Saturday 2 December 2023

ಚಂದ್ರಯಾನ


ನಾನು ಹೇಳುತ್ತಿರುವುದು ಇಸ್ರೋದ ಚಂದ್ರಯಾನದ ಬಗ್ಗೆ ಅಲ್ಲ.  ಇದು ಚಂದ್ರನು ಭೂಮಿಯ ಸುತ್ತ ಕೈಗೊಳ್ಳುತ್ತಿರುವ ಯಾನದ ಬಗ್ಗೆ.  ಚಂದ್ರನ ಬಗ್ಗೆ ಚಂದಿರನೇತಕೆ ತಿರುಗುವನಮ್ಮ ಮತ್ತು ಕೈಗೆ ಸಿಕ್ಕದ ಕಾಲ ಲೇಖನಗಳಲ್ಲಿ ಬಹಳಷ್ಟು ವಿಷಯಗಳನ್ನು ಈಗಾಗಲೇ ತಿಳಿದುಕೊಂಡಿದ್ದೇವೆ. ಸಾಮಾನ್ಯವಾಗಿ ನಾವೆಲ್ಲರೂ ಚಂದ್ರೋದಯವನ್ನು ಹುಣ್ಣಿಮೆಯ ದಿನ ಮಾತ್ರ ಗಮನಿಸುವುದು. ಆ ದಿನ ಚಂದ್ರ ಬಿಂಬ ದೊಡ್ಡದಾಗಿದ್ದು ಆತ ಸಂಜೆಯ ಹೊತ್ತು ಉದಯಿಸುವುದು ಇದಕ್ಕೆ ಮುಖ್ಯ ಕಾರಣ. ಈ ರೀತಿ ಹುಣ್ಣಿಮೆಯ ಚಂದ್ರೋದಯವನ್ನು ಗಮನಿಸುವವರು ಯಾವುದಾದರೂ ಮರವನ್ನೋ, ಕಟ್ಟಡವನ್ನೋ ಗುರುತಿಟ್ಟುಕೊಂಡು ನೋಡಿದರೆ ಪ್ರತೀ ಹುಣ್ಣಿಮೆಯಂದು ಆತ ಪೂರ್ವ ದಿಗಂತದ ಬೇರೆ ಬೇರೆ ಬಿಂದುಗಳಲ್ಲಿ ಉದಯಿಸುವುದು ಗೊತ್ತಾಗುತ್ತದೆ. ಬೆಳಗ್ಗೆ ಬೇಗ ಏಳುವವರಾದರೆ ಮರುದಿನ ಪಶ್ಚಿಮ ದಿಗಂತದಲ್ಲಿ ಆತ ಕಂತುವ ಸ್ಥಾನವೂ ಪ್ರತೀ ಸಲ ಬೇರೆ ಬೇರೆಯಾಗಿರುವುದೂ ಗಮನಕ್ಕೆ ಬರುತ್ತದೆ.  ಸೂರ್ಯನಿಗಿದ್ದಂತೆ ಚಂದ್ರನಿಗೂ ಉತ್ತರಾಯಣ ಮತ್ತು ದಕ್ಷಿಣಾಯನ ಎಂದಿದೆಯೇ ಎಂದು ತಿಳಿಯುವ  ಕುತೂಹಲವೂ ಕೆಲವರಲ್ಲಿ ಮೂಡಬಹುದು. ಈ ಕುರಿತು  ಒಂದಷ್ಟು ವಿಚಾರಗಳನ್ನು ಅರಿಯುವ ಪ್ರಯತ್ನ ಮಾಡೋಣ. 

ಅಂತರ್ಜಾಲದ ಕೃಪೆಯಿಂದ ಸೂರ್ಯ ಚಂದ್ರರು ದಿನಾ ಪೂರ್ವ  ದಿಗಂತದ ಯಾವ ಬಿಂದುವಿನಲ್ಲಿ ಉದಯಿಸುತ್ತಾರೆ ಎಂಬ ಮಾಹಿತಿ ಸುಲಭವಾಗಿ ಸಿಗುತ್ತದೆ.  ಇದನ್ನು azimuth ಎಂಬ ಮಾಪನದ ಮೂಲಕ ಗುರುತಿಸುತ್ತಾರೆ. ಉತ್ತರ ದಿಕ್ಕನ್ನು 0 ಡಿಗ್ರಿ, ಪೂರ್ವವನ್ನು 90 ಡಿಗ್ರಿ, ದಕ್ಷಿಣವನ್ನು  180 ಡಿಗ್ರಿ ಮತ್ತು ಪಶ್ಚಿಮವನ್ನು 270 ಡಿಗ್ರಿ ಎಂದು ಪರಿಗಣಿಸಿ ದಿಗಂತದ  ಯಾವುದೇ ಬಿಂದುವು ಉತ್ತರದ 0 ಡಿಗ್ರಿಯಿಂದ ಎಷ್ಟು ಡಿಗ್ರಿ ಕೋನದಲ್ಲಿದೆ ಎಂಬುದನ್ನು ಆ ಬಿಂದುವಿನ azimuth ಅನ್ನಲಾಗುತ್ತದೆ.  ಈ ಲೆಕ್ಕದ ಪ್ರಕಾರ ಈಶಾನ್ಯದ azimuth 45 ಡಿಗ್ರಿ, ಪೂರ್ವದ azimuth 90 ಡಿಗ್ರಿ, ಆಗ್ನೇಯದ azimuth 135 ಡಿಗ್ರಿ.

ವರ್ಷದ 365 ದಿನಗಳ ಸೂರ್ಯೋದಯ ಮತ್ತು ಚಂದ್ರೋದಯದ azimuth ಬಿಂದುಗಳನ್ನು ಪಟ್ಟಿ ಮಾಡುವುದು ಕಾರ್ಯಸಾಧುವಲ್ಲದ್ದರಿಂದ  ಪ್ರಾತಿನಿಧಿಕವಾಗಿ 2023ರ ಎಲ್ಲ ಹುಣ್ಣಿಮೆ ಮತ್ತು ಅಮಾವಾಸ್ಯೆಗಳ azimuth ದತ್ತಾಂಶವನ್ನು ಕಲೆಹಾಕಿ ಒಂದು ಟೇಬಲ್ ತಯಾರಿಸಿದೆ.
  


ಬಣ್ಣದ ಹಿನ್ನೆಲೆ ಇರುವ ಸಾಲುಗಳು ಹುಣ್ಣಿಮೆ ಮತ್ತು ಬಣ್ಣರಹಿತವಾದವು ಅಮಾವಾಸ್ಯೆಯ ದತ್ತಾಂಶಗಳು. ಇದರಲ್ಲಿ ಆಯಾ ದಿನ ಸೂರ್ಯ ಮತ್ತು  ಚಂದ್ರ ಪೂರ್ವ  ದಿಗಂತದ ಯಾವ ಬಿಂದುವಿನಲ್ಲಿ ಉದಯಿಸಿದರು ಎಂದು ತಿಳಿಯುತ್ತದೆ. 90ಕ್ಕಿಂತ ಕಡಿಮೆ azimuth ಇದ್ದರೆ ಪೂರ್ವದಿಂದ ಎಡಕ್ಕೆ ಅಂದರೆ ಈಶಾನ್ಯದತ್ತ ಹಾಗೂ 90ಕ್ಕಿಂತ ಹೆಚ್ಚಿದ್ದರೆ ಪೂರ್ವದಿಂದ ಬಲಕ್ಕೆ ಆಗ್ನೇಯದತ್ತ ಎಂದರ್ಥ. ಇದರ ಪ್ರಕಾರ ಸೂರ್ಯನು ಜೂನ್ ತಿಂಗಳಲ್ಲಿ ಅತಿ ಹೆಚ್ಚು ಈಶಾನ್ಯದತ್ತ  ಮತ್ತು ದಶಂಬರ ತಿಂಗಳಲ್ಲಿ ಅತಿ ಹೆಚ್ಚು ಆಗ್ನೇಯದತ್ತ ಸರಿದದ್ದು ಗೊತ್ತಾಗುತ್ತದೆ. ಚಂದ್ರನು ಜುಲೈ ತಿಂಗಳಲ್ಲಿ ಅತಿ ಹೆಚ್ಚು ಆಗ್ನೇಯದತ್ತ ಮತ್ತು  ದಶಂಬರದಲ್ಲಿ ಈಶಾನ್ಯದತ್ತ ಸರಿದದ್ದೂ ಗೊತ್ತಾಗುತ್ತದೆ.

ಈ ದತ್ತಾಂಶಗಳನ್ನು ಆಧರಿಸಿ ರಚಿಸಿದ  ಗ್ರಾಫ್ ನೋಡಿದರೆ ಇನ್ನಷ್ಟು ವಿವರಗಳು ಸ್ಪಷ್ಟವಾಗುತ್ತವೆ.



ಇದರಲ್ಲಿ ಕೆಂಪು ಬಣ್ಣದ ಬಿಂದುಗಳನ್ನು ಜೋಡಿಸುವ ಗೆರೆ ಸೂರ್ಯೋದಯದ ಸ್ಥಾನ ಬದಲಾದುದನ್ನೂ ಹಸುರು ಬಣ್ಣದ zig zag ಗೆರೆ ಚಂದ್ರೋದಯದ ಸ್ಥಾನ ಬದಲಾಗುತ್ತಾ ಹೋದುದನ್ನು ತೋರಿಸುತ್ತದೆ. ಹುಣ್ಣಿಮೆ ಚಂದ್ರ ಬಿಳಿಯಲ್ಲೂ ಅಮಾವಾಸ್ಯೆಯ ಚಂದ್ರ ಕಪ್ಪಿನಲ್ಲೂ ಕಾಣಿಸುತ್ತಿದ್ದಾನೆ.

ಹುಣ್ಣಿಮೆಯ ಚಂದ್ರ ಜನವರಿಯಿಂದ ಮಾರ್ಚ್ ವರೆಗೆ ಸೂರ್ಯೋದಯ ಸ್ಥಾನಕ್ಕಿಂತ ಈಶಾನ್ಯದಲ್ಲಿ ಉದಯಿಸಿದ್ದಾನೆ. ಕ್ರಮೇಣ ಸೂರ್ಯ ಚಂದ್ರರ  azimuth  ಅಂತರ ಕಡಿಮೆಯಾಗುತ್ತಾ ಹೋಗಿ  ಎಪ್ರಿಲ್ ತಿಂಗಳಿಂದ  ಸೂರ್ಯೋದಯ ಸ್ಥಾನದ ಆಚೆ ಕಡೆ  ಆಗ್ನೇಯಕ್ಕೆ  ದಾಟಿದ್ದಾನೆ. ಜುಲೈಯಲ್ಲಿ ಅತಿ ಹೆಚ್ಚು ಅಂತರವಿದ್ದು  ಮತ್ತೆ ಕಮ್ಮಿ ಆಗುತ್ತಾ ಸಪ್ಟಂಬರ್ ಆಗುವಾಗ  ವಿರುದ್ಧ ದಿಕ್ಕಿನಲ್ಲಿ  ಸೂರ್ಯೋದಯ ಸ್ಥಾನಕ್ಕಿಂತ ಈಶಾನ್ಯದಲ್ಲಿ ಉದಯಿಸತೊಡಗಿದ್ದಾನೆ. ಅಂದರೆ ಈ ಕಡೆಯಿಂದ  ಆ ಕಡೆಗೆ ದಾಟುವಾಗ ಮಾರ್ಚ್ ಮತ್ತು ಎಪ್ರಿಲ್ ಹಾಗೂ ಅಗಸ್ಟ್ ಮತ್ತು ಸಪ್ಟಂಬರ್ ತಿಂಗಳುಗಳಲ್ಲಿ  ಮಾತ್ರ ಹುಣ್ಣಿಮೆ ಚಂದ್ರ ಸೂರ್ಯೋದಯ ಸ್ಥಾನದ ಆಸುಪಾಸಿನಲ್ಲಿ ಉದಯಿಸಿದ್ದು.

ಕಪ್ಪು ಬಣ್ಣದ ಅಮಾವಾಸ್ಯೆ ಚಂದ್ರನನ್ನು ಗಮನಿಸಿದರೆ ಪ್ರತಿ ಸಲ ಆತ ಸೂರ್ಯೋದಯ ಸ್ಥಾನದ ಸಮೀಪದಲ್ಲೇ ಉದಯಿಸಿದ್ದು ತಿಳಿಯುತ್ತದೆ. ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದರೆ ಜನವರಿಯಿಂದ ಮೇ ವರೆಗೆ ಸೂರ್ಯನಿಗಿಂತ ಒಂದಷ್ಟು ಆಗ್ನೇಯದ ಕಡೆಗೆ ಹಾಗೂ ಮತ್ತೆ ನವಂಬರ್ ವರೆಗೆ ಸೂರ್ಯನಿಗಿಂತ ಈಶಾನ್ಯದ ಕಡೆಗೆ ಜರಗಿದ್ದು ತಿಳಿಯುತ್ತದೆ. ದಶಂಬರದಲ್ಲಿ ಮತ್ತೆ ಸೂರ್ಯನಿಗಿಂತ ಆಗ್ನೇಯದಲ್ಲಿ ಉದಯಿಸುತ್ತಾನೆ.  ಸೂರ್ಯೋದಯ ಸ್ಥಾನದ ಸಮೀಪದಲ್ಲೇ ಉದಯಿಸಿದರೂ ಪ್ರತೀ ಅಮಾವಾಸ್ಯೆಯಂದು azimuthನಲ್ಲಿ ಕೆಲವು ಡಿಗ್ರಿಗಳ ವ್ಯತ್ಯಾಸ ಇರುವುದನ್ನು ನೋಡಬಹುದು. ಒಂದು ವೇಳೆ ಎರಡೂ azimuth ಒಂದೇ ಇದ್ದು ಉದಯ ಸಮಯವೂ ಒಂದೇ ಆಗಿದ್ದರೆ ಆ ಅಮಾವಾಸ್ಯೆಯ  ದಿನ ಸೂರ್ಯಗ್ರಹಣ  ಸಂಭವಿಸುತ್ತದೆ.

ಒಟ್ಟಲ್ಲಿ ಸೂರ್ಯನು ಹುಣ್ಣಿಮೆ ಚಂದ್ರನೊಂದಿಗೆ ‘ನಾನೊಂದು ತೀರ ನೀನೊಂದು ತೀರ’ ಎಂದು ಹಾಗೂ ಅಮಾವಾಸ್ಯೆ ಚಂದ್ರನೊಂದಿಗೆ ’ನೀನೆಲ್ಲೋ ನಾನಲ್ಲೇ’  ಎಂದು ಹೇಳುತ್ತಾ ಉದಯಿಸುವುದು!

ಇದು ಹುಣ್ಣಿಮೆ ಮತ್ತು ಅಮಾವಾಸ್ಯೆ ಚಂದ್ರನ ಬಗ್ಗೆ ಆಯಿತು.  ಆದರೆ ಚಂದ್ರ ದಿನವೂ ಉದಯಿಸುತ್ತಾನಲ್ಲ. ಆ pattern ಹೇಗಿರುತ್ತದೆ ಎಂದು  ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ ವರೆಗಿನ ಈ ಚಿತ್ರ ತೋರಿಸುತ್ತದೆ.



ಇಲ್ಲಿ ಹುಣ್ಣಿಮೆಯಂದು ಸೂರ್ಯನಿಂದ ದೂರದ ಸ್ಥಾನದಲ್ಲಿ ಉದಯಿಸಿದ  ಚಂದ್ರನು ಕ್ರಮೇಣ ಆ ಬಿಂದುವಿನತ್ತ ಸಾಗುತ್ತಾ ಅಮಾವಾಸ್ಯೆಯಂದು ಸೂರ್ಯೋದಯ ಸ್ಥಾನಕ್ಕೆ ಅತಿ ಸಮೀಪದಲ್ಲಿ ಉದಯಿಸುವುದನ್ನು ಗುರುತಿಸಬಹುದು. ಮತ್ತೆ ಈ ಬಿಂದುಗಳು ದೂರವಾಗುತ್ತಾ ಹುಣ್ಣಿಮೆಯಂದು ಅತ್ಯಂತ ದೂರದಲ್ಲಿ ಉದಯಿಸುತ್ತಾನೆ.

ಇದು ಒಂದೇ ತಿಂಗಳ ವಿವರಗಳಾದ್ದರಿಂದ ಸೂರ್ಯೋದಯ ಬಿಂದುವಿನಲ್ಲಿ ಹೆಚ್ಚು ವ್ಯತ್ಯಾಸ ಕಾಣುವುದಿಲ್ಲ. ಆದರೂ ಸೂಕ್ಷ್ಮವಾಗಿ ಗಮನಿಸಿದರೆ ದಶಂಬರದ ಉತ್ತರಾಯಣಾರಂಭದ ನಂತರ  ಆತನ ಉದಯಬಿಂದು ಉತ್ತರದತ್ತ ಚಲಿಸತೊಡಗಿರುವುದು ತಿಳಿಯುತ್ತದೆ.

Wednesday 8 November 2023

ನಾನ್ ಖಟಾಯಿಯನ್ನು ನಾರಾಯಣ ಕಟರ್ ಮಾಡಿದವರು ಯಾರು?




ನಾನು 1969 ರಿಂದ 1971ರ ವರೆಗೆ ಮುಂಡಾಜೆಯಿಂದ ಉಜಿರೆ ಕಾಲೇಜಿಗೆ ಸೈಕಲಲ್ಲಿ ದಿನಕ್ಕೆ 14 ಕಿ.ಮೀ. up & down ಮಾಡುತ್ತಿದ್ದ ಕಾಲ. ಮಧ್ಯಾಹ್ನ ಇಂದ್ರರ ಗೂಡಂಗಡಿಯ ಇಡ್ಲಿ ಅಥವಾ ಜನಾರ್ದನ ರೆಸ್ಟೋರೆಂಟ್ ಇಲ್ಲವೇ ಮಂಜುನಾಥರ ಹೋಟೇಲಿನ ಊಟ ಹೊಟ್ಟೆಗೆ ಬೀಳುತ್ತಿದ್ದರೂ 3 - 3:30ಕ್ಕೆ ಕಾಲೇಜು ಬಿಡುವ ಹೊತ್ತಿಗೆ ಅಸಾಧ್ಯ ಹಸಿವು ಬಾಯಾರಿಕೆ ಉಂಟಾಗುತ್ತಿದ್ದವು. ಹೈಸ್ಕೂಲಲ್ಲಿ ಇರುವಾಗ ಇಂದ್ರರ ಅಂಗಡಿಯಿಂದ ಕೊಳ್ಳುತ್ತಿದ್ದ ಅಕ್ರೋಟು, ಚಿಕ್ಕಿಗಳು ಈಗ below grade ಅನ್ನಿಸತೊಡಗಿದ್ದವು. ಹೀಗಾಗಿ ಸೀದಾ ಪೇಟೆಗೆ ಬಂದು ಕಿಸೆಯಲ್ಲಿ ಎಷ್ಟು ಪುಡಿಗಾಸು ಇದೆ ನೋಡಿಕೊಂಡು 15 ಪೈಸೆಗೆ ಸಿಗುತ್ತಿದ್ದ ದೊಡ್ಡ ಗ್ಲಾಸ್ ಕಬ್ಬಿನ ರಸ ಅಥವಾ 65 ಪೈಸೆಗೆ ಸಿಗುತ್ತಿದ್ದ ಗೋಲ್ಡ್ ಸ್ಪಾಟ್ ಕುಡಿಯುವುದಿತ್ತು. 5 ಪೈಸೆಗೆ ಸಿಗುತ್ತಿದ್ದ ಗಟ್ಟಿಯಾದ ಡೆಕ್ಕನ್ ಅಥವಾ ಪ್ಯಾರೀಸ್ ಚಾಕಲೇಟುಗಳನ್ನು ಕಿಸೆಗೆ ಹಾಕಿಕೊಳ್ಳುವುದೂ ಇತ್ತು. ಕೆಲವು ಸಲ ಒಂದು ಪಾರ್ಲೆ ಗ್ಲುಕೊ ಬಿಸ್ಕೆಟ್ ಪ್ಯಾಕೆಟ್ ಕೊಂಡು ಸೈಕಲ್ಲಿನ ಬೆತ್ತದ ಬುಟ್ಟಿಯಲ್ಲಿಟ್ಟುಕೊಂಡು ಒಂದೊಂದನ್ನೇ ತಿನ್ನುತ್ತಾ ಸೈಕಲ್ ತುಳಿಯುತ್ತಿದ್ದರೆ ಮನೆ ಸೇರುವಾಗ ಪ್ಯಾಕೆಟ್ಟಿನ wrapper ಮಾತ್ರ ಉಳಿದಿರುತ್ತಿತ್ತು.

ಒಂದು ಸಲ ಎಂದಿನಂತೆ ಗೋಪಾಲಮಾಸ್ಟ್ರ ಅಂಗಡಿಗೆ ಹೋಗಿ ಇಂದು ಏನು ಕೊಳ್ಳುವುದೆಂದು ಯೋಚಿಸುತ್ತಿರುವಾಗ ಗಾಜಿನ ಭರಣಿಯಲ್ಲಿ ನಸು ಹಳದಿ ಬಣ್ಣದ ಹೊಸ ಆಕರ್ಷಕ ತಿನಿಸೊಂದು ಕಾಣಿಸಿತು. 10 ಪೈಸೆಗೆ ದೊರಕಿದ ಅದನ್ನು ಬಾಯಿಗೆ ಹಾಕಿದೊಡನೆ ಕರಗಿ ಹೋಯಿತು.  ಅದರ ಹೆಸರೇನೆಂದು ಕೇಳಿದಾಗ ಅಂಗಡಿ ನೋಡಿಕೊಳ್ಳುತ್ತಿದ್ದ ಗೋಪಾಲ ಮಾಸ್ಟ್ರ ತಮ್ಮ ಗೋವಿಂದರು  'ನಾರಾಯಣ ಕಟರ್' ಎಂದು ಹೇಳಿದರು! ತಮಾಷೆ ಮಾಡುತ್ತಿರಬಹುದು ಎನ್ನಿಸಿ  ಇನ್ನೊಮ್ಮೆ ಕೇಳಿದಾಗ ಮತ್ತೆ ಅದನ್ನೇ ಹೇಳಿದಾಗ ಇದೆಂಥ ಹೆಸರಪ್ಪಾ ಎಂದು ಆಶ್ಚರ್ಯವಾಯಿತು. ಅದಕ್ಕೆ ಹೆಸರು ಅಂತ ಇಲ್ಲದ್ದರಿಂದ ತಾವೇ ಸೃಷ್ಟಿಸಿ ಹೀಗೆ ಹೇಳುತ್ತಿರಬಹುದೆಂದುಕೊಂಡೆ. ಆ ಮೇಲೆ ನಾನೂ ಆಗಾಗ ಆ ಹೆಸರು ಹೇಳಿಯೇ ಅದನ್ನು ಕೊಂಡು ತಿನ್ನುತ್ತಿದ್ದೆ. ಆದರೆ ಅದು ಅಧಿಕೃತ ಹೆಸರು ಅನ್ನುವ ನಂಬಿಕೆ ನನಗಿರಲಿಲ್ಲ.

55 ವರ್ಷಗಳ ನಂತರ ಈಗ  ಆ ಹೆಸರಿನ ಬಗ್ಗೆ ಕುತೂಹಲ ಮೂಡಿ ಅಂತರಜಾಲದಲ್ಲಿ ನಾರಾಯಣ ಕಟರ್ ಎಂದು ಹುಡುಕಿದರೆ ಅನೇಕ ರಿಸಲ್ಟುಗಳು ಪ್ರತ್ಯಕ್ಷವಾದವು!  ಅದಕ್ಕೆ ನಾನ್ ಖಟಾಯಿ ಎಂಬ ಹೆಸರಿರುವುದೂ ತಿಳಿಯಿತು. ನಾನ್ ಖಟಾಯಿಯೇ’ ಯಾರದೋ ಬಾಯಲ್ಲಿ ನಾರಾಯಣ ಕಟರ್ ಆಗಿ ಚಲಾವಣೆಗೆ ಬಂದಿರಬಹುದೇ ಎಂಬ ಶಂಕೆಯೂ ಮೂಡಿತು. ದಕ್ಷಿಣ ಕನ್ನಡದ ಹೊರಗೆ ಈ ಹೆಸರು ಇದ್ದಂತಿಲ್ಲ.

ನಾನ್ ಖಟಾಯಿ ಹೆಸರಿನ ಮೂಲ ಹುಡುಕಿಕೊಂಡು ಹೊರಟಾಗ ಪರ್ಶಿಯನ್ ಭಾಷೆಯಲ್ಲಿ ನಾನ್ ಅಂದರೆ ಬ್ರೆಡ್, ಖಟಾಯಿ ಅಂದರೆ ಬಿಸ್ಕೆಟ್ ಎಂಬ ಮಾಹಿತಿ wikiಯಲ್ಲಿ ದೊರಕಿತು.  ನಾನ್ ಖಟಾಯಿ ಸೂರತ್‌ನಲ್ಲಿ 16ನೇ ಶತಮಾನದಲ್ಲಿ ಜನ್ಮ ತಾಳಿತಂತೆ. ನಯವಾದ ಗೋಧಿ ಹಿಟ್ಟು, ಕಡಲೆ ಹಿಟ್ಟು,  ಗೋಧಿ ರವೆ ಮುಂತಾದವನ್ನು ಬಳಸಿ ಇದನ್ನು ತಯಾರಿಸಲಾಗುತ್ತಿತ್ತಂತೆ.

ಈಗ  ಸಮ ಪ್ರಮಾಣದ ಮೈದಾ, ಸಕ್ಕರೆ ಪುಡಿ ಮತ್ತು ತುಪ್ಪವನ್ನು ಸ್ವಲ್ಪ ಬೇಕಿಂಗ್ ಸೋಡಾದೊಂದಿಗೆ ಬೆರೆಸಿ ಉಂಡೆಕಟ್ಟಿ ಕಾದ ಹೊಯ್ಗೆ ಮೇಲೆ ಅಥವಾ ಓವನಿನಲ್ಲಿ ಬೇಕ್ ಮಾಡಿ ಇದನ್ನು ತಯಾರಿಸುವುದಂತೆ.  ಮೈದಾ ಮತ್ತು ಬೇಕಿಂಗ್ ಸೋಡಾ ಮುಖ್ಯ  ingredients ಆಗಿರುವುದರಿಂದ  ಹೆಚ್ಚು ತಿಂದರೆ ಖಂಡಿತವಾಗಿಯೂ ಇದು ಆರೋಗ್ಯಕ್ಕೆ ಹಾನಿಕರ ಎಂದು ನನಗೆ ಅನಿಸಿತು.  ಅಂಗಡಿ, ಬೇಕರಿಗಳಲ್ಲಿ ಸಿಗುವ ನಾರಾಯಣ ಕಟರಿಗೆ  ತುಪ್ಪದ ನೈವೇದ್ಯವನ್ನಾದರೂ ಮಾಡಿರುತ್ತಾರೋ ಇಲ್ಲವೋ.  ಸಕ್ಕರೆಯ ಬದಲು saccharineನಂಥ ಕೃತಕ ಸಿಹಿಕಾರಕ ಮತ್ತು ರಾಸಾಯನಿಕ ರುಚಿವರ್ಧಕಗಳನ್ನು ಬಳಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಕಾದ ಹೊಯ್ಗೆ ಮೇಲೆ ಬೇಕ್ ಮಾಡಿ ಮನೆಯಲ್ಲೇ ಇದನ್ನು ತಯಾರಿಸಬಹುದಾದ ವಿಧಾನವನ್ನು ವಿವರಿಸುವ Bhat & Bhat ವೀಡಿಯೊವನ್ನು ಇಲ್ಲಿ ನೋಡಬಹುದು.




ಈ ಬರಹವನ್ನು ಫೇಸ್ ಬುಕ್‌ನಲ್ಲಿ ಪ್ರಕಟಿಸಿದ್ದೆ. ಅಲ್ಲಿ ಬಂದ ಕೆಲವು ಮಾಹಿತಿಪೂರ್ಣ ಪ್ರತಿಕ್ರಿಯೆಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಬೆಣ್ಣೆ ಬಿಸ್ಕತ್ ಅಂತೀವಿ.
Lakshmi GN

ನಮ್ಮ ಕಡೆ ನಾಣಕಟಾರ್.
Vinayak Kamath

ಬೆಣ್ಣೆ biscuit
Ramesh Dalavai

ಇದು ನಾನ್ ಕಠಾಯ್ ಅಂತನೂ ಕೇಳಿದ್ದೇನೆ. ಚಿಕ್ಕಂದಿನಲ್ಲಿ ನಾವೂ ನಾರಾಯನ್ ಕಠಾರಿ ಅಂತನೇ ಹೇಳ್ತಿದ್ವಿ.
Madhav Dongre

ನಾನ್ ಕಟಾಯಿ ಅದನ್ನೇ ನಾರಾಯಣ್ ಕಟರ್ ಎನ್ನುತ್ತಿದ್ದಿದು.
Raghupathi Tamankar

ನಾನು ಕೂಡ ಬಹಳ ಸಲ ಇದನ್ನು ತಿಂದಿದ್ದೇನೆ. ಇದು ಹಳದಿ ಹಾಗೂ ಬಿಳಿಯ ಬಣ್ಣದಲ್ಲಿ ಸಿಗುತ್ತಿತ್ತು ಎಂದು ನೆನಪು. ಆದರೆ ಈ ಬಿಸ್ಕತ್ತು ಉಜಿರೆಯಲ್ಲಿ ನಾನು ತಿಂದಿರಲಿಲ್ಲ. ಇಂದ್ರರ ಗೂಡಂಗಡಿಯಲ್ಲಿ ನಾನು ಅಕ್ರೋಟ್ ಎಂಬ ಬೆಲ್ಲದ ಚಾಕೊಲೆಟ್ ತಿನ್ನುತ್ತಿದ್ದೆ. ನಂತರ ಬೆಂಗಳೂರಲ್ಲಿ ನವುಕರಿಯಲ್ಲಿದ್ದಾಗ ನೀವು 
ವಿವರಿಸಿದ ತಿಂಡಿ ತಿನ್ನುತ್ತಿದ್ದೆ. ಇಲ್ಲಿ ಇದಕ್ಕೆ ನಾನ್ ಕಟರ್/ಬೆಣ್ಣೆ ಬಿಸ್ಕತ್ತು ಎನ್ನುತ್ತಾರೆ.
Srikara Paranjape

ನಮ್ಮಲ್ಲಿ ಆಗಾಗ ಮಾಡುತ್ತಿದ್ದೆವು , ಈಗ ಅಪರೂಪ. ಜೂ. ಶಂಕರ್‌ಗೆ ಇದು ಬಲು ಇಷ್ಟ.
Subrahmanya Bhat

ಹೌದು.  ನನಗಿದು ಬಲು ಇಷ್ಟ.  ಅಜ್ಜಿ ಮತ್ತು ಅತ್ತೆ ಹೊಯ್ಗೆ ಓವನಿನಲ್ಲಿ ಇದನ್ನು ತಯಾರಿಸುತ್ತಿದ್ದರು. ಅನೇಕರು ಇದನ್ನು ಬೆಣ್ಣೆ ಬಟರ್ ಎಂದು ಗುರುತಿಸಿದ್ದನ್ನು ಗಮನಿಸಿದೆ.  ಆದರೆ ನಮ್ಮ ಕಡೆ ಬಟರ್ ಅಥವಾ ಬೆಣ್ಣೆ ಬಟರ್ (ಬಾರ್ ಸೋಪ್ ಸಾಬೂನು!) ಅಂದರೆ ನೋಡಲು ಹೀಗೆಯೇ ಇರುವ ಆದರೆ ಟೋಸ್ಟ್, ರಸ್ಕುಗಳಂತೆ ಗಟ್ಟಿಯಾದ ಬೇಕರಿ ಉತ್ಪನ್ನ.
Jr Shanmkar

ಮೊದಲು ಮನೆಯಲ್ಲಿ ಎಲ್ಲಾ ready ಮಾಡಿ bakeryಗೆ ಕೊಟ್ಟು bake ಮಾಡಿಸುತ್ತಿದ್ದೆವು. ಇದು ನಾನು primary school ನಲ್ಲಿ ಓದುವ timeನ ವಿಷಯ.
Shubha Mallya

ನಮ್ಮಲ್ಲಿ ನಾರಾಯಣ ಕಠಾರಿ ಅಂತ ಹೆಸರು. ಬೆಣ್ಣೆ ಬಟರ್, ಬಟರ್ ಬಿಸ್ಕತ್ತು ಇವೆಲ್ಲ ಬೇರೆಯ ತಿಂಡಿ - ಚಪ್ಪೆಯದು. ನಾರಾಯಣ ಕಠಾರಿ ಅಥವಾ ನಾನ್ ಕಥಾಯಿ ಶುಧ್ಧಾಂಗ ಸಿಹಿ ತಿಂಡಿ. ಮೈದಾ ಹಿಟ್ಟು, ಪುಡಿ ಮಾಡಿದ ಸಕ್ಕರೆಯನ್ನು - ಬಹುಶಃ ಸಮ ಪ್ರಮಾಣದಲ್ಲಿ, ಬೆಣ್ಣೆ ಅಥವಾ ಡಾಲ್ಡಾ /ವನಸ್ಪತಿ ಯಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು, ಪುಟ್ಟ ಉಂಡೆ ಕಟ್ಟಿ ಕೆಳಗೆ ಮತ್ತು ಮೇಲೆ ಕೆಂಡದ ಉರಿಯಲ್ಲಿ ಕಾಯಿಸಿದರೆ ಈ ರುಚಿಯಾದ ಸಿಹಿ ತಿಂಡಿ ರೆಡಿ. ಬೇಕರಿ ಸುಲಭವಿಲ್ಲದಿದ್ದರೆ ಹಳೆಯ ಪ್ರೆಶರ್ ಕುಕರ್ ನ ಒಳಗೆ ಹೊಯಿಗೆ ಹಾಕಿ ಎಲ್ಯುಮಿನಿಯಂ ತಟ್ಟೆಯಲ್ಲಿ ಉಂಡೆಗಳನ್ನಿಟ್ಟು ಮೇಲಿಂದ ಮಡಿಕೆ ಮುಚ್ಚಳದಲ್ಲಿ ಕೆಂಡ ಹಾಕಿ ಬೇಯಿಸಬಹುದು. ಒವೆನ್ ನಲ್ಲಿ ಬೇಗನೇ ಕಾಯಿಸಬಹುದು, ಆದರೆ ನಿಧಾನವಾಗಿ ಬೇಯಿಸಿದ ಸಮಕ್ಕೆ ಬರುವುದಿಲ್ಲ.
ಬಹಳ ರುಚಿ ಅಂತ ಒಂದೆರಡಕ್ಕಿಂತ ಹೆಚ್ಚು ತಿಂದರೆ ಕಷ್ಟ 😂, ಮೈದಾ + ಎಣ್ಣೆ ಅಲ್ವಾ, ಅಜೀರ್ಣಕಾರಿ.
A.P. Subrahmanyam

ನಾನ್ ಖಟಯ್ ಬೆಣ್ಣೆ ಬಿಸ್ಕತ್ ಗುಜರಾತ್ ಕಡೆ.|
Sreelatha Reddy

ನಮ್ಮ ಮಿತ್ರರೆಲ್ಲರು ರಜೆಇಂದ ಹಿಂದೆ ಬರುವಾಗ ತಪ್ಪದೇ ಮಂಗಳೂರಿನ ತಾಜ್ಮಹಲ್, ಪ್ರಭು ಸ್ವೀಟ್ಸ್, ಶ್ರೇಯಸ್ ಸ್ವೀಟ್ಸ್, ರಾಮ ಭವನ ಅಥವಾ ಮೂಡುಬಿದಿರೆ ನವಭಾರತ ಬೇಕರಿ, ಕಾಮತ್ ಬೇಕರಿ ಇಂದ ಬರುವ ಸಿಹಿತಿಂಡಿಯ ಪೊಟ್ಟಣದಲ್ಲಿ ಈ ನಾರಾಯಣ ಕಟಾರ ಇದ್ದೇ ಇರುತ್ತದೆ.
ತುಂಬಾ ಸ್ವಾದಭರಿತವಾಗಿರುತ್ತದೆ.
Ramdas Kamath

ಪುಣೆಯಲ್ಲಿ ಇದಕ್ಕೆ ನಾನ್ ಕಟಾಯಿ ಎಂದೇ ಹೇಳುತ್ತಾರೆ.
P.B. Kakathkar

ಇದು ಬೆಣ್ಣೆ ಬಿಸ್ಕತ್ ಅಲ್ಲವೇ.
ಇತ್ತೀಚೆಗೆ ರಾಗಿ ಹಿಟ್ಟನ್ನು ಬಳಸಿ ಮಾಡುತ್ತಿದ್ದಾರೆ.
Jagannath BP

ಮನೆಯಲ್ಲೇ ಕುಕರ್ ನಲ್ಲಿ ಮಾಡಬಹುದು. ಆದರೆ- ಓರಿಯೆಂಟಲ್ ಬೇಕರಿ ಕಾರ್ಕಳದಲ್ಲಿ ಮಾಡಿದಷ್ಟು ಸ್ವಾದ ನಮ್ಮಿಂದ ಮಾಡಲಿಕ್ಕಾಗಲಿಕ್ಕಿಲ್ಲ. ನಾರಾಯಣ ಕಠಾರಿ ಅನ್ನುತ್ತಿದ್ದೆವು.
Mukiund Chiplunkar

ಬಾಲ್ಯದಲ್ಲಿ ಸಂಜೆಯ ಚಾಗೆ ಇದು ಕೊಡದಿದ್ದರೆ ಅಳುತ್ತಿದ್ದ ನೆನೆಪು.
Jayakumar Hegde

ಕಾರ್ಕಳದಲ್ಲೂ ನಾರಾಯಣ್ ಕಟರ್  ಹೆಸರಿಂದಲೇ ಫೇಮಸ್ ಆಗಿತ್ತು.
Srivathsa Joshi

ಶಿವರಾಮ ಕಾರಂತರ ಯಾವುದೋ ಒಂದು ಕಾದಂಬರಿಯಲ್ಲಿ..
ನಾನ್ ಕಠಾಯಿಯ ಉಲ್ಲೇಖ ಇದ್ದ ನೆನಪು.
ಬಂಟ್ವಾಳದ ಬಾಳಿಗರು...
ನಮ್ಮ ಬ್ಯಾಂಕಿಗೆ...
ಎರಡು ದೊಡ್ಡ ಬ್ಯಾಗ್ ಹಿಡ್ಕೊಂಡು
ಬಂದು..
ಬಟರ್ ಉಂಟು ..ಕಠಾರ್ ಉಂಟು
ಅಂತ ಹೇಳಿ...
ಹಲ್ವದ ತುಂಡು ಸ್ಯಾಂಪಲ್ ಕೊಡ್ತಿದ್ರು.
ಅವರು ನಾರಾಯಣ ಕಠಾರ್ ಅಂತಲೇ ಹೇಳ್ತಾ ಇದ್ದದ್ದು.
Moorthy Deraje

ಆ ಕಾಲದಲ್ಲಿ ಓವನ್ ಇತ್ತೇ?
ಅಥವಾ ಬೇರೆ ರೀತಿಯಲ್ಲಿ ಬೇಕ್ ಮಾಡುತ್ತಿದ್ದರೆ?
Shankara Hebbar

ಬೆಣ್ಣೆ ಬಿಸ್ಕಟ್ ಅಂತಾರೆ... .......
ಹೌದು .... ಸವಿನೆನಪುಗಳು ಬೇಕು ಸವಿಯಲೀ ಬದುಕು..ನೀವು ಇಂದ್ರರ ಹೋಟೆಲ್ ನೆನಪಿಸಿದಾಗ ನನಗೆ ನನ್ನ ಕಾಲೇಜು ಜೀವನದ (1973 ರಿಂದ1976 ರ ವರೆಗಿನ ಉಜಿರೆ ಕಾಲೇಜಿನ ಹಾಗೂ ಸಿದ್ಧವನ ಗುರುಕುಲ ಜೀವನ) ಸಮಯದಲ್ಲಿ ಅಲ್ಲಿ "ಕುಡ್ತೆ" ಹಾಲು ಕುಡಿಯುತ್ತಿದ್ದುದ್ದು ನೆನಪಾಯಿತು)
Suryanarayana KG

******

ಆದರೆ ನಾರಾಯಣ ಕಟರ್ ಎಂಬ ನಾಮಕರಣ ಮಾಡಿದವರು ಯಾರು ಎಂಬುದು ಸದ್ಯಕ್ಕಂತೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಈ ಭಾಗದಲ್ಲಿ  ನಾನ್ ಖಟಾಯಿಯನ್ನು ಮೊದಲ ಬಾರಿ  ಪರಿಚಯಿಸಿದ ಯಾರೋ ನಾರಾಯಣ ಎಂಬವರ ಹೆಸರು ಇದರೊಂದಿಗೆ  ತಳಕು ಹಾಕಿಕೊಂಡಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. 






Monday 16 October 2023

ಡೈರಿ ನೆನಪಿಸಿದ ಕೋಟಿ ಚೆನ್ನಯ ಕಥಾನಕ



ನಾನು  1969ರಿಂದ ನಿಯಮಿತವಾಗಿ ದಿನಚರಿ ಬರೆಯುತ್ತಾ ಬಂದಿದ್ದೇನೆ. ದಿನಚರಿ ಅಂದರೆ ಸಾಮಾನ್ಯವಾಗಿ ಮುಖ್ಯವೆನ್ನಿಸಿದ ಘಟನೆಗಳನ್ನು ಮಾತ್ರ ದಾಖಲಿಸುತ್ತಾ ಹೋಗುವುದು ವಾಡಿಕೆ.  ಹಾಗಾಗಿ ವಿಶೇಷವೇನೂ ಘಟಿಸದ ಕೆಲವು ದಿನಗಳ ಪುಟಗಳು ಖಾಲಿ ಉಳಿಯುವುದೂ ಉಂಟು. ಉಜಿರೆಯಲ್ಲಿ B.Sc ಮುಗಿಸಿದ ಮೇಲೆ  1972 ಇಸವಿ ಪೂರ್ತಿ ಕಾಲೇಜು, ಪರೀಕ್ಷೆ ಇತ್ಯಾದಿಗಳ ತಲೆ ಬಿಸಿ ಇಲ್ಲದೆ ಮನೆಯಲ್ಲಿ ಆರಾಮವಾಗಿದ್ದೆ.   ಆಗ ಈಗಿನಂತೆ ಕ್ಯಾಂಪಸ್ ಸಿಲೆಕ್ಷನ್ ಇತ್ಯಾದಿಗಳ ಪರಿಕಲ್ಪನೆ ಇರಲಿಲ್ಲ. ಪದವಿ ಮುಗಿಸಿದ ಮೇಲೆ ಮುಂದೇನು ಎಂದು ನಮಗೆ ಕಾಲೇಜಲ್ಲೂ ಮಾರ್ಗದರ್ಶನ ಮಾಡಿದ್ದಿಲ್ಲ. ಹೀಗಾಗಿ ಪತ್ರಿಕೆಗಳಲ್ಲಿ ಬಂದ ಜಾಹೀರಾತುಗಳನ್ನು ಗಮನಿಸುತ್ತಾ ಉದ್ಯೋಗಕ್ಕೆ ಅರ್ಜಿ ಗುಜರಾಯಿಸುವುದಷ್ಟೇ ನನ್ನ ಕೆಲಸವಾಗಿತ್ತು. ಆಗಿನ್ನೂ ಜೆರಾಕ್ಸ್ ಯುಗ ಆರಂಭವಾಗದಿದ್ದುದರಿಂದ ಮಾರ್ಕ್ಸ್ ಕಾರ್ಡುಗಳ ಕಾಪಿಗಳನ್ನು ಟೈಪ್ ಮಾಡಿಸಿ ಗಜೆಟೆಡ್ ಆಫೀಸರುಗಳಿಂದ attest ಮಾಡಿಸಿ ಇಟ್ಟುಕೊಳ್ಳಬೇಕಾಗುತ್ತಿತ್ತು. ಇದಿಷ್ಟು ಬಿಟ್ಟರೆ ಉಳಿದಂತೆ  ನನಗೆ ಸಾಕಷ್ಟು ಸಮಯ ದೊರಕುತ್ತಿತ್ತು. ಹೀಗಾಗಿ ಆ ವರ್ಷ ಒಂದೂ ಪುಟ ಬಿಡದೆ ವಿವರವಾಗಿ ದಿನಚರಿ ಬರೆಯಲು ನನಗೆ ಸಾಧ್ಯವಾಗಿತ್ತು. ಅದರಲ್ಲಿ ನನ್ನೊಬ್ಬನ ಚಟುವಟಿಕೆಗಳ ಬಗ್ಗೆ ಮಾತ್ರವಲ್ಲದೆ ಮನೆಯ ಹಾಗೂ ಬಂಧು ಬಳಗದ  ಎಲ್ಲರಿಗೆ ಸಂಬಂಧಪಟ್ಟ ವಿವರಗಳನ್ನು ದಾಖಲಿಸಿದ್ದರಿಂದ ಇತ್ತೀಚೆಗೆ ಕಂತುಗಳಾಗಿ ಅದನ್ನು ನಮ್ಮ ಕುಟುಂಬದ ಗ್ರೂಪಲ್ಲಿ  ಹಂಚಿಕೊಂಡಿದ್ದೆ.  ಕೆಲವರಿಗೆ ಹಳೆಯ ನೆನಪುಗಳು ಮರುಕಳಿಸಿದ್ದರಿಂದ, ಇನ್ನು ಕೆಲವರಿಗೆ ಗೊತ್ತಿಲ್ಲದ ವಿಷಯಗಳು ತಿಳಿದದ್ದರಿಂದ ಅದು ತುಂಬಾ ಜನಪ್ರಿಯವಾಯಿತು.

ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಅದರಲ್ಲಿ ಒಂದೆಡೆ ಉದಯವಾಣಿ ಪತ್ರಿಕೆಯ ಜನತಾವಾಣಿಗೆ ಪತ್ರ ಬರೆದೆನು ಎಂಬ ದಾಖಲೆ ಇತ್ತು. ಆದರೆ ಯಾವ ವಿಷಯದ ಬಗ್ಗೆ ಎಂಬ ವಿವರಗಳು ಇರಲಿಲ್ಲ. ಇತೀಚೆಗೆ ಅಂತರ್ಜಾಲದಲ್ಲಿ ಹಳೆಯ ಕೋಟಿ ಚೆನ್ನಯ ತುಳು ಚಿತ್ರ ವೀಕ್ಷಿಸಿದಾಗ  ಝಗ್ಗನೆ ಅದರ ಸುಳಿವು ಸಿಕ್ಕಿತು.

ಅದಾಗಲೇ 1971ರಲ್ಲಿ ಎನ್ನ ತಂಗಡಿ ಮತ್ತು ದಾರೆದ ಬುಡೆದಿ ಹಾಗೂ 1972ರಲ್ಲಿ ಪಗೆತ ಪುಗೆ ಮತ್ತು ಬಿಸತ್ತಿ ಬಾಬು ತುಳು ಚಿತ್ರಗಳು ಬಂದಿದ್ದವು.  ಬಿಸತ್ತಿ ಬಾಬು ಅಂತೂ ಭರ್ಜರಿ 75 ದಿನಗಳ ಪ್ರದರ್ಶನವನ್ನೂ ದಾಖಲಿಸಿತ್ತು.  ಹೀಗಾಗಿ ತುಳುನಾಡಿನ ಚಾರಿತ್ರಿಕ ವೀರ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಚಿತ್ರ ತಯಾರಾಗುತ್ತಿರುವುದು ಎಲ್ಲರಲ್ಲೂ ಕುತೂಹಲ ಮತ್ತು ನಿರೀಕ್ಷೆ  ಹುಟ್ಟಿಸಿತ್ತು.  ಹಿಂದಿ ಚಿತ್ರರಂಗದಲ್ಲಿ ಫೈಟರ್ ಶೆಟ್ಟಿ ಎಂದು ಪ್ರಸಿದ್ಧರಾಗಿದ್ದ ಮುದ್ದು ಶೆಟ್ಟಿ ಅವರು ಚಂದುಗಿಡಿಯ ಪಾತ್ರ ಹಾಗೂ  ಮಿನುಗು ತಾರೆ ಕಲ್ಪನಾ ಅತಿಥಿ ಕಲಾವಿದೆಯಾಗಿ ದೇಯಿ ಬೈದೆತಿ ಮತ್ತು ಕಿನ್ನಿದಾರು ಎಂಬ ಎರಡು ಪಾತ್ರಗಳನ್ನು ಆ ಚಿತ್ರದಲ್ಲಿ ನಿರ್ವಹಿಸುವುದು ಇನ್ನೊಂದು ಆಕರ್ಷಣೆಯಾಗಿತ್ತು.  ಉದಯವಾಣಿಯ ಸಿನಿಮಾ ಪುಟದಲ್ಲಿ ಪ್ರತೀ ವಾರವೂ ಈ ಚಿತ್ರದ ಒಂದಾದರೂ ಸ್ಥಿರ ಚಿತ್ರ ಪ್ರಕಟವಾಗುತ್ತಿತ್ತು.  ಹೀಗೆ ಒಂದು ಸಲ ಕಲ್ಪನಾ ಕಾಲಿಗೆ ಹವಾಯಿ ಚಪ್ಪಲ್ ಧರಿಸಿ ಕೈಯಲ್ಲಿ ಬಿಂದಿಗೆ ಹಿಡಿದ ಒಂದು ಚಿತ್ರ ಪ್ರಕಟವಾದಾಗ ‘ಕೋಟಿ ಚೆನ್ನಯರ ಕಾಲದಲ್ಲಿ ಹವಾಯಿ ಚಪ್ಪಲ್‌ಗಳಿದ್ದವೇ?’ ಎಂದು ಎಲ್ಲರೂ ಮೂಗಿಗೆ ಬೆರಳೇರಿಸಿದರು. ಮರುದಿನವೇ ನಾನೂ ಈ ವಿಷಯದ ಬಗ್ಗೆ ಜನತಾವಾಣಿಗೆ ಪತ್ರ ಬರೆದೆ.  ಇದರ ಉಲ್ಲೇಖವೇ ದಿನಚರಿಯಲ್ಲಿ ಇರುವುದು. ಆಕಾಶವಾಣಿಗೆ ನಾನು ಆಗಲೇ ಅನೇಕ ಪತ್ರಗಳನ್ನು ಬರೆದಿದ್ದರೂ ಪತ್ರಿಕೆಗೆ ಕಳಿಸಿದ ಮೊದಲ ಪತ್ರ ಅದಾಗಿತ್ತು. ಉದಯವಾಣಿಯಲ್ಲಿ ಆ ಪತ್ರ ಪ್ರಕಟವಾಯಿತೇ ಎಂದು ನೆನಪಿಲ್ಲ.  ಆದರೆ ಈ ವಿಚಾರದ ಬಗ್ಗೆ ಪತ್ರಿಕೆಗಳಲ್ಲಿ ಬಹಳ ಚರ್ಚೆ ಆಯಿತು. ಕೊನೆಗೆ ಕಲ್ಪನಾ ಅವರೇ ‘ಅದು  ದೃಶ್ಯದ  ಅಭ್ಯಾಸ ನಡೆಸುತ್ತಿದ್ದಾಗಿನ ಫೋಟೋವೇ ಹೊರತು ಚಿತ್ರದ ನಿಜವಾದ ಸನ್ನಿವೇಶದ್ದಲ್ಲ. ಸಿನಿಮಾ ದೃಶ್ಯಗಳಲ್ಲಿ ನಾನೆಂದೂ ಇಂತಹ ಅಭಾಸಗಳಿಗೆ ಎಡೆ  ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟೀಕರಣ ನೀಡಬೇಕಾಯಿತು.

ಸಿನಿಮಾಗಳ ಟೈಟಲ್‌ಗಳಲ್ಲಿ ಸ್ಥಿರಚಿತ್ರ ಅಥವಾ ಸ್ಟಿಲ್ಸ್ ಇಂಥವರಿಂದ ಎಂಬ ಉಲ್ಲೇಖ ಇರುವುದನ್ನು ನೀವು ಗಮನಿಸಿರಬಹುದು.  ಮೂವಿ ಕ್ಯಾಮರಾದಲ್ಲಿ ಸಿನಿಮಾ ಚಿತ್ರೀಕರಣ ಆಗುವಾಗ ಸ್ಟಿಲ್ ಕ್ಯಾಮರಾದಲ್ಲೂ ಕೆಲವು ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತದೆ. ಸಿನಿಮಾ ದೃಶ್ಯಗಳನ್ನು ಕಥೆಯ ಓಟದಂತೆ ಕ್ರಮವಾಗಿ ಚಿತ್ರಿಸದೆ ಅನುಕೂಲಕ್ಕೆ ತಕ್ಕಂತೆ ವಿವಿಧ ಸನ್ನಿವೇಶಗಳನ್ನು ಹಿಂದು ಮುಂದಾಗಿ  ಚಿತ್ರೀಕರಣ ಮಾಡಿಕೊಳ್ಳುತ್ತಾರೆ. ಆಯಾ ದೃಶ್ಯಗಳಲ್ಲಿದ್ದ  ಪಾತ್ರಗಳ ಉಡುಪು, ಸುತ್ತಮುತ್ತಲಿನ ವಸ್ತುಗಳು ಮುಂತಾದವುಗಳ continuityಗೆ ಈ ಸ್ಥಿರ ಚಿತ್ರಗಳು ಬೇಕಾಗುತ್ತವೆ. ಥಿಯೇಟರುಗಳ ಶೋಕೇಸಲ್ಲಿ ಪ್ರದರ್ಶಿಸುವ ಲಾಬಿ ಕಾರ್ಡುಗಳಲ್ಲೂ ಕೆಲವು ಸಲ ಸ್ಟಿಲ್ ಚಿತ್ರಗಳು ಇರುವುದುಂಟು.  ಹೀಗಾಗಿ ಅಲ್ಲಿ ಕಂಡ ದೃಶ್ಯ  ಸಿನಿಮಾದಲ್ಲಿ ಇಲ್ಲದೆಯೂ ಇರಬಹುದು.  ಕೋಟಿಚೆನ್ನಯದ ವಿಷಯದಲ್ಲೂ ಹೀಗೆಯೇ ಆದದ್ದು.  ಹವಾಯಿ ಚಪ್ಪಲ್ ಧರಿಸಿ ನಟಿ ಕಲ್ಪನಾ ದೃಶ್ಯ ಅಭ್ಯಾಸ ಮಾಡುವಾಗ ತೆಗೆದ ಸ್ಟಿಲ್ ಫೋಟೋ ಸರಿಯಾಗಿ ಪರಿಶೀಲಿಸಲ್ಪಡದೆ ಪತ್ರಿಕೆಯಲ್ಲಿ ಕಾಣಿಸಿ ಅವಾಂತರ ಸೃಷ್ಟಿಸಿತ್ತು.  ‘ಕೋಟಿ ಚೆನ್ನಯ ಚಿತ್ರದಲ್ಲಿ ಕಲ್ಪನಾ’ ಎಂಬ ಮಾಮೂಲಿ ಶೀರ್ಷಿಕೆ ಆ ಚಿತ್ರಕ್ಕಿದ್ದುದು ಓದುಗರನ್ನು ಗೊಂದಲಕ್ಕೀಡು ಮಾಡಿದ್ದು ಸಹಜವೇ.

1973ರಲ್ಲಿ ನನಗೆ ದೂರವಾಣಿ ಇಲಾಖೆಯಲ್ಲಿ ಉದ್ಯೋಗ ದೊರಕಿ ಮೇ 15ರಂದು ಮಂಗಳೂರಲ್ಲಿ ನನ್ನ ನೇಮಕಾತಿಯಾಯಿತು. ಅಷ್ಟರಲ್ಲಿ ಕೋಟಿ ಚೆನ್ನಯ ಚಿತ್ರದ ತಯಾರಿಯೂ ಪೂರ್ಣಗೊಂಡು ಜೂನ್ 4ರಂದು ಸೆನ್ಸಾರ್ ಆಗಿ ಜೂನ್ 15 ಶುಕ್ರವಾರದಂದು ಮಂಗಳೂರಿನ ಜ್ಯೋತಿ ಮತ್ತು ಉಡುಪಿಯ ಅಲಂಕಾರ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ದಿನಾ 4 ದೇಖಾವೆ ಮತ್ತು ಭಾನುವಾರ 5 ದೇಖಾವೆಗಳಿದ್ದವು. ಬಿಡುಗಡೆ ಆಗಿ ಮೂರನೇ ದಿನ ಅಂದರೆ 17ನೇ ತಾರೀಕು ಭಾನುವಾರದಂದು ಅಪರಾಹ್ನ 11 ಗಂಟೆಯ ಎರಡನೇ ದೇಖಾವೆಯನ್ನು ರೂ1.95 ದರದ ಟಿಕೆಟ್ ಖರೀದಿಸಿ ಜ್ಯೋತಿ ಚಿತ್ರಮಂದಿರದ ಬಾಲ್ಕನಿಯಲ್ಲಿ ಕುಳಿತು ನೋಡಿದೆ.  ಟಿಕೆಟ್ ಪಡೆಯಲು ಅಂಥ ನೂಕುನುಗ್ಗಲೇನೂ ಇರದಿದ್ದರೂ ಚಿತ್ರ ಮಂದಿರ ತುಂಬಿತ್ತು.  ಕಲ್ಪನಾ ಇರುವ ದೃಶ್ಯಗಳಲ್ಲಿ ಅವರ ಕಾಲಿನಲ್ಲಿ ಹವಾಯಿ ಚಪ್ಪಲ್ ಏನಾದರೂ ಕಾಣಿಸುತ್ತದೆಯೇ ಎಂದು ಕಣ್ಣಲ್ಲಿ ಎಣ್ಣೆ ಹಾಕಿ ಗಮನಿಸಿ ಇಲ್ಲ ಎಂದು ಖಚಿತ ಪಡಿಸಿಕೊಂಡೆ!

ಮಿತ್ರರ ಒತ್ತಾಯದ ಮೇಲೆ 26ನೇ ತಾರೀಕಿನಂದು ಪುನಃ  ಆ ಚಿತ್ರ ನೋಡಿದೆ.  ನವಂಬರ್ 1 ರಂದು ಎಡಕಲ್ಲು ಗುಡ್ಡದ ಮೇಲೆ ಚಿತ್ರ ತೆರೆಕಾಣುವ ವರೆಗೆ ಇದು ಜ್ಯೋತಿ ಚಿತ್ರಮಂದಿರದಲ್ಲಿ 139 ದಿನ ಯಶಸ್ವಿಯಾಗಿ ಪ್ರದರ್ಶಿತವಾಯಿತು.

ವಿಜಯ ಭಾಸ್ಕರ್ ಅವರ ಸಂಗೀತ ಎಂದು ಪತ್ರಿಕೆಗಳಲ್ಲಿ ಬಂದಿದ್ದರೂ ಪಿ.ಬಿ.ಶ್ರೀನಿವಾಸ್, ಹೆಚ್.ಎಂ. ಮಹೇಶ್ ಮತ್ತು ಎಸ್. ಜಾನಕಿ ಹಾಡಿದ ನಾಲ್ಕು ಹಾಡುಗಳು ಇರುವುದೆಂದು ನನಗೆ ಚಿತ್ರ ನೋಡಿದಾಗಲೇ ಗೊತ್ತಾದದ್ದು. ಆಗ  ಗ್ರಾಮೊಫೋನ್ ಇರುವವರಲ್ಲಿ ಅಥವಾ ರೇಡಿಯೋ ಸಿಲೋನ್‌ನಲ್ಲಿ ಮಾತ್ರ ತುಳು ಹಾಡುಗಳು ಕೇಳಲು ಸಿಗುತ್ತಿದ್ದುದು.  ಮುಂದೆ 1976ರಲ್ಲಿ  ಆಕಾಶವಾಣಿ ಮಂಗಳೂರು ಕೇಂದ್ರ ಆರಂಭವಾದ ಮೇಲಷ್ಟೇ ತುಳು ಚಿತ್ರಗೀತೆಗಳು ನಿಯಮಿತವಾಗಿ ಕೇಳಲು ಸಿಗತೊಡಗಿದವು.

ಚಿತ್ರದ ನಾಲ್ಕು ಹಾಡುಗಳ ವಿವರ ಹೀಗಿದೆ.

1. ಜೋಡು ನಂದಾ ದೀಪ ಬೆಳಗ್‌ಂಡ್
ಪ್ರಸಿದ್ಧ ವಿದ್ವಾಂಸ ಅಮೃತ ಸೋಮೇಶ್ವರ ಅವರು ರಚಿಸಿದ ಈ ಹಾಡು  ಕೋಟಿ ಚೆನ್ನಯರು ಜನಿಸಿದ ಸಂದರ್ಭದಲ್ಲಿ ಹಿನ್ನೆಲೆಯಲ್ಲಿ ಕೇಳಿಸುತ್ತದೆ. ಪಿ.ಬಿ. ಶ್ರೀನಿವಾಸ್ ಮತ್ತು ಸಂಗಡಿಗರ ಧ್ವನಿ ಇರುವ ಈ ಹಾಡಿನ  ಮೇಲೆ ಗೈಡ್ ಚಿತ್ರದ ಪಿಯಾ ತೋಸೆ ನೈನಾ ಲಾಗೇರೆ ಹಾಡಿನ ರಾತ್ ಕೋ ಜಬ್ ಚಾಂದ್ ಚಮ್‌ಕೆ ಭಾಗದ ದಟ್ಟ ಪ್ರಭಾವ ಇದೆ.

2. ಮೊಕುಲು ವೀರೆರ್ ಮೊಕುಲು ಶೂರೆರ್
ಪಿ.ಬಿ.ಶ್ರೀನಿವಾಸ್ ಹಾಡಿರುವ ಈ ಹಿನ್ನೆಲೆ ಹಾಡನ್ನು ರಚಿಸಿದವರು ಚಿತ್ರದ ನಿರ್ದೇಶಕ ವಿಶುಕುಮಾರ್.  ಲೇಖಕ, ನಾಟಕ ಕರ್ತ ಆಗಿದ್ದ ವಿಶುಕುಮಾರ್, ಮುಂಬಯಿಯಲ್ಲಿ ಪತ್ರಕರ್ತರಾಗಿದ್ದು ಆ ಮೇಲೆ ತರಂಗ ಸಾಪ್ತಾಹಿಕದ ಚುಕ್ಕಾಣಿ ಹಿಡಿದ ಸಂತೋಷ್ ಕುಮಾರ್ ಗುಲ್ವಾಡಿ ಮತ್ತು ಅಶೋಕ್ ಚರಣ್ ನೈಟ್ ಹೆಸರಲ್ಲಿ ಸಂಗೀತ ಸಂಜೆಗಳನ್ನು ನಡೆಸುತ್ತಿದ್ದು ಆ ಮೇಲೆ ಬೊಳ್ಳಿದೋಟ ಸಿನಿಮಾದ ದಾನೆ ಪೊಣ್ಣೆ ಹಾಡಿನಿಂದ ಬಲು ಪ್ರಸಿದ್ಧರಾದ ಚರಣ್ ಕುಮಾರ್ - ಈ ಮೂವರು ದಕ್ಷಿಣ ಕನ್ನಡದ ಕೀರ್ತಿಯನ್ನು ಎತ್ತರಕ್ಕೇರಿಸಿದ ಕುಮಾರತ್ರಯರು ಎಂದು ಕೆಲವರು ಹೇಳುವುದಿದೆ.

3. ಎಕ್ಕಸಕ
ಅವಳಿ ತಮ್ಮಂದಿರಾದ ಕೋಟಿ ಚೆನ್ನಯರು ಅನಿರೀಕ್ಷಿತವಾಗಿ ತನ್ನ ಮನೆಗೆ ಆಗಮಿಸಿದಾಗ ಅಕ್ಕ ಕಿನ್ನಿದಾರು ಖುಶಿಯಿಂದ ಹಾಡುವ ಈ ಹಾಡನ್ನು ಬರೆದವರು ಪ್ರೊ. ವಿವೇಕ ರೈ. ಧ್ವನಿ ಎಸ್. ಜಾನಕಿ ಅವರದ್ದು. ಚಿತ್ರದ ಎಲ್ಲ ಹಾಡುಗಳ ಪೈಕಿ ಇದು ಹೆಚ್ಚು ಜನಪ್ರಿಯತೆ ಗಳಿಸಿತು. ಎಕ್ಕಸಕ ಎಂಬುದು ದಿನ ನಿತ್ಯದ ತುಳು ಸಂಭಾಷಣೆಯಲ್ಲಿ ಬರುವ ಪದವಲ್ಲ. ಅನಿರೀಕ್ಷಿತವಾದ ಆನಂದೋದ್ವೇಗದ ನಡವಳಿಕೆ ಎಂಬ ಅರ್ಥ ಇದಕ್ಕಿದೆಯಂತೆ. ನಾನು ಕಾರ್ಯಕ್ರಮಗಳಲ್ಲಿ ನುಡಿಸುವ ದಾಂಡಿಯಾ ಮೆಡ್ಲೆಯಲ್ಲಿ ಈ ಹಾಡಿನ ತುಣುಕು ಇರುತ್ತದೆ.  ಇದರ ಅನೇಕ remixಗಳೂ ಬಂದಿವೆ. 

4. ಕೆಮ್ಮಲೆತ ಬ್ರಹ್ಮ
ಪಿ.ಬಿ.ಶ್ರೀನಿವಾಸ್ ಮತ್ತು ಹೆಚ್.ಎಂ. ಮಹೇಶ್ ಹಾಡಿರುವ ಇದನ್ನು ಬರೆದವರು ವಿಶುಕುಮಾರ್. ಒಂದೆರಡು ಪದಗಳಷ್ಟೇ ಮಹೇಶ್ ಅವರ ಸೋಲೊ ಧ್ವನಿಯಲ್ಲಿದ್ದು ಉಳಿದಂತೆ ಅವರು ಪಿ.ಬಿ.ಎಸ್ ಅವರೊಂದಿಗೆ ದನಿಗೂಡಿಸಿದ್ದಾರೆ. ನಂತರ ಅವರೇ ಮುಖ್ಯ ಗಾಯಕರಾಗಿ ಹಾಡಿದ ಅನೇಕ ತುಳು ಗೀತೆಗಳು  ಜನಪ್ರಿಯವಾದವು. ಇದರ ಒಂದು interlude ಮಧುಮತಿ ಚಿತ್ರದ ಟೂಟೆ ಹುವೆ ಖ್ವಾಬೋ ನೆ ಹಾಡಿನಿಂದ ನೇರ ಎತ್ತಿಕೊಂಡದ್ದಾಗಿದೆ.

ವಿಜಯಭಾಸ್ಕರ್ ನೈಟ್ ಕಾರ್ಯಕ್ರಮದಲ್ಲಿ ಕೆಮ್ಮಲೆತಾ ಬ್ರಹ್ಮ ಹಾಡುತ್ತಿರುವ ಪಿ.ಬಿ.ಶ್ರೀನಿವಾಸ್ ಮತ್ತು ಹೆಚ್.ಎಂ. ಮಹೇಶ್.



ಹಾಡುಗಳನ್ನು ಇಲ್ಲಿ ಆಲಿಸಿ.



ಪಂಜೆ ಮಂಗೇಶ್ ರಾವ್ ಅವರು 1924ರಲ್ಲಿ ಬರೆದ ಕೋಟಿ ಚೆನ್ನಯ ಕೃತಿ ಇತ್ತೀಚೆಗೆ ಅಂತರ್ಜಾಲದಲ್ಲಿ ಓದಲು ಸಿಕ್ಕಿದಾಗ  ಅದನ್ನು ಆಧರಿಸಿಯೇ ಈ ಸಿನಿಮಾ ನಿರ್ಮಾಣ ಮಾಡಿರಬಹುದು ಎಂದು ನನಗೆ ಅನ್ನಿಸಿತು. ಈ ಕೃತಿ ಮತ್ತು ಸಿನಿಮಾದ ಬಹುತೇಕ ಸನ್ನಿವೇಶಗಳು ಮತ್ತು ಸಂಭಾಷಣೆಗಳಲ್ಲಿ ಸಮಾನತೆ ಇದೆ. ಈ ಬಗ್ಗೆ ಸಿನಿಮಾದ ಟೈಟಲ್ಸ್‌ನಲ್ಲಿ ಅಧಿಕೃತ ಉಲ್ಲೇಖ ಇಲ್ಲ.

ಪಂಜೆಯವರು ಕೋಟಿ ಚೆನ್ನಯ ಕಥೆಯನ್ನು ಏನೆಕಲ್ಲು ಉಪಾದ್ಯಾಯರಾದ ಉಕ್ಕಣ್ಣ ಗೌಡರ ಸಹಕಾರದಿಂದ 1904ರಲ್ಲಿ ಸಂಗ್ರಹಿಸಿದರಂತೆ. 1909ರಲ್ಲಿ ಅವರಿಗೆ ಮೊಗ್ಲಿಂಗ್ ಅವರು ಸಂಗ್ರಹಿಸಿದ ತುಳು ಪಾಡ್ದೊನೆಳು ಕೃತಿ  ದೊರಕಿತು. ಆ ಮೇಲೆ ಆವರು ಕಥೆಯ ರಂಗಸ್ಥಳಗಳಾಗಿದ್ದ  ಪಂಜ ಪಡುಮಲೆ ಗ್ರಾಮಗಳಲ್ಲಿ ಸಂಚರಿಸಿ ಅಲ್ಲಿಯ ಭೂತ ಕಟ್ಟುವವರಿಂದ ಬೇರೆ ಬೇರೆ ಪಾಠಾಂತರಗಳನ್ನು ಸಂಗ್ರಹಿಸಿದರು. 1917ರಲ್ಲಿ ಆರ್.ಎಸ್. ಬಾಗಲೋಡಿಯವರ ಸಹಕಾರದಿಂದ ಪಾಡ್ದೊನೆಗಳು ಕೃತಿಯ ಕನ್ನಡ  ಅನುವಾದ ಮಾಡಿದರು. ಆದರೆ ವಿವಿಧ ಮೂಲಗಳ ವಿವರಗಳು ಒಂದಕ್ಕೊಂದು ತಾಳೆ ಆಗದ್ದರಿಂದ ಈ ಯೋಜನೆ ಕೆಲವು ವರ್ಷ ನೆನೆಗುದಿಗೆ ಬಿತ್ತು. ಕೊನೆಗೆ ಅಕ್ರಮ, ವ್ಯರ್ಥ, ಪುನರುಕ್ತ, ಅಪಾರ್ಥ, ಹತೋಪಮೆ, ಲೋಕನ್ಯಾಯ ವಿರುದ್ಧತೆ ಎಂಬ ವಚನದೋಷಗಳ ಪೈಕಿ ಪಾಡ್ದೊನೆಗಳಲ್ಲಿದ್ದ ಪ್ರಥಮ ಮೂರನ್ನು ತೆಗೆದು ಕಥಾಭಾಗಗಳೆಲ್ಲ ಒಂದನ್ನೊಂದು ಕೂಡುವಂತೆ ಮಾಡಿ ಕೋಟಿ ಚೆನ್ನಯ ಕೃತಿ 1924ರಲ್ಲಿ ಪ್ರಕಟವಾಯಿತು.

ಕಥಾ ಸಾರಾಂಶ
ಪಂಜೆಯವರ ಕೃತಿ ಮತ್ತು 1973ರ ಸಿನಿಮಾದಲ್ಲಿ ಸುಮಾರಾಗಿ ಸಮಾನವಾಗಿರುವ  ಕಥಾ ಸಾರಾಂಶ ಇಷ್ಟು.

ಪಡುಮಲೆ, ಪಂಜ, ಎಣ್ಮೂರು ಎಂಬ ಮೂರು ಸೀಮೆಗಳಿಗೆ ಪೆರುಮಾಳ, ಕೇಮರ ಮತ್ತು ದೇವ ಎಂಬವರು ಬಲ್ಲಾಳರು. ಬೇಟೆಯಾಡಲು ಹೋದ ಪಡುಮಲೆ ಪೆರುಮಾಳ ಬಲ್ಲಾಳನ ಕಾಲಿಗೆ ಚುಚ್ಚಿದ ಮುಳ್ಳು. ಸಾಯಿನ ಬೈದ್ಯನ ತಂಗಿ ತುಂಬು ಬಸುರಿ ದೇಯಿಯ ಮದ್ದು. ಬಲ್ಲಾಳ ಗುಣಮುಖ. ಆದರೆ ಆಕೆಗೆ ಕೊಡುತ್ತೇನೆ ಎಂದು ಹೇಳಿದ್ದನ್ನು ಕೊಡಲು ಬಲ್ಲಾಳ ಮೀನ ಮೇಷ ಎಣಿಸಿದ. ಏನೋ ಒಂದಿಷ್ಟು ಕೊಟ್ಟು ಕಳಿಸುವಷ್ಟರಲ್ಲಿ ಆಕೆಗೆ ನೋವು ಆರಂಭವಾಗಿ ಬೀಡಿನಲ್ಲೇ ಹೆರಿಗೆಯಾಗಿ ಕೋಟಿ ಚೆನ್ನಯರ ಜನನ. ಪೆರುಮಾಳ ಬಲ್ಲಾಳನ ಆಶ್ರಯದಲ್ಲಿ  ಬೆಳೆದು ದೊಡ್ಡವರಾದ ಕೋಟಿ ಚೆನ್ನಯರಿಗೆ ಮಂತ್ರಿ ಮಲ್ಲಯ್ಯ ಬುದ್ದಿವಂತನೊಂದಿಗೆ ವೈರ. ಆತನ ಕೊಲೆಯಲ್ಲಿ ಪರ್ಯವಸಾನ. ಪೆರುಮಾಳ ಬಲ್ಲಾಳನೊಂದಿಗೆ ಮನಸ್ತಾಪ. ಕೇಮರ ಬಲ್ಲಾಳನ ಪಂಜ ಸೀಮೆಗೆ ಕೋಟಿ ಚೆನ್ನಯರ ಪಯಣ. ಅಲ್ಲಿ ಅಕ್ಕ ಕಿನ್ನಿದಾರು, ಭಾವ ಪಯ್ಯಬೈದ್ಯನ ಭೇಟಿ. ಅಲ್ಲೇ ವಾಸ್ತವ್ಯ. ಕೇಮರ ಬಲ್ಲಾಳರ ಆಪ್ತ ಚಂದುಗಿಡಿಯೊಂದಿಗೆ ವೈರ. ಕೋಟಿ ಚೆನ್ನಯರು ಪಂಜ ಸೀಮೆಯಲ್ಲಿರುವುದನ್ನು  ಅರಿತ ಪೆರುಮಾಳ ಬಲ್ಲಾಳ. ಅವರನ್ನು ಒಪ್ಪಿಸುವಂತೆ ಕೇಮರ ಬಲ್ಲಾಳನಿಗೆ ರಾಯಸ. ಚಂದುಗಿಡಿ ಮೋಸದಿಂದ ಕೋಟಿ ಚೆನ್ನಯರನ್ನು ಬಂಧನದಲ್ಲಿಟ್ಟ. ಅವರು ಅಲ್ಲಿಂದ ತಪ್ಪಿಸಿಕೊಂಡು ಎಣ್ಮೂರು ಸೀಮೆಗೆ ಹೋದರು. ಎಣ್ಮೂರಿನ ದೇವ ಬಲ್ಲಾಳ ಅವರನ್ನು ಸ್ವಾಗತಿಸಿದ. ಪಂಜದ ಕೇಮರ ಬಲ್ಲಾಳನೊಂದಿಗೆ ವ್ಯಾಜ್ಯವಿದ್ದ ಅಯ್ಯನೂರು ಗುತ್ತನ್ನು ಕೇಳಿ ಪಡೆದರು. ಹಂದಿ ಬೇಟೆಯ ನೆವದಿಂದ ಪಂಜದವರಿಗೂ ಕೋಟಿ ಚೆನ್ನಯರಿಗೂ ಹೊಯ್  ಕೈ. ಇದರಿಂದಾಗಿ ಪಡುಮಲೆಯ ಪೆರುಮಾಳ ಬಲ್ಲಾಳ ಮತ್ತು ಪಂಜದ ಕೇಮರ ಬಲ್ಲಾಳನ ಬಂಟ ಚಂದುಗಿಡಿಗೆ ಎಣ್ಮೂರಿನ ಮೇಲೆ ದಂಡೆತ್ತಿಹೋಗಲು ನೆವ ಸಿಕ್ಕಿತು. ಮೈತ್ರಿ ಮಾಡಿಕೊಂಡ  ಪಡುಮಲೆ ಮತ್ತು ಪಂಜ ಹಾಗೂ ಎಣ್ಮೂರು ಸೀಮೆಯವರೊಳಗೆ ಕಾಳಗ. ಚಂದುಗಿಡಿ ಸತ್ತು ಪಡುಮಲೆ-ಪಂಜದವರು ಕದನದ ಕಳ ಬಿಟ್ಟು ಓಡಿದರು. ಆದರೆ ಕೋಟಿ ಚೆನ್ನಯರೂ ಕಾಳಗದಲ್ಲಿ ಹತರಾದರು. ಎಣ್ಮೂರು ದೇವ ಬಲ್ಲಾಳನು  ಅವರ ಸಮಾಧಿಗಳನ್ನು ನಿರ್ಮಿಸಿ ಗರಡಿಗಳನ್ನು ಕಟ್ಟಿಸಿದನು. ಪೆರುಮಾಳ ಬಲ್ಲಾಳನೂ ಪಂಜದವರೊಡನೆ ಸೇರಿ ಅವರೊದನೆ ಹಗೆ ಸಾಧಿಸಿದ್ದಕ್ಕೆ ಪಶ್ಚಾತ್ತಾಪ ಪಟ್ಟು ಅವರಿಗೆ ಗುಡಿಗಳನ್ನು ಕಟ್ಟಿಸಿ ಅವರ ಬಿಂಬಗಳನ್ನು ಸ್ಥಾಫಿಸಿದನು. ಕಾಲಕ್ರಮೇಣ ತುಳುನಾಡಿನ ಅನೇಕ ಸ್ಥಳಗಳಲ್ಲಿ ಅವರ ಗರಡಿಗಳು ಸ್ಥಾಪಿಸಲ್ಪಟ್ಟವು.

ಇದಿಷ್ಟು ಕಥಾಬಾಗವನ್ನು ಸುಂದರ ನುಡಿಕಟ್ಟು ಹಾಗೂ ಗಾದೆ ಮಾತುಗಳನ್ನು ಪೋಣಿಸಿ ಪಂಜೆಯವರು 63 ಪುಟಗಳ ಪುಸ್ತಕ ಮಾಡಿದರು,  ವಿಶುಕುಮಾರರು ಒಂದೂವರೆ ಗಂಟೆ ಅವಧಿಯ 15 ರೀಲಿನ ಸಿನಿಮಾ ಮಾಡಿದರು.

ನುಡಿಕಟ್ಟು ಹಾಗೂ ಗಾದೆ ಮಾತುಗಳು

ಪಂಜೆಯವರ ಕೃತಿಯಲ್ಲಿರುವ ಕೆಲವು ನುಡಿಕಟ್ಟು ಹಾಗೂ ಗಾದೆ ಮಾತುಗಳು ಹೀಗಿವೆ.

ಕಾಲಿಗೆ ಕಾಸರ್ಕನ ಮುಳ್ಳು ಚುಚ್ಚಿ ನರನರನೆ ತಲೆಗೆ ಏರಿದ ನೋವು.
ಅನ್ನದಲ್ಲಿ ರುಚಿ, ಹಾಸಿನಲ್ಲಿ ನಿದ್ದೆ, ಮನಸ್ಸಿನಲ್ಲಿ ಗೆಲುವು ಇಲ್ಲದಾಗು.
ನಾಚಿಕೊಂಡು, ಹೇಚಿಕೊಂಡು ಬರು.
ಕಡ್ಡಿಯಂತೆ ಕಂಗಾಲಾಗು.
ಅವಶ್ಯವಿಲ್ಲದ ಭವಿಷ್ಯ ಬರುವುದು.
ಎದೆಯಲ್ಲಿ ಇದ್ದದ್ದು ನಡುವಿಗೆ ಬಂತು,
ನಡುವಿನಲ್ಲಿ ಇದ್ದದ್ದು ಕಾಲಿಗೆ ಇಳಿಯಿತು,
ಕಾಲಿನಲ್ಲಿ ಇದ್ದದ್ದು ಪಾದದಲ್ಲಿ ಆಯಿತು,
ಪಾದದಲ್ಲಿ ಇದ್ದದ್ದು ಭೂಮಿಗೆ ಬಿತ್ತು.
ಬಿಂದಿಗೆ ತುಂಬ ಹಾಲು, ಹಾಲಿಗಾಗಿ ಹಸು, ಹಸು ಬತ್ತಿದರೆ ಎಮ್ಮೆ.
ಸಣ್ಣ ಕೈಗಳಿಂದ ಕಿತ್ತ ಚೆಂಡನ್ನು ದೊಡ್ಡ ಕೈಗಳಿಂದ ಸೆಳೆದು ತರುವುದು.
ತೊಂಡುತೊಳಸು ಸದಾ ಸಾರ್ವದಾ ತಪ್ಪದಿರುವುದು.
ಮನೆಯ ಹೆಂಗಸರು ನೀರಿಗೆ ಬರುವಷ್ಟರಲ್ಲಿ ಎತ್ತುಗಳು ಗದ್ದೆಯಲ್ಲಿರಬೇಕು.
ಏಟು ಎತ್ತಿನ ಬೆನ್ನಿಗೆ. ನೋವು ನಮ್ಮ ಎದೆಗೆ.
ಬಿತ್ತಿದ ಗದ್ದೆಯಲ್ಲಿ ಅಗೆಯು ಅಂದವಾಗಬೇಕಾದರೆ ಮೊದಲಿನ ಕೊಳೆ ನೀರು ಕಳೆದು ತಿಳಿ ನೀರು ಬಿಡಬೇಕು.
ಗದ್ದೆಯಲ್ಲಿ ಚಿಟ್ಟೆಗೆ ಕುಡಿಯಲು ನೀರು ಇಲ್ಲದೆ ಕೊಕ್ಕರೆ ಆಡುತ್ತಿತ್ತು.
ಕಾಡಿನ ಕಾಸರ್ಕನ ಮರಕ್ಕೆ ಅಡ್ಡ ಬಿದ್ದಿದ್ದರೆ ಹಣ್ಣೆಲೆ ಉದುರುತ್ತಿತ್ತು, ಚಿಗುರೆಲೆ ನಗುತ್ತಿತ್ತು.
ತಲೆಗೆ ಹೊಯ್ದ ನೀರು ಕಾಲಿಗಿಳಿಯುತ್ತದೆ, ಕಾಲಿಗೆ ಎರೆದ ನೀರು ತಲೆಗೆ ಏರುವುದೇ?
ಜೋಯೆಂದು ಧುಮುಕುವ ಗದ್ದೆ ನೀರಿನ ಜೋಗು.
ಎಣಿಲ ಕಾಲದ ಉಪ್ಪನ್ನ, ಸುಗ್ಗಿ ಕಾಲದ ಮಳೆ ಬೆಳೆ ನಿಮಗೂ ಸರಿ ನಮಗೂ ಸರಿ.
ಕೊಂದವರಿಗೆ ಕೊಲೆ ತಪ್ಪಲಿಕ್ಕಿಲ್ಲ.
ಕರಿಕರಿ ಕೋಪ.
ಪಾಲೆ ದಾಟಿ, ಬೈಲು ಕಳೆದು, ಬೆಟ್ಟ ಹತ್ತಿ, ಹಿತ್ತಿಲಿಗಿಳಿದು, ಅಡ್ಕವನ್ನು ಅಡರಿ, ಹೊಡೆಯಲ್ಲಿ ಹೋಗಿ, ಹೊಳೆಯನ್ನು ಹಾಯ್ದು, ಪಡುವಣ ಪಟ್ಟಸಾಲೆಗೆ ಹೋಗಿ ಉಪ್ಪರಿಗೆ ಏರು.
ಹಾಲೆಮರಕ್ಕೆ ಹೋದ ಪಂಚವಳ್ಳಿ ಜಾತಿಯ ವೀಳ್ಯ, ಮಾವಿನ ಮರಕ್ಕೆ ಹೋದ ಮುಂಡುವಳ್ಳಿ ಜಾತಿಯ ವೀಳ್ಯ.
ಬೆಳೆಯ ಬಿಟ್ಟ ಬಳ್ಳಿ ಬೆಳೆಸಿದವನನ್ನೇ ಬಂಧಿಸಿ ಬಿಟ್ಟಿತು.
ಮೈ ಬೆವರಿನ ಉಪ್ಪಿನ ಸುಂಕವೋ, ಬಾಯಿ ವೀಳ್ಯದ ಸುಣ್ಣದ ಸುಂಕವೋ.
ಬಂಟರ ಕಾಲಿನ ಎಕ್ಕಡದ ಹೂವಿನ ಮೇಲೆ ಸುಂಕ, ಸೆಟ್ಟಿಯ ಕೊಡೆಯ ಕಾವಿನ ಮೇಲೆ ಸುಂಕ, ಅರಸುಮಗನ ದಂಡಿಗೆಯ ಕೊಂಬಿನ ಮೇಲೆ ಸುಂಕ.
ಬಿಂಕದ ಬಲ್ಲಾಳ ಸುಂಕದ ಕಲ್ಲಾಳ.
ನೂಲು ಹಾಕಿದವರಾದರೆ ಕೆಂದಾಳೆಯ ಪದ್ಮ ಕಟ್ಟೆ. ಒಕ್ಕಲಿಗರಾದರೆ ಬಡವರ ಚಪ್ಪರ,  ಜಾತಿಯವರಾದರೆ ಮೊಗಸಾಲೆಯಲ್ಲಿ ತೂಗುಯ್ಯಾಲೆ.
ಉಲ್ಲಾಸದ ಏರ್ತ, ಉದ್ವೇಗದ ಇಳಿತ.
ಬಿತ್ತಿದ ಗದ್ದೆಗೆ ತೆವರಿ ಗಟ್ಟಿ ಇರಬೇಕು. ಹುಟ್ಟಿದ ಹೆಣ್ಣಿಗೆ ತವರು ಗಟ್ಟಿ ಇರಬೇಕು.
ಒಂದೇ ಮಡಕೆಯಲ್ಲಿ ಉಂಡ ಉಂಡಾಡಿಗಳು.
ನೀರು ಸೋಕಿದರೆ ಬಿಸಿ, ಗಾಳಿ ತಾಕಿದರೆಉರಿ ಎಂಬಂತಾಗು.
ಕಿಚ್ಚಿನ ಕಿಡಿಯೆಂದು ಗೊತ್ತಿದ್ದು ಕಚ್ಚೆಯಲ್ಲಿ  ಕಟ್ಟಿಕೊಳ್ಳುವುದೇಕೆ.
ಮುಂಜಾನೆಯ ಮುಂಬಿಸಿಲಿಗೆ ಹಾಕಿಸಿ, ಸಂಜೆಯ ತಂಬಿಸಿಲಿಗೆ  ತೆಗೆಯಿಸಿ ಸರಿಗೊಳಿಸಿದ ತಾಳೆಯ ಗರಿಗಳ ಕಟ್ಟು.
ಹಿತ್ತಾಳೆಯ ಕಿವಿ, ಕೆಸರುಗೂಟದ ಮನಸ್ಸು.
ಅಟ್ಟ ಅನ್ನದಲ್ಲಿ ಉಟ್ಟ ಉಡಿಗೆಯಲ್ಲಿ  ಹೊರಟು ಬರಬೇಕು.
ಬಾಳೆಯಾಗಿ ಬೆಳೆಸಿದ್ದು ತಾಳೆಯಾಗಿ ತಲೆಯನ್ನು ಜಜ್ಜಿತು.
ಗೊತ್ತಾಗುವುದಕ್ಕೆ ಆರು ತಿಂಗಳಾದರೆ ಪೂರೈಸುವುದಕ್ಕೆ ಎಷ್ಟು ಕಾಲ ಬೇಕೋ?
ಆಳ ನೋಡಿ ತೊರೆಯನ್ನು ದಾಟಬೇಕು, ವೇಳೆ ನೋಡಿ ದೊರೆಯನ್ನು ಕಾಣಬೇಕು.
ಬಳ್ಳಿಯಷ್ಟು ಬಾವು ಇಲ್ಲ, ಮೂಗಿನಷ್ಟು ಮೊನೆಯಿಲ್ಲ.
ಇಂಬು ಎಂದು ನಂಬಿದ್ದು ಅಂಬು ಆಯಿತು.
ಕಳ್ಳು ಕುಡಿದು ಮೈ ಹಾಳು ಮಾಡಬಾರದು, ಸುಳ್ಳು ನುಡಿದು ಬಾಯಿ ಹೊಲಸು ಮಾಡಬಾರದು.
ಅಧರ್ಮ, ದಾರಿದ್ರ್ಯ, ರೋಗ, ಅಂತಃಕಲಹ ಇವೇ ಒಂದು ರಾಜ್ಯದ ತಿರುಳನ್ನು ತಿನ್ನುವ ಹುಳುಗಳು.
ಮುಂಜಾನೆಯ ನೆರಳಿನಂತೆ ಗಿಡ್ಡವಾಗು, ಸಂಜೆಯ ನೆರಳಿನಂತೆ  ಉದ್ದವಾಗು.
ನಾಗರಹಾವನ್ನೂ ಕನ್ನಡಿ ಹಾವನ್ನೂ ಒಂದೇ ಬಿಲದಲ್ಲಿ ಇಟ್ಟಂತೆ.
ಜಗ ಇರುವಷ್ಟು ಕಾಲ ಜಗಳ ಇದೆ.
ಬೇಡುವ ಬಡವನು ಕೊಡುಗೈಯಾಗಿರುವ ಧೊರೆಗೆ ಬೇಕಾದವನಾಗುತ್ತಲೇ ಚಾಡಿಯ ಬಾಯಿ ತುರಿಸಹತ್ತುತ್ತದೆ.
ಅರಸನ ಕಿವಿಗೆ ತರಲೆ ಹಾಳು, ಬಾಗಿಲ ಕಿವಿಗೆ ಒರಲೆ ಹಾಳು.
ಉಂಡ ಉಣಿಸು ಕುತ್ತವಾಗು, ಕುಡಿದ ನೀರು ಪಿತ್ತವಾಗು.
ಬೂದುಗಣ್ಣಿನ ಮೊಲ, ಪಚ್ಚೆ ಕಾಲಿನ ಜಿಂಕೆ, ಕುಟುರುವ ಕುಡುಮುಲು ಹಕ್ಕಿ.
ಬಂಡೆ ಇದ್ದಲ್ಲಿ ಕಲ್ಲು, ಕಂಡಿ ಇದ್ದಲ್ಲಿ ಜನ, ಮೈದಾನು ಇದ್ದಲ್ಲಿ ನಾಯಿ.
ಓಡಿದರೆ ಮಾನದ ಮೇಲೆ ಬರುತ್ತದೆ, ನಿಂತರೆ ಪ್ರಾಣದ ಮೇಲೆ ಬರುತ್ತದೆ.
ಸುಗ್ಗಿಬೆಳೆಯ ಹುಲ್ಲುಸೂಡಿಗಳನ್ನು ಮಗುಚುವಂತೆ ಅಡ್ಡ ಹಾಕು.
ಬೆಂಕಿಗೆ ಚಳಿ ಹಿಡಿದರೆ,  ನೀರಿಗೆ ಬಾಯಾರಿದರೆ, ಗಾಳಿಗೆ ಮೈ ಬೆವರಿದರೆ ನಿವಾರಿಸುವವರು ಯಾರು?
ಹಣೆಯನ್ನು ಕಡಿದು ಮಣೆಯಾಗಿ ಇಡು.
ಕಾಡಿ ಕಾಡಿ ಆಳಿದವರ ಹೆಸರು ಅಳಿಯಿತು, ನಾಡಿಗಾಗಿ ಕಾದಾಡಿ ಕಾಯ ಬಿಟ್ಟು ಕೈಲಾಸಕ್ಕೆ ಸಂದವರ ಹೆಸರು ಉಳಿಯಿತು.



 



Tuesday 12 September 2023

ಬಣ್ಣಗಳ ಬಣ್ಣನೆ



"700 ನ್ಯಾನೊ ಮೀಟರ್ ಅಥವಾ 430 ಟೆರಾ ಹರ್ಟ್ಜ್ ತರಂಗಾಂತರದಲ್ಲಿ ಇದು ಕೆಂಪು ಬಣ್ಣ."

"580 ನ್ಯಾನೊ ಮೀಟರ್ ಅಥವಾ 515 ಟೆರಾ ಹರ್ಟ್ಜ್ ತರಂಗಾಂತರದಲ್ಲಿ  ಇದು ಹಳದಿ ಬಣ್ಣ."

ಇದೇನಿದು, "275.5 ಮೀಟರ್ ಅಥವಾ 1089 ಕಿಲೋಹರ್ಟ್ಜ್ ತರಂಗಾಂತರದಲ್ಲಿ ಇದು ಆಕಾಶವಾಣಿ ಮಂಗಳೂರು ಕೇಂದ್ರ" ಅಂದಂತಿದೆಯಲ್ಲ ಎಂದು ನಿಮಗನ್ನಿಸಬಹುದು.  ಒಂದು ವೇಳೆ ಕಾಮನಬಿಲ್ಲಿಗೆ ಮಾತನಾಡಲು ಬರುತ್ತಿದ್ದರೆ ಅದು ತನ್ನ ಬಣ್ಣಗಳನ್ನು ಹೀಗೆಯೇ ಪರಿಚಯಿಸುತ್ತಿತ್ತು. ಏಕೆಂದರೆ ನಮಗೆ ಕಾಣುವ ಬಣ್ಣಗಳನ್ನೊಳಗೊಂಡ ಬೆಳಕು ಕೂಡ ರೇಡಿಯೋ ತರಂಗಗಳಂತೆ ಸೆಕೆಂಡಿಗೆ 186000  ಮೈಲುಗಳ ವೇಗದಲ್ಲಿ ನಿರ್ವಾತ ಪ್ರದೇಶದಲ್ಲೂ ಚಲಿಸಬಲ್ಲ  ಇಲೆಕ್ಟ್ರೊ ಮ್ಯಾಗ್ನೆಟಿಕ್ ಸ್ಪೆಕ್ಟ್ರಂನ ಭಾಗವೇ ಆಗಿದೆ. 



ರೇಡಿಯೋ ವೇವ್, ಮೈಕ್ರೊವೇವ್, ಎಕ್ಸ್ ರೇ, ಗಾಮಾ ರೇ, ಇನ್ಫ್ರಾ ರೆಡ್, ಅಲ್ಟ್ರಾ ವಯಲೆಟ್  ಮುಂತಾದವುಗಳನ್ನೊಳಗೊಂಡ ವಿಶಾಲ ವ್ಯಾಪ್ತಿಯ ಎಲೆಕ್ಟ್ರೊಮ್ಯಾಗ್ನೆಟಿಕ್ ಸ್ಪೆಕ್ಟ್ರಮಿನ ಒಂದು ಅತಿ ಚಿಕ್ಕ ಭಾಗವೇ ನಮ್ಮ ಕಣ್ಣು ಗುರುತಿಸಬಹುದಾದ ಬಣ್ಣಗಳನ್ನೊಳಗೊಂಡ ಬೆಳಕು. ಈ ಭಾಗದಲ್ಲಿ ಇರುವ ತರಂಗಾಂತರಗಳು  ಕೆಂಪು, ಕಿತ್ತಳೆ, ಹಳದಿ, ಹಸುರು, ನೀಲ, ನೀಲಿ, ನೇರಳೆ ಮತ್ತು ಅವುಗಳ ಸಂಯೋಗದಿಂದ ಉತ್ಪತ್ತಿಯಾಗುವ ಇತರ ಬಣ್ಣಗಳಿಗೆ ಸಂಬಂಧಿಸಿದ ಪ್ರಭೆಯನ್ನು ಹೊರ ಸೂಸುತ್ತವೆ. ಇದು ವಸ್ತುಗಳ ಮೇಲೆ ಬಿದ್ದಾಗ ಅವು ತಮ್ಮ ಗುಣಧರ್ಮಕ್ಕನುಗುಣವಾಗಿ ಕೆಲವು ತರಂಗಗಳನ್ನು ಹೀರಿಕೊಂಡು ಇನ್ನುಳಿದ ತರಂಗಗಳನ್ನು ಪ್ರತಿಫಲಿಸುತ್ತವೆ. ಹೀಗೆ ಅಸ್ವೀಕೃತವಾದ ತರಂಗಗಳು ನಮ್ಮ ಕಣ್ಣನ್ನು ಪ್ರವೇಶಿಸಿದಾಗ  ಆಯಾ ತರಂಗಕ್ಕೆ  ಅನುಸಾರವಾಗಿ ನಮ್ಮ ಕಣ್ಣಿನ ರೆಟೀನಾದಲ್ಲಿ ಇರುವ coneಗಳೆಂಬ ಅಂಗಾಂಶಗಳು ಆ  ಬಣ್ಣವನ್ನು ಗುರುತಿಸಿ ಮೆದುಳಿಗೆ ರವಾನಿಸುತ್ತವೆ.  ಎಲ್ಲ ಬಣ್ಣಗಳನ್ನು ಗುರುತಿಸುವ ಸಾಮರ್ಥ್ಯ ಇಲ್ಲದೆ ಬಣ್ಣಗುರುಡು ಅನುಭವಿಸುವ ನತದೃಷ್ಟರೂ ಇರುತ್ತಾರೆ.  ಪ್ರಾಣಿಗಳು ನಮ್ಮಂತೆ ಎಲ್ಲ ಬಣ್ಣಗಳನ್ನು ಗುರುತಿಸಲಾರವಂತೆ. 

ಕಾಮನ ಬಿಲ್ಲಿನ ಏಳು ಬಣ್ಣಗಳಿಗೆ ಸಂಬಂಧಿಸಿದ ತರಂಗಾಂತರಗಳನ್ನು ಇಲ್ಲಿ ನೋಡಬಹುದು.


 

ಇಲ್ಲಿ wavelengthನ್ನು 1/1000000 ಮಿಲಿಮೀಟರಿಗೆ ಸಮನಾದ ನ್ಯಾನೊ ಮೀಟರ್  ಮತ್ತು frequencyಯನ್ನು 1000 ಮೆಗಾ ಹರ್ಟ್ಜ್‌ಗೆ ಸಮನಾದ ಟೆರಾ ಹರ್ಟ್ಜ್‌ಗಳಲ್ಲಿ ತೋರಿಸಲಾಗಿದೆ.  ಕೊನೆಯ ಕಾಲಂನಲ್ಲಿರುವುದು ಇಲೆಕ್ಟ್ರಾನ್ ವೋಲ್ಟುಗಳಲ್ಲಿ ತೋರಿಸಿದ  ಈ ತರಂಗಗಳ ಶಕ್ತಿ.  ಸೂರ್ಯನಿಂದ ಬರುವ ಸ್ಪೆಕ್ಟ್ರಮ್‌ನಲ್ಲಿ ನಮಗೆ ಗೋಚರವಾಗುವ ಈ ಭಾಗದ ತರಂಗಗಳ ಶಕ್ತಿಯೇ ಅತ್ಯಂತ ಹೆಚ್ಚು.  

ತರಂಗಾಂತರಗಳು ಭಿನ್ನವಾಗಿರುವುದರಿಂದಲೇ ಬಿಳಿ ಬೆಳಕನ್ನು ಗಾಜಿನ ಪ್ರಿಸಂ ಮೂಲಕ ಹಾಯಿಸಿದಾಗ ಬಣ್ಣಗಳು ಬೇರೆ ಬೇರೆಯಾಗಿ ಕಾಣುವುದು.  ಕೆಲವೊಮ್ಮೆ ಆಕಾಶದಲ್ಲಿ ಮಳೆ ಹನಿಗಳು ಪ್ರಿಸಂನಂತೆ ಮತ್ತು ಎದುರುಗಡೆಯ ಮೋಡಗಳು ಪರದೆಯಂತೆ ವರ್ತಿಸಿ ಕಾಮನಬಿಲ್ಲು ಕಾಣಿಸುತ್ತದೆ.



ಪ್ರಕೃತಿಯಲ್ಲಿರುವ ಅಸಂಖ್ಯ ಬಣ್ಣಗಳನ್ನು ನೋಡಿ ಆನಂದಿಸಿದ ಮನುಷ್ಯ ಮೊದಲು ಹೂ, ಎಲೆ, ತೊಗಟೆ, ಮಣ್ಣು ಮುಂತಾದ ಪ್ರಕೃತಿಜನ್ಯ ವಸ್ತುಗಳನ್ನು, ಆ ಮೇಲೆ ರಾಸಾಯನಿಕಗಳನ್ನು  ಬಳಸಿ ತಾನೇ ಬಣ್ಣಗಳನ್ನು ತಯಾರಿಸಲು ಕಲಿತ. ಕೆಂಪು, ನೀಲಿ, ಹಳದಿ ಬಣ್ಣಗಳನ್ನು ವಿವಿಧ ಅನುಪಾತಗಳಲ್ಲಿ ಮಿಶ್ರ ಮಾಡಿ ಬೇರೆ ಬೇರೆ ಬಣ್ಣಗಳನ್ನು ಪಡೆಯಬಹುದು ಎಂದೂ ಆತನಿಗೆ ಗೊತ್ತಾಯಿತು.

ಉದಾ:
ಹಳದಿ + ನೀಲಿ = ಹಸುರು
ಕೆಂಪು + ನೀಲಿ = ನೇರಳೆ
ಹಳದಿ + ಕೆಂಪು = ಕಿತ್ತಳೆ
ಇತ್ಯಾದಿ.

RYB ಪದ್ಧತಿ
ಕೆಂಪು, ಹಳದಿ ಮತ್ತು ನೀಲಿ ಬಣ್ಣಗಳನ್ನು ಮತ್ತು ಕತ್ತಲು ಹಾಗೂ ಬೆಳಕಿನ ಪ್ರತೀಕಗಳಾದ ಕಪ್ಪು ಮತ್ತು ಬಿಳಿಯನ್ನು ವಿವಿಧ ಪ್ರಮಾಣಗಳಲ್ಲಿ ಬೆರೆಸಿ ಕಲ್ಪನಾತೀತ ಸಂಖ್ಯೆಯ ವರ್ಣ ಛಾಯೆಗಳನ್ನು ಸೃಷ್ಟಿಸಬಹುದು.  ಈ  ಪರಂಪರಾಗತ ತಂತ್ರವನ್ನು ಆಧುನಿಕ ಪರಿಭಾಷೆಯಲ್ಲಿ  RYB ಪದ್ಧತಿ ಅನ್ನಲಾಗುತ್ತದೆ. ಇದರಲ್ಲಿ ಎಲ್ಲ ಮೂಲ ಬಣ್ಣಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿದಾಗ ಕಪ್ಪಿಗೆ ಸಮೀಪವಾದ ಕಡು ಕಂದು ಬಣ್ಣ ಸೃಷ್ಟಿಯಾಗುವುದನ್ನು ಈ ಚಿತ್ರದಲ್ಲಿ ನೋಡಬಹುದು. ಇಲ್ಲಿ ಬಣ್ಣಗಳನ್ನು ಮಿಶ್ರ ಮಾಡಿದಾಗ ಒಂದು ಬಣ್ಣವು ಇನ್ನೊಂದರಿಂದ ಕಳೆಯಲ್ಪಡುವುದರಿಂದ ಇದನ್ನು subtractive ಮಿಶ್ರಣ ಅನ್ನಲಾಗುತ್ತದೆ.  ಕನ್ನಡದಲ್ಲಿ ಇದನ್ನು ಋಣಾತ್ಮಕ ವರ್ಣ ಮಿಶ್ರಣ ಅನ್ನಬಹುದು.



ಯಾವ ಬಣ್ಣಕ್ಕೆ ಯಾವುದನ್ನು ಬೆರೆಸಿದರೆ ಯಾವ ಹೊಸ ಬಣ್ಣ ಸಿಗುತ್ತದೆ ಎಂದು ನನಗೆ ತಿಳಿದದ್ದು ಮನೆಯಲ್ಲಿ ತಯಾರಿಸುತ್ತಿದ್ದ ಚೌತಿ ಗಣಪನಿಗೆ ಬಳಿಯುತ್ತಿದ್ದ ಬಣ್ಣಗಳನ್ನು ನೋಡಿ.  ಆ ಮೇಲೆ ಹೈಸ್ಕೂಲಿನ ಡ್ರಾಯಿಂಗ್ ಕ್ಲಾಸಿನಲ್ಲಿ ಇನ್ನಷ್ಟು ಮಾಹಿತಿ ದೊರಕಿತು.  ಯಾವುದೇ ಬಣ್ಣಕ್ಕೆ ಸ್ವಲ್ಪ ಬಿಳಿ ಬಣ್ಣವನ್ನು ಸೇರಿಸಿದರೆ ಅದು ಸಮವಾಗಿ ಹರಡಿಕೊಳ್ಳುತ್ತದೆ ಎಂಬ ರಹಸ್ಯ ಹೇಳಿಕೊಟ್ಟದ್ದು ನಮ್ಮ ಡ್ರಾಯಿಂಗ್ ಮಾಸ್ಟರಾಗಿದ್ದ ಶ್ರೀನಿವಾಸ ರಾಯರು. ಇದರಿಂದಾಗಿ ನಾವು ಬಳಸುತ್ತಿದ್ದ ಗಿಟಾರ್ ಬ್ರಾಂಡಿನ ಬಣ್ಣಗಳ ಪೆಟ್ಟಿಗೆಯ ಬಿಳಿ ಬಣ್ಣದ ಟ್ಯೂಬು ಬೇಗ ಬರಿದಾಗುತ್ತಿತ್ತು!  

RGB ಪದ್ಧತಿ
1860ರ ಸುಮಾರಿಗೆ ಕಲರ್ ಫೋಟೊಗ್ರಫಿಯ ಪ್ರಯತ್ನಗಳು ಆರಂಭವಾದಾಗ ಕೆಂಪು, ಹಸುರು, ನೀಲಿಗಳನ್ನು ಮೂಲ ಬಣ್ಣಗಳಾಗಿಸಬೇಕಾಗುತ್ತದೆ ಎಂಬ ವಿಚಾರ ಬೆಳಕಿಗೆ ಬಂತು. ಇದನ್ನು RGB ಪದ್ಧತಿ ಅನ್ನಲಾಗುತ್ತದೆ. ಬಣ್ಣಗಳ ಬೆಳಕನ್ನು ಬಳಸುವ  ಟಿ.ವಿ, ಡಿಜಿಟಲ್ ಕ್ಯಾಮರಾ, ಸ್ಮಾರ್ಟ್ ಫೋನ್ ಮುಂತಾದ  ಉಪಕರಣಗಳಲ್ಲೂ ಈ ಪದ್ಧತಿಯನ್ನೇ ಬಳಸಲಾಗುತ್ತದೆ.  ಇಂಥ ಉಪಕರಣಗಳ ಪರದೆಯಲ್ಲಿ ಒತ್ತೊತ್ತಾಗಿರುವ ಹಸುರು, ಕೆಂಪು, ನೀಲಿ ಬಣ್ಣದ ಬೆಳಕನ್ನು ಸೂಸುವ ಚುಕ್ಕೆಗಳನ್ನು ಅಗತ್ಯಕ್ಕೆ ತಕ್ಕಂತೆ ಉದ್ದೀಪನಗೊಳಿಸಿ ಬೇಕಿದ್ದ ವರ್ಣದ ಛಾಯೆಯನ್ನು ಪಡೆಯಲಾಗುತ್ತದೆ.   ಈ ಪದ್ಧತಿಯಲ್ಲಿ  ಮೂಲ ಬಣ್ಣಗಳ ಬೆಳಕನ್ನು ಸಮಪ್ರಮಾಣದಲ್ಲಿ  ಮಿಶ್ರ ಮಾಡಿದಾಗ ಬಿಳಿ ಬಣ್ಣ ಉಂಟಾಗುತ್ತದೆ. ಇಲ್ಲಿ ಬಣ್ಣಗಳ ಬೆಳಕನ್ನು ಮಿಶ್ರ ಮಾಡಿದಾಗ ಒಂದು ಬಣ್ಣವು ಇನ್ನೊಂದಕ್ಕೆ ಕೂಡಲ್ಪಡುವುದರಿಂದ ಇದನ್ನು additive ಮಿಶ್ರಣ ಅನ್ನಲಾಗುತ್ತದೆ.  ಕನ್ನಡದಲ್ಲಿ ಇದನ್ನು ಧನಾತ್ಮಕ  ವರ್ಣ ಮಿಶ್ರಣ ಅನ್ನಬಹುದು.




ಬಣ್ಣದ ಪಿಗ್ಮೆಂಟುಗಳ RYB ಪದ್ಧತಿ ಮತ್ತು  ಬಣ್ಣದ ಬೆಳಕಿನ RGB ಪದ್ಧತಿ ಏಕೆ ಭಿನ್ನವಾಗಿ ವರ್ತಿಸುತ್ತವೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆಗಲೇ ನೋಡಿದಂತೆ  ಭೌತಿಕ ವಸ್ತುಗಳಾದ ಬಣ್ಣದ pigmentಗಳು ಯಾವ ಬಣ್ಣವನ್ನು ಹೀರದೆ ಪ್ರತಿಫಲಿಸುತ್ತವೋ ಆ ಬಣ್ಣದವಾಗಿ ಕಾಣಿಸುತ್ತವೆ. ಒಂದು ರೀತಿ ಇದು ಫೊಟೊದ negative ಇದ್ದಂತೆ. ಅಂದರೆ ನಮಗೆ ಹಳದಿಯಾಗಿ ಕಾಣುವ ಪೈಂಟಿನಲ್ಲಿ ಹಳದಿ ಹೊರತು ಉಳಿದೆಲ್ಲ ಬಣ್ಣಗಳಿರುತ್ತವೆ. ಇದು subtractive ಅಂದರೆ ಋಣಾತ್ಮಕ ತತ್ತ್ವ. ಆದರೆ ಬಣ್ಣದ ಬೆಳಕಿನ ಸಂದರ್ಭದಲ್ಲಿ ಆ ಬೆಳಕು ಯಾವ ಬಣ್ಣದ್ದೋ ಅದೇ ಬಣ್ಣದ್ದಾಗಿ ಕಾಣಿಸುವುದು (Positive). ಇದು additive ಅಂದರೆ ಧನಾತ್ಮಕ ತತ್ತ್ವ. ಹೀಗಾಗಿ ಎರಡು ಬಣ್ಣದ pigment(ಋಣಾತ್ಮಕ) ಮತ್ತು ಎರಡು ಬಣ್ಣದ ಬೆಳಕು ( ಧನಾತ್ಮಕ) ಮಿಶ್ರ ಮಾಡಿದಾಗ ಪರಿಣಾಮಗಳು ಬೇರೆ ಬೇರೆ ಎಂದು ಸ್ಥೂಲವಾಗಿ ತರ್ಕಿಸಬಹುದು.

ಏಳು ಬಣ್ಣ ಸೇರಿ ಬಿಳಿಯ ಬಣ್ಣ?
ಈ ಹೇಳಿಕೆ ಸಂಪೂರ್ಣ ಸತ್ಯವಲ್ಲ.  ಧನಾತ್ಮಕ ಮಿಶ್ರಣ ಪದ್ಧತಿ ಅನುಸರಿಸುವ ಬಣ್ಣಗಳ ಬೆಳಕು ಮಿಶ್ರವಾದಾಗ ಮಾತ್ರ ಬಿಳಿಯ ಬಣ್ಣ ಉಂಟಾಗುವುದು.  ಋಣಾತ್ಮಕ ಮಿಶ್ರಣ ತತ್ತ್ವವನ್ನು ಅನುಸರಿಸುವ ಭೌತಿಕ ಬಣ್ಣಗಳನ್ನು ಬೆರೆಸಿದರೆ ಸಿಗುವುದು ಕಪ್ಪು ಬಣ್ಣ.  ಈ ಚಿತ್ರ ನೋಡಿ.
 

 

CMYK ಪದ್ಧತಿ
ಆಧುನಿಕ ಮುದ್ರಣ ಮಾಧ್ಯಮದಲ್ಲಿ ವರ್ಣಗಳನ್ನು ಮೂಡಿಸಲು subtractive ಮಾಡೆಲ್  RYBಯನ್ನೇ ಹೋಲುವ ಆದರೆ  ಹಳದಿ, ಕೆಂಪಿಗೆ ಸಮೀಪವಾದ Megenta, ಮತ್ತು ನೀಲಿಗೆ ಸಮೀಪವಾದ Cyan ಗಳು ಮುಖ್ಯ ಬಣ್ಣಗಳಾಗಿ ಉಳ್ಳ  CMYK  ಪದ್ಧತಿಯನ್ನು ಕಪ್ಪು ಬಣ್ಣದ ಜೊತೆ ಬಳಸುತ್ತಾರೆ.  ಹೀಗಾಗಿ ಡಿಜಿಟಲ್ ಉಪಕರಣಗಳ ಸ್ಕ್ರೀನಿನಲ್ಲಿ ಕಾಣುವ RGB additive ಪದ್ಧತಿಯ ಚಿತ್ರಗಳನ್ನು CMYK subtractive ಪದ್ಧತಿ ಬಳಸುವ ಪ್ರಿಂಟರ್ ಬಳಸಿ ಮುದ್ರಿಸಿದಾಗ ಬಣ್ಣಗಳು ಕೊಂಚ ಭಿನ್ನವಾಗಿ ಕಾಣಿಸುವುದನ್ನು ಗಮನಿಸಬಹುದು.



ಹಿಂದಿನ ಕಾಲದ ಪತ್ರಿಕೆಗಳಲ್ಲಿ ಒಂದೇ ಚಿತ್ರವನ್ನು ಮೂರು ಬಣ್ಣದ ಫಿಲ್ಟರುಗಳೊಂದಿಗೆ ಮೂರು ಸಲ ಮುದ್ರಿಸಿ ವರ್ಣಗಳ ಛಾಯೆಗಳನ್ನು ಹೊಮ್ಮಿಸುತ್ತಿದ್ದರಂತೆ. ಅದಕ್ಕಾಗಿ ಇದನ್ನು ತ್ರಿವರ್ಣ ಚಿತ್ರಗಳು ಅನ್ನುತ್ತಿದ್ದರು.  ಹಳೆ ಚಂದಮಾಮದ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ವರ್ಣದ ಮೇಲೆ ಇನ್ನೊಂದು ವರ್ಣದ  ಗೆರೆ ಮತ್ತು ಚುಕ್ಕೆಗಳನ್ನು ಮೂಡಿಸಿ ಬೇರೆ ಬೇರೆ ಛಾಯೆಗಳನ್ನು ಮೂಡಿಸುತ್ತಿದ್ದುದು ತಿಳಿಯುತ್ತದೆ.





ಬೆಳಕಿನಂತೆ ಶಬ್ದ ಕೂಡ ಇಲೆಕ್ಟ್ರೊಮ್ಯಾಗ್ನೆಟಿಕ್ ಸ್ಪೆಕ್ಟ್ರಂನ ಭಾಗವೇ ಎಂಬ ಪ್ರಶ್ನೆ ಮೂಡಬಹುದು.  ಅಲ್ಲ ಎಂಬುದು ಇದರ ಉತ್ತರ. ಮಾನವನ ಕಿವಿಗಳು ಗುರುತಿಸಬಹುದಾದ  20ರಿಂದ 20000 ಹರ್ಟ್ಜ್ ಫ್ರೀಕ್ವೆನ್ಸಿ ಹೊಂದಿರುವ ಶಬ್ದದ ಅಲೆಗಳು ಬೆಳಕಿನಂತೆ ನಿರ್ವಾತ ಪ್ರದೇಶದಲ್ಲಿ ಸೆಕೆಂಡಿಗೆ 186000 ಮೈಲುಗಳ ವೇಗದಲ್ಲಿ ಚಲಿಸಲಾರವು. ಸೆಕೆಂಡಿಗೆ ಸುಮಾರು 350 ಮೀಟರುಗಳ ವೇಗದಲ್ಲಿ ಚಲಿಸಲು ಅವುಗಳಿಗೆ ಯಾವುದಾದರೂ ಮಾಧ್ಯಮದ ಅಗತ್ಯವಿರುತ್ತದೆ.   ಯಾವುದಾದರೂ ವಸ್ತುವು ಕಂಪಿಸಿದಾಗ ಅದರಿಂದ ಹೊರಟ ಅಲೆಗಳನ್ನು ನಡುವಿನ ಮಾಧ್ಯಮವು ರಿಲೇ ಮಾಡುತ್ತಾ ನಮ್ಮ ಕಿವಿಗಳಿಗೆ ಮುಟ್ಟಿಸಿದಾಗ ನಾವು ಅದನ್ನು ಆಲಿಸಿದ ಅನುಭವ ಹೊಂದುತ್ತೇವೆ.


- ಚಿದಂಬರ ಕಾಕತ್ಕರ್.












Thursday 7 September 2023

ಇತಿಹಾಸದ ಗರ್ಭಕ್ಕೆ ಸೇರಿದ ಮುಂಡಾಜೆ ಸೇತುವೆ.



1919ರ ಸುಮಾರಿಗೆ ಬ್ರಿಟಿಷರು ಸುಲಲಿತ ರಸ್ತೆ ಸಂಪರ್ಕಕ್ಕಾಗಿ ದಕ್ಷಿಣ ಕನ್ನಡದಲ್ಲಿ ಅನೇಕ ಸೇತುವೆಗಳನ್ನು ನಿರ್ಮಿಸಿದ್ದರು. ಪಾಣೆಮಂಗಳೂರು, ಉಪ್ಪಿನಂಗಡಿ, ನಿಡಿಗಲ್ ಇತ್ಯಾದಿ ಸೇತುವೆಗಳ ಜೊತೆ ಮೃತ್ಯುಂಜಯಾ ನದಿಗಡ್ಡವಾಗಿ ಮುಂಡಾಜೆಯ ಸೇತುವೆಯೂ ಅದೇ ಸಮಯದಲ್ಲಿ ನಿರ್ಮಿಸಲ್ಪಟ್ಟಿರಬಹುದು ಎಂದು ನನ್ನ ಅಂದಾಜು. ಇಲ್ಲಿ ಕೆಲವರ್ಷಗಳ ಹಿಂದೆ ಹೊಸ ಸೇತುವೆ ನಿರ್ಮಾಣವಾಗಿದ್ದರೂ ಸಾಕಷ್ಟು ಗಟ್ಟಿಮುಟ್ಟಾಗಿದ್ದ ಹಳೇ ಸೇತುವೆ ಹಾಗೆಯೇ ಇತ್ತು. ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ರಸ್ತೆ ಅಭಿವೃದ್ಧಿಯ ಕಾರ್ಯ ನಡೆಯುತ್ತಿರುವುದರಿಂದ ಇನ್ನೊಂದು ಹೊಸ ಸೇತುವೆ ನಿರ್ಮಾಣಕ್ಕಾಗಿ ಈ ಹಳೆ ಸೇತುವೆಯನ್ನು ಈಗ ತೆರವುಗೊಳಿಸಲಾಗಿದೆಯಂತೆ.

ನಮ್ಮ ಬಾಲ್ಯಕಾಲದ ಅನೇಕ ನೆನಪುಗಳು ಈ ಸೇತುವೆಯೊಂದಿಗೆ ಬೆಸೆಯಲ್ಪಟ್ಟಿವೆ. ನಾವು ಮುಂಡಾಜೆ ಶಾಲೆಯಲ್ಲಿ ಓದುತ್ತಿದ್ದಾಗ ಮೃತ್ಯುಂಜಯಾ ನದಿ ದಾಟಿ ಹೋಗಲು ಹತ್ತಿರದ ದಾರಿ ಇತ್ತು. ಮಳೆಗಾಲದ ಆರಂಭ ಮತ್ತು ಕೊನೆಯಲ್ಲಿ  ನೀರು ಸ್ವಲ್ಪ  ಹೆಚ್ಚಾದರೂ ಎಚ್ಚರ ವಹಿಸಿ ನದಿ ದಾಟಲು ಆಗುತ್ತಿತ್ತು. ನಾವು ಹುಡುಗರು ಕೌಪೀನ ಧಾರಿಗಳಾಗಿ, ಹುಡುಗಿಯರು ಸೊಂಟಕ್ಕೊಂದು  ಬಟ್ಟೆ ಸುತ್ತಿಕೊಂಡು ಪುಸ್ತಕಗಳ ಚೀಲ ಎತ್ತಿ ಹಿಡಿದು, ಸಹಾಯಕ್ಕೆ ಬರುತ್ತಿದ್ದ ನಮ್ಮ ದೊಡ್ಡಣ್ಣ ಅಥವಾ ಅನಂತ ಭಟ್ಟರ ಕೈ ಹಿಡಿದು ಮೆಲ್ಲ ಮೆಲ್ಲನೆ ಒಬ್ಬೊಬ್ಬರಾಗಿ ಆಚೆ ದಡ ಸೇರುತ್ತಿದ್ದೆವು. ನೀರಿನ ರಭಸ ಕಂಡರೆ ತಲೆ ತಿರುಗುವಂತಾಗುವುದರಿಂದ ನೇರವಾಗಿ ಮುಂದಕ್ಕೆ ನೋಡುತ್ತಾ ಸಾಗಬೇಕೆಂದು ನಮಗೆ ಹೇಳುತ್ತಿದ್ದರು. ಸಂಜೆ ಹಿಂತಿರುಗುವಾಗ ನದಿ ದಡದಿಂದ  ಕೂಕುಳು ಹಾಕಿದರೆ ಅಣ್ಣ ಅಥವಾ ಅನಂತ ಭಟ್ಟರು ಮತ್ತೆ ಸಹಾಯಕ್ಕೆ ಬರುತ್ತಿದ್ದರು.

ಕೆಲವರು ಸಂಜೆ ಹಿಂತಿರುಗುವಾಗ ಕಮ್ಮಿ ನೀರಿರಬಹುದೆಂದು ನದಿ ವರೆಗೆ ಬಂದು ನಿರಾಶರಾಗಿ ಮತ್ತೆ ಮುಂಡಾಜೆ ವರೆಗೆ ನಡೆದು ಸೇತುವೆಯ ಮೇಲಿಂದ ಬರಬೇಕಾದ ಪ್ರಸಂಗವೂ ಬರುತ್ತಿತ್ತು. ಆದರೆ ನಾನು ಒಮ್ಮೆಯೂ ಹೀಗೆ ಹಿಂದೆ ಹೋದದ್ದಿಲ್ಲ. ಅಪಾಯಕಾರಿ ಮಟ್ಟದ ನೀರಿನಲ್ಲಿ ಯಾರಾದರೂ ದಾಟುವ ಸಾಹಸ ಮಾಡಿದರೆ ಹಿರಿಯರಿಂದ ಬೈಸಿಕೊಳ್ಳಬೇಕಾಗುತ್ತಿತ್ತು.  ಹೀಗೆ ಬೈದುದಕ್ಕೆ ಉಡಾಫೆ ಹುಡುಗನೊಬ್ಬ ‘ನಮಗೇನಾದರೂ ಆದರೆ ನಿಮಗೇನು?’  ಎಂದು ನಮ್ಮಣ್ಣನಿಗೆ  ಎದುರುತ್ತರ ಕೊಟ್ಟಿದ್ದನಂತೆ.  ಹಾಗೆಂದು ಅವರು  ನದಿ ದಾಟಿಸುವ ಕಾಯಕವನ್ನೇನೂ ನಿಲ್ಲಿಸಲಿಲ್ಲ. 

ಆದರೆ ಅನೇಕ ವರ್ಷಗಳ ನಂತರ  ಒಂದು ಸಲ ನಮ್ಮ ಇನ್ನೊಬ್ಬ ಅಣ್ಣನ ಮಗಳು ನದಿ ದಾಟುವಾಗ ನೀರಿನ ಸೆಳೆತಕ್ಕೆ ಬ್ಯಾಲೆನ್ಸ್ ತಪ್ಪಿ  ಬಿದ್ದು  ಹತ್ತು ಹದಿನೈದು ಮೀಟರ್ ಕೊಚ್ಚಿಕೊಂಡು ಹೋಗಿದ್ದಳು. ಜೊತೆಗಿದ್ದವರು ಬೊಬ್ಬೆ ಹೊಡೆದಾಗ ಅಲ್ಲೇ ಇದ್ದ  ಕೆಲಸದ ಆಳೊಬ್ಬ ಆಕೆಯನ್ನು ಅಂದು ರಕ್ಷಿಸಿದ್ದ.

ಮಳೆ ಜೋರಾಗಿ ನದಿ ತುಂಬಿ ಹರಿಯತೊಡಗಿದ ಮೇಲೆ  ಮೂರು ತಿಂಗಳು ಮುಂಡಾಜೆ ಪೇಟೆಗೆ ಬಂದು ಈ ಸೇತುವೆ ಮೇಲಿಂದ ಸುತ್ತು ಬಳಸು ದಾರಿಯಲ್ಲಿ ಶಾಲೆಗೆ ಹೋಗುವುದು ನಿತ್ಯದ ಕಾಯಕವಾಗುತ್ತಿತ್ತು.  ಎರಡು ವರ್ಷಗಳ ಅವಧಿಯಲ್ಲಿ ಸುಮಾರು ಆರು ತಿಂಗಳು ದಿನಕ್ಕೆರಡು ಬಾರಿಯಂತೆ ನಾನು ಈ ಸೇತುವೆ ಮೇಲಿನಿಂದ ನಡೆದು ಹೋಗಿದ್ದೇನೆ.

ಈ ಸೇತುವೆಯಲ್ಲಿ ಒಂದು ವಿಶೇಷವಿತ್ತು. ಸಂಪೂರ್ಣವಾಗಿ ಕಬ್ಬಿಣವನ್ನು ಬಳಸಿ ರಚಿಸಲ್ಪಟ್ಟುದರಿಂದ ಬಸ್ಸು ಲಾರಿಗಳು ಸಂಚರಿಸುವಾಗ ಇದು ಗಡ ಗಡ ನಡುಗುತ್ತಿತ್ತು! ಆ ಕಂಪನವನ್ನು ಅನುಭವಿಸಲು ಒಂದೆರಡು ಘನ ವಾಹನಗಳು ಬರುವ ವರೆಗೆ ನಾವು ಸೇತುವೆ ಮೇಲೆ ನಿಂತು ಕಾಯುವುದಿತ್ತು. ಇದರ ಕುಂದಗಳು ಸೇತುವೆಯಿಂದ ಎರಡೆರಡು ಮೀಟರ್ ಹೊರ ಚಾಚಿದ್ದುದು ಇನ್ನೊಂದು ವಿಶೇಷ.

ಅಲ್ಲಿ ಸಿಗುತ್ತಿದ್ದ ಸುಮಾರು ಒಂದು ಕಿಲೊಮೀಟರ್ ರಾಜ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ಸು ಲಾರಿಗಳನ್ನು ನೋಡುವುದೇ ನಮಗೊಂದು ಥ್ರಿಲ್! ಅವುಗಳ ಬೆನ್ನಮೇಲೆ ಬರೆಯಲಾಗಿರುತ್ತಿದ್ದ Sound Horn Please ಎಂಬ ವಾಕ್ಯದಲ್ಲಿ ಈ Sound Horn ಎಂದರೇನೆಂದು ನನಗೆ ಅರ್ಥವಾಗುತ್ತಿರಲ್ಲಿಲ್ಲ. ಈ Sound Horn Please ಎಂಬಲ್ಲಿ Sound ಕ್ರಿಯಾಪದವೆಂದು ನನಗೆ ತಿಳಿದದ್ದು ಒಮ್ಮೆ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದಾಗ ಅಲ್ಲಿಯ ಲಾರಿಯೊಂದರ ಹಿಂದೆ ಬರೆದಿದ್ದ ಕೃಪಯಾ ಹಾರನ್ ಬಜಾಯಿಯೇ ಎಂಬ ವಾಕ್ಯ ನೋಡಿದ ಮೇಲೆಯೇ!

ಬಸ್ಸುಗಳು ಟಾಟಾ ಮರ್ಸಿಡಿಸ್ ಬೆಂಜ್ ಅಥವಾ ಫಾರ್ಗೋ ಮತ್ತು ಲಾರಿಗಳು ಬೆಂಜ್, ಫಾರ್ಗೊ, ಫೋರ್ಡ್ ಅಥವಾ ಬೆಡ್‌ಫೋರ್ಡ್ ಎಂಜಿನ್ ಹೊಂದಿರುತ್ತವೆ ಎಂದು ನಮಗೆ ತಿಳಿದದ್ದು ಆ ಸಮಯದಲ್ಲೇ.  ಆಗ ಲೇಲ್ಯಾಂಡ್ ಎಂಜಿನಿನ ಬಸ್ಸುಗಳಾಗಲಿ ಲಾರಿಗಳಾಗಲಿ ಇರಲಿಲ್ಲ.

ಹೇರು ತುಂಬಿದ ಲಾರಿಗಳು ಸೋಮಂತಡ್ಕ ತಿರುವಿನ ಏರಿನಲ್ಲಿ ಏದುಸಿರು ಬಿಡುತ್ತಾ ಸಾಗುವಾಗ ಕೆರೆ ದೇವಸ್ಥಾನದ ಪಕ್ಕದ ಒಳದಾರಿಯಿಂದ  ನಡೆದು ಹೋಗುವ ನಾವು ಅವುಗಳಿಂದ ಮೊದಲು ಸೋಮಂತಡ್ಕ ಸೇರಿ ವಿಜಯದ ನಗೆ ಬೀರುವುದಿತ್ತು.

ಶಂಕರ್ ವಿಟ್ಠಲ್, CPC, PV, ಹನುಮಾನ್, ಆಂಜನೇಯ, ಜಯಪದ್ಮ, ಶಾರದಾಂಬಾ, CKMS, ಕೃಷ್ಣಾ, ಭಾರತ್, ಶೆಟ್ಟಿ ಬಸ್ ಅದೆಷ್ಟು ಸಲ ಈ ಸೇತುವೆಯ ಮೇಲೆ ಸಂಚರಿಸಿರಬಹುದೋ ಏನೋ.  ಸೇತುವೆಗೆ ಪ್ರವೇಶಿಸುವಲ್ಲಿ ಕಡಿದಾದ ತಿರುವೊಂದಿತ್ತು.  ಏಕ ಕಾಲಕ್ಕೆ ಎರಡು ವಾಹನಗಳು ಹಾದು ಹೋಗುವಷ್ಟು ಅಗಲವಿಲ್ಲದ ಸೇತುವೆಯಾದ್ದರಿಂದ  ಆ ತಿರುವಿನ ಬಳಿ ಬಂದೊಡನೆ ಶಾರದಾಂಬಾ ಬಸ್ಸಿನ  ಚಂದು ಎಂಬ ಡ್ರೈವರ್ ಆಗ  ಆ ಬಸ್ಸಿನಲ್ಲಿ ಮಾತ್ರ ಇದ್ದ ವ್ಯಾಕ್ಯೂಮ್ ಹಾರ್ನ್ ಬಾರಿಸುತ್ತಿದ್ದ. ಆ ಹಾರ್ನನ್ನು ಆತ ಬೇರೆಲ್ಲೂ ಉಪಯೋಗಿಸದಿದ್ದುದೂ ವಿಶೇಷವೇ. ಆಗ ಉಳಿದ ಬಸ್ಸುಗಳಿಗೆ ಪೋಂ ಪೋಂ ಸದ್ದಿನ  ಬಲ್ಬ್ ಹಾರ್ನ್ ಮತ್ತು ಬೆಂಜ್ ಬಸ್ಸುಗಳಾದರೆ ಸ್ಟೇರಿಂಗಿನ ಮಧ್ಯದಲ್ಲಿ ಇರುತ್ತಿದ್ದ ಗುಂಡಿ ಒತ್ತಿ ಬಾರಿಸುವ ಎಲೆಕ್ಟ್ರಿಕ್ ಹಾರ್ನ್ ಮಾತ್ರ ಇರುತ್ತಿದ್ದುದು.   ವಾಹನಗಳ ವೇಗ ತಾನಾಗಿ ಕಡಿಮೆಯಾಗಲಿ ಎಂದು ಸೇತುವೆ ಸಮೀಪ ತಿರುವು ಇರುವಂತೆ ರಸ್ತೆಗಳನ್ನು ರಚಿಸುತ್ತಿದ್ದರು ಎಂದು ಕೆಲವರು ಹೇಳುವುದಿದೆ.

ನಾನು ಉಜಿರೆ ಕಾಲೇಜಿಗೆ ಮುಂಡಾಜೆಯಿಂದ up and down ಮಾಡುತ್ತಿದ್ದ ಕಾಲದಲ್ಲಿ ಒಮ್ಮೆ ಈ ಸೇತುವೆ ದುರಸ್ತಿಗೆಂದು ಮುಚ್ಚಲ್ಪಟ್ಟಾಗ ಒಂದು ವಾರ ಕಾಲ ಶೆಟ್ಟಿ ಬಸ್ಸು ಸೇರಿದಂತೆ ಎಲ್ಲ ವಾಹನಗಳು  ಪಂಚಾಯತು   ರಸ್ತೆ ಮೂಲಕ    ಗುಂಡಿ    ದೇವಸ್ಥಾನದ ಎದುರಿಂದ ಹಾದು ಮೃತ್ಯುಂಜಯಾ ನದಿಗಿಳಿದು ದಾಟಿ ಚಲಿಸುತ್ತಿದ್ದುದು ಇನ್ನೊಂದು ಮರೆಯಲಾಗದ ಅನುಭವ. ಯಾವಾಗಲೂ ಎರಡು ಕಿಲೋಮೀಟರ್ ನಡೆದು ಬಸ್ ಹಿಡಿಯಬೇಕಾಗಿದ್ದ ನಮಗೆ ಆ ಒಂದು ವಾರ ಮನೆಯೆದುರೇ ಬಸ್ಸನ್ನೇರಿ ಸಂಜೆ ಮನೆ ಮುಂದೆಯೇ ಇಳಿಯುವ ಸಂಭ್ರಮ! ಈಗ ಅಲ್ಲಿ ಅಗಲ ಕಿರಿದಾದ ಬಂಡಿ ಸೇತುವೆಯೊಂದು ನಿರ್ಮಾಣವಾಗಿದ್ದು ಘನ ವಾಹನಗಳೆಂದೂ ಆ ದಾರಿಯಲ್ಲಿ ಹೋಗದಂತಾಗಿದೆ.

ಕೆಲವರ್ಷಗಳ ಹಿಂದೆ ಈ ಸೇತುವೆಯ ಫೋಟೊ ಒಂದು ತೆಗೆದಿಟ್ಟುಕೊಂಡಿದ್ದೆ. ಈಗ ನನ್ನ ಕಲ್ಪನೆಯ ಶೆಟ್ಟಿ ಬಸ್ಸೂ ಅಲ್ಲಿ ಕಾಣಿಸಿಕೊಂಡು ನನ್ನನ್ನು ನೇರವಾಗಿ 1960ರ ದಶಕಕ್ಕೆ ಒಯ್ದು ಇಷ್ಟೆಲ್ಲಾ ನೆನಪುಗಳನ್ನು ಹೊರ ಹೊಮ್ಮಿಸಿತು.

ಇಲ್ಲಿ ಕಾಣುವಂತೆ ಅದು ಆವರಣ ರಹಿತ ಮುಳುಗು ಸೇತುವೆ ಆಗಿರಲಿಲ್ಲ.  ಕಬ್ಬಿಣದ  ಪೈಪುಗಳ ಸಧೃಡ ತಡೆಬೇಲಿ ಅದಕ್ಕಿತ್ತು.  ಹೊಸ ಸೇತುವೆ ಆಗಿ ಇದು ನಿರುಪಯುಕ್ತ  ಅನಿಸಿದ ಮೇಲೆ ಸಂಬಂಧಿಸಿದ ಇಲಾಖೆಯವರು ಅದನ್ನು ತೆಗೆದರೋ ಅಥವಾ ಪೈಪುಗಳು ಕಳ್ಳರ ಪಾಲಾದವೋ ಗೊತ್ತಿಲ್ಲ.


Tuesday 29 August 2023

Mukesh माधुर्य ಮಂಜರಿ



    
ಜೋನ್ ಜಾನಿ ಜನಾರ್ದನ್ ಇದ್ದ ಹಾಗೆ ಇದೇನಪ್ಪಾ ಮುಕೇಶ್ ಮಾಧುರ್ಯ ಮಂಜರಿ ಎಂಬ ತಲೆಬರಹದಲ್ಲಿ ಭಾಷೆಗಳ  ಕಲಸು ಮೇಲೋಗರ ಎಂದು ಅಚ್ಚರಿಯಾಯಿತೇ.  ಮಧುರ ಸಂಗೀತ ದೇಶ-ಭಾಷೆ-ಕಾಲಾತೀತ. ಹಾಗಾಗಿ ಈ ಹೊಸ ವರಸೆ ಅಷ್ಟೇ. ಆಗಸ್ಟ್ 27ಕ್ಕೆ ಮುಕೇಶ್  ಪುಣ್ಯತಿಥಿ.  ಅವರ ಕೆಲವು ಹಾಡುಗಳನ್ನು ನೆನಪಿಸಿಕೊಳ್ಳಲು ನಮಗೊಂದು ನೆವ.

    
ರಫಿ, ತಲತ್, ಮನ್ನಾಡೆ, ಕಿಶೋರ್ ಸಮಕಾಲೀನರಾಗಿದ್ದ ಮುಕೇಶ್ ತಮ್ಮ  ವೃತ್ತಿ ಜೀವನದಲ್ಲೆಂದೂ ಆರಕ್ಕೇರಿದವರಲ್ಲ ಮೂರಕ್ಕಿಳಿದವರಲ್ಲ.  ಅದು ತಲತ್ ಯುಗವಿರಲಿ, ರಫಿ ಯುಗವಿರಲಿ, ನಂತರದ ಕಿಶೋರ್ ಯುಗವಿರಲಿ, ತಮ್ಮ ಅವಕಾಶಗಳನ್ನು ತಮ್ಮದಾಗಿಯೇ ಉಳಿಸಿಕೊಂಡವರು, ಅವುಗಳ ಸದುಪಯೋಗ ಮಾಡಿಕೊಂಡವರು.  ಚಿತ್ರ ನಿರ್ಮಾಣ, ನಟನೆಯಲ್ಲೂ  ಅದೃಷ್ಟ ಪರೀಕ್ಷಿಸಿದ್ದ ಅವರು ಅದು ತಮಗಲ್ಲ ಎಂದು ನಿಶ್ಚಯಿಸಿ ಹಾಡುಗಾರಿಕೆಯನ್ನೇ ಉಸಿರಾಗಿಸಿಕೊಂಡು ಹಾಡುವುದಕ್ಕೆಂದೇ ತೆರಳಿ  ಅಮೇರಿಕದ ಡೆಟ್ರಾಯಿಟ್‍ನಲ್ಲಿ ಐವತ್ತಮೂರರ ಹರೆಯದಲ್ಲಿ ಕೊನೆಯುಸಿರೆಳೆದವರು.

    
ತಮ್ಮ ಇತರ ಸಮಕಾಲೀನರಷ್ಟೇ ವೃತ್ತಿಪರರಾಗಿದ್ದ ಅವರು ಸ್ಪಷ್ಟ ಉಚ್ಚಾರ, ಧ್ವನಿಭಾರ, ಉಸಿರಿನ ನಿಯಂತ್ರಣ, voice throw ಗಳ ವಿಷಯದಲ್ಲಿ ಯಾರಿಗೂ ಕಮ್ಮಿ ಇರಲಿಲ್ಲ.  ಆದರೆ ಅವರು  ಏಕಪಾಠಿ ಮಾತ್ರ ಅಲ್ಲವಂತೆ.  ರಫಿ, ಕಿಶೋರ್ ಅವರಂತೆ ಹಾಡಿನ ಟ್ಯೂನ್ ಒಂದೇ ಸಲ ಕೇಳಿ ರೆಕಾರ್ಡಿಂಗಿಗೆ ತಯಾರಾಗಲು ಅವರಿಗೆ ಕಷ್ಟವಾಗುತ್ತಿತ್ತಂತೆ.  ಶ್ರುತಿ ಶುದ್ಧತೆ ಬಗ್ಗೆಯೂ ಅವರಲ್ಲಿ ಆತ್ಮವಿಶ್ವಾಸ ಕೊಂಚ ಕಮ್ಮಿ ಇತ್ತೆಂದು ಹೇಳುತ್ತಾರೆ.  ಹೀಗಾಗಿ ರೆಕಾರ್ಡಿಂಗ್ ಆರಂಭವಾಗುವ ವರೆಗೂ ಹಾರ್ಮೋನಿಯಮ್ ನುಡಿಸುತ್ತಾ ಅಭ್ಯಾಸ ಮಾಡುತ್ತಲೇ ಇರುತ್ತಿದ್ದರಂತೆ. ರೆಕಾರ್ಡಿಂಗ್ ನಲ್ಲೂ ಟೇಕ್ ಗಳ ಸಂಖ್ಯೆ ಹೆಚ್ಚೇ ಇರುತ್ತಿತ್ತಂತೆ.  ಸ್ಟೇಜ್ ಕಾರ್ಯಕ್ರಮಗಳಲ್ಲೂ ಅವರು ಹಾರ್ಮೋನಿಯಮ್ ನುಡಿಸುತ್ತಲೇ ಹಾಡುತ್ತಿದ್ದುದನ್ನು ಗಮನಿಸಬಹುದು. ಆದರೂ ಆ ಕಾಲದ ಸಂಗೀತ ನಿರ್ದೇಶಕರು  ಸಂದರ್ಭ ಸಿಕ್ಕಿದಾಗಲೆಲ್ಲ ಅವರಿಂದ ಹಾಡುಗಳನ್ನು ಹಾಡಿಸಿರುವುದಕ್ಕೆ   ಅವರ ಕಂಠ ಅಲೌಕಿಕ ಆಗಿದ್ದುದೇ ಕಾರಣವಿರಬಹುದು . ಅವರನ್ನು  ಹೆಚ್ಚು ವೈವಿಧ್ಯಪೂರ್ಣವಾಗಿ  ಬಳಸಿಕೊಂಡದ್ದು ಶಂಕರ್-ಜೈಕಿಶನ್ .
    
ಇವರು ಹಾಡಿದ ಹಾಡುಗಳು ಸಂಖ್ಯೆಯಲ್ಲಿ ರಫಿ, ಕಿಶೋರ್ ಅವರಿಗಿಂತ ಕಮ್ಮಿ ಇರಬಹುದು.  ಆದರೆ ಇವುಗಳಲ್ಲಿ ಕಾಳು ಜಾಸ್ತಿ, ಜೊಳ್ಳು ಬಹಳ ಕಮ್ಮಿ. ಹಾಡಿದ ಹಾಡುಗಳಲ್ಲಿ ಉತ್ತಮವಾದವುಗಳ ಪ್ರತಿಶತ ಲೆಕ್ಕ ಹಾಕಿದರೆ ಪ್ರಥಮ ಸ್ಥಾನದಲ್ಲಿ ನಿಲ್ಲುವುದು ಅವರೇ. ಅಂತಹವುಗಳಲ್ಲಿ ನನ್ನ ನೆನಪಿಗೆ ಬಂದ, ನನಗಿಷ್ಟವಾದ 10 ಹಾಡುಗಳು ಇಲ್ಲಿವೆ.  ನಿಮಗೆಲ್ಲರಿಗೂ ಮೆಚ್ಚುಗೆಯಾಗುತ್ತವೆ ಅಂದುಕೊಂಡಿದ್ದೇನೆ.

    

1. ಆವಾರಾ ಹೂಂ - ಆವಾರಾ
    Awara Hoon - Awara 

ಪ್ರೇಮಗೀತೆಗಳೂ ಸೇರಿದಂತೆ ಎಲ್ಲ ಹಾಡುಗಳೂ ಒಂದು ರೀತಿ ವಿಷಾದ ಭಾವವನ್ನು ಹೊಂದಿರುತ್ತಿದ್ದ ಕಾಲದಲ್ಲಿ ಲವಲವಿಕೆಯನ್ನು ಮೈಗೂಡಿಸಿಕೊಂಡು ಬಂದ ಆ ಕಾಲಕ್ಕೆ ahead of time ಎನ್ನಬಹುದಾದ ಶಂಕರ್ ಜೈಕಿಶನ್ ಹಾಡು  ಇದು.  ಮುಂದೆ ಆರ್ ಪಾರ್, ತುಮ್‍ ಸಾ ನಹೀಂ ದೇಖಾ ನಂತರವಷ್ಟೇ ಎಲ್ಲ ಹಾಡುಗಳಲ್ಲಿ ಲವಲವಿಕೆ ಕಾಣಿಸಿಕೊಳ್ಳತೊಡಗಿತು. ತಮ್ಮ ಮೆಚ್ಚಿನ ಹಿರಿಯ ಸಂಗೀತ ನಿರ್ದೇಶಕ ಎಸ್.ಡಿ.ಬರ್ಮನ್ ಈ ಹಾಡಿನಲ್ಲಿಯ ಎಕಾರ್ಡಿಯನ್ ವಾದ್ಯದ ಅತಿ ಸುಂದರ ಕುಸುರಿ ಕೆಲಸ  ಮೆಚ್ಚಿ ಶಹಬ್ಬಾಸ್ ಎಂದು ಬೆನ್ನು ತಟ್ಟಿದಾಗ ಶಂಕರ್ ಅವರಿಗೆ ಬಹಳ ಖುಶಿ ಆಗಿತ್ತಂತೆ.  ಈ ಹಾಡು  ರಷ್ಯಾದಲ್ಲೂ ಬಹು ಜನಪ್ರಿಯ ಆಗಿ ರಾಜ್ ಕಪೂರ್ ಹಾಗೂ ಆ ದೇಶದ ನಡುವೆ  ನಂಟು ಬೆಳೆಯಲು ಕಾರಣವಾಯಿತು.  ನಂತರದ ಅನೇಕ ರಾಜ್ ಕಪೂರ್ ಚಿತ್ರಗಳ ಹಾಡುಗಳಲ್ಲಿ ರಷ್ಯನ್ ಸಂಗೀತದ ಛಾಯೆಯನ್ನೂ  ಗುರುತಿಸಬಹುದು. 




2. ಮುಝಕೊ ಇಸ್ ರಾತ್ ಕೀ - ದಿಲ್ ಭೀ ತೇರಾ ಹಮ್ ಭೀ ತೇರೆ
    Mujh Ko Is Raat Ki - Dil Bhi Tera Hum Bhi Tere

ಧರ್ಮೇಂದ್ರ ಅವರ ಮೊದಲ ಚಿತ್ರದ ಗೀತೆಯಿದು.  ಕಲ್ಯಾಣಜೀ-ಆನಂದಜೀ ಅವರು ಶಂಕರ್-ಜೈಕಿಶನ್ ಹೆಜ್ಜೆ ಜಾಡಿನಲ್ಲಿ ಗದ್ದಲಕ್ಕೆ ಹೆಸರಾದ ಸ್ಯಾಕ್ಸೊಫೋನ್, ಗ್ರೂಪ್ ವಯಲಿನ್ಸ್ ನಂತಹ ವಾದ್ಯಗಳನ್ನು ಬಳಸಿಯೂ ರಾತ್ರಿಯ ನೀರವತೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈಬ್ರೋಫೋನ್ ಬಳಕೆ ಹಾಡಿಗೆ ವಿಶೇಷ ಮೆರುಗು ನೀಡಿದೆ.  ಒಂದು ಚಿತ್ರಕ್ಕೆ ಒಂದು  ಹಿಟ್ ಮುಕೇಶ್ ಹಾಡು ಕೆಟಗರಿಯಲ್ಲಿ  ಕಲ್ಯಾಣಜೀ-ಆನಂದಜೀ ನಂಬರ್ ವನ್.




3. ರುಕ್ ಜಾ ಒ ಜಾನೆವಾಲಿ - ಕನ್ಹಯ್ಯಾ
    Ruk Ja O Janewali - Kanhayya

ನಾಯಕನು ಸ್ವಗತದಲ್ಲಿ ಹಾಡುವುದನ್ನು ಕೇಳಿ ನಾಯಕಿ ಅದು ತನಗಾಗಿಯೇ ಅಂದುಕೊಳ್ಳುವ ಶೈಲಿಯಲ್ಲಿದೆ ಇದು. ವಿವಿಧ ರೀತಿಯ ಕೊಳಲುಗಳ ಬಳಕೆ, ವೇಗದ ನಡೆ ಈ ಹಾಡಿನಲ್ಲಿ ಅಂತರ್ಗತವಾದ ಉತ್ಸಾಹಕ್ಕೆ ಪೂರಕವಾಗಿವೆ.  ರುಕ್ ಜಾ ಅಂದೊಡನೆ ಕೊಳಲುಗಳ ಮೂರು ಸಲದ ಮಾರ್ನುಡಿ ಈ ಹಾಡಿನ ಪಂಚ್ ಲೈನ್ ಅನ್ನಬಹುದು.  ತಿಕ್ಕುಜಾ ಈ ದಾಯೆ ಪನ್ ತಿಕ್ಕುಜಾ (ಸಿಕ್ಕೊಲ್ಲ ನೀ ಯಾಕೆ ಹೇಳು ಸಿಕ್ಕೊಲ್ಲ) ಎಂದು ಬದಲಾಯಿಸಿ ಈ ಹಾಡನ್ನು ತುಳು ನಾಟಕಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದರು.




4. ಲೌಟ್ ಕೆ ಆಜಾ ಮೇರೆ ಮೀತ್ - ರಾಣಿ ರೂಪಮತಿ
    Laut Ke Aja Mere Meet - Rani Rupamati

ನಟ, ನಿರ್ದೇಶಕರೂ ಆಗಿದ್ದ ಎಸ್.ಎನ್.ತ್ರಿಪಾಠಿ ಅವರ ಸಂಗೀತ ನಿರ್ದೇಶನದ ಈ ಗೀತೆ ಸರಳತೆಗೆ ಒಳ್ಳೆಯ ಉದಾಹರಣೆ.  ಇಲ್ಲಿ ಹೆಚ್ಚಿನ ವಾದ್ಯಗಳ ಬಳಕೆ ಇಲ್ಲ.  ಆದರೂ  ಕೇಳುಗರ ಮೇಲೆ ಬೀರುವ ಪರಿಣಾಮಕ್ಕೇನೂ ಕೊರತೆ ಇಲ್ಲ. ಮಧುಮಾದ್ ಸಾರಂಗ್  ಅರ್ಥಾತ್ ಮಧ್ಯಮಾವತಿ ರಾಗಾಧಾರಿತವಾದ ಈ ಸರಳ ರಚನೆ ಮಾಧುರ್ಯದಲ್ಲಿ ಅದ್ದಿ ತೆಗೆದಂತಿದೆ.




5. ರಾತ್ ಔರ್ ದಿನ್ - ಟೈಟಲ್ ಹಾಡು
    Raat Aur Din - Title song

ನರ್ಗಿಸ್ ಅವರ ಕೊನೆಯ ಚಿತ್ರದ ಈ ಹಾಡಿನ ನಡೆ  ಯಾವುದೆ ಲಗುಬಗೆ, ಉದ್ವೇಗ ಇಲ್ಲದ್ದು. ಕೇಳುಗರಲ್ಲಿ ಉದ್ವೇಗ ಇದ್ದರೆ ಹೋಗಲಾಡಿಸಬಲ್ಲಂಥದ್ದು.  ಕೇಳಿದರೆ ಹಾಗೆಯೇ ಕೇಳುತ್ತಲೇ ಇರೋಣ ಅನ್ನಿಸುತ್ತದೆ, ಬಜಾಜ್ ಸ್ಕೂಟರಿನಲ್ಲಿ ಟ್ರಾಫಿಕ್ ಇಲ್ಲದ ರೋಡಿನಲ್ಲಿ ಹದವಾದ ವೇಗದಲ್ಲಿ ಹೋಗುತ್ತಾ ಇರುವ ಅನುಭವ  ನೀಡುತ್ತದೆ.




6. ಓ ಜಾನೆವಾಲೆ ಹೋ ಸಕೆ ತೊ - ಬಂದಿನಿ
    O Janewale Ho Sake To - Bandini

ಮುಕೇಶ್ ಅವರನ್ನು ಸಚಿನ್ ದೇವ್ ಬರ್ಮನ್  ಬಳಸಿದ್ದು ಕಮ್ಮಿಯೇ.  ಆದರೆ ಬಳಸಿಕೊಂಡಾಗಲೆಲ್ಲ ಜನ್ಮ ತಾಳಿದ್ದು ಇಂತಹ ರತ್ನಗಳೇ.  ಬರ್ಮನ್ ಸಂಗೀತದಲ್ಲಿ ಹೆಚ್ಚಾಗಿ ಕೇಳಸಿಗದ ಕೋರಸ್ ಬಳಕೆ ಇದರಲ್ಲಿದೆ.  ಹೋ ಸಕೆ ತೊ ಲೌಟ್ ಕೆ  ಆನಾ ಎಂಬ ಸಾಲು ಕಪ್ಪು ಒಂದು ಶ್ರುತಿಯ ಷಡ್ಜ ಹಾಗೂ ಮಂದ್ರ ನಿಷಾದದಲ್ಲಿ ನುಡಿಯುವಾಗ ಆಗುವ ಆನಂದ ಅವರ್ಣನೀಯ.   ಪಿ.ಬಿ.ಎಸ್ ಅವರಂತೆ ಮುಕೇಶ್ ಧ್ವನಿಯೂ ಕೆಳ ಶ್ರುತಿಯ ಮಧ್ಯ ಹಾಗೂ ಮಂದ್ರ ಸಪ್ತಕಗಳಿಗೆ ಹೇಳಿ ಮಾಡಿಸಿದಂಥದ್ದು.




7. ಸಜನ್ ರ್ ಝೂಟ್ ಮತ್ ಬೋಲೊ - ತೀಸ್ರಿ ಕಸಂ
    Sajan Re Jhoot Mat Bolo - Teesri Kasam

ಕವಿ ಶೈಲೇಂದ್ರ ಅವರು ಮಾರೇ ಗಯೆ ಗುಲ್‍ಫಾಮ್ ಕಾದಂಬರಿ ಆಧರಿಸಿ ಸ್ವತಃ ನಿರ್ಮಿಸಿ ಕೈ ಸುಟ್ಟುಕೊಂಡ ಚಿತ್ರದ ಹಾಡು ಇದು.  ಚಿತ್ರ ಹಾಗೂ ಅದರ ಶಂಕರ್-ಜೈಕಿಶನ್ ಸಂಗೀತ ಶ್ರೇಷ್ಠವಾಗಿದ್ದರೂ ಅನನುಭವಿ ಶೈಲೇಂದ್ರ ಅವರಿಗೆ ಅದನ್ನು ವ್ಯಾವಹಾರಿಕವಾಗಿ  ಗೆಲ್ಲಿಸುವುದು ಸಾಧ್ಯವಾಗಲಿಲ್ಲ.  ಆ ಮೇಲೆ ಇದಕ್ಕೆ ರಾಷ್ಟ್ರೀಯ ಪುರಸ್ಕಾರ, ವಿಮರ್ಶಕರ ಮನ್ನಣೆ ಇತ್ಯಾದಿ  ಸಿಕ್ಕಿದರೂ ಮೊದಲೇ ಕುಡಿತದ ಚಟಕ್ಕೆ ಬಲಿಯಾಗಿದ್ದ ಶೈಲೇಂದ್ರ ಚಿತ್ರದ ಸೋಲಿನಿಂದ ಕಂಗೆಟ್ಟು  1966 ರಲ್ಲಿ ಕೇವಲ 43 ರ ಪ್ರಾಯದಲ್ಲಿ  ಖುದಾ ಕೆ ಪಾಸ್ ಜಾನಾ ಹೈ ಎನ್ನುತ್ತಾ ಇಹ ಲೋಕ ತ್ಯಜಿಸಿದರು.  ಈ ರೀತಿ ರಾಜ್ ಕಪೂರ್ ಯಶಸ್ವಿ ತಂಡದ ಮೊದಲ ಕೊಂಡಿ ಕಳಚಿತು.  ಮುಂದೆ 1971 ರಲ್ಲಿ ಜೈಕಿಶನ್ ಕೂಡ ಕುಡಿತದಿಂದಾಗಿ 41 ರ ವಯಸ್ಸಿನಲ್ಲಿ ಇದೇ ಹಾದಿ ಹಿಡಿದಾಗ ಎರಡನೇ ಕೊಂಡಿಯೂ ಕಳಚಿ  ಈ ತಂಡಕ್ಕೆ  ಸರಿಪಡಿಸಲಾಗದ ಹಾನಿಯುಂಟಾಯಿತು. ಕುಡಿತ ಕೆಟ್ಟದ್ದೇ. ಶೈಲೇಂದ್ರ, ಜೈಕಿಶನ್ರೋಶನ್, ಮದನ್ ಮೋಹನ್ ಇವರೆಲ್ಲ  ಕುಡಿತದಿಂದ ಕರುಳನ್ನು ಕರಗಿಸಿಕೊಂಡು ಚಿಕ್ಕ ಪ್ರಾಯದಲ್ಲೇ ಇಹಲೋಕ ತ್ಯಜಿಸಿದವರು. ಮುಕೇಶ್ ಕೂಡ ಕುಡಿತದ ಅಭ್ಯಾಸ ಇದ್ದವರು ಅನ್ನುತ್ತಾರೆ.  ಆದರೂ ನಾವು ಇಂದಿಗೂ ಮೆಚ್ಚಿಕೊಂಡು ಆಸ್ವಾದಿಸುವ ಅನೇಕ ಅಮರ ಹಾಡುಗಳು ಮಧುಪಾನದ ನಶೆಯಲ್ಲಿಯೇ ಜನ್ಮ ತಾಳಿರಬಹುದು ಎಂದು ಎಣಿಸುವಾಗ ತನ್ನನ್ನೇ ಕರಗಿಸಿಕೊಂಡು ಬೆಳಕು ನೀಡುವ ಮೊಂಬತ್ತಿಯಂತೆ ಇವರೂ ತಮ್ಮ ಜೀವವನ್ನೇ ಸವೆಸಿ   ನಮಗಾಗಿ ಇಂತಹ ಕೊಡುಗೆಗಳನ್ನು ಕೊಟ್ಟು ಹೋದರು ಎಂಬ ಭಾವನೆ ಬರುವುದಿಲ್ಲವೇ.




8. ತುಮ್ ಆಜ್ ಮೇರೆ ಸಂಗ್ ಹಸ್ ಲೊ - ಆಶಿಕ್ 
    Tum Aaj Mere Sang  Haslo - Ashiq

ಈ ಶಂಕರ್-ಜೈಕಿಶನ್ ಹಾಡಿನಲ್ಲಿ ಬಾಯಿಂದ ಹೊರಡಿಸುವ ವಿಚಿತ್ರ ಸದ್ದೊಂದನ್ನು ಬಳಸಿಕೊಳ್ಳಲಾಗಿದೆ.  ನಮ್ಮೂರಲ್ಲಿ ಐತು ಎಂಬವನೊಬ್ಬ ತೆಂಬರೆ ಎಂಬ ಜಾನಪದ ಚರ್ಮ ವಾದ್ಯವನ್ನು ನುಡಿಸಿಕೊಂಡು ಬಾಯಿಂದ ಇದೇ ರೀತಿಯ ಸದ್ದು ಹೊರಡಿಸಿ ಕುಣಿಯುತ್ತಾ ಮಕ್ಕಳನ್ನು ಖುಶಿ ಪಡಿಸುತ್ತಿದ್ದ !  ಈ ಹಾಡನ್ನು ಅವನೆಂದೂ ಕೇಳಿರುವ ಸಾಧ್ಯತೆ ಇಲ್ಲ,  ಶಂಕರ್-ಜೈಕಿಶನ್, ರಾಜ್ ಕಪೂರ್ ಇವರೆಲ್ಲ ಯಾರು ಎಂದೂ  ಅವನಿಗೆ ಗೊತ್ತಿದ್ದಿರಲೂ ಸಾಧ್ಯವಿಲ್ಲ.    ರಾಜ್ ಕಪೂರ್ - ಪದ್ಮಿನಿ ನಟನೆ,  ಶಂಕರ್-ಜೈಕಿಶನ್ ಸಂಗೀತ, ಹೃಷಿಕೇಶ ಮುಖರ್ಜಿ ನಿರ್ದೇಶನದ ಈ ಚಿತ್ರ ನಿರ್ಮಿಸಿದವರು ಒಂದು ಕಾಲದಲ್ಲಿ ರೇಡಿಯೋ ಸಿಲೋನ್ ಅನೌಂಸರ್ ಆಗಿದ್ದು ನಂತರ HMV ಯ ಮಖ್ಯಸ್ಥರಾದ ವಿಜಯ ಕಿಶೋರ್ ದೂಬೆ ಹಾಗೂ ಪತ್ರಕರ್ತ ಬನ್ನಿ ರೂಬೆನ್.  ಇವರೀರ್ವರೂ ಈ ಕ್ಷೇತ್ರದಲ್ಲಿ ಅನನುಭವಿಗಳಾದ್ದರಿಂದ ಈ ಚಿತ್ರವೂ ಆರ್ಥಿಕವಾಗಿ ನೆಲ ಕಚ್ಚಿತಂತೆ.  ಕೊಳಲಿನ ದೇಹದಲ್ಲೆಲ್ಲ ಛೇದಗಳಿದ್ದರೂ ಅದು ಮಧುರ ಗೀತೆಗಳನ್ನು ನುಡಿಯುವಂತೆ ನಗು ನಗುತಾ ನಲಿ ಏನೇ ಆಗಲಿ ಎಂಬ ಸಂದೇಶ ಈ ಹಾಡಿನದ್ದು.  ಶೈಲೇಂದ್ರ ಅವರ ಅರ್ಥಪೂರ್ಣ ಸಾಹಿತ್ಯ ಇದರಲ್ಲಿದೆ.




9.  ಆ ಅಬ್ ಲೌಟ್ ಚಲೆಂ - ಜಿಸ್ ದೇಶ್ ಮೆಂ ಗಂಗಾ ಬಹತೀ ಹೈ
    Aa Ab Laut Chalen - Jis Desh Me Ganga Behati Hai

ಶಂಕರ್-ಜೈಕಿಶನ್ ಪ್ರತಿಭೆಯ ಮೇರು ಸಂಯೋಜನೆ ಇದು.  ಚಿತ್ರದ ಸನ್ನಿವೇಶವೂ ಪರಾಕಾಷ್ಟೆಯದ್ದೇ. ಟ್ರಂಪೆಟ್ಸ್ ಹಾಗೂ ಕೋರಸ್ ಬಳಕೆ ಅತ್ಯದ್ಭುತ. ಇದರಲ್ಲಿ ಲತಾ ಮಂಗೇಷ್ಕರ್ ನುಡಿಯುವುದು ಆಜಾರೇ... ಎಂಬ ಒಂದು ಸೊಲ್ಲು ಮಾತ್ರ. ನಂತರದ  ಆಲಾಪದಲ್ಲಿ ಅವರು ಅತಿ ತಾರ ಸಪ್ತಕವನ್ನು ಸ್ಪರ್ಶಿಸುವ ರೀತಿ ಬೆರಗು ಹುಟ್ಟಿಸುವಂಥದ್ದು.  ಅಂದಿನ ಸೀಮಿತ ತಾಂತ್ರಿಕತೆಯಲ್ಲಿ ಈ ಹಾಡಿನ ರೆಕಾರ್ಡಿಂಗ್ ಹೇಗೆ ನಡೆಸಿರಬಹುದು ಎಂದು ಈಗಿನ ಸಂಗೀತ ನಿರ್ದೇಶಕರೋರ್ವರು ಸಂದರ್ಶನವೊಂದರಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದರು.   ದಿಲ್ ಅಪನಾ ಔರ್ ಪ್ರೀತ್ ಪರಾಯೀಸಂಗಂ, ಬ್ರಹ್ಮಚಾರಿ , An evening in Paris ಮುಂತಾದ ಚಿತ್ರಗಳಲ್ಲಿ ನಾವು ನೋಡಿದಂತೆ ಕೋರಸ್ ಅನ್ನು   ಶಂಕರ್-ಜೈಕಿಶನ್ ಅವರಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡವರು ಇನ್ಯಾರೂ ಇರಲಾರರು. 





10. ಮೇರೆ ಮನ್ ಕೀ ಗಂಗಾ - ಸಂಗಂ
     Mere Man Ki Ganga - Sangam

     ಈ ಹಾಡಿನಲ್ಲಿ ರಾಜ್ ಕಪೂರ್ ಕೈಯಲ್ಲಿರುವುದು ಈಜಿಪ್ಟ್ ಮೂಲದ್ದೆಂದು ನಂಬಲಾದ ಬ್ಯಾಗ್ ಪೈಪ್ ಎಂಬ, ಕಂಕುಳಿಂದ ತಿದಿಯಂತಹ ಚರ್ಮದ ಚೀಲವೊಂದನ್ನೊತ್ತಿ ಗಾಳಿತುಂಬಿ ನುಡಿಸುವ ವಾದ್ಯ. ನೀರಿನಲ್ಲಿ ಈಜಾಡುವ ಸದ್ದಿನ ಪರಿಣಾಮ ಉಂಟುಮಾಡಲು  ಬುಡಬುಡಿಕೆಯಂತಹ ತಾಳವಾದ್ಯವನ್ನು ಉಪಯೋಗಿಸಲಾಗಿದೆ. ಶಂಕರ್-ಜೈಕಿಶನ್ ತಂಡದಲ್ಲಿ ರಿದಂ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ದತ್ತಾರಾಮ್ ಇಂತಹ ಪ್ರಯೋಗಗಳ ರೂವಾರಿ.

     ಈ ಹಾಡಿನ ಹಿಂದೆ ಗೋಪಿಕಾ ವಸ್ತ್ರಾಪಹರಣದ ಕಲ್ಪನೆಯೂ ಇದ್ದಂತಿದೆ.  ಕಿರೀಟದ ಸಂಕೇತವಾಗಿ ನಾಯಕ ತಲೆಗೆ ಸಿಕ್ಕಿಸಿಕೊಳ್ಳುವ ಗರಿ ಹಾಗೂ ಚಿತ್ರದಲ್ಲಿ ಹಾಡಿನ ಮೊದಲು ಬರುವ dialog ಇದನ್ನು ಪುಷ್ಟೀಕರಿಸುತ್ತವೆ.  ಆದರೆ ಆತ ಧರಿಸಿಕೊಂಡಿರುವುದು ಈಗಿನ ಯುವ ಜನಾಂಗದಲ್ಲಿ ಜನಪ್ರಿಯವಾಗಿರುವ ಬರ್ಮುಡಾ!  ಇನ್ನೊಂದು ಅಚ್ಚರಿಯ ವಿಷಯವೆಂದರೆ ಶ್ರೀಮಂತರ ಮನೆಯ ಹುಡುಗಿಯೊಬ್ಬಳು  ಸ್ವಿಮ್ಮಿಂಗ್ ಪೂಲಿಗೆ ಹೋಗುವುದನ್ನು ಬಿಟ್ಟು ಸ್ವಿಮ್ ಸೂಟ್ ಧರಿಸಿ ನದಿಯಲ್ಲಿ ಈಜಾಡಲು ಬರುತ್ತಾಳೆಯೇ ಎಂಬ ಪ್ರಶ್ನೆಯನ್ನು ಯಾವ ವಿಮರ್ಶಕರೂ ಇದುವರೆಗೆ ಎತ್ತಿಲ್ಲ.  ಏನೇ ಇರಲಿ,  ಇದು ಜನಪ್ರಿಯತೆಯ ಮಾನದಂಡದಲ್ಲಿ ಸರ್ತಾಜ್ ಅಂದರೆ ಸರ್ವ ಶ್ರೇಷ್ಠ  ಪದವಿಗೆ ಅರ್ಹವಾದ ಹಾಡು.  ಹಳ್ಳಿ ಹಳ್ಳಿಗಳ ಮೂಲೆಗಳನ್ನೂ ತಲುಪುವಲ್ಲಿ ಇದು ತೇರಿ ಪ್ಯಾರೀ ಪ್ಯಾರೀ ಸೂರತ್ ಕೊ ಹಾಡನ್ನೂ ಹಿಮ್ಮೆಟ್ಟಿಸಿತ್ತು.  ಈ ಹಾಡನ್ನು ಗುಣುಗುಣಿಸದ ಬಾಯಿಗಳಿರಲಿಲ್ಲ, ಧಾಟಿಯನ್ನು ಅಳವಡಿಸದ ನಾಟಕಗಳಿರಲಿಲ್ಲ, ಪೆ ಪೆ ಪೆ ಪೆ ಪೇ ಪೇ ಪೆ ಎಂಬ BGM ಸಮೇತ ಇದನ್ನು ನುಡಿಸದ ವಾಲಗದವರಿರಲಿಲ್ಲ! ಅಂತಹ ಮೋಡಿ ಈ ಹಾಡಿನದ್ದು.

         ಸುಮಾರು 60 ರ ದಶಕದ ಕೊನೆ ವರೆಗೆ  ಹಿಂದಿ ಚಲನ ಚಿತ್ರಗಳ ಹಾಡುಗಳಲ್ಲಿ 3 ಚರಣಗಳಿದ್ದರೆ ಬಿಡುಗಡೆಯಾಗುತ್ತಿದ್ದ 78 RPM ಗ್ರಾಮಫೋನ್ ತಟ್ಟೆಗಳಲ್ಲಿ  2 ಚರಣಗಳು ಮಾತ್ರ ಇರುತ್ತಿದ್ದವು. ಆದರೆ ಸಂಗಂನ ಈ ಹಾಡಿಗೆ ಚಿತ್ರದಲ್ಲೂ ಎರಡೇ ಚರಣಗಳಿದ್ದವು.  ಗ್ರಾಮಫೋನ್ ತಟ್ಟೆಯ  2 ನೆಯ ಚರಣ ದೋ ನದಿಯೊಂ ಕಾ ಮೇಲ್ ಅಗರ್ ಆಗಿದ್ದರೆ ಚಿತ್ರದ 2 ನೆಯ ಚರಣ ತೇರೀ ಖಾತಿರ್ ಮೈ ತಡಪಾ ಯೂಂ ಆಗಿತ್ತು.  ಆ ಮೇಲೆ ಬಿಡುಗಡೆಯಾದ  LP  ಯಲ್ಲಿ ಮೂರೂ ಚರಣಗಳಿದ್ದವೆನ್ನಿ.   ಆದರೆ ಚಿತ್ರದಲ್ಲಿ ಮೂರು ಚರಣಗಳ ಹಾಡು ನೋಡುವ ಅವಕಾಶ ಇರಲಿಲ್ಲ.  ಈಗ ಲಭ್ಯವಿರುವ  VCD, DVD, You Tube Video ಗಳಲ್ಲೂ  ಎರಡೇ ಚರಣಗಳಿವೆ. 


Tuesday 1 August 2023

ಗಾಯಕರ ನಾಯಕ ರಫಿ


ಹಿನ್ನೆಲೆ ಗಾಯಕರ ನಾಯಕ ಮಹಮ್ಮದ್ ರಫಿ ಭೌತಿಕವಾಗಿ ನಮ್ಮಿಂದ ಮರೆಯಾಗಿ ದಶಕಗಳೇ ಸಂದಿವೆ. ಆದರೆ ಇಂದಿಗೂ ರೇಡಿಯೊ, ಟಿ.ವಿ, ಸಿ.ಡಿ, ಐ ಪಾಡ್, ಮೊಬೈಲ್ ಫೋನ್ ಅಥವಾ ಇಂಟರ್ ನೆಟ್ ನಂತಹ ಯಾವುದಾದರೊಂದು ಮಾಧ್ಯಮದ ಮೂಲಕ ರಫಿಯ ಕೆಲವು ಹಾಡುಗಳನ್ನಾದರೂ ಆಲಿಸದೆ ಯಾವನೇ ಚಿತ್ರಸಂಗೀತ ಪ್ರೇಮಿಯ ಒಂದು ದಿನವೂ ಕಳೆಯಲಾರದು. ವಿಭಿನ್ನ ಸಂಗೀತ ನಿರ್ದೇಶಕರ ಒಡನಾಟದಲ್ಲಿ ಅವರು ಹಾಡಿರುವ ಒಂದಷ್ಟು ಹಾಡುಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ಇದು.



·        ನೌಶಾದ್ :- ಅದೃಷ್ಟ ಪರೀಕ್ಷಿಸಲು ಮುಂಬಯಿಗೆ ಬಂದ ರಫಿ ಮೊದಲು ಭೇಟಿಯಾದದ್ದು ನೌಶಾದ್ ಅವರನ್ನೇ. ಶಾಮಸುಂದರ್,ಹುಸ್ನಲಾಲ್ ಭಗತರಾಮ್,  ಗುಲಾಮ್ ಹೈದರ್ ಮುಂತಾದವರು ಆರಂಭದಲ್ಲಿ ಇವರಿಗೆ ಪ್ರೋತ್ಸಾಹ ನೀಡಿದರೂ  ತಲತ್ ಮಹಮೂದ್ ಜತೆ ತೀವ್ರ ಸ್ಪರ್ಧೆ ಇದ್ದ ಕಾಲದಲ್ಲಿ   ಬೈಜು ಬಾವ್ರಾ   ಚಿತ್ರದಲ್ಲಿ ಇವರ ಪ್ರತಿಭೆ ಹೊರಹೊಮ್ಮುವಂತೆ ಮಾಡಿ ಮುಂಚೂಣಿಗೆ ಬರುವಂತೆ ಮಾಡಿದವರು ನೌಶಾದ್. ಈ ಮೊದಲೇ  ಅಂದಾಜ್   ,  ಉಡನ್ ಖಟೋಲಾ  , `ದೀದಾರ್    ಮುಂತಾದ ಚಿತ್ರಗಳಲ್ಲಿ ನೌಶಾದ್ ಗಾಗಿ ರಫಿ ಹಾಡಿದ್ದರೂ ಈ ಚಿತ್ರದ ಎಲ್ಲ ಹಾಡುಗಳು ಸುಪರ್ ಹಿಟ್ ಆಗಿ ರಫಿಯ ಪಾರಮ್ಯವನ್ನು ಜಗತ್ತಿಗೆ ಸಾರಿದವು.  ಓ ದುನಿಯಾ ಕೆ ರಖವಾಲೆ ಯಲ್ಲಿ ಅವರ ಧ್ವನಿಯ ರೇಂಜ್ ಎಲ್ಲರನ್ನೂ ದಂಗು ಬಡಿಸಿತು.  ಈ ಗೀತೆ ಇಂದಿಗೂ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುವವರ ಅಚ್ಚುಮೆಚ್ಚಿನದು. ಇದೇ ಚಿತ್ರದ ಮನ್ ತಡಪತ್ ಹಾಡು ಶಕೀಲ್ ಬದಾಯೂನಿ, ನೌಶಾದ್ ಹಾಗೂ ರಫಿ ಎಂಬ ಮೂವರು ಮುಸ್ಲಿಂ  ಬಂಧುಗಳು ಸೇರಿ ಸೃಷ್ಟಿಸಿದ  ಭಜನ್ ಎಂದೇ ಪ್ರಖ್ಯಾತ. ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದ ನೌಶಾದ್ ಸಾರಥ್ಯ ದಲ್ಲಿ ದುಲಾರಿ, ಕೊಹಿನೂರ್, ಲೀಡರ್, ಮೇರೆ ಮೆಹಬೂಬ್, ಗಂಗಾ ಜಮುನ, ದಿಲ್ ದಿಯಾ ದರ್ದ್ ಲಿಯಾ, ಸಾಜ್ ಔರ್ ಆವಾಜ್, ರಾಮ್ ಔರ್ ಶಾಮ್, ಆದ್ಮಿ ಮುಂತಾದ ಚಿತ್ರಗಳು ಎಂದಿಗೂ ಮರೆಯದ ರಫಿ ಹಾಡುಗಳನ್ನು ನಮಗೆ ನೀಡಿದವು.  ಸಾಥಿ ಯಂತಹ ಕೆಲವು ಚಿತ್ರಗಳಲ್ಲಿ ಮುಕೇಶ್ ಅವರನ್ನು ಬಳಸಿಕೊಂಡದ್ದನ್ನು  ಹೊರತುಪಡಿಸಿದರೆ ಸದಾ ಇವರ ಮುಖ್ಯ ಗಾಯಕ ರಫಿಯೇ ಆಗಿದ್ದರು.

·        ಒ ಪಿ ನಯ್ಯರ್ :-  ಇವರು ರಫಿಗೆ ಒಂದು ಸ್ಟೈಲ್ ಕೊಟ್ಟವರು. ಅಲ್ಲಿವರೆಗೆ ಭಕ್ತಿ ಗೀತೆ, ವಿರಹ ಗೀತೆ, ಹಾಸ್ಯ ಗೀತೆ,  ಪ್ರೇಮ ಗೀತೆ ಎಲ್ಲವನ್ನೂ ವಿಷಾದದ ಛಾಯೆಯೊಡನೆ ಒಂದೇ ರೀತಿ ಹಾಡುತ್ತಿದ್ದ ರಫಿ ಅವರನ್ನು ಗುರುದತ್ ಅವರ ಆರ್ ಪಾರ್ ಹಾಗೂ ಶಮ್ಮಿ ಕಪೂರ್ ಅವರ ತುಮ್ ಸಾ ನಹೀಂ ದೇಖಾ ದಲ್ಲಿ ನಯ್ಯರ್ ಅವರು ಬೇರೆ ರೀತಿ ದುಡಿಸಿಕೊಂಡರು. ಧ್ವನಿಯ ಏರಿಳಿತ, ಥ್ರೋ ಗಳನ್ನು ತಿದ್ದಿ ತೀಡಿದರು. ತುಂಟತನವನ್ನು ತುಂಬಿಸಿದರು. ಫಾಲ್ಸ್ ವಾಯ್ಸನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ರೀತಿಯನ್ನು ತೋರಿಸಿಕೊಟ್ಟರು. ಈ ರೀತಿ ಕಾಯಕಲ್ಪಕ್ಕೊಳಗಾದ ರಫಿಯ ಧ್ವನಿ ಮುಂದೆ ದಶಕಗಳ ಕಾಲ ¸ಸಂಗೀತ ಕ್ಷೇತ್ರವನ್ನು  ಆಳುವಂತೆ ಮಾಡಿದರು.  ತಮ್ಮ ವೃತ್ತಿಜೀವನದ ಕೊನೆಯ ಕೆಲವು ವರ್ಷಗಳಲ್ಲಿ  0ಯಾವುದೋ ವಿರಸದಿಂದಾಗಿ ಕೆಲವು ಹಾಡುಗಳಿಗೆ  ಮಹೇಂದ್ರ ಕಪೂರ್, ಮುಕೇಶ್ ಅವರನ್ನು ಬಳಸಿಕೊಂಡರೂ ಇವರ ಮೆಚ್ಚಿನ ಗಾಯಕ  ಎಂದಿಗೂ ರಫಿಯೇ ಆಗಿದ್ದರು.  ರಾಗಿನಿ    ಚಿತ್ರದ  ಮನ್ ಮೊರಾ ಬಾಂವರಾ ಹಾಡಿಗೆ ತೆರೆಯ ಮೇಲಿನ ಕಿಶೋರ್ ಕುಮಾರ್ ಗೆ ರಫಿ ಧ್ವನಿಯನ್ನು ಮತ್ತ ಮೊದಲಿಗೆ ಬಳಸಿದವರು ಇವರು. (ಕಿಶೋರ್ ಗಾಗಿ ರಫಿ ಹಾಡಿರುವ ಆದರೆ ಅಷ್ಟೊಂದು ಸುದ್ದಿ ಮಾಡದ  ಇನ್ನೂ ಕೆಲವು ಹಾಡುಗಳು - ಶಂಕರ್ ಜೈಕಿಶನ್ ನಿರ್ದೇಶನದಲ್ಲಿ  ಶರಾರತ್     ನ  ಅಜಬ್ ಹೈ ದಾಸ್ತಾಂ ತೆರೀ , ಲಾಲಾ ಅಸರ್ ಸತ್ತಾರ್ ನಿರ್ದೇಶನದಲ್ಲಿ  ಪ್ಯಾರ್ ದೀವಾನೆ   ಚಿತ್ರದ ಅಪನೀ ಆದತ್ ಹೈ ಸಬಕೊ ಕೊ , ಬಿಪಿನ್ ಬಾಬುಲ್ ನಿರ್ದೇಶನದಲ್ಲಿ  ಬಾಗೀ ಶಹಜಾದಾ   ಚಿತ್ರದ  ಮೈ ಇಸ್ ನಾಜುಕ್ ಚೆಹೆರೆಕೊ )   ನಯಾ ದೌರ್, ಸಿ ಐ ಡಿ, ಮೇರೆ ಸನಮ್, ಫಿರ್ ವಹೀ ದಿಲ್ ಲಾಯಾ ಹೂಂ, ಕಶ್ಮೀರ್ ಕೀ ಕಲಿ, ಫಾಗುನ್, ಏಕ್ ಮುಸಾಫಿರ್ ಏಕ್ ಹಸೀನಾ, ಬಹಾರೆ ಫಿರ್ ಭೀ ಆಯೆಂಗೀ, ಹಮ್ ಸಾಯಾ ಮುಂತಾದ ಚಿತ್ರಗಳಲ್ಲಿ ಮರೆಯಲಾಗದ ರಫಿ ಹಾಡುಗಳು ಇವರ ನಿರ್ದೇಶನದಲ್ಲಿ ಜನ್ಮ ತಾಳಿದವು.

      ಶಂಕರ್ ಜೈಕಿಶನ್ :- ಇವರ ವೃತ್ತಿ ಜೀವನದಲ್ಲಿ ಮೊಟ್ಟ ಮೊದಲು ಧ್ವನಿಮುದ್ರಣಗೊಂಡದ್ದು  ಬರ್ಸಾತ್    ಚಿತ್ರಕ್ಕಾಗಿ ರಫಿ ಹಾಡಿದ ಮೈ ಜಿಂದಗೀ ಮೆ ಹರ್ ದಮ್ ರೋತಾ ಹೀ ರಹಾ ಹೂಂ  ಹಾಡು. ಆದರೆ ಮುಂದೆ ಬಹಳಷ್ಟು ವರ್ಷ ರಫಿ  ಇವರ ಮೊದಲ ಆಯ್ಕೆ ಆಗಿರಲಿಲ್ಲ.  ಆಗೊಮ್ಮೆ ಈಗೊಮ್ಮೆ ರಫಿಯನ್ನು ಬಳಸಿ ಉತ್ತಮ ಹಾಡು ಗಳನ್ನು ನೀಡಿದರೂ ಮುಕೇಶ್, ತಲತ್ ಮಹಮೂದ್, ಹೇಮಂತ್ ಕುಮಾರ್ ಹಾಗೂ ಇವರಧ್ವನಿಯನ್ನೇ  ಹೋಲುವ ಸುಬೀರ್ ಸೇನ್ ಅವರನ್ನು ಹೆಚ್ಚು ಬಳಸುತ್ತಿದ್ದರು.  ಶಮ್ಮಿಕಪೂರ್ ನ ಉಜಾಲಾ ದಲ್ಲೂ ಅವರ ಆಯ್ಕೆ ಮನ್ನಾಡೆ ಆಗಿದ್ದರು. ಆದರೆ  ಸಸುರಾಲ್   ನ ತೇರಿ ಪ್ಯಾರೀ ಪ್ಯಾರೀ ಸೂರತ್ ಕೊ ಸುಪರ್ ಹಿಟ್ ಆದಮೇಲೆ 60ರ ದಶಕದ ಕೊನೆವರೆಗೂ ಇವರು ಸಂಪೂರ್ಣ ರಫಿ ನಿಷ್ಠರಾಗಿ  ಉಳಿದರು. ರಫಿಯ ಸೊಲೊ ಹಾಡುಗಳನ್ನು ಲತಾ ಧ್ವನಿಯಲ್ಲೂ ಹಾಡಿಸುವ ಪರಂಪರೆಯನ್ನು  ಜಂಗ್ಲಿ   ಚಿತ್ರದ ಎಹೆಸಾನ್ ತೆರಾ ಹೋಗಾ ಮುಝ್ ಪರ್ (ಲತಾ) ಮೂಲಕ ಇವರು ಆರಂಭಿಸಿದರು. ಮುಂದೆ ಇದೇ ಜಾಡಿನಲ್ಲಿ  ಜಬ್ ಪ್ಯಾರ್ ಕಿಸೀ ಸೆ ಹೋತಾ ಹೈ   ಯ ಜಿಯಾ ಒ ಜಿಯಾ ಒ ಕುಛ್ ಬೊಲ್ ದೊ (ಲತಾ),  ಲವ್ ಇನ್ ಟೋಕಿಯೊ   ದ ಓ ಮೆರೆ ಶಾಹೆ ಖುಬಾ (ಲತಾ),  ಯಕೀನ್   ಚಿತ್ರದ ಗರ್ ತುಮ್ ಭುಲಾ ನ ದೋಗೆ (ಲತಾ) ,  ಪಗಲಾ ಕಹೀಂ ಕಾ   ದ ತುಮ್ ಮುಝೆ ಯೂಂ (ಲತಾ) ಇತ್ಯಾದಿ ಬಂದವು. ಆದರೆ ರಫಿ ಆವೃತ್ತಿಯ ಮಾದಕತೆ ಈ ಹಾಡುಗಳ ಲತಾ ಅವೃತ್ತಿಯಲ್ಲಿ ಕಾಣಿಸಲಿಲ್ಲ.  ಮುಕೇಶ್, ಮನ್ನಾಡೆ ಹೊರತು ಇತರರ ಧ್ವನಿಯನ್ನು ಬಳಸದ ರಾಜ್ ಕಪೂರ್ ಗಾಗಿ   ಏಕ್ ದಿಲ್ ಸೌ ಅಫಸಾನೆ   ಚಿತ್ರದಲ್ಲಿ  ತುಮ್ ಹೀ ತುಮ್ ಹೊ ಮೆರೆ ಜೀವನ್ ಮೆ ಹಾಗೂ  ಮೇರಾ ನಾಮ್ ಜೋಕರ್    ನಲ್ಲಿ  ಸದ್ ಕೆ ಹೀರ್ ತುಝ್ ಪೆ ಹಾಡುಗಳಿಗಾಗಿ ರಫಿ ಧ್ವನಿಯನ್ನು ಬಳಸಿದರು. (ರಫಿ ಹಾಡು ಥಿಯೇಟರ್ ಗಳಲ್ಲಿ ಪ್ರದರ್ಶಿತವಾದ  ಜೋಕರ್  ನಲ್ಲಿ ಕಾರಣಾಂತರಗಳಿಂದ ಇರಲಿಲ್ಲ.) ಈ ಮಧ್ಯೆ ಕೆಲವು ಸಮಯ ಲತಾ-ರಫಿ ಜೊತೆಯಾಗಿ ಹಾಡುತ್ತಿರಲಿಲ್ಲ. ಆಗಲೂ ಡ್ಯುಯೆಟ್ ಗಳು ಬೇಕಿದ್ದಾಗ ಲತಾ ಬದಲಿಗೆ ಸುಮನ್ ಕಲ್ಯಾಣಪುರ್ ಮೊದಲಾದವರು ಬರುತ್ತಿದ್ದರೇ ಹೊರತು ರಫಿಗೆ ಪರ್ಯಾಯವನ್ನು ಯಾರೂ ಹುಡುಕುತ್ತಿರಲಿಲ್ಲ. ಕೊನೆಗೆ ಶಂಕರ್ ಜೈಕಿಶನ್  ಮಧ್ಯಸ್ತಿಕೆಯಲ್ಲಿ  ಅವರೀರ್ವರಿಗೆ  ರಾಜಿಯಾಗಿ  ಗಬನ್    ಚಿತ್ರಕ್ಕಾಗಿ ತುಮ್ ಬಿನ್ ಸಜನ್ ಗೀತೆಯನ್ನು ಜತೆಯಾಗಿ ಹಾಡಿದರು. (ವಿರಸಕ್ಕೆ ಮುನ್ನ  ಲತಾ-ರಫಿ ಜತೆಯಾಗಿ ಹಾಡಿದ್ದ ಕೊನೆಯ ಹಾಡು  ಉಷಾ ಖನ್ನಾ ಸಂಗೀದಲ್ಲಿ  ಆವೋ ಪ್ಯಾರ್ ಕರೇಂ   ಚಿತ್ರದ  ತುಮ್ ಅಕೆಲೆ ತೊ ಕಭಿ ಬಾಗ್ ಮೆ ಜಾಯಾ ನ ಕರೊ. ) ಶೋಕ ಸನ್ನಿವೇಶಗಳಿಗೆ ಹೆಚ್ಚಾಗಿ ಬಳಸಲ್ಪಡುವ  ರಾಗ  ಶಿವರಂಜಿನಿ ಆಧಾರಿತ  ಸೂರಜ್    ಚಿತ್ರದ ಬಹಾರೊ ಫೂಲ್ ಬರಸಾವೊ ಅದ್ಭುತ ಶೃಂಗಾರ ಕಾವ್ಯವಾಗಿ  ಹೊರಹೊಮ್ಮಿದ್ದು  ಶಂಕರ್ ಜೈಕಿಶನ್  ಮ್ಯಾಜಿಕ್ ನಿಂದಾಗಿಯೇ. ಇದೇ ಹಾಡನ್ನು ರಫಿ ಅವರು ಶಂಕರ್ ಜೈಕಿಶನ್ ರಹಿತರಾಗಿ ಸ್ಟೇಜ್ ನಲ್ಲಿ ಹಾಡುವಾಗ ಶೋಕದ ಛಾಯೆ ಇಣುಕುತ್ತಿದ್ದುದನ್ನು  ಗಮನಿಸಬಹುದು. ಈ ಗೀತೆಯ ಧಾಟಿಯಲ್ಲಿ ಹರೀಂದ್ರನಾಥ  ಚಟ್ಟೋಪಾಧ್ಯಾಯ ರಚಿಸಿ  ರಫಿ ಹಾಡಿದ ಇಂಗ್ಲೀಷ್  ಆಲ್ ದೊ ವಿ ಹೈಲ್ ಫ್ರಮ್ ಡಿಫರೆಂಟ್ ಲ್ಯಾಂಡ್ಸ್  ಹಾಡಿನದ್ದೂ ಇದೇ ಪಾಡು.   ಗುಮ್ ನಾಮ್    ನ ಹಮ್ ಕಾಲೆ ಹೈಂ ತೊ ಕ್ಯಾ ಹುವಾ ಧಾಟಿಯಲ್ಲೂ ರಫಿ  ಚಟ್ಟೋಪಾಧ್ಯಾಯರ ಇಂಗ್ಲಿಷ್ ರಚನೆ  ಶಿ ಐ ಲವ್ ಈಸ್ ದ ಬ್ಯೂಟಿಫುಲ್ ಡ್ರೀಮ್ ಕಮ್ಸ್ ಟ್ರೂ  ಹಾಡಿದ್ದಾರೆ.  ಇದೇ  ಗುಮ್ ನಾಮ್    ಹಾಡಿಗೆ   ಬ್ರಹ್ಮಚಾರಿ   ಚಿತ್ರದಲ್ಲಿ  ಜೂ| ಮಹಮೂದ್ ಅಭಿನಯಿಸಿದ್ದು ಇನ್ನೊಂದು ವಿಶೇಷ.   ಇದೇ ಚಿತ್ರದ  ಜಾನ್ ಪೆಹಚಾನ್ ಹೊ ಹಾಡನ್ನು ಇಂಗ್ಲಿಷ್  ಘೋಷ್ಟ್ ವರ್ಲ್ಡ್   ಚಿತ್ರದ ಟೈಟಲ್ಸ್ ಗೆ ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ.  ಬೇಟಿ ಬೇಟೆ   ಚಿತ್ರದ ಇವರ ಹಾಡು  ರಾಧಿಕೆ ತೂನೆ ಬಂಸುರೀ ಚುರಾಯೀ ಯಥಾವತ್ತಾಗಿ  ತಂದೆ ಮಕ್ಕಳು   ಚಿತ್ರದ  ರಾಧಿಕೆ ನಿನ್ನ ಸರಸವಿದೇನೆ ಆಗಿದೆ.  ಇವರು ನೀಡಿದ ಎಲ್ಲ ರಫಿ ಹಿಟ್ ಹಾಡುಗಳನ್ನು ಪಟ್ಟಿ ಮಾಡುವುದು ಅಸಾಧ್ಯ. ಆದರೆ  ಆರಾಧನಾ   ಸ್ಥಿಂತ್ಯಂತರದ ನಂತರ ಶಂಕರ್ ಜೈಕಿಶನ್  ಸಹ  ತಕ್ಷಣ ಕಿಶೋರ್ ಕಡೆ ವಾಲಿದ್ದೂ ನಿಜ.

       ರೋಶನ್ :-  ಆಲಿಸಿದೊಡನೆ ತಮ್ಮೆಡೆಗೆ ಸೆಳೆಯಬಲ್ಲ  ತಾಜ್ ಮಹಲ್    ನ ಜೊ ವಾದಾ ಕಿಯಾ ವೊ,  ಆರತಿ  ಯ  ಬಾರ್ ಬಾರ್ ತೊಹೆ ಕ್ಯಾ ಸಮಝಾವೂಂ ದಂತಹ ಅನೇಕ ಅತಿಮಧುರ ಗೀತೆಗಳನ್ನು  ರಫಿ ಧ್ವನಿಯಲ್ಲಿ ನೀಡಿದವರು ಇವರು.  ಬರಸಾತ್ ಕೀ ರಾತ್    ನ ಜಿಂದಗೀ ಭರ್ ನಹೀಂ ಭೂಲೇಗಿ ಲತಾ ಆವೃತ್ತಿಯ ಎರಡನೇ ಚರಣದಲ್ಲಿ ರಫಿ ಪ್ರವೇಶ ಬೀರಿದ ಪರಿಣಾಮ  ಅದ್ಭುತ.  ಕವ್ವಾಲಿಗಳ ರಾಣಿಯೆಂದೇ  ಖ್ಯಾತಿಯುಳ್ಳ ಇದೇ ಚಿತ್ರದ  ನ ತೊ ಕಾರವಾಂ ಕೀ ತಲಾಶ್ ಹೈ ಯ ಕೊನೆ ಭಾಗದಲ್ಲಿ ರಫಿ ನಿರ್ವಹಣೆಯನ್ನು ಆನಂದಿಸದವರು ಯಾರಿದ್ದಾರೆ. ಚಿತ್ರಲೇಖಾ, ಬಾಬರ್,  ಅನೋಖೀ ರಾತ್, ಭೀಗೀ ರಾತ್, ನಯೀ ಉಮರ್ ಕೀ ನಯೀ ಫಸಲ್, ಬೇದಾಗ್ ಮುಂತಾದ ಚಿತ್ರಗಳಲ್ಲೂ ಸುಂದರ ರಫಿ ಗೀತೆಗಳಿದ್ದವು. ಅಕಾಲದಲ್ಲಿ ಇವರು ನಮ್ಮನ್ನಗಲದೆ ಇರುತ್ತಿದ್ದರೆ ಇನ್ನಷ್ಟು ಮಧುರ ರಫಿ ಗೀತೆಗಳು ನಮಗೆ ದೊರೆಯುತ್ತಿದ್ದವು.

·       ಚಿತ್ರಗುಪ್ತ:-  ಕಿರು ಬಜೆಟ್ ಚಿತ್ರಗಳನ್ನು ನಿರ್ಮಿಸುವವರ ಅದರಲ್ಲೂ ದಕ್ಷಿಣ ಭಾರತದ ನಿರ್ಮಾಪಕರ ಮೆಚ್ಚಿನ ಸಂಗೀತ ನಿರ್ದೇಶಕರಿವರು.  ಆರಂಭದಿಂದಲೇ ಇವರ ಮುಖ್ಯ ಗಾಯಕ ರಫಿ.    ಭಾಭೀ   ಚಿತ್ರದ ಚಲ್ ಉಡ್ ಜಾ ರೆ ಪಂಛೀ,  ಮೈ ಚುಪ್ ರಹೂಂಗೀ   ಯ ಚಾಂದ್ ಜಾನೆ ಕಹಾಂ ಖೋ ಗಯಾ  ಬಡಾ ಆದ್ಮೀ   ಯ ಅಖಿಯನ್ ಸಂಗ್ ಅಖಿಯಾಂ,  ವಾಸನಾ   ಚಿತ್ರದ ಯೆ ಪರಬತೊಂ ಕೆ ದಾಯರೆ ,  ಪತಂಗ್    ಚಿತ್ರದ ಯೆ ದುನಿಯಾ ಪತಂಗ್ ನಿತ್ ಬದಲೆ ಯೆ ರಂಗ್ ,  ಊಂಚೇ ಲೋಗ್    ಚಿತ್ರದ ಜಾಗ್ ದಿಲೆ ದೀವಾನಾ ಮುಂತಾದ ಹಾಡುಗಳನ್ನು ಯಾರು ತಾನೇ ಕೇಳಿಲ್ಲ.

·        ರವಿ:-  ಬಿ.ಆರ್. ಚೋಪ್ರಾ ಚಿತ್ರಗಳನ್ನು ಹೊರತು ಪಡಿಸಿದರೆ  ಇವರೂ ಸದಾ ರಫಿ ಮಾಧುರ್ಯವನ್ನು ಉಣಬಡಿಸಿದವರೇ.  ಚೌದವೀಂ ಕಾ ಚಾಂದ್, ಭರೋಸಾ, ಕಾಜಲ್, ಪ್ಯಾರ್ ಕಾ ಬಂಧನ್, ಅಪನಾ ಬನಾಕೆ ದೇಖೊ, ಆಜ್ ಔರ್ ಕಲ್, ಯೆ ರಾಸ್ತೆ ಹೈಂ ಪ್ಯಾರ್ ಕೆ, ಪ್ಯಾರ್ ಕಿಯಾ ತೊ ಡರನಾ ಕ್ಯಾ, ಶಹನಾಯಿ, ಗೆಹ್ರಾ ದಾಗ್, ಖಾನ್ ದಾನ್, ದೊ ಬದನ್, ದೂರ್ ಕೀ ಆವಾಜ್,  ದಸ್ ಲಾಖ್, ಏಕ್ ಫೂಲ್ ದೊ ಮಾಲಿ ಮುಂತಾಗಿ ಇವರ ಎಲ್ಲ ಚಿತ್ರಗಳೂ ರಫಿಯ ಗಾನ ಸುಧೆ ಹರಿಸಿದವುಗಳೇ.  ನೀಲ್ ಕಮಲ್    ಚಿತ್ರದ ಬಾಬುಲ್ ಕೀ ದುವಾಯೆಂ ಲೇತೀ ಜಾ ಹಾಡಿನ ರೆಕಾರ್ಡಿಂಗ್ ಮಾಡುವಾಗ ರಫಿ ಅವರು ಧಾರಾಕಾರವಾಗಿ ಕಣ್ಣೀರು ಸುರಿಸಿದ್ದರಂತೆ. ಈ ಹಾಡು ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂದು ಕೊಟ್ಟಿತು.

       ಎಸ್. ಡಿ ಬರ್ಮನ್:-  ಇವರ ಆದ್ಯತೆ ಕಿಶೋರ್ ಕುಮಾರ್ ಗಾದರೂ  ರಫಿಯ ಬಹಳಷ್ಟು ಅಮರ ಹಾಡುಗಳನ್ನು ಇವರೂ ಸೃಷ್ಟಿಸಿದ್ದಾರೆ. ಕಾಲಾ ಬಜಾರ್, ಬೇನಜೀರ್,  ಬಾತ್ ಏಕ್ ರಾತ್ ಕೀ, ತೇರೆ ಘರ್ ಕೆ ಸಾಮನೆ, ಜಿದ್ದಿ, ಗೈಡ್, ತಲಾಷ್, ಇಶ್ಕ್ ಪರ್ ಜೋರ್ ನಹೀಂ ಮುಂತಾದ ಚಿತ್ರಗಳಲ್ಲಿ ರಫಿಯೇ ಇವರ ಗಾಯಕ.  ಮೇರಿ ಸೂರತ್ ತೇರಿ ಆಂಖೆಂ   ಯಲ್ಲಿ ಮನ್ನಾಡೆ ಅವರ  ಪೂಛೋ ನ ಕೈಸೆ ಮೈನೆ ರೈನ್ ಬಿತಾಯೀ ಗೆ ಸರಿಸಾಟಿಯಾಗುವಂತೆ ರಫಿ ಹಾಡಿದ ನಾಚೆ ಮನ್ ಮೊರಾ ತೆರೆ ಬಿನ್ ಸೂನೆ ನೈನ್ ಹಮಾರೆ ಹಾಡುಗಳನ್ನು ಮರೆಯಲುಂಟೆ. ತೀನ್ ದೇವಿಯಾಂ, ಜುವೆಲ್ ತೀಫ್ ನಂತಹ ಚಿತ್ರಗಳಲ್ಲಿ ಇವರು ಕಿಶೋರ್, ರಫಿ  ಇಬ್ಬರನ್ನೂ ಬಳಸುತ್ತಿದ್ದರು. ಕಿಶೋರ್ ಯುಗದ ಆರಂಭಕ್ಕೆ ಕಾರಣವಾದ ಆರಾಧನಾ ದಲ್ಲೂ ಇವರಿಬ್ಬರೂ ಇದ್ದರಲ್ಲವೇ? ಮುಂದೆಯೂ ಅಭಿಮಾನ್, ಅನುರಾಗ್ ಮುಂತಾದ ಚಿತ್ರಗಳಲ್ಲಿ ರಫಿ ಹಾಡುಗಳಿದ್ದವು.  ಕಿಶೋರ್ ಪ್ರಿಯರಾದ ಇವರ ಸುಪುತ್ರ ಪಂಚಮ್ ಸಹ ತೀಸ್ರೀ ಮಂಜಿಲ್, ರಾತೊಂಕಾ ರಾಜಾ, ಪ್ಯಾರ್ ಕಾ ಮೌಸಮ್, ಕಾರವಾಂ ಮುಂತಾದ ಚಿತ್ರಗಳಲ್ಲಿ ಅದ್ಭುತ ರಫಿ ಗೀತೆಗಳನ್ನು ನೀಡಿದ್ದಾರೆ.  ಹಮ್ ಕಿಸೀ ಸೆ ಕಮ್ ನಹೀಂ   ಯ ಕ್ಯಾ ಹುವಾ ತೆರಾ ವಾದಾ ರಫಿಗೆ 6ನೇ ಫಿಲಂ ಫೇರ್ ಎವಾರ್ಡ್ ತಂದುಕೊಟ್ಟುದನ್ನೂ ಮರೆಯಲಾಗದು.

·        ಲಕ್ಷ್ಮಿಕಾಂತ್ ಪ್ಯಾರೆಲಾಲ್:-   ಇವರು ಹಾಡುಗಳನ್ನು ರಚಿಸುತ್ತಿದ್ದುದೇ ರಫಿ ಅವರನ್ನು ಮನಸ್ಸಲ್ಲಿ ಇಟ್ಟುಕೊಂಡು. ತಮ್ಮ ಮೊದಲ ಚಿತ್ರ ಪಾರಸ್ ಮಣಿ ಯಿಂದ ಆರಂಭಿಸಿ ರಫಿ ಅವರ ಕೊನೆಯ ಚಿತ್ರ ಆಸ್ ಪಾಸ್ ವರೆಗೆ ಇವರದ್ದು ಅವಿನಾಭಾವ ನಂಟು.  ದೋಸ್ತೀ, ಆಯಾ ತೂಫಾನ್, ವಾಪಸ್, ಫರ್ಜ್, ನೈಟ್  ಇನ್ ಲಂಡನ್, ಮೇರೆ ಹಮ್ ದಮ್ ಮೇರೆ ದೋಸ್ತ್,  ಜೀನೆ ಕೀ ರಾಹ, ಆಯಾ ಸಾವನ್ ಝೂಮ್ ಕೆ, ಸಾಜನ್, ಜಿಗ್ರೀ ದೋಸ್ತ್, ಹಮ್ ಜೊಲಿ, ದೊ ರಾಸ್ತೆ .. ಎಂತೆಂತಹ ಚಿತ್ರಗಳು ಎಂತೆಂತಹ ಹಾಡುಗಳು.    ಲೋಫರ್    ಚಿತ್ರದ  ವಿಶಿಷ್ಠ ಶೈಲಿಯ ಹಾಡು ಆಜ್ ಮೌಸಮ್ ಬಡಾ ಬೆಇಮಾನ್ ಹೈ ಇತ್ತೀಚೆಗೆ  ಮೊನ್ಸೂನ್ ವೆಡ್ಡಿಂಗ್    ಚಿತ್ರದಲ್ಲಿ  ಅಳವಡಿಸಲ್ಪಟ್ಟದ್ದು  ಉಲ್ಲೇಖನೀಯ. 1969ರಲ್ಲಿ ರಫಿ ವಿದೇಶ ಯಾತ್ರೆಗೆ ತೆರಳುವ ಮುನ್ನ  ಲಕ್ಷ್ಮಿ ಪ್ಯಾರೆ ಅವರಿಗಾಗಿ ದಾಖಲೆ ಸಂಖ್ಯೆಯ ಹಾಡುಗಳನ್ನು ಒಂದೇ ದಿನ ಹಾಡಿದ್ದರಂತೆ. ಈ ಯಾತ್ರೆಯ ಕಾರಣ   ಆರಾಧನಾ   ದಲ್ಲಿ  ರಫಿ ಹಾಡಬೇಕಿದ್ದ ಹಾಡುಗಳನ್ನು ಬರ್ಮನ್ ಒತ್ತಾಯದ ಮೇರೆಗೆ ಕಿಶೋರ್ ಕುಮಾರ್ ಹಾಡಿದ ನಂತರದ ವಿದ್ಯಮಾನಗಳು ಈಗ ಇತಿಹಾಸ. ನಂತರ ಕೆಲವು ಸಮಯ   ರಫಿ ಅವರು ಹಿನ್ನಡೆ ಅನುಭವಿಸುವಂತಾದಾಗಲೂ ತಮ್ಮ ಬಹುತೇಕ ಚಿತ್ರಗಳಲ್ಲಿ ಒಂದಾದರೂ ರಫಿ ಹಾಡು ಇರುವಂತೆ ನೋಡಿಕೊಂಡವರು ಲಕ್ಷ್ಮಿ ಪ್ಯಾರೆ ಮಾತ್ರ. ಹಿನ್ನಡೆಯನ್ನು ಮೆಟ್ಟಿ ಮುನ್ನಡೆಯನ್ನು ಸಾಧಿಸಲು  ರಫಿಗೆ ಅನುವು ಮಾಡಿಕೊಟ್ಟದ್ದು  ಇವರ  ಸರ್ ಗಮ್, ಅಮರ್ ಅಕ್ಬರ್ ಅಂಥೊಣಿ ಮುಂತಾದ ಚಿತ್ರಗಳೇ. ಆದರೂ ವಯಸ್ಸಿನ ಪ್ರಭಾವದಿಂದಲೋ,  ಅನಾರೋಗ್ಯದಿಂದಲೋ ಅವರ ಕಂಠ  ತನ್ನ ಮೊದಲಿನ ಮಾರ್ದವತೆಯನ್ನು ಕಳೆದುಕೊಂಡದ್ದರಿಂದ 60ರ ದಶಕದ ಪಾರಮ್ಯವನ್ನು ಮತ್ತೆ ಸಾಧಿಸಲು ಸಾಧ್ಯವಾಗಲೇ ಇಲ್ಲ.

·        ಇತರ ಸಂಗೀತ ನಿರ್ದೇಶಕರು:- ಒಂದೊಂದು ಪ್ರಾತಿನಿಧಿಕ ಉದಾಹರಣೆಯೊಂದಿಗೆ ನೆನಸಿಕೊಳ್ಳುವುದಾದರೆ ಎನ್ ದತ್ತಾ(ಗ್ಯಾರಹ ಹಜಾರ್ ಲಡ್ಕಿಯಾಂ- ದಿಲ್ ಕಿ ತಮನ್ನಾ ಥೀ ಮಸ್ತಿ ಮೆಂ), ಮದನ್ ಮೋಹನ್( ರೇಲ್ವೆ ಪ್ಲಾಟ್ ಫಾರಮ್ - ಬಸ್ತಿ ಬಸ್ತಿ ಪರಬತ್ ಪರಬತ್), ಎಸ್ ಎನ್ ತ್ರಿಪಾಠಿ( ಜನಮ್ ಜನಮ್ ಕೆ ಫೇರೆ - ಜರಾ ಸಾಮನೆ ತೊ ಆವೊ ಛಲಿಯೆ), ಕಲ್ಯಾಣ್ ಜೀ ಆನಂದಜೀ (ಜಬ್ ಜಬ್ ಫೂಲ್ ಖಿಲೆ - ಯಹಾಂ ಮೈ ಅಜನಬೀ ಹೂಂ), ಸಲಿಲ್ ಚೌಧರಿ (ಮಧುಮತಿ - ಟೂಟೆ ಹುವೆ ಖ್ವಾಬೊಂನೆ), ಖಯ್ಯಾಮ್ ( ಮುಹಬ್ಬತ್ ಇಸ್ಕೊ ಕಹತೆ ಹೈಂ - ಠಹರಿಯೆ ಹೋಶ್ ಮೆ ಆವೂಂ), ಇಕಬಾಲ್ ಖುರೇಶಿ (ಚಾ ಚಾ ಚಾ -  ಸುಬಹ ನ ಆಯೀ ಶಾಮ್ ನ ಆಯೀ), ಸರ್ದಾರ್ ಮಲ್ಲಿಕ್ (ಬಚಪನ್ - ಮುಝೆ ತುಮ್ ಸೆ ಮುಹಬ್ಬತ್ ಹೈ), ಉಷಾ ಖನ್ನಾ (ಆವೊ ಪ್ಯಾರ್ ಕರೇಂ -  ಯೆ ಝುಕಿ ಝುಕಿ ನಿಗಾಹೆಂ ತೆರೀ), ಸ್ವತಃ ಗಾಯಕರಾದ ಹೇಮಂತ ಕುಮಾರ್ (ದೊ ದಿಲ್ - ತೇರಾ ಹುಸ್ನ್ ರಹೆ ಮೇರಾ ಇಶ್ಕ್ ರಹೆ), ರಾಮಲಾಲ್ ( ಸೆಹ್ರಾ -  ತಕದೀರ್ ಕಾ ಫಸಾನಾ), ಸೋನಿಕ್ ಒಮಿ ( ದಿಲನೆ ಫಿರ್ ಯಾದ್ ಕಿಯಾ -  ಕಲಿಯೊಂನೆ ಘುಂಗಟ್ ಖೋಲೆ), ಜಯ ದೇವ್ (ಹಮ್ ದೋನೊ -  ಮೈ ಜಿಂದಗೀ ಕಾ ಸಾಥ್ ನಿಭಾತಾ ಚಲಾ ಗಯಾ ), ಸಿ ಅರ್ಜುನ್ (ಪುನರ್ಮಿಲನ್ -  ಪಾಸ್ ಬೈಠೊ ತಬೀಯತ್ ಬಹಲ್ ಜಾಯೆಗೀ), ಜಿ ಎಸ್ ಕೊಹಲಿ ( ಎಡ್ವೆಂಚರ್ಸ್ ಆಫ್ ರಾಬಿನ್ ಹುಡ್ -  ಮಾನಾ ಮೆರೆ ಹಸೀಂ ಸನಮ್), ಹಂಸರಾಜ್ ಬಹಲ್ ( ಚಂಗೇಜ್ ಖಾನ್ -  ಮುಹಬ್ಬತ್ ಜಿಂದಾ ರಹತೀ ಹೈ), ಸಪನ್ ಜಗಮೋಹನ್ (ಬೇಗಾನಾ -  ಫಿರ್ ವೊ ಭೂಲಿ ಸಿ ಯಾದ್ ಆಯೀ ಹೈ), ಲಚ್ಛೀರಾಮ್ (ಮೈ ಸುಹಾಗನ್ ಹೂಂ - ತೂ ಶೋಖ್ ಕಲಿ ಮೈ ಮಸ್ತ್ ಪವನ್ ) ಮುಂತಾದವರು ರಫಿ ಕಂಠದಲ್ಲಿ ನಮಗೆ ನೀಡಿದ ಮಾಧುರ್ಯವನ್ನೂ  ಮರೆಯುವಂತಿಲ್ಲ.

ಕನ್ನಡ ಹಾಡು:- ಸತ್ಯಂ ಸಂಗೀತ ನಿರ್ದೇಶನದಲ್ಲಿ   ಒಂದೇ ಬಳ್ಳಿಯ ಹೂಗಳು   ಚಿತ್ರಕ್ಕಾಗಿ ಹಾಡಿದ ನೀನೆಲ್ಲಿ ನಡೆವೆ ದೂರ ಹಾಡು ಎಲ್ಲರಿಗೂ ಗೊತ್ತಿರುವಂತಹದ್ದೇ. ಈ ಚಿತ್ರ  ಛೊಟೀ ಬಹನ್   ಚಿತ್ರದ ಕನ್ನಡ ಅವತರಣಿಕೆ.  ಅಲ್ಲಿ ಈ ಸಂದರ್ಭಕ್ಕೆ ಮುಕೇಶ್ ಅವರ ಜಾವೂಂ ಕಹಾಂ ಬತಾ ಎ ದಿಲ್ ಹಾಡು ಇತ್ತು.  1954ರಲ್ಲಿ ಕಲ್ಯಾಣ್ ಕುಮಾರ್ ಅಭಿನಯದ   ಆಶಾ ನಿರಾಶಾ    ಎಂಬ ಮುಂಬಯಿಯಲ್ಲಿ ತಯಾರಾದ ಕನ್ನಡ ಚಿತ್ರಕ್ಕಾಗಿ ರಫಿ ಹಾಡಿದ್ದರು ಎಂದು ಆ ವರ್ಷದ ವಿಕಟ ವಿನೋದಿನಿ  ಸಂಚಿಕೆಯೊಂದರಲ್ಲಿ ದಾಖಲಾಗಿದೆ.  ಆದರೆ ಆ ಚಿತ್ರ ಪ್ರದರ್ಶಿತವಾಗಿತ್ತೇ ಹಾಗೂ ಚಿತ್ರದ ಹಾಡುಗಳ  ಧ್ವನಿಮುದ್ರಿಕೆಗಳು ತಯಾರಾಗಿದ್ದವೇ ಎಂಬುದನ್ನು ಹಿರಿಯ ತಲೆಮಾರಿನವರಾರಾದರೂ ಹೇಳಬಲ್ಲರೇನೋ.



    ಹೇಳುತ್ತಾ ಹೋದರೆ ಪಟ್ಟಿ ಮುಗಿಯಲಾರದು.  ಸಾಗರವನ್ನು ಬೊಗಸೆಯಲ್ಲಿ ಮೊಗೆಯಲು  ಹೊರಟಂತಾದೀತು. ಅಂತೂ ಇಂತಹ ಹಾಡುಗಳು  ಮುಂಬರುವ ಶತ ಶತಮಾನಗಳ ಕಾಲ ಮಹಮ್ಮದ್ ರಫಿ ಅವರ  ಅಭಿಮಾನಿಗಳನ್ನು ತಣಿಸುವುದಂತೂ ನಿಜ.