Monday, 17 February 2025

ಮಾಸ ಋತುಗಳ ತಪ್ಪಿದ ತಾಳ


ಚಾಂದ್ರಮಾನ ಪ್ರಕಾರ ಚೈತ್ರ ವೈಶಾಖಗಳೆಂದರೆ ವಸಂತ ಋತು. ಸೌರಮಾನ ಪ್ರಕಾರ ಮೇಷ ವೃಷಭ ಮಾಸಗಳು ವಸಂತ ಋತು. ಆದರೆ ಪ್ರಕೃತಿ ಚಾಂದ್ರಮಾನ ಪಂಚಾಂಗವನ್ನೂ ನೋಡುವುದಿಲ್ಲ, ಸೌರಮಾನ ಪಂಚಾಂಗವನ್ನೂ ನೋಡುವುದಿಲ್ಲ. ಅದು ನೋಡುವುದು ಸೂರ್ಯನ ಸುತ್ತ ವಾರ್ಷಿಕ ಚಲನೆಯ ಪಥದಲ್ಲಿ ಭೂಮಿ ಎಲ್ಲಿದೆ ಎಂದು, ಅಥವಾ ಭೂಮಿಯಲ್ಲಿರುವ ನಾವು ಗ್ರಹಿಸುವಂತೆ ಸೂರ್ಯ ತನ್ನ ವಾರ್ಷಿಕ 360 ಡಿಗ್ರಿ ಚಲನೆಯಲ್ಲಿ ಈಗ ಎಲ್ಲಿದ್ದಾನೆ ಎಂದು ಮಾತ್ರ.
ಸೂರ್ಯ ಕ್ರಾಂತಿವೃತ್ತದಲ್ಲಿ ತನ್ನ ವಾರ್ಷಿಕ ಪರಿಭ್ರಮಣೆ ಆರಂಭಿಸುವ ಶೂನ್ಯ ಡಿಗ್ರಿಯ ವಸಂತ ವಿಷುವತ್ ಬಿಂದುವಿನಿಂದ 30 ಡಿಗ್ರಿ ಹಿಂದಕ್ಕೆ ಅಂದರೆ 270 ಡಿಗ್ರಿಯಲ್ಲಿ ಇರುವಾಗ (360-30=270) ಪ್ರಕೃತಿಯಲ್ಲಿ ವಸಂತದ ಲಕ್ಷಣಗಳು ಕಾಣಿಸತೊಡಗುತ್ತವೆ. ಇಲ್ಲಿಂದ ಮುಂದೆ ಚಲಿಸುತ್ತಾ ವಸಂತ ವಿಷುವತ್ ದಾಟಿ ಎಪ್ರಿಲ್ 20ಕ್ಕೆ 30 ಡಿಗ್ರಿ ಬಿಂದುವನ್ನು ತಲುಪುವ ವರೆಗೆ ವಸಂತ ಋತು. ಮುಂದೆ ಜೂನ್ 21ರ ವರೆಗೆ ಅತಿಯಾದ ಸೆಕೆಯ ಗ್ರೀಷ್ಮ ಋತು. ಅಗಸ್ಟ್ 23ರ ವರೆಗೆ ಮಳೆಯು ಇಳೆಯನ್ನು ತಂಪಾಗಿಸುವ ವರ್ಷಾ ಋತು. ನಂತರ ಅಕ್ಟೋಬರ್ 23ರ ವರೆಗೆ ಸಮ ಶೀತೋಷ್ಣದ ಶರದೃತು. ಆ ಮೇಲೆ ಡಿಸೆಂಬರ್ 22ರ ವರೆಗೆ ವಾತಾವರಣ ತಂಪಾಗುತ್ತಾ ಹೋಗುವ ಹೇಮಂತ ಋತು. ಕೊನೆಯಲ್ಲಿ ಫೆಬ್ರವರಿ 18ರ ವರೆಗೆ ಮೈ ಕೊರೆಯುವ ಚಳಿ ಇರಬೇಕಾದ ಶಿಶಿರ ಋತು. ಸೂರ್ಯನ ಸುತ್ತ ಭೂಮಿಯ ಪರಿಬ್ರಮಣವನ್ನು ಪರಿಗಣಿಸುವುದರಿಂದ ಇದು ಸಾಯನ (ಚಲನೆಯಿಂದೊಡಗೂಡಿದ) ಪದ್ಧತಿಯ ಲೆಕ್ಕಾಚಾರ.
ಹಾಗಿದ್ದರೆ ಪಂಚಾಂಗಗಳೊಂದಿಗಿನ ಋತುಗಳ ತಾಳ ಮೇಳ ಏಕೆ ತಪ್ಪಿತು? ಒಂದು ಕಾಲದಲ್ಲಿ ಉತ್ತರಾಯಣಾರಂಭದಂದು ದಶಂಬರದಲ್ಲಿ ಇರುತ್ತಿದ್ದ ಮಕರ ಸಂಕ್ರಾಂತಿ ಈಗ ಜನವರಿ ಮಧ್ಯಭಾಗಕ್ಕೆ ತಲುಪಲು ಕಾರಣವಾದ ಭೂಮಿಯ ಓಲಾಡುವಿಕೆಯಿಂದ ಉಂಟಾಗುವ recession of equinoxes ವಿದ್ಯಮಾನವೇ ಇದಕ್ಕೂ ಕಾರಣ. ಏಕೆಂದರೆ ಸೂರ್ಯನ ಸುತ್ತ ಭೂಮಿಯ ಚಲನೆಯನ್ನು ಗಣನೆಗೆ ತೆಗೆದುಕೊಳ್ಳದ ನಿರಯನ ಪದ್ಧತಿಯ ಸೌರಮಾನದಲ್ಲಿ ಮೇಷ ವೃಷಭಾದಿ ಎರಡು ಮಾಸಗಳಿಗೊಂದರಂತೆ ವಸಂತ ಗ್ರೀಷ್ಮಾದಿ ಋತುಗಳಿರುತ್ತವೆ. ನಿರಯನ ಪದ್ಧತಿಯ ಸೌರಮಾನದಲ್ಲಿ ಸೂರ್ಯನ ವಾರ್ಷಿಕ ಚಲನೆಯನ್ನು ಮೇಷ ರಾಶಿಯಿಂದ ಲೆಕ್ಕ ಹಾಕಲಾಗುತ್ತಿದ್ದು ಕಾಂತಿವೃತ್ತದಲ್ಲಿ ಅದರ ಆರಂಭ ಬಿಂದುವನ್ನು ಮೇಷಾದಿ ಅನ್ನಲಾಗುತ್ತದೆ. ಈಗ ಇದು ವಸಂತ ವಿಶುವತ್ ಬಿಂದುವಿಗಿಂತ ಸುಮಾರು 24.2 ಡಿಗ್ರಿ ಹಿಂದಕ್ಕಿದೆ. ಈ ವ್ಯತ್ಯಾಸವನ್ನು ಅಯನಾಂಶ ಎನ್ನುತ್ತಾರೆ. ಅಯನಾಂಶ ಗಣನೆಯ ಲಾಹಿರಿ, ರಾಮನ್ ಮುಂತಾದ ಬೇರೆ ಬೇರೆ ಪದ್ಧತಿಗಳಲ್ಲಿ ಏಕ ರೂಪತೆ ಇಲ್ಲ. ಬಹುತೇಕ ಆನ್ ಲೈನ್ ಪಂಚಾಂಗಗಳು ಲಾಹಿರಿ ಪದ್ಧತಿಯನ್ನು ಅನುಸರಿಸುತ್ತವೆ. ಕ್ರಿಸ್ತ ಶಕ 285ರಲ್ಲಿ ವಸಂತ ವಿಷುವತ್ ಮತ್ತು ಮೇಷಾದಿ ಬಿಂದುಗಳು ಒಂದೇ ಆಗಿದ್ದವು. ಅಂದರೆ ಆಗ ಅಯನಾಂಶ ಶೂನ್ಯವಾಗಿತ್ತು. ಆಗ ಉತ್ತರಾಯಣ ಆರಂಭ ಮತ್ತು ಮಕರ ಮಾಸ ಆರಂಭ ಒಟ್ಟಿಗೆ ಆಗುತ್ತಿತ್ತು. ವೇದಗಳ ಕಾಲವೆನ್ನಲಾದ ಕ್ರಿಸ್ತ ಪೂರ್ವ 1893ರಲ್ಲಿ ಮೇಷಾದಿ ಬಿಂದು ಸಾಯನ ಪದ್ಧತಿ ಪ್ರಕಾರ ವಸಂತ ಋತು ಆರಂಭ ಆಗುವ 330 ಡಿಗ್ರಿಯಲ್ಲಿ ಇತ್ತು. ಅಂದರೆ ಆಗ ಅಯನಾಂಶ ಮೈನಸ್ 30 ಡಿಗ್ರಿ. ವಸಂತ ವಿಷುವತ್ ವಸಂತ ಋತುವಿನ ಮಧ್ಯದಲ್ಲಿ ಬರುತ್ತಿತ್ತು. ಚಾಂದ್ರಮಾನಕ್ಕೂ ಪ್ರಕೃತಿಯ ಬದಲಾವಣೆಗಳಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಚಾಂದ್ರ ಮಾಸಗಳು ಸೌರ ಸಂಕ್ರಾಂತಿಗಳಿಗೆ ತಳುಕು ಹಾಕಿಕೊಂಡಿರುವುದರಿಂದ ಚೈತ್ರ ವೈಶಾಖ ವಸಂತ ಋತು, ಜ್ಯೇಷ್ಠ ಆಷಾಢ ಗ್ರೀಷ್ಮ ಋತು ಎಂದು ನಾವು ಸಂಜೆಯ ಬಾಯಿಪಾಠದಲ್ಲಿ ಹೇಳುತ್ತೇವೆ. ಇಲ್ಲಿ ಇನ್ನೊಂದು ಸ್ವಾರಸ್ಯವೂ ಇದೆ. ಚಾಂದ್ರ ಮಾಸದಲ್ಲಿ ಕಮ್ಮಿ ದಿನಗಳಿರುವುದರಿಂದ ವಸಂತ ಮಾಸ ಆರಂಭವಾಗುವ ಯುಗಾದಿಯು ಹಿಂದೆ ಬರುತ್ತಾ ಮೂರನೆಯ ವರ್ಷಕ್ಕಾಗುವಾಗ ನಿಜವಾದ ವಸಂತ ಆರಂಭವಾಗುವ ಫೆಬ್ರವರಿ 18ಕ್ಕೆ ಸಾಕಷ್ಟು ಸಮೀಪ ಬರುತ್ತದೆ. ಆದರೆ ಆ ವರ್ಷ ಅಧಿಕ ಮಾಸವೊಂದನ್ನು ಸೇರಿಸಿ ಮತ್ತೆ ಅದನ್ನು ಮುಂದೆ ದೂಡಲಾಗುವುದರಿಂದ ಚಾಂದ್ರ ಚೈತ್ರ ಆರಂಭವಾಗುವಷ್ಟರಲ್ಲಿ ನಿಜವಾದ ಗ್ರೀಷ್ಮ ಋತು ಆರಂಭವಾಗಲು ಕೆಲವೇ ದಿನಗಳು ಉಳಿದಿರುತ್ತವೆ. ಚೈತ್ರ ವೈಶಾಖಗಳ ವಸಂತ ಮುಗಿಯಲಿಕ್ಕಾಗುವಾಗ ಕೊಡೈಕ್ಕನಾಲ್, ಊಟಿಗಳಂತಹ ತಂಪು ಪ್ರದೇಶಗಳ ಹೊರತು ಬೇರೆಡೆ ವಸಂತದ ಯಾವ ಲಕ್ಷಣವೂ ಇರುವುದಿಲ್ಲ. ಸೆಕೆಗಾಲ, ಮಳೆಗಾಲ, ಚಳಿಗಾಲಗಳೂ ಋತುಗಳ ಅನುಸಾರ ಇರುವುದಿಲ್ಲ. 2020ರಿಂದ 2029ರ ವರೆಗಿನ ವರ್ಷಗಳ ಯುಗಾದಿ ದಿನಾಂಕಗಳು ಸಾಯನ ವಸಂತಾರಂಭದ ಸಮೀಪಕ್ಕೆ ಹೋಗುತ್ತಿರುವ ಚಾಂದ್ರ ಯುಗಾದಿಯನ್ನು ಅಧಿಕ ಮಾಸ ಹೇಗೆ ಮತ್ತೆ ದೂರಕ್ಕೊಯ್ಯುತ್ತದೆ ಎಂದು ಇಲ್ಲಿ ನೋಡಬಹುದು.
ಹೆಚ್ಚಿನ online ಪಂಚಾಂಗಗಳು ಫೆಬ್ರವರಿ 18ರಿಂದಲೇ ವಸಂತ ಋತು ಎಂದು ತೋರಿಸುತ್ತವೆ. ಡಿಸೆಂಬರ್ 22ರಿಂದಲೇ ಉತ್ತರಾಯಣಾರಂಭ ಎಂದು ಉಲ್ಲೇಖಿಸುವ ಕೆಲವು ಮುದ್ರಿತ ಸಾಂಪ್ರದಾಯಿಕ ಪಂಚಾಂಗಗಳು ಇವೆಯಾದರೂ ಋತುಗಳನ್ನು ತಿಂಗಳುಗಳಿಂದ ಮತ್ತು ಸಂಕ್ರಾಂತಿಗಳಿಂದ ಬೇರ್ಪಡಿಸಿ ಸೂರ್ಯನ ಚಲನೆಗೆ ಹೊಂದಿಸುವ ಹೊಸತನಕ್ಕೆ ಅವು ಯಾಕೋ ಇನ್ನೂ ಮುಂದಾಗಿಲ್ಲ. 

ಕುತೂಹಲಕಾರಿ ಅಂಶಗಳು.

  1. ಕ್ರಾಂತಿ ವೃತ್ತದಲ್ಲಿ (ecliptical) ಸೂರ್ಯನ ವಾರ್ಷಿಕ ಪಯಣ ಭೂಮಿಯಿಂದ ನೋಡಿದಂತೆ ಪಶ್ಚಿಮದಿಂದ ಪೂರ್ವಕ್ಕೆ ದಿನಕ್ಕೆ ಸುಮಾರು ಒಂದು ಡಿಗ್ರಿ. 30 ಡಿಗ್ರಿಯ ರಾಶಿಯನ್ನು ಒಂದು ತಿಂಗಳಲ್ಲಿ ಹಾದುಹೋಗುತ್ತಾನೆ.  12 ರಾಶಿಗಳನ್ನು ಕ್ರಮಿಸಿ ಮತ್ತೆ ಮೂಲ ಸ್ಥಾನಕ್ಕೆ ಬರಲು ಒಟ್ಟು 12 ತಿಂಗಳು. 
  2. ಇದರಿಂದಾಗಿ  ಆತನ ದೈನಿಕ ಪೂರ್ವ ಪಶ್ಚಿಮ ಪಯಣ ಕೊಂಚ ನಿಧಾನವಾದಂತೆನಿಸಿ ದಿನದ ಅವಧಿ 4 ನಿಮಿಷ ಹೆಚ್ಚಾಗುತ್ತದೆ. ಇದು ಪೂರ್ವದಿಂದ ಪಶ್ಚಿಮಕ್ಕೆ ವೇಗವಾಗಿ ಚಲಿಸುತ್ತಿರುವ ಟ್ರೈನಿನಲ್ಲಿ ಚಹಾ ಮಾರುವವನು ಪಶ್ಚಿಮದಿಂದ ಪೂರ್ವಕ್ಕೆ ನಡೆದುಕೊಂಡು ಹೋದಂತೆ! ಒಂದು ವೇಳೆ ಭೂಮಿ ಸೂರ್ಯನ ಸುತ್ತ ಚಲಿಸದಿರುತ್ತಿದ್ದರೆ ಅಂದರೆ ಪಶ್ಚಿಮದಿಂದ ಪೂರ್ವಕ್ಕೆ ಸೂರ್ಯನ ವಾರ್ಷಿಕ ಚಲನೆ ಇರದಿರುತ್ತಿದ್ದರೆ ದಿನದ ಅವಧಿ 23 ಗಂಟೆ  56 ನಿಮಿಷ ಆಗಿರುತ್ತಿತ್ತು.
  3. ಭೂಮಿ ತನ್ನ ಅಕ್ಷದಲ್ಲಿ ತಿರುಗದಿರುತ್ತಿದ್ದರೆ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ 6 ತಿಂಗಳಲ್ಲಿ ಪೂರ್ವದಲ್ಲಿ ಅಸ್ತನಾಗುತ್ತಿದ್ದ.
  4. ಭೂಮಿ ಸೂರ್ಯನ ಸುತ್ತ ತಿರುಗುವುದರಿಂದ ನಾವು ದಿನವೂ ಆತನ ಬೇರೆ ಬೇರೆ ಪಾರ್ಶ್ವ ನೋಡುವುದು. ಒಮ್ಮೆ ನೋಡಿದ ಪಾರ್ಶ್ವ ಮತ್ತೆ  ಕಾಣಿಸುವುದು ಒಂದು ವರ್ಷದ ನಂತರ.



- ಚಿದಂಬರ ಕಾಕತ್ಕರ್.

Friday, 14 February 2025

ಮನೆಯಲ್ಲಿ ಕಾರ್ ಸ್ಟೀರಿಯೊ

ಈಗ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಮಾದರಿಯ ರೇಡಿಯೋಗಳು ವೈವಿಧ್ಯಮಯ ದರಗಳಲ್ಲಿ ದೊರೆಯುತ್ತವೆ. ಆದರೆ ನಮ್ಮ ಅಭಿರುಚಿಯ ಕಾರ್ಯಕ್ರಮಗಳು ರೇಡಿಯೋದಲ್ಲಿ ಕೇಳಲು ಸಿಗುವುದು ಕಮ್ಮಿ. ನಮ್ಮಲ್ಲಿರುವ ಇತರ ಮೂಲಗಳ ಮನೋರಂಜನೆಯನ್ನೂ ರೇಡಿಯೋದಲ್ಲಿ ಕೇಳಲು ಆಗುವಂತಿರಬೇಕು. ಧ್ವನಿಯ ಗುಣಮಟ್ಟವೂ ಉತ್ತಮವಾಗಿರಬೇಕು. ಇದಕ್ಕೆ ನಾನು ಕಂಡು ಕೊಂಡ ಪರ್ಯಾಯ ಕಾರ್ ಸ್ಟೀರಿಯೊ.

12 ವೋಲ್ಟ್ ಬ್ಯಾಟರಿಯಲ್ಲಿ ಕಾರ್ಯಾಚರಿಸುವ ಕಾರ್ ಸ್ಟೀರಿಯೋವನ್ನು ಮನೆಯಲ್ಲೂ ಬಳಸಿ ಅದು ಒದಗಿಸುವ 20 watt ಶಕ್ತಿಯ ನಾಲ್ಕು ಸ್ಪೀಕರುಗಳ ಶಕ್ತಿಶಾಲಿ ಧ್ವನಿಯನ್ನು ಆನಂದಿಸಬಹುದು. ಬಾಹ್ಯ antenna ಜೋಡಿಸುವ ವ್ಯವಸ್ಥೆ ಇರುವುದರಿಂದ ಇದರ ರೇಡಿಯೋ ರಿಸೆಪ್ಷನ್ ಸಾಮರ್ಥ್ಯ ಅಧಿಕವಾಗಿರುತ್ತದೆ. ಉದ್ದ ವೈರೊಂದನ್ನು antenna ಆಗಿ ಬಳಸಿದರೆ ದೂರ ದೂರದ ನಿಲಯಗಳೂ ಕೇಳಿಸುತ್ತವೆ. ಹಳ್ಳಿ ಊರುಗಳಲ್ಲಿ electronic emission ಕಮ್ಮಿ ಇರುವುದರಿಂದ ಇನ್ನಷ್ಟು ಚೆನ್ನಾಗಿ ಕೇಳಿಸಬಹುದು. Bluetooth ಮತ್ತು Aux ಅನುಕೂಲವೂ ಇರುವುದರಿದ ಮೊಬೈಲಿನ ಶುಷ್ಕ ಧ್ವನಿಯನ್ನು ಶ್ರೀಮಂತಗೊಳಿಸಲು ಇದನ್ನು ಬಳಸಬಹುದು. USB ಇರುವುದರಿಂದ ಪೆನ್ ಡ್ರೈವಲ್ಲಿರುವ ಹಾಡುಗಳನ್ನೂ  ಆಲಿಸಬಹುದು. ಹಳೆಯ ಸೆಟ್ಟುಗಳಲ್ಲಿ CD ಪ್ಲೇಯರ್ ಕೂಡ ಇರುತ್ತಿತ್ತು. ಆದರೆ ಈಗ CDಗಳ ಕಾಲ ಮುಗಿಯುತ್ತಾ ಬಂದಿದೆ.

ಹಳೆ ಕಾರು ಮಾರುವಾಗ ಅದರ ಸ್ಟೀರಿಯೋ ತೆಗೆದಿಟ್ಟುಕೊಳ್ಳಬಹುದು. ಇಲ್ಲವಾದರೆ ಒಂದೆರಡು ಸಾವಿರ ರೂಪಾಯಿ ಅಂದಾಜಿಗೆ online ಮಾರ್ಕೆಟಲ್ಲಿ ಒಳ್ಳೆಯ ಸೆಟ್ ಸಿಗುತ್ತದೆ.

ಆದರೆ ಇದು plug and play; ಅಂದರೆ ತಂದ, ಕನೆಕ್ಟ್ ಮಾಡಿದ, ಕೇಳಿದ ಮಾದರಿಯದ್ದಲ್ಲ. ವಯರುಗಳ ಕಲರ್ ಕೋಡ್ ಪ್ರಕಾರ ಸ್ಪೀಕರುಗಳನ್ನು  ಮತ್ತು 12 volt ಪವರನ್ನು ನಾವೇ ಕನೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ. 

ಸ್ಪೀಕರ್ ಜೋಡಣೆ. ಕಾರಿನಲ್ಲಿ ಬಳಸುವ ಸ್ಪೀಕರುಗಳೇ ಆದರೆ ಅವುಗಳನ್ನು ಇರಿಸಲು ಮರದ ಪೆಟ್ಟಿಗೆಯೋ ಅಥವಾ ಸೂಕ್ತವಾದ ಬೇರೆ ವ್ಯವಸ್ಥೆಯೋ ಮಾಡಿಕೊಳ್ಳಬೇಕು. ಮಡಕೆಯ ಬಾಯಿಯ ಮೇಲೆ ಸ್ಪೀಕರನ್ನು ಇರಿಸಿದರೆ ಹೆಚ್ಚಿನ ಬಾಸ್ ಎಫೆಕ್ಟ್ ಸಿಗುತ್ತದೆ. ಮನೆಯಲ್ಲಿದ್ದ ಸೌಂಡ್ ಸಿಸ್ಟಮಿನ ಹಳೆಯ ಸ್ಪೀಕರುಗಳಾದರೆ ನೇರವಾಗಿ ಬಳಸಬಹುದು. 20 watt / 8 ohm ಸಾಮರ್ಥ್ಯದವುಗಳಾದರೆ ಒಳ್ಳೆಯದು. ನಾನು ಕಾರ್ ಸ್ಪೀಕರ್ ಮತ್ತು ಹಳೆಯ Sony ಸೌಂಡ್ ಸಿಸ್ಟಮಿನ ಸ್ಪೀಕರುಗಳನ್ನು ಬಳಸಿದ್ದೇನೆ. ಕಲರ್ ಕೋಡ್ ಪ್ರಕಾರ ವಯರ್ ಜೋಡಿಸಿ ಇನ್ಸುಲೇಶನ್ ಟೇಪ್ ಸುತ್ತಬೇಕು. ಇಲ್ಲಿ ಹಿಂದೆ, ಮುಂದೆ, ಎಡ , ಬಲ ಎಂದೆಲ್ಲ ಉಲ್ಲೇಖಿಸಿದ್ದರೂ ನಮ್ಮ ಅನುಕೂಲದ ಪ್ರಕಾರ ಸ್ಪೀಕರುಗಳನ್ನು ಎಲ್ಲೂ ಇರಿಸಬಹುದು. ಅಷ್ಟೂ ಸ್ಪೀಕರುಗಳು ಬೇಕೆಂದೇನೂ ಇಲ್ಲ ಒಂದು ಇದ್ದರೂ ಸಾಕಾಗುತ್ತೆದೆ.

ಪವರ್ ಜೋಡಣೆ. ಇಲ್ಲಿ ಎಚ್ಚರಿಕೆಯಿಂದ ವಯರುಗಳ ಬಣ್ಣ ಗಮನಿಸಿ ಜೋಡಿಸುವುದು ಬಲು ಮುಖ್ಯ.
12 volt ಪವರಿಗೆ 3 ಆಯ್ಕೆಗಳಿವೆ.

1. ಮನೆಯ ಇನ್ವರ್ಟರ್ ಬ್ಯಾಟರಿ ಬಳಸುವುದು. ಮನೆಯ inverter ಬಳಿಯಲ್ಲೇ  ಇದನ್ನು ಇರಿಸುವ ಅನುಕೂಲ ಇದ್ದರೆ ಅದರ ಬ್ಯಾಟರಿಯನ್ನೇ ಬಳಸಬಹುದು. ಕೆಂಪು ವಯರನ್ನು ಬೆಡ್ ಸ್ವಿಚ್ ಮೂಲಕ ಜೋಡಿಸಬೇಕು. ಇದನ್ನು ಬೇಕಿದ್ದಾಗ ಮಾತ್ರ ಆನ್ ಮಾಡಿಕೊಂಡು ಉಪಕರಣವನ್ನು ಬಳಸದಿರುವಾಗ ಆಫ್ ಮಾಡಬೇಕು.

2. 12 volts DC adapter ಬಳಸುವುದು. ಬೇರೆಡೆ ಬೇಕೆಂದಾದರೆ 10 amps ಸಾಮರ್ಥ್ಯದ 12 volts DC adapter ಬಳಸಬಹುದು. ಕೆಂಪು ಮತ್ತು ಹಳದಿ ವಯರುಗಳನ್ನು ಒಟ್ಟಿಗೆ ಸೇರಿಸಿ Adapterನ ಪೊಸಿಟಿವ್‌ಗೆ ಜೋಡಿಸಬೇಕು. ಬೇಕಿದ್ದಾಗ ಮಾತ್ರ ಎಡಾಪ್ಟರ್ ಆನ್ ಮಾಡಿ ಉಪಯೋಗಿಸದಿರುವಾಗ ಆಫ್ ಮಾಡಬೇಕು. ಈ ಪದ್ಧತಿಯಲ್ಲಿ ಸೆಟ್ಟಿಂಗ್ಸ್ ಮೆಮೊರಿ ಉಳಿಯುವುದಿಲ್ಲ.

3. ಬ್ಯಾಟರಿ backupನೊಂದಿಗೆ 12 volts DC adapter ಬಳಸುವುದು.
Adapter ಸ್ವಿಚ್ ಆಫ್ ಮಾಡಿದರೂ memory settings  ಉಳಿಯಬೇಕಾದರೆ ಸಣ್ಣ 12 volt chargeable ಬ್ಯಾಟರಿಯನ್ನು parallel ಆಗಿ  ಕನೆಕ್ಟ್ ಮಾಡಬೇಕು. ಚಿತ್ರದಲ್ಲಿ ತೋರಿಸಿದಂತೆ 10 Ohm 5 Watt Resitance ಮತ್ತು IN 5408 ಡಯೋಡುಗಳನ್ನೂ ಬಳಸಬೇಕು. ಇವನ್ನೆಲ್ಲ solder ಮಾಡಿ ಜೋಡಿಸಬೇಕೆಂದಿಲ್ಲ. ವಯರುಗಳೊಂದಿಗೆ twist ಮಾಡಿ ಇನ್ಸುಲೇಷನ್ ಟೇಪ್ ಬಳಸಿ ಭದ್ರಗೊಳಿಸಿದರೆ ಸಾಕು. ಕೆಂಪು ವಯರಿಗೆ ಕನೆಕ್ಟ್ ಮಾಡಿದ ಬೆಡ್ ಸ್ವಿಚ್ಚನ್ನು ಬೇಕಿದ್ದಾಗ ಮಾತ್ರ ಆನ್ ಮಾಡಬೇಕು. ಈ ಸ್ವಿಚ್ ಮತ್ತು adapterನ ಸಪ್ಲೈ ಆಫ್ ಮಾಡಿದರೂ ಸಣ್ಣ ಬ್ಯಾಟರಿಯು ಹಳದಿ ವಯರಿನ ಮೂಲಕ ಪವರ್ ಒದಗಿಸುವುದರಿಂದ ಸೆಟ್ಟಿಂಗ್ಸ್ ಮೆಮೊರಿ ಉಳಿಯುತ್ತದೆ. ಆದರೆ ಎಡಾಪ್ಟರ್ ಆಫ್ ಇರುವಾಗ ಕೆಂಪು ವಯರಿನ ಬೆಡ್ ಸ್ವಿಚ್ಚನ್ನು ಆನ್ ಮಾಡಬಾರದು. ಹಾಗೆ ಮಾಡಿದ್ದೇ ಆದರೆ ಸಣ್ಣ ಬ್ಯಾಟರಿಯು drain ಆಗಿ ಹೋದೀತು.

ನಾನು ಹಳೆಯ ಕಾರಿನಲ್ಲಿದ್ದ Pioneer ಸೆಟ್ಟನ್ನು ಮನೆಯ hallನಲ್ಲಿ ರೇಡಿಯೊ ನಿಲಯಗಳನ್ನಾಲಿಸಲು, DD Free Dishನ ಆಡಿಯೊ ಕೇಳಲು ಹಾಗೂ bluetooth ಮೂಲಕ ಮೊಬೈಲ್ ಕನೆಕ್ಟ್ ಮಾಡಿಕೊಳ್ಳಲು ಬಳಸುತ್ತೇನೆ. ಇದಕ್ಕೆ ನಂಬರ್ 3 ರೀತಿಯ ಪವರ್ ವ್ಯವಸ್ಥೆ ಮಾಡಿದ್ದೇನೆ.

ಹೊಸದಾಗಿ ಖರೀದಿಸಿದ Blaupunkt ಸೆಟ್ಟೊಂದನ್ನು bedroomನಲ್ಲಿ ಮಧ್ಯಾಹ್ನ ಊಟದ ನಂತರ ಕೊಂಚ ಹೊತ್ತು ವಿರಮಿಸುವಾಗ ಮೊಬೈಲಿಗೆ ಅಳವಡಿಸಿದ FM Transmitter ಮೂಲಕ ಮುಂಬಯಿ ವಿವಧ ಭಾರತಿ ಆಲಿಸಲು ಬಳಸುತ್ತಿದ್ದೇನೆ. ಎರಡು ಗಂಟೆಗೆ ಎಲ್ಲ ನಿಲಯಗಳಿಗೆ ಹಿಂದಿ ಮತ್ತು ಇಂಗ್ಲಿಷ್ ವಾರ್ತೆಗಳ ಸಮೂಹ ಸನ್ನಿಯ attack ಆಗುತ್ತದೆ. ಆಗ ರೆಕಾರ್ಡೆಡ್ ಹಾಡುಗಳನ್ನು ಕೇಳುತ್ತೇನೆ. ಇಲ್ಲಿ ನಾನು ಬಳಸುವುದು ನಂಬರ್ 1 ಮಾದರಿಯ inverter ಬ್ಯಾಟರಿ ಪವರ್.

ಮನೆಯಲ್ಲಿ ಕಾರ್ ಸ್ಟೀರಿಯೊ ಬಳಸುವವರು ಇನ್ನೂ ಅನೇಕರಿರಬಹುದು. ಆದರೆ ಎರಡು ಸೆಟ್ ಬಳಸುವುದು ನಾನೊಬ್ಬನೆಯೋ ಏನೋ!

ಒಟ್ಟಿನಲ್ಲಿ 50-60 ಸಾವಿರ ಬೆಲೆ ಬಾಳುವ ಆಧುನಿಕ ಸೌಂಡ್ ಸಿಸ್ಟಂಗಳಿಗೆ ಹೋಲಿಸಿದರೆ ಇದರಲ್ಲಿ  ಹಿಂದಿನ ಕಾಲದ ಅನಲಾಗ್ ಧ್ವನಿ ಮತ್ತು ಈಗಿನ ಡಿಜಿಟಲ್ ಧ್ವನಿ ಎರಡೂ  ತುಂಬಾ ಚೆನ್ನಾಗಿ ಕೇಳಿಸುತ್ತದೆ  ಎಂದು ನನ್ನ ಅನುಭವ.


- ಚಿದಂಬರ ಕಾಕತ್ಕರ್.





Saturday, 8 February 2025

ಭೀಷ್ಮ ನಿರ್ಯಾಣ ಮತ್ತು ಉತ್ತರಾಯಣ

 

ಅರ್ಜುನ ಪ್ರಯೋಗಿಸಿದ ಬಾಣಗಳಿಂದ ಜರ್ಜರಿತರಾದ ಭೀಷ್ಮಾಚಾರ್ಯರು ಉತ್ತರಾಯಣದ ನಿರೀಕ್ಷೆಯಲ್ಲಿ ಶರಶಯ್ಯೆಯ ಮೇಲೆ ಪವಡಿಸಿದ್ದರು ಎಂದು ಕಥೆಗಳಲ್ಲಿ ಓದಿ ಗೊತ್ತಿತ್ತು. ಮಾಘ ಶುಕ್ಲ ಅಷ್ಟಮಿ ತಿಥಿಯು ಭೀಷ್ಮಾಷ್ಟಮಿ ಎಂದು ಕರೆಯಲ್ಪಡುತ್ತದೆ, ಆ ದಿನವೇ ಅವರು ದೇಹತ್ಯಾಗ ಮಾಡಿದ್ದು ಎಂಬ ವಿಚಾರದತ್ತ ನಾನು ಗಮನ ಹರಿಸಿರಲಿಲ್ಲ. ಬಲ್ಲವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಅನುಶಾಸನ ಪರ್ವದಲ್ಲಿ ಹೀಗೊಂದು ಶ್ಲೋಕ ಇರುವುದು ತಿಳಿಯಿತು..
ದಿಷ್ಟ್ಯಾ ಪ್ರಾಪ್ತೋsಸಿ ಕೌಂತೇಯ ಸಹಾಮಾತ್ಯೋ ಯುಧಿಷ್ಠಿರ l
ಪರಿವೃತ್ತೋ ಹಿ ಭಗವಾನ್ ಸಹಸ್ರಾಂಶುರ್ದಿವಾಕರ:ll
ಅಷ್ಟಪಂಚಾಶತಂ ರಾತ್ರ್ಯ: ಶಯಾನಸ್ಯಾಧ್ಯ ಮೇ ಗತಾ:l
ಶರೇಷು ನಿಶಿತಾಗ್ರೇಷು ಯಥಾ ವರ್ಷ ಶತಂ ತಥಾ ll
ಮಾಘೋsಯಂ ಸಮನುಪ್ರಾಪ್ತೋ ಮಾಸ: ಸೌಮ್ಯೋ(ಪುಣ್ಯೇ) ಯುಧಿಷ್ಠಿರ: l
ತ್ರಿಭಾಗ ಶೇಷ ಪಕ್ಷೋsಯಂ ಶುಕ್ಲೋ ಭವಿತು ಮರ್ಹತಿ ll
"ನಾನು ಶರಶಯ್ಯೆಯಲ್ಲಿ ಮಲಗಿ ಐವತ್ತೆಂಟು ದಿವಸಗಳಾಯಿತು. ಈಗ ಸೂರ್ಯನು ಉತ್ತರಕ್ಕೆ ತಿರುಗಲು ಆರಂಭಿಸಿದ್ದಾನೆ. (ಉತ್ತರಾಯಣ ಆರಂಭವಾಗಿದೆ.) ಮಾಘ ಮಾಸದ ನಾಲ್ಕು ಭಾಗಗಳಲ್ಲಿ ಮೂರು ಭಾಗ ಉಳಿದಿದೆ. (ಇದು ಮಾಘಶುಕ್ಲದ ಅಷ್ಟಮಿಯ ತಿಥಿಯಾಗಿದೆ.) ನನ್ನ ಸಂಕಲ್ಪದ ಪ್ರಕಾರ ಈಗ ನಾನು ದೇಹತ್ಯಾಗ ಮಾಡುತ್ತೇನೆ." ಎಂದು ಇದರ ಭಾವಾರ್ಥವಂತೆ.

ಇದನ್ನು ನೋಡಿದಾಗ ಉತ್ತರಾಯಣ ಆರಂಭವಾಗಿ ಎಷ್ಟೊ ಸಮಯದ ನಂತರ ಬರುವ ಮಾಘ ಶುಕ್ಲ ಅಷ್ಟಮಿ ತನಕ ಭೀಷ್ಮಾಚಾರ್ಯರು ಏಕೆ ಶರಶಯ್ಯೆಯಲ್ಲೇ ಇದ್ದರು ಎಂಬ ಪ್ರಶ್ನೆ ನನ್ನಲ್ಲಿ ಉದ್ಭವಿಸಿತು. ಒಂದು ಕಾಲಕ್ಕೆ ಉತ್ತರಾಯಣ ಆರಂಭದಂದೇ ಇರುತ್ತಿದ್ದ ಮಕರ ಸಂಕ್ರಾಂತಿ ಕ್ರಮೇಣ ಮುಂದೆ ಜರಗುತ್ತಾ ಬಂದುದು ನನಗೆ ಗೊತ್ತಿತ್ತು. ಈ ಬಗ್ಗೆ ಮತ್ತಷ್ಟು ಯೋಚಿಸಿದಾಗ ಚಾಂದ್ರ ಮಾಸಗಳೊಂದಿಗೆ ಸೌರಮಾಸಗಳು ತಳಕು ಹಾಕಿಕೊಂಡಿರುವ ಚಾಂದ್ರಸೌರ ಸಂಯುಕ್ತ ಪದ್ಧತಿಯನ್ನು ನಾವು ಅನುಸರಿಸುತ್ತಿರುವ ವಿಚಾರ ಹೊಳೆಯಿತು.

ಪ್ರತೀ ಚಾಂದ್ರ ಮಾಸದಲ್ಲೂ ಒಂದು ಸಂಕ್ರಾಂತಿ ಇರಬೇಕು. ಅಷ್ಟೇ ಅಲ್ಲ, ಚೈತ್ರದಲ್ಲಿ ಮೇಷ ಸಂಕ್ರಾಂತಿ, ವೈಶಾಖದಲ್ಲಿ ವೃಷಭ ಸಂಕ್ರಾಂತಿ, ಈ ರೀತಿ ಮುಂದುವರಿಯುತ್ತಾ ಫಾಲ್ಗುಣದಲ್ಲಿ ಮೀನ ಸಂಕ್ರಾಂತಿಯೇ ಇರಬೇಕು ಎಂಬ ನಿಯಮವೂ ಪಾಲಿಸಲ್ಪಡುತ್ತಿದೆ. ಈ ತಾಳ ಮೇಳ ತಪ್ಪಿದರೆ ಅಧಿಕ ಮಾಸ, ಕ್ಷಯ ಮಾಸಗಳ ಮೂಲಕ ಅದನ್ನು ಸರಿಪಡಿಸಲಾಗುತ್ತದೆ. ಹೀಗಾಗಿ ಭೂಮಿಯ ಓಲಾಡುವಿಕೆಯಿಂದಾಗಿ ಮಕರ ಸಂಕ್ರಾಂತಿ ಮತ್ತು ಇತರ ಸಂಕ್ರಾಂತಿಗಳು ಮುಂದಕ್ಕೆ ಜರಗುವಾಗ ಅವುಗಳೊಂದಿಗೆ ಸಂಬಂಧ ಕಲ್ಪಿಸಲಾಗಿರುವ ಚಾಂದ್ರ ಮಾಸಗಳೂ ಮುಂದೆ ಜರಗುತ್ತಿವೆ. ಇದೇ ಕಾರಣಕ್ಕೆ ಉತ್ತರಾಯಣ ಈಗ ಮಾರ್ಗಶಿರ / ಪುಷ್ಯ ಮಾಸಗಳಲ್ಲಿ ಆರಂಭವಾಗುವುದಾದರೂ ಸಾವಿರಾರು ವರ್ಷ ಹಿಂದೆ ಮಾಘ / ಫಾಲ್ಗುಣ ಮಾಸಗಳಲ್ಲೂ ಆರಂಭವಾಗುತ್ತಿತ್ತು. ಸಂಕ್ರಾಂತಿಗಳು ಋತುಮಾನಗಳಿಗೆ ಕಾರಣವಾದ ಸೂರ್ಯನ ಉತ್ತರ ದಕ್ಷಿಣ ಚಲನೆಯನ್ನು ಅನುಸರಿಸದೆ ಮೇಷಾದಿ ರಾಶಿಗಳಲ್ಲಿ ಅವನ ಚಲನೆಯನ್ನು ಹೊಂದಿಕೊಂಡಿರುವುದರಿಂದ ಅವುಗಳೊಂದಿಗೆ ತಳುಕು ಹಾಕಿಕೊಂಡಿರುವ ಚಾಂದ್ರ ಮಾಸಗಳೂ ಋತುಗಳ ಸಂಬಂಧ ಕಳೆದುಕೊಂಡಿವೆ ಈಗಿರುವಂತೆ ಮೇಷ ಸಂಕ್ರಾಂತಿಗಿಂತ ಮುಂಚಿನ ಅಮಾವಾಸ್ಯೆಯ ನಂತರ ಚೈತ್ರಮಾಸ ಆರಂಭವಾಗುವ ಬದಲು ವಸಂತ ವಿಷುವತ್ ದಿನವಾದ ಮಾರ್ಚ್ 21ಕ್ಕಿಂತ ಮುಂಚಿನ ಅಮಾವಾಸ್ಯೆಯ ನಂತರ ಚೈತ್ರ ಆರಂಭವಾಗುವಂತಾದರಷ್ಟೇ ಚೈತ್ರ ವೈಶಾಖಗಳು ನಿಜವಾದ ವಸಂತ ಋತು ಎನಿಸಿಯಾವು.




ಕ್ರಿಸ್ತ ಪೂರ್ವ 3000 ಇಸವಿಯಿಂದ ಮುಂದಿನ ಕೆಲವು ಶತಮಾನಗಳ ವರೆಗಿನ ವಿವಿಧ ಘಟ್ಟಗಳಲ್ಲಿ ಯಾವಾಗ ಮಕರ ಸಂಕ್ರಾಂತಿ ಇತ್ತು, ಉತ್ತರಾಯಣ ಯಾವ ತಿಂಗಳಲ್ಲಿ ಆರಂಭವಾಯಿತು, ಋತುಗಳಿಗೆ ಪ್ರಾತಿನಿಧಿಕವಾದ ಯುಗಾದಿಯೂ ಹೇಗೆ ಮುಂದಕ್ಕೆ ಸಾಗುತ್ತಿದೆ ಎಂಬ ವಿವರಗಳನ್ನು ಇಲ್ಲಿರುವ tableನಲ್ಲಿ ನೋಡಬಹುದು. ಅಂತರ್ಜಾಲದಲ್ಲಿರುವ ದೃಕ್ ಪಂಚಾಂಗದ ತಂತ್ರಾಂಶ ಬಳಸಿ ಕಾಲವನ್ನು ಹಿಂದಕ್ಕೆ project ಮಾಡಿ ಈ ಮಾಹಿತಿಯನ್ನು ಕ್ರೋಢೀಕರಿಸಲು ನನಗೆ ಸಾಧ್ಯವಾಯಿತು. ಕ್ರಿಸ್ತಪೂರ್ವದಲ್ಲಿ ಗ್ರೆಗೊರಿಯನ್ ಕ್ಯಾಲೆಂಡರ್ ಇಲ್ಲದಿದ್ದರೂ ಒಂದು ವೇಳೆ ಇದ್ದಿದ್ದರೆ ಹೀಗಿರುತ್ತಿತ್ತು ಎಂಬುದು ಇಲ್ಲಿಯ logic. ಇದನ್ನು ನೋಡಿದರೆ ಕ್ರಿ.ಶ. 300ರ ಸುಮಾರಿಗೆ ಡಿಸೆಂಬರ್ 22ರ ಉತ್ತರಾಯಣಾರಂಭದ ದಿನವೇ ಮಕರ ಸಂಕ್ರಮಣ ಇದ್ದದ್ದು, ಕ್ರಿ.ಪೂ. 3000ದಲ್ಲಿ ಜನವರಿಯಲ್ಲಿ ಇರುತ್ತಿದ್ದ ಯುಗಾದಿ ಮುಂದೆ ಸರಿಯುತ್ತಾ ಈಗ ಎಪ್ರಿಲ್ ತಿಂಗಳಿಗೆ ಬಂದಿರುವುದು ಮುಂತಾದ ವಿಚಾರಗಳು ತಿಳಿಯುತ್ತವೆ.

ಭೀಷ್ಮಾಚಾರ್ಯರು ದೇಹ ತ್ಯಾಗ ಮಾಡಿದ್ದು ಎನ್ನಲಾಗುವ ಕ್ರಿಸ್ತ ಪೂರ್ವ 2448, 3066, 3102, 3140 ಇತ್ಯಾದಿ ವರ್ಷಗಳ ಉಲ್ಲೇಖ ಅಂತರ್ಜಾಲದಲ್ಲಿ ಕಾಣಸಿಗುತ್ತದೆ. ಇಲ್ಲಿ tabulate ಮಾಡಿದ ಶತಮಾನಗಳ ಅಂಕಿ ಅಂಶಗಳ ಪ್ರಕಾರ ಕ್ರಿ.ಪೂ 2700ರಿಂದ ಕ್ರಿ.ಪೂ. 500ರ ವರೆಗೆ ಮಾಘ ಮಾಸದಲ್ಲಿ ಉತ್ತರಾಯಣ ಆರಂಭವಾಗಿದೆ. ಆದರೆ ಮಹಾಭಾರತದ ಶ್ಲೋಕದಲ್ಲಿ ಉಕ್ತವಾದ ಮಾಘ ಶುದ್ಧ ಅಷ್ಟಮಿಯ ಆಸುಪಾಸಿನಲ್ಲಿ ಡಿಸೆಂಬರ 22ರ ಉತ್ತರಾಯಣ ಆರಂಭವಾಗಿರುವುದು ಕ್ರಿ.ಪೂ. 500 ಇಸವಿಯಲ್ಲಿ ಎಂದು ಮೊದಲ ಹಂತದಲ್ಲಿ ಗೊತ್ತಾಯಿತು. ಆ ವರ್ಷ ಮಾಘ ಶುಕ್ಲ ಪಪ್ಠಿಯಂದು ಉತ್ತರಾಯಣ ಆರಂಭವಾಗಿತ್ತು. ಅದರ ಹಿಂದಿನ ಮತ್ತು ಮುಂದಿನ ವರ್ಷಗಳಲ್ಲಿ ಒಂದೊಂದಾಗಿ ಹುಡುಕಿದಾಗ ಕ್ರಿ.ಪೂ. 508 ಇಸವಿಯಲ್ಲಿ ಸರಿಯಾಗಿ ಮಾಘ ಶುಕ್ಲ ಅಷ್ಟಮಿಯಂದೇ ಉತ್ತರಾಯಣ ಆರಂಭವಾದದ್ದು ತಿಳಿಯಿತು. ಆದರೆ ಈ ಇಸವಿಗೂ ಮಹಾಭಾರತ ನಡೆದ ವರ್ಷಗಳೆಂದು ಊಹಿಸಲಾದ ಇಸವಿಗಳಿಗೂ ತುಂಬಾ ಅಂತರ ಇರುವುದರಿಂದ ಬೇರೆ ಕೆಲವು ವರ್ಷಗಳಲ್ಲೂ ಡಿಸೆಂಬರ್ 22ರಂದು ಮಾಘ ಶುಕ್ಲ ಅಷ್ಟಮಿ ಇದ್ದಿರಬಹುದು ಅನ್ನಿಸಿತು. ಕೆಲವು ವರ್ಷಗಳಿಗೊಮ್ಮೆ ನಮ್ಮ ಹುಟ್ಟುಹಬ್ಬ ಪಂಚಾಂಗ ಮತ್ತು ತಾರೀಕು ಪ್ರಕಾರ ಒಂದೇ ದಿನ ಬರುವುದು ಕೂಡ ನೆನಪಿತ್ತು. ಆ ದಿಸೆಯಲ್ಲಿ ಯೋಚಿಸಿ random ಆಗಿ ಹುಡುಕಿದಾಗ ಕ್ರಿ.ಪೂ. 527, 1013, 1977, 1996, 2042, 2061 ಇಸವಿಗಳಲ್ಲೂ ಡಿಸೆಂಬರ್ 22 ತಾರೀಕಿನಂದೇ ಮಾಘ ಶುಕ್ಲ ಅಷ್ಟಮಿ ಇದ್ದುದು ಗೊತ್ತಾಯಿತು. ಇವುಗಳನ್ನು ಪಟ್ಟಿಗೆ ಆ ಮೇಲೆ ಸೇರಿಸಿದ್ದು. ಹುಡುಕಿದರೆ ಇನ್ನಷ್ಟು ವರ್ಷಗಳು ಸಿಗಬಹುದು. ಇಷ್ಟೆಲ್ಲ ಮಾಘ ಶುಕ್ಲ ಅಷ್ಟಮಿಗಳ ಪೈಕಿ ಭೀಷ್ಮಾಚಾರ್ಯರು ದೇಹತ್ಯಾಗ ಮಾಡಿದ ವರ್ಷ ಯಾವುದೆಂಬ ವಿಷಯ ಒಗಟಾಗಿಯೇ ಉಳಿಯಿತು!
ಏನೇ ಇರಲಿ, ಈ ನೆವದಲ್ಲಿ ಹೊಸ ವಿಷಯಗಳು ಕಲಿಯಲು ಸಿಕ್ಕಿದ್ದಂತೂ ಹೌದು. - ಚಿದಂಬರ ಕಾಕತ್ಕರ್.

Saturday, 1 February 2025

ಮಂದ ಮಂದ ಮನದೇ ಮನೋಲ್ಲಾಸ ಮೋಹ


ನನಗೆ ಸುಮಾರು 60 ವರ್ಷಗಳ ನಂತರ ಈಗ ಕೇಳಲು ಸಿಕ್ಕಿರುವ, ನಿಮ್ಮಲ್ಲಿ ಹೆಚ್ಚಿನವರು ಇದುವರೆಗೆ ಕೇಳಿಯೇ ಇರಲಾರದ, ವರ್ಣರಂಜಿತ ಕನ್ನಡ ಚಿತ್ರ ಸಂಪೂರ್ಣ ರಾಮಾಯಣದ ಹಾಡು ಇದು. ಹೋಮಿವಾಡಿಯಾ ಅವರು 1961ರಲ್ಲಿ ನಿರ್ಮಿಸಿದ್ದ ಹಿಂದಿ ಸಂಪೂರ್ಣ ರಾಮಾಯಣವನ್ನು ಕನ್ನಡ  ಭಾಷೆಗೆ ಡಬ್ ಮಾಡಲಾಗಿತ್ತು. ಮಹಿಪಾಲ್ ರಾಮನಾಗಿ, ಅನಿತಾ ಗುಹಾ ಸೀತೆಯಾಗಿ,  ಅಚಲಾ ಸಚ್‌ದೇವ್ (ಸಂಗಮ್‌ನಲ್ಲಿ ವೈಜಯಂತಿ ಮಾಲಾ ತಾಯಿ) ಕೌಸಲ್ಯೆಯಾಗಿ, ಬಿ.ಎಮ್. ವ್ಯಾಸ್ ರಾವಣನಾಗಿ, ಸುಲೋಚನಾ (ಜಾನಿ ಮೇರಾ ನಾಮ್‌ನಲ್ಲಿ ದೇವ್ ಆನಂದ್  ತಾಯಿ) ಕೈಕೇಯಿಯಾಗಿ,  ಲಲಿತಾ ಪವಾರ್ (ಶ್ರೀ 420ನ ಲೇಡಿ ಕೇಲೇವಾಲಿ) ಮಂಥರೆಯಾಗಿ, ಹೆಲನ್ ಮಾಯಾ ಶೂರ್ಪನಖಿಯಾಗಿ ಕಾಣಿಸಿಕೊಂಡಿದ್ದ ಪ್ರಮುಖರು. ಹಿಂದಿ ಚಿತ್ರದ ಮೂಲ ಸಂಗೀತ ನಿರ್ದೇಶಕರು ವಸಂತ್ ದೇಸಾಯಿ. ವಿಜಯಭಾಸ್ಕರ್ ಕನ್ನಡ ಅವತರಣಿಕೆಯ ಸಂಗೀತದ ಹೊಣೆ ಹೊತ್ತಿದ್ದರು. ಕನ್ನಡದಲ್ಲಿ ಗೀತೆಗಳನ್ನು ಬರೆದವರು ಗೀತಪ್ರಿಯ. ಪಿ.ಸುಶೀಲ, ಪಿ.ಬಿ.ಶ್ರೀನಿವಾಸ್, ಎಲ್.ಆರ್. ಈಶ್ವರಿ ಮತ್ತಿತರರು ಕನ್ನಡ ಹಾಡುಗಳನ್ನು ಹಾಡಿದ್ದರು.  ಆದರೆ ಡಬ್ ಆದ ಚಿತ್ರಗಳಲ್ಲಿ ಬೇರೆ ಭಾಷೆಯ ಸಂಭಾಷಣೆಯ ತುಟಿ ಚಲನೆಗೆ ಸರಿ ಹೊಂದುವಂತೆ ಕನ್ನಡ ಧ್ವನಿಯಾದ ಕಲಾವಿದರ ಹೆಸರುಗಳು ಗೋಪ್ಯವಾಗಿಯೆ ಉಳಿಯುತ್ತವೆ.

ಆ ಕಾಲದಲ್ಲಿ  ಸಾಮಾನ್ಯವಾಗಿ ತೆಲುಗು ಚಿತ್ರಗಳು ಕನ್ನಡಕ್ಕೆ ಡಬ್ ಆಗುತ್ತಿದ್ದುದು. ಕನ್ನಡದಲ್ಲಿ ಅವುಗಳ ಸಂಗೀತ ನಿರ್ವಹಣೆ ಮೂಲ ಸಂಗೀತ ನಿರ್ದೇಶಕರದ್ದೇ ಇರುತ್ತಿತ್ತು.  ಆದರೆ ವೀರ ಜಬಕ್, ಜಿಂಬೊ ನಗರ ಪ್ರವೇಶ ಮತ್ತು  ಸಂಪೂರ್ಣ ರಾಮಾಯಣ ಹಿಂದಿಯಿಂದ ಡಬ್ ಆದ ಚಿತ್ರಗಳು. ಮೂಲದಲ್ಲಿ ಚಿತ್ರಗುಪ್ತ ಮತ್ತು ವಸಂತ ದೇಸಾಯಿ ಸಂಗೀತವಿದ್ದ ಈ ಮೂರಕ್ಕೂ ವಿಜಯ ಭಾಸ್ಕರ್ ಅವರ ಸಂಗೀತ ನಿರ್ವಹಣೆ ಇದ್ದದ್ದು ಗಮನಿಸಬೇಕಾದ ಅಂಶ.

1962ರಲ್ಲಿ ನಾನು 5ನೇ ತರಗತಿಯಲ್ಲಿರುವಾಗ  ರಾಮಕಾಂತಿ ಟಾಕೀಸಿನಲ್ಲಿ ಪ್ರದರ್ಶಿತವಾಗಿದ್ದ ಈ ವರ್ಣರಂಜಿತ ಕನ್ನಡ ಸಂಪೂರ್ಣ ರಾಮಾಯಣ ಸಿನಿಮಾ ನೋಡಲೆಂದೇ  ನಮ್ಮ ತಾಯಿ, ಅಣ್ಣಂದಿರು ಮುಂತಾಗಿ ಆರೇಳು ಮಂದಿ ಮಂಗಳೂರಿಗೆ ಹೋಗಿದ್ದರು. ರಜೆಯ ಸಮಯವಾಗಿದ್ದರೆ ಖಂಡಿತ ನಾನೂ ಅವರೊಡನೆ ಸೇರಿಕೊಳ್ಳುತ್ತಿದ್ದೆ. vAstavya hUDidda ಗಣೇಶ ಭವನದ ರೂಮಿನಲ್ಲಿ ಎಲ್ಲರಿಗೂ ಮಲಗಲು ಸ್ಥಳಾವಕಾಶ ಸಾಕಾಗದೆ ನಮ್ಮ ಅಣ್ಣ ಈಸಿ ಚೇರಿನಲ್ಲಿ ಕುಳಿತೇ ರಾತ್ರೆ ಕಳೆದಿದ್ದರಂತೆ! ಮಂಗಳೂರಿಂದ ಬರುವಾಗ ನಾವು ಅದು ವರೆಗೆ ನೋಡಿರದಿದ್ದ ಮಿಠಾಯಿಯ ಮುಕುಟ ಇದ್ದ ಬಿಸ್ಕತ್ತುಗಳು, ಕುಂಬಳಕಾಯಿಯ ಪೆಟ್ಠಾ ಇತ್ಯಾದಿ ತಂದಿದ್ದರು. ಸಿನಿಮಾದ ಹಾಡಿನ ಪುಸ್ತಕವನ್ನೂ ತಂದಿದ್ದರು. ಪಂಚಾಂಗದಂತೆ ಉದ್ದವಾಗಿದ್ದ ಆ ಪುಸ್ತಕ ಅನೇಕ ವರ್ಷ ಮನೆಯಲ್ಲಿದ್ದದ್ದು ಈಗ ಕಳೆದು ಹೋಗಿದೆ. 



ಚಿತ್ರದಲ್ಲಿದ್ದ ಹತ್ತಾರು ಹಾಡುಗಳ ಪೈಕಿ ಪ್ರಿಯ ಜೀವನದ ಪರ್ಣ ಕುಟಿಯೊಳ್ ಮತ್ತು ನಾವೀಗ ಚರ್ಚಿಸುತ್ತಿರುವ ಮಂದ ಮಂದ ಮನದೇ ಹಾಡುಗಳು ರೇಡಿಯೋ ನಿಲಯಗಳಿಂದ, ಅದರಲ್ಲೂ ಧಾರವಾಡದಿಂದ ಆಗಾಗ ಪ್ರಸಾರವಾಗುತ್ತಿದ್ದವು. ಮಧ್ಯದಲ್ಲಿ ತೋರೈ ಸನ್ಮಾರ್ಗ ಶ್ರೀ ರಾಮನೇ ಎಂಬ ಸಾಲು ಇರುವ ಪಿ.ಬಿ.ಶ್ರೀನಿವಾಸ್ ಮತ್ತು ಸಂಗಡಿಗರು ಹಾಡಿರುವ ಗೀತೆ ಕೂಡ ಕೆಲವೊಮ್ಮೆ ಪ್ರಸಾರವಾಗುತ್ತಿತ್ತು.   70ರ ದಶಕ ಬರುತ್ತಿದ್ದಂತೆ ಇವು ಹಿನ್ನೆಲೆಗೆ ಸರಿದು ಕಾಲಗರ್ಭದಲ್ಲಿ ಮರೆಯಾದವು. ಅವುಗಳ ಪೈಕಿ ಪ್ರಿಯ ಜೀವನದ ಪರ್ಣ ಕುಟಿಯೊಳ್ ಕೆಲವು ವರ್ಷ ಹಿಂದೆ ದೊರಕಿದರೂ ಮಂದ ಮಂದ ಮನದೇ ಮಾತ್ರ ಎಲ್ಲೂ ಸಿಕ್ಕಿರಲಿಲ್ಲ. ಚಿತ್ರದ ಕನ್ನಡ ಅವತರಣಿಕೆ ಇಲ್ಲದಿದ್ದರೂ ಮೂಲ ಹಿಂದಿ ಸಂಪೂರ್ಣ ರಾಮಾಯಣ ಅಂತರ್ಜಾಲದಲ್ಲಿ  ಲಭ್ಯವಿದ್ದು ಅದರಲ್ಲಿ ಸೀತೆ ಹಾಡುವ ಮೇರೆ ಜೀವನ್‌ ಕೀ ಪರ್ಣಕುಟೀ ಮೆಂ ಹಾಡು ಯಾಕೋ ಇಲ್ಲ. ಆದರೆ ಮಂದ ಮಂದ ಮನದೇ ಹಾಡಿನ ಹಿಂದೀ ರೂಪ ಬಾರ್ ಬಾರ್ ಬಗಿಯಾ ಮೆಂ ಕೋಯಲ್ ನ ಬೋಲೆ  ಇದೆ. ಅದನ್ನು ನೋಡಿ ‘ಛೇ, ಕನ್ನಡ ಹಾಡು ಇದ್ದಿದ್ದರೆ ಹಿಂದಿ ವೀಡಿಯೊ ಮೇಲೆ  ಸೂಪರ್ ಇಂಪೋಸ್ ಮಾಡಬಹುದಿತ್ತಲ್ಲ’  ಅಂದುಕೊಳ್ಳುತ್ತಿದ್ದೆ.  

ಸಮಾನಮನಸ್ಕರಾದ ಅನೇಕರಲ್ಲಿ ಈ ಹಾಡಿನ ಬಗ್ಗೆ ವಿಚಾರಿಸುತ್ತಲೇ ಇದ್ದೆ. ಮಣ್ಣಿಗೆಸೆದ ಬೀಜ ಎಂದೋ ಒಂದು ದಿನ ಮೊಳಕೆ ಒಡೆಯುವಂತೆ ಮೊನ್ನೆ ಇಂಥ ಹಳೇ ಹಾಡುಗಳ ಅಭಿಮಾನಿ ಶ್ರೀನಾಥ್ ಮಲ್ಯ ಈ ಹಾಡು ಸಿಕ್ಕಿರುವ ಶುಭ ಸಮಾಚಾರವನ್ನು ತಿಳಿಸಿದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿದ್ದು ಸುಳ್ಳಲ್ಲ!

ಇನ್ನೇನು,  ಕ್ಯಾಬರೆ ನಟಿಯೆಂದೇ ಗುರುತಿಸಲ್ಪಡುವ ಹೆಲನ್ ಮಾಯಾ ಶೂರ್ಪನಖಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡ  ಹಿಂದಿ  ವೀಡಿಯೋಗೆ ಕ್ಯಾಬರೆ ಗಾಯಕಿಯೆಂದು ಖ್ಯಾತಿ ಪಡೆದ ಎಲ್.ಆರ್. ಈಶ್ವರಿ ಹಾಡಿರುವ ಮಂದ ಮಂದ ಮನದೇ  ಹಾಡನ್ನು ತಡ ಮಾಡದೆ   ಕಸಿ ಕಟ್ಟಿಯೇ ಬಿಟ್ಟೆ. ಹಿಂದಿ ಪದಗಳ ತುಟಿ ಚಲನೆಗೆ  ಕರಾರುವಾಕ್ಕಾಗಿ ಸರಿಹೊಂದುವಂಥ ಕನ್ನಡ ಪದಗಳನ್ನು ಹೆಣೆದು ಅರ್ಥಪೂರ್ಣವಾದ ಹಾಡು ರಚಿಸಿದ ಗೀತಪ್ರಿಯ ಮತ್ತು ಮೂಲ ಗಾಯಕಿ ಆಶಾ ಭೋಸ್ಲೆ ಅವರಿಗಿಂತ ಒಂದು ಕೈ ಮೇಲೆಯೇ ಅನ್ನುವಂತೆ ಹಾಡಿದ ಎಲ್.ಆರ್. ಈಶ್ವರಿ ಅವರ ಪ್ರತಿಭೆಗೆ  ಮಾರು ಹೋದೆ. 

ಹಿಂದಿ, ಕನ್ನಡ  ಎರಡೂ ಹಾಡುಗಳನ್ನು ಆಲಿಸಿದಾಗ ಎರಡರ ಶ್ರುತಿ, ಬಳಸಿದ  ವಾದ್ಯಗಳು, ಅವುಗಳ ನಾದ, ನುಡಿಸಿದ ಶೈಲಿ ಎಲ್ಲವೂ ತದ್ರೂಪವಾಗಿರುವುದು ತಿಳಿಯುತ್ತದೆ. ವಿಜಯಭಾಸ್ಕರ್ ಅವರಿಗೆ ಮುಂಬಯಿ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ದುಡಿದ ಅನುಭವ ಇದ್ದುದರಿಂದ ಮೂಲದಲ್ಲಿ ನುಡಿಸಿದ ವಾದ್ಯಗಳು ಮತ್ತು ವಾದ್ಯಗಾರರನ್ನೇ ಬಳಸಿ ಹಾಡುಗಳ ಮರುಸೃಷ್ಟಿ ಮಾಡಲು ಸಾಧ್ಯವಾಗಿರಬಹುದು. ಹಿಂದಿ ಹಾಡುಗಳನ್ನು ರೆಕಾರ್ಡ್ ಮಾಡುವಾಗ ಹಿನ್ನೆಲೆ ಸಂಗೀತದ ಟ್ರಾಕ್‌ಗಳನ್ನು  ಟೇಪುಗಳಲ್ಲಿ ಬೇರೆಯಾಗಿಯೇ ಸಿದ್ಧಪಡಿಸಿಟ್ಟುಕೊಂಡು ಅವುಗಳನ್ನೇ ಇಲ್ಲಿ ಬಳಸಿರಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

********

ಚಿತ್ರ : ಸಂಪೂರ್ಣ ರಾಮಾಯಣ.
ಗಾಯಕಿ : ಎಲ್.ಆರ್. ಈಶ್ವರಿ.
ಸಾಹಿತ್ಯ : ಗೀತಪ್ರಿಯ.
ಸಂಗೀತ : ಮೂಲ ಹಿಂದಿ - ವಸಂತ ದೇಸಾಯಿ, ಕನ್ನಡದಲ್ಲಿ - ವಿಜಯಭಾಸ್ಕರ್.

ಮಂದ ಮಂದ ಮನದೆ ಮನೋಲ್ಲಾಸ ಮೋಹ
ಮಂದ ಮಂದ ಉತ್ಸಾಹವು
ಎನ್ನ ಪ್ರಿಯ ಜೀವನವೆ ಆಡೇ ವಸಂತದೆ
ಎನ್ನ ಪ್ರಾಣ ನಲಿದಾಡಲು

ಹಾ ಪ್ರಿಯ ನಿನ್ನ ನಗೆ
ಆಡೆ ಕಣ್ಪಟದೊಳಗೆ
ಅಭಿನವ ಶೋಭೆ ಕಂಡೆ
ಕಂಡು ಕಂಡು ಮುಖದೆಡೆಗೆ

ಮಧುಮಯ ಈ ಕ್ಷಣವೆ
ರೂಪಿಸಿರೆ ಪಾಶವನೆ
ಎನ್ನ ಈ ಮಂದ ನಗೆ
ಮೆರೆಯುತ ನೋಟದಲಿ
ಸಾರಿದೆ ಪ್ರಿತಿಯನೆ ಪ್ರೀತಿಯನೆ ಪ್ರೀತಿಯನೆ

ಸೋತೆ ನಾನೀಗ ಪ್ರಿಯಾ
ಕಣ್ಣುಗಳ ಆಟದಲಿ
ನಿನ್ನ ನೋಟ ಬಾಧಿಸಿರೆ
ರೂಪಸುಮ ವರ್ಧಿಸಿರೆ
ಸಖ ಈ ಕೋಮಲೆಯ
ಈಗ ದೂರ ದೂಡದಿರು
ರುಮ ಝುಮ ನಾಟ್ಯದಲಿ
ಎನ್ನ ಪ್ರಿಯ ಪ್ರಾಣದಲಿ
ಸಾರಿಹೆ ಪ್ರೀತಿಯನೆ ಪ್ರೀತಿಯನೆ ಪ್ರೀತಿಯನೆ

******

ಈಗ ಮಾಯಾ ಶೂರ್ಪನಖಿ ರೂಪದ ಹೆಲನ್  ಎಲ್.ಆರ್. ಈಶ್ವರಿಯ ಧ್ವನಿ ಬಳಸಿ ಕನ್ನಡದಲ್ಲಿ ಹಾಡುವ ವೀಡಿಯೊ  ವೀಕ್ಷಿಸಿ ಆನಂದಿಸಿ.  ಅನುಕೂಲ ಇದ್ದರೆ ಹೆಡ್‌ಫೋನ್ ಬಳಸಿ.




ಅಡಿಯೋ ಮಾತ್ರ ಕೇಳಲು ಬಾಣದ ಮೇಲೆ ಕ್ಲಿಕ್ಕಿಸಿ.



ಹೋಲಿಕೆಗಾಗಿ ಹಿಂದಿ ಹಾಡು ಇಲ್ಲಿದೆ.



******

ಶೋಭನ್ ಬಾಬು ರಾಮನಾಗಿ ಮತ್ತು ಚಂದ್ರಕಲಾ ಸೀತೆಯಾಗಿ ಕಾಣಿಸಿಕೊಂಡಿದ್ದ  1971ರ ತೆಲುಗು ಸಂಪೂರ್ಣ ರಾಮಾಯಣವೂ ಕನ್ನಡಕ್ಕೆ ಡಬ್ ಆಗಿದ್ದು ಅಂತರ್ಜಾಲದಲ್ಲಿ ಲಭ್ಯವಿದೆ.  

- ಚಿದಂಬರ ಕಾಕತ್ಕರ್.