Friday 5 June 2020

ನವಜೀವನ ಸವಿಗಾನ


ಚಲನಚಿತ್ರ ಸಂಗೀತದ ಸುವರ್ಣಯುಗ ಎಂದು ಗುರುತಿಸಲ್ಪಡುವ 1950-60ರ ದಶಕಗಳಲ್ಲೂ ಒಂದು ಚಿತ್ರದ ಎಲ್ಲಾ ಹಾಡುಗಳು  ಜನಪ್ರಿಯವಾಗಿ ಚಲಾವಣೆಯಲ್ಲಿರುವುದು ಅಪರೂಪದ ವಿದ್ಯಮಾನವೇ ಆಗಿತ್ತು. ಸಾಮಾನ್ಯವಾಗಿ ಚಿತ್ರಗಳ ಒಂದೋ ಎರಡೋ ಹಾಡುಗಳು ಬಲು ಜನಪ್ರಿಯವಾಗಿ ಉಳಿದವು ಹಿನ್ನೆಲೆಗೆ ಸರಿಯುತ್ತಿದ್ದವು. ಹಿಂದಿ, ಕನ್ನಡ, ತಮಿಳು, ತೆಲುಗು ಎಲ್ಲ ಭಾಷೆಗಳಿಗೂ ಈ ಮಾತು ಅನ್ವಯಿಸುತ್ತದೆ. 1964ರಲ್ಲಿ ಬಿಡುಗಡೆಯಾದ ರಾಜನ್ ನಾಗೇಂದ್ರ ಅವರ ಸಂಗೀತವಿದ್ದ ನವಜೀವನ ಚಿತ್ರ ಈ ಸಾಲಿಗೆ ಸೇರುತ್ತದೆ. ಈ ಚಿತ್ರದ ಎಲ್ಲ ಹಾಡುಗಳು ಏಕಪ್ರಕಾರವಾಗಿ ಜನಪ್ರಿಯಗೊಂಡು ಇಂದಿಗೂ ಆಸಕ್ತಿಯಿಂದ ಆಲಿಸಲ್ಪಡುತ್ತಿವೆ.  ತಾರೆ ಹರಿಣಿಯ ಸಹೋದರರಾದ ವಾದಿರಾಜ್-ಜವಾಹರ್ ತಮ್ಮ ‘ಭಾರತಿ ಚಿತ್ರ’ ಲಾಂಛನದಲ್ಲಿ ತಯಾರಿಸಿದ ಎರಡನೆ ಚಿತ್ರ ಇದು. ಮೊದಲನೆ ಚಿತ್ರ ನಂದಾದೀಪಕ್ಕೆ ಎಂ. ವೆಂಕಟರಾಜು ಅವರ ಸಂಗೀತವಿತ್ತು. ಅವರು ಚಿತ್ರದ ಬಜೆಟ್ ಲೆಕ್ಕಿಸದೆ ದೊಡ್ಡ ಆರ್ಕೆಸ್ಟ್ರಾ ಬೇಕೆಂದು ಪಟ್ಟು ಹಿಡಿದುದರಿಂದ ರಾಜನ್ ನಾಗೇಂದ್ರ ಅವರನ್ನು ಆಯ್ಕೆ ಮಾಡಲಾಯಿತು ಎಂದು ವಾದಿರಾಜ್ ಒಂದು ಸಂದರ್ಶನದಲ್ಲಿ ಹೇಳಿದ್ದರು. ಕಮ್ಮಿ ವಾದ್ಯಗಳನ್ನು ಬಳಸಿಯೂ ಉತ್ತಮ ಸಂಗೀತ ಸಂಯೋಜನೆ ಮಾಡಬಹುದು ಎಂದು ರಾಜನ್ ನಾಗೇಂದ್ರ ಸಾಧಿಸಿ ತೋರಿಸಿದರು.

ಒಬ್ಬ ಹೀರೊ, ಒಬ್ಬಳು ಹೀರೊಯಿನ್, ಮರಸುತ್ತುವ ಹಾಡುಗಳ ಜನಪ್ರಿಯ ಫಾರ್ಮುಲಾಗೆ ಹೊರತಾದ ನಿರೂಪಣೆಯುಳ್ಳ ಈ ಚಿತ್ರವನ್ನು ನಿರ್ದೇಶಿಸಿದವರು ಪ್ರಸಿದ್ಧ ಸಂಕಲನಕಾರರಾಗಿದ್ದ ಪಿ.ಎಸ್. ಮೂರ್ತಿ.  ಸೋರಟ್ ಅಶ್ವತ್ಥ್ ಅವರ ಸಂಭಾಷಣೆ ಮತ್ತು ಹಾಡುಗಳಿದ್ದು ಕೆ.ಎಸ್. ಅಶ್ವತ್ಥ್, ಆರ್.ಎನ್. ಸುದರ್ಶನ್, ನರಸಿಂಹರಾಜು, ವಾದಿರಾಜ್, ರತ್ನಾಕರ್, ಹೆಚ್.ಆರ್. ಕೃಷ್ಣ ಶಾಸ್ತ್ರಿ,  ಪಂಢರಿಬಾಯಿ,  ರೇವತಿ, ಚಿಂದೋಡಿ ಲೀಲಾ ಹಾಗೂ ರಂಗಭೂಮಿ ಹಿನ್ನೆಲೆಯ ಇತರರ ತಾರಾಗಣವಿತ್ತು.  ತನ್ನ ಸಹೋದರರ ಚಿತ್ರವೇ ಆದರೂ ಹರಿಣಿ ಇದರಲ್ಲಿ ಕೆಲವೇ ಕ್ಷಣಗಳು ಕಾಣಿಸುವ ಗೆಸ್ಟ್ ಆರ್ಟಿಸ್ಟ್  ಆಗಿದ್ದದ್ದು ವಿಶೇಷ.

ಒಂದು ಹಳ್ಳಿಯೂರಿನಿಂದ ಶಿವಮೊಗ್ಗಕ್ಕೆ ಹೋಗುವ ಕೊನೆಯ ಬಸ್ಸು ತಪ್ಪಿದುದರಿಂದ ಮಮ್ಮದು ಎಂಬವನ ವ್ಯಾನಿನಲ್ಲಿ ಪಯಣಿಸುತ್ತಿರುವ  ಪರಸ್ಪರ ಮರಿಚಯವಿಲ್ಲದ ಅಂತೋಣಿ ಎಂಬ ನಿವೃತ್ತ ಸರಕಾರಿ ನೌಕರ,  ಬಾಲಕೃಷ್ಣಯ್ಯ ಮತ್ತು ಭಾಮಾ ಎಂಬ ನವದಂಪತಿ,  ಶ್ಯಾಮಲಾ ಎಂಬ ಮಧ್ಯವಯಸ್ಸಿನ ಡಾಕ್ಟರ್, ಗೋವಿಂದಯ್ಯ ಎಂಬ ಲೇಖಕ, ರಾಜ ಎಂಬ ರಂಗಭೂಮಿ ನಟ,  ಮನೆಯಿಂದ ಓಡಿ ಬಂದ ಮಾಲತಿ ಎಂಬ ನವಯುವತಿ ಹಾಗೂ ಆ ವ್ಯಾನನ್ನು ಬೈಕಿನಲ್ಲಿ ಹಿಂಬಾಲಿಸುವ  ಶ್ರೀಧರ್ ಎಂಬ ಯುವಕ ಭೀಕರ ಮಳೆಯ ಕಾರಣ  ದಟ್ಟ ಕಾನನ ಮಧ್ಯದ ಒಂದು ಟ್ರವೆಲರ್ಸ್ ಬಂಗಲೆಯಲ್ಲಿ ತಂಗಬೇಕಾಗುತ್ತದೆ. ಆರಂಭ ಮತ್ತು ಕೆಲವು ಫ್ಲಾಷ್ ಬ್ಯಾಕ್‌ಗಳನ್ನು ಹೊರತು ಪಡಿಸಿದರೆ ಸಂಪೂರ್ಣ ಚಿತ್ರ  ಆ ಬಂಗಲೆಯಲ್ಲಿ ಚಿತ್ರೀಕರಿಸಲ್ಪಟ್ಟಿದೆ. ಹಿಂದಿಯ ಗುಮ್‌ನಾಮ್ ಕೂಡ ಕೆಲವು ಆಯ್ದ ಜನರನ್ನು ಒಂದು ಬಂಗಲೆಯಲ್ಲಿ ಸೇರುವಂತೆ ಮಾಡಿ ಚಿತ್ರಿಸಲಾದ ಸಿನಿಮಾ.  ಆದರೆ ಇವೆರಡು ಚಿತ್ರಗಳಲ್ಲಿ ಬೇರೆ ಯಾವ ಸಮಾನತೆಯೂ ಇಲ್ಲ.

ಚಿತ್ರದ ಮೊದಲ ಹಾಡು ವೈಶಿಷ್ಟ್ಯಪೂರ್ಣವಾದುದು.  ಗೋವಿಂದಯ್ಯನ ಪ್ರಾರ್ಥನೆ ರೂಪದಲ್ಲಿ ಭಗವದ್ಗೀತೆಯ 7ನೇ ಅಧ್ಯಾದ 21ನೇ ಶ್ಲೋಕ, ಮಮ್ಮದುವಿನ ನಮಾಜ್ ಹಿನ್ನೆಲೆಯಾಗಿ ಮಸೀದಿಯ ಅಜಾನ್ ಮತ್ತು ಅಂತೋಣಿಗಾಗಿ ಚರ್ಚಿನ ಪ್ರಾರ್ಥನೆಯ ವಾಕ್ಯಗಳನ್ನೊಳಗೊಂಡ ಇದನ್ನು ನಿಜ ಅರ್ಥದಲ್ಲಿ ಹಾಡೆಂದು ಹೇಳಲಾಗದು. ವ್ಯಾಟಿಕನ್ ಉಚ್ಚಾರದ ಮೂರನೆಯ ಚರ್ಚ್ ಭಾಗದಲ್ಲೂ ಪಿ.ಬಿ.ಶ್ರೀನಿವಾಸ್ ಅವರದ್ದೇ ಧ್ವನಿಯಿರುವುದು ಎಂದು ಬಹಳ ಸಮಯ ನನಗೆ ಗೊತ್ತೇ ಆಗಿರಲಿಲ್ಲ.



ಯೋಯೋ ಯಾಂಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ ।
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್ ॥

ಅಲ್ಲಾಹು ಅಕ್ಬರ್  ಅಲ್ಲಾಹು ಅಕ್ಬರ್
ಅಲ್ಲಾಹು ಅಕ್ಬರ್  ಅಲ್ಲಾಹು ಅಕ್ಬರ್
ಅಶ್ಶದು ಅಲ್ಲಾ ಇಲಾಹ ಇಲ್ಲಲ್ಲಾಹ
ಅಶ್ಶದು ಅನ್ನ  ಮುಹಮ್ಮದರ್ ರಸೂಲುಲ್ಲಾಹ
ಹಯ್ಯಾ ಅಲಸ್ ಸಲಾಹ
ಹಯ್ಯಾ ಅಲಲ್ ಫಲಾಹ
ಅಸ್ಸಲಾತು ಖಯ್ರುಂ ಮಿನನ್ ನೋಮ್
ಅಲ್ಲಾಹು ಅಕ್ಬರ್
ಅಲ್ಲಾಹು ಅಕ್ಬರ್
ಲಾ ಇಲಾಹ ಇಲ್ಲಲ್ಲಾಹ

Our father
Who art in heaven
Hallowed be thy name
Thy kingdom com
Thy will be done on earth as it is in heaven
Give us this day our daily bread
And forgive us our trespasses
As we forgive them their trespasses against us
And lead us not into temptation
But deliver us from evil
For thine is the kingdom
The power and the glory
Forever and ever
Amen


ಇದು ಮುಗಿದ ಮರುಕ್ಷಣವೇ ಡಾಕ್ಟರ್ ಶ್ಯಾಮಲಾ ಉಗಾಭೋಗ ರೂಪದಲ್ಲಿ ಬಸವಣ್ಣನವರ ವಚನ ಹಾಗೂ ಲೀಲಾಮಯ ಹೇ ದೇವ ಎಂಬ ಹಾಡನ್ನು ಪಿ.ಸುಶೀಲಾ ಧ್ವನಿಯಲ್ಲಿ ಭಗವಂತನನ್ನು ಪ್ರಾರ್ಥಿಸುತ್ತಾರೆ.  ಜಿಸ್ ದೇಶ್ ಮೆಂ ಗಂಗಾ ಬಹತೀ ಹೈ ಚಿತ್ರದಲ್ಲಿ ಹಮ್ ಭೀ ಹೈಂ ತುಮ್ ಭೀ ಹೋ ಮತ್ತು ಹೋಟೊಂಪೆ ಸಚ್ಚಾಯಿ ರಹತೀ ಹೈ ಹಾಗೂ ಬಾಬ್ಬಿ ಚಿತ್ರದಲ್ಲಿ ನ ಮಾಂಗೂಂ ಸೋನಾ ಚಾಂದಿ ಮತ್ತು ಝೂಟ್ ಬೋಲೆ ಕವ್ವಾ ಕಾಟೇ ಬೆನ್ನುಬೆನ್ನಿಗೆ  ಬಂದು ಒಂದೇ ಹಾಡಿನ ಎರಡು ಭಾಗಗಳೋ ಅಥವಾ ಎರಡು ಸ್ವತಂತ್ರ ಹಾಡುಗಳೋ ಎಂಬ ಜಿಜ್ಞಾಸೆ ಇರುವಂತೆಯೇ ಇಲ್ಲೂ ಇದೆ. ಈ ಹಾಡಲ್ಲಿ ಯಾವುದೇ ನಿರ್ದಿಷ್ಟ ದೇವರ ಉಲ್ಲೇಖ ಇಲ್ಲದಿರುವುದರಿಂದ  ಕನಕದಾಸರ ದೀನ ನಾನು ಸಮಸ್ತ ಲೋಕಕೆ ದಾನಿ ನೀನು ಉಗಾಭೋಗದಂತೆ ಇದೂ ಎಲ್ಲೂ ಸಲ್ಲುವ ಪ್ರಾರ್ಥನೆ. ಪಂತುವರಾಳಿ ರಾಗವನ್ನು ಹೋಲುತ್ತದೆ. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಅಳವಡಿಸಲಾಗಿದ್ದ ತನು ಕರಗದವರಲ್ಲಿ ವಚನದಿಂದ ಸ್ಪೂರ್ತಿ ಪಡೆದಿರಬಹುದು.



ದಯೆಯಿಲ್ಲದ ಧರ್ಮವು ಆವುದಯ್ಯಾ
ದಯವೇ ಬೇಕು ಸಕಲ ಪ್ರಾಣಿಗಳಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಮ ದೇವಾ

ಲೀಲಾಮಯ ಹೇ ದೇವ
ನೀ ತೋರು ದಯಾ ಭಾವ
ಗುರಿ ಕಾಣದಿದೆ ಜೀವ
ನೆರವಾಗೆಲೊ ದೇವ

ಸರಿದಾರಿ ಜಗದೆ ಕಾಣದಿಂತು ಪಯಣ ಸಾಗಿದೆ
ಸುಖ ಶೋಕ ಪಥದೆ ಬಾಳ ಜಾತ್ರೆ ಬರಿದೆ ಕೂಡಿದೆ
ಎದುರಾಗೆ ಕಾಳರಾತ್ರೆ ಬೆಳಕೀಯಬಾರದೆ

ಕುರುಡಂಗೆ ನಿರತ ಊರುಗೋಲೆ ಬದುಕಿಗಾಸರೆ
ಶರಣೆಂದ ಜನಕೆ ಮಾರ್ಗದಾತ ನೀನೆ ಆಗಿರೆ
ಕರುಣಾಳು ಮೌನವೇಕೆ ಮೊರೆ ಕೇಳಬಾರದೆ


ಮುಂದಿನದು ಓಡಿ ಬಂದ ಯುವತಿ ಮಾಲತಿ ಫ್ಲಾಶ್ ಬ್ಯಾಕಿನಲ್ಲಿ ತನ್ನ ಇನಿಯ ಮಾಧವನೊಡನೆ ಹಾಡುವ ಪಿ.ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ ಧ್ವನಿಯಲ್ಲಿರುವ ಯುಗಳ ಗೀತೆ.  ಸಾಕು ಮಗಳು ಚಿತ್ರದ ಒಂದೇ ಒಂದು ಹೊಸ ಹಾಡು ಗೀತೆಯನ್ನು ಸ್ವಲ್ಪ ಹೋಲುವ ಇದರಲ್ಲಿ ಶಂಕರ್ ಜೈಕಿಶನ್ ಅವರ ಸಹಾಯಕರಾಗಿದ್ದು ಸ್ವತಂತ್ರವಾಗಿಯೂ ಕೆಲವು ಚಿತ್ರಗಳಿಗೆ ಸಂಗೀತ ನೀಡಿದ ದತ್ತಾರಾಂ ಅವರು ಪ್ರಚುರಪಡಿಸಿದ ‘ದತ್ತು ಢೋಲಕ್ ಠೇಕಾ’ ಇದೆ. ಸೋರಟ್ ಅಶ್ವತ್ಥ್ ಅವರು ಆದಿ ಪ್ರಾಸ ಅಂತ್ಯ ಪ್ರಾಸ ಎರಡನ್ನೂ ಬಳಸಿದ್ದಾರೆ.



ಇದೇ ಇದೇ ಸವಿಬಾಳ ದಿನ
ಕಾದು ಕಂಡಿತೆ ಮಧುರ ಮನ
ಮೈ ಮರೆಸುವ ಮನ ತಣಿಸುವ
ಪ್ರೇಮ ಮಿಲನದ ದಿನ

ಅನುರಾಗದ ಬಾಳಿನ ಗಾನ
ನೆರೆ ಹೊಮ್ಮಿ ಹಾಡೆ ಮನವೀಣಾ
ನವಜೀವನ ತುಂಬಿದ ಪ್ರಾಣ
ನವ ಪ್ರೇಮವಿಂದೆ ಪರಿಪೂರ್ಣ
ನಾವಾಡಿ ಪಾಡಿ ಮನಸಾರೆ ನೋಡುವ
ಸದಾನಲಿವ ಸದನ ಆಹಾ

ಒಲವೊಂದಿರೆ ನಮ್ಮಯ ಮುಂದೆ
ತನು ಮೆರೆವ ಒಡವೆ ತೃಣವೆಂಬೆ
ಮನ ಹೊಂದಿರೆ ಸ್ವರ್ಗವು ನಮದೆ
ಬಡತನವು ಸಿರಿಯು ಸಮವೆಂದೆ
ನಾವಿಂದು ಸೇರಿ ನಲವಿಂದ ತೇಲುವ
ಸುಧೆ ಸವಿವ ಸುದಿನ ಆಹಾ


ಆ ಮೇಲೆ ಬರುವುದು ನವವಿವಾಹಿತ ಬಾಲಕೃಷ್ಣಯ್ಯ ಕೋಪಿಸಿಕೊಂಡ ತನ್ನ ಹೊಸ ಹೆಂಡತಿ ಭಾಮಾಳನ್ನು  ಸಮಾಧಾನಪಡಿಸಲೆತ್ನಿಸುವ ನಾಗೇಂದ್ರ ಮತ್ತು ಎಲ್.ಆರ್. ಈಶ್ವರಿ ಅವರ ಧ್ವನಿಯಲ್ಲಿರುವ ಡ್ಯುಯೆಟ್.  ಬಾಲಕೃಷ್ಣಯ್ಯ ಮತ್ತು ಭಾಮಾ  ಯಾವಾಗಲೂ ಶುದ್ಧ ಕನ್ನಡದಲ್ಲೇ ಮಾತುಕತೆ ಆಡುವುದಾದರೂ ಈ ಹಾಡಲ್ಲಿ ಅಲ್ಲಲ್ಲಿ ಇಂಗ್ಲಿಷ್ ಪದಗಳಿವೆ!   ನಾಗೇಂದ್ರ ಹಾಡಿದ ಪಲ್ಲವಿ ಮುಗಿದ ಮೇಲೆ ಎಲ್.ಆರ್. ಈಶ್ವರಿ ಅವರ ಪ್ರವೇಶ ನೇರವಾಗಿ ಚರಣದಲ್ಲಿ ಆಗುವುದು ಒಂದು ಅಸಾಮಾನ್ಯ ಅಂಶ. ರತ್ನಮಂಜರಿ ಚಿತ್ರದ ಯಾರು ಯಾರು ನೀ ಯಾರು ಹಾಡಿನ ಪ್ರಭಾವ ಇದರ ಮೇಲಿದೆ.  ನರಸಿಂಹರಾಜು ಮತ್ತು ಚಿಂದೋಡಿ ಲೀಲಾ ಅವರ ಈ ಪಾತ್ರಗಳಿಗೆ ಕಥೆಯಲ್ಲಿ ಯಾವ ಪಾತ್ರವೂ ಇಲ್ಲ.!  ರತ್ನಾಕರ್ ಅಭಿನಯಿಸಿದ ಕಥೆಗಾರನ ಪಾತ್ರ ಮತ್ತು ವಾದಿರಾಜ್ ಅವರ ರಂಗಭೂಮಿ ಕಲಾವಿದನ ಪಾತ್ರಗಳು ಕೂಡ  ಕಥೆಗೆ ನೇರ ಸಂಬಂಧವಿರದೆ  ಮನರಂಜನೆಗಾಗಿಯಷ್ಟೇ ಇರುವಂಥವು.



ಭಾಮಾ ಭಾಮಾ
ನಾನರಿಯೆ ಮನದ ಮರ್ಮ
ಬಿಗುಮಾನ ಬಿಡು ಚಿನ್ನ
ನೀ ನಗುತಿರೆ ಬಲು ಚೆನ್ನ

ಈ ಥಳಕು ಮಾತುಬೇಕಿಲ್ಲ
ನಾ ಬಲ್ಲೆ ನಿಮ್ಮ ಜೋಕೆಲ್ಲ
ನನ ದಾರಿ ಬೇರೆ ನಿಮ್ಮ ದಾರಿ ಬೇರೆ
ಈ ಸಂಸಾರ ಸುಖವಿಲ್ಲ
ಹಾಗೆನ್ನಬೇಡವೇ
heart failure ಆಗುತೇ
ಹಾಗೆನ್ನಬೇಡ ನಾ ಬದುಕಲಾರೆನೇ
wife ಇಲ್ದೆ life ಇಲ್ಲ

ಅಯ್ಯೋ ರಾಮಾ
ಇದು ಏನು ಬಂತು ಖರ್ಮ
ಹೆಣಗಾಟದೀ ಜನ್ಮ ಏಕೆ
ಕೊಟ್ಟನೊ ಆ ಬ್ರಹ್ಮ

ಕೋಮಲೆ ಕೇಳೆ ಮಾತನ್ನ
ಕೋಪಕ್ಕೆ ಹಾಕೆ ಬ್ರೇಕನ್ನ
ಸಾಕಿನ್ನು ಫೈಟು ನಿನ್ನ ಮಾತೆ ರೈಟು
ಮನ ಒಂದಾದ್ರೆ ಸುಖ ಉಂಟು
ಅಂದಂತೆ ನಡೆವಿರಾ
ಆಲ್ ರೈಟು ಮೈ ಡಿಯರ್
ಅಂದಂತೆ ನಡೆದು ಆನಂದ ತಳೆದು
ನಾವೆಂದೆಂದು ಬಾಳೋಣ

ಭಾಮಾ ಭಾಮಾ
ಈಗರಿತೆ ಮನದ ಮರ್ಮ
ಬಿಗುಮಾನ ಬಿಡು ಚಿನ್ನ ನೀ
ನಗುತಿರೆ ಬಲು ಚೆನ್ನ


ಬಂಗಲೆಯಲ್ಲಿ ವಾಸ್ತವ್ಯದ ವೇಳೆ ನಡೆಯುವ ಕೆಲವು ಘಟನೆಗಳಿಂದ ಮಾಲತಿ ತನ್ನ ಮಗಳು ಎಂದು ಡಾಕ್ಟರ್ ಶ್ಯಾಮಲಾಗೆ ಗೊತ್ತಾಗುತ್ತದೆ.  ಸಲ್ಲದ ಅಪವಾದ ಹೊತ್ತು ಪತಿಯಿಂದ ಪರಿತ್ಯಕ್ತಳಾಗುವ ಮುನ್ನ ತನ್ನ ಪುಟ್ಟ ಮಗಳಿಗಾಗಿ ಹಾಡಿದ್ದ  ಜೋಗುಳವೊಂದು ಆಕೆಗೆ ನೆನಪಾಗುತ್ತದೆ. ಪ್ರತಿ ಸಾಲಲ್ಲೂ  ಮಾರ್ಮಿಕ ಮಾರ್ಮಿಕ ಸಾಹಿತ್ಯ ಹೊಂದಿರುವ ಈ ಹಾಡಿನಲ್ಲಿ  ಸಂಗೀತದ ಸ್ವರ ಲಹರಿಗಳ ಮೂಲಕ ರಾತ್ರೆಯ ನೀರವತೆಯನ್ನು ಹೇಗೆ ಸೃಷ್ಟಿಸಬಹುದೆಂದು ರಾಜನ್ ನಾಗೇಂದ್ರ  ತೋರಿಸಿಕೊಟ್ಟಿದ್ದಾರೆ.  ಇದೇ ಮಧ್ಯಮಾವತಿ ರಾಗ ಮತ್ತು ಇದೇ ತಂತ್ರವನ್ನುಪಯೋಗಿಸಿ  ಈ ಸಂಸ್ಥೆಯ ಮುಂದಿನ ಚಿತ್ರ  ನಾಂದಿಯಲ್ಲಿ ವಿಜಯಭಾಸ್ಕರ್ ಹಾಡೊಂದು ಹಾಡುವೆ  ಹಾಡು ಸೃಷ್ಟಿಸಿದರು. ಮುಂದೆ ಇದೇ ಶೈಲಿಯಲ್ಲಿ ಬ್ರಹ್ಮಚಾರಿ ಚಿತ್ರದ ಮೈ ಗಾವೂಂ ತುಮ್ ಸೋ ಜಾವೋ ಹಾಡು ಬಂತು. ಈ ಹಾಡಿನ ಆರಂಭದಲ್ಲಿ ಬರುವ ಹಿನ್ನೆಲೆ ಸಂಗೀತದ ತುಣುಕೊಂದು ಪ್ಯಾಸಾ ಚಿತ್ರದ ಜಿನ್ಹೆ ನಾಜ್ ಹೈ ಹಿಂದ್ ಪರ್ ವೊ ಕಹಾಂ ಹೈಂ ಮತ್ತು ಸುಜಾತಾ ಚಿತ್ರದ ಜಲ್ತೆ ಹೈಂ ಜಿಸ್ ಕೆ ಲಿಯೆ ಹಾಡಿನಲ್ಲಿ ಎಸ್.ಡಿ.ಬರ್ಮನ್ ಬಳಸಿದ ತುಣುಕನ್ನು ನೆನಪಿಸುತ್ತದೆ.



ಪ್ರೀತಿ ಹೊನಲೇ ಹಾಯಾಗಿರೆಲೇ
ಬಾಳಲ್ಲಿ ಬಂಗಾರವಾಗೆ
ಜೋ ಜೋ

ಹೂವಂಥ ಚೆಲುವೇ ಹಾಲಂಥ ಮನವೇ
ತಾಯಾಸೆ ಒಲವೆಲ್ಲ ಏಕೆಂದೆ
ನನ ನೋಡಿ ನಗುವೆ ನೆನೆದೇನು ಅಳುವೆ
ಈ ನೋಟ ಸಂಕೇತ ಏನೆಂದೆ
ಹೇಳೆ ಕಂದ ಬಾಳಿಗಂದ
ನಗು ಮುಂದೆ ಅಳು ಹಿಂದೆ ನೀನೆಂಬೆಯಾ

ಅನುವಾಗಿ ಬರುವ ನಿನಗಾದ ದಿನವ
ಈ ತಾಯ ಮಡಿಲಲ್ಲಿ ನೀ ನೋಡೆ
ಮಗುವಾಗಿ ಇರುವೆ ತಾಯಾಗಿ ಮೆರೆವೆ
ನನ್ನಂತೆ ಈ ಹಾಡ ನೀ ಹಾಡೆ
ಕಾದು ನಿಂದ ನಾಳಿಗಂದ
ನಿನಗಾಗಿ ಗೆಲುವಿಂದ ಕೈ ನೀಡಿದೆ


ಕಾಡಿನ ಮಧ್ಯೆ ಸಿಲುಕಿಕೊಂಡು ಬಂಗಲೆಯಲ್ಲಿ  ಸಿಲುಕಿಕೊಂಡಿದ್ದವರಿಗೆ ದೇವರಂತೆ ಸಮಯಕ್ಕೊದಗಿದವರು ಆ ಹಳ್ಳಿಯ ಸಾಹುಕಾರ ಹೊಂಬಾಳಯ್ಯ.  ಮಾಲತಿ ವೀಣೆ ನುಡಿಸಬಲ್ಲಳೆಂದು ತಿಳಿದ ಅವರು ತನ್ನ ಮನೆಯಲ್ಲಿದ್ದ ವೀಣೆಯನ್ನು ಹೊರಿಸಿಕೊಂಡು ಬಂಗಲೆಗೆ ಬರುತ್ತಾರೆ.  ಮಾಲತಿ ವೀಣೆ ನುಡಿಸುತ್ತಾ ತನ್ನಿಂದ ದೂರಾದ ಪ್ರಿಯಕರ ಮಾಧವನಿಗೆ ಪ್ರಿಯವಾದ   ಕರೆಯೇ ಕೋಗಿಲೆ ಮಾಧವನ ಹಾಡನ್ನು ಎಸ್. ಜಾನಕಿ ಧ್ವನಿಯಲ್ಲಿ ಹಾಡುತ್ತಾಳೆ.  ದರ್ಬಾರಿ ಕಾನಡಾ ರಾಗಾಧಾರಿತ ಈ ಹಾಡಿನಲ್ಲಿ ವೀಣೆಯನ್ನು ಅದ್ಭುತವಾಗಿ ನುಡಿಸಿದ ವಿದ್ವಾಂಸ ಯಾರೆಂದು ತಿಳಿದಿಲ್ಲ.



ಕರೆಯೆ ಕೋಗಿಲೆ ಮಾಧವನ
ಕಾತರ ತುಂಬಿದ ಈ ನಯನ
ಕಾಣಲು ಕಾದಿದೆ ಪ್ರಿಯತಮನ
ಕರೆಯೆ ಕೋಗಿಲೆ ಮಾಧವನ

ಈ ಅನುರಾಗದ ಕರೆಯನು ತಿಳಿಸೆ
ವೀಣೆಯ ನಾದಕೆ ನೀ ದನಿ ಬೆರೆಸೆ
ಹಾಡೇ ಪಾಡೇ ಒಲವಿರಿಸೇ
ವಿರಹಿ ರಾಧೆಯ ಮನ ತಣಿಸೇ

ಮುನಿದಿಹನೇನೆ ನೀ ಹೇಳೆ
ಮನಸಿನ ಚಿಂತೆ ನಾ ತಾಳೆ
ಏಕೋ ಏನೋ ಭಯವಿಂದೆ
ಇನಿಯನ ಕಾಣದೆ ನಾ ನೊಂದೆ


ಈ ಚಿತ್ರದ ಆರಂಭದಲ್ಲಿ ಸ್ಟ್ರೀಟ್ ಸಿಂಗರ್‌ ಒಬ್ಬ ನಮ್ಮೂರೆ ಚಂದ  ನಮ್ಮೋರೆ ಅಂದ ಹಾಡಿನ ಸಾಲನ್ನು ಹಾರ್ಮೋನಿಯಂನಲ್ಲಿ ನುಡಿಸಿ  ಎಕ್ ಪರ್‌ದೇಸಿ ಮೇರಾ ದಿಲ್ ಲೇಗಯಾ ಧಾಟಿಯಲ್ಲಿ  ವಾರೆ ನೋಟ ನೋಡಿ ಮಳ್ಳ ಮಾಡಿದನವ್ವ ಎಂದು ಹಾಡುವ   ತುಣುಕೊಂದಿದೆ.  ವಾಸ್ತವವಾಗಿ ಹಿಂದಿಯ ಪ್ರಸಿದ್ಧ ಗಾಯಕಿಯಾಗಿದ್ದ ಅಮೀರ್ ಬಾಯಿ ಕರ್ನಾಟಕಿ ಅವರ ಧ್ವನಿಯಲ್ಲಿ ಈ ಹಾಡಿನ ಧ್ವನಿಮುದ್ರಿಕೆ ತಯಾರಾಗಿತ್ತು. ಚಿತ್ರದಲ್ಲಿರುವ ಭಾಗ ಮತ್ತು  ಅಮೀರ್ ಬಾಯಿ ಅವರ ರೆಕಾರ್ಡ್ ಎರಡನ್ನೂ ಇಲ್ಲಿ ಆಲಿಸಬಹುದು.






ಅಂತರ್ಜಾಲದಲ್ಲಿ ಲಭ್ಯವಿರುವ  ವಿಭಿನ್ನ ಶೈಲಿಯ ಈ ಚಿತ್ರವನ್ನು ಸಮಯವಿದ್ದಾಗ ಅಗತ್ಯವಾಗಿ ನೋಡಿ ಆನಂದಿಸಿ. ‘ನವಜೀವನ’ ಎಡದಿಂದಲೂ ಬಲದಿಂದಲೂ ಓದಬಹುದಾದ ಗತಪ್ರತ್ಯಾಗತ ಪದ (palindrome). ಈ ರೀತಿ ಗತಪ್ರತ್ಯಾಗತ ಪದ ಶೀರ್ಷಿಕೆಯಾಗುಳ್ಳ ಬೇರೆ ಯಾವುದಾದರೂ ಸಿನಿಮಾ ಗೊತ್ತಿದ್ದರೆ ತಿಳಿಸಿ.

























1 comment:

  1. Very good rare collection. After a very long time I am listening to thiss sir

    ReplyDelete

Your valuable comments/suggestions are welcome