Friday 3 December 2021

ಕಟ್ಟದ ಕಥೆ


ಡಿಸೆಂಬರ್ ಮೊದಲ ವಾರ ಅಂದರೆ ದಕ್ಷಿಣ ಕನ್ನಡದ ಕಾಶ್ಮೀರ ಎಂದೆನಿಸಿಕೊಳ್ಳುವ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಮ್ಮೂರಿನ ಮೃತ್ಯುಂಜಯಾ ನದಿಗಡ್ಡವಾಗಿ ಪ್ರತಿ ವರ್ಷ ಕಟ್ಟುತ್ತಿದ್ದ ಕಲ್ಲು, ಮಣ್ಣು, ಸೊಪ್ಪುಗಳ ಕಟ್ಟದ ಬಗ್ಗೆ ಊರಿನವರೆಲ್ಲ ಸೇರಿ ಮಾತುಕತೆ ನಡೆಸುತ್ತಿದ್ದ ಕಾಲ.  ಈ ಮಾತುಕತೆ ನಡೆಯುತ್ತಿದ್ದುದು ಯಾರದೇ ಮನೆಯಲ್ಲಿ ಅಲ್ಲ, ಊರಿಂದ ಸುಮಾರು ಅರ್ಧ ಮೈಲಿ ದೂರದಲ್ಲಿ ಕಟ್ಟ ಕಟ್ಟುವ ಸ್ಥಳದಲ್ಲಿ. ಕಟ್ಟಬೇಕಾದ ಕಟ್ಟ ಒಂದೇ ಆದರೂ ಇದರಲ್ಲಿ ಇಂಗ್ಲಿಷ್ L ಆಕಾರದ ಎರಡು ಭಾಗಗಳು.  ಒಂದು  ಆನಂಗಳ್ಳಿ ವಾಳ್ಯದ್ದಾದರೆ ಇನ್ನೊಂದು ಪರಾರಿ ವಾಳ್ಯದ್ದು. ಕಟ್ಟದಿಂದ ನೀರು ಹರಿಯುವ ತೋಡಿನ ಗುಂಟ ಇರುವ ಮನೆಗಳ ಸಮೂಹಕ್ಕೆ ವಾಳ್ಯ ಎಂದು ಹೆಸರು.  ಎರಡೂ ಕೈಗಳು ಸೇರಿದರೆ ಮಾತ್ರ ಚಪ್ಪಾಳೆ ಆಗುವಂತೆ ಎರಡೂ ಭಾಗಗಳು ಸೇರಿದರೆ ಮಾತ್ರ ಕಟ್ಟ ಸಂಪೂರ್ಣ. ಇಂತಹುದೇ ನಿರ್ದಿಷ್ಟ ಜಾಗದಲ್ಲಿ ಕಟ್ಟ ಕಟ್ಟಿ ತೋಡು ನಿರ್ಮಿಸಿದರೆ ತೋಟಗಳಿಗೆ ನೀರು ಹರಿದೀತು ಎಂದು ಯಾವುದೇ ವೈಜ್ಞಾನಿಕ ಉಪಕರಣಗಳ ಸಹಾಯವಿಲ್ಲದೆ ಶತಮಾನಗಳ ಹಿಂದೆಯೇ ಕಂಡು ಹಿಡಿದಿದ್ದ ನಮ್ಮ ಪೂರ್ವಜರ ಜಾಣ್ಮೆಯನ್ನು ಮೆಚ್ಚಲೇ ಬೇಕು. 

ಎರಡೂ ವಾಳ್ಯಗಳಿಂದ  ಒಬ್ಬೊಬ್ಬ ಉತ್ಸಾಹಿ ಮುಂದೆ ಬಂದು  ಕಟ್ಟ ಕಟ್ಟಿಸುವ ಕೆಲಸದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದುದು ಸಂಪ್ರದಾಯ. ವಾಡಿಕೆಯ ತಜ್ಞ ಆಳುಗಳನ್ನು ಒಟ್ಟುಗೂಡಿಸಿ ಕೆಲಸ ಮಾಡಿಸುವುದು, ಫಲಾನುಭವಿಗಳಿಂದ ಒಂದಷ್ಟು ಮುಂಗಡ ಪಡೆದುಕೊಂಡು ಆಳುಗಳಿಗೆ ಮಜೂರಿ ಪಾವತಿಸುವುದು, ಏನೇನೋ ಸಬೂಬು ಹೇಳಿ ಕೆಲವರು ಮುಂಗಡ ಕೊಡದಿದ್ದಾಗ ತಾನೇ ಕೈಯಿಂದ ಭರಿಸುವುದು ಇವನ್ನೆಲ್ಲ ವಹಿಸಿಕೊಂಡವನು ನಿಭಾಯಿಸಬೇಕಾಗಿತ್ತು. ಕೆಲಸ ಸಂಪೂರ್ಣ ಆದ ಮೇಲೆ ಪೈ ಪೈ ಲೆಕ್ಕ ತೋರಿಸಿ ಅವರವರ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ   ಖರ್ಚಿನಲ್ಲಿ ಎಲ್ಲರಿಗೂ ಪಾಲು. ಅದನ್ನು ವಸೂಲು ಮಾಡುವುದೂ ವಹಿಸಿಕೊಂಡವನದ್ದೇ ಜವಾಬ್ದಾರಿ.

ಮಳೆಗಾಲ ಆರಂಭವಾದೊಡನೆ ಕಡಿದು ಹೋಗಿರುತ್ತಿದ್ದ ಹಿಂದಿನ ವರ್ಷದ ಕಟ್ಟದ ದೊಡ್ಡ ದೊಡ್ಡ ಕಲ್ಲುಗಳನ್ನು ಗುರುತಿಸಿ ನಿರ್ದಿಷ್ಟ ಜಾಗದಲ್ಲಿರಿಸುವುದು ಮೊದಲ ಕೆಲಸ.  3- 4 ಜನ ಸೇರಿ ಎತ್ತಬೇಕಾದ ಬೃಹತ್ ಕಲ್ಲುಗಳನ್ನು ಎಲ್ಲೆಲ್ಲಿ ಇರಿಸಬೇಕೆಂಬ  ಬಗ್ಗೆ ಮಾಹಿತಿ ಇದ್ದ ಮತ್ತು ಅವುಗಳನ್ನು ಎತ್ತಲು ಬೇಕಾದ ಶಕ್ತಿ ಮತ್ತು ಯುಕ್ತಿ ಇದ್ದ ಆಳುಗಳೂ ಆಗ ಇದ್ದರು. ನಂತರ ಸಣ್ಣ ಕಲ್ಲುಗಳನ್ನು ಪೇರಿಸಿ ಕಟ್ಟಾಣಿ ಕಟ್ಟುವುದು. ಆ ಮೇಲೆ ಕಟ್ಟದ ಒಳ ಬದಿಯಲ್ಲಿ ಸೊಪ್ಪು ಮತ್ತು ಮಣ್ಣಿನ  ಸುಮಾರು ಒಂದೊಂದು ಅಡಿ ಎತ್ತರದ ಪದರಗಳನ್ನು ಒಂದರ ಮೇಲೊಂದು ಪೇರಿಸುವುದು. ಆಗ ಸೊಪ್ಪು ಅಲ್ಲಿಯ ಪರಿಸರದಲ್ಲಿ ಯಥೇಚ್ಛವಾಗಿ ದೊರಕುತ್ತಿತ್ತು. ಬೇಕಾಗುವ ಮಣ್ಣನ್ನು ಸಮೀಪದ ಜಮೀನೊಂದರ ದರೆಯಿಂದ  ಅಗೆದು ತರಲಾಗುತ್ತಿತ್ತು. ಈ ಕಟ್ಟದ ಫಲಾನುಭವಿಯಲ್ಲದ ಆ ಜಮೀನಿನ ಒಡೆಯರಿಗೆ ಇದಕ್ಕಾಗಿ  ಒಂದಷ್ಟು ನಾಮಮಾತ್ರದ ಶುಲ್ಕವೂ ಪಾವತಿಯಾಗುತ್ತಿತ್ತು ಎಂದು ನೆನಪು. L ಆಕಾರದ ಎರಡು ಕಟ್ಟಗಳು ಸಂಧಿಸುವಲ್ಲಿ ಹೆಚ್ಚುವರಿ ನೀರು ಹರಿದು ಹೋಗಲು ಮಾದು ಎನ್ನಲಾಗುವ ಕಿಂಡಿಯೊಂದನ್ನು ಬಿಡಲಾಗುತ್ತಿತ್ತು. ಈ ಜಾಗದಲ್ಲಿ  ಅಡಿಕೆ ಸೋಗೆಗಳ ತಡೆ ಒಡ್ಡಿ ನೀರನ್ನು ನಿಯಂತ್ರಿಸಲಾಗುತ್ತಿತ್ತು. ಕಲ್ಲಿನ ಕಟ್ಟಾಣಿಯ ಮೇಲ್ಭಾಗದಲ್ಲೂ ಸೊಪ್ಪು ಮತ್ತು ಮಣ್ಣುಗಳ ಸುಮಾರು ನಾಲ್ಕು ಅಡಿ ಅಗಲದ ಪದರ ನಿರ್ಮಿಸಿ ಕಟ್ಟದ ಮೇಲಿಂದ ನಡೆದು ಮಾದಿನ ಮೇಲೆ ಹಾಕಿದ ಅಡಿಕೆ ಮರಗಳ ಸಂಕದ ಮೇಲಿಂದ ಹಾದು ಸುಲಭವಾಗಿ ಆಚೆ ದಡವನ್ನು ಸೇರುವ ವ್ಯವಸ್ಥೆಯನ್ನೂ ಮಾಡಲಾಗುತ್ತಿತ್ತು. ಒಂದು ಬದಿಯಲ್ಲಿ ಅಗಾಧ ಜಲರಾಶಿ, ಮಾದಿನ ಮೂಲಕ ರಭಸವಾಗಿ ಹರಿಯುವ ನೀರು ನೋಡಿ ಅಳ್ಳೆದೆಯವರು ಕಟ್ಟದ ಮೇಲಿಂದ ನಡೆದು ಹೋಗಲು ಅಳುಕುತ್ತಿದ್ದರು.

ಸಾಮಾನ್ಯವಾಗಿ  ದಿಸೆಂಬರ್ ತಿಂಗಳ ಕೊನೆಯೊಳಗೆ ಕಾಮಗಾರಿ ಮುಗಿದು ಮಾದಿಗೆ ಮಡಲುಗಳನ್ನು ಹಾಕಿ ತೋಡಿಗೆ ನೀರು ತಿರುಗುತ್ತಿತ್ತು. ಅಷ್ಟರೊಳಗೆ ಅವರವರ ಭಾಗದ ತೋಡಿನ  ಹೂಳು ತೆಗೆದು  ಸ್ವಚ್ಛಗೊಳಿಸುವ ಕಾರ್ಯ ಮುಗಿದಿರುತ್ತಿತ್ತು. ಮಳೆಗಾಲದ ನೀರು ಹರಿಯುವ ತೊರೆಗಳು ಈ ತೋಡನ್ನು ಅಡ್ಡ ಹಾಯುವಲ್ಲಿನ ಇಡೆಕ್ಕಟ್ಟು ಅಥವಾ ದಂಬೆಹೋಡುಗಳ ದುರಸ್ತಿಯೂ ಇಷ್ಟರೊಳಗೆ ಆಗಬೇಕಾಗಿತ್ತು. ಮಾದಿಗೆ ಮಡಲು ಹಾಕಿ ನೀರು ತಿರುಗಿಸುವ ದಿನ  ಊರವರೆಲ್ಲರ ಸಮಕ್ಷಮದಲ್ಲಿ  ನದಿಯ ಪೂಜೆ ಮಾಡುವ  ವಿಶೇಷ ಗೌರವ  ಲಾಗಾಯ್ತಿನಿಂದಲೂ ನಮ್ಮ ಮನೆತನಕ್ಕೆ ಸಲ್ಲುತ್ತಿದ್ದುದು.  ಪೂಜೆ ಮುಗಿದೊಡನೆ ಒಡೆದ ಕಾಯಿಯ ಚೂರನ್ನು ಪ್ರಸಾದವೆಂದು ಬಾಯಿಗೆ ಹಾಕಿಕೊಂಡು ಬೇಗ ಮನೆಗೆ ಬಂದು "ಹಾವು, ಹುಳ  ಹುಪ್ಪಟೆಗಳಿದ್ದಾವು, ಎಚ್ಚರ" ಎಂದು ಹಿರಿಯರು ಬೈದರೂ ತೋಡಿನಲ್ಲಿ ಹರಿದು ಬರುವ ಮೊದಲ ನೀರಿನ  ಸ್ಪರ್ಶಕ್ಕಾಗಿ ಕಾಯುವುದೆಂದರೆ ಅದೊಂದು ಥ್ರಿಲ್. ಕೆಲವು ವರ್ಷ ಸಂಜೆ ನೀರು ತಿರುಗಿಸುತ್ತಿದ್ದುದರಿಂದ  ಅದು  ರಾತ್ರೆ ನಮ್ಮಲ್ಲಿಗೆ ತಲುಪಿ ಈ ಥ್ರಿಲ್ ತಪ್ಪಿ ಹೋಗುತ್ತಿತ್ತು.

1960ರ ದಶಕದಲ್ಲಿ ನಮ್ಮ ತಂದೆಯವರು ಕಟ್ಟದ ಸಮೀಪ ನದಿಗೆ ಪೂಜೆ ಸಲ್ಲಿಸುತ್ತಿರುವುದನ್ನು ಈ ಚಿತ್ರದಲ್ಲಿ ನೋಡಬಹುದು.


ಅವರವರ ತೋಟಕ್ಕೆ ನಿಗದಿಯಾದ ಸಮಯದಲ್ಲಿ ತೋಡಿನ ನೀರನ್ನು ತಡೆಯಲು  ಅಡಿಕೆ ಮರ ಮತ್ತು ಸಲಾಕೆಗಳನ್ನು ಬಳಸುವ ಆಡ್ಡಾಂಝೊ ಎಂಬ ತಡೆ, ತಮ್ಮ ಪಾಳಿಯಲ್ಲದ ದಿನಗಳಂದು ತೋಟಕ್ಕೆ ನೀರು ಹೋಗದಂತೆ ತಡೆಯಲು ಕಡೀವು ಎಂಬ ಇಂಥದ್ದೇ ಸಣ್ಣ ತಡೆ ಇರುತ್ತಿದ್ದವು. ಒಣಗಿದ ಬಾಳೆ ಎಲೆಗಳನ್ನು ಬಳಸಿ ಆದಷ್ಟು ಕಮ್ಮಿ ನೀರು ಇವುಗಳಿಂದ ಹೊರ ಹೋಗುವಂತೆ ಮಾಡಲಾಗುತ್ತಿತ್ತು. ಆದರೂ ತೋಟದೊಳಗೆ ನೀರು ಹೋಗುವ ಸಣ್ಣ ಕಾಲುವೆಯಲ್ಲಿ ಸ್ವಲ್ಪ ನೀರು ಯಾವಾಗಲೂ ಹರಿಯುತ್ತಿತ್ತು. ಇದಕ್ಕೆ ಸಣ್ಣ ಸಣ್ಣ ಕಲ್ಲುಗಳ ಮಿನಿಯೇಚರ್ ಕಟ್ಟ ಕಟ್ಟಿ ಶೇಖರವಾದ ನೀರು ಹರಿಯಲು ಒಂದು ಕಾಲುವೆ ರಚಿಸಿ ನಾವು ಆಟ ಆಡುವುದಿತ್ತು.

ರಾತ್ರಿ ಊಟ ಮುಗಿಸಿ ಕೈ ತೊಳೆಯಲು ಹೊರಗಡೆ ಬಂದಾಗ ಕೇಳಿಸುವ  ತೋಡಿನಲ್ಲಿ ಹರಿಯುವ ನೀರಿನ ಜುಳು ಜುಳು ಕೇಳಲು ಬಲು ಆಪ್ಯಾಯಮಾನವಾಗಿರುತ್ತಿತ್ತು. . ಈ ಜುಳು ಜುಳು ಸದ್ದು ಜಾಸ್ತಿಯಾದಷ್ಟು ಚಳಿ ಜಾಸ್ತಿ ಎಂಬ ಭಾವನೆಯೂ ಇತ್ತು. ವಾಸ್ತವವಾಗಿ ಅವು ಡಿಸೆಂಬರ್, ಜನವರಿ ತಿಂಗಳುಗಳಾಗಿರುತ್ತಿದ್ದುದು ಚಳಿ ಹೆಚ್ಚಾಗಲು ಕಾರಣ! ತೋಡಿಗೆ ನೀರು ಬಂದ ಮೇಲೆ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಕೆಲಸಗಳೆಲ್ಲ ಅದರ ಬದಿಯಲ್ಲೇ.  ಮೇಲಿನಿಂದ ಹಕ್ಕಿಗಳು ಗಲೀಜು ಮಾಡದಂತೆ ತೋಡಿನ ಬದಿ ಮಡಲಿನ ಕಿರು ಚಪ್ಪರವನ್ನೂ ನಿರ್ಮಿಸಲಾಗುತ್ತಿತ್ತು.  ಕಿರಿಯರ ಸ್ನಾನವೂ ಬಹುತೇಕ ಅಲ್ಲೇ. ಹಿರಿಯರ ಕಣ್ಣು ತಪ್ಪಿಸಿ ಸಂಕದ ಮೇಲಿನಿಂದ ನೀರಿಗೆ ಜಿಗಿಯುವುದು, ಬಾಳೆ ಗಿಡದ ತೆಪ್ಪ ನಿರ್ಮಿಸಿ ಕಾಲುವೆಯಲ್ಲಿ ಆಡುವುದೂ ಇತ್ತು. ಹೀಗೆ ಆಟ ಆಡುವಾಗ ನಮ್ಮ ಅಣ್ಣನಿಗೊಮ್ಮೆ ನೀರು ಹಾವು ಕಚ್ಚಿದ್ದೂ ಇದೆ! ಯಾವಾಗಲೂ ಸ್ಫಟಿಕ ಶುಭ್ರವಾಗಿರುತ್ತಿದ್ದ ತೋಡಿನ ನೀರು ಮಧ್ಯಾಹ್ನ 12ರ ನಂತರ ಮಾತ್ರ ಕೊಂಚ ರಾಡಿ. ಇದಕ್ಕೆ ಕಾರಣ ಹೆಚ್ಚಿನ ಮನೆಯವರು ತಮ್ಮ ಎಮ್ಮೆಗಳನ್ನು ನೀರಲ್ಲಿ ಕಟ್ಟುವ ಸಮಯ ಇದಾಗಿತ್ತು.  ಅವರವರ ಸರದಿಯಂತೆ  ಕಾಲುವೆಗೆ ತಡೆ ಕಟ್ಟಿ  ತಮ್ಮ ತಮ್ಮ ತೋಟಗಳಿಗೆ  ನೀರು ಹಾಯಿಸುವಲ್ಲಿ ಎಲ್ಲರೂ ಬಲು ಪ್ರಾಮಾಣಿಕರು.  ನಮಗಿಂತ ಮೇಲಿನವರ ಸರದಿ ಇದ್ದ ದಿನ  ನೀರ ಹರಿವು ಸ್ಥಗಿತವಾಗುವ ಕಾರಣ ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಆಗುವುದಿಲ್ಲವೆಂದು ಮನೆಯ ಮಹಿಳೆಯರಿಗೂ, ನೀರಲ್ಲಿ ಆಡಲು ಆಗುವುದಿಲ್ಲವೆಂದು ಮಕ್ಕಳಿಗೂ ಬೇಸರ.  ನಮ್ಮ ಮನೆಯ ಸರದಿ ಯಾವಾಗಲೂ ಮಧ್ಯ ರಾತ್ರಿ.  ಆದರೂ ನಮ್ಮ ಅಣ್ಣಂದಿರು ಬೇಸರ ಪಟ್ಟುಕೊಳ್ಳದೆ ಲಾಟೀನು ಹಿಡಿದು  ತೋಟಕ್ಕೆ ನೀರು ಹಾಯಿಸುತ್ತಿದ್ದರು.

ಶಿವರಾತ್ರಿ ಸಮಯಕ್ಕೆ ನದಿ ನೀರಿನ ಹರಿವು ಕಮ್ಮಿ ಆಗುತ್ತಿದ್ದುದರಿಂದ ಮಾದನ್ನು ಕಟ್ಟಾಣಿ ಕಟ್ಟಿ ಸಂಪೂರ್ಣ ಮುಚ್ಚಲಾಗುತ್ತಿತ್ತು. ಇನ್ನೊಂದೆಡೆ ಕಲ್ಲಿನ ಕಟ್ಟಾಣಿ ಇಲ್ಲದೆ ಸೊಪ್ಪು ಮಣ್ಣುಗಳನ್ನು ಮಾತ್ರ ತುಂಬಿಸಿದ emergency exit  ಕೂಡ ಇರುತ್ತಿತ್ತು. ಎಪ್ರಿಲ್ ಸಮಯದಲ್ಲಿ ಮುಂಗಾರು ಪೂರ್ವ ಮಳೆಗೆ ನದಿಯಲ್ಲಿ ಹೆಚ್ಚು ನೀರು ಹರಿದು ಬಂದು ಕಟ್ಟಕ್ಕೆ ಅಪಾಯವಾಗುವ ಸಂದರ್ಭ ಬಂದರೆ ಇದನ್ನು ತೆರೆದು ಕೊಡಲಾಗುತ್ತಿತ್ತು.  ತೋಡಿನಲ್ಲಿ ನೀರು ಹರಿಯುವಷ್ಟು ಸಮಯ ಎಲ್ಲರ ಮನೆಯ ಬಾವಿಗಳಲ್ಲಿ ಯಥೇಚ್ಛ ನೀರು ತುಂಬಿ. ಕೆಲವೊಮ್ಮೆ ಮುಂಗಾರು ಪೂರ್ವ ಮಳೆಗೆ ನದಿಯಲ್ಲಿ ನೆರೆ ಬಂದು ಅವಧಿಗೆ ಮುನ್ನವೇ ಕಟ್ಟ ಕಡಿದು ಹೋದರೆ ಹೆಚ್ಚಿನವರ ಬಾವಿಗಳು ಒಣಗಿ ಮಳೆಗಾಲ ಆರಂಭವಾಗುವ ವರೆಗೆ ಪಡಿಪಾಟಲು ಪಡಬೇಕಾಗುತ್ತಿತ್ತು. ಪೂರ್ಣಪ್ರಮಾಣದ ಮಳೆಗಾಲ ಆರಂಭವಾದೊಡನೆ  ಕಟ್ಟವು ತಾನಾಗಿ ಕಡಿದು ಉಪಯೋಗಿಸಿದ ಕಲ್ಲುಗಳು ಅಲ್ಲೇ ಬಿದ್ದು ಮರು ವರ್ಷ  ಮತ್ತೆ ಉಪಯೋಗಕ್ಕೆ ಬರುತ್ತಿದ್ದರೂ ಸೊಪ್ಪು-ಮಣ್ಣುಗಳು ನೆರೆಯಲ್ಲಿ ಕೊಚ್ಚಿ ಹೋಗುತ್ತಿದ್ದವು.

ಕ್ರಮೇಣ ಕಾಡು ನಾಶವಾಗಿ ಪ್ರತೀ ವರ್ಷ ಅಷ್ಟೊಂದು ಸೊಪ್ಪು ಸಿಗುವುದು ಕಷ್ಟವಾಗತೊಡಗಿತು. ಅಲ್ಲದೆ ಅಗಾಧ ಪ್ರಮಾಣದ  ಮಣ್ಣು   ವರ್ಷದ ಕೊನೆಗೆ ನೀರಿನಲ್ಲಿ ಕೊಚ್ಚಿ ಹೋಗಿ  ನಾಶವಾಗಬಾರದು ಎಂದು ಊರಿನ ಕೆಲವು ಉತ್ಸಾಹಿ ಯುವಕರಿಗೆ ಅನ್ನಿಸಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಸೊಪ್ಪು ಮಣ್ಣುಗಳ  ಬದಲಿಗೆ ಮರುಬಳಕೆ ಮಾಡಬಹುದಾದ ದಪ್ಪ ಪ್ಲಾಸ್ಟಿಕ್ ಹಾಳೆ ಮತ್ತು ಮರಳಿನ ಚೀಲಗಳ ಉಪಯೋಗ ಆರಂಭಿಸಿ ಪರಿಸರಕ್ಕೆ ಹಾನಿಕರವೆಂದು ಹಣೆಪಟ್ಟಿ ಕಟ್ಟಿಕೊಂಡ ಪ್ಲಾಸ್ಟಿಕ್ ಪರಿಸರವನ್ನು ಉಳಿಸಲೂ ಬಲ್ಲುದು ಎಂದು ತೋರಿಸಿಕೊಟ್ಟಿದ್ದರು.

ಕೆಲ ವರ್ಷಗಳ ಹಿಂದೆ ಸರ್ಕಾರ ನಿರ್ಮಿಸಿಕೊಟ್ಟ ಕಿರು ಕಾಂಕ್ರೀಟ್ ಡ್ಯಾಮ್  ಶತಮಾನಗಳ ಇತಿಹಾಸ ಇದ್ದ  ಆ ಸಾಂಪ್ರದಾಯಿಕ ಕಟ್ಟವನ್ನು ಚರಿತ್ರೆಯ ಪುಟಗಳಿಗೆ ಸೇರಿಸಿದೆ. ಕಾಲಯಂತ್ರದಲ್ಲಿ ಹಿಂದೆ ಹೋಗಿ ಈ  ವೀಡಿಯೋದಲ್ಲಿ ಅದನ್ನು ನೋಡಬಹುದು.



 

Tuesday 5 October 2021

ಸ್ಪಿರಿಟ್ ಕಮ್ ಎಂಬ ಗೇಮ್


 
ಸಿಮೆಂಟ್ ನೆಲದ ಮೇಲೆ ಚಾಕ್ ಪೀಸ್ ಬಳಸಿ ಬರೆದ ಈ ರೀತಿಯ ನಕ್ಷೆ.  YES ಮತ್ತು NOಗಳ ನಡುವಿನ ವೃತ್ತಾಕಾರದ ಮೇಲೆ ಬೋರಲು ಹಾಕಿದ ಸ್ಟೀಲ್ ಕಪ್.  ನಕ್ಷೆಯ ಸುತ್ತಲೂ ಕುಳಿತ ಮೂರು ಅಥವಾ ನಾಲ್ಕು ಮಂದಿ ಆ ಕಪ್  ಮೇಲೆ  ತೋರು ಬೆರಳಿಟ್ಟು ಸ್ಪಿರಿಟ್ ಕಮ್, ಸ್ಪಿರಿಟ್ ಕಮ್ ಎಂದು ನಿರಂತರ ಉಚ್ಚರಿಸುತ್ತಿದ್ದಾರೆ. ಕೊಂಚ ಹೊತ್ತಿನಲ್ಲಿ ಬೆರಳುಗಳ ಸಮೇತ ಕಪ್ಪು ಚಲಿಸ ತೊಡಗಿ Yes ಎಂದು ಬರೆದಿರುವಲ್ಲಿಗೆ ಹೋಗಿ  ಮತ್ತೆ ವೃತ್ತಾಕಾರಕ್ಕೆ ಮರಳುತ್ತದೆ. ಬೆರಳಿಟ್ಟವರ ಪೈಕಿ  ಒಬ್ಬರು ‘Do you know Kannada’ ಎಂದು ಕೇಳುತ್ತಾರೆ. ಕಪ್ YESಗೆ ಚಲಿಸಿ ಹಿಂದಿರುಗಿದರೆ ‘ಚಿತ್ಪಾವನಿ ಭಾಷೆ ಬರುತ್ತದೆಯೇ’ ಎಂದು ಕೇಳಲಾಗುತ್ತದೆ. ಸಿಗುವ ಉತ್ತರಕ್ಕೆ ಹೊಂದಿಕೊಂಡು ಮುಂದಿನ ಸಂಭಾಷಣೆ ನಡೆಯುತ್ತದೆ. ‘ನಿನ್ನ ಹೆಸರೇನು?’ ಎಂದು ಕೇಳಿದಾಗ ಕಪ್ ಸರಸರನೆ ಒಂದೊಂದೇ ಅಕ್ಷರಗಳತ್ತ ಚಲಿಸುತ್ತದೆ. ಆ ಅಕ್ಷರಗಳನ್ನು ಜೋಡಿಸಿದಾಗ ಅದೊಂದು ಹೆಸರಾಗಿರುತ್ತದೆ! ಬುದ್ಧಿಪೂರ್ವಕವಾಗಿ ಹಾಗೆ ಅಷ್ಟು ವೇಗದಲ್ಲಿ ಅಕ್ಷರಗಳತ್ತ ಕಪ್ಪನ್ನು ದೂಡಲು ಸಾಧ್ಯವಿಲ್ಲ. ಮುಂದೆ ಕೇಳುವ ಪ್ರಶ್ನೆಗಳಿಗೆಲ್ಲ  YES ಅಥವಾ  NO, ಇಲ್ಲವೇ ಅಕ್ಷರ ಮತ್ತು ಅಂಕೆಗಳತ್ತ ಕಪ್ ಚಲಿಸುವ ಮೂಲಕ ಉತ್ತರ ದೊರೆಯುತ್ತದೆ. ಸಾಕೆನಿಸಿದ ಮೇಲೆ ಕಪ್ ತೆಗೆದು ನಕ್ಷೆಯನ್ನು ಅಳಿಸಲಾಗುತ್ತದೆ. ಕಪ್ ಅಡುಗೆಮನೆ ಸೇರುತ್ತದೆ.

ಇದು 1968ರ ಸುಮಾರಿಗೆ ನಾವು ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ನನ್ನ ತಂಗಿಯಂದಿರು, ಅಣ್ಣನ ಮಕ್ಕಳೆಲ್ಲ ಮನೆಯಲ್ಲಿ ಆಡುತ್ತಿದ್ದ ಆಟ. ಇದು ನಮ್ಮೂರಿಗೆ ಎಲ್ಲಿಂದ ಯಾರ ಮೂಲಕ ಬಂತು ಎಂದು ನೆನಪಿಲ್ಲ. ಆರಂಭದಲ್ಲಿ ಕೆಲ ಸಮಯ  ನಕ್ಷೆಯನ್ನು ಒಂದು ಮಣೆಯ ಮೇಲೆ ಬರೆಯಲಾಗುತ್ತಿತ್ತು.  ಆದರೆ ಚಲಿಸುವ ಕಪ್ ಮಣೆಯ ಪರಿಧಿಯನ್ನು ದಾಟಿ ಕೆಳಗೆ ಬೀಳತೊಡಗಿದ್ದರಿಂದ ನೆಲದ ಮೇಲೆ ಬರೆಯುವ ಪದ್ಧತಿ ಆರಂಭವಾಯಿತು. ಮೊದಮೊದಲು ಬಹಳ ಸಲ ಸ್ಪಿರಿಟ್ ಕಮ್, ಸ್ಪಿರಿಟ್ ಕಮ್ ಎಂದು ಉಚ್ಚರಿಸಿದ ಮೇಲಷ್ಟೇ ಕಪ್ ಚಲಿಸತೊಡಗುತ್ತಿತ್ತು.  ಕ್ರಮೇಣ ಈ ಅವಧಿ ಕಮ್ಮಿಯಾಗುತ್ತಾ ಬಂತು.  ಎರಡು ಅಥವಾ ಮೂರು ಮಂದಿ ಒಟ್ಟಿಗೆ ತೋರುಬೆರಳಿಡುವುದು ಸ್ಪಿರಿಟನ್ನು ಆಹ್ವಾನಿಸುವುದು ರೂಢಿಯಾದರೂ ತಂಗಿ ಒಬ್ಬಳೇ ಬೆರಳಿಟ್ಟರೂ ಕಪ್ ಚಲಿಸತೊಡಗುತ್ತಿತ್ತು. ಇಲ್ಲಿ ಸ್ಪಿರಿಟ್ ಅಂದರೆ ಡಾಕ್ಟರ್ ಇಂಜಕ್ಷನ್ ಕೊಡುವ ಮುನ್ನ ಹಚ್ಚುವಂಥದ್ದು ಅಥವಾ ಗ್ಯಾಸ್ ಲೈಟ್ ಉರಿಸಲು ಉಪಯೋಗಿಸುವಂಥದ್ದು ಅಲ್ಲ, ಅದು ಮೃತ ವ್ಯಕ್ತಿಗಳ ಆತ್ಮ ಎಂಬ ಅರ್ಥದ್ದು ಎಂಬ ಅರಿವಿದ್ದರೂ ಇದನ್ನು ಒಂದು ಆಟ ಎಂದು ತಿಳಿಯಲಾಗುತ್ತಿತ್ತೇ ಹೊರತು ಯಾರಿಗೂ ಭಯವಾಗಲೀ ಅಳುಕಾಗಲೀ ಇರುತ್ತಿರಲಿಲ್ಲ. ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಲೂ ಇರಲಿಲ್ಲ.  ಸಂಪ್ರದಾಯಸ್ಥರಾದ ನಮ್ಮ ಹಿರಿಯಣ್ಣ ಕೂಡ ಈ ಆಟಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ.  ಬದಲಾಗಿ Spiritಗೆ ಅವರೇ ಪ್ರಶ್ನೆಗಳನ್ನು ಕೇಳುತ್ತಿದ್ದರು! ಅವರು ಕಠಿಣ ಪ್ರಶ್ನೆ ಕೇಳಿದರೆ ಕಪ್ ರಭಸವಾಗಿ ನಕ್ಷೆಯ ಪರಿಧಿಯಿಂದ ಹೊರಗೆ ಹೋಗಿ ಸಿಟ್ಟು ತೋರಿಸುತ್ತಿತ್ತು. ಬಹಳ ಪ್ರಶ್ನೆಗಳನ್ನು ಕೇಳಿದರೆ ಇನ್ನು ನಾನು ಹಿಂತಿರುಗುವ ಸಮಯ ಆಯಿತು ಎಂದು ಸೂಚಿಸಿ ಕಪ್ ನಿಶ್ಚಲವಾಗುತ್ತಿತ್ತು.

ಚಲಿಸುವ  ಕಪ್ ಹೆಚ್ಚಾಗಿ ಪಾಶ್ಚಾತ್ಯ ಹೆಸರುಗಳನ್ನೇ ಸೂಚಿಸುತ್ತಿತ್ತು. ಅಂಥ ಸಂದರ್ಭದಲ್ಲಿ ಇಂಗ್ಲೀಷಲ್ಲೆ ಸಂವಹನ ನಡೆಸಬೇಕಾದ್ದರಿಂದ ಸೆಷನ್  ಬೇಗ ಮುಗಿಯುತ್ತಿತ್ತು. ನಮ್ಮ ಪರಿಸರದ ಹೆಸರುಗಳಾದರೆ ಕೇಳುವ ಪ್ರಶ್ನೆಗಳು, ಸಿಗುವ ಉತ್ತರಗಳು ಸ್ವಾರಸ್ಯಪೂರ್ಣವಾಗಿರುತ್ತಿದ್ದವು. ನಮ್ಮ ಕುಟುಂಬದ ಹಿರಿಯರ ಹೆಸರಿನ ‘ಸ್ಪಿರಿಟ್ ’ ಸಹ ಕೆಲವೊಮ್ಮೆ ಬರುವುದಿತ್ತು!  ಕಪ್ ಮೇಲೆ ಬೆರಳಿಟ್ಟವರಿಗೆ ಗೊತ್ತಿರದಿರುವ ವಿಷಯಗಳ ಬಗೆಗಿನ ಪ್ರಶ್ನೆಗಳಿಗೂ ಸೂಕ್ತ ಉತ್ತರ  ಅಂಥ ಸಂದರ್ಭದಲ್ಲಿ ದೊರಕಿದ್ದುಂಟು! ಇಂಥವರೇ ಬರಲಿ ಎಂಬ ಕೋರಿಕೆಗೂ ಕೆಲವು ಸಲ ಮನ್ನಣೆ ದೊರಕುತ್ತಿತ್ತು.

ನಮ್ಮಲ್ಲಿ ಇತರರೆಲ್ಲರೂ ಈ ಆಟದಲ್ಲಿ ಸಕ್ರಿಯ ಭಾಗಿಗಳಾಗುತ್ತಿದ್ದರೂ ನಾನು ಪ್ರೇಕ್ಷಕ ಮಾತ್ರ ಆಗಿರುತ್ತಿದ್ದೆ.  ಕಾಲಕ್ರಮೇಣ ಇದು ಹಿನ್ನೆಲೆಗೆ ಸರಿದು ಈಗ ಎಲ್ಲರಿಗೂ ಮರೆತೇ ಹೋಗಿದೆ.

ಕುತೂಹಲಕ್ಕಾಗಿ ಸ್ಪಿರಿಟ್ ಕಮ್ ಆಟದ ಬಗ್ಗೆ ಗೂಗಲೇಶ್ವರನನ್ನು ವಿಚಾರಿಸಿದಾಗ Ouija Board ಎಂಬ ಹೆಸರಿನಲ್ಲಿ ಇದು 19ನೆಯ ಶತಮಾನದಿಂದಲೇ  ವಿಶ್ವದೆಲ್ಲೆಡೆ ಚಾಲ್ತಿಯಲ್ಲಿರುವುದು ತಿಳಿಯಿತು. ಬೇರೆಡೆ ಬಳಸುವ ನಕ್ಷೆಯಲ್ಲಿ ಅಕ್ಷರ, ಅಂಕೆಗಳು ಅವೇ ಇದ್ದರೂ ವಿನ್ಯಾಸ  ಕೊಂಚ ಭಿನ್ನವಾಗಿದ್ದು ಬೋರಲು ಹಾಕಿದ ಕಪ್ ಬದಲಿಗೆ planchette ಎಂಬ ಬಿಲ್ಲೆ ಅಥವಾ ನಾಣ್ಯವನ್ನು ಈ ಆಟಕ್ಕೆ ಉಪಯೋಗಿಸುತ್ತಾರಂತೆ. ಕೆಲವೆಡೆ ಇದಕ್ಕೆ coined spirit game, planchette game ಎಂಬ ಹೆಸರುಗಳೂ ಇವೆಯಂತೆ.


ಈ ಚಿತ್ರದಲ್ಲಿ Ouija Board ಮತ್ತು planchette ಬಿಲ್ಲೆಗಳನ್ನು ನೋಡಬಹುದು.



ಮನೋವಿಜ್ಞಾನಿಗಳು ಈ ವಿದ್ಯಮಾನದ ಬಗ್ಗೆ ಸಂಶೋಧನೆ ನಡೆಸಿದ್ದು ಈ ಆಟಕ್ಕೆ  ಸುಪ್ತ ಮನಸ್ಸು ಅಪ್ರಯತ್ನವಾಗಿ ಸ್ನಾಯುಗಳನ್ನು ಚಲಿಸುವಂತೆ ಮಾಡುವ Ideomotor Response ಎಂಬ  ಪ್ರಕ್ರಿಯೆ ಕಾರಣವೇ ಹೊರತು  ಬೇರೇನೂ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಆಡುವವರ ಕಣ್ಣುಗಳಿಗೆ ಬಟ್ಟೆ ಕಟ್ಟಿದಾಗ planchette ಅಂಕೆ ಅಕ್ಷರಗಳ ಬದಲಿಗೆ ಎಲ್ಲೆಲ್ಲೋ ಚಲಿಸಿತಂತೆ! ನಾವು ಒಮ್ಮೊಮ್ಮೆ ನಿದ್ರೆಯಲ್ಲಿ ಇದ್ದಕ್ಕಿದ್ದಂತೆ ಬೆಚ್ಚಿ ಬಿದ್ದಂತಾಗುವುದು Ideomotor Responseಗೆ ಇನ್ನೊಂದು ಉದಾಹರಣೆ ಎಂದು ಹೇಳಲಾಗಿದೆ. ಅಂತರ್ಜಲ ಹುಡುಕುವವರ ಕೈಯ ಕೋಲು ಕಂಪಿಸುವುದಕ್ಕೂ Ideomotor Responseಗೂ ಸಂಬಂಧವಿದೆಯೇ ಎಂಬುದೂ ಸಂಶೋಧನೆಗೆ ಯೋಗ್ಯವಾದ ವಿಚಾರ.

 

 

 

 










Friday 30 July 2021

ಏಕಮೇವ ರಫಿಯ ಏಕೈಕ ಹಾಡುಗಳು

ಮಹಮ್ಮದ್ ರಫಿ ಅಂದರೆ ಹಿಂದಿ ಚಿತ್ರಸಂಗೀತ ಕ್ಷೇತ್ರದ ಏಕಮೇವಾದ್ವಿತೀಯ ಗಾಯಕರು.  50-60ರ ದಶಕಗಳಲ್ಲಿ  ಬಹುಪಾಲು ಚಿತ್ರಗಳಲ್ಲಿ ಅವರೇ ಮುಖ್ಯ ಗಾಯಕರಾಗಿರುತ್ತಿದ್ದುದು. ಆರಾಧನಾದ ನಂತರ ಪರಿಸ್ಥಿತಿ ಕೊಂಚ ಬದಲಾದರೂ ಅವರ ಜನಪ್ರಿಯತೆ ಕಮ್ಮಿಯೇನೂ ಆಗಲಿಲ್ಲ. ಆ ನಂತರ ಮಾತ್ರವಲ್ಲ, ಮೊದಲು ಕೂಡ ಅವರು ಒಂದೇ ಹಾಡು ಹಾಡಿದ ಚಿತ್ರಗಳೂ ಅನೇಕ ಇವೆ.   ಆಯ್ದ ಹತ್ತು ಚಿತ್ರಗಳಲ್ಲಿ  ಅವರು ಹಾಡಿದ ವೈವಿಧ್ಯಮಯ ಏಕೈಕ ಹಾಡುಗಳು ಇಲ್ಲಿವೆ.

1. ರಾಮಯ್ಯಾ ವಸ್ತಾವಯ್ಯಾ


ರಾಜ್‌ಕಪೂರ್ ಅವರು ಆಗ್ ಚಿತ್ರ ತಯಾರಿಸಿ ಕೈ ಸುಟ್ಟುಕೊಂಡ ಮೇಲೆ ಶಂಕರ್ ಜೈಕಿಶನ್ ಎಂಬ ಹೊಸ ಸಂಗೀತಕಾರರು, ಶೈಲೇಂದ್ರ ಮತ್ತು ಹಸರತ್ ಜೈಪುರಿ ಎಂಬ ಗೀತಕಾರರು ಹಾಗೂ ಮುಕೇಶ್ ಮತ್ತು  ಲತಾ ಮಂಗೇಶ್ಕರ್ ಎಂಬ ಗಾಯಕರನ್ನೊಳಗೊಂಡ ಹೊಸ ತಂಡ ಕಟ್ಟಿಕೊಂಡು ಸಫಲತೆಯ ಹೊಸ ಯಾತ್ರೆ ಆರಂಭಿಸಿದರು. ಆದರೆ ಶಂಕರ್ ಜೈಕಿಶನ್ ಅವರು ಬರಸಾತ್ ಚಿತ್ರಕ್ಕಾಗಿ ಮೊತ್ತಮೊದಲು ಧ್ವನಿ ಮುದ್ರಿಸಿಕೊಂಡದ್ದು ರಫಿ ಹಾಡಿದ ‘ಮೈ ಜಿಂದಗೀ ಮೆಂ ಹರ್ ದಮ್ ರೋತಾ ಹೀ ರಹಾ ಹೂಂ’ ಎಂಬ ಹಾಡು. ರಫಿ ಅವರು ಹಾಡಲು ಬಂದಾಗ ಹೊಸಬರಾಗಿದ್ದ ಶಂಕರ್ ಮತ್ತು ಜೈಕಿಶನ್ ಗೌರವದಿಂದ ಎದ್ದು ನಿಂತು ‘ನಿಮಗೆ ನಾವು ಏನು ತಾನೇ ಹೇಳಿಕೊಡಬಲ್ಲೆವು? ಇದು ಟ್ಯೂನ್, ಇದು ಸಾಹಿತ್ಯ. ನಮ್ಮ ಹಾಡು ಹಾಡಿ ಹಿಟ್ ಮಾಡಿ ಕೊಡಿ’ ಎಂದು ಪ್ರಾರ್ಥಿಸಿದರಂತೆ.  ರಾಜ್ ಚಿತ್ರಗಳಲ್ಲಿ  ಮುಕೇಶ್ ಮತ್ತು ಮನ್ನಾಡೇ ಮುಖ್ಯ ಪುರುಷ ಗಾಯಕರಾಗಿರುತ್ತಿದ್ದರೂ ಪಾಯಸದ ದ್ರಾಕ್ಷಿಯಂತೆ ಆಗಾಗ   ರಫಿ ಹಾಡುಗಳೂ  ಇರುತ್ತಿದ್ದವು. ಬೂಟ್ ಪಾಲಿಶ್, ಅಬ್ ದಿಲ್ಲೀ ದೂರ್ ನಹೀಂ, ಜಾಗ್ತೇ ರಹೋ ಮುಂತಾದ ರಾಜ್ ಚಿತ್ರಗಳಲ್ಲಿ ರಫಿ ಹಾಡುಗಳಿದ್ದವು.  ಸಂಗಂ ಹಾಡಂತೂ ಗೊತ್ತೇ ಇದೆ. ಮೇರಾ ನಾಮ್ ಜೋಕರ್‌ನ ಮೂರನೇ ಭಾಗದಲ್ಲಿ ಹೀರ್ ರಾಂಝಾ ಸನ್ನಿವೇಶಕ್ಕೆ ಒಂದು ಸುಂದರ ರಫಿ ಹಾಡು ಇದ್ದು ಚಿತ್ರೀಕರಣವೂ ಆಗಿತ್ತು.  ಆದರೆ ಥಿಯೇಟರಲ್ಲಿ ಪ್ರದರ್ಶಿತವಾದ ಚಿತ್ರದಲ್ಲಿ ಅದು ಇರಲಿಲ್ಲ. ಆರ್.ಕೆ. ಫಿಲಂಸ್ ಲಾಂಛನದಲ್ಲಿ ರಫಿ ಕೊನೆಯದಾಗಿ ಹಾಡಿದ್ದು 1981ರಲ್ಲಿ ತಯಾರಾದ  ಬೀವಿ ಓ ಬೀವಿ ಚಿತ್ರಕ್ಕಾಗಿ.

ಶ್ರೀ 420 ಚಿತ್ರದ  ಸಂಗೀತ ಕಂಪೋಸ್ ಮಾಡಲೆಂದು ಶಂಕರ್ ಜೈಕಿಶನ್ ಅವರೊಂದಿಗೆ ರಾಜ್‌ಕಪೂರ್ ಖಂಡಾಲಾಗೆ ಹೋಗಿದ್ದಾಗ  ಒಂದು ಜಾನಪದ ಶೈಲಿಯ ಗೀತೆ ಬೇಕೆಂದು ನಿರ್ಧರಿಸಲಾಯಿತಂತೆ. ಹೈದರಾಬಾದಿನಲ್ಲಿ ಕೆಲ ಕಾಲ ವಾಸಿಸಿದ್ದ ಶಂಕರ್ ಅವರಿಗೆ ತೆಲುಗು ಚೆನ್ನಾಗಿ ಬರುತ್ತಿತ್ತು. ಅವರು ಸಹಾಯಕ ದತ್ತಾರಾಮ್ ನುಡಿಸುತ್ತಿದ್ದ ಢೋಲಕ್ ಲಯದಲ್ಲಿ ರಾಮಯ್ಯಾ ವಸ್ತಾವಯ್ಯಾ, ರಾಮಯ್ಯಾ ವಸ್ತಾವಯ್ಯಾ ಎಂದು ಹಾಡತೊಡಗಿದರಂತೆ. ಇದರ ಅರ್ಥ ರಾಮಯ್ಯಾ ಬಾಬಾರಯ್ಯಾ ಎಂದು ಅಲ್ಲಿ ಯಾರಿಗೂ ತಿಳಿಯದಿದ್ದರೂ ಟ್ಯೂನ್ ಕೇಳಿ ಖುಶಿ ಪಟ್ಟ ರಾಜ್‌ಕಪೂರ್ ‘ಅದನ್ನೇ ಮತ್ತೆ ಮತ್ತೆ ಹಾಡುತ್ತಿದ್ದೀರಲ್ಲ. ಮುಂದೇನು?’ ಅಂದರಂತೆ.  ಆಗ ಶೈಲೇಂದ್ರ ‘ಮೈನೆ ದಿಲ್ ತುಝ್ ಕೊ ದಿಯಾ’ ಎಂದು ಮುಂದುವರಿಸಿದರಂತೆ. ರಫಿ ಮುಖ್ಯ ಗಾಯಕರಾಗಿ ಲತಾ ಮತ್ತು ಮುಕೇಶ್ ಕೂಡ ಧ್ವನಿ ಸೇರಿಸಿದ ಈ ಗೀತೆ ಎವರ್ ಗ್ರೀನ್ ಹಿಟ್ ಆಯಿತು.

2. ಮನ್ ಮೊರಾ ಬಾಂವರಾ


ಕಿಶೋರ್ ಕುಮಾರ್ ಅವರಿಗಾಗಿ ರಫಿ ಹಾಡಿದ್ದು ಎಂಬ ನೆಲೆಯಲ್ಲಿ ರಾಗಿಣಿ ಚಿತ್ರದ ಈ ಗೀತೆಗೆ ಹೆಚ್ಚು ಪ್ರಾಮುಖ್ಯ. ಈ ಹಾಡಿನಲ್ಲಿ interlude music ಇಲ್ಲದಿರುವುದು ವಿಶೇಷ. ಶಾಸ್ತ್ರೀಯ ಶೈಲಿಯ ಈ ಗೀತೆಯನ್ನು ರಫಿಯೇ ಹಾಡಬೇಕೆಂದು ಸಂಗೀತ ನಿರ್ದೇಶಕ ಓ.ಪಿ. ನಯ್ಯರ್ ಪಟ್ಟು ಹಿಡಿದರಂತೆ.  ಶರಾರತ್, ಬಾಗೀ ಶಹಜಾದಾ, ಭಾಗಂ ಭಾಗ್, ಪ್ಯಾರ್ ದೀವಾನಾ ಮುಂತಾದ ಚಿತ್ರಗಳಲ್ಲೂ ರಫಿ ಅವರು ಕಿಶೋರ್‌ಗಾಗಿ ಹಾಡಿದ್ದರೂ ಈ ಹಾಡಿನಷ್ಟು ಪ್ರಚಾರ ಆ ಚಿತ್ರಗಳ ಹಾಡುಗಳಿಗೆ ಸಿಗಲಿಲ್ಲ. ತಾನೊಬ್ಬ ಹೀರೊ, ಕೆಲವು ಬಾರಿಯಾದರೂ ಬೇರೆಯವರ ಹಾಡಿದ್ದಕ್ಕೆ ತಾನು ಲಿಪ್ ಸಿಂಕ್ ಮಾಡಬೇಕು ಎಂದು ಕಿಶೋರ್ ಅಭಿಲಾಷೆಯೂ ಆಗಿದ್ದಿರಬಹುದು. ಉಪಕಾರ್ ಚಿತ್ರದ ‘ಕಸಮೆ ವಾದೇ ಪ್ಯಾರ್ ವಫಾ ಸಬ್’ ಹಾಡನ್ನು ಕಿಶೋರ್ ಅವರಿಂದ ಹಾಡಿಸಬೇಕೆಂದು ಕಲ್ಯಾಣಜೀ ಆನಂದಜೀ ಬಯಸಿದ್ದರಂತೆ. ಅದಕ್ಕೆ ಕಿಶೋರ್ ‘ನಾನೇ ಇನ್ನೊಬ್ಬರು ಹಾಡಿದ್ದಕ್ಕೆ ತುಟಿ ಚಲನೆ ಮಾಡುವ ಹೀರೋ.  ಬೇರೊಬ್ಬರಿಗಾಗಿ ಹಾಡುವಂತೆ ನನಗೇಕೆ ಹೇಳುತ್ತೀರಿ’ ಎಂದು ದಬಾಯಿಸಿದರಂತೆ. ಇನ್‍ಕಂ ಟ್ಯಾಕ್ಸ್ ಸಮಸ್ಯೆಯ ಸುಳಿಯಿಂದ ಹೊರಬರಲು ಅಣ್ಣ ಅಶೋಕ್ ಕುಮಾರ್  ನೀಡಿದ ಸಲಹೆಯಂತೆ ಅವರು ಆ ಮೇಲೆ ಹಿನ್ನೆಲೆ ಗಾಯನವನ್ನು ಗಂಭೀರವಾಗಿ ಪರಿಗಣಿಸಿ ಇತಿಹಾಸ ಸೃಷ್ಟಿಸಿದ್ದು.

3. ಕಹಾಂ ಜಾ ರಹಾ ಹೈ



ಬಲರಾಜ್ ಸಹಾನಿ, ನೂತನ್ ಅಭಿನಯದ ಸೀಮಾ ಚಿತ್ರದ ಈ ಹಾಡಿನ ಅರ್ಥಪೂರ್ಣ ಸಾಹಿತ್ಯ ಶೈಲೇಂದ್ರ ಅವರದ್ದು.  ಶಂಕರ ಜೈಕಿಶನ್ ಸಂಗೀತ ಇದೆ. ಗೊತ್ತು ಗುರಿಯಿಲ್ಲದೆ ಪಯಣಿಸುತ್ತಿರುವವರನ್ನು ಎಚ್ಚರಿಸುವಂತಿರುವ ಈ ಹಾಡಿನ ಕೊನೆಯ ಭಾಗದಲ್ಲಿ ‘ತೋಡ್ ಡಾಲೇ’ ಎಂಬಲ್ಲಿ  ಒಡೆಯುವ ರಫಿಯ ಸ್ವರ ವಿಶೇಷ ಪರಿಣಾಮ ಉಂಟುಮಾಡುತ್ತದೆ.  ಕಾಲಿನಿಂದ ಪೆಡಲ್ ಒತ್ತಿ ಗಾಳಿ ಹಾಕುತ್ತಾ ಎರಡೂ ಕೈಗಳಿಂದ ನುಡಿಸುವ ಆರ್ಗನ್‌ನ ಸುಂದರ  ಬಳಕೆ ಈ ಹಾಡಿನಲ್ಲಿದೆ.

4. ವಕ್ತ್ ಸೆ ದಿನ್ ಔರ್ ರಾತ್


ಓ.ಪಿ. ನಯ್ಯರ್ ಸಂಗೀತದ ನಯಾ ದೌರ್  ನಂತರ ಬಿ.ಆರ್. ಚೋಪ್ಡಾ ಅವರ  ಚಿತ್ರಗಳಲ್ಲಿ  ಮಹೇಂದ್ರ ಕಪೂರ್ ಹಾಡತೊಡಗಿ ರಫಿ ಏಕೋ ದೂರವಾದರು. ಈ ವೈಮನಸ್ಸಿಗೆ ನಿರ್ದಿಷ್ಟ ಕಾರಣ ಏನು ಎಂಬುದು  ಸ್ಪಷ್ಟವಿಲ್ಲ. ಆದರೆ ವಕ್ತ್ ಚಿತ್ರದ ಈ ಹಿನ್ನೆಲೆ ಹಾಡಿಗೆ ರಫಿ ಅಲ್ಲದೆ ಇನ್ಯಾರೂ ನ್ಯಾಯ ಒದಗಿಸಲಾರರು ಎಂದು ಸಂಗೀತ ನಿರ್ದೇಶಕ ರವಿಗೆ ಅನ್ನಿಸಿದಾಗ  ‘ಅವರು ಒಪ್ಪಿದರೆ ನನ್ನ ಅಭ್ಯಂತರ ಇಲ್ಲ’ ಎಂದು ಚೋಪ್ಡಾ ಹೇಳಿದರಂತೆ.  ರವಿ ಅವರ ಮೇಲೆ ಅತೀವ ಅಭಿಮಾನವಿದ್ದ ರಫಿ ಯಾವುದೇ ಬಿಗುಮಾನ ಇಲ್ಲದೆ ಹಾಡನ್ನು ಹಾಡಿ ಗೆಲ್ಲಿಸಿಕೊಟ್ಟರು.

5. ಯೇ ಮೇರಾ ಪ್ರೇಮ್ ಪತ್ರ



ಸಂಗಂ ಚಿತ್ರದ ಉಳಿದೆಲ್ಲ ಹಾಡುಗಳು ಒಂದು ತೂಕವಾದರೆ ರಫಿ ಅವರ ಈ ಹಾಡು ಒಂದು ತೂಕ.  ಈ ಪ್ರೇಮಪತ್ರದ ಸಾಲುಗಳನ್ನು ಹಸರತ್ ಜೈಪುರಿ ಅವರು ತಾನು ಪ್ರೀತಿಸುತ್ತಿದ್ದ ನೆರೆಮನೆಯ  ಹುಡುಗಿಯೊಬ್ಬಳನ್ನು ಉದ್ದೇಶಿಸಿ ಬರೆದಿಟ್ಟಿದ್ದರಂತೆ. ರಾಜ್‌ಕಪೂರ್ ಅವರ ಕಣ್ಣಿಗೆ ಇದು ಬಿದ್ದು ಸಂಗನಲ್ಲಿ ಬಳಸಿಕೊಂಡರಂತೆ. ಈ ಹಾಡಿನ ಆರಂಭದಲ್ಲಿ ಇರುವ ಮೆಹರ್ಬಾನ್, ಹಸೀನಾ, ದಿಲರುಬಾ ಮುಂತಾದವು ಪತ್ರ ಬರೆಯುವ ವಿವಿಧ ಶೈಲಿಗಳಾಗಿರಬಹುದೆಂದು ನಾನು ಬಹಳ ಕಾಲ ಅಂದುಕೊಂಡಿದ್ದೆ.  ಅದರ ಅರ್ಥ ‘ಏನೆಂದು ಸಂಬೋಧಿಸಿ ಪತ್ರವನ್ನು ಆರಂಭಿಸಲಿ’ ಎಂದು ಆ ಮೇಲೆ ತಿಳಿಯಿತು. ಗ್ರೂಪ್ ವಯಲಿನ್ಸ್ ಜೊತೆಗೆ ರಷ್ಯನ್ ಶೈಲಿಯ high pitch ಕೋರಸ್ ಮತ್ತು ಚೇಲೋದ ಅತಿಮಂದ್ರ counter melody  ಶಂಕರ್ ಜೈಕಿಶನ್ ಅವರ ಈ ಸಂಗೀತ  ಸಂಯೋಜನೆಯ ಮುಖ್ಯ ಆಕರ್ಷಣೆ. ಆ ವರ್ಷದ ವಾರ್ಷಿಕ ಬಿನಾಕಾ ಗೀತ್‌ಮಾಲಾದಲ್ಲಿ  ಈ ಕ್ಲಾಸ್ ಗೀತೆ ದ್ವಿತೀಯ ಸ್ಥಾನದಲ್ಲೂ, ಮಾಸ್ ಗೀತೆ  ಮೇರೇ ಮನ್ ಕೀ ಗಂಗಾ ಪ್ರಥಮ ಸ್ಥಾನದಲ್ಲೂ ಇದ್ದವು. ಅಂದು ನಾನೂ ಮೇರೇ ಮನ್ ಕೀ ಗಂಗಾ ಹಾಡನ್ನೇ ಹೆಚ್ಚು ಇಷ್ಟ ಪಡುತ್ತಿದ್ದುದು.  ಈಗ ಪ್ರೇಮಪತ್ರ ಇಷ್ಟವಾಗುತ್ತದೆ.

6. ದಿಲ್ ಪುಕಾರೇ



ಎಸ್.ಡಿ. ಬರ್ಮನ್ ಸಂಗೀತ ಇದ್ದ ಜ್ಯೂಯಲ್ ತೀಫ್ ಚಿತ್ರದ ಈ ರಫಿ ಲತಾ ಹಾಡು ಅವರಿಬ್ಬರ ವಿರಸ ಕೊನೆಗೊಂಡ ಬಳಿಕ ಮೊದಲು  ಧ್ವನಿಮುದ್ರಣಗೊಂಡ ಡ್ಯೂಯಟ್ ಎಂದು ಅನೇಕರು ತಪ್ಪಾಗಿ ಉಲ್ಲೇಖಿಸುವುದಿದೆ. ವಾಸ್ತವವಾಗಿ ವಿರಸದ ನಂತರದ ಮೊದಲ ಯುಗಳ ಗೀತೆ ಗಬನ್ ಚಿತ್ರದ ಶಂಕರ್ ಜೈಕಿಶನ್ ಗೀತೆ ತುಮ್ ಬಿನ್ ಸಜನ್ ಬರ್‌ಸೆ ನಯನ್.  ಕಿಶೋರ್ ಕುಮಾರ್ ಅವರು ದೇವಾನಂದ್ ಅವರ ಅಧಿಕೃತ ಧ್ವನಿ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ 1957ರ ನೌ ದೋ ಗ್ಯಾರಹ್ ಮತ್ತು ಪೇಯಿಂಗ್ ಗೆಸ್ಟ್ ನಂತರ 1960ರ ದಶಕದ ಮಧ್ಯ ಭಾಗದ  ವರೆಗೆ ಕಿಶೋರ್ ಕುಮಾರ್ ದೇವ್ ಆನಂದ್‌ಗಾಗಿ ಒಂದು ಹಾಡೂ ಹಾಡಲಿಲ್ಲ!  ಆ ಸಮಯದಲ್ಲಿ ಕೆಲವೊಮ್ಮೆ ಹೇಮಂತ್ ಕುಮಾರ್, ಇನ್ನು ಕೆಲವೊಮ್ಮೆ ದ್ವಿಜೇನ್ ಮುಖರ್ಜಿ ಕೆಲವು ಹಾಡು ಹಾಡಿದ್ದು ಬಿಟ್ಟರೆ ಎಲ್ಲ ದೇವ್ ಹಾಡುಗಳು ರಫಿ ಧ್ವನಿಯಲ್ಲೇ ಇರುತ್ತಿದ್ದವು.  1965ರ ತೀನ್ ದೇವಿಯಾಂ ಚಿತ್ರದಿಂದ ಮತ್ತೆ ಕಿಶೋರ್- ದೇವ್  ನಂಟು ಬೆಸೆಯಿತು. ನಂತರ ಗೈಡ್ ಹಾಗೂ ದುನಿಯಾ ಚಿತ್ರದಲ್ಲಿ ದೇವ್‌ಗಾಗಿ ಒಂದೊಂದು ಕಿಶೋರ್ ಹಾಡು  ಇತ್ತು.  1967ರ ಜ್ಯೂಯಲ್ ತೀಫ್‌ನಲ್ಲಿ  ಅವರೇ ಮುಖ್ಯ ಗಾಯಕರೆನಿಸಿ ರಫಿ ಪಾಲಿಗೆ ಈ ಒಂದು ಯುಗಳ ಗೀತೆ ಮಾತ್ರ ಲಭಿಸಿತು. ಪಹಾಡಿ ರಾಗಾಧಾರಿತವಾಗಿ ವಿಶಿಷ್ಟ ನಡೆಯ ಲಯದೊಂದಿಗೆ ಇದು ಅತ್ಯಂತ ಮಾಧುರ್ಯಪೂರ್ಣವಾಗಿ  ಹೊರಹೊಮ್ಮಿತು. ಇದೇ ಶೈಲಿಯಲ್ಲಿ ಆರಾಧನಾದ ಕೋರಾ ಕಾಗಜ್ ಥಾ ಯೇ ಮನ್ ಮೇರಾ ಮುಂದೆ ಜನ್ಮ ತಾಳಿತು. ಅದೂ ರಫಿ ಲತಾ ಧ್ವನಿಯಲ್ಲೇ ಇರಬೇಕೆಂಬ ಬರ್ಮನ್ ಅಭಿಲಾಷೆ ರಫಿ ವಿದೇಶ ಯಾತ್ರೆಗೆ ತೆರಳಿದ್ದರಿಂದ ಕೈಗೂಡಲಿಲ್ಲ.

7. ಸುಖ್ ಕೆ ಸಬ್ ಸಾಥಿ


ಟ್ರಾಜಿಡಿ ಕಿಂಗ್ ಎಂದೇ ಗುರುತಿಸಲ್ಪಡುತ್ತಿದ್ದ ದಿಲೀಪ್ ಕುಮಾರ್ ಗೋಪಿ ಚಿತ್ರದಲ್ಲಿ ಹಾಸ್ಯಮಿಶ್ರಿತ ಲಘು ಪಾತ್ರದಲ್ಲಿ ಕಾಣಿಸಿಕೊಂಡಾಗ ಮೊದಲ ಬಾರಿಗೆ ಮಹೇಂದ್ರ ಕಪೂರ್ ಅವರ ಧ್ವನಿಯಾದರು. ಈ ಚಿತ್ರದ ಲೌಡ್ ಪಾತ್ರಕ್ಕೆ ಮಹೇಂದ್ರ ಕಪೂರ್ ಅವರ ಗಡುಸು ಧ್ವನಿಯೇ ಸೂಕ್ತ ಎಂದು ಕಲ್ಯಾಣಜೀ ಆನಂದಜೀ ಅವರಿಗೆ  ಅನ್ನಿಸಿತಂತೆ. ಅವರು ಹಾಡಿದ ಜಂಟಲ್ ಮೇನ್, ರಾಮಚಂದ್ರ ಕಹ ಗಯೇ ಸಿಯಾಸೇ ಮತ್ತು ಏಕ್ ಪಡೋಸನ್ ಪೀಛೆ ಪಡ್‌ಗಯಿ ಅಂದಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾದರೂ ಇಂದಿಗೂ ಬೆಲೆ ಕಳೆದುಕೊಳ್ಳದೆ ಉಳಿದುಕೊಂಡಿರುವುದು ರಫಿಯ ಏಕೈಕ ಭಜನೆಯಾದ ಸುಖ್ ಕೇ ಸಬ್ ಸಾಥಿ ಮಾತ್ರ. ಗೋಲಿ ಸೋಡಾದಂತೆ ಒಮ್ಮೆ ನೊರೆಯುಕ್ಕಿಸಿ ಆ ಮೇಲೆ ತಣ್ಣಗಾಗುವವುಗಳನ್ನು ಅಲೋಪೆತಿಕ್ ಹಾಡುಗಳೆಂದೂ, ಕಾಲ ಕಳೆದಂತೆ ಜನಪ್ರಿಯತೆಯನ್ನು ವೃದ್ಧಿಸಿಕೊಳ್ಳುತ್ತಾ ಶಾಶ್ವತವಾಗಿ ಉಳಿಯುವ ಇಂಥವುಗಳನ್ನು ಆಯುರ್ವೇದಿಕ್ ಹಾಡುಗಳೆಂದೂ ಕಲ್ಯಾಣಜೀ ಅವರು ವರ್ಗೀಕರಿಸುವುದಿತ್ತು.

8. ಮೇರಾ ಮನ್ ತೇರಾ ಪ್ಯಾಸಾ


ಶೈಲೇಂದ್ರ ಅವರ ಅಕಾಲಿಕ ನಿಧನದ ನಂತರ ಅವರ ಸ್ಥಾನ ತುಂಬಲು  ಆಗಲೇ ಕೆಲವು ಚಿತ್ರಗಳಿಗೆ ಹಾಡು ಬರೆದಿದ್ದ  ನೀರಜ್ ಅವರನ್ನು ಶಂಕರ್ ಜೈಕಿಶನ್ ಮತ್ತೆ ಚಿತ್ರರಂಗಕ್ಕೆ ಕರೆತಂದರು. ಶೈಲೇಂದ್ರ ಅವರ ಕೊರತೆಯನ್ನು ಅನುಭವಿಸುತ್ತಿದ್ದ ಎಸ್.ಡಿ. ಬರ್ಮನ್ ಕೂಡ ದೇವ್ ಆನಂದ್ ಅಭಿನಯದ ಗ್ಯಾಂಬ್ಲರ್ ಚಿತ್ರದಿಂದ ನೀರಜ್ ಅವರಿಂದಲೇ ಹಾಡು ಬರೆಸತೊಡದರು. ಈ ಚಿತ್ರದ ಉಳಿದೆಲ್ಲ ಹಾಡುಗಳನ್ನು ಕಿಶೋರ್ ಹಾಡಿದರೂ ರಫಿ ಗಾಯನದ ರುಚಿ ಗೊತ್ತಿದ್ದ ಬರ್ಮನ್ ದಾದಾ ಈ ಒಂದು ಹಾಡನ್ನು ಅವರಿಗೆ ಮೀಸಲಿರಿಸಿದರು. ಚಿತ್ರ ಅಂಥ ಯಶಸ್ಸು ಕಾಣದಿದ್ದರೂ ಈ ಹಾಡನ್ನು ಜನ  ಈಗಲೂ ಇಷ್ಟ ಪಡುತ್ತಾರೆ.  ಮುಂದೆಯೂ ಎಸ್.ಡಿ. ಬರ್ಮನ್ ನಿರ್ದೇಶನದಲ್ಲಿ ರಫಿ ಅನೇಕ ಗೀತೆಗಳನ್ನು ಹಾಡಿದರೂ ದೇವ್ ಆನಂದ್‌ಗಾಗಿ ಇದು ಅವರ ಸಂಗೀತವಿದ್ದ ಕೊನೆಯ  ಹಾಡಾಯಿತು. ರಾಜೇಶ್ ರೋಶನ್ ಸಂಗೀತವಿದ್ದ ಮನ್ ಪಸಂದ್ ಚಿತ್ರದ ‘ಲೋಗೊಂ ಕಾ ದಿಲ್ ಅಗರ್ ಹಾಂ ಜೀತ್‌ನಾ ತುಮ್ ಕೊ’ ರಫಿ  ದೇವ್ ಆನಂದ್ ಅವರಿಗಾಗಿ ಹಾಡಿದ ಕೊನೆಯ ಹಾಡು

9. ಆಜ್ ಮೌಸಮ್



1973ರ ಲೋಫರ್ ಚಿತ್ರದ ಈ ಏಕೈಕ ರಫಿ ಹಾಡು ಈಗಲೂ ಜನಪ್ರಿಯತೆ ಉಳಿಸಿಕೊಂಡಿದೆ. ಹಾಡಿನ ಸಾಹಿತ್ಯ ಲಯದ grooveನೊಂದಿಗೆ ಮಿಳಿತವಾಗದೆ ತೇಲುತ್ತಾ ಸಾಗುವುದು ಇದರ ವೈಶಿಷ್ಟ್ಯ. ವಿಭಿನ್ನ ರೀತಿಯ interlude, ಆಕರ್ಷಕ ಮುರ್ಕಿಗಳು ಹಾಡಿನ ಸೊಬಗನ್ನು ಹೆಚ್ಚಿಸಿವೆ. ಮಿತ್ರರೊಬ್ಬರು ರಫಿ ಈ ಹಾಡನ್ನು ಯಾಕೋ ಕಷ್ಟ ಪಟ್ಟು ಹಾಡಿದ ಹಾಗೆ ಕೇಳಿಸುತ್ತದೆ ಎಂದೊಮ್ಮೆ ಹೇಳಿದ್ದರು. ಹಾಡಿನ ಶ್ರುತಿ ಕೊಂಚ ತಗ್ಗಿಸಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂದು ನನಗೂ ಅನ್ನಿಸಿದ್ದಿದೆ. ಲಕ್ಷ್ಮಿ ಪ್ಯಾರೆ ಸಂಗೀತದ  ಈ ಹಾಡು ಮಾನ್ಸೂನ್ ವೆಡ್ಡಿಂಗ್ ಎಂಬ ಆಂಗ್ಲ ಚಿತ್ರದಲ್ಲಿ ಮರುಬಳಕೆಯಾಗಿದೆ.

10. ದರ್ದೆ ದಿಲ್ ದರ್ದೆ ಜಿಗರ್


ಲೈಲಾ ಮಜ್ನೂ ಚಿತ್ರದಲ್ಲಿ ಮೊದಲ ಬಾರಿಗೆ ಋಷಿ ಕಪೂರ್‌ ಧ್ವನಿಯಾದ ರಫಿ ಹಮ್ ಕಿಸೀ ಸೆ ಕಮ್ ನಹೀಂ, ಸರ್‌ಗಮ್, ನಸೀಬ್, ಅಮರ್ ಅಕ್ಬರ್ ಅಂಥೊಣಿ ಮುಂತಾದ ಚಿತ್ರಗಳಲ್ಲಿ ಅವರಿಗಾಗಿ ಅನೇಕ ಹಿಟ್ ಗೀತೆಗಳನ್ನು ಹಾಡಿದರು. ಮಾಮೂಲಿ ಲಕ್ಶ್ಮಿ ಪ್ಯಾರೆ ಶೈಲಿಗೆ ಹೊರತಾದ ಸಂಯೋಜನೆಯುಳ್ಳ 1980ರ ಕರ್ಜ್ ಚಿತ್ರದ ಈ ಹಾಡೂ ಅದೇ ಸಾಲಿಗೆ ಸೇರಿತು. 1980ರ ಜುಲೈ 31ಕ್ಕೆ 55ರ ಹರೆಯದಲ್ಲಿ ರಫಿ ಇಹಲೋಕ ತ್ಯಜಿಸದಿರುತ್ತಿದ್ದರೆ  ಈ ಜೋಡಿಯ ಇನ್ನಷ್ಟು  ಹಾಡುಗಳು ಬರುತ್ತಿದ್ದವೋ ಏನೋ. ಬಾಬ್ಬಿ ಚಿತ್ರದಲ್ಲಿ ಶೈಲೇಂದ್ರ ಸಿಂಗ್ ಬದಲಿಗೆ ರಫಿ    ಮೈ ಶಾಯರ್ ತೋ ನಹೀಂ  ಹಾಡುತ್ತಿದ್ದರೆ ಹೇಗಿರುತ್ತಿತ್ತು ಎಂಬುದು ಕುತೂಹಲದ ಪ್ರಶ್ನೆ! ಡಿಂಪಲ್‌ಗೆ ಲತಾ ಮಂಗೇಷ್ಕರ್ ಹಾಡಬಹುದಾದರೆ ಋಷಿಗೆ ರಫಿ ಯಾಕೆ ಹಾಡಬಾರದಿತ್ತು ಅಲ್ಲವೇ? ರೇಡಿಯೋ ಸಿಲೋನಿನಲ್ಲಿ ಮೊದಲ ಬಾರಿ ಬಾಬ್ಬಿ ಚಿತ್ರದ ಹಾಡುಗಳು ಪ್ರಸಾರವಾದಾಗ ಒಂದಾದರೂ ರಫಿ ಹಾಡು ಇರಬಹುದೇನೋ ಎಂದು ನಾನು ನಿರೀಕ್ಷಿಸಿದ್ದು ಸುಳ್ಳಲ್ಲ.

ಕೆಳಗಿನ ಪಟ್ಟಿಯಿಂದ 10 ಹಾಡುಗಳ ಪೈಕಿ ಬೇಕಿದ್ದುದನ್ನು ಆಯ್ದು ಆಲಿಸಿ.




Tuesday 8 June 2021

ಸಾಕಿ ಗೀತ


ಬೇಂದ್ರೆ ಅವರ ಸಖಿ ಗೀತ ಶೀರ್ಷಿಕೆಯ ಅಪಭ್ರಂಶ ಇದು ಎಂದು ತಿಳಿದುಕೊಳ್ಳದಿರಿ. ಸಾಕಿ ಗೀತಗಳ ಬಗೆಗಿನ ಲೇಖನವಾದ್ದರಿಂದ ಈ ಶೀರ್ಷಿಕೆ. ನಿಮ್ಮಲ್ಲಿ ಹಳೆ ಸಿನಿಮಾಗಳ ಪದ್ಯಾವಳಿ ಇದ್ದರೆ ಅವುಗಳಲ್ಲಿ ನೀವು ಸಾಕಿ ಎಂಬ ಪದವನ್ನು ನೋಡಿರುತ್ತೀರಿ. ಸಾಕಿ ಎಂದರೆ ಮುಖ್ಯ ಗೀತೆ ಆರಂಭವಾಗುವ ಮೊದಲು ಯಾವುದೇ ಹಿಮ್ಮೇಳವಿಲ್ಲದೆ ಅಥವಾ ಕನಿಷ್ಠ ವಾದ್ಯಗಳ ಸಹಕಾರದೊಡನೆ ಒಂದೆರಡು ಸಾಲುಗಳನ್ನು ಆಲಾಪದ ರೀತಿ ಹೇಳುವುದು. ಇದು ಮುಂದೆ ಬರಲಿರುವ ಹಾಡಿಗೆ ಪೂರ್ವರಂಗ ಇದ್ದ ಹಾಗೆ. ಅಥವಾ ಒಂದು ರೀತಿ ಊಟದ ಮೊದಲು ಕೊಡುವ ಸ್ಟಾರ್ಟರ್ ಅಥವಾ ಎಪೆಟೈಜರ್  ಇದ್ದ ಹಾಗೆ. ಹಿಂದಿ ಹಾಗೂ ಕನ್ನಡ ಚಿತ್ರಸಂಗೀತದಲ್ಲಿ ಈ ಪದ್ಧತಿ ಸುಮಾರು 70ರ ದಶಕದ ವರೆಗೂ ಚಾಲ್ತಿಯಲ್ಲಿತ್ತು.  ಕನ್ನಡ ಚಿತ್ರಸಂಗೀತಕ್ಕೆ ಇದು ನಾಟಕಗಳಲ್ಲಿ ಪ್ರಚಲಿತವಾಗಿದ್ದ ಕಂದ ಪದ್ಯ, ಸೀಸ ಪದ್ಯಗಳ ಪ್ರಭಾವದಿಂದ ಬಂದಿರಬಹುದು. ಮುಶಾಯಿರಾ ಎಂದು ಕರೆಯಲ್ಪಡುವ ಕವಿಗೋಷ್ಠಿಗಳಲ್ಲಿ ಕವಿಗಳು ರಾಗವಾಗಿ  ಕವಿತೆಗಳನ್ನು ವಾಚಿಸುವ ತರನ್ನುಮ್ ಎಂಬ ಪದ್ಧತಿ ಇದು ಹಿಂದಿ ಚಿತ್ರಸಂಗೀತದಲ್ಲಿ ಪ್ರಚಲಿತವಾಗಲು ಕಾರಣವಾಗಿರಬಹುದು.

ಸಾಕಿ ಹಾಡುವಿಕೆ ಗಾಯಕ ಗಾಯಕಿಯರಿಗೆ ಒಂದು ಅಗ್ನಿಪರೀಕ್ಷೆ. ತಪ್ಪುಗಳನ್ನು ಮುಚ್ಚಲು ವಾದ್ಯಗಳ ಸದ್ದು ಇಲ್ಲದಿರುವುದರಿಂದ ಶ್ರುತಿ ಶುದ್ಧತೆ, ಉಚ್ಚಾರದ ಸ್ಪಷ್ಟತೆ, ಉಸಿರಿನ ನಿಯಂತ್ರಣ, ಮೈಕ್ ಮ್ಯಾನೇಜ್‌ಮೆಂಟ್  ಎಲ್ಲಕ್ಕೂ ಇಲ್ಲಿ ಮಹತ್ವ ಇದೆ.

ಇಲ್ಲಿ ಕೆಲವು ಕನ್ನಡ ಮತ್ತು ಹಿಂದಿ ಗೀತೆಗಳ ಸಾಕಿ ಭಾಗಗಳಿವೆ. ಸಂಬಂಧಿಸಿದ ಹಾಡಿನ ಬಗ್ಗೆ ಕೊಂಚ ವಿವರಗಳಿರುತ್ತವೆ.  ಆದರೆ ಹಾಡು ಯಾವುದೆಂದು ಉಲ್ಲೇಖ ಇರುವುದಿಲ್ಲ. ಇದು ಮೆದುಳಿಗೆ ಮೇವು ಒದಗಿಸುವುದಕ್ಕಾಗಿ. ಹೆಚ್ಚಿನವು ಬಲು ಪ್ರಸಿದ್ಧ ಹಾಡುಗಳೇ ಆಗಿವೆ. ಚಿತ್ರದ ಹೆಸರು ಇರುವುದರಿಂದ ಅಂತರ್ಜಾಲದಲ್ಲೂ ಹಾಡು ಹುಡುಕಿ ಕೇಳಬಹುದು.

ಕನ್ನಡ

1. ಶರಣು ಶಂಕರ ಶಂಭೊ
ಇದು ರಾಜ್‌‍ಕುಮಾರ್ ಅವರ ಮೊದಲ ಚಿತ್ರ ಬೇಡರ ಕಣ್ಣಪ್ಪದ ಹಾಡು.  ಸಿ.ಎಸ್. ಜಯರಾಮನ್ ಹಾಡಿದ್ದಾರೆ. ಈ ಚಿತ್ರ ತೆಲುಗಿನಲ್ಲೂ ಕಾಳಹಸ್ತಿ ಮಹಾತ್ಮ್ಯಂ ಎಂಬ ಹೆಸರಲ್ಲಿ  ತೆರೆಕಂಡಿದ್ದು ಅಲ್ಲಿ ಇದನ್ನು ಘಂಟಸಾಲ ಹಾಡಿದ್ದರು.

 2. ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ
ಭೂಕೈಲಾಸ ಚಿತ್ರಕ್ಕಾಗಿ ಕು.ರ.ಸೀ ಅವರು ರಚಿಸಿದ ಆರು ನಿಮಿಷಗಳ ಪ್ರಾಸಬದ್ಧ ರಾಮಾಯಣವನ್ನೊಳಗೊಂಡ ಈ ಹಾಡು ಗೊತ್ತಿಲ್ಲದವರು ಯಾರೂ ಇರಲಾರರು.  ಏರು ದನಿಯ ಸಿರ್ಕಾಳಿ ಗೋವಿಂದರಾಜನ್ ಹಾಡಿದ ಈ ಗೀತೆ ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ ಕನ್ನಡದ ಮೊದಲ ದೀರ್ಘ ಗೀತೆ ಆಗಿರಬಹುದು.

3. ವಿರಹಾಗ್ನಿ ತಾಪದುರಿಯ
ಎಸ್. ಜಾನಕಿ ಕನ್ನಡ ಚಿತ್ರಗಳಲ್ಲಿ ಹಾಡಲು ಆರಂಭಿಸಿದ ಕಾಲದ ಅಬ್ಬಾ ಆ ಹುಡುಗಿ ಚಿತ್ರದ ಗೀತೆ ಇದು. ಪಿ.ಕಾಳಿಂಗ ರಾವ್ ಸಂಗೀತ ನಿರ್ದೇಶನ.  ಮೊದಲ ಸಾಲಿನಲ್ಲಿ ಕೇಳಿಸುವುದು ವಯಲಿನ್ ಧ್ವನಿಯೋ ಜಾನಕಿ ಸ್ವರವೋ ಎಂಬ ಸಂದೇಹ ಮೂಡುತ್ತದೆ!

4. ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ಭಕ್ತ ಕನಕದಾಸ ಚಿತ್ರದ ನಂಬರ್ ವನ್ ಗೀತೆಯ ಪೂರ್ವರಂಗ ಇದು. ಗ್ರಾಮಫೋನ್ ತಟ್ಟೆಯಲ್ಲಿ  ಈ ಭಾಗ  ಇರಲಿಲ್ಲ. ಪಿ.ಬಿ. ಶ್ರೀನಿವಾಸ್  ರಾಜ್‌ಕುಮಾರ್ ಅವರಿಗಾಗಿ ಎಲ್ಲ ಹಾಡುಗಳನ್ನು ಹಾಡಿದ ಮೊದಲ ಚಿತ್ರ ಇದು. ಎಂ.ವೆಂಕಟರಾಜು ಸಂಗೀತ ನೀಡಿದ ಮೊದಲ ಚಿತ್ರವೂ ಹೌದು. ಕನಕದಾಸ ವಿರಚಿತ ಭಾಮಿನಿ ಷಟ್ಪದಿ ಛಂದಸ್ಸಿನ  ಹರಿಭಕ್ತಿಸಾರದ  49ನೆಯ ಪದ್ಯವನ್ನು ಇಲ್ಲಿ ಉಗಾಭೋಗದ ರೂಪದಲ್ಲಿ ಬಳಸಲಾಗಿದೆ.
 
5. ಅರಳೆ ರಾಸಿಗಳಂತೆ

ವಿಜಯನಗರದ ವೀರಪುತ್ರನಾಗಿದ್ದ ಆರ್.ಎನ್. ಸುದರ್ಶನ್ ಅವರಿಗಾಗಿ ಆರ್.ಎನ್. ಜಯಗೋಪಾಲ್ ರಚಿಸಿ ವಿಶ್ವನಾಥನ್ ರಾಮಮೂರ್ತಿ ಸಂಗೀತದಲ್ಲಿ ಪಿ.ಬಿ.ಎಸ್ ಹಾಡಿದ್ದ ಅತಿ ಜನಪ್ರಿಯ ಗೀತೆ ಇದು.  ಹೆಚ್ಚು ವಿವರಣೆಯ ಅಗತ್ಯವಿಲ್ಲ.

6. ಮೂಡಿ ಸಾವಿರ ದಳದಿ ಕಾಯುತಿರುವೆನು ನಿನ್ನ
ಸ್ವರ್ಣಗೌರಿ ಚಿತ್ರಕ್ಕಾಗಿ ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ ಹಾಡಿದ ಅತಿ ಮಧುರ ಗೀತೆಯ ಸಾಕಿ ಭಾಗದಲ್ಲಿ ಜಾನಕಿ ಧ್ವನಿ ಮಾತ್ರ ಇದೆ. ಇದು ಕೂಡ ಗ್ರಾಮಫೋನ್ ತಟ್ಟೆಯಲ್ಲಿ ಇರಲಿಲ್ಲ. ಎಸ್.ಕೆ. ಕರೀಂ ಖಾನ್ ರಚನೆಗೆ ವೆಂಕಟರಾಜು ಸಂಗೀತ.
 
7. ವಿಮಲ ನೀಲ ಜಲದೊಳೇನು
ಇದು ಕೂಡ ಸ್ವರ್ಣಗೌರಿ ಚಿತ್ರದ ಇನ್ನೊಂದು ಹಾಡಿನ ಪೂರ್ವಭಾವಿ ಭಾಗ. ಜಾನಕಿ ಧ್ವನಿಯಲ್ಲಿದೆ.  ಹಾಡು ಬಲು ಮಧುರ.  ಆದರೆ ಅಷ್ಟೊಂದು ಜನಪ್ರಿಯ ಅಲ್ಲ.
 
8. ಆದಿ ಪೂಜೆಯ ಕೊಂಬ ಆನೆ ಮೊಗನೆ
ಮುರಿಯದ ಮನೆ ಚಿತ್ರದಲ್ಲಿ ರಾಜ್‌ಕುಮಾರ್ ಅವರಿಗಾಗಿ ಘಂಟಸಾಲ ಮತ್ತು ಎಲ್.ಆರ್.ಈಶ್ವರಿ ಸಂಗಡಿಗರೊಡನೆ ಹಾಡಿದ ಹಾಡಿದು. ಕು.ರ.ಸೀ ಸಾಹಿತ್ಯ, ವಿಜಯಾ ಕೃಷ್ಣಮೂರ್ತಿ ಸಂಗೀತ.

9. ಮತಿಹೀನೆ ಕೈಕೇಯಿ

ಇದು ಕೂಡ ಮುರಿಯದ ಮನೆ ಚಿತ್ರದ್ದೇ. ಹಿನ್ನೆಲೆಯಲ್ಲಿ ಬರುವ ಹಾಡಿದು. ರಾಜ್ ಅವರಿಗಾಗಿ ಘಂಟಸಾಲ ಮತ್ತು ಪಿ.ಬಿ.ಶ್ರೀನಿವಾಸ್ ಇಬ್ಬರೂ ಈ ಚಿತ್ರದಲ್ಲಿ ಹಾಡಿದ್ದರು.
 
10. ಪರಿಪರಿಯ ಪರಿಮಳದಿ
ಪಂಢರಿ ಬಾಯಿ ನಿರ್ಮಿಸಿದ ಅನ್ನಪೂರ್ಣ ಚಿತ್ರದ ಹಾಡು ಇದು. ಉದಯಶಂಕರ್ ರಚನೆಗೆ ರಾಜನ್ ನಾಗೇಂದ್ರ ಸಂಗೀತವಿದೆ. ಚಿತ್ರದಲ್ಲಿ ಇದನ್ನು ರೇಡಿಯೋ ನಿಲಯದಲ್ಲಿ ಹಾಡಿದಂತೆ ತೋರಿಸಲಾಗಿದ್ದು ರಾಜನ್ ಮತ್ತು ನಾಗೇಂದ್ರ ಕೂಡ ಕಾಣಿಸಿಕೊಂಡಿದ್ದಾರೆ.
 
11. ಓ ನನ್ನ ಬಾಂಧವರೆ
ತ.ರಾ.ಸು ಕಾದಂಬರಿಯನ್ನಾಧರಿಸಿದ ಚಂದವಳ್ಳಿಯ ತೋಟ ಚಿತ್ರದ ಈ ಹಾಡನ್ನು ಬರೆದವರು ಸ್ವತಃ ತ.ರಾ.ಸು. ಸಂಗೀತ ಟಿ.ಜಿ. ಲಿಂಗಪ್ಪ. ಹಾಡಿದವರು ಪೀಠಾಪುರಂ ನಾಗೇಶ್ವರ ರಾವ್.
 
12. ದಯೆಯಿಲ್ಲದಾ ಧರ್ಮವು ಯಾವುದಯ್ಯಾ
ನವಜೀವನ ಚಿತ್ರದ ಹಾಡೊಂದು ಆರಂಭವಾಗುವ ಮೊದಲು ಬಸವೇಶ್ವರರ ಈ ವಚನವನ್ನು ಅಳವಡಿಸಿಕೊಳ್ಳಲಾಗಿದೆ. ಪಿ.ಸುಶೀಲಾ ಹಾಡಿದ್ದಾರೆ.  ಸಂಗೀತ ರಾಜನ್ ನಾಗೇಂದ್ರ.

13. ಹೊಸ ಹರೆಯದ ಹೊಸ ಜೋಡಿಗೆ ಶುಭಾಶಯ
ಎಸ್.ಪಿ. ಬಾಲಸುಬ್ರಮಣಿಯಂ ದಕ್ಷಿಣ ಭಾರತ ಚಿತ್ರಸಂಗೀತ ಕ್ಷೇತ್ರವನ್ನು ಪೂರ್ತಿ ಆವರಿಸುವುದಕ್ಕೂ ಮೊದಲಿನ  ಈ ಜನಪ್ರಿಯ ಗೀತೆ ಸೀತಾ ಚಿತ್ರದ್ದು.  ಆ ಹಾಡು ಇರದ ಮದುವೆ ಆರ್ಕೆಷ್ಟ್ರಾ ಕಲ್ಪಿಸಲೂ ಸಾಧ್ಯವಿಲ್ಲ.

14. ಪರತತ್ವವನು ಬಲ್ಲ

ಭಕ್ತ ಕುಂಬಾರ ಚಿತ್ರದ ಈ ಹಾಡಿನ ಪರಿಚಯ ಇಲ್ಲದವರು ಯಾರು? ಬಹುಶಃ ರಾಜ್ ಅವರಿಗಾಗಿ ಎಲ್ಲ ಹಾಡುಗಳನ್ನು ಪಿ.ಬಿ.ಎಸ್ ಹಾಡಿದ ಕೊನೆಯ ಚಿತ್ರ ಇದು.
 
15. ಹಾಡುವ ದನಿಯೆಲ್ಲ
ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಒಲ್ಲದ ಮನಸ್ಸಿನಿಂದ ಸ್ವತಃ ಎಮ್ಮೆ ಹಾಡು ಹಾಡಿ ಅದು ಜನಪ್ರಿಯವಾದ ಮೇಲೆ ರಾಜ್‌ಕುಮಾರ್ ಅವರು ಬಹದ್ದೂರ್ ಗಂಡು ಚಿತ್ರಕ್ಕಾಗಿ ಮೂರು ಹಾಡುಗಳನ್ನು ಹಾಡಿ  ಗಾಯನ ಕ್ಷೇತ್ರದಲ್ಲಿ ದೃಢ  ಹೆಜ್ಜೆ ಇರಿಸಿದರು. ಆ ಮೂರರಲ್ಲಿ ಇದು ಅತಿ ಜನಪ್ರಿಯವಾಯಿತು.

16. ಸತ್ಯಾತ್ಮಾ ಸತ್ಯಕಾಮಾ
ರಾಜಕುಮಾರ್ ಅವರು ತನ್ನ ಹಾಡುಗಳನ್ನೂ ತಾವೇ ಹಾಡಲು ಆರಂಭಿಸಿದ ಮೇಲೂ ಪಿ.ಬಿ.ಶ್ರೀನಿವಾಸ್ ಅವರಿಗ ದೊರೆತ ಕೆಲವು ಒಳ್ಳೆಯ ಹಾಡುಗಳಲ್ಲಿ ದಾರಿ ತಪ್ಪಿದ ಮಗ ಚಿತ್ರದ ಈ ಹಾಡೂ ಒಂದು.  ಎಸ್. ಜಾನಕಿ ಮತ್ತು ಹಳೆ ಕಾಲದ ಗಾಯಕಿ ಎ.ಪಿ. ಕೋಮಲಾ ಕೂಡ ಜೊತೆಗೆ ಹಾಡಿದ್ದಾರೆ.

17. ಪಾಲ್ಗಡಲಿನಿಂದುದಿಸಿ
ಅಷ್ಟಲಕ್ಷ್ಮಿಯರ ಪೈಕಿ ಧನಲಕ್ಷ್ಮಿ ಅಂದರೆ ಎಲ್ಲರಿಗೂ ಅಧಿಕ ಅಕ್ಕರೆ. ಅದೇ ಹೆಸರಿನ ಚಿತ್ರಕ್ಕಾಗಿ ಪಿ.ಬಿ.ಶ್ರೀನಿವಾಸ್ ಹಾಡಿದ ಗೀತೆ ಇದು. ಸಂಗೀತ ಪಿ.ಬಿ.ಶ್ರೀನಿವಾಸ್ ಅವರ ಸಮೀಪ ಬಂಧು ಎಂ ರಂಗರಾವ್ ಅವರದ್ದು.  ಎಂ. ರಂಗರಾವ್ ಅಂದರೆ ಎಂ. ವೆಂಕಟರಾಜು ಅವರ ಸೋದರ ಎಂಬ ತಪ್ಪು ಅಭಿಪ್ರಾಯವೂ ಕೆಲವರಲ್ಲಿದೆ.
 
18. ಕಂಡೊಡನೆ ಕರ ಪಿಡಿದು
ನಾಟಕರಂಗದ ನಿಕಟ ನಂಟು ಹೊಂದಿದ್ದ   ರಾಜ್‌ಕುಮಾರ್ ಅವರಿಗೆ ಸಾಕಿ ಹಾಡುವುದೆಂದರೆ ನೀರು ಕುಡಿದಷ್ಟು ಸಲೀಸು. ರವಿಚಂದ್ರ ಚಿತ್ರದ ಗೀತೆಯೊಂದರ ಪೂರ್ವರಂಗವಾಗಿ ಇದನ್ನು ಬಲು ಸುಂದರವಾಗಿ ಹಾಡಿದ್ದಾರೆ.
 

ಹಿಂದಿ

ಮಹಮ್ಮದ್ ರಫಿಯನ್ನು ಸಾಕಿ ಗೀತಗಳ ಸರದಾರ ಎನ್ನಬಹುದು. ಏಕೆಂದರೆ  ಸಾಕಿ ಗೀತೆಗಳನ್ನು ಅವರು ಹಾಡಿರುವಷ್ಟು  ಸಂಖ್ಯೆಯಲ್ಲಿ  ಇನ್ಯಾರೂ ಹಾಡಿರಲಾರರು. ಹೀಗಾಗಿ ಲತಾ, ಆಶಾ, ಕಿಶೋರ್, ಮುಕೇಶ್, ಮನ್ನಾಡೇ ಮುಂತಾದವರೂ ಬೆರಳೆಣಿಕೆಯ ಸಾಕಿ ಗೀತೆಗಳನ್ನು ಹಾಡಿರುವರಾದರೂ ಇಲ್ಲಿ ರಫಿಯ ಕೆಲವು ಗೀತೆಗಳನ್ನು ಮಾತ್ರ ದಾಖಲಿಸಿದ್ದೇನೆ.  ಈ ಅಷ್ಟೂ ಗೀತೆಗಳಲ್ಲಿ ರಫಿಯ ಧ್ವನಿ ಒಂದರಲ್ಲಿದ್ದಂತೆ ಇನ್ನೊಂದರಲ್ಲಿ ಇಲ್ಲದಿರುವುದನ್ನು ಗಮನಿಸಬಹುದು. ಪ್ರಕೃತಿಯ ಹಸುರಿನಲ್ಲಿ ನೂರಾರು ವೈವಿಧ್ಯಮಯ ಛಾಯೆಗಳಿರುತ್ತವಂತೆ. ರಫಿಯ ಧ್ವನಿಯ ವೈವಿಧ್ಯವನ್ನೂ ಇದಕ್ಕೆ ಹೋಲಿಸಬಹುದೇನೋ ಏನೋ.

ಕಾಲಕ್ರಮೇಣ ಹಾಡುಗಾರಿಕೆಯ ಶೈಲಿಯಲ್ಲಿ  ಯಾವ ರೀತಿ ಬದಲಾವಣೆಗಳುಂಟಾಗುತ್ತಾ ಹೋದವು ಎಂದು ತಿಳಿಯಲು ಈ ತುಣುಕುಗಳನ್ನು ಕಾಲಾನುಕ್ರಮವಾಗಿ ಜೋಡಿಸಲು ಪ್ರಯತ್ನಿಸಿದ್ದೇನೆ

19. ಅಸೀರ್ ಎ ಪಂಜಾ ಏ ಅಹದೆ ಶಬಾಬ್ ಕರ್ ಕೆ ಮುಝೆ
ಗಾಢ ಪರ್ಶಿಯನ್ ಪ್ರಭಾವದ ಉರ್ದುವಿನಲ್ಲಿರುವ ಮುಜ್ತರ್ ಖೈರಾಬಾದಿಯವರ ಈ ಸಾಲುಗಳು ದಿಲೀಪ್ ಕುಮಾರ್ ಅಭಿನಯದ ದೀದಾರ್ ಚಿತ್ರದ  ಹಾಡಿನವು. ಸಂಗೀತ ನೌಷಾದ್ ಅವರದ್ದು.  ತನ್ನ ಬಾಲ್ಯದ ಗೆಳತಿಯ ಏರುಜವ್ವನದ ದಿನಗಳ ನೆನಪುಗಳು ತನ್ನನ್ನು ತಮ್ಮ ಮುಷ್ಟಿಯಲ್ಲಿ  ಬಿಗಿಯಾಗಿ ಹಿಡಿದಿಟ್ಟಿವೆ ಎಂದು ಈ ಸಾಲುಗಳ ಅರ್ಥವಂತೆ.

20. ಅಕೇಲಿ ಮತ್ ಜೈಯೊ ರಾಧೆ
ರಫಿಯ ಎಲ್ಲ ಹಾಡುಗಳು ಸುಪರ್ ಹಿಟ್ ಆದ ಮೊದಲ ಚಿತ್ರ ಬೈಜೂ ಬಾವ್ರಾದ ಹಾಡಿನ ಸಾಲುಗಳಿವು. ಶಕೀಲ್ ಬದಾಯೂನಿ ಸಾಹಿತ್ಯ ಮತ್ತು ನೌಷಾದ್ ಸಂಗೀತ.
 
21. ಪಾಸೆ ಸಭಿ ಉಲಟ್ ಗಯೆ
ಜಾಗೃತಿ ಎಂಬ ದೇಶಭಕ್ತಿ ಪ್ರಧಾನ ಚಿತ್ರದ ಗೀತೆ ಇದು.  ಈ ಚಿತ್ರದ ಸಂಗೀತ ನಿರ್ದೇಶಕ ಹೇಮಂತ್ ಕುಮಾರ್  ಸ್ವತಃ ಉತ್ತಮ ಗಾಯಕನಾಗಿದ್ದರೂ ರಫಿ ಧ್ವನಿಯನ್ನು ಬಳಸಿದ್ದರು.
 
22. ಚಲೆ ಆಜ್ ತುಮ್ ಜಹಾಂ ಸೆ
ಸಂಗೀತ ನಿರ್ದೇಶಕ ನೌಷಾದ್ ಸ್ವತಃ ನಿರ್ಮಿಸಿದ ಉಡನ್ ಖಟೋಲಾ ಚಿತ್ರದ ಹಾಡು ಇದು. ಇದು ವಾನರಥಮ್ ಎಂಬ ಹೆಸರಲ್ಲಿ ತಮಿಳಿನಲ್ಲೂ ತೆರೆ ಕಂಡಿತ್ತು. ಅದರಲ್ಲಿ ರಫಿ ಹಾಡುಗಳನ್ನು ಟಿ.ಎ. ಮೋತಿ ಹಾಡಿದ್ದರು. ಟಿ.ಎ. ಮೋತಿ ಅಂದರೆ ಕನ್ಯಾರತ್ನ ಚಿತ್ರದ ಮೈಸೂರ್ ದಸರಾ ಬೊಂಬೆ,  ಕಲಾವತಿ ಚಿತ್ರದ ಗಾನ ನಾಟ್ಯ ರಸಧಾರೆ ಮುಂತಾದವುಗಳನ್ನು ಹಾಡಿದವರು.

23. ವಫಾ ಕಿ ರಾಹ ಮೆಂ ಆಶಿಕ್ ಕಿ ಈದ್ ಹೋತಿ ಹೈ

ಮುಗಲ್-ಎ-ಆಜಮ್ ಚಿತ್ರದ ಏಕೈಕ ರಫಿ ಹಾಡು ಇದು. ಜೊತೆಗೆ ಕೋರಸ್ ಕೂಡ ಇದೆ. ನೌಷಾದ್ ಸಂಗೀತ, ಶಕೀಲ್ ಬದಾಯೂನಿ ಸಾಹಿತ್ಯ ಇದ್ದ ಈ ಚಿತ್ರ ವರ್ಣರಂಜಿತವಾಗಿ ಪುನಃ ತೆರೆ ಕಂಡಿತ್ತು.

24.  ಲಾಗಾ ಗೋರಿ ಗುಜರಿಯಾಸೆ

ದಿಲೀಪ್ ಕುಮಾರ್, ವೈಜಯಂತಿಮಾಲಾ ಅಭಿನಯದೊಂದಿಗೆ ತಯಾರಾದ ಟೆಕ್ನಿಕಲರ್ ಚಿತ್ರ ಗಂಗಾ ಜಮುನಾದಲ್ಲಿ ಸಂಭಾಷಣೆಗಳು ಮಾತ್ರ ಭೋಜ್‌ಪುರಿ ಭಾಷೆಯಲ್ಲಿ ಇದ್ದುದಲ್ಲ,  ಹಾಡುಗಳೂ ಅದೇ ಭಾಷೆಯಲ್ಲಿ ಇದ್ದದ್ದು ವಿಶೇಷ.  ಅನೇಕ ಚಿತ್ರಗಳಲ್ಲಿ ಗ್ರಾಮ್ಯ ಭಾಷೆಯಲ್ಲಿ ಮಾತನಾಡುವ ಪಾತ್ರ ಹಾಡುವಾಗ ಮಾತ್ರ ಶಿಷ್ಠ ಭಾಷೆ ಬಳಸುವುದಿದೆ.

25. ಜರಾ ಠಹರೊ ಸದಾ ಮೇರೆ ದಿಲ್ ಕೀ

ಶಮ್ಮಿ ಕಪೂರ್ ಡ್ಯಾಶಿಂಗ್ ಹೀರೋ ರೂಪದಲ್ಲಿ ಉತ್ತುಂಗದಲ್ಲಿರುವಾಗಲೇ ಚಿತ್ರದ ಬಹುಭಾಗದಲ್ಲಿ ವಯಸ್ಸಾದ ಪ್ರಾಧ್ಯಾಪಕನಾಗಿ   ನಟಿಸಿದ ಪ್ರೊಫೆಸರ್ ಚಿತ್ರದ ಹಾಡು ಇದು. ಹಸ್ರತ್ ಜೈಪುರಿ ಸಾಹಿತ್ಯಕ್ಕೆ ಶಂಕರ್ ಜೈಕಿಶನ್ ಸಂಗೀತ.

26. ಬಿಜ್‌ಲೀ ಗಿರಾ ಕೆ ಆಪ್ ಖುದ್
ಬಿ.ಆರ್. ಪಂತುಲು ಅವರು ನಿರ್ಮಿಸಿ ನಿರ್ದೇಶಿಸಿದ ಶಮ್ಮಿ ಕಪೂರ್ ಅಭಿನಯದ ದಿಲ್ ತೇರಾ ದೀವಾನಾ ಚಿತ್ರದ ಹಾಡು.  ಸಂಗೀತ ಶಂಕರ್ ಜೈಕಿಶನ್ ಅವರದ್ದು. ಸಾಮಾನ್ಯವಾಗಿ ಗಜಲ್ ಶೈಲಿಯ ಹಾಡುಗಳಿಗೆ ಬಳಸುವ ಸಾಕಿ ಆಲಾಪ ಈ ಏರು ಸ್ಥಾಯಿಯಲ್ಲಿ ಆರಂಭವಾಗುವ ಜಾಸ್ ಶೈಲಿಯ ಗೀತೆಯಲ್ಲಿರುವುದು ವಿಶೇಷ.

27. ಜಾನೆ ವಾಲೆ ಕಭೀ ನಹಿಂ ಆತೆ

ದಿಲ್ ಏಕ್ ಮಂದಿರ್ ಚಿತ್ರದ ಕೊನೆಯಲ್ಲಿ ಬರುವ ಹಾಡಿದು.  ಸಾಧಾರಣವಾಗಿ ಚಿತ್ರ ಕೊನೆಯಾಗುತ್ತಾ ಬಂದಂತೆ ಪ್ರೇಕ್ಷಕರು ಒಬ್ಬೊಬ್ಬರೇ ಎದ್ದು ಹೊರಡುವುದು ವಾಡಿಕೆ.  ಆದರೆ ಈ ಶಂಕರ್ ಜೈಕಿಶನ್ ಹಾಡು  ಚಿತ್ರಮಂದಿರದ ದೀಪಗಳು ಬೆಳಗುವ ವರೆಗೆ ಎಲ್ಲರನ್ನೂ ಹಿಡಿದಿಟ್ಟಿರಬಹುದು.

28. ಬಹಾರೇ ಹುಸ್ನ್ ತೆರಿ
ಈ ಮೊದಲು ಸರಸ್ವತಿ ದೇವಿ ಎಂಬ ಸಂಗೀತ ನಿರ್ದೇಶಕಿ ಆಗಿ ಹೋಗಿದ್ದರೂ ಸಂಗೀತ ನಿರ್ದೇಶನ ಕ್ಷೇತ್ರದಲ್ಲಿ 60ರ ದಶಕದಲ್ಲಿ ಹೆಚ್ಚು ಯಶಸ್ಸು ಗಳಿಸಿದ ಏಕೈಕ ಮಹಿಳೆ ಉಷಾ ಖನ್ನಾ.  ಅವರ ಸಂಗೀತವಿದ್ದ ಆವೋ ಪ್ಯಾರ್ ಕರೇಂ ಚಿತ್ರದ ಹಾಡು ಇದು. ಸಾಹಿತ್ಯ ರಾಜೇಂದ್ರ ಕೃಷ್ಣ. ಜೋಯ್ ಮುಖರ್ಜಿ, ಸಾಯಿರಾಬಾನು ಮುಖ್ಯ ಭೂಮಿಕೆಯಲ್ಲಿದ್ದರು. ನನಗೆ ಬಲು ಇಷ್ಟವಾದ ಸಾಕಿಗಳಲ್ಲಿ ಇದು ಒಂದು.
 
29.  ದೂರ್ ಬಹುತ್ ಮತ್ ಜಾಯಿಯೆ
ಫಿರ್ ವಹೀ ದಿಲ್ ಲಾಯಾ ಹೂಂ ಚಿತ್ರಕ್ಕಾಗಿ ಓ.ಪಿ. ನಯ್ಯರ್ ನಿರ್ದೇಶನದಲ್ಲಿ ರಫಿ ಮತ್ತು ಆಶಾ ಭೋಸ್ಲೆ ಹಾಡಿದ ಹಾಡು ಇದು. ಸಾಕಿ ಭಾಗದಲ್ಲಿ ಇಬ್ಬರ ಧ್ವನಿಯೂ ಇರುವುದು ವಿಶೇಷ. ಹೀಗಿರುವುದು ಕಮ್ಮಿ.  ಹಾಡಿನ ಈ ಭಾಗ ಕೇಳಿದಾಗಲೆಲ್ಲ ನಾನು ಉಜಿರೆಯಿಂದ ನಡೆದುಕೊಂಡು ಹೋಗುವಾಗ  ನಿಡಿಗಲ್ ಸಮೀಪ ಟಾರ್ ರಸ್ತೆ ಬಿಟ್ಟು ನಮ್ಮ ಮನೆಯತ್ತ ಸಾಗುವ ಒಳದಾರಿ ಹಿಡಿಯುವ ದೃಶ್ಯವೇ ನನ್ನ ಕಣ್ಣ ಮುಂದೆ ಬರುವುದು.

30. ಮೆಹರಬಾನ್ ಲಿಖೂಂ

ರಾಜ್ ಕಪೂರ್ ಅವರ ಸಂಗಂ ಚಿತ್ರದಲ್ಲಿದ್ದ ಏಕೈಕ ರಫಿ ಹಾಡು ಇದು ಅಂದರೆ ಯಾವುದೆಂದು ತಿಳಿದು ಬಿಡುತ್ತದೆ. ಇದರ ಉದಾಹರಣೆ ಕೊಡುತ್ತಾ  ಚಿತ್ರದಲ್ಲಿ ವೈಜಯಂತಿಮಾಲಾ ಅವರಿಗೆ ರಾಜೇಂದ್ರ ಕುಮಾರ್ ಅವರೊಂದಿಗೆ ಲವ್ ಆದದ್ದಲ್ಲ, ರಫಿ ಅವರ ಧ್ವನಿಯೊಂದಿಗೆ ಎಂದು ಎಸ್.ಪಿ.ಬಿ ಹೇಳುವುದಿತ್ತು. ಇಲ್ಲಿ ಬರುವ ಮೆಹರಬಾನ್, ಹಸೀನಾ, ದಿಲ್‌ರುಬಾ ಮುಂತಾದವುಗಳೆಲ್ಲ ಪತ್ರ ಬರೆಯುವ ವಿವಿಧ ಶೈಲಿಗಳಿರಬಹುದು ಎಂದು ನಾನು ಮೊದಲು ಅಂದುಕೊಂಡಿದ್ದೆ! ಅವೆಲ್ಲ ಆರಂಭದ ಸಂಬೋಧನೆಯ ಆಯ್ಕೆಗಳು ಎಂದು ಆ ಮೇಲೆ ಅರಿತೆ.

31. ದುಖ್ ಹೊ ಯಾ ಸುಖ್ ಜಬ್ ಸದಾ

ಪಾರಸ್ ಮಣಿ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದ ಲಕ್ಷ್ಮಿಕಾಂತ್ ಪ್ಯಾರೇಲಾಲ್ ಅವರನ್ನು ಉನ್ನತ ಶ್ರೇಣಿಯಲ್ಲಿ ತಂದು ನಿಲ್ಲಿಸಿದ ಚಿತ್ರ ದೋಸ್ತಿಯ ಹಾಡು ಇದು. ಮಜರೂಹ್ ಸುಲ್ತಾನ್‌ಪುರಿ ಅವರು ಬರೆದ ‘ದುಃಖವಾಗಲಿ ಸುಖವಾಗಲಿ ನಮ್ಮೊಂದಿಗೆ ಸದಾ ಇರುವುದಿಲ್ಲ.  ಹಾಗಿದ್ದರೆ ಹೋದರೂ ದುಃಖವಾಗದ ದುಃಖವನ್ನೇ ನಮ್ಮದಾಗಿಸಿಕೊಳ್ಳುವುದು ಒಳ್ಳೆಯದಲ್ಲವೇ’ ಎಂಬ ತಾತ್ಪರ್ಯದ ಸಾಲುಗಳು ಸಿನಿಮಾ ಹಾಡಿನಂತೆ ಭಾಸವಾಗುವುದಿಲ್ಲ. ಕಬೀರರ ದ್ವಿಪದಿಯೇನೋ ಎನಿಸುತ್ತವೆ. ನಾನೊಮ್ಮೆ ಮಲೇರಿಯಾ ಬಾಧೆಗೆ ತುತ್ತಾಗಿ ಆಸ್ಪತ್ರೆ ವಾಸಿಯಾಗಬೇಕಾಗಿ ಬಂದಿತ್ತು.  ಅಲ್ಲಿ ರಾತ್ರಿಯ ನೀರವತೆಯಲ್ಲಿ ಈ ಸಾಲುಗಳೇ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದ್ದವು.

32. ಪ್ಯಾರ್ ಕಾ ಸಾಜ್ ಭಿ ಹೈ
ಆರಂಭದಿಂದಲೂ ದೇವಾನಂದ್ ಕಿಶೋರ್ ಕುಮಾರ್ ಧ್ವನಿಯಲ್ಲೇ ಹಾಡುತ್ತಿದ್ದುದು. ಆದರೆ 60ರ ದಶಕದ  ಅವರ ಹೆಚ್ಚಿನ ಚಿತ್ರಗಳಲ್ಲಿ  ರಫಿಯೇ ಹಾಡಿದ್ದು.  ಅಸ್ಲಿ ನಕ್ಲಿ   ಅಂಥವುಗಳಲ್ಲೊಂದು. ಹೃಷೀಕೇಶ್ ಮುಖರ್ಜಿ ಅವರ ನಿರ್ದೇಶನವಿದ್ದ ಈ ಚಿತ್ರದ ನಾಯಕಿ ಸಾಧನಾ.  ಶಂಕರ್ ಜೈಕಿಶನ್ ಸಂಗೀತ ಇತ್ತು.

33. ಖುಶಿ ಜಿಸ್ ನೆ ಖೋಜಿ
ಚಾ ಚಾ ಚಾ ಎಂಬ ವಿಚಿತ್ರ ಎಂದೆನಿಸುವ ಹೆಸರಿನ ಚಿತ್ರದ ಗೀತೆ ಇದು. ವಾಸ್ತವವಾಗಿ ಚಾ ಚಾ ಚಾ ಅಂದರೆ  ಒಂದು ಪಾಶ್ಚಾತ್ಯ ನೃತ್ಯ ಶೈಲಿ.  ಈ ಚಿತ್ರದ  ಸಂಗೀತ ನಿರ್ದೇಶಕ  ಅತಿ ಪ್ರತಿಭಾವಂತ, ಆದರೆ ಹೆಚ್ಚು ಅವಕಾಶಗಳು ಸಿಗದ ಇಕ್ ಬಾಲ್ ಖುರೇಶಿ.  ಹಿಂದಿಯ ಪ್ರಸಿದ್ಧ ಕವಿ ಗೋಪಾಲದಾಸ್ ನೀರಜ್ ಅವರ ಗೀತೆಗಳು ಈ ಚಿತ್ರದಲ್ಲಿದ್ದವು.

34.  ಕಭೀ ಪಹಲೆ ದೇಖಾ ನಹೀಂ ಯೇ ಸಮಾ
ಶಶಿ ಕಪೂರ್ ಅವರನ್ನು ಯಶಸ್ವಿ ಹೀರೊಗಳ ಸಾಲಿಗೆ ತಂದು ನಿಲ್ಲಿಸಿದ ಜಬ್ ಜಬ್ ಫೂಲ್ ಖಿಲೆ ಚಿತ್ರದ  ಹಾಡುಗಳು  ಗೀತ ರಚನೆಕಾರ ಆನಂದ್ ಬಕ್ಷಿ ಅವರನ್ನೂ  ಮುಂಚೂಣಿಗೆ ತಂದವು. ಆಗಿನ ಚಿತ್ರಗಳಲ್ಲಿ ನಾಯಕ ಪಾರ್ಟಿಗಳಲ್ಲಿ ಪಿಯಾನೊ ಹಿಮ್ಮೇಳದೊಂದಿಗೆ ಹಾಡುವ ಒಂದಾದರೂ ಹಾಡು ಇರುವುದು ಸಾಮಾನ್ಯವಾಗಿತ್ತು.  ಇದೂ ಅಂಥದ್ದೇ. ಕಲ್ಯಾಣಜೀ ಆನಂದಜೀ ಸಂಗೀತವಿದೆ.

35. ಜಲ್ತೆ ಭಿ ಗಯೆ ಕಹತೆ ಭಿ ಗಯೆ

ಮರ ಸುತ್ತುತ್ತಾ ಹಾಡುವ ಚಾಕಲೇಟ್ ಹೀರೋ ಆಗಿ  ಸಾಕಷ್ಟು ಯಶಸ್ಸು ಪಡೆದಿದ್ದ ಮನೋಜ್ ಕುಮಾರ್ ಮೊದಲ ಬಾರಿಗೆ ಕ್ರಾಂತಿಕಾರಿ ಭಗತ್ ಸಿಂಗ್ ಪಾತ್ರವನ್ನು ನಿರ್ವಹಿಸಿದ ಶಹೀದ್ ಚಿತ್ರದ ಹಾಡು. ಈ ಚಿತ್ರದೊಂದಿಗೆ ಅದು ವರೆಗೆ ಗೀತ ರಚನೆಕಾರನ ರೂಪದಲ್ಲಿ ಗುರುತಿಸಿಕೊಂಡಿದ್ದ ಪ್ರೇಮ್ ಧವನ್ ಸಂಗೀತ ನಿರ್ದೇಶಕ ಕೂಡ ಆದರು.  ಈ ಚಿತ್ರದ ಮುಖ್ಯ ಗಾಯಕ ರಫಿಯೇ ಆಗಿದ್ದರು.  ಆದರೆ ನಂತರದ ಉಪಕಾರ್, ಪೂರಬ್ ಔರ್ ಪಶ್ಚಿಮ್ ಇತ್ಯಾದಿ ಚಿತ್ರಗಳಲ್ಲಿ ಮನೋಜ್ ಕುಮಾರ್ ಮಹೇಂದ್ರ ಕಪೂರ್ ಅವರನ್ನು ಹೆಚ್ಚು ಬಳಸಿಕೊಂಡರು. ನಾನೊಮ್ಮೆ ಅಗಸ್ಟ್ ತಿಂಗಳಲ್ಲಿ ಇಲಾಖಾ ತರಬೇತಿಗಾಗಿ ಜಬಲ್‌ಪುರಕ್ಕೆ ಹೋಗಿದ್ದೆ. ಅಲ್ಲಿ ನಮ್ಮ ತರಬೇತಿ ಕೇಂದ್ರ  ಕಂಟೋನ್ಮೆಂಟ್ ಪರಿಸರದಲ್ಲೇ ಇರುವುದು. ನಾವು ಆಚೀಚೆ ಅಡ್ಡಾಡುವಾಗೆಲ್ಲ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಲ್ಲಿಂದ ಈ ಹಾಡು ಪದೇ ಪದೇ ಧ್ವನಿವರ್ಧಕದಲ್ಲಿ ಕೇಳಿ ಬರುತ್ತಿತ್ತು.  ಹಾಗಾಗಿ ಈ ಹಾಡಿನೊಂದಿಗೆ ಜಬಲ್‌ಪುರದ ನೆನಪು ಶಾಶ್ವತವಾಗಿ ತಳಕು ಹಾಕಿ ಕೊಂಡಿದೆ.
 
36. ಮೆರೆ ದಿಲ್ ಸೆ ಸಿತಂಗರ್
ಹಿಟ್ ಚಿತ್ರಗಳನ್ನು ಕೊಡುತ್ತಲೇ ಬಂದ ಜೆ. ಓಂ ಪ್ರಕಾಶ್ ಅವರ ಆಯೇ ದಿನ್ ಬಹಾರ್ ಕೇ ಚಿತ್ರದ ಈ ಹಾಡಿನಲ್ಲಿ ನಾಯಕ  ತನ್ನ ಪ್ರಿಯತಮೆಗೆ ಕೆಟ್ಟದನ್ನೇ ಹಾರೈಸುವುದು ಇದನ್ನು ಬೇರೆಯಾಗಿ ನಿಲ್ಲಿಸುತ್ತದೆ.  ಒಮ್ಮೆ ರೇಡಿಯೋ ಸಿಲೋನಿನಲ್ಲಿ ಸಿನಿಮಾ ಜಾಹೀರಾತುಗಳು ಯಾವುದೋ ಕಾರಣಕ್ಕೆ ನಿಂತು ಹೋಗಿದ್ದವು.  ಅವು ಮತ್ತೆ ಆರಂಭವಾದದ್ದು ಈ ಚಿತ್ರದ ಪ್ರಚಾರದೊಂದಿಗೆ. 

37.  ಚಾಹೆ ಲಾಖ್ ಕರೊ ತುಮ್ ಪೂಜಾ

ಸಂಜಯ್ ಖಾನ್ ಬಬಿತಾ ಜೊತೆಗೆ ಮೊದಲ ಬಾರಿ ಕಾಣಿಸಿಕೊಂಡು ಭಿಕ್ಷುಕನೊಬ್ಬನ ಹಾರ್ಮೋನಿಯಮ್ ನುಡಿಸುತ್ತಾ ದಸ್ ಲಾಖ್ ಚಿತ್ರದಲ್ಲಿ ಈ ಹಾಡು ಹಾಡಿದ್ದರು.  ಸಾಹಿತ್ಯ ಮತ್ತು ಸಂಗೀತ ರವಿ ಅವರದ್ದು. ಪ್ರೊ ಶಂಕರ್ ಅವರ ಮ್ಯಾಜಿಕ್ ಕಾರ್ಯಕ್ರಮದಲ್ಲಿ ಮನಿ ಮನಿ ಎಂಬ ಐಟಮಿಗೆ ನಾನು ಈ ಟ್ಯೂನ್ ನುಡಿಸುತ್ತಿದ್ದೆ.
 
38. ಕಿಸ್ ಬಿಧಿ ಕರೆಂ ಬಖಾನ್
ಸದಾ ದುಡ್ಡಿಗಾಗಿ ಹಪಹಪಿಸುತ್ತಿರುವ ವ್ಯಕ್ತಿಯೊಬ್ಬ ಒಮ್ಮಿಂದೊಮ್ಮೆಲೇ ಲಕ್ಷಾಧೀಶನಾದಾಗ ದೇವರಿಗೆ ಧನ್ಯವಾದ ಅರ್ಪಿಸುವ ಈ ಹಾಡೂ ದಸ್ ಲಾಖ್ ಚಿತ್ರದ್ದೇ. ಹಿಂದಿನ ಹಾಡನ್ನು ಹೀರೋಗಾಗಿ ಹಾಡಿದ ರಫಿ ಇದನ್ನು ಹೀರೊನ ಅಪ್ಪನಿಗಾಗಿ ಹಾಡಿದ್ದು.

39. ನ ಮೈ ಸಿಂಧಿ ನ ಮೈ ಮರಾಠಿ

ಜಾನ್‌ವರ್ ಚಿತ್ರದ ಪ್ರಸಿದ್ಧ ಹಾಡಿನ ಮೊದಲ ಸಾಲನ್ನು ಶೀರ್ಷಿಕೆಯಾಗಿರಿಸಿಕೊಂಡ ಚಿತ್ರ ತುಮ್ ಸೆ ಅಚ್ಛಾ ಕೌನ್ ಹೈ.  ಈ ಚಿತ್ರದಲ್ಲಿ ಶಮ್ಮಿ ಕಪೂರ್ ಹಾಡುವ ರಾಷ್ಟ್ರೀಯ ಸಮನ್ವತೆಯನ್ನು  ಸಾರುವ ಈ ಹಾಡು ಬರೆದವರು ರಾಜೇಂದ್ರ ಕಿಶನ್.  ಶೈಲೇಂದ್ರ ಅವರ ನಿಧನದ ನಂತರ  ಇವರು ಶಂಕರ್ ಜೈಕಿಶನ್ ಬಳಗಕ್ಕೆ ಸೇರ್ಪಡೆಯಾಗಿದ್ದರು.

40. ಅಪ್‍ನೆ ರುಖ್ ಪರ್ ನಿಗಾಹ ಕರ್‌ನೇ ದೇ
ಆ ಕಾಲದಲ್ಲಿ ಮುಸ್ಲಿಂ ಸೋಶಿಯಲ್  ಎಂದು ಕರೆಯಲ್ಪಡುವ ಕೆಲವು ಚಿತ್ರಗಳು ತಯಾರಾಗುತ್ತಿದ್ದವು. ಚೌದವೀಂ ಕಾ ಚಾಂದ್, ಮೇರೇ ಮೆಹಬೂಬ್, ಪಾಲ್ಕಿ ಮುಂತಾದವುಗಳಂತೆ  ಮೇರೇ ಹುಜೂರ್ ಕೂಡ ಅಂಥದ್ದೇ ಚಿತ್ರ. ನಾಯಕಿ ಮಾಲಾ ಸಿನ್ಹಾ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಜಿತೇಂದ್ರ ಆಕೆಯನ್ನು ನೋಡಿ ಈ ಹಾಡು ಹಾಡುತ್ತಾನೆ. ಸಾಹಿತ್ಯ ಹಸರತ್ ಜೈಪುರಿ. ಸಂಗೀತ ಶಂಕರ್ ಜೈಕಿಶನ್

41. ಫಲಕ್ ಪೆ ಜಿತ್ನೆ ಸಿತಾರೆ

ಇದು ಕೂಡ ಮೇರೇ ಹುಜೂರ್ ಚಿತ್ರದ್ದೇ.  ಹಿಂದಿನ ಹಾಡಿನ ಸೌಮ್ಯತೆಗೆ   ವಿರುದ್ಧವಾಗಿ ಇದು ಏರು ಸ್ಥಾಯಿಯ ಹತಾಶ ಭಾವವನ್ನು ಪ್ರದರ್ಶಿಸುತ್ತದೆ.

42. ಕರಾರ್ ಖೋಯಾ ಮೊಹಬ್ಬತ್ ಮೆಂ

ರಾಜೇಂದ್ರ ಕುಮಾರ್, ಬಬಿತಾ ಅಭಿನಯದ ಅಂಜಾನಾ ಚಿತ್ರದ ಮಾಧುರ್ಯಪೂರ್ಣ ಹಾಡು ಇದು.  ಆನಂದ್ ಬಕ್ಷಿ ಅವರ ಸಾಹಿತ್ಯಕ್ಕೆ ಲಕ್ಷ್ಮೀ ಪ್ಯಾರೆ ಸಂಗೀತ ಇತ್ತು.

43. ನಜರ್ ವೊ
ಜೊ ದುಶ್ಮನ್ ಪೆ ಭಿ ಮೆಹರ್‌ಬಾನ್ ಹೊ
ಜೆ. ಓಂಪ್ರಕಾಶ್ ಅವರ ಆಯಾ ಸಾವನ್ ಝೂಮ್ ಕೆ ಚಿತ್ರದಲ್ಲಿ ಧರ್ಮೇಂದ್ರ ಮತ್ತು ಆಶಾ ಪಾರೇಖ್ ಮುಖ್ಯ ಪಾತ್ರಗಳಲ್ಲಿದ್ದರು.  ಆ ಚಿತ್ರದಲ್ಲಿ ಒಂದಕ್ಕಿಂತ ಒಂದು ಮಿಗಿಲಾದ ಏಳು ಹಾಡುಗಳಿದ್ದು `Seven Songs Are Seven Steps To Heaven' ಎಂದು ಚಿತ್ರದ ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಚಿತ್ರಕ್ಕೂ ಆನಂದ್ ಬಕ್ಷಿ ಅವರ ಸಾಹಿತ್ಯ ಮತ್ತು ಲಕ್ಷ್ಮೀ ಪ್ಯಾರೆ ಸಂಗೀತ ಇತ್ತು.

44. ಯೇ ರಾತ್ ಜೈಸೆ ದುಲ್ಹನ್

ಟ್ರಾಜಿಡಿ ಕಿಂಗ್ ಎಂದೇ ಪ್ರಸಿದ್ಧರಾಗಿದ್ದ ದಿಲೀಪ್ ಕುಮಾರ್ ತಾನು ಲಘು ಶೈಲಿಯ ಹಾಸ್ಯಭರಿತ ಪಾತ್ರಗಳನ್ನೂ ಅಷ್ಟೇ ಲೀಲಾಜಾಲವಾಗಿ ನಿಭಾಯಿಸಬಲ್ಲೆ ಎಂದು ಸಾಬೀತು ಪಡಿಸಿದ ರಾಮ್ ಔರ್ ಶ್ಯಾಮ್ ಚಿತ್ರದ ಪಿಯಾನೋ ಹಾಡಿದು. ನೌಷಾದ್, ಶಕೀಲ್ ಬದಾಯೂನಿ ಟೀಮಿನ ಕೊನೆಯ ಕೆಲವು ಸಫಲ  ಚಿತ್ರಗಳ ಪೈಕಿ ಇದು ಒಂದು.  ಯಾವುದಾದರೂ ನೆಪದಲ್ಲಿ ಊರಿಂದ ಮಂಗಳೂರಿಗೆ ಬಂದು ವರ್ಷಕ್ಕೆ  ಒಂದೆರಡು ಸಿನಿಮಾಗಳನ್ನಾದರೂ ನೋಡುವ ಪ್ರಯತ್ನ ನಾನು ಮಾಡುತ್ತಿದ್ದೆ.  ನಾನು ಟಾಕೀಸು ತಲುಪುವಷ್ಟರಲ್ಲಿ ಹೌಸ್ ಫುಲ್ ಆಗಿ ಟಿಕೇಟು ಸಿಗದೆ ನನ್ನನ್ನು ನಿರಾಶೆಗೊಳಿಸಿದ್ದ ಮೊದಲ ಸಿನಿಮಾ ಇದು. ಉದ್ಯೋಗ ಸಿಕ್ಕಿದ ಮೇಲೆ ಈ ಚಿತ್ರ  ಮರುಬಿಡುಗಡೆ ಆದಾಗ ನೋಡಿ ಮನಸಾರೆ ಆನಂದಿಸಿದೆ ಎನ್ನಿ.

45.  ತೇರಿ ಮೊಹಬ್ಬತ್ ಪೆ ಶಕ್ ನಹೀಂ ಹೈ

ದಿಲೀಪ್ ಕುಮಾರ್, ನೌಷಾದ್, ಶಕೀಲ್ ಸಹಯೋಗದ ಇನ್ನೊಂದು ಚಿತ್ರ ಆದ್ಮಿ. ಅದರಲ್ಲಿ ತನ್ನ ಪತ್ನಿಯ ಶೀಲವನ್ನು ಶಂಕಿಸಿ ನಾಯಕ ಹಾಡುವ ಹಾಡು ಇದು.  ಈ ಹಾಡು ಬೇರೆಯೇ ಧಾಟಿಯಲ್ಲಿ  ಮಹೇಂದ್ರ ಕಪೂರ್ ಧ್ವನಿಯಲ್ಲೂ ರೆಕಾರ್ಡ್ ಆಗಿದ್ದು ಅಂತರ್ಜಾಲದಲ್ಲಿ ಕೇಳಲು ಲಭ್ಯ ಇದೆ.
 
46. ದಿಲ್ ಪಾಯಾ ಅಲಬೇಲಾ ಮೈನೆ
ದಿಲೀಪ್ ಕುಮಾರ್ ಮತ್ತು ವೈಜಯಂತಿಮಾಲಾ ಮುಖ್ಯ ಭೂಮಿಕೆಯಲ್ಲಿದ್ದು ನೌಷಾದ್ ಅವರದ್ದೇ ಸಂಗೀತವಿದ್ದ ಸಂಘರ್ಷ್ ಚಿತ್ರದ ಈ ಹಾಡಿನ ಮೂಡು 17ನೇ ನಂಬರಿನ ಗಂಗಾ ಜಮುನಾ ಚಿತ್ರದ ಹಾಡಿನಂಥದ್ದೇ. ಎಲ್ಲ ಹಾಡುಗಳೂ ಸುಶ್ರಾವ್ಯವಾಗಿದ್ದ  ಈ ಚಿತ್ರ ವ್ಯಾವಹಾರಿಕವಾಗಿ ಅಷ್ಟೊಂದು ಯಶಸ್ಸು ಪಡೆಯಲಿಲ್ಲ.

47. ಉನ್ ಕಿ ಜುಲ್ಫೆಂ ಉನ್ಕೆ ಚೆಹೆರೆ ಸೆ

ಲಿಖೆ ಜೊ ಖತ್ ತುಝೆ ಹಾಡಿನಿಂದಾಗಿ ಎಲ್ಲರಿಗೂ ಗೊತ್ತಿರುವ ಕನ್ಯಾದಾನ್ ಚಿತ್ರದ ಇನ್ನೊಂದು ಚಂದದ ಹಾಡು ಇದು. ಹಸರತ್ ಜೈಪುರಿ ಸಾಹಿತ್ಯಕ್ಕೆ ಶಂಕರ್ ಜೈಕಿಶನ್ ಸಂಗೀತ ಇದೆ.
 
48. ಪಲಕ್ ಸೆ ತೋಡ್ ಕರ್ ಸಿತಾರೆ
ರಾಜೇಶ್ ಖನ್ನಾ ಯುಗಾರಂಭದ ಚಿತ್ರಗಳಾದ ಆರಾಧನಾ,  ದೋ ರಾಸ್ತೆ, ದ ಟ್ರೇನ್ ಮುಂತಾದವುಗಳಲ್ಲಿ ರಫಿ ಹಾಡುಗಳಿದ್ದಂತೆ ಆನ್ ಮಿಲೋ ಸಜ್‌ನಾದಲ್ಲೂ ಇದ್ದವು. ಇದು ಆ ಚಿತ್ರದಲ್ಲಿ ನಾಯಕಿಯ ಜನ್ಮ ದಿನದಂದು ನಾಯಕ ಹಾಡುವ ಹಾಡು.

49. ಶಬಾಬ್ ಪೆ ಮೈ ಜರಾ ಸಿ

ಆರಾಧನೋತ್ತರ ಕಾಲದ ಕೆಲವು ವರ್ಷ  ವಿವಿಧ ಕಾರಣಗಳಿಂದ ಹಿನ್ನೆಲೆ ಗಾಯನ ಕ್ಷೇತ್ರದ ತನ್ನ ಪಾರಮ್ಯ ಗ್ರಹಣಗ್ರಸ್ತವಾದರೂ ರಫಿ ಮತ್ತೆ ಮುಂಚೂಣಿಯತ್ತ ಸಾಗಿ ರಿಷಿ ಕಪೂರ್ ಅವರಂಥ ಆಗಿನ ಕಾಲದ ಮೂರನೆ ಪೀಳಿಗೆಯ ಯುವ ನಟರಿಗೂ ಹಾಡುವಂತಾದದ್ದು ಅಚ್ಚರಿಯೇ. ಇದರಲ್ಲಿ ಮದನ್ ಮೋಹನ್ ಮತ್ತು ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರ ಕೊಡುಗೆ ಸಾಕಷ್ಟು ಇದೆ. ರಫಿ ಫುಲ್ ಜೋಶಲ್ಲಿ ಹಾಡಿದ ಅಮರ್ ಅಕ್ಬರ್ ಆಂಟನಿ ಚಿತ್ರದ ಈ ಕವ್ವಾಲಿ ಎಲ್ಲರಿಗೂ ಗೊತ್ತಿರುವಂಥದ್ದೇ. ಅನೇಕ ವರ್ಷಗಳ ನಂತರ ಮತ್ತೆ ಇದರಲ್ಲಿ ರಫಿಯ ಸಾಕಿ ಗಾಯನ ಕೇಳಲು ಸಿಕ್ಕಿತು.
 
50. ತೂ ಕಹೀಂ ಆಸ್ ಪಾಸ್ ಹೈ ದೋಸ್ತ್
ಹೀಗೆ ವೈವಿಧ್ಯಮಯ ಸಾಕಿ ಗೀತಗಳನ್ನು ಹಾಡಿ ನಮ್ಮನ್ನು ರಂಜಿಸಿದ ಮಹಮ್ಮದ ರಫಿ ಕೊನೆಯದಾಗಿ ರೆಕಾರ್ಡ್ ಮಾಡಿದ್ದೂ ಸಾಕಿ ಶೈಲಿಯ ಸಾಲುಗಳನ್ನೇ. 1980 ಜುಲೈ 31ರಂದು ಜಗತ್ತಿಗೆ ವಿದಾಯ ಹೇಳುವ ಒಂದು ದಿನ ಮೊದಲು ಲಕ್ಷ್ಮೀಕಾಂತ್ ಪ್ಯಾರೇಲಾಲ್ ನಿರ್ದೇಶನದಲ್ಲಿ ಆಸ್‌ಪಾಸ್ ಚಿತ್ರಕ್ಕಾಗಿ ಅವರು ಈ ಸಾಲುಗಳನ್ನು ಹಾಡಿದರು. ಆದರೆ ಈ ಸಾಲುಗಳ ನಂತರ ಹಾಡು ಇಲ್ಲ.



ಈ ಬರಹ 50 ಹಾಡುಗಳ ಉಲ್ಲೇಖ ಹೊಂದಿ ಗಜ ಗಾತ್ರಕ್ಕೆ ಬೆಳೆದಿರುವುದರಿಂದ ಪ್ಲೇಯರ್‌ನ ಅಷ್ಟು ಆವೃತ್ತಿಗಳು ಲೋಡ್ ಆಗಲು ಕಷ್ಟ ಆಗಬಹುದು.  ಹಾಗಾಗಿ ಇಲ್ಲಿ ಕೆಳಗೆ ಕಾಣಿಸುವ ಹಾಡುಗಳ ಪಟ್ಟಿಯನ್ನು  Scroll ಮಾಡುತ್ತಾ ಬೇಕಿದ್ದ ತುಣುಕು ಆರಿಸಿ ಆಲಿಸಬಹುದು. ಆಲಿಸಿದ ಮೇಲೆ ಬಲ ಮೂಲೆಯಲ್ಲಿರುವ x  ಮಾರ್ಕ್ ಕ್ಲಿಕ್ಕಿಸಿದರೆ ಮತ್ತೆ ಪಟ್ಟಿ ಕಾಣಿಸುತ್ತದೆ.  Log in, Sign up ಗಳ ಮೇಲೆ ಕ್ಲಿಕ್ಕಿಸಬೇಡಿ. ಪಟ್ಟಿ ಮೂರು ಭಾಗಗಳಲ್ಲಿರುವುದನ್ನು ಗಮನಿಸಿ.

  





Wednesday 28 April 2021

ದಮ್ ಹೊಡಿ ದಮ್

ನೀವು 60ರ ದಶಕದಲ್ಲಿ ಅಥವಾ ಮುಂಚೆ ಜನಿಸಿದವರಾಗಿದ್ದು ರೇಡಿಯೊ ಸಿಲೋನಿನ ಮಧ್ಯಾಹ್ನದ ಕನ್ನಡ ಹಾಡುಗಳನ್ನು ಕೇಳುವ ಅಭ್ಯಾಸ ಇದ್ದವರಾಗಿದ್ದರೆ ಈ ಶೀರ್ಷಿಕೆ ನೋಡಿದ ತಕ್ಷಣ ನಿಮ್ಮ ಮೈಗೆಲ್ಲ ಝುಂ ಅನ್ನಿಸುವುದರಲ್ಲಿ ಅನುಮಾನವಿಲ್ಲ. ಏಕೆಂದರೆ 70ರ ದಶಕದ ಆದಿ ಭಾಗದಲ್ಲಿ ಈ ‘ನವ್ಯಗೀತೆ’ ಆ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿದ್ದುದನ್ನು ನೀವು ಕೇಳಿರುತ್ತೀರಿ.  ಮೊದಲು ವಾರಕ್ಕೆ ಒಂದು ದಿನ 15 ನಿಮಿಷ ಕನ್ನಡ ಹಾಡುಗಳನ್ನು ಪ್ರಸಾರಿಸುತ್ತಿದ್ದ ರೇಡಿಯೊ ಸಿಲೋನ್ ಆಗಷ್ಟೇ ನಿತ್ಯವೂ ಅರ್ಧ ಗಂಟೆ ಸಮಯವನ್ನು ಕನ್ನಡಕ್ಕಾಗಿ ಮೀಸಲಿಡತೊಡಗಿತ್ತು. ಕನ್ನಡ ಚಿತ್ರಗೀತೆಗಳೊಂದಿಗೆ ಭಾರತದ ಯಾವ ಆಕಾಶವಾಣಿ ನಿಲಯವೂ ಪ್ರಸಾರ ಮಾಡದಿದ್ದ ತುಳು ಸಿನಿಮಾ ಹಾಡುಗಳನ್ನು ಮತ್ತು ಸಿನಿಮಾದ್ದಲ್ಲದ ಇಂತಹ ಕನ್ನಡ  ‘ನವ್ಯಗೀತೆ’ಗಳನ್ನು ಅಲ್ಲಿಂದ ಮಾತ್ರ ಕೇಳಲು ಸಾಧ್ಯವಿದ್ದುದು.

50ರ ದಶಕದಲ್ಲಿ ಮುಖ್ಯವಾಗಿ ಮಹಾತ್ಮಾ ಪಿಕ್ಚರ್ಸ್ ನಿರ್ಮಾಣದ  ಚಿತ್ರಗಳಲ್ಲಿ ಹಿಂದಿ ಧಾಟಿಯ ಹಾಡುಗಳೇ ಇರುವುದು ಸಾಮಾನ್ಯವಾಗಿತ್ತು.  ಕ್ರಮೇಣ ನಮ್ಮ ಸಂಗೀತ ನಿರ್ದೇಶಕರು ಸ್ವಂತಿಕೆ  ಮೆರೆಯತೊಡಗಿ ಈ ಪದ್ಧತಿ ಮರೆಯಾಗಿತ್ತು.  ಆದರೆ 70ರ ದಶಕ ಆರಂಭವಾಗುತ್ತಿದ್ದಂತೆ ಕನ್ನಡದ ಮೇಲೆ ಹಿಂದಿ ಸಿನಿಮಾ ಹಾಡುಗಳು ಮತ್ತೆ   ಪ್ರಭಾವ ಬೀರತೊಡಗಿದ್ದವು. ಕಸ್ತೂರಿ ನಿವಾಸದ ನೀ ಬಂದು ನಿಂತಾಗ ಹಾಡು ಇಶ್ಕ್ ಪರ್ ಜೋರ್ ನಹೀಂ ಚಿತ್ರದ ಯೇ ದಿಲ್ ದೀವಾನಾ ಹೈ ಹಾಡಿನಿಂದ, ಪ್ರತಿಧ್ವನಿ ಚಿತ್ರದ ಸರಿ ನಾ ಹೋಗಿ ಬರುವೆ ಹಾಡು ಆನ್ ಮಿಲೋ ಸಜನಾ ಚಿತ್ರದ ಅಚ್ಛಾ ತೊ ಹಮ್ ಚಲತೇ ಹೈಂ ಹಾಡಿನಿಂದ ಪ್ರೇರಿತವಾಗಿದ್ದುದು ಸ್ಪಷ್ಟವಾಗಿ ತಿಳಿಯುತ್ತದೆ.  ಆಗ ಸೀಮಿತ ಸಂಖ್ಯೆಯಲ್ಲಿ ಕನ್ನಡ ಚಿತ್ರಗಳು ತಯಾರಾಗುತ್ತಿದ್ದು ದಕ್ಷಿಣ ಭಾರತದಲ್ಲಿ ಹೆಚ್.ಎಂ.ವಿ.ಗಾಗಿ ಗ್ರಾಮೊಫೋನ್ ರೆಕಾರ್ಡುಗಳ ತಯಾರಿಯ ಜವಾಬ್ದಾರಿ ಹೊತ್ತಿದ್ದ  ಮದ್ರಾಸಿನ ಸರಸ್ವತಿ ಸ್ಟೋರ್ಸ್ ಕನ್ನಡ ವಿಭಾಗವನ್ನೇ ಮುಚ್ಚುವ ತಯಾರಿ ಮಾಡಿತ್ತು.  ಆಗ ಅಲ್ಲಿ ಕನ್ನಡ ವಿಭಾಗದ ಜವಾಬ್ದಾರಿ ವಹಿಸಿಕೊಂಡ ಹೆಚ್.ಎಂ. ಮಹೇಶ್  ಅವರ ಮುತುವರ್ಜಿಯಿಂದ ಕನ್ನಡ ರೆಕಾರ್ಡುಗಳ ತಯಾರಿ ಮತ್ತು ಮಾರಾಟ ಅಭಿವೃದ್ಧಿಯಾಗಿ ಪರಿಸ್ಥಿತಿ ಸುಧಾರಿಸಿತು. ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ ಮುಂತಾದವರು ಹಾಡಿದ ಅನೇಕ ಭಕ್ತಿ ಗೀತೆಗಳ ಜೊತೆಗೆ ಹಿಂದಿ ಹಾಡುಗಳ ಜನಪ್ರಿಯತೆಯ ಲಾಭ ಪಡೆದು ಅವುಗಳ ಧಾಟಿಯಲ್ಲಿ ಆರ್.ಎನ್. ಜಯಗೋಪಾಲ್ ರಚಿಸಿ  ರೆಕಾರ್ಡ್ ಆದ ಕೆಲವು ಹಾಡುಗಳು ಮಾರಾಟ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದವು. ಮೈಗೆಲ್ಲ ಝುಂ ಅನ್ನಿಸುವಂತೆ ಮಾಡುವ ಅಂಥ ಕೆಲವು ‘ನವ್ಯಗೀತೆ’ಗಳನ್ನು ಈಗ ಆನಂದಿಸೋಣ.  ಅವುಗಳನ್ನೊದಗಿಸಿದ ಶ್ರೀನಾಥ್ ಮಲ್ಯ ಅವರಿಗೆ ಕೃತಜ್ಞತೆಗಳನ್ನೂ ಸಲ್ಲಿಸೋಣ.

01. ದಮ್ ಹೊಡಿ ದಮ್
ಹರೇ ರಾಮ ಹರೇ ಕೃಷ್ಣ ಚಿತ್ರಕ್ಕಾಗಿ ಆರ್.ಡಿ. ಬರ್ಮನ್ ಸಂಯೋಜಿಸಿದ ದಮ್ ಮಾರೋ ದಮ್ ಧಾಟಿಯ ಈ ಹಾಡನ್ನು ಆಶಾ ಭೋಸ್ಲೆಗೆ ಸರಿಸಾಟಿಯಾಗಿ ಎಲ್.ಆರ್. ಈಶ್ವರಿ ಹಾಡಿದ್ದಾರೆ.  ಮಾದಕ ವ್ಯಸನದ ಕೆಡುಕುಗಳ ಬಗ್ಗೆ ಸಂದೇಶ ಸಾರುವ ಚಿತ್ರ ಮಾಡಲು ಹೊರಟಿದ್ದ   ದೇವಾನಂದ್ ಅವರಿಗೆ ನಶೆಯನ್ನು ವೈಭವೀಕರಿಸುವ ದಮ್ ಮಾರೋ ದಮ್ ಹಾಡು ಸ್ವಲ್ಪವೂ ಇಷ್ಟವಿರಲಿಲ್ಲವಂತೆ. ಆರ್.ಡಿ. ಬರ್ಮನ್ ಒತ್ತಾಯಕ್ಕೆ ಮಣಿದ ದೇವ್ ಕೊನೆಗೆ ಒಂದು ಚರಣವನ್ನು ಮಾತ್ರ ಚಿತ್ರದಲ್ಲಿ ಬಳಸಿಕೊಂಡರು. ಆದರೆ ಚಿತ್ರದ ಹಾಡುಗಳ ಪೈಕಿ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿದ್ದು ಇದೇ.  ಹಿಂದಿಯಲ್ಲಿ ಮೊದಲು ಈ ಹಾಡು ಆಗ ಉಷಾ ಅಯ್ಯರ್ ಆಗಿದ್ದ ಉಷಾ ಉತ್ತುಪ್ ಧ್ವನಿಯಲ್ಲಿ ರೆಕಾರ್ಡ್ ಆಗಿತ್ತಂತೆ.
 
02. ಕನಸಲ್ಲಿ ನಿಮ್ಮನ್ನು
ದಮ್ ಹೊಡಿ ದಮ್ ಹಾಡು ಆಗ ಏರುತ್ತಿರುವ ಸೂರ್ಯನಾಗಿದ್ದ ಆರ್.ಡಿ. ಬರ್ಮನ್ ಧಾಟಿಯನ್ನಾಧರಿಸಿದ್ದರೆ ಈ ಹಾಡು ಶಂಕರ್ ಜೈಕಿಶನ್ ಎಂಬ ಅಸ್ತಮಿಸುತ್ತಿದ್ದ ಸೂರ್ಯನ ಜಿಂದಗಿ ಎಕ್ ಸಫರ್ ಹೈ ಸುಹಾನಾ ಹಾಡಿನ ಅನುಕರಣೆ.  ಇದನ್ನೂ ಎಲ್.ಆರ್. ಈಶ್ವರಿಯೇ ಹಾಡಿದ್ದಾರೆ. ಕಿಶೋರ್ ಕುಮಾರ್, ಆಶಾ ಭೋಸ್ಲೆ ಮತ್ತು ರಫಿ ಧ್ವನಿಯ ಮೂರು ಅವತರಣಿಕೆಗಳಿದ್ದ ಅಂದಾಜ್ ಚಿತ್ರದ ಈ ಹಾಡು ಆ ಸಲ ವಾರ್ಷಿಕ ಬಿನಾಕಾ ಗೀತ್ ಮಾಲಾದಲ್ಲಿ ಪ್ರಥಮ ಸ್ಥಾನವನ್ನಲಂಕರಿಸಿತ್ತು. ಕನ್ನಡ ಹಾಡಿನಲ್ಲಿ ಕಿಶೋರ್ ಮತ್ತು ಆಶಾ ಎರಡೂ ವರ್ಷನ್‌ಗಳ ಉತ್ತಮ ಅಂಶಗಳನ್ನು ಅಳವಡಿಸಿದ್ದಷ್ಟೇ ಅಲ್ಲದೆ ಹಿನ್ನೆಲೆ ವಾದ್ಯ ಸಂಗೀತದಲ್ಲಿ ಆಕರ್ಷಕವಾದ ಹೆಚ್ಚುವರಿ ಪಲುಕುಗಳನ್ನೂ  ಸೇರಿಸಲಾಗಿದೆ.
 
03. ಹರೆಯ ಅದು ಬಂದಂಥ ಸಮಯ
ಯುವ ಪ್ರೇಮಿಗಳ ಕಥೆ ಬಾಬ್ಬಿಯ ಹಂ ತುಮ್ ಎಕ್ ಕಮರೇ ಮೆಂ ಬಂದ್ ಹೋಂ ಧಾಟಿಯ ಈ ಗೀತೆಯನ್ನು ಬಿ.ಕೆ. ಸುಮಿತ್ರಾ ಮತ್ತು ಸಿದ್ಧಾರ್ಥ್ ಬಲು ಸೊಗಸಾಗಿ ಹಾಡಿದ್ದಾರೆ. ಶಂಕರ್ ಮತ್ತು ರಾಜ್‌ಕಪೂರ್ ಅವರಿಗೆ ಕೊನೆ ಕೊನೆಗೆ ಅಷ್ಟೇಕೋ ಹೊಂದಿ ಬರುತ್ತಿರಲಿಲ್ಲ.  ಜೈಕಿಶನ್ ಆಗಷ್ಟೇ ತೀರಿ ಹೋಗಿದ್ದರು.  ಹೀಗಾಗಿ ಬಾಬ್ಬಿ ಚಿತ್ರ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಪಾಲಾಯಿತು.  ಅವರು ಒಪ್ಪದೆ ಇದ್ದರೆ  ರಾಜ್ ಕಪೂರ್ ಅವರ ಎರಡನೇ ಆಯ್ಕೆ ಕಲ್ಯಾಣ್‌ಜೀ ಆನಂದ್‌ಜೀ ಆಗಿದ್ದರಂತೆ.
 
04. ಚಂದಿರ ವದನೆ ಸುಂದರ ನಯನೆ
ಮೇರಾ ನಾಮ್ ಜೋಕರ್ ಚಿತ್ರದ ಕಹತಾ ಹೈ ಜೋಕರ್ ಧಾಟಿಯ ಚಂದಿರ ವದನೆ ಸುಂದರ ನಯನೆ ಎಂಬ ಈ ಹಾಡನ್ನೂ ನಾನು 50 ವರ್ಷ ಹಿಂದೆ ರೇಡಿಯೊ ಸಿಲೋನಿನಲ್ಲಿ ಮಾತ್ರ ಒಂದೆರಡು ಸಾರಿ ಕೇಳಿದ್ದೆ. ಇದರ ಸಾಹಿತ್ಯದಲ್ಲಿ ಉತ್ತರ ಕರ್ನಾಟಕದ ಕೆಲವು ಪದಗಳೂ ಇವೆ. ಹಾಡಿದವರು ಅಂಬರ್ ಕುಮಾರ್ ಎಂಬ ಮುಂಬಯಿಯ ಹಾಡುಗಾರ.  ಇವರು HMVಗಾಗಿ ಕೆಲವು ಅಧಿಕೃತ ‘ವರ್ಷನ್’ ಹಾಡುಗಳನ್ನು ಹಾಡಿದ ವಿವರ ಮುಂದೆ ಇದೆ. ಕನ್ನಡದ ಕಲ್ಪವೃಕ್ಷ ಚಿತ್ರದ ಜಯತೇ ಜಯತೇ ಹಾಡಲ್ಲಿ ಮನ್ನಾಡೇ ಅವರೊಂದಿಗೆ ಇವರ  ಧ್ವನಿಯೂ ಇದೆ. ಮೇರಾ ನಾಮ್ ಜೋಕರ್ ಚಿತ್ರ ಮತ್ತು ಅದರ ಹಾಡುಗಳಿಗಾಗಿ ನಾವು ಸುಮಾರು ಏಳು ವರ್ಷ ಪ್ರತೀಕ್ಷೆ ಮಾಡಬೇಕಾಗಿ ಬಂದಿತ್ತು.  ಸಂಗಂ ಚಿತ್ರದ ಯಶಸ್ಸಿನ ನಂತರ 1964ರಲ್ಲೇ ಮೇರಾ ನಾಮ್ ಜೋಕರ್ ಚಿತ್ರದ ಘೋಷಣೆಯಾಗಿತ್ತು.  ಮುಂದಿನ ವರ್ಷಗಳಲ್ಲಿ ಮುಕೇಶ್ ಹಾಡಿದ ಯಾವ ಹೊಸ ಹಾಡು ರೇಡಿಯೋದಲ್ಲಿ ಕೇಳಿಸಿದರೂ ಜೋಕರ್ ಚಿತ್ರದ್ದಿರಬಹುದೇ ಎಂದು ಕಿವಿ ಅಗಲ ಮಾಡಿ ಆಲಿಸುವುದಿತ್ತು.  ರಾಜ್ ಚಿತ್ರದ ದಿಲ್ ಸಂಭಾಲೇ  ಸಂಭಲ್‌ತಾ ನಹೀಂ ರಾಜ್ ಕೋ ಎಂಬ ಹಾಡು ಕಲ್ಯಾಣ್‌ಜೀ ಆನಂದಜೀ ಅವರದಾದರೂ ಶಂಕರ್ ಜೈಕಿಶನ್ ಶೈಲಿಯಲ್ಲಿ ಇದ್ದುದರಿಂದ ಅದು ಜೋಕರ್ ಚಿತ್ರದ್ದೇ ಇರಬಹುದು ಎಂದು ಊಹಿಸಿ ನಾನು ಬೇಸ್ತು ಬಿದ್ದಿದ್ದೆ. ಕೊನೆಗೆ 1971ರಲ್ಲಿ ಜೋಕರ್ ಚಿತ್ರದ ಹಾಡುಗಳು ಬಿಡುಗಡೆ ಆದಾಗ ನಾನು ಮೊದಲು ಕೇಳಿದ್ದು ಈ ಕಹತಾ ಹೈ ಜೋಕರ್ ಹಾಡೇ.
 
ಈ ಎಲ್ಲ ಹಾಡುಗಳನ್ನು ಹೆಚ್.ಎಂ.ವಿ ಸಂಸ್ಥೆ ಅಧಿಕೃತವಾಗಿ ಬಿಡುಗಡೆ ಮಾಡಿರುವುದು ಗಮನಿಸಬೇಕಾದ ಅಂಶ.  ಕೇಳುಗರನ್ನು ಆಕರ್ಷಿಸಲು ಹೆಚ್.ಎಂ.ವಿ ಈ ಮೊದಲೂ ಇಂಥ ತಂತ್ರಗಳನ್ನು ಅನುಸರಿಸಿದ್ದುಂಟು. ಇನೋಕ್ ಡೇನಿಯಲ್ಸ್ ಅವರು ಪಿಯಾನೋ ಎಕಾರ್ಡಿಯನ್, ಮಾಸ್ಟರ್ ಇಬ್ರಾಹಿಂ ಅವರು ಕ್ಲಾರಿನೆಟ್, ಹಜಾರಾ ಸಿಂಗ್ ಅವರು ಎಲೆಕ್ಟ್ರಿಕ್ ಗಿಟಾರ್ ಇತ್ಯಾದಿಗಳಲ್ಲಿ ನುಡಿಸಿದ ಪ್ರಸಿದ್ಧ ಹಿಂದಿ ಹಾಡುಗಳನ್ನು ಅವರು ತಮ್ಮ ಸ್ಟುಡಿಯೋದ ವಾದ್ಯವೃಂದದೊಡನೆ ಧ್ವನಿಮುದ್ರಿಸಿ ಲಾಗಾಯ್ತಿನಿಂದಲೂ ರೆಕಾರ್ಡುಗಳನ್ನು ತಯಾರಿಸುತ್ತಾ ಬಂದಿದ್ದಾರೆ. ಇವುಗಳನ್ನು ಬಳಸಿ ರೇಡಿಯೋ ಸಿಲೋನ್ ಪ್ರತಿನಿತ್ಯ ಬೆಳಗ್ಗೆ 7 ರಿಂದ 7-15ರ ವರೆಗೆ ವಾದ್ಯಸಂಗೀತ್ ಎಂಬ ಕಾರ್ಯಕ್ರಮವನ್ನು ನಿಯಮಿತವಾಗಿ ಪ್ರಸಾರ ಮಾಡುತ್ತಿತ್ತು.  ಅಪರೂಪಕ್ಕೆ ಪ್ರಸಿದ್ಧ ಹಿಂದಿ ಹಾಡುಗಳ ಧಾಟಿಯಲ್ಲಿ  ಕನ್ನಡ ಹಾಡುಗಳನ್ನು  ಹಾಡಿಸಿ ರೆಕಾರ್ಡ್ ತಯಾರಿಸಿದ್ದೂ ಉಂಟು.

05. ನಿನ್ನನೆ ನೆನೆಯುತ ರಾತ್ರಿಯ ಕಳೆದೆ
ರೋಶನ್ ಸಂಗೀತವಿದ್ದ ಅಜೀ ಬಸ್ ಶುಕ್ರಿಯಾ ಚಿತ್ರದ ಸಾರಿ ಸಾರಿ ರಾತ್ ತೇರಿ ಯಾದ್ ಸತಾಯೆ ಧಾಟಿಯಲ್ಲಿ ಇದನ್ನು ಅಮೀರ್ ಬಾಯಿ ಕರ್ನಾಟಕಿ  ಹಾಡಿದ್ದರು

06. ವಾರಿ ನೋಟ ನೋಡಿ
ಓ.ಪಿ. ನಯ್ಯರ್ ಸಂಗೀತದ ಫಾಗುನ್ ಹಾಡು ಎಕ್ ಪರ್‌ದೇಸಿ ಮೇರಾ ದಿಲ್ ಲೇ ಗಯಾ ಧಾಟಿಯಲ್ಲಿ ಇದನ್ನೂ ಅಮೀರ್ ಬಾಯಿ ಕರ್ನಾಟಕಿ ಹಾಡಿದ್ದರು. 

07. ತಲತ್ ಧ್ವನಿಯಲ್ಲಿ ಚಲ್ ಉಡ್ ಜಾರೇ ಪಂಛಿ
ಹೆಚ್.ಎಂ.ವಿ ಇನ್ನೊಂದು ಪ್ರಯೋಗ ಮಾಡಿ ಭಾಭಿ ಚಿತ್ರಕ್ಕಾಗಿ ರಫಿ ಹಾಡಿದ ಚಲ್ ಉಡ್ ಜಾರೇ ಪಂಛಿ ಹಾಡನ್ನು  ತಲತ್ ಮಹಮೂದ್  ಅವರಿಂದಲೂ ಹಾಡಿಸಿ ಧ್ವನಿಮುದ್ರಿಕೆ ಬಿಡುಗಡೆ ಮಾಡಿತ್ತು.

ಹಮ್ ಕಾಲೇ ಹೈಂ ತೊ ಕ್ಯಾ ಹುವಾ ದಿಲ್‌ವಾಲೆ ಹೈ ಧಾಟಿಯಲ್ಲಿ The she I love is the beautiful beautiful dream comes true ಹಾಗೂ ಬಹಾರೋ ಫೂಲ್ ಬರ್‌ಸಾವೊ ಧಾಟಿಯಲ್ಲಿ Although we hail from different lands ಎಂದು ರಫಿಯೇ ಹಾಡಿದ  ಇಂಗ್ಲಿಷ್ ಧ್ವನಿಮುದ್ರಿಕೆಗಳು ತಯಾರಾದದ್ದು  ಇನ್ನೂ ಕೆಲವು ಉದಾಹರಣೆಗಳು.

ಅದುವರೆಗೆ ಏಕಸ್ವಾಮ್ಯ ಹೊಂದಿದ್ದ ಹೆಚ್.ಎಂ.ವಿ.ಗೆ ಪ್ರತಿಸ್ಪರ್ಧಿಯಾಗಿ 70ರ ದಶಕದಲ್ಲಿ ಪೊಲಿಡೋರ್ ಎಂಬ ರೆಕಾರ್ಡ್ ತಯಾರಿಸುವ ಸಂಸ್ಥೆ  ಹುಟ್ಟಿಕೊಂಡಿತು. ಸಚ್ಚಾ ಝೂಟಾ, ಗ್ಯಾಂಬ್ಲರ್, ಜೋನಿ ಮೇರಾ ನಾಮ್,  ತೇರೇ ಮೇರೆ ಸಪ್‌ನೇ ಮುಂತಾದ ಚಿತ್ರಗಳ ರೆಕಾರ್ಡುಗಳನ್ನು ಆ ಕಂಪೆನಿ ತಯಾರಿಸಿತು. ಸೋಲೊಪ್ಪಿಕೊಳ್ಳದ  ಹೆಚ್.ಎಂ.ವಿ ಕಾಪಿ ರೈಟ್ ಕಾಯಿದೆಯ ಲೂಪ್ ಹೋಲ್ ಬಳಸಿ ಆ ಚಿತ್ರಗಳ ಹಾಡುಗಳನ್ನು ಬೇರೆ ಕಲಾವಿದರಿಂದ ಹಾಡಿಸಿ ಬಿಡುಗಡೆ ಮಾಡಿತು. ಆಕಾಶವಾಣಿಗೆ ಹೆಚ್.ಎಂ.ವಿ.ಯೇ ಹಾಡುಗಳನ್ನು ಒದಗಿಸುತ್ತಿದ್ದುದರಿಂದ ಈ ನಕಲಿ ಹಾಡುಗಳೇ ಅಲ್ಲಿಂದ ಪ್ರಸಾರವಾಗತೊಡಗಿದವು.  ಕೇಳುಗರಿಗೆ ಈ ವಿಷಯ ತಿಳಿದು ಪ್ರತಿರೋಧ ವ್ಯಕ್ತವಾದಾಗ ಕಂಪನಿ ಈ ರೆಕಾರ್ಡುಗಳನ್ನು ಹಿಂತೆಗೆದುಕೊಂಡಿತು. ಅಂಥ ಎರಡು ನಕಲಿ ಹಾಡುಗಳು ಇಲ್ಲಿವೆ.

08. ಓ ಮೇರೆ ರಾಜಾ


ಜಾನಿ ಮೇರಾ ನಾಮ್ ಚಿತ್ರದಲ್ಲಿ ಕಿಶೋರ್ ಕುಮಾರ್ ಮತ್ತು ಆಶಾ ಭೋಸ್ಲೆ ಹಾಡಿದ್ದ ಈ ಹಾಡನ್ನು ಹೆಚ್.ಎಂ.ವಿ ಸಂಸ್ಥೆ ಅಂಬರ್ ಕುಮಾರ್ ಮತ್ತು ಕೃಷ್ಣಾ ಕಲ್ಲೆ ಧ್ವನಿಯಲ್ಲಿ ತನ್ನ ಸ್ಟುಡಿಯೊದಲ್ಲಿ ತನ್ನದೇ ವಾದ್ಯವೃಂದ ಬಳಸಿ ಧ್ವನಿಮುದ್ರಿಸಿತು.
 
09. ಮೈನೆ ಕಸಮ್ ಲೀ


ತೇರೇ ಮೇರೇ ಸಪ್‌ನೆ ಚಿತ್ರದಲ್ಲಿ ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಹಾಡಿದ್ದ ಈ ಹಾಡನ್ನು ಹೆಚ್.ಎಂ.ವಿ.ಗಾಗಿಯೂ ಕಿಶೋರ್ ಕುಮಾರ್ ಅವರೇ ಹಾಡಿದರು. ಆದರೆ ಜೊತೆಗೆ ಲತಾ ಬದಲಿಗೆ ಸುಲಕ್ಷಣಾ ಪಂಡಿತ್ ಇದ್ದರು.

ಆ ಮೇಲೆ ಹೆಚ್.ಎಂ.ವಿ.ಯ ಈ ಉಪಾಯವನ್ನು ಟಿ.ಸೀರೀಸ್ ಸಂಸ್ಥೆ ಅದರ ವಿರುದ್ಧವೇ ಬಳಸಿ ಪುಂಖಾನುಪುಂಖವಾಗಿ ಕಿಶೋರ್ ಮತ್ತು ರಫಿಯ ಕವರ್ ವರ್ಷನ್ ಹಾಡುಗಳನ್ನು ಹರಿಯ ಬಿಟ್ಟಿತು.  ಕುಮಾರ್ ಸಾನು, ಸೋನು ನಿಗಮ್ ಮುಂತಾದವರು ಮುಂಚೂಣಿಗೆ ಬರಲು ಈ ಕವರ್ ವರ್ಷನ್‌ಗಳು ಮೆಟ್ಟುಗಲ್ಲಾದವು.

ಈ ಪಟ್ಟಿಯಿಂದ ಹಾಡು ಆರಿಸಿ ಆಲಿಸಿ.




 

Monday 29 March 2021

ಬಾಲ್ಯಕ್ಕೆ ರಂಗು ತುಂಬುತ್ತಿದ್ದ ಪುರ್ಸರ ಹುಣ್ಣಿಮೆ

ನಾಡಿನೆಲ್ಲೆಡೆ ಫಾಲ್ಗುಣ ಮಾಸದ ಹುಣ್ಣಿಮೆ ಹೋಳಿ ಆಚರಿಸುವ ಹಬ್ಬವಾದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಭಾಗದ ಜನರಿಗೆ  ಅದು ಸುಗ್ಗಿ ಹುಣ್ಣಿಮೆ ಅಥವಾ ಪುರ್ಸೆರೆ ಪುಣ್ಣಿಮೆ. ಸೌರಮಾನದ ಪ್ರಕಾರ ಇದು ಮೀನ ಮಾಸದಲ್ಲಿ ಬರುವ ಹುಣ್ಣಿಮೆ.  ಅಧಿಕ ಮಾಸವಿರುವ ಇಸವಿಯಲ್ಲಿ ಚೈತ್ರ ಮಾಸದ ಹುಣ್ಣಿಮೆ ಪುರ್ಸೆರೆ ಪುಣ್ಣಿಮೆ ಆಗುತ್ತದೆ. ಸುಗ್ಗಿಯ ಕಟಾವು ಆಗಿ ಬೆಳೆ ಒಳಗೆ ಸೇರಿ ರೈತಾಪಿ ಜನರು ಬೆವರೊರಸಿಕೊಂಡು ಉಸ್ಸಪ್ಪಾ ಎಂದು ಸುಧಾರಿಸಿಕೊಳ್ಳುವ ಕಾಲ ಅದು. ಶಾಲೆಗೆ ಹೋಗುತ್ತಿದ್ದ ನಮಗೆ ವಾರ್ಷಿಕ ಪರೀಕ್ಷೆಗಳು ಮುಗಿದು ಇನ್ನೇನು ದೊಡ್ಡ ರಜೆ ಸಿಗುವ ಸಮಯ. ಇಂಥ ಪುರ್ಸೆರೆ ಪುಣ್ಣಿಮೆಯ ಸಮಯದ ಕೆಲವು ದಿನ ರೈತಾಪಿ ವರ್ಗದ ವಿವಿಧ ಜನಾಂಗಗಳಿಗೆ ಸೇರಿದವರು ವಿವಿಧ ರೂಪಗಳಲ್ಲಿ ರಾತ್ರಿಯ ಹೊತ್ತು ಊರಿನ ಮನೆ ಮನೆಗೆ ತೆರಳಿ ವೈವಿಧ್ಯಮಯ ಪ್ರದರ್ಶನ ನೀಡಿ ನಮ್ಮ ಮನ ರಂಜಿಸುತ್ತಿದ್ದರು.

ಕಂರ್ಗೋಲು


ಊರಿನ ನಿರ್ದಿಷ್ಟ ಸಮುದಾಯದ ಮೂಲ ನಿವಾಸಿಗಳು ಇದರಲ್ಲಿ ಭಾಗವಹಿಸುವುದು. ಇಬ್ಬರು ಗಂಡಸರು ಕೈಯಲ್ಲಿ ಗಂಟಾಮಣಿ ಆಡಿಸುತ್ತಾ  ‘ಪೊಲಿಯೆ ಪೊಲ್ಯರೆ ಪೋ ಪೊಲ್ಯರೆ ಪೋ ಪೊಲಿಯೆ’ ಎಂದು ಆರಂಭವಾಗುವ  ಪಾಡ್ದನ ಹೇಳುತ್ತಾರೆ. ಇನ್ನಿಬ್ಬರು ಸೊಂಟಕ್ಕೆ ಬಿಳಿ ಬಟ್ಟೆ ಕಟ್ಟಿಕೊಂಡು ಮೈಗೆಲ್ಲ ಬಿಳಿ ಜೇಡಿಯ ಚುಕ್ಕೆ ಮತ್ತು ಗೆರೆಗಳನ್ನು ಚಿತ್ರಿಸಿ ಜುಟ್ಟಿಗೆ ಬಿಳಿ ಬಟ್ಟೆ ಸುತ್ತಿ ಕೈಯಲ್ಲಿ ನೆಕ್ಕಿ ಸೊಪ್ಪಿನ ಗೊಂಚಲುಗಳನ್ನು ಆಡಿಸುತ್ತಾ ಪಾಡ್ದನದ  ಲಯಕ್ಕೆ ಸರಿಯಾಗಿ ಬಳುಕುತ್ತಾ ಹಿಂದೆ ಮುಂದೆ ಚಲಿಸುತ್ತಾರೆ.  ಮಧ್ಯದಲ್ಲಿ ಕೆಲವು ಸಲ ಇಬ್ಬರೂ ಒಟ್ಟಿಗೆ ಕಿಟಾರನೆ ಕಿರುಚಿ ಹಿಮ್ಮುಖವಾಗಿ ತಿರುಗುತ್ತಾರೆ.  ಈ ಅನಿರೀಕ್ಷಿತ ಕಿರಿಚುವಿಕೆ ಚಿಕ್ಕವರಾದ ನಮ್ಮಲ್ಲಿ ತುಂಬಾ ಭಯವನ್ನುಂಟುಮಾಡುತ್ತಿತ್ತು. ಇವರು ಬೆಳಕಿನ ಯಾವ ಆಸರೆಯನ್ನೂ ಜೊತೆಯಲ್ಲಿ ತರುತ್ತಿರಲಿಲ್ಲ. ಚಂದ್ರನ  ಬೆಳದಿಂಗಳಲ್ಲೇ ನರ್ತನ ನಡೆಯುವುದು. ಮನೆಗಳಲ್ಲಿ ಆಗ ವಿದ್ಯುತ್ತೂ ಇರಲಿಲ್ಲ. ನಾವೂ ಕತ್ತಲಲ್ಲೇ ಜಗಲಿಯ ಮೇಲೆ ಕೂತು ಇದನ್ನು ವೀಕ್ಷಿಸುತ್ತಿದ್ದುದು.  ಕಂರ್ಗೋಲು ಅಂದರೆ ಕಾರಣಿಕ ಪುರುಷರಾದ ಕಾನದ, ಕಟದರ ಎಂಬ ಇಬ್ಬರು ವೀರರು;  ಇವರು ಅತಿಕಾರಿ ಎಂಬ ಬತ್ತದ ತಳಿಯನ್ನು ಗಟ್ಟದಿಂದ ತಂದು ಈ ಭಾಗಕ್ಕೆ ಪರಿಚಯಿಸಿದವರು ಎಂದೆಲ್ಲ ಐತಿಹ್ಯ ಇರುವುದು  ಆಗ ನಮಗೆ ಗೊತ್ತಿರಲಿಲ್ಲ. ಕಂರ್ಗೋಲು ಕುಣಿತ ಆದ ಮೇಲೆ ಕೆಲವು ಹುಡುಗರು ನೆಕ್ಕಿ ಸೊಪ್ಪಿನಿಂದ ನೆಲಕ್ಕೆ ಬಡಿಯುತ್ತಾ ‘ಕೇಜಿನಪ್ಪಾ ಕೇಜಿನ್’ ಅನ್ನುತ್ತಾ  ಕುಣಿದು ಹೆಚ್ಚಿನ ಸಂಭಾವನೆಗೆ ಬೇಡಿಕೆ ಇರಿಸುವುದಿತ್ತು.

ಪಿಲಿ ಪಂಜಿ


ಇನ್ನೊಂದು ಸಮುದಾಯದವರ ಪಿಲಿ ಪಂಜಿ(ಹುಲಿ ಹಂದಿ) ತಂಡದಲ್ಲಿ ಒಂದಿಬ್ಬರು  ಡೋಲು ನುಡಿಸುತ್ತಾ ‘ಬಾಲಮ್ಮಾ  ಬಲಿಪಮ್ಮಾ ಢೇಣುಳ್ಳಾಯ್ ಮಾಮಾ’ ಎಂದು ಹಾಡುತ್ತಾರೆ. ಹುಲಿ ಮತ್ತು ಹಂದಿಯ ಸರಳ ಮುಖವಾಡ  ಧರಿಸಿದ ಇನ್ನಿಬ್ಬರು ಆ ಲಯಕ್ಕೆ ಸರಿಯಾಗಿ ಕುಕ್ಕರುಗಾಲಲ್ಲಿ ನರ್ತಿಸುತ್ತಾರೆ. ಬೆಳದಿಂಗಳ ಬೆಳಕಿನಲ್ಲಿ ಹುಲಿ ಮಾತ್ತು ಹಂದಿಗಳ ವಿಶೇಷ ಬಣ್ಣಗಳೇನೂ ಇಲ್ಲದ ಅಸ್ಪಷ್ಟ ಆಕೃತಿ ಮಾತ್ರ ನಮಗೆ ಕಾಣಿಸುತ್ತಿದ್ದುದು.  ಈ ತಂಡದವರು ಕೆಲವು ವರ್ಷಗಳಿಗೊಮ್ಮೆ ಮಾತ್ರ ಬರುತ್ತಿದ್ದುದು. ಚಾಮುಂಡಿ ಮತ್ತು ಪಂಜುರ್ಲಿ ದೈವಗಳ ಹಿನ್ನೆಲೆ ಈ ಪಿಲಿ ಪಂಜಿಗಳಿಗಿದೆಯೋ ಏನೋ.

ಗುಮಟೆ

 
ಮರಾಠಿ ನಾಯ್ಕ ಸಮುದಾಯದವರು ಭಾಗವಹಿಸುವ ಕುಣಿತ ಇದು. ಬಿಳಿಯ ಅಡ್ಡ ಪಂಚೆ ಧರಿಸಿ ತಲೆಗೆ ಬಿಳಿಯ ಮುಂಡಾಸು ಕಟ್ಟಿ ಮಣ್ಣಿನ ಮಡಕೆಗಳಿಗೆ ಚರ್ಮದ ಮುಚ್ಚಿಗೆಯಿರುವ ಗುಮ್ಟೆಗಳನ್ನು ಲಯಬದ್ಧವಾಗಿ ಬಾರಿಸುತ್ತಾ ದೇವಿಯನ್ನು ಸ್ತುತಿಸುವ ಹಾಡು ಹಾಡುತ್ತಾ ವೃತ್ತಾಕಾರವಾಗಿ ಚಲಿಸುತ್ತಾರೆ. ಇವರಿಗೂ ತಿಂಗಳ ಬೆಳಕೇ ಆಸರೆ.  ಈ ತಂಡದಲ್ಲಿ ಸಾಮಾನ್ಯವಾಗಿ ಹತ್ತು ಹನ್ನೆರಡು ಜನರಿರುತ್ತಿದ್ದರು.

ಕೊರಗ ಭೂತ


ಇದು ನಲ್ಕೆ ಸಮುದಾಯದವರು ನಡೆಸುತ್ತಿದ್ದ  ಹಗಲು ತಿರುಗಾಟ.  ಭೂತದ ಪಾತ್ರಧಾರಿ ವಿಧ್ಯುಕ್ತವಾಗಿ ಮುಖಕ್ಕೆ ಹಳದಿ ಬಣ್ಣದ ಅರ್ದಳ ಹಚ್ಚಿಕೊಂಡು ಕೆಂಪು ದಿರಿಸು ತೊಟ್ಟಿರುತ್ತಾನೆ. ಮನೆಯಂಗಳಕ್ಕೆ ಬಂದ ಮೇಲೆ ಗಗ್ಗರ ಧರಿಸುತ್ತಾನೆ.  ಜೊತೆಯಲ್ಲಿರುವ ಹೆಂಗಸರು ಸಂದಿ ಹೇಳುತ್ತಾ ತೆಂಬರೆ ನುಡಿಸುವಾಗ ನರ್ತಿಸುತ್ತಾನೆ.

ಪುರ್ಸರು


ನಾವೆಲ್ಲ ಕಾತರದಿಂದ ಕಾಯುತ್ತಿದ್ದುದು ಪುರ್ಸರಿಗಾಗಿ. ರೈತ ಸಮುದಾಯದವರೆಲ್ಲ ಭಾಗವಹಿಸುತ್ತಿದ್ದ  ಇದು ಯಾವುದೇ ದೈವ ದೇವರುಗಳಿಗೆ ನೇರ ಸಂಬಂಧವಿಲ್ಲದ ಒಂದು ರೀತಿಯ ಅಣಕು ಪ್ರದರ್ಶನ. ಈ ತಂಡದಲ್ಲಿ 20 ರಿಂದ 30 ಜನರಿರುತ್ತಿದ್ದರು. ಭಾಗವಹಿಸುವ ಎಲ್ಲರೂ ಊರಿನ ಗುತ್ತು ಮನೆಯೊಂದರಲ್ಲಿ  ಸೇರಿ ವಿವಿಧ ವೇಷಗಳನ್ನು ಧರಿಸಿ ಹೊರಡುತ್ತಿದ್ದರು. ಸಮ್ಮೇಳ ಮತ್ತು ವಾಲಗವನ್ನು ತಂಡದವರೇ ಯಾರಾದರೂ ನುಡಿಸುತ್ತಿದ್ದರು.  ಬೆಳಕಿಗೆ ಪೆಟ್ರೋಮ್ಯಾಕ್ಸ್ ಇರುತ್ತಿತ್ತು.  ಮನೆಯನ್ನು ಸಮೀಪಿಸುತ್ತಲೇ ವಾಲಗ ನುಡಿಸತೊಡಗಿ ‘ದಿಮಿಸೋಲೆ ಮಗಳಾಗ್ ದಾನೆಮಾರುಂಡಾಳ್’ ಎಂಬಿತ್ಯಾದಿ ಸಾಲುಗಳನ್ನು  ಮುಖ್ಯಸ್ಥನು ಹೇಳಿದಾಗ ಉಳಿದವರು ‘ದಿಮಿಸೋಲೆ’ ಅನ್ನುತ್ತಾ ಮನೆಯಂಗಳಕ್ಕೆ ಬಂದ ಮೇಲೆ ವಾಲಗದ ಸದ್ದು ನಿಲ್ಲುತ್ತಿತ್ತು.  ಅಷ್ಟರೊಳಗೆ ನಮಗೆಲ್ಲ ಎಚ್ಚರವಾಗಿರುತ್ತಿದ್ದರೂ ಮುಖ್ಯಸ್ಥನು ‘ಪುರ್ಸೆರ್ ಬತ್ತೇರ್.  ಬಾಕಿಲ್ ದೆಪ್ಪುಲೆ’ ಅನ್ನುವ ವರೆಗೆ ನಾವು  ಹೊರಗೆ ಹೋಗುವಂತಿರಲಿಲ್ಲ. ಆ ಮೇಲೆ ಮತ್ತೆ ವಾಲಗದ ಸದ್ದು ಆರಂಭವಾಗಿ ವೇಷಧಾರಿಗಳೆಲ್ಲರೂ ‘ದಿಮಿಸೋಲೆ, ದಿಮಿಸೋಲೆ, ಹೌದೆ, ಹೌದೆ ...’ ಅನ್ನುತ್ತಾ ಒಟ್ಟಿಗೆ ಕುಣಿಯುವುದು. ನಂತರ ದೇವರ ಪುಷ್ಪಕನ್ನಡಿ ಹೊತ್ತ ಪಾತ್ರಧಾರಿಯಿಂದ ದರ್ಶನ ಬಲಿ. ಆ ಮೇಲೆ ದೇವರನ್ನು ಒಂದು ಪೀಠದ ಮೇಲೆ ಕುಳ್ಳಿರಿಸಿ ಆರತಿ ಬೆಳಗಿ ಪೂಜೆ.  ನಮ್ಮೂರ ಗಿರಿಯಪ್ಪ ಮಾಸ್ಟ್ರು ಈ ಪೂಜಾರಿಯ ಪಾತ್ರ ವಹಿಸುತ್ತಿದ್ದರಿಂದ ಶಾಸ್ತ್ರೋಕ್ತ ಮಂತ್ರಗಳನ್ನು ಉಚ್ಚರಿಸಿಯೇ ಅವರು ಪೂಜೆ ಮಾಡುತ್ತಿದ್ದರು.  ನಂತರ ಬಿಳಿ ವೇಸ್ಟಿ, ಬಿಳಿ ರುಮಾಲು ಧರಿಸಿ ಒಂದು ಕೈಯಲ್ಲಿ  ಬಿಚ್ಚುಗತ್ತಿ ಹಾಗೂ ಪಿಂಗಾರ, ಇನ್ನೊಂದು ಕೈಯಲ್ಲಿ ಗಂಟೆ ಹಿಡಿದ ಕೊಡಮಣಿತ್ತಾಯ ‘ದೈವ’ದ ಪಾತ್ರಧಾರಿಯ ಅಣಕು ಆವೇಶ. ಈ ಪಾತ್ರಧಾರಿ ಹೆಚ್ಚಾಗಿ ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ಚಣಣ.(ಆತನ ನಿಜ ನಾಮಧೇಯ ಧರ್ಮಣ ಎಂದಾದರೂ ಆತನ ತಂಗಿ ಆತನನ್ನು ಸಣ್ಣಣ್ಣ, ಚಣ್ಣಣ್ಣ, ಚಣಣ ಅನ್ನುತ್ತಿದ್ದುದರಿಂದ ಎಲ್ಲರಿಗೂ ಆತ ಚಣಣನೇ ಆಗಿದ್ದ).   ಆತ ‘ಆಂಚಾತ್ತೋ ತಂತ್ರಿದಾರ್ರೇ’ ಅನ್ನುತ್ತಾ ಮನೆಯ ಮೆಟ್ಟಲನ್ನೂ ಏರಿದಾಗ ನಮಗೆ ಮನದಲ್ಲೇ ಹೆದರಿಕೆಯೂ ಆಗುತ್ತಿತ್ತು. ಅಣಕು ಕೊಡಮಣಿತ್ತಾಯನ ನುಡಿಕಟ್ಟಿನಲ್ಲಿ ‘ಸಿಯಾಳ ಕೊಂಡೊಯ್ದರೂ ಸಿಯಾಳದ ಚಿಪ್ಪು ಕೊಂಡೊಯ್ಯಲು ಬಿಡಲಾರೆ’ ಎಂಬರ್ಥದ ವಾಕ್ಯಗಳ ಜೊತೆ ಅಶ್ಲೀಲ ಅರ್ಥದ ಕೆಲ  ಸಾಲುಗಳು ಇರುತ್ತಿದ್ದವು.  ಈ ಕೊಡಮಣಿತ್ತಾಯನನ್ನು ಉದ್ದ ಗಡ್ಡದ ಸಾೖಬನ ವೇಷಧಾರಿ ಸಮಾಧಾನ ಮಾಡುವುದಿತ್ತು. ಮುಂದೆ ಮೈಗೆಲ್ಲಾ ಬಾಳೆಯ ಒಣ ಎಲೆಗಳನ್ನು ಸುತ್ತಿಕೊಂಡು  ತುದಿ ಸೀಳಿದ ಬಿದಿರಿನ ಕೋಲನ್ನು ನೆಲಕ್ಕೆ ಬಡಿದು ಠಪ್ ಠಪ್ ಸದ್ದು ಮಾಡುತ್ತಾ  ಬರುವ ಸೊಪ್ಪಿನವನಿಂದ ಸೊಂಟಕ್ಕೆ ಕಟ್ಟಿಕೊಂಡ  ಬೈಹುಲ್ಲಿನ ದೊಡ್ಡ ಲಿಂಗದಿಂದ ಮನೆಯ ಮೆಟ್ಟಲನ್ನು ಎಬ್ಬಿಸುವ ಪ್ರಯತ್ನ.  ಆತ ಹಾಳು ಮಾಡಿದ ಮೆಟ್ಟಲನ್ನು ರಿಪೇರಿ ಮಾಡಲು ಮರದ ಬಾಚಿಯೊಂದಿಗೆ ಬರುವವನು ‘ಅಡ್ಕುಲೊರೆ ಬುಡ್ಕುಲೊ ತೈಲ ತುಪ್ಪಾಚೊ,   ಕರ ಕೈಲ್ ಆಟ್ಟೊಡು ಬುಡೆದಿ ಬಾಲೆ ಗಟ್ಟೊಡು’ ಎಂದು ಹಾಡುವ ಒಬ್ಬ ಪೊರ್ಬು. ಬಾಲ್ಯದಲ್ಲಿ ನಮ್ಮ ಮನೆಯ ಗೋವಳನಾಗಿದ್ದ ನೋಣಯ ಹೆಚ್ಚಾಗಿ ಈ ಪೊರ್ಬು ಆಗುತ್ತಿದ್ದ. ನಂತರ ಕೊರಗ ಕೊರತಿ ಜೋಡಿಯಿಂದ ಕೊಳಲು ನುಡಿಸುತ್ತಾ ನರ್ತನ.  ಈ ಪಾತ್ರಗಳನ್ನು ನಿರ್ವಹಿಸುತ್ತಿದ್ದುದು ನಮ್ಮ ಮನೆಯ ಕಾಯಂ ಕೆಲಸದಾಳುಗಳಾಗಿದ್ದ ಆಣ್ಣು ಮತ್ತು ದೇವು. ಅಪರೂಪಕ್ಕೆ ಕೆಲವು ಸಲ ಕೋವಿ ಹಿಡಿದ ಧೊರೆಯೊಂದಿಗಿನ ಕರಡಿ ವೇಷವೂ  ಇರುತ್ತಿತ್ತು. ತಲೆಗೆ ಗೋವೆ ಸಂಪಿಗೆಯ ಕಿರೀಟ ಧರಿಸಿದ ಚಿಕ್ಕ ಮಕ್ಕಳ ದೊಡ್ಡ ದಂಡೇ ಇರುತ್ತಿತ್ತು. ಸುಮಾರು ಮೂರು ದಿನ ಆಸುಪಾಸಿನ  ಊರುಗಳ ಮನೆಗಳಿಗೆಲ್ಲ ಭೇಟಿ ಕೊಟ್ಟು ಆದ ಮೇಲೆ ಕೊನೆಯ ದಿನ ಕಲಸಿದ ಅವಲಕ್ಕಿಯ ರಾಶಿಗೆ ಪೂಜೆ  ಸಲ್ಲಿಸಿದಾಗ ಆ ವರ್ಷದ ಕಾರ್ಯಕ್ರಮ ಮುಕ್ತಾಯವಾಗುತ್ತಿತ್ತು. ಮುಂದೆ ಕೆಲವು ದಿನ ನಾವು  ಕೂಡ ಮನೆಯಲ್ಲಿ  ‘ಅಡ್ಕುಲೊರೆ ಬುಡ್ಕುಲೊ, ಆಂಚಾತ್ತೋ ತಂತ್ರಿದಾರ್ರೇ’ ಎಂದೆಲ್ಲ ಹೇಳುತ್ತಾ ಪುರ್ಸರನ್ನು ನೆನೆಸಿಕೊಂಡು ಆಡುವುದಿತ್ತು. 

ಪುರ್ಸ ವೇಷ ಕಟ್ಟುವುದಕ್ಕೆ ಸಾಮೂಹಿಕ ಸಹಕಾರ ಅಗತ್ಯವಾಗಿದ್ದು ಸಾಕಷ್ಟು ಖರ್ಚಿನ ಬಾಬ್ತೂ ಆಗಿರುತ್ತಿದ್ದುದರಿಂದ ಪ್ರತೀ ವರ್ಷ ಇದು ಸಾಧ್ಯವಾಗುತ್ತಿರಲಿಲ್ಲ.  ಕೆಲವು ವರ್ಷ ನಮ್ಮೂರ ಪಕ್ಕದ ಕುಕ್ಕಿಜಾಲು ಎಂಬಲ್ಲಿನ ಪುರ್ಸರು ಬರುತ್ತಿದ್ದರು.  ಅಪರೂಪಕ್ಕೆ ಎರಡೂ ಕಡೆಯ ಪುರ್ಸರು ಬಂದದ್ದೂ ಉಂಟು. ಕಂರ್ಗೋಲು ಹಾಗೂ ಗುಮ್ಟೆಯವರು ಈಗಲೂ ಒಮ್ಮೊಮ್ಮೆ ಬರುತ್ತಾರಾದರೂ  ಊರಿನಲ್ಲಿ ಮನೆಮನೆಗೆ ಪುರ್ಸರು ಬರುವುದು ನಿಂತು ಅನೇಕ ವರ್ಷಗಳೇ ಆಗಿವೆಯಂತೆ. ನಾನು ನೌಕರಿಗಾಗಿ ಊರು ಬಿಡುವ ಮುನ್ನ 31-3-72ರಂದು ಪುರ್ಸರು ಮತ್ತು ಗುಮ್ಟೆಯವರು ನಮ್ಮ ಮನೆಗೆ ಬಂದದ್ದು ನನ್ನ ದಿನಚರಿಯಲ್ಲಿ ದಾಖಲಾಗಿದೆ.  26-3-1972ರಂದು ಕೊರಗ ಭೂತ ಮತ್ತು 2-4-1972ರಂದು ಕಂರ್ಗೋಲರು ಬಂದಿದ್ದರು.


Saturday 27 February 2021

ವಸುಂಧರೆಯ ನೆರೆಯ ಶುಕ್ರ

ಅಸ್ತದ ನೆಪದಲ್ಲಿ ಶುಕ್ರನ ಬಗ್ಗೆ ಅರಿಯುವ ಪ್ರಯತ್ನದ ಈ ಬರಹಕ್ಕೆ ‘ಬೆಳ್ಳಿ ತೆರೆಮರೆಗೆ ಸರಿದಾಗ’ ಎಂಬ ಶೀರ್ಷಿಕೆ ಕೂಡ ಕೊಡಬಹುದಿತ್ತು. ಏಕೆಂದರೆ ಯಾವುದೇ ಶಬ್ದಕೋಶದಲ್ಲಿ ಹಾಗೆಂದು ಉಲ್ಲೇಖ ಇಲ್ಲದಿದ್ದರೂ ವರ್ಷದ ಕೆಲವು ತಿಂಗಳು ಮಾತ್ರ ಸೂರ್ಯೋದಯಕ್ಕಿಂತ ಮುಂಚೆ ಪೂರ್ವ ದಿಗಂತದಲ್ಲಿ ಪ್ರಕಾಶಮಾನವಾಗಿ ಬೆಳಗುವ ಶುಕ್ರನನ್ನು ಜನಪದರು ಕರೆಯುವುದು ಬೆಳ್ಳಿ ಎಂದೇ.  ಕೆಲವು ತಿಂಗಳು ಆತ ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಲ್ಲಿ ಕಾಣಿಸುವುದಾದರೂ ‘ಬೆಳ್ಳಿ ಮೂಡಿತು ಕೋಳಿ ಕೂಗಿತು’ ಹಾಡಿನಲ್ಲಿರುವಂತೆ ಬೆಳ್ಳಿ ಮೂಡಿತು ಎಂದರೆ ಇನ್ನೇನು ಬೆಳಗಾಗುತ್ತದೆ ಎಂದೇ ಅರ್ಥ. ತಮಿಳು ಭಾಷೆಯಲ್ಲಿ ಶುಕ್ರವಾರದ ಅಧಿಕೃತ ಹೆಸರೇ ವೆಳ್ಳಿಕಳಮೈ. ಅಂಥ ಬೆಳ್ಳಿ ಅರ್ಥಾತ್ ಶುಕ್ರ ಈಗ ತೆರೆಮರೆಗೆ ಸರಿದಿದ್ದಾನೆ. ಶಿಷ್ಟ ಭಾಷೆಯಲ್ಲಿ ಹೇಳುವುದಾದರೆ 2021ರ ಫೆಬ್ರವರಿ ಮೂರನೆಯ ವಾರದಿಂದ ಎಪ್ರಿಲ್ ಮಧ್ಯದ ವರೆಗೆ ಶುಕ್ರನಿಗೆ ಅಸ್ತ ಅಥವಾ ಮೌಢ್ಯ. ಸನಾತನ ಸಂಸ್ಕೃತಿಯನ್ನು ಪಾಲಿಸುವವರಿಗೆ ಈ ಅವಧಿಯಲ್ಲಿ ಮದುವೆ ಮುಂಜಿಗಳಂಥ ಶುಭಕಾರ್ಯಗಳಿಗೆ ನಿಷೇಧ. ಹಾಗಿದ್ದರೆ ಅಸ್ತ ಅಥವಾ ಮೌಢ್ಯ ಎಂದರೆ ಏನು ಎಂಬ ಪ್ರಶ್ನೆ ಬರುತ್ತದೆ.  ಆಕಾಶಕಾಯಗಳು ದಿನ ನಿತ್ಯ ಹಗಲು ಕಾಣಿಸಿ ರಾತ್ರೆ ಅಸ್ತವಾಗುವುದು ಅಥವಾ ರಾತ್ರೆ ಕಾಣಿಸಿ ಹಗಲು ಅಸ್ತವಾಗುವುದು ಸಹಜ ಪ್ರಕ್ರಿಯೆಯಾದ್ದರಿಂದ ಅವುಗಳಿಗೆ ಅಂತಹ ಮಹತ್ವವಿಲ್ಲ.  ಆದರೆ ದಿನಾ ಕಾಣಿಸುವ  ಆಕಾಶಕಾಯ ದೀರ್ಘ ಸಮಯದ ವರೆಗೆ ಆಕಾಶದಿಂದ ಮರೆಯಾದರೆ ಮಾನವನಿಗೆ ದಿಗಿಲಾಗುತ್ತದೆ.  ಈ ರೀತಿ ತನ್ನ ಪಥದಲ್ಲಿ ಸುತ್ತುತ್ತಾ ಶುಕ್ರ ಭೂಮಿಯಿಂದ ನೋಡಿದಂತೆ ಈಗ ಸೂರ್ಯನ ಅತಿ ಸಮೀಪಕ್ಕೆ ಬಂದು ನಮ್ಮ ಕಣ್ಣೆದುರೇ ಇದ್ದರೂ ನಮ್ಮ ದೃಷ್ಟಿಯಿಂದ ಮರೆಯಾಗಿದ್ದಾನೆ.  ಅದೇ ಅಸ್ತ ಅಥವಾ ಮೌಢ್ಯ. ಎಲ್ಲ ಆಕಾಶ ಕಾಯಗಳು ಈ ರೀತಿ ಕಣ್ಮರೆಯಾಗುತ್ತವಾದರೂ ನವಗ್ರಹಗಳ ಪೈಕಿ ಶುಕ್ರ ಮತ್ತು ಗುರು ಗ್ರಹಗಳ ಅಸ್ತಕ್ಕೆ ಮಾತ್ರ ಧಾರ್ಮಿಕ ಮಹತ್ವವಿರುವುದು.

ಒಮ್ಮೆ ಪೂರ್ವ ದಿಗಂತದಲ್ಲಿ ಕಾಣುತ್ತಾ, ಕೆಲ ಕಾಲ ಮರೆಯಾಗಿ ಮತ್ತೆ  ಪಶ್ಚಿಮ ದಿಗಂತದಲ್ಲಿ  ಕಾಣಿಸುತ್ತಾ ಆಕಾಶದಲ್ಲಿ ಆಟವಾಡುವ ಶುಕ್ರನನ್ನು ಹಿಂದಿನ ಕಾಲದಲ್ಲಿ  ಪಾಶ್ಚಾತ್ಯರು ಎರಡು ಬೇರೆ ಬೇರೆ ನಕ್ಷತ್ರಗಳೆಂದು ಭಾವಿಸಿ Morning Star, Evening Star ಎಂದು ಗುರುತಿಸುತ್ತಿದ್ದರಂತೆ. ಈಗಲೂ ಹಾಗೆ ಕರೆಯುವ ಪದ್ಧತಿ ಇದ್ದು ನಾವು ಬೇಕಾದರೆ ಅದನ್ನು ಉಷಾ ನಕ್ಷತ್ರ, ಸಂಧ್ಯಾ ನಕ್ಷತ್ರ ಎನ್ನಬಹುದು. ವರ್ಷದ ಕೆಲ ಕಾಲ ಪ್ರಖರ ಬೆಳಕಿನೊಂದಿಗೆ ಹೊಳೆಯುವ ಆತನನ್ನು ಕೆಲವರು ಹಾರುವ ತಟ್ಟೆ ಎಂದು ತಪ್ಪಾಗಿ ತಿಳಿದದ್ದೂ ಉಂಟು.

ಬುಧನ ನಂತರದ ಎರಡನೇ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವ, ಸುಮಾರು ಭೂಮಿಯಷ್ಟೇ ಗಾತ್ರದ ಶುಕ್ರ ಸೂರ್ಯನ ದಿಶೆಯಲ್ಲಿ ನಮ್ಮ ನೆರೆಯವನು. ಸೂರ್ಯನ ಸುತ್ತ ಪರಿಭ್ರಮಿಸಲು 224.7 ಭೂಮಿಯ ದಿನಗಳನ್ನು ತೆಗೆದುಕೊಳ್ಳುವ ಆತನಿಗೆ ತನ್ನ ಅಕ್ಷದಲ್ಲಿ ಒಂದು ಸುತ್ತು ತಿರುಗಲು 243 ದಿನಗಳು ಬೇಕಾಗುತ್ತವೆ. ಅಂದರೆ ಆತನ ಒಂದು ದಿನ ಒಂದು ವರ್ಷಕ್ಕಿಂತ ದೊಡ್ಡದು! ಎಲ್ಲಾ ಗ್ರಹಗಳಿಗೆ ತಮ್ಮ ಅಕ್ಷದಲ್ಲಿ ಸುತ್ತುವ ಸ್ಪರ್ಧೆ ಏರ್ಪಡಿಸಿದರೆ ಶುಕ್ರನಿಗೆ ಸಿಗುವುದು ಕೊನೆಯ ಸ್ಥಾನ.  ಆತ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುವುದು ಇತರ ಗ್ರಹಗಳಂತೆ ಅಪ್ರದಕ್ಷಿಣಾಕಾರದಲ್ಲೇ.  ಆದರೆ ತನ್ನ ಅಕ್ಷದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ತಿರುಗುತ್ತಾನೆ.  ಹೀಗಾಗಿ ಶುಕ್ರನಲ್ಲಿ ನಿಂತು ನೋಡಿದ್ದೇ ಆದರೆ ಸೂರ್ಯ ಸೇರಿದಂತೆ ಎಲ್ಲ ಆಕಾಶ ಕಾಯಗಳು ಪಶ್ಚಿಮದಲ್ಲಿ ಉದಯಿಸಿ ಪೂರ್ವದಲ್ಲಿ ಅಸ್ತಮಿಸಿದಂತೆ ಕಾಣಿಸುತ್ತವೆ. ಈ ರೀತಿ ಅಕ್ಷದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ತಿರುಗುವ ಇನ್ನೊಂದು ಗ್ರಹ ಫ್ಲೂಟೋ. ಶುಕ್ರ ಗ್ರಹದ ಸರಾಸರಿ ತಾಪಮಾನ ಸುಮಾರು 460 ಡಿಗ್ರಿ ಸೆಂಟಿಗ್ರೇಡ್. ಆತನ ಮೇಲ್ಮೈಯನ್ನು ಬಿಳಿಯ ಮೋಡಗಳು ಸುತ್ತುವರಿದಿರುವುದರಿಂದ ಹೆಚ್ಚು ಬೆಳಕು ಪ್ರತಿಫಲಿಸಲ್ಪಟ್ಟು ಆಕಾಶದಲ್ಲಿ ಆತ ಉಜ್ವಲವಾಗಿ ಕಾಣಿಸುತ್ತಾನೆ. 

ಭೂಮಿಗಿಂತ ಒಳಗಿನ ಕಕ್ಷೆಯಲ್ಲಿರುವ ಶುಕ್ರ 224.7 ದಿನಗಳಲ್ಲಿ ಸೂರ್ಯನನ್ನು ಸುತ್ತು ಹಾಕುತ್ತಾ ತನಗಿಂತ ನಿಧಾನವಾಗಿ ಅಂದರೆ 365.26 ದಿನಗಳಲ್ಲಿ ಸೂರ್ಯನನ್ನು ಸುತ್ತುವ ಭೂಮಿಯನ್ನು 584 ದಿನಗಳಿಗೊಮ್ಮೆ ಹಿಂದಿಕ್ಕುತ್ತಾನೆ. ಹೀಗಾಗಿ ಭೂಮಿಯಿಂದ ನೋಡಿದಂತೆ ಆತ ಕೆಲವು ದಿನ ಸೂರ್ಯನ ಮುಂದೆ ಅಂದರೆ ಪಶ್ಚಿಮದ ಕಡೆಗೆ, ಕೆಲವು ದಿನ ಸೂರ್ಯನ ಹಿಂದೆ ಅಂದರೆ ಪೂರ್ವದ ಕಡೆಗೆ ಇರುವಂತೆ ಭಾಸವಾಗುತ್ತದೆ. ಸೂರ್ಯನ ಪಶ್ಚಿಮ ದಿಕ್ಕಿಗೆ ಇರುವಾಗ ಬೆಳಗಿನ ಜಾವ ಸೂರ್ಯೋದಯಕ್ಕಿಂತ ಮೊದಲು ಪೂರ್ವ ದಿಗಂತದಲ್ಲಿ, ಸೂರ್ಯನ ಪೂರ್ವ ದಿಕ್ಕಿಗೆ ಇರುವಾಗ ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಲ್ಲಿ ಬರಿಗಣ್ಣಿಗೆ ಗೋಚರಿಸುತ್ತಾನೆ. ಆತ ಭೂಮಿಗಿಂತ ಒಳಗಿನ ಕಕ್ಷೆಯಲ್ಲಿರುವುದರಿಂದ ಮತ್ತು ಸೂರ್ಯನಿಗಿಂತ ಅತಿ ಹೆಚ್ಚು ಅಂದರೆ 47 ಡಿಗ್ರಿಯಷ್ಟು ಮಾತ್ರ ದೂರಕ್ಕೆ ಸರಿಯುವುದರಿಂದ ಏನಿದ್ದರೂ ಆತ ಹಗಲಿನ ತಾರೆ. ತಡ ರಾತ್ರಿ ಎಂದೂ ಕಾಣಿಸಲಾರ.

ಶುಕ್ರನು ಸೂರ್ಯನನ್ನು ಸುತ್ತುತ್ತಾ 584 ದಿನಗಳಿಗೊಮ್ಮೆ ಭೂಮಿಯನ್ನು ಹಿಂದಿಕ್ಕುತ್ತಾನೆ ಎಂದು ಈಗಾಗಲೇ ನೋಡಿದೆವಷ್ಟೇ. ಆ ಪಯಣದಲ್ಲಿ ಆತ ಸೂರ್ಯ ಮತ್ತು ಭೂಮಿಯ ಸರಿ ನಡುವೆ ಬರುವುದನ್ನು ನಿಮ್ನತಮ ಸಂಯೋಗ(Inferior Conjunction) ಎನ್ನುತ್ತಾರೆ. ಆಗ ಆತ ಭೂಮಿಗೆ ಅತಿ ಸಮೀಪವಾಗಿದ್ದರೂ ಆತನ ಸೂರ್ಯನ ವಿರುದ್ಧ ದಿಕ್ಕಿನ ಅಂದರೆ ರಾತ್ರಿಯ ಮುಖ ನಮಗೆದುರಾಗಿರುವುದರಿಂದ ಅಂದು ನಮಗೆ ಶುಕ್ರನ ಅಮಾವಾಸ್ಯೆ. ಈ ಅಮಾವಾಸ್ಯೆಗಿಂತ 4 ದಿನ ಹಿಂದೆ ಮತ್ತು 4 ದಿನ ಮುಂದೆ ಒಟ್ಟು   8 ದಿನ ಆತ ನಮಗೆ ಕಾಣಿಸಲಾರ. ಭೂಮಿಯನ್ನು ಹಿಂದಿಕ್ಕಿದ ಆತ ತನ್ನ ಕಕ್ಷೆಯಲ್ಲಿ ಮತ್ತೂ ಮುಂದೆ ಮುಂದೆ ಹೋಗುತ್ತಾ elongation ಎನ್ನಲಾಗುವ ಭೂಮಿ, ಸೂರ್ಯ ಮತ್ತು ಶುಕ್ರನ ನಡುವಿನ ಕೋನವು ವೃದ್ಧಿಸುತ್ತಾ  47 ಡಿಗ್ರಿಯಷ್ಟು ಆಗಿ ಮತ್ತೆ ಕಮ್ಮಿಯಾಗುತ್ತಾ ಆತ ಸೂರ್ಯನ ಇನ್ನೊಂದು ಬದಿಯಲ್ಲಿ ಸರಿಯಾಗಿ ಭೂಮಿಯ ಎದುರು ಬರುವಾಗ  ಶೂನ್ಯ ಡಿಗ್ರಿ ಆಗುತ್ತದೆ. ಈ ರೀತಿ ಆತ ಸೂರ್ಯನ ಇನ್ನೊಂದು ಬದಿಯಲ್ಲಿ ಭೂಮಿಯ ಎದುರು ಬರುವುದನ್ನು ಉಚ್ಚತಮ ಸಂಯೋಗ(Superior Conjuction) ಅನ್ನುತ್ತಾರೆ. ನಿಮ್ನತಮ ಸಂಯೋಗ ಸ್ಥಾನದಿಂದ ಹೊರಟು ಉಚ್ಚತಮ ಸಂಯೋಗ ಸ್ಥಾನದ ಶೂನ್ಯಕ್ಕೆ ತಲುಪಲು ಇನ್ನೂ 8 ಡಿಗ್ರಿ ಇರುವಲ್ಲಿ ವರೆಗೆ ತಲುಪಲು ಆತ ತೆಗೆದುಕೊಳ್ಳುವ  263 ದಿನ ಆತ ಸೂರ್ಯನ ಪಶ್ಚಿಮ ದಿಕ್ಕಿನಲ್ಲಿದ್ದು ಸೂರ್ಯೋದಯಕ್ಕಿಂತ ಸ್ವಲ್ಪ ಮೊದಲು ಪೂರ್ವದಿಗಂತದಲ್ಲಿ ಕಾಣಿಸಿಕೊಳ್ಳುತ್ತಾನೆ.  ಈ ಭಾಗದ ಪಯಣದಲ್ಲಿ ಸೂರ್ಯನ ಬೆಳಕನ್ನು  ಪ್ರತಿಫಲಿಸುವ ಭಾಗ ಹೆಚ್ಚು ಹೆಚ್ಚು ಕಾಣಿಸುತ್ತಾ ಹೋಗುತ್ತದೆ.  ಆದರೆ ಆತ ಭೂಮಿಯಿಂದ ದೂರ ದೂರ ಸಾಗುವುದರಿಂದ ಆತನ ಗಾತ್ರ ಚಿಕ್ಕದಾಗುತ್ತಾ ಹೋಗುತ್ತದೆ.  ಆತನ ಪ್ರತಿಫಲಿತ ಭಾಗ  ಆಂಶಿಕವಾಗಿದ್ದರೂ   ನಿಮ್ನತಮ ಸಂಯೋಗದಿಂದ 36ನೇ ದಿನ ಆತ ಭೂಮಿಗೆ ಇನ್ನೂ ಸಾಕಷ್ಟು ಸಮೀಪದಲ್ಲೇ ಇರುವುದರಿಂದ ಅತ್ಯಂತ ಹೆಚ್ಚು  ಪ್ರಕಾಶಮಾನನಾಗಿ ಕಾಣಿಸುತ್ತಾನೆ.

ಉಚ್ಚತಮ ಸಂಯೋಗದ(Superior Conjuction) 8 ಡಿಗ್ರಿ ಈಚೆಯಿಂದ 8 ಡಿಗ್ರಿ ಆಚೆ ವರೆಗೆ ಸಾಗಲು ಆತನಿಗೆ 50 ದಿನಗಳು ಬೇಕಾಗುತ್ತವೆ ಮತ್ತು ಆ ಸಮಯದಲ್ಲಿ ಸೂರ್ಯನ ಸಾಮೀಪ್ಯದ ಪ್ರಭೆಯ ಕಾರಣ ನಮಗೆ ಆತನನ್ನು ನೋಡಲು ಸಾಧ್ಯವಾಗುವುದಿಲ್ಲ.  ಇದನ್ನೇ ಅಸ್ತ ಅಥವಾ ಮೌಢ್ಯ ಅನ್ನುವುದು. ಉಚ್ಚತಮ ಸಂಯೋಗದಂದು(Superior Conjuction)ಆತ ಸೂರ್ಯನ ಇನ್ನೊಂದು ಬದಿಯಲ್ಲಿ ಸರಿಯಾಗಿ ಭೂಮಿಯ ಎದುರು ಬರುವಾಗ ಗಾತ್ರದಲ್ಲಿ ಚಿಕ್ಕದಾಗುವ ಆತನ ಪೂರ್ಣ ಬೆಳಗಿದ ದುಂಡು ಮುಖ ಭೂಮಿಯ ಕಡೆ ಇದ್ದು ಅದು ಆತನ ಹುಣ್ಣಿಮೆ ಎನಿಸಿದರೂ ನಾವದನ್ನು ಕಾಣಲಾರೆವು.  ನಿಮ್ನತಮ ಸಂಯೋಗದ(Inferior Conjuction) 8 ಡಿಗ್ರಿ ಆಚೆಯಿಂದ 8 ಡಿಗ್ರಿ ಈಚೆ ವರೆಗೆ ಸಾಗಲು ಬರೇ 8 ದಿನ ಮತ್ತು ಉಚ್ಚತಮ ಸಂಯೋಗದ(Superior Conjuction) ಅಷ್ಟೇ ಕೋನಕ್ಕೆ 50 ದಿನ ಏಕೆ ಎಂಬ ಸಂದೇಹ ಮೂಡಬಹುದು.  ಹತ್ತಿರದಲ್ಲಿರುವ ಬಸ್ಸು ವೇಗವಾಗಿ ಸಾಗಿದಂತೆ ಮತ್ತು ದೂರದ ವಿಮಾನ ನಿಧಾನವಾಗಿ ಚಲಿಸಿದಂತೆ ನಮಗೆ ಅನಿಸುವ ಹಾಗೇ ಇದು. ಎರಡು ಕಡೆಯೂ ಆತ ಚಲಿಸುವ ವೇಗ ಒಂದೇ.  ನಮ್ಮ ಲೆಕ್ಕಾಚಾರ ಏನಿದ್ದರೂ ನಮಗೆ ಕಂಡಂತೆ.

ಉಚ್ಚತಮ ಸಂಯೋಗದ ನಂತರ ಆತ ಸೂರ್ಯನ ಪೂರ್ವ ಭಾಗಕ್ಕೆ ಚಲಿಸಿ  ಮುಂದಿನ 263 ದಿನ ಆತನ ಬೆನ್ನ ಹಿಂದೆ ಸಾಗುತ್ತಾ ಸೂರ್ಯಾಸ್ತದ ನಂತರ ಪಶ್ಚಿಮ ದಿಗಂತದಲ್ಲಿ ಸಂಧ್ಯಾ ತಾರೆಯಾಗಿ ಸ್ವಲ್ಪ ಹೊತ್ತು ಕಾಣಿಸುತ್ತಿರುತ್ತಾನೆ.  ಈ ಪಯಣದಲ್ಲೂ ಭೂಮಿ, ಸೂರ್ಯ, ಶುಕ್ರರ ನಡುವಿನ ಕೋನ ವೃದ್ಧಿಸುತ್ತಾ  47 ಡಿಗ್ರಿ ತಲುಪಿ ಮತ್ತೆ ಕಮ್ಮಿಯಾಗುತ್ತಾ ಶೂನ್ಯವಾಗುವಾಗ ಮತ್ತೆ ನಿಮ್ನತಮ ಸಂಯೋಗ ಸಂಭವಿಸಿ 263+50+263+8 = 584 ದಿನಗಳ ಚಕ್ರ ಪೂರ್ಣವಾಗುತ್ತದೆ. ಈ ಭಾಗದ ಪಯಣದಲ್ಲಿ ಆತ ಸೂರ್ಯನ ಬೆಳಕನ್ನು  ಪ್ರತಿಫಲಿಸುವ ಭಾಗ ಕಡಿಮೆಯಾಗುತ್ತಾ  ಹೋಗುತ್ತದೆ. ಇಲ್ಲೂ  ನಿಮ್ನತಮ ಸಂಯೋಗಕ್ಕೆ 36 ದಿನ ಇರುವಂದು ಆತ ಆಂಶಿಕವಾಗಿ ಆದರೂ ಅತಿ ಉಜ್ವಲನಾಗಿ ಗೋಚರಿಸುತ್ತಾನೆ.

ಮೇಲೆ ಹೇಳಿದ ವಿವರಗಳನ್ನೆಲ್ಲ ಈ ಅನಿಮೇಟೆಡ್ ವೀಡಿಯೊದಲ್ಲಿ  ಸರಳವಾಗಿ ಮತ್ತು ಬಹಳ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಇದನ್ನು ಒಂದೆರಡು ಸಲ ವೀಕ್ಷಿಸಿ ವಿವರಗಳನ್ನೆಲ್ಲ ಇನ್ನೊಮ್ಮೆ ಓದಿದರೆ ವಿಷಯ ಇನ್ನೂ ಚೆನ್ನಾಗಿ ಮನದಟ್ಟಾಗಬಹುದು. ಬೇಕಿದ್ದರೆ ಸೆಟ್ಟಿಂಗ್ ಬಟನ್ ಒತ್ತಿ ವೀಡಿಯೊ ವೇಗ ಕಮ್ಮಿ ಮಾಡಿಕೊಳ್ಳಬಹುದು.


ನಿಮ್ನತಮ ಸಂಯೋಗದ 8 ದಿನಗಳಂದು ಕೂಡ ಆತ ಕಾಣಿಸದಿದ್ದರೂ ಉಚ್ಚತಮ ಸಂಯೋಗ ಸಮಯದ 50 ದಿನಗಳ ಅಗೋಚರತೆಯನ್ನು ಮಾತ್ರ ಅಸ್ತ ಅಥವಾ ಮೌಢ್ಯ ಎಂದು ಧಾರ್ಮಿಕವಾಗಿ ಪರಿಗಣಿಸುವುದು ವಾಡಿಕೆ.  584 ದಿನಗಳಿಗೊಮ್ಮೆ ಸಂಭವಿಸುವ ಶುಕ್ರಾಸ್ತದ ಚಕ್ರ 8 ವರ್ಷಗಳಿಗೊಮ್ಮೆ ಪುನರಾವರ್ತನೆಯಾಗುತ್ತದೆ. ಅಂದರೆ ಸುಮಾರು 8 ವರ್ಷಗಳಿಗೊಮ್ಮೆ ವರ್ಷದ ಅದೇ ಕಾಲದಲ್ಲಿ ಶುಕ್ರಾಸ್ತ ಸಂಭವಿಸುತ್ತದೆ.  ಭೂಮಿಯ ವರ್ಷದ 365 ದಿನಗಳು ಮತ್ತು ಶುಕ್ರನ ವರ್ಷದ 584 ದಿನಗಳು 5:8ರ ದಾಮಾಶಯದಲ್ಲಿರುವುದು ಇದಕ್ಕೆ ಕಾರಣ.

ಅಗೋಚರತೆಯ ಈ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಂದು ಸೂರ್ಯೋದಯಕ್ಕಿಂತ ಮೊದಲು ಅಥವಾ ಸೂರ್ಯಾಸ್ತದ ನಂತರ ಕೊಂಚ ಹೊತ್ತು ಮಾತ್ರ ಆತ ಸ್ಪಷ್ಟವಾಗಿ ಗೋಚರಿಸುವುದು. ದಿನದ ಉಳಿದ ಸಮಯದಲ್ಲೂ ಸೂರ್ಯನ ಹಿಂದೆ  ಅಥವಾ ಮುಂದೆ  ಆತ ಆಗಸದಲ್ಲಿ ಸಾಗುತ್ತಿರುವುದರಿಂದ ದಿಟ್ಟಿಸಿ ನೋಡಿದರೆ   ಹಗಲಿಡೀ ಆತನನ್ನು ಬರಿಗಣ್ಣಿನಲ್ಲಿ ವೀಕ್ಷಿಸಲು ಸಾಧ್ಯವಂತೆ.

ನಿಮ್ನತಮ ಸಂಯೋಗದ ಸಮಯ ಶುಕ್ರನು ಸರಿಯಾಗಿ ಸೂರ್ಯ ಮತ್ತು ಭೂಮಿಯ ನಡುವೆ ಬಂದಾಗ ಆತ ಸೂರ್ಯನಿಗೆ ಗ್ರಹಣ ಉಂಟುಮಾಡುತ್ತಾನೆಯೇ ಎಂಬ ಸಂದೇಹ ಮೂಡಬಹುದು. ಭೂಮಿ ಚಂದ್ರರ ಕಕ್ಷೆಯ ನಡುವೆ ಕೆಲವು ಡಿಗ್ರಿಗಳಷ್ಟು  ಕೋನ ಇರುವ ಕಾರಣ ಪ್ರತಿ ಅಮಾವಾಸ್ಯೆಯಂದು ಹೇಗೆ ಸೂರ್ಯಗ್ರಹಣ ಸಂಭವಿಸುವುದಿಲ್ಲವೋ ಹಾಗೆಯೇ ಭೂಮಿ ಶುಕ್ರರ ಕಕ್ಷೆಯ ಮಧ್ಯೆಯೂ ಇರುವುದರಿಂದ ಪ್ರತಿ ನಿಮ್ನತಮ ಸಂಯೋಗದಂದು ಶುಕ್ರನು ನೇರವಾಗಿ ಸೂರ್ಯನ ಎದುರು ಇರದೆ ಸ್ವಲ್ಪ ಆಚೆ ಅಥವಾ ಈಚೆ ಇರುತ್ತಾನೆ.  ಸುಮಾರು  125  ವರ್ಷಗಳಿಗೊಮ್ಮೆ ಮಾತ್ರ ಆತ ನೇರವಾಗಿ ಸೂರ್ಯನೆದುರು ಬಂದು 8  ವರ್ಷಗಳ ಅಂತರದ ಎರಡು ಶುಕ್ರ ಸಂಕ್ರಮಣಗಳು  ಉಂಟಾಗುತ್ತದೆ.   ಇತ್ತೀಚೆಗೆ 2004ರ ಜೂನ್ 8 ಮತ್ತು 2012ರ ಜೂನ್ 5ರಂದು ಶುಕ್ರ ಸಂಕ್ರಮಣಗಳು ಸಂಭವಿಸಿದ್ದವು.  ಆದರೆ  ಶುಕ್ರನು ಚಂದ್ರನಿಗಿಂತ 100 ಪಾಲು ಹೆಚ್ಚು ದೂರ ಇರುವುದರಿಂದ ಆತ ಗ್ರಹಣದ ಚಂದ್ರನಂತೆ ಸೂರ್ಯನನ್ನು ಮರೆ ಮಾಡದೆ ಆತನೆದುರು ಒಂದು ಸಣ್ಣ ಕಪ್ಪು ಚುಕ್ಕಿಯಂತೆ ಮಾತ್ರ ಕಾಣಿಸುತ್ತಾನೆ. ಮುಂದಿನ ಶುಕ್ರ ಸಂಕ್ರಮಣಗಳು ಡಿಸೆಂಬರ್ 2117 ಮತ್ತು ಡಿಸೆಂಬರ್ 2125ರಲ್ಲಿ ಸಂಭವಿಸಲಿವೆ.

ಪಾಶ್ಚಾತ್ಯರು ಶುಕ್ರನಿಗೆ  ಪ್ರೇಮ ಮತ್ತು ಸೌಂದರ್ಯದ ಪ್ರತೀಕವಾದ ರೋಮನ್ ದೇವತೆ ವೀನಸ್ ಹೆಸರಿಟ್ಟಿದ್ದಾರೆ. ನಮ್ಮ ಬೆಳ್ಳಿ ಇದಕ್ಕೆ ಸಂವಾದಿಯಾಗಬಹುದೇನೋ.

**********

ಈ ಲೇಖನ ಎಪ್ರಿಲ್ 2021ರ ಉತ್ಥಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ.




Saturday 20 February 2021

ಓಹೋ ಅನಿಸುವ ಓಹಿಲೇಶ್ವರ ಆಲ್ಬಂ


1956ರಲ್ಲಿ ತೆರೆಕಂಡ ಓಹಿಲೇಶ್ವರ ಚಿತ್ರದ ಆಲಿಸಿದರೆ ಓಹೋ ಅನ್ನಿಸುವ  ಒಂದು ಡಜನ್ ವೈವಿಧ್ಯಮಯ ಹಾಡುಗಳ ಪೈಕಿ  ಆಲ್ ಟೈಮ್ ಹಿಟ್ ಅನ್ನಿಸಿದ್ದು ಘಂಟಸಾಲ ಅವರ ಈ ದೇಹದಿಂದ ದೂರನಾದೆ ಮಾತ್ರ. ಈಗಿನ ಅಂತರ್ಜಾಲ ಯುಗದಲ್ಲಿ  ರಾಜ್‌ಕುಮಾರ್ ಸ್ವತಃ ಹಾಡಿದ ಮೊದಲ ಹಾಡು ಎನ್ನುವ ನೆಲೆಯಲ್ಲಿ ಶರಣು ಶಂಭೋ ಮತ್ತು ಅವರಿಗಾಗಿ ಪಿ.ಬಿ.ಶ್ರೀನಿವಾಸ್ ಮೊದಲ ಬಾರಿ ಹಾಡಿದ್ದು ಎಂದು  ನಾ ಪಾಪವದೇನಾ ಮಾಡಿದೆನೋ ಸ್ವಲ್ಪ ಮುಂಚೂಣಿಗೆ ಬಂದಿರುವುದು ಬಿಟ್ಟರೆ ಉಳಿದವು ಅಲಭ್ಯ ಅಲ್ಲದಿದ್ದರೂ ಅಲಕ್ಷಕ್ಕೊಳಗಾಗಿವೆ ಎಂದೇ ಹೇಳಬೇಕಾಗುತ್ತದೆ. ಆಗಿನ ಕಾಲದಲ್ಲೂ ನೀನೆಮ್ಮ ಜೀವ ಶರಣು ಮಹಾದೇವ ಮತ್ತು ದೇಹದಿಂದ ದೂರನಾದೆ ಬಿಟ್ಟರೆ ಬೇರೆ ಹಾಡುಗಳು ರೆಡಿಯೋದಲ್ಲಿ ಕೇಳಲು ಸಿಗುತ್ತಿದ್ದುದು ಅಪರೂಪ. ಈಗ ಎಂದೋ ಒಮ್ಮೆ ಬೆಂಗಳೂರು ವಿವಿಧಭಾರತಿಯಲ್ಲೋ, ಎಫ್.ಎಂ. ರೇನ್‌ಬೋದಲ್ಲೋ  ಇನ್ನುಳಿದ ಯಾವುದಾದರೂ ಹಾಡು ಪ್ರಸಾರವಾದರೂ ಈಗಿನ ಬಹುತೇಕ ಕ್ಯಾಶುವಲ್ ಉದ್ಘೋಷಕರಿಗೆ ಹಾಡುಗಳ ವಿವರ ತಿಳಿಸುವ ಅಭ್ಯಾಸವೇ ಇಲ್ಲದ್ದರಿಂದ ಅದು ಯಾರ ಗಮನಕ್ಕೂ ಬರುವುದಿಲ್ಲ.

ಓಹಿಲೇಶ್ವರ ರಾಜ್‌ಕುಮಾರ್ ಅವರ  4ನೇ ಚಿತ್ರ.  1954ರ ಬೇಡರ ಕಣ್ಣಪ್ಪ ಬಿಟ್ಟರೆ 1955ರ ಸೋದರಿ ಮತ್ತು 1956ರಲ್ಲೇ ತೆರೆ ಕಂಡ ಹರಿಭಕ್ತ ಚಿತ್ರಗಳು ಓಹಿಲೇಶ್ವರ ನಿರ್ಮಿಸಿದ ಟಿ. ವಿಶ್ವನಾಥ ಶೆಟ್ಟಿ ಅವರ  ವಿಶ್ವಕಲಾ ಸಂಸ್ಥೆಯ ಕಾಣಿಕೆಗಳೇ ಆಗಿವೆ ಎಂಬುದು ಗಮನಾರ್ಹ. ಆದರೆ ಮೂರಕ್ಕೆ ಮುಕ್ತಾಯ ಎಂಬಂತೆ ಈ ಸಂಸ್ಥೆ ಆ ಮೇಲೆ ಯಾವ ಚಿತ್ರವನ್ನೂ ನಿರ್ಮಿಸಿದಂತಿಲ್ಲ.  ಈ ಮೂರೂ ಚಿತ್ರಗಳನ್ನು ನಿರ್ದೇಶಿಸಿದವರು ಟಿ.ವಿ. ಸಿಂಗ್ ಠಾಕೂರ್. ಮೂರು ಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿದವರು ಜಿ.ಕೆ. ವೆಂಕಟೇಶ್.  ಆದರೆ ಮೊದಲ ಚಿತ್ರ ಸೋದರಿಯಲ್ಲಿ ಪದ್ಮನಾಭ ಶಾಸ್ತ್ರಿ ಕೂಡ ಅವರ ಜೊತೆಗಿದ್ದರು.  ತ್ರಿಭುವನ ಜನನಿ ಜಗನ್ಮೋಹಿನಿ ಹಾಡಿನ ಪ್ರೇಮದ ಪುತ್ರಿ ಚಿತ್ರಕ್ಕೂ ಪದ್ಮನಾಭ ಶಾಸ್ತ್ರಿಗಳದ್ದೇ ಸಂಗೀತ ಇದ್ದದ್ದು. ಆ ಮೇಲೆ ಸಂಗೀತ ನಿರ್ದೇಶನ ಕ್ಷೇತ್ರದಿಂದ ಅವರೇಕೆ ಮರೆಯಾದರೋ ತಿಳಿಯದು.

ಈ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಬರೆಯುವ ಮೂಲಕ  ವಿಜಯನಾರಸಿಂಹ  ಅವರು ಗೀತರಚನಕಾರರಾಗಿ ಚಿತ್ರರಂಗ ಪ್ರವೇಶಿಸಿದರು. ಈ  ದೇಹದಿಂದ ದೂರನಾದೆ ಹಾಡಿನ ಜನಪ್ರಿಯತೆ ಅವರನ್ನು ದಿನ ಬೆಳಗಾಗುವುದರೊಳಗೆ ಪ್ರಸಿದ್ಧರನ್ನಾಗಿಸಿತು.  ಉಳಿದ  ಹಾಡುಗಳನ್ನು ಕು.ರ. ಸೀತಾರಾಮ ಶಾಸ್ತ್ರಿ ಬರೆದಿದ್ದರು.

ಈ ಚಿತ್ರದಲ್ಲಿ ನಟರು ಪರಿಚಿತರಾದವರೇ ಇದ್ದರೂ  ಮುಖ್ಯ ನಟಿಯರಾದ ಶ್ರೀರಂಜಿನಿ ಮತ್ತು ಮೀನಾಕ್ಷಿ ಮೊದಲ ಬಾರಿ ಕಾಣಿಸಿಕೊಂಡವರು.  ಇವರು ರಂಗಭೂಮಿಯಿಂದ ಬಂದವರಿರಬಹುದೇನೋ.  ಆ ಮೇಲೆ ಯಾವ ಚಿತ್ರದಲ್ಲೂ ಇವರನ್ನು ಕಂಡ ನೆನಪಾಗುವುದಿಲ್ಲ. ಕಲ್ಯಾಣ್‌ಕುಮಾರ್  ಆಗಲೇ ನಟಶೇಖರ ಮತ್ತು ಭಾಗ್ಯಚಕ್ರ ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದರೂ ಈ ಚಿತ್ರದಲ್ಲಿ ಪೋಷಕ ಪಾತ್ರವೊಂದರಲ್ಲಿ ಕಾಣಿಸಿಕೊಂಡರು.

ಇದರಲ್ಲಿ ಜಿ.ಕೆ. ವೆಂಕಟೇಶ್ ಅವರು ಒಟ್ಟು 12 ಮಂದಿ ಹಿನ್ನೆಲೆ ಗಾಯಕ ಗಾಯಕಿಯರನ್ನು ಬಳಸಿಕೊಂಡದ್ದು  ವಿಶೇಷ.  ರಾಜ್ ಅವರಿಗೆ ಘಂಟಸಾಲ, ಟಿ.ಎಮ್. ಸೌಂದರರಾಜನ್, ಪಿ.ಬಿ.ಶ್ರೀನಿವಾಸ್ ಮತ್ತು ಸ್ವತಃ ರಾಜ್ ಅವರ ಧ್ವನಿಗಳನ್ನು ಬಳಸಿದ್ದು ಇನ್ನೂ ವಿಶೇಷ. ಈ ರೀತಿ ಒಬ್ಬ ನಟನಿಗೆ ನಾಲ್ವರು ಹಿನ್ನೆಲೆ ಹಾಡು ಹಾಡಿರುವ ಉದಾಹರಣೆ ಬೇರೆ ಇರಲಾರದು. ಈ ಚಿತ್ರದಲ್ಲಿ ಒಂದೂ ಯುಗಳ ಗೀತೆ ಇಲ್ಲದಿರುವುದು ಗಮನಿಸಬೇಕಾದ ಅಂಶ.

ಈ ಚಿತ್ರದ ನಂತರ ಪಿ.ಬಿ.ಶ್ರೀನಿವಾಸ್ ಅವರು ಪಿ.ಕಾಳಿಂಗ ರಾವ್ ಸಂಗೀತವಿದ್ದ ಅಬ್ಬಾ ಆ ಹುಡುಗಿ, ವಿಜಯಭಾಸ್ಕರ್ ಸಂಗೀತದ ರಾಣಿ ಹೊನ್ನಮ್ಮ ಮತ್ತು ದಕ್ಷಿಣಾಮೂರ್ತಿ ಸಂಗೀತದ ಆಶಾಸುಂದರಿ ಚಿತ್ರಗಳಲ್ಲಿ ರಾಜ್ ಅವರಿಗೆ ಹಾಡಿದರು. ಎಂ. ವೆಂಕಟರಾಜು ಸಂಗೀತದಲ್ಲಿ ಭಕ್ತ ಕನಕದಾಸದ ಎಲ್ಲ ಹಾಡುಗಳನ್ನು ಹಾಡಿದ ನಂತರ ಪಿ.ಬಿ.ಎಸ್ ರಾಜ್ ಅವರ ಕಾಯಂ ಧ್ವನಿಯಾದರು.  ಆದರೆ ಈ ನಡುವೆ ಬಂದ ಜಿ.ಕೆ.ವೆಂಕಟೇಶ್ ಸಂಗೀತವಿದ್ದ ರಾಜ್‌ಕುಮಾರ್ ಅಭಿನಯದ ಅಣ್ಣ ತಂಗಿ, ಮಹಿಷಾಸುರಮರ್ದಿನಿ, ರಣಧೀರ ಕಂಠೀರವ, ದಶಾವತಾರ ಮುಂತಾದ  ಚಿತ್ರಗಳಲ್ಲಿ ಪಿ.ಬಿ.ಎಸ್ ಇದ್ದರೂ ಅವರು ರಾಜ್  ಧ್ವನಿ ಆಗಿರಲಿಲ್ಲ. ಜಿ.ಕೆ. ವೆಂಕಟೇಶ್ ಸಂಗೀತದಲ್ಲಿ ಪಿ.ಬಿ.ಶ್ರೀನಿವಾಸ್ ಮತ್ತೆ ರಾಜ್ ಅವರಿಗಾಗಿ ಹಾಡಲು 1961ರ ಕಣ್ತೆರೆದು ನೋಡು ವರೆಗೆ ಕಾಯಬೇಕಾಯಿತು. 

ಓಹಿಲನ ಕಥೆ  ಹರಿಹರನ ಓಹಿಲಯ್ಯನ ರಗಳೆ ಮತ್ತು ಸೋಮದೇವನ ಉದ್ಭಟಕಾವ್ಯದಲ್ಲಿ ಇದೆ ಎನ್ನಲಾಗಿದೆ. ಓಹಿಲ  ಒಬ್ಬ ರಾಜಕುಮಾರ.  ಆದರೆ ಆತನಿಗೆ ಬಾಲ್ಯದಿಂದಲೂ ಆಧ್ಯಾತ್ಮದತ್ತಲೇ ಒಲವು.  ಗೌತಮ ಬುದ್ಧನಿಗಾದಂತೆ ಓಹಿಲನಿಗೂ ಹೊರಗೆ ತಿರುಗಾಡಲು ಹೋದಾಗ ಸಾವು ನೋವುಗಳ ಪರಿಚಯವಾಗುತ್ತದೆ. ಬುದ್ಧನ ಕಥೆಯಲ್ಲಿದ್ದಂತೆಯೇ  ಸಾವಿಲ್ಲದ ಮನೆಯಿಂದ ಅಕ್ಕಿ ತರಲು ಪ್ರಯತ್ನಿಸುವ  ಪ್ರಸಂಗವೂ ಕಥೆಯಲ್ಲಿ ಇದೆ. ಜಾತಿ ಮತಗಳ ನಡುವಿನ ತಾರತಮ್ಯವನ್ನು ವಿರೋಧಿಸುವ ಆತ ಅರಮನೆಯಲ್ಲಿ ಬಾಲ್ಯದಿಂದಲೂ ತನ್ನೊಡನೆ ಆಡಿ ಬೆಳೆದ ಉಮೆಯನ್ನು ಮದುವೆಯಾಗಲೊಪ್ಪದೆ ತಾನು ಆಶ್ರಯಕೊಟ್ಟಿದ್ದ ಗೌರಿ ಎಂಬ ಸಮಾಜದ ನಿಮ್ನವರ್ಗಕ್ಕೆ ಸೇರಿದ ಅಂಧ ಹುಡುಗಿಯ ಕೈ ಹಿಡಿಯಬಯಸುತ್ತಾನೆ.  ಇದಕ್ಕೆ ರಾಜಗುರು ಆಕ್ಷೇಪ ವ್ಯಕ್ತ ಪಡಿಸಿದಾಗ ತನಗೆ ಸಂಸಾರ ಬಂಧನವೇ ಬೇಡ ಎಂಬ ನಿರ್ಧಾರ ತಳೆದು ಗೌರಿಯನ್ನು ತನ್ನ ಆಧ್ಯಾತ್ಮಿಕ ಗುರು ಎಂದು ಭಾವಿಸಿ ಅವಳ ಜೊತೆ ಸೌರಾಷ್ಟ್ರದ ಸೋಮನಾಥ ಕ್ಷೇತ್ರಕ್ಕೆ ಹೋಗುತ್ತಾನೆ. ಹದಿನೆಂಟು ತುಂಬುವುದರೊಳಗೆ ಮಗನ ವಿವಾಹವಾಗದಿದ್ದರೆ ಸಾವು ಎಂಬ ಶಾಪ ಇದ್ದುದರಿಂದ ಓಹಿಲನ ತಂದೆ ತಾಯಿಗಳು ಮರಣ ಹೊಂದುತ್ತಾರೆ. ಅವರ ಅಂತ್ಯ ಸಂಸ್ಕಾರ ಮಾಡದೆ ಕರ್ಮಚಂಡಾಲನಾದದ್ದು ಮಾತ್ರವಲ್ಲದೆ ಹೀನಕುಲದ ಗೌರಿಯನ್ನು ಜತೆಗೆ ಕರೆದೊಯ್ದು ಧರ್ಮಭ್ರಷ್ಟನಾಗಿದ್ದಾನೆಂಬ ಆರೋಪ ಹೊರಿಸಿದ ರಾಜಗುರು ಆತನಿಗೆ ಎಲ್ಲೆಡೆ ಬಹಿಷ್ಕಾರ ಹಾಕಿಸುತ್ತಾನೆ.  ಧರ್ಮಾಂಧರ ಉಪಟಳದಿಂದ  ಸೋಮನಾಥೇಶ್ವರನ ಸೇವೆಗೆ ಧೂಪವೂ ಸಿಗದಂತಾದಾಗ ತನ್ನನ್ನೇ ಬೆಂಕಿಯಲ್ಲಿ ಉರಿಸಿ ಶಿವನ ಸಾನ್ನಿಧ್ಯ ಸೇರಿ ಓಹಿಲೇಶ್ವರನೆನ್ನಿಸುತ್ತಾನೆ.

ಚಿತ್ರದಲ್ಲಿ ಗುರುವಿನ ಶಾಪದಿಂದ ಗಿಳಿಯಾಗಿ ಚಂದ್ರೋದಯದಿಂದ ಕೆಲವು ಗಳಿಗೆ ಮಾತ್ರ ಮನುಷ್ಯ ರೂಪ ತಾಳುವ  ಶುಕ ಮುನಿಯ ಪ್ರಸಂಗವನ್ನೂ ಸೇರಿಸಿಕೊಳ್ಳಲಾಗಿದೆ.  ಆತ ಉದ್ಭಟನೆಂಬ ರಾಜಕುಮಾರನನ್ನು ಕರೆತಂದು ರಾಜಕುಮಾರಿ ಉಮೆಯೊಂದಿಗೆ ವಿವಾಹ ಮಾಡಿಸಿ ಶಾಪವಿಮುಕ್ತನಾಗುತ್ತಾನೆ.  ಓಹಿಲನಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡುವ ಸಖನಾಗಿಯೂ ಇರುತ್ತಾನೆ.

ಓಹಿಲೇಶ್ವರ ಚಿತ್ರದ ಎರಡು ಪ್ರತಿಗಳು ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.

ಚಿತ್ರದ ಪಾರಿಭಾಷಿಕ ವಿವರಗಳು
.

ಬ್ಯಾನರ್ : ವಿಶ್ವಕಲಾ ಚಿತ್ರ
ನಿರ್ಮಾಪಕರು : ಟಿ.ವಿಶ್ವನಾಥ ಶೆಟ್ಟಿ, ಟಿ.ವಿ. ಸಿಂಗ್ ಠಾಕೂರ್.
ನಿರ್ದೇಶನ: T.V. ಸಿಂಗ್ ಠಾಕೂರ್.
ತಾರಾಗಣ :
ಶ್ರೀರಂಜಿನಿ, ಮೀನಾಕ್ಷಿ, ರಾಜಕುಮಾರ್, ಕಲ್ಯಾಣಕುಮಾರ್, ಹೆಚ್. ರಾಮಚಂದ್ರ. ಶಾಸ್ತ್ರಿ, ನರಸಿಂಹರಾಜು, ಜಿ.ವಿ.ಅಯ್ಯರ್, ಬೇಬಿ ಉಮಾ ಮತ್ತು ಮಾಸ್ಟರ್ ಆನಂದ್, ಹೆಚ್. ಕೃಷ್ಣ ಶಾಸ್ತ್ರಿ, ಸಿದ್ದಯ್ಯಸ್ವಾಮಿ, ಗಣಪತಿ ಭಟ್, ಬಸವರಾಜ್, ಬಿ.ಶಾಂತಮ್ಮ, ಗುಗ್ಗು ಮತ್ತಿತರರು.
ಹಿನ್ನೆಲೆ ಗಾಯಕರು :
ಪಿ.ಲೀಲಾ, ಪಿ.ಶುಶೀಲಾ, ಎ.ಪಿ. ಕೋಮಲಾ, ಜಮುನಾರಾಣಿ, ಸತ್ಯವತಿ, ಸರೋಜಿನಿ, ಘಂಟಸಾಲ, T.M. ಸೌಂದರರಾಜನ್, ಪಿ.ಬಿ. ಶ್ರೀನಿವಾಸ್, ರಘುನಾಥ ಪಾಣಿಗ್ರಾಹಿ, ರಾಜಕುಮಾರ್, ಜಿ.ಕೆ. ವೆಂಕಟೇಶ್.
ಸಂಭಾಷಣೆ, ಸಹನಿರ್ದೇಶನ : ಜಿ.ವಿ.ಅಯ್ಯರ್.
ಗೀತೆಗಳು : ಕು.ರ. ಸೀತಾರಾಮ ಶಾಸ್ತ್ರಿ, ವಿಜಯನಾರಸಿಂಹ.
ಛಾಯಾ ನಿರ್ದೇಶನ : ಬಿ. ದೊರೈರಾಜ್. ಸಹಾಯಕರು : P.N. ಸುಂದರಂ ಮತ್ತು ಯತೀಂದ್ರನ್
ಶಬ್ದ ನಿರ್ದೇಶನ : ಎ. ಕೃಷ್ಣನ್.
ಶಬ್ದಗ್ರಹಣ :ಈ. ವೆಂಕಟಾಚಲಂ.
ಎಡಿಟಿಂಗ್ : ರಾಜನ್ ಮತ್ತು ವೆಂಕಟರಾಮ್
ಸಂಗೀತ : ಜಿ.ಕೆ. ವೆಂಕಟೇಶ್.
ನೃತ್ಯ : ಪಿ.ಎಸ್. ಗೋಪಾಲಕೃಷ್ಣನ್.
ಲ್ಯಾಬೊರೇಟರಿ : ವಿಜಯಾ.
ಪ್ರೊಸೆಸಿಂಗ್ : S.V. ವೆಂಕಟರಾಮನ್.
ಸ್ಟುಡಿಯೊ : ವಾಹಿನಿ.
ಧ್ವನಿಮುದ್ರಣ : Westrex
ಪಬ್ಲಿಸಿಟಿ : ಕಟಕ.
ಹಂಚಿಕೆ : ಕರ್ನಾಟಕ ಫಿಲಂಸ್ ಮತ್ತು ಶ್ರೀನಿವಾಸ ಪಿಕ್ಚರ್ಸ್

ಹಾಡುಗಳು

01. ಬನ್ನಿ ಬಾಲೆಯರೆ
ರಚನೆ : ಕುರಸೀ
ಹಾಡಿದವರು : ಎ.ಪಿ. ಕೋಮಲಾ, ಸತ್ಯವತಿ, ಸರೋಜಿನಿ ಮತ್ತು ಸಂಗಡಿಗರು.

ಹರಿಕಾಂಬೋಜಿ ರಾಗದ ಸ್ವರಗಳನ್ನು ಹೊಂದಿರುವ ಈ ಸಮೂಹಗಾನ ನೌಷಾದ್ ಅವರ ಆನ್ ಮತ್ತು ಮದರ್ ಇಂಡಿಯಾ ಚಿತ್ರದ ಹಾಡುಗಳನ್ನು ನೆನಪಿಸುತ್ತದೆ.  ಮೊದಲ ಚರಣದ ವರೆಗೆ ಆದಿತಾಳದಲ್ಲಿ ಸಾಗುವ ಈ ಹಾಡಿನ ನಡೆ ನಂತರ 7 ಅಕ್ಷರಗಳ ತ್ರಿಪುಟ ತಾಳಕ್ಕೆ ಬದಲಾಗುತ್ತದೆ. ಬೂತಯ್ಯನ ಮಗ ಅಯ್ಯು ಚಿತ್ರದ ಸೋಬಾನ ಸೋಬಾನ ಹಾಡು ಇದೇ ನಡೆಯಲ್ಲಿರುವುದನ್ನು ನೆನಪು ಮಾಡಿಕೊಳ್ಳಬಹುದು. ಈ ಹಾಡಿನಲ್ಲಿ ಅನೇಕ ಗಾಯಕಿಯರ ಧ್ವನಿಯಿದ್ದು ಪಟ್ಟಿಯಲ್ಲ್ಲಿ ಹೆಸರಿಲ್ಲದಿದ್ದರೂ ಒಂದೆರಡು ಸಾಲುಗಳಲ್ಲಿ ಎಲ್.ಆರ್. ಈಶ್ವರಿ ಧ್ವನಿ ಕೇಳಿದ ಅನುಭವವಾಗುತ್ತದೆ. ಅವರು ಕೋರಸ್ ಭಾಗವಾಗಿ ಹಾಡಿರುವ ಸಾಧ್ಯತೆಯೂ ಇದೆ. ರಾಜೇಶ್ವರಿ ಎಂಬ ಹೆಸರಿನಿಂದ ಅವರು ಕನ್ನಡದಲ್ಲಿ ಮೊದಲು ಹಾಡಿದ್ದು 1958ರ ಅಣ್ಣ ತಂಗಿ ಚಿತ್ರದ ಕಂಡರೂ ಕಾಣದ್‌ಹಾಂಗೆ ಹಾಡು.
 
ಬನ್ನಿ ಬಾಲೆಯರೆ ಹೊನ್ನಿನಾರತಿಯ
ತನ್ನಿ ನಮ್ಮ ಯುವರಾಜನಿಗೆ
ಕೋಟಿಸೂರ್ಯ ಸಮ ತೇಜನಿಗೆ
ಕೋಮಲಾಂಗ ಸುಮಬಾಲನಿಗೆ

ಯುವರಾಜನ ಶುಭ ಯೋಗ
ಭುವಿಗೀಯಲಿ ಸಂಪದವೀಗ
ಆನಂದದ ಭಾವಾವೇಗ
ಮೊರೆಯಲಿ ಹರುಷದ ರಾಗ
ಅನುರಾಗ ಅದೇ ಯೋಗ ಯಾಗ ಭೋಗ
ಸರ್ವಧರ್ಮಗಳ ಸನ್ಮಾರ್ಗ

ಊರು ಹೆಂಗಳ ದೃಷ್ಟಿಯ
ನೂರಾರು ಕಂಗಳ ದೃಷ್ಟಿಯ
ತೆಗೆದು ನೀವಾಳಿಸಲು ಬನ್ನಿರೆ
ಅರಸು ಕುವರನಿಗಾರತಿ ಈ
ಸೊಗಸು ಮೂರುತಿಗಾರತಿ

ಚೆಲುವರಾಯಗೆ ಒಲವಿನಾರತಿ
ಬೆಳಗಿ ನಲವ ತನ್ನಿರೇ
ನಿರುತ ನಿರ್ಮಲ ಹರುಷ ಜೀವನ
ಹರಸಿ ಮೆರೆವ ಬನ್ನಿರೆ


02. ನೀ ಎಮ್ಮ ಜೀವ
ರಚನೆ : ವಿಜಯನಾರಸಿಂಹ
ಹಾಡಿದವರು :ಎ.ಪಿ. ಕೋಮಲಾ, ಸತ್ಯವತಿ


ಶಂಕರಾಭರಣ ಮತ್ತು ಹರಿಕಾಂಬೋಜಿ ಮಿಶ್ರ ಸ್ವರಗಳನ್ನು ಹೊಂದಿದ ಈ ಹಾಡು ತಿಶ್ರ ನಡೆಯಲ್ಲಿದೆ.  ಬಾಲಕ ಓಹಿಲ ಮತ್ತು ಆತನ ಒಡನಾಡಿ ಉಮಾ ದೇವರನ್ನು ಪೂಜಿಸುತ್ತಾ ಹಾಡುವ ಇದರ ಸಾಹಿತ್ಯ ಮಕ್ಕಳಿಗೆ ಸಹಜವಾದ ಸರಳ ಪದಗಳನ್ನು ಹೊಂದಿದೆ.  ಸಿತಾರ್, ಕೊಳಲು, ತಬ್ಲಾಗಳ ಸರಳ ಹಿಮ್ಮೇಳ ಹೊಂದಿದ ಧಾಟಿಯೂ ಸರಳವಾಗಿಯೇ ಇದೆ.  ಚಿತ್ರದಲ್ಲಿ ಈ ಹಾಡು ಸಂದರ್ಭಕ್ಕೆ ತಕ್ಕಂತೆ ಅರ್ಧಕ್ಕೆ ಕೊನೆಗೊಳ್ಳುತ್ತದೆ.  ಸುಗಮ ಕೇಳುವಿಕೆಗಾಗಿ ಅದನ್ನು ಇಲ್ಲಿ ಸರಿಪಡಿಸಿದ್ದೇನೆ.
 
ನೀನೆಮ್ಮ ಜೀವ ಶರಣು ಮಹಾದೇವ
ಶಂಕರನೇ ಕಾಯುವುದೈ ಕರುಣಾಂತರಂಗ
ನೀನೆಮ್ಮ ಜೀವ ಶರಣು ಮಹಾದೇವ

ಅತ್ತಾಗ ಕಣ್ಣೊರಸಿ ತುತ್ತಿಡುವೆಯಂತೆ
ಕತ್ತಲಲಿ ಹೆದರಿದರೆ ನೀ ಕಾಯುವಂತೆ
ಹತ್ತಿರವೇ ಬಾ ಗೌರಿ ಶಿವನೊಡನೆ ತಾಯೇ
ಮುತ್ತಂತೆ ನಮ್ಮನ್ನ ಚೆನ್ನಾಗಿ ಕಾಯೇ

ನೋಡಿದೆನಲ್ಲ ಲೋಕದ ನೋವ
ಬೇಡುವ ಕೈಯ ಮುಪ್ಪಿನ ಮೈಯ
ಕೋಪವಿದೇಕೆ ದೀನರ ಮೇಲೆ
ಸರಿಯೇನೋ ಈ ನೀತಿ ನಿನಗೆ ಮಹೇಶ

ತಂದೆಯೂ ನೀನೇ ತಾಯಿಯು ನೀನೆ
ವಂದಿಸಿ ನಲಿವ ಬಾಲರ ನೋಡು
ನಂದದ ಜ್ಯೋತಿಯ ಬೆಳಗಿಸು ದೇವ
ಸರಿಯೇನೋ ಈ ನೀತಿ ನಿನಗೆ ಮಹೇಶ


03. ಪಾವನ ಪರಶಿವ
ರಚನೆ : ಕುರಸೀ
ಹಾಡಿದವರು : ಸಿ.ಎಸ್. ಸರೋಜಿನಿ, ಪಿ.ಲೀಲಾ.


ಬಾಲಕಿ ಗೌರಿ ಸಿ.ಎಸ್. ಸರೋಜಿನಿಯ ಧ್ವನಿಯಲ್ಲಿ ಶಂಕರಾಭರಣ ಸ್ವರಗಳಲ್ಲಿ ತಬ್ಲಾದ ಮಧ್ಯ ಲಯದ ಲಘು ಶೈಲಿಯಲ್ಲಿ ಹಾಡಲು ಆರಂಭಿಸಿ ಹಾಡಿನ ಮಧ್ಯದಲ್ಲಿ ತರುಣಿಯಾಗಿ ಮಾರ್ಪಟ್ಟು  ವಲಚಿ ರಾಗ ಛಾಯೆಯ ಶಾಸ್ತ್ರೀಯ ಶೈಲಿಯಲ್ಲಿ ದ್ರುತ ಲಯದೊಂದಿಗೆ ಪಿ.ಲೀಲಾ ಅವರ ಧ್ವನಿಯಲ್ಲಿ ಮುಂದುವರಿಸುತ್ತಾಳೆ.  ಪಿ.ಲೀಲಾ ಅವರಿಗೆ ಇಡೀ ಚಿತ್ರದಲ್ಲಿ ಈ ಅರ್ಧ ಹಾಡು ಮಾತ್ರ ಇರುವುದು. ಮಹೇಂದ್ರ ಕಪೂರ್ ಅವರಿಗೆ ಸಂಗಂ ಚಿತ್ರದ ಹರ್ ದಿಲ್ ಜೊ ಪ್ಯಾರ್ ಕರೇಗಾ ಹಾಡಿನ ಒಂದು ಚರಣದಲ್ಲಿ ಮಾತ್ರ ಅವಕಾಶವಿದ್ದಂತೆ.
 
ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಕಣ್ಣು ಕಾಣದೆ ಮಾಡಿದ ತಪ್ಪನು
ಮನ್ನಿಸಿ ಕಾಯೋ ಮಹದೇವ
ದೀನರ ಪಾಲಿನ ಪರದೈವ
ಮನ್ನಿಸಿ ಕಾಯೋ ಮಹದೇವ

ಏನು ಬೇಡಲೂ ತೋರದು ನನಗೆ
ನೀನಿರು ಜತೆಗೆ ಶಂಕರನೇ
ಕಾಣೆನು ದೇವನೆ ದಾರಿಯನೇ
ನೀನಿರು ಜತೆಗೆ ಶಂಕರನೇ

ಕಣ್ಣು ಕಾಣದೆ ಮಾಡಿದ ತಪ್ಪನು
ಮನ್ನಿಸಿ ಕಾಯೋ ಮಹದೇವ
ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ

ಕಾಡುಹೂವಲಿ ಪರಿಮಳ ಬೆರಸಿ
ಬಾಡುವ ಮೊದಲೇ ಮುಡಿಯೊಳಗಿರಿಸಿ
ಮೂರು ಗಳಿಗೆಯ ಬಾಳನು ಮೆರೆಸಿ
ಪಾರುಗಾಣಿಸೋ ಕರುಣೆಯನಿರಿಸಿ

04. ನಿಧಿಯೊಂದ ನಿನಗಾಗಿ
ರಚನೆ : ಕುರಸೀ
ಹಾಡಿದವರು : ಪಿ.ಸುಶೀಲಾ


ಇದು ಶಿವಭಕ್ತನ ಕಥೆಯಾದ್ದರಿಂದ ಬಹುಶಃ ಜಿ.ಕೆ. ವೆಂಕಟೇಶ್ ಅವರು ಶಂಕರಾಭರಣ ಸ್ವರಗಳನ್ನೇ ಹೆಚ್ಚು ಹಾಡುಗಳಲ್ಲಿ ಬಳಸಿದ್ದಾರೆ. ಈ ಹಾಡು ಕೂಡ ನಿಷಾದವನ್ನು ಬದಲಾಯಿಸುತ್ತಾ  ಶಂಕರಾಭರಣ - ಹರಿಕಾಂಬೋಜಿ ಸ್ವರಗಳಲ್ಲೇ ಸಾಗುತ್ತದೆ. ಉಮಾ ಮತ್ತು ಓಹಿಲರ ವಿವಾಹ ನೆರವೇರುತ್ತದೆಂಬ ಕಲ್ಪನೆಯಿಂದ ಗೌರಿಯು ಗೆಳತಿಯನ್ನು ಛೇಡಿಸುವ ಹಾಡಿದು.  ಜಾನಪದ ಸ್ವಾದ ಇರುವ ತಿಶ್ರ ನಡೆಯ ಈ ಹಾಡಲ್ಲಿ ಢೋಲಕ್, ಮ್ಯಾಂಡೊಲಿನ್ ಮುಖ್ಯವಾಗಿ ಕೇಳಿಸುತ್ತವೆ. Interludeನಲ್ಲಿ ಬಾಸ್ ಗಿಟಾರ್, ಕೊಳಲು, ವಯಲಿನ್ಸ್,  ಮ್ಯಾಂಡೊಲಿನ್ ಇವೆ.  ಚರಣಗಳು ಸಾಮಾನ್ಯ ಹಾಡುಗಳಂತೆ 2-3 ಸಾಲು ಇರದೆ ಒಂದಕ್ಕೊಂದು ಜೋಡಿಸಿದ ದಾರದಂತೆ ಉದ್ದವಾಗಿವೆ.  ಹಾಡಿನುದ್ದಕ್ಕೂ ಕುರಸೀ ಅವರ ವೈಶಿಷ್ಟ್ಯವಾದ ಒಳ ಪ್ರಾಸದ ಪದಗಳಿವೆ.  ನಾನು ಈ ಹಾಡು ಮೊದಲು ಕೇಳಿದ್ದು ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಿನ ಭಾಗವಾಗಿ.
 
ನಿಧಿಯೊಂದ ನಿನಗಾಗಿ ವಿಧಿರಾಯ ಕರೆತಂದ
ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ
ನಿನ್ನ ಜೋಡಿ ಅವ ಸಿಂಗಾರ

ಮನವನ್ನೇ ಸೂರೆಗೈವ ಮಾಯ ಮಂತ್ರಗಾರ
ಈ ನರ ನವ ಕಿನ್ನರ
ವನ ಸುತ್ತಿ ವಿಹರಿಸುತ್ತ
ಚಿತ್ತ ಕೆಡುವ ಮತ್ತು
ಮಂತ್ರವನೂದಿದ್ದ ಈ ಚೋರ
ಬಂದು ನೀನಲ್ಲಿ ಬೀರಿದೆ ವೈಯಾರ
ವಾರೆ ನೋಟ ನೂರು ಬಗೆ ಕಣ್ಣಾರ
ಮೂರು ಲೋಕ ನಾಚಿಸುವ ಸಿಂಗಾರ

ಕಣ್ಣ ಕಿರಣದಲ್ಲೆ ಕಳ್ಳ ಗೆಳೆತನವ
ತೋರಿದ ಮೋಹ ತೂರಿದ
ಮೋಹ ಮಲ್ಲೆ ಮಲರುವಲ್ಲೆ
ಸ್ನೇಹ ಮಧುವ ಹೊರ
ನೂಕುವ ಕಾಲ ಓಡಿ ಬಂದಿದೆ
ನಿನ್ನ ಸೌಭಾಗ್ಯ ಮಾಲೆ ಕಾದು ನಿಂತಿದೆ
ನೂರು ಹಾಸ ಭಾಸಗಳ ತಂದಿದೆ
ನಿನ್ನ ಹಾವಭಾವದಲಿ ಒಂದಿದೆ


05. ಹರಿಯಲಿ ವಸಂತ ಧಾರೆ
ರಚನೆ : ಕುರಸೀ
ಹಾಡಿದವರು : ಜಮುನಾರಾಣಿ ಮತ್ತು ಸಂಗಡಿಗರು.


ಅಲ್ಲಿ ಇಲ್ಲಿ ಬೇರೆ ಸ್ವರಗಳನ್ನು ಸ್ಪರ್ಷಿಸುತ್ತಾ ಭೈರವಿ ರಾಗದಲ್ಲಿ ವಿಹರಿಸುವ ಈ ಆನಂದೋಲ್ಲಾಸದ ಹಾಡು  ರಾಜಕುಮಾರಿ ಉಮಾ ಮತ್ತು ಉದ್ಭಟ ರಾಜನ ಮದುವೆಯ ಸಂಭ್ರಮ ಸಂದರ್ಭದ್ದು. ತೆಲುಗಿನ ರಾಜೇಶ್ವರ ರಾವ್, ಪೆಂಡ್ಯಾಲ, ಘಂಟಸಾಲ ಮುಂತಾದವರ ಶೈಲಿಯಲ್ಲಿದೆ. ಇದರಲ್ಲಿ ಬರುವ ಬಿಗುಮಾನ ಸಾಕೆ ತಾವರೆ ಸಾಲು ಅಲೌಕಿಕ ಅನುಭೂತಿ ಉಂಟು ಮಾಡುತ್ತದೆ.  ಶ್ರುತಿಯಲ್ಲಿರುವ ಢೋಲಕ್ ಲಯ ಹಾಡಿಗೆ ಉತ್ತಮ ಉಠಾವ್ ಒದಗಿಸಿದೆ.
 
ಹೊಳೆ ಹರಿಯಲಿ ವಸಂತ ಧಾರೆ
ಕಿರುನಗೆಯ ಬೀರುತ ಬಾರೆ
ರವಿ ಬಂದ ನೋಡೆ ಚದುರೆ
ಬಿಗುಮಾನ ಸಾಕೆ ತಾವರೆ

ಹಗಲು ಬರುವ ಮೊದಲು ಏಕೆ
ಮುಗಿಲು ಕೆಂಪಿನ ಸಾಲು
ರವಿರಾಯನ ರಥದಲ್ಲೂ
ಹೊರ ಚೆಲ್ಲುವ ಕೆಂಧೂಳು
ಸುಳ್ಳು ಸುದ್ದಿ ಪೊಳ್ಳು ಕಥೆ ಬೇಡ
ಜನ ನಂಬದಂಥ ಮಾತ ಹೇಳ ಬೇಡ
ಬಲು ಜಾಣೆ ನೀನೇ ಪೇಳೆ
ಸುರಲೋಕದ ಕೆನ್ನೀರೇ
ಶುಭ ರಾಣಿ ತಂದು ಚೆಲ್ಲಿರೆ
ಕೆಂಪಾದದು ಸೂರ್ಯನ ಮೋರೆ

ಹರೆಯ ಬಂದ ಸಮಯ ಇವ
ಗೆಳೆಯ ಕೋಮಲರಾಯ
ಇವನಾರೇ ಈವಯ್ಯ
ಇದು ಯಾರೋ ಪರಕೀಯ
ಅಲ್ಲಿ ಇಲ್ಲಿ ಸುತ್ತಿ ಬಂದ ಧೀರ ಇವ
ಳಂತರಂಗ ಸೂರೆಗೈದು ಪೂರ
ಭಲೇ ಶೂರ ಭಾರೀ ಚೋರ
ಸರಿ ತನ್ನಿರೆ ಕೆನ್ನೀರ
ಪಿಚಕಾರಿ ತುಂಬಿ ಚೆಲ್ಲಿರೇ
ಕೆಂಪಾಗಲಿ ಈತನ ಮೋರೆ


06. ಓ ಸುರ ಸುಂದರಿ
ರಚನೆ : ಕುರಸೀ
ಹಾಡಿದವರು : ಜಮುನಾರಾಣಿ ಮತ್ತು ಸಂಗಡಿಗರು.


ತನ್ನ ಗುರು ತಪೋಶಕ್ತಿಯಿಂದ  ಸ್ವರ್ಗಲೋಕದ ಅಪ್ಸರೆಯರೊಂದಿಗೆ ಮದಿರಾಪಾನ ಮಾಡುತ್ತಾ ನರ್ತಿಸಿದಂತೆ ಶುಕನಿಗೆ ಭಾಸವಾಗುವ  ಸಂದರ್ಭದ ಹಾಡಿದು. ಆರಂಭ ಸಲಿಲ್ ಚೌಧುರಿ ಅವರ ಯಾವುದೋ ಹಾಡು ಕೇಳುತ್ತಿದ್ದೇವೇನೋ ಎಂಬ ಭ್ರಮೆ ಉಂಟು ಮಾಡುತ್ತದೆ. ತಿಶ್ರ ನಡೆಯಲ್ಲಿದೆ.  ಅನುಮಾನವೇನು ಪದದ ನಂತರ ಚೇಲೋದಲ್ಲಿ ನುಡಿಸುವ ಒಂದು ಸಣ್ಣ ಬ್ರಿಜ್ ಪೀಸ್ ವಿಶೇಷ ಪರಿಣಾಮ ಉಂಟು ಮಾಡಿದೆ.  ಕಥೆಯಲ್ಲಿ ಕಾಲ್ಪನಿಕ ಸಂದರ್ಭವಾದ್ದರಿಂದ ಗಿಟಾರ್, ಕ್ಲಾರಿನೆಟ್ ಇತ್ಯಾದಿಗಳನ್ನು ಬಳಸಿ ಮೆಲೊಡಿ ಕೌಂಟರ್ ಮೆಲೊಡಿಗಳ interlude  ಬಳಸಲಾಗಿದೆ. ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ಋಷಿ ಮುನಿಗಳ ಸುತ್ತ ಅಪ್ಸರೆಯರು ನರ್ತಿಸುವುದುಂಟು.  ಆದರೆ ಇಲ್ಲಿ ಮುನಿಯೂ ನೃತ್ಯದಲ್ಲಿ ಭಾಗಿಯಾಗಿರುವುದು ವಿಶೇಷ.
 
ಓ ಸುರಸುಂದರಿ ಬಾರೆಂದೆಯಾ ಸುಖ ತಾರೆಂದೆಯಾ
ನಾನೂ ನೀನು ಹಾಲು ಜೇನು ಅನುಮಾನವೇನು

ಕೈಲಾಸ ವಾಸ ನೀ ಕೋರಿದಂದು
ನೀ ಕೋರಿದಂದು
ಈ ಪಾನಕಾನೇ ತಂದೀವುದು
ಇದೇ ಸಾಕೇನು ಸದಾ ಬೇಕೇನು
ನಾನೂ ನೀನು ಹಾಲು ಜೇನು ಅನುಮಾನವೇನು

ವೇದಾಂತ ಸಾರ ಈ ನೃತ್ಯ ಗೀತ
ಈ ನೃತ್ಯ ಗೀತ
ಭಾವಾನುರಾಗ  ಧ್ಯಾನಾಮೃತ
ಭಲೇ ಚಾತುರ್ಯ  ಅತಿ ಮಾಧುರ್ಯ
ಏನೀ ಧೈರ್ಯ ಏನಾಶ್ಚರ್ಯ
ಅಪರೂಪ ನ್ಯಾಯ


07. ಕೋ ಜನ್ಮದಾತಾ
ರಚನೆ : ವಿಜಯನಾರಸಿಂಹ
ಹಾಡಿದವರು : ಪಿ.ಸುಶೀಲಾ


ಇದು ಟೈಪಿಂಗ್ ಮಿಸ್ಟೇಕ್ ಅಂದುಕೊಂಡಿರಾ?  ಖಂಡಿತ ಅಲ್ಲ.  ಎಲ್ಲರೂ ಸಹಜವಾಗಿಯೇ ಅಂದುಕೊಳ್ಳುವಂತೆ   ಈ ಹಾಡಿನ ಮೊದಲ ಸಾಲು  ‘ಓ ಜನ್ಮದಾತಾ’ ಅಲ್ಲ. ಅದು  ‘ಕೋ ಜನ್ಮದಾತಾ’.  ಅಂದರೆ ನಾನು ಬೇರೇನೂ ನೀಡಲಾರೆ, ಕಣ್ಣೀರ ಧಾರೆಯನ್ನೇ ಕೋ ಅಂದರೆ ತೆಗೆದು ಕೋ ಎಂದರ್ಥ.  ಅರಮನೆಯನ್ನು ತ್ಯಜಿಸಿ ಬಂದ ಗೌರಿಗೆ ತನ್ನ ತಂದೆಯ ಸಾವಿನ ಸುದ್ದಿ ತಿಳಿದಾಗ ತನ್ನ ದುರ್ವಿಧಿಯನ್ನು ನೆನೆದು ಆಕೆ ಶೋಕಿಸುವ ಸಂದರ್ಭದ ಹಾಡಿದು. 22ನೇ ಮೇಳಕರ್ತ ಖರಹರಪ್ರಿಯ ಜನ್ಯ ಸ್ವರಗಳನ್ನು ಹೊಂದಿದೆ. 5 ಅಕ್ಷರಗಳ ಜಂಪೆ ತಾಳದಲ್ಲಿದೆ. ಚರಣದ ಮಧ್ಯದಲ್ಲಿ ಕ್ಲಿಷ್ಟಕರವಾದ ಆಲಾಪ ಇದೆ.
 
ಕೋ ಜನ್ಮದಾತಾ ಆಜನ್ಮ ಪೂರ್ತ
ಕಣ್ಣೀರ ಧಾರೆ
ಇನ್ನೇನು ಬೇರೆ ನಾ ನೀಡಲಾರೆ

ಹೊರಹೊಮ್ಮಿ ಎದೆಯಿಂದ ಕಣ್ಣಾರೆ ಬಂದ
ಗಂಗೋದಕ
ಹಾರೈಸಿ ಮರೆಯಾದ ನಿನ್ನಾತ್ಮ ತಣಿಸೆ
ಹಾರೈಸಿ ನಾ ತಂದ ಈ ಶೋಕ ಧಾರೆ
ಈ ಅಂತ್ಯ ಧಾರೆ

ಕೈಲಾಸ ನಿನಗಾಗಿ ಕೈ ಚಾಚಿ ಕರೆದು
ಬಾ ಎಂದಿತೇ
ನಿನ್ನಾಯು ಇಂತೇ ಹಣ್ಣಾಯಿತೇಕೆ
ಓ ನನ್ನ ತಂದೆ ನಾ ನೀವುದೊಂದೇ
ಈ ಅಂತ್ಯ ಧಾರೆ

08. ಯಾರಿಗೆ ಯಾರಿಹರೋ
ರಚನೆ : ಕುರಸೀ
ಹಾಡಿದವರು : ರಘುನಾಥ ಪಾಣಿಗ್ರಾಹಿ.


ಮಾಯಾಮಾಳವಗೌಳದಲ್ಲಿ ಅನ್ಯ ಸ್ವರವಾಗಿ  ಗ2 ಅಂದರೆ ಸಾಧಾರಣ ಗಾಂಧಾರ(ಹಿಂದುಸ್ಠಾನಿಯಲ್ಲಿ ಕೋಮಲ ಗಾಂಧಾರ) ಬಳಸಿದ ಶೋಕ ಛಾಯೆಯ ಈ ಹಿನ್ನೆಲೆ ಹಾಡಿನ ಒಂದೇ ಚರಣ ಲಭ್ಯವಿರುವುದು.  ಪ್ರಖ್ಯಾತ ನೃತ್ಯಾಂಗನೆ ಸಂಯುಕ್ತಾ ಪಾಣಿಗ್ರಾಹಿಯ ಪತಿ ರಘುನಾಥ ಪಾಣಿಗ್ರಾಹಿ ಹಿನ್ನೆಲೆಯ ಹಾಡುಗಳಿಗೇ ಸೀಮಿತವಾಗಿದ್ದವರು.  ಪ್ರೇಮದ ಪುತ್ರಿಯ ಪ್ರೇಮವೇ ದೈವ ಇವರ ಪ್ರಸಿದ್ಧ ಹಾಡು.
 
ಯಾರಿಗೆ ಯಾರಿಹರೋ
ಬಾಳಿನ ಜಾತ್ರೆಯು ಸೇರಿಹುದೋ

ಜಾತ್ರೆಯಲಿರುವ ನೆರೆಹೊರೆ ಎಲ್ಲ
ನೆಂಟರು ನಿನಗೆ ಎಲ್ಲಿಯ ವರೆಗೆ
ಆಸೆಯ ಹೂಮಾಲೆ ಮೋಹದ ಲೀಲೆ
ಮೋಸದ ಬಲೆಯೇ ಆ ಮೇಲೆ
ಯಾರಿಗೆ ಯಾರಿಹರೋ
ಬಾಳಿನ ಜಾತ್ರೆಯು ಸೇರಿಹುದೋ

09. ಶರಣು ಶಂಭೋ
ರಚನೆ : ಕುರಸೀ
ಹಾಡಿದವರು : ರಾಜ್‌ಕುಮಾರ್.


ಪಂತುವರಾಳಿ ಮಿಶ್ರ ಸ್ವರಗಳಿರುವ ಈ ಹಾಡನ್ನು ರಾಜ್‌ಕುಮಾರ್ ಅವರು ವೃತ್ತಿಪರ ಗಾಯಕರಿಗೆ ಕಮ್ಮಿ ಇಲ್ಲದಂತೆ ಹಾಡಿದ್ದಾರೆ.  ಅವರ ಮೊದಲ ಹಾಡೆಂದು ಇದಕ್ಕೆ ಚಾರಿತ್ರಿಕ ಮಹತ್ವ. ಮೊದಲ ಚಿತ್ರ ಬೇಡರ ಕಣ್ಣಪ್ಪದಲ್ಲಿ ಅವರಿಗಾಗಿ ಹಾಡಿದ ಸಿ.ಎಸ್. ಜಯರಾಮನ್ ಶೈಲಿಯ ಪ್ರಭಾವ ಕೆಲವು ಸಾಲುಗಳಲ್ಲಿ ಗೋಚರಿಸುತ್ತದೆ. ಆದರೆ ಆ ಕಾಲದಲ್ಲಿ ಈ ಹಾಡಿಗೆ ಸಿಗಬೇಕಾದಷ್ಟು ಮಾನ್ಯತೆ ಸಿಕ್ಕಿಲ್ಲ ಎಂದೇ ಹೇಳಬೇಕು.  ನನಗಿದನ್ನು ರೇಡಿಯೋದಲ್ಲಿ ಎಂದೂ ಕೇಳಿದ ನೆನಪಿಲ್ಲ.  ಇದರ ಗ್ರಾಮಫೋನ್ ತಟ್ಟೆಯೇ ತಯಾರಾಗಿರಲಿಲ್ಲವೇನೋ ಎಂಬ ಅನುಮಾನ ನನಗಿತ್ತು.  ಆದರೆ ಆಗಿತ್ತು ಎಂದು ಈಗ ಗೊತ್ತಾಯಿತು.  ಡಿಸ್ಕ್ ಲೇಬಲ್‌ನಲ್ಲಿ ಅವರ ಹೆಸರು S.P. Rajakumar ಎಂದಿರುವುದನ್ನು ಗಮನಿಸಬಹುದು.


 
ಓಂ ನಮಃ ಶಿವಾಯ  ಓಂ ನಮಃ ಶಿವಾಯ
ಶರಣು ಶಂಭೋ ಶಿವ ಶರಣು ಶಂಭೋ
ಎನ್ನ ಗುರು ತೋರಿದ ಸೋಮೇಶ ಪ್ರಭು

ದಿನ ನೂರು ನೋವು
ಕೊನೆಗೊಂದು ಸಾವು
ದೇಹಕೆ ಬರಲೇಕೆ ಪರಮೇಶ
ಈ ಸ್ಥಿರ ನಾಶ
ಗುರುಚಿರ ಮೋಕ್ಷ
ಒಂದೇ ಅವಿನಾಶ
ಅದನೇ ಪಡೆದೇನೇ ಪ್ರಭು

ಆದಿಮೂಲ ಕರುಣಾಲವಾಲ
ಪರಿಪೂರ್ಣ ಶಾಂತಗುಣ ಸುಶೀಲ
ನೀಲಕಂಠ ನಿಗಮಾಂತಸಾರ
ಸ್ವಾಪಾಂಚಕೇಶನಿವ ನಿವಾಲ

ಸತಿಸೌಖ್ಯದಿಂದ ಮತಿಗೇಡಿಯಾದೆ
ಜಾಡಿಗೆ ಬರುವಲ್ಲಿ ತಡವಾದೆ
ನಾ ತಡವಾದೆ
ಶರಣರು ನಿಂತ ನಿನ್ನ ಹೊಸಿಲಲ್ಲಿ
ಕಸವಾಗಿಸಿ ಕಾಯೋ ಪ್ರಭು

10. ನಾ ಪಾಪವದೇನಾ ಮಾಡಿದೆನೋ
ರಚನೆ : ವಿಜಯನಾರಸಿಂಹ
ಹಾಡಿದವರು: ಪಿ.ಬಿ.ಶ್ರೀನಿವಾಸ್.


ಹರಿಕಾಂಭೋಜಿ ಸ್ವರಗಳ ಈ ಹಾಡು ರಾಜ್‌ಕುಮಾರ್ ಅವರಿಗಾಗಿ ಪಿ.ಬಿ.ಎಸ್ ಪ್ರಥಮವಾಗಿ ಧ್ವನಿ ನೀಡಿದ್ದೆಂಬ ಚಾರಿತ್ರಿಕ ಮಹತ್ವದ್ದು. 1953ರ ಜಾತಕ ಫಲದಲ್ಲಿ ಈ ಮೂಢತನವಿದೇಕೆ  ಮತ್ತು ಚಿಂತಿಸದಿರು ರಮಣಿ ಹಾಡುಗಳ ನಂತರ 1955ರ ಆದರ್ಶ ಸತಿಯ ಪಾಪಿಯ ಜೀವನ ಪಾವನಗೊಳಿಸುವ ಪರಶಿವ ಲಿಂಗ ನಮೋ ಸೂಪರ್ ಹಿಟ್ ಆಗಿ ಪಿ.ಬಿ.ಶ್ರೀನಿವಾಸ್ ಕನ್ನಡದಲ್ಲಿ ಮನೆ ಮಾತಾಗಿದ್ದರು.  ನಂತರ ಬಂದದ್ದೇ ಈ ಹಾಡು. ರಾಜ್‌ಕುಮಾರ್ ಅವರು D Sharp ಶ್ರುತಿಯಲ್ಲಿ ಶರಣು ಶಂಭೋ ಹಾಡಿದ್ದರೆ ಅದಕ್ಕಿಂತ ಒಂದು ಪಟ್ಟಿ ಕೆಳಗೆ  C Sharpನಲ್ಲಿ ಈ ಹಾಡಿತ್ತು.  ಪಿ.ಬಿ.ಎಸ್ ಪ್ರತಿಭೆ ಪೂರ್ಣ ಹೊರ ಹೊಮ್ಮುವುದು ಮಧ್ಯ ಮತ್ತು ಮಂದ್ರ ಸಪ್ತಕಗಳಲ್ಲಿ.  ಈ ಹಾಡಿನ ಬಹುತೇಕ ಭಾಗ   ಮಂದ್ರ ಪಂಚಮದಿಂದ ಆರಂಭಿಸಿ ಅವರಿಗೆ ಅನುಕೂಲವಾದ ಮಧ್ಯ ಸಪ್ತಕದಲ್ಲೇ ಸಂಚರಿಸುತ್ತದೆ. ಆದರೆ  ಕೊನೆಯ ಭಾಗದ ಸಾಲುಗಳು  ತಾರ ಸಪ್ತಕದ ಮಧ್ಯಮದ ವರೆಗೆ ಹೋಗುವುದು ಅವರಿಗೆ ಸ್ವಲ್ಪ ಅನಾನುಕೂಲವಾಯಿತೇನೋ ಎಂದೆನ್ನಿಸುತ್ತದೆ.  ರಫಿಯವರ ಓ ದುನಿಯಾ ಕೇ ರಖ್‌ವಾಲೇಯ ನಂತರ ಹಾಡುಗಳನ್ನು ತಾರ ಸ್ಥಾಯಿಗೊಯ್ಯುವ ಪರಿಪಾಠ ಆರಂಭವಾಗಿತ್ತು.  ಈ ಹಾಡಿನ ತುಣುಕು  ಕೂಡ ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಿನ ಭಾಗವಾಗಿತ್ತು.
 
ನಾ ಪಾಪವದೇನಾ ಮಾಡಿದೆನೋ
ನಿನ್ನ ಪಾದಕೆ ದೂರ ಆಗಿಹೆನೋ
ನಾ ಪಾಪವದೇನಾ ಮಾಡಿದೆನೋ

ಮೋಕ್ಷದ ಮೂಲ ನೀನೆಂದೇ ನಾ
ಧಾವಿಸಿ ಬಂದೆ ಓ ತಂದೆ
ತೀರದ ತಾಪ ಏರುತಿದೆ
ನಿನ್ನ ಕಾಣದೆ ಜೀವ ಬೇಯುತಿದೆ

ನಿನ್ನಡಿಯೊಂದು ತೃಣವಾದರೂ ನಾ
ಎನ್ನನು ಯಾರೋ ನೂಕುವರು
ಹೊನ್ನಿನ ಬಾಳು ಹೂ ಪತ್ರೆಯದೋ
ನಿನ್ನಯ ಪಾದ ಸೇರುವುದೋ
ಪಾಪಿಯ ಜನ್ಮ ಏತಕೊ ಕಾಣೆ
ಭೂಮಿಗೆ ಭಾರ ಆಗಿಹೆನೇ
ಭೂಮಿಗೆ ಭಾರ ಆಗಿಹೆನೇ

ಜಯಜಯ ಮಂಗಳಮಯ ಮಹಿಮೋದಯ
ಸಾಂಬಸದಾಶಿವನೇ
ಜಯಜಯ ನಿತ್ಯ ನಿರಾಕುಳನಿರ್ಮಲ
ಜಯಜಯ ಶಂಕರನೇ
ಸಾಂಬಸದಾಶಿವನೇ


11. ದೇಹದಿಂದ ದೂರನಾದೆ
ರಚನೆ : ವಿಜಯನಾರಸಿಂಹ
ಹಾಡಿದವರು : ಘಂಟಸಾಲ


ಒಂದೆರಡು ಕಡೆ  ಧೈವತವನ್ನು ಸ್ಪರ್ಶಿಸುವುದರಿಂದ ಈ ಹಾಡು ಭೀಮ್‌ಪಲಾಸ್‌ನಲ್ಲಿದೆ ಅನ್ನಬಹುದಾದರೂ  ಶುದ್ಧ ಧನ್ಯಾಸಿ ನಡೆಯೇ ಇದರಲ್ಲಿ ಹೆಚ್ಚು ಇದೆ. ಆದಿಪ್ರಾಸ, ಅಂತ್ಯಪ್ರಾಸಗಳ ಬಂಧವಿಲ್ಲದ ಅರ್ಥಪೂರ್ಣ ಸಾಹಿತ್ಯ  ತಿಶ್ರ ನಡೆಗೆ ಅಚ್ಚುಕಟ್ಟಾಗಿ ಹೊಂದುವ ಸುಲಭವಾಗಿ ಅರ್ಥವಾಗುವ ಸರಳ ಪದಗಳನ್ನು ಹೊಂದಿರುವುದು ಈ ಹಾಡಿನ ಅಪಾರ  ಜನಪ್ರಿಯತೆಗೆ  ಕಾರಣವಾಗಿರಬಹುದು.  ನಮ್ಮ ಮನೆಗೆ 1962ರಲ್ಲಿ ನ್ಯಾಶನಲ್ ಎಕ್ಕೋ ಸೆಕೆಂಡ್ ಹ್ಯಾಂಡ್ ವಾಲ್ವ್ ರೇಡಿಯೋ ಬಂದಾಗ ಆಗ ಬೆಂಗಳೂರು ಕೇಂದ್ರದಿಂದ ಸೋಮವಾರ ರಾತ್ರೆ 8ಗಂಟೆಗೆ ಪ್ರಸಾರವಾಗುತ್ತಿದ್ದ ನೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ನಾನು ಮೊತ್ತ ಮೊದಲು ಕೇಳಿದ ಹಾಡು ಕೂಡ ಇದೇ. ಆದರೆ ಈ ಚಾರ್ಟ್ ಬಸ್ಟರ್ ಹಾಡಿನ  ನಂತರ ಜಿ.ಕೆ. ವೆಂಕಟೇಶ್ ಅವರು ಘಂಟಸಾಲ ಅವರ ಧ್ವನಿಯನ್ನೂ ಒಮ್ಮೆಯೂ ಬಳಸಿಕೊಳ್ಳದಿರುವುದು ಅಚ್ಚರಿಯ ವಿಚಾರ.
 
ಹೇ ಶಂಕರಾ ದಯಾನಿಧೇ

ಈ ದೇಹದಿಂದ ದೂರನಾದೆ ಏಕೆ ಆತ್ಮನೇ
ಈ ಸಾವು ನ್ಯಾಯವೇ
ಆಧಾರ ನೀನೆಂದು ಈ ಲೋಕ ನಂಬಿದೆ
ಈ ದೇಹದಿಂದ ದೂರನಾದೆ ಏಕೆ ಆತ್ಮನೇ

ತಾಯಿಹಾಲು ವಿಷವದಾಗೆ ನ್ಯಾಯವೆಲ್ಲಿದೆ
ಕಾವ ದೇವ ಸಾವು ತರಲು ಎಲ್ಲಿ ರಕ್ಷಣೆ
ಯಾವ ಪಾಪಕೆ ಸಾವು ಕಾಡಿತೋ
ಪರಮಾತ್ಮ ನ್ಯಾಯ ಬೇಡವೇ
ಈ ಸಾವು ನ್ಯಾಯವೇ

ಸೇವೆಗಾಗಿ ಕಾದ ಹೂವು ಕಸವ ಸೇರಿತೇ
ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೇ
ಏನು ತಪ್ಪಿದೆ ಹೇಳಬಾರದೆ
ಸರಿಯೇನು ಮೌನವೇಕಿದು
ಈ ಸಾವು ನ್ಯಾಯವೇ

ಶಿವನಾಮ ಮಂತ್ರವೊಂದೇ ಅಮರ ದೀವಿಗೆ
ಪರಮೇಶ ಪ್ರಾಣಜ್ಯೋತಿ ಮರಳಿ ತಾರೆಯಾ
ಈ ದೇಹದಿಂದ ದೂರನಾದೆ ಏಕೆ ಆತ್ಮನೇ
ಈ ಸಾವು ನ್ಯಾಯವೇ


12. ಪಾತಕಿ ನಾನಾದೆ
ರಚನೆ : ವಿಜಯನಾರಸಿಂಹ
ಹಾಡಿದವರು : ಟಿ.ಎಂ. ಸೌಂದರರಾಜನ್.


ಬಿಳಿ ಮೂರರ ಏರು ಶ್ರುತಿಯಲ್ಲಿ ತಾರ ಸಪ್ತಕದ ಪ್ರತಿ ಮಧ್ಯಮವನ್ನು ಸ್ಪರ್ಶಿಸುವ ಹಂಸಾನಂದಿ ರಾಗದ  ಈ ಶುದ್ಧ ಶಾಸ್ತ್ರೀಯ ಧಾಟಿಯ ಹತಾಶ ಭಾವದ ಪತಾಕಾ ಗೀತೆಗೆ ಸ್ವಲ್ಪ ಒರಟುತನವೂ ಅಗತ್ಯವಿದೆ ಅನಿಸಿದ್ದರಿಂದ ಟಿ.ಎಂ. ಸೌಂದರರಾಜನ್ ಅವರ ಧ್ವನಿಯನ್ನು ಆಯ್ಕೆ ಮಾಡಿರಬಹುದು. ನಾಭಿಯಿಂದ ಹೊರಡುವ ಧ್ವನಿ ಮತ್ತು ವಾಯ್ಸ್ ಥ್ರೋ ಮಟ್ಟಿಗೆ ದಕ್ಷಿಣ ಭಾರತದಲ್ಲಿ ಟಿ.ಎಂ. ಸೌಂದರರಾಜನ್ ಮತ್ತು ಎಲ್.ಆರ್. ಈಶ್ವರಿ ಹಾಗೂ ಹಿಂದಿಯಲ್ಲಿ ಕಿಶೋರ್ ಕುಮಾರ್ ಮತ್ತು ಶಂಶಾದ್ ಬೇಗಂ ಅವರಿಗೆ ಸರ್ಸಾಟಿ ಯಾರೂ ಇಲ್ಲ.  ಟಿ.ಎಂ. ಸೌಂದರರಾಜನ್ ಧ್ವನಿಯನ್ನು ಜಿ.ಕೆ. ವೆಂಕಟೇಶ್ ಕನ್ನಡ ಚಿತ್ರಗಳಲ್ಲಿ ಆ ಮೇಲೆ ಎಂದೂ ಬಳಸಿದ್ದಿಲ್ಲ.
 
ಪಾತಕಿ ನಾನಾದೆ ಪರಮ
ಪಾರ್ವತಿನಾಥನ ವಿಧಿ ಮೀರಿದ ಪರಮ
ಪಾತಕಿ ನಾನಾದೆ

ಪಾಪವ ಸುಡಲೊಂದು ಧೂಪವೆ ಸಾಕೆಂದು
ಆಣತಿ ನೀಗೈದೆ ಅದ ಮುರಿದ ಪರಮ
ಪಾತಕಿ ನಾನಾದೆ

ಅಲಸಿಕೆ ಇಲ್ಲದೆ ಸುಲಭದ ಸೇವೆಯ
ಸಲಿಸದೆ ನಾ ಬಂದೆನೋ
ನಿನ್ನ ಒಲವಿಗೆ ಹೇರಾದೆನೋ
ಕ್ಷುಲ್ಲಕ ಈ ಜನ್ಮ ನೀಗುವುದೇ ಕ್ಷೇಮ
ವರ ನೀಡಿದ ದೊರೆಯ ಸಿರಿಯ
ದೂರ್ಜಟಿಯ ವಂಚಿಸಿ ಪರಮ
ಪಾತಕಿ ನಾನಾದೆ

ಮಾತನು ನಡೆಸದ ಘಾತುಕನೆಂಬುವ
ಯಾತನೆಯ ತೀರಿಸೋ ಎನ್ನ
ಚೇತನವ ಆರಿಸೋ
ಈ ತನು ಇನ್ನೇಕೆ  ಈ ತರ ಬದುಕೇಕೆ
ರೀತಿ ನೀತಿಯಲಿ  ಪಾಪಗೈದ ಕಡು
ಪಾತಕಿ ಜೀವನ ಕೊನೆಗೊಳಿಸೊ
ಹಣೆಯ ಕಣ್ಣಿನ ಕಿಡಿಯ ಸಿಡಿಸೊ
ದಣಿದ ಪಾಪಿಯ ತನು ದಹಿಸೊ
ದೇಹ ಧೂಪಾಗ್ನಿ ಸೇವೆ ಕೈಗೊಂಡು
ದೋಷವ ಪರಿಹರಿಸೊ
ಪಾಪಿಯ ತನು ಉರಿಸೊ

13. ವಚನಗಳು
ಹಾಡಿದವರು : ರಾಜ್‌ಕುಮಾರ್.


ಈ ಚಿತ್ರದಲ್ಲಿ ಸೋಮನಾಥ ಅಂಕಿತದೊಂದಿಗೆ ಬಸವಣ್ಣ ಮುಂತಾದವರ ಅನೇಕ ವಚನಗಳನ್ನು ಬಳಸಿಕೊಳ್ಳಲಾಗಿದ್ದು ಸ್ವತಃ ರಾಜ್‌ಕುಮಾರ್ ಅವುಗಳನ್ನು ಬಲು ಸುಶ್ರಾವ್ಯವಾಗಿ ಹಾಡಿದ್ದಾರೆ.  ಚಿತ್ರದುದ್ದಕ್ಕೂ ಅಲ್ಲಲ್ಲಿ ಇರುವ ಅವುಗಳನ್ನು ಕೇಳುವವರ ಅನುಕೂಲಕ್ಕಾಗಿ ಇಲ್ಲಿ ಒಟ್ಟಿಗೆ ಸೇರಿಸಲಾಗಿದೆ. ಮಂಕುತಿಮ್ಮನ ಕಗ್ಗದ  ಸಾಲುಗಳನ್ನೂ ಬಳಸಲಾಗಿರುವುದು ವಿಶೇಷ.
 
ಹುಲ್ಲಾಗು ಬೆಟ್ಟದಲಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ
ಎಲ್ಲರೊಳು ಒಂದಾಗಿ ಬಾಳಿ ನೀವು

ವಚನದಲಿ ನಿಮ್ಮ ನಾಮಾಮೃತ ತುಂಬಿ
ನಯನದಲಿ ನಿಮ್ಮ ಮೂರುತಿಯ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿಯ ತುಂಬಿ
ಸೋಮನಾಥೇಶ ನಿಮ್ಮ 
ಚರಣ ಕಮಲದೊಳಗಾನು ತುಂಬಿ

ಅಯ್ಯಾ ಅಯ್ಯಾ ಎಂದು ಕರೆವುತ್ತಲಿದ್ದೇನೆ
ಅಯ್ಯಾ ಅಯ್ಯಾ ಎಂದು  ಒರಲುತ್ತಲಿದ್ದೇನೆ
ಓ ಎನ್ನಲಾಗದೇ ಅಯ್ಯಾ
ಆವಾಗಲೂ ನಿಮ್ಮ ಕರೆವುತ್ತಲಿದ್ದೇನೆ
ಮೌನವೇಕೋ ಸೋಮನಾಥೇಶ

ಅಕಟಕಟಾ ಶಿವ ನಿನಗಿನಿತು ಕರುಣವಿಲ್ಲ
ಅಕಟಕಟಾ ಶಿವ ನಿನಗಿನಿತು ಕೃಪೆಯಿಲ್ಲ
ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ
ಪರಲೋಕ ದೂರನ ಏಕೆ ಹುಟ್ಟಿಸಿದೆ
ಸೋಮನಾಥೇಶ ಹೇಳಯ್ಯ
ಎನಗಾಗಿ ಮತ್ತೊಂದು ತರುಮರಾದಿಗಳಿದ್ದಿಲ್ಲವೇ
ಹೇಳಯ್ಯ ಸೋಮನಾಥೇಶ

ಕಾಗೆ ಒಂದಗಳ ಕಂಡರೆ
ಕರೆಯದೇ ತನ್ನ ಬಳಗವನ್ನು
ಕೋಳಿ ಒಂದು ಕುಟುಕ ಕಂಡರೆ
ಹೋಗಿ ಕರೆಯದೇ ತನ್ನ ಕುಲವೆಲ್ಲವ
ಶಿವಭಕ್ತನಾಗಿ ಶಿವಭಕ್ತಿ ಪಕ್ಷವಿಲ್ಲದಿದ್ದರೆ
ಆ ಕಾಗೆ ಕೋಳಿಗಿಂತ ಕರ ಕಷ್ಟ

ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ ನೆಲವೊಂದೇ
ಜಲವೊಂದೇ ಶೌಚ ಆಚಮನಕ್ಕೆ ಜಲವೊಂದೇ
ಕುಲವೊಂದೇ ತನ್ನ ತಾನರಿತಂಗೆ
ಫಲವೊಂದೇ ಸದ್ದರ್ಶನ ಮುಕ್ತಿಗೆ
ನಿಲೆವೊಂದೇ ನಮ್ಮ ಸೋಮನಾಥೇಶನ ಅರಿತವಂಗೆ

ಹಾಲೆಂಜಲು ಮಗುವಿನ
ಉದಕವೆಂಜಲು ಮೀನಿನ
ಪುಷ್ಪವೆಂಜಲು ತುಂಬಿಯ
ಎಂತು ಪೂಜಿಸುವೆನಯ್ಯ ಶಿವ ಶಿವ
ತಂದುದಕ ಇಕೋ ಸೋಮನಾಥೇಶ

ಮೊರನ ಗೊಟ್ಟಿಗೆ ಬಪ್ಪ
ಕಿರುಕುಳದ ದೈವಕ್ಕೆ
ಕುರಿಯನಿತ್ತಿಹೆನೆಂದು ನಲಿನಲಿದಾಡುವಿರೇ
ಕುರಿ ಸತ್ತು ಕಾಯುವುದೇ ಹರ ಮುಳಿದವರ
ಕುರಿ ಬೇಡ ಮರಿ ಬೇಡ ಬರಿ ಪತ್ರೆ ತಂದು
ಮರೆಯದೇ ಪೂಜಿಸಿದರೆ ಸಾಲದೇ
ನಮ್ಮ ಸೋಮನಾಥೇಶನ

14. ಬೇರೆ ಪಾತ್ರಧಾರಿಗೆ ಹಿನ್ನೆಲೆ ಧ್ವನಿ



ರಾಜ್‍ಕುಮಾರ್ ಅವರು ಮುದ್ದಿನ ಮಾವ ಚಿತ್ರದಲ್ಲಿ ಎಸ್.ಪಿ. ಬಾಲಸುಬ್ರಹ್ಮಣಿಯಂ ಅವರಿಗೆ ಹಿನ್ನೆಲೆ ಹಾಡಿದ್ದು ವಿಶೇಷ ಸುದ್ದಿಯಾಗಿತ್ತು.  ಆದರೆ ಅದಕ್ಕಿಂತಲೂ ಮುಂಚೆ ಈ ಚಿತ್ರದಲ್ಲಿ ಉಧ್ಭಟ ಮಹಾರಾಜನ ಪಾತ್ರ ವಹಿಸಿದ್ದ ಸಿದ್ದಯ್ಯ ಸ್ವಾಮಿ ಅವರಿಗಾಗಿ ರಾಜ್ ಅವರು ಶಂಕರಾಚಾರ್ಯ ವಿರಚಿತ ಶಿವಾಪರಾಧ ಕ್ಷಮಾಪಣಾ ಸ್ತೋತ್ರದ 10ನೇ ಶ್ಲೋಕ ಹಾಡಿದ್ದನ್ನು ಯಾರೂ ಗಮನಿಸಿದಂತಿಲ್ಲ.
 

ಸ್ಥಿತ್ವಾ ಸ್ಥಾನೇ ಸರೋಜ ಪ್ರಣವಮಯಮರುತ್ಕುಂಭಿತೇ ಸೂಕ್ಷ್ಮಮಾರ್ಗೇ
ಶಾಂತೇ ದಾಂತೇ ಪ್ರಲೀನೇ ಪ್ರಕಟಿತದಹನೇ ದಿವ್ಯರೂಪೇ ಶಿವಾಖ್ಯೇ
ಲಿಂಗಾಗ್ರೇ ಬ್ರಹ್ಮವಾಕ್ಯೇ ಸಕಲಗತತನೌ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇಪರಾಧಃ ಶಿವ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ

15. ಜ್ಯೋತಿ ಬೆಳಗುತಿದೆ.
ಸಂಗೀತ ನಿರ್ದೇಶಕ  ಜಿ.ಕೆ. ವೆಂಕಟೇಶ್ ಈ ಹಿಂದಿನ ಹರಿಭಕ್ತ ಚಿತ್ರದಲ್ಲಿ ಹರಿಯ ವಿಲಾಸದಾ ಮಹಿಮೆ ಎಂಬ ಒಂದು ಹಾಡು ಹಾಡಿದ್ದರು. ಈ ಚಿತ್ರದಲ್ಲೂ ಎರಡು ಸಾಲು ಹಾಡಿದ್ದಾರೆ.  ಹಾಡುವ ಉತ್ಸಾಹ ಇದ್ದರೂ ಅವರಲ್ಲಿ ಸಾಕಷ್ಟು stamina ಇರಲಿಲ್ಲ ಎಂದು ಓರ್ವ ಹಿರಿಯ ನಿರ್ದೇಶಕರು ಹೇಳಿದ್ದನ್ನು ಕೇಳಿದ್ದೇನೆ. ಹೀಗಾಗಿ ಅವರು ಕೆಲವೇ ಗೀತೆಗಳನ್ನು ಹಾಡಿದರು.  ಅವೆಲ್ಲವೂ ಜನಪ್ರಿಯವೂ ಆದವು.


ಕೆಳಗಿನ ಪಟ್ಟಿಯನ್ನು Scroll  ಮಾಡುತ್ತಾ ಹಾಡುಗಳನ್ನು ಆರಿಸಿ ಆಲಿಸಿ.