Tuesday 25 August 2015

ಸಿರಿವಂತನಾದರೂ ಕನ್ನಡ ಹಾಡನ್ನಾಲಿಸುವೆ



      ಸಿನಿಮಾದಿಂದಾಗಿ ಜನಪ್ರಿಯವಾಗಿರುವ ಹಾಡುಗಳು, ಹಾಡಿನಿಂದ ಜನಪ್ರಿಯವಾಗಿರುವ ಸಿನಿಮಾಗಳು, ಸಿನಿಮಾದೊಳಗೆ ಸೇರಿ ಜನಪ್ರಿಯತೆ ಗಳಿಸಿದ ಹಾಡುಗಳು,  ಹಾಡುಗಳೇ ಇಲ್ಲದ ಸಿನಿಮಾಗಳು  ಅನೇಕ ಇವೆ.  ಜನಪ್ರಿಯವಾದರೂ ಸಿನಿಮಾದಲ್ಲಿ ಇಲ್ಲದ ಹಾಡುಗಳೂ ಇವೆ. (ಗೆಜ್ಜೆ ಪೂಜೆ ಚಿತ್ರಕ್ಕಾಗಿ ರಚಿಸಲಾದ ಒಂದಿ ದಿನ ರಾತ್ರಿಯಲಿ ಕಂಡೆ ಕನಸೊಂದ ಇದಕ್ಕೆ ಒಂದು ಉದಾಹರಣೆ.)  ಆದರೆ ಈ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಸಿನಿಮಾವೇ ಇಲ್ಲದ ಅತಿ ಜನಪ್ರಿಯ ಹಾಡು. ಈ ಹಾಡನ್ನು ಒಳಗೊಂಡಿರಬೇಕಾಗಿದ್ದ ಸಿ.ವಿ.ಶಿವಶಂಕರ್ ಅವರ ಕಲ್ಪನೆಯ ಸಂಗಮ ಚಿತ್ರವು  ಮೂರ್ತರೂಪ ಪಡೆಯಲೇ ಇಲ್ಲ. ಆದರೆ ಈ ಹಾಡಿನಲ್ಲಿ ಅವರ  ಉತ್ಕೃಷ್ಟ ಸಾಹಿತ್ಯ, ಕೆ.ಪಿ.ಸುಖದೇವ್ ಎಂಬ ಹೊಸಬರ ಆಕರ್ಷಕ ಸಂಗೀತ ನಿರ್ದೇಶನ ಮತ್ತು ಪಿ.ಬಿ.ಶ್ರೀನಿವಾಸ್ ಮತ್ತು ಹೊಸ ಗಾಯಕಿ ಸಿ.ಕೆ.ರಮಾ ಅವರ  ಮಧುರ ಧ್ವನಿಗಳ ಸಂಗಮ ಆದದ್ದಂತೂ ನಿಜ. ಬಡವ ಸಿರಿವಂತ ಎಂಬ ಭೇದವಿಲ್ಲದೆ ಎಲ್ಲರೂ ಈ ಚಿತ್ರ(ರಹಿತ)ಗೀತೆಯನ್ನು ಮೆಚ್ಚುತ್ತಾರೆ.  (ಈ ಹಾಡಿಗೆ ಹೇಳಲಾದರೂ ಒಂದು ಚಿತ್ರದ ಹೆಸರಿದೆ. ಆದರೆ ಕವಿ ಪ್ರದೀಪ್ ವಿರಚಿತ ಹಿಂದಿಯ ಏ ಮೇರೆ ವತನ್ ಕೆ ಲೊಗೋ  ಚಿತ್ರದ ಹೆಸರಿನ ಹಂಗೂ ಇಲ್ಲದೆ ಜನಪ್ರಿಯತೆಯ ಶಿಖರವನ್ನೇರಿದ ಗೀತೆ.)


     ಯಾವುದೇ ಎಲೆಕ್ಟ್ರಾನಿಕ್ ವಾದ್ಯಗಳನ್ನು ಬಳಸದೆ ಕೊಳಲು, ವೀಣೆ, ಕ್ಲಾರಿನೆಟ್, ಸಿತಾರ್, ಎಕಾರ್ಡಿಯನ್,  ವಯಲಿನ್ಸ್,  ಢೋಲಕ್, ತಬ್ಲಾ ಮುಂತಾದವುಗಳನ್ನಷ್ಟೇ  ಉಪಯೋಗಿಸಿದ ವಾದ್ಯವೃಂದ ಸಿ.ವಿ.ಶಿವಶಂಕರ್ ಅವರ  ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕ  ಆರ್.ರತ್ನ  ಅವರ ಮೇಲ್ವಿಚಾರಣೆಯದ್ದೇ ಆಗಿರಬಹುದು ಎಂದು ನನ್ನ ಊಹೆ.  ಹಿಂದೋಳಕ್ಕೆ ಪಂಚಮ ಸೇರಿಸಿದಾಗ ಉಂಟಾಗುವ ಪಂಚಮ್ ಮಾಲಕೌಂಸ್(ಕರ್ನಾಟಕ ಸಂಗೀತದ ಜಯಂತಶ್ರೀ) ರಾಗಾಧಾರಿತವಾಗಿದೆ ಈ ಹಾಡು. ಬಿಳಿ 5ರ ಏರು ಶ್ರುತಿಯ ಆಯ್ಕೆ ಹಾಡಿನ ಮೂಡಿಗೆ ತಕ್ಕ ಉಠಾವ್ ಒದಗಿಸಿದೆ. ಅಲ್ಲದೆ ಈ ಏರು ಶ್ರುತಿಯಿಂದಾಗಿ  ವಾಸ್ತವವಾಗಿ ತಾರ ಷಡ್ಜವನ್ನಷ್ಟೇ ಮುಟ್ಟಿರುವ ಕೊನೆಯಲ್ಲಿ ಪುನರಾವರ್ತನೆಗೊಳ್ಳುವ ಮಣ್ಣಾಗಿ ನಿಲುವೆ ಎಂಬ ಸಾಲು ತಾರ ಪಂಚಮವನ್ನು ಸ್ಪರ್ಶಿಸಿತೇನೋ ಎಂಬ ಭ್ರಮೆಯುಂಟಾಗುತ್ತದೆ! ಅಂದಿನ RCA Sound System ನ ವಿಶೇಷತೆಯಾದ  ಗಾಯಕರ ಧ್ವನಿಯನ್ನು ಎತ್ತಿಕೊಡುವುದರ ಜೊತೆಗೆ  ಪ್ರತಿಯೊಂದು ವಾದ್ಯವನ್ನು ನಿಖರವಾಗಿ ಆಲಿಸಲು ಸಾಧ್ಯವಾಗಿಸುವ presence of instruments ಇದರಲ್ಲೂ ಇದೆ. ಉಸಿರಿನ ಸದ್ದು ಒಂದಿನಿತೂ ಕೇಳಿಸದಿರುವುದು recordist ಮತ್ತು ಗಾಯಕರ ವೃತ್ತಿಪರತೆಗೆ ಪುರಾವೆ.  ಇಂದಿನ ಮಲ್ಟಿ ಚಾನಲ್ ಕಂಪ್ಯೂಟರ್ ರೆಕಾರ್ಡಿಂಗ್ ಯುಗದಲ್ಲಿ ಇಂತಹ ಸ್ಪಷ್ಟತೆ ಎಂದೂ ಕಾಣ ಸಿಗದು.

     ಅಂದಿನ ದಿನಗಳಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗಿ ಕೆಲವು ತಿಂಗಳುಗಳು ಕಳೆದ ಮೇಲಷ್ಟೇ ಹಾಡುಗಳ ಧ್ವನಿಮುದ್ರಿಕೆಗಳು ಬಿಡುಗಡೆಗೊಂಡು ರೇಡಿಯೊ ಮತ್ತಿತರ ಕಡೆ ಕೇಳಿಸತೊಡಗುತ್ತಿದ್ದವು.  ಆದರೆ ಚಿತ್ರವು ಸೆಟ್ಟೇರದೇ ಇದ್ದರೂ 6 ನಿಮಿಷಗಳ ಈ ಹಾಡಿನ double sided ಧ್ವನಿಮುದ್ರಿಕೆ ತಯಾರಾದದ್ದು ಒಂದು ವಿಶೇಷ.  70ರ ದಶಕದಲ್ಲಿ TV, ಕಂಪ್ಯೂಟರ್, ಮುಂತಾದವುಗಳಿಂದ ಹೊರಡುವ  ವಿಕಿರಣಗಳ ಅಡ್ಡ ಪರಿಣಾಮ ಇಲ್ಲದ್ದರಿಂದ ದೂರದ ಮೀಡಿಯಂ ವೇವ್ ಸ್ಟೇಶನ್ನುಗಳೂ ಸ್ಪಷ್ಟವಾಗಿ ಕೇಳಿಸುತ್ತಿದ್ದವು.  ಧಾರವಾಡ ಮತ್ತು ಗುಲ್ಬರ್ಗಾ ನಿಲಯಗಳಿಂದ  ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಗ್ರಾಮೀಣ ಯುವಜನರ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಈ ಹಾಡು ಇದ್ದೇ ಇರುತ್ತಿತ್ತು.  ಮಧ್ಯಾಹ್ನ ಪ್ರಸಾರವಾಗುತ್ತಿದ್ದ ರೇಡಿಯೋ ಸಿಲೋನಿನ ಕನ್ನಡ ಕಾರ್ಯಕ್ರಮದಲ್ಲೂ ಇದು ಆಗಾಗ ಕೇಳಿ ಬರುತ್ತಿತ್ತು.  ಈಗಲೂ ಕೆಲವು ರೇಡಿಯೊ ನಿಲಯಗಳಿಂದ ಆಗೊಮ್ಮೆ ಈಗೊಮ್ಮೆ ಧ್ವನಿಮುದ್ರಿಕೆಯ ಒಂದು ಬದಿಯ ಒಂದು  ಚರಣ ಮಾತ್ರ ಕೇಳಿ ಬರುವುದುಂಟು. 

      ಎಲ್ಲ ಚರಣಗಳನ್ನೊಳಗೊಂಡ ಸಂಪೂರ್ಣ ಹಾಡು ಸಾಹಿತ್ಯದೊಂದಿಗೆ ನಿಮಗಾಗಿ ಇಲ್ಲಿದೆ.  ವಿರಾಮದ ವೇಳೆಯಲ್ಲಿ ಸಾಹಿತ್ಯ ಓದುತ್ತಾ ಆಲಿಸಿ. Box Player ಕೆಲಸ ಮಾಡದಿದ್ದರೆ  ಪಕ್ಕದ ಗ್ರಾಮಫೋನಿನಲ್ಲಿ ಪ್ರಯತ್ನಿಸಬಹುದು.

     ಒಂದು ರಸಪ್ರಶ್ನೆ : ಈ ಹಾಡಿನ 41 ಸೆಕೆಂಡು ಮತ್ತು  50 ಸೆಕೆಂಡುಗಳ ಮಧ್ಯ ಬರುವ  interlude ತುಣುಕಿನಲ್ಲಿ ಆ ದಿನಗಳಲ್ಲಿ ಪ್ರಸಿದ್ಧವಾಗಿದ್ದು ಈಗಲೂ ಜನಪ್ರಿಯವಾಗಿರುವ ಶಂಕರ್ ಜೈಕಿಶನ್ ಹಾಡೊಂದರ preludeನ ಝಲಕ್ ಗುರುತಿಸಬಹುದು. ಯಾವ ಹಾಡೆಂದು ಹೇಳಬಲ್ಲಿರಾ?

    


ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ

ಸಂಗೀತ ಕಲೆ ಮೆಚ್ಚಿ ವೀಣೆಯ ಪಿಡಿದೊಡೆ
ಶೃಂಗೇರಿ ಶಾರದೆ ಮಡಿಲಲ್ಲಿ ನಲಿವೆ
ವೀರ ಖಡ್ಗವ ಝಳಪಿಸುವ ವೀರ ನಾನಾದೊಡೆ
ಚಾಮುಂಡಾಂಬೆಯ ಕರದಲ್ಲಿ ಹೊಳೆವೆ

ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ


ಶರಣಗೆ ವಂದಿಪ ಶರಣೆ ನಾನಾದೊಡೆ
ವಚನವೆ ಬದುಕಿನ ಮಂತ್ರವೆನುವೆ
ವೀರಗೆ ವಂದಿಪ ಶೂರ ನಾನಾದೊಡೆ
ಕಲ್ಲಾಗಿ ಹಂಪೆಯಲಿ ಬಹುಕಾಲ ನಿಲುವೆ

ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ

ದಾಸರಿಗೆ ವಂದಿಪ ಅಭಿಮಾನಿಯಾದೊಡೆ
ಕನ್ನಡ ಸಾಹಿತ್ಯ ನನ್ನಾಸ್ತಿ ಎನುವೆ
ಪುಣ್ಯನದಿಯಲಿ ಮೀಯುವೆನಾದೊಡೆ
ಕಾವೇರಿ ತುಂಗೆಯರ ಮಡಿಲಲ್ಲೆ ಮೀಯುವೆ
ಇನ್ನೊಮ್ಮೆ ಮರುಜನ್ಮ ಪಡೆಯುವೆನಾದೊಡೆ
ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲುವೆ.
ಮಣ್ಣಾಗಿ ನಿಲುವೆ ಮಣ್ಣಾಗಿ ನಿಲುವೆ

Thursday 20 August 2015

ಚಂದಮಾಮದ ಚಿತ್ತಾಕರ್ಷಕ ಚಿತ್ರ ಮಾಯಾಬಜಾರ್

ಇದು ಚಂದಮಾಮದಲ್ಲಿರುತ್ತಿದ್ದ ಚಿತ್ರಾ ಅಥವಾ ಶಂಕರ್ ಅವರ ಚಿತ್ತಾಕರ್ಷಕ ಚಿತ್ರಗಳ ಬಗ್ಗೆ ಅಲ್ಲ. ನಾನು ಹೇಳುತ್ತಿರುವುದು ಚೊಕ್ಕತನದ ಬಗ್ಗೆ ಹೆಸರಾದ ಚಂದಮಾಮದ ರೂವಾರಿಗಳಾದ ನಾಗಿರೆಡ್ಡಿ ಮತ್ತು ಚಕ್ರಪಾಣಿ ಅವರು ಅಷ್ಟೇ ಚೊಕ್ಕವಾಗಿ ನಿರ್ಮಿಸಿ 1957ರಲ್ಲಿ ತೆರೆಗರ್ಪಿಸಿದ ಮಾಯಾಬಜಾರ್ ಚಿತ್ರದ ಬಗ್ಗೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕ ಕಾಲಕ್ಕೆ ತಯಾರಾಗಿದ್ದ ಇದು ತೆಲುಗಿನಿಂದ ಕನ್ನಡಕ್ಕೆ ಡಬ್ ಆಗಿತ್ತು.  ತೆಲುಗು ಮತ್ತು ಕನ್ನಡ ಪದಗಳನ್ನು ಉಚ್ಚರಿಸುವಾಗಿನ ತುಟಿಚಲನೆ ಬಹುತೇಕ ಒಂದನ್ನೊಂದು ಹೋಲುವುದು ಇದಕ್ಕೆ ಕಾರಣವಾಗಿರಬಹುದು. ತೆಲುಗು ಅವತರಣಿಕೆ ಮಾರ್ಚ್ ತಿಂಗಳಲ್ಲಿ, ತಮಿಳು ಎಪ್ರಿಲ್ ಹಾಗೂ ಕನ್ನಡ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿದ್ದವು. ತಾಂತ್ರಿಕತೆಯಲ್ಲಿ ಸಮಯಕ್ಕಿಂತ ಬಹಳ ಮುಂದಿದ್ದ ಮಾಯಾಬಜಾರ್ ಎಲ್ಲ ಭಾಷೆಗಳಲ್ಲೂ ಜಯಭೇರಿ ಬಾರಿಸಿತ್ತು. ಮುಂದೆ ಇವರೇ ನಿರ್ಮಿಸಿದ ಜಗದೇಕವೀರನ ಕಥೆ, ಕೃಷ್ಣಾರ್ಜುನ ಯುದ್ಧ ಕೂಡ ಇದೇ ರೀತಿ ಕನ್ನಡಕ್ಕೆ ಡಬ್ ಆಗಿದ್ದವು. ಆದರೆ ಡಬ್ಬಿಂಗಿಗೆ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿದ ಕಾರಣ  ಆ ಮೇಲಿನ ಸತ್ಯ ಹರಿಶ್ಚಂದ್ರ ಮಾತ್ರ ಈ ರೀತಿ ಡಬ್ ಆಗದೆ ಕನ್ನಡ ಮತ್ತು ತೆಲುಗಿನಲ್ಲಿ ಬೇರೆ ಬೇರೆಯಾಗಿ ತಯಾರಾಗಿ ಡಾ|| ರಾಜ್ ಅಭಿನಯದ ಕನ್ನಡ ಅವತರಣಿಕೆ ಇನ್ನೊಂದು ಮೇರು ಕೃತಿಯಾಗಿ ಮೂಡಿ ಬಂದದ್ದು ಎಲ್ಲರಿಗೂ ತಿಳಿದಿರುವ ವಿಷಯ.

ಮಾಯಾಬಜಾರ್ ಚಿತ್ರಕ್ಕೆ ವರ್ಧಿಸುವೆ ಮಹಾತಾಯಿ ವರ್ಧಿಸೆಮ್ಮಮ್ಮ,ನೋಟವು ಕಲೆತಿಹ ಶುಭವೇಳೆ, ಸಾಗಲಿ ತೇಲಿ ತರಂಗದೊಳು ಮತ್ತು ನಿನಗೋಸುಗವೇ ಜೀವಿಸಿರುವೆ ನಾ ಹಾಡುಗಳನ್ನು ಸಂಯೋಜನೆ ಮಾಡಿದ ಎಸ್. ರಾಜೇಶ್ವರ ರಾವ್ ಅವರು ಆ ಮೇಲೆ ಏಕೋ ಹಿಂದೆ ಸರಿದರೆಂದು ಕೆಲವರು ಹೇಳುತ್ತಾರೆ. ನಂತರ ಘಂಟಸಾಲ(ವೆಂಕಟೇಶ್ವರ ರಾವ್) ಸಂಗೀತದ ಹೊಣೆ ಹೊತ್ತರು. ಎಲ್ಲರಿಗೂ ಗೊತ್ತಿರುವ ವಿವಾಹ ಭೋಜನವಿದು ಮತ್ತು ಆಹಾ ನನ್ ಮದ್ವೆಯಂತೆ ಸೇರಿದಂತೆ ಈ ಚಿತ್ರದ ಹಾಡುಗಳೆಲ್ಲವೂ ಅತಿ ಮಧುರ. ಈ ಎಲ್ಲ ಹಾಡುಗಳ ವಾದ್ಯವೃಂದ ಸಂಯೋಜಕರು ವಿಜಯಾ ಸ್ಟುಡಿಯೋದ ಕಾಯಂ arranger ಆಗಿದ್ದ ಎ. ಕೃಷ್ಣಮೂರ್ತಿ. ಮುಂದೆ ಇವರು ವಿಜಯಾ ಕೃಷ್ಣಮೂರ್ತಿ ಎಂಬ ಹೆಸರಿನಲ್ಲಿ ಜೇನುಗೂಡು, ಮುರಿಯದ ಮನೆ, ವಾತ್ಸಲ್ಯ ಮುಂತಾದ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದರು.

ಚಿತ್ರವೊಂದು ಬಿಡುಗಡೆ ಆಗುವಾಗ ಪತ್ರಿಕೆಗಳಲ್ಲಿ ಜಾಹೀರಾತು ಇರುವುದು  ಸಾಮಾನ್ಯ. ಆದರೆ ಮಾಯಾಬಜಾರ್  ಚಿತ್ರದ  ಜಾಹೀರಾತಿನೊಡನೆ ಇಡೀ ಕಥಾಹಂದರವೇ ಚಂದಮಾಮದ 1957 ಎಪ್ರಿಲ್ ಸಂಚಿಕೆಯ 7 ಪುಟಗಳಲ್ಲಿವಿಸ್ತಾರವಾಗಿ ಪ್ರಕಟವಾಗಿತ್ತು!  ಪತ್ರಿಕೆಯೂ ಚಿತ್ರ ನಿರ್ಮಾಪರದ್ದೇ ಆಗಿರುವುದು ಇದಕ್ಕೆ ಕಾರಣವಾಗಿರಬಹುದು.

ಚಂದಮಾಮದ ಪ್ರತಿ ಪುಟದಲ್ಲೂ ಆ ಪುಟದಲ್ಲಿರುವ ಕಥಾಭಾಗಕ್ಕೆ ಸಂಬಂಧಿಸಿದ ಒಂದು ಚಿತ್ರವಿರುತ್ತಿತ್ತಲ್ಲವೇ. ಅಂತಹುದೇ ಅನುಭವಕ್ಕಾಗಿ ಮಾಯಾ ಬಜಾರ್ ಕತೆಯ 7 ಪುಟಗಳ ಕೆಳಗೆ ಆ ಪುಟಕ್ಕೆ ಸಂಬಂಧಿಸಿದಂತೆ ಒಂದೊಂದು ಕಿರು ವಿಡಿಯೋ ಕಿಂಡಿ ಅಳವಡಿಸಿದ್ದೇನೆ.  ಕತೆ ಓದುತ್ತಾ ದೃಶ್ಯರೂಪದಲ್ಲಿ ನೋಡಿ ಆನಂದಿಸಿ.  ತೆಲುಗು ಕಲರ್ ವೀಡಿಯೊಗೆ ಕನ್ನಡ ಸಂಭಾಷಣೆ ಸಂಯೋಜಿಸಿದ ದೃಶ್ಯಗಳವು.

  
   ಪ್ರಿಯದರ್ಶಿನಿ ವೀಕ್ಷಣೆ


  
   ಕೃಷ್ಣನಿಗೆ ಗೋಚರಿಸಿದ ವಸ್ತ್ರಾಪಹಾರ.


  
   ನೌಕಾವಿಹಾರ - ಸಾಗಲಿ ತೇಲಿ.


  
   ಘಟೋತ್ಗಜ ಪ್ರವೇಶ.


  
   ಘಟೋತ್ಗಜನನ್ನು ಸತಾಯಿಸುತ್ತಿರುವ ವೃದ್ಧನ ರೂಪದ ಕೃಷ್ಣ.


  
   ಕಂಭ್ಳಿ ಗಿಂಭ್ಳಿ.


  
   ವಿಶ್ವರೂಪ ದರ್ಶನ.

ಇತ್ತೀಚೆಗೆ ವರ್ಣಲೇಪನದೊಂದಿಗೆ ತೆಲುಗಿನಲ್ಲಿ ಈ ಚಿತ್ರ ಮರುಬಿಡುಗಡೆಗೊಂಡಿತ್ತು. ಆದರೆ ಹೀಗೆ ಹಳೆಯ ಚಿತ್ರಗಳು ಹೊಸ ಅವತಾರದಲ್ಲಿ ಬಂದಾಗ ಬಣ್ಣಗಳು ಕಣ್ಣಿಗೆ ಹಿತವೆನ್ನಿಸಿದರೂ improvisation ಹೆಸರಿನಲ್ಲಿ ಮೂಲ ಸಂಗೀತವನ್ನು ಹಾಳುಗೆಡವುತ್ತಾರೆ ಎಂದು ಅನೇಕರ ಆರೋಪ ಇದೆ. ಕನ್ನಡದ ಸತ್ಯ ಹರಿಶ್ಚಂದ್ರ ಬಣ್ಣದಲ್ಲಿ ಬಂದಾಗ ನನಗೂ ಹಾಗೆಯೇ ಅನ್ನಿಸಿತ್ತು. ಹೀಗಾಗಿ ತೆಲುಗಿನ ಬಣ್ಣಕ್ಕೆ ಕನ್ನಡದ original  ಹಾಡುಗಳನ್ನು ಕಸಿ ಕಟ್ಟಿ ನಾನು ತಯಾರಿಸಿದ ಇನ್ನಷ್ಟು ವಿಡಿಯೋಗಳು ಇಲ್ಲಿವೆ.

ನೀನೋ ನನ್ನನು ನೆನೆಸುತಿಹೆ
ಈ ಹಾಡಿನಲ್ಲಿ ಆ ಕಾಲದ ಪ್ರಿಯದರ್ಶಿನಿ ಎಂಬ lap top ಹಾಗೂ video chat ನೋಡಬಹುದು. ಹಾಡಿನ ಕೊನೆ ಭಾಗದಲ್ಲಿ ಶಶಿರೇಖೆಯು  ಈಗಿನವರಂತೆಯೇ logout ಆಗಿ ತಕ್ಷಣ ಮತ್ತೆ login ಆಗುವುದನ್ನು ಗಮನಿಸಬಹುದು! ಘಂಟಸಾಲ ಮತ್ತು ಪಿ.ಲೀಲ ಧ್ವನಿಯಲ್ಲಿರುವ ಈ ಹಾಡು ಅಭೇರಿ ರಾಗದಲ್ಲಿದೆ. 



ನೋಟವು ಕಲೆತಿಹ ಶುಭ ವೇಳೆ 
ವೃಂದಾವನಿ ಸಾರಂಗ್ ರಾಗಾಧಾರಿತ ಇನ್ನೊಂದು ಹಾಡು.  ಇದರ ಸ್ವರ ಸಂಯೋಜನೆ ಎಸ್.ರಾಜೇಶ್ವರ ರಾವ್ ಅವರದ್ದಂತೆ. ಧ್ವನಿಗಳು  ಘಂಟಸಾಲ  ಮತ್ತು ಪಿ.ಲೀಲ.



ಆಹಾ ನನ್ ಮದ್ವೆಯಂತೆ 
ಇದು ಘಟೋತ್ಗಜನು ಶಶಿರೇಖೆಯ ರೂಪ ತಾಳಿ ಹಾಡುವ ಹಾಡು.  ನಡುವೆ ಒಮ್ಮೆ ಮರೆತು ಗಂಡುದನಿಯಲ್ಲಿ ಹಾಡುತ್ತಾನೆ!
ಗಾಯಕರು ಸ್ವರ್ಣಲತಾ ಮತ್ತು ಘಂಟಸಾಲಸತ್ಯಹರಿಶ್ಚಂದ್ರ ಚಿತ್ರದ ನನ್ನ ನೀನು ನಿನ್ನ ನಾನು ಹಾಡು ಕೂಡ ಸ್ವರ್ಣಲತಾ ಅವರೇ ಹಾಡಿದ್ದು.  ಹಿಂದಿಯ ಶಂಶಾದ್ ಬೇಗಂ ಅವರಂತೆ ಕಂಚಿನ ಕಂಠ ಇದ್ದ ಈ ಗಾಯಕಿಗೆ ಹೆಚ್ಚಿನ ಅವಕಾಶಗಳು ಯಾಕೆ ಸಿಗಲಿಲ್ಲ ಎಂದು ತಿಳಿಯದು.  ಈ ಹಾಡಿನ ಕನ್ನಡ, ತೆಲುಗು ಮತ್ತು ತಮಿಳು ಅವತರಣಿಕೆಗಳನ್ನು ಒಂದೇ ವೀಡಿಯೊದಲ್ಲಿ ನೋಡಲು ಇಲ್ಲಿ  ಕ್ಲಿಕ್ಕಿಸಿ.



ವಿವಾಹ ಭೋಜನವಿದು
ಮಾಯಾಬಜಾರ್ ಚಿತ್ರದ ಸದಾ ಬಹಾರ್ ಟ್ರಂಪ್ ಕಾರ್ಡ್  ಹಾಡಿದು. ಇದನ್ನು ಹಾಡಿದ ಮಾಧವಪೆದ್ದಿ ಸತ್ಯಂ ಅವರು ಈ ಚಿತ್ರದಲ್ಲಿ  ಸುಭದ್ರೆ ಮತ್ತು ಅಭಿಮನ್ಯುವನ್ನು ಹಿಡಿಂಬಿಯ ಆಶ್ರಮಕ್ಕೆ  ಗಾಡಿಯಲ್ಲಿ  ಕೊಂಡೊಯ್ಯುವ  ದಾರುಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.



ಸತ್ಯ ಪೀಠ
ಶಕುನಿಯ ಬಾಯಿಯಿಂದ ನಿಜವನ್ನೇ ನುಡಿಸಿದ ಸತ್ಯಪೀಠದಂಥಾದ್ದು ಈಗಲೂ ಇರುತ್ತಿದ್ದರೆ ಮಂಪರು ಪರೀಕ್ಷೆ ಇತ್ಯಾದಿಗಳ ಅಗತ್ಯವೇ ಇರುತ್ತಿರಲಿಲ್ಲ!

ಕನ್ನಡದ ಪ್ರಸಿದ್ಧ ಕಲಾವಿದರು ಆಗ ಡಬ್ಬಿಂಗ್ ಚಿತ್ರಗಳಿಗೆ ಧ್ವನಿ ದಾನ ಮಾಡುತ್ತಿದ್ದಿರಬೇಕು.  ಈ ಬಗ್ಗೆ ಅಧಿಕೃತ ದಾಖಲೆ ಇಲ್ಲದಿದ್ದರೂ ಈ ತುಣುಕಿನಲ್ಲಿ ಕೇಳಿಸುವ  ಕೃಷ್ಣನ ಧ್ವನಿ ಕೆ.ಎಸ್. ಅಶ್ವತ್ಥ್  ಅವರದ್ದೆಂದು ಅನಿಸುತ್ತದೆ.

  

ಚಿತ್ರದ ಒಂದು ಜಾಹೀರಾತು.


ಮಾಯಾ ಬಜಾರ್ ಶೂಟಿಂಗ್ ಸಮಯದ ಒಂದು ಅಪರೂಪದ ಚಿತ್ರ.  ಇದರಲ್ಲಿ ಶಶಿರೇಖೆ ಪಾತ್ರ ವಹಿಸಿದ ನಟಿ ಸಾವಿತ್ರಿ ಪ್ರಿಯದರ್ಶಿನಿ ಎಂಬ ಮಹಾಭಾರತ ಕಾಲದ laptop ವೀಕ್ಷಿಸುವುದನ್ನು ಕಾಣಬಹುದು!  ಅವರ ಬಯೋಪಿಕ್ ಮಹಾನಟಿಯಲ್ಲಿ ಮಾಯಾ ಬಜಾರ್ ನಿರ್ಮಾಣಕ್ಕೆ ಸಂಬಂಧಿಸಿದ ಕೆಲವು ದೃಶ್ಯಗಳಿವೆ.



ಆಡಿಯೊ ರೂಪದಲ್ಲಿ ಹಾಡುಗಳನ್ನು ಕೇಳುವ ಇಚ್ಛೆ ಇದ್ದರೆ ಕೆಳಗಿನ ಲಿಸ್ಟಿನಿಂದ ಒಂದೊಂದಾಗಿ  ಆರಿಸಿ ಆಲಿಸಬಹುದು.