Saturday 27 May 2023

ಕಜೆ ಕಾರು ಮತ್ತು ಮಾಳದ ನೆನಪುಗಳು



ಮಾಳದ ರಾಜಾರಾಮ ಬಸ್ಸಿನಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಕಂಡಕ್ಟರ್ ಬಗ್ಗೆ FBಯಲ್ಲಿ ಇತ್ತೀಚೆಗೆ ಕೆಲವು ಪೋಸ್ಟುಗಳು ಕಾಣಿಸಿದ್ದವು. . ಅವುಗಳನ್ನು ಓದಿ ನಮ್ಮ ಅಕ್ಕನ ಮನೆ ಇರುವ ಮಾಳದ ಯಾನಗಳ ಹಳೆ ಕಾಲದ ಅಂದರೆ 1950ರ ದಶಕದ ಉತ್ತರಾರ್ಧ ಮತ್ತು 60ರ ದಶಕದ  ನೆನಪುಗಳು ನನ್ನ ಮನಸ್ಸಿನಲ್ಲಿ ಮರುಕಳಿಸಿದವು.

1970ರ ದಶಕದ ಆದಿ ಭಾಗದಲ್ಲಿ ವಿನಾಯಕ ಮತ್ತು ರಾಜಾರಾಮ ಬಸ್ಸು ಸರ್ವೀಸ್ ಆರಂಭವಾಗುವುದಕ್ಕಿಂತ ಮೊದಲು ಕೆಲವು ದಶಕಗಳ ಕಾಲ ಮಾಳ ಕಾರ್ಕಳಗಳ ನಡುವೆ ನಿಗದಿತ ಸಮಯಕ್ಕೆ ಓಡಾಡುತ್ತಾ ಸಾರಿಗೆ ಸೇವೆ ಒದಗಿಸಿದ್ದ 'ಕಜೆ ಕಾರು' ಎಂದು ಪ್ರಸಿದ್ಧವಾಗಿದ್ದ ಮಹಾದೇವ ಮರಾಠೆಯವರ ಕಪ್ಪು ಬಣ್ಣದ ಕಾರು ನನಗೆ ಹೆಚ್ಚು ನೆನಪಾಗುವುದು. ಅದು ಅಂಬಾಸೆಡರಿನ ಪೂರ್ವಾವತಾರವಾದ ಹಿಂದುಸ್ಥಾನ್ ಆಗಿತ್ತೇ ಅಥವಾ ಹಾಗೆಯೇ ಕಾಣಿಸುತ್ತಿದ್ದ ಆಸ್ಟಿನ್ ಆಫ್ ಇಂಗ್ಲಂಡ್ ಆಗಿತ್ತೇ ಎಂದು ನನಗೆ ನೆನಪಿಲ್ಲ. ನಾವು 6 ಗಂಟೆಗೆ ಮನೆಯಿಂದ ಹೊರಟು ಮೃತ್ಯುಂಜಯಾ ಮತ್ತು ನೇತ್ರಾವತಿ ನದಿಗಳನ್ನು ದಾಟಿ ನಿಡ್ಗಲನ್ನು ಬೈಪಾಸ್ ಮಾಡಿ ಒಳದಾರಿಯಲ್ಲಿ ಟಾರು ರಸ್ತೆ ಸೇರಿ  ಉಜಿರೆಗೆ ನಡೆದು ಅಲ್ಲಿಂದ 7 ಗಂಟೆಗೆ ಹೊರಡುವ ವೆಂಕಟೇಶ ಬಸ್ಸಿನಲ್ಲಿ 9-30ರ ಸುಮಾರಿಗೆ ಕಾರ್ಕಳ ತಲುಪಿ ಬಸ್ಟಾಂಡ್ ಸಮೀಪದ ಉಡುಪಿ ಹೋಟಲಿನಲ್ಲಿ ಬನ್ಸ್ ಕಾಪಿ ಸೇವಿಸಿ ಅನಂತಶಯನ ತಲುಪುವಾಗ ಕಜೆ ಕಾರು ಹೊರಡಲು ತಯಾರಾಗಿರುತ್ತಿತ್ತು.

ನಾನು ಯಾವಾಗಲೂ ಎದುರಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದುದು. ಮಹಾದೇವ ಮರಾಠೆಯವರು ಸ್ವಲ್ಪ ವಾಚಾಳಿ. ಕಾರಿನಲ್ಲಿರುತ್ತಿದ್ದ ಯಾರಾದರೂ ಊರಿನ ಓರಗೆಯವರೊಡನೆ ಮಾತಾಡುತ್ತಲೇ ಇರುತ್ತಿದ್ದರು. ಇಂಧನ ಉಳಿಸಲೆಂದು ಇಳಿಜಾರಿನಲ್ಲಿ ಎಂಜಿನ್ ಆಫ್ ಮಾಡುತ್ತಿದ್ದರು. ಕಾರ್ಕಳದಿಂದ  ಮಲ್ಲಾರಿಗೆ ಆಗ ಒಂದು ರೂಪಾಯಿ ಚಾರ್ಜು.  ಮಲ್ಲಾರಿನಲ್ಲಿ ಕಾರಿನಿಂದ ಇಳಿದು ಏರು ಹಾದಿಯಲ್ಲಿ ನಡೆಯುತ್ತಾ ಶಿವೇತೋಟದ ಅಕ್ಕನ ಮನೆಗೆ ಹೋಗುವುದು. 

ನಾನು ಮೊದಲ ಸಲ ಅವರ ಕಾರಲ್ಲಿ ಕುಳಿತದ್ದು ಅಕ್ಕನ ಹಿರಿ ಮಗನ ಮುಂಜಿಗೆ ಹೋದಾಗ. ಆ ಸಲ ಉಜಿರೆಯಿಂದ 10-30ಕ್ಕೆ ಹೊರಡುವ, ಅದ್ರಾಮರು ಡ್ರೈವರ್ ಆಗಿದ್ದ ಪಿ.ವಿ. ಬಸ್ಸಿನಲ್ಲಿ ಬಂದದ್ದು. ಅದು 1-30ಕ್ಕೆ ಕಾರ್ಕಳ ತಲುಪುತ್ತಿತ್ತು. ಅದ್ರಾಮ ಬಲು ನಿಧಾನಿ. ಅವರ ಬಸ್ಸು ಏರಿನಲ್ಲಿ ಸಾಗುವಾಗ ಕೆಳಗಿಳಿದು ಪ್ರಕೃತಿಯ ಕರೆಗೆ ಓಗೊಟ್ಟು ಓಡಿ ಬಂದು ಮತ್ತೆ ಹತ್ತಿಕೊಳ್ಳಬಹುದು ಎಂದು ಜನರು ಹೇಳುವುದಿತ್ತು. ವೆಂಕಟೇಶ ಬಸ್ಸಿಗೆ ಅವರ ತಮ್ಮ ಡ್ರೈವರ್. ವೇಗದ ವಿಷಯದಲ್ಲಿ ಆತ ತದ್ವಿರುದ್ಧ.  ಮೂಡುಬಿದ್ರೆ ಬೆಳುವಾಯಿಗಳ ಮಧ್ಯದ ನೇರ ರಸ್ತೆಯಲ್ಲಿ ಆ ಶರವೇಗದ ಸರದಾರನ ಡ್ರೈವಿಂಗ್ ರೋಮಾಂಚನ ಉಂಟುಮಾಡುತ್ತಿತ್ತು. ಪಿ.ವಿ ಮತ್ತು ವೆಂಕಟೇಶ್ ಎರಡೂ ಫಾರ್ಗೊ ಎಂಜಿನ್ ಹೊಂದಿದ್ದ ಬಸ್ಸುಗಳು.  ಪಿ.ವಿ ಬಸ್ಸು  ಉಪ್ಪಿನಂಗಡಿ - ಧರ್ಮಸ್ಥಳ - ಕಾರ್ಕಳ  ಮತ್ತು ವೆಂಕಟೇಶ್ ಧರ್ಮಸ್ಥಳ - ಕುಂದಾಪುರ ಮಧ್ಯೆ ದಿನಕ್ಕೊಂದೊಂದು ಟ್ರಿಪ್ ಮಾಡುತ್ತಿದ್ದುದು.

ನಮ್ಮನ್ನು ಉಜಿರೆಯಿಂದ ಕಾರ್ಕಳಕ್ಕೊಯ್ಯುತ್ತಿದ್ದ ಅದ್ರಾಮರ ಪಿ.ವಿ.ಮೋಟರ್ ಮತ್ತು ಅವರ ತಮ್ಮ ಸಾರಥಿಯಾಗಿದ್ದ ವೆಂಕಟೇಶ್ ಬಸ್ಸುಗಳು.


ಕಾರ್ಕಳ ತಲುಪಿದೊಡನೆ ದುಗ್ಗಿ ಬಾಯಿಯವರ ಹೋಟೆಲಿನಲ್ಲಿ ಊಟ ಪೂರೈಸಿ ಕಜೆ ಕಾರಿನ ಮಧ್ಯಾಹ್ನದ ಟ್ರಿಪ್ಪಿನಲ್ಲಿ ಮಾಳಕ್ಕೆ ಹೋದದ್ದು. 7-8 ವರ್ಷದವನಾಗಿದ್ದ ನಾನು ಆ ದಿನ ತಂದೆಯವರ ಒಟ್ಟಿಗೆ ಹಿಂದಿನ ಸೀಟಲ್ಲಿ ಕುಳಿತಿದ್ದೆ. ಅಲ್ಲಿ ಕಾಲಿಡುವಲ್ಲಿ ಒಂದು ಅಡಿಕೆ ಮರ ಉದ್ದಕ್ಕೆ ಇಟ್ಟ ಹಾಗೆ ನನಗೆ ಅನಿಸಿತ್ತು!

ಅದಕ್ಕಿಂತ ಮೊದಲು ಉನ್ನಿ ಎಂಬವರ ಕಾರು ಸರ್ವೀಸ್ ಇತ್ತಂತೆ. ಅದು ನಡು ದಾರಿಯಲ್ಲಿ ಕೆಟ್ಟರೆ ಬಿಳಲುಗಳ ಕಟ್ಟ ಹಾಕಿ ಓಡಿಸುವಷ್ಟು ಅವರು ನಿಪುಣರಾಗಿದ್ದರು ಎಂದು ಜನರಾಡಿಕೊಳ್ಳುವುದಿತ್ತು. ಒಂದು ಶೆವರ್ಲೆ (ನಾವು ಚವರ್ಲೆಟ್ ಎಂದು ಉಚ್ಚರಿಸುತ್ತಿದ್ದುದು) ವ್ಯಾನ್ ಸರ್ವಿಸ್ ಕೂಡ ಇತ್ತು. ಅದನ್ನು 'ಟೇಕ್ಸಿ‘ ಎಂದು ಕರೆಯುತ್ತಿದ್ದರು. ರಿಟರ್ನ್ ಜರ್ನಿಗೆ ನಾವು ಈ ಟೇಕ್ಸಿಯನ್ನೇ prefer ಮಾಡುತ್ತಿದ್ದೆವು. ಆದರೆ ಕಾರ್ಕಳದಿಂದ ಮಾಳಕ್ಕೆ ನಾನು ಒಮ್ಮೆಯೂ ಅದರಲ್ಲಿ ಹೋದದ್ದಿಲ್ಲ.

ಶೆವರ್ಲೆ ವ್ಯಾನ್ ಹೀಗಿತ್ತು.



ಕಾರ್ಕಳದಿಂದ ಮಾಳಕ್ಕೆ ಆಗ ಇದ್ದದ್ದು ಮಣ್ಣಿನ ರಸ್ತೆಯಾದರೂ ಚೆನ್ನಾಗಿಯೇ ಇತ್ತು. ಆದರೆ ಗಂಟಲು ಮೂಗೊಳಗೆ ಧೂಳು ಹೋಗಿ ಒಂದು ದಿನ ಗಂಟಲ ಕೆರೆತ ಮತ್ತು ಕೆಮ್ಮು ಕಾಡುತ್ತಿತ್ತು. ಮಿಯಾರಿನ ನದಿ ಮತ್ತು ಮಾಳದವರು ದೊಡ್ಡ ನದಿ ಎಂದು ಕರೆಯುವ ಕಡಾರಿಯ ನದಿಗಳಿಗೆ ಆಗಿನ್ನೂ ಸೇತುವೆಗಳಾಗಿರಲಿಲ್ಲ. ಹೀಗಾಗಿ ಈ ಸರ್ವೀಸುಗಳೇನಿದ್ದರೂ ಬೇಸಿಗೆಯಲ್ಲಿ ಮಾತ್ರ. ಮಳೆಗಾಲದಲ್ಲಿ ನದಿಗೆ ದೋಣಿ. ರಸ್ತೆಗೆ ನಟರಾಜ ಸರ್ವೀಸು. ಆದರೆ ನನಗೆ ಈ ಅನುಭವ ಇಲ್ಲ. ನಾನು ಅಕ್ಕನ ಮನೆಗೆ ಹೋಗುತ್ತಿದ್ದುದು ಬೇಸಿಗೆ ರಜೆಯಲ್ಲಿ ಮಾತ್ರ.

ನಾವು ಮಾಳಕ್ಕೆ ಹೋಗುತ್ತಿದ್ದುದಾಗಲಿ ಹಿಂತಿರುಗುತ್ತಿದ್ದುದಾಗಲಿ ಬೆಳಗಿನ ಹೊತ್ತಿನಲ್ಲೇ. ಒಂದು ಸಲ ನಾನು ಮತ್ತು ಅಣ್ಣನ ಮಗ ಏಕೋ ಅಪರಾಹ್ನ ವಾಪಸ್ ಹೊರಡುವ ಸಂದರ್ಭ ಬಂದಿತ್ತು. .ಆದರೆ ಮಲ್ಲಾರಿನಲ್ಲಿ ಸಂಜೆ 5 ಗಂಟೆ ವರೆಗೆ ಕಾದರೂ ಯಾವ ವಾಹನವೂ ಸಿಗಲಿಲ್ಲ. ಆಗ ಕಡು ಬೇಸಿಗೆಯಾಗಿದ್ದು ಸಿಕ್ಕಾಪಟ್ಟೆ ಬಾಯಾರಿಕೆ ಆಗುತ್ತಿದ್ದುದರಿಂದ ಅಲ್ಲಿದ್ಧ 'ತಾಷ್ಕೆಂಟ್' ಹೋಟೆಲಿನಲ್ಲಿ ಆ ದಿನ 6-7 ಸರ್ತಿ ಕಾಫಿ ಕುಡಿದಿರಬಹುದು! (ಲಾಲ್ ಬಹದ್ದೂರ್ ಶಾಸ್ತ್ರಿಯವರು ತಾಷ್ಕೆಂಟಿನಲ್ಲಿ ನಿಧನರಾದ ದಿನ ಆ ಹೋಟೆಲ್ ಆರಂಭ ಆದ್ದರಿಂದ ಊರವರು ಇಟ್ಟಿದ್ದ ಹೆಸರಂತೆ ಅದು.) ಕೊನೆಗೆ ಯಾವುದೋ ಲಾರಿ ಬಂತು. ಅದರಲ್ಲಿ ಕಾರ್ಕಳಕ್ಕೆ ಬಂದೆವು. ಜೈಹಿಂದ್ ಟಾಕೀಸಲ್ಲಿ ಪ್ರತಿಜ್ಞೆ ಸಿನಿಮಾ ನೋಡಿ ಅನಂತಶಯನ ಬಳಿಯ ಒಂದು ಹೋಟೆಲಿನ ಹಜಾರದಲ್ಲಿ ರಾತ್ರಿ ಕಳೆದು ಬೆಳಗ್ಗೆ 6 ಗಂಟೆಯ ಹನುಮಾನ್ ಬಸ್ಸಿನಲ್ಲಿ ಮುಂಡಾಜೆಗೆ ಹೊರಟೆವು.

ಕಜೆ ಕಾರು ನೋಡಿ ಮಾಳದ ಇನ್ನೋರ್ವ ಮಹನೀಯರಿಗೂ ಉಮೇದು ಬಂದು ಸ್ವಂತ ಉಪಯೋಗಕ್ಕೆ ಒಂದು ಅಂಥದ್ದೇ ಕಾರು ಕೊಂಡಿದ್ದರು. ಅವರಿಗೆ accelerator ಯಾವುದು ಮತ್ತು ಬ್ರೇಕ್ ಯಾವುದು ಎಂದು ಯಾವಾಗಲೂ ಗೊಂದಲ. ಅನೇಕ ಸಲ ಅದರ ಬದಲು ಇದು, ಇದರ ಬದಲು ಅದು ಒತ್ತುತ್ತಿದ್ದರಂತೆ. ಒಂದು ಸಲ ಅವರ ಕಾರಿನಲ್ಲಿ ಪಯಣಿಸುವ ಸಂದರ್ಭ ನನಗೂ ಒದಗಿ ಬಂದಿತ್ತು. ಪುಣ್ಯಕ್ಕೆ ಆ ದಿನ ಸರಿಯಾಗಿಯೇ ಚಲಾಯಿಸಿದರು.

ಕೆಲ ವರ್ಷಗಳ ನಂತರ ಮಾಳ ಕಾರ್ಕಳಗಳ ಮಧ್ಯೆ ಒಂದೆರಡು ಆಧುನಿಕ ಅಂಬಾಸೆಡರ್ ಕಾರು ಸರ್ವೀಸುಗಳೂ ಆರಂಭವಾದವು. ಮುಂದೆ ಬಸ್ಸುಗಳ ಓಡಾಟ ಆರಂಭವಾಗಿ ಕುದುರೆಮುಖ ಪ್ರಾಜೆಕ್ಟ್ ಕಾರಣದಿಂದ ಮಾಳ ಸರ್ವತೋಮುಖ ಅಭಿವೃದ್ಧಿಯತ್ತ ಹೆಜ್ಜೆ ಹಾಕತೊಡಗಿದ  ಹೊತ್ತಿಗೆ ನಾನು ಉದ್ಯೋಗದಲ್ಲಿ ವ್ಯಸ್ತನಾದುದರಿಂದ ಅಲ್ಲಿಗೆ ನನ್ನ ಭೇಟಿ ಕಮ್ಮಿ ಆಗತೊಡಗಿತು. 

50-60ರ ದಶಕಗಳಲ್ಲಿ  ನಮ್ಮೂರು ಮುಂಡಾಜೆಯಲ್ಲೂ  ಒಂದಿಬ್ಬರು ಸ್ಪಂತ ಬಳಕೆಗೆ ಹಿಂದುಸ್ಥಾನ್ ಕಾರು ಇಟ್ಟುಕೊಂಡವರಿದ್ದರು. ಅನಿವಾರ್ಯ ಸಂದರ್ಭಗಳಲ್ಲಿ ಇತರರಿಗೂ ಅವು ಒದಗುತ್ತಿದ್ದವು.  ಇಲ್ಲವಾದರೆ ಊರಿನವರೆಲ್ಲ ಮುಂಡಾಜೆ, ನಿಡ್ಗಲ್ ಅಥವಾ ಉಜಿರೆ ವರೆಗೆ ನಡೆದೇ  ಬಸ್ಸು ಹಿಡಿಯುತ್ತಿದ್ದುದು. 70ರ ದಶಕದಲ್ಲಿ ಊರ ಮಹನೀಯರೊಬ್ಬರು ಅಂಬಾಸಿಡರ್ ಕಾರು ಖರೀದಿಸಿ  ಡ್ರೈವರ್ ನೇಮಿಸಿಕೊಂಡು ಉಜಿರೆ ಬೆಳ್ತಂಗಡಿಗಳಿಗೆ ನಿಯಮಿತ ಸರ್ವೀಸ್ ನಡೆಸತೊಡಗಿದರು.  ಅವರ ಬಂಧುವೇ ಆಗಿದ್ದ ಡ್ರೈವರ್ ಸುಳ್ಳು ಲೆಕ್ಕ ತೋರಿಸಿ ನಷ್ಟ ಉಂಟು ಮಾಡಿದ್ದರಿಂದ ಅವರು ಕಾರು ಮಾರಿ ಬಿಟ್ಟರು.  ಮತ್ತೆ ಕೆಲವು ವರುಷ ಒಂದೆರಡು ಜೀಪುಗಳು ಸೋಮಂತಡ್ಕ ಸಿದ್ದಬೈಲು ಮಧ್ಯೆ ನಿಯಮಿತ ಓಡಾಟ ನಡೆಸುತ್ತಿದ್ದವು.  ಆದರೆ ಮನೆಯಲ್ಲಿ ಸ್ವಂತ ವಾಹನ ಇಟ್ಟುಕೊಂಡವರ ಸಂಖ್ಯೆ ಜಾಸ್ತಿ ಆಗುತ್ತಿದ್ದಂತೆ ಪ್ರಯಾಣಿಕರ ಕೊರತೆಯಿಂದ ಅವೂ ನಿಂತು ಹೋದವು.  ಈಗ  ಪರಿಸ್ಥಿತಿ ಮತ್ತೆ 50ರ ದಶಕದಲ್ಲಿದ್ದಂತೆ.  ಆದರೆ ಮುಂಚಿನಂತೆ ಜನರು ನಡೆಯುವುದಿಲ್ಲ, ಫೋನ್ ಮಾಡಿ ಅಟೋರಿಕ್ಷಾ ತರಿಸುತ್ತಾರೆ - ಅಷ್ಟೇ ವ್ಯತ್ಯಾಸ. ದಕ್ಷಿಣ ಕನ್ನಡದ ಚಿತ್ಪಾವನರ ಮುಖ್ಯ ಆವಾಸ ಸ್ಥಾನಗಳಾಗಿದ್ದ ಶಿಶಿಲ, ಮುಂಡಾಜೆ, ದುರ್ಗ ಮತ್ತು ಮಾಳಗಳ ಪೈಕಿ ಒಂದು ಕಾಲಕ್ಕೆ ಹೆಚ್ಚು ಮುಂದುವರೆದದ್ದು ಎಂದು  ಅನ್ನಿಸಿಕೊಂಡಿದ್ದ ಮುಂಡಾಜೆಯ ಒಳ ಪ್ರದೇಶಗಳ ಮೂಲಕ ಸರ್ವಋತು ಟಾರು ರಸ್ತೆ ಹಾದು ಹೋಗುತ್ತಿದ್ದರೂ  ಈ  21ನೆಯ ಶತಮಾನದಲ್ಲೂ  ಬಸ್ಸು ಸೌಕರ್ಯ ಇಲ್ಲದಿರುವುದು  ವಿಪರ್ಯಾಸವೇ ಸರಿ.

Sunday 7 May 2023

ನಕಾರಗಳ ಸಕಾರಾತ್ಮಕ ಹಾಡು!


30ಕ್ಕೂ ಹೆಚ್ಚು ನಕಾರಗಳನ್ನೊಳಗೊಂಡ ಈ ಹಾಡಿನ ತುಂಬೆಲ್ಲ ಇರುವುದು ಸಕಾರಾತ್ಮಕ ಸಾಲುಗಳೇ. ಇಷ್ಟೊಂದು  ನಕಾರಗಳನ್ನು  ಸದಭಿರುಚಿಯ ಚಿತ್ರ ನಂದಾದೀಪಕ್ಕಾಗಿ ಸಕಾರಾತ್ಮಕವಾಗಿ  ಸಾಕಾರಗೊಳಿಸಿದವರು ಸೋರಟ್ ಅಶ್ವತ್ಥ್. ಆಕರ್ಷಕವಾಗಿ ಸ್ವರ ಸಂಯೋಜನೆ ಮಾಡಿದವರು ಎಂ. ವೆಂಕಟರಾಜು.  ಸುಶ್ರಾವ್ಯವಾಗಿ ಹಾಡಿದವರು ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ.

ನಲಿವ ಮನ ಹೊಂದೀ ದಿನ
ಚೆನ್ನಾದ ಸಮ್ಮಿಲನ ಹೊನ್ನಾದ ಮಹಾ ದಿನ
ಒಲುಮೆಯ ವಿನೂತನ ಭಾವನ ಜೀವನ        
ನಲಿವ ಮನ

ಬಳಸಿದೆ ತನುಮನ ಸುಪ್ರೇಮ ಬಂಧನ    
ಬೆಳಗಲಿ ಉಲ್ಲಾಸದೆ ನಮ್ಮಾಸೆ ಸಾಧನ
ಗೆಲುವಿನ ಸಂಜೀವನ ಸವಿಯುವ ಚಿರಂತನ
ಗಳಿಸುವ ವಿನೋದದ ಬಾಳಿನ ಚೇತನ         
ಒಲುಮೆಯ ವಿನೂತನ ಭಾವನ ಜೀವನ

ಲತೆಗೆ ನಿರಂತರ ಆಸರೆಯಾಗುನೀ
ತರುವೇ ಸದಾ ಚಿರ ಆಶ್ರಯ ನಂಬು ನೀ
ಮನಸಿನ ಮಹಾಶಯ ಫಲಿಸಿದ ಶುಭೋದಯ
ಬದುಕಿನ ವಿಕಾಸದ ಗಾನವ ಪಾಡುವ
ಒಲುಮೆಯ ವಿನೂತನ ಭಾವನ ಜೀವನ        

ಬೆಳಗುವ ಮನೋಹರ ಚಂದ್ರಮನಾಗುನೀ
ಬೆಳಕಿನ ಸಮೀಪದ ಛಾಯೆ ನೀ ಭಾಮಿನಿ
ಬೆರೆಯುವೆ ವಿಲಾಸದಿ ಮೆರೆಯುವೆ ಸುಮೋದದಿ
ಬಳಲದೆ ಸರಾಗದ ಬಾಳನೆ ನೋಡುವ           
ಒಲುಮೆಯ ವಿನೂತನ ಭಾವನ ಜೀವನ

ಚಿತ್ರದಲ್ಲಿ ಇದು ಓರ್ವ ಕವಿ ಮತ್ತು ಆತನ ಪ್ರಿಯತಮೆ ತಮ್ಮ ಭಾವಿ ಜೀವನದ ಬಗ್ಗೆ ಹೊಂಗನಸು ಕಾಣುತ್ತಾ ಹಾಡುವ ಹಾಡು. ಹೆಚ್ಚು ವಿಭಕ್ತಿ ಪ್ರತ್ಯಯಗಳನ್ನು ಬಳಸದ ವಿಜಯನಾರಸಿಂಹ ಮತ್ತು ಒಗಟಿನಂಥ ಸಾಲುಗಳನ್ನು ಬರೆಯುವ   ಕು.ರ.ಸೀ. ಅವರ ಶೈಲಿಗಳನ್ನು ಸಮ್ಮಿಲನಗೊಳಿಸಿ ಸೋರಟ್ ಅಶ್ವತ್ಥ್ ಇದನ್ನು ರಚಿಸಿದಂತೆ ಕಾಣುತ್ತದೆ. ಈ ಹಾಡನ್ನು ಕೇಳಿದ  ಕು.ರ.ಸೀ ಅವರು ‘ಸಾಹಿತಿ ಅಂದ್ರೆ ನೀನೇ ಕಣಯ್ಯ.  ನಿನ್ನಂಥ ಸಾಹಿತಿ ಇನ್ನೊಬ್ರಿಲ್ಲ’ ಎಂದು ಅಭಿಮಾನದಿಂದ ಸೋರಟ್ ಅಶ್ವತ್ಥ್ ಅವರ  ಬೆನ್ನು ತಟ್ಟಿದ್ದರಂತೆ. ಹೀಗೆ ಇನ್ನೊಬ್ಬರ ಬೆನ್ನು ತಟ್ಟುವ ಪರಿಪಾಠ ಅಂದು ಚಿತ್ರರಂಗದಲ್ಲಿ ಸಾಮಾನ್ಯವಾಗಿತ್ತು.  ಮದನ್ ಮೋಹನ್ ಅವರ ಆಪ್‌ ಕೀ ನಜರೋ ನೆ ಸಮಝಾ ಹಾಡು ಕೇಳಿದ ನೌಷಾದ್ ‘ನನ್ನ ಎಲ್ಲ ಹಾಡುಗಳನ್ನು ನೀನು ತೆಗೆದು ಕೋ.  ಈ ಒಂದು ಹಾಡುನನಗೆ ಕೊಡು’ ಅಂದಿದ್ದರಂತೆ.

ಪಲ್ಲವಿ ಭಾಗದಲ್ಲಿ ಪ್ರೇಮಿಗಳು ಚಿನ್ನದಂಥ ಈ ಮಹಾದಿನದಂದು ಒಂದಕ್ಕೊಂದು ಶ್ರುತಿ ಸೇರಿ ಚೆನ್ನಾಗಿ ಸಮ್ಮಿಲನಗೊಂಡ ತಮ್ಮ ನಲಿವ  ಮನಗಳು  ಜೀವನವಿಡೀ  ಒಲುಮೆಯ ವಿನೂತನ ಭಾವನೆಯನ್ನು ಸದಾ ಸೂಸುತ್ತಿರಲಿ ಎಂಬ ಆಶಾ ಭಾವನೆಯನ್ನು ಜಂಟಿಯಾಗಿ ವ್ಯಕ್ತಪಡಿಸುತ್ತಾರೆ. ಚರಣಗಳಲ್ಲಿ ಇಬ್ಬರೂ ತಮ್ಮ ಆಕಾಂಕ್ಷೆಗಳನ್ನು ಬಿಂಬಿಸುವ ಸಾಲುಗಳನ್ನು ಹಂಚಿಕೊಂಡು ಹಾಡುತ್ತಾರೆ.  ಎರಡನೆ ಚರಣದಲ್ಲಿ ಆಕೆ ಲತೆಗೆ ನಿರಂತರ ಆಸರೆಯಾಗುನೀ ಎಂದಾಗ ಆತ ತರುವೇ ಸದಾ ಚಿರ ಆಶ್ರಯ ನಂಬು ನೀ ಎನ್ನುವುದು ಮತ್ತು  ಮೂರನೆ ಚರಣದಲ್ಲಿ ಬೆಳಗುವ ಮನೋಹರ ಚಂದ್ರಮನಾಗುನೀ ಎಂದಾಗ ಬೆಳಕಿನ ಸಮೀಪದ ಛಾಯೆ ನೀ ಭಾಮಿನಿ ಎನ್ನುವುದು ಸಂಬಂಧಿಸದೆಯೂ ಸಂಬಂಧಿಸಿದಂತೆ ಇರುವ ಸಾಲುಗಳನ್ನು ಬೆನ್ನು ಬೆನ್ನಿಗೆ ಬರೆಯುವ ಹಿಂದಿಯ ಮಜರೂಹ್ ಸುಲ್ತಾನ್‌ಪುರಿ ಶೈಲಿಯನ್ನು ನೆನಪಿಸುತ್ತದೆ. ಉದಾಹರಣೆಗೆ ಓ ಹಸೀನಾ ಜುಲ್ಫೋವಾಲಿ ಹಾಡಿನಲ್ಲಿ ಬರುವ ಛುಪ್ ರಹೇ ಹೈ ಯೆ ಕ್ಯಾ ಢಂಗ್ ಹೈ ಆಪ್‌ಕಾ  ಸಾಲಿನ ನಂತರ ಆಜ್ ತೊ ಕುಛ್ ನಯಾ ರಂಗ್ ಹೈ ಆಪ್‌ಕಾ, ಕತ್ಲ್ ಕರ್ ಕೇ ಚಲೆ ಯೆ ಅದಾ ಖೂಬ್ ಹೈ ಸಾಲಿನ ನಂತರ ಹಾಯೆ ನಾದಾಂ ತೇರೀ ಯೆ ಅದಾ ಖೂಬ್ ಹೈ ಇತ್ಯಾದಿಗಳನ್ನು ಗಮನಿಸಬಹುದು.

ಪ್ರತಿ ಚರಣದ ನಂತರ ಪಲ್ಲವಿಯ ಮೂರನೆ ಸಾಲು ಒಲುಮೆಯ ವಿನೂತನ   ಎತ್ತುಗಡೆಯಾಗುವುದು ಈ ಹಾಡಿನ ವಿಶೇಷ.  ಈ ಹಾಡು ಮೊದಲು ರಚನೆಯಾಗಿ ಆ ಮೇಲೆ ವೆಂಕಟರಾಜು ಅದಕ್ಕೆ ರಾಗ ಸಂಯೋಜನೆ ಮಾಡಿದರೋ ಅಥವಾ ಮೊದಲೇ ತಯಾರಾದ ಧಾಟಿಗೆ ತಕ್ಕಂತೆ ಹಾಡು ರಚನೆಯಾಯಿತೋ ಗೊತ್ತಿಲ್ಲ.  ಆದರೆ ಈ ಹಾಡಿನ, ಅದರಲ್ಲೂ ಪಲ್ಲವಿಯ ಸಾಲುಗಳನ್ನು ನೋಡಿದರೆ ಮಾತ್ರೆಗಳ ನಿರ್ದಿಷ್ಟ ಹರವು ಇಲ್ಲದಿರುವುದನ್ನು ಗಮನಿಸಬಹುದು.  ಆದರೂ ಈಗಿನ ಕಾಲದಲ್ಲಿ ಟಪ್ಪಾಂಗುಚ್ಚಿ ಎಂದು ಕರೆಯಲ್ಪಡುವ ಶೈಲಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿರುವ 6/8 ತಿಶ್ರ ನಡೆಯಲ್ಲಿ jumping notes ಬಳಸಿ ವೆಂಕಟರಾಜು ಅವರು ಅದು ಹೇಗೆ ಇಷ್ಟೊಂದು ಮಧುರ ರಾಗ ಸಂಯೋಜನೆ ಮಾಡಿದರು ಎಂದು ಆಶ್ಚರ್ಯವಾಗುತ್ತದೆ.  ಒಲುಮೆಯ ವಿನೂತನ ಎಂಬ ಭಾಗವನ್ನು ಪಿ.ಬಿ.ಎಸ್ ಮತ್ತು ಜಾನಕಿ ಅವರು ಏಣಿ ಏರುವಾಗ ಮೇಲೆ ಒಂದು ಕಾಲಿಟ್ಟ ಮೇಲೆ ಕೆಳಗಿನ ಮೆಟ್ಟಲಿನಿಂದ ಇನ್ನೊಂದು ಕಾಲು ಎತ್ತಿದಂತೆ ಗಮಕಯುಕ್ತವಾಗಿ ಹಾಡಿದ ರೀತಿಯಂತೂ ಅತ್ಯದ್ಭುತ. ವೆಂಕಟರಾಜು ಅವರ ಕುಲ ಕುಲ ಕುಲವೆಂದು ಹೊಡೆದಾಡದಿರಿ, ನುಡಿಮನ ಶಿವಗುಣ ಸಂಕೀರ್ತನ ಮತ್ತು ಈ ಹಾಡು ಯಮನ್ ರಾಗಾಧಾರಿತವಾಗಿದ್ದರೂ ಮೂರರಲ್ಲಿ ಒಂದಿನಿತೂ ಸಾಮ್ಯ ಗೋಚರಿಸದಿರುವುದು ಅವರ ನೈಪುಣ್ಯಕ್ಕೆ ಸಾಕ್ಷಿ. ಇದೇ ರೀತಿ  ಶಂಕರ ಜೈಕಿಶನ್ ಕೂಡ ಅನೇಕ ಹಾಡುಗಳಿಗೆ ಭೈರವಿ ರಾಗವನ್ನು ಬಳಸಿದರೂ ಅವು ವಿಭಿನ್ನವಾಗಿರುತ್ತಿದ್ದವು.


ನಂದಾದೀಪ ಚಿತ್ರದ ನಾಯಕಿ ತನ್ನ ಪ್ರಿಯಕರನನ್ನು ಮದುವೆಯಾಗಲು ಸಾಧ್ಯವಾಗದೆ ಓರ್ವ ಸಿರಿವಂತ ವಿಧುರನ ಮನೆಯೊಡತಿಯಾಗಬೇಕಾಗುತ್ತದೆ.  ನಮಗೇ ಈ ಹಾಡಿನ ಗುಂಗಿನಿಂದ ಹೊರಗೆ ಬರಲು ಕಷ್ಟವಾಗುವಾವಾಗ ಸ್ವತಃ ಪ್ರೇಮಿಯೊಡನೆ ಹಾಡಿದ ಆಕೆಗೆ ಹೇಗಾಗಿರಬೇಡ. ಪತಿಯ ಮನೆಯಲ್ಲಿ ಕರ್ನಾಟ ಭಾರತ ಕಥಾಮಂಜರಿ ಓದುವಾಗಲೂ ಅದರ ಪುಟಗಳಲ್ಲಿ ಆಕೆಗೆ ಈ ಹಾಡೇ ಕಾಣಿಸುತ್ತದೆ. 70ರ ದಶಕದಲ್ಲಿ ಕಾರ್ಯ ನಿಮಿತ್ತ ಧಾರವಾಡಕ್ಕೆ ಹೋಗಿದ್ದಾಗ ಅಲ್ಲಿಯ ಚಿತ್ರಮಂದಿರವೊಂದಲ್ಲಿ ಮರು ಬಿಡುಗಡೆಯಾಗಿದ್ದ ಈ ಚಿತ್ರ ನೋಡುವ ಅವಕಾಶ ನನಗೆ ದೊರಕಿತ್ತು. ಅಂದು ಪುಸ್ತಕದಲ್ಲಿ ಆ ಗೀತೆ ಕಾಣಿಸುವ ದೃಶ್ಯ ಏಕೋ ನನ್ನ ಮನಃಪಟಲದಲ್ಲಿ ಶಾಶ್ವತವಾಗಿ ದಾಖಲಾಗಿ  ಇಂದೂ ಅದನ್ನು ಕೇಳುವಾಗಲೆಲ್ಲ  ನನಗೆ ಆ ಸನ್ನಿವೇಶವೇ ಕಣ್ಣೆದುರು ಬರುವುದು!  


ಈ ನಕಾರಗಳ ಸಕಾರಾತ್ಮಕ ಹಾಡು ಬರೆದ ಸೋರಟ್ ಅಶ್ವತ್ಥ್ ಅವರ ನಿಜ ಹೆಸರು ಅಶ್ವತ್ಥ ನಾರಾಯಣ ಶಾಸ್ತ್ರಿ.  ಎಚ್.ಎಲ್.ಎನ್ ಸಿಂಹ ಅವರ ಪ್ರೇಮಲೀಲಾ ನಾಟಕದಲ್ಲಿ ಅವರು ನಿರ್ವಹಿಸುತ್ತಿದ್ದ  ಸೋರಟ್ ರಾಮನಾಥ್ ಪಾತ್ರದ ಜನಪ್ರಿಯತೆಯಿಂದಾಗಿ ಈ ಸೋರಟ್ ಹೆಸರು ಅವರಿಗಂಟಿತಂತೆ.  ಅವರು ಹಾಡುಗಳನ್ನು ರಚಿಸುವುದರ ಜೊತೆಗೆ ಸಂಭಾಷಣೆ, ಚಿತ್ರನಾಟಕವನ್ನೂ ಬರೆಯುತ್ತಿದ್ದುದಲ್ಲದೆ  ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಕನ್ನಡದ ಬಹುತೇಕ ಗೀತರಚನಕಾರರು ಸಂಭಾಷಣೆಗಳನ್ನೂ ಬರೆಯುತ್ತಿದ್ದುದು ಒಂದು ವಿಶೇಷ. ಆದರೆ ಆಗಿನ ಕಾಲದಲ್ಲಿ ಹಿಂದಿಯಲ್ಲಿ  ರಾಜೇಂದ್ರ ಕೃಷ್ಣ ಬಿಟ್ಟರೆ ಹಸರತ್ ಜೈಪುರಿ, ಶೈಲೇಂದ್ರ, ಮಜರೂಹ್ ಸುಲ್ತಾನ್‌ಪುರಿ, ಶಕೀಲ್ ಬದಾಯೂನಿ, ಆನಂದ್ ಬಕ್ಷಿ ಮುಂತಾದವರೆಲ್ಲ ಹಾಡು ಬರೆಯುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದರು.

ಜಿಗಿಜಿಗಿಯುತ ನಲಿ,  ಗಾಳಿ ಗೋಪುರ ನಿನ್ನಾಶಾ ತೀರ,  ಕರೆಯೇ ಕೋಗಿಲೆ ಮಾಧವನ ಇತ್ಯಾದಿ ಸೋರಟ್ ಅಶ್ವತ್ಥ್ ಹೆಸರು ಹೇಳಿದಾಕ್ಷಣ ಫಕ್ಕನೆ ನೆನಪಾಗುವ ಜನಪ್ರಿಯ ಹಾಡುಗಳು.  ಪಡುವಾರಹಳ್ಳಿ ಪಾಂಡವರು ಚಿತ್ರದ ತೂಕಡಿಸಿ ತೂಕಡಿಸಿ ಬೀಳದಿರೊ ತಮ್ಮ ಅವರು ಬರೆದದ್ದೆಂದು ಇತ್ತೀಚಿನವರೆಗೂ ನನಗೆ ಗೊತ್ತಿರಲಿಲ್ಲ - ಏಕೆಂದರೆ ಅದು ಸಿನಿಮಾ ಕವಿಯ ರಚನೆಯಂತೆ ಇಲ್ಲ!  ಅವರು ಸ್ವತಃ ನಿರ್ಮಿಸಿದ ಶನಿ ಪ್ರಭಾವ ಚಿತ್ರದಲ್ಲಿ ಎಸ್.ಪಿ.ಬಿ. ಜೊತೆ ಆನಂದದ ನಂದನ ಎಂದು ಪಿ.ಸುಶೀಲಾ ಧ್ವನಿಯೇನೋ ಎನ್ನಿಸುವಂತೆ  ಹಾಡಿದ ಜ್ಯೋತಿ  ಅವರ ಪುತ್ರಿ. ಭಾಗ್ಯದೇವತೆ, ಬಾಂಧವ್ಯ, ಸವಿ ನೆನಪು ಇತ್ಯಾದಿ ಚಿತ್ರಗಳನ್ನು  ನಿರ್ಮಿಸಿ ಕೂಡ ಅವರು ಕೈ ಸುಟ್ಟುಕೊಂಡಿದ್ದರು. ಚಿತ್ರಗಳಲ್ಲಿ ಅವರು ಒಂದೋ, ಎರಡೋ ಗೀತೆಗಳನ್ನು ಬರೆದದ್ದೇ ಹೆಚ್ಚು. ಜಯಗೋಪಾಲ್, ಉದಯಶಂಕರ್, ಕು.ರ.ಸೀ ಮುಂತಾದವರಂತೆ  ಎಲ್ಲ ಹಾಡುಗಳನ್ನು ಬರೆಯುವ ಅವಕಾಶ ಅವರಿಗೆ ಸಿಕ್ಕಿದ್ದು ಕಮ್ಮಿಯೇ.  ಸರಸ್ವತಿಯ ಸಂಪೂರ್ಣ ಕೃಪೆ ಅವರ ಮೇಲಿದ್ದು ಕೀರ್ತಿಲಕ್ಷ್ಮಿ ಅವರಿಗೊಲಿದರೂ  ಧನಲಕ್ಷ್ಮಿ ಏಕೋ ಮುನಿಸಿಕೊಂಡು ದೂರವೇ ನಿಂತಳು. Heart attack ಆಗಿ ಆಸ್ಪತ್ರೆಗೆ ಸೇರಿ ಸಾಯುವ ದಿನ ಬೆಳಗ್ಗೆ   ‘ನಾನು ಸತ್ತರೂ ನನ್ನ ಹಾಡಿನ ಮೂಲಕ ಜೀವಂತವಾಗಿರುತ್ತೇನೆ.  ನಾನು ಬರೆದ ನಾಡಿನಂದ ಈ ದೀಪಾವಳಿ ಹಾಡು ಇಲ್ಲದೆ  ಕನ್ನಡ ನಾಡಿನ ಯಾವ ಮನೆಯಲ್ಲೂ ದೀಪಾವಳಿ ಸಂಪೂರ್ಣವೆಂದೆನ್ನಿಸದು’ ಎಂದು ವೈದ್ಯರಲ್ಲಿ ಹೇಳಿದ್ದರಂತೆ.

ಈಗ ಅವರನ್ನು ನೆನೆಸಿಕೊಳ್ಳುತ್ತಾ  ಈ ನಕಾರಗಳ ಸಕಾರಾತ್ಮಕ ಹಾಡು ಆಲಿಸಿ.




************
ಸುಮಾರು 23 ನಕಾರಗಳ ಇನ್ನೊಂದು ಸಕಾರಾತ್ಮಕ ಹಾಡು 60ರ ದಶಕದಲ್ಲಿ ಬಂದಿತ್ತು. ಯಾವುದೆಂದು ಹೇಳಬಲ್ಲಿರಾ?

Tuesday 2 May 2023

ಮನ ಮೆಚ್ಚಿದ ಹಾಡುಗಳು



ಅನೇಕ ಸಲ ಯಾವುದಾದರೂ  ಒಂದು ಹಾಡು ಅತಿ ಜನಪ್ರಿಯವಾದರೆ ಅದರ ಪ್ರಖರತೆಗೆ ಆ ಸಿನಿಮಾದ ಇನ್ನುಳಿದ ಉತ್ತಮ ಹಾಡುಗಳು ಮಂಕಾಗಿ ಹಿನ್ನೆಲೆಗೆ ಸರಿದು ಬಿಡುವುದಿದೆ. ಮನ ಮೆಚ್ಚಿದ ಮಡದಿ ಚಿತ್ರದ ಹಾಡುಗಳಿಗೆ ಈ ಮಾತು ಚೆನ್ನಾಗಿ ಅನ್ವಯಿಸುತ್ತದೆ.  ಅತ್ಯಂತ ಜನಪ್ರಿಯವಾದ ತುಟಿಯ ಮೇಲೆ ತುಂಟ ಕಿರುನಗೆ ಹಾಡಿನ ಪ್ರಭಾವದಿಂದಾಗಿ ಉಳಿದ ಹಾಡುಗಳು ಈಗ ಕೇಳ ಸಿಗುವುದು ಬಲು ಕಮ್ಮಿ.  ಚಿತ್ರ ಬಿಡುಗಡೆ ಆಗಿದ್ದ 60ರ ದಶಕದಲ್ಲಿ ಭಾರತ ಜನನಿಯ ತನುಜಾತೆ, ಲವ್ ಲವ್ ಎಂದರೇನು ಮತ್ತು ಸಿರಿತನ ಬೇಕೆ ಹಾಡುಗಳು ರೇಡಿಯೋದಲ್ಲಿ ಕೆಲವೊಮ್ಮೆ ಕೇಳಿಬರುತ್ತಿದ್ದರೂ ಅತ್ಯಂತ ಮಧುರವಾದ   ಮನೆ ತುಂಬಿಸಿಕೊಳ್ಳುವ ಹಾಡು ಏಸು ನದಿಗಳ ದಾಟಿ ಆಗಲೂ ಅಪರೂಪದ್ದೇ ಆಗಿತ್ತು.  ಅನೇಕರು ಅದನ್ನು ಒಮ್ಮೆಯೂ ಕೇಳಿಯೇ ಇರಲಾರರು.  ಆ ಸದಭಿರುಚಿಯ ಚಿತ್ರದ ಎಲ್ಲ ಹಾಡುಗಳನ್ನೂ ಈಗ ಆಲಿಸೋಣ. ಜೊತೆಗೆ ಅವುಗಳ  ಕೆಲ ವೈಶಿಷ್ಠ್ಯಗಳನ್ನು ಮೆಲುಕು ಹಾಕೋಣ.

ಏಸು ನದಿಗಳ ದಾಟಿ
ಉತ್ತರ ಕರ್ನಾಟಕದ ಕಡೆ ಹೆಚ್ಚು ಪ್ರಚಲಿತವಿದ್ದ, ಮನೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಒಗಟುಗಳ ಮೂಲಕ ಮದುಮಕ್ಕಳು ಪರಸ್ಪರರ ಹೆಸರುಗಳನ್ನು ಹೇಳುವ  ಪದ್ಧತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಶೈಲಿಯ ಈ ರಚನೆಗೆ ವಿಜಯ ಭಾಸ್ಕರ್ ಅವರು ಹೆಚ್ಚು ವಾದ್ಯಗಳನ್ನು ಉಪಯೋಗಿಸದೆ  ಸರಳ ರಾಗ ಸಂಯೋಜನೆ ಮಾಡಿದ್ದಾರೆ.  ಡೋಲಿನ ಲಯದೊಡನೆ ಶಹನಾಯಿಯ ಬಳಕೆ ಸನ್ನಿವೇಶದ ಸಂಭ್ರಮವನ್ನು ಎತ್ತಿ ತೋರಿಸುತ್ತದೆ.  ಗಾಯನ ಭಾಗಕ್ಕೆ ಆಕರ್ಷಕ ತಬ್ಲಾ  ಹಿನ್ನೆಲೆ ಇದೆ. ಕು.ರ.ಸೀ ಅವರ ಪದ ಲಾಲಿತ್ಯದ ಬಗ್ಗೆ ಹೇಳಬೇಕಾಗಿಯೇ ಇಲ್ಲ.  ಒಲವೆಂಬ ಹಿರಿಯೂರ ಬಲಶಾಲಿ ಸರದಾರ ಒಲಿದವಳ ಮೇಲೆ ಸರ್ವಾಧಿಕಾರ ಎಂಬ ಸಾಲುಗಳು ಎಷ್ಟು ಅರ್ಥಪೂರ್ಣವಾಗಿವೆ.  ಪರಸ್ಪರ ಒಲಿದವರ ಪ್ರಪಂಚವೇ ಹಾಗಲ್ಲವೇ. ಒಲವೆಂಬ ಊರಿಗೆ  ಆತನೇ ರಾಜ. ಆಕೆಯೇ  ರಾಣಿ.  ಪರಸ್ಪರರ ಮೇಲೆ ಇಬ್ಬರಿಗೂ ಸರ್ವಾಧಿಕಾರ!   ಇನ್ನೊಂದೆಡೆ ಅರಸಿ ನಾ ಕರೆತಂದ ಮನದನ್ನೆ ಎಂಬ ಸಾಲಿನಲ್ಲಿ ಅರಸಿ ಪದವನ್ನು ನಾ ಹುಡುಕಿ ಕರೆತಂದ ಮನದನ್ನೆ ಮತ್ತು ನಾ ಕರೆತಂದ ಮನದನ್ನೆ ರಾಣಿ ಎಂದು  ಎರಡು ರೀತಿ ಅರ್ಥೈಸಲಾಗುವಂತೆ ಬಳಸಿ ಚಮತ್ಕಾರ ಮೆರೆದಿದ್ದಾರೆ!


ಪ್ರೇಮ ವಿವಾಹ ಮಾಡಿಕೊಂಡು ಮಡದಿಯೊಂದಿಗೆ ಮನೆಗೆ ಬಂದ ಮೊಮ್ಮಗನನ್ನು ಒಬ್ಬಂಟಿಯಾದ ತಾತನು ನೆರೆಕರೆಯ ಮಹಿಳೆಯರ ಸಹಕಾರದಿಂದ ಮನೆ ತುಂಬಿಸಿಕೊಳ್ಳುವ ಈ ಹಾಡಿನ ಸನ್ನಿವೇಶವೂ  ಹೃದಯಸ್ಪರ್ಶಿಯಾಗಿದೆ. ಅಂತರ್ಜಾಲದಲ್ಲಿ ಈ  ಚಿತ್ರ  ಲಭ್ಯವಿದ್ದು ಆಸಕ್ತರು  ಇಲ್ಲಿ  ವೀಕ್ಷಿಸಬಹುದು
  


    
ಭಾರತ ಜನನಿಯ ತನುಜಾತೆ
ಈಗ ನಾಡಗೀತೆಯ ಸ್ಥಾನ ಪಡೆದಿರುವ ಕುವೆಂಪು ವಿರಚಿತ ಕಲ್ಯಾಣಿ ರಾಗಾಧಾರಿತವಾದ ಈ ಹಾಡನ್ನು  ಚಿತ್ರದ ಟೈಟಲ್ಸ್ ಜೊತೆ ಹಿನ್ನೆಲೆಯಲ್ಲಿ ಬಳಸಿಕೊಳ್ಳಲಾಗಿದೆ.   ಇದನ್ನು ರೇಡಿಯೊದಲ್ಲಿ ಕೇಳುತ್ತಿದ್ದ ಕಾಲದಲ್ಲಿ ಇದು ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿಕೊಂಡಿರುವ ಹಾಡಾಗಿರಬಹುದೆಂದು ನನ್ನ ಊಹೆಯಾಗಿತ್ತು.  ಸರ್ವ ಜನಾಂಗದ ಶಾಂತಿಯ ತೋಟ ಸಾಲು ಆರಂಭವಾಗುವ ಮುನ್ನ ಒಂದು ಚಿಕ್ಕ pause ಇರುವುದು ಇದಕ್ಕೆ ಕಾರಣ.  ವಾಸ್ತವವಾಗಿ ಇದು ಇತರ ಸಾಮಾನ್ಯ ಹಾಡುಗಳಂತೆ ಮೂರುವರೆ ನಿಮಿಷ ಕಾಲಾವಧಿಯದ್ದೇ ಆಗಿದೆ.



ಸಿರಿತನ ಬೇಕೆ
ಮನ ಮೆಚ್ಚಿದ ಮಡದಿಯ ಮನದಾಳದ ಈ ಹಾಡಿನಲ್ಲಿ ನವ ವಿವಾಹಿತೆಯ ನವೋಲ್ಲಾಸ ತುಂಬಿ ತುಳುಕುತ್ತಿದೆ  ಇದರ interludeನ ಒಂದು ಭಾಗ ದಿಲ್ ದೇಕೆ ದೇಖೋ ಚಿತ್ರದ ಮೇಘಾರೆ ಬೋಲೆ ಹಾಡಿನ ತುಣುಕನ್ನು ಹೋಲುತ್ತದೆ.  ವಿಜಯ ಭಾಸ್ಕರ್ ಅವರ ಅನೇಕ ಹಾಡುಗಳ interludeಗಳಲ್ಲಿ ಹಿಂದಿ ಹಾಡುಗಳ ಛಾಯೆ ಗುರುತಿಸಬಹುದು.  ಉದಾ: ತಾರೆಗಳ ತೋಟದಿಂದ ಚಂದಿರ ಬಂದ -  ಯೆ ಮೇರಾ ಪ್ರೇಮ್ ಪತ್ರ್ ಪಢ್ ಕರ್, ಚಂದಿರ ಭೂಮಿಗೆ ಬೆಳಕನು ಚೆಲ್ಲಲು - ಫೂಲ್ ತುಮ್ಹೆ ಭೇಜಾ ಹೈ ಖತ್ ಮೆ ಇತ್ಯಾದಿ.




ಲವ್ ಲವ್ ಲವ್ ಅಂದರೇನು
ಬಹುಶಃ ಬಾಲಣ್ಣ ತನ್ನ ಸುದೀರ್ಘ ಚಿತ್ರರಂಗ ಪಯಣದಲ್ಲಿ   ಪಾರ್ಕಲ್ಲಿ ಮರ ಸುತ್ತುತ್ತಾ ಹಾಡಿದ ಏಕೈಕ ಡ್ಯುಯಟ್ ಇದಾಗಿರಬಹುದು!  ಕನ್ನಡದ ಒಲವ್ ಮತ್ತು ಇಂಗ್ಲೀಷಿನ ಲವ್ ಬಗೆಗಿನ ಸ್ವಾರಸ್ಯಕರ ಜಿಜ್ಞಾಸೆ  ಇದರಲ್ಲಿದೆ. ಹಾಡಿನ ಪುಸ್ತಕದ ಮಾಹಿತಿಯ ಪ್ರಕಾರ ಇದನ್ನು ಜಮುನಾರಾಣಿ ಅವರ ಜೊತೆಗೆ ಹಾಡಿದ್ದು ರಘುನಾಥ ಪಾಣಿಗ್ರಾಹಿ.  ಆದರೆ ಚಿತ್ರದಲ್ಲಿರುವ versionನಲ್ಲಿ ಪಿ.ಬಿ.ಶ್ರೀನಿವಾಸ್ ಹಾಡಿದ್ದಾರೆ.  ಗ್ರಾಮಫೋನ್ ರೆಕಾರ್ಡಿಗಾಗಿ ಪಾಣಿಗ್ರಾಹಿ ಹಾಡಿದ್ದರೇ ಎಂಬ ಬಗ್ಗೆ ಮಾಹಿತಿಯಿಲ್ಲ.  ಪ್ರಖ್ಯಾತ ಒಡಿಸ್ಸಿ ನೃತ್ಯಗಾತಿ ಸಂಯುಕ್ತಾ ಪಾಣಿಗ್ರಾಹಿ ಅವರ ಪತಿ ರಘುನಾಥ ಪಾಣಿಗ್ರಾಹಿ ಅವರ ಬಗ್ಗೆ ಇನ್ನಷ್ಟು ವಿವರಗಳನ್ನು ಈ ಗಾಯಕ ಗೊತ್ತೇ ಲೇಖನದಲ್ಲಿ ಓದಬಹುದು.




ತುಟಿಯ ಮೇಲೆ ತುಂಟ ಕಿರುನಗೆ
ಮೊದಲೇ ಹೇಳಿದಂತೆ ಇದು ಈ ಚಿತ್ರದ ಅತ್ಯಂತ ಜನಪ್ರಿಯ ಹಾಡಾಗಿದ್ದು ಎಲ್ಲ ಕಡೆ ಕೇಳಲು ಸಿಗುತ್ತದೆ. ಆದರೆ ಇದಕ್ಕೆ ಸಂಬಂಧಪಟ್ಟಂತೆ  ಸ್ವಾರಸ್ಯಕರ ವಿಚಾರವೊಂದಿದೆ.  ಇದರ ಒಂದು ಸಾಲನ್ನು ಗಾಯಕರು ಒಲವಿನೋಸಗೆ ಎದೆಯ ಬೇಸಗೆ ಎಂದು ಹಾಡಿದ್ದು ಎಷ್ಟೋ ವರ್ಷಗಳಿಂದ ಕೇಳಿ ಕೇಳಿ ನಾವೂ ಇದನ್ನು ಒಪ್ಪಿಕೊಂಡು ಬಿಟ್ಟಿದ್ದೇವೆ.  ವಾಸ್ತವವಾಗಿ ಇದು ಒಲವಿನೊಸಗೆ ಎದೆಯ ಬೆಸಗೆ ಎಂದಾಗಬೇಕು. ಪ್ರೇಮಿಗಳ ಎದೆ ವಸಂತದಂತೆ ಹಸುರಿನಿಂದ ನಳನಳಿಸೀತೆ ಹೊರತು ಬೇಸಗೆಯಂತೆ ಎಂದೂ ಒಣಗಲಾರದಲ್ಲವೇ. ಇಲ್ಲಿ  ಹೃದಯಗಳ ಮಿಲನ ಎಂಬರ್ಥದಲ್ಲಿ ಎದೆಯ ಬೆಸಗೆ ಎಂದು ಕವಿ ಬರೆದಿರಬಹುದು.  ಹಾಡು ಆರಂಭವಾಗುವುದಕ್ಕೆ ಮುನ್ನ ನಟಿ ಲೀಲಾವತಿ  ಇದನ್ನು ಗದ್ಯ ರೂಪದಲ್ಲಿ ಸರಿಯಾಗಿಯೇ ಹೇಳಿದ್ದಾರೆ.  ಹಾಡಿನ ಪುಸ್ತಕದಲ್ಲೂ ಹೀಗೆಯೇ ಇದೆ.  ಬಹುಶಃ  ಟ್ಯೂನಿನ ‘ಮೀಟರ್’ಗೆ ಹೊಂದಿಕೊಳ್ಳಲು ಹೀಗೆ ಮಾಡಿರಬಹುದು. ವಿಜಯ ಭಾಸ್ಕರ್ ಅವರು  ಈ  ಹೊಸಬಗೆಯ ಹಾಡಿಗೆ   ಹೊ-ಸ-ಬ-ಗೆಯ ರಾಗ ಸಂಯೋಜನೆಯನ್ನೇ ಮಾಡಿದ್ದಾರೆ. ಪಲ್ಲವಿ ಮತ್ತು interlude ಭಾಗಕ್ಕೆ ಬೇಕರಾರ್ ಕರ್ ಕೆ ಹಮೆ ರೀತಿಯ ಗಿಟಾರಿನ ರಿದಂ ಮಾತ್ರ ಇದ್ದು ಚರಣ ಪ್ರಾರಂಭವಾಗುತ್ತಿದ್ದಂತೆ ಢೋಲಕ್ take over ಮಾಡುತ್ತದೆ.  ಹಾಡಿನುದ್ದಕ್ಕೂ ಅಕಾರ್ಡಿಯನ್,  ಲೀಡ್ ಗಿಟಾರ್ ಮತ್ತು ಕೊಳಲುಗಳ ಕುಸುರಿ ಕೆಲಸ ಇದೆ.

ಈ ಸಿನಿಮಾ ಬಂದದ್ದು ನಾನು 8ನೇ ತರಗತಿಯಲ್ಲಿದ್ದಾಗ. ಈ ಹಾಡಿನಲ್ಲಿ ಒಂದು ಕಡೆ ಬರುವ ಬಣ್ಣನೆಗೆ ಎಂಬುದನ್ನು ನಾನು ಬಣ್ಣ ನಗೆ ಎಂದು ಸಂಧಿ ವಿಂಗಡಿಸಿಕೊಂಡು ನಗೆಯಲ್ಲೂ ಬಣ್ಣ ಇರುವ ನಗೆ ಮತ್ತು ಬಣ್ಣ ರಹಿತ ನಗೆ ಎಂಬ ಪ್ರಭೇದಗಳಿವೆಯೇ ಎಂದು ಆಶ್ಚರ್ಯ ಪಡುತ್ತಿದ್ದೆ! 




ಈ ಎಲ್ಲ ಹಾಡುಗಳನ್ನು ಆಲಿಸುವಾಗ ಜೊತೆಗೆ ಸಾಹಿತ್ಯ ಓದಿಕೊಳ್ಳಲು ಆ ಚಿತ್ರದ ಹಾಡಿನ ಪುಸ್ತಕ ಇಲ್ಲಿದೆ ನೋಡಿ. ಹಿಗ್ಗಿಸಿ, ಕುಗ್ಗಿಸಿ, ಪುಟ ತಿರುಗಿಸಿ ಹೇಗೆ ಬೇಕಾದರೂ ಓದಬಹುದು. ಹಾಡುಗಳ ಜೊತೆ ಕಥಾ ಸಾರಾಂಶ, ನಟ ನಟಿಯರು, ಪಾರಿಭಾಷಿಕ ವರ್ಗ ಇತ್ಯಾದಿ ಎಲ್ಲ ವಿವರಗಳಿವೆ ಅದರಲ್ಲಿ. ನಮ್ಮ ಕಡೆ ಪದ್ಯಾವಳಿ ಎಂದು ಕರೆಯಲ್ಪಡುವ  ಹಾಡಿನ ಪುಸ್ತಕಗಳ ಬಗ್ಗೆ ಪದ್ಯಾವಳಿಯಿಂದ ಒಂದು ಪದ್ಯದಲ್ಲಿ ಇನ್ನಷ್ಟು ಮಾಹಿತಿ ಇದೆ.




ಆ ಕಾಲದಲ್ಲಿ ಇನ್ನೂ ಪ್ರಕಟವಾಗುತ್ತಿದ್ದ ಅತ್ಯಂತ ಹಳೆಯ ಕನ್ನಡ ನಿಯತಕಾಲಿಕ ಎಂಬ ಖ್ಯಾತಿಗೊಳಗಾಗಿದ್ದ ಹಾಸ್ಯ ಪ್ರಧಾನ ಮಾಸ ಪತ್ರಿಕೆ ವಿಕಟ ವಿನೋದಿನಿಯ ಸೆಪ್ಟಂಬರ್ 1963ರ ಸಂಚಿಕೆಯ ಮುಖಪುಟವಲ್ಲಿ ಮನ ಮೆಚ್ಚಿದ ಮಡದಿ ಹೀಗೆ ಕಾಣಿಸಿಕೊಂಡಿದ್ದಳು.


ಆ ಪತ್ರಿಕೆಯ ಜೂನ್ ತಿಂಗಳ ಸಂಚಿಕೆಯ ಚಿತ್ರರಂಗದಿಂದ ಬೆಳಕಿಗೆ ವಿಭಾಗದಲ್ಲಿ ಈ ಚಿತ್ರದ ಬಗ್ಗೆ ಒಂದು ಕಿರು ಸುದ್ದಿಯೂ  ಪ್ರಕಟವಾಗಿತ್ತು. ಅದರಲ್ಲಿ ಈ ಚಿತ್ರದ ಸಂಗೀತದ ಬಗ್ಗೆ ವ್ಯಕ್ತಪಡಿಸಲಾದೆ ಊಹೆ ಎಷ್ಟೊಂದು ನಿಜವಾಯಿತು!  ಆದರೆ ಆಗ ಆ ಸುದ್ದಿಯನ್ನು ನೋಡಿದ ಓದುಗರಿಗೆ ಈ ಹಾಡುಗಳ ಬಗ್ಗೆ ಏನೊಂದೂ ಗೊತ್ತಿಲ್ಲದ್ದರಿಂದ ಎಷ್ಟು ಕುತೂಹಲ ಉಂಟಾಗಿತ್ತೋ ಏನೋ.  ಅಂದಿನ ದಿನಗಳಲ್ಲಿ ಕನ್ನಡ ಚಿತ್ರಗಳು ಬಿಡುಗಡೆ ಆಗಿ ಸುಮಾರು ಒಂದು ತಿಂಗಳಷ್ಟು ಕಾಲದ ನಂತರವೇ ಧ್ವನಿಮುದ್ರಿಕೆಗಳು ತಯಾರಾಗಿ ರೇಡಿಯೊದಲ್ಲಿ ಹಾಡುಗಳು ಪ್ರಸಾರವಾಗತೊಡಗುತ್ತಿದ್ದವು.

4-1-2017