Tuesday 29 August 2023

Mukesh माधुर्य ಮಂಜರಿ



    
ಜೋನ್ ಜಾನಿ ಜನಾರ್ದನ್ ಇದ್ದ ಹಾಗೆ ಇದೇನಪ್ಪಾ ಮುಕೇಶ್ ಮಾಧುರ್ಯ ಮಂಜರಿ ಎಂಬ ತಲೆಬರಹದಲ್ಲಿ ಭಾಷೆಗಳ  ಕಲಸು ಮೇಲೋಗರ ಎಂದು ಅಚ್ಚರಿಯಾಯಿತೇ.  ಮಧುರ ಸಂಗೀತ ದೇಶ-ಭಾಷೆ-ಕಾಲಾತೀತ. ಹಾಗಾಗಿ ಈ ಹೊಸ ವರಸೆ ಅಷ್ಟೇ. ಆಗಸ್ಟ್ 27ಕ್ಕೆ ಮುಕೇಶ್  ಪುಣ್ಯತಿಥಿ.  ಅವರ ಕೆಲವು ಹಾಡುಗಳನ್ನು ನೆನಪಿಸಿಕೊಳ್ಳಲು ನಮಗೊಂದು ನೆವ.

    
ರಫಿ, ತಲತ್, ಮನ್ನಾಡೆ, ಕಿಶೋರ್ ಸಮಕಾಲೀನರಾಗಿದ್ದ ಮುಕೇಶ್ ತಮ್ಮ  ವೃತ್ತಿ ಜೀವನದಲ್ಲೆಂದೂ ಆರಕ್ಕೇರಿದವರಲ್ಲ ಮೂರಕ್ಕಿಳಿದವರಲ್ಲ.  ಅದು ತಲತ್ ಯುಗವಿರಲಿ, ರಫಿ ಯುಗವಿರಲಿ, ನಂತರದ ಕಿಶೋರ್ ಯುಗವಿರಲಿ, ತಮ್ಮ ಅವಕಾಶಗಳನ್ನು ತಮ್ಮದಾಗಿಯೇ ಉಳಿಸಿಕೊಂಡವರು, ಅವುಗಳ ಸದುಪಯೋಗ ಮಾಡಿಕೊಂಡವರು.  ಚಿತ್ರ ನಿರ್ಮಾಣ, ನಟನೆಯಲ್ಲೂ  ಅದೃಷ್ಟ ಪರೀಕ್ಷಿಸಿದ್ದ ಅವರು ಅದು ತಮಗಲ್ಲ ಎಂದು ನಿಶ್ಚಯಿಸಿ ಹಾಡುಗಾರಿಕೆಯನ್ನೇ ಉಸಿರಾಗಿಸಿಕೊಂಡು ಹಾಡುವುದಕ್ಕೆಂದೇ ತೆರಳಿ  ಅಮೇರಿಕದ ಡೆಟ್ರಾಯಿಟ್‍ನಲ್ಲಿ ಐವತ್ತಮೂರರ ಹರೆಯದಲ್ಲಿ ಕೊನೆಯುಸಿರೆಳೆದವರು.

    
ತಮ್ಮ ಇತರ ಸಮಕಾಲೀನರಷ್ಟೇ ವೃತ್ತಿಪರರಾಗಿದ್ದ ಅವರು ಸ್ಪಷ್ಟ ಉಚ್ಚಾರ, ಧ್ವನಿಭಾರ, ಉಸಿರಿನ ನಿಯಂತ್ರಣ, voice throw ಗಳ ವಿಷಯದಲ್ಲಿ ಯಾರಿಗೂ ಕಮ್ಮಿ ಇರಲಿಲ್ಲ.  ಆದರೆ ಅವರು  ಏಕಪಾಠಿ ಮಾತ್ರ ಅಲ್ಲವಂತೆ.  ರಫಿ, ಕಿಶೋರ್ ಅವರಂತೆ ಹಾಡಿನ ಟ್ಯೂನ್ ಒಂದೇ ಸಲ ಕೇಳಿ ರೆಕಾರ್ಡಿಂಗಿಗೆ ತಯಾರಾಗಲು ಅವರಿಗೆ ಕಷ್ಟವಾಗುತ್ತಿತ್ತಂತೆ.  ಶ್ರುತಿ ಶುದ್ಧತೆ ಬಗ್ಗೆಯೂ ಅವರಲ್ಲಿ ಆತ್ಮವಿಶ್ವಾಸ ಕೊಂಚ ಕಮ್ಮಿ ಇತ್ತೆಂದು ಹೇಳುತ್ತಾರೆ.  ಹೀಗಾಗಿ ರೆಕಾರ್ಡಿಂಗ್ ಆರಂಭವಾಗುವ ವರೆಗೂ ಹಾರ್ಮೋನಿಯಮ್ ನುಡಿಸುತ್ತಾ ಅಭ್ಯಾಸ ಮಾಡುತ್ತಲೇ ಇರುತ್ತಿದ್ದರಂತೆ. ರೆಕಾರ್ಡಿಂಗ್ ನಲ್ಲೂ ಟೇಕ್ ಗಳ ಸಂಖ್ಯೆ ಹೆಚ್ಚೇ ಇರುತ್ತಿತ್ತಂತೆ.  ಸ್ಟೇಜ್ ಕಾರ್ಯಕ್ರಮಗಳಲ್ಲೂ ಅವರು ಹಾರ್ಮೋನಿಯಮ್ ನುಡಿಸುತ್ತಲೇ ಹಾಡುತ್ತಿದ್ದುದನ್ನು ಗಮನಿಸಬಹುದು. ಆದರೂ ಆ ಕಾಲದ ಸಂಗೀತ ನಿರ್ದೇಶಕರು  ಸಂದರ್ಭ ಸಿಕ್ಕಿದಾಗಲೆಲ್ಲ ಅವರಿಂದ ಹಾಡುಗಳನ್ನು ಹಾಡಿಸಿರುವುದಕ್ಕೆ   ಅವರ ಕಂಠ ಅಲೌಕಿಕ ಆಗಿದ್ದುದೇ ಕಾರಣವಿರಬಹುದು . ಅವರನ್ನು  ಹೆಚ್ಚು ವೈವಿಧ್ಯಪೂರ್ಣವಾಗಿ  ಬಳಸಿಕೊಂಡದ್ದು ಶಂಕರ್-ಜೈಕಿಶನ್ .
    
ಇವರು ಹಾಡಿದ ಹಾಡುಗಳು ಸಂಖ್ಯೆಯಲ್ಲಿ ರಫಿ, ಕಿಶೋರ್ ಅವರಿಗಿಂತ ಕಮ್ಮಿ ಇರಬಹುದು.  ಆದರೆ ಇವುಗಳಲ್ಲಿ ಕಾಳು ಜಾಸ್ತಿ, ಜೊಳ್ಳು ಬಹಳ ಕಮ್ಮಿ. ಹಾಡಿದ ಹಾಡುಗಳಲ್ಲಿ ಉತ್ತಮವಾದವುಗಳ ಪ್ರತಿಶತ ಲೆಕ್ಕ ಹಾಕಿದರೆ ಪ್ರಥಮ ಸ್ಥಾನದಲ್ಲಿ ನಿಲ್ಲುವುದು ಅವರೇ. ಅಂತಹವುಗಳಲ್ಲಿ ನನ್ನ ನೆನಪಿಗೆ ಬಂದ, ನನಗಿಷ್ಟವಾದ 10 ಹಾಡುಗಳು ಇಲ್ಲಿವೆ.  ನಿಮಗೆಲ್ಲರಿಗೂ ಮೆಚ್ಚುಗೆಯಾಗುತ್ತವೆ ಅಂದುಕೊಂಡಿದ್ದೇನೆ.

    

1. ಆವಾರಾ ಹೂಂ - ಆವಾರಾ
    Awara Hoon - Awara 

ಪ್ರೇಮಗೀತೆಗಳೂ ಸೇರಿದಂತೆ ಎಲ್ಲ ಹಾಡುಗಳೂ ಒಂದು ರೀತಿ ವಿಷಾದ ಭಾವವನ್ನು ಹೊಂದಿರುತ್ತಿದ್ದ ಕಾಲದಲ್ಲಿ ಲವಲವಿಕೆಯನ್ನು ಮೈಗೂಡಿಸಿಕೊಂಡು ಬಂದ ಆ ಕಾಲಕ್ಕೆ ahead of time ಎನ್ನಬಹುದಾದ ಶಂಕರ್ ಜೈಕಿಶನ್ ಹಾಡು  ಇದು.  ಮುಂದೆ ಆರ್ ಪಾರ್, ತುಮ್‍ ಸಾ ನಹೀಂ ದೇಖಾ ನಂತರವಷ್ಟೇ ಎಲ್ಲ ಹಾಡುಗಳಲ್ಲಿ ಲವಲವಿಕೆ ಕಾಣಿಸಿಕೊಳ್ಳತೊಡಗಿತು. ತಮ್ಮ ಮೆಚ್ಚಿನ ಹಿರಿಯ ಸಂಗೀತ ನಿರ್ದೇಶಕ ಎಸ್.ಡಿ.ಬರ್ಮನ್ ಈ ಹಾಡಿನಲ್ಲಿಯ ಎಕಾರ್ಡಿಯನ್ ವಾದ್ಯದ ಅತಿ ಸುಂದರ ಕುಸುರಿ ಕೆಲಸ  ಮೆಚ್ಚಿ ಶಹಬ್ಬಾಸ್ ಎಂದು ಬೆನ್ನು ತಟ್ಟಿದಾಗ ಶಂಕರ್ ಅವರಿಗೆ ಬಹಳ ಖುಶಿ ಆಗಿತ್ತಂತೆ.  ಈ ಹಾಡು  ರಷ್ಯಾದಲ್ಲೂ ಬಹು ಜನಪ್ರಿಯ ಆಗಿ ರಾಜ್ ಕಪೂರ್ ಹಾಗೂ ಆ ದೇಶದ ನಡುವೆ  ನಂಟು ಬೆಳೆಯಲು ಕಾರಣವಾಯಿತು.  ನಂತರದ ಅನೇಕ ರಾಜ್ ಕಪೂರ್ ಚಿತ್ರಗಳ ಹಾಡುಗಳಲ್ಲಿ ರಷ್ಯನ್ ಸಂಗೀತದ ಛಾಯೆಯನ್ನೂ  ಗುರುತಿಸಬಹುದು. 




2. ಮುಝಕೊ ಇಸ್ ರಾತ್ ಕೀ - ದಿಲ್ ಭೀ ತೇರಾ ಹಮ್ ಭೀ ತೇರೆ
    Mujh Ko Is Raat Ki - Dil Bhi Tera Hum Bhi Tere

ಧರ್ಮೇಂದ್ರ ಅವರ ಮೊದಲ ಚಿತ್ರದ ಗೀತೆಯಿದು.  ಕಲ್ಯಾಣಜೀ-ಆನಂದಜೀ ಅವರು ಶಂಕರ್-ಜೈಕಿಶನ್ ಹೆಜ್ಜೆ ಜಾಡಿನಲ್ಲಿ ಗದ್ದಲಕ್ಕೆ ಹೆಸರಾದ ಸ್ಯಾಕ್ಸೊಫೋನ್, ಗ್ರೂಪ್ ವಯಲಿನ್ಸ್ ನಂತಹ ವಾದ್ಯಗಳನ್ನು ಬಳಸಿಯೂ ರಾತ್ರಿಯ ನೀರವತೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈಬ್ರೋಫೋನ್ ಬಳಕೆ ಹಾಡಿಗೆ ವಿಶೇಷ ಮೆರುಗು ನೀಡಿದೆ.  ಒಂದು ಚಿತ್ರಕ್ಕೆ ಒಂದು  ಹಿಟ್ ಮುಕೇಶ್ ಹಾಡು ಕೆಟಗರಿಯಲ್ಲಿ  ಕಲ್ಯಾಣಜೀ-ಆನಂದಜೀ ನಂಬರ್ ವನ್.




3. ರುಕ್ ಜಾ ಒ ಜಾನೆವಾಲಿ - ಕನ್ಹಯ್ಯಾ
    Ruk Ja O Janewali - Kanhayya

ನಾಯಕನು ಸ್ವಗತದಲ್ಲಿ ಹಾಡುವುದನ್ನು ಕೇಳಿ ನಾಯಕಿ ಅದು ತನಗಾಗಿಯೇ ಅಂದುಕೊಳ್ಳುವ ಶೈಲಿಯಲ್ಲಿದೆ ಇದು. ವಿವಿಧ ರೀತಿಯ ಕೊಳಲುಗಳ ಬಳಕೆ, ವೇಗದ ನಡೆ ಈ ಹಾಡಿನಲ್ಲಿ ಅಂತರ್ಗತವಾದ ಉತ್ಸಾಹಕ್ಕೆ ಪೂರಕವಾಗಿವೆ.  ರುಕ್ ಜಾ ಅಂದೊಡನೆ ಕೊಳಲುಗಳ ಮೂರು ಸಲದ ಮಾರ್ನುಡಿ ಈ ಹಾಡಿನ ಪಂಚ್ ಲೈನ್ ಅನ್ನಬಹುದು.  ತಿಕ್ಕುಜಾ ಈ ದಾಯೆ ಪನ್ ತಿಕ್ಕುಜಾ (ಸಿಕ್ಕೊಲ್ಲ ನೀ ಯಾಕೆ ಹೇಳು ಸಿಕ್ಕೊಲ್ಲ) ಎಂದು ಬದಲಾಯಿಸಿ ಈ ಹಾಡನ್ನು ತುಳು ನಾಟಕಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದರು.




4. ಲೌಟ್ ಕೆ ಆಜಾ ಮೇರೆ ಮೀತ್ - ರಾಣಿ ರೂಪಮತಿ
    Laut Ke Aja Mere Meet - Rani Rupamati

ನಟ, ನಿರ್ದೇಶಕರೂ ಆಗಿದ್ದ ಎಸ್.ಎನ್.ತ್ರಿಪಾಠಿ ಅವರ ಸಂಗೀತ ನಿರ್ದೇಶನದ ಈ ಗೀತೆ ಸರಳತೆಗೆ ಒಳ್ಳೆಯ ಉದಾಹರಣೆ.  ಇಲ್ಲಿ ಹೆಚ್ಚಿನ ವಾದ್ಯಗಳ ಬಳಕೆ ಇಲ್ಲ.  ಆದರೂ  ಕೇಳುಗರ ಮೇಲೆ ಬೀರುವ ಪರಿಣಾಮಕ್ಕೇನೂ ಕೊರತೆ ಇಲ್ಲ. ಮಧುಮಾದ್ ಸಾರಂಗ್  ಅರ್ಥಾತ್ ಮಧ್ಯಮಾವತಿ ರಾಗಾಧಾರಿತವಾದ ಈ ಸರಳ ರಚನೆ ಮಾಧುರ್ಯದಲ್ಲಿ ಅದ್ದಿ ತೆಗೆದಂತಿದೆ.




5. ರಾತ್ ಔರ್ ದಿನ್ - ಟೈಟಲ್ ಹಾಡು
    Raat Aur Din - Title song

ನರ್ಗಿಸ್ ಅವರ ಕೊನೆಯ ಚಿತ್ರದ ಈ ಹಾಡಿನ ನಡೆ  ಯಾವುದೆ ಲಗುಬಗೆ, ಉದ್ವೇಗ ಇಲ್ಲದ್ದು. ಕೇಳುಗರಲ್ಲಿ ಉದ್ವೇಗ ಇದ್ದರೆ ಹೋಗಲಾಡಿಸಬಲ್ಲಂಥದ್ದು.  ಕೇಳಿದರೆ ಹಾಗೆಯೇ ಕೇಳುತ್ತಲೇ ಇರೋಣ ಅನ್ನಿಸುತ್ತದೆ, ಬಜಾಜ್ ಸ್ಕೂಟರಿನಲ್ಲಿ ಟ್ರಾಫಿಕ್ ಇಲ್ಲದ ರೋಡಿನಲ್ಲಿ ಹದವಾದ ವೇಗದಲ್ಲಿ ಹೋಗುತ್ತಾ ಇರುವ ಅನುಭವ  ನೀಡುತ್ತದೆ.




6. ಓ ಜಾನೆವಾಲೆ ಹೋ ಸಕೆ ತೊ - ಬಂದಿನಿ
    O Janewale Ho Sake To - Bandini

ಮುಕೇಶ್ ಅವರನ್ನು ಸಚಿನ್ ದೇವ್ ಬರ್ಮನ್  ಬಳಸಿದ್ದು ಕಮ್ಮಿಯೇ.  ಆದರೆ ಬಳಸಿಕೊಂಡಾಗಲೆಲ್ಲ ಜನ್ಮ ತಾಳಿದ್ದು ಇಂತಹ ರತ್ನಗಳೇ.  ಬರ್ಮನ್ ಸಂಗೀತದಲ್ಲಿ ಹೆಚ್ಚಾಗಿ ಕೇಳಸಿಗದ ಕೋರಸ್ ಬಳಕೆ ಇದರಲ್ಲಿದೆ.  ಹೋ ಸಕೆ ತೊ ಲೌಟ್ ಕೆ  ಆನಾ ಎಂಬ ಸಾಲು ಕಪ್ಪು ಒಂದು ಶ್ರುತಿಯ ಷಡ್ಜ ಹಾಗೂ ಮಂದ್ರ ನಿಷಾದದಲ್ಲಿ ನುಡಿಯುವಾಗ ಆಗುವ ಆನಂದ ಅವರ್ಣನೀಯ.   ಪಿ.ಬಿ.ಎಸ್ ಅವರಂತೆ ಮುಕೇಶ್ ಧ್ವನಿಯೂ ಕೆಳ ಶ್ರುತಿಯ ಮಧ್ಯ ಹಾಗೂ ಮಂದ್ರ ಸಪ್ತಕಗಳಿಗೆ ಹೇಳಿ ಮಾಡಿಸಿದಂಥದ್ದು.




7. ಸಜನ್ ರ್ ಝೂಟ್ ಮತ್ ಬೋಲೊ - ತೀಸ್ರಿ ಕಸಂ
    Sajan Re Jhoot Mat Bolo - Teesri Kasam

ಕವಿ ಶೈಲೇಂದ್ರ ಅವರು ಮಾರೇ ಗಯೆ ಗುಲ್‍ಫಾಮ್ ಕಾದಂಬರಿ ಆಧರಿಸಿ ಸ್ವತಃ ನಿರ್ಮಿಸಿ ಕೈ ಸುಟ್ಟುಕೊಂಡ ಚಿತ್ರದ ಹಾಡು ಇದು.  ಚಿತ್ರ ಹಾಗೂ ಅದರ ಶಂಕರ್-ಜೈಕಿಶನ್ ಸಂಗೀತ ಶ್ರೇಷ್ಠವಾಗಿದ್ದರೂ ಅನನುಭವಿ ಶೈಲೇಂದ್ರ ಅವರಿಗೆ ಅದನ್ನು ವ್ಯಾವಹಾರಿಕವಾಗಿ  ಗೆಲ್ಲಿಸುವುದು ಸಾಧ್ಯವಾಗಲಿಲ್ಲ.  ಆ ಮೇಲೆ ಇದಕ್ಕೆ ರಾಷ್ಟ್ರೀಯ ಪುರಸ್ಕಾರ, ವಿಮರ್ಶಕರ ಮನ್ನಣೆ ಇತ್ಯಾದಿ  ಸಿಕ್ಕಿದರೂ ಮೊದಲೇ ಕುಡಿತದ ಚಟಕ್ಕೆ ಬಲಿಯಾಗಿದ್ದ ಶೈಲೇಂದ್ರ ಚಿತ್ರದ ಸೋಲಿನಿಂದ ಕಂಗೆಟ್ಟು  1966 ರಲ್ಲಿ ಕೇವಲ 43 ರ ಪ್ರಾಯದಲ್ಲಿ  ಖುದಾ ಕೆ ಪಾಸ್ ಜಾನಾ ಹೈ ಎನ್ನುತ್ತಾ ಇಹ ಲೋಕ ತ್ಯಜಿಸಿದರು.  ಈ ರೀತಿ ರಾಜ್ ಕಪೂರ್ ಯಶಸ್ವಿ ತಂಡದ ಮೊದಲ ಕೊಂಡಿ ಕಳಚಿತು.  ಮುಂದೆ 1971 ರಲ್ಲಿ ಜೈಕಿಶನ್ ಕೂಡ ಕುಡಿತದಿಂದಾಗಿ 41 ರ ವಯಸ್ಸಿನಲ್ಲಿ ಇದೇ ಹಾದಿ ಹಿಡಿದಾಗ ಎರಡನೇ ಕೊಂಡಿಯೂ ಕಳಚಿ  ಈ ತಂಡಕ್ಕೆ  ಸರಿಪಡಿಸಲಾಗದ ಹಾನಿಯುಂಟಾಯಿತು. ಕುಡಿತ ಕೆಟ್ಟದ್ದೇ. ಶೈಲೇಂದ್ರ, ಜೈಕಿಶನ್ರೋಶನ್, ಮದನ್ ಮೋಹನ್ ಇವರೆಲ್ಲ  ಕುಡಿತದಿಂದ ಕರುಳನ್ನು ಕರಗಿಸಿಕೊಂಡು ಚಿಕ್ಕ ಪ್ರಾಯದಲ್ಲೇ ಇಹಲೋಕ ತ್ಯಜಿಸಿದವರು. ಮುಕೇಶ್ ಕೂಡ ಕುಡಿತದ ಅಭ್ಯಾಸ ಇದ್ದವರು ಅನ್ನುತ್ತಾರೆ.  ಆದರೂ ನಾವು ಇಂದಿಗೂ ಮೆಚ್ಚಿಕೊಂಡು ಆಸ್ವಾದಿಸುವ ಅನೇಕ ಅಮರ ಹಾಡುಗಳು ಮಧುಪಾನದ ನಶೆಯಲ್ಲಿಯೇ ಜನ್ಮ ತಾಳಿರಬಹುದು ಎಂದು ಎಣಿಸುವಾಗ ತನ್ನನ್ನೇ ಕರಗಿಸಿಕೊಂಡು ಬೆಳಕು ನೀಡುವ ಮೊಂಬತ್ತಿಯಂತೆ ಇವರೂ ತಮ್ಮ ಜೀವವನ್ನೇ ಸವೆಸಿ   ನಮಗಾಗಿ ಇಂತಹ ಕೊಡುಗೆಗಳನ್ನು ಕೊಟ್ಟು ಹೋದರು ಎಂಬ ಭಾವನೆ ಬರುವುದಿಲ್ಲವೇ.




8. ತುಮ್ ಆಜ್ ಮೇರೆ ಸಂಗ್ ಹಸ್ ಲೊ - ಆಶಿಕ್ 
    Tum Aaj Mere Sang  Haslo - Ashiq

ಈ ಶಂಕರ್-ಜೈಕಿಶನ್ ಹಾಡಿನಲ್ಲಿ ಬಾಯಿಂದ ಹೊರಡಿಸುವ ವಿಚಿತ್ರ ಸದ್ದೊಂದನ್ನು ಬಳಸಿಕೊಳ್ಳಲಾಗಿದೆ.  ನಮ್ಮೂರಲ್ಲಿ ಐತು ಎಂಬವನೊಬ್ಬ ತೆಂಬರೆ ಎಂಬ ಜಾನಪದ ಚರ್ಮ ವಾದ್ಯವನ್ನು ನುಡಿಸಿಕೊಂಡು ಬಾಯಿಂದ ಇದೇ ರೀತಿಯ ಸದ್ದು ಹೊರಡಿಸಿ ಕುಣಿಯುತ್ತಾ ಮಕ್ಕಳನ್ನು ಖುಶಿ ಪಡಿಸುತ್ತಿದ್ದ !  ಈ ಹಾಡನ್ನು ಅವನೆಂದೂ ಕೇಳಿರುವ ಸಾಧ್ಯತೆ ಇಲ್ಲ,  ಶಂಕರ್-ಜೈಕಿಶನ್, ರಾಜ್ ಕಪೂರ್ ಇವರೆಲ್ಲ ಯಾರು ಎಂದೂ  ಅವನಿಗೆ ಗೊತ್ತಿದ್ದಿರಲೂ ಸಾಧ್ಯವಿಲ್ಲ.    ರಾಜ್ ಕಪೂರ್ - ಪದ್ಮಿನಿ ನಟನೆ,  ಶಂಕರ್-ಜೈಕಿಶನ್ ಸಂಗೀತ, ಹೃಷಿಕೇಶ ಮುಖರ್ಜಿ ನಿರ್ದೇಶನದ ಈ ಚಿತ್ರ ನಿರ್ಮಿಸಿದವರು ಒಂದು ಕಾಲದಲ್ಲಿ ರೇಡಿಯೋ ಸಿಲೋನ್ ಅನೌಂಸರ್ ಆಗಿದ್ದು ನಂತರ HMV ಯ ಮಖ್ಯಸ್ಥರಾದ ವಿಜಯ ಕಿಶೋರ್ ದೂಬೆ ಹಾಗೂ ಪತ್ರಕರ್ತ ಬನ್ನಿ ರೂಬೆನ್.  ಇವರೀರ್ವರೂ ಈ ಕ್ಷೇತ್ರದಲ್ಲಿ ಅನನುಭವಿಗಳಾದ್ದರಿಂದ ಈ ಚಿತ್ರವೂ ಆರ್ಥಿಕವಾಗಿ ನೆಲ ಕಚ್ಚಿತಂತೆ.  ಕೊಳಲಿನ ದೇಹದಲ್ಲೆಲ್ಲ ಛೇದಗಳಿದ್ದರೂ ಅದು ಮಧುರ ಗೀತೆಗಳನ್ನು ನುಡಿಯುವಂತೆ ನಗು ನಗುತಾ ನಲಿ ಏನೇ ಆಗಲಿ ಎಂಬ ಸಂದೇಶ ಈ ಹಾಡಿನದ್ದು.  ಶೈಲೇಂದ್ರ ಅವರ ಅರ್ಥಪೂರ್ಣ ಸಾಹಿತ್ಯ ಇದರಲ್ಲಿದೆ.




9.  ಆ ಅಬ್ ಲೌಟ್ ಚಲೆಂ - ಜಿಸ್ ದೇಶ್ ಮೆಂ ಗಂಗಾ ಬಹತೀ ಹೈ
    Aa Ab Laut Chalen - Jis Desh Me Ganga Behati Hai

ಶಂಕರ್-ಜೈಕಿಶನ್ ಪ್ರತಿಭೆಯ ಮೇರು ಸಂಯೋಜನೆ ಇದು.  ಚಿತ್ರದ ಸನ್ನಿವೇಶವೂ ಪರಾಕಾಷ್ಟೆಯದ್ದೇ. ಟ್ರಂಪೆಟ್ಸ್ ಹಾಗೂ ಕೋರಸ್ ಬಳಕೆ ಅತ್ಯದ್ಭುತ. ಇದರಲ್ಲಿ ಲತಾ ಮಂಗೇಷ್ಕರ್ ನುಡಿಯುವುದು ಆಜಾರೇ... ಎಂಬ ಒಂದು ಸೊಲ್ಲು ಮಾತ್ರ. ನಂತರದ  ಆಲಾಪದಲ್ಲಿ ಅವರು ಅತಿ ತಾರ ಸಪ್ತಕವನ್ನು ಸ್ಪರ್ಶಿಸುವ ರೀತಿ ಬೆರಗು ಹುಟ್ಟಿಸುವಂಥದ್ದು.  ಅಂದಿನ ಸೀಮಿತ ತಾಂತ್ರಿಕತೆಯಲ್ಲಿ ಈ ಹಾಡಿನ ರೆಕಾರ್ಡಿಂಗ್ ಹೇಗೆ ನಡೆಸಿರಬಹುದು ಎಂದು ಈಗಿನ ಸಂಗೀತ ನಿರ್ದೇಶಕರೋರ್ವರು ಸಂದರ್ಶನವೊಂದರಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದರು.   ದಿಲ್ ಅಪನಾ ಔರ್ ಪ್ರೀತ್ ಪರಾಯೀಸಂಗಂ, ಬ್ರಹ್ಮಚಾರಿ , An evening in Paris ಮುಂತಾದ ಚಿತ್ರಗಳಲ್ಲಿ ನಾವು ನೋಡಿದಂತೆ ಕೋರಸ್ ಅನ್ನು   ಶಂಕರ್-ಜೈಕಿಶನ್ ಅವರಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡವರು ಇನ್ಯಾರೂ ಇರಲಾರರು. 





10. ಮೇರೆ ಮನ್ ಕೀ ಗಂಗಾ - ಸಂಗಂ
     Mere Man Ki Ganga - Sangam

     ಈ ಹಾಡಿನಲ್ಲಿ ರಾಜ್ ಕಪೂರ್ ಕೈಯಲ್ಲಿರುವುದು ಈಜಿಪ್ಟ್ ಮೂಲದ್ದೆಂದು ನಂಬಲಾದ ಬ್ಯಾಗ್ ಪೈಪ್ ಎಂಬ, ಕಂಕುಳಿಂದ ತಿದಿಯಂತಹ ಚರ್ಮದ ಚೀಲವೊಂದನ್ನೊತ್ತಿ ಗಾಳಿತುಂಬಿ ನುಡಿಸುವ ವಾದ್ಯ. ನೀರಿನಲ್ಲಿ ಈಜಾಡುವ ಸದ್ದಿನ ಪರಿಣಾಮ ಉಂಟುಮಾಡಲು  ಬುಡಬುಡಿಕೆಯಂತಹ ತಾಳವಾದ್ಯವನ್ನು ಉಪಯೋಗಿಸಲಾಗಿದೆ. ಶಂಕರ್-ಜೈಕಿಶನ್ ತಂಡದಲ್ಲಿ ರಿದಂ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ದತ್ತಾರಾಮ್ ಇಂತಹ ಪ್ರಯೋಗಗಳ ರೂವಾರಿ.

     ಈ ಹಾಡಿನ ಹಿಂದೆ ಗೋಪಿಕಾ ವಸ್ತ್ರಾಪಹರಣದ ಕಲ್ಪನೆಯೂ ಇದ್ದಂತಿದೆ.  ಕಿರೀಟದ ಸಂಕೇತವಾಗಿ ನಾಯಕ ತಲೆಗೆ ಸಿಕ್ಕಿಸಿಕೊಳ್ಳುವ ಗರಿ ಹಾಗೂ ಚಿತ್ರದಲ್ಲಿ ಹಾಡಿನ ಮೊದಲು ಬರುವ dialog ಇದನ್ನು ಪುಷ್ಟೀಕರಿಸುತ್ತವೆ.  ಆದರೆ ಆತ ಧರಿಸಿಕೊಂಡಿರುವುದು ಈಗಿನ ಯುವ ಜನಾಂಗದಲ್ಲಿ ಜನಪ್ರಿಯವಾಗಿರುವ ಬರ್ಮುಡಾ!  ಇನ್ನೊಂದು ಅಚ್ಚರಿಯ ವಿಷಯವೆಂದರೆ ಶ್ರೀಮಂತರ ಮನೆಯ ಹುಡುಗಿಯೊಬ್ಬಳು  ಸ್ವಿಮ್ಮಿಂಗ್ ಪೂಲಿಗೆ ಹೋಗುವುದನ್ನು ಬಿಟ್ಟು ಸ್ವಿಮ್ ಸೂಟ್ ಧರಿಸಿ ನದಿಯಲ್ಲಿ ಈಜಾಡಲು ಬರುತ್ತಾಳೆಯೇ ಎಂಬ ಪ್ರಶ್ನೆಯನ್ನು ಯಾವ ವಿಮರ್ಶಕರೂ ಇದುವರೆಗೆ ಎತ್ತಿಲ್ಲ.  ಏನೇ ಇರಲಿ,  ಇದು ಜನಪ್ರಿಯತೆಯ ಮಾನದಂಡದಲ್ಲಿ ಸರ್ತಾಜ್ ಅಂದರೆ ಸರ್ವ ಶ್ರೇಷ್ಠ  ಪದವಿಗೆ ಅರ್ಹವಾದ ಹಾಡು.  ಹಳ್ಳಿ ಹಳ್ಳಿಗಳ ಮೂಲೆಗಳನ್ನೂ ತಲುಪುವಲ್ಲಿ ಇದು ತೇರಿ ಪ್ಯಾರೀ ಪ್ಯಾರೀ ಸೂರತ್ ಕೊ ಹಾಡನ್ನೂ ಹಿಮ್ಮೆಟ್ಟಿಸಿತ್ತು.  ಈ ಹಾಡನ್ನು ಗುಣುಗುಣಿಸದ ಬಾಯಿಗಳಿರಲಿಲ್ಲ, ಧಾಟಿಯನ್ನು ಅಳವಡಿಸದ ನಾಟಕಗಳಿರಲಿಲ್ಲ, ಪೆ ಪೆ ಪೆ ಪೆ ಪೇ ಪೇ ಪೆ ಎಂಬ BGM ಸಮೇತ ಇದನ್ನು ನುಡಿಸದ ವಾಲಗದವರಿರಲಿಲ್ಲ! ಅಂತಹ ಮೋಡಿ ಈ ಹಾಡಿನದ್ದು.

         ಸುಮಾರು 60 ರ ದಶಕದ ಕೊನೆ ವರೆಗೆ  ಹಿಂದಿ ಚಲನ ಚಿತ್ರಗಳ ಹಾಡುಗಳಲ್ಲಿ 3 ಚರಣಗಳಿದ್ದರೆ ಬಿಡುಗಡೆಯಾಗುತ್ತಿದ್ದ 78 RPM ಗ್ರಾಮಫೋನ್ ತಟ್ಟೆಗಳಲ್ಲಿ  2 ಚರಣಗಳು ಮಾತ್ರ ಇರುತ್ತಿದ್ದವು. ಆದರೆ ಸಂಗಂನ ಈ ಹಾಡಿಗೆ ಚಿತ್ರದಲ್ಲೂ ಎರಡೇ ಚರಣಗಳಿದ್ದವು.  ಗ್ರಾಮಫೋನ್ ತಟ್ಟೆಯ  2 ನೆಯ ಚರಣ ದೋ ನದಿಯೊಂ ಕಾ ಮೇಲ್ ಅಗರ್ ಆಗಿದ್ದರೆ ಚಿತ್ರದ 2 ನೆಯ ಚರಣ ತೇರೀ ಖಾತಿರ್ ಮೈ ತಡಪಾ ಯೂಂ ಆಗಿತ್ತು.  ಆ ಮೇಲೆ ಬಿಡುಗಡೆಯಾದ  LP  ಯಲ್ಲಿ ಮೂರೂ ಚರಣಗಳಿದ್ದವೆನ್ನಿ.   ಆದರೆ ಚಿತ್ರದಲ್ಲಿ ಮೂರು ಚರಣಗಳ ಹಾಡು ನೋಡುವ ಅವಕಾಶ ಇರಲಿಲ್ಲ.  ಈಗ ಲಭ್ಯವಿರುವ  VCD, DVD, You Tube Video ಗಳಲ್ಲೂ  ಎರಡೇ ಚರಣಗಳಿವೆ. 


Tuesday 1 August 2023

ಗಾಯಕರ ನಾಯಕ ರಫಿ


ಹಿನ್ನೆಲೆ ಗಾಯಕರ ನಾಯಕ ಮಹಮ್ಮದ್ ರಫಿ ಭೌತಿಕವಾಗಿ ನಮ್ಮಿಂದ ಮರೆಯಾಗಿ ದಶಕಗಳೇ ಸಂದಿವೆ. ಆದರೆ ಇಂದಿಗೂ ರೇಡಿಯೊ, ಟಿ.ವಿ, ಸಿ.ಡಿ, ಐ ಪಾಡ್, ಮೊಬೈಲ್ ಫೋನ್ ಅಥವಾ ಇಂಟರ್ ನೆಟ್ ನಂತಹ ಯಾವುದಾದರೊಂದು ಮಾಧ್ಯಮದ ಮೂಲಕ ರಫಿಯ ಕೆಲವು ಹಾಡುಗಳನ್ನಾದರೂ ಆಲಿಸದೆ ಯಾವನೇ ಚಿತ್ರಸಂಗೀತ ಪ್ರೇಮಿಯ ಒಂದು ದಿನವೂ ಕಳೆಯಲಾರದು. ವಿಭಿನ್ನ ಸಂಗೀತ ನಿರ್ದೇಶಕರ ಒಡನಾಟದಲ್ಲಿ ಅವರು ಹಾಡಿರುವ ಒಂದಷ್ಟು ಹಾಡುಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ಇದು.



·        ನೌಶಾದ್ :- ಅದೃಷ್ಟ ಪರೀಕ್ಷಿಸಲು ಮುಂಬಯಿಗೆ ಬಂದ ರಫಿ ಮೊದಲು ಭೇಟಿಯಾದದ್ದು ನೌಶಾದ್ ಅವರನ್ನೇ. ಶಾಮಸುಂದರ್,ಹುಸ್ನಲಾಲ್ ಭಗತರಾಮ್,  ಗುಲಾಮ್ ಹೈದರ್ ಮುಂತಾದವರು ಆರಂಭದಲ್ಲಿ ಇವರಿಗೆ ಪ್ರೋತ್ಸಾಹ ನೀಡಿದರೂ  ತಲತ್ ಮಹಮೂದ್ ಜತೆ ತೀವ್ರ ಸ್ಪರ್ಧೆ ಇದ್ದ ಕಾಲದಲ್ಲಿ   ಬೈಜು ಬಾವ್ರಾ   ಚಿತ್ರದಲ್ಲಿ ಇವರ ಪ್ರತಿಭೆ ಹೊರಹೊಮ್ಮುವಂತೆ ಮಾಡಿ ಮುಂಚೂಣಿಗೆ ಬರುವಂತೆ ಮಾಡಿದವರು ನೌಶಾದ್. ಈ ಮೊದಲೇ  ಅಂದಾಜ್   ,  ಉಡನ್ ಖಟೋಲಾ  , `ದೀದಾರ್    ಮುಂತಾದ ಚಿತ್ರಗಳಲ್ಲಿ ನೌಶಾದ್ ಗಾಗಿ ರಫಿ ಹಾಡಿದ್ದರೂ ಈ ಚಿತ್ರದ ಎಲ್ಲ ಹಾಡುಗಳು ಸುಪರ್ ಹಿಟ್ ಆಗಿ ರಫಿಯ ಪಾರಮ್ಯವನ್ನು ಜಗತ್ತಿಗೆ ಸಾರಿದವು.  ಓ ದುನಿಯಾ ಕೆ ರಖವಾಲೆ ಯಲ್ಲಿ ಅವರ ಧ್ವನಿಯ ರೇಂಜ್ ಎಲ್ಲರನ್ನೂ ದಂಗು ಬಡಿಸಿತು.  ಈ ಗೀತೆ ಇಂದಿಗೂ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುವವರ ಅಚ್ಚುಮೆಚ್ಚಿನದು. ಇದೇ ಚಿತ್ರದ ಮನ್ ತಡಪತ್ ಹಾಡು ಶಕೀಲ್ ಬದಾಯೂನಿ, ನೌಶಾದ್ ಹಾಗೂ ರಫಿ ಎಂಬ ಮೂವರು ಮುಸ್ಲಿಂ  ಬಂಧುಗಳು ಸೇರಿ ಸೃಷ್ಟಿಸಿದ  ಭಜನ್ ಎಂದೇ ಪ್ರಖ್ಯಾತ. ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದ ನೌಶಾದ್ ಸಾರಥ್ಯ ದಲ್ಲಿ ದುಲಾರಿ, ಕೊಹಿನೂರ್, ಲೀಡರ್, ಮೇರೆ ಮೆಹಬೂಬ್, ಗಂಗಾ ಜಮುನ, ದಿಲ್ ದಿಯಾ ದರ್ದ್ ಲಿಯಾ, ಸಾಜ್ ಔರ್ ಆವಾಜ್, ರಾಮ್ ಔರ್ ಶಾಮ್, ಆದ್ಮಿ ಮುಂತಾದ ಚಿತ್ರಗಳು ಎಂದಿಗೂ ಮರೆಯದ ರಫಿ ಹಾಡುಗಳನ್ನು ನಮಗೆ ನೀಡಿದವು.  ಸಾಥಿ ಯಂತಹ ಕೆಲವು ಚಿತ್ರಗಳಲ್ಲಿ ಮುಕೇಶ್ ಅವರನ್ನು ಬಳಸಿಕೊಂಡದ್ದನ್ನು  ಹೊರತುಪಡಿಸಿದರೆ ಸದಾ ಇವರ ಮುಖ್ಯ ಗಾಯಕ ರಫಿಯೇ ಆಗಿದ್ದರು.

·        ಒ ಪಿ ನಯ್ಯರ್ :-  ಇವರು ರಫಿಗೆ ಒಂದು ಸ್ಟೈಲ್ ಕೊಟ್ಟವರು. ಅಲ್ಲಿವರೆಗೆ ಭಕ್ತಿ ಗೀತೆ, ವಿರಹ ಗೀತೆ, ಹಾಸ್ಯ ಗೀತೆ,  ಪ್ರೇಮ ಗೀತೆ ಎಲ್ಲವನ್ನೂ ವಿಷಾದದ ಛಾಯೆಯೊಡನೆ ಒಂದೇ ರೀತಿ ಹಾಡುತ್ತಿದ್ದ ರಫಿ ಅವರನ್ನು ಗುರುದತ್ ಅವರ ಆರ್ ಪಾರ್ ಹಾಗೂ ಶಮ್ಮಿ ಕಪೂರ್ ಅವರ ತುಮ್ ಸಾ ನಹೀಂ ದೇಖಾ ದಲ್ಲಿ ನಯ್ಯರ್ ಅವರು ಬೇರೆ ರೀತಿ ದುಡಿಸಿಕೊಂಡರು. ಧ್ವನಿಯ ಏರಿಳಿತ, ಥ್ರೋ ಗಳನ್ನು ತಿದ್ದಿ ತೀಡಿದರು. ತುಂಟತನವನ್ನು ತುಂಬಿಸಿದರು. ಫಾಲ್ಸ್ ವಾಯ್ಸನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ರೀತಿಯನ್ನು ತೋರಿಸಿಕೊಟ್ಟರು. ಈ ರೀತಿ ಕಾಯಕಲ್ಪಕ್ಕೊಳಗಾದ ರಫಿಯ ಧ್ವನಿ ಮುಂದೆ ದಶಕಗಳ ಕಾಲ ¸ಸಂಗೀತ ಕ್ಷೇತ್ರವನ್ನು  ಆಳುವಂತೆ ಮಾಡಿದರು.  ತಮ್ಮ ವೃತ್ತಿಜೀವನದ ಕೊನೆಯ ಕೆಲವು ವರ್ಷಗಳಲ್ಲಿ  0ಯಾವುದೋ ವಿರಸದಿಂದಾಗಿ ಕೆಲವು ಹಾಡುಗಳಿಗೆ  ಮಹೇಂದ್ರ ಕಪೂರ್, ಮುಕೇಶ್ ಅವರನ್ನು ಬಳಸಿಕೊಂಡರೂ ಇವರ ಮೆಚ್ಚಿನ ಗಾಯಕ  ಎಂದಿಗೂ ರಫಿಯೇ ಆಗಿದ್ದರು.  ರಾಗಿನಿ    ಚಿತ್ರದ  ಮನ್ ಮೊರಾ ಬಾಂವರಾ ಹಾಡಿಗೆ ತೆರೆಯ ಮೇಲಿನ ಕಿಶೋರ್ ಕುಮಾರ್ ಗೆ ರಫಿ ಧ್ವನಿಯನ್ನು ಮತ್ತ ಮೊದಲಿಗೆ ಬಳಸಿದವರು ಇವರು. (ಕಿಶೋರ್ ಗಾಗಿ ರಫಿ ಹಾಡಿರುವ ಆದರೆ ಅಷ್ಟೊಂದು ಸುದ್ದಿ ಮಾಡದ  ಇನ್ನೂ ಕೆಲವು ಹಾಡುಗಳು - ಶಂಕರ್ ಜೈಕಿಶನ್ ನಿರ್ದೇಶನದಲ್ಲಿ  ಶರಾರತ್     ನ  ಅಜಬ್ ಹೈ ದಾಸ್ತಾಂ ತೆರೀ , ಲಾಲಾ ಅಸರ್ ಸತ್ತಾರ್ ನಿರ್ದೇಶನದಲ್ಲಿ  ಪ್ಯಾರ್ ದೀವಾನೆ   ಚಿತ್ರದ ಅಪನೀ ಆದತ್ ಹೈ ಸಬಕೊ ಕೊ , ಬಿಪಿನ್ ಬಾಬುಲ್ ನಿರ್ದೇಶನದಲ್ಲಿ  ಬಾಗೀ ಶಹಜಾದಾ   ಚಿತ್ರದ  ಮೈ ಇಸ್ ನಾಜುಕ್ ಚೆಹೆರೆಕೊ )   ನಯಾ ದೌರ್, ಸಿ ಐ ಡಿ, ಮೇರೆ ಸನಮ್, ಫಿರ್ ವಹೀ ದಿಲ್ ಲಾಯಾ ಹೂಂ, ಕಶ್ಮೀರ್ ಕೀ ಕಲಿ, ಫಾಗುನ್, ಏಕ್ ಮುಸಾಫಿರ್ ಏಕ್ ಹಸೀನಾ, ಬಹಾರೆ ಫಿರ್ ಭೀ ಆಯೆಂಗೀ, ಹಮ್ ಸಾಯಾ ಮುಂತಾದ ಚಿತ್ರಗಳಲ್ಲಿ ಮರೆಯಲಾಗದ ರಫಿ ಹಾಡುಗಳು ಇವರ ನಿರ್ದೇಶನದಲ್ಲಿ ಜನ್ಮ ತಾಳಿದವು.

      ಶಂಕರ್ ಜೈಕಿಶನ್ :- ಇವರ ವೃತ್ತಿ ಜೀವನದಲ್ಲಿ ಮೊಟ್ಟ ಮೊದಲು ಧ್ವನಿಮುದ್ರಣಗೊಂಡದ್ದು  ಬರ್ಸಾತ್    ಚಿತ್ರಕ್ಕಾಗಿ ರಫಿ ಹಾಡಿದ ಮೈ ಜಿಂದಗೀ ಮೆ ಹರ್ ದಮ್ ರೋತಾ ಹೀ ರಹಾ ಹೂಂ  ಹಾಡು. ಆದರೆ ಮುಂದೆ ಬಹಳಷ್ಟು ವರ್ಷ ರಫಿ  ಇವರ ಮೊದಲ ಆಯ್ಕೆ ಆಗಿರಲಿಲ್ಲ.  ಆಗೊಮ್ಮೆ ಈಗೊಮ್ಮೆ ರಫಿಯನ್ನು ಬಳಸಿ ಉತ್ತಮ ಹಾಡು ಗಳನ್ನು ನೀಡಿದರೂ ಮುಕೇಶ್, ತಲತ್ ಮಹಮೂದ್, ಹೇಮಂತ್ ಕುಮಾರ್ ಹಾಗೂ ಇವರಧ್ವನಿಯನ್ನೇ  ಹೋಲುವ ಸುಬೀರ್ ಸೇನ್ ಅವರನ್ನು ಹೆಚ್ಚು ಬಳಸುತ್ತಿದ್ದರು.  ಶಮ್ಮಿಕಪೂರ್ ನ ಉಜಾಲಾ ದಲ್ಲೂ ಅವರ ಆಯ್ಕೆ ಮನ್ನಾಡೆ ಆಗಿದ್ದರು. ಆದರೆ  ಸಸುರಾಲ್   ನ ತೇರಿ ಪ್ಯಾರೀ ಪ್ಯಾರೀ ಸೂರತ್ ಕೊ ಸುಪರ್ ಹಿಟ್ ಆದಮೇಲೆ 60ರ ದಶಕದ ಕೊನೆವರೆಗೂ ಇವರು ಸಂಪೂರ್ಣ ರಫಿ ನಿಷ್ಠರಾಗಿ  ಉಳಿದರು. ರಫಿಯ ಸೊಲೊ ಹಾಡುಗಳನ್ನು ಲತಾ ಧ್ವನಿಯಲ್ಲೂ ಹಾಡಿಸುವ ಪರಂಪರೆಯನ್ನು  ಜಂಗ್ಲಿ   ಚಿತ್ರದ ಎಹೆಸಾನ್ ತೆರಾ ಹೋಗಾ ಮುಝ್ ಪರ್ (ಲತಾ) ಮೂಲಕ ಇವರು ಆರಂಭಿಸಿದರು. ಮುಂದೆ ಇದೇ ಜಾಡಿನಲ್ಲಿ  ಜಬ್ ಪ್ಯಾರ್ ಕಿಸೀ ಸೆ ಹೋತಾ ಹೈ   ಯ ಜಿಯಾ ಒ ಜಿಯಾ ಒ ಕುಛ್ ಬೊಲ್ ದೊ (ಲತಾ),  ಲವ್ ಇನ್ ಟೋಕಿಯೊ   ದ ಓ ಮೆರೆ ಶಾಹೆ ಖುಬಾ (ಲತಾ),  ಯಕೀನ್   ಚಿತ್ರದ ಗರ್ ತುಮ್ ಭುಲಾ ನ ದೋಗೆ (ಲತಾ) ,  ಪಗಲಾ ಕಹೀಂ ಕಾ   ದ ತುಮ್ ಮುಝೆ ಯೂಂ (ಲತಾ) ಇತ್ಯಾದಿ ಬಂದವು. ಆದರೆ ರಫಿ ಆವೃತ್ತಿಯ ಮಾದಕತೆ ಈ ಹಾಡುಗಳ ಲತಾ ಅವೃತ್ತಿಯಲ್ಲಿ ಕಾಣಿಸಲಿಲ್ಲ.  ಮುಕೇಶ್, ಮನ್ನಾಡೆ ಹೊರತು ಇತರರ ಧ್ವನಿಯನ್ನು ಬಳಸದ ರಾಜ್ ಕಪೂರ್ ಗಾಗಿ   ಏಕ್ ದಿಲ್ ಸೌ ಅಫಸಾನೆ   ಚಿತ್ರದಲ್ಲಿ  ತುಮ್ ಹೀ ತುಮ್ ಹೊ ಮೆರೆ ಜೀವನ್ ಮೆ ಹಾಗೂ  ಮೇರಾ ನಾಮ್ ಜೋಕರ್    ನಲ್ಲಿ  ಸದ್ ಕೆ ಹೀರ್ ತುಝ್ ಪೆ ಹಾಡುಗಳಿಗಾಗಿ ರಫಿ ಧ್ವನಿಯನ್ನು ಬಳಸಿದರು. (ರಫಿ ಹಾಡು ಥಿಯೇಟರ್ ಗಳಲ್ಲಿ ಪ್ರದರ್ಶಿತವಾದ  ಜೋಕರ್  ನಲ್ಲಿ ಕಾರಣಾಂತರಗಳಿಂದ ಇರಲಿಲ್ಲ.) ಈ ಮಧ್ಯೆ ಕೆಲವು ಸಮಯ ಲತಾ-ರಫಿ ಜೊತೆಯಾಗಿ ಹಾಡುತ್ತಿರಲಿಲ್ಲ. ಆಗಲೂ ಡ್ಯುಯೆಟ್ ಗಳು ಬೇಕಿದ್ದಾಗ ಲತಾ ಬದಲಿಗೆ ಸುಮನ್ ಕಲ್ಯಾಣಪುರ್ ಮೊದಲಾದವರು ಬರುತ್ತಿದ್ದರೇ ಹೊರತು ರಫಿಗೆ ಪರ್ಯಾಯವನ್ನು ಯಾರೂ ಹುಡುಕುತ್ತಿರಲಿಲ್ಲ. ಕೊನೆಗೆ ಶಂಕರ್ ಜೈಕಿಶನ್  ಮಧ್ಯಸ್ತಿಕೆಯಲ್ಲಿ  ಅವರೀರ್ವರಿಗೆ  ರಾಜಿಯಾಗಿ  ಗಬನ್    ಚಿತ್ರಕ್ಕಾಗಿ ತುಮ್ ಬಿನ್ ಸಜನ್ ಗೀತೆಯನ್ನು ಜತೆಯಾಗಿ ಹಾಡಿದರು. (ವಿರಸಕ್ಕೆ ಮುನ್ನ  ಲತಾ-ರಫಿ ಜತೆಯಾಗಿ ಹಾಡಿದ್ದ ಕೊನೆಯ ಹಾಡು  ಉಷಾ ಖನ್ನಾ ಸಂಗೀದಲ್ಲಿ  ಆವೋ ಪ್ಯಾರ್ ಕರೇಂ   ಚಿತ್ರದ  ತುಮ್ ಅಕೆಲೆ ತೊ ಕಭಿ ಬಾಗ್ ಮೆ ಜಾಯಾ ನ ಕರೊ. ) ಶೋಕ ಸನ್ನಿವೇಶಗಳಿಗೆ ಹೆಚ್ಚಾಗಿ ಬಳಸಲ್ಪಡುವ  ರಾಗ  ಶಿವರಂಜಿನಿ ಆಧಾರಿತ  ಸೂರಜ್    ಚಿತ್ರದ ಬಹಾರೊ ಫೂಲ್ ಬರಸಾವೊ ಅದ್ಭುತ ಶೃಂಗಾರ ಕಾವ್ಯವಾಗಿ  ಹೊರಹೊಮ್ಮಿದ್ದು  ಶಂಕರ್ ಜೈಕಿಶನ್  ಮ್ಯಾಜಿಕ್ ನಿಂದಾಗಿಯೇ. ಇದೇ ಹಾಡನ್ನು ರಫಿ ಅವರು ಶಂಕರ್ ಜೈಕಿಶನ್ ರಹಿತರಾಗಿ ಸ್ಟೇಜ್ ನಲ್ಲಿ ಹಾಡುವಾಗ ಶೋಕದ ಛಾಯೆ ಇಣುಕುತ್ತಿದ್ದುದನ್ನು  ಗಮನಿಸಬಹುದು. ಈ ಗೀತೆಯ ಧಾಟಿಯಲ್ಲಿ ಹರೀಂದ್ರನಾಥ  ಚಟ್ಟೋಪಾಧ್ಯಾಯ ರಚಿಸಿ  ರಫಿ ಹಾಡಿದ ಇಂಗ್ಲೀಷ್  ಆಲ್ ದೊ ವಿ ಹೈಲ್ ಫ್ರಮ್ ಡಿಫರೆಂಟ್ ಲ್ಯಾಂಡ್ಸ್  ಹಾಡಿನದ್ದೂ ಇದೇ ಪಾಡು.   ಗುಮ್ ನಾಮ್    ನ ಹಮ್ ಕಾಲೆ ಹೈಂ ತೊ ಕ್ಯಾ ಹುವಾ ಧಾಟಿಯಲ್ಲೂ ರಫಿ  ಚಟ್ಟೋಪಾಧ್ಯಾಯರ ಇಂಗ್ಲಿಷ್ ರಚನೆ  ಶಿ ಐ ಲವ್ ಈಸ್ ದ ಬ್ಯೂಟಿಫುಲ್ ಡ್ರೀಮ್ ಕಮ್ಸ್ ಟ್ರೂ  ಹಾಡಿದ್ದಾರೆ.  ಇದೇ  ಗುಮ್ ನಾಮ್    ಹಾಡಿಗೆ   ಬ್ರಹ್ಮಚಾರಿ   ಚಿತ್ರದಲ್ಲಿ  ಜೂ| ಮಹಮೂದ್ ಅಭಿನಯಿಸಿದ್ದು ಇನ್ನೊಂದು ವಿಶೇಷ.   ಇದೇ ಚಿತ್ರದ  ಜಾನ್ ಪೆಹಚಾನ್ ಹೊ ಹಾಡನ್ನು ಇಂಗ್ಲಿಷ್  ಘೋಷ್ಟ್ ವರ್ಲ್ಡ್   ಚಿತ್ರದ ಟೈಟಲ್ಸ್ ಗೆ ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ.  ಬೇಟಿ ಬೇಟೆ   ಚಿತ್ರದ ಇವರ ಹಾಡು  ರಾಧಿಕೆ ತೂನೆ ಬಂಸುರೀ ಚುರಾಯೀ ಯಥಾವತ್ತಾಗಿ  ತಂದೆ ಮಕ್ಕಳು   ಚಿತ್ರದ  ರಾಧಿಕೆ ನಿನ್ನ ಸರಸವಿದೇನೆ ಆಗಿದೆ.  ಇವರು ನೀಡಿದ ಎಲ್ಲ ರಫಿ ಹಿಟ್ ಹಾಡುಗಳನ್ನು ಪಟ್ಟಿ ಮಾಡುವುದು ಅಸಾಧ್ಯ. ಆದರೆ  ಆರಾಧನಾ   ಸ್ಥಿಂತ್ಯಂತರದ ನಂತರ ಶಂಕರ್ ಜೈಕಿಶನ್  ಸಹ  ತಕ್ಷಣ ಕಿಶೋರ್ ಕಡೆ ವಾಲಿದ್ದೂ ನಿಜ.

       ರೋಶನ್ :-  ಆಲಿಸಿದೊಡನೆ ತಮ್ಮೆಡೆಗೆ ಸೆಳೆಯಬಲ್ಲ  ತಾಜ್ ಮಹಲ್    ನ ಜೊ ವಾದಾ ಕಿಯಾ ವೊ,  ಆರತಿ  ಯ  ಬಾರ್ ಬಾರ್ ತೊಹೆ ಕ್ಯಾ ಸಮಝಾವೂಂ ದಂತಹ ಅನೇಕ ಅತಿಮಧುರ ಗೀತೆಗಳನ್ನು  ರಫಿ ಧ್ವನಿಯಲ್ಲಿ ನೀಡಿದವರು ಇವರು.  ಬರಸಾತ್ ಕೀ ರಾತ್    ನ ಜಿಂದಗೀ ಭರ್ ನಹೀಂ ಭೂಲೇಗಿ ಲತಾ ಆವೃತ್ತಿಯ ಎರಡನೇ ಚರಣದಲ್ಲಿ ರಫಿ ಪ್ರವೇಶ ಬೀರಿದ ಪರಿಣಾಮ  ಅದ್ಭುತ.  ಕವ್ವಾಲಿಗಳ ರಾಣಿಯೆಂದೇ  ಖ್ಯಾತಿಯುಳ್ಳ ಇದೇ ಚಿತ್ರದ  ನ ತೊ ಕಾರವಾಂ ಕೀ ತಲಾಶ್ ಹೈ ಯ ಕೊನೆ ಭಾಗದಲ್ಲಿ ರಫಿ ನಿರ್ವಹಣೆಯನ್ನು ಆನಂದಿಸದವರು ಯಾರಿದ್ದಾರೆ. ಚಿತ್ರಲೇಖಾ, ಬಾಬರ್,  ಅನೋಖೀ ರಾತ್, ಭೀಗೀ ರಾತ್, ನಯೀ ಉಮರ್ ಕೀ ನಯೀ ಫಸಲ್, ಬೇದಾಗ್ ಮುಂತಾದ ಚಿತ್ರಗಳಲ್ಲೂ ಸುಂದರ ರಫಿ ಗೀತೆಗಳಿದ್ದವು. ಅಕಾಲದಲ್ಲಿ ಇವರು ನಮ್ಮನ್ನಗಲದೆ ಇರುತ್ತಿದ್ದರೆ ಇನ್ನಷ್ಟು ಮಧುರ ರಫಿ ಗೀತೆಗಳು ನಮಗೆ ದೊರೆಯುತ್ತಿದ್ದವು.

·       ಚಿತ್ರಗುಪ್ತ:-  ಕಿರು ಬಜೆಟ್ ಚಿತ್ರಗಳನ್ನು ನಿರ್ಮಿಸುವವರ ಅದರಲ್ಲೂ ದಕ್ಷಿಣ ಭಾರತದ ನಿರ್ಮಾಪಕರ ಮೆಚ್ಚಿನ ಸಂಗೀತ ನಿರ್ದೇಶಕರಿವರು.  ಆರಂಭದಿಂದಲೇ ಇವರ ಮುಖ್ಯ ಗಾಯಕ ರಫಿ.    ಭಾಭೀ   ಚಿತ್ರದ ಚಲ್ ಉಡ್ ಜಾ ರೆ ಪಂಛೀ,  ಮೈ ಚುಪ್ ರಹೂಂಗೀ   ಯ ಚಾಂದ್ ಜಾನೆ ಕಹಾಂ ಖೋ ಗಯಾ  ಬಡಾ ಆದ್ಮೀ   ಯ ಅಖಿಯನ್ ಸಂಗ್ ಅಖಿಯಾಂ,  ವಾಸನಾ   ಚಿತ್ರದ ಯೆ ಪರಬತೊಂ ಕೆ ದಾಯರೆ ,  ಪತಂಗ್    ಚಿತ್ರದ ಯೆ ದುನಿಯಾ ಪತಂಗ್ ನಿತ್ ಬದಲೆ ಯೆ ರಂಗ್ ,  ಊಂಚೇ ಲೋಗ್    ಚಿತ್ರದ ಜಾಗ್ ದಿಲೆ ದೀವಾನಾ ಮುಂತಾದ ಹಾಡುಗಳನ್ನು ಯಾರು ತಾನೇ ಕೇಳಿಲ್ಲ.

·        ರವಿ:-  ಬಿ.ಆರ್. ಚೋಪ್ರಾ ಚಿತ್ರಗಳನ್ನು ಹೊರತು ಪಡಿಸಿದರೆ  ಇವರೂ ಸದಾ ರಫಿ ಮಾಧುರ್ಯವನ್ನು ಉಣಬಡಿಸಿದವರೇ.  ಚೌದವೀಂ ಕಾ ಚಾಂದ್, ಭರೋಸಾ, ಕಾಜಲ್, ಪ್ಯಾರ್ ಕಾ ಬಂಧನ್, ಅಪನಾ ಬನಾಕೆ ದೇಖೊ, ಆಜ್ ಔರ್ ಕಲ್, ಯೆ ರಾಸ್ತೆ ಹೈಂ ಪ್ಯಾರ್ ಕೆ, ಪ್ಯಾರ್ ಕಿಯಾ ತೊ ಡರನಾ ಕ್ಯಾ, ಶಹನಾಯಿ, ಗೆಹ್ರಾ ದಾಗ್, ಖಾನ್ ದಾನ್, ದೊ ಬದನ್, ದೂರ್ ಕೀ ಆವಾಜ್,  ದಸ್ ಲಾಖ್, ಏಕ್ ಫೂಲ್ ದೊ ಮಾಲಿ ಮುಂತಾಗಿ ಇವರ ಎಲ್ಲ ಚಿತ್ರಗಳೂ ರಫಿಯ ಗಾನ ಸುಧೆ ಹರಿಸಿದವುಗಳೇ.  ನೀಲ್ ಕಮಲ್    ಚಿತ್ರದ ಬಾಬುಲ್ ಕೀ ದುವಾಯೆಂ ಲೇತೀ ಜಾ ಹಾಡಿನ ರೆಕಾರ್ಡಿಂಗ್ ಮಾಡುವಾಗ ರಫಿ ಅವರು ಧಾರಾಕಾರವಾಗಿ ಕಣ್ಣೀರು ಸುರಿಸಿದ್ದರಂತೆ. ಈ ಹಾಡು ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನೂ ತಂದು ಕೊಟ್ಟಿತು.

       ಎಸ್. ಡಿ ಬರ್ಮನ್:-  ಇವರ ಆದ್ಯತೆ ಕಿಶೋರ್ ಕುಮಾರ್ ಗಾದರೂ  ರಫಿಯ ಬಹಳಷ್ಟು ಅಮರ ಹಾಡುಗಳನ್ನು ಇವರೂ ಸೃಷ್ಟಿಸಿದ್ದಾರೆ. ಕಾಲಾ ಬಜಾರ್, ಬೇನಜೀರ್,  ಬಾತ್ ಏಕ್ ರಾತ್ ಕೀ, ತೇರೆ ಘರ್ ಕೆ ಸಾಮನೆ, ಜಿದ್ದಿ, ಗೈಡ್, ತಲಾಷ್, ಇಶ್ಕ್ ಪರ್ ಜೋರ್ ನಹೀಂ ಮುಂತಾದ ಚಿತ್ರಗಳಲ್ಲಿ ರಫಿಯೇ ಇವರ ಗಾಯಕ.  ಮೇರಿ ಸೂರತ್ ತೇರಿ ಆಂಖೆಂ   ಯಲ್ಲಿ ಮನ್ನಾಡೆ ಅವರ  ಪೂಛೋ ನ ಕೈಸೆ ಮೈನೆ ರೈನ್ ಬಿತಾಯೀ ಗೆ ಸರಿಸಾಟಿಯಾಗುವಂತೆ ರಫಿ ಹಾಡಿದ ನಾಚೆ ಮನ್ ಮೊರಾ ತೆರೆ ಬಿನ್ ಸೂನೆ ನೈನ್ ಹಮಾರೆ ಹಾಡುಗಳನ್ನು ಮರೆಯಲುಂಟೆ. ತೀನ್ ದೇವಿಯಾಂ, ಜುವೆಲ್ ತೀಫ್ ನಂತಹ ಚಿತ್ರಗಳಲ್ಲಿ ಇವರು ಕಿಶೋರ್, ರಫಿ  ಇಬ್ಬರನ್ನೂ ಬಳಸುತ್ತಿದ್ದರು. ಕಿಶೋರ್ ಯುಗದ ಆರಂಭಕ್ಕೆ ಕಾರಣವಾದ ಆರಾಧನಾ ದಲ್ಲೂ ಇವರಿಬ್ಬರೂ ಇದ್ದರಲ್ಲವೇ? ಮುಂದೆಯೂ ಅಭಿಮಾನ್, ಅನುರಾಗ್ ಮುಂತಾದ ಚಿತ್ರಗಳಲ್ಲಿ ರಫಿ ಹಾಡುಗಳಿದ್ದವು.  ಕಿಶೋರ್ ಪ್ರಿಯರಾದ ಇವರ ಸುಪುತ್ರ ಪಂಚಮ್ ಸಹ ತೀಸ್ರೀ ಮಂಜಿಲ್, ರಾತೊಂಕಾ ರಾಜಾ, ಪ್ಯಾರ್ ಕಾ ಮೌಸಮ್, ಕಾರವಾಂ ಮುಂತಾದ ಚಿತ್ರಗಳಲ್ಲಿ ಅದ್ಭುತ ರಫಿ ಗೀತೆಗಳನ್ನು ನೀಡಿದ್ದಾರೆ.  ಹಮ್ ಕಿಸೀ ಸೆ ಕಮ್ ನಹೀಂ   ಯ ಕ್ಯಾ ಹುವಾ ತೆರಾ ವಾದಾ ರಫಿಗೆ 6ನೇ ಫಿಲಂ ಫೇರ್ ಎವಾರ್ಡ್ ತಂದುಕೊಟ್ಟುದನ್ನೂ ಮರೆಯಲಾಗದು.

·        ಲಕ್ಷ್ಮಿಕಾಂತ್ ಪ್ಯಾರೆಲಾಲ್:-   ಇವರು ಹಾಡುಗಳನ್ನು ರಚಿಸುತ್ತಿದ್ದುದೇ ರಫಿ ಅವರನ್ನು ಮನಸ್ಸಲ್ಲಿ ಇಟ್ಟುಕೊಂಡು. ತಮ್ಮ ಮೊದಲ ಚಿತ್ರ ಪಾರಸ್ ಮಣಿ ಯಿಂದ ಆರಂಭಿಸಿ ರಫಿ ಅವರ ಕೊನೆಯ ಚಿತ್ರ ಆಸ್ ಪಾಸ್ ವರೆಗೆ ಇವರದ್ದು ಅವಿನಾಭಾವ ನಂಟು.  ದೋಸ್ತೀ, ಆಯಾ ತೂಫಾನ್, ವಾಪಸ್, ಫರ್ಜ್, ನೈಟ್  ಇನ್ ಲಂಡನ್, ಮೇರೆ ಹಮ್ ದಮ್ ಮೇರೆ ದೋಸ್ತ್,  ಜೀನೆ ಕೀ ರಾಹ, ಆಯಾ ಸಾವನ್ ಝೂಮ್ ಕೆ, ಸಾಜನ್, ಜಿಗ್ರೀ ದೋಸ್ತ್, ಹಮ್ ಜೊಲಿ, ದೊ ರಾಸ್ತೆ .. ಎಂತೆಂತಹ ಚಿತ್ರಗಳು ಎಂತೆಂತಹ ಹಾಡುಗಳು.    ಲೋಫರ್    ಚಿತ್ರದ  ವಿಶಿಷ್ಠ ಶೈಲಿಯ ಹಾಡು ಆಜ್ ಮೌಸಮ್ ಬಡಾ ಬೆಇಮಾನ್ ಹೈ ಇತ್ತೀಚೆಗೆ  ಮೊನ್ಸೂನ್ ವೆಡ್ಡಿಂಗ್    ಚಿತ್ರದಲ್ಲಿ  ಅಳವಡಿಸಲ್ಪಟ್ಟದ್ದು  ಉಲ್ಲೇಖನೀಯ. 1969ರಲ್ಲಿ ರಫಿ ವಿದೇಶ ಯಾತ್ರೆಗೆ ತೆರಳುವ ಮುನ್ನ  ಲಕ್ಷ್ಮಿ ಪ್ಯಾರೆ ಅವರಿಗಾಗಿ ದಾಖಲೆ ಸಂಖ್ಯೆಯ ಹಾಡುಗಳನ್ನು ಒಂದೇ ದಿನ ಹಾಡಿದ್ದರಂತೆ. ಈ ಯಾತ್ರೆಯ ಕಾರಣ   ಆರಾಧನಾ   ದಲ್ಲಿ  ರಫಿ ಹಾಡಬೇಕಿದ್ದ ಹಾಡುಗಳನ್ನು ಬರ್ಮನ್ ಒತ್ತಾಯದ ಮೇರೆಗೆ ಕಿಶೋರ್ ಕುಮಾರ್ ಹಾಡಿದ ನಂತರದ ವಿದ್ಯಮಾನಗಳು ಈಗ ಇತಿಹಾಸ. ನಂತರ ಕೆಲವು ಸಮಯ   ರಫಿ ಅವರು ಹಿನ್ನಡೆ ಅನುಭವಿಸುವಂತಾದಾಗಲೂ ತಮ್ಮ ಬಹುತೇಕ ಚಿತ್ರಗಳಲ್ಲಿ ಒಂದಾದರೂ ರಫಿ ಹಾಡು ಇರುವಂತೆ ನೋಡಿಕೊಂಡವರು ಲಕ್ಷ್ಮಿ ಪ್ಯಾರೆ ಮಾತ್ರ. ಹಿನ್ನಡೆಯನ್ನು ಮೆಟ್ಟಿ ಮುನ್ನಡೆಯನ್ನು ಸಾಧಿಸಲು  ರಫಿಗೆ ಅನುವು ಮಾಡಿಕೊಟ್ಟದ್ದು  ಇವರ  ಸರ್ ಗಮ್, ಅಮರ್ ಅಕ್ಬರ್ ಅಂಥೊಣಿ ಮುಂತಾದ ಚಿತ್ರಗಳೇ. ಆದರೂ ವಯಸ್ಸಿನ ಪ್ರಭಾವದಿಂದಲೋ,  ಅನಾರೋಗ್ಯದಿಂದಲೋ ಅವರ ಕಂಠ  ತನ್ನ ಮೊದಲಿನ ಮಾರ್ದವತೆಯನ್ನು ಕಳೆದುಕೊಂಡದ್ದರಿಂದ 60ರ ದಶಕದ ಪಾರಮ್ಯವನ್ನು ಮತ್ತೆ ಸಾಧಿಸಲು ಸಾಧ್ಯವಾಗಲೇ ಇಲ್ಲ.

·        ಇತರ ಸಂಗೀತ ನಿರ್ದೇಶಕರು:- ಒಂದೊಂದು ಪ್ರಾತಿನಿಧಿಕ ಉದಾಹರಣೆಯೊಂದಿಗೆ ನೆನಸಿಕೊಳ್ಳುವುದಾದರೆ ಎನ್ ದತ್ತಾ(ಗ್ಯಾರಹ ಹಜಾರ್ ಲಡ್ಕಿಯಾಂ- ದಿಲ್ ಕಿ ತಮನ್ನಾ ಥೀ ಮಸ್ತಿ ಮೆಂ), ಮದನ್ ಮೋಹನ್( ರೇಲ್ವೆ ಪ್ಲಾಟ್ ಫಾರಮ್ - ಬಸ್ತಿ ಬಸ್ತಿ ಪರಬತ್ ಪರಬತ್), ಎಸ್ ಎನ್ ತ್ರಿಪಾಠಿ( ಜನಮ್ ಜನಮ್ ಕೆ ಫೇರೆ - ಜರಾ ಸಾಮನೆ ತೊ ಆವೊ ಛಲಿಯೆ), ಕಲ್ಯಾಣ್ ಜೀ ಆನಂದಜೀ (ಜಬ್ ಜಬ್ ಫೂಲ್ ಖಿಲೆ - ಯಹಾಂ ಮೈ ಅಜನಬೀ ಹೂಂ), ಸಲಿಲ್ ಚೌಧರಿ (ಮಧುಮತಿ - ಟೂಟೆ ಹುವೆ ಖ್ವಾಬೊಂನೆ), ಖಯ್ಯಾಮ್ ( ಮುಹಬ್ಬತ್ ಇಸ್ಕೊ ಕಹತೆ ಹೈಂ - ಠಹರಿಯೆ ಹೋಶ್ ಮೆ ಆವೂಂ), ಇಕಬಾಲ್ ಖುರೇಶಿ (ಚಾ ಚಾ ಚಾ -  ಸುಬಹ ನ ಆಯೀ ಶಾಮ್ ನ ಆಯೀ), ಸರ್ದಾರ್ ಮಲ್ಲಿಕ್ (ಬಚಪನ್ - ಮುಝೆ ತುಮ್ ಸೆ ಮುಹಬ್ಬತ್ ಹೈ), ಉಷಾ ಖನ್ನಾ (ಆವೊ ಪ್ಯಾರ್ ಕರೇಂ -  ಯೆ ಝುಕಿ ಝುಕಿ ನಿಗಾಹೆಂ ತೆರೀ), ಸ್ವತಃ ಗಾಯಕರಾದ ಹೇಮಂತ ಕುಮಾರ್ (ದೊ ದಿಲ್ - ತೇರಾ ಹುಸ್ನ್ ರಹೆ ಮೇರಾ ಇಶ್ಕ್ ರಹೆ), ರಾಮಲಾಲ್ ( ಸೆಹ್ರಾ -  ತಕದೀರ್ ಕಾ ಫಸಾನಾ), ಸೋನಿಕ್ ಒಮಿ ( ದಿಲನೆ ಫಿರ್ ಯಾದ್ ಕಿಯಾ -  ಕಲಿಯೊಂನೆ ಘುಂಗಟ್ ಖೋಲೆ), ಜಯ ದೇವ್ (ಹಮ್ ದೋನೊ -  ಮೈ ಜಿಂದಗೀ ಕಾ ಸಾಥ್ ನಿಭಾತಾ ಚಲಾ ಗಯಾ ), ಸಿ ಅರ್ಜುನ್ (ಪುನರ್ಮಿಲನ್ -  ಪಾಸ್ ಬೈಠೊ ತಬೀಯತ್ ಬಹಲ್ ಜಾಯೆಗೀ), ಜಿ ಎಸ್ ಕೊಹಲಿ ( ಎಡ್ವೆಂಚರ್ಸ್ ಆಫ್ ರಾಬಿನ್ ಹುಡ್ -  ಮಾನಾ ಮೆರೆ ಹಸೀಂ ಸನಮ್), ಹಂಸರಾಜ್ ಬಹಲ್ ( ಚಂಗೇಜ್ ಖಾನ್ -  ಮುಹಬ್ಬತ್ ಜಿಂದಾ ರಹತೀ ಹೈ), ಸಪನ್ ಜಗಮೋಹನ್ (ಬೇಗಾನಾ -  ಫಿರ್ ವೊ ಭೂಲಿ ಸಿ ಯಾದ್ ಆಯೀ ಹೈ), ಲಚ್ಛೀರಾಮ್ (ಮೈ ಸುಹಾಗನ್ ಹೂಂ - ತೂ ಶೋಖ್ ಕಲಿ ಮೈ ಮಸ್ತ್ ಪವನ್ ) ಮುಂತಾದವರು ರಫಿ ಕಂಠದಲ್ಲಿ ನಮಗೆ ನೀಡಿದ ಮಾಧುರ್ಯವನ್ನೂ  ಮರೆಯುವಂತಿಲ್ಲ.

ಕನ್ನಡ ಹಾಡು:- ಸತ್ಯಂ ಸಂಗೀತ ನಿರ್ದೇಶನದಲ್ಲಿ   ಒಂದೇ ಬಳ್ಳಿಯ ಹೂಗಳು   ಚಿತ್ರಕ್ಕಾಗಿ ಹಾಡಿದ ನೀನೆಲ್ಲಿ ನಡೆವೆ ದೂರ ಹಾಡು ಎಲ್ಲರಿಗೂ ಗೊತ್ತಿರುವಂತಹದ್ದೇ. ಈ ಚಿತ್ರ  ಛೊಟೀ ಬಹನ್   ಚಿತ್ರದ ಕನ್ನಡ ಅವತರಣಿಕೆ.  ಅಲ್ಲಿ ಈ ಸಂದರ್ಭಕ್ಕೆ ಮುಕೇಶ್ ಅವರ ಜಾವೂಂ ಕಹಾಂ ಬತಾ ಎ ದಿಲ್ ಹಾಡು ಇತ್ತು.  1954ರಲ್ಲಿ ಕಲ್ಯಾಣ್ ಕುಮಾರ್ ಅಭಿನಯದ   ಆಶಾ ನಿರಾಶಾ    ಎಂಬ ಮುಂಬಯಿಯಲ್ಲಿ ತಯಾರಾದ ಕನ್ನಡ ಚಿತ್ರಕ್ಕಾಗಿ ರಫಿ ಹಾಡಿದ್ದರು ಎಂದು ಆ ವರ್ಷದ ವಿಕಟ ವಿನೋದಿನಿ  ಸಂಚಿಕೆಯೊಂದರಲ್ಲಿ ದಾಖಲಾಗಿದೆ.  ಆದರೆ ಆ ಚಿತ್ರ ಪ್ರದರ್ಶಿತವಾಗಿತ್ತೇ ಹಾಗೂ ಚಿತ್ರದ ಹಾಡುಗಳ  ಧ್ವನಿಮುದ್ರಿಕೆಗಳು ತಯಾರಾಗಿದ್ದವೇ ಎಂಬುದನ್ನು ಹಿರಿಯ ತಲೆಮಾರಿನವರಾರಾದರೂ ಹೇಳಬಲ್ಲರೇನೋ.



    ಹೇಳುತ್ತಾ ಹೋದರೆ ಪಟ್ಟಿ ಮುಗಿಯಲಾರದು.  ಸಾಗರವನ್ನು ಬೊಗಸೆಯಲ್ಲಿ ಮೊಗೆಯಲು  ಹೊರಟಂತಾದೀತು. ಅಂತೂ ಇಂತಹ ಹಾಡುಗಳು  ಮುಂಬರುವ ಶತ ಶತಮಾನಗಳ ಕಾಲ ಮಹಮ್ಮದ್ ರಫಿ ಅವರ  ಅಭಿಮಾನಿಗಳನ್ನು ತಣಿಸುವುದಂತೂ ನಿಜ.