Friday 25 August 2017

ಗಣಪನ ನೆನಪು


ನಾವು ಚಿಕ್ಕವರಿದ್ದಾಗ ಅಂದರೆ 50-60ರ ದಶಕಗಳಲ್ಲಿ ನಮ್ಮ ಮನೆಯಲ್ಲಿ ಗಣೇಶ ಚತುರ್ಥಿಯ ಸಂಭ್ರಮ ಒಂದು ತಿಂಗಳು ಮೊದಲೇ ಅಂದರೆ ಶ್ರಾವಣ ಶುದ್ಧ ಚೌತಿಯಂದೇ ಆರಂಭವಾಗುತ್ತಿತ್ತು.  ಕುಂಬಾರನೊಬ್ಬ ತಂದು ಕೊಟ್ಟಿರುತ್ತಿದ್ದ ಆವೆ ಮಣ್ಣಿನ ಮುದ್ದೆಯನ್ನು ಅಂದು ಅಟ್ಟದಿಂದ ತಂದು ಒಡೆದು ನೀರು ಬೆರಸಿ ಸಣ್ಣ ಒನಕೆಯೊಂದರಿಂದ ಕುಟ್ಟಿ ಹದ ಮಾಡುವುದರೊಂದಿಗೆ ಗಣೇಶ ನಿರ್ಮಾಣದ ಶ್ರೀಗಣೇಶವಾಗುತ್ತಿತ್ತು.  ಮೂರ್ತಿಯ ನಿರ್ಮಾಣ ತಂದೆಯವರೇ ಮಾಡುತ್ತಿದ್ದರೂ ಮಣ್ಣು ಹದಮಾಡುವ ಕಾರ್ಯದಲ್ಲಿ ನಮ್ಮ ಅಣ್ಣಂದಿರೂ ಕೈ ಜೋಡಿಸುತ್ತಿದ್ದರು.  ಮಣ್ಣು ಕಮ್ಮಿಯಾಗಬಹುದೆಂದೇನಾದರೂ ಅನಿಸಿದರೆ ಹಿಂದಿನ ವರುಷ  ಗಣಪ ಮಾಡಿದ ಮೇಲೆ ಉಳಿದ ಮಣ್ಣಿಂದ ನಾವೆಲ್ಲ ಮಾಡಿರುತ್ತಿದ್ದ  ಸಣ್ಣ ಸಣ್ಣ ಬೊಂಬೆಗಳಿಗೆ ಮೋಕ್ಷ ಪ್ರಾಪ್ತವಾಗುವುದೂ ಇತ್ತು.  ಗಣಪನನ್ನು ಕೂರಿಸುವ  ಮರದ ಮಣೆಯನ್ನು ಅಟ್ಟದ ಮೇಲಿನಿಂದ ತರುವ ಕೆಲಸ ನಮ್ಮಂಥ ಕಿರಿಯರ ಪಾಲಿಗೆ ಬರುತ್ತಿತ್ತು.  ಹಿಂದಿನ ವರ್ಷದ ಗಣಪನ ಕಾಲಿನ ಭಾಗದ  ಕೆಂಪು ಬಣ್ಣದ ಒಂದಷ್ಟು ಪಳೆಯುಳಿಕೆ ಆ ಮಣೆಯಲ್ಲಿರುತ್ತಿತ್ತು.  ಅದನ್ನೇ ಗಣಪನೆಂದು ಕಲ್ಪಿಸಿ ಬಾಯಲ್ಲೇ ಢಾಂಯ್ ಢಾಂಯ್ ಎಂದು ಜಾಗಟೆ ಬಾರಿಸುತ್ತಾ ಆ ಮಣೆಯನ್ನು ನಾವು ಕೆಳಗೆ ತರುತ್ತಿದ್ದೆವು.

ನಮ್ಮ ತಂದೆಯವರು ಮೂರ್ತಿ ನಿರ್ಮಾಣದ ಕೆಲಸವನ್ನು ಹಂತ ಹಂತವಾಗಿ ಮಾಡುತ್ತಿದ್ದರು. ಮೊದಲ ದಿನ ಗಣಪ ಕೂರುವ ಪೀಠ ಮತ್ತು ಆತನ ವಾಹನವಾದ ಇಲಿಯ ಅಸ್ಪಷ್ಟ ರೂಪ ಮಾತ್ರ ಮೈದಳೆಯುತ್ತಿತ್ತು.  ದಿನ ಕಳೆದಂತೆ ಒಂದೊಂದಾಗಿ ಕಾಲುಗಳು, ಹೊಟ್ಟೆ ಮತ್ತು ಎದೆಯ ಭಾಗ , ಚತುರ್ಭುಜಗಳು ಇತ್ಯಾದಿ  ರೂಪುಗೊಳ್ಳುತ್ತಾ ಬರುತ್ತಿದ್ದವು.  ಈ ಭಾಗಗಳು ಸಾಕಷ್ಟು ಗಟ್ಟಿಯಾದ ಮೇಲಷ್ಟೇ ಕೈ ಕಾಲುಗಳ ಬೆರಳುಗಳನ್ನು ಜೋಡಿಸುತ್ತಿದ್ದರು. ನಂತರ ಹೊಟ್ಟೆಗೆ ಹಾವು, ಕೈ ಕಾಲು ಮತ್ತು ಕಂಠದ ಆಭರಣಗಳ ಕುಸುರಿ ಕೆಲಸ.  ಇದಕ್ಕಾಗಿ ಅಡಿಕೆ ಮರದ ಸಿಬ್ಬಿಯಿಂದ ಮಾಡಿದ ವಿಶೇಷ ಉಪಕರಣಗಳು ಅವರಲ್ಲಿದ್ದವು.  ಅವರ ಈ ಕಾರ್ಯಗಳನ್ನೆಲ್ಲ ಪಕ್ಕದ ಬೆಂಚಲ್ಲಿ ಕೂತು ನಾವು ಕುತೂಹಲದಿಂದ ವೀಕ್ಷಿಸುತ್ತಿದ್ದೆವು.  ನಾವು ಕೂತಲ್ಲೇ ಕಾಲೇನಾದರೂ ಜೋರಾಗಿ ಅಲ್ಲಾಡಿಸತೊಡಗಿದರೆ ಅಲ್ಲಿಂದಲೇ ಹೂಂ ಎಂದು ಗದರಿಸುತ್ತಿದ್ದರು.

ಈ ಹಂತ ಮುಗಿದ ಮೇಲೆ ಶಿರೋಭಾಗದ ಕೆಲಸ ಆರಂಭವಾಗುತ್ತಿತ್ತು.  ಶೂರ್ಪಕರ್ಣಗಳು, ಕರ್ಣ ಕುಂಡಲಗಳು ಮತ್ತು ತಲೆಗೊಂದು ಮುಂಡಾಸಿನ ರೀತಿಯ ರಚನೆ ರೂಪುಗೊಳ್ಳುತ್ತಿತ್ತು.  ಈ ಮುಂಡಾಸಿನ ಮೇಲೆಯೇ ಆಮೇಲೆ ಪೂಜೆಯ ಸಮಯದಲ್ಲಿ ಬಣ್ಣ ಬಣ್ಣದ ಚಿತ್ತಾರಗಳಿಂದ ಅಲಂಕೃತವಾಗಿ ತುದಿಯಲ್ಲಿ ನವಿಲುಗರಿಯಿದ್ದ ತೆಂಕು ಯಕ್ಷಗಾನ ಶೈಲಿಯ ಮರದ ಕಿರೀಟ ರಾರಾಜಿಸುತ್ತಿದ್ದುದು.

ಇಷ್ಟೆಲ್ಲ ಆದ ಮೇಲೆ ಬಹುತೇಕ ಕೃಷ್ಣಾಷ್ಟಮಿಯ ದಿನ  ನಾವೆಲ್ಲ ಬಹು ದಿನದಿಂದ ನಿರೀಕ್ಷಿಸುತ್ತಿದ್ದ ಸೊಂಡಿಲು ಇಡುವ ಆ ಗಳಿಗೆ ಬರುತ್ತಿತ್ತು.  ಆ ದಿನ ರಜೆಯೂ ಇರುತ್ತಿದ್ದುದರಿಂದ ಈ ಹಂತವನ್ನು ಸಂಪೂರ್ಣವಾಗಿ ವೀಕ್ಷಿಸುವ ಸಂಭ್ರಮ ನಮಗೆ.  ಕೆಳದುಟಿ,  ಸೊಂಡಿಲಿನ ಅಕ್ಕ ಪಕ್ಕ ಒಂದು ಪೂರ್ತಿ ಇನ್ನೊಂದು ಮುರಿದ ದಾಡೆಗಳು ರೂಪುಗೊಂಡು ಹಸ್ತಗಳಲ್ಲಿ ಪಾಶ ಅಂಕುಶ, ದಂತಗಳು ಸೇರಿ, ಹಣೆಯಲ್ಲಿ ಅರ್ಧ ಚಂದ್ರ  ಮೂಡಿ  ಗಣಪ ಸಾಕಾರನಾದಾಗ  ನಮಗೊಂದು ಥ್ರಿಲ್.  ಕಣ್ಣುಗಳನ್ನು ರೂಪಿಸಲು ಮಣ್ಣಿನಿಂದ ರಚಿಸಿ ಸುಟ್ಟು ಗಟ್ಟಿಗೊಳಿಸಿದ ಅಚ್ಚೊಂದನ್ನು ಉಪಯೋಗಿಸಲಾಗುತ್ತಿತ್ತು.  ಹಸಿ ಮಣ್ಣಿನ ಮೇಲೆ ಆ ಅಚ್ಚನ್ನೊತ್ತಿದರೆ ಏಕ ಪ್ರಕಾರವಾದ ಎರಡು ಕಣ್ಣುಗಳು ಮೂಡುತ್ತಿದ್ದವು. ನಮ್ಮ ತಂದೆ ತಯಾರಿಸುತ್ತಿದ್ದ ಗಣಪನ ವಿಗ್ರಹ ಹಿಂದಿನ ವರ್ಷಗಳ ಗಣಪನ ಯಥಾವತ್ ಪ್ರತಿರೂಪವಾಗಿರುತ್ತಿತ್ತು.  ಒಂದಿನಿತೂ ವ್ಯತ್ಯಾಸವಿರುತ್ತಿರಲಿಲ್ಲ. ಗಣಪನ ಮೇಲಿನ ಬಲ ಕೈಯ್ಯಲ್ಲಿ ಅಂಕುಶ, ಮೇಲಿನ ಎಡ ಕೈಯಲ್ಲಿ ಸರ್ಪರೂಪಿ ಪಾಶ, ಕೆಳ ಬಲಗೈಯಲ್ಲಿ ಮುರಿದ ದಂತ ಇರುತ್ತಿದ್ದವು.  ಕೆಳ ಎಡಗೈ ಮೋದಕವೊಂದನ್ನು ಹಿಡಿದ  ಸೊಂಡಿಲನ್ನು ಆಧರಿಸುತ್ತಿತ್ತು.  ವಾಹನ ಇಲಿಯ ಕೈಗಳಲ್ಲೂ ಒಂದು mini ಮೋದಕ ಇರುತ್ತಿತ್ತು.

ಮುಂದೆ ಮಣ್ಣಿನ ತೇವ ಪೂರ್ತಿ ಆರುವ ವರೆಗೆ ಗಣಪನ ಕೆಲಸಕ್ಕೆ ವಿರಾಮ.  ಈ ಅವಧಿಯಲ್ಲಿ  ಗೌರಿ ಹಬ್ಬದ ದಿನದ ಪೂಜೆಗಾಗಿ ಪಾರ್ವತಿಯ ಪುಟ್ಟ ವಿಗ್ರಹ ಮತ್ತು ಶಿವಲಿಂಗವನ್ನು ಅಣ್ಣ ತಯಾರಿಸುತ್ತಿದ್ದರು.  ಪಾರ್ವತಿಯ ಹಿಂದೆ ಪರಿಚಾರಕಿಯೋರ್ವಳ ಅಸ್ಪಷ್ಟ ರೂಪದ ಬಿಂಬವೂ ಇರುತ್ತಿತ್ತು. ನಾವು ‘ಬಾವ್ವನ್ನ’ ಎಂದು ಕರೆಯುತ್ತಿದ್ದ ಆ ರಚನೆ ನಮಗೆ ಚೋದ್ಯದ ವಸ್ತುವಾಗಿತ್ತು. ಇದಾದ ಮೇಲೆ  ಮಣ್ಣು ಉಳಿದರೆ ನಾವು ಚಿಕ್ಕ ಮನುಷ್ಯಾಕೃತಿಯ ಬೊಂಬೆ, ಮಾವಿನ ಹಣ್ಣು, ಗೇರು ಹಣ್ಣು ಇತ್ಯಾದಿಗಳನ್ನು ರಚಿಸುವುದಿತ್ತು.  ಈ ರೀತಿ ಉಳಿದ ಮಣ್ಣಿನಲ್ಲಿ ನಮ್ಮ ಅಣ್ಣ ತಯಾರಿಸಿದ ದತ್ತಾತ್ರೇಯ, ಶಿವ ಪಾರ್ವತಿ ಇತ್ಯಾದಿ ಸುಂದರ ಮೂರ್ತಿಗಳು ಈಗಲೂ ಇವೆ.  ಆದರೆ ಆಗಲೇ ಹೇಳಿದಂತೆ ನಾವು ಮಾಡಿದ ಬೊಂಬೆಗಳು ಮರು ವರ್ಷ ಮೋಕ್ಷ ಹೊಂದಿ ಗಣಪನ ಮಣ್ಣಿನಲ್ಲಿ ಲೀನವಾಗುವ ಸಾಧ್ಯತೆ ಹೆಚ್ಚಾಗಿರುತ್ತಿತ್ತು.

ನಂತರದ್ದು ವರ್ಣ ಪರ್ವ. ಈ ಹಂತದಲ್ಲಿ ತಂದೆಯವರೊಂದಿಗೆ ಅಣ್ಣಂದಿರೂ ಸೇರಿಕೊಳ್ಳುತ್ತಿದ್ದರು.  ಆಗ paint ಬಳಸುವ ಪರಿಪಾಠ ಇರಲಿಲ್ಲ.  ಬಣ್ಣದ ಹುಡಿಗಳನ್ನು ಪಿಂಗಾಣಿ ಪಾತ್ರೆ ಅಥವಾ ಗೆರಟೆಯಲ್ಲಿ ನೀರಿನೊಡನೆ ಕಲಸಿ ಗೋಂದು ಬೆರೆಸಿ  ಬಣ್ಣಗಳನ್ನು  ತಯಾರಿಸಲಾಗುತ್ತಿತ್ತು. ಬಣ್ಣ ಹಚ್ಚಲು ನದಿ ತಟದಲ್ಲಿ ಬೆಳೆಯುವ ಮುಂಡೇವು ಎಂಬ ಪೊದೆಯ ಬೇರುಗಳನ್ನು ಜಜ್ಜಿ ತಯಾರಿಸಿದ ಬ್ರಶ್ಯುಗಳು.  ಮೊದಲು ಇಡೀ ಮೂರ್ತಿಗೆ ಸಫೇತು ಅಂದರೆ ಬಿಳಿ ಬಣ್ಣದ ಕೋಟಿಂಗ್.  ನಂತರ ಪೀತಾಂಬರ ಮತ್ತು ಕರ್ಣಕುಂಡಲಗಳಿಗೆ  ಹಳದಿ, ಮೈಗೆ ಕೆಂಪು, ಪೀಠಕ್ಕೆ ನೀಲಿ, ಮುಂಡಾಸಿಗೆ ಹಸಿರು, ಹಾವಿಗೆ ಹಳದಿಯ ಮೇಲೆ ಕಪ್ಪು ಇತ್ಯಾದಿ ಬಣ್ಣಗಳ ಲೇಪನ.  ‘ಇವತ್ತು ಗಣಪತಿಗೆ ರಂಗು ಬಳಿಯುವುದು’ ಎಂಬ ನೆಪ ಹೇಳಿ ನಾವು ಆ ದಿನ ಶಾಲೆಗೆ ಚಕ್ಕರ್ ಹಾಕುವುದೂ ಇತ್ತು.  ಬೆನ್ನಿನ ಭಾಗಕ್ಕೆ ಬಣ್ಣ ಹಚ್ಚುವ ಅವಕಾಶವೂ ಕೆಲವೊಮ್ಮೆ ನಮಗೆ ಸಿಗುತ್ತಿತ್ತು. ನೀಲಿಗೆ ಹಳದಿ ಬೆರೆಸಿದರೆ ಹಸಿರು, ಕೆಂಪಿಗೆ ಹಳದಿ ಬೆರೆಸಿದರೆ ಕಿತ್ತಳೆ, ಕೆಂಪಿಗೆ ಕಪ್ಪು ಬರೆಸಿದರೆ ಕಂದು ಎಂಬಿತ್ಯಾದಿ ವಿಷಯಗಳು ಈ ಹಂತದಲ್ಲಿ ನಮಗೆ ಮನವರಿಕೆಯಾಗುತ್ತಿದ್ದವು. ಈ ಬಣ್ಣಗಳು ಒಣಗಿದ ಮೇಲೆ ಆಭರಣಗಳಿಗೆ ತೆಳ್ಳಗಿನ ಬೇಗಡೆ ಹಚ್ಚಿ ಬಟ್ಟೆಯಿಂದ ಒತ್ತುವ ನಾಜೂಕಿನ ಕೆಲಸ.

ಹುಡಿಯನ್ನು ನೀರಲ್ಲಿ ಬೆರೆಸಿ ತಯಾರಿಸಿದ ಬಣ್ಣ ಉಪಯೋಗಿಸುತ್ತಿದ್ದುದರಿಂದ ಅದಕ್ಕೆ ಹೊಳಪು ಇರುತ್ತಿರಲಿಲ್ಲ. ಅಲ್ಲದೆ ಪೂಜೆಯ ಸಮಯದಲ್ಲಿ ಪ್ರೋಕ್ಷಿಸುವ ನೀರು ಮೂರ್ತಿಯ ಬಣ್ಣವನ್ನು ಕದಡಿಸುವ ಅಪಾಯವೂ ಇರುತ್ತಿತ್ತು.  ಅದಕ್ಕಾಗಿ ಧೂಪದ ಮರದಿಂದ ಒಸರುವ ಸೊನೆಯನ್ನು ಸಂಗ್ರಹಿಸಿ ಬಣ್ಣದ ಮೇಲೆ ಲೇಪಿಸಲಾಗುತ್ತಿತ್ತು. ಮರದ ಮಣೆಯ ಮೇಲೆ ನಿರ್ಮಿತವಾದ ಗಣಪನ ವಿಗ್ರಹ ಅಲ್ಲಾಡದಂತೆ ಧೃಢವಾಗಿರಲೂ ಈ ಧೂಪದ ಸೊನೆ ಸಹಾಯ ಮಾಡುತ್ತಿತ್ತು. ಆದರೆ ಆ ಭಾಗಕ್ಕೆ ಹೆಚ್ಚು ಸೊನೆ ಹಚ್ಚಿದರೆ ವಿಸರ್ಜನೆಯ ದಿನ ಮೂರ್ತಿಯನ್ನು ಮಣೆಯಿಂದ ಬೇರ್ಪಡಿಸಲು ತೊಂದರೆಯಾಗುವ ಸಂಭವವೂ ಇರುತ್ತಿತ್ತು.  ದೂರದ ಕಾಡಲ್ಲಿದ್ದ ಧೂಪದ ಮರವೊಂದಕ್ಕೆ ಹರಿತವಾದ ಚೂರಿಯಿಂದ tapping ಮಾಡಿ ಒಸರುವ ಸೊನೆ ದೊಡ್ಡ ಗೆರಟೆಯೊಂದರಲ್ಲಿ ಸಂಗ್ರಹವಾಗುವಂತೆ  ಮಾಡಿ ಮರುದಿನ ಅದನ್ನು ತರುವ ಕೆಲಸ ನಮ್ಮ ಅಣ್ಣನದಾಗಿರುತ್ತಿತ್ತು.  ಉಪಯೋಗಿಸಿ ಉಳಿದ ಸೊನೆಯಲ್ಲಿ  ಚಿಂದಿ ಬಟ್ಟೆಗಳನ್ನು ನೆನೆಸಿ ಕೋಲುಗಳ ತುದಿಗೆ ಕಟ್ಟಿ ಚೌತಿಯ ದಿನ ರಾತ್ರೆ ಉರಿಸಲು ಕೊಳ್ಳಿಗಳನ್ನು ತಯಾರಿಸುತ್ತಿದ್ದೆವು.

ಇತ್ತ ಕಡೆ ಮನೆಯ ಮಹಿಳೆಯರು ಚೌತಿಗೆ ಬೇಕಾಗುವ ಭಕ್ಷಗಳಿಗಾಗಿ ಅಕ್ಕಿ  ಬೇಳೆಗಳನ್ನು ಕಲ್ಲಿನಲ್ಲಿ ಬೀಸಿ ಹಿಟ್ಟು ತಯಾರಿಸುವ ಕಾಯಕ ಆರಂಭಿಸುತ್ತಿದ್ದರು.  ಚೌತಿಗೆ ಎರಡು ದಿನ ಉಳಿದಿದೆ ಎನ್ನುವಾಗ ಊರಿನ ಇತರ ಮಹಿಳೆಯರ ಸಹಕಾರದೊಂದಿಗೆ  ಚಕ್ಕುಲಿ, ಮೋದಕ, ಪಂಚಕಜ್ಜಾಯ ಇತ್ಯಾದಿ ತಯಾರಾಗುತ್ತಿದ್ದವು.  ಓರಗೆಯ ಮಹಿಳೆಯರೆಲ್ಲ ಒಂದೆಡೆ ಸೇರುವ ಆ ಸಂದರ್ಭದಲ್ಲಿ  ನಡೆಯುವ ‘ಚರಪಟಪಂಜರಿಕೆ’ ಕೇಳಲು ಬಲು ಸ್ವಾರಸ್ಯಕರವಾಗಿರುತ್ತಿತ್ತು!

ಚೌತಿಯ ಮುನ್ನಾ ದಿನ ಮಂಟಪ ಸಿದ್ಧಗೊಳಿಸುವ ಕೆಲಸ.  ಮಂಟಪವನ್ನು ನಿಲ್ಲಿಸಲು ಬೇಕಾಗುವ ಗಳುಗಳೆರಡು ಬಚ್ಚಲುಮನೆಯ ಅಟ್ಟದ ಮೇಲಿರುತ್ತಿದ್ದವು. ಅವುಗಳನ್ನು ಕೆಳಗಿಳಿಸಿ ತೊಳೆದು ಮಧ್ಯಾಹ್ನದೊಳಗೆ ‘ಬಾಹೆರ್ಲಿ ಮಾಳಿ’ ಅರ್ಥಾತ್ ಹೊರ ಹಜಾರದ ಸೂಕ್ತ ಜಾಗದಲ್ಲಿ ಕಟ್ಟಿ ಮಂಟಪವನ್ನು ಅಳವಡಿಸುವ ಕೆಲಸ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು. ಮನೆಯ ಆಳು ಕಾಳುಗಳಿಗೂ ಚೌತಿ ಗಣಪನ ದರ್ಶನ ಭಾಗ್ಯ ಸಿಗಲಿ ಎಂಬ ಉದ್ದೇಶದಿಂದ  ಮಂಟಪಕ್ಕೆ ದೇವರ ಕೋಣೆ ಇದ್ದ ‘ಆಂತ್ಲಿ ಮಾಳಿ’ ಅಂದರೆ ಒಳ ಹಜಾರದ ಬದಲು ಹೊರ ಚಾವಡಿಯಿಂದಲೂ ವೀಕ್ಷಿಸಲು ಸಾಧ್ಯವಾಗುವ ಈ ಸ್ಥಳವನ್ನು ನಿಗದಿ ಪಡಿಸಿರಬಹುದು.  ಆ ದಿನ  ಗೌರಿ ತದಿಗೆಯೂ ಆಗಿರುತ್ತಿದ್ದುದರಿಂದ ದೇವರ ಕೋಣೆ ಇರುವ ಒಳ ಹಜಾರದಲ್ಲಿ ಬೇರೊಂದು ಮಂಟಪವೂ ಸಿದ್ಧವಾಗುತ್ತಿತ್ತು.  ಮಹಿಳೆಯರಿಗೆಲ್ಲ ಆ ದಿನ ಕಾಫಿ ಕೂಡ ನಿಷಿದ್ಧವಾದ ಕಟ್ಟುನಿಟ್ಟಿನ ಹರತಾಲಿಕಾ ಉಪವಾಸ.  ಗೌರಿ ಪೂಜೆ ಮುಗಿದ ಮೇಲೆ ಬಾಳೆ ಹಣ್ಣು, ಸಿಯಾಳ, ಕಿತ್ತಳೆ ಇತ್ಯಾದಿಗಳ ಸೇವನೆಗೆ ಮಾತ್ರ ಅವಕಾಶ.  ಆಗ ನಮ್ಮ ತೋಟದಲ್ಲೇ ಕಿತ್ತಳೆ ಮರ ಇತ್ತು. ನಮ್ಮ ಅಣ್ಣ ಆ ಮಳೆಗಾಲದಲ್ಲೂ ಸರಸರನೆ ಮರವನ್ನೇರಿ ಕಿತ್ತಳೆ ಕೊಯ್ಯುತ್ತಿದ್ದರು.  ಹೀಗಾಗಿ ಯಾವುದೇ ಫಲಗಳನ್ನು ದುಡ್ಡು ಕೊಟ್ಟು ಹೊರಗಿನಿಂದ ತರುವ ಅಗತ್ಯ ಬೀಳುತ್ತಿರಲಿಲ್ಲ.  ಉಪವಾಸ ಆಚರಿಸದ ನಮಗೂ ಒಂದೊಂದು ಸಿಯಾಳ ಕುಡಿದು  ಹಣ್ಣುಗಳನ್ನು ಮೆಲ್ಲುವ ಸೌಭಾಗ್ಯ ದೊರಕುತ್ತಿತ್ತು. ಹೆಚ್ಚಾಗಿ ಆ ದಿನ ಮಧ್ಯಾಹ್ನ ಊಟಕ್ಕೆ  ಬೇಯಿಸಿದ ಬಟಾಟೆಯ ಗೊಜ್ಜು ಒಂದೇ ಇರುತ್ತಿತ್ತು. ನಾವು ‘ಇಂದಿನ ಗೊಜ್ಜು ಎಂದಿಗಿಂತಲೂ   ಹೆಚ್ಚು ರುಚಿಕರವಾಗಿದೆ’ ಎಂದು ಹೇಳಿ ಮೊದಲೇ ಉಪವಾಸದಿಂದ ಬಳಲಿರುತ್ತಿದ್ದ ಮಹಿಳೆಯರ ಹೊಟ್ಟೆ ಉರಿಸುವುದಿತ್ತು.

ಭೋಜನದ ನಂತರ ಮಂಟಪಕ್ಕೆ ಬಣ್ಣದ ಕಾಗದಗಳನ್ನು ಹಚ್ಚುವ ಕೆಲಸ. ಇದಕ್ಕೆ ಮೈದಾ ಹಿಟ್ಟಿನ ಅಂಟು ಬಳಸಲಾಗುತ್ತಿತ್ತು. ಇಂತಹ ಅಂಟು ಕೆಲ ದಿನ ಉಳಿದರೂ ದುರ್ವಾಸನೆ ಬರದಂತೆ ಹಾಗೂ ಹಚ್ಚಿದ ಭಾಗವನ್ನು ಜಿರಲೆಗಳು ತಿನ್ನದಂತೆ ಸ್ವಲ್ಪ ಮೈಲುತುತ್ತು ಬೆರೆಸುವ ಉಪಾಯವನ್ನು ನಾನು ಉಜಿರೆ ಹೈಸ್ಕೂಲಿನ ಬುಕ್ ಬೈಂಡಿಂಗ್ ವಿಭಾಗದಲ್ಲಿ ಕಲಿತ ಮೇಲೆ ಇಲ್ಲಿಯೂ ಅನುಷ್ಠಾನಗೊಳಿಸಿದ್ದೆ.  ಎರಡು ಬಣ್ಣದ ಹಾಳೆಗಳು ಸೇರುವ ಜಾಗದಲ್ಲಿ ಬಿಳಿ ಕಾಗದವನ್ನು ವಿಶಿಷ್ಟ ರೀತಿಯಲ್ಲಿ ಮಡಚಿ   ಕಡೆಗೋಲಿನಾಕಾರವನ್ನು ರೂಪಿಸಲಾಗುತ್ತಿತ್ತು.  ನಮ್ಮಣ್ಣ ಹಳೆ ಬ್ಯಾಟರಿಗಳನ್ನುಪಯೋಗಿಸಿ ಮಂಟಪದೊಳಗೆ ಗಣಪ ಕೂರುವ ಜಾಗಕ್ಕೆ focus ಬೀಳುವ ರೀತಿ ಚಿಕ್ಕ ಬಲ್ಬೊಂದನ್ನು ಅಳವಡಿಸುತ್ತಿದ್ದರು.  ಟೂತ್ ಪೇಸ್ಟಿನ ಮುಚ್ಚಳ  ಬಳಸಿ ತಯಾರಿಸಿದ ಸ್ವಿಚ್ಚೊಂದರಿಂದ ಅದನ್ನು ನಿಯಂತ್ರಿಸಲಾಗುತ್ತಿತ್ತು.  ಮನೆಗೆ ವಿದ್ಯುತ್ ಬಂದ ಮೇಲೆ ಬಣ್ಣ ಬಣ್ಣದ  ಬಲ್ಬುಗಳನ್ನು ಬಳಸುವ ಪರಿಪಾಠ ಆರಂಭವಾಯಿತು.  ಅದರ circuitನಲ್ಲಿ ಟ್ಯೂಬ್ ಲೈಟಿನ starter ಒಂದನ್ನು ಸೇರಿಸಿ ಅವು flicker ಆಗುವಂತೆಯೂ ನಾನು ಮಾಡುತ್ತಿದ್ದೆ. Flickering ಬೇಡವೆನಿಸಿದರೆ  ಒಂದು ಸ್ವಿಚ್ಚಿನ ಮೂಲಕ ಆ starter ಬೈಪಾಸ್ ಆಗುವ ವ್ಯವಸ್ಥೆಯೂ ಇರುತ್ತಿತ್ತು.

ಚೌತಿಯ ದಿನ ಬೆಳಗ್ಗೆ ಆಸುಪಾಸಿನ ಮನೆಗಳ ಪುರುಷರೆಲ್ಲ ತರಕಾರಿ ಹೆಚ್ಚುವ ಕೆಲಸದಲ್ಲಿ ಕೈ ಜೋಡಿಸಲು ಬರುತ್ತಿದ್ದರು. ತಡ ಮಾಡಿ ಬಂದವರಿಗೆ ತೆಂಗಿನ ಕಾಯಿಗಳನ್ನು ಒಡೆದು ತುರಿಯುವ ಶ್ರಮದಾಯಕ ಕೆಲಸ! ಯಾವುದೇ ರಾಸಾಯನಿಕಗಳ ಸಂಸರ್ಗವಿಲ್ಲದ  ಆ ಕಾಲದ ತರಕಾರಿಗಳನ್ನು ತುಂಡರಿಸಿದಾಗ ಸೂಸುತ್ತಿದ್ದ  ಪರಿಮಳ ಈಗ ನೆನಪು ಮಾತ್ರ. ನಾವು ಕಿರಿಯರು ಗಣಪನಿಗೆ ಪ್ರಿಯವಾದ ಗರಿಕೆ ಮತ್ತು ಇತರ ಪತ್ರ ಪುಷ್ಪಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದೆವು.  ನಮ್ಮಣ್ಣ ಮುತುವರ್ಜಿ ವಹಿಸಿ ಕುಂಡಗಳಲ್ಲಿ ಬೆಳೆಸಿರುತ್ತಿದ್ದ ವಿವಿಧ ಬಣ್ಣದ ಡೇಲಿಯಾ ಹೂಗಳೂ  ಆಗ ಯಥೇಚ್ಛವಾಗಿ ಅರಳಿರುತ್ತಿದ್ದವು.  ಇತರರೂ ತಮ್ಮ ಮನೆಗಳಲ್ಲಿ ಅರಳಿದ ವಿವಿಧ  ಹೂಗಳನ್ನು ತರುತ್ತಿದ್ದರು.

ನವಿಲುಗರಿಯುಕ್ತ  ಅಲಂಕೃತ ಕಿರೀಟವನ್ನು ತಲೆಯ ಮೇಲೆ, ಆತನಿಗಾಗಿಯೇ ಮಾಡಿಸಿದ್ದ ಚಿನ್ನದ ಉಂಗುರವನ್ನು ಕಿರು ಬೆರಳಲ್ಲಿ ಹಾಗೂ  ತೊಳೆದು ಶುಭ್ರಗೊಳಿಸಿದ ಇತರ ಚಿನ್ನದ ಆಭರಣಗಳನ್ನು ಕೊರಳಲ್ಲಿ ಧರಿಸಿ ಚಾವಡಿಯಲ್ಲಿದ್ದ ಮೇಜಿನ ಮೇಲೆ ಸಿದ್ಧನಾಗಿ ಕೂತಿರುತ್ತಿದ್ದ ಗಣಪನನ್ನು  ಪೂಜೆಗೆ ಮುನ್ನ ಗಂಟೆ ಜಾಗಟೆಗಳ ಘೋಷದೊಂದಿಗೆ  ಒಯ್ದು ಮಂಟಪದಲ್ಲಿ ಕೂರಿಸಲಾಗುತ್ತಿತ್ತು. ನಿತ್ಯದ  ಕೆಂಪು ಮಡಿಯ  ಬದಲು ತಂದೆಯವರು ಆ ದಿನ ಕಡು ನೀಲಿ ಬಣ್ಣದ ಪೀತಾಂಬರ ಉಡುತ್ತಿದ್ದರು. ಪೂಜಾ ವಿಧಿಯನ್ನು ಓದಿ ಹೇಳಲು ಪುರೋಹಿತರಿರುತ್ತಿದ್ದರು.  ಗಣಪನ ಪೂಜೆ ಆರಂಭಗೊಂಡು ಕುಶಾಗ್ರಳಿಂದ ವಿಗ್ರಹದ ನೇತ್ರಗಳನ್ನು ಸ್ಪರ್ಷಿಸಿ ಪ್ರಾಣ ಪ್ರತಿಷ್ಠೆ ಮಾಡಿದೊಡನೆ ಗಣಪನು ದಿವ್ಯ ತೇಜಸ್ಸಿನಿಂದ ಕಂಗೊಳಿಸಿದಂತೆ ನಮಗೆ ಭಾಸವಾಗುತ್ತಿತ್ತು. ಮಂಟಪದ ಎಡ ಬದಿಗೆ ಎಣ್ಣೆಯ  ಹಾಗೂ ಬಲ ಬದಿಗೆ ತುಪ್ಪದ ಕಾಲುದೀಪವಿರುತ್ತಿತ್ತು. ಅದರಲ್ಲಿ ತುಪ್ಪ ಘನೀಕೃತಗೊಂಡು ಜ್ಯೋತಿ ಆರದಂತೆ ತಡೆಯಲು ವೃತ್ತಾಕಾರದ  ತಗಡೊಂದನ್ನು  ದೀಪದ ಮೇಲೆ ಅಳವಡಿಸಿ ಅದರ ಮೂಲಕ ಪ್ರತಿಫಲಿತವಾದ ಉಷ್ಣ ತುಪ್ಪವನ್ನು ಕರಗುವಂತೆ ಮಾಡುವ ತಂತ್ರಜ್ಞಾನವನ್ನು ಆಗಲೇ ನಮ್ಮ ಹಿರಿಯರು ಕಂಡುಕೊಂಡಿದ್ದರು. ಪೂಜೆಯ ಭಾಗವಾದ 21 ಆವರ್ತ ಅಥರ್ವಶೀರ್ಷ ಆರಂಭವಾಗುವ ಹೊತ್ತಿಗೆ  ಮನೆಯ ಇತರ ಪುರುಷರೂ ಜೊತೆಗೂಡಿ ಆವರ್ತಗಳನ್ನು ಹಂಚಿಕೊಂಡು ಸಮಯ ಉಳಿಸುತ್ತಿದ್ದರು. ಪೂಜೆ  ಕೊನೆಯ ಹಂತ ತಲುಪುತ್ತಿದ್ದಂತೆ ಮಂಟಪದ ಮೂರು ಬದಿಗಳಲ್ಲಿ ಉರಿಯುವ ಹಣತೆಗಳನ್ನು ಇರಿಸಿದಾಗ ಗಣಪ ಮತ್ತಷ್ಟು ದಿವ್ಯ ಪ್ರಭೆಯಿಂದ ಬೆಳಗುತ್ತಿದ್ದ.  ಮಹಾ ನೈವೇದ್ಯದ ಸಮಯ ಮಹಿಳೆಯರೆಲ್ಲ ಸೇರಿ ‘ಆರೋಗಣೆ ಮಾಡೋ ಗಣ ನಾಯಕ ಅಭಯವ ನೀ ನೀಡೊ. ಮಾಡಿದ ಭಕ್ಷಂಗಳನೆಲ್ಲ ನೋಡೊ  ತಡವಿನ್ಯಾತಕೆ ಸೊಂಡಿಲ ನೀಡೋ’ ಎಂಬ ಹಾಡು ಹೇಳುತ್ತಿದ್ದರು. ಮಹಾ ಮಂಗಳಾರತಿಗೆ ಮನೆಯಲ್ಲಿರುವ ಬಾಜಾ ಬಜಂತ್ರಿಗಳೆಲ್ಲ ಮೊಳಗುತ್ತಿದ್ದವು.  ಅಕ್ಕ ಪಕ್ಕದ ಮನೆಯವರೂ ತಮ್ಮ ಜಾಗಟೆ ತರುತ್ತಿದ್ದರು.  ಕೆಲವೊಮ್ಮೆ ಪುಟ್ಟ ಮಕ್ಕಳು ಜಾಗಟೆ ಬಾರಿಸಲು ಉತ್ಸಾಹ ತೋರಿ  ಅದರ ಭಾರ ತಾಳಲಾರದೆ ಕೈ ಸೋತು ಕೆಲವೇ ನಿಮಿಷಗಳಲ್ಲಿ ಅದನ್ನು ಹಿರಿಯರಿಗೆ ಹಸ್ತಾಂತರಿಸುತ್ತಿದ್ದರು. ಚೌತಿಯ ದಿನ ಮಾತ್ರ  ಶಂಖದಂತೆ ಊದಲು ಉಪಯೋಗಿಸಲ್ಪಡುತ್ತಿದ್ದ ಸಾರಂಗದ ಕೊಂಬೊಂದು ನಮ್ಮಲ್ಲಿತ್ತು. ಅತಿ ಭಾರದ ದೊಡ್ಡ ರಥಾರತಿಯನ್ನು ಕೂಡ ಅಂದು ಮತ್ತು ನವಾನ್ನ ಪೂಜೆಯಂದು ಮಾತ್ರ ಉಪಯೋಗಿಸುತ್ತಿದ್ದುದು.

ಚೌತಿಯ ಅಡುಗೆಗೆ ಫಜಿರಡ್ಕದ  ಹೊಳ್ಳರು ನೇತ್ರಾವತಿ ನದಿಯನ್ನು ದೋಣಿಯಲ್ಲಿ ದಾಟಿ ಬರುತ್ತಿದ್ದರು. ಆನಂಗಳಿ ಮತ್ತು ಪರಾರಿ ‘ವಾಳ್ಯ’ದವರಿಗೆ (ಬೇಸಗೆಯಲ್ಲಿ ಮೃತ್ಯುಂಜಯಾ ನದಿಯ ಕಟ್ಟದ ನೀರು ಹರಿಯುವ ಕಾಲುವೆಯ ಗುಂಟ ಇರುವ ಮನೆಗಳ ಸಾಲು) ಆಮಂತ್ರಣವಿರುತ್ತಿತ್ತು. ದೂರದೂರುಗಳ ಬಂಧುಗಳು ಒಂದಿಬ್ಬರಾದರೂ ಬರುತ್ತಿದ್ದರು.  ಮಧ್ಯಾಹ್ನ ಭೋಜನಕ್ಕೆ ಕೂತ ಪುರುಷರಿಗೆ ಕೆಂಪು ಚಂದನದ ತಿಲಕ ಹಚ್ಚುವ ಸಂಪ್ರದಾಯವಿತ್ತು. ಭೋಜನ ಸಮಯದಲ್ಲಿ ಗಣಪತಿಗೆ ಸಂಬಂಧಿಸಿದ ಚೂರ್ಣಿಕೆಗಳನ್ನೇ ಹೇಳಿ ಕೊನೆಗೆ ಗೋವಿಂದ ನಾಮ ಸಂಕೀರ್ತನದ ಬದಲು ಮೋರೇಶ್ವರ ನಾಮ ಸಂಕೀರ್ತನ ಮೋರೆಯಾ ಮೋರೆಯಾ ಅನ್ನುತ್ತಿದ್ದುದು ಚೌತಿ ದಿನದ ವಿಶೇಷಗಳಲ್ಲೊಂದು. ಭೂರಿ ಭೋಜನದೊಂದಿಗೆ ಚೌತಿಯ ಪ್ರಮುಖ ಘಟ್ಟ ಮುಕ್ತಾಯವಾಗುತ್ತಿತ್ತು. ಅಂದು ರಾತ್ರಿಯ ಸಮಯ ಧೂಪದ ಸೊನೆಯಲ್ಲಿ ಅದ್ದಿ ತಯಾರಿಸಿಟ್ಟಿದ್ದ  ಕೊಳ್ಳಿಗಳನ್ನು ಉರಿಸಿ ಆನಂದಿಸುತ್ತಿದ್ದೆವು.  ಅವು ಉರಿಯುವಾಗ ಧೂಪದ ಆಹ್ಲಾದಕರ ಪರಿಮಳ ಎಲ್ಲೆಡೆ ಪಸರಿಸುತ್ತಿತ್ತು.

ಕೆಲವು ವರ್ಷ ಚೌತಿಯ ದಿನವೇ  ಗೌರಿ ಪೂಜೆ ಇರುವುದುಂಟು.  ಅಂಥ ಸಂದರ್ಭಗಳಲ್ಲಿ ಮಹಿಳೆಯರ ಕಷ್ಟ ಹೇಳ ತೀರದು. ಉಪವಾಸವನ್ನೂ ಆಚರಿಸಬೇಕು.  ಚೌತಿಗೆ ಸಂಬಂಧಪಟ್ಟ ಕೆಲಸಕಾರ್ಯಗಳನ್ನೂ ನಿಭಾಯಿಸಬೇಕು. ವಿವಾಹಿತ ಮಹಿಳೆಯರಿಗೆ ಮತ್ತೂ ಕಷ್ಟ.  ಏಕೆಂದರೆ ಮರುದಿನವೂ ಅವರಿಗೆ ಋಷಿ ಪಂಚಮಿಯ ಕಟ್ಟುನಿಟ್ಟಿನ ಉಪವಾಸ!

ಹೆಚ್ಚಿನ ಕಡೆ ಗಣಪನನ್ನು ಒಂದೋ ಚೌತಿಯ ದಿನವೇ ಅಥವಾ ಒಂದು ನಿರ್ದಿಷ್ಟ ದಿನ ವಿಸರ್ಜಿಸಲಾಗುತ್ತದೆ. ಆದರೆ ನಮ್ಮಲ್ಲಿ ವಿಶಿಷ್ಟ ನಿಯಮವೊಂದನ್ನು ಅನುಸರಿಸಲಾಗುತ್ತಿತ್ತು.  ಚೌತಿಯ ನಂತರದ ಆದಿತ್ಯವಾರ, ಬುಧವಾರ ಅಥವಾ ಶನಿವಾರಗಳಂದು ಪಂಚಮಿ ಅಥವಾ ಸಪ್ತಮಿ ತಿಥಿ ಇದ್ದು ಚಿತ್ರಾ ನಕ್ಷತ್ರ, ವಿಶಾಖಾ ನಕ್ಷತ್ರ, ಶೂರ್ಪ ಯೋಗ, ಐಂದ್ರ ಯೋಗ, ವ್ಯತೀ ಪಾತ ಯೋಗ, ವೈಧೃತಿ ಯೋಗ ಇವ್ಯಾವುವೂ ಇಲ್ಲದಿದ್ದರೆ ಅಂದು   ಇಲ್ಲವಾದರೆ  ದಶಮಿಯಂದು ಗಣಪನನ್ನು ವಿಸರ್ಜಿಸುವುದೇ ಆ ನಿಯಮ.  ಹೀಗಾಗಿ ಕಮ್ಮಿ ಎಂದರೆ  ಎರಡು  ದಿನ ಮತ್ತು ಜಾಸ್ತಿ ಎಂದರೆ ಏಳು ದಿನ ಗಣಪ ನಮ್ಮ ಅತಿಥಿ ಆಗಿರುತ್ತಿದ್ದ. ಅಷ್ಟು ದಿನ ಆತನಿಗೆ ಎರಡು ಹೊತ್ತು ಪೂಜೆ, ನಮಗೆ ವೈವಿಧ್ಯಮಯ ಕಜ್ಜಾಯಗಳು ದೊರೆಯುತ್ತಿದ್ದವು. ಚೌತಿಯ ದಿನ ಬರಲಾಗದವರು ಈ ಯಾವುದಾದರೂ ದಿನಗಳಲ್ಲಿ ಬಂದು ಗಣಪನ ದರ್ಶನ ಪಡೆಯುತ್ತಿದ್ದರು. ಈ ಮಧ್ಯೆ ಅನುಕೂಲಕರವಾದ ಒಂದು ದಿನ ನಿತ್ಯದ ಅಷ್ಟೋತ್ತರಶತ ನಾಮಾವಳಿಯ ಬದಲು ದೂರ್ವಾಂಕುರ ಅಥವಾ ಮೋದಕಗಳ ಸಹಸ್ರ ನಾಮಾವಳಿ  ಪೂಜೆ ನಡೆಯುತ್ತಿತ್ತು.  ಚೌತಿಯ ನಂತರದ ದಿನಗಳ ಪೂಜೆಗೆ ಅಷ್ಟೋತ್ತರ ಅಥವಾ ಸಹಸ್ರನಾಮಾವಳಿಯನ್ನು ಮಾತ್ರ ಪುಸ್ತಕದಿಂದ ಓದಿ ಹೇಳುವ ಕೆಲಸವನ್ನು ಮನೆಯವರೇ ಯಾರಾದರೂ ಮಾಡುತ್ತಿದ್ದರು. ಅಷ್ಟೋತ್ತರನಾಮಾವಳಿಯ ಆರಂಭದ ನಾಮಗಳಾದ  ‘ವಿಘ್ನೇಶಾಯ ನಮಃ, ವಿಶ್ವವರದಾಯ ನಮಃ,  ಜಗತ್ಪ್ರಭವೇ ನಮಃ, ಹಿರಣ್ಯರೂಪಾಯ ನಮಃ ....’ ಇತ್ಯಾದಿ ಚಿಕ್ಕ ಮಕ್ಕಳಾದ ನಮಗೂ ಉದ್ದೇಶಪೂರ್ವಕವಾಗಿ ಕಲಿಯದೆಯೇ  ಕಂಠಪಾಠವಾಗಿರುತ್ತಿದ್ದವು.

ವಿಸರ್ಜನೆಗೆ ನಿಗದಿಯಾದ ದಿನ ಅಪರಾಹ್ನ ಭೋಜನದ ನಂತರ ಬಾಜಾ ಬಜಂತ್ರಿಗಳೊಡನೆ ಗಣಪನನ್ನು ತೋಟದ ದಾರಿಯಾಗಿ ನದಿ ತೀರಕ್ಕೊಯ್ದು ಮೊದಲೇ ಸಿದ್ಧವಾಗಿರಿಸುತ್ತಿದ್ದ  ಬಾಳೆ ದಿಂಡಿನ ತೆಪ್ಪದ ಮೇಲೆ ಕೂರಿಸಿ  ನದಿಯಲ್ಲಿ ತೇಲಿಬಿಡುವುದೂ ನಮ್ಮಲ್ಲಿದ್ದ ವಿಶಿಷ್ಟ ಪದ್ಧತಿ. ಅಷ್ಟು ದಿನ ಮನೆಯಲ್ಲಿದ್ದ ಆತನೊಡನೆ ಭಾವನಾತ್ಮಕ ಸಂಬಂಧ ಬೆಳೆದಿರುತ್ತಿದ್ದುದರಿಂದ  ಆತನನ್ನು ಈ ರೀತಿ ನದಿಯಲ್ಲಿ ತೇಲಿ ಬಿಡಬಾರದೆಂದು ಅರಿವು ಮೂಡದ ಪುಟ್ಟ ಮಕ್ಕಳು  ಅಳುವುದೂ ಇತ್ತು. ಆತನನ್ನು ಮರದ ಮಣೆಯಿಂದ ಬೇರ್ಪಡಿಸಿ, ತಲೆಯ ಮೇಲಿನ ಕಿರೀಟವನ್ನು ತೆಗೆದಿರಿಸಿ ತೆಪ್ಪದ ಮೇಲೆ ಕೂರಿಸಿದ ಮೇಲೆ ಪೂಜೆಯ ಸಮಯ ಆತನಿಗೆ ತೊಡಿಸಿದ್ದ ಜನಿವಾರವನ್ನು ಅಲ್ಲಿರುವ ಇನ್ನೂ ಉಪನಯನವಾಗದಿರುವ  ಬಾಲಕರ ಪೈಕಿ ಯಾರಾದರೊಬ್ಬರಿಗೆ ಪ್ರಸಾದ ರೂಪವಾಗಿ ನೀಡುವ ಪರಿಪಾಠ ಇತ್ತು.  ತೆಪ್ಪದ ಮೇಲೆ ಕೂತ ಗಣಪ ನದಿಯ ಗುಂಟ ಸಾಗುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ.  ಆದರೆ ಪ್ರಾಣಿ ಪಕ್ಷಿಗಳು ಅಪವಿತ್ರಗೊಳಿಸುವ ಅಪಾಯವಿರುವುದರಿಂದ ಆತನನ್ನು ಕಣ್ಣ ನೋಟ ಮೀರಿದ ದೂರದ ವರೆಗೆ ಈ ರೀತಿ ಸಾಗಲು ಬಿಡುವಂತಿರಲಿಲ್ಲ. ನೀರಿನ ಹೊಯ್ಲಿಗೆ ಸ್ವಲ್ಪ ಅಲ್ಲಾಡಿದರೂ ನೀರಲ್ಲಿ ಮುಳುಗುವಂತೆ ಆತನನ್ನು ತೆಪ್ಪದ ಮೇಲೆ ಕೂರಿಸಲಾಗುತ್ತಿತ್ತಾದರೂ ಅನಿವಾರ್ಯ ಪ್ರಸಂಗಗಳಲ್ಲಿ ನದಿ ಮಧ್ಯಕ್ಕೆ ಹೋಗಿ ಪ್ರಯತ್ನ ಪೂರ್ವಕವಾಗಿ ಆತನನ್ನು ಜಲಾಧಿವಾಸಗೊಳಿಸಲು ಸಾಹಸಿ ಯುವಕರು ಸಿದ್ಧವಾಗಿರುತ್ತಿದ್ದರು.  ಆತ ನೀರಲ್ಲಿ ಮುಳುಗುತ್ತಲೇ ಅಲ್ಲಿದ್ದವರೆಲ್ಲ ‘ಮೋರೆಯಾ ಮೋರೆಯಾ..’ ಎಂದು ಸಾಮೂಹಿಕವಾಗಿ ಉದ್ಘೋಷಿಸಿ ಭಾರವಾದ ಮನಸ್ಸಿನೊಂದಿಗೆ ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ  ಶಂಖವನ್ನೋ, ಜಾಗಟೆಯನ್ನೋ, ತೆಗೆದಿರಿಸಿದ ಮರದ  ಕಿರೀಟವನ್ನೋ  ಹೊಳೆ ಬದಿಯಲ್ಲೇ ಮರೆತು ಬಿಡುವುದು ಅಪರೂಪವೇನೂ ಆಗಿರಲಿಲ್ಲ.   ಮನೆಗೆ ಮರಳಿದೊಡನೆ ಎಲ್ಲರಿಗೂ ಪಂಚಕಜ್ಜಾಯ ವಿತರಣೆಯೊಂದಿಗೆ ಆ ವರ್ಷದ ಚೌತಿಯ ಸಂಭ್ರಮ ಸಂಪನ್ನವಾಗುತ್ತಿತ್ತು.  ಮಂಟಪವನ್ನು ಕಳಚಿದ ಮೇಲೆ ಅದಕ್ಕೆ  ಹಚ್ಚಿದ್ದ ಬಣ್ಣದ ಕಾಗದಗಳನ್ನು ಕಿತ್ತು ಪುಸ್ತಕಗಳ ಮಧ್ಯೆ ಇರಿಸಿಕೊಂಡು ಅನೇಕ ದಿನಗಳ ವರೆಗೆ ಚೌತಿಯ ನೆನಪನ್ನು ಹಸಿರಾಗಿರಿಸುತ್ತಿದ್ದೆವು.  ಹೊಗೆಯಟ್ಟದ ಡಬ್ಬಿಗಳಲ್ಲಿ ಅನೇಕ ದಿನಗಳ ವರೆಗೆ ಅವಿತಿರುತ್ತಿದ್ದ  ಚಕ್ಕುಲಿ, ಮೋದಕ, ಪಂಚ ಕಜ್ಜಾಯದ ಉಂಡೆಗಳು  ಆ ನೆನಪನ್ನು ಇನ್ನಷ್ಟು ಹಸಿರಾಗಿರಿಸಲು ಸಹಾಯ ಮಾಡುತ್ತಿದ್ದವು!

ಗಣಪನನ್ನು ತೆಪ್ಪದಲ್ಲಿ ಕೂರಿಸಿ ಬೀಳ್ಕೊಡುವ ದೃಶ್ಯವನ್ನು ಇಲ್ಲಿ ನೋಡಬಹುದು.






Sunday 13 August 2017

ಆಕಾಶವಾಣಿ ಸಂದರ್ಶನ



ಅನೇಕರು ಲಿಖಿತ ಬರಹಗಳನ್ನು ಧ್ವನಿ ರೂಪಕ್ಕೆ ಪರಿವರ್ತಿಸಿ podcast ಮಾಡುವುದಿದೆ.  ಆದರೆ ಇಲ್ಲಿ ಆ ಪ್ರಕ್ರಿಯೆ ತಿರುವು ಮುರುವಾಗಿ  ವಾಣಿ ರೂಪದಲ್ಲಿರುವ ಆಕಾಶವಾಣಿ ಸಂದರ್ಶನ ಪಾಣಿ  ಮೂಲಕ ಕೀಲಿಮಣೆ ತಲುಪಿ ಅಕ್ಷರ ರೂಪ ಪಡೆದು ನಿಮ್ಮ ಮುಂದೆ ಬಂದಿದೆ.  ಈಗಾಗಲೇ ಆ ಧ್ವನಿಮುದ್ರಣವನ್ನು ಅನೇಕರು ಆಲಿಸಿದ್ದೀರಿ.  ಅದನ್ನೇ ಲಿಖಿತ ರೂಪದಲ್ಲಿ ಓದುವುದು ಬೇರೆಯೇ ಅನುಭವ ನೀಡಬಹುದು. ಹಾಗಾಗಿ ಈ ಪ್ರಯೋಗ.  ಬೇಕೆನಿಸಿದ ಭಾಗವನ್ನಷ್ಟೇ ಆರಿಸಿ ಓದುವ ಅನುಕೂಲವೂ ಇದರಲ್ಲಿದೆ.  ಈ ಪರಿವರ್ತಿತ ಬರಹದಲ್ಲಿ ಇರುವುದು typical ದಕ್ಷಿಣ ‘ಕನ್ನಡ’ ಆಡು ಭಾಷೆ.

ಸರಿಯಾಗಿ 12 ವರ್ಷ ಹಿಂದೆ ಇದೇ ದಿನ ಅಂದರೆ 13-8-2005 ಶನಿವಾರದಂದು ನಾನು ಭಾಗವಹಿಸಿದ್ದ ಸುಮಾರು ಒಂದೂವರೆ ತಾಸಿನಷ್ಟು ದೀರ್ಘ ಅವಧಿಯ ಚಿಟ್ ಚಾಟ್ ಅತಿಥಿ ಕಾರ್ಯಕ್ರಮ ಆಕಾಶವಾಣಿ ಮಂಗಳೂರಿನಿಂದ ಪ್ರಸಾರವಾಗಿತ್ತು. ಆಗ ಆಕಾಶವಾಣಿಯ ತಾಂತ್ರಿಕ ಸಿಬ್ಬಂದಿಯ ಮುಷ್ಕರ ನಡೆಯುತ್ತಿದ್ದರೂ ಕಾರ್ಯಕ್ರಮದ ರೂವಾರಿ ನಾರಾಯಣಿ ದಾಮೋದರ್ ಎಲ್ಲವನ್ನೂ ಬಲು ಚೆನ್ನಾಗಿಯೇ ನಿಭಾಯಿಸಿದ್ದರು. ಏಕತಾನತೆ ಕಾಡದಂತೆ ಸಂಭಾಷಣೆಯಲ್ಲಿ ಮುದ್ದು ಮೂಡುಬೆಳ್ಳೆಯವರನ್ನೂ ಸೇರಿಸಿಕೊಳ್ಳಲಾಗಿತ್ತು. ಸಾಕಷ್ಟು ಪೂರ್ವ ತಯಾರಿ, ವಿಭಿನ್ನ ಶೈಲಿಯ ಪ್ರಸ್ತುತಿ ಮತ್ತು ಜೊತೆ ಜೊತೆಗೆ ಬಹುತೇಕ ಅದುವರೆಗೆ ಕೇಳದ ಕರ್ಣಾನಂದಕರ ಹಾಡುಗಳು ಹಾಗೂ ಅವುಗಳ ವಿಶ್ಲೇಷಣೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ್ದವು. ಅತ್ಯುತ್ತಮ ಚಿಟ್ ಚಾಟ್ ಕಾರ್ಯಕ್ರಮಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಕಾರ್ಯಕ್ರಮದ ಓಘಕ್ಕೆ ತಡೆಯೊಡ್ಡಬಹುದೆಂಬ ಕಾರಣಕ್ಕೆ ನೇರ ಫೋನ್ ಕರೆಗಳಿಗೆ ಅವಕಾಶ ಬೇಡ ಎಂದು ತೀರ್ಮಾನಿಸಲಾಗಿದ್ದರೂ ಪ್ರಸಾರ ನಡೆಯುತ್ತಿರುವಾಗ ಸ್ಟುಡಿಯೋಗೆ ಕರೆಗಳ ಮಹಾಪೂರವೇ ಹರಿದು ಬಂದಿತ್ತಂತೆ. ಕಾರ್ಯಕ್ರಮ ಮುಗಿಸಿ ಮನೆಗೆ ಬಂದಮೇಲೂ ಗುರುತು ಪರಿಚಯ ಇಲ್ಲದ ಬಹಳ ಮಂದಿ ಅದು ಹೇಗೋ ನನ್ನ ಫೋನ್ ನಂಬರ್ ಸಂಪಾದಿಸಿ ಕರೆಗಳನ್ನು ಮಾಡುತ್ತಲೇ ಇದ್ದರು. ಅನೇಕರು ಆಕಾಶವಾಣಿಗೆ ಮೆಚ್ಚುಗೆಯ ಪತ್ರಗಳನ್ನೂ ಬರೆದಿದ್ದರು. ಈಗ ಇಷ್ಟು ವರ್ಷಗಳ ನಂತರವೂ ಮದುವೆ, ಮುಂಜಿ, ಇತರ ಸಮಾರಂಭಗಳಲ್ಲಿ ಸಿಗುವ ಪರಿಚಯಸ್ಥರು ಕೆಲವೊಮ್ಮೆ ಈ ಕಾರ್ಯಕ್ರಮದ ಉಲ್ಲೇಖ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸುವುದಿದೆ.

ಅಲ್ಲಿ ಸ್ಟುಡಿಯೊದಿಂದ ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೆ ಮನೆಯ ಕಂಪ್ಯೂಟರಿನಲ್ಲಿ ಸ್ವಯಂಚಾಲಿತವಾಗಿ ರೆಕಾರ್ಡ್ ಆಗುವಂತೆ ಸೆಟ್ ಮಾಡಿಟ್ಟು ಹೋಗಿದ್ದೆ. ನಾರಾಯಣೀ ದಾಮೋದರ್ ಅವರೂ ಒಂದು ಪ್ರತಿ ಕೊಡುವ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಆ ನೆನಪನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಸಾಧ್ಯವಾಯಿತು.


* * * * *
ಶ್ರಾವ್ಯ ರೂಪ ಇಷ್ಟ ಪಡುವವರಿಗೆ 4 ಭಾಗಗಳಲ್ಲಿ ಇಲ್ಲಿದೆ.









ಅಕ್ಷರ ರೂಪ ಮಾತ್ರ ಸಾಕೆನ್ನಿಸಿದರೆ  ಓದುತ್ತಾ ಮಧ್ಯದ ಹಾಡುಗಳನ್ನಾಲಿಸಿ ಮುಂದುವರಿಯಬಹುದು.

* * * * *

ಚಿಟ್ ಚಾಟ್ ಅತಿಥಿ ಕಾರ್ಯಕ್ರಮವನ್ನ ಆರಂಭಿಸುತ್ತಿದ್ದೇವೆ. ಇವತ್ತಿನ ನಮ್ಮ ಅತಿಥಿ, ಕಲಾವಿದ, ಕಲಾಭಿಮಾನಿ, ನಿರಂತರ ರೇಡಿಯೋ ಕೇಳುಗ ಚಿದಂಬರ ಕಾಕತ್ಕರ್.  ಒಬ್ಬ ಶ್ರೀ ಸಾಮಾನ್ಯ ಮಹಾನುಭಾವ.  ಮಂಗಳೂರು ಆಕಾಶವಾಣಿಯ ಪ್ರಥಮ ಯುವವಾಣಿಯಲ್ಲಿ ಯುವ ಕಲಾವಿದರಾಗಿ ಕೊಳಲು ವಾದನ ಕಾರ್ಯಕ್ರಮ ನೀಡಿದವರು ಇವರು. ಇದು 1976ರಲ್ಲಿ. ಈಗ ಮಂಗಳೂರಿನಲ್ಲಿ BSNL ಉದ್ಯೋಗಿ. ಡಿವಿಷನಲ್ ಇಂಜಿನಿಯರ್. ಹೆಂಡತಿ, ಇಬ್ಬರು ಮಕ್ಕಳ ಕುಟುಂಬ ಇವರದು. ಇವೆಲ್ಲವೂ ಸಾಮಾನ್ಯ ಪರಿಚಯವಾಯಿತು.  ಇಷ್ಟು ಸಾಲದು.  ಚಿದಂಬರ ಕಾಕತ್ಕರ್ ಅವರಲ್ಲಿ ಒಂದು ವಿಶೇಷ ಇದೆ.  ಅದೇನು ಅಂದ್ರೆ ಅವರು ಭಾಷಾ ತಾರತಮ್ಯ ಇಲ್ಲದೆ ಎಲ್ಲ ಬಗೆಯ ಮಧುರ ಚಿತ್ರಗೀತೆಗಳ ಉಪಾಸಕ.  ಕೇಳಿ ಖುಶಿ ಪಡುವವರು ಎಷ್ಟೋ ಜನ ಇರಬಹುದು.  ಆದರೆ ಇವರು ಸ್ವಲ್ಪ ಭಿನ್ನ.  ತಮಗೆ ಇಷ್ಟವಾದ ಗೀತೆಗಳ ಬೃಹತ್ ಸಂಗ್ರಹ ಇವರಲ್ಲಿದೆ. ಮನೆಯಲ್ಲೇ ಧ್ವನಿಮುದ್ರಿಸಿಕೊಳ್ಳುವ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿದ್ದಾರೆ. ವಿರಳವಾದ ಅಪೂರ್ವ ಗೀತೆಗಳ ಸಾಹಿತ್ಯವನ್ನು ಕೂಡ ಸಂಗ್ರಹಿಸಿದ್ದಾರೆ. ಪ್ರಸಾರ ಭಾರತಿಯ ಹೊಸ ಡಿ.ಟಿ.ಎಚ್ ವ್ಯವಸ್ಥೆಯ ಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ.  ಮಂಗಳೂರು ಆಕಾಶವಾಣಿ ಸಂಗ್ರಹದಲ್ಲಿ ಇರದ ಒಂದಿಷ್ಟು ಗೀತೆಗಳನ್ನ  ಮಂಗಳೂರು ಆಕಾಶವಾಣಿ ಶ್ರೋತೃಗಳಿಗೆ ಕೇಳಿಸಬೇಕೆಂದೇ ಸಿ.ಡಿ.ಯಲ್ಲಿ ಧ್ವನಿಮುದ್ರಿಸಿಕೊಂಡು ಈಗ ಇಲ್ಲಿಗೆ ಬಂದಿದ್ದಾರೆ.  ಇವರು ಚಿದಂಬರ ಕಾಕತ್ಕರ್.

ನಮಸ್ಕಾರ ಕಾಕತ್ಕರ್ ಅವರೇ.

ನಮಸ್ಕಾರ ನಾರಾಯಣಿ ದಾಮೋದರ್ ಅವರಿಗೆ.  ಹಾಗೆಯೇ ಮುದ್ದು ಮೂಡುಬೆಳ್ಳೆ ಅವರಿಗೂ ನಮಸ್ಕಾರ.

ಕಾಕತ್ಕರ್ ಅವರ ಒಲವು, ಅಭಿರುಚಿ ಮತ್ತು ಪಕ್ವತೆಗಳನ್ನ ಅವರೇ ಆಯ್ದುಕೊಂಡು, ಸಿ.ಡಿ. ಮಾಡಿ ನಮಗೆಲ್ಲರಿಗೂ ಕೇಳಿಸಲೆಂದೇ ತಂದ ಗೀತೆಗಳನ್ನ ಆಸ್ವಾದಿಸುತ್ತಾ ಕೇಳೋಣ ಅಲ್ಲ.



ನಾರಾಯಣಿ ಅವರೇ, ಈಗ ಈ ಕನ್ಯಾರತ್ನ ಚಿತ್ರದ ಹಾಡು ನಾವು ಕೇಳಿದ್ವಲ್ಲ, ನಾನು ಒಂದು ಕ್ಷಣ 40 ವರ್ಷ ಹಿಂದಕ್ಕೆ ಹೋಗಿ ಬಿಟ್ಟಿದ್ದೆ .

ನಾವೂ 40 ವರ್ಷ ಹಿಂದಕ್ಕೆ ಹೋದ ಹಾಗೆ ಅನ್ನಿಸ್ತಾ ಇತ್ತು.

ಏನಾಯ್ತು ಅಂದ್ರೆ ಒಂದು ಕ್ಷಣ ನಾನು ಈ ಆಕಾಶವಾಣಿ ಮಂಗಳೂರು  ಸ್ಟುಡಿಯೋದಲ್ಲಿ ಇದ್ದೇನೆ ಅಂತಲೇ ಮರ್ತು ಹೋಗಿತ್ತು ನನಗೆ.  ನಮ್ಮ ಹಳೆ ನ್ಯಾಶನಲ್ ಎಕ್ಕೊ ರೇಡಿಯೋದ ಮುಂದೆ ಕೂತು ಈ ಹಾಡು ಕೇಳ್ತಾ ಇದ್ದೀನೇನೋ ಅಂತ ನನಗೆ ಕಾಣ್ತಾ ಇತ್ತು.   ಕನ್ಯಾರತ್ನ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್, ಜಿ.ಕೆ.ವೆಂಕಟೇಶ್ ಮತ್ತು ಕು.ರ.ಸೀ. ಕಾಂಬಿನೇಶನ್ನಿನಲ್ಲಿ ಮೂಡಿಬಂದ ಅದ್ಭುತ ಹಾಡು ಇದು.  ಕನ್ನಡದಲ್ಲಿ ಇಷ್ಟರವರೆಗೆ ಬಂದಂಥ ರೊಮ್ಯಾಂಟಿಕ್ ಗೀತೆಗಳ ಪೈಕಿ ಇದಕ್ಕೆ ಸರಿಸಾಟಿಯಾದ ಇನ್ನೊಂದು ಪದ್ಯ ಬಂದಿದೆ ಅಂತ ನಂಗೇನೂ ಅನ್ನಿಸೋದಿಲ್ಲ.  ಈಗ ಹಿಂದಿಯಲ್ಲಾದ್ರೆ ಕ್ರಿಯೇಟಿವಿಟಿ ಬಗ್ಗೆ ಮಾತಾಡುವಾಗ ಶಂಕರ್ ಜೈಕಿಶನ್ ಹೆಸ್ರು ತಗೊಳ್ತೇವೆ.  ಕನ್ನಡಕ್ಕೆ ಜಿ.ಕೆ.ವೆಂಕಟೇಶ್ ಅವರು ಶಂಕರ್ ಜೈಕಿಶನ್.  ಅದರ ಆರ್ಕೆಸ್ಟ್ರೇಶನ್ ನೋಡಿ ನೀವು ಬೇಕಿದ್ರೆ.  ಆ bells, ಆ guitar, ಆ break ಅಂದ್ರೆ ರಿದಂನ break ಅಂತ ಹೇಳ್ತಾರೆ, ಪುನಃ take off - ಅದೊಂದು ಅದ್ಭುತ ಉದಾಹರಣೆ.  ಬೇರೆ ಯಾವುದಾದರೂ ಹಾಡಿಗೆ ಇದನ್ನು ಒಂದು ಉದಾಹರಣೆಯಾಗಿ ತಗೋಬಹುದು. ಅದ್ಭುತ ಹಾಡು.  ಇನ್ನೊಂದು ವಿಷಯ ನಾವು ಗಮನಿಸಬಹುದು ಇದರಲ್ಲಿ.  ನೀವೂ ಕೇಳಿರಬಹುದು.  ಆ ಸಾಹಿತ್ಯದ ಸೊಗಸು. ಸಾಮಾನ್ಯವಾಗಿ ಒಂದು ಹಾಡಿನಲ್ಲಿ ಸಾಲಿನ ಕೊನೆಗೆ ಪ್ರಾಸ ಇರ್ತದೆ. ಇಲ್ಲಿ ಕು.ರ.ಸೀ.ಯವರದ್ದು ಪ್ರತಿ ಶಬ್ದ ಶಬ್ದಕ್ಕೂ ಪ್ರಾಸ.   ಉದಾಹರಣೆಗೆ ಬಾ ಚಿನ್ನ  ರನ್ನ ವರಿಸೆನ್ನ .  ಆ ಮೇಲೆ ಇನ್ನೊಂದು ಅದ್ಭುತ ಪದಪುಂಜ ಉಪಯೋಗಿಸಿದ್ದಾರೆ ಅವರಿಲ್ಲಿ.  ಹಿಂದಿ ಹಾಡುಗಳಲ್ಲೆಲ್ಲ ಒಂದು ಉರ್ದು word ಸಾಮಾನ್ಯವಾಗಿ ಬರ್ತದೆ.  ಪೈಮಾನಾ ಅಂತ.  ಪೈಮಾನಾ ಅಂದ್ರೆ ಮಧುಪಾನ ಮಾಡುವಂಥ ಒಂದು ಪಾತ್ರೆ. ಇಲ್ಲಿ ಕು.ರ.ಸೀ.ಯವರು ಪೈಮಾನಾ ಅನ್ನುವ  ಒಂದು ಸಣ್ಣ ಶಬ್ದಕ್ಕೆ ಮಧುಪಾನಪಾತ್ರೆ ನಿನ್ನೊಡಲು ಅಂತ ನಾಯಕಿಯನ್ನೇ ಮಧುಪಾನಪಾತ್ರೆ ಅಂತ ಎಷ್ಟು ಚೆನ್ನಾಗಿ ವಿವರಿಸಿದ್ದಾರೆ ನೋಡಿ. ಅದು ಸೊಗಸು ಅಂದಿನ ಆ ಕಾಲದ ಹಾಡುಗಳಲ್ಲಿ.

ಚಿದಂಬರ ಅವರೆ, ನೀವು ಹಾಡನ್ನು ಇಷ್ಟು ಆಳಕ್ಕೆ ಹೋಗಿ ಅನುಭವಿಸ್ತೀರಿ ಅನ್ನೋದೇ ಒಂದು ವಿಶೇಷ.  ನಿಮ್ಮ ಹಿನ್ನೆಲೆ, ಬಾಲ್ಯ ಇದರ ಬಗ್ಗೆ ಸ್ವಲ್ಪ ಹೇಳ್ತೀರಾ?

ಅದು ಹೇಳ್ಬೇಕಿದ್ರೆ ಆಗಲೇ ನಾನು ಹೇಳಿದ ಹಾಗೆ 45ವರ್ಷ ಹಿಂದಕ್ಕೆ ಹೋಗ್ಬೇಕಾಗ್ತದೆ.  ಸುಮಾರು ವರ್ಷ ಹಿಂದೆ ಉದಯವಾಣಿ ಪತ್ರಿಕೆಯಲ್ಲಿ ಕುಗ್ರಾಮ ಗುರುತಿಸಿ ಅಂತೊಂದು ಸ್ಪರ್ಧೆ ಮಾಡಿದ್ರು.  ನಿಮ್ಗೆಲ್ಲ ನೆನ್ಪಿರಬಹುದು.  ಅದರಲ್ಲಿ ದಿಡುಪೆಗೆ ಆ ಸ್ಥಾನ ಸಿಕ್ಕಿತು.  ನನ್ನ ಊರು ದಿಡುಪೆ ಅಲ್ಲ.  ಅದರ ಪಕ್ಕದ ಮುಂಡಾಜೆ. ಆ ಊರಿನ ನಡುವಿನಲ್ಲಿ ಹರಿಯೋದು ಮೃತ್ಯುಂಜಯಾ ನದಿ. ಅದರ ಆಚೆ ಈಚೆ ಎರಡೂ ಬದಿಗಳಲ್ಲಿ ಉದ್ದಕ್ಕೆ ಅಡಿಕೆ ತೋಟಗಳ ಸಾಲು. ಪೂರ್ವ ದಿಕ್ಕಿನಲ್ಲಿ ಸಹ್ಯಾದ್ರಿ ಬೆಟ್ಟ ಅಂದರೆ ಪಶ್ಚಿಮ ಘಟ್ಟಗಳ ಸಾಲು.



ಸುಂದರವಾದ ಪ್ರಕೃತಿಯ ಮಡಿಲಲ್ಲಿ ನಿಮ್ಮ ಬಾಲ್ಯ ಕಳ್ದಿದ್ದೀರಿ.

ಹೌದು.  ಅದನ್ನು ನಾವು ದಕ್ಷಿಣ ಕನ್ನಡದ ಕಾಶ್ಮೀರ ಅಂತ ಹೇಳಿದ್ರೆ ತಪ್ಪಾಗ್ಲಿಕ್ಕಿಲ್ಲ.   ಸೌಂದರ್ಯ ಅಷ್ಟೆಲ್ಲ ಇದ್ರೂ ಕೂಡ ಸೌಲಭ್ಯಗಳ ಬಗ್ಗೆ ಯೋಚಿಸಿದ್ರೆ ದಿಡುಪೆಗಿಂತ ತುಂಬಾ ಮೇಲೇನೂ ಇರ್ಲಿಲ್ಲ ನಾವು. 

ಅಂದ್ರೆ ಕಷ್ಟಗಳಿದ್ವು ಸ್ವಲ್ಪ.

ಕಷ್ಟ ಸ್ವಲ್ಪ ಅಲ್ಲ, ತುಂಬಾನೇ ಇತ್ತು.  ಉದಾಹರಣೆಗೆ ನಾವು ಪೇಟೆಗೆ ಬರ್ಬೇಕಿದ್ರೆ ಬೇಸಿಗೆ ಕಾಲದಲ್ಲಾದ್ರೆ ಎರಡು ನದಿಗಳನ್ನು ದಾಟಿ ಅಂದ್ರೆ ಮೃಂತ್ಯುಂಜಯಾ ನದಿ ಮತ್ತು ನೇತ್ರಾವತಿ ನದಿ, ಎರಡನ್ನು ದಾಟಿಕೊಂಡು ಎರಡು ಕಿಲೊಮೀಟರ್ ನಡ್ದು ಬಸ್ ಹಿಡಿಬೇಕು. ಇದು ಬೇಸಿಗೆ ಕಾಲದ ಸಮಾಚಾರ. ಮಳೆಗಾಲದಲ್ಲಾದ್ರೆ ಆರು ಕಿಲೋಮೀಟರ್ ಕಮ್ಮಿಯಲ್ಲಿ.  ಇಲ್ಲದಿದ್ರೆ ದೋಣಿಯವ್ನ ಆಸರೆಯಲ್ಲಿ  ಎರಡು ನದಿ ದಾಟಿ ಬರ್ಬೇಕು.  ಹೀಗೆ ನಮ್ಮ ಬಾಲ್ಯದ ಪರಿಸ್ಥಿತಿ.

ನಿಮ್ಮ ಕೌಟುಂಬಿಕ ಪರಿಸ್ಥಿತಿ ಹೇಗಿತ್ತು, ತಂದೆ, ತಾಯಿ, ಮನೆ.

ನಮ್ಮ ಕುಟುಂಬ ಒಂದು ಅವಿಭಕ್ತ ಕುಟುಂಬ ಮತ್ತು ಸಂಪ್ರದಾಯಸ್ಥ ಕುಟುಂಬ ಅಂತ ಹೇಳ್ಬಹುದು.  ಆದ್ರೆ ಶಿಕ್ಷಣಕ್ಕೆ ನಮ್ಮಲ್ಲಿ ಯಾವತ್ತೂ ಪ್ರೋತ್ಸಾಹ ಇತ್ತು.  ಅದಕ್ಕೆ ತಕ್ಕ ಹಾಗೆ ನಮ್ಮ ಊರಲ್ಲಿ ಎಲಿಮೆಂಟರಿ ಶಾಲೆ ಅಂತೂ ಅಲ್ಲೇ ಹತ್ರನೇ  ಇತ್ತು.  ಹೈಯರ್ ಎಲಿಮೆಂಟರಿಗೆ ಸ್ವಲ್ಪ ದೂರ ನಡೀಲಿಕ್ಕೆ.  ಎಲಿಮೆಂಟ್ರಿಗೆ ಅರ್ಧ ಕಿಲೋಮೀಟರ್ ಆದ್ರೆ ಇದಕ್ಕೆ ಒಂದು ಎರಡು ಕಿಲೋಮೀಟರ್.

ಅಲ್ಲ ಕಾಕತ್ಕರ್ ಅವರೇ, ಈ ಕಾಕತ್ಕರ್, ತೆಂಡುಲ್ಕರ್, ಅಗರ್ಕರ್, ಗೋಲ್ವಲ್ಕರ್ ಈ ಥರ ಮಹಾರಾಷ್ಟ್ರದ ಒಂದು ಕಲ್ಪನೆ ಬರ್ತದಲ್ಲ.

ನಿಮ್ಮ ಊಹೆ ಸರಿ. ಅಂದ್ರೆ ನಮ್ಮ ಪೂರ್ವಜರು, ಸುಮಾರು 300 ವರ್ಷ ಹಿಂದೆ ಇರಬಹುದು, ಅವರೆಲ್ಲ ರತ್ನಾಗಿರಿಯಿಂದ ಬಂದವರಂತೆ.

ನೀವು ನೋಡಿದ್ದೀರಾ ಆ ಗಿರಿಯನ್ನ.

ರತ್ನಾಗಿರಿಯನ್ನು ನಾನು ನೋಡಿದ್ದು ಹೇಗಂದ್ರೆ  ಮುಂಬಯಿಗೆ ಕೊಂಕಣ ರೈಲ್ವೆಯಲ್ಲಿ ಹೋಗುವಾಗ ರೈಲ್ವೇ ಪಟ್ಟಿ ಅಕ್ಕ ಪಕ್ಕ ಎಷ್ಟು ಸಿಗ್ತದೆ ಅಷ್ಟು ರತ್ನಾಗಿರಿ ನೋಡಿದ್ದೇನೆ.  ಅಲ್ಲಿಗೇ ಅಂತ ಹೋಗುವ ಒಂದು ಸಂದರ್ಭ ಸಿಗ್ಲಿಲ್ಲ ನಂಗೆ.

ಈಗ ನೀವು ಮಂಗಳೂರಲ್ಲೇ ಕೆಲ್ಸ ಮಾಡ್ತಾ ಇದ್ದೀರಾ.

ಆಗ ನಾನು ಹೇಳ್ತಾ ಇದ್ನಲ್ಲ,  ನನ್ನ ಶಿಕ್ಷಣ ಎಲ್ಲ ಅಲ್ಲಿ ನಡೀತು.  ಮತ್ತೆ ಹತ್ರದಲ್ಲೇ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಕೂಡ ಇತ್ತು, ಉಜಿರೆಯಲ್ಲಿ.  ಹಾಗೆ ಅಲ್ಲಿ B.Sc  ಡಿಗ್ರಿ ಮುಗ್ಸಿದೆ.  ಆ ಮೇಲೆ ಪೇಪರಲ್ಲಿ ಬಂದ ಯಾವುದೋ ಒಂದು ವಾಂಟೆಡ್ ಕಾಲಮ್, ಅದಕ್ಕೊಂದು ಅರ್ಜಿ ಗುಜರಾಯಿಸಿದೆ.  ಅದು ಮತ್ತೆ ನೋಡುವಾಗ P&T Department .  ಅಲ್ಲಿ ಕ್ಲರ್ಕ್ ಆಗಿ ಸೇರಿದೆ.  ಕ್ಲರ್ಕ್ ಆಗಿ ಸೇರಿದ್ಮೇಲೆ ಅಲ್ಲೇ ವಿವಿಧ exam ಇತ್ಯಾದಿ ಬರ್ದು ಮುಂದೆ ಜೂನಿಯರ್ ಎಂಜಿನಿಯರ್ ಆದೆ, ಆ ಮೇಲೆ ಅಸ್ಸಿಸ್ಟಂಟ್ ಎಂಜಿನಿಯರ್ ಆದೆ. ಈಗ ಡಿವಿಷನಲ್  ಎಂಜಿನಿಯರ್ ಆಗುವ ಹಂತಕ್ಕೆ ತಲ್ಪಿದ್ದೇನೆ. ಆಗ ಅದು ನಾನು ಸೇರುವಾಗ P&T ಆಗಿತ್ತು.  ಆ ಮೇಲೆ -DOT ಆಯ್ತು.  ಈಗ BSNL ಆಗಿದೆ. ಆದ್ರೆ ನನ್ನ ಕರ್ಮಭೂಮಿ ಮಾತ್ರ ಈಗ್ಲೂ ಅದೇ.



ಈ ಹಾಡು ಕೇಳಿದ್ರಲ್ಲ.  ಇದು ಕೂಡ ಜಿ.ಕೆ.ವೆಂಕಟೇಶ್ ಅವರದ್ದೇ creation.  ಕು.ರ.ಸೀ. ಅವರದ್ದೇ ಸಾಹಿತ್ಯ.  ಇದ್ರಲ್ಲಿ ನಾವು ಇನ್ನೊಂದು  ವಿಶೇಷ ಗಮನಿಸ್ಬಹುದು ಏನಂದ್ರೆ ಒಂದು ಪುಟ್ಟ ಹುಡುಗಿಯ ಸ್ವರ ನೀವು ಕೇಳಿದ್ರಲ್ಲ ಅದ್ರಲ್ಲಿ, ಅದು ಬೆಂಗಳೂರು ಲತಾ ಅವರ ಸ್ವರ. ಮುಂದೆ ದೊಡ್ಡ ಗಾಯಕಿ ಆದ್ರು ಅವರು.  ಈ  ಹಾಡಿನ ಇನ್ನೊಂದು ವಿಶೇಷ ಏನಂದ್ರೆ ಈಗ ನಾವು ತುಂಬಾ ಘೋಷಣೆ ಎಲ್ಲ ಕೇಳ್ತಾ ಇರ್ತೇವೆ, ಹೆಣ್ಣು ಮಗು ಉಳ್ಸಿ, ಮಹಿಳೆಯರಿಗೆ ಪ್ರಾಧಾನ್ಯ ಕೊಡಿ ಅಂತೆಲ್ಲ. ಅದಕ್ಕೆ ಘೋಷಣೆ ಗೀಷಣೆ ಏನೂ ಮಾಡದೆ ಒಂದು ಹಾಡಲ್ಲೇ ಎಷ್ಟು ಸುಂದರವಾಗಿ ಅದನ್ನು ನಿರೂಪಿಸಿದ್ರು ನೋಡಿ.

ನಿಮ್ಮ ಪ್ರಯೋಗಶೀಲತೆ ಹೇಗೆ ಆರಂಭ ಆಯ್ತು.

ಹಿಂದಿನಿಂದ್ಲೇ ನಂಗೆ ಆ ಅಭ್ಯಾಸ ಉಂಟು.  ಮನೆಯಲ್ಲಿ ಏನಾಗ್ತಿತ್ತು ಅಂದ್ರೆ ಅಡಿಗೆ ಎಲ್ಲ ರೆಡಿ ಆಗಿ ಊಟಕ್ಕೆ ಕರೆದ್ರೆ ಮನೆಯ ಗಂಡಸ್ರು ಒಂದು ಕರೆಗೆಲ್ಲ ಬರ್ಲಿಕ್ಕಿಲ್ಲ ಯಾವತ್ತೂ.  ಅದು ಈಗ್ಲೂ ಹಾಗೇ, ಒಂದು ಹತ್ತು ಸಲ ಕರೀಬೇಕು ಕಮ್ಮಿಯಲ್ಲಿ.

ಎಷ್ಟು ವರ್ಷ ಆದ್ರೂ ಹಾಗೇ ಇರ್ತದೆ ಅದು. 

ನಾರಾಯಣಿ ಅವ್ರಿಗೆ ಅದ್ರ ಬಗ್ಗೆ ಒಳ್ಳೆ ಅನುಭವ ಇರ್ಬೇಕು.

ಬನ್ನಿ ಬನ್ನಿ ಅಂತ ಕೊನೆಗೆ ತಲೆ ಚಚ್ಚಿಕೊಳ್ಳುವ  ಪರಿಸ್ಥಿತಿ ಬರ್ತದೆ.

ನಮ್ಮಲ್ಲೂ ಹಾಗೇ ಬರ್ತಿತ್ತು.  ಹೇಳಿ ಕೇಳಿ ಅದು ಹಳ್ಳಿ ಮನೆ ಬೇರೆ.  ಅಡುಗೆ  ಮನೆ ಒಂದು ಕಡೆ ಇರ್ತದೆ.  ಹಜಾರಕ್ಕೆ ಬರ್ಬೇಕಾದ್ರೆ ನಾಲ್ಕು ರೂಮು ದಾಟಿ ಬರ್ಬೇಕು. ನಮ್ಮ ತಾಯಿಗೆ, ಅತ್ತಿಗೆಯಂದಿರಿಗೆಲ್ಲ ಮನೆಯ ಗಂಡಸ್ರನ್ನು ಕರೆಯೋದೊಂದು ತಲೆನೋವು.  ಆಗ ನಮ್ಮ ತಾಯಿ ಹೇಳಿದ್ರು ‘ನೀನು ಏನೇನೆಲ್ಲ ಪ್ರಯೋಗ ಮಾಡ್ತಿಯಲ್ಲ, ನಂಗೇನಾದ್ರು ಮಾಡಿಕೊಡು ಮಾರಾಯಾ ಇದಕ್ಕೆ’ ಅಂತ.  ಅದಕ್ಕೆ ನಾನೇನು ಮಾಡಿದೆ - ಆಗ ತಾನೇ ನಮ್ಮಲ್ಲಿ ವಿದ್ಯುತ್ ಬಂದಿತ್ತು. ಹಾಗಾಗಿ ನಾನೊಂದು ಹೊಸ ಕರೆಗಂಟೆ ತಯಾರ್ಸಿದೆ. ಅದರ ಸ್ವಿಚ್ ಇರೋದು ಅಡಿಗೆ ಮನೆಯಲ್ಲಿ. ಆದರೆ ಗಂಟೆ ಮೊಳಗೋದು ಹಜಾರದಲ್ಲಿ.  ಬರೇ ಗಂಟೆ ಮೊಳಗೋದು ಮಾತ್ರ ಅಲ್ಲ.  ಅದಕ್ಕೊಂದು TV ತರ ಸ್ಕ್ರೀನ್ ಮಾಡಿ ಸ್ವಿಚ್ ಅದುಮಿದ ತಕ್ಷಣ  ಗಂಟೆ ಮೊಳಗುವಾಗ ಒಂದು ದೀಪ ಬೆಳಗಿ ಅದರ ಜೊತೆಗೆ  ‘ಒಳಗೆ ಬನ್ನಿ’ ಅಂತ ದೊಡ್ಡ ಅಕ್ಷರದಲ್ಲಿ ಒಂದು ಕೆಂಪು ಬೋರ್ಡ್ ಬರೋದು.  ಆಗ ಏನಾಗ್ತಿತ್ತು.  ಕರೆಯುವ ಕೆಲ್ಸ ಇಲ್ಲ ಅವ್ರಿಗೆ.  ಅಡಿಗೆ ಆಗಿ ತಟ್ಟೆ ಹಾಕಿತೋ, ಸ್ವಿಚ್ ಒತ್ತಿದ್ರೆ ಆಯ್ತು.  ಎಲ್ರಿಗೆ ಆ ಗಂಟೆ ಕೇಳ್ತದೆ, ಬರ್ತಾರೆ.

ಕಂಠ ಶೋಷಣೆ ಇಲ್ಲ.

ಕಂಠ ಶೋಷಣೆ ಇಲ್ಲ.  ಅದರ ಬದ್ಲಿಗೆ ಗಂಟೆ ಮೊಳಗುವಿಕೆ.  ಈ ಒಂದು ಪ್ರಯೋಗ ಅಥವಾ ನನ್ನ experiment ಏನಿತ್ತು, ನಮ್ಮಲ್ಲಿಗೆ ಬಂದವ್ರಿಗೆಲ್ಲ ಒಂದು ದೊಡ್ಡ attraction ಅದು.   ಬಂದವ್ರೆಲ್ಲ ನೋಡೋದು ಏನಿದು ಅಂತ. 

ಅಂದ್ರೆ ಊಟ ಮಾಡೋದಕ್ಕಿಂತ ಈ ಗಂಟೆದ್ದೇ attraction ಜೋರು.

ಆದ್ರೆ ಕೆಲವು ಪ್ರಯೋಗಗಳಲ್ಲಿ casuality ಆದದ್ದೂ ಇದೆ.  ಅದಕ್ಕೊಂದು ಸಣ್ಣ ಉದಾಹರಣೆ ಹೇಳ್ತೇನೆ.  ಉದ್ದ ಹಿಡಿದ್ದೊಂದು ಪಾತ್ರೆ ತೆಕ್ಕೊಂಡು ಅದ್ರಲ್ಲಿ ಕೆಂಡ ಹಾಕಿ ಇಸ್ತ್ರಿ ಹಾಕೋದು.  ಅದು ಬೇರೆ ಕೆಲವ್ರೂ ಮಾಡಿರ್ಬಹುದು.  ಹಾಗೆ ನಾನೂ ಮಾಡಿದೆ ಒಮ್ಮೆ.  ನನ್ನ cotton ಅಂಗಿಗಳಿಗೆಲ್ಲ ಇಸ್ತ್ರಿ ಹಾಕಿದೆ.  ಚಂದ ಆಯ್ತು. ಹಾಗೆ ನಮ್ಮ ತಾಯಿಯ ಹತ್ರ ಹೋಗಿ ಹೇಳಿದೆ. ‘ನಾನೀಗ ಹೀಗೆ ಇಸ್ತ್ರಿ ಎಲ್ಲ ಹಾಕ್ತೇನೆ.  ನಿಮ್ಮ ರವಿಕೆ ಏನಾದ್ರೂ ಇದ್ರೆ ಕೊಡಿ.  ನಾನು ಇಸ್ತ್ರಿ ಹಾಕಿ ಕೊಡ್ತೇನೆ’ ಅಂತ.  ಅವ್ರಿಗೆ ಖುಶಿ ಆಯ್ತು ಮಗ ಏನೋ ಮಾಡ್ತಾ ಇದ್ದಾನೆ ಅಂತ.  ಅವ್ರದ್ದೊಂದು ಹೊಸಾ ರವಿಕೆ, ಸಿಲ್ಕಿದ್ದು.  ನನ್ಗೆ ಕೊಟ್ರು ಇದಕ್ಕೆ ಇಸ್ತ್ರಿ ಹಾಕಿ ಕೊಡು ಅಂತ.  ಖುಶಿಯಲ್ಲಿ ಬಂದೆ.  ಇಸ್ತ್ರಿ ಹಾಕುವಾ ಅಂತ ಪಾತ್ರೆ ಅದ್ರ ಮೇಲೆ ಇಟ್ರೆ ತೆಗೀವಾಗ ಅಷ್ಟು ಜಾಗದ ರವಿಕೆಯೇ ಮಾಯ!  ಆದ್ರೆ ಆಗ ಅವ್ರು ನಂಗೆ ಬಯ್ಲೂ ಇಲ್ಲ, ಹೊಡೀಲೂ ಇಲ್ಲ.  ಯಾಕಂತ ನಂಗಿನ್ನೂ ಅರ್ಥ ಆಗ್ಲಿಲ್ಲ.  ನಾನಾದ್ರೆ ಖಂಡಿತ ನಾಲ್ಕು ಬಾರಿಸ್ತಿದ್ದೆ  ನನ್ನ ಬಟ್ಟೆ ಯಾರಾದ್ರೂ ಹಾಗೆ ಮಾಡ್ತಿದ್ರೆ.  ಹೀಗೆ ನನ್ನ ಪ್ರಯೋಗಗಳು ಮುಂದುವರೀತಾನೇ ಇತ್ತು. 

ಇದು ಉದ್ಯೋಗ ಕ್ಷೇತ್ರಕ್ಕೂ ವ್ಯಾಪಿಸ್ತಾ ಮತ್ತೆ.

ಅದು ನನ್ನ ನಿರಂತರ ಪ್ರಕ್ರಿಯೆ. ನಿಲ್ಲುವಂಥದ್ದಲ್ಲ.   ಈ ಮೊದ್ಲು computerized exchange ಎಲ್ಲ ಇರ್ಲಿಲ್ಲ.  ಆಗ strowger technology ಅಂತ, ಅದೆಲ್ಲ mechanical.  ಆಗ್ಲೇ ನಾನು ನಂದೇ ಕೆಲವು circuits, ನಂದೇ ಕೆಲವು  testers ಎಲ್ಲ ಮಾಡಿ ನಮ್ಮ ಕೆಲ್ಸ ಸುಲಭ ಆಗುವ ಹಾಗೆ ಮಾಡ್ತಿದ್ದೆ. 

ನೀವೇ ತಯಾರು ಮಾಡ್ತಿದ್ರಿ.

ನಾನೇ ತಯಾರು ಮಾಡೋದು.  ಡಿಸೈನೂ ನಂದೇ, ತಯಾರು ಮಾಡೋದೂ ನಾನೇ. 

ನೀವು BSNLನ ಕಂಪ್ಯೂಟರ್ ವಿಭಾಗದಲ್ಲಿ ಕೆಲ್ಸ ಮಾಡ್ತಾ ಇದ್ದೀರಿ.  ಈ ಕಂಪ್ಯೂಟರ್ ಹಿನ್ನೆಲೆ, ಪರಿಣಿತಿ ನಿಮಗೇನಾದ್ರೂ ಉಂಟಾ.

ಇದ್ರಿದ್ದೊಂದು ದೊಡ್ಡ ಕಥೆನೇ ಇದೆ. ನಾನು ದೊಡ್ಡ ಕಥೆ ಹೇಳೋದಿಲ್ಲ.  ಸಣ್ಣದಾಗಿ ಹೇಳ್ತೇನೆ.  ಏನಂದ್ರೆ,  ಕಂಪ್ಯೂಟರ್ ಕ್ರಾಂತಿ ಅಂತ ಆರಂಭ ಆಗುವ ಮೊದ್ಲೇ ಸುಮಾರು ಹತ್ತು ಹದಿನೈದು ವರ್ಷ ಹಿಂದೇನೆ ಈ ಮೀಟರ್ ರೀಡಿಂಗ್ಸ್ ಎಲ್ಲ ಇರ್ತದಲ್ಲ, ನಿಮಗೆ ಬಿಲ್ ಬರ್ತದಲ್ಲ, ಅದನ್ನು ಸಂಗ್ರಹಿಸಿ ಇಡ್ಲಿಕ್ಕೆ ಅಂತ ಕಂಪ್ಯೂಟರ್ ಬಂದಿತ್ತು.  ಆದ್ರೆ ಯಾಕೋ ಆ ಕಂಪನಿಯವ್ರು ಬರ್ಲೇ ಇಲ್ಲ ತುಂಬಾ ಸಮಯ.  ಆ ಕಂಪ್ಯೂಟರು ಮುಸುಕು ಹಾಕ್ಕೊಂಡು ಸುಮ್ನೆ ಇತ್ತು.  ನಾನು ಆಲೋಚನೆ ಮಾಡಿದೆ.  ಇಷ್ಟೆಲ್ಲ ಲಕ್ಷಗಟ್ಟಲೆ ದುಡ್ಡು ಕೊಟ್ಟು ಕಂಪ್ಯೂಟರ್ ತಂದಿದ್ದಾರೆ, ಸುಮ್ನೆ ಯಾಕೆ ಉಂಟು ಅಂತ.  ನಾನೇ ಯಾಕೆ ಒಂದು ಕೈ ನೋಡ್ಬಾರ್ದು ಅಂತ ನೋಡಿದೆ open ಮಾಡಿ.  ನಂಗೇನೂ ಗೊತ್ತಿಲ್ಲ ಅದ್ರ ಬಗ್ಗೆ.  ನೋಡ್ಲಿಕ್ಕೆ ಹೋದ್ರೆ  ಅದ್ರಲ್ಲಿ ಕೆಲವು ತಂತ್ರಾಂಶಗಳೆಲ್ಲ ಇತ್ತು.  ಅದನ್ನು use ಮಾಡ್ಕೊಂಡು ನಾನು duty chart ಹಾಕೋದು, inventories ಮಾಡೋದು, ಆ ಮೇಲೆ history sheet ಮಾಡೋದು ಅಂಥದ್ದೆಲ್ಲ ಮಾಡ್ಲಿಕ್ಕೆ ಶುರು ಮಾಡಿದೆ.  ಹಾಗೆ ಮಾಡ್ತಾ ಮಾಡ್ತಾ ಮತ್ತೆ ನಮ್ಮ exchangeಗಳೂ computerize ಆಗ್ಲಿಕ್ಕೆ ಶುರು ಆಯ್ತು.  ಆಗಂತೂ ನನ್ನ ಪ್ರಯೋಗಗಳು ಮತ್ತೂ ಜಾಸ್ತಿ ಆಯ್ತು.  ಈಗಂತೂ ನಾನು ತುಂಬಾನೇ ಉಪಯೋಗಿ programs ಎಲ್ಲ ಮಾಡ್ತಾ ಇದ್ದೇನೆ.  ಉದಾಹರಣೆಗೆ ಈಗ internetನಲ್ಲಿ ನಮ್ಮ ಟೆಲಿಫೋನ್ ಡೈರೆಕ್ಟರಿ ಇದೆ. ನೀವು ಯಾವುದೇ ಹೆಸ್ರು ಹಾಕಿದ ತಕ್ಷಣ ನಿಮಗೆ ಟೆಲಿಫೋನ್ ನಂಬರ್ ಸಿಗ್ತದೆ.  ಅದ್ರ ಕಲ್ಪನೆಯಿಂದ ಹಿಡಿದು implementation ವರೆಗೆ ನನ್ನದೇ ಅದು.  ಹಾಗೆ ಇತ್ತೀಚೆಗೆ ಒಂದು ಹೊಸ ಸೇರ್ಪಡೆ ಮಾಡಿದ್ದೇನೆ.  ಟೆಲಿಫೋನ್ ಬಿಲ್ ಕೆಲವು ಸಲ ಪೋಸ್ಟಲ್ಲಿ ಬರುವಾಗ delay ಆಗ್ತದೆ ಅಂತ ನಮ್ಮ customers ಕಂಪ್ಲೇಂಟ್ ಮಾಡ್ತಾರೆ.  ಅದಕ್ಕೆ ನನ್ನದೇ ಒಂದು concept  ಮಾಡಿ internetನಲ್ಲಿ ಅವರ ಟೆಲಿಫೋನ್ ನಂಬರ್ ಮತ್ತು consumer ನಂಬರ್ ಹಾಹಿದ ತಕ್ಷಣ ಅವರ ಬಿಲ್ screenನಲ್ಲೇ ಬರ್ತದೆ.

ಅಂದ್ರೆ ಕಂಪ್ಯೂಟರನ್ನೂ ನೀವು ಏಕಲವ್ಯನ ತರಹ ಕಲಿತಿರಿ ಮತ್ತು ನಿಮ್ಮ ಇಲಾಖೆಗೆ ಇದ್ರಿಂದ  ಪ್ರಯೋಜನ ಆಯ್ತು ಅಲ್ವಾ.

ಹಾಗೆ ಆಯ್ತು ಅಂತ ಅನ್ನಿಸ್ತದೆ.



ನಾರಾಯಣಿ ಅವರೇ, ಮುಂದಿನ ಮಾತು ಹೇಳೋದಕ್ಕಿಂತ ಮೊದ್ಲು ಬೊಳ್ಳಿದೋಟದ್ದೊಂದು ಪದ್ಯ ಉಂಟಲ್ಲ ದಾನೆ ಪೊಣ್ಣೆ ಅಂತ. ಅದನ್ನು ಸ್ವಲ್ಪ ಹಾಕ್ತೀರಾ.



ಈಗ  ಹಿಮಾಲಯ್ ಕೀ ಗೋದ್ ಮೆಂ ಚಿತ್ರದ ಹಿಂದಿ ಹಾಡು ಮುಕೇಶ್ ಹಾಡಿದ್ದು ಇತ್ತಲ್ಲ ಚಾಂದ್ ಸೀ ಮೆಹಬೂಬಾ. ಅದ್ರ ನಂತ್ರ  ಕೂಡಲೇ ಈ ಹಾಡು ಯಾಕೆ ನಾನು ಹಾಕ್ಲಿಕ್ಕೆ ಹೇಳಿದೆ ಅಂತ ಕೆಲವ್ರಿಗೆ doubt ಬಂದಿರ್ಬಹುದು.  ಅದ್ರಲ್ಲೊಂದು ವಿಶೇಷ ಇದೆ.  ಆ ಹಾಡಿನ interlude music ನೀವು ಗಮನ ಇಟ್ಟು ಕೇಳಿದ್ರೆ, ಮತ್ತೆ ಈ ದಾನೆ ಪೊಣ್ಣೆ ಹಾಡು ಕೇಳಿದ್ರೆ ಒಂದು ವಿಷಯ ಗೊತ್ತಾಗ್ತದೆ; ಆ interlude musicನ ಸ್ಪೂರ್ತಿಯಿಂದ ಈ ದಾನೆ ಪೊಣ್ಣೆ ಹಾಡಿನ ಜನನ ಆದದ್ದು ಅಂತ.  ಆದ್ರೆ ಇದನ್ನು ನಾವು copy ಅಂತ ಹೇಳುವ ಹಾಗಿಲ್ಲ.  ಇದೊಂದು ಸ್ಪೂರ್ತಿ. ಇದು ಇಲ್ಲಿ ಮಾತ್ರ ಅಲ್ಲ.  ಬೇರೆ ಕಡೆ ಕೂಡ ಇರ್ತದೆ.  ಹಿಂದಿಯ famous music directors ಕಲ್ಯಾಣಜೀ ಆನಂದಜೀ ಜೋಡಿಯ ಕಲ್ಯಾಣಜೀ ಅವರು jokes  ಹೇಳೋದು ಜಾಸ್ತಿ.  ಅವರದ್ದೊಂದು joke ಇದೆ. ಅವ್ರಿಗೆ ಯಾರೋ ಒಮ್ಮೆ ಫೋನ್ ಮಾಡಿದ್ರಂತೆ -‘ನೋಡಿ ಕಲ್ಯಾಣಜೀ ಅವರೆ, ನಿಮ್ಮ tune ಕದ್ದು ಯಾರೋ ಒಂದು ಹಾಡು ಮಾಡಿದ್ದಾರೆ’ ಅಂತ. ಅದಕ್ಕೆ ಅವ್ರು ಕೂಡ್ಲೆ ಹೇಳಿದ್ರಂತೆ -’ತೊಂದ್ರೆ ಇಲ್ಲಪ್ಪ.  ನಾನು ಅದನ್ನು ಎಸ್.ಡಿ. ಬರ್ಮನ್ ಅವರಿಂದ ಕದ್ದದ್ದು’ ಅಂತ.

ಕಾಕತ್ಕರ್ ಅವ್ರೇ, ನಿಮಗೆ ಈ tunes, ಸಂಗೀತ ಇತ್ಯಾದಿಗಳ ಆಸಕ್ತಿ ಹುಟ್ಟಿಕೊಂಡದ್ದು ಹೇಗೆ.

ಈ ಆಸಕ್ತಿಗೆ ಕಾರಣ - ಸುಮಾರು ನಾನು ಏಳನೆ ಕ್ಲಾಸ್ ಇರುವಾಗ ಇರ್ಬೇಕು, ನಮ್ಮ ಹಿರಿಯಣ್ಣ ನಮ್ಮ ಮನೆಗೊಂದ್ರು ರೇಡಿಯೋ ತಂದ್ರು.  ದೊಡ್ಡ ನ್ಯಾಶನಲ್ ಎಕ್ಕೋ ರೇಡಿಯೋ ಅದು.  ಆಗ ಆರಂಭದಲ್ಲಿ ನಾನು ಹೇಳಿದ್ನಲ್ಲ, ನ್ಯಾಶನಲ್ ಎಕ್ಕೋ ರೇಡಿಯೋ ಕೇಳಿದ ಹಾಗೆ ಅನ್ನಿಸಿತು ಅಂತ, ಇದೇ ರೇಡಿಯೋ ಅದು.  ಅದಕ್ಕೆ ಗಜಗಾತ್ರದ ಒಂದು ದೊಡ್ಡ ಬ್ಯಾಟರಿ, 50 ವೋಲ್ಟಿದ್ದು.  ನಮ್ಮ ಇನ್ನೊಬ್ಬ ಅಣ್ಣ ಅದಕ್ಕೆ ದೊಡ್ಡ antenna, ಎಷ್ಟು ದೊಡ್ಡದಂದ್ರೆ ಇಲ್ಲಿಯ local transmitterನ mast ಇತ್ತಲ್ಲ,  ಸಾಧಾರಣ ಅಷ್ಟು ಎತ್ತರದ್ದು antenna ಹಾಕಿ ದೂರ ದೂರದ station ಎಲ್ಲ ಕೇಳುವ ಹಾಗೆ ಮಾಡಿದ್ರು.

ಅಣ್ಣ ತಮ್ಮಂದಿರಿಗೆಲ್ಲ ಒಬ್ರಿಗೊಬ್ರು ಆಗುವ ಮನೋಭಾವ ಇತ್ತು ಹಾಗಿದ್ರೆ.  ಆ ಹಳ್ಳಿಯ ವಾತಾವರಣ ಇಂತಹ ಸೃಜನಶೀಲತೆಗೆ ಸ್ಪೂರ್ತಿ ಕೊಡ್ತಿತ್ತೋ ಏನೋ.

ಅದು ಹೌದು.  ಅದ್ರಲ್ಲಿ ಇನ್ನೊಂದು ವಿಶೇಷ ಏನಂದ್ರೆ,  ರೇಡಿಯೋ ತಂದದ್ದು ನಮ್ಮ ದೊಡ್ಡ ಅಣ್ಣ,  ಅದಕ್ಕೆ antenna ಎಲ್ಲ ಹಾಕಿ facility ಮಾಡಿಕೊಟ್ಟದ್ದು  ಇನ್ನೊಬ್ರು ಅಣ್ಣ, ಆದ್ರೆ ರೇಡಿಯೋ ಮೇಲೆ ಅಧಿಪತ್ಯ ಮಾತ್ರ ನನ್ನದು!  ಅದೂ ಸ್ವಯಂ ಘೋಷಿತ ಅಧಿಪತ್ಯ, ಯಾರೂ ಹೇಳಿದ್ದಲ್ಲ ನೀನು ಅಧಿಪತಿ ಆಗು ಅಂತ. 

ತಮ್ಮನ ಪ್ರೀತಿಗಾಗಿ ಏನೆಲ್ಲ ಮಾಡ್ತಾರೆ ನೋಡಿ.



ಆಗ ಏನಾಗ್ತಿತ್ತು ಅಂದ್ರೆ,  ನಂಗೆ ವಿವಿಧಭಾರತಿ ಮತ್ತು ರೇಡಿಯೊ ಸಿಲೋನ್ ಮುಖ್ಯ.  ಅದು ಕೇಳಿ ಆದ್ಮೇಲೆ ಮತ್ತೆ ಸಮಯ ಉಳ್ದ್ರೆ ಮತ್ತೆ ಉಳ್ದವರಿಗೆಲ್ಲ ಕೇಳುವ ಚಾನ್ಸ್.  ಬುಧವಾರ ಅಂದ್ರೆ ಬಿನಾಕಾ ಗೀತ್ ಮಾಲಾ.  ಅದು ಬಹಳ famous  ಆಗ.  ನಮ್ಮ ತಾಯಿಗೂ ಗೊತ್ತಿತ್ತು ಅದು.  ಬುಧವಾರ ಅಂದ್ರ ಬಿನಾಕಾ ಗೀತ್ ಮಾಲಾ ವಾರ ಅಂತ.  ಆ ದಿನ ರಾತ್ರಿ ಎಳೂವರೆಗೆ ನನ್ನ ಊಟ ಎಲ್ಲ  ಆಗಿ ಒಂದು ಕುರ್ಚಿ ಇಟ್ಕೊಂಡು ರೇಡಿಯೋ ಹತ್ರ ಕೂತ್ಬಿಡೋದು, ಬೇರೆ ಯಾರೂ ಅಲ್ಲಿ ಬರ್ಬಾರ್ದು ಅಂತ. ರೇಡಿಯೋ ಕೇಳಿ ಕೇಳಿ ನಾನೂ ಏನಾದ್ರೂ ಮಾಡ್ಬೇಕು ಅಂತ  ಆಸಕ್ತಿ ಬಂದದ್ದು ಆವಾಗ.



ಈಗ ಓ.ಪಿ.ನಯ್ಯರ್ music ಕೇಳಿದ್ವಲ್ಲ ನಾವು. ಫಿರ್ ವಹೀ ದಿಲ್ ಲಾಯಾ ಹೂಂ ಚಿತ್ರದ್ದು.  ಇದರ ಆರಂಭದಲ್ಲಿ ದೂರ್ ಬಹುತ್ ಮತ್ ಜಾಯಿಯೆ - ಅದು ಕೇಳಿದಾಗ ಹಿಂದುಗಡೆ ಸಂಗೀತ, ವಾದ್ಯಗಳೆಲ್ಲ ಏನೂ ಇಲ್ಲ,  ರಫಿಯ voice ಮಾತ್ರ.  ಆದ್ರೆ ಅದನ್ನು ಕೇಳಿದಾಗ ಹೊಟ್ಟೆಯೊಳಗೆ ಏನೋ ಒಂಥರ ಆದ ಹಾಗೆ.  ಅದು ಬಹುಶ: ಆ ದಿನಗಳ ನೆನಪು ಆಗೋದ್ರಿಂದ ಹಾಗಾಗೋದಾ, musicನ ಅಲೆಗಳ ಇಫೆಕ್ಟಾ ಏನು ಅಂತ ನನಗೆ ಗೊತ್ತಾಗೋದಿಲ್ಲ.

ಅಂದ್ರೆ ಆರಂಭದ ಆಲಾಪ ಭಾಗದ ಬಗ್ಗೆ  ಹೇಳ್ತಿದ್ದೀರಿ.

ಹೌದು.  ಓ.ಪಿ.ನಯ್ಯರ್ ಅವರ ಇನ್ನೊಂದು ವಿಶೇಷ ಏನಂದ್ರೆ,  ಅವ್ರು ತುಂಬಾ ವಾದ್ಯಗಳನ್ನು ಬಳಸ್ತಾರೆ. ಆದ್ರೆ ಎಲ್ಲ ಒಟ್ಟಿಗಿಲ್ಲ. ಎಲ್ಲಿ ಎಷ್ಟು ಬೇಕೋ ಅಷ್ಟೇ.  ಈಗ ಇದೇ ಹಾಡಲ್ಲಿ ನೀವು ಗಮನಿಸ್ಬಹುದು,  ಆ ಹಾಡಿನ ಎಲ್ಲೋ ಒಂದು ಕಡೆ, drumsಲ್ಲಿ snare ಅಂತೊಂದು use ಮಾಡ್ತಾರೆ, side drums - ಅದ್ರ ಎರಡೇ ಪೆಟ್ಟು ಒಂದು ಕಡೆ ಮಾತ್ರ ಬರೋದು.  Ice Cream ಮೇಲೆ cherry ಹಣ್ಣು ಇಡ್ತಾರಲ್ಲ, ಹಾಗೆ.  ತುಂಬಾ ಇಲ್ಲ, ಒಂದೇ.  ಅದು ಇಫೆಕ್ಟ್ ಜಾಸ್ತಿ ಮಾಡ್ಲಿಕ್ಕೆ. ಅಂಥದ್ದೆಲ್ಲ ಮಾಡ್ತಿದ್ರು ಆಗ ಅವ್ರು. 

ಚಿದಂಬರ ಅವ್ರೇ, ನೀವು ಒಳ್ಳೆಯ ಕೊಳಲು ವಾದಕರು ಅಂತ  ಗೊತ್ತಿದೆ.  ಈ ಕೊಳಲು ವಾದನದ ಆಸಕ್ತಿ ನಿಮಗೆ ಹೇಗೆ ಯಾವಾಗಿಂದ ಹುಟ್ಟಿಕೊಂಡಿತು.



ಕೊಳಲು ಅಂತಲ್ಲ.  ನನಗೆ ಮೊದ್ಲಿನಿಂದ್ಲೂ ಯಾವ್ದಾದ್ರೂ ವಾದ್ಯಗಳನ್ನು ಕಂಡ್ರೆ ಬಹಳ ಇಷ್ಟ.  ನಾನೂ ಯಾವ್ದಾದ್ರೂ ಒಂದು ವಾದ್ಯ ಕಲೀಬೇಕು. ನಾನೂ ನುಡಿಸ್ಬೇಕು ಅಂತ ಆಸೆ.  ಆದ್ರೆ ಬೇರೆ ವಾದ್ಯಗಳೆಲ್ಲ ಆರ್ಥಿಕವಾಗಿ ಸಬಲರಾಗಿದ್ರೆ ಮಾತ್ರ ತಗೋಬಹುದು.  ನಂಗೆ ಸುಲಭವಾಗಿ ಕಂಡದ್ದು ಕೊಳಲು.  ಧರ್ಮಸ್ಥಳ ನಮ್ಮ ಮನೆಗೆ ಬಹಳ ಹತ್ರ.  ಒಳದಾರಿಯಿಂದ ಹೋದ್ರೆ ನಾಲ್ಕು ಕಿಲೋಮೀಟರ್ ಅಷ್ಟೇ.  ಪ್ರತೀ ವರ್ಷ ಜಾತ್ರೆಗೆ ನಾವು ಹೋಗ್ತಾ ಇದ್ವಿ. ಅಲ್ಲಿ ನಿಮಗೆ ಗೊತ್ತಿದೆ, ಜಾತ್ರೆಗಳಲ್ಲಿ  ಸಾಲು ತೂಗಾಡಿಸ್ಕೊಂಡು ಕೊಳಲು ಮಾರ್ತಾ ಇರ್ತಾರೆ.  ಹಾಗೆ ಒಮ್ಮೆ ನಾಲ್ಕಾಣೆ ಕೊಟ್ಟು ಒಂದು ಕೊಳಲು ತೆಕ್ಕೊಂಡೆ ನಾನು.  ಮನೆಗೆ ಬಂದು ಮರುದಿನದಿಂದ ಪೀಪೀ ರಾಗ ಶುರು.  ಹಾಡು ಏನೂ ಬರೋದಿಲ್ಲ.  ಸುಮ್ನೆ ಪೀಪೀ ರಾಗ.  ಆ ಕೊಳಲು ಜಾಸ್ತಿ ಸಮಯ ಏನೂ ಬರ್ತಾ ಇರ್ಲಿಲ್ಲ.  ಒಂದು ಎರಡು ತಿಂಗ್ಳಲ್ಲಿ ಮುರ್ದು ಹೋಗ್ತಿತ್ತು.  ಮತ್ತೆ ಮುಂದಿನ ವರ್ಷ ಧರ್ಮಸ್ಥಳ ಜಾತ್ರೆ. ಮತ್ತೆ ಕೊಳಲು.  ಹಾಗೆ ಪೀಪೀ ರಾಗ ಮಾಡಿ ಮಾಡಿ, ಒಂದು ಗಾದೆ ಇದ್ಯಲ್ಲ  - ಬೊಗಳಿ ಬೊಗಳಿ ರಾಗ ನರಳಿ ನರಳಿ ರೋಗ ಅಂತ. ಹಾಗೆ ನುಡಿಸ್ತಾ ನುಡಿಸ್ತಾ ನಂಗೇ ಕೆಲವು ಹಾಡು ನುಡಿಸಲು ಬರ್ಲಿಕ್ಕೆ ಪ್ರಾರಂಭ ಆಯ್ತು. ನಾನು ಮೊದ್ಲು ಕಲ್ತ ಹಾಡು ಯಾವ್ದಂದ್ರೆ - ಹಿಂದಿ ಹಾಡೂ ಇದೆ, ಕನ್ನಡ ಹಾಡೂ ಇದೆ ಅದು - ಪಾಪಿಯ ಜೀವನ ಪಾವನ ಗೊಳಿಸುವ ಪರಶಿವ ಲಿಂಗ ನಮೋ.  ಯಾಕಂದ್ರೆ ಅದ್ಕೆ ಎರಡೇ ಬೆರಳು ಸಾಕು.  ಅದ್ರಲ್ಲಿ ಸ್ವರ ಹೆಚ್ಚು variation ಇಲ್ಲ. ಆ ಮೇಲೆ ನಾನು develop ಮಾಡ್ತಾ ಹೋದೆ.  ನನಗೆ ಒಂದೊಂದೇ ಹಾಡು ನುಡಿಸಲು ಬರ್ಲಿಕ್ಕೆ ಆರಂಭ ಆಯ್ತು. ಆದ್ರೆ ಅದ್ರಲ್ಲಿ ಒಂದು ತೊಂದ್ರೆ ಇತ್ತು.  ಅದು ಹೀಗೆ ಉದ್ದಕೆ ಹಿಡ್ದು ಬಾರ್ಸುವ ಕೊಳಲು, ಪುಂಗಿ ಊದಿದ ಹಾಗೆ. ಅದ್ರಲ್ಲಿ ಕಾರ್ಯಕ್ರಮ ಕೊಡ್ಲಿಕ್ಕೆ ಅಥವಾ ಎಲ್ಲ ಹಾಡು ನುಡಿಸ್ಲಿಕ್ಕೆ ಆಗೋದಿಲ್ಲ.  ಅದಕ್ಕೆ ಏನು ಮಾಡಿದೆ -  ನಮ್ಮ ತೋಟದ ಬದಿಯಲ್ಲಿ ನದಿ ಪಕ್ಕಕ್ಕೆ ಈ ಓಟೆ ಅಂತ ಹೇಳ್ತಾರಲ್ಲ , ಅದ್ರ ಗಿಡ ಇತ್ತು.  ಒಂದು ಚಂದ ನೇರ ಇದ್ದ ಓಟೆಯನ್ನು ಕತ್ತರ್ಸಿ ಒಂದು ಸಪೂರದ ಕಬ್ಬಿಣದ ಸರಳನ್ನು ಕಾಯ್ಸಿ ರಂಧ್ರ ಮಾಡಿ ನಾನೇ ಒಂದು ಕೊಳಲು ತಯಾರ್ಸಿದೆ.  ಶಾಸ್ತ್ರ ಎಲ್ಲ ಏನೂ ಗೊತ್ತಿಲ್ಲ.  ಎಷ್ಟು hole ಇರ್ಬೇಕು, ಹೇಗಂತ ಗೊತ್ತಿಲ್ಲ.  ಅದನ್ನು  ನಾನು ತುಟಿಗಿಟ್ಟು ಬಾರ್ಸಿದ್ರೆ ನಂಗೇ ಆಶ್ಚರ್ಯ! ಅದ್ರ ಧ್ವನಿ ಸೂಪರ್ !!



ಸುಬ್ಬಾ ಶಾಸ್ತ್ರಿ ಚಿತ್ರದ ಹಾಡು ಈಗ ನಾವು ಕೇಳಿದ್ವಲ್ಲ.  ಇದ್ರಲ್ಲಿ ಗಮನಿಸಬೇಕಾದ ಅಂಶ ಇದೆ ಒಂದು.  ಈ ಹಾಡಿನ ಸೃಷ್ಟಿಕರ್ತರಲ್ಲಿ ಒಬ್ರು ಕೂಡ ಫಿಲ್ಮ್ ಉದ್ಯೋಗದ professionals ಅಲ್ಲ.  ಅದನ್ನು ಹಾಡಿದವ್ರು ಶ್ರೀರಂಗಂ ಗೋಪಾಲರತ್ನಂ ಅಂತ. ಅವರು ಪ್ರಖ್ಯಾತ classical singer.  ರಚನೆಕಾರರು ಕೂಡ ಸಿನಿಮಾ ರಚನೆಕಾರ ಅಲ್ಲ.  ಅವರು ಪು.ತಿ.ನ.   ಅವ್ರು ಬಹುಶಃ ಗೋಕುಲ ನಿರ್ಗಮನ ಅನ್ನುವ ನಾಟಕಕ್ಕೆ ಬೇಕಾಗಿ ಈ ಹಾಡು ರಚಿಸಿದ್ದು ಅಂತ ಕೇಳಿದ್ದೇನೆ ನಾನು.  ಹಾಗೇ ಇದ್ಕೆ ಸಂಗೀತ ನಿರ್ದೇಶನ ಮಾಡಿದವ್ರು ವೀಣೆ ದೊರೆಸ್ವಾಮಿ ಐಯಂಗಾರ್.  ಆದ್ರೂ ಕೂಡ ನೋಡಿ ಚಲನ ಚಿತ್ರ ಗೀತೆಗಳ ಮೂಲ ಲಕ್ಷಣ ಆದ clarity, crispness ಮತ್ತು ಅಚ್ಚುಕಟ್ಟುತನ ಎಷ್ಟು ಇದ್ರಲ್ಲಿ ಕೂಡ ಇದೆ ಅಂತ.  ನಂಗೆ ಅನ್ಸೋದು ಆ ಒಂದು ಹತ್ತು ಹದಿನೈದು ವರ್ಷದ ಕಾಲ ಇತ್ತಲ್ಲ - ಆಗ ಯಾರೋ ಗಂಧರ್ವರು ಬಹುಶಃ ಇಲ್ಲಿ ಓಡಾಡ್ತಾ ಇದ್ರಾ ಅಂತ. ಅವ್ರೆಲ್ಲ ಇಂಥ ರಚನೆ ಮಾಡುವಾಗ ಅವರ ಹೃದಯದಲ್ಲಿ ಕೂತು  ಇಂತಹ ಉತ್ತಮ ರಚನೆಗಳು ಬರುವ ಹಾಗೆ ಮಾಡ್ತಿದ್ರಾ ಅಂತ  ನಂದೊಂದು ಕಲ್ಪನೆ

ಸುಂದರವಾದ ಕಲ್ಪನೆ. ನಿಮ್ಮ ಹವ್ಯಾಸದ ಬಗ್ಗೆ ಇನ್ನೇನಾದ್ರೂ ಹೇಳ್ಳಿಕ್ಕುಂಟಾ.

ಸ್ವಂತ ಕೊಳಲು ತಯಾರ್ಸಿದೆ ಅಂತ ಹೇಳಿದೆ ಅಲ್ಲ. ನಾನು ಅದನ್ನೇ ಉಪಯೋಗ್ಸಿಕೊಂಡು ಮತ್ತೆ ಕೆಲವು ಸಣ್ಣ ಸಣ್ಣ ಕಾರ್ಯಕ್ರಮ ಎಲ್ಲ ಕೋಡೋದಿತ್ತು.  ನಮ್ಮ ಶಾಲೆಯ ವಾರ್ಷಿಕೋತ್ಸವಗಳು, ಹಾಗೇ ನಮ್ಮ ದೇವಸ್ಥಾನಗಳಲ್ಲಿ ಜಾತ್ರೆ ಆಗುವಾಗ ಅಲ್ಲಿ ಅಷ್ಟ ಸೇವೆ ಅಂತ ಇರ್ತದೆ.  ಅಲ್ಲಿ ಕೊಳಲು ನಾನು ನುಡಿಸ್ತಾ ಇದ್ದೆ.  ಆ ಮೇಲೆ ನಮ್ಮ ಕಾಲೇಜು ದಿನಗಳಲ್ಲಿ mouth organ ಕೂಡ ನುಡಿಸ್ತಾ ಇದ್ದದ್ದುಂಟು. 

ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಮಾಡ್ಬೇಕು ಅಂತ ನಿಮ್ಗೆ ಯಾವತ್ತೂ ಅನ್ನಿಸ್ಲಿಲ್ವಾ.  ಈ ಥರ ಎಲ್ಲ ನಿಮ್ಮಷ್ಟಕ್ಕೆ ನೀವೇ ಏಕಲವ್ಯ ವಿದ್ಯೆ ಪ್ರಾಪ್ತಿ ಮಾಡ್ಕೊಂಡ್ರಿ.

ಅನ್ನಿಸ್ತಿತ್ತು.  ಆದ್ರೆ ನಾನಲ್ಲಿ ಹಳ್ಳಿಯಲ್ಲಿ ಇರುವಾಗ ಅದ್ಕೊಂದು ಸೌಲಭ್ಯ ಇರ್ಲಿಲ್ಲ.  ಅಲ್ಲಿ ಕಲ್ಸಿ ಕೊಡ್ಲಿಕ್ಕೆ ಗುರುಗಳು ಯಾರೂ ಇರ್ಲಿಲ್ಲ.  ಆದ್ರೆ ಆ ಮೇಲೆ ನಾನು ಇಲ್ಲಿ P&Tಯಲ್ಲಿ ಕೆಲ್ಸಕ್ಕೆ ಸೇರಿದ್ಮೇಲೆ ಮಂಗಳೂರಿನ  ಕಲಾ ನಿಕೇತನದಲ್ಲಿ ಗೋಪಾಲಕೃಷ್ಣ ಐಯರ್ ಅವರ ಹತ್ರ ಸಂಗೀತದ ಅ ಆ ಇ, ಅಂದ್ರೆ grammer  ಕಲ್ತಿದ್ದೇನೆ. ಈ ವಿಚಾರದಲ್ಲಿ ನಂಗೊಂದು ಒಳ್ಳೆ ಅನುಭವ ಆಗಿದೆ.  ನಾನೊಮ್ಮೆ ಯಾವತ್ತೋ ಬೆಂಗಳೂರಿಗೆ ಹೋಗಿದ್ದಾಗ ಅಲ್ಲೊಂದು ಕೊಳಲು ತಗೊಳ್ಳಿಕ್ಕೆ ಹೋದೆ.  ಅಲ್ಲಿ ಅರುಣಾ ಮ್ಯೂಸಿಕಲ್ಸ್ ಅಂತ ಇದೆ.  ಕಸ್ತೂರಿ ಶಂಕರ್ ಅವರ ಭಾವನ ಅಂಗಡಿ ಅದು.  ಅಲ್ಲೊಂದು ಕೊಳಲು ತೆಕೊಂಡು ನಾನು ಹೆಚ್ಚೇನೂ ನುಡಿಸ್ಲಿಲ್ಲ.  ಒಂದು ಆಲಾಪ ತೆಗ್ದೆ, ಸಣ್ಣದು.  ಕೂಡ್ಲೆ ಅವ್ರು ಕೇಳಿದ್ರು ನಿಮ್ಮ ಗುರುಗಳು ಯಾರು ಅಂತ.  ನಾನು ಹೇಳಿದೆ ಗೋಪಾಲಕೃಷ್ಣ ಐಯರ್ ಅಂತ.  ಅವ್ರಿಗೆ congratulations ಹೇಳಿ ಅಂತಂದ್ರು.  ಅಂದ್ರೆ  ಗುರುಗಳು ನಂಗೆ ಹೇಳಿ ಕೊಟ್ಟಂಥ ಒಂದು ಬಾನಿ ಅಂತ ಹೇಳ್ತಾರಲ್ಲ,  ಶೈಲಿ,.  ಅದು ಕೇಳಿದ ತಕ್ಷಣ ಅವರಿಗೆ ಗೊತ್ತಾಯ್ತು ಬಹುಶಃ ಇವ್ರು ಗೋಪಾಲಕೃಷ್ಣ ಐಯರ್  ಶಿಷ್ಯ ಇರ್ಬೇಕು ಅಂತ. ಹಾಗೆ ಗುರುಗಳ ಹತ್ರ ಕಲ್ತ್ರೆ ಅದಕ್ಕೆ weight ಎಷ್ಟು ಜಾಸ್ತಿ ಇರ್ತದೆ ಅಂತ ನಂಗೆ ಆಗ ಗೊತ್ತಾಯ್ತು. 

ನೀವು ಸ್ವತಂತ್ರವಾಗಿ ವೇದಿಕೆಗಳಲ್ಲಿ ನುಡಿಸಿದ್ದು, ಪಕ್ಕ ವಾದ್ಯ ಕೊಟ್ಟದ್ದು ಹೀಗೆಲ್ಲ ಉಂಟಾ.

ಅದು ಇದೆ.  ಯಾಕಂದ್ರೆ ನಾನು ಕೊಳಲು ನುಡಿಸ್ತೇನೆ ಅಂತ ಗೊತ್ತಾದ್ಮೇಲೆ ಆಗಾಗ ನಂಗೆ ಕಾರ್ಯಕ್ರಮಗಳಿಗೆ ಕರೆ ಬರ್ಲಿಕ್ಕೆ ಶುರು ಆಯ್ತು. ಹೆಚ್ಚಾಗಿ ಭರತ ನಾಟ್ಯಕ್ಕೆ ನಾನು ಹಿನ್ನೆಲೆ ಸಂಗೀತಕ್ಕೆ ಹೋಗ್ತೇನೆ. ಆ ಮೇಲೆ ನನ್ನ ಇನ್ನೊಂದು ವಿಶೇಷ ಏನಂದ್ರೆ ಜ್ಯೂನಿಯರ್ ಶಂಕರ್ ಮತ್ತು  ಪ್ರೊಫೆಸರ್ ಶಂಕರ್ ಅವರ ಗಿಲಿ ಗಿಲಿ ಮ್ಯಾಜಿಕ್ ತಂಡ ಇದೆಯಲ್ಲ - ಅವರ ಒಂದು ಖಾಯಂ ಸದಸ್ಯ ನಾನು.   ಅವ್ರ orchestraದಲ್ಲಿ ನಮ್ಮ music ಇಲ್ದಿದ್ರೆ ಅವ್ರ magic ಆಗ್ಲಿಕ್ಕಿಲ್ಲ.  ಅವ್ರ magic ಸರಿಯಾಗಿ effective ಆಗ್ಬೇಕಿದ್ರೆ ನಮ್ಮ ತಂಡದ music ಬೇಕು.  ಆ musicನಲ್ಲಿ ಏನೇನೋ ಛಾಯೆಗಳು ಕಾಣ್ಬಹುದು ನಿಮ್ಗೆ, ಈ ಹಾಡು ನಾನು ಎಲ್ಲೋ ಕೇಳಿದ್ದೇನಲ್ವಾ ಅಂತ ಅನ್ನಿಸ್ಬಹುದು. ಆದ್ರೆ ಅದು ಹಾಡು ಆಗಿರೋದಿಲ್ಲ.  ಅಂಥ ಒಂದು special music.  ಅವ್ರ ಜೊತೆ ನಾನು ದೇಶ ವಿದೇಶದಲ್ಲೆಲ್ಲ ಸುತ್ತಾಡಿದ್ದೇನೆ.  ಹಾಗೆ ಹೋಗುವಾಗ ಕೆಲವೊಮ್ಮೆ trainನಲ್ಲಿ ಹೋಗ್ಬೇಕಾಗಿ ಬರ್ತದೆ.  ಆಗ ನಮ್ಮದೊಂದು mini orchestra ಅಲ್ಲಿ.  ನಂದು ಕೊಳಲು.  ನಮ್ಮ ತಂಡದ ಇತರ ಸದಸ್ಯರಿದ್ದೆಲ್ಲ ಕೈಗೆ ಸಿಕ್ಕಿದ ವಸ್ತು - ಅದು brief case ಇರ್ಬಹುದು, tumbler ಇರ್ಬಹುದು, ಅದ್ರಲ್ಲಿ ತಾಳ. ಹಾಗೆ ನಾವು orchestra ಮಾಡುವಾಗ ಆಚೆ ಕಡೆಯ ನಾಲ್ಕು ಬೋಗಿಯವ್ರು, ಈಚೆ ಕಡೆಯ ನಾಲ್ಕು ಬೋಗಿಯವ್ರು ನಮ್ಮ ಬೋಗಿಯಲ್ಲಿ ಜಮಾಯ್ಸಿದ ನೆನಪು ಈಗ್ಲೂ ನನ್ನಲ್ಲಿ ಹಚ್ಚ ಹಸಿರಾಗಿ ಉಂಟು.   



ಈಗ ನಾವು ಅನ್ನಪೂರ್ಣ ಚಿತ್ರದ ಈ ಒಂದು ಹಾಡು ಕೇಳಿದ್ವಲ್ಲ. ಅದು ಪಿ.ಬಿ.ಶ್ರೀನಿವಾಸ್ ಹಾಡಿದ್ದು.  ಚಿ.ಉದಯಶಂಕರ್ ರಚನೆ.  ಮ್ಯೂಸಿಕ್ ರಾಜನ್ ನಾಗೇಂದ್ರ.  ರಾಜನ್ ನಾಗೇಂದ್ರ ಅಂದ್ರೆ ನಮ್ಮ ಕನ್ನಡದ ಓ.ಪಿ.ನಯ್ಯರ್ ಅಂತ.  ಇದ್ರ ಇನ್ನೊಂದು ವಿಶೇಷ ಏನಂದ್ರೆ ಹೆಚ್ಚಾಗಿ ಹಿಂದಿ ಹಾಡುಗಳಲ್ಲಿ ಮುಖ್ಯ ಹಾಡು ಶುರು ಆಗೋದಕ್ಕೆ ಮೊದ್ಲು  ಈ ಶಾಯರಿ ಅಥವಾ ಶೇರ್ ಅಂತ ಎರಡು ಲೈನ್ ಹೇಳುವ ಪರಿಪಾಠ ಇತ್ತು.  ಈ ಕನ್ನಡ ಹಾಡಲ್ಲೂ ಅದು ಇದೆ ನೋಡಿ.  ಪರಿಪರಿಯ ಪರಿಮಳದಿ ಅತಿ ಶ್ರೇಷ್ಠವೆನಿಸಿಹುದು - ಆ ಥರ ಎರಡು ಲೈನ್ ಹೇಳಿ ಈ ಹಾಡು start ಆಯ್ತು.  ಉಗಾಭೋಗದ ತರ.  ಹಾಡಿನ ಬ್ಯೂಟಿ ಜಾಸ್ತಿ ಮಾಡ್ಲಿಕ್ಕದು.

ನಿಮ್ಮ ಮೇಲೆ ಯಾವ ಮಾಧ್ಯಮದ ಪ್ರಭಾವ ಹೆಚ್ಚು.

ಮಾಧ್ಯಮಗಳ ಬಗ್ಗೆ ಹೇಳ್ಬೇಕಿದ್ರೆ ಆಗ ನಮಗೆ ಇದ್ದದ್ದು ಒಂದೇ ಮಾಧ್ಯಮ ರೇಡಿಯೋ ಮಾತ್ರ.  ಈಗ ಬೇರೆ ಬೇರೆ ಬಂದಿರ್ಬಹುದು. ಆದ್ರೆ ಆಗ ರೇಡಿಯೋ.  ಈ ರೇಡಿಯೋ ಬಗ್ಗೆ ಹೇಳ್ಬೇಕಿದ್ರೆ,  ಕೆಲವ್ರಿಗೆ ಎಲೆ ಅಡಿಕೆ ತಿನ್ನೋದು, ಅಥವಾ ನಸ್ಯ ಎಳಿಯೋದು, ಸಿಗರೇಟ್ ಸೇದೋದು ಅಂಥ ಚಟ ಇರ್ತದಲ್ಲ. ನಂಗೆ ರೇಡಿಯೋ ಕೇಳುವ ಚಟ ಅಂತ ಹೇಳಿದ್ರೆ ತಪ್ಪಾಗ್ಲಿಕ್ಕಿಲ್ಲ. 

ಅಷ್ಟು ತೀವ್ರ ಆಸಕ್ತಿ.

ಒಂದು ಆರು ರೇಡಿಯೋ ಇದೆ ನಮ್ಮ ಮನೆಯಲ್ಲಿ.  ನಿಮ್ಗೆ ಕೇಳಿ ಆಶ್ಚರ್ಯ ಆಗ್ಲಿಕ್ಕಿಲ್ವಾ.  ಅಡಿಗೆ ಮನೆಯಲ್ಲೊಂದು ರೇಡಿಯೊ.  ನನ್ನ ದೊಡ್ಡ ಮ್ಯೂಸಿಕ್ ಸಿಸ್ಟಮ್ ಒಂದು ರೇಡಿಯೋ.  ಆ ಮೇಲೆ ನನ್ನ ಹಳೇ ಟೂ ಇನ್ ವನ್ ಒಂದು ರೇಡಿಯೊ.  ನಾನು ಮಲಗುವಾಗ ತಲೆದಿಂಬಿನ ಪಕ್ಕದಲ್ಲಿ ಇಟ್ಟುಕೊಳ್ಳಿಕ್ಕೆ ಒಂದು ರೇಡಿಯೋ.  ನಾನು ಎಲ್ಲಾದ್ರೂ ಹೋಗುವಾಗ ಜೊತೆಯಲ್ಲಿ ಕೊಂಡು ಹೋಗ್ಲಿಕ್ಕೆ ಒಂದು ಸಣ್ಣ ಪಾಕೇಟ್ ರೇಡಿಯೋ.  ಇತ್ಯಾದಿ.

80ರ ದಶಕದ ನಂತರ ಟಿ.ವಿ. ನೋಡುವ ಗೀಳು ಏನಾದ್ರೂ ಉಂಟಾ.

ನಾನು ಟಿವಿ. ನೋಡೋದು ಮಾತ್ರ  ಭಾರೀ ಕಮ್ಮಿ.  ನಾನು ಟಿ.ವಿ. ನೋಡ್ತೇನೆ. ಯಾಕೆ?  ಆ ಹಾಡುಗಳಿಗಾಗಿ ನಾನು ಟಿ.ವಿ. ನೋಡೋದು ಉಂಟು. ಕಣ್ಣು ಮುಚ್ಚಿ ನೋಡೋದು ಅಂದ್ರೂ ಆಗ್ಬಹುದು.  ನಾನು ಕೇಳೋದು ಮಾತ್ರ.   ಹಾಗೆ ಕೇಳೋದ್ರ ಜೊತೆಗೆ ಆ sound trackನ್ನು ಡೈರೆಕ್ಟ್ ಆಗಿ ನನ್ನ ಕಂಪ್ಯೂಟರಿಗೆ ಕನೆಕ್ಟ್ ಮಾಡಿ ರೆಕಾರ್ಡ್ ಮಾಡಿಕೊಳ್ಳುವ ವ್ಯವಸ್ಥೆ ಕೂಡ ನಾನು ಮಾಡ್ಕೊಂಡಿದ್ದೇನೆ.  ಈಗ ಕೆಲವು ಹಾಡು ಕೇಳಿದ್ರಲ್ಲ.  ಅದ್ರಲ್ಲಿ ಒಂದೆರಡು ಹಾಡು ಹಾಗೆ ಮಾಡಿದ್ದೂ ಇದೆ.

ನೀವು ರೇಡಿಯೋದ ಅನೇಕ ಸ್ಟೇಶನ್‌ಗಳನ್ನು ಕೇಳಿರ್ಬಹುದಲ್ಲ.

ರೇಡಿಯೋ ಸ್ಟೇಶನ್‌ಗಳ ಬಗ್ಗೆ ನೀವು ಕೇಳಿದ್ರಲ್ಲ.  ಆಗ ನಂಗೆ ನೆನ್ಪಾಗ್ತದೆ.  ಆಗ್ಲೇ ಹೇಳಿದ ಹಾಗೆ ನಮ್ಮ ದೊಡ್ಡ ಅಣ್ಣ ರೇಡಿಯೊ ತಂದ್ರು, ಇನ್ನೊಬ್ರು ಅಣ್ಣ ದೊಡ್ಡ antenna ಹಾಕ್ಕೊಟ್ರು, ನಾನು ನಮ್ಮ ಮನೆಯ ರೆಡಿಯೋ ಆಪರೇಟರ್.  ಯಾವ ಸ್ಟೇಶನಲ್ಲಿ ಎಷ್ಟು ಹೊತ್ತಿಗೆ ಯಾವ ಉತ್ತಮ ಕಾರ್ಯಕ್ರಮ ಬರ್ತದೆ ಅಂತ ನನ್ನ finger tipsಲ್ಲಿ. ಅದ್ರಲ್ಲಿ ಬೆಂಗಳೂರು, ಭದ್ರಾವತಿ ಆಗ ಮುಖ್ಯ ಕನ್ನಡ ಕೇಳ್ಳಿಕ್ಕೆ.  ಆ ಮೇಲೆ ವಾರಕ್ಕೊಮ್ಮೆ ಇರುವಂಥ ಕಾರ್ಯಕ್ರಮ ಕೊಡುವ ಕೆಲವು ಸ್ಟೇಶನ್ ಇತ್ತು.  ಉದಾಹರಣೆಗೆ ಮದ್ರಾಸ್ ಸ್ಟೇಶನ್ನಿನಿಂದ Sunday ಮಧ್ಯಾಹ್ನ 12 ಗಂಟೆಗೆ ಹೂ ಮಳೆ ಅಂತ ಒಂದು ಕಾರ್ಯಕ್ರಮ ಬರೋದು.  ಅದು ನಾನು ಕೇಳ್ತಿದ್ದೆ.  ಆ ಮೇಲೆ ಮುಂಬಯಿ A ಕೇಂದ್ರದಲ್ಲಿ ಸಾಪ್ತಾಹಿಕ ಕಾರ್ಯಕ್ರಮ ಇರ್ತಾ ಇತ್ತು ಶನಿವಾರ, ಏಳು ಕಾಲರಿಂದ ಏಳು ಮುಕ್ಕಾಲರ ವರೆಗೆ.  ಅದ್ರಲ್ಲಿ ಒಂದು ವಿಶೇಷ ಇದೆ.  ಆಗ ನಮ್ಗೆ ಯಕ್ಷಗಾನ ಕೇಳ್ಳಿಕ್ಕೆಲ್ಲ ಸಿಗೋದಿಲ್ಲ ರೇಡಿಯೊದಲ್ಲಿ.  ಈಗ ನಿಮ್ಮಲ್ಲಿಂದ ಸಾಕಷ್ಟು ಪ್ರಸಾರ ಆಗ್ತಾ ಇದೆ, ವಾರ ವಾರ ಹೋಗ್ತಾ ಇದೆ.  ಆಗ ಯಾವಾಗಾದ್ರೊಮ್ಮೆ ಅಲ್ಲಿ ಮುಂಬಯಿಯವ್ರು ಸೇರಿ ಒಂದು ಯಕ್ಷಗಾನ ಮಾಡಿದ್ರೆ  ನಮ್ಗೆಲ್ಲ ಒಂದು ಥ್ರಿಲ್. ರೇಡಿಯೋದಲ್ಲಿ ಚಂಡೆ ಶಬ್ದ ಕೇಳೋದು ಅಂತ.  ಆಗ ಗಣೇಶ ವಿಜಯವೋ ಎಂಥದೋ ಒಂದು ಯಕ್ಷಗಾನ ಬಂದಿತ್ತು, ಚೌತಿ ದಿವಸ.  ಆ ಮೇಲೆ ನಮ್ಮ ಅಣ್ಣ ಆ ಸ್ಟೇಶನಿಗೆ ಒಂದು ಹೆಸ್ರೇ ಕೊಟ್ಟು ಬಿಟ್ಟಿದ್ರು - ಇದು ಯಕ್ಷಗಾನದ ಮುಂಬಯಿ ಕೇಂದ್ರ ಅಂತ.  ಇವತ್ತು ಯಕ್ಷಗಾನದ ಮುಂಬಯಿ ಸ್ಟೇಶನ್ ಹಾಕೋ ಅಂತ ಹೇಳೋದು ಅವ್ರು ಶನಿವಾರ ಯಾವಾಗ್ಲೂ.   ಆ ಥರ ಬೇರೆ ಬೇರೆ ಸ್ಟೇಶನ್ ನಾನು ಕೇಳಿಸ್ತಾ ಇದ್ದೆ.



ಈಗ ನಾವು ಕೇಳಿದ್ದು ತುಮ್ಸೆ ಅಚ್ಛಾ ಕೌನ್ ಹೈ ಚಿತ್ರದ ಹಾಡು.  ಇದನ್ನು ಹಾಡಿದ್ದು ನನ್ನ ಮೆಚ್ಚಿನ ಗಾಯಕ ರಫಿ.  ಇನ್ನೊಬ್ರು ನನ್ನ ಮೆಚ್ಚಿನ ಗಾಯಕ ನಮ್ಮ ಕನ್ನಡದ ಪಿ.ಬಿ.ಶ್ರೀನಿವಾಸ್.  ಈ ಹಾಡಿನ ಬಗ್ಗೆ ಇನ್ನೊಂದೆರಡು ಮುಖ್ಯ ವಿಷಯ ಹೇಳ್ಳಿಕ್ಕಿದೆ.  ಇದು ಶಂಕರ್ ಜೈಕಿಶನ್ ಸಂಗೀತ.  ಆಗ  ಹಿಂದಿ ಇಂಡಸ್ಟ್ರಿಯಲ್ಲಿ ಕೆಲವು ಅಲಿಖಿತ ನಿಯಮಗಳಿರ್ತಿತ್ತು.  ಶಂಕರ್ ಜೈಕಿಶನ್ ಸಂಗೀತ ಇದ್ರೆ  ಹಸರತ್ ಜೈಪುರಿ - ಶೈಲೇಂದ್ರ ಹಾಡು ಬರೀಬೇಕು - ಹಾಗೆಲ್ಲ ಒಂದು ಅಲಿಖಿತ ನಿಯಮ.  ಆದ್ರೆ ಈ ಹಾಡು ಆಗ್ಲಿಕ್ಕಾಗುವಾಗ ಆ ನಿಯಮಗಳು ಮುರೀತಾ ಬಂದಿದ್ವು. ಅದಕ್ಕೆ ಇದೊಂದು ಉದಾಹರಣೆ. ಇದನ್ನು ಬರೆದವ್ರು ರಾಜೇಂದ್ರ ಕೃಷ್ಣ.  ಇನ್ನೊಂದು ಇದ್ರ speciality ಅಂದ್ರೆ ಶಮ್ಮಿ ಕಪೂರ್ ಸ್ಟೈಲಿನ ಹಾಡು ಇದು.  ದೇಶ ಭಕ್ತಿ ಆದ್ರೂ ಶಮ್ಮಿ ಕಪೂರ್ ಸ್ಟೈಲಿನ ದೇಶ ಭಕ್ತಿ.  ಶಮ್ಮಿ ಕಪೂರ್ ಬಗ್ಗೆ ಇನ್ನೊಂದು ನಾವು ಏನು ತಿಳ್ಕೊಳ್ಬೇಕು ಅಂದ್ರೆ - ಕೆಲವು ಸಲ ದೃಶ್ಯ ಮಾಧ್ಯಮದಲ್ಲಿ  ಯಾವ್ದಾದ್ರೂ ಹಾಡು ನೋಡಿದಾಗ ಅಯ್ಯೋ ಈ ಹಾಡು ಕೆಡ್ಸಿ ಬಿಟ್ರಲ್ಲಪ್ಪಾ ಅಂತ ಬೇಜಾರಾಗೋದೂ ಇದೆ.  ಆದ್ರೆ ಶಮ್ಮಿ ಕಪೂರ್ ವಿಷಯದಲ್ಲಿ ಹಾಗಲ್ಲ.  ಅವ್ರ ಹಾಡನ್ನು ನಾವು ಟಿ.ವಿ.ಯಲ್ಲೋ ಪಿಕ್ಚರಲ್ಲೋ ನೋಡಿದ್ರೆ ಆ ಹಾಡಿನ ಮೌಲ್ಯ ವರ್ಧನೆ ಆಗ್ತದೆ.  ಮೌಲ್ಯ ವರ್ಧಿತ ಹಾಡಾಗ್ತದೆ ಅದು. 

ಕಾಕತ್ಕರ್ ಅವರೆ, ನಿಮ್ಮ ವೈವಿಧ್ಯಮಯವಾದ ಅನೇಕ ವಿವರಗಳನ್ನು ಕೊಟ್ರಿ.  ಈಗ ಸಂಗೀತದ ಹಾಗೇನೇ, ಕಂಪ್ಯೂಟರಿನ ಹಾಗೇನೇ ಇನ್ನಿತರ ಹವ್ಯಾಸಗಳೇನಾದ್ರೂ ಇವೆಯೇ ನಿಮಗೆ.

ಹಾಗೆ ಸಣ್ಣ ಪುಟ್ಟ ಬೇರೆ ಬೇರೆ ಹವ್ಯಾಸ ಇದ್ದೇ ಇದೆ. ಅದ್ರಲ್ಲಿ ಒಂದು ಪತ್ರಿಕೆಗಳಿಗೆ ಸಣ್ನ ಸಣ್ಣ ಲೇಖನ ಏನಾದ್ರೂ ಬರಿಯೋದು.  ತಾಂತ್ರಿಕ ವಿಷಯ ಇರ್ಬಹುದು ಅಥವಾ ಸಾರ್ವಜನಿಕ ಆಸಕ್ತಿಯ ವಿಷಯ ಇರ್ಬಹುದು.  ಮೊನ್ನೆ ಮೊನ್ನೆ ಕೆಲವ್ರೆಲ್ಲ ಗಮನಿಸಿರ್ಬಹುದು - ಒಂದು ಹಳೆ ಹಾಡಿನ ಬಗ್ಗೆ ನಾನೊಂದು ಪುಟ್ಟ ಲೇಖನ ಬರ್ದಿದ್ದೆ.  ಜಗನ್ಮೋಹಿನಿ ಚಿತ್ರದ್ದು - ಎಂದೋ ಎಂದೋ ನಿನ್ನ ದರುಶನ -  ಆ ಹಾಡು ಈಗ ಸಿಗ್ತಾ ಇಲ್ಲ, ನನಗದ್ರ nostalgia ಬರ್ತಾ ಇದೆ ಅಂತೆಲ್ಲ ಬರ್ದಿದ್ದೆ.  ಹೀಗೆ ಬರಿಯೋದ್ರಲ್ಲಿ ಎರಡು ಉದ್ದೇಶ ಇದೆ ನನ್ನದು.  ಒಂದು ನಾನು ಹೇಳ್ಬೇಕಾದ್ದನ್ನು ಹೇಳೋದು.  ಇನ್ನೊಂದು ನನ್ನ ಸಹಪಾಠಿಗಳಾಗ್ಲಿ, ಸ್ನೇಹಿತರಾಗ್ಲಿ ಎಲ್ಲೋ ಇರ್ತಾರೆ. ಇಂಥ ಪತ್ರಗಳ ಜೊತೆಗೆ ನನ್ನ ಹೆಸ್ರು ನೋಡಿದ್ರೆ ಅವ್ರಿಗೆ ನೆನ್ಪಾಗ್ತದೆ - ಹ್ಞಾ, ನನ್ನ ಕ್ಲಾಸ್‌ಮೇಟ್ ಇವನು ಅಂತ.  ಹೀಗೆ ನೆನಪನ್ನ refresh ಮಾಡ್ಲಿಕ್ಕೆ ನಂದೊಂದು ಸಾಧನ ಇದು ಅಂತ ತಿಳ್ಕೊಂಡಿದ್ದೇನೆ.



ಈ ಹಾಡು ವಿಜಯ ನಗರದ ವೀರ ಪುತ್ರ ಚಿತ್ರದ್ದು.  ಸಾಮಾನ್ಯವಾಗಿ ಎಲ್ರೂ ಇಷ್ಟಪಡೋದು ವಿಜಯ ನಗರದ ವೀರ ಪುತ್ರ ಅಂದ ಕೂಡ್ಲೆ  ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು.  ಈ ಹಾಡನ್ನು ನೀವು ಯಾಕೆ ಹೆಚ್ಚು ಇಷ್ಟ ಪಡ್ತೀರಿ.

ಅದು ನನ್ನ speciality. ಇತರರು ಮಾಡದ ರೀತಿ ಏನಾದ್ರೂ ಒಂದು ಹೊಸತು ಮಾಡೋದು ನನ್ನ ಹವ್ಯಾಸ.  ಇದು ಕೂಡ ಹಾಗೇ.  ಈ ಹಾಡು ಹಾಡಿದ್ದು ಪಿ.ಸುಶೀಲ ಒಬ್ರು.  ಅವರ ಜೊತೆಗೆ ಮನಮೋಹನ ಠಾಕೂರ್ ಅಂತ ಓರ್ವರು.  ಬಹುಶಃ ಅವರ ಜೀವನದಲ್ಲಿ ಅವ್ರು ಈ ಒಂದೇ ಹಾಡು ಹಾಡಿದ್ದು ಅಂತ ಅನ್ನಿಸ್ತದೆ.  ವಿಶ್ವನಾಥನ್ ರಾಮಮೂರ್ತಿ - ಅವ್ರು ತಮಿಳಿನ ಶಂಕರ್ ಜೈಕಿಶನ್.  ಜಿ.ಕೆ.ವೆಂಕಟೇಶ್ ಹೇಗೆ ನಮ್ಮ ಶಂಕರ್ ಜೈಕಿಶನ್ನೋ ಹಾಗೆ ಅವ್ರು ತಮಿಳಿನ ಶಂಕರ್ ಜೈಕಿಶನ್.  ತಮಿಳಲ್ಲಿ ಅವರ ಹಾಡುಗಳು ಮಾತ್ರ ಅದ್ಭುತ.  ಪಿ.ಬಿ.ಶ್ರೀನಿವಾಸ್ ಹಾಡಿದ್ದು ಕೆಲವು ಹಾಡಿದೆ.  ಉದಾಹರಣೆಗೆ - ನಿನೈಪದೆಲ್ಲಾಂ ನಡಂದುವಿಟ್ಟಾಲ್ ದೈವಂ ಏದುಮಿಲ್ಲೈ ನಡಂದದಯೇ ನಿನೈತಿರುಂದಾಲ್ ಅಮೈದಿ ಎಂಡ್ರುಮಿಲ್ಲೈ. ಇಂಥ ಹಾಡೆಲ್ಲ ಇದೆ. ನಾನು ಈ ಬೇರೆ ಬೇರೆ ಭಾಷೆಯ ಹಾಡು ಸ್ವಲ್ಪ ಸ್ವಲ್ಪ ಯಾಕೆ ಕಲ್ತುಕೊಳ್ತೇನೆ ಅಂದ್ರೆ ನಮ್ಮ ಇಲಾಖೆಯ training ಇತ್ಯಾದಿಗಾಗಿ ಬೇರೆ ಕಡೆಗೆಲ್ಲ ಹೋಗ್ಲಿಕ್ಕಿರ್ತದೆ ಒಮ್ಮೊಮ್ಮೆ.  ಆಗ ಬೇರೆ ಬೇರೆ ರಾಜ್ಯಗಳಿಂದ ನನ್ನ ಸ್ನೇಹಿತ್ರೆಲ್ಲ ಬರ್ತಾರೆ.  ಅವ್ರ ಮುಂದೆ ಈ ಒಂದು ಸಣ್ಣ ಹಾಡು ಹಾಡಿದ್ರೆ ಅವ್ರಿಗೊಂದು ಥ್ರಿಲ್ ಆಗಿ ಬಿಡ್ತದೆ - ಕರ್ನಾಟಕದವನಾಗಿ ಇವ್ನು ತಮಿಳು ಹಾಡು ಹಾಡ್ತಾನೆ ಅಂತ. 

ಚಿದಂಬರ ಅವರೇ.  ಕೊನೆ ಹಂತಕ್ಕೆ ಬಂದಿದ್ದೇವೆ.  ಆದ್ರೆ ಒಂದು ಪ್ರಶ್ನೆ ಕೇಳದೆ ಗತ್ಯಂತರ ಇಲ್ಲ.  ಹೌದು, ನೀವು ಇಷ್ಟು ವಿವರಗಳನ್ನ ಹೇಗೆ ನೆನ್ಪಿಟ್ಟುಕೊಂಡಿರ್ತೀರಿ. ನಾವೂ ಎಲ್ಲ ಪದ್ಯಗಳನ್ನ ಬಾಲ್ಯದಲ್ಲಿ ಕೇಳಿರ್ತೀವಿ.  ಆದ್ರೆ ಇಂಥವ್ರ ರಚನೆ, ಇಂಥವ್ರ ಸಂಗೀತ, ಇಂಥವ್ರು ಹಾಡಿದ್ದು , ಇದು ಮೊದಲಿನ ಹಾಡು, ಅದ್ರ ಬಗ್ಗೆ ಇನ್ಯಾರೋ ಹಿಂದಿಯವ್ರು ಹೀಗೆ ಹೇಳಿದ್ರು - ಇಷ್ಟೆಲ್ಲ ಹೇಗೆ ನೆನ್ಪಿಟ್ಟುಕೊಳ್ಯೀರಿ.

ಇದು ನಾನು ಕಲಿಬೇಕೂಂತ ಬರ್ದಾಗ್ಲೀ, ಓದಿ ಆಗ್ಲೀ ಕಲೀಲಿಲ್ಲ.  ಅದು ನನ್ನ ಮನಸ್ಸಿನ ಆಳಕ್ಕೆ ಹೋಗಿದೆ ಆಗ್ಲೇ ,ಕೇಳುವಾಗ್ಲೇ.  ಅಲ್ಲಿ ರೆಕಾರ್ಡ್ ಆಗಿಬಿಟ್ಟಿದೆ ಅದು.  ನೀವು ಈಗ ಈ ಹಾಡೆಲ್ಲ ಹೇಗೆ ಕಂಪ್ಯೂಟರಲ್ಲಿ retrieve ಮಾಡಿದ್ರಿ, ಹಾಗೆ ಒಂದು pulse ಕೊಟ್ಟ ತಕ್ಷಣ automatic ಬಂದು ಬಿಡ್ತದೆ  ಅದು. 

ಅಂದ್ರೆ ನಿಮ್ಮ ಕಂಪ್ಯೂಟರ್ ಬಹಳ ಸುಸ್ಥಿತಿಯಲ್ಲಿದೆ ಅಂತ ಆಯ್ತು.

ಇಷ್ಟರ ವರೆಗೆ ಇದೆ ದೇವರ ದಯದಿಂದ. 

ನಾವು ಕಾರ್ಯಕ್ರಮದ ಕೊನೆಯ ಹಂತಕ್ಕೆ ಬಂದು ನಿಂತಿದ್ದೇವೆ.  ಈ ಬದುಕಿನಲ್ಲಿ ಪ್ರತೀಯೊಬ್ರಿಗೆ ಒಂದಲ್ಲ ಒಂದು ಹುಚ್ಚು - ಅಂದ್ರೆ ತೀವ್ರವಾದ ಸೆಳೆತ ಇದ್ದೇ ಇರ್ತದೆ.  ಕೆಲವು ಜೀವನ್ಮುಖಿಯಾಗಿ ಅವರನ್ನು ಎತ್ತರಕ್ಕೆ ಕೊಂಡೊಯ್ತದೆ.  ಇನ್ನು ಕೆಲವು ಬದುಕನ್ನು ರಾಡಿಗೊಳಿಸಿ ಪ್ರಪಾತಕ್ಕಿಳಿಸ್ತದೆ. ಜೀವನ್ಮುಖಿಯಾದ ಮೃದು ಮಧುರ ಆಸಕ್ತಿಯನ್ನು ಬೆಳೆಸಿಕೊಂಡಿರುವ ಚಿದಂಬರ ಕಾಕತ್ಕರ್ ಅವರ ಜೀವನೋತ್ಸಾಹ ಎಂದಿಗೂ ಕುಂದದಿರಲಿ ಅನ್ನುವುದು ಆಕಾಶವಾಣಿಯ ಮತ್ತು ನಮ್ಮ ಕೇಳುಗರ ಹಾರೈಕೆ.

********

ಕಾರ್ಯಕ್ರಮವನ್ನು ಮೆಚ್ಚಿದ ಕೇಳುಗರಿಂದ ಬಂದ ಕೆಲವು ಪತ್ರಗಳು.








Monday 7 August 2017

ರಿಟೈರ್ ಆಗದ ಸ್ಕೂಲ್ ಮಾಸ್ಟರ್ ಸಂಗೀತ


ನಿಜ ಜೀವನದಲ್ಲಿ ಸ್ವಲ್ಪ ಕಾಲ ಅಧ್ಯಾಪಕರಾಗಿ ಕೆಲಸ ಮಾಡಿ ಪಂತುಲು ಎಂಬ ಗೌರವ ಸೂಚಕ ಪದವನ್ನು ಬಡಗೂರು ರಾಮಕೃಷ್ಣ ಎಂಬ ತನ್ನ ಹೆಸರಿಗೆ ಶಾಶ್ವತವಾಗಿ ಅಂಟಿಸಿಕೊಂಡ ಬಿ.ಆರ್. ಪಂತುಲು ನಿರ್ಮಿಸಿ ತಾನೇ ಮುಖ್ಯ ಪಾತ್ರದಲ್ಲಿ ನಟಿಸಿದ   ಸ್ಕೂಲ್ ಮಾಸ್ಟರ್ 1958ರಲ್ಲಿ ಬಿಡುಗಡೆ ಆಗಿ ಜಯಭೇರಿ ಬಾರಿಸಿದ ಚಿತ್ರ.  ಅವರ ಜೊತೆ ಎಂ.ವಿ. ರಾಜಮ್ಮ, ಉದಯಕುಮಾರ್, ಸೂರ್ಯಕುಮಾರ್, ಬಾಲಕೃಷ್ಣ, ನರಸಿಂಹರಾಜು, ಡಿಕ್ಕಿ ಮಾಧವ ರಾವ್, ಬಿ.ಸರೋಜಾದೇವಿ, ಸಾಹುಕಾರ್ ಜಾನಕಿ ಮುಂತಾದವರು ತಾರಾಗಣದಲ್ಲಿದ್ದರು. ಶಿವಾಜಿ ಗಣೇಶನ್ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದರು. ದಕ್ಷಿಣ ಭಾರತ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದ ಪಂತುಲು ಈ ಚಿತ್ರವನ್ನು  ತಮಿಳು ಭಾಷೆಯಲ್ಲಿ ಎಂಗಳ್ ಕುಟುಂಬಮ್ ಪೆರಿಸು ಎಂಬ ಹೆಸರಲ್ಲಿ ಹಾಗೂ ಹಿಂದಿಯಲ್ಲಿ ಸ್ಕೂಲ್ ಮಾಸ್ಟರ್ ಹೆಸರಲ್ಲೇ ಮರು ನಿರ್ಮಿಸಿದರು. ತೆಲುಗಿಗೆ ಈ ಚಿತ್ರ ನೇರವಾಗಿ ಡಬ್ ಆಗಿತ್ತು. ತಮಿಳು ಮತ್ತು ತೆಲುಗಲ್ಲಿ ಎಲ್ಲ ಹಾಡುಗಳು ಮೂಲ ಕನ್ನಡ ಧಾಟಿಯಲ್ಲೇ ಇದ್ದವು.  ಆದರೆ ಕನ್ನಡದಲ್ಲಿ ಟಿ.ಜಿ. ಲಿಂಗಪ್ಪ ಸ್ವತಃ ಹಾಡಿದ್ದ ಹಾಡುಗಳನ್ನು ತೆಲುಗಲ್ಲಿ ಎ. ಎಂ. ರಾಜಾ ಹಾಗೂ ಪಿ.ಬಿ.ಶ್ರೀನಿವಾಸ್ ಮತ್ತು ತಮಿಳಲ್ಲಿ ಟಿ.ಎಂ. ಸೌಂದರರಾಜನ್ ಹಾಡಿದ್ದರು. ಹಿಂದಿಯಲ್ಲಿ ವಸಂತ ದೇಸಾಯಿ ಸ್ವತಂತ್ರವಾಗಿ ರಾಗ ಸಂಯೋಜಿಸಿದರು.   ಕೆಲವು ವರ್ಷಗಳ ನಂತರ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಈ ಚಿತ್ರದ ಮಲಯಾಳಂ ಆವೃತ್ತಿ ತೆರೆ ಕಂಡಿತು. 70ರ ದಶಕದಲ್ಲಿ ಇದೇ ಹೆಸರಿನಲ್ಲಿ ತಯಾರಾದ ಚಿತ್ರದಲ್ಲಿ ಎನ್.ಟಿ. ರಾಮರಾವ್ ನಟಿಸಿದ್ದರು. ಇತ್ತೀಚಿನ ಬಾಗ್‌ಬಾನ್ ಚಿತ್ರ ಇದೇ ಕಥೆಯ ಎಳೆಯನ್ನು ಹೊಂದಿತ್ತು.  ಬಾಗ್‌ಬಾನ್ ಮತ್ತೆ ಈ ಬಂಧನ ಎಂಬ ಹೆಸರಲ್ಲಿ ಕನ್ನಡಕ್ಕೆ ಬಂದು ವೃತ್ತ ಪೂರ್ಣಗೊಳಿಸಿತು.  ಇವೆಲ್ಲಕ್ಕೆ ಮೂಲ ಕುಸುಮಾಗ್ರಜ ಕಾವ್ಯನಾಮದ ವಿ.ವಿ. ಶಿರ್ವಾಡ್‌ಕರ್ ಎಂಬವರು ಮರಾಠಿಯಲ್ಲಿ ಬರೆದ ವೈಷ್ಣವಿ ಎಂಬ ಕಥೆ.  ಈ ಬಗ್ಗೆ ಸ್ಕೂಲ್ ಮಾಸ್ಟರ್ ಚಿತ್ರದ ಟೈಟಲ್‌ನಲ್ಲಿ ಉಲ್ಲೇಖ ಇದೆ. 1954ರ ಮರಾಠಿ ಚಿತ್ರ  ಊನ್ ಪಾವುಸ್ ಕೂಡ ಇದನ್ನೇ ಹೋಲುವ ಕಥೆ ಹೊಂದಿತ್ತು. 1937ರ  Make Way for Tomorrow  ಎಂಬ ಇಂಗ್ಲಿಷ್ ಚಿತ್ರ ಕೂಡ ಮಕ್ಕಳು ಹೆತ್ತವರನ್ನು ದೂರ ಮಾಡುವ ಸಮಸ್ಯೆಯನ್ನು ಕುರಿತಾಗಿತ್ತು ಎನ್ನಲಾಗಿದೆ.

ಆಂಗ್ಲ ಶೀರ್ಷಿಕೆ ಹೊಂದಿದ ಮೊದಲ ಕನ್ನಡ ಚಿತ್ರ ಇದು. ದಕ್ಷಿಣ ಕನ್ನಡ ಭಾಗದಲ್ಲಿ ಅಧ್ಯಾಪಕರನ್ನು ಮಾಸ್ಟ್ರು ಎನ್ನುವ ರೂಢಿ ಇದೆಯಾದರೂ ಸ್ಟೇಷನ್ ಮಾಸ್ಟರ್, ಪೋಸ್ಟ್ ಮಾಸ್ಟರ್‌ಗಳಂತೆ ಸ್ಕೂಲ್ ಮಾಸ್ಟರ್ ಪದದ ಬಳಕೆ ಇಲ್ಲವೆನ್ನುವಷ್ಟು ಕಮ್ಮಿ. ಬಯಲು ಸೀಮೆಯಲ್ಲಂತೂ ಮೇಷ್ಟ್ರು ಅನ್ನುವುದೇ ಹೆಚ್ಚು. ಚಿತ್ರದಲ್ಲೂ ಮೇಷ್ಟ್ರು ಎಂಬ ಉಲ್ಲೇಖವೇ ಇರುವುದು. ಶಾಲಾ ಮೇಷ್ಟ್ರು, ಉಪಾಧ್ಯಾಯ, ಅಧ್ಯಾಪಕ ಇತ್ಯಾದಿಗಳಿಗಿಂತ ಸ್ಕೂಲ್ ಮಾಸ್ಟರ್ ಅನ್ನುವ ಶೀರ್ಷಿಕೆ ಆಕರ್ಷಕ ಅನ್ನಿಸಿದ್ದರಿಂದ ಅದನ್ನೇ ಆಯ್ಕೆ ಮಾಡಿದರೋ ಏನೋ.

ಶಾಲೆಗಳಲ್ಲಿ ಮತ್ತು ಇತರೆಡೆ 16mm ಪ್ರೊಜೆಕ್ಟರ್ ಮೂಲಕ ಈ ಚಿತ್ರದ  ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು. 70ರ ದಶಕದಲ್ಲಿ ಬೆಂಗಳೂರಿನ MNK ಪಾರ್ಕಿನಲ್ಲಿ ಇಂತಹ ಒಂದು ಪ್ರದರ್ಶನ ನಾನು ನೋಡಿದ್ದೇನೆ.  

ಆಗಿನ್ನೂ ಶೈಶವಾವಸ್ಥೆಯಲ್ಲಿದ್ದ  ಕನ್ನಡ ಚಿತ್ರ ಸಂಗೀತವನ್ನು ahead of time ಅನ್ನಿಸುವಂಥ ರಾಗ ಸಂಯೋಜನೆ ಮತ್ತು  orchestration ಮೂಲಕ ಉನ್ನತ ಮಟ್ಟಕ್ಕೊಯ್ದು ಕನ್ನಡದವರು ಯಾರಿಗೂ ಕಮ್ಮಿ ಇಲ್ಲ ಎಂದು ಸಾಬೀತು ಪಡಿಸಿದವರು ಈ ಚಿತ್ರದ ಸಂಗೀತ ನಿರ್ದೇಶಕ ಟಿ.ಜಿ.ಲಿಂಗಪ್ಪ. ಇದರಲ್ಲಿ ಅವರು ಮೂರು ಹಾಡುಗಳನ್ನೂ ಸ್ವತಃ ಹಾಡಿದ್ದೂ ಒಂದು ವಿಶೇಷ.   ಅವರು ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ಎಲ್ಲ ಕನ್ನಡ ಚಿತ್ರಗಳಿಗೂ ಸಂಗೀತ ನೀಡಿ ದಾಖಲೆ ನಿರ್ಮಿಸಿದವರೂ ಹೌದು.  ಪಂತುಲು ಅವರ ನಿಧನದ ಬಳಿಕ ಅವರ ಶಿಷ್ಯ ಪುಟ್ಟಣ್ಣ ಕಣಗಾಲ್  ತನ್ನ ಗುರುವಿಗಾಗಿ ನಿರ್ದೇಶಿಸಿದ ಕಾಲೇಜು ರಂಗ ಚಿತ್ರಕ್ಕೂ ಲಿಂಗಪ್ಪ ಅವರನ್ನೇ ಬಳಸಿಕೊಂಡು ಆ ದಾಖಲೆಯನ್ನು ಮತ್ತೂ ಒಂದು ಹೆಜ್ಜೆ ಮುಂದಕ್ಕೊಯ್ದರು.  ಕನ್ನಡ ಮಾತ್ರವಲ್ಲ, ಬೇರೆ ಯಾವ ಭಾಷೆಯ ಚಿತ್ರರಂಗದಲ್ಲೂ ಒಂದು ಸಂಸ್ಥೆ ತನ್ನ ಸಂಗೀತ ನಿರ್ದೇಶಕನಿಗೆ ಇಷ್ಟು ನಿಷ್ಠೆ ತೋರಿಸಿದ ಉದಾಹರಣೆ ಸಿಗುವುದು ಕಷ್ಟ. ತನ್ನ ಚಿತ್ರಗಳ ಯಶಸ್ಸಿನ ಬಹು ದೊಡ್ಡ ಪಾಲುದಾರರಾಗಿರುತ್ತಿದ್ದ ಶಂಕರ್ ಜೈಕಿಶನ್ ಅವರನ್ನೂ  ಕಲ್ ಆಜ್ ಔರ್ ಕಲ್ ನಂತರ  ರಾಜ ಕಪೂರ್ ಕೈ ಬಿಡಲಿಲ್ಲವೇ?  

ಈ ಚಿತ್ರದಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿ ರಚಿಸಿದ ಒಟ್ಟು ಒಂಬತ್ತು ಹಾಡುಗಳಿದ್ದು ಅವುಗಳ ಪೈಕಿ ಎಂಟು ಹಾಡುಗಳು ಸಾಹಿತ್ಯ ಸಮೇತ ಇಲ್ಲಿವೆ.  ಚಿಕ್ಕಂದಿನಲ್ಲಿ ನಾವು ದೇವರ ಪೂಜೆಗಾಗಿ ಹೂ ಕೊಯ್ಯುವಾಗ ಗಿಡದಲ್ಲಿ ಸೂರ್ಯನಿಗಾಗಿ ಕನಿಷ್ಠ ಒಂದನ್ನಾದರೂ ಉಳಿಸಬೇಕೆಂದು ಹಿರಿಯರು ಹೇಳುತ್ತಿದ್ದರು.  ಹಾಗಾಗಿ ಈ ಸಲ ಒಂದು ಹಾಡನ್ನು  ಉಳಿಸಿದ್ದೇನೆ!

ಸ್ವಾಮಿ ದೇವನೆ ಲೋಕಪಾಲನೆ

ಇದರ ಪಲ್ಲವಿ ಮತ್ತು ‘ಕರಚರಣ ಕೃತಂ ವಾ ಮಾನಸಂವಾಪರಾಧಂ ವಿಹಿತಮವಿಹಿತಂ ವಾ ಸರ್ವಮೇತಂ ಕ್ಷಮಸ್ವ’ ಎಂಬ ಕ್ಷಮಾಪಣಾ ಶ್ಲೋಕದ ಸರಳ ಭಾವಾನುವಾದದಂತಿರುವ ಒಂದು ಚರಣವನ್ನು ಮಾತ್ರ ಸೋಸಲೆ ಅಯ್ಯ ಶಾಸ್ತ್ರಿ ಅವರ ರಚನೆಯಿಂದ ಆಯ್ದುಕೊಳ್ಳಲಾಗಿದ್ದು ಎರಡನೇ ಚರಣವನ್ನು ಪ್ರಭಾಕರ ಶಾಸ್ತ್ರಿಗಳು ಸೇರಿಸಿದ್ದಾರೆ.  ಬಹಳಷ್ಟು ವರ್ಷ ಇದು ಅನೇಕ ಶಾಲೆಗಳಲ್ಲಿ ಪ್ರಾರ್ಥನಾರೂಪದಲ್ಲಿ ಹಾಡಲ್ಪಡುತ್ತಿತ್ತು. ಎ.ಪಿ.ಕೋಮಲ, ರಾಣಿ ಮತ್ತಿತರರೊಂದಿಗೆ ಸಂಗೀತ ನಿರ್ದೇಶಕ ಟಿ.ಜಿ.ಲಿಂಗಪ್ಪ  ಸ್ವತಃ ದನಿಗೂಡಿಸಿದ್ದಾರೆ.  ಪ್ರಥಮ ಎರಡು ಸಾಲುಗಳನ್ನು ಮಾತ್ರ ಗುರುಗಳು ಆರಂಭಿಸಿ ನಂತರ ಮುಂದುವರಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ಬಿಟ್ಟುಕೊಟ್ಟು ತಾನು ಅವರ ಜೊತೆಯಲ್ಲಿಯೇ ಹಾಡುವ ಮೂಲಕ  ಮಾರ್ಗವನ್ನು ತೋರಿಸುವುದಷ್ಟೇ ಗುರುವಿನ ಕೆಲಸ, ಮುಂದೆ ಆ ಪಥದಲ್ಲಿ ಮುನ್ನಡೆಯುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂಬ  ಸಂದೇಶವನ್ನು ಇಲ್ಲಿ ಸಾರಲಾಗಿದೆ.  ಯಾವ ದೇವರನ್ನೂ ನಿರ್ದಿಷ್ಟವಾಗಿ ಸಂಬೋಧಿಸದೆ ಇರುವುದರಿಂದ ಎಲ್ಲೂ ಸಲ್ಲುವ ಪ್ರಾರ್ಥನೆ ಇದು. ಇತ್‌ನಿ ಶಕ್ತಿ ಹಮೆಂ ದೇನಾ ದಾತಾ ಕೂಡ ಪ್ರಾರ್ಥನೆಯಾಗಿ ಬಳಸಲ್ಪಡುವ ಗೌರವ ಪಡೆದ ಇನ್ನೊಂದು ಚಿತ್ರಗೀತೆ.  ಮೈಸೂರಿನಲ್ಲಿರುವ ಬಿ.ಎಸ್.ಎನ್.ಎಲ್. ತರಬೇತಿ ಕೇಂದ್ರದ ದಿನ ಆರಂಭವಾಗುವುದು  ಈ ಪ್ರಾರ್ಥನೆಯ ಮೂಲಕವೇ.  ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿರುವ ಮಾಲ್ ಒಂದರಲ್ಲೂ ದಿನದ ವ್ಯವಹಾರ ಆರಂಭದ ಮೊದಲು ಮಾಲೀಕ, ನೌಕರರೆಲ್ಲರೂ ಸೇರಿ ಇತ್‌ನಿ ಶಕ್ತಿ  ಹಾಡುವುದನ್ನು ನೋಡಿದ್ದೇನೆ.

ಈ ಹಾಡನ್ನು ಕಿತ್ತೂರು ಚೆನ್ನಮ್ಮ ಚಿತ್ರದ ಆರಂಭದಲ್ಲೂ ಯಥಾವತ್ ಬಳಸಿಕೊಳ್ಳಲಾಗಿತ್ತು. ಪಂತುಲು ಅವರು ಸ್ಕೂಲ್ ಮಾಸ್ಟರ್ ರೂಪದ ನಿರೂಪಕನಾಗಿ ಮಕ್ಕಳೊಡನೆ ಪ್ರಾರ್ಥನೆ ಹಾಡುವ ದೃಶ್ಯ ಅದಾಗಿತ್ತು.
ಸ್ವಾಮಿ ದೇವನೆ


ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತು ತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತು ತೇ

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ದೇವನೆ

ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸೈ ಪರಿಪಾಲಿಸೈ


 ಎಲ್ಲಾರೂ ನಮ್ಮವರೇ

ಎ.ಪಿ.ಕೋಮಲ ಹಾಡಿರುವ ಅಷ್ಟೊಂದು ಪ್ರಚಲಿತವಲ್ಲದ ಈ ಹಾಡಿನಲ್ಲಿ ಆ ಚಿತ್ರದ ಕಥೆಯ ಸೂಕ್ಷ್ಮ  ಎಳೆಯನ್ನು ಗುರುತಿಸಬಹುದು.  ಬಾಗೇಶ್ರೀ ರಾಗಾಧಾರಿತವಾದ್ದರಿಂದ ಇದನ್ನು ಕೇಳಿದಾಗ ಆಜಾದ್ ಚಿತ್ರದ ನ ಬೋಲೆ ನ ಬೋಲೆ ನೆನಪಾಗುತ್ತದೆ.  
ಎಲ್ಲಾರೂ ನಮ್ಮವರೇ


ಎಲ್ಲಾರೂ ನಮ್ಮವರೇ ಜಗದಿ
ಗುಣಕಿಂತ ಮಿಗಿಲಾದ ಹಣವಂತರಾದರೆ
ಎಲ್ಲಾರೂ ನಮ್ಮವರೇ

ಒಲಿದು ಒಂದಾದ ಮನೆಯನ್ನೆ ನೋಡಿ
ಒಡೆದು ಹನ್ನೆರಡು ಭಾಗವ ಮಾಡಿ
ಒಡನಾಡೋ ನೆಂಟರು ಕೊಂಡಾಡೋ ಬೀಗರು
ನಮಗಲ್ಲ ಗಾಂಧಾರಿ ಎನ್ನುವರು ಕೇಳಿ

ಪ್ರೀತಿ ವಾತ್ಸಲ್ಯನಿಧಿಯಾದ ಮಕ್ಕಳು
ಮನೆಗೆ ಮಾಣಿಕ್ಯ ಸಿರಿಯಾದ ಸೊಸೆಯರು
ಅತ್ತೆ ಮಾವಂದಿರ ಬಹುದೂರ ಮಾಡಿ
ಬೇಯ್ಸೊಲ್ಲ ಹೊಂದೊಲ್ಲ ಎನ್ನುವರು ಕೇಳಿ

ಭಾಮೆಯ ನೋಡಲು ತಾ ಬಂದ

ಸಾಮಾನ್ಯವಾಗಿ ಪಲ್ಲವಿ ಮತ್ತು ಎರಡೋ ಮೂರೋ ಚರಣಗಳನ್ನು ಹೊಂದಿರುವ ಚಿತ್ರಗೀತೆಗಳಿಗಿಂತ ಭಿನ್ನವಾಗಿ  ಎರಡು ಸಾಲುಗಳ ಪಲ್ಲವಿ  ಮತ್ತು ಅನುಪಲ್ಲವಿ ಹಾಗೂ ನಾಲ್ಕು ಸಾಲುಗಳ ಚರಣ ಹೊಂದಿರುವ ಇದರ ಉತ್ಕೃಷ್ಟ ಸಾಹಿತ್ಯ ಇದೊಂದು  ವಾಗ್ಗೇಯಕಾರರ ಕೃತಿಯಿರಬಹುದೇನೋ ಎಂಬ ಭ್ರಮೆ ಮೂಡಿಸುತ್ತದೆ.  ಹಿಂದೋಳ ರಾಗಾಧಾರಿತವಾದ ಇದನ್ನು ಆಲಾಪ ಹಾಗೂ ವೈವಿಧ್ಯಮಯ ಸಂಗತಿಗಳೊಂದಿಗೆ ಸೂಲಮಂಗಲಂ ರಾಜಲಕ್ಷ್ಮಿ ಅವರು ಬಲು ಚೆನ್ನಾಗಿ ಹಾಡಿದ್ದಾರೆ.  ಕೇಳಿದವರಿಗೆ ತಾವೂ ಶಾಸ್ತ್ರೀಯ ಸಂಗೀತ ಕಲಿಯಬೇಕು ಎಂದೆನಿಸುವಷ್ಟು ಆಕರ್ಷಣೆ ಈ ರಚನೆಯಲ್ಲಿದೆ.  ಇದರಲ್ಲಿ ಹಿನ್ನೆಲೆ ವಾದ್ಯಗಳನ್ನು ಪ್ರಸಿದ್ಧ ವಿದ್ವಾಂಸರೇ ನುಡಿಸಿರಬಹುದು.
ಭಾಮೆಯ ನೋಡಲು


ಭಾಮೆಯ ನೋಡಲು ತಾ ಬಂದ
ವೃಂದಾವನದಿಂದ ಮುಕುಂದ

ಕಣ್ಸನ್ನೆಯಲೇ ಕನ್ಯೆಯ ಮನ ಸೆಳೆದ
ಚಿನ್ಮಯ ಮೂರುತಿ ಶ್ರೀ ಗೋವಿಂದ

ಬಾಗಿಲ ಮರೆಯಾಗಿ ನಾಗೋಲಿಯ ದಿನ
ರಾಗೋಲ್ಲಾಸದಿ ಊದಿದ ಕೊಳಲಿನ
ಕೂಗಿಗೆ ಮನ ಸೋತು ಮೋಹದಿ ಮೈ ಬಿಗಿದೆ
ಆಗರಿವಾಯಿತು ಅವನೇ ಜನಾರ್ದನ

ಹಿಂದಿನ ಕಾಲದ ಹಾಡುಗಳು ಕೇಳಲು ಮಧುರವಾಗಿದ್ದರೂ ದೃಶ್ಯಗಳು ಆಕರ್ಷಕವಾಗಿರುತ್ತಿದ್ದುದು ಅಪರೂಪ. ಈ ಹಾಡು ಅದಕ್ಕೊಂದು ಅಪವಾದ. ಆಗಿನ ಕಾಲದ ವಧು ಪರೀಕ್ಷೆಯ ಒಂದು ಸ್ಯಾಂಪಲ್ ಆಗಿ ಮತ್ತು ನರಸಿಂಹರಾಜು ಮತ್ತು ಬಾಲಕೃಷ್ಣ ಅವರು ಕೂತಲ್ಲೇ ಪ್ರದರ್ಶಿಸಿದ ಅಪಹಾಸ್ಯವಲ್ಲದ ಹಾಸ್ಯವನ್ನು ಆನಂದಿಸಲು ಈ ಹಾಡಿನ ವೀಡಿಯೋ ಕೂಡ ನೋಡಲೇ ಬೇಕಾದ್ದು. ಆ ಹೆಣ್ಣು ಮಗಳು ಕುಳಿತ ಭಂಗಿ ಎಷ್ಟೊಂದು ಗೌರವ ಮೂಡಿಸುತ್ತದೆ!



ನಾನೂ ನೀನೂ ಜೋಡಿ

ಲಘು ಶೈಲಿಯ ಈ ರಚನೆಯನ್ನು ಪೀಠಾಪುರಂ ನಾಗೇಶ್ವರ ರಾವ್ ಮತ್ತು ಸೂಲಮಂಗಲಂ ರಾಜಲಕ್ಷ್ಮಿ ಹಾಡಿದ್ದಾರೆ. ವೇಗವಾಗಿ ಸಾಗುವ ಎತ್ತಿನ ಗಾಡಿಯ ನಡೆಯ ಕಲ್ಪನೆಯನ್ನು ಕೇಳುಗರ ಮನದಲ್ಲಿ ಮೂಡಿಸುವ ಆಕರ್ಷಕ  ಢೋಲಕ್ ನುಡಿತವಿದೆ.  ಗಂಡ ಹೆಂಡತಿ ಸಂಸಾರ ರಥದ ಎರಡು ಗಾಲಿಗಳು, ಗೋವು  ಕೃಷಿಪ್ರಧಾನವಾದ  ನಮ್ಮ ದೇಶದ ಬೆನ್ನೆಲುಬು ಎಂಬ ನಿತ್ಯ ಸತ್ಯವೂ ಇದರಲ್ಲಿ ಅಡಕವಾಗಿದೆ.
ನಾನೂ ನೀನೂ ಜೋಡಿ


ನಾನೂ ನೀನೂ ಜೋಡಿ ಈ ಜೀವನ ಎತ್ತಿನ ಗಾಡಿ
ಹಳ್ಳಿ ಹಾದಿಯಲ್ಲೂ ಹೊಸ ಡಿಲ್ಲಿ ಬೀದಿಯಲ್ಲೂ
ಹಳ್ಳ ದಿನ್ನೆ ಎಲ್ಲ ದಾಟಿ ಒಂದೇ ರೀತಿ ಓಡೋ ಗಾಡಿ

ರೈಲು ಕಾರು ಮೋಟರು ಗಾಡಿ
ಬಾರದ ಊರಿಗೂ ನಡೆಯೋ ಗಾಡಿ
ಜೋಡೆತ್ತಿನ ಗಾಡಿ
ತೌರಿಗೆ ದಾರಿ ತೋರೋ ಗಾಡಿ
ಅತ್ತೆ ಮನೆಯ ಮುತ್ತಿನ ಜೋಡಿ

ಹೆಣ್ಣು ಗಂಡು ಪ್ರೇಮದಿ ಕೂಡಿ
ಮದುವೆಯ ಪುರವಣಿ ಹೋಗೋ ಗಾಡಿ
ಈ ಕಾಮನ ಗಾಡಿ
ಭಾರತ ದೇಶದ ರೈತರ ನವನಿಧಿ
ಒಂದೇ ಜೋಡಿ ಎತ್ತಿನ ಗಾಡಿ

ಇನ್ನೇನು ಆನಂದ ಬೇಕಾಗಿದೆ

ನವ ವಧುವೊಬ್ಬಳು ನೂತನ ದಾಂಪತ್ಯದ   ಆನಂದೋಲ್ಲಾಸದಲ್ಲಿ ತೇಲುತ್ತಾ ತನ್ನಂತೆಯೇ ಹೊಸ ಅನುಭವಕ್ಕೆ ತೆರೆದುಕೊಳ್ಳಲಿರುವ ಪತಿಗೆ  ಉಲ್ಲಾಸ  ತುಂಬುವ ಭಾವದ    ಈ ಹಾಡನ್ನೂ ಸೂಲಮಂಗಲಂ ರಾಜಲಕ್ಷ್ಮಿ ಹಾಡಿದ್ದಾರೆ.  ಮ್ಯಾಂಡೊಲಿನ್, ಪಿಯಾನೋ, ಗಿಟಾರ್ ಮುಂತಾದವುಗಳನ್ನೊಳಗೊಂಡ ಸುದೀರ್ಘ prelude ಹಾಡಿನಲ್ಲಿ ಅಡಕವಾಗಿರುವ ಸಂಭ್ರಮಕ್ಕೆ ಸೂಕ್ತ  ಮುನ್ನುಡಿ ಬರೆಯುತ್ತದೆ.
ಇನ್ನೇನು ಆನಂದ


ಇನ್ನೇನು ಆನಂದ ಬೇಕಾಗಿದೆ
ಸವಿಯೂಟವ ನಾ ನೀಡುವೆ
ಮಾತಾಡಿ ಉಲ್ಲಾಸದೇ

ಕನಸಾದ ಆಸೆ ನನಸಾಗಿದೆ
ಕೆನೆಹಾಲು ಬೆಲ್ಲ ಅಣಿಯಾಗಿದೆ
ಹುಳಿಯಾದ ಹಣ್ಣು ಸಿಹಿಯಾಗಿದೆ
ಕಣ್ಣೀರ ಬಾಳೆಲ್ಲ ಕಥೆಯಾಗಿದೆ
ಸಂಕೋಚದೆ ತಡ ಮಾಡದೆ
ಮಾತಾಡಿ ಉಲ್ಲಾಸದೆ

ಪ್ರೇಮಾನುರಾಗ ಒಂದಾಗಿದೆ
ಏಕಾಂತ ವೇಳೆ ಹಾಯಾಗಿದೆ
ನೂರಾರು ಚಿಂತೆ ಕಳೆದಂತಿದೆ
ಮನಸೆಲ್ಲ ಮಲ್ಲಿಗೆ ಹೂವಾಗಿದೆ
ಸಂಕೋಚದೆ ತಡ ಮಾಡದೆ
ಮಾತಾಡಿ ಉಲ್ಲಾಸದೆ

ಸೊಂಪಾದ ಸಂಜೆ ವೇಳೆ

ಮೌತ್ ಆರ್ಗನ್ ಮುಖ್ಯವಾಗಿರುವ prelude ಮತ್ತು  interlude ಹೊಂದಿರುವ ಈ ಹಾಡು ಸ್ವತಃ ಟಿ.ಜಿ.ಲಿಂಗಪ್ಪ ಮತ್ತು ಪಿ.ಸುಶೀಲ ಧ್ವನಿಗಳಲ್ಲಿದೆ.  ಗಿಟಾರ್, ಬಾಸ್, ಡಬಲ್ ಬಾಸ್ ಇತ್ಯಾದಿಗಳನ್ನೊಳಗೊಂಡ ಹಿನ್ನೆಲೆ ಸಂಗೀತ ಮುಗಿದು ಚರಣ ಆರಂಭವಾಗುತ್ತಿದ್ದಂತೆ ಪಲ್ಲವಿ ಭಾಗದಲ್ಲಿ ಜೊತೆಗಿದ್ದ ಢೋಲಕ್ ಮತ್ತೆ  ಆಕರ್ಷಕ ಉರುಳಿಕೆಯೊಂದಿಗೆ  ರಿದಂ ಅನ್ನು take off ಮಾಡುವುದು ಆಗಿನ ಸಂಗೀತ ರಚನೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು.
ಸೊಂಪಾದ ಸಂಜೆ ವೇಳೆ


ಸೊಂಪಾದ ಸಂಜೆ ವೇಳೆ
ತಂಗಾಳಿ ಬೀಸೊ ವೇಳೆ
ಇಂಪಾದ ರಾಗಮಾಲೆ
ಹೂ ಬಳ್ಳಿ ಹಾಡೋ ವೇಳೆ
ಒಂದಾಗಿ ಪಾಡೋಣ
ಒಂದಾಗಿ ಆಡೋಣ

ಹೂಬಾಣ ಹೂಡಬೇಡಿ ಲಾವಣ್ಯ ನೋಡಿ
ದಮ್ಮಯ್ಯೊ ಕಾಡಬೇಡಿ ಓಡಾಡೊ ಹಾದಿ
ನೀನೇ ಎನ್ನ ಸಿಂಗಾರವಾಣಿ
ಜೀರಿಗೆ ಬೆಲ್ಲ ಜಾರಿದ ಮೇಲೆ ನಾ ನಿಮ್ಮ ರಾಣಿ

ನೀರಾಜಿ ಕಂಬಿ ಸೀರೆ ನಾನೊಲ್ಲೆ ನೋಡಿ
ಬಂಗಾರ ಬೆಳ್ಳಿ ಒಡವೆ ಬೇಕಿಲ್ಲ ಕೇಳಿ
ಇನ್ನೇನಾಸೆ ಪನ್ನೀರ ಜಾಜಿ
ಎಲ್ಲ ಭಾಗ್ಯ ಗೆಲ್ಲೋವಂಥ ಒಲುಮೆ ನೀಡಿ

ರಾಧಾ ಮಾಧವ ವಿನೋದ ಹಾಸ

ಆರಂಭದ ಆಲಾಪದ ಮಾಧುರ್ಯದಿಂದಲೇ ಕೇಳುಗರನ್ನು ನೇರವಾಗಿ ಯಮುನಾ ತೀರಕ್ಕೆ ಕರೆದೊಯ್ದು ರಾಧಾ ಮಾಧವರ  ದರ್ಶನ ಮಾಡಿಸುವ ಈ ಹಾಡೂ ಟಿ.ಜಿ.ಲಿಂಗಪ್ಪ ಮತ್ತು ಪಿ.ಸುಶೀಲ ಹಾಡಿರುವುದು. ಸುಮಾರು ಅದೇ ಕಾಲಕ್ಕೆ ಬಂದ ಮಾಯಾ ಬಜಾರ್ ಚಿತ್ರದ ಸಾಗಲಿ ತೇಲಿ ತರಂಗದೊಳು ಹಾಡಿನ ಛಾಯೆ ಇದರಲ್ಲಿ ಗೋಚರಿಸಲು ಎರಡರಲ್ಲೂ ಸಾಮಾನ್ಯವಾಗಿರುವ ಮೋಹನ ರಾಗ ಕಾರಣವಾಗಿರಬಹುದು.  ವಿಶಿಷ್ಟ ಧ್ವನಿಯ ಶ್ರುತಿಬದ್ಧ ಢೋಲಕ್ ಬಳಕೆ ಹಾಡಿನ ಅಂದ ಹೆಚ್ಚಿಸಿದೆ.
ರಾಧಾ ಮಾಧವ


ರಾಧಾ ಮಾಧವ ವಿನೋದ ಹಾಸ
ಯಾರೂ ಮರೆಯದ ಪ್ರೇಮ ವಿಲಾಸ

ಮಾಗಿ ಮಲ್ಲಿಗೆ ಹೂಬನದಲ್ಲಿ
ಬೋಗಿ ಹುಣ್ಣಿಮೆ ರಾತ್ರಿಯಲಿ
ಸ್ವರ್ಗ ಭೂಮಿ ಎಲ್ಲ ದಾಟಿ
ಆಡಿದ ಮಾತೆ ರಾಗ ವಿಲಾಸ

ಜೀವನವೆಲ್ಲ ಗೋಕುಲವಾಗಿ
ಒಲವೇ ಯಮುನಾ ನದಿಯಾಗಿ
ನಾವೇ ರಾಧಾ ಮಾಧವರಾಗಿ
ಆಡುವ ಮಾತೇ ಪ್ರೇಮ ವಿಲಾಸ

ಅತಿ ಮಧುರ ಅನುರಾಗ

ಆಗಿನ ಕಾಲದ ಪ್ರಸಿದ್ಧ ಗಾಯಕ  ಎ.ಎಂ.ರಾಜಾ ಮತ್ತು ಜಮುನಾರಾಣಿ   ಹಾಡಿರುವ ನಿಜಕ್ಕೂ ಅತಿ ಮಧುರವಾದ ಹಾಡಿದು. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿದ್ದ  ಎ.ಎಂ.ರಾಜಾ ಅವರ ಪ್ರತಿಭೆ ಹಿಂದಿ ವಲಯವನ್ನೂ ಆಕರ್ಷಿಸಿ ರಾಜ ಕಪೂರ್ ಅವರ ಆಹ್ ಚಿತ್ರ ಅವನ್ ಎಂಬ ಹೆಸರಲ್ಲಿ ತಮಿಳಿಗೆ ಡಬ್ ಆದಾಗ ಶಂಕರ್ ಜೈಕಿಶನ್ ಸಲಹೆಯ ಮೇರೆಗೆ ಎಲ್ಲ ಮುಕೇಶ್ ಹಾಡುಗಳನ್ನೂ ಅವರೇ ಹಾಡಿದ್ದರು.  ಇಷ್ಟೊಂದು ಪ್ರತಿಭಾವಂತರಾಗಿದ್ದರೂ ಎ.ಎಂ.ರಾಜಾ ತನ್ನ ವಿಕ್ಷಿಪ್ತ ಸ್ವಬಾವದಿಂದಾಗಿ ಉದ್ದಿಮೆಯ ವೈರ ಕಟ್ಟಿಕೊಂಡು ಹಿನ್ನೆಲೆಗೆ ಸರಿಯುವಂತಾಯಿತು ಅನ್ನುತ್ತಾರೆ. ಸೊಂಪಾದ ಸಂಜೆ ವೇಳೆ ಮತ್ತು ರಾಧಾ ಮಾಧವ ಹಾಡುಗಳು ಎ.ಎಂ.ರಾಜಾ ಅವರಿಗಾಗಿಯೇ ಸಂಯೋಜಿಸಲ್ಪಟ್ಟಿದ್ದು ಯಾವುದೋ ಭಿನ್ನಾಭಿಪ್ರಾಯದಿಂದಾಗಿ ಕೊನೆ ಗಳಿಗೆಯಲ್ಲಿ ಅವರು  ಅಲಭ್ಯರಾದ ಕಾರಣ ಟಿ.ಜಿ.ಲಿಂಗಪ್ಪ ಸ್ವತಃ ಹಾಡಿರಬಹುದು ಎಂದು ನನ್ನ ಊಹೆ.  ಟಿ.ಜಿ. ಲಿಂಗಪ್ಪ ಚೆನ್ನಾಗಿಯೇ ಹಾಡಿರುವುದರ ಬಗ್ಗೆ ಎರಡು ಮಾತಿಲ್ಲ. ಆದರೆ ಆ ಮೇಲೆ ಅವರು ಯಾವ ಚಿತ್ರದಲ್ಲೂ ಹಾಡದಿರುವುದು ನನ್ನ ಈ ಊಹೆಗೆ ಕಾರಣ.   ಚಿತ್ರದ ಟೈಟಲ್ಸ್‌ನಲ್ಲಿ ಹಿನ್ನೆಲೆ ಗಾಯಕನಾಗಿ ಎ.ಎಂ. ರಾಜಾ ಹೆಸರಿಲ್ಲದೇ ಇರುವುದು ಈ ಮಾತಿಗೆ ಪೂರಕ.



ಬೇರೊಂದು ಸಂದರ್ಭದಲ್ಲಿ ಈ ಹಾಡಿನ ಉಲ್ಲೇಖ ಬಂದಾಗ ನವಿಲು ಕರಿ ಮುಗಿಲನ್ನು ನೋಡಿ ನಾಟ್ಯವಾಡುತ್ತದೆಯೇ ಹೊರತು ಬೆಳ್ಮುಗಿಲನ್ನಲ್ಲವಲ್ಲ ಎಂದೊಬ್ಬರು ಪ್ರತಿಕ್ರಿಯಿಸಿದ್ದರು.  ಅದಕ್ಕೆ ಬೆಳ್ಮುಗಿಲು ನವಿಲಿನ ನಾಟ್ಯಕ್ಕೆ ಕರೆಯೋಲೆ ಅಷ್ಟೇ.  ಕರೆಸಿಕೊಂಡವರು ತಯಾರಾಗಿ ಬರುವಷ್ಟರಲ್ಲಿ ಅದು ಕರಿ ಮುಗಿಲಾಗಿ ಪರಿವರ್ತನೆ ಹೊಂದಿ ನವಿಲಿನ ನಾಟ್ಯ ಆರಂಭವಾಗಿರುತ್ತದೆ ಎಂದು ನಾನಂದಿದ್ದೆ!
ಅತಿ ಮಧುರ


ಅತಿ ಮಧುರ ಅನುರಾಗ
ಜೀವನ ಸಂಧ್ಯಾ ರಾಗ
ಸಮರಸದ ವೈಭೋಗ
ಸಂಗ ಸಮಾಗಮ ರಾಗ

ನೀಲಿಯ ಬಾನಿನ ಬೆಳ್ಮುಗಿಲೆ
ನವಿಲಿನ ನಾಟ್ಯಕೆ ಕರೆಯೋಲೆ
ಜೇನಿನ ಹೊನಲೇ ಉಕ್ಕುವ ವೇಳೆ
ಒಲವೇ ಸುಖದ ಉಯ್ಯಾಲೆ

ಯೌವನ ಬಾಳಿನ ಹೊಂಬಾಳೆ
ಪ್ರೀತಿಯೆ ಬಾಡದ ಪೂ ಮಾಲೆ
ನಲ್ಮೆಯ ನೀಡೊ ಪ್ರೇಮದ ಲೀಲೆ
ಒಲವೇ ಸುಖದ ಉಯ್ಯಾಲೆ

ಅಂತರ್ಜಾಲದಲ್ಲಿ 7 ಭಾಗಗಳಾಗಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ.  ಆದರೆ ದುರದೃಷ್ಟವಶಾತ್ ಅದರಲ್ಲಿ ರಾಧಾ ಮಾಧವ ವಿನೋದ ಹಾಸ, ನಾನೂ ನೀನೂ ಜೋಡಿ, ಇನ್ನೇನು ಆನಂದ ಬೇಕಾಗಿದೆ ಹಾಡುಗಳು ಇಲ್ಲ. ಕೆಲ ವರ್ಷಗಳ ಹಿಂದೆ ದೂರದರ್ಶನದಲ್ಲಿ ಈ ಚಿತ್ರ ಪ್ರಸಾರವಾದಾಗಲೂ ಆ ಹಾಡುಗಳು ಇರಲಿಲ್ಲವೆಂದು ನೆನಪು.