಾತರ ತುಂಬಿದ ಈ ನಯನ
ಕಾಣಲು ಕಾದಿದೆ ಪ್ರಿಯತಮನ
ಕರೆಯೆ ಕೋಗಿಲೆ ಮಾಧವನ

ಈ ಅನುರಾಗದ ಕರೆಯನು ತಿಳಿಸೆ
ವೀಣೆಯ ನಾದಕೆ ನೀ ದನಿ ಬೆರೆಸೆ
ಹಾಡೇ ಪಾಡೇ ಒಲವಿರಿಸೇ
ವಿರಹಿ ರಾಧೆಯ ಮನ ತಣಿಸೇ

ಮುನಿದಿಹನೇನೆ ನೀ ಹೇಳೆ
ಮನಸಿನ ಚಿಂತೆ ನಾ ತಾಳೆ
ಏಕೋ ಏನೋ ಭಯವಿಂದೆ
ಇನಿಯನ ಕಾಣದೆ ನಾ ನೊಂದೆ


ಈ ಚಿತ್ರದ ಆರಂಭದಲ್ಲಿ ಸ್ಟ್ರೀಟ್ ಸಿಂಗರ್‌ ಒಬ್ಬ ನಮ್ಮೂರೆ ಚಂದ  ನಮ್ಮೋರೆ ಅಂದ ಹಾಡಿನ ಸಾಲನ್ನು ಹಾರ್ಮೋನಿಯಂನಲ್ಲಿ ನುಡಿಸಿ  ಎಕ್ ಪರ್‌ದೇಸಿ ಮೇರಾ ದಿಲ್ ಲೇಗಯಾ ಧಾಟಿಯಲ್ಲಿ  ವಾರೆ ನೋಟ ನೋಡಿ ಮಳ್ಳ ಮಾಡಿದನವ್ವ ಎಂದು ಹಾಡುವ   ತುಣುಕೊಂದಿದೆ.  ವಾಸ್ತವವಾಗಿ ಹಿಂದಿಯ ಪ್ರಸಿದ್ಧ ಗಾಯಕಿಯಾಗಿದ್ದ ಅಮೀರ್ ಬಾಯಿ ಕರ್ನಾಟಕಿ ಅವರ ಧ್ವನಿಯಲ್ಲಿ ಈ ಹಾಡಿನ ಧ್ವನಿಮುದ್ರಿಕೆ ತಯಾರಾಗಿತ್ತು. ಚಿತ್ರದಲ್ಲಿರುವ ಭಾಗ ಮತ್ತು  ಅಮೀರ್ ಬಾಯಿ ಅವರ ರೆಕಾರ್ಡ್ ಎರಡನ್ನೂ ಇಲ್ಲಿ ಆಲಿಸಬಹುದು.






ಅಂತರ್ಜಾಲದಲ್ಲಿ ಲಭ್ಯವಿರುವ  ವಿಭಿನ್ನ ಶೈಲಿಯ ಈ ಚಿತ್ರವನ್ನು ಸಮಯವಿದ್ದಾಗ ಅಗತ್ಯವಾಗಿ ನೋಡಿ ಆನಂದಿಸಿ. ‘ನವಜೀವನ’ ಎಡದಿಂದಲೂ ಬಲದಿಂದಲೂ ಓದಬಹುದಾದ ಗತಪ್ರತ್ಯಾಗತ ಪದ (palindrome). ಈ ರೀತಿ ಗತಪ್ರತ್ಯಾಗತ ಪದ ಶೀರ್ಷಿಕೆಯಾಗುಳ್ಳ ಬೇರೆ ಯಾವುದಾದರೂ ಸಿನಿಮಾ ಗೊತ್ತಿದ್ದರೆ ತಿಳಿಸಿ.

























Wednesday 6 May 2020

ಇಲ್ಲದ ಚಿತ್ರ ಪತಿಯೇ ದೈವ - ಹಾಡುಗಳಿರುವುದು ನಮ್ಮ ಸುದೈವ


ಒಬ್ಬ ನಿವೃತ್ತ ಶ್ರೀಮಂತ ಉದ್ಯಮಿ. ಮಾತು ಮಾತಿಗೆ ಎಲ್ಲವೂ ಭಗವಂತನ ಇಚ್ಛೆ ಅನ್ನುತ್ತಾ ಹಾಗೆಯೇ ನಂಬಿದವನು. ಆತನ ಪತ್ನಿ ತನ್ನಿಂದಲೇ ಎಲ್ಲ ಎಂದು ತಿಳಿದುಕೊಂಡಿರುವ ಜೋರು ಬಾಯಿಯವಳು. ಮನೆಯ ಮೂಗುದಾರವನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡವಳು. ಹಿರಿಯ ಸೊಸೆ ವಿಧವೆ.  ಆಕೆಗಿಬ್ಬರು ಪುಟ್ಟ ಮಕ್ಕಳು. ಗಾಣದೆತ್ತಿನಂತೆ ದುಡಿಯುತ್ತಿದ್ದಾಳೆ.  ಎರಡನೆಯ ಮಗ ನವ ವಿವಾಹಿತ. ತಂದೆಯ ವ್ಯವಹಾರವನ್ನು ಈಗ ತಾನೇ ಮುನ್ನಡೆಸುತ್ತಿದ್ದಾನೆ. ಮೂರನೆಯ ಮಗ ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದಾನೆ.  ಕಾಲೇಜು ಕನ್ಯೆಯೊಬ್ಬಳೊಡನೆ ಆತನಿಗೆ  ಪ್ರೇಮಾಂಕುರವಾಗುತ್ತದೆ. ಇದನ್ನು ತಿಳಿದ ಆಕೆಯ ಮಲತಾಯಿ ತಾಟಕಿಯಂಥ ಅತ್ತೆ ಇರುವ ಮನೆಗೆ ಆಕೆಯನ್ನು ವಿವಾಹ ಮಾಡಿ ಕೊಡುವ ಸಂಚು ಹೂಡುತ್ತಾಳೆ. ಆದರೆ ಮಲತಾಯಿ ಆರಿಸಿದ ಆ ತಾಟಕಿಯ ಮಗ ತನ್ನ ಪ್ರೇಮಿಯೇ ಆಗಿರುತ್ತಾನೆ!  ಕೊನೆಯವಳಾದ ತಂಗಿಗೆ ಮದುವೆಯಾಗಿದ್ದರೂ ಕ್ಷುಲ್ಲಕ ಕಾರಣಕ್ಕಾಗಿ ಗಂಡನ ಮನೆ ಸೇರದೆ ತವರಿನಲ್ಲೇ ಉಳಿದಿದ್ದಾಳೆ. ಚಾಡಿ ಹೇಳಿ ಚಂದ ನೋಡುವ ಸ್ವಭಾವದವಳು. ವ್ಯವಹಾರಕ್ಕಾಗಿ ಹೆಚ್ಚು ಸಮಯ ಮನೆಯಿಂದ ಹೊರಗಿರುವ ಹಿರಿಯ ಮಗ ತನ್ನ ಪತ್ನಿ ಮತ್ತು ತಮ್ಮನ ಮಧ್ಯೆ ಇರುವ ಅತ್ತಿಗೆ ಮೈದುನರ ಸಹಜವಾದ ಸಲುಗೆಯನ್ನು ಅಪಾರ್ಥ ಮಾಡಿಕೊಳ್ಳುತ್ತಾನೆ.  ತಂಗಿ ಇದಕ್ಕೆ ಒಗ್ಗರಣೆ ಹಾಕುವ ಕೆಲಸ ಮಾಡುತ್ತಾಳೆ. ಪತ್ನಿಯ ಹೊಟ್ಟೆಯಲ್ಲಿರುವ ಮಗು ತನ್ನದಲ್ಲ ಎನ್ನುವಷ್ಟರ ಮಟ್ಟಿಗೆ ಹೋದ ಆತ ಮನೆ ಬಿಟ್ಟು ತನ್ನ ಪತ್ನಿಗೂ ಪರಿಚಯವಿರುವ ಸ್ನೇಹಿತೆಯೋರ್ವಳ ಮನೆ ಸೇರುತ್ತಾನೆ.  ಕಲಾವಿದೆಯಾದ ಆ ಸ್ನೇಹಿತೆ ಆತನಿಗೆ ಆಶ್ರಯ ನೀಡಿದರೂ ಅವರ ಸಂಸಾರವನ್ನು ಸರಿಹೊಂದಿಸುವ ಸಂಕಲ್ಪ ಮಾಡುತ್ತಾಳೆ. ಮದುವೆಯಾದರೂ ಗಂಡನ ಮನೆಗೆ ಹೋಗದ ಮಗಳ ಕಿತಾಪತಿ ಮತ್ತು ಪತ್ನಿಯ ಅಹಂಕಾರಗಳು ಮಿತಿ ಮೀರಿದಾಗ ಹಸುವಿನಂತಿದ್ದ ತಂದೆ ಹುಲಿಯಾಗಿ ತನ್ನ ಕೈಯ ಕೋಲಿಗೆ ಕೆಲಸ ಕೊಡುತ್ತಾನೆ.  ಪರಿಣಾಮವಾಗಿ ಸಿಂಹಿಣಿಯಾಗಿದ್ದ ಪತ್ನಿ ಹರಿಣಿಯಾಗುತ್ತಾಳೆ. ಮಗಳು ತೆಪ್ಪಗೆ ಗಂಡನ ಮನೆ ಸೇರುತ್ತಾಳೆ. ಅಳಿಯ ಮತ್ತು ಆಶ್ರಯ ನೀಡಿದ ಸ್ನೇಹಿತೆಯ ಪ್ರಯತ್ನದಿಂದ ಹಿರಿ ಮಗನ ಕಣ್ಣೆದುರಿನ ಪೊರೆ ಸರಿದು ಎಲ್ಲವೂ ಸುಖಾಂತ್ಯವಾಗುತ್ತದೆ.

ಇದು 1964ರಲ್ಲಿ ಬಿಡುಗಡೆಯಾದ  ಪತಿಯೇ ದೈವ ಸಿನಿಮಾದ ಕಥೆ.  ಆರ್. ನಾಗೇಂದ್ರ ರಾವ್ ನಿರ್ಮಿಸಿ ನಿರ್ದೇಶಿಸಿದ  ಈ ಚಿತ್ರದಲ್ಲಿ ಆರ್.ಎನ್. ಸುದರ್ಶನ್, ಅಶ್ವಥ್, ಬಾಲಕೃಷ್ಣ, ಚಿ.ಉದಯಶಂಕರ್, ಹನುಮಂತ ರಾವ್, ಪಂಢರಿ ಬಾಯಿ, ಮೈನಾವತಿ, ಜಯಂತಿ, ಕಲ್ಪನಾ, ಜಯಶ್ರೀ, ಲಕ್ಷ್ಮೀ ದೇವಿ ಮುಂತಾದವರು ನಟಿಸಿದ್ದರು. ಆರ್.ಎನ್. ಜಯಗೋಪಾಲ್  ಸಾಹಿತ್ಯ ರಚಿಸಿ ಬರೆದ ಗೀತೆಗಳಿಗೆ ವಿಜಯಭಾಸ್ಕರ್ ಸಂಗೀತ ಸಂಯೋಜಿಸಿದ್ದರು.

ನಾನು ಈ ಚಿತ್ರ ನೋಡಿಲ್ಲ. ಚಿತ್ರದ ಪದ್ಯಾವಳಿಯೂ ನನ್ನಲ್ಲಿಲ್ಲ. ಚಿತ್ರದ ಪ್ರಿಂಟ್ ಲಭ್ಯವಿಲ್ಲದಿರುವುದರಿಂದ ಅಂತರ್ಜಾಲದಲ್ಲೂ  ನೋಡಲು ಸಿಗುವುದಿಲ್ಲ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಕೂಡ ಎಲ್ಲೂ ಇಲ್ಲ.  ಹಾಗಿದ್ದರೆ   ಚಿತ್ರದ ಕಥೆ ಇಲ್ಲಿ ಎಲ್ಲಿಂದ ಎಂಬ ಸಂಶಯ ಮೂಡುವುದು ಸಹಜ.


ಬಿ.ಎಸ್. ರಾಮಯ್ಯ ಎಂಬವರು ಬರೆದ ತಮಿಳು ಕಥೆಯೊಂದನ್ನಾಧರಿಸಿ ಪಾಲಗುಮ್ಮಿ ಪದ್ಮರಾಜು ಎಂಬವರು ಶಾಂತಿ ನಿವಾಸಂ ಎಂಬ ತೆಲುಗು ನಾಟಕ ರಚಿಸಿದ್ದರು.  ಬಹಳ ಜನಪ್ರಿಯತೆ ಗಳಿಸಿದ ಇದನ್ನಾಧರಿಸಿ ಸುಂದರಲಾಲ್ ನಹಾಟಾ ಅವರು 1960ರಲ್ಲಿ ಅದೇ ಹೆಸರಿನ ತೆಲುಗು ಚಿತ್ರ ನಿರ್ಮಿಸಿದರು.  ನಾಗೇಶ್ವರ ರಾವ್, ಕಾಂತಾ ರಾವ್, ರಾಜಸುಲೋಚನಾ, ಕೃಷ್ಣಕುಮಾರಿ ಮುಂತಾದವರ ತಾರಾಗಣವಿದ್ದ ಚಿತ್ರಕ್ಕೆ ಘಂಟಸಾಲ ಅವರ ಸಂಗೀತವಿತ್ತು. ಆದರೆ ಅಂತಹ ಪ್ರತಿಭಾಶಾಲಿಯಾದ ಘಂಟಸಾಲ  ಕೆಲವು ಹಾಡುಗಳಿಗೆ ಉಜಾಲಾ ಚಿತ್ರದ ಯಾಲ್ಲಾ ಯಾಲ್ಲಾ ದಿಲ್ ಲೇ ಗಯಾ, ಮೌಸಿ ಚಿತ್ರದ ಟಿಂ ಟಿಂ ಟಿಂ ತಾರೋಂ ಕೆ ದೀಪ್ ಜಲೆ,  ಕೈದಿ ನಂಬರ್ 911ರ ಮೀಠಿ ಮೀಠಿ ಬಾತೊಂ ಸೆ ಬಚ್‌ನಾ ಜರಾ, ದಿಲ್ ದೇಕೆ ದೇಖೋದ ಟೈಟಲ್ ಹಾಡು ಮುಂತಾದ ಹಿಂದಿ ಧಾಟಿಗಳನ್ನು ಬಳಸಿದ್ದು ಆಶ್ಚರ್ಯಕರ. ನಿರ್ಮಾಪಕರ, ವಿತರಕರ ಒತ್ತಾಯ ಇತ್ತೋ ಏನೋ. ಘಂಟಸಾಲ ಸಂಗೀತದ ಚಿತ್ರಗಳಲ್ಲಿ ಅಪರೂಪವಾಗಿರುವ ಪಿ.ಬಿ.ಶ್ರೀನಿವಾಸ್ ಹಾಡೊಂದು ಈ ಚಿತ್ರದಲ್ಲಿ ಇರುವುದೂ  ಇನ್ನೊಂದು ವಿಶೇಷ.



ಶಾಂತಿ ನಿವಾಸಂ ತೆಲುಗು ಚಿತ್ರದ ಯಶಸ್ಸಿನಿಂದ ಪ್ರೇರಿತರಾದ ಜೆಮಿನಿಯ ಎಸ್.ಎಸ್. ವಾಸನ್ ಅವರು ಮರುವರ್ಷ ಅಂದರೆ 1961ರಲ್ಲಿ  ಇದನ್ನು ಘರಾನಾ ಎಂಬ ಹೆಸರಲ್ಲಿ  ಹಿಂದಿಯಲ್ಲಿ ನಿರ್ಮಿಸಿದರು. ರಾಜೇಂದ್ರ ಕುಮಾರ್, ರಾಜ್ ಕುಮಾರ್, ಆಶಾ ಪಾರೇಖ್ ಮುಂತಾದವರ ತಾರಾಗಣವಿದ್ದ ಚಿತ್ರಕ್ಕೆ ರವಿ ಸಂಗೀತವಿತ್ತು.  ಹುಸ್ನ್‌ವಾಲೆ ತೇರಾ ಜವಾಬ್ ನಹೀಂ, ಜಬ್ ಸೆ ತುಮ್ಹೆ ದೇಖಾ ಹೈ , ದಾದಿಯಮ್ಮಾ ದಾದಿಯಮ್ಮಾ ಮಾನ್ ಜಾವೊ ಹಾಡುಗಳು ಬಲು ಜನಪ್ರಿಯವಾಗಿ ಇಂದೂ ಆಸಕ್ತಿಯಿಂದ ಕೇಳಲ್ಪಡುತ್ತವೆ.  ರವಿ ಅವರಿಗೆ ಶ್ರೇಷ್ಠ ಸಂಗೀತ ನಿರ್ದೇಶಕ ಮತ್ತು ಶಕೀಲ್ ಬದಾಯೂನಿ ಅವರಿಗೆ ಶ್ರೇಷ್ಠ ಗೀತ ರಚನೆಕಾರ  ಫಿಲಂ ಫೇರ್ ಅವಾರ್ಡುಗಳನ್ನು ಈ ಚಿತ್ರ ದೊರಕಿಸಿ ಕೊಟ್ಟಿತು.



ಇದೇ ಕಥೆಯನ್ನಾಧರಿಸಿ ಮತ್ತೆ  1989ರಲ್ಲಿ  ಘರ್ ಘರ್ ಕೀ ಕಹಾನಿ ಎಂಬ ಹಿಂದಿ ಚಿತ್ರ ತಯಾರಾಯಿತು. ರಿಷಿ ಕಪೂರ್, ಗೋವಿಂದ, ಸತೀಶ್ ಶಾಹ, ಜಯಾಪ್ರದಾ ಮುಂತಾದವರು ನಟಿಸಿದ್ದರು.  ಕನ್ನಡದ ನಮ್ಮ ಮಕ್ಕಳು ಚಿತ್ರವನ್ನು ಆಧರಿಸಿ ಚಂದಮಾಮದ ವಿಜಯಾ ಸಂಸ್ಥೆಯವರು 1970ರಲ್ಲಿ ನಿರ್ಮಿಸಿದ್ದ ಘರ್ ಘರ್ ಕೀ ಕಹಾನೀಯೊಂದಿಗೆ ಇದನ್ನು ಕನ್‌ಫ್ಯೂಸ್ ಮಾಡಿಕೊಳ್ಳಬಾರದು.

ಇಷ್ಟೆಲ್ಲ ಕಡೆ ತಿರುಗಾಡಿದ ಕಥೆಯೇ ನಮ್ಮ ಪತಿಯೇ ದೈವ ಚಿತ್ರದ್ದು. ಇದು ನಿರ್ಮಾಣ ಹಂತದಲ್ಲಿರುವಾಗಲೇ ಸುಧಾ ಮತ್ತು ಪ್ರಜಾಮತ ವಾರಪತ್ರಿಕೆಗಳ ಸಿನಿಮಾ ಪುಟಗಳಲ್ಲಿ ತೆಲುಗಿನ ಶಾಂತಿನಿವಾಸಂ ಆಧಾರಿತ ಚಿತ್ರ ಪತಿಯೇ ದೈವ ಎಂಬ ವಿಶೇಷಣದೊಂದಿಗೆ ಇದರ ಕುರಿತು ಸುದ್ದಿಗಳು ಪ್ರಕಟವಾಗುತ್ತಿದ್ದವು. ಪ್ರತಿ ಸಲ ಪಂಢರಿ ಬಾಯಿಯವರ ಉಲ್ಲೇಖ ಇದ್ದೇ ಇರುತ್ತಿತ್ತು. ನಾನು ಆಗಲೇ ಜೇನುಗೂಡು ಚಿತ್ರ ನೋಡಿದ್ದುದರಿಂದ ಪಂಢರಿಬಾಯಿ ಇರುವ ಮನೆಗೆ ಶಾಂತಿನಿವಾಸ ಎಂಬುದು ಅನ್ವರ್ಥ ನಾಮ ಎಂಬ ಭಾವನೆ ನನ್ನಲ್ಲಿ ಮೂಡುತ್ತಿತ್ತು!  ಈ ಚಿತ್ರದ ಏಳೆಂಟು ಹಾಡುಗಳು ಆ ಕಾಲದಲ್ಲಿ ಬಲು ಜನಪ್ರಿಯವಾಗಿದ್ದು ಬೆಂಗಳೂರು, ಧಾರವಾಡ, ಭದ್ರಾವತಿ, ಶಾರ್ಟ್ ವೇವ್ ವಿವಿಧಭಾರತಿಯ ಮಧುರ್ ಗೀತಂ ಕಾರ್ಯಕ್ರಮಗಳಲ್ಲಿ ನಿತ್ಯವೂ ಅನುರಣಿಸುತ್ತಿದ್ದವು.  ರೀಮೇಕ್ ಚಿತ್ರವಾದರೂ ವಿಜಯಭಾಸ್ಕರ್ ಹಾಡುಗಳ ಧಾಟಿಗಳನ್ನು ಕಾಪಿ ಮಾಡಿರಲಿಲ್ಲ. ಈ ಹಾಡುಗಳೆಲ್ಲ ಅತಿ ಶ್ರೇಷ್ಠ ಎಂದೇನೂ ಅಲ್ಲ.  ಆದರೆ ನಮ್ಮನ್ನು ಅಂದಿನ ಕಾಲಘಟ್ಟಕ್ಕೊಯ್ಯುವ ನಿಟ್ಟಿನಲ್ಲಿ ಅವುಗಳದ್ದೇ ಆದ ಮಹತ್ವವಿದೆ.

ನಗೆಮೊಗದೆ ನಲಿವ ನಲ್ಲೆ

ಪಿ.ಬಿ.ಶ್ರೀನಿವಾಸ್ ಹಾಡಿರುವ ಇದು ಹಿಂದಿಯಲ್ಲಿ ಹುಸ್ನ್‌ವಾಲೇ ತೇರಾ ಜವಾಬ್ ನಹೀಂ ಇದ್ದ ಸನ್ನಿವೇಶದ್ದಿರಬಹುದು. ಜಯಗೋಪಾಲ್ ಅವರು ಆದಿ, ಅಂತ್ಯಪ್ರಾಸಗಳನ್ನು ಬಳಸಿ ಬರೆದಿದ್ದಾರೆ.



ನಗೆ ಮೊಗದೆ ನಲಿವ ನಲ್ಲೆ
ನಿನಗೆಣೆಯ ಕಾಣೆನಲ್ಲೆ
ನಿನ್ನ ತುಂಟ ನೋಟದಲ್ಲೆ
ನೀನಾಡೊ ಮಾತ ಬಲ್ಲೆ

ನಿನ್ನ ಸನಿಹ ಮನಕೆ ತಂಪು
ನಿನ್ನ ದನಿಯು ಕಿವಿಗೆ ಇಂಪು
ನಿನ್ನ ಚೆಲುವ ತುಟಿಯ ಕೆಂಪು
ಕಂಗಳಿಗೆ ತಾನು ಸೊಂಪು

ಮುಂಗುರುಳ ಹಿಂದೆ ಸರಿಸಿ
ಮುಡಿಯಲ್ಲಿ ಹೂವನಿರಿಸಿ
ಮುಗುಳ್ನಗೆಯನೊಂದ ಹರಿಸಿ
ಮನ ಸೆಳೆದ ಪ್ರೇಮದರಸಿ

ನಡೆದಾಗ ನವಿಲಿನಂತೆ
ನಡು ಬಳುಕೆ ಬಳ್ಳಿಯಂತೆ
ನುಡಿಯೊಂದು ಮುತ್ತಿನಂತೆ
ಕುಡಿನೋಟ ಮಿಂಚಿನಂತೆ


ಕಣ್ಣೆಂಬ ಕಣೆಯಿಂದ
ಪಿ.ಬಿ.ಶ್ರೀನಿವಾಸ್ ಮತ್ತು ಪಿ.ಸುಶೀಲಾ ಧ್ವನಿಯಲ್ಲಿರುವ ಇದು ಟಿಪಿಕಲ್ ವಿಜಯಭಾಸ್ಕರ್ ಶೈಲಿಯ ಹಾಡು. ಕಣೆ ಎಂದರೆ ಬಾಣ ಎಂದರ್ಥ.  ಆದರೆ ನನಗೇಕೋ ಈ ಹಾಡು ಕೇಳಿದಾಗಲೆಲ್ಲ ಕಣ್ಣೆಂಬ ಕವಣೆಯಿಂದ ಕಲ್ಲೆಸೆಯುವ ದೃಶ್ಯವೇ ಕಣ್ಣೆದುರು ಬರುತ್ತಿದ್ದುದು.



ಕಣ್ಣೆಂಬ ಕಣೆಯಿಂದ ಕೊಲ್ಲುವ ಓ ಹೆಣ್ಣೆ
ಬಣ್ಣಿಸಲು ಬಾಯಿಲ್ಲ ನಿನ್ನಯ ಸೊಬಗನ್ನೆ
ಹೆಣ್ಣೆಂಬ ಹೂವೊಂದ ಹುಡುಕುತ ಬಂದವನೆ
ಕನ್ನಿಕೆಯ ಕೆನ್ನೆಯಲಿ ಕೆಂಪನು ತಂದವನೆ

ಕಿಲಕಿಲ ನೀನು ನಗುವಾಗ ಮುತ್ತುಗಳುದುರುವುದು
ಕುಲುಕುತಲಿ ನೀ ನಡೆವಾಗ ಈ ಹೃದಯವು ಮಿಡಿಯುವುದು
ಅರಳಿಹುದು ಅನುರಾಗ ಅರಗಿಣಿಯೆ ಬಾ ಬೇಗ
ಅಗಲಿರೆನು ಅರೆ ನಿಮಿಷ ನಿನ್ನನು ನಾನೀಗ

ಸನಿಹದಲಿ ನೀ ಇರುವಾಗ ಮೈಮನ ಮರೆಯುವುದು
ಸರಸದಲಿ ನೀ ಎಳೆವಾಗ ಈ ಕೈಗಳು ನಡುಗುವುದು
ಪ್ರಣಯಿನಿಯ ಪರಿಹಾಸ ಮಾಡುವೆಯಾ ಎಲ್ಲರಸ
ಪ್ರತಿ ನಿಮಿಷ ಹೊಸ ಹರುಷ ನಿನ್ನಯ ಸಹವಾಸ

ಮಂಗಳ ಮೂರ್ತಿ ಮಾರಯ್ಯ
ಎಲ್.ಆರ್. ಈಶ್ವರಿ ಮತ್ತು ಟಿ.ಆರ್. ಜಯದೇವ್ ಹಾಡಿರುವ ಇದು ಚಿತ್ರದ ಸನ್ನಿವೇಶಕ್ಕೆ ಸಂಬಂಧ ಇರುವಂಥದ್ದು.  ಗಂಡನ ಮನೆಗೆ ಹೋಗಲೊಲ್ಲದೆ ತವರು ಮನೆಯಲ್ಲೇ ಉಳಿದ ಮಡದಿಯನ್ನು ತನ್ನೊಡನೆ ಬರುವಂತೆ ಪರಿಪರಿಯಾಗಿ ಬೇಡಿಕೊಳ್ಳುವ ಹಾಸ್ಯ ಶೈಲಿಯ ಹಾಡಿದು. ಚಿತ್ರದ ಎಲ್ಲ ಹಾಡುಗಳ ಪೈಕಿ ನಾನು ಇದನ್ನು ಹೆಚ್ಚು ಮೆಚ್ಚುತ್ತಿದ್ದೆ.  ಇದರ ಗಾಯಕ ಜಯದೇವ್ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿಲ್ಲ. ಹುಡುಕಿದರೆ ಅವರ ಒಂದು ಫೋಟೊ ಕೂಡ ಸಿಗಲಿಲ್ಲ.  ರಾಮಕೃಷ್ಣ ಮತ್ತು ಎಸ್.ಪಿ.ಬಿ ಅವರಿಗಿಂತಲೂ ಮೊದಲು ಘಂಟಸಾಲ ಅವರ ಜಾಡು ಹಿಡಿದು  ಗಾಯನ ಕ್ಷೇತ್ರದಲ್ಲಿ ಅದೃಷ್ಟ ಹುಡುಕಲು ಬಂದವರಿವರು.  ಮನೆ ಅಳಿಯದ ನಿಲ್ಲೆ ಗೊಲ್ಲರು ಬಾಲೆ ನಿಲ್ಲೆ ಮತ್ತು ಸರಸಮಯ ಇದು ಸಮಯ, ಅನ್ನಪೂರ್ಣ ಚಿತ್ರದ ಅಂದ ಚಂದದ ಹೂವೆ,  ಪ್ರೇಮಮಯಿ ಚಿತ್ರದ ತೆಂಗೆಲ್ಲ ತೂಗಾಡೆ ತಂಗಾಳಿಗೆ, ಮನೆ ಕಟ್ಟಿ ನೋಡು ಚಿತ್ರದ ಕಂಡೆ ಕಂಡೆ  ಮೊದಲಾದ ಹಾಡುಗಳಲ್ಲಿ ಇವರ ಧ್ವನಿ ಇದೆ.



ಮಂಗಳಮೂರ್ತಿ ಮಾರಯ್ಯ
ಮಡದಿಯ ಮನೆಗೆ ಬಾರಯ್ಯ
ಮನಸೋತೆ ಮರುಳಾದೆ
ಮೊಗವನು ಎನಗೆ ತೋರಯ್ಯ

ಅತ್ತೆಯ ಮಗಳೆ ಅಮ್ಮಯ್ಯ
ಜೊತೆಯಲಿ ಬಾರೆ ದಮ್ಮಯ್ಯ
ಕೈ ಮುಗಿವೆ ಶರಣೆಂಬೆ
ಕರೆಯಲು ಕಳುಸಿಹ ಮಾವಯ್ಯ

ಸಿನಿಮಾಗೆ ಕರೆಯಲಿಂದೆ
ಹೊರಡುವೆನು ನಾನೆ ಮುಂದೆ
ಮನೆಯಲ್ಲವಂತೆ ಆ ಹುಚ್ಚು ಸಂತೆ
ಬರಲಾರೆ ಬಿಡಿರಿ ಚಿಂತೆ

ಒಣ ಜಂಭವೇಕೆ ಜಾಣೆ
ಛಲವೇಕೆ ನಿನಗೆ ಕಾಣೆ
ನೀ ಬರುವ ತನಕ
ಆ ಮನೆಯು ನರಕ
ನಾ ಹೋಗೆ ದೇವರಾಣೆ


ಕೋಪವೇಕೆ ಅಜ್ಜಿ
ಹಿಂದಿಯ ದಾದಿಯಮ್ಮಾ ದಾದಿಯಮ್ಮಾ ಮಾನ್ ಜಾವೊ ಇರುವ ಸಂದರ್ಭಕ್ಕೆ ಬಳಸಿದ ಲತಾ ಮತ್ತು ಅಂಜಲಿ ಧ್ವನಿಯಲ್ಲಿರುವ ಹಾಡು ಇದು. ಚಿತ್ರದಲ್ಲಿ ಮನೆಯ ಯಜಮಾನ ದಂಡಂ ದಶಗುಣಂ ತಂತ್ರ ಬಳಸಿದ ಮೇಲೆ ಮುನಿಸಿಕೊಂಡು ಮೂಲೆ ಸೇರಿದ ಅಜ್ಜಿಯನ್ನು ಮೊಮ್ಮಕ್ಕಳು ಓಲೈಸುವ ಸನ್ನಿವೇಶ ಇದು. ವಿಶೇಷವೆಂದರೆ ತೆಲುಗು ಶಾಂತಿನಿವಾಸಂ ಚಿತ್ರದಲ್ಲಿ ಈ ಸಂದರ್ಭಕ್ಕೆ ಹಾಡೇ ಇರಲಿಲ್ಲ!  ಹಿಂದಿಯ ದಾದಿಯಮ್ಮಾ ಹಾಡಿನ ದೃಶ್ಯಕ್ಕೆ  ಕನ್ನಡ ಹಾಡು ಸೂಪರ್ ಇಂಪೋಸ್ ಮಾಡಿ ನಾನು ತಯಾರಿಸಿದ ವೀಡಿಯೊವನ್ನು  ಅಜ್ಜಿಗೇಕೆ ಕೋಪ ಲೇಖನದಲ್ಲಿ ನೋಡಬಹುದು. ಪತಿಯೇ ದೈವ ಚಿತ್ರದಲ್ಲಿ  ಕೋಪವೇಕೆ ಹಾಡಿಗೆ ತೆರೆಯ ಮೇಲೆ ಅಭಿನಯಿಸಿದ ಬಾಲಕರ ಪೈಕಿ ಓರ್ವ ಹುಣಸೂರು ಕೃಷ್ಣಮೂರ್ತಿ ಅವರ ಪುತ್ರ ಶ್ರೀಪ್ರಸಾದ್ ಅಂತೆ.



ಕೋಪವೇಕೆ ಕೋಪವೇಕೆ ಅಜ್ಜಿ
ಈ ತಾಪವೇಕೆ ಮನಸಿಗೆ ಅಜ್ಜಿ
ಬಿಡು ನಿನ್ನ ಕೋಪ ತಾಳು ಶಾಂತ ರೂಪ
ಬಿಗುಮಾನ ಬಿಟ್ಟು ನೀ ಮಾತಾಡಜ್ಜಿ

ಪುಟ್ಟ ಪಾಪ ಹುಟ್ಟಿತೆಂದು ಲಡ್ಡು ತಂದೆವು
ತಟ್ಟೆ ತುಂಬ ಸಿಹಿ ತಿಂಡಿ ಕೊಂಡು ಬಂದೆವು
ಸೊಟ್ಟ ಮುಖವನ್ನು ಬಿಟ್ಟು
ಕಿಟ್ಟು ಪುಟ್ಟು ಮಾತ ಕೇಳಿ
ಗುಟ್ಟಿನಿಂದ ಹೊಟ್ಟೆ ತುಂಬ ತಿಂದು ಬಿಡಜ್ಜಿ

ತಪ್ಪುಗಳನೆಲ್ಲ ನಾವು ಒಪ್ಪಿಕೊಂಡೆವು ನಮ್ಮ
ತಪ್ಪನೆಲ್ಲ ಮನ್ನಿಸೆಂದು ಬೇಡಿ ಕೊಂಬೆವು
ನಿನ್ನ ಮಾತ ಕೇಳುವೆವು
ನಿನ್ನ ಸೇವೆ ಮಾಡುವೆವು
ಕೆನ್ನೆಗೇಟು ಹಾಕಿಕೊಂಡು ಕೇಳಿಕೊಂಬೆವು

ಜಯ ರಘುರಾಮ
ಚಿತ್ರದ ಆರಂಭದಲ್ಲಿ ಬರುವ ಮೋಹನ ರಾಗದ ಮೋಹಕ ಪ್ರಾರ್ಥನೆ ಇದು. ಬುಧಕೌಶಿಕ ಋಷಿ ವಿರಚಿತ ರಾಮರಕ್ಷಾ ಸ್ತೋತ್ರದ 30ನೆಯ ಶ್ಲೋಕವನ್ನು ಆರಂಭದಲ್ಲಿ ಬಳಸಿಕೊಳ್ಳಲಾಗಿದೆ..  ಟಿ.ಆರ್. ಜಯದೇವ್ ಮತ್ತು ಎಸ್. ಜಾನಕಿ ಹಾಡಿದ್ದಾರೆ. ಬೆಳಗ್ಗಿನ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಬರುತ್ತಿತ್ತು. ರಾಮನವಮಿಯ ದಿನವಂತೂ ಇದು ಇರಲೇ ಬೇಕಿತ್ತು.


ಮಾತಾ ರಾಮೊ ಮತ್ಪಿತಾ ರಾಮಚಂದ್ರಃ
ಭ್ರಾತಾ ರಾಮೊ ಮತ್ಸಖಾ ರಾಘವೇಶಃ
ಸರ್ವಸ್ವಂ ಮೇ ರಾಮಚಂದ್ರೊ ದಯಾಲುಃ
ನಾನ್ಯಂ ದೈವಂ ನೈವ ಜಾನೇನ ಜಾನೆ

ಜಯ ರಘುರಾಮ ಜಯ ಘನಶ್ಯಾಮ
ಜಯ ಜಯ ಶುಭನಾಮ ಶ್ರೀ ರಾಮ
ಜಯ ಜಯ ಗುಣಧಾಮ ಶ್ರೀ ರಾಮ

ಆದರ್ಶ ನಿನ್ನಯ ಸೋದರ ಪ್ರೇಮ
ಆಡಿದ ಮಾತನು ತಪ್ಪದ  ನೇಮ
ಆಣತಿ ಪಿತನ ಪಾಲಿತ ರಾಮ
ಅಗಣಿತ ಗುಣಮಣಿ ಆನಂದಸೀಮ

ಸೀತೆಯ ಹೃದಯದಿ ಬೆಳಗಿದ ಜ್ಯೋತಿ
ಮಾತೆಗೆ ತೋರಿದೆ ಅನುಪಮ ಪ್ರೀತಿ
ರಾಮರಾಜ್ಯದೆ ನೆಲಸಿದೆ ನೀತಿ
ರಾಘವ ನಮಗೆ ಕರುಣಿಸು ಶಾಂತಿ

ಪೂಜಿಪ ದೈವವೆ
ಎಸ್. ಜಾನಕಿ ಧ್ವನಿಯಲ್ಲಿರುವ ಇದನ್ನು ನಾನು ಇದುವರೆಗೆ ಕೇಳಿಯೇ ಇರಲಿಲ್ಲ.  ಬೆರೆತ ಜೀವ ಚಿತ್ರದ ಅಂಕದ ಪರದೆಯ ಛಾಯೆ ಈ ಹಾಡಿನಲ್ಲಿ ಗೋಚರಿಸುತ್ತದೆ.


ಪೂಜಿಪ ದೈವವೆ ತೊರೆಯಿತಮ್ಮಾ
ಪ್ರಾಣವು ದೇಹವ ಮರೆಯಿತಮ್ಮಾ
ಪ್ರೀತಿಸೊ ಕೈಗಳೆ ಹೊಡೆದುದಮ್ಮಾ
ಪ್ರೇಮದ ಕಥೆಯು ಮುಗಿಯಿತಮ್ಮಾ

ರೆಪ್ಪೆಯು ಕಣ್ಣನೆ ಹಳಿಯಿತಮ್ಮಾ
ಮರವೇ ಬಳ್ಳಿಯ ನೀಗಿತಮ್ಮಾ
ರಕುತವು ತನ್ನನೆ ಜರೆಯಿತಮ್ಮಾ
ಹಾಲಲಿ ಹುಳಿಯು ಬೆರೆಯಿತಮ್ಮಾ

ಬೆಳಗಿದ ಮನೆಗೆ ಶಿರ ಬಾಗಿ
ನಮಿಸಿದಳಮ್ಮಾ ಕೊನೆಯಾಗಿ
ಕರುಳಿನ ಕರೆಗೆ ಕಿವುಡಾಗಿ
ನಡೆದಳು ಕಂಬನಿ ಹೊಳೆಯಾಗಿ


ಮಾಲೆಯ ಹಿಡಿದು ಬರುವ
ಕಲಾವತಿ ರಾಗದಲ್ಲಿರುವ ಈ ಹಾಡು ಶಾರ್ಟ್ ವೇವ್ ವಿವಿಧಭಾರತಿಯ ಮಧುರಗೀತಂ ಕಾರ್ಯಕ್ರಮದಲ್ಲಿ ನಿರಂತರ ಪ್ರಸಾರವಾಗುತ್ತಿತ್ತು.  ಮಲ್ಲಮ್ಮನ ಪವಾಡ ಚಿತ್ರದ ಶರಣೆಂಬೆ ನಾ ಶಶಿ ಭೂಷಣ ಹಾಡನ್ನೂ ವಿಜಯಭಾಸ್ಕರ್ ಅವರು ಕಲಾವತಿ ರಾಗದಲ್ಲೇ ಸಂಯೋಜಿಸಿದ್ದಾರೆ.



ಮಾಲೆಯ ಹಿಡಿದು ಬರುವ
ಈ ಬಾಲೆಯ ವರಿಸುವ ಚೆಲುವ
ಕೈ ಹಿಡಿವ ಮನ ಸೆಳೆವ
ಬ್ಶ್ಳಿಗೆ ಹರುಷವ ತರುವ

ಹಸೆಯಲಿ ಜಂಭದಿ ಕುಳಿತಿರುವ
ಹುಸಿನಗೆ ಬೀರುತ ಮೆರೆದಿರುವ
ತೆರೆಯನು ಹಿಡಿಯುವ ಸಮಯದಲಿ
ಜೀರಿಗೆ ಬೆಲ್ಲವ ಮೊದಲಲಿ ಸುರಿವ

ಮಂಗಳ ವಾದ್ಯವು ಮೊಳಗುತಿರೆ
ಸುಮಂಗಲಿಯರು ಶುಭ ಹಾಡುತಿರೆ
ಮಂತ್ರದ ಘೋಷವು ಕೇಳುತಿರೆ
ಮಂಗಳಸೂತ್ರವ ಬಿಗಿಯುವ ಮುದದಿ








Tuesday 7 April 2020

ಬಂಗಾರಿ ಹಾಡು - ಸಿಗದಣ್ಣಾ ಇದು ಎಂದಿಗೂ ಸಿಗದು


ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು

ಗುರುತಿಸೊಳಿತಿರುವುದನು ಕೇಡುಗಳ ನಡುವೆ
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು
ಹರುಷಕದೆ ದಾರಿಯೆಲೊ  ಮಂಕುತಿಮ್ಮ
ಎಂದು ಡಿ.ವಿ.ಜಿ ಹೇಳಿರುವರಾದರೂ ಇಲ್ಲದಿರುವುದರ ಮೇಲೆ ನಮಗೆ ಯಾವಾಗಲೂ ವ್ಯಾಮೋಹ ಜಾಸ್ತಿ. ಹಳೆ ಹಾಡುಗಳು, ಹಳೆ ಸಿನಿಮಾಗಳ ವಿಷಯದಲ್ಲಿ ಇದು ಹೆಚ್ಚು ಅನ್ವಯವಾಗುತ್ತದೆ.  ಎಂದೂ ಸಿಗಲಾರದ ಎಂದೋ ಎಂದೋ ಎಂದೋ ಎಂಬ ಜಗನ್ಮೋಹಿನಿ ಚಿತ್ರದ ಹಾಡಿನಂಥವುಗಳ ಹುಡುಕಾಟದಲ್ಲಿ ವ್ಯಸ್ತರಾಗಿ ನಮ್ಮ ಸಂಗ್ರಹದಲ್ಲಿರುವ ಇತರ ಸಾವಿರಾರು ಅತ್ಯಮೂಲ್ಯ ಹಾಡುಗಳನ್ನು ನಾವು  ನಿಶ್ಚಿಂತೆಯಿಂದ ಆನಂದಿಸುವುದಿಲ್ಲ. ಇಲ್ಲದಿರುವ ಕೆಲವು ಹಳೆ ಚಿತ್ರಗಳ  ಕೊರಗಿನಲ್ಲಿ ಇರುವ ಅಂತರ್ಜಾಲದ ಖಜಾನೆಯನ್ನು ಮನಸೋ ಇಚ್ಛೆ ಸೂರೆಗೈಯಲು ನಮ್ಮಿಂದ ಆಗುವುದಿಲ್ಲ. ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಇಂಥ ಇಲ್ಲದ ಹಾಡು, ಸಿನಿಮಾಗಳ ಸಂಖ್ಯೆ ಜಾಸ್ತಿ. ಕೆಲವು ಸಲ ಸಿನಿಮಾ ಲಭ್ಯ ಇಲ್ಲದಿದ್ದರೂ ಹಾಡುಗಳು ರೇಡಿಯೋ ಮತ್ತು ಇತರೆಡೆ ಕೇಳಲು ಸಿಗುತ್ತವೆ. ಇನ್ನು ಕೆಲವು ಸಲ ಒಂದು ಕಾಲದಲ್ಲಿ ಕೇಳಲು ಸಿಗುತ್ತಿದ್ದ ಹಾಡುಗಳು ಈಗೆಲ್ಲೋ ಮರೆಯಾಗಿರುತ್ತವೆ. ಧ್ವನಿಮುದ್ರಿಕೆಗಳೇ ತಯಾರಾಗದಿರುವುದೋ ಅಥವಾ ಇನ್ಯಾವುದೋ ಕಾರಣದಿಂದ  ಅಪರೂಪದ ಕೆಲವು ಸಂದರ್ಭಗಳಲ್ಲಿ ಥಿಯೇಟರಿನಲ್ಲಿ ಸಿನಿಮಾ ನೋಡಿದವರನ್ನು ಹೊರತು ಪಡಿಸಿ ಇನ್ಯಾರಿಗೂ ಕೆಲವು ಚಿತ್ರಗಳ ಹಾಡುಗಳನ್ನು ಕೇಳುವ ಅವಕಾಶವೇ ಸಿಗುವುದಿಲ್ಲ.  60ರ ದಶಕದ ಕಲಿತರೂ ಹೆಣ್ಣೇ, ಲಾಯರ್ ಮಗಳು ಮುಂತಾದವು ಈ ವಿಭಾಗಕ್ಕೆ ಸೇರುತ್ತವೆ. 1963ರಲ್ಲಿ ಬಿಡುಗಡೆಯಾದ ಬಂಗಾರಿ ಇಂಥ ಇನ್ನೊಂದು ಚಿತ್ರ.


ಒಂದು ಕಾಲದಲ್ಲಿ ಪದ್ಯಾವಳಿ ಅಥವಾ ಹಾಡುಗಳ ಪುಸ್ತಕ ಖರೀದಿ ಸಿನಿಮಾ ನೋಡುವ ಸಂಭ್ರಮದ ಅವಿಭಾಜ್ಯ ಅಂಗವಾಗಿರುತ್ತಿತ್ತು.   10-15 ಪೈಸೆ ಬೆಲೆ ಬಾಳುವ  ಅವುಗಳನ್ನು ಟಿಕೆಟ್ ಕೌಂಟರಿನಿಂದಲೋ,  ಬಿಸ್ಕೆಟ್  ಮಾರುವ ಹುಡುಗರಿಂದಲೋ ಬಹುತೇಕ ಎಲ್ಲರೂ ಕೊಳ್ಳುತ್ತಿದ್ದರು. ಹಿಂದಿಯಲ್ಲಾದರೆ ಚಿತ್ರ ಬಿಡುಗಡೆಯಾಗುವ ಎಷ್ಟೊ ಸಮಯ ಮೊದಲೇ ಹಾಡುಗಳು ರೇಡಿಯೋದಲ್ಲಿ ಬರಲಾರಂಭಿಸುತ್ತಿದ್ದವು.  ಆದರೆ ಕನ್ನಡದಲ್ಲಿ ಕೆಲವು ತಿಂಗಳ ನಂತರವಷ್ಟೇ ಧ್ವನಿಮುದ್ರಿಕೆಗಳು ತಯಾರಾಗುತ್ತಿದ್ದುದು. ಹೀಗಾಗಿ ಟಿಕೆಟ್ ಪಡೆದು ಥಿಯೇಟರಿನಲ್ಲಿ ಕೂತು ಸಿನಿಮಾ ಪ್ರಾರಂಭವಾಗುವ ವರೆಗೆ ಪದ್ಯಾವಳಿಯಲ್ಲಿ ಕಥಾ ಸಾರಾಂಶ ಓದಿ ಹಾಡುಗಳ ಮೇಲೆ ಕಣ್ಣಾಡಿಸುತ್ತಾ ಅವುಗಳ ಧಾಟಿ ಹೇಗಿರಬಹುದು ಎಂದು ಊಹಿಸುವುದು ರೋಮಾಂಚಕಾರಿ ಅನುಭವವಾಗಿರುತ್ತಿತ್ತು.  ಇನ್ಯಾರೋ ನೋಡಿದ ಸಿನಿಮಾದ ಪದ್ಯಾವಳಿ ನಮಗೆ ಸಿಕ್ಕಿದರೆ  ರೇಡಿಯೋದಲ್ಲಿ ಆ ಹಾಡುಗಳು ಬರಲಾರಂಭಿಸುವ ವರೆಗೆ ಈ ಊಹಿಸುವ ಅವಧಿ ವಿಸ್ತರಿಸುತ್ತಿತ್ತು. ಎಂದೋ ಮಂಗಳೂರಿಗೆ ಹೋಗಿದ್ದ ನಮ್ಮ ಅಣ್ಣ ಬಂಗಾರಿ ಚಿತ್ರವನ್ನು ವೀಕ್ಷಿಸಿದ್ದು ಮಾಮೂಲಿನಂತೆ ಪದ್ಯಾವಳಿಯನ್ನೂ ತಂದಿದ್ದರು. ಆದರೆ ವರ್ಷಗಳುರುಳಿದರೂ ಅದರ ಹಾಡುಗಳು ರೇಡಿಯೋದಲ್ಲಾಗಲೀ, ಧ್ವನಿವರ್ಧಕಗಳಲ್ಲಾಗಲೀ ಕೇಳಲು ಸಿಗದೆ ಪದ್ಯಾವಳಿಯಲ್ಲೇ ಭದ್ರವಾಗಿ ಉಳಿದವು.


ಬಂಗಾರಿ ಚಿತ್ರದ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ನಾನು ನಿರತನಾಗಿದ್ದಾಗ ಹಳೆ ವಿಕಟವಿನೋದಿನಿ ಮಾಸಪತ್ರಿಕೆಯಲ್ಲಿ ಪ್ರಕಟವಾದ ಈ ಚಿತ್ರದ ವಿಸ್ತೃತ ವಿಮರ್ಶೆಯೊಂದು ನನ್ನ ಕಣ್ಣಿಗೆ ಬಿತ್ತು.  ವಿಕಟವಿನೋದಿನಿ ಪತ್ರಿಕೆಯ ಬಗ್ಗೆ ಅನೇಕರು ಕೇಳಿರಲಾರರು.  1911ರಲ್ಲಿ ಆರಂಭವಾದ ಈ ಪತ್ರಿಕೆ 1961, 62 ಮತ್ತು 63ರಲ್ಲಿ ನಮ್ಮ ಮನೆಗೆ ಬರುತ್ತಿತ್ತು.  ಆ ಕಾಲದಲ್ಲಿ ನಿರಂತರವಾಗಿ ಪ್ರಕಟವಾಗುತ್ತಿರುವ ಕನ್ನಡದ ಅತ್ಯಂತ ಹಳೆಯ ಪತ್ರಿಕೆ ಎಂಬ ಹೆಗ್ಗಳಿಕೆ ಇದಕ್ಕಿತ್ತು. ಸರ್ವಂ ವಿಕಟಮಯಂ ಜಗತ್ ಎಂಬ ಟ್ಯಾಗ್ ಲೈನ್ ಹೊಂದಿದ್ದ 40 ಪುಟಗಳಿದ್ದ ಬಿಡಿ ಸಂಚಿಕೆಯ ಬೆಲೆ 15 ನ.ಪೈ ಆಗಿದ್ದು ವಾರ್ಷಿಕ ಚಂದಾ 2 ರೂ ಆಗಿತ್ತು.  ಚಂದಾದಾರರಿಗೆ ನವಂಬರಿನಲ್ಲಿ ಹೆಚ್ಚು ಪುಟಗಳ  ವಿಶೇಷ ಸಂಚಿಕೆ  ಉಚಿತವಾಗಿ ದೊರೆಯುತ್ತಿತ್ತು. ಹಾಸ್ಯ ಪತ್ರಿಕೆಯೆಂದೆನಿಸಿದ್ದರೂ  ವಿವಿಧ ರೀತಿಯ ಲೇಖನಗಳಿರುತ್ತಿದ್ದವು.  ಮುಖಪುಟ ಯಾವುದಾದರೂ ಸಿನಿಮಾ ದೃಶ್ಯ ಹೊಂದಿರುತ್ತಿದ್ದು ಒಂದೆರಡು ಪುಟಗಳು ಸಿನಿಮಾ ವಿಚಾರಗಳಿಗೆ ಮೀಸಲಾಗಿರುತ್ತಿದ್ದವು. ‘ಕೋರಿದ್ದು ಹೇಳಿದ್ದು’ ಎಂಬ ಪ್ರಶ್ನೋತ್ತರ ವಿಭಾಗ ಬಲು ಜನಪ್ರಿಯವಾಗಿತ್ತು. ಕಲ್ಪತರು ಜ್ಯೋತಿಷ್ಯಾಲಯದ ದೈವಜ್ಞ ಭಾಸ್ಕರ ಶರ್ಮ ಎಂಬವರು ಪ್ರಶ್ನೆಯನ್ನು ಪ್ರಕಟಿಸದೆ ಒಂದು ಪದದಲ್ಲಿ ಉತ್ತರ ಕೊಡುತ್ತಿದ್ದ ಜೋತಿಷ್ಯ ಪ್ರಶ್ನೆ ವಿಭಾಗವನ್ನೂ ಅನೇಕರು ಮೆಚ್ಚುತ್ತಿದ್ದರು. ಅಲ್ಲಿ ಪ್ರಶ್ನೆ ಕೇಳಿದವರ ವಿವರಗಳನ್ನು ನೋಡುವಾಗ ಪತ್ರಿಕೆಯನ್ನು ಯಾವೆಲ್ಲ ಊರಿನವರು ಓದುತ್ತಾರೆ ಎಂಬ ಸ್ಥೂಲ ಮಾಹಿತಿ ದೊರೆಯುತ್ತಿತ್ತು. ಶ್ರೀಕರ ಕಸ್ತೂರಿ ಮಾತ್ರೆ, ನಂಜನಗೂಡು ಟೂತ್ ಪೌಡರ್ ಮತ್ತು ಇತರ ಆಯುರ್ವೇದಿಕ್ ಔಷಧಗಳನ್ನು  ತಯಾರಿಸುತ್ತಿದ್ದ ದಿ ಸದ್ವೈದ್ಯಶಾಲಾ ಪ್ರೈ. ಲಿ. ಇದರ ಜಾಹೀರಾತು ಹಿಂಬದಿಯ ಪುಟದಲ್ಲಿ ಕಾಯಂ ಆಗಿ ಇರುತ್ತಿತ್ತು. 1964ರಲ್ಲಿ ಇದರ ಪ್ರಕಟಣೆ ನಿಂತು ಹೋಯಿತು.  ಬಂಗಾರಿ ಚಿತ್ರವನ್ನು ನಾವೇ ನೋಡಿದ ಅನುಭವ ಕೊಡುವ ನವಂಬರ್ 1963ರ ಸಂಚಿಕೆಯ ಆ ಬರಹ ಇಲ್ಲಿದೆ.

 
 

ಕಥಾಸಾರಾಂಶದಲ್ಲಿ ಕಾಣಿಸುವ ಕಾಲಚಕ್ರದ ಉರುಳಿಗೆ ಸಿಲುಕಿದವರೆಲ್ಲರೂ ಮಣ್ಣು ಮುಕ್ಕಲೇ ಬೇಕು. ಅಂತೆಯೇ ಬಂಗಾರಿಯೂ ಮಣ್ಣು ಮುಕ್ಕಿದಳು  ಎಂಬ ಚತುರೋಕ್ತಿಯ ಸಾಲುಗಳು ಗಮನ ಸೆಳೆಯುತ್ತವೆ.  ಬಹುಶಃ ಕೃಷ್ಣಮೂರ್ತಿ ಪುರಾಣಿಕರ ಮೂಲ ಕಥೆಯಲ್ಲಿ ಆ ಸಾಲುಗಳು ಇದ್ದಿರಬಹುದು. ಈ ಚಿತ್ರ ಅವರ ಯಾವ ಕಾದಂಬರಿ / ಕಥೆಯಾಧಾರಿತ ಎಂಬುದರ ಬಗ್ಗೆ  ಮಾಹಿತಿ ಲಭ್ಯವಿಲ್ಲ. 

ಈ ಚಿತ್ರದಲ್ಲಿ ನಿರ್ಮಾಪಕ ನಿರ್ದೇಶಕ ಜಿ.ವಿ.ಅಯ್ಯರ್ ಅವರೇ ಬರೆದ ಒಟ್ಟು 5 ಹಾಡುಗಳಿವೆ. ಅವುಗಳ ಪೈಕಿ ಎರಡು ಇತ್ತೀಚೆಗೆ ಅಂತರ್ಜಾಲದಿಂದ ಹೆಕ್ಕಲು ಸಿಕ್ಕಿದವು.

1. ಸ್ವತಃ ಜಿ.ಕೆ. ವೆಂಕಟೇಶ್ ಹಾಡಿದ ನಾ ಹುಟ್ಟಿ ಬೆಳೆದುದು ಕನ್ನಡ ನಾಡು.


2. ರಾಧಾ ಜಯಲಕ್ಷ್ಮಿ ಮತ್ತು ಸಂಗಡಿಗರು ಹಾಡಿದ ಕನ್ನಡದಾ ಮಗಳೆ ಬಾರೇ.
ಇದರ ತುಣುಕು  ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಲ್ಲಿ ಇದೆ.  ಒಂದರಿಂದ ಇಪ್ಪತ್ತು....  ಬರಹ ನೋಡಿ.


ಮತ್ತುಳಿದ ಮೂರು ಮನದಲ್ಲೆ ಮೆಲ್ಲಬೇಕಾದ ಮಂಡಿಗೆಗಳು.

3. ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ  - ನಿನ್ನ ಕೈಬಳೆ ಝಣ್ ಝಣ್.

4. ರಘುನಾಥ ಪಾಣಿಗ್ರಾಹಿ - ಯಾರೇನ ಮಾಡುವರೋ.

5. ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ -  ತಾಯ ತಿಂದ ತಬ್ಬಲಿ ನೀನೆಂದು.

ಎಂದೂ ಕೇಳುವ ಸಾಧ್ಯತೆ ಇರದ ಇಂಥ ಹಾಡುಗಳು ನಾವು  ಇದುವರೆಗೆ ಕೇಳಿದ, ಕೇಳುತ್ತಿರುವ  ಎಷ್ಟೋ ಮಾಧುರ್ಯಭರಿತ ಹಾಡುಗಳಿಗಿಂತಲೂ ಹೆಚ್ಚು ಮಧುರವಾಗಿರಬಹುದು.  ಏಕೆಂದರೆ Ode on a Grecian Urn ಕವನದಲ್ಲಿ ಜೋನ್ ಕೀಟ್ಸ್ ಹೇಳುವಂತೆ Heard Melodies Are Sweet, but Those Unheard Are Sweeter.

ಕಥಾಸಾರಾಂಶ, ತಾರಾಗಣ, ಪಾರಿಭಾಷಿಕ ವರ್ಗ, ಹಾಡುಗಳ ಸಾಹಿತ್ಯ ಒಳಗೊಂಡ ಬಂಗಾರಿ ಪದ್ಯಾವಳಿಯನ್ನು scroll ಮಾಡುತ್ತಾ ನೋಡಿ. ಈ ಚಿತ್ರದ ಸಂಪೂರ್ಣ ಹಕ್ಕುದಾರರು ಬೆಂಗಳೂರಿನ ವಿಜಯಾ ಪಿಕ್ಚರ್ಸ್ ಸರ್ಕ್ಯೂಟ್ ಎಂಬ  ಉಲ್ಲೇಖ ಅದರಲ್ಲಿದೆ.  ಅವರ ಗೋದಾಮಿನಲ್ಲಿ ಈ ಚಿತ್ರದ ಪ್ರಿಂಟ್ ಇರಲೂಬಹುದೇನೋ.