Thursday, 16 October 2025

ಕಿಟಿಕಿಯಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದ ಕಾಲದ ಕಥಾನಕ

ಇದು ನಮ್ಮ ಊರಿನ ಹಳೆ ಮನೆಯ ಒಳಗಿನ ಹಜಾರದ ಚಿತ್ರ. ಚಿತ್ಪಾವನಿಯಲ್ಲಿ ಇದನ್ನು ಆಂತ್ಲಿ ಮಾಳಿ ಅನ್ನುವುದು. ನಾನು ಚಿಕ್ಕವನಾಗಿದ್ದಾಗ ಅಲ್ಲಿಯ ಕಿಟಿಕಿಯಲ್ಲಿ ಕುಳಿತು ಕಾಫಿ ಕುಡಿಯುತ್ತಿರುವುದನ್ನು ಈ AI ಚಿತ್ರದಲ್ಲಿ ನೋಡುತ್ತಿದ್ದೀರಿ. ಕಿಟಿಕಿಯಲ್ಲಿ ಕುಳಿತು? ಹೌದು, ಸರಿಯಾಗಿಯೇ ಓದಿದ್ದೀರಿ. ಒಂದು ಗಜ ದಪ್ಪದ ಮಣ್ಣಿನ ಗೋಡೆಯ ಮನೆಗಳ ಕಿಟಿಕಿಗಳು ಹೀಗೆಯೇ ಇರುತ್ತಿದ್ದುದು. ಅದರಲ್ಲಿ ಕುಳಿತು ಕಾಫಿ ಕುಡಿಯುವುದೇನು, ಒಂದು ಸಣ್ಣ ಎಲೆ ಹಾಕಿ ಊಟ ಮಾಡುವಷ್ಟು ಅಗಲದ ಜಾಗ ಇರುತ್ತಿತ್ತು. 1967ರಲ್ಲಿ ಆ ಮನೆಗೆ ವಿದ್ಯುತ್ತಿನ ವಯರಿಂಗ್ ಮಾಡುವಾಗ ಗೋಡೆಗೆ ತೂತು ಕೊರೆಯುವ ಪೈಪಿನ ಉದ್ದ ಸಾಕಾಗದೆ ಅರ್ಧ ಈ ಕಡೆಯಿಂದ , ಅರ್ಧ ಆ ಕಡೆಯಿಂದ ಕೊರೆಯಬೇಕಾಗಿ ಬಂದಿತ್ತು!
ಊಟದ ಮನೆಯೂ ಆಗಿದ್ದ ಇಲ್ಲಿ ಈ ಕಿಟಿಕಿಯ ಬುಡ ನಾನು ಊಟಕ್ಕೆ ಕುಳಿತುಕೊಳ್ಳುವ ಶಾಶ್ವತ ಜಾಗ ಆಗಿತ್ತು. ಆಗ ಚಿಕ್ಕವರು ಮಣೆಯ ಮೇಲೆ ಕೂತು ಉಣ್ಣುವ ಪರಿಪಾಠ ಇಲ್ಲದಿದ್ದರೂ ನನಗೆ ನಿತ್ಯವೂ ಮಣೆ ಬೇಕೇ ಬೇಕಿತ್ತು. ಕಿಟಿಕಿ ಬದಿಯ ಸಾಲಿನಲ್ಲಿ ಚಿಕ್ಕ ಮಕ್ಕಳು, ಎದುರುಗಡೆ ಸಾಲಿನಲ್ಲಿ ತಂದೆಯವರು, ಅಣ್ಣಂದಿರು ಕುಳಿತುಕೊಳ್ಳುತ್ತಿದ್ದರು. ಎಲ್ಲರಿಗೂ ಅವರವರ ನಿಶ್ಚಿತ ಜಾಗಗಳಿದ್ದವು.

ದೇವರ ಕೋಣೆಯೂ ಇದೇ ಆಗಿತ್ತು. ಎಡ ಮೂಲೆಯಲ್ಲಿ ಕಾಣಿಸುವ ಕಪ್ಪು ಬಣ್ಣದ ಕಪಾಟಿನ ಒಳಗೆ ದೇವರ ಮಂಟಪ. ಕೆಂಪು ಬಣ್ಣದ ಚೌಕಾಕಾರದ ಸಿಮೆಂಟೇ ದೇವರ ಕೋಣೆಯನ್ನು ಬೇರ್ಪಡಿಸುವ demarcation. ದೇವರ ಮಂಟಪದ ಮೇಲ್ಭಾಗದಲ್ಲೂ ಕಪಾಟು ಇತ್ತು. ಕೆಳಗೆ ಶಾಶ್ವತವಾಗಿ ನಂದಾದೀಪ ಉರಿಯುತ್ತಿದ್ದುದರಿಂದ ಅದರೊಳಗೆ ಇಟ್ಟಿರುವ ವಸ್ತುಗಳೆಲ್ಲ ಬೂಸ್ಟು ಹಿಡಿಯದೆ ಬೆಚ್ಚಗಾಗಿ ಇರುತ್ತಿದ್ದವು.

ನಮ್ಮಲ್ಲಿ ನಿತ್ಯ ನಡೆಯುತ್ತಿದ್ದ ಷೋಡಶೋಪಚಾರ ಪೂಜೆಯ ಜೊತೆಗೆ ಸೋಮವಾರಗಳಂದು ರುದ್ರಾಭಿಷೇಕವೂ ಇರುತ್ತಿತ್ತು. ಪೂಜೆಯ ಕೊನೆಯಲ್ಲಿ ನೈವೇದ್ಯದ ಸಮಯ ಊದುಬತ್ತಿ, ಕರ್ಪೂರಗಳ ಸುವಾಸನೆ, ಬಿಸಿ ಬಿಸಿ ಅನ್ನದ ಹಬೆ, ಅಡುಗೆಮನೆಯಿಂದ ಬರುವ ಒಗ್ಗರಣೆಯ ಘಮ ಇವೆಲ್ಲ ಸೇರಿ ಒಂದು ದೈವಿಕ ವಾತಾವರಣ ಸೃಷ್ಟಿಯಾಗುತ್ತಿತ್ತು.

ಪ್ರತೀ ಶುಕ್ರವಾರ ರಾತ್ರಿ ಲಕ್ಷ್ಮೀನಾರಾಯಣ ಹೃದಯ ಗ್ರಂಥದ ಪಾರಾಯಣ ಇರುತ್ತಿತ್ತು. ಅದರಲ್ಲಿ ಬರುವ ಫಟು ಕುರು ಕುರು ಸ್ವಾಹಾ ಎಂಬ ಸಾಲುಗಳು ನಮಗೆಲ್ಲರಿಗೂ ಕಂಠಪಾಠವಾಗಿದ್ದವು! ಆ ಪುಸ್ತಕದಲ್ಲಿ ದೇವಿಯು ಚಂಡ ಮುಂಡರನ್ನು ವಧಿಸುವ ಸುಂದರವಾದ ವರ್ಣ ಚಿತ್ರವೊಂದಿತ್ತು. ಅದನ್ನು ತೋರಿಸುವಂತೆ ನಾವು ತಂದೆಯವರನ್ನು ಕೇಳುವುದಿತ್ತು. ಪಾರಾಯಣದ ಒಂದು ಹಂತದಲ್ಲಿ ಚಿಟಿಕೆಯಷ್ಟು ಮಂತ್ರಿಸಿದ ಭಸ್ಮವನ್ನು ತಂದೆಯವರು ನಮ್ಮ ಬಾಯಿಗೆ ಹಾಕುತ್ತಿದ್ದರು. ಶುಕ್ರವಾರದ ಪಾರಾಯಣ, ಚೌತಿ, ನವರಾತ್ರಿ ಮತ್ತು ನವಾನ್ನ ಪೂಜೆಯ ದಿನ ಮಾತ್ರ ಮಂಗಳಾರತಿಯ ಸಮಯ ಜಾಗಟೆ ಬಾರಿಸುವುದು ನಮ್ಮಲ್ಲಿದ್ದ ಅಲಿಖಿತ ನಿಯಮ.

ಚೌತಿಯ ಗಣೇಶ ಹೊರಗಿನ ಹಜಾರದಲ್ಲಿ ಪೂಜಿಸಲ್ಪಡುತ್ತಿದ್ದರೂ ಸಣ್ಣ ಮಂಟಪವೊಂದರಲ್ಲಿ ಹರತಾಳಿಕಾ ಗೌರಿ ಪೂಜೆ ಇಲ್ಲೇ ನಡೆಯುತ್ತಿತ್ತು. ನವರಾತ್ರಿ ಪೂಜೆ ನಿತ್ಯದ ದೇವರ ಮಂಟಪದಲ್ಲೇ ನಡೆಯುತ್ತಿದ್ದುದು. ಆಗ ನೀಲಿ ನಾಮದ ಗೋರಟೆ, ಹಳದಿ ಮೈಸೂರು ಗೋರಟೆ ಮತ್ತು ಕೆಂಪು ಕೇಪುಳ ಹೂಗಳ ಮಾಲೆಗಳಿಂದ ಮಂಟಪವನ್ನು ಅಲಂಕರಿಸಲಾಗುತ್ತಿತ್ತು. ಮರದ ತುಂಡೊಂದನ್ನು ಕೆತ್ತಿ ಒಂದು ಬ್ಯಾಟರಿ ಬಾಕ್ಸು ಮತ್ತು ಗೆರಟೆ ಹಾಗೂ ಒಂದು ಹಳೆಯ ಸ್ಪ್ರಿಂಗ್ ಉಪಯೋಗಿಸಿ ಒಂದು ಟಾಗಲ್ ಸ್ವಿಚ್ಚು ತಯಾರಿಸಿ ನವರಾತ್ರಿ ಪೂಜೆಯ ಹೊತ್ತಲ್ಲಿ ದೇವರ ಮೇಲೆ ಬಲ್ಬಿನ ಬೆಳಕು ಬೀಳುವ ವ್ಯವಸ್ಥೆ ನಮ್ಮಣ್ಣ ಮಾಡಿದ್ದರು. ಅದಕ್ಕೆ ರೇಡಿಯೋದ ನಿರುಪಯೋಗಿ ಬ್ಯಾಟರಿಯನ್ನು ಒಡೆದು ಅದರೊಳಗೆ ಇರುವ ಸೆಲ್ಲುಗಳನ್ನು ಅವರು ಉಪಯೋಗಿಸುತ್ತಿದ್ದರು.

ನವರಾತ್ರಿಯಲ್ಲಿ ಸಪ್ತಶತಿ ಪಾರಾಯಣ ನಡೆಯುತ್ತಿದ್ದುದು ಕಿಟಿಕಿಯಿಂದ ಸ್ವಲ್ಪ ಈಚೆಗೆ. ಪೂಜೆಮಾಡುವವರನ್ನುಳಿದು ಉಳಿದವರು ನಿತ್ಯ ಸಂಧ್ಯಾವಂದನೆ ಮಾಡುವ ಜಾಗವೂ ಅದೇ ಆಗಿತ್ತು. ಸಂಧ್ಯಾವಂದನೆಗೆ ಮೊದಲು ಹಗಲಿನಲ್ಲಿ ಗಂಧ, ರಾತ್ರೆ ಭಸ್ಮ ಧರಿಸುವ ಸಂಪ್ರದಾಯ ನಮ್ಮಲ್ಲಿತ್ತು.

ಬಾಣಂತಿಯರು ಶುದ್ಧ ಆದ ದಿನ ದೇವರೆದುರು ಕೂತು ಮನೆಯ ಸಣ್ಣ ಮಕ್ಕಳೆಲ್ಲರ ತಲೆಗೆ ಎಣ್ಣೆ ಹಚ್ಚಿ, ತುಪ್ಪದಲ್ಲಿ ಕಲಸಿದ ಶುಂಠಿಬೆಲ್ಲ ತಿನ್ನಲು ಕೊಡುವ ಕ್ರಮ ಇತ್ತು. ದೀಪಾವಳಿ ಸಮಯದಲ್ಲಿ ತೈಲಾಭ್ಯಂಗದ ದಿನ ಸ್ನಾನಾರಂಭಕ್ಕೆ ಮೊದಲು ಮನೆಯ ಕಿರಿಯ ಬಾಲಕನು ದೇವರೆದುರು ಭೂಮಿಯ ಮೇಲೆ ಎಣ್ಣೆಯ ಬೊಟ್ಟುಗಳನ್ನು ಇಟ್ಟು ಅರಸಿನ ಕುಂಕುಮ, ಹೂಗಳನ್ನು ಏರಿಸಿ ಭೂಮಿ ಪೂಜೆ ಮಾಡುವ ಪದ್ಧತಿ ಇತ್ತು. ನಾನು ಕಿಶೋರನಾಗಿರುವಷ್ಟು ಸಮಯ ಈ ಅವಕಾಶ ನನ್ನ ಪಾಲಿಗೆ ಬರುತ್ತಿತ್ತು.

ದೇವರ ಮಂಟಪದ ಪಕ್ಕದಲ್ಲಿ ಬಲಬದಿಗೆ ಕುಡಿಯುವ ನೀರನ್ನು ತುಂಬಿಡುವ ರಾಂಧಣಿ ಎನ್ನುವ ಮಣ್ಣಿನ ದೊಡ್ಡ ಪಾತ್ರೆ ಇಡುವ ಜಾಗ. ಅದರ ಮೇಲ್ಗಡೆ ತಾಯಿಯವರು ಮಾಡುತ್ತಿದ್ದ ಕೆಲವು ವಿಶೇಷ ಪೂಜೆಗಳಿಗಾಗಿ ಒಂದು ಸಣ್ಣ ದೇವರ ಗೂಡು. ಅದರಿಂದಾಚೆ ಅಡುಗೆ ಮನೆಗೆ ಹೋಗುವ ಬಾಗಿಲು.

ಅಡುಗೆ ಮನೆಯ ಬಾಗಿಲ ಬಲಬದಿಯಲ್ಲೊಂದು ಸಣ್ಣ ಕಂಬ ನೆಟ್ಟದ್ದು ಕಾಣಿಸುತ್ತಿದೆಯಲ್ಲವೇ? ಚಿತ್ಪಾವನಿಯಲ್ಲಿ ಇದರ ಹೆಸರು ತಾಕ್ಕಮೀಠಿ. ಇದಕ್ಕೆ ಕಡಗೋಲು ಕಟ್ಟಿಯೇ ರಂಗನಾಯಕ ರಾಜೀವ ಲೋಚನ ಎಂದು ಹಾಡುತ್ತಾ ಮನೆಯ ಮಹಿಳೆಯರು ಭರಣಿಯಲ್ಲಿ ಮಜ್ಜಿಗೆ ಕಡೆಯುತ್ತಿದ್ದುದು. ಚಿಕ್ಕ ಮಕ್ಕಳ ತಿಂಗಳ ಹುಟ್ಟುಹಬ್ಬಗಳ ಆಚರಣೆ ಇದರ ಎದುರೇ ನಡೆಯುತ್ತಿದ್ದುದು. ಅದರ ಮೇಲ್ಗಡೆ ಕಾಣಿಸುತ್ತಿರುವ ಸಣ್ಣ ಗೂಡು, ಒಳಗಡೆ ಕನ್ನಡಿ ಅಳವಡಿಸಿದ ಅರಸಿನ ಕುಂಕುಮದ ಪೆಟ್ಟಿಗೆ ಇಡುವ ಜಾಗ.

ಈ ಫೋಟೊದಲ್ಲಿ ಕಾಣಿಸುವ ಭಾಗಕ್ಕಿಂತ ಸ್ವಲ್ಪ ಹಿಂದೆ ಗೋಡೆ ಬದಿಯಲ್ಲಿ ಹೆಚ್ಚುವರಿಯಾಗಿ ನಿಲ್ಲಿಸಿದ ಕಂಬವೊಂದು ಇತ್ತು. ಚಿಕ್ಕ ಮಕ್ಕಳು ಕಂಬ ಮತ್ತು ಗೋಡೆಯ ನಡುವಿನ ಸಂದಿಯಲ್ಲಿ ನುಸಿಯುವ ಆಟ ಆಡುವುದಿತ್ತು. ಆ ಕಂಬಕ್ಕೆ ಸ್ವಲ್ಪ ಬೆಣ್ಣೆಯನ್ನು ಮೆತ್ತಿಟ್ಟು ನೀರೆಲ್ಲ ಇಳಿದ ಮೇಲೆ ಅದರಲ್ಲಿ ಸಾಲಿಸಿಲಿಕ್ ಎಸಿಡ್ ಬೆರೆಸಿ ಫಂಗಸ್‌ನಿಂದ ಉಂಟಾಗುವ ಸಿಬ್ಬದಂಥ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತಿತ್ತು.

ಇನ್ನೂ ಹಿಂದಕ್ಕೆ ಹೋದರೆ ವೇದಮಂತ್ರಗಳ ಅಮೂಲ್ಯ ಗ್ರಂಥಗಳನ್ನು ಇಡುವ ಮರದ ಕಪಾಟು ಇತ್ತು. ಆಗಿನ ಗ್ರಂಥಗಳೆಂದರೆ ಹೊಲಿಗೆ ಹಾಕಿ ಬೈಂಡ್ ಮಾಡಿದ ಪುಸ್ತಕಗಳಲ್ಲ. ಬಿಡಿ ಹಾಳೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಮೇಲೊಂದು ಕೆಳಗೊಂದು ಹಾಳೆಗಳ ಆಕಾರದ್ದೇ ಮರದ ತೆಳ್ಳಗಿನ ಹಲಗೆಗಳನ್ನಿಟ್ಟು ನಾರು ಬಟ್ಟೆಯಿಂದ ಗಟ್ಟಿಯಾಗಿ ಸುತ್ತಿ ಹಗ್ಗದಿಂದ ಬಿಗಿದ ವೇಷ್ಟಣಗಳು ಅವು. ಪುಸ್ತಕದ ಹುಳಗಳು ಬರದಂತೆ ಹಾವಿನ ಪೊರೆಯನ್ನು ಪುಟಗಳ ಮಧ್ಯೆ ಇರಿಸುವ ಕ್ರಮ ಇತ್ತು.

ಈ ಕಪಾಟಿನ ಪಕ್ಕದಲ್ಲೇ ಪ್ರತಿಸಾಂವತ್ಸರಿಕ ಶ್ರಾದ್ಧ, ಮಹಾಲಯಗಳು ನಡೆಯುತ್ತಿದ್ದುದು.

ಇನ್ನೂ ಹಿಂದೆ ಹೋದರೆ ಪಾತ್ರೆಗಳ ಕೋಣೆಗೆ ಹೋಗುವ ಬಾಗಿಲು. ಹೆಸರೇ ಸೂಚಿಸುವಂತೆ ದಿನನಿತ್ಯದ ಅಗತ್ಯಕ್ಕೆ ಬೇಕಾಗದ ಪಾತ್ರೆಗಳನ್ನಿರಿಸುವ ಕೋಣೆ ಇದು. ತಂದೆಯವರು ವೀಳ್ಯಕ್ಕೆ ಉಪಯೋಗಿಸುತ್ತಿದ್ದ ಹೊಗೆಸೊಪ್ಪನ್ನು ಶೇಖರಿಸಿಡುವ ಭರಣಿ ಈ ಕೋಣೆಯಲ್ಲೇ ಇರುತ್ತಿದ್ದುದು. ಈ ಕೋಣೆಯಲ್ಲಿರುತ್ತಿದ್ದ ಮರದ ಪೆಟ್ಟಿಗೆಯೊಂದು ಚೌತಿಯ ಗಣಪನನ್ನು ಮಂಟಪದ ಹಿಂದೆ ಎತ್ತರದಲ್ಲಿ ಕೂರಿಸುವ ಪೀಠವಾಗಿ ಉಪಯೋಗಿಸಲ್ಪಡುತ್ತಿತ್ತು. ಬಾಹೆರ್ಲಿ ಮಾಳಿ ಈಗ ಆಂತ್ಲಿಮಾಳಿಯಿಂದ ಒಂದು ಬಾಗಿಲು ದಾಟಿ ಬಾಹೆರ್ಲಿಮಾಳಿಗೆ (ಹೊರಹಜಾರಕ್ಕೆ) ಬರೋಣ.

ಚಿತ್ರದಲ್ಲಿ ಕಾಣುತ್ತಿರುವುದು 1950ರ ದಶಕದಲ್ಲಿದ್ದ ಆ ಭಾಗದ ರೂಪ. ಅಲ್ಲಿರುವ ಬೃಹದಾಕಾರದ ಕಡೆಯುವ ಕಲ್ಲಿನಲ್ಲಿ ನಮ್ಮ ತಾಯಿಯವರು ದೀಪಾವಳಿಗೆ ದೋಸೆ ಹಿಟ್ಟು ರುಬ್ಬುತ್ತಿರುವ ದೃಶ್ಯ AIಯ ಸೃಷ್ಟಿ. ಇದೇನಿದು ದೀಪಾವಳಿಗೆ ದೋಸೆಹಿಟ್ಟು ಎಂದು ಕೆಲವರಿಗೆ ಅನುಮಾನ ಮೂಡಬಹುದು. ದಕ್ಷಿಣ ಕನ್ನಡದಲ್ಲಿ ದೀಪಾವಳಿ ಎಂದರೆ ದೋಸೆ ಹಬ್ಬವೇ. ನಮ್ಮ ಕರಾವಳಿ ಭಾಗದಲ್ಲಿ ದೀಪಾವಳಿಯಂದು ದೋಸೆ ಮಾಡುವ ಸಂಪ್ರದಾಯ ಬಲು ಹಿಂದಿನಿಂದಲೂ ಇದೆ. ದೀಪಾವಳಿಯ ಮುನ್ನಾ ದಿನ ಪ್ರತಿ ಮನೆಯಲ್ಲಿ ದೊಡ್ಡ ಹಂಡೆಯಲ್ಲಿ ಮೂರು ದಿನಕ್ಕೆ ಸಾಕಾಗುವಷ್ಟು ದೋಸೆಹಿಟ್ಟು ರುಬ್ಬಿಟ್ಟುಕೊಳ್ಳಲಾಗುತ್ತಿತ್ತು. ಹಬ್ಬದ ವಿಶೇಷವಾಗಿ ಅದಕ್ಕೆ ಸ್ವಲ್ಪ ಅರಸಿನವನ್ನೂ ಬೆರೆಸಲಾಗುತ್ತಿತ್ತು. ನರಕ ಚತುರ್ದಶಿಯಂದು ಬೆಳಗಿನ ಜಾವ ಎಲ್ಲರ ತೈಲಾಭ್ಯಂಗದ ನಂತರ ಬಾಳೆಹಣ್ಣಿನ ಸೀಕರಣೆಯ ಜೊತೆ ದೋಸೆ ಮತ್ತು ನೈವೇದ್ಯದ ಸಿಹಿ ಅವಲಕ್ಕಿ ಮೆಲ್ಲುವ ಕಾರ್ಯಕ್ರಮ. ಹಿರಿಯರು ಅಂದು ಮಧ್ಯಾಹ್ನ ಎಂದಿನಂತೆ ಅನ್ನ ಉಣ್ಣುತ್ತಿದ್ದರೂ ನಾನೂ ಸೇರಿದಂತೆ ಕಿರಿಯರೆಲ್ಲರಿಗೆ ಆ ದಿನ ಮೂರು ಹೊತ್ತೂ ದೋಸೆಯೇ! ಮುಂದಿನ ಮೂರು ದಿನವೂ ಬೆಳಗ್ಗೆಗೆ ದೋಸೆ. ದಿನದಿಂದ ದಿನಕ್ಕೆ ಹುಳಿ ಹೆಚ್ಚಾಗುತ್ತಾ ಹೋಗುತ್ತಿದ್ದ ಹಿಟ್ಟಿಗೆ ಕೊನೆಯ ದಿನ ಹಸಿ ಮೆಣಸು ಕೊಚ್ಚಿ ಹಾಕಿ ಮಾಡಿದ ದೋಸೆಗೆ ಅದ್ಭುತ ರುಚಿ. ಆಗ ನಮ್ಮಲ್ಲಿ ದೋಸೆಗೆ ಜೊತೆಯಾಗಿ ಚಟ್ಣಿ ಬಳಸುವ ಪರಿಪಾಠ ಇರಲಿಲ್ಲ. ಮನೆಯಲ್ಲಿ ಯಥೇಚ್ಛ ಜೇನುತುಪ್ಪ ಇರುತ್ತಿದ್ದುದರಿಂದ ಅದನ್ನೇ ತುಪ್ಪದ ಜೊತೆ ಬೆರೆಸಿ ಬಳಸುತ್ತಿದ್ದುದು. ಗೋಪೂಜೆಯ ದಿನ ದನಕರುಗಳಿಗೂ ಎರಡೆರಡು ದೋಸೆ ತಿನ್ನುವ ಭಾಗ್ಯ. ಪೂಜೆ ಇಲ್ಲದಿದ್ದರೂ ಎಮ್ಮೆಗಳಿಗೂ ದೋಸೆ ಸಿಗುತ್ತಿತ್ತು.

ನಾನು ಒಂದನೆಯ ಅಥವಾ ಎರಡನೆ ಕ್ಲಾಸಿನಲ್ಲಿ ಇರುವಾಗ ಕಡೆಯುವ ಕಲ್ಲು ಇದ್ದ ಜಾಗದಲ್ಲಿ ಹೊರಗಿನ ‘ಹೊಸ ಜಗಲಿ’ಗೆ ಹೋಗುವ ಬಾಗಿಲು ಬಂತು. ಕಡೆಯುವ ಕಲ್ಲು ಹೊಸ ಜಗಲಿಗೆ ಸ್ಥಳಾಂತರಗೊಂಡಿತು. ಆಣ್ಣಿ ಆಚಾರಿ ಹೊಸ ಜಗಲಿಗೆ ಮರದ ದಳಿ ಮತ್ತು ಇಲ್ಲಿ ಬಾಗಿಲು ಕೂರಿಸಿದ್ದು ನನಗೂ ನೆನಪಿದೆ. ಈ ಬಾಗಿಲಿನ ಒಳಬದಿಯ ಚಿಲಕಕ್ಕೆ ಆತ ರಹಸ್ಯ ಜಾಗದಲ್ಲಿ ಕಳ್ಳ ಕೀಲು ರಚಿಸಿ ಕೊಟ್ಟಿದ್ದ. ಮರದ ಬಾಗಿಲುಗಳಿಗೆ ಸಾಮಾನ್ಯವಾಗಿ ವಿರುದ್ಧ ದಿಕ್ಕಿಗೆ ಚಲಿಸುವ ಎರಡು ಚಿಲಕಗಳು ಇರುವುದು ವಾಡಿಕೆ. ಬಾಗಿಲು ಭದ್ರಪಡಿಸುವಾಗ ಒಂದೇ ಚಿಲಕ ಹಾಕಬೇಕೆಂದು ಅಣ್ಣಿ ಆಚಾರಿ ಹೇಳುತ್ತಿದ್ದ. ಹೀಗೆ ಮಾಡಿದರೆ ಯಾರಾದರು ಮಂತ್ರವಾದ ಮಾಡಿ ಚಿಲಕ ಸರಿಯಲಿ ಎಂದು ಹೇಳಿದ ಪಕ್ಷದಲ್ಲಿ ಒಂದು ಚಿಲಕ ತೆರೆದರೆ ಇನ್ನೊಂದು ಮುಚ್ಚುತ್ತದೆ ಎಂದು ಅವನ ಅಂಬೋಣ! ಕಡೆಯುವ ಕಲ್ಲು ಇದ್ದಲ್ಲಿ ಬಾಗಿಲು ಬಂದ ಮೇಲೆ.

ಮಕ್ಕಳ ತೊಟ್ಟಿಲು ಬಾಹೆರ್ಲಿ ಮಾಳಿಯಲ್ಲೇ ಇದ್ದದ್ದು. ಎಂದೋ ಎಂದೋ, ಎಂದೋ ನಿನ್ನ ದರುಶನ ಎಂದು ಹಾಡುತ್ತಾ ಅಂಬಕ್ಕ ನನ್ನನ್ನು ತೂಗಿದ್ದು ಇಲ್ಲೇ. ಹರಿಹರ ಅಣ್ಣ ಸಂಜೆ ನಮ್ಮನ್ನು ತೊಟ್ಟಿಲಲ್ಲಿ ಕೂರಿಸಿ ತೂಗುತ್ತಾ ಬಾಯಿಪಾಠ ಹೇಳಿಕೊಡುತ್ತಿದ್ದರು. ಇದು ಶುಭಂ ಕರೋತು ಕಲ್ಯಾಣಂ ಶ್ಲೋಕದಿಂದ ಆರಂಭವಾಗಿ ಆದಿತ್ಯವಾರ ಸೋಮವಾರ, ಪಾಡ್ಯ ಯುಗಾದಿ ಪಾಡ್ಯ ಬಿದಿಗೆ ಸೋಮನ ಬಿದಿಗೆ, ಚೈತ್ರ ವೈಶಾಖ, ವಸಂತ ಋತು ಗ್ರೀಷ್ಮ ಋತು, ಮೇಷ ವೃಷಭ, ಅಶ್ವಿನಿ ಭರಣಿ, ಬವ - ಸಿಂಹ, ಬಾಲವ - ಹುಲಿ, ಪ್ರಭವ ವಿಭವ ಇತ್ಯಾದಿ ಕಾಲ ಗಣನೆಯ ಎಲ್ಲ ಕೋಷ್ಟಕಗಳನ್ನು ಒಳಗೊಂಡಿರುತ್ತಿತ್ತು. ಕೊನೆಯಲ್ಲಿ ಸಂಡೆ ಮಂಡೆ ಹೇಳಿಕೊಡುತ್ತಿದ್ದ ನಮ್ಮಣ್ಣ ಸಾಟರ್‌ಡೇ ಆದ ಮೇಲೆ ಪ್ರಾಸಬದ್ಧವಾಗಿ ಪತ್ರೋಡೆಯನ್ನೂ ಸೇರಿಸುತ್ತಿದ್ದರು!

ಸ್ವಲ್ಪ ದೊಡ್ಡವರಾದ ಮೇಲೆ ನಾವು ತೊಟ್ಟಿಲಿನ ಆಚೀಚೆ ಅಂಚುಗಳ ಮೇಲೆ ಇಬ್ಬರು ಕುಳಿತು ಜೀಕುತ್ತಾ ಬಾರೊ ಬಾರೊ ಬಾರೊ ಗಣಪ, ಗೆಳೆಯನೆ ಪೇಳುವೆ ಕೇಳಣ್ಣ, ಝನ್ ಝನ್‌ಕ ಝನ್ಕರೊ ಇತ್ಯಾದಿ ಹಾಡು ಹೇಳುತ್ತಿದ್ದೆವು. 

ತೊಟ್ಟಿಲಿನ ಸಮೀಪ ಗೋಡೆಯಲ್ಲಿ ಇದ್ದ ಗೂಡು ಚಿಮಿಣಿ ದೀಪಗಳು ಮತ್ತು L ಆಕಾರದ outlet ಇದ್ದ ಹಸುರುಬಣ್ಣದ ಚಿಮಿಣಿ ಎಣ್ಣೆಯ ಕ್ಯಾನ್ ಇಡುವ ಜಾಗವಾಗಿತ್ತು. ಇನ್ನೊಂದು ಬದಿಯಲ್ಲಿದ್ದ ಗೂಡಿನಲ್ಲಿ ತೆಂಗಿನೆಣ್ಣೆಯ ಉರುಳಿ ಇಡುತ್ತಿದ್ದ ಜಾಗ.

ಹೊರಗಿನ ಚಾವಡಿಯಿಂದ ಇಲ್ಲಿಗೆ ಬರುವ ಬಾಗಿಲಿನ ಮೇಲ್ಭಾಗದಲ್ಲಿ ಆಣಿ, ಸ್ಕ್ರೂ, ಬೋಲ್ಟ್, ನಟ್ ಇತ್ಯಾದಿ ಸಕಲ ಗುಜರಿ ವಸ್ತುಗಳನ್ನು ಹಾಕಿಡುವ ನಳೊ ಎಂಬ ಹೆಸರಿನ, ಮೇಲ್ಭಾಗ ತೆರೆದಿರುವ ಬಿದಿರಿನ ಅಂಡೆ ತೂಗಾಡುತ್ತಿತ್ತು. ಅಲ್ಲೇ ಸಮೀಪದಲ್ಲಿ ಕೃಷಿ ಕೆಲಸದ ಕತ್ತಿಗಳನ್ನು park ಮಾಡುವ ಸೀಳು ಬಿದಿರು.

ಚೌತಿಯ ಮಂಟಪ ಇಲ್ಲೇ ಇರುತ್ತಿದ್ದುದು. ಮಂಟಪವನ್ನು ನಿಲ್ಲಿಸಲು ಬೇಕಾಗುವ ಎರಡು ಬಿದಿರುಗಳು ಬಚ್ಚಲುಮನೆಯ ಅಟ್ಟದ ಮೇಲಿರುತ್ತಿದ್ದವು. ಅವುಗಳನ್ನು ಕೆಳಗಿಳಿಸಿ ತೊಳೆದು ಮಧ್ಯಾಹ್ನದೊಳಗೆ ಸೂಕ್ತ ಜಾಗದಲ್ಲಿ ಕಟ್ಟಿ ಮಾಳಿಗೆಯ ಮೇಲಿರುತ್ತಿದ್ದ ಮರದ ಮಂಟಪವನ್ನು ತಂದು ಅಳವಡಿಸುವ ಕೆಲಸ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು. ಮನೆಯ ಆಳು ಕಾಳುಗಳಿಗೂ ಚೌತಿ ಗಣಪನ ದರ್ಶನ ಭಾಗ್ಯ ಸಿಗಲಿ ಎಂಬ ಉದ್ದೇಶದಿಂದ ಮಂಟಪಕ್ಕೆ ದೇವರ ಕೋಣೆ ಇದ್ದ ಆಂತ್ಲಿಮಾಳಿಯ ಬದಲು ಹೊರ ಚಾವಡಿಯಿಂದಲೂ ವೀಕ್ಷಿಸಲು ಸಾಧ್ಯವಾಗುವ ಈ ಸ್ಥಳವನ್ನು ನಿಗದಿ ಪಡಿಸಿರಬಹುದು.

ನಾವು ಮನೆಯಲ್ಲಿ ಬೆಳ್ತಿಗೆ ಅಕ್ಕಿ ಬಳಸುವುದು. ತೋಟಕ್ಕೆ ಮದ್ದು ಬಿಡುವವರಿಗೆ ಮತ್ತು ಅಡಿಕೆ ಕೊಯ್ಲು ಮಾಡುವವರಿಗೆ ಹೊರಗಡೆ ಕುಚ್ಚಲು ಅಕ್ಕಿಯ ಅನ್ನ ಮಾಡಿ ಬಡಿಸುವುದಿತ್ತು. ಕೊಟ್ಟಣದ ಕುಚ್ಚಲಕ್ಕಿಯ ಪರಿಮಳಕ್ಕೆ ಮನಸೋತ ನಮಗೂ ಅದನ್ನು ಉಣ್ಣಬೇಕೆಂದು ಆಸೆಯಾದರೆ ಹೊರ ಹಜಾರದಲ್ಲಿ ಕುಳಿತು ಉಣ್ಣುವ ಅನುಮತಿ ಸಿಗುತ್ತಿತ್ತು. ಜೊತೆಗೆ ದೀಗುಜ್ಜೆಯ ಹುಳಿ ಏನಾದರೂ ಇದ್ದರೆ ನಿತ್ಯದ ಎರಡರಷ್ಟು ಅನ್ನ ನಮ್ಮ ಹೊಟ್ಟೆ ಸೇರುತ್ತಿತ್ತು. ಆ ಕಾಲದಲ್ಲಿ ಕುಚ್ಚಲು ಅಕ್ಕಿಗೆ ಒಳಗೆ ಪ್ರವೇಶವಿರಲಿಲ್ಲ.

ಎದುರು ಭಾಗದಲ್ಲಿ ಕಾಣುವ ಮರದ ಕಪಾಟು ತೀರಾ ಹಳೆ ಕಾಲದ್ದಲ್ಲ. ನಮ್ಮ ನೆನಪಿನಲ್ಲೇ ಇನ್ನೊಬ್ಬ ಆಣ್ಣಿ ಆಚಾರಿ ಮಾಡಿದ್ದು. ಆತ ಹವ್ಯಾಸಿ ಯಕ್ಷಗಾನ ಹಲಾವಿದ ಕೂಡ. ಅನೇಕ ವರ್ಷಗಳ ನಂತರ ನಾನು ಮಂಗಳೂರಲ್ಲಿ ಮನೆ ನಿರ್ಮಿಸಿದಾಗ ಕಿಟಿಕಿ ಬಾಗಿಲುಗಳನ್ನು ಆತನೇ ನಿರ್ಮಿಸಿ ಕೊಟ್ಟದ್ದು. ಕಪಾಟುಗಳಿಗೆ, ಬಾಗಿಲುಗಳಿಗೆ ಕುಸುರಿ ಕೆತ್ತನೆ ಮಾಡುವ ಕೌಶಲವೂ ಅವನಲ್ಲಿತ್ತು. ನಮ್ಮ ಮನೆಯ ಮುಂಬಾಗಿಲಿಗೂ ಚಂದದ ಡಿಸೈನ್ ಮಾಡಿ ಕೊಟ್ಟಿದ್ದಾನೆ.

ಮುಂದುಗಡೆ ಕಾಣುವ ಮಾಳಿಗೆ ಮೆಟ್ಟಲಿರುವ ಜಂಕ್ಷನ್‌ನ ಎದುರುಗಡೆ ಮೂಲೆಯಲ್ಲಿ ಕಡಿದ ಬಾಳೆಗೊನೆ ಇಡುವ ಜಾಗ. ಅಲ್ಲೇ ಎಡಕ್ಕೆ ತಿರುಗಿದರೆ ಹಿತ್ತಲ ಜಗಲಿಗೆ ಹೋಗುವ, ಬಿಜಾಗಿರಿ ಬದಲಿಗೆ ಮೇಲೆ ಮತ್ತು ಕೆಳಗೆ ಮೊಳೆಕ್ಕುತ್ತಿ ಇರುವ ದಪ್ಪದ ಬಾಗಿಲಿನ ಹಿಂಭಾಗ ಹಲಸಿನ ಬೀಜಗಳನ್ನು ಹಸಿಮಣ್ಣಿನೊಡನೆ ಕಲಸಿ ಗುಡ್ದದಂತೆ ಮೆತ್ತಿಡುವ ಜಾಗ. ಹೀಗೆ ಸಂರಕ್ಷಿಸಿದ ಹಲಸಿನ ಬೀಜಗಳು ಎಷ್ಟು ಸಮಯವಾದರೂ ಕೆಡುವುದಿಲ್ಲ. ಬೇಕೆನಿಸಿದಾಗ ಆ ಗುಡ್ಡವನ್ನು ಅಗೆದು ಬೀಜಗಳನ್ನು ಗುದ್ದಿ ಬಳಸಿದರಾಯಿತು.




Sunday, 5 October 2025

ಕಣ್ತೆರೆದು ನೋಡು


1956ರ ಮುತ್ತೈದೆ ಭಾಗ್ಯ ಚಿತ್ರದಲ್ಲಿ ನಮ್ಮೂರೆ ಅಂದ ನಮ್ಮೋರೆ ಚಂದ ಅನ್ನುವ ನಾಡು ನುಡಿ ಕುರಿತಾದ ಹಾಡು ಇದ್ದರೂ ಮೊದಲು ಅಘೋಷಿತ ನಾಡಗೀತೆಯಾಗಿ ಜನಮನದಲ್ಲಿ ನೆಲೆಸಿದ್ದು 1961ರಲ್ಲಿ ಪ್ರದರ್ಶಿತವಾದ ಕಣ್ತೆರೆದು ನೋಡು ಚಿತ್ರದ ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ  ಹಾಡು.  

ಆ ಸಿನಿಮಾದಲ್ಲಿ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಸ್ವತಃ ರೇಡಿಯೊ ನಿಲಯದಲ್ಲಿ  ಹಾಡುವ ಈ ಹಾಡು ಆಕಾಶವಾಣಿಯಲ್ಲೂ ಪದೇ ಪದೇ ಪ್ರಸಾರವಾಗುತ್ತಿದ್ದುದು ಇದಕ್ಕೆ ಇಷ್ಟೊಂದು ಜನಪ್ರಿಯತೆ ಸಿಗಲು ಕಾರಣವಾಗಿರಬಹುದು.  

ನಮ್ಮ ಮನೆಗೆ ಆಗಲೇ ರೇಡಿಯೋ ಬಂದಿದ್ದರೂ ಅದರಲ್ಲಿ ಕೇಳುವ ಮೊದಲೇ ನನಗೆ ಈ ಹಾಡಿನ ಪರಿಚಯವಾದದ್ದು ನಮ್ಮೂರಿನ ಪ್ರಸಿದ್ಧ ಕವಿ ರಾಮಚಂದ್ರಮಾಸ್ಟ್ರ  ಮಕ್ಕಳು ಅದನ್ನು ನಮ್ಮ ಶಾಲೆಯಲ್ಲಿ ಹಾಡಿದಾಗ.  ಏಕಪಾಠಿಗಳಾದ ಅವರು ಇದನ್ನು ಎಲ್ಲಿ ಕೇಳಿ ಕಲಿತುಕೊಂಡಿದ್ದರೋ ಏನೋ. 

ನಾನು ಜಿ.ಕೆ. ವೆಂಕಟೇಶ್ ಅನ್ನುವ ಹೆಸರು ಮೊದಲು ಕೇಳಿದ್ದೂ ಈ ಹಾಡಿನ ಜೊತೆಯಲ್ಲಿಯೇ.  ಆಗ ವಿವಿಧಭಾರತಿ ಹೊರತುಪಡಿಸಿ  ಇತರ ನಿಲಯಗಳಲ್ಲಿ ಸಿನಿಮಾ ಹಾಡುಗಳನ್ನು ಪ್ರಸಾರ ಮಾಡುವಾಗ ಗಾಯಕರು ಮತ್ತು ಕವಿಯ ಹೆಸರು ಮಾತ್ರ ಹೇಳುತ್ತಿದ್ದರೇ ಹೊರತು ಸಂಗೀತ ನಿರ್ದೇಶಕರ ಹೆಸರು ಹೇಳುತ್ತಿರಲಿಲ್ಲ. ಜಿ.ಕೆ. ವೆಂಕಟೇಶ್ ಎಂದು ಕೇಳಿದಾಗ ಬೆಳ್ತಂಗಡಿ ಬಸ್‌ಸ್ಟೇಂಡಿನಲ್ಲಿ  ಕಾಕಿ  ಚಡ್ಡಿ ಮತ್ತು ಶರ್ಟ್ ಧರಿಸಿ ಶರಬತ್ತು ತುಂಬಿದ ಗ್ಲಾಸುಗಳನ್ನು ತಟ್ಟೆಯಲ್ಲಿಟ್ಟುಕೊಂಡು ಮಾರುತ್ತಿದ್ದ ತೆಳ್ಳಗಿನ ವ್ಯಕ್ತಿಯ ಚಿತ್ರ ನನ್ನ  ಕಣ್ಣ ಮುಂದೆ ಬರುತ್ತಿದ್ದುದು! ಬೇಸಗೆ ರಜೆಯಲ್ಲಿ  ತಾಯಿಯೊಂದಿಗೆ ಅಜ್ಜಿಮನೆಗೆ ಹೋಗುವಾಗ  ಬೆಳ್ತಂಗಡಿಯಲ್ಲಿ ಹನುಮಾನ್ ಬಸ್ಸಿಗೆ ಕಾಯುವ ಸಮಯದಲ್ಲಿ ಈ ಹಾಡಿನ ಗುಂಗು ನನ್ನ ಮನಸ್ಸನ್ನು ಆವರಿಸಿದ್ದಾಗ ಆ ವ್ಯಕ್ತಿಯನ್ನು ಕಂಡದ್ದು ಇದಕ್ಕೆ ಕಾರಣವಾಗಿರಬಹುದು.

ನಾನು ಬಾಲ್ಯದಿಂದಲೂ ನೋಡಲು ಹಾತೊರೆಯುತ್ತಿದ್ದ, ಆದರೆ ನೋಡಲು ಅವಕಾಶ ಸಿಗದಿದ್ದ  ಚಿತ್ರ  ಕಣ್ತೆರೆದು ನೋಡು.  ಅನೇಕ ದಶಕಗಳ ನಂತರ TVಯಲ್ಲಿ ಕನ್ನಡ ಪ್ರಸಾರ ರಾಜ್ಯವ್ಯಾಪಿಯಾಗಿ  ವಾರಕ್ಕೊಂದು ಕನ್ನಡ ಚಿತ್ರ ಪ್ರಸಾರವಾಗತೊಡಗಿ ಈ ಚಿತ್ರದ ಸರದಿ ಬಂದಾಗಲಷ್ಟೇ ನನ್ನ ಕನಸು ಕೈಗೂಡಿದ್ದು. 

ಕಣ್ತೆರೆದು ನೋಡು ಚಿತ್ರದ ಕನ್ನಡದ ಮಕ್ಕಳೆಲ್ಲ ಹಾಡು ಅಘೋಷಿತ ನಾಡಗೀತೆ ಎನಿಸಿದರೂ  ಅದರ  ಉಳಿದೆಲ್ಲ ಹಾಡುಗಳೂ ಜನಪ್ರಿಯವೇ. ಭಕ್ತ ಕನಕದಾಸದ ನಂತರ ರಾಜಕುಮಾರ್ ಅವರ  ಎಲ್ಲ ಹಾಡುಗಳನ್ನು ಪಿ.ಬಿ.ಶ್ರೀನಿವಾಸ್ ಹಾಡಿದ ಮೊದಲ  ಸಾಮಾಜಿಕ ಚಿತ್ರ  ಇದು.  ಕನ್ನಡದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ಪಿ.ಬಿ.ಎಸ್ ಅವರಿಗೆ ಈ  ಚಿತ್ರ ಸಹಾಯ ಮಾಡಿತು.

ಅರುಣಾಚಲಮ್ ಸ್ಟುಡಿಯೋಸ್‌ನ  ಎ.ಕೆ. ವೇಲನ್ ನಿರ್ಮಿಸಿದ  ಈ ಚಿತ್ರದ ಪಾರಿಭಾಷಿಕ ವರ್ಗದ ವಿವರಗಳು ಹೀಗಿವೆ.
ಚಿತ್ರ ನಾಟಕ, ಸಂಭಾಷಣೆ : ಜಿ.ವಿ. ಅಯ್ಯರ್.
ಸಂಗೀತ : ಜಿ’ಕೆ. ವೆಂಕಟೇಶ್.
ಗೀತೆಗಳು : ಪುರಂದರದಾಸರು, ಜಿ.ವಿ. ಅಯ್ಯರ್.
ಹಿನ್ನೆಲೆ ಗಾಯಕರು : ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ಎಲ್.ಆರ್. ಈಶ್ವರಿ, ಬೆಂಗಳೂರು ಲತಾ.
ಛಾಯಾಗ್ರಹಣ : ಬಿ.ದೊರೈರಾಜ್.
ನಿರ್ದೇಶನ :  ಟಿ.ವಿ. ಸಿಂಗ್ ಠಾಕೂರ್.
ತಾರಾಗಣ: ರಾಜಕುಮಾರ್, ಎಂ. ಲೀಲಾವತಿ, ಬಾಲಕೃಷ್ಣ, ನರಸಿಂಹರಾಜು, ರಾಜಶ್ರೀ, ಜಿ.ವಿ. ಅಯ್ಯರ್, ರಮಾದೇವಿ, ಗಣಪತಿ ಭಟ್ ಮತ್ತಿತರರು.

ಬೌದ್ಧಿಕ ಆಸ್ತಿಯ ಒಡೆತನದ ಬಗ್ಗೆ (ಕಾಪಿ ರೈಟ್) ಅನೇಕ ದಶಕಗಳ ಹಿಂದೆ ಬಂದ ಕನ್ನಡ  ಚಿತ್ರ ಎಂಬುದು ಇದರ ಹೆಗ್ಗಳಿಕೆ.  ಆಗ ನಮ್ಮ ಮನೆಗೆ ಬರುತ್ತಿದ್ದ ವಿಕಟವಿನೋದಿನಿ ಎಂಬ ಮಾಸ ಪತ್ರಿಕೆಯಲ್ಲಿ  ಸರಳ ಕತೆ, ಪ್ರತಿಭಾಪೂರ್ಣ ಸಾಹಿತ್ಯ, ಮಧುರ ಸಂಗೀತ ಹಾಸ್ಯದ ಹೊನಲು ಕೂಡಿ ಬಹು ರಮ್ಯವಾಗಿ ಚಿತ್ರಿತವಾದ ಚಿತ್ರ ಎಂದು ಇದನ್ನು ಬಣ್ಣಿಸಲಾಗಿತ್ತು. 

ಈಗ ಒಂದೊಂದೇ ಹಾಡಿನ ವಿವರ ನೋಡುತ್ತಾ, ಚಿತ್ರದ  ಕಥೆ ತಿಳಿಯುತ್ತಾ ಹೋಗೋಣ.

ಶರಣು ಕಾವೇರಿ ತಾಯೆ
ಕಣ್ಣಿನ ಚಿಕಿತ್ಸೆಗಾಗಿ ಪಟ್ಟಣಕ್ಕೆ ಹೊರಟ ಚಿತ್ರದ ದೃಷ್ಟಿಹೀನ ನಾಯಕ  ಗೋಪು (ರಾಜಕುಮಾರ್) ದೋಣಿಯಲ್ಲಿ  ಕಾವೇರಿ ನದಿ ದಾಟುವಾಗಿನ ಪಿ.ಬಿ.ಎಸ್ ಹಾಡು ಇದು. ಹಾಡು ಮುಗಿಯುತ್ತಲೇ ದೋಣಿ ಸುಳಿಗೆ ಸಿಕ್ಕು ಗೋಪುವಿನ ತಂದೆ  ಮತ್ತು ತಂಗಿ ಇಂದು ದಿಕ್ಕಾಪಾಲಾಗುತ್ತಾರೆ. ಗೋಪು ಒಬ್ಬನೇ ಹೇಗೋ ದಡ ಸೇರುತ್ತಾನೆ.   

ಅಂತರ್ಜಾಲದಲ್ಲಿ  ಕಣ್ತೆರೆದು ನೋಡು ಸಿನಿಮಾ ಲಭ್ಯವಿದ್ದರೂ ಈ ಹಾಡಿನ ಭಾಗ ರಸಭಂಗವಾಗುವಷ್ಟು ಕ್ಷತಿಗ್ರಸ್ತವಾಗಿದೆ. ಆದರೆ  ಇಲ್ಲಿ ನಿಮಗೆ  ಪೂರ್ತಿಯಾಗಿ ಕೇಳಲು ಸಿಗುತ್ತದೆ. ಇದರಲ್ಲಿ ಕೋರಸ್ ಸ್ವರಗಳು ಹಾಡುವ ತೆರೆ ತೆರೆ ತೆರೆ ತೇಲಿ ಬರೆ, ಸರ ಸರ ಸರವಾಗಿ ನೊರೆ ರೀತಿಯ ಸಾಲುಗಳನ್ನು ಬಂಗಾರದ ಮನುಷ್ಯದ ಆಹಾ ಮೈಸೂರು ಮಲ್ಲಿಗೆಯಲ್ಲೂ ಬಳಸಲಾಗಿದೆ.  ಬೆಳ್ತಂಗಡಿಯ ಭಾರತ್ ಟಾಕೀಸಿನಲ್ಲಿ ದೀಪಗಳು ಆರಿ ತೆರೆಯ ಮೇಲೆ ಜಾಹೀರಾತುಗಳು ಬೀಳಲು ಆರಂಭವಾಗುವಾಗ ಈ ಹಾಡು ಹಾಕುತ್ತಿದ್ದರು. 

ಈ ಹಾಡಿನ ಆರ್ಕೆಸ್ಟ್ರೇಷನ್ ಅತಿ ಸುಂದರವಾಗಿದ್ದು, ಡೋಲು, ಢೋಲಕ್,  ಚೈನೀಸ್ ಟೆಂಪಲ್ ಬ್ಲಾಕ್, ಕೊಳಲು, ಗಿಟಾರ್, ಮ್ಯಾಂಡೊಲಿನ್, ವಯಲಿನ್ಸ್ ಇತ್ಯಾದಿ ವಾದ್ಯಗಳ ಹಾಗೂ ಕೋರಸ್ ಧ್ವನಿಗಳ ಸುಂದರ ಸಂಗಮವಿದೆ.

ಶರಣು ಕಾವೇರಿ ತಾಯೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ
ತೆರೆ ತೆರೆ ತೆರೆ ತೇಲಿಬರೆ ಸರ ಸರವಾಗಿ ನೊರೆ
ತುಂತುರು ತುಂತುರು ನೀರಹನಿ
ಕಲ ಕಲ ಮಾಡೆ ದನಿ

ಪುರದ ಪುಣ್ಯವತಿ ..........
ಪುರದ ಪುಣ್ಯವತಿ ಗಂಗೆ ತಾಯೆ
ಕರೆದು ಕಣ್ತೆರೆದು ನೋಡೆಲೆ ನೀಯೆ
ಓ ----
ಕರೆದು ಕಣ್ತೆರೆದು ನೋಡೆಲೆ ನೀಯೆ
ಕುರುಡು ಬಾಳಿನ ಸಾಗರಕೊಂದೆ
ಹರಿಯ ನಾಮ ಹರಿಗೋಲೆಂಬೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ

ಒಹೊ ಹೊ ...............
ಅಲೆಯ ಒಂದರಲಿ........
ಅಲೆಯ ಒಂದರಲಿ ಆಸೆಯು ಆರು
ಬಲೆಯ ತಾ ಬೀಸೆ ಬೀಳದೆ ಜಾರು
ಓ...........
ಬಲೆಯ ತಾ ಬೀಸೆ ಬೀಳದೆ ಜಾರು
ಮದವು ಮೋಹ ತುಂಬಿದ ಮೇಲೆ
ಬದುಕು ಬಾಳೆ ಬರಿ ಸಂಕೋಲೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ



ಕಲ್ಲು ಸಕ್ಕರೆ ಕೊಳ್ಳಿರೊ
ದೋಣಿ ಮಗುಚಿ ಮುಳುಗಿ ಹೋದರೂ ಹೇಗೋ ಬದುಕಿದ ಗೋಪು  ದಾಸಣ್ಣನೆಂಬ(ಬಾಲಕೃಷ್ಣ) ದಗಲ್ಬಾಜಿ ವ್ಯಕ್ತಿಯ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಗೋಪು ಒಳ್ಳೆಯ ಹಾಡುಗಾರನೆಂದು ಅರಿತ ಆತ ಇದರಿಂದ ಹಣ ಸಂಪಾದಿಸಬಹುದೆಂದು ಎಣಿಸಿ ಈ ದೇವರ ನಾಮ ಹಾಡಿಸುತ್ತಾನೆ.

ಕಲ್ಲು ಸಕ್ಕರೆ ಕೊಳ್ಳಿರೊ ನೀವೆಲ್ಲರು
ಕಲ್ಲು ಸಕ್ಕರೆ ಕೊಳ್ಳಿರೊ
ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀ ಕೃಷ್ಣ ನಾಮವೆಂಬ
ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳ್ ತುಂಬುವುದಲ್ಲ
ಎತ್ತ ಹೋದರೂ ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ತರುವಂಥ
ಕಲ್ಲು ಸಕ್ಕರೆ ಕೊಳ್ಳಿರೊ 
ಸಂತೆ ಕಂತೆಗೆ ಹೋಗಿ ಶ್ರಮ ಪಡಿಸುವುದಲ್ಲ
ಸಂತೆಯೊಳಗೆ ಇದು ಮಾರುವುದಲ್ಲ
ಸಂತತ ಭಕ್ತರ ನಾಲಿಗೆ ಸವಿಗೊಂಬ
ಕಾಂತ ಪುರಂದರ ವಿಠ್ಠಲ ನಾಮವೆಂಬ
ಕಲ್ಲು ಸಕ್ಕರೆ ಕೊಳ್ಳಿರೊ 


ಹಗಲೂ ಇರುಳು, ಸಿಗದಣ್ಣಾ ಇದು ನಾಳೆಗೆ ಸಿಗದು, ನಿನಗಿದು ನ್ಯಾಯವೇ



ದಾಸರ ಪದದಿಂದ ಸಾಕಷ್ಟು ದುಡ್ಡು ಸಂಗ್ರಹ ಆಗದಿದ್ದುದರಿಂದ  ದಾಸಣ್ಣನ ಕೋರಿಕೆಯಂತೆ ಗೋಪು ಹಾರ್ಮೋನಿಯಮ್ ನುಡಿಸುತ್ತಾ ತಾನೇ ರಚಿಸಿದ ಈ ಹಾಡುಗಳನ್ನು ಹಾಡುತ್ತಾನೆ.  ಮೆಚ್ಚಿದ ಜನರು ಕೊಟ್ಟ ಚಿಲ್ಲರೆ ಕಾಸನ್ನೆಲ್ಲ ದಾಸಣ್ಣ ಲಪಟಾಯಿಸುತ್ತಾನೆ. 

ಪಿ.ಬಿ.ಎಸ್ ಅವರ ಧ್ವನಿಯಲ್ಲಿರುವ ಆರ್ದ್ರತೆ ಈ ಕಿರು ಅವಧಿಯ ಹಾಡುಗಳನ್ನು ನೇರವಾಗಿ ಹೃದಯಕ್ಕಿಳಿಯುವಂತೆ ಮಾಡುತ್ತದೆ. ಬೀದಿ ಬದಿ ಹಾಡುಗಾರನನ್ನು ಪ್ರತಿನಿಧಿಸುವ ಹಾರ್ಮೋನಿಯಮ್ ಮತ್ತು ಢೋಲಕ್ ಸಂಗಮವಂತೂ ಹೃದಯಂಗಮ.  ಹಾಡುಗಳ  ನಡುವೆ ಬರುವ ಸಂಭಾಷಣೆಯ ತುಣುಕುಗಳಲ್ಲಿ ಒಂದು ಕಡೆ ರಫಿಯ ಉಲ್ಲೇಖ ಇರುವುದನ್ನು ಗಮನಿಸಿ. ನಿನಗಿದು ನ್ಯಾಯವೇ ಭಾಗದ ಆರಂಭದ ಆಲಾಪ ನಮ್ಮನ್ನು ಯಾವುದೋ ಲೋಕಕ್ಕೆ ಒಯ್ಯುತ್ತದೆ.  ಸಾಕ್ಷಾತ್ಕಾರ ಚಿತ್ರದ ಜನುಮ ಜನುಮದ ಅನುಬಂಧ ಹಾಡಿನ ಆರಂಭವೂ ಸುಮಾರಾಗಿ ಹೀಗೆಯೇ ಇದೆ.

ಹಗಲು ಇರುಳು ಕೊರಗೆ ಬರಿದೆ
ನಗುತಲಿ ನಲಿವ ದಿನವೇ ಇರದೆ

ಕರುಣೆಯ ನಗದ ಹೊಸ ವ್ಯಾಪಾರ
ಧಾರಣೆ ಮಾಡುವ ನೆಂಟರು ದೂರ
ಮಾಡಿದ ಪಾಪ ಭೋಗಿಸಲಾರೆ
ಎಂದರೆ ಕೇಳುವ ದೇವರು ಯಾರಾ
ಹಗಲು ಇರುಳು ಕೊರಗೆ 

ದಾಸಣ್ಣ: ಗೋಪು, ಇವತ್ತು ಯಾಕೋ ದೇವ್ರು ವರ ಕೊಡ್ಳಿಲ್ಲ ಕಣಯ್ಯ.  ನಾಳೆಯಿಂದ  ಈ ಪ್ರಾರ್ಥನೆ ರೀತಿನೇ ಬದ್ಲಾಯಿಸಿ ಬಿಡ್ಬೇಕು. ದಾಸರ ಪದಕ್ಕೆ ಸಲಾಮ್ ಹೊಡ್ದು ನಿನ್ನ ಸ್ವಂತದ್ದು ಯಾವ್ದಾದ್ರೂ ಲೈಟ್ ಸಾಂಗ್ ಹಾಡಯ್ಯಾ ನಾಳೆಯಿಂದ. 

ಸಿಗದಣ್ಣ ಇದು ನಾಳೆಗೆ ಸಿಗದು
ಸೊಗಸಿನ ನೋಟದ ಸಿರಿಯಣ್ಣ

ಧನಿಕನ ಸಾವಿರ ದಾನದ ಮೇಲೆ
ಬಡವನ ಒಡವೆ ಇದೆಯಣ್ಣ
ಸಿಗದಣ್ಣ ಇದು ನಾಳೆಗೆ ಸಿಗದು

ಕುರುಡನ ಕಣ್ಣಿಗೆ ಕಾಣುವುದಣ್ಣ
ಮುರಹರ ನಿನ್ನಯ ನಿಜ ಬಣ್ಣ
ಸಿಗದಣ್ಣ ಇದು ನಾಳೆಗೆ ಸಿಗದು

ದಾಸಣ್ಣ: ಅಪ್ಪಾ, ಗೋಪೂ, ನಿನ್ನ ಹಾಡೇ ಇಷ್ಟು ರಂಗು ಕಟ್ಟಿದೆ ಅಂದ ಮೇಲೆ ಆ ರಫಿ ಹಾಡುವಂಥಾದ್ದು ಒಂದನ್ನು ಎತ್ತಿ ನೋಡು. ದೇವ್ರು ತಬ್ಬಿಬ್ಬಾಗಿ ಬಗ್ಗಿಸಿ ಬಿಡ್ತಾನೆ ಭಂಡಾರಾನ. ಬಾ, ನಾಳೆ ಇನ್ನೊಂದು ಗುಡಿ ಇನ್ನೊಂದು ದೇವ್ರು. ನೋಡೋಣ.

ನಿನಗಿದು ನ್ಯಾಯವೇ ಮೋಸ
ದಾನಿಯಾಗಿ ಈ ವಂಚನೆ ವೇಷ
ನಿನಗಿದು ನ್ಯಾಯವೇ

ಮಾನಹೀನರ ಸಂಗವು ಸಾಕು
ಜ್ಞಾನ ಸಾಧನೆಯು ಎನಗಿರಬೇಕು
ದೀನಪಾಲಕ ನೀನಿರುವನಕ
ನಿನ್ನ ಸೇವೆಯ ನೀಡೋ ಸಾಕು

ಹಗಲೂ ಇರುಳೂ


ಸಿಗದಣ್ಣಾ, ನಿನಗಿದು ನ್ಯಾಯವೇ


ಬಂಗಾರದೊಡವೆ ಬೇಕೇ
ತನ್ನ ಹಾಡುಗಳಿಂದ ದೊರಕಿದ ಹಣವನ್ನು ದಾಸಣ್ಣ ಲಪಟಾಯಿಸಿದ್ದನ್ನು ತಿಳಿದು ಬೇಸರಗೊಂಡ ಗೋಫು ಆತನ ಸಹವಾಸ ತೊರೆಯುತ್ತಾನೆ . ಒಂದು ದಿನ ನದಿ ತೀರದಲ್ಲಿ ಕುಳಿತು ನದಿಯನ್ನು ಸ್ತ್ರೀಗೆ ಹೋಲಿಸಿ ಈ ಹಾಡು ಹಾಡುತ್ತಾನೆ.  ಅಲ್ಲಿ ಜಲಕ್ರೀಡೆಯಾಡುತ್ತಿದ್ದ ನಾಯಕಿ ಕಮಲ (ಲೀಲಾವತಿ) ಇದು ತನ್ನನ್ನು ಕುರಿತು ಹಾಡಿದ್ದೆಂದು ಭಾವಿಸಿ ಗೋಪುವಿನ ಕೆನ್ನೆಗೆ  ಬಾರಿಸುತ್ತಾಳೆ.  ಆ ಮೇಲೆ  ಗೋಪುವಿನ ಪ್ರೇಮಪಾಶಕ್ಕೆ ಸಿಲುಕಿ ಅವಳೇ ಬೆಂಗಳೂರು ಲತಾ ಧ್ವನಿಯಲ್ಲಿ  ಈ ಹಾಡು ಹಾಡುವ ಪ್ರಸಂಗವೂ ಬರುತ್ತದೆ.  

ಬಂಗಾರದೊಡವೆ ಬೇಕೆ ನೀರೆ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಬಂಗಾರದೊಡವೆ ಬೇಕೆ ನೀರೆ

ನಿಲ್ಲದೆ ನೀನೋಡಲೇಕೆ ನೀರೆ
ಕಣ್ಮನ ತಣಿಸುವ ಅಮೃತದ ಧಾರೆ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಬಂಗಾರದೊಡವೆ ಬೇಕೆ ನೀರೆ

ಸಂಜೆಯ ಹೊಂಬಿಸಿಲು ಸೂರ್ಯನ ಕೆಂಪೊಡಲು
ಅಂಗ ಸಂಗವ ಬಯಸಿ ನಿನ್ನ ಬಿಗಿದು ಅಪ್ಪಿರಲು
ಎಂಥ ರಮ್ಯದ ನೋಟ ನೋಡೆ
ನಿನ್ನಯ ಒಡಲು ನೀರೆ
ಅಂಗನೆ ನಿನ್ನಂಗ ಸಿಂಗಾರಕೊಪ್ಪುವ
ಬಂಗಾರದೊಡವೆ ಬೇಕೆ ನೀರೆ

ಭಾಗ  2

ನೀರಡಿಕೆ ನಿನಗೆಂದು ನೀರೆ ನೀರನು ನೀಡೆ
ನೀನಿಂತು ನೋಡಲೇಕೆ ನೀರಾ
ಇನ್ನೇಕೆ ಬಾಯಾರಿಕೆ

ನೀರಡಿಕೆ ನೀರಿನದೆ ನೀನರಿಯೆಯಾ ಮುಗುದೆ
ಕಾರುಣ್ಯ ತೋರೆಯೇಕೆ ನೀರೇ
ಎನ್ನಾಸೆ ಈಡೇರದೇ
ಸೋತಿರುವ ಜೀವನಕೆ ಸಂಜೀವಿನಿಯಾಗೆ
ಅಮೃತವಾಹಿನಿ ಗಂಗೆ ಶರಣು ನಿನಗೆ
ಅಂಗನೆ ನಿನ್ನಂಗ ಸಿಂಗಾರಕೊಫ್ಫುವ 
ಬಂಗಾರದೊಡವೆ ಬೇಕೆ




ಹೆಣ್ಣಿನ ಮೇಲೆ ಕಣ್ಣಿಡುವಾಗ
ಅದೃಷ್ಟವಶಾತ್ ತಾನು ಹುಡುಕಿಕೊಂಡು ಬಂದಿದ್ದ ಕಣ್ಣಿನ  ಡಾಕ್ಟರ್ ಅಮೃತರಾಯರ (ಜಿ.ವಿ. ಅಯ್ಯರ್) ಭೇಟಿ  ಗೋಪುವಿಗೆ ಆಗುತ್ತದೆ.  ಅವರು ಆತನನ್ನು ತನ್ನ ಮನೆಯಲ್ಲಿರಿಸಿಕೊಂಡು ಚಿಕಿತ್ಸೆ ಪ್ರಾರಂಭಿಸುತ್ತಾರೆ. ಗೋಪುವಿನ ಹಾಡು ಕೇಳಿ ಕೆನ್ನೆಗೆ ಹೊಡೆದಿದ್ದ ಕಮಲಾ ಅಮೃತರಾಯರ ಪುತ್ರಿಯೇ  ಆಗಿರುತ್ತಾಳೆ.  ಅಮೃತರಾಯರ ಚಿಕಿತ್ಸೆಯಿಂದ ದೃಷ್ಟಿ ಮರಳಿ ಪಡೆದ ಗೋಪು ಮತ್ತು ಕಮಲಾ ಮಧ್ಯೆ ಪ್ರೇಮಾಂಕುರವಾಗಿ ಪಿ.ಬಿ.ಎಸ್ ಮತ್ತು ಎಸ್. ಜಾನಕಿ ಧ್ವನಿಯಲ್ಲಿ  ಈ ಹಾಡು ಹಾಡುತ್ತಾರೆ.  ಸಾರಂಗಿಯ ಸುಂದರ ಬಳಕೆ ಈ ಹಾಡಲ್ಲಿದೆ. ಹೊಸದಾಗಿ ಪ್ರೇಮಿಸತೊಡಗುವ ಗಂಡು ಹೆಣ್ಣುಗಳಿಗೆ ಒಂದು ರೀತಿಯ ನೀತಿಪಾಠವೂ ಇದರಲ್ಲಿದೆ.

ಈ ಹಾಡು ಮತ್ತು ಕರುಣೆಯೇ ಕುಟುಂಬದ ಕಣ್ಣು ಚಿತ್ರದ ನಿಜವೋ ಸುಳ್ಳೋ ನಿರ್ಧರಿಸಿ ಒಂದಕ್ಕೊಂದು ಸಂವಾದಿ ಎಂದೂ, ಇದು ಸ್ವಲ್ಪ ಮೇಲ್ದರ್ಜೆಗೆ ಸೇರಿದ್ದ್ದು ಅನ್ನುವ  ವಿಚಿತ್ರ ಭಾವನೆ ನನ್ನಲ್ಲಿತ್ತು!  ನಿಜವೋ ಸುಳ್ಳೋ ರೇಡಿಯೋದಲ್ಲಿ ಆಗಾಗ ಮತ್ತು ಈ ಹಾಡು  ಅಪರೂಪಕ್ಕೆ ಎಂದಾದರೊಮ್ಮೆ ಕೇಳಲು ಸಿಗುತ್ತಿದ್ದುದು ಇದಕ್ಕೆ ಕಾರಣವೋ ಏನೋ.  ಈ ಹಾಡಿನಲ್ಲಿ ನಾಟಕದಂತೆ ಜೀವನವಲ್ಲ ಎಂಬ ಸಾಲು ಇರುವುದರಿಂದ ಇದು ನಾಟಕ ರಂಗದ ಹಿನ್ನೆಲೆಯ ಕಥೆ ಇರುವ ಸಿನಿಮಾ ಆಗಿರಬಹುದೆಂದೂ ನನಗನ್ನಿಸಿತ್ತು.

ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಲ್ಲಿ ಇದರ ತುಣುಕನ್ನು ಬಳಸಲಾಗಿದೆ.

ಹೆಣ್ಣಿನ ಮೇಲೆ ಕಣ್ಣಿಡುವಾಗ ನಿಗಾ ತುಂಬ ಬೇಕು
ಕಣ್ಣಲ್ಲಿ ಕಣ್ಣಿರಬೇಕು ಛಲ ಬೇಕು
ಹೆಣ್ಣಾಸೆ ಏನದು ಎಂದು ತಿಳಿಬೇಕು

ನಾಟಕದಂತೆ ಜೀವನವಲ್ಲ ಇದೇ ಬೇರೆ ಆಟ
ಜೀವಂತ ಭಾವದ ಎಲ್ಲ ಜಂಜಾಟ
ಕಣ್ಣೀರ ಕಾಲುವೆಯಲ್ಲೇ ಈಜಾಟ

ಕಣ್ಣೀರ ಹಿಂದೆ ಕೈವಾಡವೇನು
ನಾವ್ಯಾರೂ ಕಾಣದಂಥ ನೋವೇನು
ಯಾರೋ ವಿರೋಧಿ ಇಂದು
ವಿಷ ಹಿಂಡಿ ಹೋದನೇನು
ಹೊನ್ನಾದ ನಮ್ಮೀ ಆಸೆ ಮಣ್ಣೇನು
ಹೆಣ್ಣಾಸೆ ಏನದು ಎಂದು ತಿಳಿಬೇಕು

ಹೂವೊಂದೇ ಬೇರೆ ನಾರೊಂದೇ ಬೇರೆ
ಹೂಮಾಲೆ ಆಗದಂತೆ ಕೈಯಾರೆ
ಏನೋ ವಿನೋದ ನೋಡೆ 
ವಿಧಿ ನಿಂತು ಮಣ್ಣು ತೂರೆ್
ಕಣ್ಣೀರ ನೀತಿ ನೋಡು ಕೈಯಾರೆ




ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ



ದೃಷ್ಟಿ ಬಂದ ಮೇಲೆ  ಗೋಪುವನ್ನು ಅಮೃತರಾಯರು ತನ್ನ ಮನೆಯಲ್ಲೇ ಇರಿಸಿಕೊಳ್ಳುತ್ತಾರೆ. ಆದರೆ ಕಮಲಳ ಮದುವೆ ಅಮೃತರಾಯರ ತಂಗಿ ಮಗ ಮಧುವಿನೊಂದಿಗೆ (ನರಸಿಂಹರಾಜು) ಮೊದಲೇ ನಿಶ್ಚಯವಾಗಿರುವುದನ್ನು ತಿಳಿದು ಮನ ನೊಂದ ಗೋಪು ಅವರ ಮನೆಯಿಂದ ಹೊರಬೀಳುತ್ತಾನೆ. ಹೋಟೆಲೊಂದರಲ್ಲಿ ತಂಗಿ ಕವನಗಳನ್ನು ರಚಿಸಿ ಅವುಗಳನ್ನು ಪ್ರಕಟಿಸಲು ಪ್ರಯತ್ನಿಸುತ್ತಾನೆ.  ಆದರೆ ಯಾರೂ ಆತನನ್ನು ಪ್ರೋತ್ಸಾಹಿಸುವುದಿಲ್ಲ. ಹೀಗಿರುವಾಗ  ಆತನ  ಕವಿತೆಗಳಿದ್ದ ಕಾಗದದ ಕಟ್ಟು ಕಳೆದು ಹೋಗಿ ದಾಸಣ್ಣನ ಕೈ ಸೇರುತ್ತದೆ.  ಆತ ತನ್ನ ಹೆಸರಿನಲ್ಲಿ ಅವುಗಳನ್ನು ಪ್ರಕಟಿಸಿ ದೊಡ್ಡ ಕವಿ ಎನಿಸಿಕೊಳ್ಳುತ್ತಾನೆ.  ಹತಾಶನಾದ ಗೋಪು ಅಂಡಲೆಯುತ್ತಿದ್ದಾಗ ತಾನು ಬರೆದ ಹಾಡು ದಾಸಣ್ಣನ  ಹೆಸರಿನೊಂದಿಗೆ ರೇಡಿಯೊ ಮೂಲಕ ಪ್ರಸಾರವಾಗುವುದನ್ನು ಕೇಳಿಸಿಕೊಳ್ಳುತ್ತಾನೆ.  ಅಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದ ಸಾರ್ವಜನಿಕ  ರೇಡಿಯೊ ಪೆವಿಲಿಯನ್ ಮತ್ತು ಜಿ. ಕೆ. ವೆಂಕಟೇಶ್ ಅವರು ಆಕಾಶವಾಣಿ ಸ್ಟುಡಿಯೊದಲ್ಲಿ ಆರ್ಕೆಷ್ಟ್ರಾದೊಂದಿಗೆ ಹಾಡುವ ದೃಶ್ಯ ಈ ಹಾಡಿನ ಸಂದರ್ಭದಲ್ಲಿ ನೋಡಲು ಸಿಗುತ್ತವೆ. ಆರಂಭದಲ್ಲಿ ಟೈಟಲ್ಸ್ ಹಿನ್ನೆಲೆಯಾಗಿಯೂ  ಈ ಹಾಡನ್ನು ಬಳಸಲಾಗಿದೆ.

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ ಜಯಭೇರಿ ನಾವಾದವೆನ್ನ
ಗೆಳೆತನದ ವರದ ಹಸ್ತ ನೀಡಿ ಬನ್ನಿ
ಮೊಳೆತಿರುರುವ ಭೇದಗಳ ಬಿಟ್ಟು ಬನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ

ಒಂದು ತಾಯಿಯ ಮಡಿಲ ಮಕ್ಕಳೆನ್ನಿ
ಒಂದು ತಾಯಿಯ ನುಡಿಯ ನುಡಿವೆವೆನ್ನಿ
ಕೀಳು ನಾವೆಂಬುವರ ಕಣ್ತೆರೆಯಿರೆನ್ನಿ
ಬೀಳು ನಾವೆಂಬುವರ ಬಾಯ್ಮುಚ್ಚ ಬನ್ನಿ
ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಗಂಗ ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ
ಯಾದವ ಬಲ್ಲಾಳ ವಿಜಯನಗರ ವೀರರ
ಗತ ವೈಭವ ಕಾಣುವ
ನವಶಕ್ತಿಯ ತುಂಬುವ 
ಭುವನೇಶ್ವರಿ ನೀಡುವ
ಸಂದೇಶವ ಸಾರುವ


 

ಎಡವಿದರೆ ನಾಕುರುಳು
ಕೆಲವು ಸಜ್ಜನರಿಗೆ ದಾಸಣ್ಣನ ಮೋಸದ ಬಗ್ಗೆ ತಿಳಿಯುತ್ತದೆ. ಅವರ ಪ್ರಯತ್ನದಿಂದ  ಆತನ ಬಂಡವಾಳ ಬಯಲು ಮಾಡುವ ಸಲುವಾಗಿ ಹೂಡಿದ ತಂತ್ರದ ಭಾಗ ಈ ಹಾಡು. ಎಲ್.ಆರ್. ಈಶ್ವರಿ ಮತ್ತು  ಎಸ್. ಜಾನಕಿ ಧ್ವನಿಗಳಲ್ಲಿದೆ. ಸಾರಂಗಿ, ಮ್ಯಾಂಡೊಲಿನ್ ಮತ್ತು  ಮಹಾರಾಷ್ಟ್ರದ ಢೋಲಕಿಯ ಅದ್ಭುತ  ನುಡಿತ ಇದರಲ್ಲಿದೆ.  ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಲ್ಲಿ ಈ ಹಾಡಿನ ತುಣುಕೂ ಇದೆ.

ಎಡವಿದರೆ ನಾಕುರುಳು ನುಡಿ ಜಾರೆ ನೂರುರುಳು
ನಡೆ ಜಾರೆ ಹೆಣ್ಣಿನ ಕೊರಳಿಗೆ ಉರುಳು

ಕಂಕಣ ಕಾಲುಂಗುರ ಸಿಂಗಾರದ ಗೋಪುರ
ಸುಂದರಿಯಳ ವೈಯಾರ ಗಂಡಿಗೇಕೆ ಬೇಸರ

ಎಡವಿದರೆ ನಾಕುರುಳು ನುಡಿ ಜಾರೆ ನೂರುರುಳು
ನಡೆ ಜಾರೆ ಗಂಡಿಗೆ ನರಕವೇ ನೆರಳು
ಎಡವಿದರೆ ನಾಕುರುಳು 

ಜಾಣೆಯಂತೆ ಮಾತನಾಡಿ ಜಾರಿ ಜಾರಿ ಬೀಳಬೇಡ
ಜಾರಿ ನೀನು ಬಿದ್ದಾಗ ನಗುವೆ ಏಕೆ ಎನಬೇಡ
ಎಡವಿದರೆ ನಾಕುರುಳು 

ನೀತಿ ನೂರು ಪಾಠ ನೂರು ಹೇಳುವವರು ಸಾವಿರಾರು
ಮಾತಲೊಂದು ಗೋಪುರ ಕಟ್ಟಬೇಡ ನೀ ಚತುರ
ಎಡವಿದರೆ ನಾಕುರುಳು 




ಕೊನೆಗೆ ಒಂದಷ್ಟು ಡಿಶುಂ ಡಿಶುಂ ಇತ್ಯಾದಿ ಆಗಿ ದಾಸಣ್ಣ ಸೋಲೊಪ್ಪಿಕೊಳ್ಳುತ್ತಾನೆ. ಗೋಪುವಿಗೆ ನ್ಯಾಯ ಸಿಗುತ್ತದೆ. ಆಗಲೇ ನಿಶ್ಚಯವಾಗಿದ್ದ ಮದುವೆ  ಮಧುವಿಗೆ ಇಷ್ಟವಿಲ್ಲದ್ದರಿಂದ ಕಮಲಳೂ ಸಿಗುತ್ತಾಳೆ. ಕಳೆದು ಹೋಗಿದ್ದ ತಂಗಿ, ತಂದೆ ಎಲ್ಲರೂ ಒಟ್ಟಾಗಿ ಎಲ್ಲವೂ ಸುಖಾಂತ್ಯವಾಗುತ್ತದೆ.

ಎಲ್ಲ ವಿಭಾಗಗಳಲ್ಲೂ  ಉತ್ತಮವೇ ಆದ ಈ ಚಿತ್ರದ ಹೈಲೈಟ್ ಮೋಸಗಾರ ದಾಸಣ್ಣನಾಗಿ  ಬಾಲಕೃಷ್ಣ ಅವರ ನಟನೆ. ಅವರಷ್ಟು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದವರು ಕನ್ನಡ ಮಾತ್ರವಲ್ಲ,  ಯಾವ ಚಿತ್ರರಂಗದಲ್ಲೂ ಇರಲಾರರು.

 



 






Saturday, 29 March 2025

ಸಪ್ತಸ್ವರಗಳ ಸುತ್ತ


ಏಳು ಸ್ವರವು ಸೇರಿ ಸಂಗೀತವಾಯಿತು, ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು, ಪಂಚಮದಲ್ಲಿ ಹಾಡಿತು ಕೋಗಿಲೆ, ಇನಿಯ ಕೋಗಿಲೆಯ ಪಂಚಮದಿಂಚರ, ವಸಂತ ಕೋಗಿಲೆ ಪಂಚಮನೋಂಚರ, ಎಲ್ಲೆಲ್ಲೂ ಸಂಗೀತವೇ  ಹೀಗೆ ಅನೇಕ ಜನಪ್ರಿಯ ಚಿತ್ರಗೀತೆಗಳು ನಮಗೆ ಸರಳವಾಗಿ ಸಂಗೀತಜ್ಞಾನವನ್ನು ಬೋಧಿಸಿವೆ. ಪ್ರಕೃತಿಯಲ್ಲಿ ತಾನು ಆಲಿಸಿದ ವಿವಿಧ ಶಬ್ದಗಳನ್ನು ಮಾನವ ಅನುಕರಿಸಿ ತನ್ನ ಅನುಕೂಲಕ್ಕಾಗಿ ಸ್ಥೂಲವಾಗಿ ಅವುಗಳನ್ನು ಷಡ್ಜ-ಸ, ರಿಷಭ-ರಿ, ಗಾಂಧಾರ-ಗ, ಮಧ್ಯಮ-ಮ , ಪಂಚಮ-ಪ, ಧೈವತ-ದ, ನಿಷಾದ-ನಿ   ಎಂದು ವಿಂಗಡಿಸಿಕೊಂಡಿರಬಹುದು. ಸಾಮಗಾಯನದ ವಿವರಗಳನ್ನು ತಿಳಿಸುವ ನಾರದೀಯ ಶಿಕ್ಷಾ ಎಂಬ ವೇದಾಂಗ ಗ್ರಂಥದಲ್ಲಿ ಒಂದೆಡೆ ಹೀಗೆ ಹೇಳಲಾಗಿದೆ.
ಷಡ್ಜಂ ವದತಿ ಮಯೂರೋ ಗಾವೋ ರಂಭಂತಿ ಚರ್ಷಭಮ್
ಅಜಾವಿಕೇ ತು ಗಾಂಧಾರಂ ಕ್ರೌಂಚೋ ವದತಿ ಮಧ್ಯಮಮ್
ಪುಷ್ಪಸಾಧಾರಣೇ ಕಾಲೇ ಕೋಕಿಲೋ ವಕ್ತಿ ಪಂಚಮಮ್ 
ಅಶ್ವಸ್ತು ಧೈವತಂ ವಕ್ತಿ ನಿಷಾದಮ್ ವಕ್ತಿ ಕುಂಜರಃ || 
ಅಂದರೆ ನವಿಲು ಷಡ್ಜದಲ್ಲೂ, ಗೋವುಗಳು  ರಿಷಭದಲ್ಲೂ, ಆಡು ಕುರಿಗಳು ಗಾಂಧಾರದಲ್ಲೂ,  ಕ್ರೌಂಚಪಕ್ಷಿಯು ಮಧ್ಯಮದಲ್ಲೂ,  ವಸಂತಕಾಲದ ಕೋಗಿಲೆಯು ಪಂಚಮದಲ್ಲೂ, ಕುದುರೆಯು ಧೈವತದಲ್ಲೂ, ಆನೆಯು ನಿಷಾದದಲ್ಲೂ ಧ್ವನಿಯನ್ನು ಹೊರಡಿಸುತ್ತವೆ. ಇದೇ ಶ್ಲೋಕದ ಇನ್ನೊಂದು ಪಾಠಾಂತರವು  ಅಮರಕೋಶದ ನಾಟ್ಯವರ್ಗ ಅಧ್ಯಾಯದಲ್ಲಿ ಹೀಗಿದೆ.
ಷಡ್ಜಂ ಮಯೂರೋ ವದತಿ ಗಾವೋ ನರ್ದಂತಿ ಚರ್ಷಭಮ್
ಅಜಾವಿಕಂ ತು ಗಾಂಧಾರಂ ಕ್ರೌಂಚಃ ಕ್ವಣತಿ ಮಧ್ಯಮಮ್
ಪುಷ್ಪಸಾಧಾರಣೆ ಕಾಲೇ ಪಿಕಃ ಕೂಜತಿ ಪಂಚಮಮ್
ಧೈವತಂ ಹೇಷತೇ ವಾಜೀ ನಿಷಾದಮ್ ಬೃಂಹತೇ ಗಜಃ ||


ಕಾಲಕ್ರಮೇಣ ಈ ಸ, ರಿ, ಗ, ಮ, ಪ, ದ, ನಿ ಎಂಬ ಸಪ್ತಸ್ವರಗಳ ಪೈಕಿ  ಷಡ್ಜ ಮತ್ತು ಪಂಚಮಗಳನ್ನು ಸ್ಥಿರವಾದ ಪ್ರಕೃತಿ ಸ್ವರಗಳೆಂದೂ ಉಳಿದ ರಿಷಭ, ಗಾಂಧಾರ, ಮಧ್ಯಮ, ಧೈವತ ಮತ್ತು ನಿಷಾದಗಳನ್ನು ಬದಲಾವಣೆ ಹೊಂದಬಹುದಾದ ವಿಕೃತಿ ಸ್ವರಗಳೆಂದೂ ವಿಂಗಡಿಸಲಾಯಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ  ಈ ವಿಕೃತಿ ಸ್ವರಗಳಲ್ಲಿ ಮಧ್ಯಮವನ್ನು ಎರಡಾಗಿ ಹಾಗೂ ಉಳಿದವನ್ನು ಮೂರು ಮೂರಾಗಿ   ವಿಭಜಿಸಿ ಹನ್ನೆರಡು ಸ್ವರಸ್ಥಾನಗಳಲ್ಲಿ ಹದಿನಾರು ಸ್ವರಗಳನ್ನು ಕಲ್ಪಿಸಿ  ಇವುಗಳಿಗೆ ಸೂಕ್ತ ಹೆಸರುಗಳನ್ನು ನೀಡಲಾಯಿತು.  ವಿಕೃತಿ  ಸ್ವರಗಳನ್ನು ಹೆಸರುಗಳ ಬದಲಿಗೆ  ರಿ1, ರಿ2, ಗ2, ಗ3 ಹೀಗೆ ಸಂಖ್ಯೆಗಳ ಮೂಲಕವೂ ಗುರುತಿಸಲಾಗುತ್ತದೆ.  ಸ್ವರಲಿಪಿಯನ್ನು ಬರೆಯಲು ಸಂಖ್ಯೆಗಳ ಪದ್ಧತಿಯೇ ಅನುಕೂಲ.  12 ಸ್ಥಾನಗಳಲ್ಲಿ 16 ಸ್ವರಗಳು ಹೇಗೆ ಅಡಕವಾಗಿವೆ ಎನ್ನುವುದನ್ನು ಕೆಳಗಿನ ಪಟ್ಟಿಯಲ್ಲಿ  ನೋಡಬಹುದು.  ರಿ2 ಮತ್ತು ಗ1, ರಿ3 ಮತ್ತು ಗ2, ದ2 ಮತ್ತು ನಿ1 ಹಾಗೂ ದ3 ಮತ್ತು ನಿ2 ಒಂದೇ ಸ್ವರಸ್ಥಾನ ಹಂಚಿಕೊಂಡಿರುವುದನ್ನು ಗಮನಿಸಿ. ಸಂದರ್ಭಾನುಸಾರ ಈ 8 ಸ್ವರಗಳನ್ನು ವಿಭಿನ್ನವಾಗಿ ಗುರುತಿಸಲಾಗುತ್ತದೆ ಎಂದಷ್ಟೇ ಇದರ ಅರ್ಥ.  ಮುಂದೆ ಮೇಳಕರ್ತ ರಾಗಗಳ ಬಗ್ಗೆ ಚರ್ಚಿಸುವಾಗ ಇದು ಹೆಚ್ಚು ವಿಷದವಾಗುತ್ತದೆ.



ಹಿಂದುಸ್ಥಾನಿ ಸಂಗೀತದಲ್ಲೂ ಇದೇ ಪದ್ಧತಿಯನ್ನು ಅನುಸರಿಸಿದರೂ ಅಲ್ಲಿ ಸ್ವರಗಳ ಸಂಖ್ಯೆಯನ್ನು ಹನ್ನೆರಡು ಸ್ವರಸ್ಥಾನಗಳಿಗೆ ಸರಿಹೊಂದುವಂತೆ ಸೀಮಿತಗೊಳಿಸಿ ಕೊಂಚ ಭಿನ್ನವಾದ ಹೆಸರುಗಳನ್ನು ಕೊಡಲಾಯಿತು. ಇವುಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ.  ಮಧ್ಯಮಕ್ಕೆ ಮಾತ್ರ ಕೆಳಗಿನ ಸ್ವರ ಶುದ್ಧ, ಮೇಲಿನದು ತೀವ್ರ.  ಉಳಿದವಕ್ಕೆಲ್ಲ ಕೆಳಗಿನ ಸ್ವರ ಕೋಮಲ, ಮೇಲಿನದು ಶುದ್ಧ.


ನಮ್ಮ ಸ, ರಿ, ಗ, ಮ, ಪ, ದ, ನಿಗಳನ್ನು C, D, E, F, G, A, Bಗೆ ಬದಲಾಯಿಸಿಕೊಂಡು ದೊ, ರೆ, ಮಿ, ಫಾ, ಸ, ಲಾ, ಟಿ ಎಂದು ಕರೆದ  ಪಾಶ್ಚಾತ್ಯ ಸಂಗೀತವೂ ಸ್ವರಗಳಿಗೆ flat, natural ಮತ್ತು  sharp ಎಂಬ suffixಗಳನ್ನು ಸೇರಿಸಿಕೊಂಡು 12  ಸ್ವರಗಳ ಕಲ್ಪನೆಯನ್ನು ತನ್ನದಾಗಿಸಿಕೊಂಡಿತು.  ಭಾರತದ ಕರ್ನಾಟಕಿ ಮತ್ತು ಹಿಂದುಸ್ತಾನಿ ಶೈಲಿಗಳಲ್ಲಿ ಸ್ವರಗಳ ವಿಭಜನೆ ಇತ್ಯಾದಿ ಕರಾರುವಾಕ್ಕಾಗಿದ್ದರೂ ಮೂಲ ಷಡ್ಜದ ಶ್ರುತಿಯನ್ನು ನಿಗದಿಪಡಿಸುವಲ್ಲಿ ಗೊಂದಲವಿತ್ತು. ಶ್ಲೋಕದಲ್ಲಿ ವಿವರಿಸಿದಂತೆ ಹಿಂದಿನ ಕಾಲದಲ್ಲಿ ಪ್ರಾಣಿ ಪಕ್ಷಿಗಳ ಧ್ವನಿಯನ್ನಾಧರಿಸಿ ಅಂದಾಜಿನ ಮೇಲೆ ಷಡ್ಜವನ್ನು ನಿರ್ಧರಿಸುತ್ತಿದ್ದರೋ ಏನೋ.   ಹಾರ್ಮೋನಿಯಮ್ ನಮ್ಮ ದೇಶಕ್ಕೆ ಕಾಲಿರಿಸಿದ ಮೇಲೆ ಅದರ ಬಿಳಿ, ಕಪ್ಪು ಪಟ್ಟಿಗಳ ಆಧಾರದ ಮೇಲೆ   ಶ್ರುತಿಯನ್ನು ನಿರ್ಧರಿಸಿ  ಮೊದಲ ಬಿಳಿ ಪಟ್ಟಿಯ ಶ್ರುತಿಗೆ ಬಿಳಿ ಒಂದು, ಎರಡನೇ ಬಿಳಿ ಪಟ್ಟಿಗೆ ಬಿಳಿ ಎರಡು,  ಒಂದು ಮತ್ತು ಎರಡನೇ ಬಿಳಿ ಪಟ್ಟಿಯ ನಡುವಿನ ಕಪ್ಪು ಪಟ್ಟಿಯ ಶ್ರುತಿಗೆ ಕಪ್ಪು ಒಂದು ಅಥವಾ ಒಂದೂವರೆ ಪಟ್ಟಿ ಹೀಗೆ ಗುರುತಿಸುವ ಪರಿಪಾಠ ಆರಂಭವಾಯಿತು.  ಆದರೆ ಇಲ್ಲೂ ಅನೇಕ ಸಲ ಹಾರ್ಮೋನಿಯಂನಿಂದ ಹಾರ್ಮೋನಿಯಂಗೆ  ಶ್ರುತಿಯಲ್ಲಿ ವ್ಯತ್ಯಾಸ ಇರುತ್ತಿತ್ತು.   ಹೀಗಾಗಿ ನಿಶ್ಚಿತ ಶ್ರುತಿಯ ಕೊಳಲಿನಂಥ ವಾದ್ಯಗಳನ್ನು ನುಡಿಸುವವರಿಗೆ ಸಮಸ್ಯೆಯುಂಟಾಗುತ್ತಿತ್ತು.  ಆಧಾರ ಶ್ರುತಿಗಳಲ್ಲಿ ಸಮಾನತೆ ಸಾಧಿಸುವ ಸಲುವಾಗಿ ಪಾಶ್ಚಾತ್ಯ ಸಂಗೀತದಲ್ಲಿ  ಪಿಯಾನೋದ 4ನೇ ಸಪ್ತಕದ 6ನೇ ಬಿಳಿ ಕೀ ಅಂದರೆ A(ದ2) ಸ್ವರದ ಕಂಪನಾಂಕ 440 Hz ಇರಬೇಕೆಂಬ ನಿಯಮ ಜಾರಿಗೊಳಿಸಲಾಗಿತ್ತು.  ಇದರ ಆಧಾರದ  ಮೇಲೆ ತಯಾರಾದ ಪಿಚ್ ಪೈಪುಗಳು ಸಿಗಲಾರಂಭಿಸಿದ ಮೇಲೆ ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ದೂರವಾಯಿತು.   ಈಗ ಬರುತ್ತಿರುವ ಬಹುತೇಕ ಇಲೆಕ್ಟ್ರಾನಿಕ್ ಶ್ರುತಿಪೆಟ್ಟಿಗೆಗಳು ಹಾಗೂ ಸಂಗೀತೋಪಕರಣಗಳು  ಈ A 440 Hz ಆಧಾರಿತ Stuttgart ಸ್ಟಾಂಡರ್ಡ್ ಶ್ರುತಿ ಹೊಂದಿರುತ್ತವೆ.


ಈಗಿನ ದಿನಗಳಲ್ಲಿ  ನಮ್ಮಲ್ಲೂ C, C#, G ಹೀಗೆ ಪಾಶ್ಚಾತ್ಯ notationಗಳ ರೂಪದಲ್ಲೂ ಶ್ರುತಿಯನ್ನು ಗುರುತಿಸುವುದಿದೆ.  ಉದಾಹರಣೆಗೆ ಯಾರಾದರೂ ‘ನಾನು G#(G sharp) ಶ್ರುತಿಯಲ್ಲಿ ಹಾಡುತ್ತೇನೆ’,  ಅಥವಾ ‘ನಾನು ಕಪ್ಪು 4ರಲ್ಲಿ ಹಾಡುತ್ತೇನೆ’, ಅಥವಾ ‘ನನ್ನ ಶ್ರುತಿ ಐದುವರೆ ಪಟ್ಟಿ’ ಎಂದು ಹೇಳಿದರೆ ಎಲ್ಲದರ ಅರ್ಥ ಒಂದೇ.  ಕಪ್ಪು ಕೀಗಳನ್ನು ಹಿಂದಿನ ಬಿಳಿ ಕೀಯ sharp ಅನ್ನುವ ಬದಲಾಗಿ ಮುಂದಿನ ಬಿಳಿ ಕೀಯ flat  ಎಂದು ಗುರುತಿಸುವ ಪದ್ಧತಿಯೂ ಇದೆ.  ಆದರೆ ನಮ್ಮಲ್ಲಿ ಈ ರೀತಿಯ ಬಳಕೆ ಕಮ್ಮಿ.  ಟಿ.ವಿ.ಯ ರಿಯಾಲಿಟಿ ಸಂಗೀತ ಕಾರ್ಯಕ್ರಮಗಳ ಕೆಲವು ನಿರ್ಣಾಯಕರು ಆಗಾಗ ‘ನೀವು flat ಹಾಡಿದ್ರಿ’, ‘ ನೀವು ಹಾಡಿದ್ದು ಕೆಲವು ಕಡೆ sharp ಆಗ್ತಿತ್ತು’ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ.  ಸ್ಪರ್ಧಿಗಳು ಕೆಲವು ಸಲ ಆಧಾರ ಶ್ರುತಿಗಿಂತ ಕೆಳಗೆ ಹಾಡಿದ ಹಾಗೆ,  ಕೆಲವು ಸಲ ಶ್ರುತಿ ಜಾಸ್ತಿ ಆದ ಹಾಗೆ ಅವರಿಗನ್ನಿಸಿತು ಎಂದು ಇದರರ್ಥ.


ವಿವಿಧ ರೀತಿಗಳಲ್ಲಿ ಸ್ವರಸ್ಥಾನಗಳನ್ನು ತೋರಿಸುವ ಈ ಹಾರ್ಮೋನಿಯಮ್ ರೀಡುಗಳ ಚಿತ್ರ ಸಾಂಕೇತಿಕ ಮಾತ್ರ.  ಭಾರತೀಯ ಪದ್ಧತಿಯಲ್ಲಿ Cಯೇ ಷಡ್ಜವಾಗಬೇಕೆಂದಿಲ್ಲ.  12 ಸ್ವರಗಳ ಪೈಕಿ  ಯಾವುದನ್ನಾದರೂ ಷಡ್ಜವಾಗಿಸಿಕೊಳ್ಳಬಹುದು. ಆಗ ಕೀ ನೊಟೇಶನ್  ಮತ್ತು ಸ್ವರಗಳ ನಂಟು ಬದಲಾಗುತ್ತದೆ.  ಕೆಳಗಿನ ಚಾರ್ಟ್ ಯಾವ ಕೀಯನ್ನು ಷಡ್ಜ ಮಾಡಿಕೊಂಡಾಗ ಯಾವ್ಯಾವ ಕೀಗಳು ಯಾವ್ಯಾವ ಸ್ವರಗಳಾಗುತ್ತವೆ ಎಂಬುದನ್ನು ತೋರಿಸುತ್ತದೆ.  ಯಾವ ಶ್ರುತಿಯ ಮಧ್ಯಮ, ಪಂಚಮಗಳು ಯಾವ ಶ್ರುತಿಯಾಗುತ್ತದೆ ಎಂದು ಸುಲಭವಾಗಿ ತಿಳಿಯಲು ಕೂಡ ಈ ಚಾರ್ಟ್ ಸಹಕಾರಿ.


ಈ ಕೆಳಗಿನ ತಖ್ತೆಯಲ್ಲಿ ಕರ್ನಾಟಕ, ಹಿಂದುಸ್ಥಾನಿ ಮತ್ತು ಪಾಶ್ಚಾತ್ಯ ಶೈಲಿಗಳಲ್ಲಿ  12 ಸ್ವರಸ್ಥಾನಗಳ ವಿವರಗಳನ್ನು  ನೋಡಬಹುದು.  ಗೊಂದಲ ಮೂಡಿಸಬಹುದಾದ ಕರ್ನಾಟಕ ಮತ್ತು ಹಿಂದುಸ್ತಾನಿ ಶೈಲಿಯ ಸ್ವರಗಳ ಹೆಸರುಗಳನ್ನೂ ಹೋಲಿಸಿ ನೋಡಬಹುದು.  ಶುದ್ಧ ರಿಷಭ, ಶುದ್ಧ ಗಾಂಧಾರ, ಶುದ್ಧ ಧೈವತ ಮತ್ತು ಶುದ್ಧ ನಿಷಾದ ಹೆಸರುಗಳು ಎರಡು ಪದ್ಧತಿಗಳಲ್ಲಿ ಬೇರೆ ಬೇರೆ ಸ್ವರಸ್ಥಾನಗಳನ್ನು ಸೂಚಿಸುವುದು ಗಮನಿಸಬೇಕಾದ ಅಂಶ.


ಮೇಲಿನ ಪಟ್ಟಿಯಲ್ಲಿ  ಪಿಯಾನೋ ಕೀ ಬೋರ್ಡಿನ ಮಧ್ಯ ಅಂದರೆ 4ನೇ ಸಪ್ತಕದ ಎಲ್ಲ ಸ್ವರಗಳ ಕಂಪನಾಂಕಗಳನ್ನೂ ನೋಡಬಹುದು. ಗಂಡು ಧ್ವನಿ, ಹೆಣ್ಣು ಧ್ವನಿ ಹಾಗೂ ಬೇರೆ ಬೇರೆ ಸಂಗೀತೋಪಕರಣಗಳ ಅದೇ ಶ್ರುತಿಯ ಫ್ರೀಕ್ವೆನ್ಸಿಗಳು ಇದಕ್ಕಿಂತ ಹೆಚ್ಚು ಅಥವಾ ಕಮ್ಮಿ ಆದರೆ ಇದರ ಗುಣಕಗಳಾಗಿ ಇರುತ್ತವೆ. ಜೇಸುದಾಸ್ ಅವರಂಥ ಮಂದ್ರ ಧ್ವನಿಯ ಗಾಯಕರ ಧ್ವನಿ 2ನೇ ಸಪ್ತಕದ ಫ್ರೀಕ್ವೆನ್ಸಿ ಹೊಂದಿರಬಹುದು.  ಪಿ.ಸುಶೀಲಾ ಅವರಂಥ ಗಾಯಕಿಯ ಏರುದನಿ 3ನೇ ಸಪ್ತಕದಲ್ಲಿರಬಹುದು. ಹರಿಪ್ರಸಾದ್ ಚೌರಾಸಿಯಾ ಕಾರ್ಯಕ್ರಮದ ಕೊನೆಯಲ್ಲಿ ನುಡಿಸುವ ಪೆನ್ನಿನಂಥ ಕೊಳಲಿನ ದನಿಯ ಕಂಪನಾಂಕ  6ನೇ ಸಪ್ತಕದ್ದಾಗಿರಬಹುದು.  ನಮ್ಮ ಕಿವಿಗೆ ಸಂಗೀತವಾಗಿ ಕೇಳಬಹುದಾದ ಸೊನ್ನೆಯಿಂದ ಎಂಟರವರೆಗಿನ 9 ಸಪ್ತಕಗಳ ಕಂಪನಾಂಕಗಳನ್ನು ತೋರಿಸುವ ಕೆಳಗಿನ  ಚಾರ್ಟಿನಲ್ಲಿ ಸಪ್ತಕದಿಂದ ಸಪ್ತಕಕ್ಕೆ ಪ್ರತೀ ಸ್ವರದ ಕಂಪನಾಂಕ ದ್ವಿಗುಣಗೊಳ್ಳುವುದನ್ನು ಕಾಣಬಹುದು. ಎರಡು ಸ್ವರಸ್ಥಾನಗಳ ಮಧ್ಯದ ಕಂಪನಾಂಕಗಳನ್ನು ಇನ್ನಷ್ಟು ವಿಭಜಿಸಿದರೆ ಈಗಿನ 12ಕ್ಕಿಂತ ಹೆಚ್ಚು ಸ್ವರಗಳನ್ನು ಪಡೆಯಲು ಸಾಧ್ಯವಿದ್ದು ಅರೇಬಿಕ್ ಸಂಗೀತದಲ್ಲಿ ಈ ರೀತಿಯ ಬಳಕೆ ಇದೆ.


ನಾನು ಧ್ವನಿಮುದ್ರಿಸಿಕೊಂಡಿದ್ದ ಕೋಗಿಲೆ ಧ್ವನಿಯ ಸ್ಯಾಂಪಲ್ ಒಂದನ್ನು ಕಂಪ್ಯೂಟರಿನಲ್ಲಿ ವಿಶ್ಲೇಷಿಸಿದಾಗ ಅದರ ಕಂಪನಾಂಕ  1582.5 Hz ಆಗಿರುವುದು ಕಂಡು ಬಂತು. ಇದು 1567.98 Hz ಅಂದರೆ 6ನೇ ಸಪ್ತಕದ ಬಿಳಿ ಒಂದು ಶ್ರುತಿಯ ಪಂಚಮಕ್ಕೆ ಅತಿ ಸಮೀಪದಲ್ಲಿದೆ!  ನಮ್ಮ ಪೂರ್ವಜರ ಗ್ರಹಿಕೆಗಳು ಕೇವಲ ಕಲ್ಪನೆಗಳಲ್ಲ ಎಂಬುದಕ್ಕೆ ಇದು ಪುರಾವೆ.



‘ಏಳು ಸ್ವರವು ಸೇರಿ ಸಂಗೀತವಾಯಿತು’ ಎಂದು ಹಾಡಿನಲ್ಲಿ ಹೇಳಲಾಗಿದ್ದರೂ ವಾಸ್ತವದಲ್ಲಿ ಬರೇ ಏಳೋ, ಹನ್ನೆರಡೋ ಸ್ವರಗಳು ಇದ್ದ ಮಾತ್ರಕ್ಕೆ ಅವುಗಳಿಂದ ಸಂಗೀತ  ಸಿಗದು. ಉಪ್ಪು, ಮೆಣಸು, ಜೀರಿಗೆ, ಕೊತ್ತಂಬರಿ ಇತ್ಯಾದಿಗಳನ್ನು ನಿಗದಿತ ಪ್ರಮಾಣದಲ್ಲಿ ಬೆರೆಸಿದರೆ ಮಾತ್ರ ಹೇಗೆ  ರುಚಿಕರವಾದ ವೈವಿಧ್ಯಮಯ    ಅಡುಗೆಯಾಗುತ್ತದೆಯೋ ಹಾಗೆಯೇ ಈ ಸ್ವರಗಳನ್ನು ವಿವಿಧ ಪರ್ಮುಟೇಶನ್ ಕಾಂಬಿನೇಶನ್‍ಗಳಲ್ಲಿ ಸಂಯೋಜಿಸಿದರಷ್ಟೇ ಮಧುರ ನಾದ ಹೊಮ್ಮೀತು. ಈ ರೀತಿ 12 ಸ್ಥಾನಗಳ ಸ್ವರಗಳನ್ನು ಬೇರೆ ಬೇರೆ ರೀತಿಯ 7 ಸ್ವರಗಳ ಆರೋಹಣ ಮತ್ತು ಅವರೋಹಣ ಉಳ್ಳ ಗುಂಪುಗಳನ್ನಾಗಿಸಿ   ಅವುಗಳಿಗೊಂದು ಹೆಸರು ಕೊಟ್ಟು ರಾಗ ಎಂದು ಗುರುತಿಸುವ ಪರಿಪಾಠ ಬೆಳೆದು ಬಂದಿರಬಹುದು.  ಕರ್ನಾಟಕ ಸಂಗೀತ ಶೈಲಿಯಲ್ಲಿ 12 ಸ್ಥಾನಗಳಲ್ಲಿರುವ 16 ಸ್ವರಗಳನ್ನು ಬಳಸಿ ಮ1 ಹೊಂದಿರುವ 36 ಹಾಗೂ ಮ2 ಹೊಂದಿರುವ 36 ಹೀಗೆ ಒಟ್ಟು 72 ಸಂಪೂರ್ಣ ರಾಗಗಳನ್ನು ಅಂದರೆ ಆರೋಹಣದಲ್ಲಿ ಸ,ರಿ,ಗ,ಮ,ಪ,ದ,ನಿ,ಸ ಹಾಗೂ ಅವರೋಹಣದಲ್ಲಿ ಸ,ನಿ,ದ,ಪ,ಮ,ಗ,ರಿ,ಸ ಇರುವಂಥವುಗಳನ್ನು ಗುರುತಿಸಿ ಅವುಗಳನ್ನು ಮೇಳಕರ್ತ ರಾಗಗಳು ಎಂದು  ಹೆಸರಿಸಲಾಯಿತು.  12 ಸ್ಥಾನಗಳಲ್ಲಿರುವ 16 ಸ್ವರಗಳಿಗೂ ಈ 72 ಎಂಬ ಸಂಖ್ಯೆಗೂ ಇರುವ ನಂಟನ್ನು  ಈ ಕೆಳಗಿನಂತೆ ಅರ್ಥಮಾಡಿಕೊಳ್ಳಬಹುದು.


ಈಗ ಮ1 ಹೊಂದಿರುವ ಕಾಂಬಿನೇಶನ್ನಿನ ಪೂರ್ವಾರ್ಧವನ್ನು ಗಮನಿಸೋಣ.  ಮೇಲಿನ ತಖ್ತೆಯಂತೆ ಒಟ್ಟು 9 ರೀತಿಯಲ್ಲಿ ಸ,ರಿ,ಗ ಸ್ವರಗಳನ್ನು ಸಂಯೋಜಿಸಬಹುದು.  ರಿ2, ಗ1 ಹಾಗೂ ರಿ3, ಗ2 ಇವು ಒಂದೇ ಸ್ವರಸ್ಥಾನವನ್ನು ಹಂಚಿಕೊಂಡವುಗಳಾಗಿರುವುದರಿಂದ ಹಾಗೂ ರಿ3, ಗ1 ಆರೋಹಣ ಕ್ರಮದಲ್ಲಿಲ್ಲದಿರುವುದರಿಂದ ಕೆಂಪು ಹಿನ್ನೆಲೆಯುಳ್ಳ 3 ಸಾಲುಗಳು ಲೆಕ್ಕಕ್ಕಿಲ್ಲ. ಹೀಗೆ 9ರ ಪೈಕಿ 6 ಕಾಂಬಿನೇಶನುಗಳು ಮಾತ್ರ ಉಳಿಯುತ್ತವೆ.  ಇದೇ ರೀತಿ ಉತ್ತರಾರ್ಧ ಪ,ದ,ನಿ ಸಂಯೋಜನೆಯಲ್ಲೂ 6 ಯೋಗ್ಯ ಕಾಂಬಿನೇಶನುಗಳು ಸಿಗುತ್ತವೆ.  ಪೂರ್ವಾರ್ಧದ 6 ಮತ್ತು ಉತ್ತರಾರ್ಧದ 6 ಕಾಂಬಿನೇಶನುಗಳ ಸಂಯೋಜನೆಯಿಂದ 6 x 6 = 36 ಸ,ರಿ,ಗ,ಮ,ಪ,ದ,ನಿ,ಸ ಸ್ವರಗಳುಳ್ಳ ರಾಗಗಳು ಸಿಗುತ್ತವೆ.  ಮ1 ಸ್ವರವನ್ನು ಮ2 ಆಗಿ ಬದಲಾಯಿಸಿದಾಗ ಮತ್ತೆ 36 ಕಾಂಬಿನೇಶನುಗಳು ಸಿಕ್ಕಿ ಒಟ್ಟು 36 + 36 =  72 ಮೇಳಕರ್ತ ರಾಗಗಳಾಗುತ್ತವೆ.



ಮೇಳಕರ್ತ ರಾಗಗಳ ಕೋಷ್ಟಕವನ್ನು ವಿವಿಧ ರೀತಿ ಪ್ರಸ್ತುತಪಡಿಸಲಾಗುತ್ತಿದ್ದು ಇದು ನಾನು ಮರುವಿನ್ಯಾಸಗೊಳಿಸಿದ ಅದರ ಒಂದು ಸರಳ ಸುಲಭ ರೂಪ. ಪ್ರಕೃತಿ ಸ್ವರಗಳಾದ ಸ ಮತ್ತು ಪ ಎಲ್ಲ ಮೇಳಕರ್ತ ರಾಗಗಳ ಅವಿಭಾಜ್ಯ ಅಂಗಗಳಾಗಿದ್ದು ಅವುಗಳನ್ನು ಇಲ್ಲಿ ತೋರಿಸಲಾಗಿಲ್ಲ. ಬೇಕಿದ್ದ ರಿ, ಗ ಮತ್ತು ಮ ಸ್ವರಗಳನ್ನು ಹೊಂದಿದ ಅಡ್ಡ ಸಾಲು ಹಾಗೂ  ದ ಮತ್ತು ನಿ ಸ್ವರಗಳನ್ನು ಹೊಂದಿರುವ ನೀಟ ಸಾಲು ಒಂದನ್ನೊಂದು ಸೇರುವಲ್ಲಿ ಆ  ಸ್ವರಗಳ ಮೇಳೈಸುವಿಕೆಯಿಂದ ಉಂಟಾಗುವ  ರಾಗದ ಸಂಖ್ಯೆ ಮತ್ತು ಹೆಸರು ದೊರೆಯುತ್ತದೆ.  ಉದಾಹರಣೆಗೆ  ರಿ2,  ಗ2 ಮತ್ತು ಮ1 ಉಳ್ಳ ಅಡ್ಡ ಸಾಲು ಮತ್ತು   ದ1  ಮತ್ತು   ನಿ2 ಉಳ್ಳ ನೀಟ ಸಾಲುಗಳು ಒಂದನ್ನೊಂದು ಸೇರುವಲ್ಲಿ ಸ,  ರಿ2,  ಗ2,  ಮ1,  ಪ,  ದ1,  ನಿ2, ಸ  ಸ್ವರಗಳನ್ನು ಹೊಂದಿದ  20ನೇ ಮೇಳಕರ್ತ ನಠಭೈರವಿ  ರಾಗ ಸಿಗುತ್ತದೆ.  ಅಥವಾ ರಿ2,  ಗ2 ಮತ್ತು ಮ2 ಉಳ್ಳ ಅಡ್ಡ ಸಾಲು ಮತ್ತು   ದ1  ಮತ್ತು   ನಿ3 ಉಳ್ಳ ನೀಟ ಸಾಲುಗಳು ಒಂದನ್ನೊಂದು ಸೇರುವಲ್ಲಿ ಸ,  ರಿ2,  ಗ2,  ಮ2,  ಪ,  ದ1,  ನಿ3, ಸ  ಸ್ವರಗಳನ್ನು ಹೊಂದಿದ  57ನೇ ಮೇಳಕರ್ತ ಸಿಂಹೇಂದ್ರಮಧ್ಯಮ  ರಾಗ ಸಿಗುತ್ತದೆ. ಈ ಪ್ರಕ್ರಿಯೆಯನ್ನು ತಿರುವು ಮುರುವುಗೊಳಿಸಿದರೆ ಯಾವುದೇ ರಾಗದ ಸ್ವರಗಳನ್ನು ಪಡೆಯಬಹುದು. ಉದಾಹರಣೆಗೆ  22ನೇ ಮೇಳಕರ್ತ ಖರಹರಪ್ರಿಯ  ರಾಗದ ಹೆಸರಿರುವ ಅಡ್ಡ ಸಾಲಿನ ಎಡ ತುದಿಯಲ್ಲಿ   ರಿ2  ಗ2 ಮತ್ತು  ಮ1 ಹಾಗೂ ನೀಟ ಸಾಲಿನ  ಮೇಲ್ತುದಿಯಲ್ಲಿ ದ2,  ನಿ2  ದೊರೆತು ಆ ರಾಗದ ಸ್ವರಗಳು ಸ,  ರಿ2,  ಗ2,  ಮ1,  ಪ,  ದ2,  ನಿ2,  ಸ  ಎಂದು ತಿಳಿಯುತ್ತದೆ.

ಈ 72 ರಾಗಗಳನ್ನು   12 ಚಕ್ರಗಳಾಗಿ  ವಿಂಗಡಿಸಿ ಅವುಗಳಿಗೆ ಇಂದು, ನೇತ್ರ, ಅಗ್ನಿ, ವೇದ, ಬಾಣ, ಋತು, ಋಷಿ, ವಸು, ಬ್ರಹ್ಮ, , ದಿಶಿ, ರುದ್ರ, ಆದಿತ್ಯ ಎಂಬ  ಸಂಖ್ಯಾಸೂಚಕ ಹೆಸರುಗಳನ್ನು ಕೊಡಲಾಗಿದೆ. ಹಣ್ಣಿನ ಮಧ್ಯ ಭಾಗವು ಹೆಚ್ಚು ಸಿಹಿಯಾಗಿರುವಂತೆ ಇಲ್ಲಿಯೂ ಕೋಷ್ಟಕದ ಮಧ್ಯಭಾಗದಲ್ಲೇ ಅನೇಕ ಜನಪ್ರಿಯ ಮಧುರ ರಾಗಗಳಿರುವುದನ್ನು ಗಮನಿಸಬಹುದು.

ಮೇಲೆ, ಕೆಳಗೆ, ಎಡ ಅಥವಾ ಬಲಕ್ಕೆ scroll ಮಾಡಿದಾಗಲೂ ಸುಲಭವಾಗಿ ಈ ಕೋಷ್ಟಕವನ್ನು ಉಪಯೋಗಿಸಲಾಗುವಂತೆ ರಿ, ಗ, ಮ ಸ್ವರಗಳನ್ನು ಎಡ ತುದಿ ಮತ್ತು ಬಲ ತುದಿ, ದ ಮತ್ತು ನಿ ಸ್ವರಗಳನ್ನು ಮೇಲ್ತುದಿ ಮತ್ತು ಕೆಳ ತುದಿ ಎರಡೂ ಕಡೆ ತೋರಿಸಲಾಗಿದೆ.

ಪದಪುಂಜಗಳಷ್ಟು ಸುಲಭವಾಗಿ ಅಂಕೆ ಸಂಖ್ಯೆಗಳನ್ನು  ನೆನಪಿಡಲಾಗದಿರುವುದು ಮಾನವನ ದೌರ್ಬಲ್ಯ. ಈಗಲೂ ಅಂತರ್ಜಾಲದಲ್ಲಿ  172.217.26.197 ಎಂಬ ವಿಳಾಸದ ತಾಣಕ್ಕೆ ಹೋಗಲು  ಚಿಕ್ಕದಾಗಿ gmail.com, ಅಥವಾ 157.240.13.35 ಎಂಬ ವಿಳಾಸಕ್ಕೆ ಹೋಗಲು facebook.com ಎಂಬ ನೆನಪಿಡಲು ಸುಲಭವಾದ ಪದಗಳನ್ನಷ್ಟೇ ಟೈಪಿಸಬೇಕಾದ ವ್ಯವಸ್ಥೆ ಮಾಡಿ ಕೊಟ್ಟಿರುವುದು ಈ ಕಾರಣಕ್ಕಾಗಿಯೇ.  ಆದರೆ  ಮೇಳಕರ್ತ ರಾಗಗಳ ಕೋಷ್ಟಕದಲ್ಲಿ ಅವುಗಳಿಗೆ ಆಕರ್ಷಕ  ಹೆಸರುಗಳನ್ನು ನೀಡುವುದು ಮಾತ್ರವಲ್ಲ, ಕಟಪಯಾದಿ ಸೂತ್ರವನ್ನು ಬಳಸಿ ಸಂಖ್ಯೆ ಮತ್ತು ಹೆಸರುಗಳ ನಡುವೆ  ವಿಶಿಷ್ಟ ಸಂಬಂಧವೂ ಇರುವಂತೆ ಮಾಡಲಾಗಿದೆ.


ಕಟಪಯಾದಿ ಸೂತ್ರದಲ್ಲಿ ಮೇಲೆ ತೋರಿಸಿದಂತೆ ಕ ದಿಂದ ಹ ವರೆಗಿನ ವ್ಯಂಜನಳು 1 ರಿಂದ 0 ವರೆಗಿನ ಬೆಲೆಯನ್ನು ಹೊಂದುತ್ತವೆ.  ಒಂದನೇ ನೀಟ ಸಾಲಿನ ಎಲ್ಲ ವ್ಯಂಜನಗಳು 1, ಎರಡನೇ ಸಾಲಿನಲ್ಲಿರುವವು 2,  ಕೊನೆಯ ಸಾಲಿನವು 0 ಹೀಗೆ ಅಂಕೆಗಳಿಂದ ಗುರುತಿಸಲ್ಪಡುತ್ತವೆ.  ಈಗ ಮೇಳಕರ್ತ ಕೋಷ್ಟಕದ ಮಾಯಾಮಾಳವಗೌಳ ರಾಗವನ್ನು ತೆಗೆದುಕೊಂಡರೆ ಅದರ ಮೊದಲ ಎರಡು ವ್ಯಂಜನಗಳು ಮ ಮತ್ತು ಯ.  ಕಟಪಯಾದಿ ಸೂತ್ರದಂತೆ ಮ ಅಂದರೆ 5  ಮತ್ತು ಯ ಅಂದರೆ 1. ಇವುಗಳನ್ನು ಜೊತೆಗೂಡಿಸಿದರೆ 51.  ಇದನ್ನು ತಿರುವು ಮುರುವು ಮಾಡಿದಾಗ ಸಿಗುವ 15 ಈ ರಾಗದ ಮೇಳಕರ್ತ ಸಂಖ್ಯೆ ಆಗಿರುತ್ತದೆ.  ಇನ್ನೊಂದು ಉದಾಹರಣೆಯಾಗಿ ಹರಿಕಾಂಭೋಜಿಯ ಮೊದಲೆರಡು ವ್ಯಂಜನಗಳು ಹ ಮತ್ತು ರ.  ಅವುಗಳ ಅಂಕೆಗಳು 8 ಮತ್ತು 2. ಜೊತೆಗೂಡಿಸಿದಾಗ 82. ತಿರುವು ಮುರುವು ಮಾಡಿದಾಗ  ಆ ರಾಗದ ಮೇಳಕರ್ತ ಸಂಖ್ಯೆ 28 ಸಿಗುತ್ತದೆ.  ಈ ರೀತಿ ಎಲ್ಲ 72  ರಾಗಗಳ ಹೆಸರಿನಿಂದಲೇ   ಅವುಗಳ ಮೇಳಕರ್ತ ಸಂಖ್ಯೆಯನ್ನು  ಸುಲಭವಾಗಿ ತಿಳಿಯಬಹುದು.    ಪದಗಳನ್ನು ಸಂಖ್ಯೆಗಳೊಂದಿಗೆ ಬೆಸೆಯುವ ಇನ್ನೂ ಇಂತಹ ಎಷ್ಟೋ ಚಮತ್ಕಾರಗಳಿಗೆ ಕಟಪಯಾದಿ ಸೂತ್ರವನ್ನು ಬಳಸಲಾಗಿದೆ.

ಹಿಂದುಸ್ಥಾನಿ ಪದ್ಧತಿಯಲ್ಲಿ ಈ ರೀತಿ 72 ಮೇಳಕರ್ತ ರಾಗಗಳ ಕಲ್ಪನೆ ಇಲ್ಲ.  ಅಲ್ಲಿ 10 ಮುಖ್ಯ ಥಾಟ್‍ಗಳಿದ್ದು ಅವುಗಳಿಂದಲೇ  ನೂರಾರು ರಾಗಗಳು ಜನ್ಮತಾಳಿವೆ. 


72 ಮೇಳಕರ್ತ ರಾಗಗಳ ಸೂಚಿಯಲ್ಲಿ ಮೋಹನ, ಹಿಂದೋಳ, ಹಂಸಧ್ವನಿ, ಅಭೇರಿಯಂಥ ಅನೇಕ ಜನಪ್ರಿಯ ರಾಗಗಳೇ ಇಲ್ಲವಲ್ಲ ಎಂದು ಕೆಲವರಿಗೆ ಅನ್ನಿಸಿರಬಹುದು.  ಅವುಗಳು ಆರೋಹಣ ಅವರೋಹಣದಲ್ಲಿ ಎಲ್ಲ ಸ್ವರಗಳನ್ನು ಏಕರೂಪದಲ್ಲಿ ಹೊಂದಿದವುಗಳಾಗಿರದೆ ಯಾವುದೋ ಮೇಳಕರ್ತ ರಾಗದ ಕೆಲವು ಲಕ್ಷಣಗಳನ್ನು ಹೊಂದಿದ  ಜನ್ಯ ರಾಗಗಳಾಗಿರುವುದೇ ಇದಕ್ಕೆ ಕಾರಣ.  ಪಟ್ಟಿ ಮಾಡಲು ಸಾಧ್ಯವಾಗದಷ್ಟು ದೊಡ್ಡ ಸಂಖ್ಯೆಯ ಇಂತಹ ಜನ್ಯ ರಾಗಗಳಿವೆ. ಮೇಳಕರ್ತ ಇರಲಿ, ಜನ್ಯ ಇರಲಿ ಬರೇ ಆರೋಹಣ ಅವರೋಹಣದಿಂದ ರಾಗ ಆಗುವುದಿಲ್ಲ.  ಉಪಯೋಗಿಸುವ ಗಮಕಗಳು, ಚಲನ, ವಿಶಿಷ್ಟ ಸ್ವರಪುಂಜಗಳು ಇವೆಲ್ಲ ಮೇಳೈಸಿದರೆ ಮಾತ್ರ  ಯಾವುದೇ ರಾಗದ ಸ್ವರೂಪ ಹೊಮ್ಮುತ್ತದೆ. ಉದಾಹರಣೆಗೆ ಮೋಹನ ರಾಗದ ಸ್ವರಗಳು  ಸ ರಿ2 ಗ2 ಪ ದ2 ಸ ಎಂದಿದ್ದರೂ ನುಡಿಸುವಾಗ ಅಥವಾ ಹಾಡುವಾಗ ಅದು ಸ ಗರಿ ಗ ಪ ಸದ ಸ ಎಂದು ಗಮಕಯುಕ್ತವಾಗುತ್ತದೆ. ಒಂದೇ ಆರೋಹಣ ಅವರೋಹಣ ಹೊಂದಿಯೂ ಚಲನದಲ್ಲಿ ವ್ಯತ್ಯಾಸ ಹೊಂದಿ ಬೇರೆ ಬೇರೆ ಹೆಸರಿನಿಂದ ಗುರುತಿಸಲ್ಪಡುವ ರಾಗಗಳೂ ಇವೆ.

ಶಾಸ್ತ್ರೀಯ ರಚನೆಗಳಲ್ಲಾಗಲಿ, ಲಘು ಶೈಲಿಯ ಹಾಡುಗಳಲ್ಲಾಗಲಿ ಸ್ವರಸ್ಥಾನಗಳು ಸ ರಿ ಗ ಮ ಪ ದ ನಿ  ಸ್ವರಗಳನ್ನೊಳಗೊಂಡ ಮಧ್ಯ ಸಪ್ತಕಕಷ್ಟೇ  ಸೀಮಿತವಾಗಿರುವುದಿಲ್ಲ. ಮಧ್ಯ ಸಪ್ತಕದ ಕೆಳಗಿನ ಮಂದ್ರ ಸಪ್ತಕದ ಮ ವರೆಗೆ, ಮೇಲಿನ ತಾರ ಸಪ್ತಕದ ಪ ವರೆಗೆ ಇವುಗಳ ಹರಹು ಇರುತ್ತದೆ.  ಹೀಗಾಗಿ ಹಾಡುಗಾರರು ಈ ವ್ಯಾಪ್ತಿಯಲ್ಲಿ ಸುಲಲಿತವಾಗಿ ಸಂಚರಿಸಬೇಕಾದರೆ ಸೂಕ್ತ ಆಧಾರ ಶ್ರುತಿಯನ್ನು ಆಯ್ದುಕೊಳ್ಳಬೇಕಾಗುತ್ತದೆ.  ಹೆಚ್ಚಾಗಿ ಪುರುಷರು C ಅರ್ಥಾತ್ ಬಿಳಿ ಒಂದರ ಆಸುಪಾಸಿನ  ಶ್ರುತಿಯನ್ನು ಆಯ್ದುಕೊಳ್ಳುತ್ತಾರೆ.  ಸ್ತ್ರೀಯರಿಗೆ ಸಾಮಾನ್ಯವಾಗಿ G  ಅಂದರೆ ಬಿಳಿ 5ರ ಸಮೀಪದ ಶ್ರುತಿ ಅನುಕೂಲವಾಗಿರುತ್ತದೆ.  ಇದನ್ನು ಗಮನದಲ್ಲಿರಿಸದೆ ಯಾವುದೋ ಶ್ರುತಿಯನ್ನು ಆಯ್ದುಕೊಂಡರೆ ಒಂದೋ ತಾರ ಸಪ್ತಕದಲ್ಲಿ ತೊಂದರೆ ಎದುರಾಗುತ್ತದೆ ಇಲ್ಲವೇ ಮಂದ್ರ ಸಪ್ತಕದ ಚಲನೆ ಸುಲಲಿತವಾಗುವುದಿಲ್ಲ. ತೆಂಕು ತಿಟ್ಟು ಯಕ್ಷಗಾನದ ಭಾಗವತರು ಹೆಚ್ಚಾಗಿ ಬಿಳಿ ನಾಲ್ಕು ಹಾಗೂ ಬಡಗು ತಿಟ್ಟಿನ ಭಾಗವತರು ಕಪ್ಪು ಎರಡರ ಶ್ರುತಿ ಆಯ್ದುಕೊಳ್ಳುತ್ತಾರೆ.  ಆಯಾ ತಿಟ್ಟಿನ ಚಂಡೆ ಮದ್ದಳೆಗಳೊಂದಿಗೆ  ಸಮನ್ವಯ  ಸಾಧಿಸಿ ರಸಾನುಭೂತಿ ಉಂಟುಮಾಡಲು ಹಾಗೂ ಯಕ್ಷಗಾನಕ್ಕೆ ಬೇಕಾದ ಉಠಾವ್ ಸಿಗಲು ಈ ಶ್ರುತಿಗಳು ಸೂಕ್ತವಾದವು ಎಂದು ಅನುಭವಿಗಳ ಅಂಬೋಣ. ಆದರೆ ಲಘು ಅಥವಾ ಚಿತ್ರಸಂಗೀತ ಕ್ಷೇತ್ರದಲ್ಲಿ ಗಂಡು ಹೆಣ್ಣು ಜೊತೆಯಾಗಿ ಹಾಡುವ ಸಂದರ್ಭಗಳು ಹೆಚ್ಚಾಗಿರುವುದರಿಂದ ಯಾವುದೇ ಶ್ರುತಿಯಲ್ಲಿ  ಮಂದ್ರ, ಮಧ್ಯ, ತಾರ ಸಪ್ತಕಗಳನ್ನು ಸುಲಲಿತವಾಗಿ  ನಿಭಾಯಿಸಬಲ್ಲವರು  ಮಾತ್ರ ಇಲ್ಲಿ ಮಿಂಚುತ್ತಾರೆ.  ಈ ನಿಟ್ಟಿನಲ್ಲಿ ಮಹಮ್ಮದ್ ರಫಿ ಅವರಿಗೆ ಸರಿ ಸಾಟಿ  ಯಾರೂ ಇಲ್ಲ.  ಅವರು ಸಹಗಾಯಕಿಗೆ ಸೂಕ್ತವಾದ ಯಾವುದೇ ಶ್ರುತಿಯಲ್ಲೂ ತಾರ ಸಪ್ತಕದಲ್ಲಿ ಕಿರುಚಿದಂತಾಗದೆ, ಮಂದ್ರದಲ್ಲಿ ವಾಕರಿಸಿದಂತಾಗದೆ ಲೀಲಾಜಾಲವಾಗಿ ಹಾಡಬಲ್ಲವರಾಗಿದ್ದರು.

ಕೊಳಲು, ನಾಗಸ್ವರ, ಕ್ಲಾರಿನೆಟ್, ಸಾಕ್ಸೋಫೋನ್ ಮುಂತಾದ ಸುಷಿರ ವಾದ್ಯಗಳ  ಶ್ರುತಿ ಬದಲಾಯಿಸಲಾಗುವುದಿಲ್ಲ.  ಅದಕ್ಕೇ ಕೊಳಲು ವಾದಕರು ಒಂದು ಚೀಲ ತುಂಬಾ ವಿವಿಧ ಶ್ರುತಿಗಳ ಕೊಳಲುಗಳನ್ನಿಟ್ಟುಕೊಂಡಿರುವುದನ್ನು ನೋಡುತ್ತೇವೆ. ವಯಲಿನ್, ವೀಣೆ, ಸಿತಾರ್, ಸರೋದ್, ಸಾರಂಗಿ ಮುಂತಾದ ತಂತಿ ವಾದ್ಯಗಳನ್ನು ಯಾವ ಶ್ರುತಿಗೂ ಹೊಂದಿಸಬಹುದು. ಆದರೂ ಈ ಎಲ್ಲ ವಾದ್ಯಗಳು ಒಂದು ನಿರ್ದಿಷ್ಟ ಶ್ರುತಿ ಸೀಮೆಯೊಳಗೆ ಹೆಚ್ಚು ಇಂಪಾಗಿ ನುಡಿಯುತ್ತವೆ.  ಸಿತಾರ್ ವಾದ್ಯದಲ್ಲಿ ನುಡಿಸುವ ಥಾಟ್‍ಗೆ ತಕ್ಕಂತೆ ತಂತಿಯನ್ನು ಬೆರಳಿನಿಂದ ಒತ್ತಿದಾಗ ಆಧರಿಸುವ ರಚನೆ ಅಂದರೆ ‘ಪರದೆ’ಗಳನ್ನು ಅಚೀಚೆ ಸರಿಸಿ ಹೊಂದಿಸಬೇಕಾಗುತ್ತದೆ.    ಚರ್ಮವಾದ್ಯಗಳ ಶ್ರುತಿಯನ್ನು ಅಗತ್ಯ ಬಿದ್ದಾಗ ಒಂದು ಅರ್ಧ ಕಟ್ಟೆಯಷ್ಟು ಮಾತ್ರ ಏರಿಳಿಸಬಹುದು.  ಹೀಗಾಗಿ ಬೇರೆ ಬೇರೆ ಶ್ರುತಿಯ  ಮೃದಂಗ, ತಬ್ಲಾಗಳನ್ನು   ಇವುಗಳ ವಾದಕರು ಇಟ್ಟುಕೊಳ್ಳಬೇಕಾಗುತ್ತದೆ. ಕೆಲವು ಸಲ ಹೊಂದಾಣಿಕೆ ಮಾಡಿಕೊಂಡು ಮಧ್ಯಮ ಅಥವಾ ಪಂಚಮ ಶ್ರುತಿಯ ತಾಳವಾದ್ಯಗಳನ್ನು ಉಪಯೋಗಿಸುವವರೂ ಇದ್ದಾರೆ. ಹೀಗೇ ಮಾಡಿದಾಗ ಆ ಸ್ವರಗಳಿಲ್ಲದ ರಾಗಗಳ ಸಂದರ್ಭದಲ್ಲಿ ಎಡವಟ್ಟಾಗುತ್ತದೆ.. ತವಿಲ್ ಅಥವಾ ಡೋಲಿಗೆ ಶ್ರುತಿಯ ಹಂಗಿಲ್ಲ. ಹಾರ್ಮೋನಿಯಮ್‍ ಕೂಡ ಏಕ ಶ್ರುತಿಯ ವಾದ್ಯವಾಗಿದ್ದರೂ ಇದನ್ನು ನುಡಿಸುವ ಬಹುತೇಕ ಎಲ್ಲರೂ ಯಾವ ಪಟ್ಟಿಯನ್ನಾದರೂ ಆಧಾರ ಶ್ರುತಿಯಾಗಿಟ್ಟುಕೊಂಡು ನುಡಿಸಬಲ್ಲ ಪರಿಣತರಾಗಿರುತ್ತಾರೆ. ಆಧುನಿಕ ಕೀ ಬೋರ್ಡುಗಳಲ್ಲಿ ಯಾವುದೇ ಕೀಯನ್ನು ಯಾವುದೇ ಆಧಾರ ಷಡ್ಜಕ್ಕೆ map ಮಾಡಿಕೊಳ್ಳುವ ಸೌಲಭ್ಯ ಇರುತ್ತದೆ.  ಆದರೆ ಯಾವುದೇ ಕೀ ಅಥವಾ ರೀಡ್‍ಗಳ ಅಗತ್ಯವಿಲ್ಲದೆ ಕೇವಲ ಉಸಿರಿನ ಒತ್ತಡದಿಂದ ವಿವಿಧ ಶ್ರುತಿಗಳಲ್ಲಿ ಅತಿ ಮಂದ್ರದಿಂದ ಅತಿ ತಾರದವರೆಗೆ ಸಂಚರಿಸಬಲ್ಲ ಮಾನವ ಧ್ವನಿಪೆಟ್ಟಿಗೆಗೆ ಸಮನಾದ ಯಾವ ಸಂಗೀತೋಪಕರಣವನ್ನೂ ಇದುವರೆಗೆ ತಯಾರಿಸಲು ಸಾಧ್ಯವಾಗಿಲ್ಲ!

ಭಾರತೀಯ ಸಂಸ್ಕೃತಿಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಜ್ಞಾನ ಹರಿದು ಬರುತ್ತಿದ್ದುದು ಶ್ರುತಿ ಮತ್ತು ಸ್ಮೃತಿ ಅಂದರೆ ಆಲಿಸುವಿಕೆ ಮತ್ತು ನೆನಪಿಟ್ಟುಕೊಳ್ಳುವಿಕೆಯ ಮೂಲಕ.  ಲಿಪಿಯ ಆವಿಷ್ಕಾರ ಆದ ಮೇಲಷ್ಟೇ ಎಲ್ಲವನ್ನೂ ಬರಹದ ಮೂಲಕ ದಾಖಲಿಸುವ ಪರಿಪಾಠ ಆರಂಭವಾಯಿತು. ಸಂಗೀತವೂ ಇದಕ್ಕೆ ಹೊರತಲ್ಲ.  ನಮ್ಮಲ್ಲಿ ಸಪ್ತಸ್ವರಗಳ ಮೂಲಕ ಸಂಗೀತವನ್ನು ಅಕ್ಷರ ರೂಪಕ್ಕಿಳಿಸುವ  ರೀತಿಯಲ್ಲಿ ವ್ಯತ್ಯಾಸಗಳಿದ್ದು ನಮ್ಮ ಗುರು ಮಂಗಳೂರಿನ ಗೋಪಾಲಕೃಷ್ಣ ಐಯರ್ ಅವರು ಸಾಹಿತ್ಯ, ತಾಳ, ಕಾಲ ಎಲ್ಲವನ್ನೂ ಕರಾರುವಾಕ್ಕಾಗಿ ತೋರಿಸುವ  ಪದ್ಧತಿಯೊಂದನ್ನು ಅನುಸರಿಸುತ್ತಿದ್ದರು.  ಇದರಂತೆ ಆರೋಹಣ ಅವರೋಹಣದಲ್ಲಿ ವಿಕೃತಿ ಸ್ವರಗಳನ್ನು ಅಂಕೆಗಳೊಂದಿಗೆ ಬರೆಯಲಾಗುತ್ತದೆ. ಕೃತಿಯ ಮಧ್ಯದಲ್ಲೆಲ್ಲಾದರೂ ಅನ್ಯ ಸ್ವರದ ಪ್ರಯೋಗವಿದ್ದರೆ ಅದರ ಅಂಕೆಯನ್ನು ಅಲ್ಲೇ ಬರೆದು ಸೂಚಿಸಲಾಗುತ್ತದೆ.  ಸ್ವರವನ್ನು ಹಾಗೆಯೇ ಬರೆದರೆ ಮಧ್ಯ ಸಪ್ತಕ, ಮೇಲ್ಗಡೆ ಚುಕ್ಕಿ ಇಟ್ಟರೆ ತಾರ ಸಪ್ತಕ,  ಕೆಳಗೆ ಚುಕ್ಕಿ ಇಟ್ಟರೆ ಮಂದ್ರ ಸಪ್ತಕ, ಅಡಿಭಾಗದಲ್ಲಿ ಗೆರೆ ಎಳೆದರೆ ಎರಡನೇ ಕಾಲ, ಎರಡು ಗೆರೆ ಎಳೆದರೆ ಮೂರನೇ ಕಾಲ. ತಾಳದ ನಡೆಯನ್ನು ಸೂಚಿಸಲು ನೀಟ ಗೆರೆಗಳು. ಇದಕ್ಕಾಗಿ ಬಳಸಲ್ಪಡುವ ಚಿಹ್ನೆ ಇತ್ಯಾದಿಗಳು ಹೀಗಿರುತ್ತವೆ.

 

ಈ ಪದ್ಧತಿಯನ್ನುಪಯೋಗಿಸಿ ಬರೆದ ಎಂದರೋ ಮಹಾನುಭಾವುಲು ಕೃತಿಯ ಒಂದೆರಡು ಸಾಂಕೇತಿಕ ಸಂಗತಿಗಳ ಸ್ವರಲಿಪಿ ಇಲ್ಲಿದೆ. ಇದರಲ್ಲಿ ರಾಗದ ಹೆಸರು, ಆರೋಹಣ ಅವರೋಹಣ, ಮಧ್ಯ, ಮಂದ್ರ, ತಾರ ಸಪ್ತಕಗಳು, ಒಂದನೇ, ಎರಡನೇ, ಮೂರನೇ ಕಾಲಗಳು, ಎಲ್ಲ ಸ್ವರಗಳ ಕಾಲ ಪ್ರಮಾಣ ಒಟ್ಟುಗೂಡಿ ಪ್ರತೀ ಸಾಲಲ್ಲಿ 16  ಅಕ್ಷರಗಳಾಗಿರುವುದು ಎಲ್ಲವನ್ನೂ ಸ್ಪಷ್ಟವಾಗಿ ಗುರುತಿಸಬಹುದು. ಈ ಲಿಪಿಯನ್ನು ಸರಿಯಾಗಿ ಅರ್ಥೈಸಬಲ್ಲವರು ಇಲ್ಲಿದ್ದಂತೆ ನುಡಿಸಿದರೆ ಅಥವಾ ಹಾಡಿದರೆ ಈ ಸಾಲುಗಳು ರಾಗ ತಾಳ ಲಯಬದ್ಧವಾಗಿ ಟೇಪ್ ರೆಕಾರ್ಡರಿನಿಂದ ನುಡಿದಂತೆ ಮೂಡಿ ಬರುತ್ತವೆ.


ಈ ಪದ್ಧತಿಯಲ್ಲಿ ಯಾವ ಹಾಡಿನ ಸ್ವರಲಿಪಿಯನ್ನಾದರೂ ಬರೆಯಬಹುದು.  ಆದರೆ ಅದಕ್ಕೆ ಆ ಹಾಡಿನ ಆಧಾರ ಷಡ್ಜ ಯಾವುದೆಂದು ಮೊದಲು ಅರಿಯಬೇಕು.  ಹಾಡನ್ನು ಗುಣುಗುಣಿಸುತ್ತಾ ಮನದಲ್ಲೇ   ‘ಊಂ..... ’  ಎಂದು ದನಿ ಸೇರಿಸಿದರೆ  ಸುಲಭವಾಗಿ ಷಡ್ಜ ಸಿಗುತ್ತದೆ.  ಒಮ್ಮೆ ಷಡ್ಜ ಸಿಕ್ಕಿದರೆ ಇತರ ಸ್ವರಗಳನ್ನು ಗುರುತಿಸುತ್ತಾ ಹೋಗುವುದು ಕಷ್ಟವಲ್ಲ.  ನುರಿತ ಹಾಡುಗಾರರಿಗೆ  ಯಾವುದೇ ಧ್ವನಿಯನ್ನು ಕೇಳಿದಾಕ್ಷಣ ಸ್ವರಸ್ಥಾನವನ್ನು ಥಟ್ಟಂತ ಗುರುತಿಸುವ ಕಲೆ ಒಲಿದಿರುತ್ತದೆ. ನಾನು ಕೊಳಲಿನಲ್ಲಿ ನುಡಿಸಿ ಹಾಡಿನ ಆಧಾರ ಷಡ್ಜ ಮತ್ತು ಸ್ವರಸ್ಥಾನಗಳನ್ನು ಗುರುತಿಸುತ್ತೇನೆ.  ಆದರೆ ಕೆಲವು ಸಲ ಆಧಾರ ಷಡ್ಜ  ಗೊತ್ತಾದರೂ  ಹಾಡು ಯಾವ ಸ್ವರದಿಂದ ಆರಂಭವಾಗುತ್ತದೆ ಎಂಬುದರ ಬಗ್ಗೆ ಗೊಂದಲ ಉಂಟಾಗುವುದಿದೆ. ಕೆಲವು ಹಾಡುಗಳನ್ನು ಅದೇ ಶ್ರುತಿಯಲ್ಲಿ ಬೇರೆ ಬೇರೆ ಸ್ವರಗಳಿಂದ ಆರಂಭಿಸಿದರೂ ಕೇಳುವವರಿಗೆ ವ್ಯತ್ಯಾಸವೇನೂ ಗೊತ್ತಾಗುವುದಿಲ್ಲ.  ಆದರೆ ಸ್ವರಸ್ಥಾನಗಳು ಬೇರೆಯಾಗುತ್ತವೆ, ರಾಗವೂ ಬೇರೆಯಾಗುತ್ತದೆ.  ಭಕ್ತ ಕನಕದಾಸ ಚಿತ್ರಕ್ಕಾಗಿ ಎಂ. ವೆಂಕಟರಾಜು ಸಂಯೋಜಿಸಿದ ಬಾಗಿಲನು ತೆರೆದು ಹಾಡು ಇದಕ್ಕೊಂದು ಒಳ್ಳೆಯ ಉದಾಹರಣೆ. ಷಡ್ಜದಿಂದ ಆರಂಭಿಸಿದರೆ ಇದರ ಮುಖ್ಯ ರಾಗ ಹಿಂದೋಳವಾಗುತ್ತದೆ,  ಪಂಚಮದಿಂದ ಆರಂಭಿಸಿದರೆ ಶುದ್ಧ ಧನ್ಯಾಸಿಯಾಗುತ್ತದೆ.  ಆದರೆ ಹಿಂದೋಳವೆಂದು ತಿಳಿದರೆ ಸಂಚಾರವೆಲ್ಲ ತಾರ ಸಪ್ತಕದಲ್ಲೇ ಇರುವಂತಾಗುವುದರಿಂದ ಈ ಹಾಡಿನ ಮೂಡಿಗೆ ಮಧ್ಯ ಮತ್ತು ಮಂದ್ರ ಸಪ್ತಕಗಳಲ್ಲಿ ಸಂಚಾರ ಸಿಗುವ ಶುದ್ಧ ಧನ್ಯಾಸಿಯೇ ಸೂಕ್ತ ಎಂದು ನನ್ನ ಅನಿಸಿಕೆ.  ಶುದ್ಧ ಧನ್ಯಾಸಿಯಾದರೆ ಯಾವ ಸ್ವರಗಳ ಸಂಚಾರವಿರುತ್ತದೆ, ಹಿಂದೋಳವಾದರೆ ಯಾವುದಿರುತ್ತದೆ ಎಂದು ಹೋಲಿಸಲು ಎರಡೂ ರಾಗಗಳಲ್ಲಿ ಆ ಹಾಡಿನ ಪಲ್ಲವಿ ಭಾಗದ ಸ್ವರಲಿಪಿ  ಇಲ್ಲಿದೆ.



ಸರಳವಾದ ಲಘು ಶೈಲಿಯ ಹಾಡುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಾಹಿತ್ಯ ನೋಡಿ ಆಲಿಸಿ ಕಲಿಯುವುದು ಒಳ್ಳೆಯದು. ಶಾಶ್ವತ ದಾಖಲೆಯ ರೂಪದಲ್ಲಿ ರಕ್ಷಿಸಿಡಲು ಬೇಕಿದ್ದರೆ ಸ್ವರಲಿಪಿಯನ್ನೂ ಬರೆದಿಟ್ಟುಕೊಳ್ಳಬಹುದು.

ಪಾಶ್ಚಾತ್ಯ ಸಂಗೀತ ಪದ್ಧತಿಯಲ್ಲೂ ಸ್ಟಾಫ್ ನೊಟೇಶನ್ ಎಂದು ಕರೆಯಲಾಗುವ ಅತ್ಯುತ್ತಮ ಸ್ವರಲಿಪಿ ವಿಧಾನ ಇದೆ.  ಅದರಲ್ಲಿ ನಮ್ಮ ಪದ್ಧತಿಯಲ್ಲಿರುವ ಎಲ್ಲ ಅನುಕೂಲಗಳಲ್ಲದೆ ಹೆಚ್ಚುವರಿಯಾಗಿ 1/8, 1/16, 1/32, 1/64 ವರೆಗಿನ ಮಾತ್ರಾಕಾಲವನ್ನು ಗುರುತಿಸುವ ಸೌಲಭ್ಯವೂ ಇದೆ.  ನಮ್ಮ ಪದ್ಧತಿಯಲ್ಲಿ ಸಾಮಾನ್ಯವಾಗಿ ಇದನ್ನು 1/4ಕ್ಕಿಂತ ಹೆಚ್ಚು ವಿಭಜಿಸಲು ಹೋಗುವುದಿಲ್ಲ.  ಆದರೆ ನಮ್ಮ ಸ್ವರಲಿಪಿ ವಿಧಾನವು ಯಾವ ಆಧಾರ ಶ್ರುತಿಗೂ ಸಲ್ಲುವಂಥದ್ದಾಗಿದ್ದು ಪಾಶಾತ್ಯ ಪದ್ಧತಿಯಲ್ಲಿ ಶ್ರುತಿ ಬದಲಾದರೆ ಸಂಪೂರ್ಣ ನೊಟೇಶನ್ ಕೂಡ ಬದಲಾಯಿಸಬೇಕಾಗುತ್ತದೆ. C ಅಂದರೆ ಬಿಳಿ 1 ಶ್ರುತಿಯಲ್ಲಿ ರಾರವೇಣು ಗೋಪಾಬಾಲ ಸ್ವರಜತಿಯ ಮೊದಲ ಸಾಲಿಗೆ ಸ್ಟಾಫ್ ನೋಟೇಶನ್ ಬರೆದರೆ ಹೀಗಿರುತ್ತದೆ.


ಹಿಂದಿ ಚಿತ್ರಸಂಗೀತದ  ಉತ್ತುಂಗ ಕಾಲದಲ್ಲಿ ಬಹುತೇಕ ಸಂಗೀತ ನಿರ್ದೇಶಕರು ದೊಡ್ಡ ಆರ್ಕೆಷ್ಟ್ರಾಗಳನ್ನು ಬಳಸುತ್ತಿದ್ದುದರಿಂದ  ಸ್ವರಲಿಪಿ ಅನಿವಾರ್ಯವಾಗಿತ್ತು. 50-60ರ ದಶಕಗಳಲ್ಲಿ ಸಕ್ರಿಯರಾಗಿದ್ದ ಸಂಗೀತ ನಿರ್ದೇಶಕ ಮತ್ತು ಅರೇಂಜರ್ ಹಾಗೂ ಅನೇಕ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದ ವಿ. ಬಲ್ಸಾರಾ ಅವರು ಹೇಳುವಂತೆ ಆಗಿನ ಸಿನಿಮಾ ಆರ್ಕೆಷ್ಟ್ರಾಗಳಲ್ಲಿ  ಮೂರು ರೀತಿಯ ಕಲಾವಿದರಿದ್ದರು. ಗೋವಾ ಮೂಲದಿಂದ ಬಂದು ಪಾಶ್ಚಿಮಾತ್ಯ ಸ್ಟಾಫ್ ನೊಟೇಶನ್ ಬಳಸುವವರು, ಭಾರತದ ಇತರ ಪ್ರದೇಶದವರಾಗಿದ್ದು ತಮ್ಮ ಭಾಷೆಯಲ್ಲಿ ಬರೆದ ಭಾರತೀಯ ಪದ್ಧತಿಯ ಸ್ವರಾಧಾರಿತ ನೊಟೇಶನ್ ಬಳಸುವವರು ಹಾಗೂ ಶಾಸ್ತ್ರೀಯ ಸಂಗೀತ ಕ್ಷೇತ್ರದಿಂದ ಬಂದು ಯಾವುದೇ ನೋಟೇಶನ್ ಬಳಸದೆ ಹಾಗೇ ನೆನಪಿಟ್ಟುಕೊಂಡು ನುಡಿಸುವವರು. ಹರಿಪ್ರಸಾದ್ ಚೌರಾಸಿಯಾರಂಥ ಕಲಾವಿದರಿಗೆ ‘ನಿಮಗೆ ಸರಿ ಅನ್ನಿಸಿದ್ದನ್ನು ನುಡಿಸಿ’ ಎಂದು ಪೂರ್ತಿ ಸ್ವಾತಂತ್ರ್ಯ ಕೊಡುವ ಸಂಗೀತ ನಿರ್ದೇಶಕರೂ ಇದ್ದರು.  ಆಯೇ ದಿನ್ ಬಹಾರ್ ಕೇ ಚಿತ್ರದ ಸುನೋ ಸಜ್‍ನಾ ಪಪೀಹೆನೆ ಹಾಡಿನ  ಒಂದು ಕೊಳಲು ಪೀಸನ್ನು ಅವರು ಮನೋಧರ್ಮದಲ್ಲೇ ನುಡಿಸಿದ್ದಂತೆ.  ಹೆಚ್ಚಾಗಿ ಸಂಗೀತ ನಿರ್ದೇಶಕರ ಸಹಾಯಕರಾಗಿರುತ್ತಿದ್ದ ಅರೇಂಜರ್ಸ್ ನೊಟೇಶನ್ ಬರೆದು ಆರ್ಕೆಷ್ಟ್ರಾ ಕಲಾವಿದರಿಗೆ ಒದಗಿಸುವ ಕೆಲಸ ಮಾಡುತ್ತಿದ್ದರು.  ಅನೇಕ ಸಂಗೀತ ನಿರ್ದೇಶಕರು ತಮಗೆ ಹೊಳೆದ ಹೊಸ ಧಾಟಿಗಳನ್ನು ಲಿಖಿತ ರೂಪದಲ್ಲಿ ದಾಖಲಿಸಲು ಸಹಾಯಕರೊಬ್ಬರನ್ನು ಯಾವಾಗಲೂ ತಮ್ಮ ಜೊತೆಯೇ ಇರಿಸಿಕೊಳ್ಳುತ್ತಿದ್ದರು. ಆಗಿನ ಕಾಲದ ಗಾಯಕ ಗಾಯಕಿಯರು ನೋಟೇಶನ್ ಬಳಸುತ್ತಿರಲಿಲ್ಲ ಅನ್ನಿಸುತ್ತದೆ. ಮಹಮ್ಮದ್ ರಫಿ ಅವರು ತಮ್ಮ ಮನೆಗೆ ಬಂದು  ಹಾಡು ತನಗೆ ಮನದಟ್ಟಾಗುವ ವರೆಗೆ ರಿಹರ್ಸಲ್  ಮಾಡುತ್ತಿದ್ದ ಬಗ್ಗೆ ಅನೇಕ ಸಂಗೀತ ನಿರ್ದೇಶಕರು ಹೇಳಿದ್ದನ್ನು ನಾನು ಕೇಳಿದ್ದೇನೆ.  ಮತ್ತೆ ಪೂರ್ಣ ಆರ್ಕೆಷ್ಟ್ರಾದೊಡನೆ ಒಂದೆರಡು ರಿಹರ್ಸಲ್ ನಡೆಸಿದ ಮೇಲಷ್ಟೇ ಅವರು ರೆಕಾರ್ಡಿಂಗಿಗೆ   ಒಪ್ಪುತ್ತಿದ್ದರಂತೆ.  ಹೀಗಾಗಿಯೇ ಅವರ ಹಾಡುಗಳೆಲ್ಲ ಅಂದಿಗೂ ಇಂದಿಗೂ ಎಂದೆಂದಿಗೂ ಅಜರಾಮರ.  ಆದರೆ ಕನ್ನಡ ಚಿತ್ರಸಂಗೀತಕ್ಕೆ ಸಂಬಂಧಿಸಿದಂತೆ ಬೆಳ್ಳಿಪರದೆ ಹಿಂದಿನ ಇಂತಹ ಮಾಹಿತಿಗಳು ಜನಸಾಮಾನ್ಯರನ್ನು ಇನ್ನೂ ತಲುಪಿಲ್ಲ. ಅದರ ಒಳಹೊರಗನ್ನು ಬಲ್ಲ ಯಾರಾದರೂ ಈ ನಿಟ್ಟಿನಲ್ಲಿ  ಪ್ರಯತ್ನ ಮಾಡಿ ಇಲ್ಲಿಯ ಅರೇಂಜರ್ಸ್, ವಿವಿಧ ವಾದ್ಯಗಳನ್ನು ನುಡಿಸುತ್ತಿದ್ದ ಕಲಾವಿದರು, ಅವರು ನೊಟೇಶನ್ ಬರೆಯುತ್ತಿದ್ದ ರೀತಿ, ರೆಕಾರ್ಡಿಂಗ್ ನಡೆಯುತ್ತಿದ್ದ ಪದ್ಧತಿ   ಇವುಗಳೆಲ್ಲದರ  ಕುರಿತ ಮಾಹಿತಿಯನ್ನು ಅನಾವರಣಗೊಳಿಸುವ ಅಗತ್ಯವಿದೆ.

ಕೆಲವು ಅಪವಾದಗಳಿರಬಹುದಾದರೂ ಹಿಂದಿ ಮತ್ತು ದಕ್ಷಿಣ ಭಾರತ ಚಿತ್ರರಂಗದ ಎಲ್ಲ ಸಂಗೀತ ನಿರ್ದೇಶಕರಿಗೆ, ಗಾಯಕರಿಗೆ, ವಾದಕರಿಗೆ  ಆಳವಾದ ಶಾಸ್ತ್ರೀಯ ಸಂಗೀತ ಜ್ಞಾನ ಇತ್ತು ಎನ್ನಲಾಗುವುದಿಲ್ಲ. ಆದರೆ ಯಾವುದನ್ನು ಹೇಗೆ ಪ್ರಸ್ತುತಪಡಿಸಬೇಕೆಂಬ ಅರಿವು ಅವರಿಗಿದ್ದುದರಿಂದ ಚಿತ್ರಗಳಲ್ಲಿ ಬಂದ ಶಾಸ್ತ್ರೀಯ ರಾಗಾಧಾರಿತ ಗೀತೆಗಳೆಲ್ಲ ಗೆದ್ದಿವೆ. ಯಕ್ಷಲೋಕದ ಕಿನ್ನರರ ಕೃಪೆಯೂ ಅಂದಿನ ಕಲಾವಿದರ ಮೇಲಿದ್ದಿರಬಹುದು. ತನಗೆ ಶಾಸ್ತ್ರೀಯ ಸಂಗೀತದ ಓನಾಮವೂ ಗೊತ್ತಿಲ್ಲ ಎಂದು ಸ್ವತಃ ಹೇಳಿಕೊಳ್ಳುತ್ತಿದ್ದ ಓ.ಪಿ. ನಯ್ಯರ್ ನಿರ್ದೇಶನದಲ್ಲೂ ಕೆಲವು ಅತಿ  ಉತ್ಕೃಷ್ಟ ಶಾಸ್ತ್ರೀಯ ಗೀತೆಗಳು ಮೂಡಿಬಂದಿರುವುದು ಪರಮಾಶ್ಚರ್ಯವೇ ಸರಿ. ಶಾಸ್ತ್ರೀಯ ಸಂಗೀತವನ್ನು ಕ್ರಮಬದ್ಧವಾಗಿ ಕಲಿಯದೆಯೂ ಎಷ್ಟೋ ಮಂದಿ ಶ್ರುತಿ ಲಯಬದ್ಧವಾಗಿ ಹಾಡುವುದನ್ನು, ನುಡಿಸುವುದನ್ನು  ನಾವು ಇತರೆಡೆಗಳಲ್ಲಿಯೂ ಆಗಾಗ ಕಾಣುತ್ತೇವೆ. ಬೀದಿಬದಿಯಲ್ಲಿ ಹಾರ್ಮೋನಿಯಮ್ ನುಡಿಸುತ್ತಾ ಹಾಡುವ ಕೆಲವರ ಶ್ರುತಿಜ್ಞಾನ ಸಂಗೀತದಲ್ಲಿ  ಪದವಿ ಪಡೆದವರಿಗಿಂತ ಚೆನ್ನಾಗಿರುವುದುಂಟು.

ಹಾಗೆ ನೋಡುವುದಾದರೆ ನಾವು ಗುರುತಿಸಿದ ಏಳೋ ಹನ್ನೆರಡೋ  ಸ್ವರಗಳಿಂದ ಹೊರಡುವ ಗಾನ ಮಾತ್ರ ಸಂಗೀತವೆನ್ನಲಾಗದು.  ಹೆತ್ತ ಮಗುವಿನ ಮೊದಲ ಅಳು ತಾಯಿಗೆ ಸಂಗೀತವಾಗಬಹುದು, ಗುಡುಗಿನ ಗರ್ಜನೆ ಮಳೆಗಾಗಿ ಕಾತರಿಸಿದ ರೈತನ ಕಿವಿಗೆ ಸಂಗೀತವಾಗಬಹುದು,  ಶಾಲೆ ಬಿಡುವಾಗಿನ ಗಂಟೆಯ ಸದ್ದು ವಿದ್ಯಾರ್ಥಿಗೆ ಸಂಗೀತವಾಗಬಹುದು, ಹನ್ನೊಂದನೇ ಕಿಕ್ಕಿಗೆ ಬೈಕ್ ಸ್ಟಾರ್ಟ್ ಆದಾಗ  ಹೊರಡಿಸಿವ ಕರ್ಕಶ ಸದ್ದು ಅದರ ಒಡೆಯನಿಗೆ ಸಂಗೀತವಾಗಬಹುದು.  ಒಟ್ಟಿನಲ್ಲಿ ಎಲ್ಲೆಲ್ಲೂ ಸಂಗೀತವೇ ಇದೆ.  ಕೇಳುವ ಕಿವಿ ಇರಬೇಕು, ಆನಂದಿಸುವ ಮನ ಇರಬೇಕು ಅಷ್ಟೇ.

**********
ಈ ಲೇಖನವು ಉತ್ಥಾನ ಮಾಸಪತ್ರಿಕೆಯ ಅಗಸ್ಟ್ 2019ರ ಸಂಚಿಕೆಯಲ್ಲಿ ಪ್ರಕಟವಾಗಿದ್ದು ಅದನ್ನು ಇಲ್ಲಿ ಕ್ಲಿಕ್ಕಿಸಿ ಓದಬಹುದು.

ಉತ್ಥಾನ

ಉತ್ಥಾನದ ಕೆಲ ಪ್ರಾಜ್ಞ ಓದುಗರು ಈ  ಲೇಖನ ಮೆಚ್ಚಿ ಬರೆದ ಪತ್ರಗಳು ಇವು.

 

ಲೇಖನದಲ್ಲಿ ಪಾಶ್ಚಾತ್ಯ notationಗೆ ಉದಾಹರಣೆಯಾಗಿ ಮಾತ್ರ ಉಲ್ಲೇಖಿಸಲ್ಪಟ್ಟಿದ್ದ  ರಾರ ವೇಣು ಗೋಪಬಾಲ ಸ್ವರಜಿತ್ ಸಾಹಿತ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಎಸ್. ಕಾರ್ತಿಕ್ ಅವರೊಂದಿಗೆ facebookನಲ್ಲೂ ಸಂವಾದ ನಡೆದಿತ್ತು. ರಾರಾ ವೇಣುಗೋಪಾಲ ಎಂಬ ಪಾಠಾಂತರ  ಸಂಗೀತಕ್ಕೆ ಸಂಬಂಧಿಸಿದ ಯಾವುದಾದರೂ ಗ್ರಂಥದಲ್ಲಿ ದಾಖಲಾದದ್ದಿದೆಯೇ ಎಂಬುದನ್ನು ಅವರು ಸ್ಪಷ್ಟ ಪಡಿಸಲಿಲ್ಲ.

Monday, 10 March 2025

ಸಮಾನ ಹಗಲು ರಾತ್ರಿ, ಶುದ್ಧ ಪೂರ್ವದಲ್ಲಿ ಸೂರ್ಯೋದಯ ಮತ್ತು ಶೂನ್ಯ ನೆರಳು.



ಮಾರ್ಚ್ 20ರ ವಸಂತ ವಿಷುವತ್ ಮತ್ತು
ಸಪ್ಟಂಬರ 22ರ ಶರದ್ ವಿಷುವತ್ ದಿನಗಳಂದು 23.5 ಡಿಗ್ರಿ ಬಾಗಿರುವ ಭೂಮಿಯ ಉತ್ತರ ಮತ್ತು ದಕ್ಷಿಣ ಭಾಗಗಳೆರಡೂ ಸೂರ್ಯನಿಂದ ಸಮಾನ ದೂರದಲ್ಲಿರುವುದರಿಂದ ಎಲ್ಲೆಡೆ ಅಂದು ಸಮಾನ ಅವಧಿಯ ಹಗಲು ಮತ್ತು ರಾತ್ರಿ ಇರಬೇಕು. ಆದರೆ ವಾತಾವರಣದಲ್ಲಿ ಕಿರಣಗಳ ವಕ್ರೀಭವನದಿಂದಾಗಿ ಸೂರ್ಯನು ನಿಜವಾಗಿ ಉದಯಿಸುವುದಕ್ಕಿಂತ ಮೊದಲೇ ಉದಯಿಸಿದಂತೆ ಭಾಸವಾಗುವುದು ಮತ್ತು ಸಂಜೆ ನಿಜವಾಗಿ ಅಸ್ತನಾದ ಮೇಲೂ ಇನ್ನೂ ಸ್ವಲ್ಪ ಹೊತ್ತು ಕಾಣಿಸುವುದು ಹಾಗೂ ಸೂರ್ಯ ಗೋಲದ ಮೇಲ್ಭಾಗ ಪೂರ್ವ ದಿಗಂತದಲ್ಲಿ ಕಾಣಿಸುವುದನ್ನು ಉದಯ ಎಂದು ಹಾಗೂ ಗೋಲದ ಕೆಳಭಾಗ ಸಂಜೆಗಾಗುವಾಗ ಮೇಲ್ಭಾಗ ಆಗಿ ಪಶ್ಚಿಮದಲ್ಲಿ ಮರೆಯಾದ ಮೇಲಷ್ಟೇ ಅಸ್ತ ಎಂದು ಅನಿಸಿಕೊಳ್ಳುವುದರಿಂದ ಪ್ರತೀ ಹಗಲು ವಾಸ್ತವಕ್ಕಿಂತ ಕೆಲವು ನಿಮಿಷ ಹೆಚ್ಚಿನ ಅವಧಿ ಹೊಂದಿರುವಂತೆ ನಮಗೆ ಭಾಸವಾಗುತ್ತದೆ. ಹೀಗಾಗಿ ಹಗಲು ಹಿರಿದಾಗುತ್ತಾ ಹೋಗುವಾಗ ವಸಂತ ವಿಷುವತ್‌ಗಿಂತ ಕೆಲವು ದಿನ ಮೊದಲು ಮತ್ತು ಹಗಲು ಕಿರಿದಾಗುತ್ತಾ ಹೋಗುವಾಗ ಶರದ್ ವಿಷುವತ್‌ಗಿಂತ ಕೆಲವು ದಿನ ನಂತರ ಸಮಾನ ಅವಧಿಯ ಹಗಲು ರಾತ್ರಿಯ ದಿನ ಇರುತ್ತದೆ. ಆಯಾ ಸ್ಥಳದ ಅಕ್ಷಾಂಶ ಹೊಂದಿಕೊಂಡು ಈ ದಿನಗಳು ಬೇರೆ ಬೇರೆ ಆಗಿರುತ್ತವೆ. ಉತ್ತರ ಮತ್ತು ದಕ್ಷಿಣ ಗೋಲಾರ್ಧಗಳ ಕೆಲವು ಅಕ್ಷಾಂಶಗಳಲ್ಲಿ ಸಮಾನ ಅವಧಿಯ ಹಗಲು ರಾತ್ರಿಗಳಿರುವ ದಿನಾಂಕಗಳು ಇಲ್ಲಿವೆ. 12.9 ಉತ್ತರ ಅಕ್ಷಾಂಶದಲ್ಲಿರುವ ಮಂಗಳೂರು ಮತ್ತಿತರ ಸ್ಥಳಗಳಲ್ಲಿ ಮಾರ್ಚ್ 11 ಮತ್ತು ಅಕ್ಟೋಬರ್ 2ರಂದು ಸಮಾನ ದಿನ ರಾತ್ರಿಗಳಿರುತ್ತವೆ.

ಭೂಮಧ್ಯರೇಖೆ ಪ್ರದೇಶದಲ್ಲಿರುವ ಸ್ಥಳಗಳಲ್ಲಿ ಸಮಾನ ಹಗಲು ರಾತ್ರಿಗಳ ದಿನವೇ ಇಲ್ಲ. ಅಲ್ಲಿ ವರ್ಷ ಪೂರ್ತಿ 12 ಗಂಟೆ 06 ನಿಮಿಷ ಅವಧಿಯ ಹಗಲು.
ಶುದ್ಧ ಪೂರ್ವದಲ್ಲಿ ಸೂರ್ಯೋದಯ ಮತ್ತು ಶೂನ್ಯ ನೆರಳು.
ವರ್ಷವಿಡಿ ಉತ್ತರದಿಂದ ದಕ್ಷಿಣಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ ಚಲಿಸುವ ಸೂರ್ಯನು ವಸಂತ ವಿಷುವತ್ ಮತ್ತು ಶಿಶಿರ ವಿಷುವತ್ ದಿನಗಳಂದು ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಹೊರತುಪಡಿಸಿ ಭೂಮಿಯ ಎಲ್ಲೆಡೆ ಶುದ್ಧ ಪೂರ್ವದಲ್ಲಿ (90 ಡಿಗ್ರಿ) ಉದಯಿಸಿ ಶುದ್ಧ ಪಶ್ಚಿಮದಲ್ಲಿ (270 ಡಿಗ್ರಿ) ಅಸ್ತಮಿಸುತ್ತಾನೆ. ಹಾಗಿದ್ದರೆ ಆ ದಿನಗಳಂದು ನಡು ಮಧ್ಯಾಹ್ನ ಸೂರ್ಯ ನಡು ನೆತ್ತಿಯ ಮೇಲೆ ಬಂದು ಶೂನ್ಯ ನೆರಳು ಉಂಟಾಗುತ್ತದೆಯೇ ಎಂಬ ಪ್ರಶ್ನೆ ಬರುತ್ತದೆ. ಹಾಗಾಗುವುದಿಲ್ಲ ಎಂಬುದು ಇದಕ್ಕೆ ಉತ್ತರ. ಸೂರ್ಯ ಪೂರ್ವ ದಿಶೆಯಲ್ಲಿ ಉದಯಿಸಿ ನೂಲು ಹಿಡಿದಂತೆ ನೇರವಾಗಿ ಪಶ್ಚಿಮದತ್ತ ಸಾಗದೆ ಉತ್ತರ ಗೋಲಾರ್ಧದಲ್ಲಿ ದಕ್ಷಿಣದತ್ತ ಬಾಗಿರುವ, ದಕ್ಷಿಣ ಗೋಲಾರ್ಧದಲ್ಲಿ ಉತ್ತರದತ್ತ ಬಾಗಿರುವ ವಕ್ರ ದಾರಿಯಲ್ಲಿ ಸಾಗುವುದು ಇದಕ್ಕೆ ಕಾರಣ.

ಇಲ್ಲಿರುವ ಚಿತ್ರದಲ್ಲಿ 12.9 ಅಕ್ಷಾಂಶದ ಮಂಗಳೂರಿನಲ್ಲಿ ಮಾರ್ಚ್ 20ರಂದು ಸೂರ್ಯನು ಶುದ್ಧ ಪೂರ್ವದಲ್ಲಿ ಉದಯಿಸಿ ಶುದ್ಧ ಪಶ್ಚಿಮದಲ್ಲಿ ಅಸ್ತನಾದರೂ ನಡು ಮಧ್ಯಾಹ್ನ ದಕ್ಷಿಣದತ್ತ ಸರಿದಿರುವುದನ್ನು ಮತ್ತು ಎಪ್ರಿಲ್ 24ರಂದು ಶುದ್ಧ ಪೂರ್ವಕ್ಕಿಂತ ಉತ್ತರದಲ್ಲಿ ಉದಯಿಸಿ ಪಶ್ಚಿಮಕ್ಕಿಂತ ಉತ್ತರದಲ್ಲಿ ಅಸ್ತನಾದರೂ ಆತ ದಕ್ಷಿಣದತ್ತ ಬಾಗಿದ ಪಥದಲ್ಲಿ ಚಲಿಸಿ ನಡು ಮಧ್ಯಾಹ್ನ ನಡು ನೆತ್ತಿಯ ಮೇಲೆ ಬಂದು ಶೂನ್ಯ ನೆರಳು ಉಂಟಾಗುವುದನ್ನು ಕಾಣಬಹುದು. ಈ ವಿದ್ಯಮಾನ ವಿವಿಧ ದಿನಾಕಗಳಂದು ಮಕರ ವೃತ್ತ ಮತ್ತು ಕರ್ಕ ವೃತ್ತಗಳೊಳಗೆ ಇರುವ ಪ್ರದೇಶಗಳಲ್ಲಿ ಮಾತ್ರ ಘಟಿಸುತ್ತದೆ. ಶೂನ್ಯ ನೆರಳು ಉಂಟಾಗುವ ದಿನ ಆ ಸ್ಥಳದ ಅಕ್ಷಾಂಶ ಮತ್ತು ಭೂಮಧ್ಯ ರೇಖೆ ಹಾಗೂ ಸೂರ್ಯ ಕಿರಣಗಳ ನಡುವಿನ ಕೋನ (declination) ಒಂದೇ ಆಗಿರುತ್ತದೆ.

ಅಕ್ಷಾಂಶ ಹೆಚ್ಚಾದಂತೆ ಸೂರ್ಯನ ಪಥದ ಬಾಗು ಹೆಚ್ಚಾಗುವುದನ್ನು ದಕ್ಷಿಣದ ಸಿಡ್ನಿ ಮತ್ತು ಉತ್ತರದ ಮಾಸ್ಕೋಗೆ ಸಂಬಂಧಿಸಿದ ಚಿತ್ರಗಳಲ್ಲಿ ನೋಡಬಹುದು. ದಕ್ಷಿಣ ಗೋಲಾರ್ಧದ ಸಿಡ್ನಿಯಲ್ಲಿ ಸೂರ್ಯಪಥದ ಬಾಗು ಉತ್ತರಕ್ಕಿರುವುದನ್ನೂ ಗಮನಿಸಬಹುದು.


ಭೂಮಧ್ಯ ರೇಖೆಯ ಮೇಲೆ ಇರುವ ಪ್ರದೇಶಗಳಲ್ಲಿ ವಿಷುವತ್ ದಿನದಂದೇ ಶೂನ್ಯ ನೆರಳಿನ ದಿನ ಇರುತ್ತದೆ. ಏಕೆಂದರೆ ಅಲ್ಲಿ ಆ ದಿನ ಸೂರ್ಯ ಪೂರ್ವದಲ್ಲಿ ಉದಯಿಸಿ ನೇರ ದಾರಿಯಲ್ಲಿ ಪಶ್ಚಿಮಕ್ಕೆ ಸಾಗುತ್ತಾ ನಡು ಮಧ್ಯಾಹ್ನ ನೆತ್ತಿಯ ಮೇಲೆ ಬರುತ್ತಾನೆ.

- ಚಿದಂಬರ ಕಾಕತ್ಕರ್.


Saturday, 8 March 2025

ಮರೆಯಲ್ಲುಳಿದ ಮುದ ತುಂಬಿ ಮೆರೆವ ಮದುಮಗಳು



ಶಾರ್ಟ್ ವೇವ್ ವಿವಿಧಭಾರತಿಯಲ್ಲಿ ಅಪರಾಹ್ನ 4 ಗಂಟೆಯ ನಂತರ ಕರ್ನಾಟಕ್ ಸಂಗೀತ್ ಸಭಾದ  ಮಧುರ್ ಗೀತಂ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತೀಯ ಭಾಷೆಗಳ ಸಿನಿಮಾ ಹಾಡುಗಳು ಪ್ರಸಾರವಾಗುತ್ತಿದ್ದುದುದು ಹಳೆಯ ತಲೆಮಾರಿನವರಿಗೆ ಗೊತ್ತಿರುತ್ತದೆ. ಈ ಕಾರ್ಯಕ್ರಮ ಅಪರಾಹ್ನ 4 ಗಂಟೆಗೆ ಆರಂಭವಾಗಲು ಒಂದು ಕಾರಣ ಇದೆ. ರೇಡಿಯೋ ಸಿಲೋನಿನ ದಕ್ಷಿಣ ಭಾರತೀಯ ಕಾರ್ಯಕ್ರಮ ಆರಂಭವಾಗುತ್ತಿದ್ದುದು ಕೂಡ 4 ಗಂಟೆಗೆ. 1957ರಲ್ಲಿ ವಿವಿಧಭಾರತಿ ಜನ್ಮ ತಾಳಿದ್ದೇ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ರೇಡಿಯೋ ಸಿಲೋನನ್ನು counter  ಮಾಡುವುದಕ್ಕಾಗಿ! ಆದರೆ ಮುಂದಿನ ಅನೇಕ ದಶಕಗಳ ಕಾಲ ಇದು ಸಾಧ್ಯವಾಗಲಿಲ್ಲ ಅನ್ನುವುದು ಬೇರೆ ಮಾತು.

ಅದೇನೇ ಇರಲಿ.  ಈ ಕಾರ್ಯಕ್ರಮದಿಂದಾಗಿ  ನಮಗೆ ಕನ್ನಡ ಹಾಡುಗಳೊಂದಿಗೆ ಪಾಲುಂ ಪಳಮುಂ ಚಿತ್ರದ ನಾನ್  ಪೇಸ ನಿನೈಪದೆಲ್ಲಾಂ, ಕಲ್ಯಾಣ ಪರಿಸು ಚಿತ್ರದ ಉನ್ನೈ ಕಂಡು ನಾನಾಡ,  ಮಿಸ್ಸಿಯಮ್ಮ ಚಿತ್ರದ ಬೃಂದಾವನಮಿದಿ ಅಂದರಿದಿ ಗೋವಿಂದುಡು, ಚೆಮ್ಮೀನ್ ಚಿತ್ರದ ಕಡನಿಲಕ್ಕರೆ ಪೋಣೋರೆ ಮುಂತಾದ ತಮಿಳು, ತೆಲುಗು ಮತ್ತು ಮಲಯಾಳಂ ಹಾಡುಗಳ ಪರಿಚಯವೂ ಆಗುತ್ತಿತ್ತು. ಆಗ  ಎಲ್.ಆರ್.ಈಶ್ವರಿ ಹಾಡಿದ ವಾರಾಯನ್ ತೋಡಿ ವಾರಾಯೋ ಎಂಬ  ಪಾಶ ಮಲರ್ ತಮಿಳು ಚಿತ್ರದ  ಹಾಡು ನಮಗೆ ವಿಶೇಷ ಆಕರ್ಷಣೆ ಆಗಿತ್ತು.  ಇದಕ್ಕೆ ಕಾರಣ  ಆ ಹಾಡಿನ ಆಕರ್ಷಕ ನಡೆ ಮತ್ತು ಚರಣಗಳ ಮಧ್ಯೆ ಇದ್ದ ಶ್ರುತಿಬದ್ಧ ಮಂತ್ರಘೋಷ.  

1961ರ ಪಾಶ ಮಲರ್ 1965ರಲ್ಲಿ ವಾತ್ಸಲ್ಯ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ತಯಾರಾಯಿತು.  ಸಂಗೀತ ನಿರ್ದೇಶಕ ವಿಜಯಾ ಕೃಷ್ಣಮೂರ್ತಿ ಉಳಿದ ಹಾಡುಗಳಿಗೆ ಸ್ವಂತ ಧಾಟಿಗಳನ್ನು ಸಂಯೋಜಿಸಿದರೂ ವಾರಾಯನ್ ತೋಡಿ ವಾರಾಯೋ  ಸನ್ನಿವೇಶದ  ಮುದ ತುಂಬಿ ಮೆರೆವ ಮದುಮಗಳೇ ಹಾಡಿಗೆ ವಿಶ್ವನಾಥನ್ ರಾಮಮೂರ್ತಿ ಅವರ ಮೂಲ ಟ್ಯೂನನ್ನೇ ಉಳಿಸಿಕೊಂಡರು. ಸ್ವತಃ ಅರೇಂಜರ್ ಆಗಿದ್ದ ಅವರಿಗೆ ಹಾಡಿನ ಮರುಸೃಷ್ಟಿ  ಕಷ್ಟವೆನಿಸಲಿಲ್ಲ. ತಮಿಳು ಹಾಡನ್ನೂ ಮೀರಿಸುವಂತೆ ಕನ್ನಡದಲ್ಲೂ ಎಲ್.ಆರ್. ಈಶ್ವರಿಯೇ ಹಾಡಿದರು.  ಸೋರಟ್ ಅಶ್ವತ್ಥ್ ಅವರ ಅರ್ಥಪೂರ್ಣ, ಸರಳ, ಪ್ರಾಸಬದ್ಧ ಸಾಹಿತ್ಯ ಹಾಡಿಗೆ ಹೆಚ್ಚಿನ ಮೆರುಗು ನೀಡಿತು. 

ಗಿಟಾರಿನ ಝೇಂಕಾರದೊಡನೆ ಆರಂಭವಾಗುವ ಸುಮಾರು 30 ಸೆಕೆಂಡುಗಳ ತಾಳವಾದ್ಯ ರಹಿತ prelude ಮುಗಿದೊಡನೆ ಶ್ರುತಿಯಲ್ಲಿರುವ ಢೋಲಕಿನ ಎತ್ತುಗಡೆಯೊಂದಿಗೆ ಹಾಡಿನ ಪಲ್ಲವಿ ಆರಂಭವಾಗುತ್ತದೆ. ಕೋರಸ್ ಧ್ವನಿಯ  ಮೊದಲ ಎರಡು ಸಾಲು ಆದ ಮೇಲೆ ಎಲ್.ಆರ್. ಈಶ್ವರಿಯ ಕಂಚಿನ ಕಂಠದ ಪ್ರವೇಶವಾಗುತ್ತದೆ. ಪಲ್ಲವಿ ಮುಗಿಯುವ ಮೊದಲೇ ಹಿನ್ನೆಲೆಯಲ್ಲಿ ತವಿಲ್ ಮತ್ತು ನಾಗಸ್ವರ ನುಡಿಯತೊಡಗಿ ಪಲ್ಲವಿ ಮುಗಿಯುತ್ತಲೇ ಅದೇ ಹಿನ್ನೆಲೆಯೊಂದಿಗೆ ಮಂತ್ರಗಳು ಕೇಳಿಸುತ್ತವೆ. ನಂತರ ಗಿಟಾರ್ ಲಯದೊಂದಿಗೆ ಸಣ್ಣ BGM ಇದೆ.  ಚರಣ ಆರಂಭವಾಗುತ್ತಲೇ ಸಣ್ಣ ಉರುಳಿಕೆಯೊಂದಿಗೆ ಢೋಲಕ್ take over ಮಾಡುತ್ತದೆ. ಇಲ್ಲಿ ಪಲ್ಲವಿ ಭಾಗದ ದತ್ತು ಠೇಕಾ (ಹಿಂದಿಯ ದತ್ತಾರಾಂ ಪ್ರಚುರಪಡಿಸಿದ ಲಯ)  ಬೇರೆ ನಡೆಗೆ ಬದಲಾಗುತ್ತದೆ. ಚರಣದ ಕೊನೆಯ ಸಾಲುಗಳನ್ನು ಪುನರಾವರ್ತನೆ ಮಾಡಿದ ಕೋರಸ್ ದತ್ತು ಠೇಕಾದೊಂದಿಗೆ  ಪಲ್ಲವಿಯ ಮೊದಲ ಎರಡು ಸಾಲು ಹಾಡುತ್ತದೆ. ಪುನಃ ತವಿಲ್, ನಾಗಸ್ವರ ಹಿನ್ನೆಲೆಯ ಮಂತ್ರಗಳ ನಂತರ ಈ ಸಲ ಚಪ್ಪಾಳೆ ಲಯದೊಂದಿಗಿನ ಗಿಟಾರಿನೊಂದಿಗೆ ಸಖಿಯರ ನಗು ಮೇಳೈಸುತ್ತದೆ. ಮೊದಲ ಚರಣದಂತೆಯೇ ಎರಡನೆಯ ಚರಣ ಸಾಗುತ್ತದೆ. ಕೊನೆಗೆ ಗಟ್ಟಿ ಮೇಳದ ಜೊತೆಗೆ ಮಂತ್ರಗಳು ಮೊಳಗಿ ಮಾಂಗಲ್ಯಧಾರಣೆಯ ಚಿತ್ರ ಕಣ್ಣಮುಂದೆ ಮೂಡುತ್ತದೆ. 

ಮುದ ತುಂಬಿ ಮೆರೆವ ಮದುಮಗಳೇ ಮನದಾಸೆ ತೀರೆ ವೇಳೆ ಈ ವೇಳೆ ಎಂಬ ಪಲ್ಲವಿಯ ಮೊದಲ ಎರಡು ಸಾಲುಗಳನ್ನು ಮುಖ್ಯ ಗಾಯಕಿ ಒಮ್ಮೆಯೂ ಹಾಡುವುದಿಲ್ಲ!

ಆದರೆ ಈ ಚಂದದ ಹಾಡು  ಜನಸಾಮಾನ್ಯರನ್ನು ತಲುಪಲೇ ಇಲ್ಲ!  ಆಕಾಶವಾಣಿಯಲ್ಲಿ ಈ ಚಿತ್ರದ ಹಾಡುಗಳು ಪ್ರಸಾರವಾಗದೇ ಇದ್ದುದು ಇದಕ್ಕೆ ಕಾರಣ. ಈ ಹಾಡುಗಳ ಗ್ರಾಮಫೋನ್ ಡಿಸ್ಕುಗಳೇ ತಯಾರಾಗಿರಲಿಲ್ಲವೇನೋ ಎಂಬ ಅನುಮಾನ ನನ್ನಲ್ಲಿ ಮೂಡಿತ್ತು.  ಆದರೆ ಅನೇಕ ವರ್ಷಗಳ ನಂತರ ಮೈಸೂರಿನ ಚಂದ್ರು ಸೌಂಡ್ ಸಿಸ್ಟಂನವರಲ್ಲಿ ಈ ಹಾಡಿನ ಡಿಸ್ಕ್ ಇರುವುದು ತಿಳಿದು ಕ್ಯಾಸೆಟ್ಟಿನಲ್ಲಿ ರೆಕಾರ್ಡ್ ಮಾಡಿಸಿಕೊಂಡಿದ್ದೆ. ಬಹುಶಃ ಆಕಾಶವಾಣಿಗೆ ಹಾಡುಗಳ ಡಿಸ್ಕ್ ಒದಗಿಸುವ ಜವಾಬ್ದಾರಿ  ಹೊತ್ತಿದ್ದ ಮದರಾಸಿನ ಸರಸ್ವತಿ ಸ್ಟೋರ್‌ನವರ ಎಡವಟ್ಟಿನಿಂದ  ಹೀಗಾಗಿರಬಹುದು. ಲಾಯರ್ ಮಗಳು, ಬಂಗಾರಿ, ಬಾಲರಾಜನ ಕಥೆ ಮುಂತಾದ ಚಿತ್ರಗಳ ಹಾಡುಗಳು ಆಕಾಶವಾಣಿಯನ್ನು ತಲುಪದೇ ಇರಲೂ ಇದೇ ಕಾರಣ ಇರಬಹುದು.

ಮುದ ತುಂಬಿ ಬಂದ ಮದುಮಗಳೇ
ಚಿತ್ರ : ವಾತ್ಸಲ್ಯ.
ಗಾಯನ : ಎಲ್.ಆರ್. ಈಶ್ವರಿ ಮತ್ತು ಸಂಗಡಿಗರು.
ಸಂಗೀತ : ವಿಜಯಾ ಕೃಷ್ಣಮೂರ್ತಿ.
ಸಾಹಿತ್ಯ : ಸೋರಟ್ ಅಶ್ವತ್ಥ್.


ಹಾಡು ಕೇಳಲು ಬಾಣದ ಮೇಲೆ ಕ್ಲಿಕ್ಕಿಸಿ.





ಬಂಧುವರ್ಗದಲ್ಲಿ ನಡೆಯುವ ವಿವಾಹಗಳ ವೀಡಿಯೊದಲ್ಲಿ ಈ ಹಾಡನ್ನು ನಾನು ತಪ್ಪದೆ ಬಳಸುತ್ತೇನೆ.

ರಾಜಕುಮಾರ್ ಮತ್ತು ಲೀಲಾವತಿ ಅವರು ಅಣ್ಣ ತಂಗಿ ಪಾತ್ರಗಳಲ್ಲಿ ನಟಿಸಿದ ಏಕೈಕ ಚಿತ್ರ ವಾತ್ಸಲ್ಯ. ಅವರೊಂದಿಗೆ  ಉದಯಕುಮಾರ್, ಜಯಂತಿ, ನರಸಿಂಹರಾಜು ಮುಂತಾದವರು ಅಭಿನಯಿಸಿದ ವೈ.ಆರ್. ಸ್ವಾಮಿ ನಿರ್ದೇಶನವಿದ್ದ ಈ ಚಿತ್ರ ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು.  


- ಚಿದಂಬರ ಕಾಕತ್ಕರ್.



Monday, 17 February 2025

ಮಾಸ ಋತುಗಳ ತಪ್ಪಿದ ತಾಳ


ಚಾಂದ್ರಮಾನ ಪ್ರಕಾರ ಚೈತ್ರ ವೈಶಾಖಗಳೆಂದರೆ ವಸಂತ ಋತು. ಸೌರಮಾನ ಪ್ರಕಾರ ಮೇಷ ವೃಷಭ ಮಾಸಗಳು ವಸಂತ ಋತು. ಆದರೆ ಪ್ರಕೃತಿ ಚಾಂದ್ರಮಾನ ಪಂಚಾಂಗವನ್ನೂ ನೋಡುವುದಿಲ್ಲ, ಸೌರಮಾನ ಪಂಚಾಂಗವನ್ನೂ ನೋಡುವುದಿಲ್ಲ. ಅದು ನೋಡುವುದು ಸೂರ್ಯನ ಸುತ್ತ ವಾರ್ಷಿಕ ಚಲನೆಯ ಪಥದಲ್ಲಿ ಭೂಮಿ ಎಲ್ಲಿದೆ ಎಂದು, ಅಥವಾ ಭೂಮಿಯಲ್ಲಿರುವ ನಾವು ಗ್ರಹಿಸುವಂತೆ ಸೂರ್ಯ ತನ್ನ ವಾರ್ಷಿಕ 360 ಡಿಗ್ರಿ ಚಲನೆಯಲ್ಲಿ ಈಗ ಎಲ್ಲಿದ್ದಾನೆ ಎಂದು ಮಾತ್ರ.
ಸೂರ್ಯ ಕ್ರಾಂತಿವೃತ್ತದಲ್ಲಿ ತನ್ನ ವಾರ್ಷಿಕ ಪರಿಭ್ರಮಣೆ ಆರಂಭಿಸುವ ಶೂನ್ಯ ಡಿಗ್ರಿಯ ವಸಂತ ವಿಷುವತ್ ಬಿಂದುವಿನಿಂದ 30 ಡಿಗ್ರಿ ಹಿಂದಕ್ಕೆ ಅಂದರೆ 270 ಡಿಗ್ರಿಯಲ್ಲಿ ಇರುವಾಗ (360-30=270) ಪ್ರಕೃತಿಯಲ್ಲಿ ವಸಂತದ ಲಕ್ಷಣಗಳು ಕಾಣಿಸತೊಡಗುತ್ತವೆ. ಇಲ್ಲಿಂದ ಮುಂದೆ ಚಲಿಸುತ್ತಾ ವಸಂತ ವಿಷುವತ್ ದಾಟಿ ಎಪ್ರಿಲ್ 20ಕ್ಕೆ 30 ಡಿಗ್ರಿ ಬಿಂದುವನ್ನು ತಲುಪುವ ವರೆಗೆ ವಸಂತ ಋತು. ಮುಂದೆ ಜೂನ್ 21ರ ವರೆಗೆ ಅತಿಯಾದ ಸೆಕೆಯ ಗ್ರೀಷ್ಮ ಋತು. ಅಗಸ್ಟ್ 23ರ ವರೆಗೆ ಮಳೆಯು ಇಳೆಯನ್ನು ತಂಪಾಗಿಸುವ ವರ್ಷಾ ಋತು. ನಂತರ ಅಕ್ಟೋಬರ್ 23ರ ವರೆಗೆ ಸಮ ಶೀತೋಷ್ಣದ ಶರದೃತು. ಆ ಮೇಲೆ ಡಿಸೆಂಬರ್ 22ರ ವರೆಗೆ ವಾತಾವರಣ ತಂಪಾಗುತ್ತಾ ಹೋಗುವ ಹೇಮಂತ ಋತು. ಕೊನೆಯಲ್ಲಿ ಫೆಬ್ರವರಿ 18ರ ವರೆಗೆ ಮೈ ಕೊರೆಯುವ ಚಳಿ ಇರಬೇಕಾದ ಶಿಶಿರ ಋತು. ಸೂರ್ಯನ ಸುತ್ತ ಭೂಮಿಯ ಪರಿಭ್ರಮಣವನ್ನು ಪರಿಗಣಿಸುವುದರಿಂದ ಇದು ಸಾಯನ (ಚಲನೆಯಿಂದೊಡಗೂಡಿದ) ಪದ್ಧತಿಯ ಲೆಕ್ಕಾಚಾರ.
ಹಾಗಿದ್ದರೆ ಪಂಚಾಂಗಗಳೊಂದಿಗಿನ ಋತುಗಳ ತಾಳ ಮೇಳ ಏಕೆ ತಪ್ಪಿತು? ಒಂದು ಕಾಲದಲ್ಲಿ ಉತ್ತರಾಯಣಾರಂಭದಂದು ದಶಂಬರದಲ್ಲಿ ಇರುತ್ತಿದ್ದ ಮಕರ ಸಂಕ್ರಾಂತಿ ಈಗ ಜನವರಿ ಮಧ್ಯಭಾಗಕ್ಕೆ ತಲುಪಲು ಕಾರಣವಾದ ಭೂಮಿಯ ಓಲಾಡುವಿಕೆಯಿಂದ ಉಂಟಾಗುವ precession of equinoxes ವಿದ್ಯಮಾನವೇ ಇದಕ್ಕೂ ಕಾರಣ. ಏಕೆಂದರೆ ಸೂರ್ಯನ ಸುತ್ತ ಭೂಮಿಯ ಚಲನೆಯನ್ನು ಗಣನೆಗೆ ತೆಗೆದುಕೊಳ್ಳದ ನಿರಯನ ಪದ್ಧತಿಯ ಸೌರಮಾನದಲ್ಲಿ ಮೇಷ ವೃಷಭಾದಿ ಎರಡು ಮಾಸಗಳಿಗೊಂದರಂತೆ ವಸಂತ ಗ್ರೀಷ್ಮಾದಿ ಋತುಗಳಿರುತ್ತವೆ. ನಿರಯನ ಪದ್ಧತಿಯ ಸೌರಮಾನದಲ್ಲಿ ಸೂರ್ಯನ ವಾರ್ಷಿಕ ಚಲನೆಯನ್ನು ಮೇಷ ರಾಶಿಯಿಂದ ಲೆಕ್ಕ ಹಾಕಲಾಗುತ್ತಿದ್ದು ಕಾಂತಿವೃತ್ತದಲ್ಲಿ ಅದರ ಆರಂಭ ಬಿಂದುವನ್ನು ಮೇಷಾದಿ ಅನ್ನಲಾಗುತ್ತದೆ. ಈಗ ಇದು ವಸಂತ ವಿಶುವತ್ ಬಿಂದುವಿಗಿಂತ ಸುಮಾರು 24.2 ಡಿಗ್ರಿ ಹಿಂದಕ್ಕಿದೆ. ಈ ವ್ಯತ್ಯಾಸವನ್ನು ಅಯನಾಂಶ ಎನ್ನುತ್ತಾರೆ. ಅಯನಾಂಶ ಗಣನೆಯ ಲಾಹಿರಿ, ರಾಮನ್ ಮುಂತಾದ ಬೇರೆ ಬೇರೆ ಪದ್ಧತಿಗಳಲ್ಲಿ ಏಕ ರೂಪತೆ ಇಲ್ಲ. ಬಹುತೇಕ ಆನ್ ಲೈನ್ ಪಂಚಾಂಗಗಳು ಲಾಹಿರಿ ಪದ್ಧತಿಯನ್ನು ಅನುಸರಿಸುತ್ತವೆ. ಕ್ರಿಸ್ತ ಶಕ 285ರಲ್ಲಿ ವಸಂತ ವಿಷುವತ್ ಮತ್ತು ಮೇಷಾದಿ ಬಿಂದುಗಳು ಒಂದೇ ಆಗಿದ್ದವು. ಅಂದರೆ ಆಗ ಅಯನಾಂಶ ಶೂನ್ಯವಾಗಿತ್ತು. ಉತ್ತರಾಯಣ ಆರಂಭ ಮತ್ತು ಮಕರ ಮಾಸ ಆರಂಭ ಒಟ್ಟಿಗೆ ಆಗುತ್ತಿತ್ತು. ವೇದಗಳ ಕಾಲವೆನ್ನಲಾದ ಕ್ರಿಸ್ತ ಪೂರ್ವ 1893ರಲ್ಲಿ ಮೇಷಾದಿ ಬಿಂದು ಸಾಯನ ಪದ್ಧತಿ ಪ್ರಕಾರ ವಸಂತ ಋತು ಆರಂಭ ಆಗುವ 330 ಡಿಗ್ರಿಯಲ್ಲಿ ಇತ್ತು. ಅಂದರೆ ಆಗ ಅಯನಾಂಶ ಮೈನಸ್ 30 ಡಿಗ್ರಿ. ವಸಂತ ವಿಷುವತ್ ವಸಂತ ಋತುವಿನ ಮಧ್ಯದಲ್ಲಿ ಬರುತ್ತಿತ್ತು. ಚಾಂದ್ರಮಾನಕ್ಕೂ ಪ್ರಕೃತಿಯ ಬದಲಾವಣೆಗಳಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಚಾಂದ್ರ ಮಾಸಗಳು ಸೌರ ಸಂಕ್ರಾಂತಿಗಳಿಗೆ ತಳುಕು ಹಾಕಿಕೊಂಡಿರುವುದರಿಂದ ಚೈತ್ರ ವೈಶಾಖ ವಸಂತ ಋತು, ಜ್ಯೇಷ್ಠ ಆಷಾಢ ಗ್ರೀಷ್ಮ ಋತು ಎಂದು ನಾವು ಸಂಜೆಯ ಬಾಯಿಪಾಠದಲ್ಲಿ ಹೇಳುತ್ತೇವೆ. ಇಲ್ಲಿ ಇನ್ನೊಂದು ಸ್ವಾರಸ್ಯವೂ ಇದೆ. ಚಾಂದ್ರ ಮಾಸದಲ್ಲಿ ಕಮ್ಮಿ ದಿನಗಳಿರುವುದರಿಂದ ವಸಂತ ಮಾಸ ಆರಂಭವಾಗುವ ಯುಗಾದಿಯು ಹಿಂದೆ ಬರುತ್ತಾ ಮೂರನೆಯ ವರ್ಷಕ್ಕಾಗುವಾಗ ನಿಜವಾದ ವಸಂತ ಆರಂಭವಾಗುವ ಫೆಬ್ರವರಿ 18ಕ್ಕೆ ಸಾಕಷ್ಟು ಸಮೀಪ ಬರುತ್ತದೆ. ಆದರೆ ಆ ವರ್ಷ ಅಧಿಕ ಮಾಸವೊಂದನ್ನು ಸೇರಿಸಿ ಮತ್ತೆ ಅದನ್ನು ಮುಂದೆ ದೂಡಲಾಗುವುದರಿಂದ ಚಾಂದ್ರ ಚೈತ್ರ ಆರಂಭವಾಗುವಷ್ಟರಲ್ಲಿ ನಿಜವಾದ ಗ್ರೀಷ್ಮ ಋತು ಆರಂಭವಾಗಲು ಕೆಲವೇ ದಿನಗಳು ಉಳಿದಿರುತ್ತವೆ. ಚೈತ್ರ ವೈಶಾಖಗಳ ವಸಂತ ಮುಗಿಯಲಿಕ್ಕಾಗುವಾಗ ಕೊಡೈಕ್ಕನಾಲ್, ಊಟಿಗಳಂತಹ ತಂಪು ಪ್ರದೇಶಗಳ ಹೊರತು ಬೇರೆಡೆ ವಸಂತದ ಯಾವ ಲಕ್ಷಣವೂ ಇರುವುದಿಲ್ಲ. ಸೆಕೆಗಾಲ, ಮಳೆಗಾಲ, ಚಳಿಗಾಲಗಳೂ ಋತುಗಳ ಅನುಸಾರ ಇರುವುದಿಲ್ಲ. 2020ರಿಂದ 2029ರ ವರೆಗಿನ ವರ್ಷಗಳ ಯುಗಾದಿ ದಿನಾಂಕಗಳು ಸಾಯನ ವಸಂತಾರಂಭದ ಸಮೀಪಕ್ಕೆ ಹೋಗುತ್ತಿರುವ ಚಾಂದ್ರ ಯುಗಾದಿಯನ್ನು ಅಧಿಕ ಮಾಸ ಹೇಗೆ ಮತ್ತೆ ದೂರಕ್ಕೊಯ್ಯುತ್ತದೆ ಎಂದು ಇಲ್ಲಿ ನೋಡಬಹುದು.
ಹೆಚ್ಚಿನ online ಪಂಚಾಂಗಗಳು ಫೆಬ್ರವರಿ 18ರಿಂದಲೇ ವಸಂತ ಋತು ಎಂದು ತೋರಿಸುತ್ತವೆ. ಡಿಸೆಂಬರ್ 22ರಿಂದಲೇ ಉತ್ತರಾಯಣಾರಂಭ ಎಂದು ಉಲ್ಲೇಖಿಸುವ ಕೆಲವು ಮುದ್ರಿತ ಸಾಂಪ್ರದಾಯಿಕ ಪಂಚಾಂಗಗಳು ಇವೆಯಾದರೂ ಋತುಗಳನ್ನು ತಿಂಗಳುಗಳಿಂದ ಮತ್ತು ಸಂಕ್ರಾಂತಿಗಳಿಂದ ಬೇರ್ಪಡಿಸಿ ಸೂರ್ಯನ ಚಲನೆಗೆ ಹೊಂದಿಸುವ ಹೊಸತನಕ್ಕೆ ಅವು ಯಾಕೋ ಇನ್ನೂ ಮುಂದಾಗಿಲ್ಲ. 

ಕುತೂಹಲಕಾರಿ ಅಂಶಗಳು.

  1. ಕ್ರಾಂತಿ ವೃತ್ತದಲ್ಲಿ (ecliptical) ಸೂರ್ಯನ ವಾರ್ಷಿಕ ಪಯಣ ಭೂಮಿಯಿಂದ ನೋಡಿದಂತೆ ಪಶ್ಚಿಮದಿಂದ ಪೂರ್ವಕ್ಕೆ ದಿನಕ್ಕೆ ಸುಮಾರು ಒಂದು ಡಿಗ್ರಿ. 30 ಡಿಗ್ರಿಯ ರಾಶಿಯನ್ನು ಒಂದು ತಿಂಗಳಲ್ಲಿ ಹಾದುಹೋಗುತ್ತಾನೆ.  12 ರಾಶಿಗಳನ್ನು ಕ್ರಮಿಸಿ ಮತ್ತೆ ಮೂಲ ಸ್ಥಾನಕ್ಕೆ ಬರಲು ಒಟ್ಟು 12 ತಿಂಗಳು. 
  2. ಇದರಿಂದಾಗಿ  ಆತನ ದೈನಿಕ ಪೂರ್ವ ಪಶ್ಚಿಮ ಪಯಣ ಕೊಂಚ ನಿಧಾನವಾದಂತೆನಿಸಿ ದಿನದ ಅವಧಿ 4 ನಿಮಿಷ ಹೆಚ್ಚಾಗುತ್ತದೆ. ಇದು ಪೂರ್ವದಿಂದ ಪಶ್ಚಿಮಕ್ಕೆ ವೇಗವಾಗಿ ಚಲಿಸುತ್ತಿರುವ ಟ್ರೈನಿನಲ್ಲಿ ಚಹಾ ಮಾರುವವನು ಪಶ್ಚಿಮದಿಂದ ಪೂರ್ವಕ್ಕೆ ನಡೆದುಕೊಂಡು ಹೋದಂತೆ! ಒಂದು ವೇಳೆ ಭೂಮಿ ಸೂರ್ಯನ ಸುತ್ತ ಚಲಿಸದಿರುತ್ತಿದ್ದರೆ ಅಂದರೆ ಪಶ್ಚಿಮದಿಂದ ಪೂರ್ವಕ್ಕೆ ಸೂರ್ಯನ ವಾರ್ಷಿಕ ಚಲನೆ ಇರದಿರುತ್ತಿದ್ದರೆ ದಿನದ ಅವಧಿ 23 ಗಂಟೆ  56 ನಿಮಿಷ ಆಗಿರುತ್ತಿತ್ತು.
  3. ಭೂಮಿ ತನ್ನ ಅಕ್ಷದಲ್ಲಿ ತಿರುಗದಿರುತ್ತಿದ್ದರೆ ಸೂರ್ಯ ಪಶ್ಚಿಮದಲ್ಲಿ ಹುಟ್ಟಿ 6 ತಿಂಗಳಲ್ಲಿ ಪೂರ್ವದಲ್ಲಿ ಅಸ್ತನಾಗುತ್ತಿದ್ದ.
  4. ಭೂಮಿ ಸೂರ್ಯನ ಸುತ್ತ ತಿರುಗುವುದರಿಂದ ನಾವು ದಿನವೂ ಆತನ ಬೇರೆ ಬೇರೆ ಪಾರ್ಶ್ವ ನೋಡುವುದು. ಒಮ್ಮೆ ನೋಡಿದ ಪಾರ್ಶ್ವ ಮತ್ತೆ  ಕಾಣಿಸುವುದು ಒಂದು ವರ್ಷದ ನಂತರ.



- ಚಿದಂಬರ ಕಾಕತ್ಕರ್.