Saturday 23 November 2013

ನಮಗೆ ದೀಪಾವಳಿಯಾಗಿದ್ದ ಗುಂಡಿ ದೀಪ

   
    
ಎಲ್ಲ ಕಡೆ ದೀಪಾವಳಿ ಸಮಯದಲ್ಲಿ ಸುಡುಮದ್ದು ಸಿಡಿಸುವ ಸಂಪ್ರದಾಯವಿದ್ದರೆ ಆ ಕಾಲದಲ್ಲಿ  ನಮ್ಮ ಕೈಗೆ ಪಟಾಕಿ, ಸುರುಸುರು ಕಡ್ಡಿಗಳು ಬರುತ್ತಿದ್ದುದು  ಗುಂಡಿ   ದೀಪವೆಂದೇ ಖ್ಯಾತವಾದ,  ಉತ್ಥಾನ ದ್ವಾದಶಿಯಂದು ಆರಂಭಗೊಂಡು ಹುಣ್ಣಿಮೆಯ ದಿನ ಸಮಾಪನಗೊಳ್ಳುವ ಮುಂಡಾಜೆ ಶ್ರೀ ಗುಂಡಿ ಲಕ್ಷ್ಮೀನಾರಾಯಣ ದೇವಸ್ಥಾನದ  ಕಾರ್ತಿಕ ದೀಪೋತ್ಸವದ ಸಮಯದಲ್ಲಿ.  ಇದು ಒಂದು ಮನೆತನಕ್ಕೆ ಸೇರಿದ ಖಾಸಗಿ ದೇವಸ್ಥಾನವಾದರೂ  ಊರಿನವರಿಗೆಲ್ಲ ಅದು "ನಮ್ಮ ದೇವಸ್ಥಾನ".  ನಾವು "ಮನೆಗೆ ಹೋಗುತ್ತೇನೆ" ಎಂದು ಹೇಳಿದರೆ  ಹೇಗೆ ನಮ್ಮ ಮನೆಗೆಂದು ಅರ್ಥವೋ ಹಾಗೆಯೇ "ದೇವಸ್ಥಾನಕ್ಕೆ ಹೋಗಿ ಬರುತ್ತೇನೆ" ಎಂದರೆ ಗುಂಡಿ ದೇವಸ್ಥಾನಕ್ಕೆ ಎಂದೇ ಅರ್ಥ. ನಮ್ಮ ಕುಟುಂಬಕ್ಕಂತೂ ಅದರೊಡನೆ ಅವಿನಾಭಾವ ಸಂಬಂಧ. ನಮ್ಮ ಹಿರಿಯಣ್ಣ ಅಲ್ಲಿ  ನಾಲ್ಕು ದಶಕಗಳಿಗೂ ಹೆಚ್ಚು ಸಮಯ ಪೂಜಾ ಕೈಂಕರ್ಯ ಕೈಗೊಂಡವರು.  ನಾನೂ ಶಾಲಾ ಜೀವನದ ಹೆಚ್ಚಿನ ವರ್ಷಗಳನ್ನು ಆ ದೇವಸ್ಥಾನದ ವಠಾರದಲ್ಲೇ ಕಳೆದವನು. ಇಲ್ಲಿರುವಂತಹ ಅಚ್ಚುಕಟ್ಟು, ಸ್ವಚ್ಛತೆಗಳನ್ನು ನಾನು ಬೇರೆಲ್ಲಿಯೂ ಕಂಡಿಲ್ಲ.  ಇಲ್ಲಿಯಂತಹ  ನೀಟಾಗಿ ಕತ್ತರಿಸಿದ ಹುಲ್ಲುಗಾವಲಿನ  ಹೊರಸುತ್ತೂ ಬೇರೆಡೆ ಇಲ್ಲ.

ಕಾರ್ತೀಕ ಶುದ್ಧ ಏಕಾದಶಿಯಂದು ರಾತ್ರೆ ಸರಳ ದೀಪಾರಾಧನೆಯೊಂದಿಗೆ   ಇಲ್ಲಿಯ ದೀಪೋತ್ಸವಕ್ಕೆ ಚಾಲನೆ ಸಿಗುತ್ತಿತ್ತು.  ಆ ದಿನ ಸಕ್ಕರೆ ಬೆರೆಸಿದ  ಕೊಬ್ಬರಿಯ ಪ್ರಸಾದ. ಮರುದಿನ ದ್ವಾದಶಿಯಂದು ಬೆಳಗ್ಗೆ ತುಳಸಿಪೂಜೆ ಹಾಗೂ ದೇವಳದ ಎದುರಿನ ಗುಡ್ಡಕ್ಕೆ ದೇವರ ಬಲಿ ಹೋಗಿ ನೆಲ್ಲಿಮರದ ಅಡಿಯಲ್ಲಿ ನಡೆಯುವ ಧಾತ್ರಿ ಪೂಜನ. ದ್ವಾದಶಿಯಿಂದ ಹುಣ್ಣಿಮೆವರೆಗೂ  ಮಧ್ಯಾಹ್ನ ಹವನ, ಪಾರಾಯಣಗಳಂತಹ ವೈದಿಕ ಕಾರ್ಯಕ್ರಮಗಳು, ರಾತ್ರೆ  ದೇವರ ಉತ್ಸವ.  ಅಷ್ಟು ದಿನವೂ ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ರಾತ್ರೆ ಉತ್ಸವದ ನಂತರ  ಒಗ್ಗರಣೆ ಅವಲಕ್ಕಿ, ಬಾಳೆಹಣ್ಣು ಮತ್ತು ಶುಂಠಿ ಏಲಕ್ಕಿ ಮಿಶ್ರಿತ ಬಿಸಿ ನೀರು.  ಸಂಜೆ ಗ್ಯಾಸ್ ಲೈಟುಗಳನ್ನು ಉರಿಸುವಾಗ ಪಕ್ಕದಲ್ಲಿ ನಿಂತು ಅವುಗಳ ಹೊಳೆಯುವ ಮೈಯಲ್ಲಿ ಕಾಣಿಸುವ ಅಕರಾಳ ವಿಕರಾಳ ಮುಖಗಳನ್ನು ನೋಡುವುದು ಆಗಿನ ಒಂದು ಪ್ರಮುಖ ಆಕರ್ಷಣೆ.  ಆ ಹೊತ್ತಿಗೆ ಆಯ್ದ ಮಂದಿಗೆ ಪಾಕ ಶಾಲೆಯಲ್ಲಿ ವಿಶೇಷ ಚಹಾ ಪಾನದ ವ್ಯವಸ್ಥೆಯೂ ಇತ್ತು. 

ದೀವಟಿಗೆ ಸಲಾಂ



ನಮ್ಮ ಜಿಲ್ಲೆಯ ಅನೇಕ ಕಡೆ ಇರುವಂತೆ ಇಲ್ಲಿಯೂ ದೀವಟಿಗೆ ಸಲಾಂ ಸಂಪ್ರದಾಯ ಇತ್ತು. ಹಿಂದೆ ಪ್ರತಿ ದಿನವೂ  ವೇಸ್ಟಿ ಉಡಿಸಿದ ಮರದ ಬೊಂಬೆಗಳು ಹೊರುವ ಪಲ್ಲಕ್ಕಿಯನ್ನೊಳಗೊಂಡ ಬಂಡಿಯಲ್ಲಿ ದೇವರನ್ನು ಕೂರಿಸಿ ಎಳೆಯುವ ಸಂಪ್ರದಾಯವಿತ್ತು.   ಹುಣ್ಣಿಮೆಯ ದೊಡ್ಡ ದೀಪೋತ್ಸವದ ದಿನ ಎದುರಿನ ಗುಡ್ಡದ ಮೇಲಿನ ಕಟ್ಟೆಯಲ್ಲಿ ಅಷ್ಟ ಸೇವಾದಿಗಳು ನಡೆದರೆ ಉಳಿದ ದಿನ  ದೇವಸ್ಥಾನದ ಸಮೀಪದ ಓಲಗ ಮಂಟಪದಲ್ಲಿ ಈ ಸೇವೆಗಳು ನಡೆಯುತ್ತಿದ್ದವು. ದೇವಸ್ಥಾನದ ನಾಲ್ಕೂ ಬದಿಗಳಲ್ಲಿ ಕಟ್ಟಿದ ಅಡಿಕೆ ಸಲಾಕೆಗಳ ಮೇಲೆ ಸಾವಿರಾರು ಮಣ್ಣಿನ  ಹಣತೆಗಳನ್ನು ಉರಿಸಲಾಗುತ್ತಿತ್ತು.  ಊರಿನ ಉತ್ಸಾಹಿ ತರುಣರು ಪಟಾಕಿ, ಬಾಣ ಬಿರುಸು, ಬಲೂನು ಇತ್ಯಾದಿಗಳ ಅಂಗಡಿ ತೆರೆಯುವುದೂ ಇತ್ತು.  ಭರ್ಜರಿ ವ್ಯಾಪಾರವೂ ಆಗುತ್ತಿತ್ತು.  ಶಬ್ದ ಮಾಲಿನ್ಯ ಉಂಟುಮಾಡುವ  ಪಟಾಕಿಗಳಿಗಿಂತ ನೋಟಕ್ಕೆ ರಮ್ಯ ಎನಿಸುವ ಸುರು ಸುರು ಕಡ್ಡಿ, ಸೂರ್ಯ-ಚಂದ್ರ ಬೆಂಕಿ ಪೆಟ್ಟಿಗೆ, ನೆಲ ಚಕ್ರ, ಹೂ ದಾನಿ, ಬಲೂನು ಇತ್ಯಾದಿಗಳಿಗೆ  ಕೊಳ್ಳುಗರ ಪ್ರಾಶಸ್ತ್ಯ ಇತ್ತು. ಶ್ರೀನಿವಾಸ ಅಸರ್ಣರು ತಯಾರಿಸಿದ  ವೈವಿಧ್ಯಮಯ ಗೂಡುದೀಪಗಳು  ದೀಪೋತ್ಸವಕ್ಕೆ ಹೆಚ್ಚಿನ  ಮೆರುಗು ನೀಡುತ್ತಿದ್ದವು. ಓಲಗ ಮಂಟಪದ ಮೇಲ್ಮಾಳಿಗೆ ಮೇಲಿದ್ದ ಮರದ ಗರುಡ ಹನುಮಂತ ವಿಗ್ರಹಗಳ ಮುಂದೆ ತಿರುಗುವ ಗೂಡುದೀಪಗಳನ್ನೂ ಅವರು ಇರಿಸುತ್ತಿದ್ದರು.  ಗರುಡ ಹನುಮಂತ ಮೂರ್ತಿಗಳಿಗೆ ಚಕ್ರಗಳನ್ನು ಅಳವಡಿಸಿ ಭಂಡಿಯೊಂದಿಗೆ ಅವುಗಳನ್ನೂ  ಉತ್ಸವದ ಜೊತೆ ಎಳೆದುಕೊಂಡು ಹೋಗುವ  ಯೋಚನೆಯೂ ಇತ್ತಂತೆ.  ಆದರೆ ಅದು ಏಕೋ ಕಾರ್ಯರೂಪಕ್ಕೆ ಬರಲಿಲ್ಲ.  ಈಗ ಓಲಗ ಮಂಟಪದ ಮೇಲ್ಮಾಳಿಗೆ ದುರ್ಬಲವಾದದ್ದರಿಂದ ಗರುಡ ಹನುಮಂತರು ಕೆಳಗಿಳಿದು  ಬಂದಿದ್ದಾರೆ. 



60ರ ದಶಕದಲ್ಲಿ ಚೀನಾ ಯುದ್ಧದ ನಂತರ ಕೆಲ ವರ್ಷ ಭಂಡಿ ಉತ್ಸವ ಸ್ಥಗಿತಗೊಂಡು ದೇವರ ಬಲಿ ದೇವಸ್ಥಾನದ  ಒಳ ಸುತ್ತಿಗೆ  ಸೀಮಿತಗೊಂಡಿತು. ಒಳಗಿನ ಅಂಬಲದ ಮೇಲೆ ತಾತ್ಕಾಲಿಕವಾಗಿ ರಚಿಸಲಾಗುತ್ತಿದ್ದ ಮಂಟಪದಲ್ಲಿ ಉತ್ಸವಮೂರ್ತಿಯನ್ನಿಟ್ಟು ಅಷ್ಟಸೇವೆಗಳನ್ನು ನಡೆಸಲಾಗುತ್ತಿತ್ತು.  ಅಲ್ಲಿ ವರೆಗೆ ರಾಮನವಮಿ ಮತ್ತು ಅಕ್ಷಯತೃತೀಯಾಗಳಂದು ನಡೆಯುತ್ತಿದ್ದ ಭಂಡಿ ಉತ್ಸವಗಳೂ ನಿಂತು ಹೋದವು.  70ರ ದಶಕದಲ್ಲಿ ಹಳೆ ಪದ್ಧತಿ ಆಂಶಿಕವಾಗಿ ಪುನರುತ್ಥಾನಗೊಂಡು ಚತುರ್ದಶಿ ವರೆಗೆ ದೇವಸ್ಥಾನದ ಒಳಗಡೆಯೇ ದೇವರ ಬಲಿ ಉತ್ಸವ, ಅಷ್ಟ ಸೇವಾದಿಗಳು ನಡೆದು ಹುಣಿಮೆಯ ದೊಡ್ಡ ದೀಪದ ದಿನ ಮಾತ್ರ  ಹೊರಸುತ್ತಿನ ಭಂಡಿ ಉತ್ಸವದ ನಂತರ ದೇವರು ಗುಡ್ಡದ ಮೇಲಿನ ಕಟ್ಟೆಗೆ ಹೋಗಿ ಅಷ್ಟಸೇವೆಗಳನ್ನು ಸ್ವೀಕರಿಸುವ ಕ್ರಮ ಆರಂಭವಾಯಿತು.  ಪಟಾಕಿ, ಬಾಣ ಬಿರುಸು ಇತ್ಯಾದಿಗಳ ಬಳಕೆ ನಿಂತು ಹೋಗಿ  ಭಕ್ತವೃಂದದ ಭಾಗವಹಿಸುವಿಕೆಯೂ ಗಮನಾರ್ಹವಾಗಿ ಕಡಿಮೆ ಆದರೂ ಅನೇಕ ವರ್ಷಗಳ ಕಾಲ ಈ ಪದ್ಧತಿ ಮುಂದುವರಿಯಿತು.

ಚತುರ್ದಶಿ ವರೆಗೆ ದೇವಸ್ಥಾನದ ಒಳಸುತ್ತಿನಲ್ಲಿ ನಡೆಯುತ್ತಿದ್ದ ಉತ್ಸವ.



ಭಂಡಿಯನ್ನು ಅದರ ಕೋಣೆಯಿಂದ ಹೊರತಂದು ದೇವಸ್ಥಾನದ ಎದುರಿಗೆ ತರುವಾಗ ಅದರಲ್ಲಿ ಕುಳಿತುಕೊಳ್ಳಲು ಚಿಕ್ಕ ಮಕ್ಕಳಾಗಿದ್ದ ನಮಗೆ ಅನುಮತಿ ಇತ್ತು. ಉತ್ಸವ ಮುಗಿದ ಮೇಲೆ ಭಂಡಿಯನ್ನು ಅದರ ಕೋಣೆಯೊಳಗೆ ಸೇರಿಸಿ ಬಾಗಿಲು ಹಾಕಿಕೊಂಡವರು ಹೇಗೆ ಹೊರಗೆ ಬರುತ್ತಾರೆ ಎಂದು ನಮಗೆ ಅಚ್ಚರಿಯಾಗುತ್ತಿತ್ತು. ಆ ಕೋಣೆಯಿಂದ ಉಗ್ರಾಣಕ್ಕೆ ಬರಲು ಓಬವ್ವನ ಕಿಂಡಿಯಂಥ ಒಂದು ತೆರೆದ ಕಿಟಿಕಿ ಇರುವುದು ಆಗ ನಮಗೆ ಗೊತ್ತಿರಲಿಲ್ಲ.     

ಪಲ್ಲಕ್ಕಿ ಕಟ್ಟುವ ಕಾರ್ಯವನ್ನು ಊರಿನವರೆಲ್ಲರೂ ಸಾಮೂಹಿಕವಾಗಿ ನಿರ್ವಹಿಸಿದರೆ  ದೀಪೋತ್ಸವಕ್ಕೆ ಸಂಬಂಧಿಸಿದ ಇತರ  ಕಾರ್ಯಗಳಿಗೆ ನಿಗದಿಯಾದ ಊರಿನ ವಿವಿಧ  ಮನೆತನಗಳಿದ್ದವು.  ಭಂಡಿ ಎಳೆಯಲು ಒಂದು ಮನೆತನವಾದರೆ, ದೂಡಲು ಇನ್ನೊಂದು ಮನೆತನ.  ದೀವಟಿಗೆ, ದಂಡ ಚಾಮರ, ಸಂಗೀತ ಸೇವೆ ಹೀಗೆ ಒಂದೊಂದಕ್ಕೂ ಬೇರೆಯೇ ಮನೆತನಗಳು. ಉತ್ಸವದ ಕೊನೆಯ ದಿನ ಸಂಬಂಧಿಸಿದ ಎಲ್ಲರಿಗೂ ಸಾಂಕೇತಿಕ  ಗೌರವ ಪ್ರದಾನ.   

ಇತರೆಡೆ ಇರುವಂತೆ ಬೇರೆಯೇ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಸಂಪ್ರದಾಯ ಸಾಮಾನ್ಯವಾಗಿ ಇಲ್ಲಿ ಇರಲಿಲ್ಲ.  ದೇವರ ಸಾನ್ನಿಧ್ಯದಲ್ಲಿ ನಡೆಯುವ ಅಷ್ಟ ಸೇವೆಗಳೇ ಊರಿನ  ಜನತೆಗೆ ವೇದ, ಶಾಸ್ತ್ರ, ಪುರಾಣ, ಸಂಗೀತಗಳಲ್ಲಿ ತಮ್ಮ ಪ್ರತಿಭೆ ತೋರಿಸಲು ವೇದಿಕೆ.  ನಾನೂ 1968ರಲ್ಲಿ ಮೊದಲ ಬಾರಿ ನಾಲ್ಕು ಜನರ ಎದುರಿಗೆ  ಕೊಳಲು ನುಡಿಸಿದ್ದು ಇಲ್ಲಿಯೇ. ಆ ಮೇಲೆ  ತರಬೇತಿಗಾಗಿ   ಬೆಂಗಳೂರಲ್ಲಿ ಇದ್ದ ಸಮಯ ಬಿಟ್ಟರೆ ಪ್ರತೀ ವರ್ಷ   ಅಷ್ಟ ಸೇವೆಯಲ್ಲಿ ಪಾಲ್ಗೊಂಡಿದ್ದೇನೆ.  

ಕಾರ್ಪೊರೇಟ್ ವಲಯದಲ್ಲಿ ಪ್ರಾಯೋಜಕತ್ವವು ಇತ್ತೀಚೆಗೆ ಕಾಣಿಸಿಕೊಂಡದ್ದಾದರೂ ಇಲ್ಲಿ ದಶಕಗಳ ಹಿಂದಿನಿಂದಲೂ ಒಂದೊಂದು ದಿನದ ಉತ್ಸವವನ್ನು ಒಬ್ಬೊಬ್ಬರು ಪ್ರಾಯೋಜಿಸುವ ಪರಿಪಾಠ ಇತ್ತು.

ಹಿಂದಿನಿಂದಲೂ ಸಂಗೀತ ವಿಭಾಗದಲ್ಲಿ ಗುರುತಿಸಿಕೊಂಡ ಬತ್ರಬೈಲು  ಕುಟುಂಬದ ವಾಸುದೇವ ತಾಮ್ಹನಕರ್ ರಚಿಸಿ ಹಾಡಿರುವ ಈ ದೀಪೋತ್ಸವದ ವೈಭವವನ್ನು ಸ್ಥೂಲವಾಗಿ ವರ್ಣಿಸುವ  ಚಿತ್ಪಾವನಿ ಭಾಷೆಯ  ಹಾಡಿನ ವೀಡಿಯೊ ಒಂದು  ಕನ್ನಡ ಉಪ ಶೀರ್ಷಿಕೆಗಳೊಂದಿಗೆ ಇಲ್ಲಿದೆ.  ವೀಡಿಯೊ ಚಿತ್ರೀಕರಣ, ಎಡಿಟಿಂಗ್, ಹಾಡಿನ ಕನ್ನಡ ಭಾವಾನುವಾದ ಎಲ್ಲ ನನ್ನವೇ,





ಮಂಗಳಾರತಿ ಪ್ರಣತಿ
ಸಾಮಾನ್ಯವಾಗಿ ಮಹಾಮಂಗಳಾರತಿಯ ಜೊತೆಗೆ ಗಂಟೆ ಜಾಗಟೆ ಹಾಗೂ ವೇದ ಮಂತ್ರ ಘೋಷಗಳಿರುವುದನ್ನು ಕಾಣುತ್ತೇವೆ.  ಆದರೆ ಇಲ್ಲಿ  ದೊಡ್ಡ ದೀಪೋತ್ಸವದ ದಿನ ಮಹಾಮಂಗಳಾರತಿ ಆದೊಡನೆ ಸಂಗೀತಕಾರರು ವಿಶೇಷ ಮಂಗಳ ಪದವೊಂದನ್ನು ಹಾಡುವ  ಪರಿಪಾಠ ಇತ್ತು. ಮಂಗಳಾರತಿ ಪ್ರಣತಿ ಎಂಬ ಆ ಸುಮಧುರ ಹಾಡನ್ನು  ವಾಸುದೇವ ತಾಮ್ಹನಕರ್ ಧ್ವನಿಯಲ್ಲಿ ಆಲಿಸಿ.




ಕಾರಣಾಂತರಗಳಿಂದ ಈಗ ದೀಪೋತ್ಸವದ ನಿರಂತರತೆಗೆ ತಡೆ ಉಂಟಾಗಿದೆ.  ಹಿಂದಿನ ವೈಭವ ಮತ್ತೆ ಮರುಕಳಿಸುವುದೆಂದು ಹಾರೈಸೋಣ.