Saturday, 29 March 2025

ಸಪ್ತಸ್ವರಗಳ ಸುತ್ತ


ಏಳು ಸ್ವರವು ಸೇರಿ ಸಂಗೀತವಾಯಿತು, ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು, ಪಂಚಮದಲ್ಲಿ ಹಾಡಿತು ಕೋಗಿಲೆ, ಇನಿಯ ಕೋಗಿಲೆಯ ಪಂಚಮದಿಂಚರ, ವಸಂತ ಕೋಗಿಲೆ ಪಂಚಮನೋಂಚರ, ಎಲ್ಲೆಲ್ಲೂ ಸಂಗೀತವೇ  ಹೀಗೆ ಅನೇಕ ಜನಪ್ರಿಯ ಚಿತ್ರಗೀತೆಗಳು ನಮಗೆ ಸರಳವಾಗಿ ಸಂಗೀತಜ್ಞಾನವನ್ನು ಬೋಧಿಸಿವೆ. ಪ್ರಕೃತಿಯಲ್ಲಿ ತಾನು ಆಲಿಸಿದ ವಿವಿಧ ಶಬ್ದಗಳನ್ನು ಮಾನವ ಅನುಕರಿಸಿ ತನ್ನ ಅನುಕೂಲಕ್ಕಾಗಿ ಸ್ಥೂಲವಾಗಿ ಅವುಗಳನ್ನು ಷಡ್ಜ-ಸ, ರಿಷಭ-ರಿ, ಗಾಂಧಾರ-ಗ, ಮಧ್ಯಮ-ಮ , ಪಂಚಮ-ಪ, ಧೈವತ-ದ, ನಿಷಾದ-ನಿ   ಎಂದು ವಿಂಗಡಿಸಿಕೊಂಡಿರಬಹುದು. ಸಾಮಗಾಯನದ ವಿವರಗಳನ್ನು ತಿಳಿಸುವ ನಾರದೀಯ ಶಿಕ್ಷಾ ಎಂಬ ವೇದಾಂಗ ಗ್ರಂಥದಲ್ಲಿ ಒಂದೆಡೆ ಹೀಗೆ ಹೇಳಲಾಗಿದೆ.
ಷಡ್ಜಂ ವದತಿ ಮಯೂರೋ ಗಾವೋ ರಂಭಂತಿ ಚರ್ಷಭಮ್
ಅಜಾವಿಕೇ ತು ಗಾಂಧಾರಂ ಕ್ರೌಂಚೋ ವದತಿ ಮಧ್ಯಮಮ್
ಪುಷ್ಪಸಾಧಾರಣೇ ಕಾಲೇ ಕೋಕಿಲೋ ವಕ್ತಿ ಪಂಚಮಮ್ 
ಅಶ್ವಸ್ತು ಧೈವತಂ ವಕ್ತಿ ನಿಷಾದಮ್ ವಕ್ತಿ ಕುಂಜರಃ || 
ಅಂದರೆ ನವಿಲು ಷಡ್ಜದಲ್ಲೂ, ಗೋವುಗಳು  ರಿಷಭದಲ್ಲೂ, ಆಡು ಕುರಿಗಳು ಗಾಂಧಾರದಲ್ಲೂ,  ಕ್ರೌಂಚಪಕ್ಷಿಯು ಮಧ್ಯಮದಲ್ಲೂ,  ವಸಂತಕಾಲದ ಕೋಗಿಲೆಯು ಪಂಚಮದಲ್ಲೂ, ಕುದುರೆಯು ಧೈವತದಲ್ಲೂ, ಆನೆಯು ನಿಷಾದದಲ್ಲೂ ಧ್ವನಿಯನ್ನು ಹೊರಡಿಸುತ್ತವೆ. ಇದೇ ಶ್ಲೋಕದ ಇನ್ನೊಂದು ಪಾಠಾಂತರವು  ಅಮರಕೋಶದ ನಾಟ್ಯವರ್ಗ ಅಧ್ಯಾಯದಲ್ಲಿ ಹೀಗಿದೆ.
ಷಡ್ಜಂ ಮಯೂರೋ ವದತಿ ಗಾವೋ ನರ್ದಂತಿ ಚರ್ಷಭಮ್
ಅಜಾವಿಕಂ ತು ಗಾಂಧಾರಂ ಕ್ರೌಂಚಃ ಕ್ವಣತಿ ಮಧ್ಯಮಮ್
ಪುಷ್ಪಸಾಧಾರಣೆ ಕಾಲೇ ಪಿಕಃ ಕೂಜತಿ ಪಂಚಮಮ್
ಧೈವತಂ ಹೇಷತೇ ವಾಜೀ ನಿಷಾದಮ್ ಬೃಂಹತೇ ಗಜಃ ||


ಕಾಲಕ್ರಮೇಣ ಈ ಸ, ರಿ, ಗ, ಮ, ಪ, ದ, ನಿ ಎಂಬ ಸಪ್ತಸ್ವರಗಳ ಪೈಕಿ  ಷಡ್ಜ ಮತ್ತು ಪಂಚಮಗಳನ್ನು ಸ್ಥಿರವಾದ ಪ್ರಕೃತಿ ಸ್ವರಗಳೆಂದೂ ಉಳಿದ ರಿಷಭ, ಗಾಂಧಾರ, ಮಧ್ಯಮ, ಧೈವತ ಮತ್ತು ನಿಷಾದಗಳನ್ನು ಬದಲಾವಣೆ ಹೊಂದಬಹುದಾದ ವಿಕೃತಿ ಸ್ವರಗಳೆಂದೂ ವಿಂಗಡಿಸಲಾಯಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ  ಈ ವಿಕೃತಿ ಸ್ವರಗಳಲ್ಲಿ ಮಧ್ಯಮವನ್ನು ಎರಡಾಗಿ ಹಾಗೂ ಉಳಿದವನ್ನು ಮೂರು ಮೂರಾಗಿ   ವಿಭಜಿಸಿ ಹನ್ನೆರಡು ಸ್ವರಸ್ಥಾನಗಳಲ್ಲಿ ಹದಿನಾರು ಸ್ವರಗಳನ್ನು ಕಲ್ಪಿಸಿ  ಇವುಗಳಿಗೆ ಸೂಕ್ತ ಹೆಸರುಗಳನ್ನು ನೀಡಲಾಯಿತು.  ವಿಕೃತಿ  ಸ್ವರಗಳನ್ನು ಹೆಸರುಗಳ ಬದಲಿಗೆ  ರಿ1, ರಿ2, ಗ2, ಗ3 ಹೀಗೆ ಸಂಖ್ಯೆಗಳ ಮೂಲಕವೂ ಗುರುತಿಸಲಾಗುತ್ತದೆ.  ಸ್ವರಲಿಪಿಯನ್ನು ಬರೆಯಲು ಸಂಖ್ಯೆಗಳ ಪದ್ಧತಿಯೇ ಅನುಕೂಲ.  12 ಸ್ಥಾನಗಳಲ್ಲಿ 16 ಸ್ವರಗಳು ಹೇಗೆ ಅಡಕವಾಗಿವೆ ಎನ್ನುವುದನ್ನು ಕೆಳಗಿನ ಪಟ್ಟಿಯಲ್ಲಿ  ನೋಡಬಹುದು.  ರಿ2 ಮತ್ತು ಗ1, ರಿ3 ಮತ್ತು ಗ2, ದ2 ಮತ್ತು ನಿ1 ಹಾಗೂ ದ3 ಮತ್ತು ನಿ2 ಒಂದೇ ಸ್ವರಸ್ಥಾನ ಹಂಚಿಕೊಂಡಿರುವುದನ್ನು ಗಮನಿಸಿ. ಸಂದರ್ಭಾನುಸಾರ ಈ 8 ಸ್ವರಗಳನ್ನು ವಿಭಿನ್ನವಾಗಿ ಗುರುತಿಸಲಾಗುತ್ತದೆ ಎಂದಷ್ಟೇ ಇದರ ಅರ್ಥ.  ಮುಂದೆ ಮೇಳಕರ್ತ ರಾಗಗಳ ಬಗ್ಗೆ ಚರ್ಚಿಸುವಾಗ ಇದು ಹೆಚ್ಚು ವಿಷದವಾಗುತ್ತದೆ.



ಹಿಂದುಸ್ಥಾನಿ ಸಂಗೀತದಲ್ಲೂ ಇದೇ ಪದ್ಧತಿಯನ್ನು ಅನುಸರಿಸಿದರೂ ಅಲ್ಲಿ ಸ್ವರಗಳ ಸಂಖ್ಯೆಯನ್ನು ಹನ್ನೆರಡು ಸ್ವರಸ್ಥಾನಗಳಿಗೆ ಸರಿಹೊಂದುವಂತೆ ಸೀಮಿತಗೊಳಿಸಿ ಕೊಂಚ ಭಿನ್ನವಾದ ಹೆಸರುಗಳನ್ನು ಕೊಡಲಾಯಿತು. ಇವುಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ.  ಮಧ್ಯಮಕ್ಕೆ ಮಾತ್ರ ಕೆಳಗಿನ ಸ್ವರ ಶುದ್ಧ, ಮೇಲಿನದು ತೀವ್ರ.  ಉಳಿದವಕ್ಕೆಲ್ಲ ಕೆಳಗಿನ ಸ್ವರ ಕೋಮಲ, ಮೇಲಿನದು ಶುದ್ಧ.


ನಮ್ಮ ಸ, ರಿ, ಗ, ಮ, ಪ, ದ, ನಿಗಳನ್ನು C, D, E, F, G, A, Bಗೆ ಬದಲಾಯಿಸಿಕೊಂಡು ದೊ, ರೆ, ಮಿ, ಫಾ, ಸ, ಲಾ, ಟಿ ಎಂದು ಕರೆದ  ಪಾಶ್ಚಾತ್ಯ ಸಂಗೀತವೂ ಸ್ವರಗಳಿಗೆ flat, natural ಮತ್ತು  sharp ಎಂಬ suffixಗಳನ್ನು ಸೇರಿಸಿಕೊಂಡು 12  ಸ್ವರಗಳ ಕಲ್ಪನೆಯನ್ನು ತನ್ನದಾಗಿಸಿಕೊಂಡಿತು.  ಭಾರತದ ಕರ್ನಾಟಕಿ ಮತ್ತು ಹಿಂದುಸ್ತಾನಿ ಶೈಲಿಗಳಲ್ಲಿ ಸ್ವರಗಳ ವಿಭಜನೆ ಇತ್ಯಾದಿ ಕರಾರುವಾಕ್ಕಾಗಿದ್ದರೂ ಮೂಲ ಷಡ್ಜದ ಶ್ರುತಿಯನ್ನು ನಿಗದಿಪಡಿಸುವಲ್ಲಿ ಗೊಂದಲವಿತ್ತು. ಶ್ಲೋಕದಲ್ಲಿ ವಿವರಿಸಿದಂತೆ ಹಿಂದಿನ ಕಾಲದಲ್ಲಿ ಪ್ರಾಣಿ ಪಕ್ಷಿಗಳ ಧ್ವನಿಯನ್ನಾಧರಿಸಿ ಅಂದಾಜಿನ ಮೇಲೆ ಷಡ್ಜವನ್ನು ನಿರ್ಧರಿಸುತ್ತಿದ್ದರೋ ಏನೋ.   ಹಾರ್ಮೋನಿಯಮ್ ನಮ್ಮ ದೇಶಕ್ಕೆ ಕಾಲಿರಿಸಿದ ಮೇಲೆ ಅದರ ಬಿಳಿ, ಕಪ್ಪು ಪಟ್ಟಿಗಳ ಆಧಾರದ ಮೇಲೆ   ಶ್ರುತಿಯನ್ನು ನಿರ್ಧರಿಸಿ  ಮೊದಲ ಬಿಳಿ ಪಟ್ಟಿಯ ಶ್ರುತಿಗೆ ಬಿಳಿ ಒಂದು, ಎರಡನೇ ಬಿಳಿ ಪಟ್ಟಿಗೆ ಬಿಳಿ ಎರಡು,  ಒಂದು ಮತ್ತು ಎರಡನೇ ಬಿಳಿ ಪಟ್ಟಿಯ ನಡುವಿನ ಕಪ್ಪು ಪಟ್ಟಿಯ ಶ್ರುತಿಗೆ ಕಪ್ಪು ಒಂದು ಅಥವಾ ಒಂದೂವರೆ ಪಟ್ಟಿ ಹೀಗೆ ಗುರುತಿಸುವ ಪರಿಪಾಠ ಆರಂಭವಾಯಿತು.  ಆದರೆ ಇಲ್ಲೂ ಅನೇಕ ಸಲ ಹಾರ್ಮೋನಿಯಂನಿಂದ ಹಾರ್ಮೋನಿಯಂಗೆ  ಶ್ರುತಿಯಲ್ಲಿ ವ್ಯತ್ಯಾಸ ಇರುತ್ತಿತ್ತು.   ಹೀಗಾಗಿ ನಿಶ್ಚಿತ ಶ್ರುತಿಯ ಕೊಳಲಿನಂಥ ವಾದ್ಯಗಳನ್ನು ನುಡಿಸುವವರಿಗೆ ಸಮಸ್ಯೆಯುಂಟಾಗುತ್ತಿತ್ತು.  ಆಧಾರ ಶ್ರುತಿಗಳಲ್ಲಿ ಸಮಾನತೆ ಸಾಧಿಸುವ ಸಲುವಾಗಿ ಪಾಶ್ಚಾತ್ಯ ಸಂಗೀತದಲ್ಲಿ  ಪಿಯಾನೋದ 4ನೇ ಸಪ್ತಕದ 6ನೇ ಬಿಳಿ ಕೀ ಅಂದರೆ A(ದ2) ಸ್ವರದ ಕಂಪನಾಂಕ 440 Hz ಇರಬೇಕೆಂಬ ನಿಯಮ ಜಾರಿಗೊಳಿಸಲಾಗಿತ್ತು.  ಇದರ ಆಧಾರದ  ಮೇಲೆ ತಯಾರಾದ ಪಿಚ್ ಪೈಪುಗಳು ಸಿಗಲಾರಂಭಿಸಿದ ಮೇಲೆ ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ದೂರವಾಯಿತು.   ಈಗ ಬರುತ್ತಿರುವ ಬಹುತೇಕ ಇಲೆಕ್ಟ್ರಾನಿಕ್ ಶ್ರುತಿಪೆಟ್ಟಿಗೆಗಳು ಹಾಗೂ ಸಂಗೀತೋಪಕರಣಗಳು  ಈ A 440 Hz ಆಧಾರಿತ Stuttgart ಸ್ಟಾಂಡರ್ಡ್ ಶ್ರುತಿ ಹೊಂದಿರುತ್ತವೆ.


ಈಗಿನ ದಿನಗಳಲ್ಲಿ  ನಮ್ಮಲ್ಲೂ C, C#, G ಹೀಗೆ ಪಾಶ್ಚಾತ್ಯ notationಗಳ ರೂಪದಲ್ಲೂ ಶ್ರುತಿಯನ್ನು ಗುರುತಿಸುವುದಿದೆ.  ಉದಾಹರಣೆಗೆ ಯಾರಾದರೂ ‘ನಾನು G#(G sharp) ಶ್ರುತಿಯಲ್ಲಿ ಹಾಡುತ್ತೇನೆ’,  ಅಥವಾ ‘ನಾನು ಕಪ್ಪು 4ರಲ್ಲಿ ಹಾಡುತ್ತೇನೆ’, ಅಥವಾ ‘ನನ್ನ ಶ್ರುತಿ ಐದುವರೆ ಪಟ್ಟಿ’ ಎಂದು ಹೇಳಿದರೆ ಎಲ್ಲದರ ಅರ್ಥ ಒಂದೇ.  ಕಪ್ಪು ಕೀಗಳನ್ನು ಹಿಂದಿನ ಬಿಳಿ ಕೀಯ sharp ಅನ್ನುವ ಬದಲಾಗಿ ಮುಂದಿನ ಬಿಳಿ ಕೀಯ flat  ಎಂದು ಗುರುತಿಸುವ ಪದ್ಧತಿಯೂ ಇದೆ.  ಆದರೆ ನಮ್ಮಲ್ಲಿ ಈ ರೀತಿಯ ಬಳಕೆ ಕಮ್ಮಿ.  ಟಿ.ವಿ.ಯ ರಿಯಾಲಿಟಿ ಸಂಗೀತ ಕಾರ್ಯಕ್ರಮಗಳ ಕೆಲವು ನಿರ್ಣಾಯಕರು ಆಗಾಗ ‘ನೀವು flat ಹಾಡಿದ್ರಿ’, ‘ ನೀವು ಹಾಡಿದ್ದು ಕೆಲವು ಕಡೆ sharp ಆಗ್ತಿತ್ತು’ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ.  ಸ್ಪರ್ಧಿಗಳು ಕೆಲವು ಸಲ ಆಧಾರ ಶ್ರುತಿಗಿಂತ ಕೆಳಗೆ ಹಾಡಿದ ಹಾಗೆ,  ಕೆಲವು ಸಲ ಶ್ರುತಿ ಜಾಸ್ತಿ ಆದ ಹಾಗೆ ಅವರಿಗನ್ನಿಸಿತು ಎಂದು ಇದರರ್ಥ.


ವಿವಿಧ ರೀತಿಗಳಲ್ಲಿ ಸ್ವರಸ್ಥಾನಗಳನ್ನು ತೋರಿಸುವ ಈ ಹಾರ್ಮೋನಿಯಮ್ ರೀಡುಗಳ ಚಿತ್ರ ಸಾಂಕೇತಿಕ ಮಾತ್ರ.  ಭಾರತೀಯ ಪದ್ಧತಿಯಲ್ಲಿ Cಯೇ ಷಡ್ಜವಾಗಬೇಕೆಂದಿಲ್ಲ.  12 ಸ್ವರಗಳ ಪೈಕಿ  ಯಾವುದನ್ನಾದರೂ ಷಡ್ಜವಾಗಿಸಿಕೊಳ್ಳಬಹುದು. ಆಗ ಕೀ ನೊಟೇಶನ್  ಮತ್ತು ಸ್ವರಗಳ ನಂಟು ಬದಲಾಗುತ್ತದೆ.  ಕೆಳಗಿನ ಚಾರ್ಟ್ ಯಾವ ಕೀಯನ್ನು ಷಡ್ಜ ಮಾಡಿಕೊಂಡಾಗ ಯಾವ್ಯಾವ ಕೀಗಳು ಯಾವ್ಯಾವ ಸ್ವರಗಳಾಗುತ್ತವೆ ಎಂಬುದನ್ನು ತೋರಿಸುತ್ತದೆ.  ಯಾವ ಶ್ರುತಿಯ ಮಧ್ಯಮ, ಪಂಚಮಗಳು ಯಾವ ಶ್ರುತಿಯಾಗುತ್ತದೆ ಎಂದು ಸುಲಭವಾಗಿ ತಿಳಿಯಲು ಕೂಡ ಈ ಚಾರ್ಟ್ ಸಹಕಾರಿ.


ಈ ಕೆಳಗಿನ ತಖ್ತೆಯಲ್ಲಿ ಕರ್ನಾಟಕ, ಹಿಂದುಸ್ಥಾನಿ ಮತ್ತು ಪಾಶ್ಚಾತ್ಯ ಶೈಲಿಗಳಲ್ಲಿ  12 ಸ್ವರಸ್ಥಾನಗಳ ವಿವರಗಳನ್ನು  ನೋಡಬಹುದು.  ಗೊಂದಲ ಮೂಡಿಸಬಹುದಾದ ಕರ್ನಾಟಕ ಮತ್ತು ಹಿಂದುಸ್ತಾನಿ ಶೈಲಿಯ ಸ್ವರಗಳ ಹೆಸರುಗಳನ್ನೂ ಹೋಲಿಸಿ ನೋಡಬಹುದು.  ಶುದ್ಧ ರಿಷಭ, ಶುದ್ಧ ಗಾಂಧಾರ, ಶುದ್ಧ ಧೈವತ ಮತ್ತು ಶುದ್ಧ ನಿಷಾದ ಹೆಸರುಗಳು ಎರಡು ಪದ್ಧತಿಗಳಲ್ಲಿ ಬೇರೆ ಬೇರೆ ಸ್ವರಸ್ಥಾನಗಳನ್ನು ಸೂಚಿಸುವುದು ಗಮನಿಸಬೇಕಾದ ಅಂಶ.


ಮೇಲಿನ ಪಟ್ಟಿಯಲ್ಲಿ  ಪಿಯಾನೋ ಕೀ ಬೋರ್ಡಿನ ಮಧ್ಯ ಅಂದರೆ 4ನೇ ಸಪ್ತಕದ ಎಲ್ಲ ಸ್ವರಗಳ ಕಂಪನಾಂಕಗಳನ್ನೂ ನೋಡಬಹುದು. ಗಂಡು ಧ್ವನಿ, ಹೆಣ್ಣು ಧ್ವನಿ ಹಾಗೂ ಬೇರೆ ಬೇರೆ ಸಂಗೀತೋಪಕರಣಗಳ ಅದೇ ಶ್ರುತಿಯ ಫ್ರೀಕ್ವೆನ್ಸಿಗಳು ಇದಕ್ಕಿಂತ ಹೆಚ್ಚು ಅಥವಾ ಕಮ್ಮಿ ಆದರೆ ಇದರ ಗುಣಕಗಳಾಗಿ ಇರುತ್ತವೆ. ಜೇಸುದಾಸ್ ಅವರಂಥ ಮಂದ್ರ ಧ್ವನಿಯ ಗಾಯಕರ ಧ್ವನಿ 2ನೇ ಸಪ್ತಕದ ಫ್ರೀಕ್ವೆನ್ಸಿ ಹೊಂದಿರಬಹುದು.  ಪಿ.ಸುಶೀಲಾ ಅವರಂಥ ಗಾಯಕಿಯ ಏರುದನಿ 3ನೇ ಸಪ್ತಕದಲ್ಲಿರಬಹುದು. ಹರಿಪ್ರಸಾದ್ ಚೌರಾಸಿಯಾ ಕಾರ್ಯಕ್ರಮದ ಕೊನೆಯಲ್ಲಿ ನುಡಿಸುವ ಪೆನ್ನಿನಂಥ ಕೊಳಲಿನ ದನಿಯ ಕಂಪನಾಂಕ  6ನೇ ಸಪ್ತಕದ್ದಾಗಿರಬಹುದು.  ನಮ್ಮ ಕಿವಿಗೆ ಸಂಗೀತವಾಗಿ ಕೇಳಬಹುದಾದ ಸೊನ್ನೆಯಿಂದ ಎಂಟರವರೆಗಿನ 9 ಸಪ್ತಕಗಳ ಕಂಪನಾಂಕಗಳನ್ನು ತೋರಿಸುವ ಕೆಳಗಿನ  ಚಾರ್ಟಿನಲ್ಲಿ ಸಪ್ತಕದಿಂದ ಸಪ್ತಕಕ್ಕೆ ಪ್ರತೀ ಸ್ವರದ ಕಂಪನಾಂಕ ದ್ವಿಗುಣಗೊಳ್ಳುವುದನ್ನು ಕಾಣಬಹುದು. ಎರಡು ಸ್ವರಸ್ಥಾನಗಳ ಮಧ್ಯದ ಕಂಪನಾಂಕಗಳನ್ನು ಇನ್ನಷ್ಟು ವಿಭಜಿಸಿದರೆ ಈಗಿನ 12ಕ್ಕಿಂತ ಹೆಚ್ಚು ಸ್ವರಗಳನ್ನು ಪಡೆಯಲು ಸಾಧ್ಯವಿದ್ದು ಅರೇಬಿಕ್ ಸಂಗೀತದಲ್ಲಿ ಈ ರೀತಿಯ ಬಳಕೆ ಇದೆ.


ನಾನು ಧ್ವನಿಮುದ್ರಿಸಿಕೊಂಡಿದ್ದ ಕೋಗಿಲೆ ಧ್ವನಿಯ ಸ್ಯಾಂಪಲ್ ಒಂದನ್ನು ಕಂಪ್ಯೂಟರಿನಲ್ಲಿ ವಿಶ್ಲೇಷಿಸಿದಾಗ ಅದರ ಕಂಪನಾಂಕ  1582.5 Hz ಆಗಿರುವುದು ಕಂಡು ಬಂತು. ಇದು 1567.98 Hz ಅಂದರೆ 6ನೇ ಸಪ್ತಕದ ಬಿಳಿ ಒಂದು ಶ್ರುತಿಯ ಪಂಚಮಕ್ಕೆ ಅತಿ ಸಮೀಪದಲ್ಲಿದೆ!  ನಮ್ಮ ಪೂರ್ವಜರ ಗ್ರಹಿಕೆಗಳು ಕೇವಲ ಕಲ್ಪನೆಗಳಲ್ಲ ಎಂಬುದಕ್ಕೆ ಇದು ಪುರಾವೆ.



‘ಏಳು ಸ್ವರವು ಸೇರಿ ಸಂಗೀತವಾಯಿತು’ ಎಂದು ಹಾಡಿನಲ್ಲಿ ಹೇಳಲಾಗಿದ್ದರೂ ವಾಸ್ತವದಲ್ಲಿ ಬರೇ ಏಳೋ, ಹನ್ನೆರಡೋ ಸ್ವರಗಳು ಇದ್ದ ಮಾತ್ರಕ್ಕೆ ಅವುಗಳಿಂದ ಸಂಗೀತ  ಸಿಗದು. ಉಪ್ಪು, ಮೆಣಸು, ಜೀರಿಗೆ, ಕೊತ್ತಂಬರಿ ಇತ್ಯಾದಿಗಳನ್ನು ನಿಗದಿತ ಪ್ರಮಾಣದಲ್ಲಿ ಬೆರೆಸಿದರೆ ಮಾತ್ರ ಹೇಗೆ  ರುಚಿಕರವಾದ ವೈವಿಧ್ಯಮಯ    ಅಡುಗೆಯಾಗುತ್ತದೆಯೋ ಹಾಗೆಯೇ ಈ ಸ್ವರಗಳನ್ನು ವಿವಿಧ ಪರ್ಮುಟೇಶನ್ ಕಾಂಬಿನೇಶನ್‍ಗಳಲ್ಲಿ ಸಂಯೋಜಿಸಿದರಷ್ಟೇ ಮಧುರ ನಾದ ಹೊಮ್ಮೀತು. ಈ ರೀತಿ 12 ಸ್ಥಾನಗಳ ಸ್ವರಗಳನ್ನು ಬೇರೆ ಬೇರೆ ರೀತಿಯ 7 ಸ್ವರಗಳ ಆರೋಹಣ ಮತ್ತು ಅವರೋಹಣ ಉಳ್ಳ ಗುಂಪುಗಳನ್ನಾಗಿಸಿ   ಅವುಗಳಿಗೊಂದು ಹೆಸರು ಕೊಟ್ಟು ರಾಗ ಎಂದು ಗುರುತಿಸುವ ಪರಿಪಾಠ ಬೆಳೆದು ಬಂದಿರಬಹುದು.  ಕರ್ನಾಟಕ ಸಂಗೀತ ಶೈಲಿಯಲ್ಲಿ 12 ಸ್ಥಾನಗಳಲ್ಲಿರುವ 16 ಸ್ವರಗಳನ್ನು ಬಳಸಿ ಮ1 ಹೊಂದಿರುವ 36 ಹಾಗೂ ಮ2 ಹೊಂದಿರುವ 36 ಹೀಗೆ ಒಟ್ಟು 72 ಸಂಪೂರ್ಣ ರಾಗಗಳನ್ನು ಅಂದರೆ ಆರೋಹಣದಲ್ಲಿ ಸ,ರಿ,ಗ,ಮ,ಪ,ದ,ನಿ,ಸ ಹಾಗೂ ಅವರೋಹಣದಲ್ಲಿ ಸ,ನಿ,ದ,ಪ,ಮ,ಗ,ರಿ,ಸ ಇರುವಂಥವುಗಳನ್ನು ಗುರುತಿಸಿ ಅವುಗಳನ್ನು ಮೇಳಕರ್ತ ರಾಗಗಳು ಎಂದು  ಹೆಸರಿಸಲಾಯಿತು.  12 ಸ್ಥಾನಗಳಲ್ಲಿರುವ 16 ಸ್ವರಗಳಿಗೂ ಈ 72 ಎಂಬ ಸಂಖ್ಯೆಗೂ ಇರುವ ನಂಟನ್ನು  ಈ ಕೆಳಗಿನಂತೆ ಅರ್ಥಮಾಡಿಕೊಳ್ಳಬಹುದು.


ಈಗ ಮ1 ಹೊಂದಿರುವ ಕಾಂಬಿನೇಶನ್ನಿನ ಪೂರ್ವಾರ್ಧವನ್ನು ಗಮನಿಸೋಣ.  ಮೇಲಿನ ತಖ್ತೆಯಂತೆ ಒಟ್ಟು 9 ರೀತಿಯಲ್ಲಿ ಸ,ರಿ,ಗ ಸ್ವರಗಳನ್ನು ಸಂಯೋಜಿಸಬಹುದು.  ರಿ2, ಗ1 ಹಾಗೂ ರಿ3, ಗ2 ಇವು ಒಂದೇ ಸ್ವರಸ್ಥಾನವನ್ನು ಹಂಚಿಕೊಂಡವುಗಳಾಗಿರುವುದರಿಂದ ಹಾಗೂ ರಿ3, ಗ1 ಆರೋಹಣ ಕ್ರಮದಲ್ಲಿಲ್ಲದಿರುವುದರಿಂದ ಕೆಂಪು ಹಿನ್ನೆಲೆಯುಳ್ಳ 3 ಸಾಲುಗಳು ಲೆಕ್ಕಕ್ಕಿಲ್ಲ. ಹೀಗೆ 9ರ ಪೈಕಿ 6 ಕಾಂಬಿನೇಶನುಗಳು ಮಾತ್ರ ಉಳಿಯುತ್ತವೆ.  ಇದೇ ರೀತಿ ಉತ್ತರಾರ್ಧ ಪ,ದ,ನಿ ಸಂಯೋಜನೆಯಲ್ಲೂ 6 ಯೋಗ್ಯ ಕಾಂಬಿನೇಶನುಗಳು ಸಿಗುತ್ತವೆ.  ಪೂರ್ವಾರ್ಧದ 6 ಮತ್ತು ಉತ್ತರಾರ್ಧದ 6 ಕಾಂಬಿನೇಶನುಗಳ ಸಂಯೋಜನೆಯಿಂದ 6 x 6 = 36 ಸ,ರಿ,ಗ,ಮ,ಪ,ದ,ನಿ,ಸ ಸ್ವರಗಳುಳ್ಳ ರಾಗಗಳು ಸಿಗುತ್ತವೆ.  ಮ1 ಸ್ವರವನ್ನು ಮ2 ಆಗಿ ಬದಲಾಯಿಸಿದಾಗ ಮತ್ತೆ 36 ಕಾಂಬಿನೇಶನುಗಳು ಸಿಕ್ಕಿ ಒಟ್ಟು 36 + 36 =  72 ಮೇಳಕರ್ತ ರಾಗಗಳಾಗುತ್ತವೆ.



ಮೇಳಕರ್ತ ರಾಗಗಳ ಕೋಷ್ಟಕವನ್ನು ವಿವಿಧ ರೀತಿ ಪ್ರಸ್ತುತಪಡಿಸಲಾಗುತ್ತಿದ್ದು ಇದು ನಾನು ಮರುವಿನ್ಯಾಸಗೊಳಿಸಿದ ಅದರ ಒಂದು ಸರಳ ಸುಲಭ ರೂಪ. ಪ್ರಕೃತಿ ಸ್ವರಗಳಾದ ಸ ಮತ್ತು ಪ ಎಲ್ಲ ಮೇಳಕರ್ತ ರಾಗಗಳ ಅವಿಭಾಜ್ಯ ಅಂಗಗಳಾಗಿದ್ದು ಅವುಗಳನ್ನು ಇಲ್ಲಿ ತೋರಿಸಲಾಗಿಲ್ಲ. ಬೇಕಿದ್ದ ರಿ, ಗ ಮತ್ತು ಮ ಸ್ವರಗಳನ್ನು ಹೊಂದಿದ ಅಡ್ಡ ಸಾಲು ಹಾಗೂ  ದ ಮತ್ತು ನಿ ಸ್ವರಗಳನ್ನು ಹೊಂದಿರುವ ನೀಟ ಸಾಲು ಒಂದನ್ನೊಂದು ಸೇರುವಲ್ಲಿ ಆ  ಸ್ವರಗಳ ಮೇಳೈಸುವಿಕೆಯಿಂದ ಉಂಟಾಗುವ  ರಾಗದ ಸಂಖ್ಯೆ ಮತ್ತು ಹೆಸರು ದೊರೆಯುತ್ತದೆ.  ಉದಾಹರಣೆಗೆ  ರಿ2,  ಗ2 ಮತ್ತು ಮ1 ಉಳ್ಳ ಅಡ್ಡ ಸಾಲು ಮತ್ತು   ದ1  ಮತ್ತು   ನಿ2 ಉಳ್ಳ ನೀಟ ಸಾಲುಗಳು ಒಂದನ್ನೊಂದು ಸೇರುವಲ್ಲಿ ಸ,  ರಿ2,  ಗ2,  ಮ1,  ಪ,  ದ1,  ನಿ2, ಸ  ಸ್ವರಗಳನ್ನು ಹೊಂದಿದ  20ನೇ ಮೇಳಕರ್ತ ನಠಭೈರವಿ  ರಾಗ ಸಿಗುತ್ತದೆ.  ಅಥವಾ ರಿ2,  ಗ2 ಮತ್ತು ಮ2 ಉಳ್ಳ ಅಡ್ಡ ಸಾಲು ಮತ್ತು   ದ1  ಮತ್ತು   ನಿ3 ಉಳ್ಳ ನೀಟ ಸಾಲುಗಳು ಒಂದನ್ನೊಂದು ಸೇರುವಲ್ಲಿ ಸ,  ರಿ2,  ಗ2,  ಮ2,  ಪ,  ದ1,  ನಿ3, ಸ  ಸ್ವರಗಳನ್ನು ಹೊಂದಿದ  57ನೇ ಮೇಳಕರ್ತ ಸಿಂಹೇಂದ್ರಮಧ್ಯಮ  ರಾಗ ಸಿಗುತ್ತದೆ. ಈ ಪ್ರಕ್ರಿಯೆಯನ್ನು ತಿರುವು ಮುರುವುಗೊಳಿಸಿದರೆ ಯಾವುದೇ ರಾಗದ ಸ್ವರಗಳನ್ನು ಪಡೆಯಬಹುದು. ಉದಾಹರಣೆಗೆ  22ನೇ ಮೇಳಕರ್ತ ಖರಹರಪ್ರಿಯ  ರಾಗದ ಹೆಸರಿರುವ ಅಡ್ಡ ಸಾಲಿನ ಎಡ ತುದಿಯಲ್ಲಿ   ರಿ2  ಗ2 ಮತ್ತು  ಮ1 ಹಾಗೂ ನೀಟ ಸಾಲಿನ  ಮೇಲ್ತುದಿಯಲ್ಲಿ ದ2,  ನಿ2  ದೊರೆತು ಆ ರಾಗದ ಸ್ವರಗಳು ಸ,  ರಿ2,  ಗ2,  ಮ1,  ಪ,  ದ2,  ನಿ2,  ಸ  ಎಂದು ತಿಳಿಯುತ್ತದೆ.

ಈ 72 ರಾಗಗಳನ್ನು   12 ಚಕ್ರಗಳಾಗಿ  ವಿಂಗಡಿಸಿ ಅವುಗಳಿಗೆ ಇಂದು, ನೇತ್ರ, ಅಗ್ನಿ, ವೇದ, ಬಾಣ, ಋತು, ಋಷಿ, ವಸು, ಬ್ರಹ್ಮ, , ದಿಶಿ, ರುದ್ರ, ಆದಿತ್ಯ ಎಂಬ  ಸಂಖ್ಯಾಸೂಚಕ ಹೆಸರುಗಳನ್ನು ಕೊಡಲಾಗಿದೆ. ಹಣ್ಣಿನ ಮಧ್ಯ ಭಾಗವು ಹೆಚ್ಚು ಸಿಹಿಯಾಗಿರುವಂತೆ ಇಲ್ಲಿಯೂ ಕೋಷ್ಟಕದ ಮಧ್ಯಭಾಗದಲ್ಲೇ ಅನೇಕ ಜನಪ್ರಿಯ ಮಧುರ ರಾಗಗಳಿರುವುದನ್ನು ಗಮನಿಸಬಹುದು.

ಮೇಲೆ, ಕೆಳಗೆ, ಎಡ ಅಥವಾ ಬಲಕ್ಕೆ scroll ಮಾಡಿದಾಗಲೂ ಸುಲಭವಾಗಿ ಈ ಕೋಷ್ಟಕವನ್ನು ಉಪಯೋಗಿಸಲಾಗುವಂತೆ ರಿ, ಗ, ಮ ಸ್ವರಗಳನ್ನು ಎಡ ತುದಿ ಮತ್ತು ಬಲ ತುದಿ, ದ ಮತ್ತು ನಿ ಸ್ವರಗಳನ್ನು ಮೇಲ್ತುದಿ ಮತ್ತು ಕೆಳ ತುದಿ ಎರಡೂ ಕಡೆ ತೋರಿಸಲಾಗಿದೆ.

ಪದಪುಂಜಗಳಷ್ಟು ಸುಲಭವಾಗಿ ಅಂಕೆ ಸಂಖ್ಯೆಗಳನ್ನು  ನೆನಪಿಡಲಾಗದಿರುವುದು ಮಾನವನ ದೌರ್ಬಲ್ಯ. ಈಗಲೂ ಅಂತರ್ಜಾಲದಲ್ಲಿ  172.217.26.197 ಎಂಬ ವಿಳಾಸದ ತಾಣಕ್ಕೆ ಹೋಗಲು  ಚಿಕ್ಕದಾಗಿ gmail.com, ಅಥವಾ 157.240.13.35 ಎಂಬ ವಿಳಾಸಕ್ಕೆ ಹೋಗಲು facebook.com ಎಂಬ ನೆನಪಿಡಲು ಸುಲಭವಾದ ಪದಗಳನ್ನಷ್ಟೇ ಟೈಪಿಸಬೇಕಾದ ವ್ಯವಸ್ಥೆ ಮಾಡಿ ಕೊಟ್ಟಿರುವುದು ಈ ಕಾರಣಕ್ಕಾಗಿಯೇ.  ಆದರೆ  ಮೇಳಕರ್ತ ರಾಗಗಳ ಕೋಷ್ಟಕದಲ್ಲಿ ಅವುಗಳಿಗೆ ಆಕರ್ಷಕ  ಹೆಸರುಗಳನ್ನು ನೀಡುವುದು ಮಾತ್ರವಲ್ಲ, ಕಟಪಯಾದಿ ಸೂತ್ರವನ್ನು ಬಳಸಿ ಸಂಖ್ಯೆ ಮತ್ತು ಹೆಸರುಗಳ ನಡುವೆ  ವಿಶಿಷ್ಟ ಸಂಬಂಧವೂ ಇರುವಂತೆ ಮಾಡಲಾಗಿದೆ.


ಕಟಪಯಾದಿ ಸೂತ್ರದಲ್ಲಿ ಮೇಲೆ ತೋರಿಸಿದಂತೆ ಕ ದಿಂದ ಹ ವರೆಗಿನ ವ್ಯಂಜನಳು 1 ರಿಂದ 0 ವರೆಗಿನ ಬೆಲೆಯನ್ನು ಹೊಂದುತ್ತವೆ.  ಒಂದನೇ ನೀಟ ಸಾಲಿನ ಎಲ್ಲ ವ್ಯಂಜನಗಳು 1, ಎರಡನೇ ಸಾಲಿನಲ್ಲಿರುವವು 2,  ಕೊನೆಯ ಸಾಲಿನವು 0 ಹೀಗೆ ಅಂಕೆಗಳಿಂದ ಗುರುತಿಸಲ್ಪಡುತ್ತವೆ.  ಈಗ ಮೇಳಕರ್ತ ಕೋಷ್ಟಕದ ಮಾಯಾಮಾಳವಗೌಳ ರಾಗವನ್ನು ತೆಗೆದುಕೊಂಡರೆ ಅದರ ಮೊದಲ ಎರಡು ವ್ಯಂಜನಗಳು ಮ ಮತ್ತು ಯ.  ಕಟಪಯಾದಿ ಸೂತ್ರದಂತೆ ಮ ಅಂದರೆ 5  ಮತ್ತು ಯ ಅಂದರೆ 1. ಇವುಗಳನ್ನು ಜೊತೆಗೂಡಿಸಿದರೆ 51.  ಇದನ್ನು ತಿರುವು ಮುರುವು ಮಾಡಿದಾಗ ಸಿಗುವ 15 ಈ ರಾಗದ ಮೇಳಕರ್ತ ಸಂಖ್ಯೆ ಆಗಿರುತ್ತದೆ.  ಇನ್ನೊಂದು ಉದಾಹರಣೆಯಾಗಿ ಹರಿಕಾಂಭೋಜಿಯ ಮೊದಲೆರಡು ವ್ಯಂಜನಗಳು ಹ ಮತ್ತು ರ.  ಅವುಗಳ ಅಂಕೆಗಳು 8 ಮತ್ತು 2. ಜೊತೆಗೂಡಿಸಿದಾಗ 82. ತಿರುವು ಮುರುವು ಮಾಡಿದಾಗ  ಆ ರಾಗದ ಮೇಳಕರ್ತ ಸಂಖ್ಯೆ 28 ಸಿಗುತ್ತದೆ.  ಈ ರೀತಿ ಎಲ್ಲ 72  ರಾಗಗಳ ಹೆಸರಿನಿಂದಲೇ   ಅವುಗಳ ಮೇಳಕರ್ತ ಸಂಖ್ಯೆಯನ್ನು  ಸುಲಭವಾಗಿ ತಿಳಿಯಬಹುದು.    ಪದಗಳನ್ನು ಸಂಖ್ಯೆಗಳೊಂದಿಗೆ ಬೆಸೆಯುವ ಇನ್ನೂ ಇಂತಹ ಎಷ್ಟೋ ಚಮತ್ಕಾರಗಳಿಗೆ ಕಟಪಯಾದಿ ಸೂತ್ರವನ್ನು ಬಳಸಲಾಗಿದೆ.

ಹಿಂದುಸ್ಥಾನಿ ಪದ್ಧತಿಯಲ್ಲಿ ಈ ರೀತಿ 72 ಮೇಳಕರ್ತ ರಾಗಗಳ ಕಲ್ಪನೆ ಇಲ್ಲ.  ಅಲ್ಲಿ 10 ಮುಖ್ಯ ಥಾಟ್‍ಗಳಿದ್ದು ಅವುಗಳಿಂದಲೇ  ನೂರಾರು ರಾಗಗಳು ಜನ್ಮತಾಳಿವೆ. 


72 ಮೇಳಕರ್ತ ರಾಗಗಳ ಸೂಚಿಯಲ್ಲಿ ಮೋಹನ, ಹಿಂದೋಳ, ಹಂಸಧ್ವನಿ, ಅಭೇರಿಯಂಥ ಅನೇಕ ಜನಪ್ರಿಯ ರಾಗಗಳೇ ಇಲ್ಲವಲ್ಲ ಎಂದು ಕೆಲವರಿಗೆ ಅನ್ನಿಸಿರಬಹುದು.  ಅವುಗಳು ಆರೋಹಣ ಅವರೋಹಣದಲ್ಲಿ ಎಲ್ಲ ಸ್ವರಗಳನ್ನು ಏಕರೂಪದಲ್ಲಿ ಹೊಂದಿದವುಗಳಾಗಿರದೆ ಯಾವುದೋ ಮೇಳಕರ್ತ ರಾಗದ ಕೆಲವು ಲಕ್ಷಣಗಳನ್ನು ಹೊಂದಿದ  ಜನ್ಯ ರಾಗಗಳಾಗಿರುವುದೇ ಇದಕ್ಕೆ ಕಾರಣ.  ಪಟ್ಟಿ ಮಾಡಲು ಸಾಧ್ಯವಾಗದಷ್ಟು ದೊಡ್ಡ ಸಂಖ್ಯೆಯ ಇಂತಹ ಜನ್ಯ ರಾಗಗಳಿವೆ. ಮೇಳಕರ್ತ ಇರಲಿ, ಜನ್ಯ ಇರಲಿ ಬರೇ ಆರೋಹಣ ಅವರೋಹಣದಿಂದ ರಾಗ ಆಗುವುದಿಲ್ಲ.  ಉಪಯೋಗಿಸುವ ಗಮಕಗಳು, ಚಲನ, ವಿಶಿಷ್ಟ ಸ್ವರಪುಂಜಗಳು ಇವೆಲ್ಲ ಮೇಳೈಸಿದರೆ ಮಾತ್ರ  ಯಾವುದೇ ರಾಗದ ಸ್ವರೂಪ ಹೊಮ್ಮುತ್ತದೆ. ಉದಾಹರಣೆಗೆ ಮೋಹನ ರಾಗದ ಸ್ವರಗಳು  ಸ ರಿ2 ಗ2 ಪ ದ2 ಸ ಎಂದಿದ್ದರೂ ನುಡಿಸುವಾಗ ಅಥವಾ ಹಾಡುವಾಗ ಅದು ಸ ಗರಿ ಗ ಪ ಸದ ಸ ಎಂದು ಗಮಕಯುಕ್ತವಾಗುತ್ತದೆ. ಒಂದೇ ಆರೋಹಣ ಅವರೋಹಣ ಹೊಂದಿಯೂ ಚಲನದಲ್ಲಿ ವ್ಯತ್ಯಾಸ ಹೊಂದಿ ಬೇರೆ ಬೇರೆ ಹೆಸರಿನಿಂದ ಗುರುತಿಸಲ್ಪಡುವ ರಾಗಗಳೂ ಇವೆ.

ಶಾಸ್ತ್ರೀಯ ರಚನೆಗಳಲ್ಲಾಗಲಿ, ಲಘು ಶೈಲಿಯ ಹಾಡುಗಳಲ್ಲಾಗಲಿ ಸ್ವರಸ್ಥಾನಗಳು ಸ ರಿ ಗ ಮ ಪ ದ ನಿ  ಸ್ವರಗಳನ್ನೊಳಗೊಂಡ ಮಧ್ಯ ಸಪ್ತಕಕಷ್ಟೇ  ಸೀಮಿತವಾಗಿರುವುದಿಲ್ಲ. ಮಧ್ಯ ಸಪ್ತಕದ ಕೆಳಗಿನ ಮಂದ್ರ ಸಪ್ತಕದ ಮ ವರೆಗೆ, ಮೇಲಿನ ತಾರ ಸಪ್ತಕದ ಪ ವರೆಗೆ ಇವುಗಳ ಹರಹು ಇರುತ್ತದೆ.  ಹೀಗಾಗಿ ಹಾಡುಗಾರರು ಈ ವ್ಯಾಪ್ತಿಯಲ್ಲಿ ಸುಲಲಿತವಾಗಿ ಸಂಚರಿಸಬೇಕಾದರೆ ಸೂಕ್ತ ಆಧಾರ ಶ್ರುತಿಯನ್ನು ಆಯ್ದುಕೊಳ್ಳಬೇಕಾಗುತ್ತದೆ.  ಹೆಚ್ಚಾಗಿ ಪುರುಷರು C ಅರ್ಥಾತ್ ಬಿಳಿ ಒಂದರ ಆಸುಪಾಸಿನ  ಶ್ರುತಿಯನ್ನು ಆಯ್ದುಕೊಳ್ಳುತ್ತಾರೆ.  ಸ್ತ್ರೀಯರಿಗೆ ಸಾಮಾನ್ಯವಾಗಿ G  ಅಂದರೆ ಬಿಳಿ 5ರ ಸಮೀಪದ ಶ್ರುತಿ ಅನುಕೂಲವಾಗಿರುತ್ತದೆ.  ಇದನ್ನು ಗಮನದಲ್ಲಿರಿಸದೆ ಯಾವುದೋ ಶ್ರುತಿಯನ್ನು ಆಯ್ದುಕೊಂಡರೆ ಒಂದೋ ತಾರ ಸಪ್ತಕದಲ್ಲಿ ತೊಂದರೆ ಎದುರಾಗುತ್ತದೆ ಇಲ್ಲವೇ ಮಂದ್ರ ಸಪ್ತಕದ ಚಲನೆ ಸುಲಲಿತವಾಗುವುದಿಲ್ಲ. ತೆಂಕು ತಿಟ್ಟು ಯಕ್ಷಗಾನದ ಭಾಗವತರು ಹೆಚ್ಚಾಗಿ ಬಿಳಿ ನಾಲ್ಕು ಹಾಗೂ ಬಡಗು ತಿಟ್ಟಿನ ಭಾಗವತರು ಕಪ್ಪು ಎರಡರ ಶ್ರುತಿ ಆಯ್ದುಕೊಳ್ಳುತ್ತಾರೆ.  ಆಯಾ ತಿಟ್ಟಿನ ಚಂಡೆ ಮದ್ದಳೆಗಳೊಂದಿಗೆ  ಸಮನ್ವಯ  ಸಾಧಿಸಿ ರಸಾನುಭೂತಿ ಉಂಟುಮಾಡಲು ಹಾಗೂ ಯಕ್ಷಗಾನಕ್ಕೆ ಬೇಕಾದ ಉಠಾವ್ ಸಿಗಲು ಈ ಶ್ರುತಿಗಳು ಸೂಕ್ತವಾದವು ಎಂದು ಅನುಭವಿಗಳ ಅಂಬೋಣ. ಆದರೆ ಲಘು ಅಥವಾ ಚಿತ್ರಸಂಗೀತ ಕ್ಷೇತ್ರದಲ್ಲಿ ಗಂಡು ಹೆಣ್ಣು ಜೊತೆಯಾಗಿ ಹಾಡುವ ಸಂದರ್ಭಗಳು ಹೆಚ್ಚಾಗಿರುವುದರಿಂದ ಯಾವುದೇ ಶ್ರುತಿಯಲ್ಲಿ  ಮಂದ್ರ, ಮಧ್ಯ, ತಾರ ಸಪ್ತಕಗಳನ್ನು ಸುಲಲಿತವಾಗಿ  ನಿಭಾಯಿಸಬಲ್ಲವರು  ಮಾತ್ರ ಇಲ್ಲಿ ಮಿಂಚುತ್ತಾರೆ.  ಈ ನಿಟ್ಟಿನಲ್ಲಿ ಮಹಮ್ಮದ್ ರಫಿ ಅವರಿಗೆ ಸರಿ ಸಾಟಿ  ಯಾರೂ ಇಲ್ಲ.  ಅವರು ಸಹಗಾಯಕಿಗೆ ಸೂಕ್ತವಾದ ಯಾವುದೇ ಶ್ರುತಿಯಲ್ಲೂ ತಾರ ಸಪ್ತಕದಲ್ಲಿ ಕಿರುಚಿದಂತಾಗದೆ, ಮಂದ್ರದಲ್ಲಿ ವಾಕರಿಸಿದಂತಾಗದೆ ಲೀಲಾಜಾಲವಾಗಿ ಹಾಡಬಲ್ಲವರಾಗಿದ್ದರು.

ಕೊಳಲು, ನಾಗಸ್ವರ, ಕ್ಲಾರಿನೆಟ್, ಸಾಕ್ಸೋಫೋನ್ ಮುಂತಾದ ಸುಷಿರ ವಾದ್ಯಗಳ  ಶ್ರುತಿ ಬದಲಾಯಿಸಲಾಗುವುದಿಲ್ಲ.  ಅದಕ್ಕೇ ಕೊಳಲು ವಾದಕರು ಒಂದು ಚೀಲ ತುಂಬಾ ವಿವಿಧ ಶ್ರುತಿಗಳ ಕೊಳಲುಗಳನ್ನಿಟ್ಟುಕೊಂಡಿರುವುದನ್ನು ನೋಡುತ್ತೇವೆ. ವಯಲಿನ್, ವೀಣೆ, ಸಿತಾರ್, ಸರೋದ್, ಸಾರಂಗಿ ಮುಂತಾದ ತಂತಿ ವಾದ್ಯಗಳನ್ನು ಯಾವ ಶ್ರುತಿಗೂ ಹೊಂದಿಸಬಹುದು. ಆದರೂ ಈ ಎಲ್ಲ ವಾದ್ಯಗಳು ಒಂದು ನಿರ್ದಿಷ್ಟ ಶ್ರುತಿ ಸೀಮೆಯೊಳಗೆ ಹೆಚ್ಚು ಇಂಪಾಗಿ ನುಡಿಯುತ್ತವೆ.  ಸಿತಾರ್ ವಾದ್ಯದಲ್ಲಿ ನುಡಿಸುವ ಥಾಟ್‍ಗೆ ತಕ್ಕಂತೆ ತಂತಿಯನ್ನು ಬೆರಳಿನಿಂದ ಒತ್ತಿದಾಗ ಆಧರಿಸುವ ರಚನೆ ಅಂದರೆ ‘ಪರದೆ’ಗಳನ್ನು ಅಚೀಚೆ ಸರಿಸಿ ಹೊಂದಿಸಬೇಕಾಗುತ್ತದೆ.    ಚರ್ಮವಾದ್ಯಗಳ ಶ್ರುತಿಯನ್ನು ಅಗತ್ಯ ಬಿದ್ದಾಗ ಒಂದು ಅರ್ಧ ಕಟ್ಟೆಯಷ್ಟು ಮಾತ್ರ ಏರಿಳಿಸಬಹುದು.  ಹೀಗಾಗಿ ಬೇರೆ ಬೇರೆ ಶ್ರುತಿಯ  ಮೃದಂಗ, ತಬ್ಲಾಗಳನ್ನು   ಇವುಗಳ ವಾದಕರು ಇಟ್ಟುಕೊಳ್ಳಬೇಕಾಗುತ್ತದೆ. ಕೆಲವು ಸಲ ಹೊಂದಾಣಿಕೆ ಮಾಡಿಕೊಂಡು ಮಧ್ಯಮ ಅಥವಾ ಪಂಚಮ ಶ್ರುತಿಯ ತಾಳವಾದ್ಯಗಳನ್ನು ಉಪಯೋಗಿಸುವವರೂ ಇದ್ದಾರೆ. ಹೀಗೇ ಮಾಡಿದಾಗ ಆ ಸ್ವರಗಳಿಲ್ಲದ ರಾಗಗಳ ಸಂದರ್ಭದಲ್ಲಿ ಎಡವಟ್ಟಾಗುತ್ತದೆ.. ತವಿಲ್ ಅಥವಾ ಡೋಲಿಗೆ ಶ್ರುತಿಯ ಹಂಗಿಲ್ಲ. ಹಾರ್ಮೋನಿಯಮ್‍ ಕೂಡ ಏಕ ಶ್ರುತಿಯ ವಾದ್ಯವಾಗಿದ್ದರೂ ಇದನ್ನು ನುಡಿಸುವ ಬಹುತೇಕ ಎಲ್ಲರೂ ಯಾವ ಪಟ್ಟಿಯನ್ನಾದರೂ ಆಧಾರ ಶ್ರುತಿಯಾಗಿಟ್ಟುಕೊಂಡು ನುಡಿಸಬಲ್ಲ ಪರಿಣತರಾಗಿರುತ್ತಾರೆ. ಆಧುನಿಕ ಕೀ ಬೋರ್ಡುಗಳಲ್ಲಿ ಯಾವುದೇ ಕೀಯನ್ನು ಯಾವುದೇ ಆಧಾರ ಷಡ್ಜಕ್ಕೆ map ಮಾಡಿಕೊಳ್ಳುವ ಸೌಲಭ್ಯ ಇರುತ್ತದೆ.  ಆದರೆ ಯಾವುದೇ ಕೀ ಅಥವಾ ರೀಡ್‍ಗಳ ಅಗತ್ಯವಿಲ್ಲದೆ ಕೇವಲ ಉಸಿರಿನ ಒತ್ತಡದಿಂದ ವಿವಿಧ ಶ್ರುತಿಗಳಲ್ಲಿ ಅತಿ ಮಂದ್ರದಿಂದ ಅತಿ ತಾರದವರೆಗೆ ಸಂಚರಿಸಬಲ್ಲ ಮಾನವ ಧ್ವನಿಪೆಟ್ಟಿಗೆಗೆ ಸಮನಾದ ಯಾವ ಸಂಗೀತೋಪಕರಣವನ್ನೂ ಇದುವರೆಗೆ ತಯಾರಿಸಲು ಸಾಧ್ಯವಾಗಿಲ್ಲ!

ಭಾರತೀಯ ಸಂಸ್ಕೃತಿಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಜ್ಞಾನ ಹರಿದು ಬರುತ್ತಿದ್ದುದು ಶ್ರುತಿ ಮತ್ತು ಸ್ಮೃತಿ ಅಂದರೆ ಆಲಿಸುವಿಕೆ ಮತ್ತು ನೆನಪಿಟ್ಟುಕೊಳ್ಳುವಿಕೆಯ ಮೂಲಕ.  ಲಿಪಿಯ ಆವಿಷ್ಕಾರ ಆದ ಮೇಲಷ್ಟೇ ಎಲ್ಲವನ್ನೂ ಬರಹದ ಮೂಲಕ ದಾಖಲಿಸುವ ಪರಿಪಾಠ ಆರಂಭವಾಯಿತು. ಸಂಗೀತವೂ ಇದಕ್ಕೆ ಹೊರತಲ್ಲ.  ನಮ್ಮಲ್ಲಿ ಸಪ್ತಸ್ವರಗಳ ಮೂಲಕ ಸಂಗೀತವನ್ನು ಅಕ್ಷರ ರೂಪಕ್ಕಿಳಿಸುವ  ರೀತಿಯಲ್ಲಿ ವ್ಯತ್ಯಾಸಗಳಿದ್ದು ನಮ್ಮ ಗುರು ಮಂಗಳೂರಿನ ಗೋಪಾಲಕೃಷ್ಣ ಐಯರ್ ಅವರು ಸಾಹಿತ್ಯ, ತಾಳ, ಕಾಲ ಎಲ್ಲವನ್ನೂ ಕರಾರುವಾಕ್ಕಾಗಿ ತೋರಿಸುವ  ಪದ್ಧತಿಯೊಂದನ್ನು ಅನುಸರಿಸುತ್ತಿದ್ದರು.  ಇದರಂತೆ ಆರೋಹಣ ಅವರೋಹಣದಲ್ಲಿ ವಿಕೃತಿ ಸ್ವರಗಳನ್ನು ಅಂಕೆಗಳೊಂದಿಗೆ ಬರೆಯಲಾಗುತ್ತದೆ. ಕೃತಿಯ ಮಧ್ಯದಲ್ಲೆಲ್ಲಾದರೂ ಅನ್ಯ ಸ್ವರದ ಪ್ರಯೋಗವಿದ್ದರೆ ಅದರ ಅಂಕೆಯನ್ನು ಅಲ್ಲೇ ಬರೆದು ಸೂಚಿಸಲಾಗುತ್ತದೆ.  ಸ್ವರವನ್ನು ಹಾಗೆಯೇ ಬರೆದರೆ ಮಧ್ಯ ಸಪ್ತಕ, ಮೇಲ್ಗಡೆ ಚುಕ್ಕಿ ಇಟ್ಟರೆ ತಾರ ಸಪ್ತಕ,  ಕೆಳಗೆ ಚುಕ್ಕಿ ಇಟ್ಟರೆ ಮಂದ್ರ ಸಪ್ತಕ, ಅಡಿಭಾಗದಲ್ಲಿ ಗೆರೆ ಎಳೆದರೆ ಎರಡನೇ ಕಾಲ, ಎರಡು ಗೆರೆ ಎಳೆದರೆ ಮೂರನೇ ಕಾಲ. ತಾಳದ ನಡೆಯನ್ನು ಸೂಚಿಸಲು ನೀಟ ಗೆರೆಗಳು. ಇದಕ್ಕಾಗಿ ಬಳಸಲ್ಪಡುವ ಚಿಹ್ನೆ ಇತ್ಯಾದಿಗಳು ಹೀಗಿರುತ್ತವೆ.

 

ಈ ಪದ್ಧತಿಯನ್ನುಪಯೋಗಿಸಿ ಬರೆದ ಎಂದರೋ ಮಹಾನುಭಾವುಲು ಕೃತಿಯ ಒಂದೆರಡು ಸಾಂಕೇತಿಕ ಸಂಗತಿಗಳ ಸ್ವರಲಿಪಿ ಇಲ್ಲಿದೆ. ಇದರಲ್ಲಿ ರಾಗದ ಹೆಸರು, ಆರೋಹಣ ಅವರೋಹಣ, ಮಧ್ಯ, ಮಂದ್ರ, ತಾರ ಸಪ್ತಕಗಳು, ಒಂದನೇ, ಎರಡನೇ, ಮೂರನೇ ಕಾಲಗಳು, ಎಲ್ಲ ಸ್ವರಗಳ ಕಾಲ ಪ್ರಮಾಣ ಒಟ್ಟುಗೂಡಿ ಪ್ರತೀ ಸಾಲಲ್ಲಿ 16  ಅಕ್ಷರಗಳಾಗಿರುವುದು ಎಲ್ಲವನ್ನೂ ಸ್ಪಷ್ಟವಾಗಿ ಗುರುತಿಸಬಹುದು. ಈ ಲಿಪಿಯನ್ನು ಸರಿಯಾಗಿ ಅರ್ಥೈಸಬಲ್ಲವರು ಇಲ್ಲಿದ್ದಂತೆ ನುಡಿಸಿದರೆ ಅಥವಾ ಹಾಡಿದರೆ ಈ ಸಾಲುಗಳು ರಾಗ ತಾಳ ಲಯಬದ್ಧವಾಗಿ ಟೇಪ್ ರೆಕಾರ್ಡರಿನಿಂದ ನುಡಿದಂತೆ ಮೂಡಿ ಬರುತ್ತವೆ.


ಈ ಪದ್ಧತಿಯಲ್ಲಿ ಯಾವ ಹಾಡಿನ ಸ್ವರಲಿಪಿಯನ್ನಾದರೂ ಬರೆಯಬಹುದು.  ಆದರೆ ಅದಕ್ಕೆ ಆ ಹಾಡಿನ ಆಧಾರ ಷಡ್ಜ ಯಾವುದೆಂದು ಮೊದಲು ಅರಿಯಬೇಕು.  ಹಾಡನ್ನು ಗುಣುಗುಣಿಸುತ್ತಾ ಮನದಲ್ಲೇ   ‘ಊಂ..... ’  ಎಂದು ದನಿ ಸೇರಿಸಿದರೆ  ಸುಲಭವಾಗಿ ಷಡ್ಜ ಸಿಗುತ್ತದೆ.  ಒಮ್ಮೆ ಷಡ್ಜ ಸಿಕ್ಕಿದರೆ ಇತರ ಸ್ವರಗಳನ್ನು ಗುರುತಿಸುತ್ತಾ ಹೋಗುವುದು ಕಷ್ಟವಲ್ಲ.  ನುರಿತ ಹಾಡುಗಾರರಿಗೆ  ಯಾವುದೇ ಧ್ವನಿಯನ್ನು ಕೇಳಿದಾಕ್ಷಣ ಸ್ವರಸ್ಥಾನವನ್ನು ಥಟ್ಟಂತ ಗುರುತಿಸುವ ಕಲೆ ಒಲಿದಿರುತ್ತದೆ. ನಾನು ಕೊಳಲಿನಲ್ಲಿ ನುಡಿಸಿ ಹಾಡಿನ ಆಧಾರ ಷಡ್ಜ ಮತ್ತು ಸ್ವರಸ್ಥಾನಗಳನ್ನು ಗುರುತಿಸುತ್ತೇನೆ.  ಆದರೆ ಕೆಲವು ಸಲ ಆಧಾರ ಷಡ್ಜ  ಗೊತ್ತಾದರೂ  ಹಾಡು ಯಾವ ಸ್ವರದಿಂದ ಆರಂಭವಾಗುತ್ತದೆ ಎಂಬುದರ ಬಗ್ಗೆ ಗೊಂದಲ ಉಂಟಾಗುವುದಿದೆ. ಕೆಲವು ಹಾಡುಗಳನ್ನು ಅದೇ ಶ್ರುತಿಯಲ್ಲಿ ಬೇರೆ ಬೇರೆ ಸ್ವರಗಳಿಂದ ಆರಂಭಿಸಿದರೂ ಕೇಳುವವರಿಗೆ ವ್ಯತ್ಯಾಸವೇನೂ ಗೊತ್ತಾಗುವುದಿಲ್ಲ.  ಆದರೆ ಸ್ವರಸ್ಥಾನಗಳು ಬೇರೆಯಾಗುತ್ತವೆ, ರಾಗವೂ ಬೇರೆಯಾಗುತ್ತದೆ.  ಭಕ್ತ ಕನಕದಾಸ ಚಿತ್ರಕ್ಕಾಗಿ ಎಂ. ವೆಂಕಟರಾಜು ಸಂಯೋಜಿಸಿದ ಬಾಗಿಲನು ತೆರೆದು ಹಾಡು ಇದಕ್ಕೊಂದು ಒಳ್ಳೆಯ ಉದಾಹರಣೆ. ಷಡ್ಜದಿಂದ ಆರಂಭಿಸಿದರೆ ಇದರ ಮುಖ್ಯ ರಾಗ ಹಿಂದೋಳವಾಗುತ್ತದೆ,  ಪಂಚಮದಿಂದ ಆರಂಭಿಸಿದರೆ ಶುದ್ಧ ಧನ್ಯಾಸಿಯಾಗುತ್ತದೆ.  ಆದರೆ ಹಿಂದೋಳವೆಂದು ತಿಳಿದರೆ ಸಂಚಾರವೆಲ್ಲ ತಾರ ಸಪ್ತಕದಲ್ಲೇ ಇರುವಂತಾಗುವುದರಿಂದ ಈ ಹಾಡಿನ ಮೂಡಿಗೆ ಮಧ್ಯ ಮತ್ತು ಮಂದ್ರ ಸಪ್ತಕಗಳಲ್ಲಿ ಸಂಚಾರ ಸಿಗುವ ಶುದ್ಧ ಧನ್ಯಾಸಿಯೇ ಸೂಕ್ತ ಎಂದು ನನ್ನ ಅನಿಸಿಕೆ.  ಶುದ್ಧ ಧನ್ಯಾಸಿಯಾದರೆ ಯಾವ ಸ್ವರಗಳ ಸಂಚಾರವಿರುತ್ತದೆ, ಹಿಂದೋಳವಾದರೆ ಯಾವುದಿರುತ್ತದೆ ಎಂದು ಹೋಲಿಸಲು ಎರಡೂ ರಾಗಗಳಲ್ಲಿ ಆ ಹಾಡಿನ ಪಲ್ಲವಿ ಭಾಗದ ಸ್ವರಲಿಪಿ  ಇಲ್ಲಿದೆ.



ಸರಳವಾದ ಲಘು ಶೈಲಿಯ ಹಾಡುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಾಹಿತ್ಯ ನೋಡಿ ಆಲಿಸಿ ಕಲಿಯುವುದು ಒಳ್ಳೆಯದು. ಶಾಶ್ವತ ದಾಖಲೆಯ ರೂಪದಲ್ಲಿ ರಕ್ಷಿಸಿಡಲು ಬೇಕಿದ್ದರೆ ಸ್ವರಲಿಪಿಯನ್ನೂ ಬರೆದಿಟ್ಟುಕೊಳ್ಳಬಹುದು.

ಪಾಶ್ಚಾತ್ಯ ಸಂಗೀತ ಪದ್ಧತಿಯಲ್ಲೂ ಸ್ಟಾಫ್ ನೊಟೇಶನ್ ಎಂದು ಕರೆಯಲಾಗುವ ಅತ್ಯುತ್ತಮ ಸ್ವರಲಿಪಿ ವಿಧಾನ ಇದೆ.  ಅದರಲ್ಲಿ ನಮ್ಮ ಪದ್ಧತಿಯಲ್ಲಿರುವ ಎಲ್ಲ ಅನುಕೂಲಗಳಲ್ಲದೆ ಹೆಚ್ಚುವರಿಯಾಗಿ 1/8, 1/16, 1/32, 1/64 ವರೆಗಿನ ಮಾತ್ರಾಕಾಲವನ್ನು ಗುರುತಿಸುವ ಸೌಲಭ್ಯವೂ ಇದೆ.  ನಮ್ಮ ಪದ್ಧತಿಯಲ್ಲಿ ಸಾಮಾನ್ಯವಾಗಿ ಇದನ್ನು 1/4ಕ್ಕಿಂತ ಹೆಚ್ಚು ವಿಭಜಿಸಲು ಹೋಗುವುದಿಲ್ಲ.  ಆದರೆ ನಮ್ಮ ಸ್ವರಲಿಪಿ ವಿಧಾನವು ಯಾವ ಆಧಾರ ಶ್ರುತಿಗೂ ಸಲ್ಲುವಂಥದ್ದಾಗಿದ್ದು ಪಾಶಾತ್ಯ ಪದ್ಧತಿಯಲ್ಲಿ ಶ್ರುತಿ ಬದಲಾದರೆ ಸಂಪೂರ್ಣ ನೊಟೇಶನ್ ಕೂಡ ಬದಲಾಯಿಸಬೇಕಾಗುತ್ತದೆ. C ಅಂದರೆ ಬಿಳಿ 1 ಶ್ರುತಿಯಲ್ಲಿ ರಾರವೇಣು ಗೋಪಾಬಾಲ ಸ್ವರಜತಿಯ ಮೊದಲ ಸಾಲಿಗೆ ಸ್ಟಾಫ್ ನೋಟೇಶನ್ ಬರೆದರೆ ಹೀಗಿರುತ್ತದೆ.


ಹಿಂದಿ ಚಿತ್ರಸಂಗೀತದ  ಉತ್ತುಂಗ ಕಾಲದಲ್ಲಿ ಬಹುತೇಕ ಸಂಗೀತ ನಿರ್ದೇಶಕರು ದೊಡ್ಡ ಆರ್ಕೆಷ್ಟ್ರಾಗಳನ್ನು ಬಳಸುತ್ತಿದ್ದುದರಿಂದ  ಸ್ವರಲಿಪಿ ಅನಿವಾರ್ಯವಾಗಿತ್ತು. 50-60ರ ದಶಕಗಳಲ್ಲಿ ಸಕ್ರಿಯರಾಗಿದ್ದ ಸಂಗೀತ ನಿರ್ದೇಶಕ ಮತ್ತು ಅರೇಂಜರ್ ಹಾಗೂ ಅನೇಕ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದ ವಿ. ಬಲ್ಸಾರಾ ಅವರು ಹೇಳುವಂತೆ ಆಗಿನ ಸಿನಿಮಾ ಆರ್ಕೆಷ್ಟ್ರಾಗಳಲ್ಲಿ  ಮೂರು ರೀತಿಯ ಕಲಾವಿದರಿದ್ದರು. ಗೋವಾ ಮೂಲದಿಂದ ಬಂದು ಪಾಶ್ಚಿಮಾತ್ಯ ಸ್ಟಾಫ್ ನೊಟೇಶನ್ ಬಳಸುವವರು, ಭಾರತದ ಇತರ ಪ್ರದೇಶದವರಾಗಿದ್ದು ತಮ್ಮ ಭಾಷೆಯಲ್ಲಿ ಬರೆದ ಭಾರತೀಯ ಪದ್ಧತಿಯ ಸ್ವರಾಧಾರಿತ ನೊಟೇಶನ್ ಬಳಸುವವರು ಹಾಗೂ ಶಾಸ್ತ್ರೀಯ ಸಂಗೀತ ಕ್ಷೇತ್ರದಿಂದ ಬಂದು ಯಾವುದೇ ನೋಟೇಶನ್ ಬಳಸದೆ ಹಾಗೇ ನೆನಪಿಟ್ಟುಕೊಂಡು ನುಡಿಸುವವರು. ಹರಿಪ್ರಸಾದ್ ಚೌರಾಸಿಯಾರಂಥ ಕಲಾವಿದರಿಗೆ ‘ನಿಮಗೆ ಸರಿ ಅನ್ನಿಸಿದ್ದನ್ನು ನುಡಿಸಿ’ ಎಂದು ಪೂರ್ತಿ ಸ್ವಾತಂತ್ರ್ಯ ಕೊಡುವ ಸಂಗೀತ ನಿರ್ದೇಶಕರೂ ಇದ್ದರು.  ಆಯೇ ದಿನ್ ಬಹಾರ್ ಕೇ ಚಿತ್ರದ ಸುನೋ ಸಜ್‍ನಾ ಪಪೀಹೆನೆ ಹಾಡಿನ  ಒಂದು ಕೊಳಲು ಪೀಸನ್ನು ಅವರು ಮನೋಧರ್ಮದಲ್ಲೇ ನುಡಿಸಿದ್ದಂತೆ.  ಹೆಚ್ಚಾಗಿ ಸಂಗೀತ ನಿರ್ದೇಶಕರ ಸಹಾಯಕರಾಗಿರುತ್ತಿದ್ದ ಅರೇಂಜರ್ಸ್ ನೊಟೇಶನ್ ಬರೆದು ಆರ್ಕೆಷ್ಟ್ರಾ ಕಲಾವಿದರಿಗೆ ಒದಗಿಸುವ ಕೆಲಸ ಮಾಡುತ್ತಿದ್ದರು.  ಅನೇಕ ಸಂಗೀತ ನಿರ್ದೇಶಕರು ತಮಗೆ ಹೊಳೆದ ಹೊಸ ಧಾಟಿಗಳನ್ನು ಲಿಖಿತ ರೂಪದಲ್ಲಿ ದಾಖಲಿಸಲು ಸಹಾಯಕರೊಬ್ಬರನ್ನು ಯಾವಾಗಲೂ ತಮ್ಮ ಜೊತೆಯೇ ಇರಿಸಿಕೊಳ್ಳುತ್ತಿದ್ದರು. ಆಗಿನ ಕಾಲದ ಗಾಯಕ ಗಾಯಕಿಯರು ನೋಟೇಶನ್ ಬಳಸುತ್ತಿರಲಿಲ್ಲ ಅನ್ನಿಸುತ್ತದೆ. ಮಹಮ್ಮದ್ ರಫಿ ಅವರು ತಮ್ಮ ಮನೆಗೆ ಬಂದು  ಹಾಡು ತನಗೆ ಮನದಟ್ಟಾಗುವ ವರೆಗೆ ರಿಹರ್ಸಲ್  ಮಾಡುತ್ತಿದ್ದ ಬಗ್ಗೆ ಅನೇಕ ಸಂಗೀತ ನಿರ್ದೇಶಕರು ಹೇಳಿದ್ದನ್ನು ನಾನು ಕೇಳಿದ್ದೇನೆ.  ಮತ್ತೆ ಪೂರ್ಣ ಆರ್ಕೆಷ್ಟ್ರಾದೊಡನೆ ಒಂದೆರಡು ರಿಹರ್ಸಲ್ ನಡೆಸಿದ ಮೇಲಷ್ಟೇ ಅವರು ರೆಕಾರ್ಡಿಂಗಿಗೆ   ಒಪ್ಪುತ್ತಿದ್ದರಂತೆ.  ಹೀಗಾಗಿಯೇ ಅವರ ಹಾಡುಗಳೆಲ್ಲ ಅಂದಿಗೂ ಇಂದಿಗೂ ಎಂದೆಂದಿಗೂ ಅಜರಾಮರ.  ಆದರೆ ಕನ್ನಡ ಚಿತ್ರಸಂಗೀತಕ್ಕೆ ಸಂಬಂಧಿಸಿದಂತೆ ಬೆಳ್ಳಿಪರದೆ ಹಿಂದಿನ ಇಂತಹ ಮಾಹಿತಿಗಳು ಜನಸಾಮಾನ್ಯರನ್ನು ಇನ್ನೂ ತಲುಪಿಲ್ಲ. ಅದರ ಒಳಹೊರಗನ್ನು ಬಲ್ಲ ಯಾರಾದರೂ ಈ ನಿಟ್ಟಿನಲ್ಲಿ  ಪ್ರಯತ್ನ ಮಾಡಿ ಇಲ್ಲಿಯ ಅರೇಂಜರ್ಸ್, ವಿವಿಧ ವಾದ್ಯಗಳನ್ನು ನುಡಿಸುತ್ತಿದ್ದ ಕಲಾವಿದರು, ಅವರು ನೊಟೇಶನ್ ಬರೆಯುತ್ತಿದ್ದ ರೀತಿ, ರೆಕಾರ್ಡಿಂಗ್ ನಡೆಯುತ್ತಿದ್ದ ಪದ್ಧತಿ   ಇವುಗಳೆಲ್ಲದರ  ಕುರಿತ ಮಾಹಿತಿಯನ್ನು ಅನಾವರಣಗೊಳಿಸುವ ಅಗತ್ಯವಿದೆ.

ಕೆಲವು ಅಪವಾದಗಳಿರಬಹುದಾದರೂ ಹಿಂದಿ ಮತ್ತು ದಕ್ಷಿಣ ಭಾರತ ಚಿತ್ರರಂಗದ ಎಲ್ಲ ಸಂಗೀತ ನಿರ್ದೇಶಕರಿಗೆ, ಗಾಯಕರಿಗೆ, ವಾದಕರಿಗೆ  ಆಳವಾದ ಶಾಸ್ತ್ರೀಯ ಸಂಗೀತ ಜ್ಞಾನ ಇತ್ತು ಎನ್ನಲಾಗುವುದಿಲ್ಲ. ಆದರೆ ಯಾವುದನ್ನು ಹೇಗೆ ಪ್ರಸ್ತುತಪಡಿಸಬೇಕೆಂಬ ಅರಿವು ಅವರಿಗಿದ್ದುದರಿಂದ ಚಿತ್ರಗಳಲ್ಲಿ ಬಂದ ಶಾಸ್ತ್ರೀಯ ರಾಗಾಧಾರಿತ ಗೀತೆಗಳೆಲ್ಲ ಗೆದ್ದಿವೆ. ಯಕ್ಷಲೋಕದ ಕಿನ್ನರರ ಕೃಪೆಯೂ ಅಂದಿನ ಕಲಾವಿದರ ಮೇಲಿದ್ದಿರಬಹುದು. ತನಗೆ ಶಾಸ್ತ್ರೀಯ ಸಂಗೀತದ ಓನಾಮವೂ ಗೊತ್ತಿಲ್ಲ ಎಂದು ಸ್ವತಃ ಹೇಳಿಕೊಳ್ಳುತ್ತಿದ್ದ ಓ.ಪಿ. ನಯ್ಯರ್ ನಿರ್ದೇಶನದಲ್ಲೂ ಕೆಲವು ಅತಿ  ಉತ್ಕೃಷ್ಟ ಶಾಸ್ತ್ರೀಯ ಗೀತೆಗಳು ಮೂಡಿಬಂದಿರುವುದು ಪರಮಾಶ್ಚರ್ಯವೇ ಸರಿ. ಶಾಸ್ತ್ರೀಯ ಸಂಗೀತವನ್ನು ಕ್ರಮಬದ್ಧವಾಗಿ ಕಲಿಯದೆಯೂ ಎಷ್ಟೋ ಮಂದಿ ಶ್ರುತಿ ಲಯಬದ್ಧವಾಗಿ ಹಾಡುವುದನ್ನು, ನುಡಿಸುವುದನ್ನು  ನಾವು ಇತರೆಡೆಗಳಲ್ಲಿಯೂ ಆಗಾಗ ಕಾಣುತ್ತೇವೆ. ಬೀದಿಬದಿಯಲ್ಲಿ ಹಾರ್ಮೋನಿಯಮ್ ನುಡಿಸುತ್ತಾ ಹಾಡುವ ಕೆಲವರ ಶ್ರುತಿಜ್ಞಾನ ಸಂಗೀತದಲ್ಲಿ  ಪದವಿ ಪಡೆದವರಿಗಿಂತ ಚೆನ್ನಾಗಿರುವುದುಂಟು.

ಹಾಗೆ ನೋಡುವುದಾದರೆ ನಾವು ಗುರುತಿಸಿದ ಏಳೋ ಹನ್ನೆರಡೋ  ಸ್ವರಗಳಿಂದ ಹೊರಡುವ ಗಾನ ಮಾತ್ರ ಸಂಗೀತವೆನ್ನಲಾಗದು.  ಹೆತ್ತ ಮಗುವಿನ ಮೊದಲ ಅಳು ತಾಯಿಗೆ ಸಂಗೀತವಾಗಬಹುದು, ಗುಡುಗಿನ ಗರ್ಜನೆ ಮಳೆಗಾಗಿ ಕಾತರಿಸಿದ ರೈತನ ಕಿವಿಗೆ ಸಂಗೀತವಾಗಬಹುದು,  ಶಾಲೆ ಬಿಡುವಾಗಿನ ಗಂಟೆಯ ಸದ್ದು ವಿದ್ಯಾರ್ಥಿಗೆ ಸಂಗೀತವಾಗಬಹುದು, ಹನ್ನೊಂದನೇ ಕಿಕ್ಕಿಗೆ ಬೈಕ್ ಸ್ಟಾರ್ಟ್ ಆದಾಗ  ಹೊರಡಿಸಿವ ಕರ್ಕಶ ಸದ್ದು ಅದರ ಒಡೆಯನಿಗೆ ಸಂಗೀತವಾಗಬಹುದು.  ಒಟ್ಟಿನಲ್ಲಿ ಎಲ್ಲೆಲ್ಲೂ ಸಂಗೀತವೇ ಇದೆ.  ಕೇಳುವ ಕಿವಿ ಇರಬೇಕು, ಆನಂದಿಸುವ ಮನ ಇರಬೇಕು ಅಷ್ಟೇ.

**********
ಈ ಲೇಖನವು ಉತ್ಥಾನ ಮಾಸಪತ್ರಿಕೆಯ ಅಗಸ್ಟ್ 2019ರ ಸಂಚಿಕೆಯಲ್ಲಿ ಪ್ರಕಟವಾಗಿದ್ದು ಅದನ್ನು ಇಲ್ಲಿ ಕ್ಲಿಕ್ಕಿಸಿ ಓದಬಹುದು.

ಉತ್ಥಾನ

ಉತ್ಥಾನದ ಕೆಲ ಪ್ರಾಜ್ಞ ಓದುಗರು ಈ  ಲೇಖನ ಮೆಚ್ಚಿ ಬರೆದ ಪತ್ರಗಳು ಇವು.

 

ಲೇಖನದಲ್ಲಿ ಪಾಶ್ಚಾತ್ಯ notationಗೆ ಉದಾಹರಣೆಯಾಗಿ ಮಾತ್ರ ಉಲ್ಲೇಖಿಸಲ್ಪಟ್ಟಿದ್ದ  ರಾರ ವೇಣು ಗೋಪಬಾಲ ಸ್ವರಜಿತ್ ಸಾಹಿತ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಎಸ್. ಕಾರ್ತಿಕ್ ಅವರೊಂದಿಗೆ facebookನಲ್ಲೂ ಸಂವಾದ ನಡೆದಿತ್ತು. ರಾರಾ ವೇಣುಗೋಪಾಲ ಎಂಬ ಪಾಠಾಂತರ  ಸಂಗೀತಕ್ಕೆ ಸಂಬಂಧಿಸಿದ ಯಾವುದಾದರೂ ಗ್ರಂಥದಲ್ಲಿ ದಾಖಲಾದದ್ದಿದೆಯೇ ಎಂಬುದನ್ನು ಅವರು ಸ್ಪಷ್ಟ ಪಡಿಸಲಿಲ್ಲ.

Monday, 10 March 2025

ಸಮಾನ ಹಗಲು ರಾತ್ರಿ, ಶುದ್ಧ ಪೂರ್ವದಲ್ಲಿ ಸೂರ್ಯೋದಯ ಮತ್ತು ಶೂನ್ಯ ನೆರಳು.



ಮಾರ್ಚ್ 20ರ ವಸಂತ ವಿಷುವತ್ ಮತ್ತು
ಸಪ್ಟಂಬರ 22ರ ಶರದ್ ವಿಷುವತ್ ದಿನಗಳಂದು 23.5 ಡಿಗ್ರಿ ಬಾಗಿರುವ ಭೂಮಿಯ ಉತ್ತರ ಮತ್ತು ದಕ್ಷಿಣ ಭಾಗಗಳೆರಡೂ ಸೂರ್ಯನಿಂದ ಸಮಾನ ದೂರದಲ್ಲಿರುವುದರಿಂದ ಎಲ್ಲೆಡೆ ಅಂದು ಸಮಾನ ಅವಧಿಯ ಹಗಲು ಮತ್ತು ರಾತ್ರಿ ಇರಬೇಕು. ಆದರೆ ವಾತಾವರಣದಲ್ಲಿ ಕಿರಣಗಳ ವಕ್ರೀಭವನದಿಂದಾಗಿ ಸೂರ್ಯನು ನಿಜವಾಗಿ ಉದಯಿಸುವುದಕ್ಕಿಂತ ಮೊದಲೇ ಉದಯಿಸಿದಂತೆ ಭಾಸವಾಗುವುದು ಮತ್ತು ಸಂಜೆ ನಿಜವಾಗಿ ಅಸ್ತನಾದ ಮೇಲೂ ಇನ್ನೂ ಸ್ವಲ್ಪ ಹೊತ್ತು ಕಾಣಿಸುವುದು ಹಾಗೂ ಸೂರ್ಯ ಗೋಲದ ಮೇಲ್ಭಾಗ ಪೂರ್ವ ದಿಗಂತದಲ್ಲಿ ಕಾಣಿಸುವುದನ್ನು ಉದಯ ಎಂದು ಹಾಗೂ ಗೋಲದ ಕೆಳಭಾಗ ಸಂಜೆಗಾಗುವಾಗ ಮೇಲ್ಭಾಗ ಆಗಿ ಪಶ್ಚಿಮದಲ್ಲಿ ಮರೆಯಾದ ಮೇಲಷ್ಟೇ ಅಸ್ತ ಎಂದು ಅನಿಸಿಕೊಳ್ಳುವುದರಿಂದ ಪ್ರತೀ ಹಗಲು ವಾಸ್ತವಕ್ಕಿಂತ ಕೆಲವು ನಿಮಿಷ ಹೆಚ್ಚಿನ ಅವಧಿ ಹೊಂದಿರುವಂತೆ ನಮಗೆ ಭಾಸವಾಗುತ್ತದೆ. ಹೀಗಾಗಿ ಹಗಲು ಹಿರಿದಾಗುತ್ತಾ ಹೋಗುವಾಗ ವಸಂತ ವಿಷುವತ್‌ಗಿಂತ ಕೆಲವು ದಿನ ಮೊದಲು ಮತ್ತು ಹಗಲು ಕಿರಿದಾಗುತ್ತಾ ಹೋಗುವಾಗ ಶರದ್ ವಿಷುವತ್‌ಗಿಂತ ಕೆಲವು ದಿನ ನಂತರ ಸಮಾನ ಅವಧಿಯ ಹಗಲು ರಾತ್ರಿಯ ದಿನ ಇರುತ್ತದೆ. ಆಯಾ ಸ್ಥಳದ ಅಕ್ಷಾಂಶ ಹೊಂದಿಕೊಂಡು ಈ ದಿನಗಳು ಬೇರೆ ಬೇರೆ ಆಗಿರುತ್ತವೆ. ಉತ್ತರ ಮತ್ತು ದಕ್ಷಿಣ ಗೋಲಾರ್ಧಗಳ ಕೆಲವು ಅಕ್ಷಾಂಶಗಳಲ್ಲಿ ಸಮಾನ ಅವಧಿಯ ಹಗಲು ರಾತ್ರಿಗಳಿರುವ ದಿನಾಂಕಗಳು ಇಲ್ಲಿವೆ. 12.9 ಉತ್ತರ ಅಕ್ಷಾಂಶದಲ್ಲಿರುವ ಮಂಗಳೂರು ಮತ್ತಿತರ ಸ್ಥಳಗಳಲ್ಲಿ ಮಾರ್ಚ್ 11 ಮತ್ತು ಅಕ್ಟೋಬರ್ 2ರಂದು ಸಮಾನ ದಿನ ರಾತ್ರಿಗಳಿರುತ್ತವೆ.

ಭೂಮಧ್ಯರೇಖೆ ಪ್ರದೇಶದಲ್ಲಿರುವ ಸ್ಥಳಗಳಲ್ಲಿ ಸಮಾನ ಹಗಲು ರಾತ್ರಿಗಳ ದಿನವೇ ಇಲ್ಲ. ಅಲ್ಲಿ ವರ್ಷ ಪೂರ್ತಿ 12 ಗಂಟೆ 06 ನಿಮಿಷ ಅವಧಿಯ ಹಗಲು.
ಶುದ್ಧ ಪೂರ್ವದಲ್ಲಿ ಸೂರ್ಯೋದಯ ಮತ್ತು ಶೂನ್ಯ ನೆರಳು.
ವರ್ಷವಿಡಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ ಚಲಿಸುವ ಸೂರ್ಯನು ವಸಂತ ವಿಷುವತ್ ಮತ್ತು ಶಿಶಿರ ವಿಷುವತ್ ದಿನಗಳಂದು ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಹೊರತುಪಡಿಸಿ ಭೂಮಿಯ ಎಲ್ಲೆಡೆ ಶುದ್ಧ ಪೂರ್ವದಲ್ಲಿ (90 ಡಿಗ್ರಿ) ಉದಯಿಸಿ ಶುದ್ಧ ಪಶ್ಚಿಮದಲ್ಲಿ (270 ಡಿಗ್ರಿ) ಅಸ್ತಮಿಸುತ್ತಾನೆ. ಹಾಗಿದ್ದರೆ ಆ ದಿನಗಳಂದು ನಡು ಮಧ್ಯಾಹ್ನ ಸೂರ್ಯ ನಡು ನೆತ್ತಿಯ ಮೇಲೆ ಬಂದು ಶೂನ್ಯ ನೆರಳು ಉಂಟಾಗುತ್ತದೆಯೇ ಎಂಬ ಪ್ರಶ್ನೆ ಬರುತ್ತದೆ. ಹಾಗಾಗುವುದಿಲ್ಲ ಎಂಬುದು ಇದಕ್ಕೆ ಉತ್ತರ. ಸೂರ್ಯ ಪೂರ್ವ ದಿಶೆಯಲ್ಲಿ ಉದಯಿಸಿ ನೂಲು ಹಿಡಿದಂತೆ ನೇರವಾಗಿ ಪಶ್ಚಿಮದತ್ತ ಸಾಗದೆ ಉತ್ತರ ಗೋಲಾರ್ಧದಲ್ಲಿ ದಕ್ಷಿಣದತ್ತ ಬಾಗಿರುವ, ದಕ್ಷಿಣ ಗೋಲಾರ್ಧದಲ್ಲಿ ಉತ್ತರದತ್ತ ಬಾಗಿರುವ ವಕ್ರ ದಾರಿಯಲ್ಲಿ ಸಾಗುವುದು ಇದಕ್ಕೆ ಕಾರಣ.

ಇಲ್ಲಿರುವ ಚಿತ್ರದಲ್ಲಿ 12.9 ಅಕ್ಷಾಂಶದ ಮಂಗಳೂರಿನಲ್ಲಿ ಮಾರ್ಚ್ 20ರಂದು ಸೂರ್ಯನು ಶುದ್ಧ ಪೂರ್ವದಲ್ಲಿ ಉದಯಿಸಿ ಶುದ್ಧ ಪಶ್ಚಿಮದಲ್ಲಿ ಅಸ್ತನಾದರೂ ನಡು ಮಧ್ಯಾಹ್ನ ದಕ್ಷಿಣದತ್ತ ಸರಿದಿರುವುದನ್ನು ಮತ್ತು ಎಪ್ರಿಲ್ 24ರಂದು ಶುದ್ಧ ಪೂರ್ವಕ್ಕಿಂತ ಉತ್ತರದಲ್ಲಿ ಉದಯಿಸಿ ಪಶ್ಚಿಮಕ್ಕಿಂತ ಉತ್ತರದಲ್ಲಿ ಅಸ್ತನಾದರೂ ಆತ ದಕ್ಷಿಣದತ್ತ ಬಾಗಿದ ಪಥದಲ್ಲಿ ಚಲಿಸಿ ನಡು ಮಧ್ಯಾಹ್ನ ನಡು ನೆತ್ತಿಯ ಮೇಲೆ ಬಂದು ಶೂನ್ಯ ನೆರಳು ಉಂಟಾಗುವುದನ್ನು ಕಾಣಬಹುದು. ಈ ವಿದ್ಯಮಾನ ವಿವಿಧ ದಿನಾಕಗಳಂದು ಮಕರ ವೃತ್ತ ಮತ್ತು ಕರ್ಕ ವೃತ್ತಗಳೊಳಗೆ ಇರುವ ಪ್ರದೇಶಗಳಲ್ಲಿ ಮಾತ್ರ ಘಟಿಸುತ್ತದೆ. ಶೂನ್ಯ ನೆರಳು ಉಂಟಾಗುವ ದಿನ ಆ ಸ್ಥಳದ ಅಕ್ಷಾಂಶ ಮತ್ತು ಭೂಮಧ್ಯ ರೇಖೆ ಹಾಗೂ ಸೂರ್ಯ ಕಿರಣಗಳ ನಡುವಿನ ಕೋನ (declination) ಒಂದೇ ಆಗಿರುತ್ತದೆ.

ಅಕ್ಷಾಂಶ ಹೆಚ್ಚಾದಂತೆ ಸೂರ್ಯನ ಪಥದ ಬಾಗು ಹೆಚ್ಚಾಗುವುದನ್ನು ದಕ್ಷಿಣದ ಸಿಡ್ನಿ ಮತ್ತು ಉತ್ತರದ ಮಾಸ್ಕೋಗೆ ಸಂಬಂಧಿಸಿದ ಚಿತ್ರಗಳಲ್ಲಿ ನೋಡಬಹುದು. ದಕ್ಷಿಣ ಗೋಲಾರ್ಧದ ಸಿಡ್ನಿಯಲ್ಲಿ ಸೂರ್ಯಪಥದ ಬಾಗು ಉತ್ತರಕ್ಕಿರುವುದನ್ನೂ ಗಮನಿಸಬಹುದು.


ಭೂಮಧ್ಯ ರೇಖೆಯ ಮೇಲೆ ಇರುವ ಪ್ರದೇಶಗಳಲ್ಲಿ ವಿಷುವತ್ ದಿನದಂದೇ ಶೂನ್ಯ ನೆರಳಿನ ದಿನ ಇರುತ್ತದೆ. ಏಕೆಂದರೆ ಅಲ್ಲಿ ಆ ದಿನ ಸೂರ್ಯ ಪೂರ್ವದಲ್ಲಿ ಉದಯಿಸಿ ನೇರ ದಾರಿಯಲ್ಲಿ ಪಶ್ಚಿಮಕ್ಕೆ ಸಾಗುತ್ತಾ ನಡು ಮಧ್ಯಾಹ್ನ ನೆತ್ತಿಯ ಮೇಲೆ ಬರುತ್ತಾನೆ.

- ಚಿದಂಬರ ಕಾಕತ್ಕರ್.


Saturday, 8 March 2025

ಮರೆಯಲ್ಲುಳಿದ ಮುದ ತುಂಬಿ ಮೆರೆವ ಮದುಮಗಳು



ಶಾರ್ಟ್ ವೇವ್ ವಿವಿಧಭಾರತಿಯಲ್ಲಿ ಅಪರಾಹ್ನ 4 ಗಂಟೆಯ ನಂತರ ಕರ್ನಾಟಕ್ ಸಂಗೀತ್ ಸಭಾದ  ಮಧುರ್ ಗೀತಂ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತೀಯ ಭಾಷೆಗಳ ಸಿನಿಮಾ ಹಾಡುಗಳು ಪ್ರಸಾರವಾಗುತ್ತಿದ್ದುದುದು ಹಳೆಯ ತಲೆಮಾರಿನವರಿಗೆ ಗೊತ್ತಿರುತ್ತದೆ. ಈ ಕಾರ್ಯಕ್ರಮ ಅಪರಾಹ್ನ 4 ಗಂಟೆಗೆ ಆರಂಭವಾಗಲು ಒಂದು ಕಾರಣ ಇದೆ. ರೇಡಿಯೋ ಸಿಲೋನಿನ ದಕ್ಷಿಣ ಭಾರತೀಯ ಕಾರ್ಯಕ್ರಮ ಆರಂಭವಾಗುತ್ತಿದ್ದುದು ಕೂಡ 4 ಗಂಟೆಗೆ. 1957ರಲ್ಲಿ ವಿವಿಧಭಾರತಿ ಜನ್ಮ ತಾಳಿದ್ದೇ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ರೇಡಿಯೋ ಸಿಲೋನನ್ನು counter  ಮಾಡುವುದಕ್ಕಾಗಿ! ಆದರೆ ಮುಂದಿನ ಅನೇಕ ದಶಕಗಳ ಕಾಲ ಇದು ಸಾಧ್ಯವಾಗಲಿಲ್ಲ ಅನ್ನುವುದು ಬೇರೆ ಮಾತು.

ಅದೇನೇ ಇರಲಿ.  ಈ ಕಾರ್ಯಕ್ರಮದಿಂದಾಗಿ  ನಮಗೆ ಕನ್ನಡ ಹಾಡುಗಳೊಂದಿಗೆ ಪಾಲುಂ ಪಳಮುಂ ಚಿತ್ರದ ನಾನ್  ಪೇಸ ನಿನೈಪದೆಲ್ಲಾಂ, ಕಲ್ಯಾಣ ಪರಿಸು ಚಿತ್ರದ ಉನ್ನೈ ಕಂಡು ನಾನಾಡ,  ಮಿಸ್ಸಿಯಮ್ಮ ಚಿತ್ರದ ಬೃಂದಾವನಮಿದಿ ಅಂದರಿದಿ ಗೋವಿಂದುಡು, ಚೆಮ್ಮೀನ್ ಚಿತ್ರದ ಕಡನಿಲಕ್ಕರೆ ಪೋಣೋರೆ ಮುಂತಾದ ತಮಿಳು, ತೆಲುಗು ಮತ್ತು ಮಲಯಾಳಂ ಹಾಡುಗಳ ಪರಿಚಯವೂ ಆಗುತ್ತಿತ್ತು. ಆಗ  ಎಲ್.ಆರ್.ಈಶ್ವರಿ ಹಾಡಿದ ವಾರಾಯನ್ ತೋಡಿ ವಾರಾಯೋ ಎಂಬ  ಪಾಶ ಮಲರ್ ತಮಿಳು ಚಿತ್ರದ  ಹಾಡು ನಮಗೆ ವಿಶೇಷ ಆಕರ್ಷಣೆ ಆಗಿತ್ತು.  ಇದಕ್ಕೆ ಕಾರಣ  ಆ ಹಾಡಿನ ಆಕರ್ಷಕ ನಡೆ ಮತ್ತು ಚರಣಗಳ ಮಧ್ಯೆ ಇದ್ದ ಶ್ರುತಿಬದ್ಧ ಮಂತ್ರಘೋಷ.  

1961ರ ಪಾಶ ಮಲರ್ 1965ರಲ್ಲಿ ವಾತ್ಸಲ್ಯ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ತಯಾರಾಯಿತು.  ಸಂಗೀತ ನಿರ್ದೇಶಕ ವಿಜಯಾ ಕೃಷ್ಣಮೂರ್ತಿ ಉಳಿದ ಹಾಡುಗಳಿಗೆ ಸ್ವಂತ ಧಾಟಿಗಳನ್ನು ಸಂಯೋಜಿಸಿದರೂ ವಾರಾಯನ್ ತೋಡಿ ವಾರಾಯೋ  ಸನ್ನಿವೇಶದ  ಮುದ ತುಂಬಿ ಮೆರೆವ ಮದುಮಗಳೇ ಹಾಡಿಗೆ ವಿಶ್ವನಾಥನ್ ರಾಮಮೂರ್ತಿ ಅವರ ಮೂಲ ಟ್ಯೂನನ್ನೇ ಉಳಿಸಿಕೊಂಡರು. ಸ್ವತಃ ಅರೇಂಜರ್ ಆಗಿದ್ದ ಅವರಿಗೆ ಹಾಡಿನ ಮರುಸೃಷ್ಟಿ  ಕಷ್ಟವೆನಿಸಲಿಲ್ಲ. ತಮಿಳು ಹಾಡನ್ನೂ ಮೀರಿಸುವಂತೆ ಕನ್ನಡದಲ್ಲೂ ಎಲ್.ಆರ್. ಈಶ್ವರಿಯೇ ಹಾಡಿದರು.  ಸೋರಟ್ ಅಶ್ವತ್ಥ್ ಅವರ ಅರ್ಥಪೂರ್ಣ, ಸರಳ, ಪ್ರಾಸಬದ್ಧ ಸಾಹಿತ್ಯ ಹಾಡಿಗೆ ಹೆಚ್ಚಿನ ಮೆರುಗು ನೀಡಿತು. 

ಗಿಟಾರಿನ ಝೇಂಕಾರದೊಡನೆ ಆರಂಭವಾಗುವ ಸುಮಾರು 30 ಸೆಕೆಂಡುಗಳ ತಾಳವಾದ್ಯ ರಹಿತ prelude ಮುಗಿದೊಡನೆ ಶ್ರುತಿಯಲ್ಲಿರುವ ಢೋಲಕಿನ ಎತ್ತುಗಡೆಯೊಂದಿಗೆ ಹಾಡಿನ ಪಲ್ಲವಿ ಆರಂಭವಾಗುತ್ತದೆ. ಕೋರಸ್ ಧ್ವನಿಯ  ಮೊದಲ ಎರಡು ಸಾಲು ಆದ ಮೇಲೆ ಎಲ್.ಆರ್. ಈಶ್ವರಿಯ ಕಂಚಿನ ಕಂಠದ ಪ್ರವೇಶವಾಗುತ್ತದೆ. ಪಲ್ಲವಿ ಮುಗಿಯುವ ಮೊದಲೇ ಹಿನ್ನೆಲೆಯಲ್ಲಿ ತವಿಲ್ ಮತ್ತು ನಾಗಸ್ವರ ನುಡಿಯತೊಡಗಿ ಪಲ್ಲವಿ ಮುಗಿಯುತ್ತಲೇ ಅದೇ ಹಿನ್ನೆಲೆಯೊಂದಿಗೆ ಮಂತ್ರಗಳು ಕೇಳಿಸುತ್ತವೆ. ನಂತರ ಗಿಟಾರ್ ಲಯದೊಂದಿಗೆ ಸಣ್ಣ BGM ಇದೆ.  ಚರಣ ಆರಂಭವಾಗುತ್ತಲೇ ಸಣ್ಣ ಉರುಳಿಕೆಯೊಂದಿಗೆ ಢೋಲಕ್ take over ಮಾಡುತ್ತದೆ. ಇಲ್ಲಿ ಪಲ್ಲವಿ ಭಾಗದ ದತ್ತು ಠೇಕಾ (ಹಿಂದಿಯ ದತ್ತಾರಾಂ ಪ್ರಚುರಪಡಿಸಿದ ಲಯ)  ಬೇರೆ ನಡೆಗೆ ಬದಲಾಗುತ್ತದೆ. ಚರಣದ ಕೊನೆಯ ಸಾಲುಗಳನ್ನು ಪುನರಾವರ್ತನೆ ಮಾಡಿದ ಕೋರಸ್ ದತ್ತು ಠೇಕಾದೊಂದಿಗೆ  ಪಲ್ಲವಿಯ ಮೊದಲ ಎರಡು ಸಾಲು ಹಾಡುತ್ತದೆ. ಪುನಃ ತವಿಲ್, ನಾಗಸ್ವರ ಹಿನ್ನೆಲೆಯ ಮಂತ್ರಗಳ ನಂತರ ಈ ಸಲ ಚಪ್ಪಾಳೆ ಲಯದೊಂದಿಗಿನ ಗಿಟಾರಿನೊಂದಿಗೆ ಸಖಿಯರ ನಗು ಮೇಳೈಸುತ್ತದೆ. ಮೊದಲ ಚರಣದಂತೆಯೇ ಎರಡನೆಯ ಚರಣ ಸಾಗುತ್ತದೆ. ಕೊನೆಗೆ ಗಟ್ಟಿ ಮೇಳದ ಜೊತೆಗೆ ಮಂತ್ರಗಳು ಮೊಳಗಿ ಮಾಂಗಲ್ಯಧಾರಣೆಯ ಚಿತ್ರ ಕಣ್ಣಮುಂದೆ ಮೂಡುತ್ತದೆ. 

ಮುದ ತುಂಬಿ ಮೆರೆವ ಮದುಮಗಳೇ ಮನದಾಸೆ ತೀರೆ ವೇಳೆ ಈ ವೇಳೆ ಎಂಬ ಪಲ್ಲವಿಯ ಮೊದಲ ಎರಡು ಸಾಲುಗಳನ್ನು ಮುಖ್ಯ ಗಾಯಕಿ ಒಮ್ಮೆಯೂ ಹಾಡುವುದಿಲ್ಲ!

ಆದರೆ ಈ ಚಂದದ ಹಾಡು  ಜನಸಾಮಾನ್ಯರನ್ನು ತಲುಪಲೇ ಇಲ್ಲ!  ಆಕಾಶವಾಣಿಯಲ್ಲಿ ಈ ಚಿತ್ರದ ಹಾಡುಗಳು ಪ್ರಸಾರವಾಗದೇ ಇದ್ದುದು ಇದಕ್ಕೆ ಕಾರಣ. ಈ ಹಾಡುಗಳ ಗ್ರಾಮಫೋನ್ ಡಿಸ್ಕುಗಳೇ ತಯಾರಾಗಿರಲಿಲ್ಲವೇನೋ ಎಂಬ ಅನುಮಾನ ನನ್ನಲ್ಲಿ ಮೂಡಿತ್ತು.  ಆದರೆ ಅನೇಕ ವರ್ಷಗಳ ನಂತರ ಮೈಸೂರಿನ ಚಂದ್ರು ಸೌಂಡ್ ಸಿಸ್ಟಂನವರಲ್ಲಿ ಈ ಹಾಡಿನ ಡಿಸ್ಕ್ ಇರುವುದು ತಿಳಿದು ಕ್ಯಾಸೆಟ್ಟಿನಲ್ಲಿ ರೆಕಾರ್ಡ್ ಮಾಡಿಸಿಕೊಂಡಿದ್ದೆ. ಬಹುಶಃ ಆಕಾಶವಾಣಿಗೆ ಹಾಡುಗಳ ಡಿಸ್ಕ್ ಒದಗಿಸುವ ಜವಾಬ್ದಾರಿ  ಹೊತ್ತಿದ್ದ ಮದರಾಸಿನ ಸರಸ್ವತಿ ಸ್ಟೋರ್‌ನವರ ಎಡವಟ್ಟಿನಿಂದ  ಹೀಗಾಗಿರಬಹುದು. ಲಾಯರ್ ಮಗಳು, ಬಂಗಾರಿ, ಬಾಲರಾಜನ ಕಥೆ ಮುಂತಾದ ಚಿತ್ರಗಳ ಹಾಡುಗಳು ಆಕಾಶವಾಣಿಯನ್ನು ತಲುಪದೇ ಇರಲೂ ಇದೇ ಕಾರಣ ಇರಬಹುದು.

ಮುದ ತುಂಬಿ ಬಂದ ಮದುಮಗಳೇ
ಚಿತ್ರ : ವಾತ್ಸಲ್ಯ.
ಗಾಯನ : ಎಲ್.ಆರ್. ಈಶ್ವರಿ ಮತ್ತು ಸಂಗಡಿಗರು.
ಸಂಗೀತ : ವಿಜಯಾ ಕೃಷ್ಣಮೂರ್ತಿ.
ಸಾಹಿತ್ಯ : ಸೋರಟ್ ಅಶ್ವತ್ಥ್.


ಹಾಡು ಕೇಳಲು ಬಾಣದ ಮೇಲೆ ಕ್ಲಿಕ್ಕಿಸಿ.





ಬಂಧುವರ್ಗದಲ್ಲಿ ನಡೆಯುವ ವಿವಾಹಗಳ ವೀಡಿಯೊದಲ್ಲಿ ಈ ಹಾಡನ್ನು ನಾನು ತಪ್ಪದೆ ಬಳಸುತ್ತೇನೆ.

ರಾಜಕುಮಾರ್ ಮತ್ತು ಲೀಲಾವತಿ ಅವರು ಅಣ್ಣ ತಂಗಿ ಪಾತ್ರಗಳಲ್ಲಿ ನಟಿಸಿದ ಏಕೈಕ ಚಿತ್ರ ವಾತ್ಸಲ್ಯ. ಅವರೊಂದಿಗೆ  ಉದಯಕುಮಾರ್, ಜಯಂತಿ, ನರಸಿಂಹರಾಜು ಮುಂತಾದವರು ಅಭಿನಯಿಸಿದ ವೈ.ಆರ್. ಸ್ವಾಮಿ ನಿರ್ದೇಶನವಿದ್ದ ಈ ಚಿತ್ರ ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.  


- ಚಿದಂಬರ ಕಾಕತ್ಕರ್.



Monday, 17 February 2025

ಮಾಸ ಋತುಗಳ ತಪ್ಪಿದ ತಾಳ


ಚಾಂದ್ರಮಾನ ಪ್ರಕಾರ ಚೈತ್ರ ವೈಶಾಖಗಳೆಂದರೆ ವಸಂತ ಋತು. ಸೌರಮಾನ ಪ್ರಕಾರ ಮೇಷ ವೃಷಭ ಮಾಸಗಳು ವಸಂತ ಋತು. ಆದರೆ ಪ್ರಕೃತಿ ಚಾಂದ್ರಮಾನ ಪಂಚಾಂಗವನ್ನೂ ನೋಡುವುದಿಲ್ಲ, ಸೌರಮಾನ ಪಂಚಾಂಗವನ್ನೂ ನೋಡುವುದಿಲ್ಲ. ಅದು ನೋಡುವುದು ಸೂರ್ಯನ ಸುತ್ತ ವಾರ್ಷಿಕ ಚಲನೆಯ ಪಥದಲ್ಲಿ ಭೂಮಿ ಎಲ್ಲಿದೆ ಎಂದು, ಅಥವಾ ಭೂಮಿಯಲ್ಲಿರುವ ನಾವು ಗ್ರಹಿಸುವಂತೆ ಸೂರ್ಯ ತನ್ನ ವಾರ್ಷಿಕ 360 ಡಿಗ್ರಿ ಚಲನೆಯಲ್ಲಿ ಈಗ ಎಲ್ಲಿದ್ದಾನೆ ಎಂದು ಮಾತ್ರ.
ಸೂರ್ಯ ಕ್ರಾಂತಿವೃತ್ತದಲ್ಲಿ ತನ್ನ ವಾರ್ಷಿಕ ಪರಿಭ್ರಮಣೆ ಆರಂಭಿಸುವ ಶೂನ್ಯ ಡಿಗ್ರಿಯ ವಸಂತ ವಿಷುವತ್ ಬಿಂದುವಿನಿಂದ 30 ಡಿಗ್ರಿ ಹಿಂದಕ್ಕೆ ಅಂದರೆ 270 ಡಿಗ್ರಿಯಲ್ಲಿ ಇರುವಾಗ (360-30=270) ಪ್ರಕೃತಿಯಲ್ಲಿ ವಸಂತದ ಲಕ್ಷಣಗಳು ಕಾಣಿಸತೊಡಗುತ್ತವೆ. ಇಲ್ಲಿಂದ ಮುಂದೆ ಚಲಿಸುತ್ತಾ ವಸಂತ ವಿಷುವತ್ ದಾಟಿ ಎಪ್ರಿಲ್ 20ಕ್ಕೆ 30 ಡಿಗ್ರಿ ಬಿಂದುವನ್ನು ತಲುಪುವ ವರೆಗೆ ವಸಂತ ಋತು. ಮುಂದೆ ಜೂನ್ 21ರ ವರೆಗೆ ಅತಿಯಾದ ಸೆಕೆಯ ಗ್ರೀಷ್ಮ ಋತು. ಅಗಸ್ಟ್ 23ರ ವರೆಗೆ ಮಳೆಯು ಇಳೆಯನ್ನು ತಂಪಾಗಿಸುವ ವರ್ಷಾ ಋತು. ನಂತರ ಅಕ್ಟೋಬರ್ 23ರ ವರೆಗೆ ಸಮ ಶೀತೋಷ್ಣದ ಶರದೃತು. ಆ ಮೇಲೆ ಡಿಸೆಂಬರ್ 22ರ ವರೆಗೆ ವಾತಾವರಣ ತಂಪಾಗುತ್ತಾ ಹೋಗುವ ಹೇಮಂತ ಋತು. ಕೊನೆಯಲ್ಲಿ ಫೆಬ್ರವರಿ 18ರ ವರೆಗೆ ಮೈ ಕೊರೆಯುವ ಚಳಿ ಇರಬೇಕಾದ ಶಿಶಿರ ಋತು. ಸೂರ್ಯನ ಸುತ್ತ ಭೂಮಿಯ ಪರಿಭ್ರಮಣವನ್ನು ಪರಿಗಣಿಸುವುದರಿಂದ ಇದು ಸಾಯನ (ಚಲನೆಯಿಂದೊಡಗೂಡಿದ) ಪದ್ಧತಿಯ ಲೆಕ್ಕಾಚಾರ.
ಹಾಗಿದ್ದರೆ ಪಂಚಾಂಗಗಳೊಂದಿಗಿನ ಋತುಗಳ ತಾಳ ಮೇಳ ಏಕೆ ತಪ್ಪಿತು? ಒಂದು ಕಾಲದಲ್ಲಿ ಉತ್ತರಾಯಣಾರಂಭದಂದು ದಶಂಬರದಲ್ಲಿ ಇರುತ್ತಿದ್ದ ಮಕರ ಸಂಕ್ರಾಂತಿ ಈಗ ಜನವರಿ ಮಧ್ಯಭಾಗಕ್ಕೆ ತಲುಪಲು ಕಾರಣವಾದ ಭೂಮಿಯ ಓಲಾಡುವಿಕೆಯಿಂದ ಉಂಟಾಗುವ recession of equinoxes ವಿದ್ಯಮಾನವೇ ಇದಕ್ಕೂ ಕಾರಣ. ಏಕೆಂದರೆ ಸೂರ್ಯನ ಸುತ್ತ ಭೂಮಿಯ ಚಲನೆಯನ್ನು ಗಣನೆಗೆ ತೆಗೆದುಕೊಳ್ಳದ ನಿರಯನ ಪದ್ಧತಿಯ ಸೌರಮಾನದಲ್ಲಿ ಮೇಷ ವೃಷಭಾದಿ ಎರಡು ಮಾಸಗಳಿಗೊಂದರಂತೆ ವಸಂತ ಗ್ರೀಷ್ಮಾದಿ ಋತುಗಳಿರುತ್ತವೆ. ನಿರಯನ ಪದ್ಧತಿಯ ಸೌರಮಾನದಲ್ಲಿ ಸೂರ್ಯನ ವಾರ್ಷಿಕ ಚಲನೆಯನ್ನು ಮೇಷ ರಾಶಿಯಿಂದ ಲೆಕ್ಕ ಹಾಕಲಾಗುತ್ತಿದ್ದು ಕಾಂತಿವೃತ್ತದಲ್ಲಿ ಅದರ ಆರಂಭ ಬಿಂದುವನ್ನು ಮೇಷಾದಿ ಅನ್ನಲಾಗುತ್ತದೆ. ಈಗ ಇದು ವಸಂತ ವಿಶುವತ್ ಬಿಂದುವಿಗಿಂತ ಸುಮಾರು 24.2 ಡಿಗ್ರಿ ಹಿಂದಕ್ಕಿದೆ. ಈ ವ್ಯತ್ಯಾಸವನ್ನು ಅಯನಾಂಶ ಎನ್ನುತ್ತಾರೆ. ಅಯನಾಂಶ ಗಣನೆಯ ಲಾಹಿರಿ, ರಾಮನ್ ಮುಂತಾದ ಬೇರೆ ಬೇರೆ ಪದ್ಧತಿಗಳಲ್ಲಿ ಏಕ ರೂಪತೆ ಇಲ್ಲ. ಬಹುತೇಕ ಆನ್ ಲೈನ್ ಪಂಚಾಂಗಗಳು ಲಾಹಿರಿ ಪದ್ಧತಿಯನ್ನು ಅನುಸರಿಸುತ್ತವೆ. ಕ್ರಿಸ್ತ ಶಕ 285ರಲ್ಲಿ ವಸಂತ ವಿಷುವತ್ ಮತ್ತು ಮೇಷಾದಿ ಬಿಂದುಗಳು ಒಂದೇ ಆಗಿದ್ದವು. ಅಂದರೆ ಆಗ ಅಯನಾಂಶ ಶೂನ್ಯವಾಗಿತ್ತು. ಆಗ ಉತ್ತರಾಯಣ ಆರಂಭ ಮತ್ತು ಮಕರ ಮಾಸ ಆರಂಭ ಒಟ್ಟಿಗೆ ಆಗುತ್ತಿತ್ತು. ವೇದಗಳ ಕಾಲವೆನ್ನಲಾದ ಕ್ರಿಸ್ತ ಪೂರ್ವ 1893ರಲ್ಲಿ ಮೇಷಾದಿ ಬಿಂದು ಸಾಯನ ಪದ್ಧತಿ ಪ್ರಕಾರ ವಸಂತ ಋತು ಆರಂಭ ಆಗುವ 330 ಡಿಗ್ರಿಯಲ್ಲಿ ಇತ್ತು. ಅಂದರೆ ಆಗ ಅಯನಾಂಶ ಮೈನಸ್ 30 ಡಿಗ್ರಿ. ವಸಂತ ವಿಷುವತ್ ವಸಂತ ಋತುವಿನ ಮಧ್ಯದಲ್ಲಿ ಬರುತ್ತಿತ್ತು. ಚಾಂದ್ರಮಾನಕ್ಕೂ ಪ್ರಕೃತಿಯ ಬದಲಾವಣೆಗಳಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಚಾಂದ್ರ ಮಾಸಗಳು ಸೌರ ಸಂಕ್ರಾಂತಿಗಳಿಗೆ ತಳುಕು ಹಾಕಿಕೊಂಡಿರುವುದರಿಂದ ಚೈತ್ರ ವೈಶಾಖ ವಸಂತ ಋತು, ಜ್ಯೇಷ್ಠ ಆಷಾಢ ಗ್ರೀಷ್ಮ ಋತು ಎಂದು ನಾವು ಸಂಜೆಯ ಬಾಯಿಪಾಠದಲ್ಲಿ ಹೇಳುತ್ತೇವೆ. ಇಲ್ಲಿ ಇನ್ನೊಂದು ಸ್ವಾರಸ್ಯವೂ ಇದೆ. ಚಾಂದ್ರ ಮಾಸದಲ್ಲಿ ಕಮ್ಮಿ ದಿನಗಳಿರುವುದರಿಂದ ವಸಂತ ಮಾಸ ಆರಂಭವಾಗುವ ಯುಗಾದಿಯು ಹಿಂದೆ ಬರುತ್ತಾ ಮೂರನೆಯ ವರ್ಷಕ್ಕಾಗುವಾಗ ನಿಜವಾದ ವಸಂತ ಆರಂಭವಾಗುವ ಫೆಬ್ರವರಿ 18ಕ್ಕೆ ಸಾಕಷ್ಟು ಸಮೀಪ ಬರುತ್ತದೆ. ಆದರೆ ಆ ವರ್ಷ ಅಧಿಕ ಮಾಸವೊಂದನ್ನು ಸೇರಿಸಿ ಮತ್ತೆ ಅದನ್ನು ಮುಂದೆ ದೂಡಲಾಗುವುದರಿಂದ ಚಾಂದ್ರ ಚೈತ್ರ ಆರಂಭವಾಗುವಷ್ಟರಲ್ಲಿ ನಿಜವಾದ ಗ್ರೀಷ್ಮ ಋತು ಆರಂಭವಾಗಲು ಕೆಲವೇ ದಿನಗಳು ಉಳಿದಿರುತ್ತವೆ. ಚೈತ್ರ ವೈಶಾಖಗಳ ವಸಂತ ಮುಗಿಯಲಿಕ್ಕಾಗುವಾಗ ಕೊಡೈಕ್ಕನಾಲ್, ಊಟಿಗಳಂತಹ ತಂಪು ಪ್ರದೇಶಗಳ ಹೊರತು ಬೇರೆಡೆ ವಸಂತದ ಯಾವ ಲಕ್ಷಣವೂ ಇರುವುದಿಲ್ಲ. ಸೆಕೆಗಾಲ, ಮಳೆಗಾಲ, ಚಳಿಗಾಲಗಳೂ ಋತುಗಳ ಅನುಸಾರ ಇರುವುದಿಲ್ಲ. 2020ರಿಂದ 2029ರ ವರೆಗಿನ ವರ್ಷಗಳ ಯುಗಾದಿ ದಿನಾಂಕಗಳು ಸಾಯನ ವಸಂತಾರಂಭದ ಸಮೀಪಕ್ಕೆ ಹೋಗುತ್ತಿರುವ ಚಾಂದ್ರ ಯುಗಾದಿಯನ್ನು ಅಧಿಕ ಮಾಸ ಹೇಗೆ ಮತ್ತೆ ದೂರಕ್ಕೊಯ್ಯುತ್ತದೆ ಎಂದು ಇಲ್ಲಿ ನೋಡಬಹುದು.
ಹೆಚ್ಚಿನ online ಪಂಚಾಂಗಗಳು ಫೆಬ್ರವರಿ 18ರಿಂದಲೇ ವಸಂತ ಋತು ಎಂದು ತೋರಿಸುತ್ತವೆ. ಡಿಸೆಂಬರ್ 22ರಿಂದಲೇ ಉತ್ತರಾಯಣಾರಂಭ ಎಂದು ಉಲ್ಲೇಖಿಸುವ ಕೆಲವು ಮುದ್ರಿತ ಸಾಂಪ್ರದಾಯಿಕ ಪಂಚಾಂಗಗಳು ಇವೆಯಾದರೂ ಋತುಗಳನ್ನು ತಿಂಗಳುಗಳಿಂದ ಮತ್ತು ಸಂಕ್ರಾಂತಿಗಳಿಂದ ಬೇರ್ಪಡಿಸಿ ಸೂರ್ಯನ ಚಲನೆಗೆ ಹೊಂದಿಸುವ ಹೊಸತನಕ್ಕೆ ಅವು ಯಾಕೋ ಇನ್ನೂ ಮುಂದಾಗಿಲ್ಲ. 

ಕುತೂಹಲಕಾರಿ ಅಂಶಗಳು.

  1. ಕ್ರಾಂತಿ ವೃತ್ತದಲ್ಲಿ (ecliptical) ಸೂರ್ಯನ ವಾರ್ಷಿಕ ಪಯಣ ಭೂಮಿಯಿಂದ ನೋಡಿದಂತೆ ಪಶ್ಚಿಮದಿಂದ ಪೂರ್ವಕ್ಕೆ ದಿನಕ್ಕೆ ಸುಮಾರು ಒಂದು ಡಿಗ್ರಿ. 30 ಡಿಗ್ರಿಯ ರಾಶಿಯನ್ನು ಒಂದು ತಿಂಗಳಲ್ಲಿ ಹಾದುಹೋಗುತ್ತಾನೆ.  12 ರಾಶಿಗಳನ್ನು ಕ್ರಮಿಸಿ ಮತ್ತೆ ಮೂಲ ಸ್ಥಾನಕ್ಕೆ ಬರಲು ಒಟ್ಟು 12 ತಿಂಗಳು. 
  2. ಇದರಿಂದಾಗಿ  ಆತನ ದೈನಿಕ ಪೂರ್ವ ಪಶ್ಚಿಮ ಪಯಣ ಕೊಂಚ ನಿಧಾನವಾದಂತೆನಿಸಿ ದಿನದ ಅವಧಿ 4 ನಿಮಿಷ ಹೆಚ್ಚಾಗುತ್ತದೆ. ಇದು ಪೂರ್ವದಿಂದ ಪಶ್ಚಿಮಕ್ಕೆ ವೇಗವಾಗಿ ಚಲಿಸುತ್ತಿರುವ ಟ್ರೈನಿನಲ್ಲಿ ಚಹಾ ಮಾರುವವನು ಪಶ್ಚಿಮದಿಂದ ಪೂರ್ವಕ್ಕೆ ನಡೆದುಕೊಂಡು ಹೋದಂತೆ! ಒಂದು ವೇಳೆ ಭೂಮಿ ಸೂರ್ಯನ ಸುತ್ತ ಚಲಿಸದಿರುತ್ತಿದ್ದರೆ ಅಂದರೆ ಪಶ್ಚಿಮದಿಂದ ಪೂರ್ವಕ್ಕೆ ಸೂರ್ಯನ ವಾರ್ಷಿಕ ಚಲನೆ ಇರದಿರುತ್ತಿದ್ದರೆ ದಿನದ ಅವಧಿ 23 ಗಂಟೆ  56 ನಿಮಿಷ ಆಗಿರುತ್ತಿತ್ತು.
  3. ಭೂಮಿ ತನ್ನ ಅಕ್ಷದಲ್ಲಿ ತಿರುಗದಿರುತ್ತಿದ್ದರೆ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ 6 ತಿಂಗಳಲ್ಲಿ ಪೂರ್ವದಲ್ಲಿ ಅಸ್ತನಾಗುತ್ತಿದ್ದ.
  4. ಭೂಮಿ ಸೂರ್ಯನ ಸುತ್ತ ತಿರುಗುವುದರಿಂದ ನಾವು ದಿನವೂ ಆತನ ಬೇರೆ ಬೇರೆ ಪಾರ್ಶ್ವ ನೋಡುವುದು. ಒಮ್ಮೆ ನೋಡಿದ ಪಾರ್ಶ್ವ ಮತ್ತೆ  ಕಾಣಿಸುವುದು ಒಂದು ವರ್ಷದ ನಂತರ.



- ಚಿದಂಬರ ಕಾಕತ್ಕರ್.

Friday, 14 February 2025

ಮನೆಯಲ್ಲಿ ಕಾರ್ ಸ್ಟೀರಿಯೊ

ಈಗ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಮಾದರಿಯ ರೇಡಿಯೋಗಳು ವೈವಿಧ್ಯಮಯ ದರಗಳಲ್ಲಿ ದೊರೆಯುತ್ತವೆ. ಆದರೆ ನಮ್ಮ ಅಭಿರುಚಿಯ ಕಾರ್ಯಕ್ರಮಗಳು ರೇಡಿಯೋದಲ್ಲಿ ಕೇಳಲು ಸಿಗುವುದು ಕಮ್ಮಿ. ನಮ್ಮಲ್ಲಿರುವ ಇತರ ಮೂಲಗಳ ಮನೋರಂಜನೆಯನ್ನೂ ರೇಡಿಯೋದಲ್ಲಿ ಕೇಳಲು ಆಗುವಂತಿರಬೇಕು. ಧ್ವನಿಯ ಗುಣಮಟ್ಟವೂ ಉತ್ತಮವಾಗಿರಬೇಕು. ಇದಕ್ಕೆ ನಾನು ಕಂಡು ಕೊಂಡ ಪರ್ಯಾಯ ಕಾರ್ ಸ್ಟೀರಿಯೊ.

12 ವೋಲ್ಟ್ ಬ್ಯಾಟರಿಯಲ್ಲಿ ಕಾರ್ಯಾಚರಿಸುವ ಕಾರ್ ಸ್ಟೀರಿಯೋವನ್ನು ಮನೆಯಲ್ಲೂ ಬಳಸಿ ಅದು ಒದಗಿಸುವ 20 watt ಶಕ್ತಿಯ ನಾಲ್ಕು ಸ್ಪೀಕರುಗಳ ಶಕ್ತಿಶಾಲಿ ಧ್ವನಿಯನ್ನು ಆನಂದಿಸಬಹುದು. ಬಾಹ್ಯ antenna ಜೋಡಿಸುವ ವ್ಯವಸ್ಥೆ ಇರುವುದರಿಂದ ಇದರ ರೇಡಿಯೋ ರಿಸೆಪ್ಷನ್ ಸಾಮರ್ಥ್ಯ ಅಧಿಕವಾಗಿರುತ್ತದೆ. ಉದ್ದ ವೈರೊಂದನ್ನು antenna ಆಗಿ ಬಳಸಿದರೆ ದೂರ ದೂರದ ನಿಲಯಗಳೂ ಕೇಳಿಸುತ್ತವೆ. ಹಳ್ಳಿ ಊರುಗಳಲ್ಲಿ electronic emission ಕಮ್ಮಿ ಇರುವುದರಿಂದ ಇನ್ನಷ್ಟು ಚೆನ್ನಾಗಿ ಕೇಳಿಸಬಹುದು. Bluetooth ಮತ್ತು Aux ಅನುಕೂಲವೂ ಇರುವುದರಿದ ಮೊಬೈಲಿನ ಶುಷ್ಕ ಧ್ವನಿಯನ್ನು ಶ್ರೀಮಂತಗೊಳಿಸಲು ಇದನ್ನು ಬಳಸಬಹುದು. USB ಇರುವುದರಿಂದ ಪೆನ್ ಡ್ರೈವಲ್ಲಿರುವ ಹಾಡುಗಳನ್ನೂ  ಆಲಿಸಬಹುದು. ಹಳೆಯ ಸೆಟ್ಟುಗಳಲ್ಲಿ CD ಪ್ಲೇಯರ್ ಕೂಡ ಇರುತ್ತಿತ್ತು. ಆದರೆ ಈಗ CDಗಳ ಕಾಲ ಮುಗಿಯುತ್ತಾ ಬಂದಿದೆ.

ಹಳೆ ಕಾರು ಮಾರುವಾಗ ಅದರ ಸ್ಟೀರಿಯೋ ತೆಗೆದಿಟ್ಟುಕೊಳ್ಳಬಹುದು. ಇಲ್ಲವಾದರೆ ಒಂದೆರಡು ಸಾವಿರ ರೂಪಾಯಿ ಅಂದಾಜಿಗೆ online ಮಾರ್ಕೆಟಲ್ಲಿ ಒಳ್ಳೆಯ ಸೆಟ್ ಸಿಗುತ್ತದೆ.

ಆದರೆ ಇದು plug and play; ಅಂದರೆ ತಂದ, ಕನೆಕ್ಟ್ ಮಾಡಿದ, ಕೇಳಿದ ಮಾದರಿಯದ್ದಲ್ಲ. ವಯರುಗಳ ಕಲರ್ ಕೋಡ್ ಪ್ರಕಾರ ಸ್ಪೀಕರುಗಳನ್ನು  ಮತ್ತು 12 volt ಪವರನ್ನು ನಾವೇ ಕನೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ. 

ಸ್ಪೀಕರ್ ಜೋಡಣೆ. ಕಾರಿನಲ್ಲಿ ಬಳಸುವ ಸ್ಪೀಕರುಗಳೇ ಆದರೆ ಅವುಗಳನ್ನು ಇರಿಸಲು ಮರದ ಪೆಟ್ಟಿಗೆಯೋ ಅಥವಾ ಸೂಕ್ತವಾದ ಬೇರೆ ವ್ಯವಸ್ಥೆಯೋ ಮಾಡಿಕೊಳ್ಳಬೇಕು. ಮಡಕೆಯ ಬಾಯಿಯ ಮೇಲೆ ಸ್ಪೀಕರನ್ನು ಇರಿಸಿದರೆ ಹೆಚ್ಚಿನ ಬಾಸ್ ಎಫೆಕ್ಟ್ ಸಿಗುತ್ತದೆ. ಮನೆಯಲ್ಲಿದ್ದ ಸೌಂಡ್ ಸಿಸ್ಟಮಿನ ಹಳೆಯ ಸ್ಪೀಕರುಗಳಾದರೆ ನೇರವಾಗಿ ಬಳಸಬಹುದು. 20 watt / 8 ohm ಸಾಮರ್ಥ್ಯದವುಗಳಾದರೆ ಒಳ್ಳೆಯದು. ನಾನು ಕಾರ್ ಸ್ಪೀಕರ್ ಮತ್ತು ಹಳೆಯ Sony ಸೌಂಡ್ ಸಿಸ್ಟಮಿನ ಸ್ಪೀಕರುಗಳನ್ನು ಬಳಸಿದ್ದೇನೆ. ಕಲರ್ ಕೋಡ್ ಪ್ರಕಾರ ವಯರ್ ಜೋಡಿಸಿ ಇನ್ಸುಲೇಶನ್ ಟೇಪ್ ಸುತ್ತಬೇಕು. ಇಲ್ಲಿ ಹಿಂದೆ, ಮುಂದೆ, ಎಡ , ಬಲ ಎಂದೆಲ್ಲ ಉಲ್ಲೇಖಿಸಿದ್ದರೂ ನಮ್ಮ ಅನುಕೂಲದ ಪ್ರಕಾರ ಸ್ಪೀಕರುಗಳನ್ನು ಎಲ್ಲೂ ಇರಿಸಬಹುದು. ಅಷ್ಟೂ ಸ್ಪೀಕರುಗಳು ಬೇಕೆಂದೇನೂ ಇಲ್ಲ ಒಂದು ಇದ್ದರೂ ಸಾಕಾಗುತ್ತೆದೆ.

ಪವರ್ ಜೋಡಣೆ. ಇಲ್ಲಿ ಎಚ್ಚರಿಕೆಯಿಂದ ವಯರುಗಳ ಬಣ್ಣ ಗಮನಿಸಿ ಜೋಡಿಸುವುದು ಬಲು ಮುಖ್ಯ.
12 volt ಪವರಿಗೆ 3 ಆಯ್ಕೆಗಳಿವೆ.

1. ಮನೆಯ ಇನ್ವರ್ಟರ್ ಬ್ಯಾಟರಿ ಬಳಸುವುದು. ಮನೆಯ inverter ಬಳಿಯಲ್ಲೇ  ಇದನ್ನು ಇರಿಸುವ ಅನುಕೂಲ ಇದ್ದರೆ ಅದರ ಬ್ಯಾಟರಿಯನ್ನೇ ಬಳಸಬಹುದು. ಕೆಂಪು ವಯರನ್ನು ಬೆಡ್ ಸ್ವಿಚ್ ಮೂಲಕ ಜೋಡಿಸಬೇಕು. ಇದನ್ನು ಬೇಕಿದ್ದಾಗ ಮಾತ್ರ ಆನ್ ಮಾಡಿಕೊಂಡು ಉಪಕರಣವನ್ನು ಬಳಸದಿರುವಾಗ ಆಫ್ ಮಾಡಬೇಕು.

2. 12 volts DC adapter ಬಳಸುವುದು. ಬೇರೆಡೆ ಬೇಕೆಂದಾದರೆ 10 amps ಸಾಮರ್ಥ್ಯದ 12 volts DC adapter ಬಳಸಬಹುದು. ಕೆಂಪು ಮತ್ತು ಹಳದಿ ವಯರುಗಳನ್ನು ಒಟ್ಟಿಗೆ ಸೇರಿಸಿ Adapterನ ಪೊಸಿಟಿವ್‌ಗೆ ಜೋಡಿಸಬೇಕು. ಬೇಕಿದ್ದಾಗ ಮಾತ್ರ ಎಡಾಪ್ಟರ್ ಆನ್ ಮಾಡಿ ಉಪಯೋಗಿಸದಿರುವಾಗ ಆಫ್ ಮಾಡಬೇಕು. ಈ ಪದ್ಧತಿಯಲ್ಲಿ ಸೆಟ್ಟಿಂಗ್ಸ್ ಮೆಮೊರಿ ಉಳಿಯುವುದಿಲ್ಲ.

3. ಬ್ಯಾಟರಿ backupನೊಂದಿಗೆ 12 volts DC adapter ಬಳಸುವುದು.
Adapter ಸ್ವಿಚ್ ಆಫ್ ಮಾಡಿದರೂ memory settings  ಉಳಿಯಬೇಕಾದರೆ ಸಣ್ಣ 12 volt chargeable ಬ್ಯಾಟರಿಯನ್ನು parallel ಆಗಿ  ಕನೆಕ್ಟ್ ಮಾಡಬೇಕು. ಚಿತ್ರದಲ್ಲಿ ತೋರಿಸಿದಂತೆ 10 Ohm 5 Watt Resitance ಮತ್ತು IN 5408 ಡಯೋಡುಗಳನ್ನೂ ಬಳಸಬೇಕು. ಇವನ್ನೆಲ್ಲ solder ಮಾಡಿ ಜೋಡಿಸಬೇಕೆಂದಿಲ್ಲ. ವಯರುಗಳೊಂದಿಗೆ twist ಮಾಡಿ ಇನ್ಸುಲೇಷನ್ ಟೇಪ್ ಬಳಸಿ ಭದ್ರಗೊಳಿಸಿದರೆ ಸಾಕು. ಕೆಂಪು ವಯರಿಗೆ ಕನೆಕ್ಟ್ ಮಾಡಿದ ಬೆಡ್ ಸ್ವಿಚ್ಚನ್ನು ಬೇಕಿದ್ದಾಗ ಮಾತ್ರ ಆನ್ ಮಾಡಬೇಕು. ಈ ಸ್ವಿಚ್ ಮತ್ತು adapterನ ಸಪ್ಲೈ ಆಫ್ ಮಾಡಿದರೂ ಸಣ್ಣ ಬ್ಯಾಟರಿಯು ಹಳದಿ ವಯರಿನ ಮೂಲಕ ಪವರ್ ಒದಗಿಸುವುದರಿಂದ ಸೆಟ್ಟಿಂಗ್ಸ್ ಮೆಮೊರಿ ಉಳಿಯುತ್ತದೆ. ಆದರೆ ಎಡಾಪ್ಟರ್ ಆಫ್ ಇರುವಾಗ ಕೆಂಪು ವಯರಿನ ಬೆಡ್ ಸ್ವಿಚ್ಚನ್ನು ಆನ್ ಮಾಡಬಾರದು. ಹಾಗೆ ಮಾಡಿದ್ದೇ ಆದರೆ ಸಣ್ಣ ಬ್ಯಾಟರಿಯು drain ಆಗಿ ಹೋದೀತು.

ನಾನು ಹಳೆಯ ಕಾರಿನಲ್ಲಿದ್ದ Pioneer ಸೆಟ್ಟನ್ನು ಮನೆಯ hallನಲ್ಲಿ ರೇಡಿಯೊ ನಿಲಯಗಳನ್ನಾಲಿಸಲು, DD Free Dishನ ಆಡಿಯೊ ಕೇಳಲು ಹಾಗೂ bluetooth ಮೂಲಕ ಮೊಬೈಲ್ ಕನೆಕ್ಟ್ ಮಾಡಿಕೊಳ್ಳಲು ಬಳಸುತ್ತೇನೆ. ಇದಕ್ಕೆ ನಂಬರ್ 3 ರೀತಿಯ ಪವರ್ ವ್ಯವಸ್ಥೆ ಮಾಡಿದ್ದೇನೆ.

ಹೊಸದಾಗಿ ಖರೀದಿಸಿದ Blaupunkt ಸೆಟ್ಟೊಂದನ್ನು bedroomನಲ್ಲಿ ಮಧ್ಯಾಹ್ನ ಊಟದ ನಂತರ ಕೊಂಚ ಹೊತ್ತು ವಿರಮಿಸುವಾಗ ಮೊಬೈಲಿಗೆ ಅಳವಡಿಸಿದ FM Transmitter ಮೂಲಕ ಮುಂಬಯಿ ವಿವಧ ಭಾರತಿ ಆಲಿಸಲು ಬಳಸುತ್ತಿದ್ದೇನೆ. ಎರಡು ಗಂಟೆಗೆ ಎಲ್ಲ ನಿಲಯಗಳಿಗೆ ಹಿಂದಿ ಮತ್ತು ಇಂಗ್ಲಿಷ್ ವಾರ್ತೆಗಳ ಸಮೂಹ ಸನ್ನಿಯ attack ಆಗುತ್ತದೆ. ಆಗ ರೆಕಾರ್ಡೆಡ್ ಹಾಡುಗಳನ್ನು ಕೇಳುತ್ತೇನೆ. ಇಲ್ಲಿ ನಾನು ಬಳಸುವುದು ನಂಬರ್ 1 ಮಾದರಿಯ inverter ಬ್ಯಾಟರಿ ಪವರ್.

ಮನೆಯಲ್ಲಿ ಕಾರ್ ಸ್ಟೀರಿಯೊ ಬಳಸುವವರು ಇನ್ನೂ ಅನೇಕರಿರಬಹುದು. ಆದರೆ ಎರಡು ಸೆಟ್ ಬಳಸುವುದು ನಾನೊಬ್ಬನೆಯೋ ಏನೋ!

ಒಟ್ಟಿನಲ್ಲಿ 50-60 ಸಾವಿರ ಬೆಲೆ ಬಾಳುವ ಆಧುನಿಕ ಸೌಂಡ್ ಸಿಸ್ಟಂಗಳಿಗೆ ಹೋಲಿಸಿದರೆ ಇದರಲ್ಲಿ  ಹಿಂದಿನ ಕಾಲದ ಅನಲಾಗ್ ಧ್ವನಿ ಮತ್ತು ಈಗಿನ ಡಿಜಿಟಲ್ ಧ್ವನಿ ಎರಡೂ  ತುಂಬಾ ಚೆನ್ನಾಗಿ ಕೇಳಿಸುತ್ತದೆ  ಎಂದು ನನ್ನ ಅನುಭವ.


- ಚಿದಂಬರ ಕಾಕತ್ಕರ್.





Saturday, 8 February 2025

ಭೀಷ್ಮ ನಿರ್ಯಾಣ ಮತ್ತು ಉತ್ತರಾಯಣ

 

ಅರ್ಜುನ ಪ್ರಯೋಗಿಸಿದ ಬಾಣಗಳಿಂದ ಜರ್ಜರಿತರಾದ ಭೀಷ್ಮಾಚಾರ್ಯರು ಉತ್ತರಾಯಣದ ನಿರೀಕ್ಷೆಯಲ್ಲಿ ಶರಶಯ್ಯೆಯ ಮೇಲೆ ಪವಡಿಸಿದ್ದರು ಎಂದು ಕಥೆಗಳಲ್ಲಿ ಓದಿ ಗೊತ್ತಿತ್ತು. ಮಾಘ ಶುಕ್ಲ ಅಷ್ಟಮಿ ತಿಥಿಯು ಭೀಷ್ಮಾಷ್ಟಮಿ ಎಂದು ಕರೆಯಲ್ಪಡುತ್ತದೆ, ಆ ದಿನವೇ ಅವರು ದೇಹತ್ಯಾಗ ಮಾಡಿದ್ದು ಎಂಬ ವಿಚಾರದತ್ತ ನಾನು ಗಮನ ಹರಿಸಿರಲಿಲ್ಲ. ಬಲ್ಲವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಅನುಶಾಸನ ಪರ್ವದಲ್ಲಿ ಹೀಗೊಂದು ಶ್ಲೋಕ ಇರುವುದು ತಿಳಿಯಿತು..
ದಿಷ್ಟ್ಯಾ ಪ್ರಾಪ್ತೋsಸಿ ಕೌಂತೇಯ ಸಹಾಮಾತ್ಯೋ ಯುಧಿಷ್ಠಿರ l
ಪರಿವೃತ್ತೋ ಹಿ ಭಗವಾನ್ ಸಹಸ್ರಾಂಶುರ್ದಿವಾಕರ:ll
ಅಷ್ಟಪಂಚಾಶತಂ ರಾತ್ರ್ಯ: ಶಯಾನಸ್ಯಾಧ್ಯ ಮೇ ಗತಾ:l
ಶರೇಷು ನಿಶಿತಾಗ್ರೇಷು ಯಥಾ ವರ್ಷ ಶತಂ ತಥಾ ll
ಮಾಘೋsಯಂ ಸಮನುಪ್ರಾಪ್ತೋ ಮಾಸ: ಸೌಮ್ಯೋ(ಪುಣ್ಯೇ) ಯುಧಿಷ್ಠಿರ: l
ತ್ರಿಭಾಗ ಶೇಷ ಪಕ್ಷೋsಯಂ ಶುಕ್ಲೋ ಭವಿತು ಮರ್ಹತಿ ll
"ನಾನು ಶರಶಯ್ಯೆಯಲ್ಲಿ ಮಲಗಿ ಐವತ್ತೆಂಟು ದಿವಸಗಳಾಯಿತು. ಈಗ ಸೂರ್ಯನು ಉತ್ತರಕ್ಕೆ ತಿರುಗಲು ಆರಂಭಿಸಿದ್ದಾನೆ. (ಉತ್ತರಾಯಣ ಆರಂಭವಾಗಿದೆ.) ಮಾಘ ಮಾಸದ ನಾಲ್ಕು ಭಾಗಗಳಲ್ಲಿ ಮೂರು ಭಾಗ ಉಳಿದಿದೆ. (ಇದು ಮಾಘಶುಕ್ಲದ ಅಷ್ಟಮಿಯ ತಿಥಿಯಾಗಿದೆ.) ನನ್ನ ಸಂಕಲ್ಪದ ಪ್ರಕಾರ ಈಗ ನಾನು ದೇಹತ್ಯಾಗ ಮಾಡುತ್ತೇನೆ." ಎಂದು ಇದರ ಭಾವಾರ್ಥವಂತೆ.

ಇದನ್ನು ನೋಡಿದಾಗ ಉತ್ತರಾಯಣ ಆರಂಭವಾಗಿ ಎಷ್ಟೊ ಸಮಯದ ನಂತರ ಬರುವ ಮಾಘ ಶುಕ್ಲ ಅಷ್ಟಮಿ ತನಕ ಭೀಷ್ಮಾಚಾರ್ಯರು ಏಕೆ ಶರಶಯ್ಯೆಯಲ್ಲೇ ಇದ್ದರು ಎಂಬ ಪ್ರಶ್ನೆ ನನ್ನಲ್ಲಿ ಉದ್ಭವಿಸಿತು. ಒಂದು ಕಾಲಕ್ಕೆ ಉತ್ತರಾಯಣ ಆರಂಭದಂದೇ ಇರುತ್ತಿದ್ದ ಮಕರ ಸಂಕ್ರಾಂತಿ ಕ್ರಮೇಣ ಮುಂದೆ ಜರಗುತ್ತಾ ಬಂದುದು ನನಗೆ ಗೊತ್ತಿತ್ತು. ಈ ಬಗ್ಗೆ ಮತ್ತಷ್ಟು ಯೋಚಿಸಿದಾಗ ಚಾಂದ್ರ ಮಾಸಗಳೊಂದಿಗೆ ಸೌರಮಾಸಗಳು ತಳಕು ಹಾಕಿಕೊಂಡಿರುವ ಚಾಂದ್ರಸೌರ ಸಂಯುಕ್ತ ಪದ್ಧತಿಯನ್ನು ನಾವು ಅನುಸರಿಸುತ್ತಿರುವ ವಿಚಾರ ಹೊಳೆಯಿತು.

ಪ್ರತೀ ಚಾಂದ್ರ ಮಾಸದಲ್ಲೂ ಒಂದು ಸಂಕ್ರಾಂತಿ ಇರಬೇಕು. ಅಷ್ಟೇ ಅಲ್ಲ, ಚೈತ್ರದಲ್ಲಿ ಮೇಷ ಸಂಕ್ರಾಂತಿ, ವೈಶಾಖದಲ್ಲಿ ವೃಷಭ ಸಂಕ್ರಾಂತಿ, ಈ ರೀತಿ ಮುಂದುವರಿಯುತ್ತಾ ಫಾಲ್ಗುಣದಲ್ಲಿ ಮೀನ ಸಂಕ್ರಾಂತಿಯೇ ಇರಬೇಕು ಎಂಬ ನಿಯಮವೂ ಪಾಲಿಸಲ್ಪಡುತ್ತಿದೆ. ಈ ತಾಳ ಮೇಳ ತಪ್ಪಿದರೆ ಅಧಿಕ ಮಾಸ, ಕ್ಷಯ ಮಾಸಗಳ ಮೂಲಕ ಅದನ್ನು ಸರಿಪಡಿಸಲಾಗುತ್ತದೆ. ಹೀಗಾಗಿ ಭೂಮಿಯ ಓಲಾಡುವಿಕೆಯಿಂದಾಗಿ ಮಕರ ಸಂಕ್ರಾಂತಿ ಮತ್ತು ಇತರ ಸಂಕ್ರಾಂತಿಗಳು ಮುಂದಕ್ಕೆ ಜರಗುವಾಗ ಅವುಗಳೊಂದಿಗೆ ಸಂಬಂಧ ಕಲ್ಪಿಸಲಾಗಿರುವ ಚಾಂದ್ರ ಮಾಸಗಳೂ ಮುಂದೆ ಜರಗುತ್ತಿವೆ. ಇದೇ ಕಾರಣಕ್ಕೆ ಉತ್ತರಾಯಣ ಈಗ ಮಾರ್ಗಶಿರ / ಪುಷ್ಯ ಮಾಸಗಳಲ್ಲಿ ಆರಂಭವಾಗುವುದಾದರೂ ಸಾವಿರಾರು ವರ್ಷ ಹಿಂದೆ ಮಾಘ / ಫಾಲ್ಗುಣ ಮಾಸಗಳಲ್ಲೂ ಆರಂಭವಾಗುತ್ತಿತ್ತು. ಸಂಕ್ರಾಂತಿಗಳು ಋತುಮಾನಗಳಿಗೆ ಕಾರಣವಾದ ಸೂರ್ಯನ ಉತ್ತರ ದಕ್ಷಿಣ ಚಲನೆಯನ್ನು ಅನುಸರಿಸದೆ ಮೇಷಾದಿ ರಾಶಿಗಳಲ್ಲಿ ಅವನ ಚಲನೆಯನ್ನು ಹೊಂದಿಕೊಂಡಿರುವುದರಿಂದ ಅವುಗಳೊಂದಿಗೆ ತಳುಕು ಹಾಕಿಕೊಂಡಿರುವ ಚಾಂದ್ರ ಮಾಸಗಳೂ ಋತುಗಳ ಸಂಬಂಧ ಕಳೆದುಕೊಂಡಿವೆ ಈಗಿರುವಂತೆ ಮೇಷ ಸಂಕ್ರಾಂತಿಗಿಂತ ಮುಂಚಿನ ಅಮಾವಾಸ್ಯೆಯ ನಂತರ ಚೈತ್ರಮಾಸ ಆರಂಭವಾಗುವ ಬದಲು ವಸಂತ ವಿಷುವತ್ ದಿನವಾದ ಮಾರ್ಚ್ 21ಕ್ಕಿಂತ ಮುಂಚಿನ ಅಮಾವಾಸ್ಯೆಯ ನಂತರ ಚೈತ್ರ ಆರಂಭವಾಗುವಂತಾದರಷ್ಟೇ ಚೈತ್ರ ವೈಶಾಖಗಳು ನಿಜವಾದ ವಸಂತ ಋತು ಎನಿಸಿಯಾವು.




ಕ್ರಿಸ್ತ ಪೂರ್ವ 3000 ಇಸವಿಯಿಂದ ಮುಂದಿನ ಕೆಲವು ಶತಮಾನಗಳ ವರೆಗಿನ ವಿವಿಧ ಘಟ್ಟಗಳಲ್ಲಿ ಯಾವಾಗ ಮಕರ ಸಂಕ್ರಾಂತಿ ಇತ್ತು, ಉತ್ತರಾಯಣ ಯಾವ ತಿಂಗಳಲ್ಲಿ ಆರಂಭವಾಯಿತು, ಋತುಗಳಿಗೆ ಪ್ರಾತಿನಿಧಿಕವಾದ ಯುಗಾದಿಯೂ ಹೇಗೆ ಮುಂದಕ್ಕೆ ಸಾಗುತ್ತಿದೆ ಎಂಬ ವಿವರಗಳನ್ನು ಇಲ್ಲಿರುವ tableನಲ್ಲಿ ನೋಡಬಹುದು. ಅಂತರ್ಜಾಲದಲ್ಲಿರುವ ದೃಕ್ ಪಂಚಾಂಗದ ತಂತ್ರಾಂಶ ಬಳಸಿ ಕಾಲವನ್ನು ಹಿಂದಕ್ಕೆ project ಮಾಡಿ ಈ ಮಾಹಿತಿಯನ್ನು ಕ್ರೋಢೀಕರಿಸಲು ನನಗೆ ಸಾಧ್ಯವಾಯಿತು. ಕ್ರಿಸ್ತಪೂರ್ವದಲ್ಲಿ ಗ್ರೆಗೊರಿಯನ್ ಕ್ಯಾಲೆಂಡರ್ ಇಲ್ಲದಿದ್ದರೂ ಒಂದು ವೇಳೆ ಇದ್ದಿದ್ದರೆ ಹೀಗಿರುತ್ತಿತ್ತು ಎಂಬುದು ಇಲ್ಲಿಯ logic. ಇದನ್ನು ನೋಡಿದರೆ ಕ್ರಿ.ಶ. 300ರ ಸುಮಾರಿಗೆ ಡಿಸೆಂಬರ್ 22ರ ಉತ್ತರಾಯಣಾರಂಭದ ದಿನವೇ ಮಕರ ಸಂಕ್ರಮಣ ಇದ್ದದ್ದು, ಕ್ರಿ.ಪೂ. 3000ದಲ್ಲಿ ಜನವರಿಯಲ್ಲಿ ಇರುತ್ತಿದ್ದ ಯುಗಾದಿ ಮುಂದೆ ಸರಿಯುತ್ತಾ ಈಗ ಎಪ್ರಿಲ್ ತಿಂಗಳಿಗೆ ಬಂದಿರುವುದು ಮುಂತಾದ ವಿಚಾರಗಳು ತಿಳಿಯುತ್ತವೆ.

ಭೀಷ್ಮಾಚಾರ್ಯರು ದೇಹ ತ್ಯಾಗ ಮಾಡಿದ್ದು ಎನ್ನಲಾಗುವ ಕ್ರಿಸ್ತ ಪೂರ್ವ 2448, 3066, 3102, 3140 ಇತ್ಯಾದಿ ವರ್ಷಗಳ ಉಲ್ಲೇಖ ಅಂತರ್ಜಾಲದಲ್ಲಿ ಕಾಣಸಿಗುತ್ತದೆ. ಇಲ್ಲಿ tabulate ಮಾಡಿದ ಶತಮಾನಗಳ ಅಂಕಿ ಅಂಶಗಳ ಪ್ರಕಾರ ಕ್ರಿ.ಪೂ 2700ರಿಂದ ಕ್ರಿ.ಪೂ. 500ರ ವರೆಗೆ ಮಾಘ ಮಾಸದಲ್ಲಿ ಉತ್ತರಾಯಣ ಆರಂಭವಾಗಿದೆ. ಆದರೆ ಮಹಾಭಾರತದ ಶ್ಲೋಕದಲ್ಲಿ ಉಕ್ತವಾದ ಮಾಘ ಶುದ್ಧ ಅಷ್ಟಮಿಯ ಆಸುಪಾಸಿನಲ್ಲಿ ಡಿಸೆಂಬರ 22ರ ಉತ್ತರಾಯಣ ಆರಂಭವಾಗಿರುವುದು ಕ್ರಿ.ಪೂ. 500 ಇಸವಿಯಲ್ಲಿ ಎಂದು ಮೊದಲ ಹಂತದಲ್ಲಿ ಗೊತ್ತಾಯಿತು. ಆ ವರ್ಷ ಮಾಘ ಶುಕ್ಲ ಪಪ್ಠಿಯಂದು ಉತ್ತರಾಯಣ ಆರಂಭವಾಗಿತ್ತು. ಅದರ ಹಿಂದಿನ ಮತ್ತು ಮುಂದಿನ ವರ್ಷಗಳಲ್ಲಿ ಒಂದೊಂದಾಗಿ ಹುಡುಕಿದಾಗ ಕ್ರಿ.ಪೂ. 508 ಇಸವಿಯಲ್ಲಿ ಸರಿಯಾಗಿ ಮಾಘ ಶುಕ್ಲ ಅಷ್ಟಮಿಯಂದೇ ಉತ್ತರಾಯಣ ಆರಂಭವಾದದ್ದು ತಿಳಿಯಿತು. ಆದರೆ ಈ ಇಸವಿಗೂ ಮಹಾಭಾರತ ನಡೆದ ವರ್ಷಗಳೆಂದು ಊಹಿಸಲಾದ ಇಸವಿಗಳಿಗೂ ತುಂಬಾ ಅಂತರ ಇರುವುದರಿಂದ ಬೇರೆ ಕೆಲವು ವರ್ಷಗಳಲ್ಲೂ ಡಿಸೆಂಬರ್ 22ರಂದು ಮಾಘ ಶುಕ್ಲ ಅಷ್ಟಮಿ ಇದ್ದಿರಬಹುದು ಅನ್ನಿಸಿತು. ಕೆಲವು ವರ್ಷಗಳಿಗೊಮ್ಮೆ ನಮ್ಮ ಹುಟ್ಟುಹಬ್ಬ ಪಂಚಾಂಗ ಮತ್ತು ತಾರೀಕು ಪ್ರಕಾರ ಒಂದೇ ದಿನ ಬರುವುದು ಕೂಡ ನೆನಪಿತ್ತು. ಆ ದಿಸೆಯಲ್ಲಿ ಯೋಚಿಸಿ random ಆಗಿ ಹುಡುಕಿದಾಗ ಕ್ರಿ.ಪೂ. 527, 1013, 1977, 1996, 2042, 2061 ಇಸವಿಗಳಲ್ಲೂ ಡಿಸೆಂಬರ್ 22 ತಾರೀಕಿನಂದೇ ಮಾಘ ಶುಕ್ಲ ಅಷ್ಟಮಿ ಇದ್ದುದು ಗೊತ್ತಾಯಿತು. ಇವುಗಳನ್ನು ಪಟ್ಟಿಗೆ ಆ ಮೇಲೆ ಸೇರಿಸಿದ್ದು. ಹುಡುಕಿದರೆ ಇನ್ನಷ್ಟು ವರ್ಷಗಳು ಸಿಗಬಹುದು. ಇಷ್ಟೆಲ್ಲ ಮಾಘ ಶುಕ್ಲ ಅಷ್ಟಮಿಗಳ ಪೈಕಿ ಭೀಷ್ಮಾಚಾರ್ಯರು ದೇಹತ್ಯಾಗ ಮಾಡಿದ ವರ್ಷ ಯಾವುದೆಂಬ ವಿಷಯ ಒಗಟಾಗಿಯೇ ಉಳಿಯಿತು!
ಏನೇ ಇರಲಿ, ಈ ನೆವದಲ್ಲಿ ಹೊಸ ವಿಷಯಗಳು ಕಲಿಯಲು ಸಿಕ್ಕಿದ್ದಂತೂ ಹೌದು. - ಚಿದಂಬರ ಕಾಕತ್ಕರ್.

Saturday, 1 February 2025

ಮಂದ ಮಂದ ಮನದೇ ಮನೋಲ್ಲಾಸ ಮೋಹ


ನನಗೆ ಸುಮಾರು 60 ವರ್ಷಗಳ ನಂತರ ಈಗ ಕೇಳಲು ಸಿಕ್ಕಿರುವ, ನಿಮ್ಮಲ್ಲಿ ಹೆಚ್ಚಿನವರು ಇದುವರೆಗೆ ಕೇಳಿಯೇ ಇರಲಾರದ, ವರ್ಣರಂಜಿತ ಕನ್ನಡ ಚಿತ್ರ ಸಂಪೂರ್ಣ ರಾಮಾಯಣದ ಹಾಡು ಇದು. ಹೋಮಿವಾಡಿಯಾ ಅವರು 1961ರಲ್ಲಿ ನಿರ್ಮಿಸಿದ್ದ ಹಿಂದಿ ಸಂಪೂರ್ಣ ರಾಮಾಯಣವನ್ನು ಕನ್ನಡ  ಭಾಷೆಗೆ ಡಬ್ ಮಾಡಲಾಗಿತ್ತು. ಮಹಿಪಾಲ್ ರಾಮನಾಗಿ, ಅನಿತಾ ಗುಹಾ ಸೀತೆಯಾಗಿ,  ಅಚಲಾ ಸಚ್‌ದೇವ್ (ಸಂಗಮ್‌ನಲ್ಲಿ ವೈಜಯಂತಿ ಮಾಲಾ ತಾಯಿ) ಕೌಸಲ್ಯೆಯಾಗಿ, ಬಿ.ಎಮ್. ವ್ಯಾಸ್ ರಾವಣನಾಗಿ, ಸುಲೋಚನಾ (ಜಾನಿ ಮೇರಾ ನಾಮ್‌ನಲ್ಲಿ ದೇವ್ ಆನಂದ್  ತಾಯಿ) ಕೈಕೇಯಿಯಾಗಿ,  ಲಲಿತಾ ಪವಾರ್ (ಶ್ರೀ 420ನ ಲೇಡಿ ಕೇಲೇವಾಲಿ) ಮಂಥರೆಯಾಗಿ, ಹೆಲನ್ ಮಾಯಾ ಶೂರ್ಪನಖಿಯಾಗಿ ಕಾಣಿಸಿಕೊಂಡಿದ್ದ ಪ್ರಮುಖರು. ಹಿಂದಿ ಚಿತ್ರದ ಮೂಲ ಸಂಗೀತ ನಿರ್ದೇಶಕರು ವಸಂತ್ ದೇಸಾಯಿ. ವಿಜಯಭಾಸ್ಕರ್ ಕನ್ನಡ ಅವತರಣಿಕೆಯ ಸಂಗೀತದ ಹೊಣೆ ಹೊತ್ತಿದ್ದರು. ಕನ್ನಡದಲ್ಲಿ ಗೀತೆಗಳನ್ನು ಬರೆದವರು ಗೀತಪ್ರಿಯ. ಪಿ.ಸುಶೀಲ, ಪಿ.ಬಿ.ಶ್ರೀನಿವಾಸ್, ಎಲ್.ಆರ್. ಈಶ್ವರಿ ಮತ್ತಿತರರು ಕನ್ನಡ ಹಾಡುಗಳನ್ನು ಹಾಡಿದ್ದರು.  ಆದರೆ ಡಬ್ ಆದ ಚಿತ್ರಗಳಲ್ಲಿ ಬೇರೆ ಭಾಷೆಯ ಸಂಭಾಷಣೆಯ ತುಟಿ ಚಲನೆಗೆ ಸರಿ ಹೊಂದುವಂತೆ ಕನ್ನಡ ಧ್ವನಿಯಾದ ಕಲಾವಿದರ ಹೆಸರುಗಳು ಗೋಪ್ಯವಾಗಿಯೆ ಉಳಿಯುತ್ತವೆ.

ಆ ಕಾಲದಲ್ಲಿ  ಸಾಮಾನ್ಯವಾಗಿ ತೆಲುಗು ಚಿತ್ರಗಳು ಕನ್ನಡಕ್ಕೆ ಡಬ್ ಆಗುತ್ತಿದ್ದುದು. ಕನ್ನಡದಲ್ಲಿ ಅವುಗಳ ಸಂಗೀತ ನಿರ್ವಹಣೆ ಮೂಲ ಸಂಗೀತ ನಿರ್ದೇಶಕರದ್ದೇ ಇರುತ್ತಿತ್ತು.  ಆದರೆ ವೀರ ಜಬಕ್, ಜಿಂಬೊ ನಗರ ಪ್ರವೇಶ ಮತ್ತು  ಸಂಪೂರ್ಣ ರಾಮಾಯಣ ಹಿಂದಿಯಿಂದ ಡಬ್ ಆದ ಚಿತ್ರಗಳು. ಮೂಲದಲ್ಲಿ ಚಿತ್ರಗುಪ್ತ ಮತ್ತು ವಸಂತ ದೇಸಾಯಿ ಸಂಗೀತವಿದ್ದ ಈ ಮೂರಕ್ಕೂ ವಿಜಯ ಭಾಸ್ಕರ್ ಅವರ ಸಂಗೀತ ನಿರ್ವಹಣೆ ಇದ್ದದ್ದು ಗಮನಿಸಬೇಕಾದ ಅಂಶ.

1962ರಲ್ಲಿ ನಾನು 5ನೇ ತರಗತಿಯಲ್ಲಿರುವಾಗ  ರಾಮಕಾಂತಿ ಟಾಕೀಸಿನಲ್ಲಿ ಪ್ರದರ್ಶಿತವಾಗಿದ್ದ ಈ ವರ್ಣರಂಜಿತ ಕನ್ನಡ ಸಂಪೂರ್ಣ ರಾಮಾಯಣ ಸಿನಿಮಾ ನೋಡಲೆಂದೇ  ನಮ್ಮ ತಾಯಿ, ಅಣ್ಣಂದಿರು ಮುಂತಾಗಿ ಆರೇಳು ಮಂದಿ ಮಂಗಳೂರಿಗೆ ಹೋಗಿದ್ದರು. ರಜೆಯ ಸಮಯವಾಗಿದ್ದರೆ ಖಂಡಿತ ನಾನೂ ಅವರೊಡನೆ ಸೇರಿಕೊಳ್ಳುತ್ತಿದ್ದೆ. vAstavya hUDidda ಗಣೇಶ ಭವನದ ರೂಮಿನಲ್ಲಿ ಎಲ್ಲರಿಗೂ ಮಲಗಲು ಸ್ಥಳಾವಕಾಶ ಸಾಕಾಗದೆ ನಮ್ಮ ಅಣ್ಣ ಈಸಿ ಚೇರಿನಲ್ಲಿ ಕುಳಿತೇ ರಾತ್ರೆ ಕಳೆದಿದ್ದರಂತೆ! ಮಂಗಳೂರಿಂದ ಬರುವಾಗ ನಾವು ಅದು ವರೆಗೆ ನೋಡಿರದಿದ್ದ ಮಿಠಾಯಿಯ ಮುಕುಟ ಇದ್ದ ಬಿಸ್ಕತ್ತುಗಳು, ಕುಂಬಳಕಾಯಿಯ ಪೆಟ್ಠಾ ಇತ್ಯಾದಿ ತಂದಿದ್ದರು. ಸಿನಿಮಾದ ಹಾಡಿನ ಪುಸ್ತಕವನ್ನೂ ತಂದಿದ್ದರು. ಪಂಚಾಂಗದಂತೆ ಉದ್ದವಾಗಿದ್ದ ಆ ಪುಸ್ತಕ ಅನೇಕ ವರ್ಷ ಮನೆಯಲ್ಲಿದ್ದದ್ದು ಈಗ ಕಳೆದು ಹೋಗಿದೆ. 



ಚಿತ್ರದಲ್ಲಿದ್ದ ಹತ್ತಾರು ಹಾಡುಗಳ ಪೈಕಿ ಪ್ರಿಯ ಜೀವನದ ಪರ್ಣ ಕುಟಿಯೊಳ್ ಮತ್ತು ನಾವೀಗ ಚರ್ಚಿಸುತ್ತಿರುವ ಮಂದ ಮಂದ ಮನದೇ ಹಾಡುಗಳು ರೇಡಿಯೋ ನಿಲಯಗಳಿಂದ, ಅದರಲ್ಲೂ ಧಾರವಾಡದಿಂದ ಆಗಾಗ ಪ್ರಸಾರವಾಗುತ್ತಿದ್ದವು. ಮಧ್ಯದಲ್ಲಿ ತೋರೈ ಸನ್ಮಾರ್ಗ ಶ್ರೀ ರಾಮನೇ ಎಂಬ ಸಾಲು ಇರುವ ಪಿ.ಬಿ.ಶ್ರೀನಿವಾಸ್ ಮತ್ತು ಸಂಗಡಿಗರು ಹಾಡಿರುವ ಗೀತೆ ಕೂಡ ಕೆಲವೊಮ್ಮೆ ಪ್ರಸಾರವಾಗುತ್ತಿತ್ತು.   70ರ ದಶಕ ಬರುತ್ತಿದ್ದಂತೆ ಇವು ಹಿನ್ನೆಲೆಗೆ ಸರಿದು ಕಾಲಗರ್ಭದಲ್ಲಿ ಮರೆಯಾದವು. ಅವುಗಳ ಪೈಕಿ ಪ್ರಿಯ ಜೀವನದ ಪರ್ಣ ಕುಟಿಯೊಳ್ ಕೆಲವು ವರ್ಷ ಹಿಂದೆ ದೊರಕಿದರೂ ಮಂದ ಮಂದ ಮನದೇ ಮಾತ್ರ ಎಲ್ಲೂ ಸಿಕ್ಕಿರಲಿಲ್ಲ. ಚಿತ್ರದ ಕನ್ನಡ ಅವತರಣಿಕೆ ಇಲ್ಲದಿದ್ದರೂ ಮೂಲ ಹಿಂದಿ ಸಂಪೂರ್ಣ ರಾಮಾಯಣ ಅಂತರ್ಜಾಲದಲ್ಲಿ  ಲಭ್ಯವಿದ್ದು ಅದರಲ್ಲಿ ಸೀತೆ ಹಾಡುವ ಮೇರೆ ಜೀವನ್‌ ಕೀ ಪರ್ಣಕುಟೀ ಮೆಂ ಹಾಡು ಯಾಕೋ ಇಲ್ಲ. ಆದರೆ ಮಂದ ಮಂದ ಮನದೇ ಹಾಡಿನ ಹಿಂದೀ ರೂಪ ಬಾರ್ ಬಾರ್ ಬಗಿಯಾ ಮೆಂ ಕೋಯಲ್ ನ ಬೋಲೆ  ಇದೆ. ಅದನ್ನು ನೋಡಿ ‘ಛೇ, ಕನ್ನಡ ಹಾಡು ಇದ್ದಿದ್ದರೆ ಹಿಂದಿ ವೀಡಿಯೊ ಮೇಲೆ  ಸೂಪರ್ ಇಂಪೋಸ್ ಮಾಡಬಹುದಿತ್ತಲ್ಲ’  ಅಂದುಕೊಳ್ಳುತ್ತಿದ್ದೆ.  

ಸಮಾನಮನಸ್ಕರಾದ ಅನೇಕರಲ್ಲಿ ಈ ಹಾಡಿನ ಬಗ್ಗೆ ವಿಚಾರಿಸುತ್ತಲೇ ಇದ್ದೆ. ಮಣ್ಣಿಗೆಸೆದ ಬೀಜ ಎಂದೋ ಒಂದು ದಿನ ಮೊಳಕೆ ಒಡೆಯುವಂತೆ ಮೊನ್ನೆ ಇಂಥ ಹಳೇ ಹಾಡುಗಳ ಅಭಿಮಾನಿ ಶ್ರೀನಾಥ್ ಮಲ್ಯ ಈ ಹಾಡು ಸಿಕ್ಕಿರುವ ಶುಭ ಸಮಾಚಾರವನ್ನು ತಿಳಿಸಿದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿದ್ದು ಸುಳ್ಳಲ್ಲ!

ಇನ್ನೇನು,  ಕ್ಯಾಬರೆ ನಟಿಯೆಂದೇ ಗುರುತಿಸಲ್ಪಡುವ ಹೆಲನ್ ಮಾಯಾ ಶೂರ್ಪನಖಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡ  ಹಿಂದಿ  ವೀಡಿಯೋಗೆ ಕ್ಯಾಬರೆ ಗಾಯಕಿಯೆಂದು ಖ್ಯಾತಿ ಪಡೆದ ಎಲ್.ಆರ್. ಈಶ್ವರಿ ಹಾಡಿರುವ ಮಂದ ಮಂದ ಮನದೇ  ಹಾಡನ್ನು ತಡ ಮಾಡದೆ   ಕಸಿ ಕಟ್ಟಿಯೇ ಬಿಟ್ಟೆ. ಹಿಂದಿ ಪದಗಳ ತುಟಿ ಚಲನೆಗೆ  ಕರಾರುವಾಕ್ಕಾಗಿ ಸರಿಹೊಂದುವಂಥ ಕನ್ನಡ ಪದಗಳನ್ನು ಹೆಣೆದು ಅರ್ಥಪೂರ್ಣವಾದ ಹಾಡು ರಚಿಸಿದ ಗೀತಪ್ರಿಯ ಮತ್ತು ಮೂಲ ಗಾಯಕಿ ಆಶಾ ಭೋಸ್ಲೆ ಅವರಿಗಿಂತ ಒಂದು ಕೈ ಮೇಲೆಯೇ ಅನ್ನುವಂತೆ ಹಾಡಿದ ಎಲ್.ಆರ್. ಈಶ್ವರಿ ಅವರ ಪ್ರತಿಭೆಗೆ  ಮಾರು ಹೋದೆ. 

ಹಿಂದಿ, ಕನ್ನಡ  ಎರಡೂ ಹಾಡುಗಳನ್ನು ಆಲಿಸಿದಾಗ ಎರಡರ ಶ್ರುತಿ, ಬಳಸಿದ  ವಾದ್ಯಗಳು, ಅವುಗಳ ನಾದ, ನುಡಿಸಿದ ಶೈಲಿ ಎಲ್ಲವೂ ತದ್ರೂಪವಾಗಿರುವುದು ತಿಳಿಯುತ್ತದೆ. ವಿಜಯಭಾಸ್ಕರ್ ಅವರಿಗೆ ಮುಂಬಯಿ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ದುಡಿದ ಅನುಭವ ಇದ್ದುದರಿಂದ ಮೂಲದಲ್ಲಿ ನುಡಿಸಿದ ವಾದ್ಯಗಳು ಮತ್ತು ವಾದ್ಯಗಾರರನ್ನೇ ಬಳಸಿ ಹಾಡುಗಳ ಮರುಸೃಷ್ಟಿ ಮಾಡಲು ಸಾಧ್ಯವಾಗಿರಬಹುದು. ಹಿಂದಿ ಹಾಡುಗಳನ್ನು ರೆಕಾರ್ಡ್ ಮಾಡುವಾಗ ಹಿನ್ನೆಲೆ ಸಂಗೀತದ ಟ್ರಾಕ್‌ಗಳನ್ನು  ಟೇಪುಗಳಲ್ಲಿ ಬೇರೆಯಾಗಿಯೇ ಸಿದ್ಧಪಡಿಸಿಟ್ಟುಕೊಂಡು ಅವುಗಳನ್ನೇ ಇಲ್ಲಿ ಬಳಸಿರಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

********

ಚಿತ್ರ : ಸಂಪೂರ್ಣ ರಾಮಾಯಣ.
ಗಾಯಕಿ : ಎಲ್.ಆರ್. ಈಶ್ವರಿ.
ಸಾಹಿತ್ಯ : ಗೀತಪ್ರಿಯ.
ಸಂಗೀತ : ಮೂಲ ಹಿಂದಿ - ವಸಂತ ದೇಸಾಯಿ, ಕನ್ನಡದಲ್ಲಿ - ವಿಜಯಭಾಸ್ಕರ್.

ಮಂದ ಮಂದ ಮನದೆ ಮನೋಲ್ಲಾಸ ಮೋಹ
ಮಂದ ಮಂದ ಉತ್ಸಾಹವು
ಎನ್ನ ಪ್ರಿಯ ಜೀವನವೆ ಆಡೇ ವಸಂತದೆ
ಎನ್ನ ಪ್ರಾಣ ನಲಿದಾಡಲು

ಹಾ ಪ್ರಿಯ ನಿನ್ನ ನಗೆ
ಆಡೆ ಕಣ್ಪಟದೊಳಗೆ
ಅಭಿನವ ಶೋಭೆ ಕಂಡೆ
ಕಂಡು ಕಂಡು ಮುಖದೆಡೆಗೆ

ಮಧುಮಯ ಈ ಕ್ಷಣವೆ
ರೂಪಿಸಿರೆ ಪಾಶವನೆ
ಎನ್ನ ಈ ಮಂದ ನಗೆ
ಮೆರೆಯುತ ನೋಟದಲಿ
ಸಾರಿದೆ ಪ್ರಿತಿಯನೆ ಪ್ರೀತಿಯನೆ ಪ್ರೀತಿಯನೆ

ಸೋತೆ ನಾನೀಗ ಪ್ರಿಯಾ
ಕಣ್ಣುಗಳ ಆಟದಲಿ
ನಿನ್ನ ನೋಟ ಬಾಧಿಸಿರೆ
ರೂಪಸುಮ ವರ್ಧಿಸಿರೆ
ಸಖ ಈ ಕೋಮಲೆಯ
ಈಗ ದೂರ ದೂಡದಿರು
ರುಮ ಝುಮ ನಾಟ್ಯದಲಿ
ಎನ್ನ ಪ್ರಿಯ ಪ್ರಾಣದಲಿ
ಸಾರಿಹೆ ಪ್ರೀತಿಯನೆ ಪ್ರೀತಿಯನೆ ಪ್ರೀತಿಯನೆ

******

ಈಗ ಮಾಯಾ ಶೂರ್ಪನಖಿ ರೂಪದ ಹೆಲನ್  ಎಲ್.ಆರ್. ಈಶ್ವರಿಯ ಧ್ವನಿ ಬಳಸಿ ಕನ್ನಡದಲ್ಲಿ ಹಾಡುವ ವೀಡಿಯೊ  ವೀಕ್ಷಿಸಿ ಆನಂದಿಸಿ.  ಅನುಕೂಲ ಇದ್ದರೆ ಹೆಡ್‌ಫೋನ್ ಬಳಸಿ.




ಅಡಿಯೋ ಮಾತ್ರ ಕೇಳಲು ಬಾಣದ ಮೇಲೆ ಕ್ಲಿಕ್ಕಿಸಿ.



ಹೋಲಿಕೆಗಾಗಿ ಹಿಂದಿ ಹಾಡು ಇಲ್ಲಿದೆ.



******

ಶೋಭನ್ ಬಾಬು ರಾಮನಾಗಿ ಮತ್ತು ಚಂದ್ರಕಲಾ ಸೀತೆಯಾಗಿ ಕಾಣಿಸಿಕೊಂಡಿದ್ದ  1971ರ ತೆಲುಗು ಸಂಪೂರ್ಣ ರಾಮಾಯಣವೂ ಕನ್ನಡಕ್ಕೆ ಡಬ್ ಆಗಿದ್ದು ಅಂತರ್ಜಾಲದಲ್ಲಿ ಲಭ್ಯವಿದೆ.  

- ಚಿದಂಬರ ಕಾಕತ್ಕರ್.



Wednesday, 15 January 2025

ಸಂಕ್ರಾಂತಿ, ಕರ್ಕ ಮತ್ತು ಮಕರ ವೃತ್ತ ವೃತ್ತಾಂತ


ಸಂಕ್ರಾಂತಿ ಏಕೆ ಮುಂದೆ ಸಾಗುತ್ತಿದೆ?
ಪಂಚಾಂಗ ರಚನೆ ಆರಂಭವಾದ ಕ್ರಿಸ್ತಶಕದ ಮೊದಲ ಶತಮಾನಗಳ ಕಾಲದಲ್ಲಿ ಉತ್ತರಾಯಣ ಆರಂಭ ಮತ್ತು ಮಕರ ಸಂಕ್ರಾಂತಿ ಡಿಸೆಂಬರ್ 22 ರಂದೇ ಇರುತ್ತಿತ್ತು. ಹೀಗಾಗಿ ಮಕರ ಸಂಕ್ರಾಂತಿ ಅಂದರೆ ಉತ್ತರಾಯಣಾರಂಭ ಎಂಬ ಭಾವನೆ ಜನಮಾನಸದಲ್ಲಿ ಬೇರೂರಿದೆ. ಆದರೆ ವಾಸ್ತವ ಸ್ಥಿತಿ ಹೀಗಿಲ್ಲ. ಭೂಮಿಯಿಂದ ನೋಡಿದಂತೆ ಸೂರ್ಯನ ಸಮೀಪವಿರುವ ನಕ್ಷತ್ರದ ಆಧಾರದ ಮೇಲೆ ರಾಶಿ ಮತ್ತು ಸೂರ್ಯನ ಸುತ್ತ ಭೂಮಿಯ ಚಲನೆಯಿಂದ ಉತ್ತರಾಯಣ ದಕ್ಷಿಣಾಯನ ಕಲ್ಪನೆ ಇರುವುದರಿಂದ ಮಕರ ಸಂಕ್ರಾಂತಿ ಮತ್ತು ಉತ್ತರಾಯಣಾರಂಭಕ್ಕೆ ನೇರ ಸಂಬಂಧ ಇಲ್ಲ. ಹೀಗಾಗಿ ಉತ್ತರಾಯಣಾರಂಭ ಈಗಲೂ ಡಿಸೆಂಬರ್ 22ಕ್ಕೇ ಇದ್ದರೂ ಮಕರ ಸಂಕ್ರಾಂತಿ ಮುಂದೆ ಸಾಗುತ್ತಾ ಈಗ ಜನವರಿ 14ಕ್ಕೆ ತಲುಪಿದೆ. ಹೀಗೇಕಾಗುತ್ತದೆ ಎಂದು ತಿಳಿಯಬೇಕಾದರೆ ಭೂಮಿಯ ವಿವಿಧ ಚಲನೆಗಳ ಬಗ್ಗೆ ಅರಿಯಬೇಕು.


ಭೂಮಿಗೆ ಸೂರ್ಯನ ಸುತ್ತ ವರ್ಷಕ್ಕೊಮ್ಮೆ ಸುತ್ತುವ ಚಲನೆ, ತನ್ನ ಅಕ್ಷದಲ್ಲಿ ದಿನಕ್ಕೊಮ್ಮೆ ತಿರುಗುವ ಚಲನೆ ಅಲ್ಲದೆ 26000 ವರ್ಷ ಸಮಯ ತೆಗೆದುಕೊಳ್ಳುವ ಇನ್ನೊಂದು ಚಲನೆಯೂ ಇದೆ. ಅದೇ ತಿರುಗುತ್ತಿರುವ ಬುಗರಿಯ ತಲೆಯು ಸ್ವಲ್ಪ ಓಲಾಡುವಂತೆ ಭೂಮಿಯು ಓಲಾಡುವ (wobbling) ಚಲನೆ. ಈ ಕಾರಣದಿಂದ ಮನುಷ್ಯನು ಭೂಮಿಯಿಂದ ನಿಂತು ನೋಡುವ ಸ್ಥಾನದಲ್ಲಿ ಅಲ್ಪ ಬದಲಾವಣೆ ಆಗಿ ಸೂರ್ಯನ ಜತೆ ಇರುವಂತೆ ಕಾಣುವ ಸಹಸ್ರಾರು ಜ್ಯೋತಿರ್ವರ್ಷಗಳಷ್ಟು ದೂರ ಇರುವ ನಕ್ಷತ್ರ ಗುರುತಿಸುವುದರಲ್ಲಿ ಕಾಲಕ್ರಮೇಣ ವ್ಯತ್ಯಾಸ ಉಂಟಾಗುತ್ತದೆ. ಹೀಗಾಗಿಯೇ ಸೂರ್‍ಯನು ನಿರ್ದಿಷ್ಟ ರಾಶಿಯನ್ನು ಪ್ರವೇಶಿಸುವ ಕಾಲ ಸುಮಾರು 70 ವರ್ಷಕ್ಕೆ ಒಂದು ದಿನ ಮುಂದೆ ಹೋಗುತ್ತದೆ. ಆದರೆ ನಕ್ಷತ್ರಗಳಿರುವ ದೂರಕ್ಕೆ ಹೋಲಿಸಿದರೆ ಭೂಮಿ ಮತ್ತು ಸೂರ್ಯನ ನಡುವಿನ ದೂರ ನಗಣ್ಯ ಆದುದರಿಂದ ಭೂಮಿಯಿಂದ ಸೂರ್ಯನ ಚಲನೆಯನ್ನು ಗಮನಿಸುವಲ್ಲಿ ಈ ಓಲಾಡುವಿಕೆಯ ಪರಿಣಾಮವೂ ನಗಣ್ಯ. ಹೀಗಾಗಿ ಉತ್ತರಾಯಣ ಮತ್ತು ದಕ್ಷಿಣಾಯನ ಆರಂಭದ ದಿನಗಳಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ. ಮೊಬೈಲಲ್ಲಿ ವೀಡಿಯೋ ಮಾಡುವಾಗ ಕೈ ಅಲ್ಲಾಡಿದರೆ ಹತ್ತಿರದ ವಸ್ತುಗಳ ಮೇಲೆ ಅಷ್ಟೇನೂ ಪರಿಣಾಮ ಆಗದಿದ್ದರೂ ದೂರದ ವಸ್ತುಗಳು ಹೆಚ್ಚು ಅತ್ತಿತ್ತ ಸರಿದಂತಾಗುವುದನ್ನು ನಾವು ಗಮನಿಸಿರುತ್ತೇವೆ.


ಈ ಕಾರಣದಿಂದಾಗಿ ಸುಮಾರು ಮೂರು ಮೂರೂವರೆ ಸಾವಿರ ವರ್ಷಗಳ ಹಿಂದೆ ವೇದಾಂಗ ಜ್ಯೋತಿಷ್ಯದ ಕಾಲದಲ್ಲಿ ಧನಿಷ್ಠೆಯನ್ನು ಸೂರ್ಯ ಪ್ರವೇಶಿಸುತ್ತಿದ್ದಾಗ (ಮಕರ ರಾಶಿಯ ಕೊನೆಯ ಹಂತದಲ್ಲಿ) ಘಟಿಸುತ್ತಿದ್ದ ಉತ್ತರಾಯಣಾರಂಭ ಬಹುಕಾಲಾಂತರದಲ್ಲಿ ವರಾಹಮಿಹಿರಾಚಾರ್ಯರ ಕಾಲದಲ್ಲಿ ಉತ್ತರಾಷಾಢದ ಎರಡನೆಯ ಪಾದದಲ್ಲಿ ಕಾಲಿಟ್ಟಾಗ (ಮಕರ ರಾಶಿಯ ಆರಂಭದ ಹಂತದಲ್ಲಿ) ಘಟಿಸುತ್ತಿತ್ತು. ಈಗ ಉತ್ತರಾಯಣ ಆರಂಭವಾಗುವಾಗ ಸೂರ್ಯ ಇನ್ನೂ ಮೂಲಾ ನಕ್ಷತ್ರದ 3ನೆಯ ಪಾದದಲ್ಲಿ ಅಂದರೆ ಧನು ರಾಶಿಯಲ್ಲಿ ಇರುತ್ತಾನೆ.

ವೆಬ್ ಪಂಚಾಂಗಗಳಲ್ಲಿ ಹಿಮ್ಮುಖವಾಗಿ ಚಲಿಸಿದಾಗ ಕ್ರಿಸ್ತ ಶಕ 299ರಿಂದ ಕ್ರಿಸ್ತ ಶಕ 345ರ ವರೆಗೆ ಡಿಸೆಂಬರ್ 22ರಂದೇ ಮಕರ ಸಂಕ್ರಾಂತಿ ಇತ್ತು ಎಂಬ ಮಾಹಿತಿ ದೊರಕುತ್ತದೆ. ಅದು ಮುಂದೆ ಮುಂದೆ ಸಾಗುತ್ತಾ ಈಗ ಜನವರಿ 14ಕ್ಕೆ ತಲುಪಿದ್ದು ವರ್ಷಗಳು ಉರುಳಿದಂತೆ ಇನ್ನೂ ಮುಂದೆ ಸಾಗುತ್ತಾ ಮಕರ ಸಂಕ್ರಾಂತಿಯ ದಿನ ದಕ್ಷಿಣಾಯನ ಆರಂಭವಾಗುವ ಸಮಯವೂ ಬರುತ್ತದೆ! ಭೂಮಿಯ ಓಲಾಡುವಿಕೆಯನ್ನು ಅನುಸರಿಸಿ ಈ ಚಕ್ರ ಸಾಗುತ್ತಲೇ ಇರುತ್ತದೆ. ಜನಸಾಮಾನ್ಯರ ನಂಬಿಕೆಗೆ ಇಂಬು.
ಮಕರ ಸಂಕ್ರಾಂತಿಯಂದೇ ಉತ್ತರಾಯಣಾರಂಭ ಎಂದು ಭಾವಿಸುವ ಜನಸಾಮಾನ್ಯರ ತಪ್ಪು ನಂಬಿಕೆಗೆ ಇಂಬು ಕೊಡುವಂತೆ ಸೂರ್ಯನ ಮಕರ/ಕರ್ಕ ರಾಶಿ ಪ್ರವೇಶವು ಉತ್ತರ/ದಕ್ಷಿಣ ಆಯನಾರಂಭದೊಂದಿಗಿನ ಸಂಬಂಧ ಕಳೆದುಕೊಂಡು ಶತಮಾನಗಳೇ ಕಳೆದರೂ ಈಗಲೂ ಸೂರ್ಯನ ನೇರ ಕಿರಣಗಳು ಬೀಳುವ ಅತ್ಯಂತ ದಕ್ಷಿಣದ ಭಾಗವನ್ನು(23 ಡಿಗ್ರಿ 27' ದಕ್ಷಿಣ ಅಕ್ಷಾಂಶ) ಮಕರ ಸಂಕ್ರಾಂತಿ ವೃತ್ತ ಅಥವಾ ಮಕರ ವೃತ್ತ ಮತ್ತು ಅಂತಹ ಉತ್ತರದ ಭಾಗವನ್ನು (23 ಡಿಗ್ರಿ 27' ಉತ್ತರ ಅಕ್ಷಾಂಶ) ಕರ್ಕಾಟಕ ಸಂಕ್ರಾಂತಿ ವೃತ್ತ ಅಥವಾ ಕರ್ಕ ವೃತ್ತವೆಂದು ಭೂಪಟಗಳಲ್ಲಿ ಈಗಲೂ ಗುರುತಿಸಲಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯವಾಗಿಯೂ ಇವು ಕ್ರಮವಾಗಿ Tropic of Capricorn (ಮಕರದ ಸಂವಾದಿ) ಮತ್ತು Tropic of Cancer (ಕರ್ಕದ ಸಂವಾದಿ) ಎಂದೇ ಈಗಲೂ ಗುರುತಿಸಲ್ಪಡುವುದು.

ವಾಸ್ತವವಾಗಿ ಈಗ ಸೂರ್ಯನು ಅತ್ಯಂತ ದಕ್ಷಿಣ ಭಾಗದಲ್ಲಿ ನೇರ ಕಿರಣಗಳನ್ನು ಬೀರುವಾಗ ಆತ ಧನು ರಾಶಿಯಲ್ಲಿರುವುದರಿಂದ ಅದನ್ನು ಧನುರ್‌ವೃತ್ತ (Tropic of Saggitarious) ಎಂದೂ, ಅತ್ಯಂತ ಉತ್ತರ ಭಾಗದಲ್ಲಿ ನೇರ ಕಿರಣಗಳನ್ನು ಬೀರುವಾಗ ಮಿಥುನ ರಾಶಿಯಲ್ಲಿರುವುದರಿಂದ ಮಿಥುನ ವೃತ್ತ (Tropic of Gemini) ಎಂದೂ ತಿಳಿದುಕೊಳ್ಳಬೇಕಾಗುತ್ತದೆ!