Friday 28 October 2016

ನಾಡಿನಂದ ಈ ದೀಪಾವಳಿ


     ಕುಲವಧು ಚಿತ್ರದ ಯುಗ ಯುಗಾದಿ ಕಳೆದರೂ ರೇಡಿಯೊದಲ್ಲಿ ಕೇಳಿ ಬರದಿದ್ದರೆ ಹೇಗೆ ಯುಗಾದಿ ಆಚರಣೆ ಅಪೂರ್ಣವಾದೀತೋ ಹಾಗೆಯೇ ನಂದಾ ದೀಪ ಚಿತ್ರದ ನಾಡಿನಂದ ಈ ದೀಪಾವಳಿ ಹಾಡು ಬೆಳ ಬೆಳಗ್ಗೆ ಕೇಳಿಸದಿದ್ದರೆ ಅದು ದೀಪಾವಳಿಯೇ ಅಲ್ಲವೇನೋ ಅನ್ನಿಸೀತು.  ದೀಪಗಳ ಹಬ್ಬದೊಡನೆ ಅದರದ್ದು ಅಷ್ಟೊಂದು ಅವಿನಾಭಾವ ಸಂಬಂಧ. ಸೋರಟ್ ಅಶ್ವಥ್ ಅವರು ರಚಿಸಿ ಎಂ. ವೆಂಕಟರಾಜು ಅವರ ಸಂಗೀತ ನಿರ್ದೇಶನದಲ್ಲಿ ಎಸ್. ಜಾನಕಿ ಮತ್ತು ಪಿ. ಲೀಲ ಜೊತೆಗೂಡಿ ಹಾಡಿದ  ಈ ಹಾಡಿನ ಎಲ್ಲ ಅಂಗಗಳು ಉಲ್ಲಾಸವೇ ಮೂರ್ತಿವೆತ್ತಂತೆ ಇರುವಂಥವು.  ಆರ್ಕೆಸ್ಟ್ರೇಶನ್ನಿನ್ನಲ್ಲಿ ಎತ್ತಿದ ಕೈಯಾಗಿದ್ದ  ವೆಂಕಟರಾಜು ಆರಂಭದಲ್ಲಿ ಒಂದು ಆಕರ್ಷಕ prelude ಮತ್ತು 3 ಚರಣಗಳಿಗೆ 3 ಬೇರೆ ಬೇರೆ interlude ಬಳಸಿದ್ದಾರೆ. ಹಿಂದಿಯಲ್ಲಿ ಶಂಕರ್ ಜೈಕಿಶನ್ ಹೀಗೆ ಮಾಡುತ್ತಿದ್ದರು. ಮ್ಯಾಂಡೊಲಿನ್, ವಯಲಿನ್ಸ್, ಕ್ಲಾರಿನೆಟ್ ಮತ್ತು ಕೊಳಲುಗಳ ಸಮ್ಮಿಶ್ರಣದೊಂದಿಗೆ ಇಡೀ ಹಾಡನ್ನು ಎತ್ತಿ ಕೊಟ್ಟಿರುವುದು ಅತ್ಯಾಕರ್ಷಕ ಢೋಲಕ್ ನುಡಿತ.  ಎಡದ ಗುಂಕಿ, ಉರುಳಿಕೆ, ಹಾಡಿನ ಬೋಲ್ ಗಳ ಅನುಸರಿಸುವಿಕೆ, ಅಲ್ಲಲ್ಲಿ break, take off ಗಳ ಅಂದವನ್ನು ಕೇಳಿಯೇ ಅನುಭವಿಸಬೇಕು. 3ನೇ ಚರಣಕ್ಕೆ ಮೊದಲಿನ interludeನಲ್ಲಿ ಕ್ಲಾರಿನೆಟ್ ಕೊಳಲುಗಳ ಜೊತೆಗಿನ ಶಕ್ತಿಶಾಲಿ ಢೋಲಕ್ ನುಡಿತವಂತೂ ಎಂಥವರನ್ನೂ ಕಾಲೆತ್ತಿ ಕುಣಿಯುವಂತೆ ಪ್ರೇರೇಪಿಸೀತು. ಜಾನಕಿ ಮತ್ತು ಪಿ. ಲೀಲ ಇಬ್ಬರೂ ಹಾಡಿನ ಮೂಡಿಗೆ ಸರಿಯಾಗಿ ಉಲ್ಲಾಸ ಉಕ್ಕುವಂತೆ ಹಾಡಿದ್ದಾರೆ. ಅವರಿಬ್ಬರು ಜೊತೆಗೆ ಹಾಡಿದ್ದು ಕಮ್ಮಿ.  ಒಂದು ಈ ಅಜರಾಮರ ಹಾಡಾದರೆ ಇನ್ನೊಂದು ವಾಲ್ಮೀಕಿ ಚಿತ್ರದ ಮನದೇ ಮಹಾ ಬಯಕೆ.

     ಈ ಹಾಡು ಮಾತ್ರವಲ್ಲ, ನಂದಾದೀಪ ಚಿತ್ರವೇ  ದೀಪಾವಳಿಯೊಂದಿಗೆ ಬೆಸೆಯಲು ನನ್ನ ಮಟ್ಟಿಗೆ ಇನ್ನೊಂದು ಕಾರಣವೂ ಇದೆ.  1972ರಲ್ಲಿ ಆಗ ತಾನೇ ನನ್ನ graduation ಮುಗಿದಿತ್ತು.  ಈಗಿನಂತೆ campus selection ಇತ್ಯಾದಿ ಆಗ ಇರಲಿಲ್ಲ. ಹೀಗಾಗಿ ಪತ್ರಿಕೆಗಳಲ್ಲಿ ಬಂದ ಬೇಕಾಗಿದ್ದಾರೆ ಜಾಹೀರಾತುಗಳನ್ನು ನೋಡಿ ಅರ್ಜಿ ಸಲ್ಲಿಸುತ್ತಾ ಇರಬೇಕಾಗುತ್ತಿತ್ತು.  ನಾನೂ ಹಾಗೆಯೇ ಮಾಡುತ್ತಿದ್ದೆ. ಒಮ್ಮೆ ಆಕಾಶವಾಣಿ ಧಾರವಾಡದಿಂದ announcer ಹುದ್ದೆಗೆ ಅರ್ಜಿ ಕರೆದಿದ್ದರು. ಮೊದಲೇ ರೇಡಿಯೋ ಪ್ರಿಯನಾದ ನಾನು ಬಿಟ್ಟೇನೇ? ಅರ್ಜಿ ಗುಜರಾಯಿಸಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣನೂ ಆದೆ. ಆಮೇಲೆ ಧ್ವನಿ ಪರೀಕ್ಷೆ, ಇಂಟರ್ ವ್ಯೂಗಳೂ ನಡೆದವು.  ನನಗಿಂತ ಅರ್ಹನಾದ ಯಾರೋ ಆಯ್ಕೆ ಕೂಡ ಆದರು. ಅದಲ್ಲ ವಿಷಯ.  ಆಗ ದೀಪಾವಳಿ ಸಮಯ. ಧಾರವಾಡದ  ಟಾಕೀಸೊಂದರಲ್ಲಿ  ಈ ವಿಶೇಷ ಸಂದರ್ಭಕ್ಕಾಗಿ ನಂದಾದೀಪ ಚಿತ್ರದ ಹೊಸ ಪ್ರಿಂಟ್ ಬಿಡುಗಡೆ ಆಗಿ  ಪ್ರದರ್ಶಿತವಾಗುತ್ತಿದ್ದದ್ದು ನನಗೆ ನೋಡಲು ಸಿಕ್ಕಿ ಸ್ವರ್ಗಕ್ಕೆ ಮೂರೇ  ಗೇಣು ಅನ್ನಿಸಿತ್ತು.  ನಾನು ಆ ಹುದ್ದೆಗೆ ಆಯ್ಕೆ ಆಗಿದ್ದರೂ ಅಷ್ಟು ಖುಶಿಯಾಗುತ್ತಿತ್ತೋ ಇಲ್ಲವೋ!


ದೀಪಾವಳಿಯ ಆನಂದ ಹೆಚ್ಚಿಸಲು ಸಾಹಿತ್ಯದೊಡನೆ ನಂದಾ ದೀಪದ ಹಾಡು ನಿಮಗಾಗಿ ಇಲ್ಲಿದೆ.



ನಾಡಿನಂದ ಈ ದೀಪಾವಳಿ ಬಂತು
ಸಂತೋಷ ತಾಳಿ ನಮ್ಮೀ ಬಾಳ ಕಾರಿರುಳ
ತಾ ನೀಗೆ ಬಂದ ಶುಭ ವೇಳಾ
ಈ ದಿವ್ಯ ಕಾಂತಿ ಮನದಿ  ಪ್ರಶಾಂತಿ
ಹೊಂದಿ ಸಂಪ್ರೀತಿ
ನಾಡಿನಂದ ಈ ದೀಪಾವಳಿ

ಇಂದೀ ಉಲ್ಲಾಸ ಪ್ರೀತಿ ವಿಕಾಸ
ಜ್ಯೋತಿ ನಿನ್ನಿಂದ ಹಾಸ
ನಮ್ಮೀ ಆಸೆ ಮಕರಂದ
ತಾ ಚಿಮ್ಮಿ ತಂದ ಆನಂದ
ಸಿಂಗಾರ ಸಂಗೀತ
ಹಾಡಿ ಓಲಾಡಿ ಕೂಡೆ

ನಾಡಿನಂದ ಈ ದೀಪಾವಳಿ ಬಂತು
ಸಂತೋಷ ತಾಳಿ ನಮ್ಮೀ ಬಾಳ ಕಾರಿರುಳ
ತಾ ನೀಗೆ ಬಂದ ಶುಭ ವೇಳಾ
ಈ ದಿವ್ಯ ಕಾಂತಿ ಮನದಿ  ಪ್ರಶಾಂತಿ
ಹೊಂದಿ ಸಂಪ್ರೀತಿ
ನಾಡಿನಂದ ಈ ದೀಪಾವಳಿ

ಸಿಡಿವ ಮತಾಪು ಮಿಡಿವಂಥ ಕೇಪು
ಸೇರೇ ಕಣ್ಣಾಸೆ ಸೊಂಪು
ತುಂಬಿ ಬಾನ ಹೂಬಾಣ
ತಾ ಹೊಮ್ಮಿ ತಂದ ಹೊಂಬಣ್ನ
ಹೊಸ ಬಾಳ ಸಂಕೇತ
ಎಂದು ಸಂದೇಶ ತಂತು
ನಾಡಿನಂದ ಈ ದೀಪಾವಳಿ

ಬಾಳ ಬಂಗಾರ ಮನದ ಮಂದಾರ
ಸೇರೇ ಆನಂದ ಸಾರ
ನಂದಾ ದೀಪ ನೆಲೆಯಾಗಿ
ಒಲುಮೆ ಎಂದೂ ಜತೆಯಾಗಿ
ನಂದಾ ದೀಪ ನೆಲೆಯಾಗಿ
ಒಲುಮೆ ಎಂದೂ ಜತೆಯಾಗಿ
ಹಾಯಾದ ಆಮೋದ
ನೀಡೆ ಹಾರೈಸಿ ಬಂದ
ನಾಡಿನಂದ ಈ ದೀಪಾವಳಿ ಬಂತು
ಸಂತೋಷ ತಾಳಿ ನಮ್ಮೀ ಬಾಳ ಕಾರಿರುಳ
ತಾ ನೀಗೆ ಬಂದ ಶುಭ ವೇಳಾ
ಈ ದಿವ್ಯ ಕಾಂತಿ ಮನದಿ  ಪ್ರಶಾಂತಿ
ಹೊಂದಿ ಸಂಪ್ರೀತಿ
ನಾಡಿನಂದ ಈ ದೀಪಾವಳಿ
******************


ಚಿತ್ರ ನೋಡುವ ಇಚ್ಛೆ ಇದ್ದರೆ ಯೂಟ್ಯೂಬಿನಲ್ಲಿ ಲಭ್ಯವಿದೆ.  ಈಗ ಇಂತಹ ಅನೇಕ ಹಳೆಯ ಚಿತ್ರಗಳು  ಉಚಿತ ವೀಕ್ಷಣೆಗೆ ಸುಲಭದಲ್ಲಿ ಸಿಗುವುದು ಅಂತರ್ಜಾಲದ ವರದಾನವೇ ಸರಿ.

1 comment:

  1. ಇ೦ಥಾ ಅರ್ಥಗರ್ಭಿತ ಗೀತೆಗಳ ತಯಾರಿಸುವವರು ಈಗಿನ ಕಾಲದಲ್ಲಿ ಇಲ್ಲವೋ ಅಥವಾ ಅವರಿಗೆ ಪ್ರೋತ್ಶಾಹವಿಲ್ಲವೋ! ಅಥವಾ ಅ೦ಥಾ ಗೀತೆಗಳಿಗೆ ಹೊ೦ದುವ ಸಿನೆಮಾಗಳೇ ಇಲ್ಲವೋ? ಇದ್ದರೂ ಅವುಗಳನ್ನು ನೋಡುವವರೇ ಇಲ್ವೋ! ಪ್ರಶ್ಣಿಸಲು
    ಕಾರಣವಿದೆ. ಪದ್ಯ/ಕವನ ಗಳನ್ನು ಬರೆಯುವವರು ಈಗಲೂ ಇರುವರು. ಕಾಡಿನಸ೦ಪಿಗೆಯಾಗಿಯೇ ಇದ್ದಾರೆಯೋ!?

    Mukunda Chiplunkar in FB

    ReplyDelete

Your valuable comments/suggestions are welcome