Wednesday 13 April 2022

ಮಂದ್ರದಲ್ಲಿ PBS ಮಾಂತ್ರಿಕತೆ




ಇಲ್ಲ, ಎಸ್. ಎಲ್. ಭೈರಪ್ಪ ಅವರ ಮಂದ್ರದಲ್ಲಿ ಯಾವ PBS ಹಾಡೂ ಇಲ್ಲ.  ಇಲ್ಲಿ ನಾವು ಚರ್ಚಿಸುತ್ತಿರುವುದು ಪಿ.ಬಿ.ಶ್ರೀನಿವಾಸ್ ಹಾಡುಗಳಲ್ಲಿ  ಮಂದ್ರಸ್ಥಾಯಿ ಮಾಂತ್ರಿಕತೆ ಬಗ್ಗೆ.  PBS ಎಲ್ಲ ರೀತಿಯ ಹಾಡುಗಳನ್ನು ಹಾಡಿದ್ದರೂ ಮಂದ್ರ ಸಪ್ತಕದಲ್ಲಿ ಸಂಚಾರವಿರುವ ಅವರ ಹಾಡುಗಳ ಸೊಗಸೇ ಬೇರೆ.  ಕೆಲವು ಹಾಡುಗಳಲ್ಲಿ ಮಧ್ಯ, ತಾರ ಸಪ್ತಕಗಳಲ್ಲೇ  ಹೆಚ್ಚಿನ ಸಂಚಾರವಿದ್ದರೂ ಯಾವುದಾದರೂ ಒಂದು ಪದ ಮಂದ್ರ ಸಪ್ತಕದಲ್ಲಿ ಬಂದರೂ ಪಾಯಸದಲ್ಲಿ ದ್ರಾಕ್ಷಿ ಸಿಕ್ಕಿದ ಅನುಭವ.  ಅಂಥ ಕೆಲವು ಹಾಡುಗಳು ಇಲ್ಲಿವೆ. ಆದರೆ ನೆನಪಿರಲಿ,  ಇವು ಬಿಂಕದ ಸಿಂಗಾರಿಆಡಿಸಿ ನೋಡು ಬೀಳಿಸಿ ನೋಡು, ನಾವಾಡುವ ನುಡಿಯೆ ಕನ್ನಡ ನುಡಿಯಂತಹ ಯಾವಾಗಲೂ ಕೇಳಸಿಗುವ ಜನಪ್ರಿಯ ಹಾಡುಗಳಲ್ಲ.  ಎಂದೋ ಕೇಳಿರಬಹುದಾದ ಅಥವಾ ಒಮ್ಮೆಯೂ ಕೇಳದೆ ಇದ್ದಿರಬಹುದಾದ ಭೂಲೇ ಬಿಸ್ರೇ ಹಾಡುಗಳು.


ರತಿಸುಖ ಸಾರೆ ಗತಮಭಿಸಾರೆ 

     ಇದು ರಾಜ್ ಕುಮಾರ್, ನರಸಿಂಹರಾಜು, ಬಾಲಕೃಷ್ಣ ಮತ್ತು ಜಿ.ವಿ.ಅಯ್ಯರ್ ಸೇರಿ ನಿರ್ಮಿಸಿದ ರಣಧೀರ ಕಂಠೀರವ ಚಿತ್ರದಲ್ಲಿ ಅಳವಡಿಸಲಾಗಿದ್ದ ಜಯದೇವ ಅಷ್ಟಪದಿ.  ಈ ಚಿತ್ರದ ಹಾಡುಗಳನ್ನು ಮನ್ನಾಡೇ ಅಥವಾ ರಘುನಾಥ ಪಾಣಿಗ್ರಾಹಿ ಅವರಿಂದ ಹಾಡಿಸುವ ವಿಚಾರವಿತ್ತಂತೆ.  ಆದರೆ ಕೊನೆಗೆ PBS ಅವರೇ ಇದಕ್ಕೆ ಸೂಕ್ತ ಎಂದು ತೀರ್ಮಾನಿಸಲಾಯಿತಂತೆ.  ಇದರಲ್ಲಿ ಮದನಮನೋಹರ ವೇಷಂ ರಾಧೇ ಎಂಬ ಸಾಲಿನಲ್ಲಿ ಮಂದ್ರದ ಮ್ಯಾಜಿಕ್ ಅನುಭವಿಸಬಹುದು.  ಎ.ಪಿ. ಕೋಮಲಾ ಅವರೂ ದನಿಗೂಡಿಸಿದ್ದಾರೆ.





2. ಈ ಮೂಢತನವಿದೇಕೆ

     PBS ಅವರನ್ನು ಮೊತ್ತ ಮೊದಲು ಕನ್ನಡಕ್ಕೆ ಪರಿಚಯಿಸಿದ ಆರ್ ನಾಗೇಂದ್ರ ರಾವ್ ಅವರು ನಿರ್ಮಿಸಿದ ಜಾತಕ ಫಲ ಚಿತ್ರದ  ಹಾಡು.  ಅಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದಂತೆ ಇದು ಹಿಂದಿಯ ಮೇಲಾ ಚಿತ್ರದ ರಫಿ ಹಾಡು ಯೆ ಜಿಂದಗೀ ಕೆ ಮೇಲೆ ಧಾಟಿಯಲ್ಲಿದೆ. ಹಾಡಿನ ಬಹುತೇಕ ಭಾಗ ಮಂದ್ರ ಸ್ಥಾಯಿಯಲ್ಲೇ ಇದೆ.  ರಫಿಗಿಂತ ಒಂದು ಪಟ್ಟಿ  ಕೆಳಗೆ ಹಾಡಿದ್ದಾರೆ.


   
3.  ಗಿಳಿಯು ಪಂಜರದೊಳಿಲ್ಲ

     ಶ್ರೀ ಪುರಂದರ ದಾಸರು ಚಿತ್ರದ ಗೀತೆ. ಸಿ.ಎನ್.ಪಾಂಡುರಂಗ ಎಂಬ ಸಂಗೀತ ನಿರ್ದೇಶಕರು ಭಕ್ತ ಕನಕದಾಸದ ಹಾಡುಗಳಂತೆ ಸಾಂಪ್ರದಾಯಿಕವಲ್ಲದ ರೀತಿಯಲ್ಲಿ ದಾಸರಪದಕ್ಕೆ ರಾಗ ಸಂಯೋಜಿಸಿದ್ದಾರೆ.  ಆರಂಭದಲ್ಲೇ ಮಂದ್ರದ ಮಾಂತ್ರಿಕ ಸ್ಪರ್ಶವಿದೆ.  ಮುಂದೆ ಚರಣದಲ್ಲಿ ತಾರ ಸಪ್ತಕದವರೆಗೂ ಹೋಗುವ ಸಂದರ್ಭದಲ್ಲಿ false voice ಮೂಲಕ ಧ್ವನಿ ನಿಯಂತ್ರಿಸಿರುವುದನ್ನು ಗಮನಿಸಬಹುದು.



4.  ಮನವೇ ಮಂದಿರ

     ತೂಗುದೀಪ ಚಿತ್ರಕ್ಕಾಗಿ ವಿಜಯ ಭಾಸ್ಕರ್ ಕಲಾವತಿ ರಾಗದಲ್ಲಿ ಸಂಯೋಜಿಸಿದ ಭಾವಗೀತೆಯೆಂದೇ ಅನ್ನಿಸುವ ಚಿತ್ರಗೀತೆ. ಆರಂಭದ ಆಲಾಪದಲ್ಲೇ ಮಂದ್ರದ ಜೀರಿನ ಆಹ್ಲಾದಕರ ಅನುಭವ.  ಇದೇ ಚಿತ್ರದ ಮೌನವೇ ಆಭರಣ ಕೂಡ ಇಂತಹದೇ ಇನ್ನೊಂದು ಗೀತೆ.

    
5.  ಯಾರಿಗೆ ಯಾರೋ

     ಕೇವಲ ಬೆರಳೆಣಿಕೆಯ ಚಿತ್ರಗಳಿಗೆ ಸಂಗೀತ ನೀಡಿ ಎಳೆ ಪ್ರಾಯದಲ್ಲಿ ಕಣ್ಮರೆಯಾದ ಎಂ. ವೆಂಕಟರಾಜು ಸಂಯೋಜನೆ.  ಸಾಮಾನ್ಯವಾಗಿ ದೊಡ್ಡ ಆರ್ಕೆಷ್ಟ್ರಾ ಬಯಸುವ ಅವರು ನಂದಾದೀಪ ಚಿತ್ರದ ಈ ಹಾಡಿನ ಮೂಡಿಗೆ ಸರಿಯಾಗಿ ಇಲ್ಲಿ ಬೆರಳೆಣಿಕೆಯ ವಾದ್ಯಗಳನ್ನಷ್ಟೇ ಉಪಯೋಗಿಸಿರುವುದು ಗಮನಾರ್ಹ.



6.  ವೈದೇಹಿ ಏನಾದಳು

     ದಶಾವತಾರ ಚಿತ್ರದಲ್ಲಿ ಸೀತೆಯನ್ನು ಕಳೆದುಕೊಂಡ ರಾಮನ ವಿರಹದ ಹಾಡು. ಮಂದ್ರದ ಮಾಧುರ್ಯಕ್ಕೆ ಮಸಣ ಮೌನದೆ ಸುಳಿವ ಸಾಲು ಬರುವವರೆಗೆ ಕಾಯಬೇಕು. ಹೆಚ್ಚಿನ ವಿವರಗಳಿಗೆ  ಇಲ್ಲಿ ಕ್ಲಿಕ್ಕಿಸಿ.



7.  ಗಾಳಿಯ ಪಟದಂತೆ ನಾನಯ್ಯಾ

     ದೇವರ ದುಡ್ಡು ಚಿತ್ರದಲ್ಲಿ ತರಿಕೆರೆ ಏರಿಯ ಕುರಿಗಳ ಮುಂದೆ ಮಂಕಾದಂತೆ ಕಂಡಿದ್ದ  ಈ ಹಾಡು ನಂತರ evergreen ಪಟ್ಟಿಗೆ ಸೇರಿತು.  ಶಿವರಂಜಿನಿ  ರಾಗದಲ್ಲಿ ಏರು ಧ್ವನಿಯಲ್ಲೇ ಆರಂಭವಾಗುವ ಇದು ಗೀತೆಯ ಮರ್ಮವ ಸಾಲು ತಲುಪುವಾಗ   ಕೇಳುಗರನ್ನು  ಮಂದ್ರಮುಗ್ಧಗೊಳಿಸುತ್ತದೆ.



8.  ವೇದಾಂತಿ ಹೇಳಿದನು

     80ರ ದಶಕದಲ್ಲಿ ಬಂದ ಮಾನಸ ಸರೋವರ ಚಿತ್ರದ ಈ ಹಾಡು 70ರ ದಶಕದ ಮಧ್ಯಭಾಗದ ನಂತರ ಸಕ್ರಿಯರಾಗಿ form ನಲ್ಲಿ ಇರುವಾಗಲೇ PBS ಪ್ರತಿಭೆಯನ್ನು ಕಡೆಗಣಿಸಿ ಕನ್ನಡ ಚಿತ್ರರಂಗ ಇಂತಹ ಎಷ್ಟು ಹಾಡುಗಳನ್ನು ಕಳೆದುಕೊಂಡಿತು ಎಂಬುದರ ಸೂಚಕ.  Jazz ಶೈಲಿಯ ಹಿನ್ನೆಲೆಯುಳ್ಳ ಇಡೀ ಹಾಡೇ ಮಂದ್ರದ ರಸಪಾಕ.



9.  ಮಾಲಯಿಲ್ ಮಲರ್ ಚೋಲಯಿಲ್

      ಹಿಂದಿಯಲ್ಲಿ ಪಡೋಸನ್ ಆಗಿ ಬಂದ ತಮಿಳಿನ ಅಡುತ್ತ ವೀಟ್ಟ್ ಪೆಣ್ ಚಿತ್ರದ ಹಾಡಿದು.  ಚಿತ್ರದಲ್ಲಿ ಹಿಂದಿಯ ಕಹನಾ ಹೈ ಕಹನಾ ಹೈ ಹಾಡಿನ ಸಂದರ್ಭದ್ದಂತೆ ಇದು. ಸಾಹಿತ್ಯದ ಅರ್ಥ ಗೊತ್ತಿಲ್ಲ.  ಆದರೂ ಕೇಳಲು ಆಪ್ಯಾಯಮಾನ.  ಇದರ interlude music ಓ.ಪಿ. ನಯ್ಯರ್ ಶೈಲಿಯಲ್ಲಿರುವುದನ್ನು ಗಮನಿಸಬಹುದು.



10.  ನೈನಾ ಜೊ ನೈನೊಂ ಸೆ ಮಿಲೆ

       ಮೈ ಭೀ ಲಡ್ಕೀ ಹೂಂ ಚಿತ್ರದಲ್ಲಿ PBS ಲತಾ ಮಂಗೇಶ್ಕರ್ ಜೊತೆ ಹಾಡಿರುವ  ಚಂದಾ ಸೆ ಹೋಗಾ ವೊ ಪ್ಯಾರಾ ಹಾಡು ಕೆಲವರಿಗೆ ಗೊತ್ತಿರಬಹುದು.  ಆದರೆ ಡಾಕು ಭೂಪತ್ ಎಂಬ ಚಿತ್ರದ ಈ ಹಾಡನ್ನು ಯಾರೂ ಇದುವರೆಗೆ ಕೇಳಿರಲಾರಿರಿ.  ಪಿ.ಸುಶೀಲಾ ಅವರೊಂದಿಗೆ ಹಾಡಿದ ಬಾಗೇಶ್ರೀ ರಾಗಾಧಾರಿತ ಈ ಹಾಡು ನನ್ನ ಸಂಗ್ರಹದಿಂದ ನಿಮಗಾಗಿ.




11.  ಚಂದ್ರಮಂಚಕೆ ಬಾ
         
        ಬಿಡುಗಡೆಯ ಬೆಳಕನ್ನೇ  ಕಾಣದೆ ನಿಜ ಅರ್ಥದಲ್ಲಿ ಕಾನನ ಕುಸುಮವೇ ಆದ ವನಸುಮ ಚಿತ್ರದಲ್ಲಿ ಅಳವಡಿಸಲಾದ ಕುವೆಂಪು ರಚನೆ.  ಉಪೇಂದ್ರ ಕುಮಾರ್ ರಾಗಸಂಯೋಜನೆಯಷ್ಟೇ PBS ಗಾಯನವೂ ಅತಿ ಮಧುರ. ಈ ಹಾಡಿನಲ್ಲಿ ಮಂದ್ರದ ಮಾಂತ್ರಿಕತೆ ಅಷ್ಟೊಂದಿಲ್ಲ.    ಆದರೂ  ನಿಧಾನ ಲಯದ ತಂಪೆರೆಯುವ ಮಾಧುರ್ಯವಿದ್ದುದರಿಂದ ಬೋನಸ್ ರೂಪದಲ್ಲಿ ಈ ಹಾಡು.




ಇನ್ನಷ್ಟು PBS ಹಾಡುಗಳಿಗೆ  
ಮತ್ತು
ನೋಡಿ.
 
16-9-2012