Sunday 29 September 2019

ಹೀಗೊಂದು ರಾಜಕುಮಾರ್ ಹುಡುಕಾಟ

ನಾನು ರೇಡಿಯೊ ಸಿಲೋನ್ ನಿಯಮಿತವಾಗಿ ಕೇಳುವುದು ಬಿಟ್ಟು ವರ್ಷಗಳೇ ಕಳೆದಿವೆ.  ಒಂದು ಕಾಲದಲ್ಲಿ ಕಮರ್ಷಿಯಲ್  ರೇಡಿಯೊ ಸ್ಟೇಷ‌ನ್‌ಗಳ ರಾಜನೆನಿಸಿಕೊಂಡಿದ್ದ ಈ ನಿಲಯ ಅಹೋಬನ್ ಎಂಬ ಬಂಗಾಲಿ ಭಾಷೆಯ ಏಕೈಕ ಪ್ರಾಯೋಜಿತ ಕ್ರೈಸ್ತ ಧಾರ್ಮಿಕ ಕಾರ್ಯಕ್ರಮದ ಆಧಾರದಿಂದ ಈಗಲೂ  ಬೆಳಗ್ಗೆ 6ರಿಂದ 8 ಗಂಟೆ ವರೆಗೆ ದಿನಕ್ಕೆ ಎರಡು ತಾಸು ಹಿಂದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ತಾಂತ್ರಿಕ ಕಾರಣಗಳಿಂದಾಗಿ ಮಧ್ಯೆ 6-30ರಿಂದ 7-30ರ ವರೆಗೆ  25 ಮೀಟರ್‌ 11905 KHz ಶಾರ್ಟ್ ವೇವ್ ಪ್ರಸಾರ ಸ್ಥಗಿತಗೊಳ್ಳುತ್ತದೆ.   ಆದರೆ ಈ ಸಮಯದಲ್ಲೂ www.slbc.lk ಜಾಲತಾಣದ ವೆಬ್ ಸ್ಟ್ರೀಮಿಂಗ್ ಚಾಲ್ತಿಯಲ್ಲಿರುತ್ತದೆ.  ಅದರ ಅನೇಕ ಆಕರ್ಷಕ ಕಾರ್ಯಕ್ರಮಗಳು ನಿಂತು ಹೋಗಿದ್ದರೂ ಬೆಳಗ್ಗೆ 7-30ರಿಂದ 8ರ ವರೆಗೆ ಪ್ರಸಾರವಾಗುವ ಪುರಾನೀ ಫಿಲ್ಮೋಂ ಕಾ ಸಂಗೀತ್  ಈಗಲೂ ಇದೆ.  ಅದರ ಕೊನೆಯಲ್ಲಿ  ಕೆ.ಎಲ್.ಸೈಗಲ್ ಹಾಡು ಕೇಳಿಸುವ ಸಂಪ್ರದಾಯವೂ ಮುಂದುವರಿದಿದೆ.

ಮೊನ್ನೆ ಏಕೋ ಆ ನಿಲಯವನ್ನು ಮತ್ತೆ ಕೇಳುವ ಮನಸ್ಸಾಗಿ ಅಂತರ್ಜಾಲದ ಮೂಲಕ ಟ್ಯೂನ್ ಮಾಡಿಕೊಂಡಿದ್ದೆ.  ಅಂದು ಬುಧವಾರವಾಗಿದ್ದು ಆ ದಿನ ಅಲ್ಲಿಯ ಉದ್ಘೋಷಕಿ ಜ್ಯೋತಿ ಪರ್‌ಮಾರ್(ಈಕೆ ಸಿಲೋನಿನ ಉತ್ತುಂಗ ಕಾಲದ ಅನೌಂಸರ್ ದಲವೀರ್ ಸಿಂಗ್ ಪರಮಾರ್ ಅವರ ಪುತ್ರಿ) ಪುರಾನೀ ಫಿಲ್ಮೋಂ ಕಾ ಸಂಗೀತ್ ಕಾರ್ಯಕ್ರಮದಲ್ಲಿ ಕಮ್ ಸುನೇ ಮತ್ತು ಅನ್ ಸುನೇ ಹಾಡುಗಳನ್ನು ಕೇಳಿಸುತ್ತಾರೆ. ‘ಮೊದಲಿಗೆ ಸುಬ್ಬರಾಮನ್ ಮತ್ತು ವಿಶ್ವನಾಥನ್ ಸಂಗೀತ ನಿರ್ದೇಶನದಲ್ಲಿ ಚಂಡಿರಾಣಿ ಚಿತ್ರಕ್ಕಾಗಿ ಭಾನುಮತಿ ಹಾಡಿರುವ ಗೀತೆ ಆಲಿಸಿ’ ಎಂದು ಆಕೆ ಹೇಳುತ್ತಲೇ ನನ್ನ ಕಿವಿ ನೆಟ್ಟಗಾಯಿತು. ಚಂಡಿರಾಣಿ ಎಂಬ ತೆಲುಗು ಚಿತ್ರದ ಜಾಹೀರಾತುಗಳನ್ನು ಹಳೆ ಚಂದಮಾಮಗಳಲ್ಲಿ ನೋಡಿದ್ದೆ.  ಆದರೆ ಆ ಚಿತ್ರ ಹಿಂದಿಯಲ್ಲೂ ಇರುವುದು ಗೊತ್ತಿರಲಿಲ್ಲ.  ಬಹುಶಃ ಹಿಂದಿಗೆ ಡಬ್ ಆಗಿರಬಹುದು ಎಂದೆಣಿಸಿ ಗೂಗಲೇಶ್ವರನ ಮೊರೆ ಹೋದಾಗ ಅದು 1953ರಲ್ಲಿ ಏಕ ಕಾಲದಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬೇರೆ ಬೇರೆಯಾಗಿ ತಯಾರಾದದ್ದು, ತಮಿಳು ತೆಲುಗಲ್ಲಿ ರೇಲಂಗಿ ವಹಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಆಗಾ ನಿರ್ವಹಿಸಿದ್ದು ಬಿಟ್ಟರೆ ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಭಾನುಮತಿ ಮುಂತಾದವರ  ತಾರಾಗಣವೇ ಎಲ್ಲ ಭಾಷೆಗಳಲ್ಲಿ  ಇದ್ದದ್ದು, ಸಂಗೀತ ನಿರ್ದೇಶಕ ಸುಬ್ಬರಾಮನ್ ಅರ್ಧ ಚಿತ್ರ ಮುಗಿಯುವಾಗ ನಿಧನರಾಗಿ ಅವರ ಶಿಷ್ಯ ಎಂ.ಎಸ್. ವಿಶ್ವನಾಥನ್  ಆ ಕೆಲಸ ಮುಂದುವರಿಸಿದ್ದು, ಭಾನುಮತಿ ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿಯಾಗಿ ಇತಿಹಾಸ ರಚಿಸಿದ್ದು, ಮೂರು ಭಾಷೆಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ದಿನ  ಬಿಡುಗಡೆ ಆದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ಮುಂತಾದ ಅನೇಕ ವಿಷಯಗಳು ತಿಳಿದವು. ಹಿಂದಿ ಆವೃತ್ತಿಯಲ್ಲಿ ಎನ್.ಟಿ. ರಾಮರಾವ್ ಸ್ಥಾನದಲ್ಲಿ ದಿಲೀಪ್ ಕುಮಾರ್ ನಟಿಸಿದ್ದರು ಎಂಬ ತಪ್ಪು ಮಾಹಿತಿಯೂ ಕೆಲವೆಡೆ ಇತ್ತು! ಹಿಂದೂ ಪತ್ರಿಕೆಯಲ್ಲಿ ಈ ಚಿತ್ರದ ಬಗ್ಗೆ ಪ್ರಕಟವಾಗಿದ್ದ ಒಂದು ವಿಸ್ತೃತ ಲೇಖನವೂ ದೊರೆಯಿತು.  ಸಂಗೀತ ನಿರ್ದೇಶಕ ಸುಬ್ಬರಾಮನ್ ದಕ್ಷಿಣ ಭಾರತದ ಸಿನಿಮಾ ಸಂಗೀತ ಕ್ಷೇತ್ರದ ಭೀಷ್ಮ ಪಿತಾಮಹರಂತೆ ಇದ್ದವರು.  ವಿಶ್ವನಾಥನ್ ಮತ್ತು ನಂತರ ಅವರೊಡನೆ ಸೇರಿಕೊಂಡ ರಾಮಮೂರ್ತಿ, ಟಿ.ಜಿ. ಲಿಂಗಪ್ಪ, ಜಿ.ಕೆ. ವೆಂಕಟೇಶ್ ಮುಂತಾದ ಖ್ಯಾತನಾಮರೆಲ್ಲ ಅವರ ಗರಡಿಯಲ್ಲೇ ಪಳಗಿದವರು. ಚಂಡಿರಾಣಿಯಂತೆ ದೇವದಾಸು ಕೂಡ ಅವರು ಅರ್ಧ ಮುಗಿಸಿ ವಿಶ್ವನಾಥನ್  ಪೂರ್ತಿಗೊಳಿಸಿದ ಚಿತ್ರ.



ಹೀಗೆ ಹಿಂದಿ ಚಂಡಿರಾಣಿಯ ಹಾಡನ್ನು ರೇಡಿಯೊ ಸಿಲೋನಿನಲ್ಲಿ ಕೇಳಿ ಆ ಚಿತ್ರದ ಚರಿತ್ರೆಯನ್ನೂ ಒಂದಷ್ಟು ಅರಿತಮೇಲೆ  ಆ ಚಿತ್ರವನ್ನು ವೀಕ್ಷಿಸಬೇಕೆಂಬ ಆಸೆ ಉತ್ಕಟವಾಯಿತು.  ಈಗೇನೂ ಇಂಥ ಚಿತ್ರಗಳು ಥಿಯೇಟರುಗಳಲ್ಲಿ ಯಾವಾಗ ಮಾರ್ನಿಂಗ್ ಶೋಗೆ ಬರುತ್ತವೆ ಅಥವಾ ಟಿ.ವಿ.ಯಲ್ಲಿ ಪ್ರಸಾರವಾಗುತ್ತವೆ ಎಂದು ಕಾಯಬೇಕಾಗಿಲ್ಲವಲ್ಲ. ನೇರವಾಗಿ ಯೂಟ್ಯೂಬ್‌ಗೆ ಮೊರೆ ಹೋದೆ.  ಹಿಂದಿ ಮತ್ತು ತಮಿಳು ವರ್ಶನ್‌ಗಳು ಇಲ್ಲದಿದ್ದರೂ ತೆಲುಗಿನ ಉತ್ತಮ ಪ್ರತಿ ಲಭ್ಯವಿತ್ತು. ವೀಕ್ಷಿಸಲು ಆರಂಭಿಸಿ ಟೈಟಲ್‌ಗಳು ತೆರೆಯಮೇಲೆ ಮೂಡುತ್ತಾ ಹೋಗುವಾಗ ರಾಜ್‌ಕುಮಾರ್ ಎಂಬ ಹೆಸರು ಕಂಡಂತಾಯಿತು.  ರೀವೈಂಡ್ ಮಾಡಿ ಮತ್ತೆ ನೋಡಿದೆ.  ಹೌದು, ರಾಜ್‌ಕುಮಾರ್ ಎಂಬ ಹೆಸರೇ!


ನನ್ನ ಆಶ್ಚರ್ಯಕ್ಕೆ ಪಾರವೇ ಇಲ್ಲವಾಯಿತು.  ಮುತ್ತುರಾಜ್ ಆಗಿದ್ದವರು ರಾಜ್‌ಕುಮಾರ್ ಎಂದು ಹೆಚ್.ಎಲ್.ಎನ್. ಸಿಂಹ ಅವರಿಂದ ಹೊಸ ಹೆಸರು ಹೊಂದಿ 1954ರ ಬೇಡರ ಕಣ್ಣಪ್ಪ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದು ಗೊತ್ತಿತ್ತು.  ಬೇಡರ ಕಣ್ಣಪ್ಪ ಚಿತ್ರೀಕರಣದ ಮಧ್ಯೆ ಬಿಡುವು ಸಿಕ್ಕಾಗ ಅವರೇ ಈ ಚಿತ್ರದಲ್ಲಿ ಚಿಕ್ಕ ಪಾತ್ರವನ್ನೇನಾದರೂ ಮಾಡಿರಬಹುದೇ ಎಂಬ ಸಂದೇಹ ನನ್ನನ್ನು ಕಾಡತೊಡಗಿತು. ಚಿತ್ರವನ್ನು ವೀಕ್ಷಿಸುತ್ತಾ ಹೋದಾಗ ವೀರಸಿಂಹ ಎಂಬ ರಾಜನ ಪಾತ್ರದಲ್ಲಿ ರಾಜ್ ಹೋಲಿಕೆಯೂ ಕಂಡಿತು!  ಇಂಥ ಸಂದರ್ಭಗಳಲ್ಲಿ ನನಗೆ ನೆರವಾಗುವವರು ಫೇಸ್ ಬುಕ್ ಗೆಳೆಯ ಸುದರ್ಶನ ರೆಡ್ಡಿ.  ಕೂಡಲೇ ಫೋಟೊಗಳನ್ನೊಳಗೊಂಡ ಪೋಸ್ಟ್ ಒಂದರ ಮೂಲಕ ಈ ವಿಚಾರವನ್ನು ಅವರ ಮುಂದಿಟ್ಟೆ.  ತಕ್ಷಣ ಸ್ಪಂದಿಸಿದ ಅವರು ಅದು ನಮ್ಮ ರಾಜ್‌ಕುಮಾರ್ ಆಗಿರಲು ಸಾಧ್ಯವಿಲ್ಲ, ಅದೇ ಹೆಸರಿನ ಬೇರೆ ನಟ ಆಗಿರಬಹುದು ಅಂದರು.  ಆದರೆ ಮೊದಲೇ ಆ ಹೆಸರಿನ ನಟ ಮದರಾಸು ಕೇಂದ್ರವಾದ ದಕ್ಷಿಣ ಚಿತ್ರರಂಗದಲ್ಲಿ ಇದ್ದಿದ್ದರೆ ಸಿಂಹ ಅವರು ಆ ಹೆಸರು ಸೂಚಿಸುತ್ತಿರಲಿಲ್ಲ ಎಂದು ನನ್ನ ತರ್ಕವಾಗಿತ್ತು. ಇನ್ನು ಕೆಲವರು 1954ರಲ್ಲಿ ಅವರಿಗೆ ಆ ಹೆಸರು ಬಂದದ್ದರಿಂದ ಅವರಾಗಿರಲು ಸಾಧ್ಯವಿಲ್ಲ ಅಂದರು.  ಆದರೆ ಬೇಡರ ಕಣ್ಣಪ್ಪ 1954ರಲ್ಲಿ ಬಿಡುಗಡೆಯಾದರೂ ಚಿತ್ರೀಕರಣ ಸಾಕಷ್ಟು ಮುಂಚಿತವಾಗಿ ಆರಂಭವಾಗಿ ಅಷ್ಟರೊಳಗೆ ಅವರಿಗೆ ನವನಾಮಕರಣವಾಗಿರುವ ಸಾಧ್ಯತೆ ಇದೆಯೆಂದು ನನ್ನ ಅನಿಸಿಕೆಯಾಗಿತ್ತು.

ಅಷ್ಟರಲ್ಲಿ ಸುದರ್ಶನ ರೆಡ್ಡಿ ತಮ್ಮ ತೆಲುಗು ಗೆಳೆಯರ ಬಳಗದಲ್ಲಿ ವಿಚಾರಿಸಿ ರಾಜನ ಪಾತ್ರ ವಹಿಸಿದ ನಟನ ಹೆಸರು ಅಮರನಾಥ್ ಎಂಬ ಮಾಹಿತಿ ನೀಡಿದರು.  ನಾನೂ ಅಷ್ಟರಲ್ಲೇ ಗೂಗಲೇಶ್ವರನ ಸಹಾಯದಿಂದ ಈ ಮಾಹಿತಿ ಪಡೆದಿದ್ದೆ.  ಆದರೆ  ಗೂಗಲ್/ವಿಕಿಪೀಡಿಯಾಗಳಲ್ಲಿ ತಪ್ಪುಗಳಿರುವುದು ಸಾಮಾನ್ಯ ಎಂದು ಗೊತ್ತಿರುವುದರಿಂದ ಅದಕ್ಕೆ ಮಹತ್ವ ಕೊಟ್ಟಿರಲಿಲ್ಲ.  ಆದರೆ ಚಿತ್ರದ ಆ ಭಾಗವನ್ನು ಮತ್ತೆ ಮತ್ತೆ ನೋಡಿದಾಗ ಕೆಲವು ಕೋನಗಳಲ್ಲಿ ರಾಜ್ ಹೋಲಿಕೆ ಇದ್ದರೂ ಅದು ಅವರಲ್ಲ ಎಂಬ ಅಂಶ ನನಗೂ ಖಚಿತವಾಯಿತು. ಹಾಗಿದ್ದರೆ ರಾಜ್‌ಕುಮಾರ್ ಕಾಣಿಸಿಕೊಂಡದ್ದು ಯಾವ ಪಾತ್ರದಲ್ಲಿ? ನಾನು ಮತ್ತು ಸುದರ್ಶನ ರೆಡ್ಡಿ ಚಿತ್ರವನ್ನು ಎಷ್ಟು ಸಲ ನೋಡಿದರೂ ರಾಜ್‌ಕುಮಾರ್ ಮಾತ್ರ ಎಲ್ಲೂ ಕಾಣಿಸಲಿಲ್ಲ.

ಈ ಮಧ್ಯೆ ಚಿತ್ರರಂಗದ ಹಿರಿಯರಾದ ಎಸ್.ಕೆ. ಭಗವಾನ್ ಅಥವಾ ಎಂ.ಶಿವರಾಂ ಅವರಿಗೆ ಈ ಬಗ್ಗೆ ಏನಾದರೂ ಗೊತ್ತಿರಬಹುದು ಎಂದೆನಿಸಿ ಈ ವಿಚಾರವನ್ನು ಎನ್.ಎಸ್. ಶ್ರೀಧರಮೂರ್ತಿಯವರ ಮುಂದಿಟ್ಟೆ. ಆ  ಮಹನೀಯರು ರಾಜ್ ಚಂಡಿರಾಣಿ ಚಿತ್ರದಲ್ಲಿ ಅಭಿನಯಿಸಿರುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆದರು ಎಂದ ಶ್ರೀಧರಮೂರ್ತಿ ರಾಜ್ ಅವರ ಜೀವನ ಚರಿತ್ರೆ ಬರೆದ ಪ್ರಹ್ಲಾದ ರಾವ್ ಈ ಕುರಿತು  ದಾಖಲೆಗಳನ್ನು ಹುಡುಕಿ ತಿಳಿಸುವುದಾಗಿ ಹೇಳಿದ್ದಾರೆ ಎಂಬ ಸುದ್ದಿ ನೀಡಿದರು.



ನಮ್ಮ ರಾಜ್‌ಕುಮಾರ್ ಅಲ್ಲದಿದ್ದರೆ ಆ ಹೆಸರಿನ ಬೇರೆ ನಟ ಇರಬೇಕು.  ಯಾರಾತ ಎಂದು ಹುಡುಕುವ ಸರದಿ ಈಗ ನಮ್ಮದಾಯಿತು. ನಾನು ಛಲ ಬಿಡದೆ ಅಂತರ್ಜಾಲಕ್ಕೆ ಪಾತಾಳಗರಡಿ ಹಾಕಿ ಇನ್ನಷ್ಟು ಆಳದಲ್ಲಿ ಹುಡುಕಿದಾಗ ಚಂಡಿರಾಣಿ ಸಿನಿಮಾದ ಹಾಡುಗಳ ಪುಸ್ತಕವೊಂದು ದೊರಕಿತು.  ಸುದೈವಕ್ಕೆ ಅದರಲ್ಲಿ ನಟರ ಹೆಸರು ಮತ್ತು ಅವರು ವಹಿಸಿದ ಪಾತ್ರದ ಹೆಸರುಗಳೂ ಇದ್ದವು.  ಆದರೆ ರಾಜ್‌ಕುಮಾರ್ ಹೆಸರಿನ ನಟ ನಿರ್ವಹಿಸಿದ ಪಾತ್ರದ ‘ದೊ’ ಅಕ್ಷರ ಮಾತ್ರ ಕಾಣಿಸುತ್ತಿದ್ದು ಅಳಿದ ಭಾಗ ಹರಿದು ಹೋಗಿತ್ತು!  ಇದನ್ನು ಸುದರ್ಶನ ರೆಡ್ಡಿ ಅವರ ಗಮನಕ್ಕೆ ತಂದಾಗ ಇದು ದೊರ ಅಥವಾ ದೊಂಗ ಇರುವ ಸಾಧ್ಯತೆ ಇದ್ದು ಅಲ್ಲಿ ಒಂದೇ ಅಕ್ಷರದ ಜಾಗ ಹರಿದು ಹೋದದ್ದರಿಂದ ಅದು ದೊರ ಆಗಿರಬೇಕು ಎಂಬ ತೀರ್ಮಾನಕ್ಕೆ ಬಂದರು.  ಈಗ ಚಂಡಿರಾಣಿ ಸಿನಿಮಾದಲ್ಲಿ ದೊರ ಅಂದರೆ ಯಾರು ಎಂದು ಹುಡುಕುವ ಹೊಸ ಸವಾಲು  ಎದುರಾಯಿತು.  ಇನ್ಯಾರಾದರೂ ಆಗಿದ್ದರೆ ಹೋಗಲಿ ಎಂದು ಅಷ್ಟಕ್ಕೆ ಬಿಟ್ಟು ಬಿಡುತ್ತಿದ್ದರು. ಆದರೆ ಕಣ್ಣಲ್ಲಿ ಎಣ್ಣೆ ಹಾಕಿ ಮತ್ತೆ ಚಿತ್ರವನ್ನು ವೀಕ್ಷಿಸಿದ ಸುದರ್ಶನ ರೆಡ್ಡಿ ಚಂಡಿ ಪಾತ್ರದೊಡನೆ ಕತ್ತಿ ಕಾಳಗ ಮಾಡುವ ಖಳನನ್ನು ಆತನ ಸಹಚರರು ಒಂದೇ ಒಂದು ಸನ್ನಿವೇಶದಲ್ಲಿ ದೊರ ಎಂದು ಸಂಬೋಧಿಸುವುದನ್ನು ಕಂಡು ಹಿಡಿದೇ ಬಿಟ್ಟರು! ಅಲ್ಲಿಗೆ ಚಂಡಿರಾಣಿಯಲ್ಲಿ ನಟಿಸಿದ ರಾಜ್‌ಕುಮಾರ್ ರಹಸ್ಯ ಬಯಲಾದಂತಾಯಿತು. ಸದ್ಯ ಅದು ನಮ್ಮ ರಾಜ್‌ಕುಮಾರ್ ಅಲ್ಲ ಎಂದು ಮೀನಾ ಭಾರದ್ವಾಜ್ ಸಹಿತ ಅನೇಕ ರಾಜ್ ಅಭಿಮಾನಿಗಳಿಗೆ ಸಮಾಧಾನವೂ ಆಯಿತು. ಪುರುಷೋತ್ತಮನಾದರೂ ಇಷ್ಟು ಸೂಕ್ಷ್ಮವಾಗಿ ಪತ್ತೇದಾರಿ ನಡೆಸುತ್ತಿದ್ದನೋ ಇಲ್ಲವೋ ಎಂದು ನನಗೆ ಅನ್ನಿಸಿತು.



ಇಷ್ಟಕ್ಕೇ ಸುಮ್ಮನಿರದೆ ಆ ನಟ ಇನ್ಯಾವುದಾದರೂ ಚಿತ್ರದಲ್ಲಿ ನಟಿಸಿದ್ದಾನೆಯೇ ಎಂದು ತಿಳಿಯಬೇಕೆಂದು ನನಗನ್ನಿಸಿತು.  ಸ್ವಲ್ಪ  ಹುಡುಕಾಟ ನಡೆಸಿದಾಗ ಆಡಪಡುಚು(ಕನ್ನಡದ ಒಂದೇ ಬಳ್ಳಿಯ ಹೂಗಳು) ಚಿತ್ರದಲ್ಲಿ  ಆತ ಇರುವುದು ತಿಳಿಯಿತು.  ಬೇರೆ ಚಿತ್ರಗಳಲ್ಲೂ  ನಟಿಸಿರಬಹುದು. ಆಗಲೇ ಹಿಂದಿಯಲ್ಲೊಬ್ಬ ರಾಜ್‌ಕುಮಾರ್ ಇದ್ದರೂ ಅದೇನೋ ದೂರದ ಸಂಗತಿ.  ಆದರೆ ದಕ್ಷಿಣ ಭಾರತದಲ್ಲೇ ಆ ಹೆಸರಿನ ನಟ ಮೊದಲೇ ಇದ್ದುದು ಸಿಂಹ ಅವರಿಗಾಗಲಿ ಎ.ವಿ.ಎಂ.ನ ಮೇಯಪ್ಪನ್ ಅವರಿಗಾಗಲಿ ಏಕೆ ತಿಳಿಯದೆ ಹೋಯಿತು ಎಂಬುದು ಉತ್ತರ ಸಿಗದ ಪ್ರಶ್ನೆ. ಕಾಳಹಸ್ತಿ ಮಹಾತ್ಮ್ಯಂ ತೆರೆ ಕಂಡಾಗ ರಾಜ್‌ಕುಮಾರ್ ಎಂಬ ಹೆಸರು ನೋಡಿ  ಕೆಲವರಿಗಾದರೂ(ಕನಿಷ್ಠ ಆ ನಟನಿಗಾದರೂ!) ಖಂಡಿತ ಗೊಂದಲ ಉಂಟಾಗಿರಬಹುದು.

 




No comments:

Post a Comment

Your valuable comments/suggestions are welcome