Tuesday 3 December 2019

ಬಣ್ಣದ ಅಂಗಿ ತೊಟ್ಟ ತಂಗಿ


ಆಲಿಸಿದೊಡನೆ ನಮ್ಮ ಮನೆಗೆ ಆಗ ತಾನೇ ಬಂದಿದ್ದ ಹೊಸ ನ್ಯಾಶನಲ್ ಎಕ್ಕೊ ರೇಡಿಯೋದ ವಾರ್ನಿಶ್ ವಾಸನೆ ಈಗಲೂ ಮೂಗಿಗೆ ಅಡರುವಂತೆ ಮಾಡುವ  ಹಾಡುಗಳ ಪೈಕಿ 1963ರ ಗೌರಿ ಚಿತ್ರದ ಪುಟ್ಟ ಪುಟ್ಟ ಹೆಜ್ಜೆ ಇಟ್ಟು  ಕೂಡ ಒಂದು. ಯಾವ ಜನ್ಮದ ಮೈತ್ರಿ ಮತ್ತು ಇವಳು ಯಾರು ಬಲ್ಲೆಯೇನು ಆ ಚಿತ್ರದ ಕ್ಲಾಸ್ ಹಾಡುಗಳಾಗಿದ್ದರೂ ಆಗ ಇದರ ಮಂದೆ  ಅವು ನನಗೆ ಎರಡನೆ ದರ್ಜೆಯವುಗಳಾಗಿ ಕಾಣಿಸುತ್ತಿದ್ದವು. ಹಾಗೆಯೇ  ಕನ್ಯಾರತ್ನದ ಮೈಸೂರ್ ದಸರಾ ಬೊಂಬೆ, ಮಲ್ಲಿ ಮದುವೆಯ ಮಂಗನ ಮೋರೆಯ ಮುದಿ ಮೂಸಂಗಿ, ಕಿತ್ತೂರು ಚೆನ್ನಮ್ಮದ   ದೇವರು ದೇವರು ದೇವರೆಂಬುವರು, ಅಮರ ಶಿಲ್ಪಿ ಜಕ್ಕಣ್ಣದ  ಜಂತರ್ ಮಂತರ್ ಮಾಟವೋ, ರತ್ನ ಮಂಜರಿಯ ಯಾರು ಯಾರು ನೀ ಯಾರು ಮುಂತಾದವು ಆ ಚಿತ್ರಗಳ ಇನ್ನುಳಿದ ಹಾಡುಗಳನ್ನು ಹಿಂದಿಕ್ಕಿ ನನ್ನ ಮೆಚ್ಚಿನವಾಗಿದ್ದವು.  ಇವುಗಳಲ್ಲಿರುವ ಏನೋ ಒಂದು ಅನನ್ಯತೆ ಇದಕ್ಕೆ ಕಾರಣವಾಗಿರಬಹುದು.

ಆಗಲೇ ಒಂದು ಮಗುವಿರುವ ಕುಟುಂಬಕ್ಕೆ ಇನ್ನೊಂದರ ಆಗಮನವಾಗುವ ಸೂಚನೆ ದೊರಕಿದಾಗ  ಕುಟುಂಬದ ಮಗು, ತಂದೆ ಮತ್ತು ತಾಯಿಯ ನಡುವೆ ನಡೆಯುವ ಸಂವಾದದ ರೂಪದಲ್ಲಿರುವ ಈ ಹಾಡನ್ನು ಬರೆದವರು ಕು.ರ.ಸೀ. ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದವರು ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ ಮತ್ತು ಬೇಬಿ ಲತಾ.  ಈಕೆ ಬೆಂಗಳೂರು ಲತಾ ಎಂದು ಕೆಲವರೆನ್ನುತ್ತಾರೆ.  ಆದರೆ ಎರಡು ವರ್ಷ ಮೊದಲೇ 1961ರ ಕಣ್ತೆರೆದು ನೋಡು ಚಿತ್ರದಲ್ಲಿ ಬಂಗಾರದೊಡವೆ ಬೇಕೆ ಹಾಡಿನ ಒಂದು ವರ್ಶನನ್ನು ಪ್ರೌಢ ಮಹಿಳೆಯ ಧ್ವನಿಯಲ್ಲಿ ಬೆಂಗಳೂರು ಲತಾ ಹಾಡಿದ್ದರು. ಹೀಗಾಗಿ ಈಕೆ ಲತಾ ಹೆಸರಿನ ಬೇರೆ ಬಾಲಕಿ ಇರಬಹುದು ಎಂದು ನನ್ನ ಅನಿಸಿಕೆ. ಅಂದು ರೇಡಿಯೋದಲ್ಲಿ ಈ ಹಾಡು ಪ್ರಸಾರವಾಗುವಾಗ ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ ಅವರ ಹೆಸರು ಮಾತ್ರ ಹೇಳುತ್ತಿದ್ದರು ಎಂದು ನನ್ನ ನೆನಪು.  ಬಹುಶಃ ಬಾಲಕಿಯ ಉಲ್ಲೇಖ ಧ್ವನಿಮುದ್ರಿಕೆಯಲ್ಲಿರಲಿಲ್ಲವೋ ಏನೋ.


ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂದು ಗಂಡ ಹೆಂಡತಿ ನಡುವೆ  ಚರ್ಚೆ ನಡೆದು ಕೊನೆಗೆ  ಗಂಡ ನಿನಗೆ ತಮ್ಮ ಬೇಕೋ ತಂಗಿ ಬೇಕೋ ಎಂದು ಮಗುವನ್ನು ಕೇಳುತ್ತಾನೆ.  ಮಗು ಅವಲಕ್ಕಿ ಪವಲಕ್ಕಿ ಎಂದು ಎಣಿಸುತ್ತಾ ತಂದೆ ತಾಯಿಯನ್ನು ಸರದಿಯಂತೆ ಮುಟ್ಟುತ್ತಾ ಹೋಗುವಾಗ  ಕೊನೆಯ  ಕೊಠಾರ್ ಶಬ್ದ ತಾಯಿಯ ಪಾಲಾಗಿ ತನಗೆ ತಂಗಿ ಸಿಗುತ್ತಾಳೆ  ಎಂದು ಸಂಭ್ರಮಿಸಿದ ಮಗು ಗಿಡ್ಡು ಪುಟಾಣಿ ಮಕ್ಕಳ ರಾಣಿ ಬರುತ್ತಾಳೆ ಎಂದು  ಹಾಡ ತೊಡಗುತ್ತದೆ.  ತಂದೆ ತಾಯಿ ಇಬ್ಬರೂ ದನಿಗೂಡಿಸುತ್ತಾರೆ.

ಹೆಣ್ಣು ಹುಟ್ಟಿದರೆ ಮದುವೆ, ವರದಕ್ಷಿಣೆ ಎಂದು ಸಾಲದ ಹಿರಿ ಹೊರೆ ತಂದು ಇದ್ದ ಬದ್ದದ್ದನ್ನೆಲ್ಲ ಮಾರಿ ತಿರುಪೆ ಎತ್ತುವಂತಾದೀತು ಎಂದು ವ್ಯಾವಹಾರಿಕ ಬುದ್ಧಿಯ ತಂದೆ ಭೀತಿ ವ್ಯಕ್ತ ಪಡಿಸಿದಾಗ ಹೆಣ್ಣೆಂದರೆ ಪರಮಾನಂದದ ಭಾಗ್ಯ ತರುವವಳು; ಕರುಣೆ, ಪರ ಸೌಖ್ಯ ಚಿಂತನೆ, ಸಹನೆಗಳ ಸಾಕಾರಮೂರ್ತಿಯಾದ ಶುಭಮಂಗಳೆ ಜನಿಸಿದರೆ ಮನೆಯಲ್ಲಿ ಕುಬೇರನ ಖಜಾನೆಯೇ ತೆರೆದಂತಾಗಿ ನಿರಂತರ ಧನಪ್ರಾಪ್ತಿಯಾಗುತ್ತದೆ, ಭಯ ಪಡುವ ಅಗತ್ಯವಿಲ್ಲ  ಎಂದು ತಾಯಿ ವಾದಿಸುತ್ತಾಳೆ. ಮುಂದೆ ಎಲ್ಲ ಸಂಸಾರಗಳಲ್ಲಾಗುವಂತೆ ಮಾತಲ್ಲಿ ನಿನ್ನನ್ನು ಸೋಲಿಸಲಾರೆ ಎಂದು ಪತ್ನಿಯ ಮುಂದೆ ಪರಾಜಿತನಾಗುವ ಪತಿ ಶುಭಮಂಗಳೆಯನ್ನು ಸ್ವಾಗತಿಸಲು ಮಾನಸಿಕವಾಗಿ ಸಿದ್ಧನಾಗುತ್ತಾನೆ. ಇಲ್ಲಿ ಪತಿ ಗಂಡು ಮತ್ತು ಪತ್ನಿ ಹೆಣ್ಣು ಮಗು ಬಯಸುವ ಚಿತ್ರಣವಿದೆ. ಇದಕ್ಕೆ ತದ್ವಿರುದ್ಧವಾಗಿ  ಬಾಳು  ಬೆಳಗಿತು ಚಿತ್ರದ ಚೆಲುವಾದ ಮುದ್ದಾದ ಹಾಡಲ್ಲಿ  ಪತಿ ಹೆಣ್ಣು ಮಗುವನ್ನು ಮತ್ತು ಪತ್ನಿ ಗಂಡು ಮಗುವನ್ನು ಬಯಸುತ್ತಾಳೆ.  ವಾಸ್ತವವಾಗಿ ಇದು ಶಾಲೆಗಳ ಚರ್ಚಾಸ್ಪರ್ಧೆಗಳಲ್ಲಿ  ಹಳ್ಳಿ ಮೇಲೋ ಪಟ್ಟಣ ಮೇಲೋ ಎಂಬ ವಾಗ್ವಾದ ನಡೆದಂತೆ  ಚರ್ಚೆಗಾಗಿ ಚರ್ಚೆಯೇ ಹೊರತು ತಂದೆ ತಾಯಿಗಳಿಗೆ ಗಂಡು ಹೆಣ್ಣು ಎರಡೂ ಒಂದೇ. ನಾನು ಚಿಕ್ಕಂದಿನಿಂದಲೂ ನಮ್ಮ ಕುಟುಂಬದಲ್ಲಾಗಲಿ, ಬಂಧು ಮಿತ್ರರಲ್ಲಾಗಲಿ ಹೆಣ್ಣು ಹುಟ್ಟಿದಾಗ ಗಂಟೆ ಬಾರಿಸುವುದು, ಗಂಡು ಹುಟ್ಟಿದಾಗ ಶಂಖ ಊದುವುದು ಮತ್ತು ಆರನೆ ದಿನ ಷಷ್ಟಿ ಪೂಜೆಗೆ ಗಂಡಾದರೆ ಕಡಲೆ  ಉಸ್ಲಿ, ಹೆಣ್ಣಾದರೆ ಹೆಸರು ಕಾಳಿನ ಉಸ್ಲಿ ಎಂಬ ವ್ಯತ್ಯಾಸ ಬಿಟ್ಟರೆ ಬೇರೆ ಯಾವ ಭೇದ ಭಾವವನ್ನೂ ಕಾಣಲಿಲ್ಲ.  ಅದೇನೇ ಇರಲಿ. ಸಿನಿಮಾದಲ್ಲಿ ಆಕೆಗೆ ಹೆಣ್ಣು ಮಗುವೇ ಹುಟ್ಟುತ್ತದೆ.  ಆದರೆ ಏನೇನೋ ಘಟನಾವಳಿಗಳು ಜರುಗಿ ಅದು ಅವರಿಗೆ ದಕ್ಕದೆ ಇನ್ಯಾರ ಮನೆಯಲ್ಲೋ ಬೆಳೆಯಬೇಕಾಗಿ ಬರುತ್ತದೆ. ಅದುವರೆಗೆ ನೆಮ್ಮದಿಯಲ್ಲಿದ್ದ ಕುಟುಂಬ ಇನ್ನಿಲ್ಲದ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.   ಕೊನೆಗೆ ಎಲ್ಲ ಸುಖಾಂತ್ಯವಾಗುತ್ತದೆ ಎನ್ನಿ.

ಅವಲಕ್ಕಿ ಪವಲಕ್ಕಿ
ಕಾಂಚನ ಮಿಣ ಮಿಣ
ಢಾಂ ಢೂಂ ಡಸ್ಸ ಪುಸ್ಸ
ಕೊಂಯ್ ಕೊಠಾರ್

ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಟಾಣಿ ಮಕ್ಕಳ ರಾಣಿ ಬರ್ತಾಳೆ

ಹೊಯ್ ಬರ್ತಾಳೆ
ಭಲೆ ಬಂಗಾರ ತಂಗಿ ಬರ್ತಾಳೆ


ಆಹಾ
ಓಹೋ
ಬಂದರೆ ತಂಗಿ ಕೇಳೊ ಕಮಂಗಿ
ಮನೆ ಮಠ ಚೊಕ್ಕಟ ಕೈಯಲ್ಲಿ ಕರಟ
ದಿನಬೆಳಗಾದರೆ ಸಾವಿರ ನೋವು ತರ್ತಾಳೆ

ಹೊಯ್
ತರ್ತಾಳೆ ಒಂದು ಸಾಲದ ಹಿರಿ ಹೊರೆ ತರ್ತಾಳೆ


ಹೆಂಗರುಳು ಪರಮಾನಂದ ಭಾಗ್ಯದ ತಿರುಳು
ಯಾವಾಗಲೂ
ಕರುಣೆ ಪರ ಸೌಖ್ಯ ಚಿಂತನೆ
ಸಹನೆ ಸದಾ
ಹೊರ ಹೊಮ್ಮುವ ಜೀವನ ಪಾವನ ತಾನೆ
ಶುಭಮಂಗಳೆ ಜನಿಸಿದ ದಿನ
ನಿರಂತರ ಧನ
ಕುಬೇರನ ಮಿಲನ
ಭಯವೇತಕೆ


ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಟಾಣಿ ಮಕ್ಕಳ ರಾಣಿ ಬರ್ತಾಳೆ

ಹೊಯ್ ಬರ್ತಾಳೆ
ಭಲೆ ಬಂಗಾರ ತಂಗಿ ಬರ್ತಾಳೆ


ಸೋಲಿಸಬಲ್ಲೆನೆ ನಾ ಮಾತಲಿ ನೀ ಬಲು ಜಾಣೆ
ಎಲ್ಲಕೂ ನೀವೇ ಗುರು ಎಂಬುದ ನಾ ಮರೆತೇನೆ
ಪರಾಜಿತನಾದೆನೆ ಬಾ ನಿಲ್ಲಿಸು ಈ ಬಣ್ಣನೆ
ಶುಭಮಂಗಳೆ ಜನಿಸಿದ ದಿನ
ನಿರಂತರ ಧನ
ಕುಬೇರನ ಮಿಲನ
ಭಯವೇತಕೆ


ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಗಿಡ್ಡು ಪುಟಾಣಿ ಮಕ್ಕಳ ರಾಣಿ ಬರ್ತಾಳೆ

ಹೊಯ್ ಬರ್ತಾಳೆ
ಭಲೆ ಬಂಗಾರ ತಂಗಿ ಬರ್ತಾಳೆ

ಹೆಣ್ಣು ಮಕ್ಕಳನ್ನು ಉಳಿಸಿ ಬೆಳೆಸಲು ಮುಂದೊಂದು ದಿನ ದೇಶವ್ಯಾಪಿ ಚಳವಳಿಯನ್ನೇ ಹಮ್ಮಿಕೊಳ್ಳಬೇಕಾಗಿ ಬರಬಹುದು ಎಂದು ಕು.ರ.ಸೀ ಆಗಲೇ ಮನಗಂಡಿದ್ದರಿಂದ ಅದರ ಮುನ್ನುಡಿಯೆನ್ನಬಹುದಾದ ಇಂತಹ ಕವನ ರಚಿಸಿದರೋ ಏನೋ. ಸಾಮಾನ್ಯವಾಗಿ ಕ್ಲಿಷ್ಟ ಪದಗಳುಳ್ಳ ಸಂಕೀರ್ಣ ಸಾಲುಗಳ ಹಾಡುಗಳನ್ನು ಬರೆಯುತ್ತಿದ್ದ ಅವರು  ಇಲ್ಲಿ  ಸರಳತೆಗೆ ಒತ್ತು ಕೊಟ್ಟರೂ ಸಾಧ್ಯವಾದಲ್ಲೆಲ್ಲ ಅಂತ್ಯ ಪ್ರಾಸ, ದ್ವಿತೀಯಾಕ್ಷರ ಪ್ರಾಸ, ಒಳ ಪ್ರಾಸಗಳನ್ನು ಬಳಸಿದ್ದಾರೆ.  ಚಿತ್ರಗೀತೆಗಳನ್ನು ಅಷ್ಟಾಗಿ ಆಸ್ವಾದಿಸದ ನಮ್ಮ ಹಿರಿಯಣ್ಣ ಕೂಡ ಈ ಹಾಡು ರೇಡಿಯೊದಲ್ಲಿ ಮೊದಲ ಬಾರಿ ಬಂದಾಗ ಮನೆಮಠ ಚೊಕ್ಕಟ ಕೈಯಲ್ಲಿ ಕರಟ ಎಂಬ ಸಾಲಿನ ಗೂಢಾರ್ಥವನ್ನು ಮೆಚ್ಚಿದ್ದರು. ಮಕ್ಕಳು ಇಷ್ಟ ಪಡುವ ಅಟ್ಟ ಮುಟ್ಟ ತನ್ನಾ ದೇವಿ, ವನರಿ ಟೋರಿ ಟಿಕ್ರಿ ಪೇನ್ ಇತ್ಯಾದಿಗಳನ್ನು ಹೋಲುವ ಎಣಿಕೆಯ ಆಟವನ್ನು ಆರಂಭದಲ್ಲಿ ಅಳವಡಿಸಿದ್ದು   ಹಾಡಿನ  ಆಕರ್ಷಣೆಯನ್ನು ಹೆಚ್ಚಿಸಿದೆ.  ಅವಲಕ್ಕಿ ಪವಲಕ್ಕಿಯನ್ನು ಹೋಲುವ ಅಬ್ಬಲಕ ತಬ್ಬಲಕ ಎಂಬ ಎಣಿಕೆಯ ಆಟವನ್ನು ಮಕ್ಕಳ ಗುಂಪಿನಲ್ಲಿ  ಶಬ್ದ ರಹಿತವಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದವರನ್ನು ಗುರುತಿಸಲು ನಮ್ಮ ಕಡೆ ಬಳಸುತ್ತಿದ್ದರು!  ವಿವರಗಳಿಗೆ ಬಾಲ್ಯದ ಆಟ ಲೇಖನ ನೋಡಬಹುದು.

ಕೀರವಾಣಿಯ ಸ್ವರಗಳನ್ನು ಮುಖ್ಯವಾಗಿಟ್ಟುಕೊಂಡು ಲಾವಣಿ ಶೈಲಿಯಲ್ಲಿ ಸಂಯೋಜಿಸಿದ  ಈ ಹಾಡಿನಲ್ಲಿ ಜಿ.ಕೆ. ವೆಂಕಟೇಶ್  ಅಲ್ಲಲ್ಲಿ ಇತರ ಸ್ವರಗಳನ್ನೂ ಪ್ರಯೋಗಿಸಿದ್ದಾರೆ. ವಯಲಿನ್ಸ್, ಮ್ಯಾಂಡೊಲಿನ್, ಡಬಲ್ ಬೇಸ್ ಗಿಟಾರ್, ಕೊಳಲು-ಕ್ಲಾರಿನೆಟ್ ಮುಂತಾದವುಗಳೊಡನೆ ಮುಖ್ಯ ತಾಳವಾದ್ಯವಾಗಿ ಢೋಲಕ್ ಬಳಸಲಾಗಿದೆ. ಒಂದೆಡೆ ಜಲತರಂಗವೂ ಕೇಳಿಸುತ್ತದೆ.  ಚಿತ್ರಗೀತೆಗಳಲ್ಲಿ ಕಮ್ಮಿಯೇ ಕೇಳಬರುವ ಮೋರ್ ಸಿಂಗ್ ಬಳಕೆ ಹಾಡಿನ ಅಂದ ಹೆಚ್ಚಿಸಿದೆ.  ಕೆಲವು ಕಡೆ ಢೋಲಕ್ ನಾಲ್ಕನೆ ಕಾಲದ ನಡೆಯಲ್ಲಿ ನುಡಿಯುತ್ತದೆ.  ಒಂದೆಡೆ ಹಿಂದಿಯ ಎಸ್.ಎನ್. ತ್ರಿಪಾಠಿ ಅವರ ಹಾಡುಗಳಲ್ಲಿ ಕೇಳಿಬರುತ್ತಿದ್ದಂತಹ ಎತ್ತುಗಡೆ ಉರುಳಿಕೆಯನ್ನು ಗುರುತಿಸಬಹುದು. ಪಸಾಸ ಸಗಾಗ ಗಪಾಪ ದಪಗನಿಸ ಎಂಬ ಮುಕ್ತಾಯ ಹಾಡನ್ನು ಬೇರೆಯೇ ಎತ್ತರಕ್ಕೆ ಒಯ್ದು ನಿಲ್ಲಿಸುತ್ತದೆ.  ಚಿತ್ರದ ಟೈಟಲ್ಸಲ್ಲಿ ವೆಂಕಟೇಶ್ ಅವರ ತಮ್ಮ ಜಿ.ಕೆ. ರಘುವನ್ನು ಸಹಾಯಕ ಸಂಗೀತ ನಿರ್ದೇಶಕ ಎಂದು ತೋರಿಸಲಾಗಿದೆ.  ಬಂಗಾರದ ಪಂಜರ ಮುಂತಾದ ಚಿತ್ರಗಳಿಗೆ ಸ್ವಯಂ ಸಂಗೀತ ನಿರ್ದೇಶನ ಕೂಡ ಮಾಡಿದ್ದ ಅವರು ಆರ್ಕೆಷ್ಟ್ರಾ ಅರೇಂಜ್‌ಮೆಂಟ್  ಇತ್ಯಾದಿ ಬಲ್ಲವರಾಗಿದ್ದರೇ ಎಂಬ ಬಗ್ಗೆ ಮಾಹಿತಿ ಇಲ್ಲ.

ಮೈಸೂರಿನ ಚಂದ್ರು ಸೌಂಡ್ ಸಿಸ್ಟಂನವರು 78 rpm ರೆಕಾರ್ಡಿನಿಂದ ಧ್ವನಿಮುದ್ರಿಸಿ ಕೊಟ್ಟಿದ್ದ  ಆ ಹಾಡನ್ನು ಆರಂಭದ ಸಂಭಾಷಣೆ  ಸಹಿತ ಇಲ್ಲಿ ಆಲಿಸಿ. 



ಎನ್. ಲಕ್ಷ್ಮೀನಾರಾಯಣ್ ಅವರ ಪ್ರಶಸ್ತಿ ವಿಜೇತ ನಾಂದಿ ಚಿತ್ರ   ಕಿವುಡ ಮೂಕ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಗು ಈ ಹಾಡಿನ ಸಾಲುಗಳನ್ನು ಹಾಡುವುದರೊಂದಿಗೆ ಮುಕ್ತಾಯವಾಗುತ್ತದೆ.  ಜಿ.ಕೆ. ವೆಂಕಟೇಶ್ ನಿರ್ಮಿಸಿದ್ದ ತುಂಬಿದ ಕೊಡ ಚಿತ್ರದ ಪಿಕ್ನಿಕ್ ಹಾಡಲ್ಲೂ ಇದರ ತುಣುಕು ಇದೆ. ಬಹುಶಃ ಈ ಹಾಡಿನಿಂದ ಪ್ರೇರಣೆ ಪಡೆದೇ ಇತ್ತಿಚಿನ ಚಿತ್ರವೊಂದಕ್ಕೆ ಅವಲಕ್ಕಿ ಪವಲಕ್ಕಿ ಎಂಬ ಶೀರ್ಷಿಕೆ ಕೊಡಲಾಗಿತ್ತು.

ಜಟಕಾವಾಲ ರಾಮಯ್ಯನಾಗಿ ಕಾಣಿಸಿಕೊಂಡ ರಾಜಕುಮಾರ್ ಅವರಿಗೆ ಚಿತ್ರದಲ್ಲಿ ಇದೊಂದೇ ಹಾಡಿದ್ದದ್ದು.  ಮಾನವಸಹಜ ದೌರ್ಬಲ್ಯಗಳುಳ್ಳ ಸಾಮಾನ್ಯನೊಬ್ಬನ ಪಾತ್ರವಾಗಿತ್ತು ಅದು.  ಸಾಹುಕಾರ್ ಜಾನಕಿ, ಕೆ.ಎಸ್.ಅಶ್ವತ್ಥ್, ಸಂಧ್ಯಾ ಮುಂತಾದವರೂ ನಟಿಸಿದ್ದ ಗೌರಿ ಸದಭಿರುಚಿಯ ಚಿತ್ರವಾಗಿತ್ತು.







Sunday 24 November 2019

ಧರ್ಮಸ್ಥಳ ದೀಪ ಅಂದು


ಕಾರ್ತಿಕ ಮಾಸದ ಕೃಷ್ಣಪಕ್ಷದಲ್ಲಿ ಜರಗುವ ಧರ್ಮಸ್ಥಳ ಲಕ್ಷದೀಪೋತ್ಸವವನ್ನು ನಾವು ಧರ್ಮಸ್ಥಳ ದೀಪ ಎಂದೇ ಕರೆಯುತ್ತಿದ್ದುದು.  ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ಮತ್ತು  ಆಗ ತಾನೇ ಮುಗಿದಿರುತ್ತಿದ್ದ ನಮ್ಮೂರಿನ ಗುಂಡಿ ದೀಪದ ನಂತರ ಇದು ನಮಗೆಲ್ಲ  ಸಂಭ್ರಮದ ಇನ್ನೊಂದು ರಸಘಟ್ಟ. ಆ ಹೊತ್ತಿಗೆ ಮನೆಮುಂದಿನ ಅಂಗಳ, ಅಡಿಕೆ ಒಣಗಿಸುವ ಮೇಲಿನಂಗಳಗಳು ಕೆತ್ತಲ್ಪಟ್ಟು ಚೊಕ್ಕಟವಾಗಿರುತ್ತಿದ್ದವು. ಚುಮು ಚುಮು ಚಳಿಯ ಬೆಳಗುಗಳಲ್ಲಿ ಕಾಣಿಸುವ ಶುಭ್ರ ನೀಲಾಕಾಶ ಮತ್ತು   ಎಲೆಗಳ ಮೇಲಿನ ಇಬ್ಬನಿ ಹನಿಗಳು ಮನೋಲ್ಲಾಸವನ್ನು ಉಕ್ಕಿಸುವ ವರ್ಷದ ಆ ಸಮಯ ವೈಯಕ್ತಿಕವಾಗಿ ನನಗೆ ಅತ್ಯಂತ ಪ್ರಿಯವಾದದ್ದು.  ಅರಿವು ಮೂಡಿದಾಗಿನಿಂದ ಉದ್ಯೋಗ ನಿಮಿತ್ತ ಊರು ತೊರೆಯುವ ವರೆಗೆ ಇಂಥ ಕಾಲ ಘಟ್ಟದಲ್ಲಿ ಬರುವ  ಧರ್ಮಸ್ಥಳ ದೀಪವನ್ನು ಒಮ್ಮೆಯೂ ನಾನು ತಪ್ಪಿಸಿಕೊಂಡದ್ದಿಲ್ಲ. ತೀರಾ ಚಿಕ್ಕವನಿದ್ದಾಗ ತಂದೆಯವರ ಜೊತೆ ಹಗಲು ಹೊತ್ತು ಹೋಗಿ ಬರುತ್ತಿದ್ದೆ.  ನಂತರ ಅಣ್ಣಂದಿರು ಮತ್ತು ಅಕ್ಕಪಕ್ಕದ ಮನೆಯವರೊಡನೆ ಸಂಜೆ ಹೊರಟು ರಾತ್ರಿಯ ಜಾತ್ರೆಯನ್ನು ಆನಂದಿಸಿ ಬೆಳಗಿನ ಜಾವ ಮನೆಗೆ ಮರಳುವ ಪರಿಪಾಠ ಆರಂಭವಾಯಿತು. ಕೆಲವು ಸಲ ತಂದೆಯವರು ರಾತ್ರೆಯ ಜಾತ್ರೆಗೂ ಬರುತ್ತಿದ್ದರು.  ಸುಮಾರು ಏಳು ಕಿಲೋ ಮೀಟರ್ ದೂರದಲ್ಲಿರುವ ಧರ್ಮಸ್ಥಳಕ್ಕೆ ನಾವು ನಡೆದುಕೊಂಡೇ ಹೋಗುತ್ತಿದ್ದುದು.  
  
ಮೊದಲ ಕೆಲವು ವರ್ಷ ಗುಡ್ಡ ಮತ್ತು ಗದ್ದೆಗಳ ಸರಣಿಯ ಕಾಲುದಾರಿಯಲ್ಲಿ ಸಾಗಿ ಹೋಗುವಾಗಿನ  ಅನುಭವ ಅನನ್ಯವಾಗಿರುತ್ತಿತ್ತು.  ಊರ ಪರಿಧಿ ದಾಟಿದೊಡನೆ ಸಿಗುವ ಒಂದು ಮೈದಾನಿನಲ್ಲಿ ಆಳೆತ್ತರಕ್ಕೆ ಮುಳಿಹುಲ್ಲು ಬೆಳೆದಿರುತ್ತಿತ್ತು.  ಅದರ ನಡುವೆ ಕಿರಿದಾದ ಕಾಲುದಾರಿಯಲ್ಲಿ ಸಾಗುವಾಗ ಹೆಚ್ಚಿನ ಎಚ್ಚರ ಬೇಕಾಗುತ್ತಿತ್ತು.  ಹಾವು ಹುಳು ಹುಪ್ಪಟೆಗಳ ಭಯಕ್ಕಲ್ಲ.  ಕಿಲಾಡಿ ಹುಡುಗರು ಕೆಲವೊಮ್ಮೆ ದಾರಿಯ ಆಚೀಚೆ ಇರುವ ಮುಳಿಹುಲ್ಲನ್ನು ಸೇರಿಸಿ ಗಂಟು ಹಾಕಿಡುತ್ತಿದ್ದರು.  ಇದನ್ನು ಗಮನಿಸದೆ ನೇರವಾಗಿ ನಡೆದರೆ ಮುಗ್ಗರಿಸಿ  ಮೂಗು ಮುರಿಸಿಕೊಳ್ಳಬೇಕಾಗುತ್ತಿತ್ತು. ಸಮವಯಸ್ಕ ಹುಡುಗರು ಜೊತೆಗಿದ್ದರೆ ಬಾಣದಂತೆ ಚೂಪಾದ ಮುಳಿಹುಲ್ಲಿನ ಕುಸುಮಗಳನ್ನು ಕಿತ್ತು ಬೆನ್ನಿಗೆಸೆಯುವ ಆಟ ನಾವು ಆಡುವುದಿತ್ತು. ಇದನ್ನು ನಾವು ಏಟುಕೋಳಿ ಎಂದು ಕರೆಯುತ್ತಿದ್ದೆವು. ಮುಂದೆ ಸಿಗುವ  ಭತ್ತದ ಗದ್ದೆಗಳ ಅಗಲ ಕಿರಿದಾದ ಬದುಗಳಲ್ಲಿ ಸಾಗುವಾಗ ಪ್ರಕೃತಿ ಸೌಂದರ್ಯವನ್ನು ಸವಿಯಲೆಂದು ಅಚೀಚೆ ನೋಡಿದರೆ ಗದ್ದೆಯಲ್ಲಿ  ಬಿದ್ದು ಮೈಗೆಲ್ಲ ಕೆಸರು ಮೆತ್ತಿಸಿಕೊಳ್ಳುವುದು ಖಚಿತವಾಗಿತ್ತು.  ಒಂದು ಕಡೆಯಂತೂ ಕುತ್ತಿಗೆವರೆಗೆ ಹೂತು ಹೋಗುವಷ್ಟು ಗಂಪವೆಂದು ಕರೆಯುತ್ತಿದ್ದ ಕೆಸರು. ಊರವರೊಬ್ಬರು ಅಜಾಕರೂಕತೆಯಿಂದ ಹಾಗೆ ಹೂತು ಹೋಗಿ ಅವರನ್ನು ಮೇಲೆಳೆಯಲು ಹರಸಾಹಸ ಪಡಬೇಕಾಗಿ ಬಂದಿತ್ತಂತೆ. ಅರ್ಧದಾರಿಯಲ್ಲಿ ಸಿಗುವ ಕಟ್ಟದ ಬೈಲು ಎಂಬಲ್ಲಿ ಅಗಲವಾದ ತೋಡಿಗಡ್ಡವಾಗಿ ಒಂದು ಬಡಿಗೆಯ ಸಂಕವೊಂದಿತ್ತು.  ಯಾರೋ ಪುಣ್ಯಾತ್ಮರು  ಆಧಾರವಾಗಿ ಕೈ ಸಾಂಕನ್ನು ಕಟ್ಟಿದ್ದರೂ ಬಡಿಗೆಯ ಮೇಲಿನಿಂದ ಸಾಗುವಾಗ ಹೆದರಿ ಹೃದಯ ಬಾಯಿಗೆ ಬರುತ್ತಿತ್ತು.  ನಮ್ಮ ತಂದೆಯವರು ಮತ್ತು ನಮ್ಮೊಡನೆ ಸೇರಿಕೊಳ್ಳುತ್ತಿದ್ದ ಅವರ ಸಮವಯಸ್ಕ ಮತ್ತು ಸಮಾನ ವ್ಯಸನಿಯಾಗಿದ್ದು ನಮ್ಮ ಸಂಬಂಧಿಯೂ ಆಗಿದ್ದ ಊರ ಇನ್ನೊಬ್ಬ ಹಿರಿಯರಿಗೆ ಅದು ಎಲೆ ಅಡಿಕೆಗೆ ಬ್ರೇಕ್ ತೆಗೆದುಕೊಳ್ಳುವ ತಾಣವೂ ಆಗಿತ್ತು. ಆಗ ಸುಮಾರು 50ರ ಆಸುಪಾಸು ವಯಸ್ಸು  ಇದ್ದಿರಬಹುದಾದ ಅವರಿಬ್ಬರಿಗೂ ನಡೆಯುವಾಗ ಕೋಲಿನ ಸಹಾಯ ಬೇಕಾಗುತ್ತಿದ್ದುದು ಏಕೆ ಎಂದು ಗೊತ್ತಿಲ್ಲ.  ಧರ್ಮಸ್ಥಳ ತಲುಪಿದೊಡನೆ ಚರ್ಮದ ಚಪ್ಪಲಿಗಳು ಮತ್ತು  ಕೈಯ ಕೋಲುಗಳನ್ನು ಪರಿಚಯದ ಶೆಟ್ಟರ ಅಂಗಡಿಯಲ್ಲಿ ಇಡುತ್ತಿದ್ದರು. ಪ್ರತೀ ವರ್ಷ ಮನೆಬಳಕೆಯ ಯಾವುದಾದರೂ ವಸ್ತುವನ್ನು ಅವರಲ್ಲಿ ಖರೀದಿಸುತ್ತಿದ್ದುದರಿಂದ ಅವರೂ ಬೇಡವೆನ್ನುತ್ತಿರಲಿಲ್ಲ.  50ರ ದಶಕದಲ್ಲಿ ಅಲ್ಲಿ ಕೊಂಡ ಸ್ಟೇನ್‌ಲೆಸ್ ಸ್ಟೀಲಿನ ದಪ್ಪದ ತಟ್ಟೆಯನ್ನು ನಾನು ಈಗಲೂ ಉಣ್ಣಲು ಉಪಯೋಗಿಸುತ್ತಿದ್ದೇನೆ. ಆ ಮೇಲೆ ಕೂಡ ವರ್ಷಕ್ಕೊಂದರಂತೆ ಮನೆಯ ಎಲ್ಲರಿಗೂ  ಸ್ಟೀಲ್ ತಟ್ಟೆಗಳನ್ನು  ಅವರ ಅಂಗಡಿಯಿಂದಲೇ  ಖರೀದಿಸಲಾಗಿತ್ತು.  ಆದರೆ ಐವತ್ತರ ದಶಕದಲ್ಲಿದ್ದ ತಟ್ಟೆಗಳ ಗುಣಮಟ್ಟ ಆ ಮೇಲಿನವುಗಳಿಗಿರಲಿಲ್ಲ. ಅಲ್ಲಿಂದ ಖರೀದಿಸಿದ ಅತ್ಯುತ್ತಮವಾದ ಫೌಂಟನ್ ಪೆನ್ನೊಂದನ್ನು ನಮ್ಮ ಅಣ್ಣ ಬಹಳ ವರ್ಷ ಬಳಸಿದ್ದರು. ಅಗತ್ಯವಿದ್ದಾಗ ಹಿತ್ತಾಳೆಯ ಎವರೆಡಿ ಟಾರ್ಚುಗಳನ್ನೂ ಅಲ್ಲಿಂದಲೇ ಕೊಳ್ಳಲಾಗುತ್ತಿತ್ತು ಎಂದು ನೆನಪು.

ನಂತರ ನೇರವಾಗಿ ದೇವಸ್ಥಾನಕ್ಕೆ ಭೇಟಿ. ಅಲ್ಲಿ ಬಣ್ಣ ಬಣ್ಣದ ದಿರಿಸು ಧರಿಸಿರುತ್ತಿದ್ದ ಪಟ್ಟೆಪಟ್ಟೆಯ ಪೇಟದ ಪಹರೆಯವರನ್ನು ಕಂಡು ಚಿಕ್ಕವರಾದ ನಮಗೆ ಭಯವಾಗುವುದೂ ಇತ್ತು.  ಆಗ ಪ್ರವೇಶಕ್ಕೆ ಸರತಿಯ ಸಾಲು ಇತ್ಯಾದಿ ಇರಲಿಲ್ಲ. ಅಲ್ಲಿ ಅಮ್ಮನವರಿಗೆ ಕುಂಕುಮಾರ್ಚನೆ ಮತ್ತು ಗಣಪತಿಗೆ ಪಂಚಕಜ್ಜಾಯ ಸೇವೆ ಮಾಡಿಸುತ್ತಿದ್ದರು. ಕೂವೆಯ ಎಲೆಯಲ್ಲಿ ಕಟ್ಟಿಕೊಡುತ್ತಿದ್ದ ಆ ಪಂಚ ಕಜ್ಜಾಯದ ಕಂಪು ಈಗಲೂ ನನಗೆ ನೆನಪಿದೆ. ಅಲ್ಲಿಂದ ನೇರವಾಗಿ ಊಟದ ಛತ್ರದತ್ತ ಪಯಣ.  ತಡವಾದರೆ ಜಾಗ ಸಿಗುವುದು ಕಷ್ಟವಾದ್ದರಿಂದ ಸಾಕಷ್ಟು ಮುಂಚಿತವಾಗಿಯೇ ಛತ್ರ ಪ್ರವೇಶಿಸಿ ಸಾಲು ಕಟ್ಟಿ ಕುಳಿತುಕೊಳ್ಳುವುದು ಆಗ ರೂಢಿಯಾಗಿತ್ತು.  ದೇವಸ್ಥಾನದಲ್ಲಿ ಮಹಾಮಂಗಳಾರತಿ ಆಗಿ ಛತ್ರದ ಗಣಪತಿಯ ಪೂಜೆ ಆದ ಮೇಲಷ್ಟೇ ಊಟಕ್ಕೆ ಎಲೆ ಹಾಕುತ್ತಿದ್ದುದು. ಊಟ ನಡೆಯುತ್ತಿರುವಾಗ ಗಣಪತಿಯ ಗಂಟೆಯನ್ನು ನುಡಿಸುತ್ತಾ ಇರುವುದು ಅಲ್ಲಿಯ ಸಂಪ್ರದಾಯ. ಊಟ ಮುಗಿದ ಮೇಲೆ ಎಂಜಲು ಇನ್ನೊಬ್ಬರಿಗೆ ತಾಗದಂತೆ ಕೈ ಮೇಲೆತ್ತಿ  ಸೀಮಿತ ಸಂಖ್ಯೆಯಲ್ಲಿದ್ದ  ನೀರಿನ ಕೊಳಾಯಿಗಳತ್ತ ಎಲ್ಲರೂ ಸಾಗುತ್ತಿದ್ದರು. ನಂತರ ಹೂವಿನ ಕೊಪ್ಪಲೆಂದು ಕರೆಯುತ್ತಿದ್ದ ಲಲಿತೋದ್ಯಾನಕ್ಕೆ ಒಮ್ಮೆ ಭೇಟಿ.  ಅಲ್ಲಿದ್ದ ಅಂಚೆಯಣ್ಣ ಮತ್ತು ತಲೆ ಮೇಲೆ ಕೈ ಹೊತ್ತು ಕುಳಿತ ದಫೇದಾರನ ಮೂರ್ತಿಗಳು ನಮಗಾಗ ಆಕರ್ಷಣೆಯ ಕೇಂದ್ರಗಳು. ಕೊಡದಿಂದ ನಿರಂತರವಾಗಿ ನೀರು ಸುರಿಸುತ್ತಿದ್ದ ಮೂರ್ತಿಯೂ ಅಚ್ಚರಿ ಮೂಡಿಸುತ್ತಿತ್ತು. ದೇವಸ್ಥಾನದ ಎದುರಿಗೆ ನಿಂತ ಆನೆಗಳಿಗೆ ಫುಟ್‌ಬಾಲ್ ಗಾತ್ರದ ಅನ್ನದ ಉಂಡೆಗಳನ್ನು ತಿನ್ನಿಸುವುದನ್ನು ಬೆರಗಾಗಿ ನೋಡುತ್ತಿದ್ದೆವು.  ಆ ಮೇಲೆ ಜಾತ್ರೆಗೊಂದು ಸುತ್ತು.  ತಂದೆಯವರು ಹೆಚ್ಚಾಗಿ ನಮ್ಮ ಕೂಡು ಕುಟುಂಬದ ಎಲ್ಲರಿಗೂ ಸಾಕಾಗುವಷ್ಟು ಕಿತ್ತಳೆ ಹಣ್ಣುಗಳು ಅಥವಾ ಖರ್ಜೂರ ಕೊಳ್ಳುತ್ತಿದ್ದರು. ಗುಂಡ್ರಾಯರ ಅಂಗಡಿಯಿಂದ ಸಕ್ಕರೆ ಪಾಕದಲ್ಲಿ ಮುಳುಗಿಸಿದ ಕಡಲೆಗಳ ಗೋಣಿ ಮಿಠಾಯಿ ಮತ್ತು ಸಕ್ಕರೆ ಕೋಟಿಂಗಿನ ಉದ್ದುದ್ದ ಖಾರಕಡ್ಡಿಯನ್ನೂ ಮನೆಗೆ ಒಯ್ಯುವುದಿತ್ತು. ಅವರ ಅಂಗಡಿಯಲ್ಲಿ ಪೇರಿಸಿಟ್ಟಿರುತ್ತಿದ್ದ ಆಯತಾಕಾರದ ಬಣ್ಣಬಣ್ಣದ ಸಕ್ಕರೆ ಅಚ್ಚುಗಳನ್ನು ಕೊಳ್ಳುವ ಅನುಮತಿ ನಮಗೆ ಸಿಗುತ್ತಿರಲಿಲ್ಲ.  ತಿರುಗಿಸಿದಾಗ ಕಿರ್ರೆಂದು ಸದ್ದು ಮಾಡುವ ಜೀರುಂಡೆ ಆಟಿಕೆಯೊಂದನ್ನು ನಾನು ಕೊಳ್ಳುತ್ತಿದ್ದೆ.  ಆ ಮೇಲೆ ವಸಂತ ಮಹಲಿನಲ್ಲಿ ನಡೆಯುತ್ತಿದ್ದ ನಾಗಸ್ವರ ವಾದನ ಇತ್ಯಾದಿಗಳನ್ನು ಸ್ವಲ್ಪ ಹೊತ್ತು ಆಲಿಸಿ ಸಂಜೆಯೊಳಗೆ ಮನೆಗೆ ಮರಳುತ್ತಿದ್ದೆವು.

ಕ್ರಮೇಣ ಈ ರೀತಿಯ ಹಗಲು ಭೇಟಿಯ ಕಾರ್ಯಕ್ರಮ ಕಮ್ಮಿಯಾಗಿ ರಾತ್ರಿಯ ಜಾತ್ರಾವೈಭವದ ಆಕರ್ಷಣೆ ಹೆಚ್ಚಾಯಿತು.  ಅಷ್ಟರಲ್ಲಿ ನಮ್ಮೂರ ಮೂಲಕ ಧರ್ಮಸ್ಥಳಕ್ಕೆ  ಒಂದು ಒಳರಸ್ತೆಯ ನಿರ್ಮಾಣ ಆರಂಭವಾಗಿ ವಾಹನ ಸಂಚಾರಕ್ಕೆ ಯೋಗ್ಯವಲ್ಲದಿದ್ದರೂ ನಡೆದುಕೊಂಡು ಹೋಗಲು ಸ್ವಲ್ಪ ಸುತ್ತಾದರೂ ಸುಲಭವಾದ ಪರ್ಯಾಯವೊಂದು ಲಭಿಸಿತು.  ಅಣ್ಣ ಅಕ್ಕಂದಿರು, ಅಕ್ಕ ಪಕ್ಕದ ಮನೆಯವರು ಎಲ್ಲ ಸೇರಿ ಸುಮಾರು ಹತ್ತು ಹನ್ನೆರಡು ಮಂದಿಯ ತಂಡ ಪೂರ್ವ ನಿಗದಿತ ದಿನದಂದು ಹೊರಡಲು ಸಿದ್ಧವಾಗುತ್ತಿತ್ತು. ಆಗ ಧರ್ಮಸ್ಥಳ ದೀಪಕ್ಕೆಂದು ಶಾಲೆಗೆ ರಜೆ ಇಲ್ಲದಿರುತ್ತಿದ್ದುದರಿಂದ ಇದಕ್ಕಾಗಿ ಆದಿತ್ಯವಾರವೇ ಆಯ್ಕೆಯಾಗುತ್ತಿತ್ತೆಂದು ನೆನಪು. ಹಿಂತಿರುವಾಗ ಬೆಳಕಿನ ಆಸರೆಗಾಗಿ  ಟಾರ್ಚ್ ಲೈಟುಗಳು, ಲಾಟೀನುಗಳು ಮತ್ತು ಅಡಿಕೆ ಮರದ ಸಲಾಕೆಗಳ ಸೂಟೆಗಳನ್ನು ಹೊಂದಿಸಿಕೊಂಡ ನಮ್ಮ ಪಟಾಲಂ ಸಂಜೆ ಸುಮಾರು ನಾಲ್ಕು ಗಂಟೆಗೆ ಹೊರಟು ಸಂಜೆಯೊಳಗೆ ಧರ್ಮಸ್ಥಳ ಸೇರುತ್ತಿತ್ತು.  ಕೆಲವು ವರ್ಷಗಳ ನಂತರ ಇವುಗಳೆಲ್ಲವುಗಳ ಬದಲಾಗಿ ಉಪಯೋಗಿಸಲೆಂದು  ಸೆಕೆಂಡ್ ಹ್ಯಾಂಡ್ ಗ್ಯಾಸ್ ಲೈಟೊಂದನ್ನು ನಮ್ಮ ಅಣ್ಣ ಖರೀದಿಸಿದ್ದರು.  ಮಾಮೂಲಿನಂತೆ  ಈ ಪರಿಕರಗಳನ್ನೆಲ್ಲ  ಶೆಟ್ಟರ ಅಂಗಡಿಯಲ್ಲಿ ಇರಿಸಿ ನಮ್ಮ ಪರ್ಯಟನೆ ಆರಂಭವಾಗುತ್ತಿತ್ತು. 


ಧರ್ಮಸ್ಥಳ ದೀಪ ಅಂದರೆ ನಮಗೆ ಅನೇಕ ಪ್ರಥಮಗಳನ್ನು ಪರಿಚಯಿಸಿದ ತಾಣ.  ಊರಿಗೆ ವಿದ್ಯುತ್ ಸಂಪರ್ಕ ಬರುವ ಎಷ್ಟೋ ವರ್ಷ ಮೊದಲೇ ಬೃಹದಾಕಾರದ ಜನರೇಟರುಗಳನ್ನು ಉಪಯೋಗಿಸಿ ದೇವಸ್ಥಾನ ಮಾತ್ರವಲ್ಲ, ಸುತ್ತಮುತ್ತಲಿನ ಕಟ್ಟಡಗಳನ್ನೂ  ಜಗಮಗಿಸಲಾಗುತ್ತಿತ್ತು.  ಮೊತ್ತ ಮೊದಲು ಬಲ್ಬು, ಟ್ಯೂಬ್ ಲೈಟುಗಳನ್ನು ನಾವು ನೋಡಿದ್ದು ಅಲ್ಲಿ.  ಆಗ ನಾವು ಟ್ಯೂಬ್ ಲೈಟನ್ನು ರೋಲ್ ಬಲ್ಬು ಅನ್ನುತ್ತಿದ್ದೆವು!  ಐಸ್  ಕ್ಯಾಂಡಿಯ ಪ್ರಥಮ ಪರಿಚಯ ನಮಗಾದದ್ದೂ ಅಲ್ಲಿಯೇ.  ತಲುಪಿದಾಕ್ಷಣ 5 ಪೈಸೆಗೆ ದೊರಕುತ್ತಿದ್ದ ನಮ್ಮಿಷ್ಟದ ಬಣ್ಣದ ಐಸ್ ಕ್ಯಾಂಡಿ ಕೊಳ್ಳುವುದು ಒಂದು ಪರಿಪಾಠವೇ ಆಗಿತ್ತು. ನನ್ನ ಆಯ್ಕೆ ತಿಳಿ ನೇರಳೆ ಬಣ್ಣದ ಕ್ಯಾಂಡಿ ಆಗಿರುತ್ತಿತ್ತು. ಸ್ವಾರಸ್ಯವೆಂದರೆ ಆಗ ನಾವು ಅದನ್ನು ಐಸ್ ಕಡ್ಡಿ ಅನ್ನುತ್ತಿದ್ದುದು! ಐಸಿಗೆ ಕಡ್ಡಿ ಚುಚ್ಚಿರುತ್ತಿದ್ದುದರಿಂದ ಆ ಹೆಸರು. ನಂತರ ವಿವಿಧ ಅಂಗಡಿಗಳ ವೀಕ್ಷಣೆ ಶುರು. ಆಗ ಹೆಚ್ಚು ಅಂಗಡಿಗಳಿರುತ್ತಿದ್ದುದು ದೇವಸ್ಥಾನದ ಎದುರಿನ ಬೀದಿ ಮತ್ತು ಹೂವಿನ ಕೊಪ್ಪಲಿನ ಪೂರ್ವ ಭಾಗದ ಅಗಲ ಕಿರಿದಾದ ರಸ್ತೆಯ ಇಕ್ಕೆಲಗಳಲ್ಲಿ. ಪ್ರತಿ ವರ್ಷ ಅಲ್ಲಿರುತ್ತಿದ್ದ ಒಂದಾಣೆ ಮಹಲು ಕೆಲವು ವರ್ಷಗಳ ನಂತರ  ಆರೂವರಾಣೆ ಮಹಲು ಆಗಿ ಆ ಮೇಲೆ `ಅರ್ಧ ಬೆಲೆ 95'  ಆಗಿ ಭಡ್ತಿ ಹೊಂದಿತ್ತು. ಅಲ್ಲಿ ಜನರು ಕೊಳ್ಳುತ್ತಿದ್ದುದು ಆ ಬೆಲೆಗೆ ಅಗ್ಗ ಅನಿಸಿದ ಸರಕುಗಳನ್ನು ಮಾತ್ರ.   ಗಂಟೆಯ ಮುಳ್ಳು ಮತ್ತು ಮಿನಿಟಿನ ಮುಳ್ಳು ಒಟ್ಟಿಗೆ ತಿರುಗುವ ಕೈಗಡಿಯಾರ, ಕೆಂಪು ಕನ್ನಡಕ(ತಂಪು ಅಲ್ಲ!), ಲೋಹದ ಉಂಗುರ, ತಗಡಿನ ಮೋಟರು ಕಾರು, ಪಟ್ಟೆ ಪಟ್ಟೆಗಳ ರಬ್ಬರ್ ಚೆಂಡು, ಒಡಲಲ್ಲಿ ನೀರು ತುಂಬಿ ಪೀಪಿಯಂತೆ ಊದಿದಾಗ ಚಿವ್ ಚಿವ್ ಅನ್ನುವ ಗುಬ್ಬಿ, ಬಿದಿರಿನ ಪೀಪಿಗೆ ಸಿಕ್ಕಿಸಿದ ಪುಗ್ಗೆ, ಕಾಳು ತಿನ್ನುವ ಕೋಳಿ, ಒಂದು ಲಿವರ್ ಒತ್ತಿ ಬಿಟ್ಟರೆ ಓಡುವ ದೊಡ್ಡ ಚಕ್ರಗಳ ಫಿರಂಗಿ ಗಾಡಿ, ಹೆಬ್ಬೆರಳಿನಿಂದ ಒತ್ತುವ ಕಿಟಿಕಿಟಿ, ಕಡ್ಡಿಯ ರೂಪದ ತೆಂಗಿನ ಮರದಿಂದ  ಸರಸರನೆ ಕೆಳಗಿಳಿಯುವ ಸ್ಪ್ರಿಂಗಿನ ಮಂಗ, ಕ್ಯಾಂಡಲಿನಿಂದ ಓಡುವ ಸ್ಟೀಮ್ ಬೋಟ್, ಸಿನಿಮಾ ರೀಲಿನ ತುಂಡುಗಳನ್ನು ಸಿಕ್ಕಿಸಿ ವೀಕ್ಷಿಸುವ ವ್ಯೂಮಾಸ್ಟರನ್ನು ಹೋಲುವ ಆಟಿಕೆ ಮುಂತಾದವುಗಳಲ್ಲಿ ಯಾವುದಾದರೊಂದು ನಮ್ಮ ವರ್ಷದ ಆಯ್ಕೆಗಳಾಗಿರುತ್ತಿದ್ದವು.  ನಾವು ‘ಸಿನಿಮಾ’ ಎಂದೇ ಕರೆಯುತ್ತಿದ್ದ ಆ ಆಟಿಕೆಯಲ್ಲಿ   ಹಳೆ ಅಜ್ಞಾತ ಸಿನಿಮಾಗಳ ದೃಶ್ಯಗಳನ್ನು ನೋಡುವಾಗಿನ ಕಲ್ಪನಾಲೋಕದ ಆನಂದ ಆ ಮೇಲೆ  ಥಿಯೇಟರುಗಳಲ್ಲಿ  ಸಿನಿಮಾಗಳನ್ನು ನೋಡುವಾಗಲೂ ಸಿಗಲಿಲ್ಲ.  ಮನೆಯ ಕೋಣೆಯ ಕಿಟಿಕಿಯಿಂದ ನುಸುಳುತ್ತಿದ್ದ ಬಿಸಿಲುಕೋಲಿನ ಮುಂದೆ ಆ ರೀಲಿನ ತುಂಡುಗಳನ್ನು ಹಿಡಿದು ಭೂತಕನ್ನಡಿಯ ಸಹಾಯದಿಂದ ಎದುರಿನ ಗೋಡೆಯ ಮೇಲೆ ದೊಡ್ಡ ಬಿಂಬವನ್ನು ಮೂಡಿಸುವುದನ್ನೂ ನಾನು ಕಲಿತುಕೊಂಡಿದ್ದೆ.


ಹೈಯರ್ ಎಲಿಮೆಂಟರಿಗೆ ಸೇರಿದ ಮೇಲೆ ಆದ್ಯತೆ ಬದಲಾಗಿ ಆರಾಣೆಯ ಏರ್‌ಮೇಲ್ ಪೆನ್, ಅಗ್ಗದ ಹವಾಯಿ ಚಪ್ಪಲ್ ಮುಂತಾದವು ನಮ್ಮ ವಿಶ್ ಲಿಸ್ಟಿಗೆ ಸೇರಿದವು.  ಅಂಗಡಿಯವನು ಶಾಯಿ ತುಂಬಿಸಿ ಚಂದವಾಗಿ ಅಕ್ಷರ ಮೂಡಿಸಿ ತೋರಿಸುತ್ತಿದ್ದ ಪೆನ್ನು ಮನೆಗೆ ಹೋಗುವಷ್ಟರಲ್ಲಿ ಬರೆಯಲಾರೆನೆಂದು ಮುಷ್ಕರ ಹೂಡುತ್ತಿತ್ತು, ಹಿಡಿದರೆ ಕೈಗೆಲ್ಲ ಶಾಯಿಯೂ ಮೆತ್ತುತ್ತಿತ್ತು.   ಕೊಂಡ ತಪ್ಪಿಗೆ ಥ್ರೆಡ್ಡಿಗೆ ವ್ಯಾಸಲೀನ್ ಸವರಿ ನಿಬ್ಬಲ್ಲಿ ಬ್ಲೇಡ್ ತೂರಿಸಿ ಹೇಗೋ ಸುಧಾರಿಸುತ್ತಿದ್ದೆವು. ಕನ್ನಡಿಯ ಮೇಲೆ ಗೀಚಿ ನಿಬ್ಬನ್ನು ನಯಗೊಳಿಸುವ  ಚಿಕಿತ್ಸೆಯ ಪ್ರಯೋಗವೂ ನಡೆಯುತ್ತಿತ್ತು.  ಹೈಸ್ಕೂಲ್ ಹಂತಕ್ಕೆ ತಲುಪಿದ ಮೇಲೆ  ಆಟಿಕೆಗಳ ಸಂಚಾರಿ ಅಂಗಡಿಯಿಂದ ವರ್ಷಕ್ಕೊಂದು ಕೊಳಲು ಕೊಳ್ಳಲು ಆರಂಭಿಸಿ ಪಾಪಿಯ ಜೀವನ ಪಾವನಗೊಳಿಸುವ ಹಾಡು ನುಡಿಸಲು ಪ್ರಯತ್ನಿಸುತ್ತಾ ನಾನು ಏಕಲವ್ಯನಾದದ್ದು.


ಪುಸ್ತಕದ ಅಂಗಡಿಗಳು ಯಾವುದೇ ಜಾತ್ರೆಯ ಅವಿಭಾಜ್ಯ ಅಂಗ.  ನಮ್ಮ ಅಣ್ಣನಿಗೆ ಉತ್ತಮ ಪುಸ್ತಕಗಳನ್ನು ಕೊಂಡು ಸಂಗ್ರಹಿಸುವ ಹವ್ಯಾಸವಿತ್ತು.  ವರ್ಷಕ್ಕೊಂದು ಆಯ್ದ ಪುಸ್ತಕವನ್ನು ತಪ್ಪದೆ ಕೊಳ್ಳುತ್ತಿದ್ದರು. ಇಸೋಪನ ನೀತಿ ಕಥೆಗಳು, ಅರೇಬಿಯನ್ ನೈಟ್ಸ್, ಸರ್ವಜ್ಞ ವಚನಗಳು, ಯೋಗಾಸನಗಳು,  ಸಚಿತ್ರ ಯಮಶಾಸನ ಮುಂತಾದವು ನನಗೆ ನೆನಪಿರುವಂತೆ ಅವರು ಕೊಂಡ, ನಾನೂ ಓದಿ ಆನಂದಿಸಿದ ಪುಸ್ತಕಗಳು. ಅವರ ಬಾಲ್ಯದಲ್ಲಿ ಮನೆಯಲ್ಲೇ ‘ಗಣೇಶ ಲೈಬ್ರರಿ’ ಎಂಬ ಹೆಸರಿನ ಪುಸ್ತಕಾಲಯವನ್ನು ಸ್ಥಾಪಿಸಿ ಪುಸ್ತಕಗಳಿಗೆ ಗುರುತಿನ ಸಂಖ್ಯೆಗಳನ್ನು ನೀಡಿ ಅಚ್ಚುಕಟ್ಟಾಗಿ ಸಂಗ್ರಹಿಸಿಡುತ್ತಿದ್ದರಂತೆ.  

ಜಾತ್ರೆಯಲ್ಲಿ ಒಂದೆರಡು ಕಂಬಳಿಗಳ ಸ್ಟಾಲುಗಳೂ ಇರುತ್ತಿದ್ದವು.  ಅವುಗಳ ಛಾವಣಿ, ಗೋಡೆ, ನೆಲದ ಹಾಸು ಎಲ್ಲವೂ ಕಂಬಳಿಗಳದ್ದೇ ಆಗಿರುತ್ತಿದ್ದುದು ವಿಶೇಷ. ನಮ್ಮಲ್ಲಿ ಕಂಬಳಿಗಳ ಉಪಯೋಗ ಕಮ್ಮಿ.  ಆದರೆ ಆಗ ಹೆರಿಗೆಗಳು ಮನೆಯಲ್ಲೇ ಆಗುತ್ತಿದ್ದುದರಿಂದ ಬಾಣಂತಿಯರಿಗಾಗಿ ಒಂದೆರಡು ವರ್ಷಕ್ಕೊಮ್ಮೆ ಹೊಸ ಕಂಬಳಿಯ ಅಗತ್ಯ ಬೀಳುತ್ತಿತ್ತು. ಅಣ್ಣಂದಿರು ಮತ್ತು ತಂದೆಯವರು  ಅಂಗಡಿಯ ಕಂಬಳಿ ಹಾಸಿನ ಮೇಲೆ ಕೂತು ಅಷ್ಟು ಹೊತ್ತು ನಡೆದಾಡಿದ ಕಾಲುಗಳಿಗೆ ಸ್ವಲ್ಪ ವಿಶ್ರಾಂತಿ ಕೊಟ್ಟು ಕಂಬಳಿ ಗೌಡರೊಡನೆ ಚರ್ಚೆ ಮಾಡಿ ಬಣ್ಣದ ಉಲ್ಲನ್ ದಾರದಿಂದ ಅಂಚನ್ನು ಹೆಣೆಯಲು ಹೇಳಿ ಅಗ್ಗದ ದರದಲ್ಲಿ ಗಿಟ್ಟಿಸುತ್ತಿದ್ದರು.

ನಾವು ಮೊದಲ ಬಾರಿಗೆ ಮಸಾಲೆ ದೋಸೆ ಸವಿದದ್ದೂ ಧರ್ಮಸ್ಥಳದಲ್ಲೇ.  ಆಗ ಅಲ್ಲಿ ಮಿತ್ರ ಸಮಾಜ ಎಂಬ ಒಂದೇ ಒಂದು ಚಿಕ್ಕ ಹೋಟೆಲು ಇದ್ದದ್ದು. ಜಾತ್ರೆಯ ಜನಸಂದಣಿಯಿಂದಾಗಿ ಅಲ್ಲಿ ಕುಳಿತುಕೊಳ್ಳಲು ಜಾಗ ಸಿಗುವುದೇ ಕಷ್ಟ. ಒಂದೊಮ್ಮೆ ಜಾಗ ಸಿಕ್ಕಿದರೂ  ಸಪ್ಲಯರ್ ನಮ್ಮ ಟೇಬಲ್ ಬಳಿಗೆ ಬಂದು  ಆರ್ಡರ್ ಪಡೆದು ಮಸಾಲೆ ದೋಸೆ ನಮ್ಮ ಮುಂದೆ ಪ್ರತ್ಯಕ್ಷವಾಗಲು ಬಹಳ ತಡವಾಗುತ್ತಿತ್ತು. ಕೆಲವೊಮ್ಮೆ ಆತ ನಮ್ಮನ್ನು ಮರೆತೇ ಬಿಟ್ಟನೇನೋ ಎಂದೂ ಅನ್ನಿಸುವುದಿತ್ತು. ಕೊನೆಗೂ ಆತ ದೋಸೆಗಳ ಪ್ಲೇಟುಗಳೊಡನೆ ನಮ್ಮತ್ತ ಬಂದಾಗ ನಿಧಿ ದೊರಕಿದಷ್ಟು ಸಂತೋಷ.  ಆಗ ಮಸಾಲೆ ದೋಸೆಯ ಜೊತೆ ಚಟ್ನಿ, ಸಾಂಬಾರ್ ಇತ್ಯಾದಿ ಕೊಡುವ ಕ್ರಮ ಇರಲಿಲ್ಲ.

ಈಗ ಶಾಲಾ ಕಾಲೇಜುಗಳ ವಾರ್ಷಿಕೋತ್ಸವದ ಅವಿಭಾಜ್ಯ ಅಂಗವಾಗಿರುವ ಫಿಲ್ಮಿ ಡಾನ್ಸಿನ ಪರಿಚಯ ನಮಗಾದದ್ದೂ ಧರ್ಮಸ್ಥಳ ದೀಪದಲ್ಲೇ.  ಆಗ ಈಗಿನಂತೆ ಮೈದಾನದಲ್ಲಿ ನಡೆಯುವ ವಸ್ತು ಪ್ರದರ್ಶನ ಇತ್ಯಾದಿ ಇರಲಿಲ್ಲ.  ಮಹಾದ್ವಾರದ ಪರಿಸರದಲ್ಲಿ ಮೋಟಾರ್ ಬೈಕಿನ ಮೃತ್ಯು ಕೂಪ,  ಅದ್ಭುತ ಮತ್ಸ್ಯಕನ್ಯೆ, ಬೊಂಬೆಯಾಟ, ಮ್ಯಾಜಿಕ್ ಶೋ ಮುಂತಾದವುಗಳ ಟೆಂಟುಗಳಿರುತ್ತಿದ್ದವು.  ಜನರನ್ನು ತಮ್ಮತ್ತ ಆಕರ್ಷಿಸಲು  ಟೆಂಟಿನ ಎದುರು ಎತ್ತರವಾದ ಅಟ್ಟಳಿಗೆಯ ಮೇಲೆ ಗ್ರಾಮೊಫೋನಿನಲ್ಲಿ  ಜನಪ್ರಿಯ ಸಿನಿಮಾ ಹಾಡುಗಳನ್ನು ಹಚ್ಚಿ ಚಿತ್ರ ವಿಚಿತ್ರ ಉಡುಗೆ ಧರಿಸಿದ ನರ್ತಕ ನರ್ತಕಿ ಕುಣಿಯುತ್ತಿದ್ದರು. ಒಂಟೆಗೆ ಮೂತಿ ಒಳಗಿಡಲು ಜಾಗ ಕೊಟ್ಟರೆ ಟೆಂಟಿನ ಮಾಲೀಕನನ್ನೇ ಹೊರಗೆ ಹಾಕಿತ್ತಂತೆ ಎಂಬ ಗಾದೆಯಂತೆ  ನಾನು ಕಾಲೇಜು ಸೇರುವ ಹೊತ್ತಿಗೆ  ಟಿಕೆಟಿಟ್ಟು ಇಂತಹ ಫಿಲ್ಮಿ ಡಾನ್ಸುಗಳನ್ನು ತೋರಿಸುವ ಟೆಂಟೇ ಕಾಣಿಸಿಕೊಂಡಿತ್ತು. ಅದರಲ್ಲಿ ದಸ್ ಲಾಖ್ ಚಿತ್ರದ ಆಗ್ರೇಕಾ ಲಾಲಾ ಅಂಗ್ರೇಜಿ ದುಲ್ಹನ್ ಲಾಯಾರೇ ಮತ್ತು ತೇರಿ ಪತ್ಲಿ ಕಮರ್ ತೇರಿ ಬಾಲಿ ಉಮರ್ ಹಾಡುಗಳಿಗೆ ಇಬ್ಬರು ಯುವತಿಯರು ಮತ್ತು ಓರ್ವ ಯುವಕ ದಪ್ಪ ಮೇಕಪ್ ಮೆತ್ತಿಕೊಂಡು ಕುಣಿದದ್ದನ್ನು ದುಡ್ಡು ಕೊಟ್ಟು ನೋಡಿದ್ದು ನೆನಪಿದೆ!

ಆಗ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿದ್ದುದು ಮಳೆಗಾಲದಲ್ಲಿ ಭತ್ತ ಬೆಳೆಯುವ  ಗದ್ದೆಯಲ್ಲಿ ಕಟ್ಟಿದ ತಾತ್ಕಾಲಿಕ ಸಭಾ ಭವನದಲ್ಲಿ. ಆದರೆ ಮರದ ಚೌಕಟ್ಟು ಮತ್ತು ಬಿಳಿ ಬಟ್ಟೆ ಬಳಸಿ ರಚಿಸಿದ ಅದರ ಕಂಬ ಮತ್ತು ಛಾವಣಿಗಳು  ಅದು ವಾಸ್ತವವಾದ ತಾರಸಿ ಕಟ್ಟಡವೇನೋ ಎಂಬ ಭ್ರಮೆ ಮೂಡಿಸುತ್ತಿತ್ತು.  ನಾವು ಆಗ ಅಲ್ಲಿ ಕೂತು ಕಾರ್ಯಕ್ರಮಗಳನ್ನೇನೂ ಆಸ್ವಾದಿಸುತ್ತಿರಲಿಲ್ಲ.  ಆದರೂ ಅಲ್ಲಿಯ ಕಲಾಪಗಳು ಹೊರಗೆ ಅಡ್ಡಾಡುವವರ ಕಿವಿಗೂ ಬೀಳುತ್ತಿದ್ದವು.  ಒಂದು ವರ್ಷ ಯಾರೋ ಕಲಾವಿದರು ಕಂಚಿನ ಕಂಠದಲ್ಲಿ ಮಾತಾಡ್ ಮಾತಾಡು ಮಲ್ಲಿಗೆ ಸೇವಂತಿಗೆ ಎಂದು ಹಾಡಿದ್ದು ನನ್ನ ಮನದಲ್ಲಿ ಅಚ್ಚು ಮೂಡಿಸಿದೆ.  ಧರ್ಮಸ್ಥಳ ದೀಪದೊಡನೆ ನಂಟು ಹೊಂದಿರುವ ಒಂದೆರಡು ಸಿನಿಮಾ ಹಾಡುಗಳೂ ಇವೆ.  ಒಂದು ವರ್ಷ ಅಲ್ಲಿ ಯಾವುದೋ ಧ್ವನಿ ವರ್ಧಕದಲ್ಲಿ ಪದೇ ಪದೇ ಕೇಳಿ ಬರುತ್ತಿದ್ದ ಶ್ರೀ ಶೈಲ ಮಹಾತ್ಮೆ ಚಿತ್ರದ ಮಲ್ಲಿಕಾರ್ಜುನನು ನೆಲೆಸಿಹ ಹಾಡಿನ ಏನೆಂಬೆ ಗಿರಿಯ ಮಹಿಮೆ ಎಂಬ ಸಾಲು ಮತ್ತು ಧರ್ಮಸ್ಥಳ ಮಹಾತ್ಮೆ ಚಿತ್ರದ ಜಗ ಹಿತಕಾಗಿ ತಾಮಸ ನ್ಯಾಯವೇ ಹಾಡಿನ ಮಂಜುನಾಥಾ ಮಂಜುನಾಥಾ ಎಂಬ ಪುನರಾವರ್ತನೆಗೊಳ್ಳುವ ಸಾಲುಗಳು ಏಕೋ ನನ್ನ ಮನದಲ್ಲಿ ಶಾಶ್ವತವಾಗಿ ನೆಲೆಗೊಂಡಿವೆ.  ಎರಡೂ ಪಿ.ಬಿ. ಶ್ರೀನಿವಾಸ್  ಹಾಡಿದವುಗಳು.  ಬಂಬಯಿ ದೇಖೊ ಮದ್ರಾಸ್ ದೇಖೊ ಎನ್ನುತ್ತಾ  ಒಂದು ಪೆಟ್ಟಿಗೆಯೊಳಗೆ ಚಿಮಿಣಿ ದೀಪದ ಬೆಳಕಿನಲ್ಲಿ ಕೆಲವು ದೃಶ್ಯಗಳನ್ನು ತೋರಿಸುತ್ತಿದ್ದವನು ಗ್ರಾಮೊಫೋನಿನ ಹಾರ್ನ್ ಬದಲಿಗೆ ಕಾಗದದ ಕೋನ್ ಒಂದನ್ನು ಸಿಕ್ಕಿಸಿ ನುಡಿಸುತ್ತಿದ್ದ  ಕನ್ಯಾರತ್ನ ಚಿತ್ರದ ಒಂದೇ ಮಾತು ಒಂದೇ ಮನಸು ಇಂಥ ಇನ್ನೊಂದು ಹಾಡು.  ಇವುಗಳನ್ನು ಕೇಳಿದಾಗ ಈಗಲೂ ಆ ದೃಶ್ಯಗಳೇ ಕಣ್ಣೆದುರು ಬರುವುದು.

ಬಹುತೇಕ ದೇವಸ್ಥಾನಗಳ ದೀಪೋತ್ಸವಗಳ ಸಂದರ್ಭದಲ್ಲಿರುವ ಸುಡುಮದ್ದುಗಳ ಸಂಭ್ರಮ ಧರ್ಮಸ್ಥಳದಲ್ಲಿಲ್ಲದಿರುವುದು ಗಮನಾರ್ಹ.  ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ  ಒಮ್ಮೆ ಅಗ್ನಿ ಆಕಸ್ಮಿಕ ಉಂಟಾದ ಮೇಲೆ ಇದಕ್ಕೆ ಅಲ್ಲಿ ನಿಷೇಧ ಹೇರಲಾಯಿತು ಎಂದು ಹಿರಿಯರು ಹೇಳುತ್ತಿದ್ದುದನ್ನು ಕೇಳಿದ್ದೇನೆ.

ರಾತ್ರಿಯ ಸಮಯದಲ್ಲಿ ದೀಪೋತ್ಸವಕ್ಕೆ ಹೋದಾಗ ನಾವು ದೇವಸ್ಥಾನದ ಒಳಗೆ ಹೋಗುತ್ತಿದ್ದುದು ಕಮ್ಮಿ.  ಹೋದರೂ ಒಂದೈದು ನಿಮಿಷ ಅಲ್ಲಿದ್ದು ದೇವರಿಗೆ ಕೈ ಮುಗಿದು ಹೊರಗೆ ಬರುತ್ತಿದ್ದೆವು.  ಕಾಲು ನೋಯುವ ವರೆಗೆ  ಮತ್ತೆ ಪ್ರದಕ್ಷಿಣಾಕಾರ ಮತ್ತು ಅಪ್ರದಕ್ಷಿಣಾಕಾರವಾಗಿ ಅಂಗಡಿಗಳನ್ನು ಸುತ್ತಿ ದೇವರು ತೇರನ್ನೇರುವ ಹೊತ್ತಿಗೆ ಮನೆಯತ್ತ ಮುಖ ಮಾಡುತ್ತಿದ್ದೆವು. ಮೊದಲ ಕೆಲವು ವರ್ಷಗಳು ಸೂಟೆ ನಂತರ ಗ್ಯಾಸ್ ಲೈಟಿನ  ಬೆಳಕಿನಲ್ಲಿ ಬೇತಾಳನಂತೆ ಕಾಣುವ ಕಾಲುಗಳ ಉದ್ದುದ್ದ ನೆರಳುಗಳನ್ನು ನೋಡುತ್ತಾ, ಅದು ಇದು ಮಾತನಾಡುತ್ತಾ ಏಳು ಕಿಲೋ ಮೀಟರ್ ನಡೆದು ಮನೆ ಸೇರುವಾಗ ಬೆಳಗಿನ ಜಾವ ಮೂರು ಮೂರುವರೆ ಆಗುತ್ತಿತ್ತು.  ತಣ್ಣೀರಿನಲ್ಲಿ ಕೈಕಾಲು ಮುಖ ತೊಳೆದು  ಹಾಸಿಗೆ ಹಾಸಿ ಒರಗಿದಾಗ ದಣಿದ ಕಾಲುಗಳಿಗೆ ಸಿಗುತ್ತಿದ್ದ ಸುಖವನ್ನು ವರ್ಣಿಸಲಸಾಧ್ಯ.  ಕ್ಷಣಾರ್ಧದಲ್ಲಿ ನಿದ್ರೆ ಆವರಿಸಿ ನಾವು ಕೊಂಡು ತಂದ ವಸ್ತು ವಿಶೇಷದ ಕುರಿತಾದ ಕನಸು ಬೀಳುತ್ತಿತ್ತು.



Friday 25 October 2019

ಹೂವು ಚೆಲುವೆಲ್ಲ ನಂದೆಂದಿತು


ಪ್ರಸಿದ್ಧ ಸಂಗೀತ ನಿರ್ದೇಶಕ ಕಲ್ಯಾಣ್‍ಜೀ ಅವರ ಪ್ರಕಾರ ಸಿನಿಮಾ ಹಾಡುಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯದು ಅಲೋಪೆತಿಕ್. ಈ ಗುಂಪಿನ ಹಾಡುಗಳು ಒಮ್ಮೆಲೇ ಗೋಲಿ ಸೋಡದಂತೆ ಭುಸ್ಸನೆ ನೊರೆಯುಕ್ಕಿಸಿ ಕಾಲಕ್ರಮೇಣ ಹೇಳ ಹೆಸರಿಲ್ಲದಂತೆ ಮಾಯವಾಗುತ್ತವೆ.  ಎರಡನೆಯ ಗುಂಪು ಹೋಮಿಯೊಪೆತಿಕ್ ಹಾಡುಗಳದ್ದು.  ಈ ಹಾಡುಗಳು ಜನ್ಮ ತಾಳುತ್ತಲೇ ಜನಪ್ರಿಯವಾಗಿ  ಆರಕ್ಕೇರದೆ ಮೂರಕ್ಕಿಳಿಯದೆ  ಚಿರಕಾಲ ಬಾಳುತ್ತವೆ.  ಮೂರನೆಯದು ಆಯುರ್ವೇದಿಕ್ ಗುಂಪು. ಇದಕ್ಕೆ ಸೇರಿದ ಹಾಡುಗಳು ಆರಂಭದಲ್ಲಿ ಸಪ್ಪೆ ಅನ್ನಿಸುತ್ತವೆ.  ಆದರೆ ಕಾಲ ಕಳೆದಂತೆ ಇವುಗಳ ಜನಪ್ರಿಯತೆ ವೃದ್ಧಿಸುತ್ತಾ ಹೋಗುತ್ತದೆ. ನನ್ನ ಮಟ್ಟಿಗೆ ಹಣ್ಣೆಲೆ ಚಿಗುರಿದಾಗ ಚಿತ್ರದ ಹೂವು ಚೆಲುವೆಲ್ಲ ನಂದೆಂದಿತು ಒಂದು ಆಯುರ್ವೇದಿಕ್ ಹಾಡು.  ಇದು ಆರಂಭದಲ್ಲಿ ನನಗೆ ಅಷ್ಟೊಂದು ಇಷ್ಟವಾಗದಿರಲು  ಕಾರಣಗಳು ಎರಡು.  ಆಗ ನಾನು ಪಿ.ಯು.ಸಿ ಓದುತ್ತಿದ್ದು ಚಂದಮಾಮದಿಂದ ಓದಿನ ರುಚಿ ಹತ್ತಿ ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳನ್ನು ದಾಟಿ ತ್ರಿವೇಣಿಯವರ ಎಲ್ಲ ಕಾದಂಬರಿಗಳನ್ನು ಓದಿ ಮುಗಿಸಿದ್ದೆ. ರೇಡಿಯೋದಿಂದ ತಾತ್ಕಾಲಿಕವಾಗಿ ದೂರವಾಗಿದ್ದುದರಿಂದ  ಅವರ ಕಾದಂಬರಿ ಆಧಾರಿತ ಹಣ್ಣೆಲೆ ಚಿಗುರಿದಾಗ ಸಿನಿಮಾದಲ್ಲಿ ಹೂವು ಚೆಲುವೆಲ್ಲ ಎಂಬ ಚಂದದ ಹಾಡೊಂದಿದೆ ಎಂದು  ಸ್ನೇಹಿತನೊಬ್ಬನ ಮೂಲಕ ತಿಳಿಯಬೇಕಾಗಿ ಬಂತು. ನಾನೇ ಅದನ್ನು ಮೊದಲು ರೇಡಿಯೊದಲ್ಲಿ ಕೇಳಲಿಲ್ಲವಲ್ಲ ಎಂಬುದು ಅದು ಇಷ್ಟವಾಗದಿರಲು ಮೊದಲ ಕಾರಣ. ಅದು ಪಿ.ಬಿ. ಶ್ರೀನಿವಾಸ್ ಹಾಡಿರುವುದೇ ಎಂದು ನಾನು ಕೇಳಿದಾಗ ಆತ ಅಲ್ಲ ಎಂದು ಉತ್ತರಿಸಿದ್ದು ಎರಡನೆಯ ಕಾರಣ.  ಆಗ ನನಗೆ ರಫಿ ಮತ್ತು ಪಿ.ಬಿ.ಎಸ್ ಬಿಟ್ಟರೆ ಇತರರ ಹಾಡುಗಳು ಸುಲಭದಲ್ಲಿ ಇಷ್ಟ ಆಗುತ್ತಿರಲಿಲ್ಲ. ಅಷ್ಟರಲ್ಲೇ ನಾನು ಕೊಳಲು ನುಡಿಸಲು ಆರಂಬಿಸಿದ್ದು ಈ ಹಾಡನ್ನು  ನುಡಿಸಲು ಪ್ರಯತ್ನಿಸಬೇಕೆಂದು ಎಂದೂ ಅನಿಸಿರಲಿಲ್ಲ.  ಆದರೆ ಕಾಲ ಕಳೆದಂತೆ ಇದು  ಯಾವಾಗ ಇಷ್ಟವಾಗತೊಡಗಿತೆಂದು ನನಗೇ ಗೊತ್ತಿಲ್ಲ! ಈಗ ಈ ಹಾಡಿಲ್ಲದೆ ನನ್ನ ಯಾವ ಕಾರ್ಯಕ್ರಮವೂ ಇಲ್ಲ.


1967ರಲ್ಲಿ ಸಂಗೀತ ನಿರ್ದೇಶನ ಕ್ಷೇತ್ರಕ್ಕೆ ಕಾಲಿರಿಸಿ  ನಕ್ಕರೆ ಅದೇ ಸ್ವರ್ಗ ಮತ್ತು ಮನಸ್ಸಿದ್ದರೆ ಮಾರ್ಗ ಚಿತ್ರಗಳಲ್ಲಿ  ಒಳ್ಳೆಯ ಹಾಡುಗಳನ್ನು ನೀಡಿದ್ದರೂ ಎಂ.ರಂಗರಾವ್ ಅವರನ್ನು ಸ್ಟಾರ್ ಪದವಿಗೇರಿಸಿದ್ದು 1968ರ ಹಣ್ಣೆಲೆ ಚಿಗುರಿದಾಗ ಚಿತ್ರದ ಹೂವು ಚೆಲುವೆಲ್ಲ ಹಾಡು. ಸಾಮಾನ್ಯವಾಗಿ ಪ್ರಸಿದ್ಧ ಸಿನಿಮಾ ಹಾಡುಗಳನ್ನು  ಗಮನಿಸಿದಾಗ  ಸಾಹಿತ್ಯಕ್ಕಿಂತಲೂ ಹೆಚ್ಚಾಗಿ ಹಾಡಿನ ಸರಳವಾದ ಧಾಟಿ  ಅವು ಜನಪ್ರಿಯವಾಗುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಕಂಡು ಬರುತ್ತದೆ.  ಹಿಂದಿ ಹಾಡುಗಳಿಗಂತೂ  ಈ ಮಾತು  ಹೆಚ್ಚು ಅನ್ವಯವಾಗುತ್ತದೆ. ಆದರೆ ಜನಮನ ಗೆದ್ದ ಈ ಹಾಡಿನ ಮಟ್ಟಿಗೆ ಆರ್.ಎನ್ ಜಯಗೋಪಾಲ್ ಅವರ ಸಾಹಿತ್ಯ ಮೇಲೋ ರಂಗರಾವ್ ಅವರ ಟ್ಯೂನ್ ಮೇಲೋ ಎಂದು ನಿರ್ಧರಿಸುವುದು ಕಷ್ಟ.  ಭೀಮ್‌ಪಲಾಸ್ ರಾಗಾಧಾರಿತ ಈ ಟ್ಯೂನ್  ಅಷ್ಟು ಸುಲಭದ್ದೇನೂ ಅಲ್ಲ. ತಾಳಕ್ಕಿಂತ ಪದ್ಯ ಮೊದಲು ಶುರುವಾಗುವ ಅದೀತ ಪದ್ಧತಿಯಲ್ಲಿ ಪಲ್ಲವಿ ಇದ್ದರೆ ಚರಣ ತಾಳದ ನಂತರ ಸಾಹಿತ್ಯದ ಸಾಲು ಆರಂಭವಾಗುವ ಅನಾಗತದಲ್ಲಿದೆ.  ಕೆಲವು ಸಾಲುಗಳು ಸಮದಲ್ಲೂ ಇವೆ. ನಡುನಡುವೆ pauseಗಳು ಬೇರೆ. ಸಿನಿಮಾ ಭಾಷೆಯಲ್ಲಿ ಹೇಳುವುದಾದರೆ ಈ  ಹಾಡಿನ ‘ಮೀಟರ್’ ಬಲು ಕ್ಲಿಷ್ಟಕರವಾದದ್ದು. ಇದಕ್ಕೆ ಸರಿಹೊಂದುವಂತೆ ಇಂತಹ ಸರಳ ಸಾಲುಗಳನ್ನು ಜಯಗೋಪಾಲ್ ಹೇಗೆ ಬರೆದರೆಂಬುದೇ ಸೋಜಿಗದ ವಿಚಾರ.  ಅವರು ಮೊದಲೇ ಬರೆದಿದ್ದ ಹಾಡಿಗೆ ರಂಗರಾವ್ ಆ ಮೇಲೆ ರಾಗ ಸಂಯೋಜಿಸಿರುವ ಸಾಧ್ಯತೆಯೂ ಕಮ್ಮಿ.  ಪಲ್ಲವಿಯ ಸಾಲುಗಳಲ್ಲಿ 14 ಮತ್ತು 19 ಮಾತ್ರೆಗಳು ಹಾಗೂ ಚರಣದ ಸಾಲುಗಳಲ್ಲಿ 21, 21 ಮತ್ತು 20 ಮಾತ್ರೆಗಳಿರುವುದು ಇದಕ್ಕೆ ಕಾರಣ.  ಜಯಗೋಪಾಲ್ ಸಂಗೀತವನ್ನೂ ಬಲ್ಲವರಾಗಿದ್ದರಿಂದ ಮೊದಲೇ ಸಿದ್ಧ ಪಡಿಸಿದ ಕ್ಲಿಷ್ಟ ಟ್ಯೂನಿಗೆ ಸರಿ ಹೊಂದುವಂತೆ ಸರಳ ಸಾಹಿತ್ಯದ ಹಾಡು ಬರೆದಿರಬಹುದೆಂದು ಊಹಿಸಬೇಕಾಗುತ್ತದೆ.

ಹೂವು ಚೆಲುವೆಲ್ಲ ನಂದೆಂದಿತು -14
ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು -19

ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು -21
ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು - 21
ಹೆಣ್ಣು  ವೀಣೆ ಹಿಡಿದ ಶಾರದೆಯೆ ಹೆಣ್ಣೆಂದಿತು - 20

ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು
ಕೆದರುತೆ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು
ಹೆಣ್ಣು ನಾಟ್ಯದರಸಿ ಪಾರ್ವತಿಯೆ ಹೆಣ್ಣೆಂದಿತು

ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು
ಸುರಿಸುವೆ ಮಳೆ ತೊಳೆಯುವೆ ಕೊಳೆ ಸಮನಾರೆನಗೆಂತು
ಹೆಣ್ಣು ಪಾಪ ತೊಳೆವ ಸುರಗಂಗೆ ಹೆಣ್ಣೆಂದಿತು

ಇದರ ಸಾಹಿತ್ಯದಲ್ಲೊಂದು ಸೂಕ್ಷ್ಮವಿದೆ.  ಮೊದಲ ಸಾಲಲ್ಲಿ ಹೂವಿನ ಹೇಳಿಕೆ ನಂದೆಂದಿತು ಎಂದು ಪ್ರತ್ಯಕ್ಷ ವಚನ(direct speech)ನಲ್ಲಿದ್ದರೆ ಎರಡನೇ ಸಾಲಿನ ಹೆಣ್ಣಿನ ಹೇಳಿಕೆ ಚೆಲುವೇ ತಾನೆಂದಿತು ಎಂದು ಪರೋಕ್ಷ ವಚನ(indirect speech)ನಲ್ಲಿದೆ. ಹಾಗೆಯೇ ಮೊದಲ ಚರಣದಲ್ಲಿ ಕೋಗಿಲೆ ನಾನೇ ದೊರೆ ಎಂದು ಪ್ರತ್ಯಕ್ಷ ವಚನದಲ್ಲಿ ಹೇಳುತ್ತದೆ. 2 ಮತ್ತು  3ನೇ ಚರಣಗಳಲ್ಲಿ ನವಿಲು ಮತ್ತು ಮುಗಿಲುಗಳ ನಿರೂಪಣೆ ತಾನೇ ಎಂದು ಪರೋಕ್ಷ ವಚನದಲ್ಲಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವುದೇ ಅಥವಾ ಕಣ್ತಪ್ಪಿನಿಂದ ಆದುದೇ ತಿಳಿಯದು.

ಪಿ.ಸುಶೀಲಾ ಅವರು 8 ಅಕ್ಷರ ಕಾಲದ ಏಕತಾಳದಲ್ಲಿರುವ ಈ ಹಾಡನ್ನು ಕಪ್ಪು ಎರಡರ ಹಿತವಾದ ಶ್ರುತಿಯಲ್ಲಿ ಅತಿ ಸುಂದರವಾಗಿ ಹಾಡಿ ಅಮರಗೊಳಿಸಿದ್ದಾರೆ.  ಆದರೆ ಒಂದೆಡೆ  ಶಾರದೆಯೆ ಪದದ ಉಚ್ಚಾರ  ಶಾರದಯೆ ಎಂದು ಕೇಳಿಸುತ್ತದೆ.  ತೆಲುಗಿನಲ್ಲಿ ಬರೆದುಕೊಂಡು ಹಾಡುವಾಗ  ಹೀಗಾಗಿರಬಹುದು.  ರೆಕಾರ್ಡಿಂಗ್ ಆದ ಮೇಲೆ ಯಾರೂ ಗಮನವಿಟ್ಟು ಆಲಿಸಿಲ್ಲವೋ ಅಥವಾ ಅಷ್ಟು ದೊಡ್ಡ ಕಲಾವಿದೆಗೆ ಹೇಗೆ ಹೇಳುವುದು ಎಂದು ಸುಮ್ಮನಾದರೋ ಗೊತ್ತಿಲ್ಲ. ಅಥವಾ ಹೂವ ಮುಡಿದು ಚೆಲುವೇ ತಾನೆಂದ ಹೆಣ್ಣಿಗೆ ಇದು ದೃಷ್ಟಿ ಬೊಟ್ಟಿನಂತಿರಲಿ ಅಂದುಕೊಂಡಿರಲೂಬಹುದು! ಒಲವೆ ಜೀವನ ಸಾಕ್ಷಾತ್ಕಾರ ಹಾಡಿನಲ್ಲೂ ಕೆಲವೆಡೆ ಮರಯದ ಎಂದು ಕೇಳಿಸುವುದನ್ನು ಅನೇಕರು ಗಮನಿಸಿರಬಹುದು.  ವೀರಕೇಸರಿ ಚಿತ್ರದ ಸ್ವಾಭಿಮಾನದ ನಲ್ಲೆ ಹಾಡಿನಲ್ಲಿ ಒಂದೆಡೆ ಘಂಟಸಾಲ ಅವರು ಏಕೆ ಸುಮ್ಮನೆ ಬದಲು ಏಕಿ ಸುಮ್ಮನೆ ಅಂದಿರುವುದೂ ಉಂಟು. ಆದರೆ ಕನ್ನಡ ನಾಡಿನಲ್ಲೇ ಹುಟ್ಟಿ ಬೆಳೆದವರೊಬ್ಬರು ಬೇಧ ತೋರದು ಎಂದು ಉಚ್ಚರಿಸಿರುವುದರ ಮುಂದೆ ಇವು ಏನೂ ಅಲ್ಲ!

ಈ ಹಾಡಿನ ಮಧ್ಯಂತರ ಸಂಗೀತ ಅಂದರೆ interludeಗಳು ಶಂಕರ್ ಜೈಕಿಶನ್ ಹಾಡುಗಳಲ್ಲಿದ್ದಂತೆ ಸುಲಭವಾಗಿ ನೆನಪಿಟ್ಟುಕೊಳ್ಳುವಂಥವೇನೂ ಅಲ್ಲ. ಆದರೆ ಚರಣದ ಮಧ್ಯದಲ್ಲಿ ಬರುವ bridge music ಹಾಡಿನ ಅವಿಭಾಜ್ಯ ಅಂಗವಾಗಿ ಹೋಗಿದೆ.  ಅದಿಲ್ಲದೆ ಹಾಡನ್ನು ನುಡಿಸಲೇ ಆಗುವುದಿಲ್ಲ!  ಗ್ರಾಮಫೋನ್ ತಟ್ಟೆಯ ಹಾಡಿನಲ್ಲಿ ಎರಡನೇ ಚರಣದಲ್ಲಿ ಈ bridge music ಮತ್ತು ಸಾಲುಗಳ ಪುನರಾವರ್ತನೆ ಇಲ್ಲ.  ಚಿತ್ರದಲ್ಲಿರುವ ಹಾಡಿನ ಎರಡನೇ ಚರಣಕ್ಕೆ bridge music ಬದಲಿಗೆ ಗೆಜ್ಜೆಯ ಸದ್ದು ಬಳಸಲಾಗಿದೆ.  ಅಲ್ಲದೆ ಒಂದು ಮತ್ತು ಮೂರನೆ ಚರಣದಲ್ಲಿ ಪುನರಾವರ್ತಿತವಾಗುವ ಸಾಲು ಗಮಕದೊಂದಿಗೆ ಕೊನೆಯಾದರೆ  ಎರಡನೆ ಚರಣದಲ್ಲಿ ಮೊದಲ ಸಲ ಗಮಕ ಇದ್ದು ಪುನರಾವರ್ತನೆ ಸರಳವಾಗಿ ಕೊನೆಗೊಳ್ಳುತ್ತದೆ.  ಹಾಡಿನ ಕೊನೆಯಲ್ಲಿ ಬರುವ ಸಾಮಗಪಮಪಾನೀದಾಪಮದನೀಪಾ ಎಂಬ ಆಲಾಪ ಬಲು ಚಂದ.

ಇಲ್ಲಿ ಹಾಡಿನ ಗ್ರಾಮಫೋನ್ ವರ್ಷನ್ ಆಲಿಸಬಹುದು.


ಇದು ಸಿನಿಮಾದಲ್ಲಿದ್ದ  ವರ್ಷನ್.


ಈ ಹಾಡಿಗೆ ಸಂಬಂಧಿಸಿದ  ಇನ್ನೊಂದು ಘಟನೆ ನನಗೆ ನೆನಪಿದೆ.  ನಮ್ಮ ಊರಿನ ಗುಂಡಿ ಲಕ್ಷ್ಮೀನಾರಾಯಣ ದೇವಸ್ಥಾನದ ದೀಪೋತ್ಸವದ ಸಂದರ್ಭದಲ್ಲಿ  ನಡೆಯುತ್ತಿದ್ದ ಅಷ್ಟಸೇವೆಗಳಲ್ಲಿ ಸಂಗೀತವೂ ಒಂದು. ಆ ವಿಭಾಗದ ಜವಾಬ್ದಾರಿಯನ್ನು ಹೆಚ್ಚಾಗಿ ನಿಭಾಯಿಸುತ್ತಿದ್ದುದು ಬತ್ರಬೈಲು ತಾಮ್ಹಣ್‌ಕರ್ ಕುಟುಂಬದ ಪ್ರಸಿದ್ಧ ಕವಿ ಮತ್ತು ಸಂಗೀತ ಕಲಾವಿದರಾಗಿ ಉಪಾಧ್ಯಾಯ ವೃತ್ತಿಯನ್ನೂ ಮಾಡುತ್ತಿದ್ದ ಬಿ.ರಾಮಚಂದ್ರ ಭಟ್ ಅರ್ಥಾತ್ ನಮ್ಮೆಲ್ಲರ ರಾಮಚಂದ್ರ ಮಾಸ್ಟ್ರು.  ಸಾಮಾನ್ಯವಾಗಿ ಅಷ್ಟಸೇವೆಯಲ್ಲಿ ದಾಸರ ಪದ ಅಥವಾ ಕೀರ್ತನೆಗಳನ್ನು ಹಾಡುವುದು ರೂಢಿಯಾದರೂ ಅವರು ಒಮ್ಮೊಮ್ಮೆ ಅರಳಿದ ನಗುಮೊಗದಾ ಸುಮ ಚಂದ ಮುಂತಾದ ತಮ್ಮ ಸ್ವಂತ ರಚನೆಗಳನ್ನೂ ಹಾಡುವುದಿತ್ತು. ಆದರೆ  1968ರಲ್ಲಿ ಅವರು ಹೂವು ಚೆಲುವೆಲ್ಲ ನಂದೆಂದಿತು ಹಾಡನ್ನು ತಮ್ಮ ಮಕ್ಕಳಿಂದ ದೇವರ ಮುಂದೆ ಅಷ್ಟಸೇವೆಯ ಭಾಗವಾಗಿ ಹಾಡಿಸಿದ್ದರು! ಇದು ಅನೇಕ ಸಂಪ್ರದಾಯಸ್ಥರ ಕಣ್ಣು ಕೆಂಪಗಾಗುವಂತೆ ಮಾಡಿತ್ತು.  ಆದರೆ  ತಾವು ಬೋಧಿಸುತ್ತಿದ್ದ ಶಾಲೆಯಲ್ಲಿ ಸಿನಿಮಾ ಹಾಡುಗಳಿಗೆ ಕಟ್ಟುನಿಟ್ಟಿನ ನಿಷೇಧ ಹೇರಿದ್ದ  ಅವರು ಓರ್ವ ಸಿನಿಮಾ ಕವಿಯ ರಚನೆಯನ್ನು ದೇವರ ಮುಂದೆ ಹಾಡಲು ಯೋಗ್ಯವೆಂದು ಭಾವಿಸಿದ್ದು ಆ ಗೀತೆಗೆ ಸಂದ ವಿಶೇಷ ಗೌರವವೇ ಸೈ.


ಸಮಾರಂಭವೊಂದರಲ್ಲಿ ನಾನು ನುಡಿಸಿದ ಈ ಹಾಡಿನ ವೀಡಿಯೊ sub titles ರೂಪದ ಸ್ವರಲಿಪಿ ಸಮೇತ ಇಲ್ಲಿದೆ. 









Sunday 29 September 2019

ಹೀಗೊಂದು ರಾಜಕುಮಾರ್ ಹುಡುಕಾಟ

ನಾನು ರೇಡಿಯೊ ಸಿಲೋನ್ ನಿಯಮಿತವಾಗಿ ಕೇಳುವುದು ಬಿಟ್ಟು ವರ್ಷಗಳೇ ಕಳೆದಿವೆ.  ಒಂದು ಕಾಲದಲ್ಲಿ ಕಮರ್ಷಿಯಲ್  ರೇಡಿಯೊ ಸ್ಟೇಷ‌ನ್‌ಗಳ ರಾಜನೆನಿಸಿಕೊಂಡಿದ್ದ ಈ ನಿಲಯ ಅಹೋಬನ್ ಎಂಬ ಬಂಗಾಲಿ ಭಾಷೆಯ ಏಕೈಕ ಪ್ರಾಯೋಜಿತ ಕ್ರೈಸ್ತ ಧಾರ್ಮಿಕ ಕಾರ್ಯಕ್ರಮದ ಆಧಾರದಿಂದ ಈಗಲೂ  ಬೆಳಗ್ಗೆ 6ರಿಂದ 8 ಗಂಟೆ ವರೆಗೆ ದಿನಕ್ಕೆ ಎರಡು ತಾಸು ಹಿಂದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ತಾಂತ್ರಿಕ ಕಾರಣಗಳಿಂದಾಗಿ ಮಧ್ಯೆ 6-30ರಿಂದ 7-30ರ ವರೆಗೆ  25 ಮೀಟರ್‌ 11905 KHz ಶಾರ್ಟ್ ವೇವ್ ಪ್ರಸಾರ ಸ್ಥಗಿತಗೊಳ್ಳುತ್ತದೆ.   ಆದರೆ ಈ ಸಮಯದಲ್ಲೂ www.slbc.lk ಜಾಲತಾಣದ ವೆಬ್ ಸ್ಟ್ರೀಮಿಂಗ್ ಚಾಲ್ತಿಯಲ್ಲಿರುತ್ತದೆ.  ಅದರ ಅನೇಕ ಆಕರ್ಷಕ ಕಾರ್ಯಕ್ರಮಗಳು ನಿಂತು ಹೋಗಿದ್ದರೂ ಬೆಳಗ್ಗೆ 7-30ರಿಂದ 8ರ ವರೆಗೆ ಪ್ರಸಾರವಾಗುವ ಪುರಾನೀ ಫಿಲ್ಮೋಂ ಕಾ ಸಂಗೀತ್  ಈಗಲೂ ಇದೆ.  ಅದರ ಕೊನೆಯಲ್ಲಿ  ಕೆ.ಎಲ್.ಸೈಗಲ್ ಹಾಡು ಕೇಳಿಸುವ ಸಂಪ್ರದಾಯವೂ ಮುಂದುವರಿದಿದೆ.

ಮೊನ್ನೆ ಏಕೋ ಆ ನಿಲಯವನ್ನು ಮತ್ತೆ ಕೇಳುವ ಮನಸ್ಸಾಗಿ ಅಂತರ್ಜಾಲದ ಮೂಲಕ ಟ್ಯೂನ್ ಮಾಡಿಕೊಂಡಿದ್ದೆ.  ಅಂದು ಬುಧವಾರವಾಗಿದ್ದು ಆ ದಿನ ಅಲ್ಲಿಯ ಉದ್ಘೋಷಕಿ ಜ್ಯೋತಿ ಪರ್‌ಮಾರ್(ಈಕೆ ಸಿಲೋನಿನ ಉತ್ತುಂಗ ಕಾಲದ ಅನೌಂಸರ್ ದಲವೀರ್ ಸಿಂಗ್ ಪರಮಾರ್ ಅವರ ಪುತ್ರಿ) ಪುರಾನೀ ಫಿಲ್ಮೋಂ ಕಾ ಸಂಗೀತ್ ಕಾರ್ಯಕ್ರಮದಲ್ಲಿ ಕಮ್ ಸುನೇ ಮತ್ತು ಅನ್ ಸುನೇ ಹಾಡುಗಳನ್ನು ಕೇಳಿಸುತ್ತಾರೆ. ‘ಮೊದಲಿಗೆ ಸುಬ್ಬರಾಮನ್ ಮತ್ತು ವಿಶ್ವನಾಥನ್ ಸಂಗೀತ ನಿರ್ದೇಶನದಲ್ಲಿ ಚಂಡಿರಾಣಿ ಚಿತ್ರಕ್ಕಾಗಿ ಭಾನುಮತಿ ಹಾಡಿರುವ ಗೀತೆ ಆಲಿಸಿ’ ಎಂದು ಆಕೆ ಹೇಳುತ್ತಲೇ ನನ್ನ ಕಿವಿ ನೆಟ್ಟಗಾಯಿತು. ಚಂಡಿರಾಣಿ ಎಂಬ ತೆಲುಗು ಚಿತ್ರದ ಜಾಹೀರಾತುಗಳನ್ನು ಹಳೆ ಚಂದಮಾಮಗಳಲ್ಲಿ ನೋಡಿದ್ದೆ.  ಆದರೆ ಆ ಚಿತ್ರ ಹಿಂದಿಯಲ್ಲೂ ಇರುವುದು ಗೊತ್ತಿರಲಿಲ್ಲ.  ಬಹುಶಃ ಹಿಂದಿಗೆ ಡಬ್ ಆಗಿರಬಹುದು ಎಂದೆಣಿಸಿ ಗೂಗಲೇಶ್ವರನ ಮೊರೆ ಹೋದಾಗ ಅದು 1953ರಲ್ಲಿ ಏಕ ಕಾಲದಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬೇರೆ ಬೇರೆಯಾಗಿ ತಯಾರಾದದ್ದು, ತಮಿಳು ತೆಲುಗಲ್ಲಿ ರೇಲಂಗಿ ವಹಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಆಗಾ ನಿರ್ವಹಿಸಿದ್ದು ಬಿಟ್ಟರೆ ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಭಾನುಮತಿ ಮುಂತಾದವರ  ತಾರಾಗಣವೇ ಎಲ್ಲ ಭಾಷೆಗಳಲ್ಲಿ  ಇದ್ದದ್ದು, ಸಂಗೀತ ನಿರ್ದೇಶಕ ಸುಬ್ಬರಾಮನ್ ಅರ್ಧ ಚಿತ್ರ ಮುಗಿಯುವಾಗ ನಿಧನರಾಗಿ ಅವರ ಶಿಷ್ಯ ಎಂ.ಎಸ್. ವಿಶ್ವನಾಥನ್  ಆ ಕೆಲಸ ಮುಂದುವರಿಸಿದ್ದು, ಭಾನುಮತಿ ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿಯಾಗಿ ಇತಿಹಾಸ ರಚಿಸಿದ್ದು, ಮೂರು ಭಾಷೆಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ದಿನ  ಬಿಡುಗಡೆ ಆದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ಮುಂತಾದ ಅನೇಕ ವಿಷಯಗಳು ತಿಳಿದವು. ಹಿಂದಿ ಆವೃತ್ತಿಯಲ್ಲಿ ಎನ್.ಟಿ. ರಾಮರಾವ್ ಸ್ಥಾನದಲ್ಲಿ ದಿಲೀಪ್ ಕುಮಾರ್ ನಟಿಸಿದ್ದರು ಎಂಬ ತಪ್ಪು ಮಾಹಿತಿಯೂ ಕೆಲವೆಡೆ ಇತ್ತು! ಹಿಂದೂ ಪತ್ರಿಕೆಯಲ್ಲಿ ಈ ಚಿತ್ರದ ಬಗ್ಗೆ ಪ್ರಕಟವಾಗಿದ್ದ ಒಂದು ವಿಸ್ತೃತ ಲೇಖನವೂ ದೊರೆಯಿತು.  ಸಂಗೀತ ನಿರ್ದೇಶಕ ಸುಬ್ಬರಾಮನ್ ದಕ್ಷಿಣ ಭಾರತದ ಸಿನಿಮಾ ಸಂಗೀತ ಕ್ಷೇತ್ರದ ಭೀಷ್ಮ ಪಿತಾಮಹರಂತೆ ಇದ್ದವರು.  ವಿಶ್ವನಾಥನ್ ಮತ್ತು ನಂತರ ಅವರೊಡನೆ ಸೇರಿಕೊಂಡ ರಾಮಮೂರ್ತಿ, ಟಿ.ಜಿ. ಲಿಂಗಪ್ಪ, ಜಿ.ಕೆ. ವೆಂಕಟೇಶ್ ಮುಂತಾದ ಖ್ಯಾತನಾಮರೆಲ್ಲ ಅವರ ಗರಡಿಯಲ್ಲೇ ಪಳಗಿದವರು. ಚಂಡಿರಾಣಿಯಂತೆ ದೇವದಾಸು ಕೂಡ ಅವರು ಅರ್ಧ ಮುಗಿಸಿ ವಿಶ್ವನಾಥನ್  ಪೂರ್ತಿಗೊಳಿಸಿದ ಚಿತ್ರ.



ಹೀಗೆ ಹಿಂದಿ ಚಂಡಿರಾಣಿಯ ಹಾಡನ್ನು ರೇಡಿಯೊ ಸಿಲೋನಿನಲ್ಲಿ ಕೇಳಿ ಆ ಚಿತ್ರದ ಚರಿತ್ರೆಯನ್ನೂ ಒಂದಷ್ಟು ಅರಿತಮೇಲೆ  ಆ ಚಿತ್ರವನ್ನು ವೀಕ್ಷಿಸಬೇಕೆಂಬ ಆಸೆ ಉತ್ಕಟವಾಯಿತು.  ಈಗೇನೂ ಇಂಥ ಚಿತ್ರಗಳು ಥಿಯೇಟರುಗಳಲ್ಲಿ ಯಾವಾಗ ಮಾರ್ನಿಂಗ್ ಶೋಗೆ ಬರುತ್ತವೆ ಅಥವಾ ಟಿ.ವಿ.ಯಲ್ಲಿ ಪ್ರಸಾರವಾಗುತ್ತವೆ ಎಂದು ಕಾಯಬೇಕಾಗಿಲ್ಲವಲ್ಲ. ನೇರವಾಗಿ ಯೂಟ್ಯೂಬ್‌ಗೆ ಮೊರೆ ಹೋದೆ.  ಹಿಂದಿ ಮತ್ತು ತಮಿಳು ವರ್ಶನ್‌ಗಳು ಇಲ್ಲದಿದ್ದರೂ ತೆಲುಗಿನ ಉತ್ತಮ ಪ್ರತಿ ಲಭ್ಯವಿತ್ತು. ವೀಕ್ಷಿಸಲು ಆರಂಭಿಸಿ ಟೈಟಲ್‌ಗಳು ತೆರೆಯಮೇಲೆ ಮೂಡುತ್ತಾ ಹೋಗುವಾಗ ರಾಜ್‌ಕುಮಾರ್ ಎಂಬ ಹೆಸರು ಕಂಡಂತಾಯಿತು.  ರೀವೈಂಡ್ ಮಾಡಿ ಮತ್ತೆ ನೋಡಿದೆ.  ಹೌದು, ರಾಜ್‌ಕುಮಾರ್ ಎಂಬ ಹೆಸರೇ!


ನನ್ನ ಆಶ್ಚರ್ಯಕ್ಕೆ ಪಾರವೇ ಇಲ್ಲವಾಯಿತು.  ಮುತ್ತುರಾಜ್ ಆಗಿದ್ದವರು ರಾಜ್‌ಕುಮಾರ್ ಎಂದು ಹೆಚ್.ಎಲ್.ಎನ್. ಸಿಂಹ ಅವರಿಂದ ಹೊಸ ಹೆಸರು ಹೊಂದಿ 1954ರ ಬೇಡರ ಕಣ್ಣಪ್ಪ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದು ಗೊತ್ತಿತ್ತು.  ಬೇಡರ ಕಣ್ಣಪ್ಪ ಚಿತ್ರೀಕರಣದ ಮಧ್ಯೆ ಬಿಡುವು ಸಿಕ್ಕಾಗ ಅವರೇ ಈ ಚಿತ್ರದಲ್ಲಿ ಚಿಕ್ಕ ಪಾತ್ರವನ್ನೇನಾದರೂ ಮಾಡಿರಬಹುದೇ ಎಂಬ ಸಂದೇಹ ನನ್ನನ್ನು ಕಾಡತೊಡಗಿತು. ಚಿತ್ರವನ್ನು ವೀಕ್ಷಿಸುತ್ತಾ ಹೋದಾಗ ವೀರಸಿಂಹ ಎಂಬ ರಾಜನ ಪಾತ್ರದಲ್ಲಿ ರಾಜ್ ಹೋಲಿಕೆಯೂ ಕಂಡಿತು!  ಇಂಥ ಸಂದರ್ಭಗಳಲ್ಲಿ ನನಗೆ ನೆರವಾಗುವವರು ಫೇಸ್ ಬುಕ್ ಗೆಳೆಯ ಸುದರ್ಶನ ರೆಡ್ಡಿ.  ಕೂಡಲೇ ಫೋಟೊಗಳನ್ನೊಳಗೊಂಡ ಪೋಸ್ಟ್ ಒಂದರ ಮೂಲಕ ಈ ವಿಚಾರವನ್ನು ಅವರ ಮುಂದಿಟ್ಟೆ.  ತಕ್ಷಣ ಸ್ಪಂದಿಸಿದ ಅವರು ಅದು ನಮ್ಮ ರಾಜ್‌ಕುಮಾರ್ ಆಗಿರಲು ಸಾಧ್ಯವಿಲ್ಲ, ಅದೇ ಹೆಸರಿನ ಬೇರೆ ನಟ ಆಗಿರಬಹುದು ಅಂದರು.  ಆದರೆ ಮೊದಲೇ ಆ ಹೆಸರಿನ ನಟ ಮದರಾಸು ಕೇಂದ್ರವಾದ ದಕ್ಷಿಣ ಚಿತ್ರರಂಗದಲ್ಲಿ ಇದ್ದಿದ್ದರೆ ಸಿಂಹ ಅವರು ಆ ಹೆಸರು ಸೂಚಿಸುತ್ತಿರಲಿಲ್ಲ ಎಂದು ನನ್ನ ತರ್ಕವಾಗಿತ್ತು. ಇನ್ನು ಕೆಲವರು 1954ರಲ್ಲಿ ಅವರಿಗೆ ಆ ಹೆಸರು ಬಂದದ್ದರಿಂದ ಅವರಾಗಿರಲು ಸಾಧ್ಯವಿಲ್ಲ ಅಂದರು.  ಆದರೆ ಬೇಡರ ಕಣ್ಣಪ್ಪ 1954ರಲ್ಲಿ ಬಿಡುಗಡೆಯಾದರೂ ಚಿತ್ರೀಕರಣ ಸಾಕಷ್ಟು ಮುಂಚಿತವಾಗಿ ಆರಂಭವಾಗಿ ಅಷ್ಟರೊಳಗೆ ಅವರಿಗೆ ನವನಾಮಕರಣವಾಗಿರುವ ಸಾಧ್ಯತೆ ಇದೆಯೆಂದು ನನ್ನ ಅನಿಸಿಕೆಯಾಗಿತ್ತು.

ಅಷ್ಟರಲ್ಲಿ ಸುದರ್ಶನ ರೆಡ್ಡಿ ತಮ್ಮ ತೆಲುಗು ಗೆಳೆಯರ ಬಳಗದಲ್ಲಿ ವಿಚಾರಿಸಿ ರಾಜನ ಪಾತ್ರ ವಹಿಸಿದ ನಟನ ಹೆಸರು ಅಮರನಾಥ್ ಎಂಬ ಮಾಹಿತಿ ನೀಡಿದರು.  ನಾನೂ ಅಷ್ಟರಲ್ಲೇ ಗೂಗಲೇಶ್ವರನ ಸಹಾಯದಿಂದ ಈ ಮಾಹಿತಿ ಪಡೆದಿದ್ದೆ.  ಆದರೆ  ಗೂಗಲ್/ವಿಕಿಪೀಡಿಯಾಗಳಲ್ಲಿ ತಪ್ಪುಗಳಿರುವುದು ಸಾಮಾನ್ಯ ಎಂದು ಗೊತ್ತಿರುವುದರಿಂದ ಅದಕ್ಕೆ ಮಹತ್ವ ಕೊಟ್ಟಿರಲಿಲ್ಲ.  ಆದರೆ ಚಿತ್ರದ ಆ ಭಾಗವನ್ನು ಮತ್ತೆ ಮತ್ತೆ ನೋಡಿದಾಗ ಕೆಲವು ಕೋನಗಳಲ್ಲಿ ರಾಜ್ ಹೋಲಿಕೆ ಇದ್ದರೂ ಅದು ಅವರಲ್ಲ ಎಂಬ ಅಂಶ ನನಗೂ ಖಚಿತವಾಯಿತು. ಹಾಗಿದ್ದರೆ ರಾಜ್‌ಕುಮಾರ್ ಕಾಣಿಸಿಕೊಂಡದ್ದು ಯಾವ ಪಾತ್ರದಲ್ಲಿ? ನಾನು ಮತ್ತು ಸುದರ್ಶನ ರೆಡ್ಡಿ ಚಿತ್ರವನ್ನು ಎಷ್ಟು ಸಲ ನೋಡಿದರೂ ರಾಜ್‌ಕುಮಾರ್ ಮಾತ್ರ ಎಲ್ಲೂ ಕಾಣಿಸಲಿಲ್ಲ.

ಈ ಮಧ್ಯೆ ಚಿತ್ರರಂಗದ ಹಿರಿಯರಾದ ಎಸ್.ಕೆ. ಭಗವಾನ್ ಅಥವಾ ಎಂ.ಶಿವರಾಂ ಅವರಿಗೆ ಈ ಬಗ್ಗೆ ಏನಾದರೂ ಗೊತ್ತಿರಬಹುದು ಎಂದೆನಿಸಿ ಈ ವಿಚಾರವನ್ನು ಎನ್.ಎಸ್. ಶ್ರೀಧರಮೂರ್ತಿಯವರ ಮುಂದಿಟ್ಟೆ. ಆ  ಮಹನೀಯರು ರಾಜ್ ಚಂಡಿರಾಣಿ ಚಿತ್ರದಲ್ಲಿ ಅಭಿನಯಿಸಿರುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆದರು ಎಂದ ಶ್ರೀಧರಮೂರ್ತಿ ರಾಜ್ ಅವರ ಜೀವನ ಚರಿತ್ರೆ ಬರೆದ ಪ್ರಹ್ಲಾದ ರಾವ್ ಈ ಕುರಿತು  ದಾಖಲೆಗಳನ್ನು ಹುಡುಕಿ ತಿಳಿಸುವುದಾಗಿ ಹೇಳಿದ್ದಾರೆ ಎಂಬ ಸುದ್ದಿ ನೀಡಿದರು.



ನಮ್ಮ ರಾಜ್‌ಕುಮಾರ್ ಅಲ್ಲದಿದ್ದರೆ ಆ ಹೆಸರಿನ ಬೇರೆ ನಟ ಇರಬೇಕು.  ಯಾರಾತ ಎಂದು ಹುಡುಕುವ ಸರದಿ ಈಗ ನಮ್ಮದಾಯಿತು. ನಾನು ಛಲ ಬಿಡದೆ ಅಂತರ್ಜಾಲಕ್ಕೆ ಪಾತಾಳಗರಡಿ ಹಾಕಿ ಇನ್ನಷ್ಟು ಆಳದಲ್ಲಿ ಹುಡುಕಿದಾಗ ಚಂಡಿರಾಣಿ ಸಿನಿಮಾದ ಹಾಡುಗಳ ಪುಸ್ತಕವೊಂದು ದೊರಕಿತು.  ಸುದೈವಕ್ಕೆ ಅದರಲ್ಲಿ ನಟರ ಹೆಸರು ಮತ್ತು ಅವರು ವಹಿಸಿದ ಪಾತ್ರದ ಹೆಸರುಗಳೂ ಇದ್ದವು.  ಆದರೆ ರಾಜ್‌ಕುಮಾರ್ ಹೆಸರಿನ ನಟ ನಿರ್ವಹಿಸಿದ ಪಾತ್ರದ ‘ದೊ’ ಅಕ್ಷರ ಮಾತ್ರ ಕಾಣಿಸುತ್ತಿದ್ದು ಅಳಿದ ಭಾಗ ಹರಿದು ಹೋಗಿತ್ತು!  ಇದನ್ನು ಸುದರ್ಶನ ರೆಡ್ಡಿ ಅವರ ಗಮನಕ್ಕೆ ತಂದಾಗ ಇದು ದೊರ ಅಥವಾ ದೊಂಗ ಇರುವ ಸಾಧ್ಯತೆ ಇದ್ದು ಅಲ್ಲಿ ಒಂದೇ ಅಕ್ಷರದ ಜಾಗ ಹರಿದು ಹೋದದ್ದರಿಂದ ಅದು ದೊರ ಆಗಿರಬೇಕು ಎಂಬ ತೀರ್ಮಾನಕ್ಕೆ ಬಂದರು.  ಈಗ ಚಂಡಿರಾಣಿ ಸಿನಿಮಾದಲ್ಲಿ ದೊರ ಅಂದರೆ ಯಾರು ಎಂದು ಹುಡುಕುವ ಹೊಸ ಸವಾಲು  ಎದುರಾಯಿತು.  ಇನ್ಯಾರಾದರೂ ಆಗಿದ್ದರೆ ಹೋಗಲಿ ಎಂದು ಅಷ್ಟಕ್ಕೆ ಬಿಟ್ಟು ಬಿಡುತ್ತಿದ್ದರು. ಆದರೆ ಕಣ್ಣಲ್ಲಿ ಎಣ್ಣೆ ಹಾಕಿ ಮತ್ತೆ ಚಿತ್ರವನ್ನು ವೀಕ್ಷಿಸಿದ ಸುದರ್ಶನ ರೆಡ್ಡಿ ಚಂಡಿ ಪಾತ್ರದೊಡನೆ ಕತ್ತಿ ಕಾಳಗ ಮಾಡುವ ಖಳನನ್ನು ಆತನ ಸಹಚರರು ಒಂದೇ ಒಂದು ಸನ್ನಿವೇಶದಲ್ಲಿ ದೊರ ಎಂದು ಸಂಬೋಧಿಸುವುದನ್ನು ಕಂಡು ಹಿಡಿದೇ ಬಿಟ್ಟರು! ಅಲ್ಲಿಗೆ ಚಂಡಿರಾಣಿಯಲ್ಲಿ ನಟಿಸಿದ ರಾಜ್‌ಕುಮಾರ್ ರಹಸ್ಯ ಬಯಲಾದಂತಾಯಿತು. ಸದ್ಯ ಅದು ನಮ್ಮ ರಾಜ್‌ಕುಮಾರ್ ಅಲ್ಲ ಎಂದು ಮೀನಾ ಭಾರದ್ವಾಜ್ ಸಹಿತ ಅನೇಕ ರಾಜ್ ಅಭಿಮಾನಿಗಳಿಗೆ ಸಮಾಧಾನವೂ ಆಯಿತು. ಪುರುಷೋತ್ತಮನಾದರೂ ಇಷ್ಟು ಸೂಕ್ಷ್ಮವಾಗಿ ಪತ್ತೇದಾರಿ ನಡೆಸುತ್ತಿದ್ದನೋ ಇಲ್ಲವೋ ಎಂದು ನನಗೆ ಅನ್ನಿಸಿತು.



ಇಷ್ಟಕ್ಕೇ ಸುಮ್ಮನಿರದೆ ಆ ನಟ ಇನ್ಯಾವುದಾದರೂ ಚಿತ್ರದಲ್ಲಿ ನಟಿಸಿದ್ದಾನೆಯೇ ಎಂದು ತಿಳಿಯಬೇಕೆಂದು ನನಗನ್ನಿಸಿತು.  ಸ್ವಲ್ಪ  ಹುಡುಕಾಟ ನಡೆಸಿದಾಗ ಆಡಪಡುಚು(ಕನ್ನಡದ ಒಂದೇ ಬಳ್ಳಿಯ ಹೂಗಳು) ಚಿತ್ರದಲ್ಲಿ  ಆತ ಇರುವುದು ತಿಳಿಯಿತು.  ಬೇರೆ ಚಿತ್ರಗಳಲ್ಲೂ  ನಟಿಸಿರಬಹುದು. ಆಗಲೇ ಹಿಂದಿಯಲ್ಲೊಬ್ಬ ರಾಜ್‌ಕುಮಾರ್ ಇದ್ದರೂ ಅದೇನೋ ದೂರದ ಸಂಗತಿ.  ಆದರೆ ದಕ್ಷಿಣ ಭಾರತದಲ್ಲೇ ಆ ಹೆಸರಿನ ನಟ ಮೊದಲೇ ಇದ್ದುದು ಸಿಂಹ ಅವರಿಗಾಗಲಿ ಎ.ವಿ.ಎಂ.ನ ಮೇಯಪ್ಪನ್ ಅವರಿಗಾಗಲಿ ಏಕೆ ತಿಳಿಯದೆ ಹೋಯಿತು ಎಂಬುದು ಉತ್ತರ ಸಿಗದ ಪ್ರಶ್ನೆ. ಕಾಳಹಸ್ತಿ ಮಹಾತ್ಮ್ಯಂ ತೆರೆ ಕಂಡಾಗ ರಾಜ್‌ಕುಮಾರ್ ಎಂಬ ಹೆಸರು ನೋಡಿ  ಕೆಲವರಿಗಾದರೂ(ಕನಿಷ್ಠ ಆ ನಟನಿಗಾದರೂ!) ಖಂಡಿತ ಗೊಂದಲ ಉಂಟಾಗಿರಬಹುದು.

 




Sunday 22 September 2019

ಪಿ.ಬಿ.ಎಸ್ ಚಿತ್ರ ಸಂಪುಟ


ಮೊದಲೆಲ್ಲ ಗಾಯಕ ಗಾಯಕಿಯರ ಧ್ವನಿಯ ಪರಿಚಯ ನಮಗಿರುತ್ತಿತ್ತೇ ಹೊರತು ಅವರು ನೋಡಲು ಹೇಗಿರುತ್ತಾರೆಂದು ನಾವು ಕಲ್ಪನೆಯಷ್ಟೇ ಮಾಡಿಕೊಳ್ಳಬೇಕಿತ್ತು. ಪತ್ರಿಕೆಗಳಲ್ಲೂ ತೆರೆಯ ಹಿಂದಿನವರ ಚಿತ್ರ ಕಾಣಸಿಗುತ್ತಿದ್ದುದು ಇಲ್ಲವೆನ್ನುವಷ್ಟು ಕಮ್ಮಿ. ನಾನು ಮೊದಲು ಪಿ.ಬಿ.ಶ್ರೀನಿವಾಸ್ ಅವರ ಚಿತ್ರ ನೋಡಿದ್ದು ಸುಧಾ ಪತ್ರಿಕೆ ಆರಂಭವಾದ ವರ್ಷ ಅದರ ಹಿಂಬದಿಯ ರಕ್ಷಾಪುಟದ ಒಳಭಾಗದಲ್ಲಿ.  ಆಗ ಖ್ಯಾತನಾಮರ ಪೂರ್ಣ ಪುಟದ ಚಿತ್ರವನ್ನು ಈ ರೀತಿ ಪ್ರಕಟಿಸಿ ಅವರ ಬಗ್ಗೆ ವಿವರಗಳನ್ನು ನೀಡುವ ಪರಿಪಾಠವನ್ನು ಸುಧಾ ಪಾಲಿಸಿಕೊಂಡು ಬಂದಿತ್ತು.   ಟಿ.ವಿ. ಯುಗ ಆರಂಭವಾದ ಮೇಲೆ ನೇಪಥ್ಯದಲ್ಲಿದ್ದವರೆಲ್ಲ ನಮ್ಮ ಮನೆ ಹಜಾರಕ್ಕೇ ಬರುವಂತಾಯಿತು.  ಇತರ ಕಲಾವಿದರ ಜೊತೆ ಪಿ.ಬಿ.ಎಸ್ ಕೂಡ ಕಿರುತೆರೆಯಲ್ಲಿ ಕಾಣಿಸಿಕೊಂಡರು. ಅವರ ಬಗ್ಗೆ ಚಂದನ ವಾಹಿನಿಯಲ್ಲಿ ಒಂದು ಧಾರಾವಾಹಿ ಕೂಡ ಪ್ರಸಾರವಾಯಿತು. ಈಗ ಅಂತರ್ಜಾಲದಲ್ಲಿ, ಪತ್ರಿಕೆಗಳಲ್ಲಿ ಅವರ ಚಿತ್ರಗಳು ಸಿಗುತ್ತವೆ. ಆದರೆ ಅಲ್ಲೆಲ್ಲ ನಮಗೆ ಕಾಣಿಸುವುದು ಜರಿ ರುಮಾಲು ಧರಿಸಿ ಬಣ್ಣದ ಶಾಲು ಹೊದ್ದ ಪಿ.ಬಿ.ಎಸ್  ರೂಪ ಮಾತ್ರ.  ತಮ್ಮ ವೃತ್ತಿಜೀವನದ ವಿವಿಧ ಘಟ್ಟಗಳಲ್ಲಿ ಅವರು ಹೇಗಿದ್ದರೆಂದು ಬಹಳ ಮಂದಿಗೆ ಗೊತ್ತಿಲ್ಲ. ನನ್ನ ಸಂಗ್ರಹದಲ್ಲಿರುವ ಅಂಥ ಕೆಲವು ಚಿತ್ರಗಳು ಇಲ್ಲಿವೆ.

ಇದು ಪಿ.ಬಿ.ಎಸ್ ಅವರ ಹದಿಹರೆಯದ ಫೋಟೊ ಆಗಿರಬಹುದು.  ಯಾವುದೋ ಭಜನೆ ಹಾಡುತ್ತಿದ್ದಂತಿದೆ.

  

ಇದು ಅವರ ಯೌವನ ಕಾಲದ ಫೋಟೊ.  ಪದವೀಧರರಾದ ಕಾಲದ್ದಿರಬಹುದು.

  

ರಘುನಾಥ ಪಾಣಿಗ್ರಾಹಿ ಮತ್ತಿತರರೊಂದಿಗೆ ರೆಕಾರ್ಡಿಂಗ್

  

ಪಿ.ಬಿ.ಎಸ್ ತೂಗುದೀಪ, ಅರಶಿನ ಕುಂಕುಮ ಮತ್ತು ಭಾಗ್ಯಜ್ಯೋತಿ ಚಿತ್ರಗಳಲ್ಲಿ ಕಾಣಿಸಿಕೊಂಡದ್ದು ಎಲ್ಲರೂ ಬಲ್ಲ ವಿಚಾರ. ಅದಕ್ಕೂ ಮೊದಲು 1959ರ ಜಯಭೇರಿ ತೆಲುಗು ಚಿತ್ರದಲ್ಲಿ ಅವರು ಮದಿ ಶಾರದಾ ದೇವಿ ಹಾಡಿನಲ್ಲಿ ವೀಣೆ ನುಡಿಸಿ ಹಾಡುವ ಗಾಯಕನಾಗಿ ಅಭಿನಯಿಸಿದ್ದರು.



ತಮ್ಮ ಮನೆಯೆದುರು ಕಾರಿನ ಬಳಿ

  

ಲತಾ ಮಂಗೇಶ್ಕರ್ ಮತ್ತು ಸಂಗೀತ ನಿರ್ದೇಶಕ ಚಿತ್ರಗುಪ್ತ ಅವರೊಂದಿಗೆ


ಸಂಗೀತ ನಿರ್ದೇಶಕ ಚಿತ್ರಗುಪ್ತ ಅವರು ಮೈ ಭೀ ಲಡಕೀ ಹೂಂ ಚಿತ್ರದಲ್ಲಿ ಪಿ.ಬಿ.ಎಸ್ ಅವರಿಗೆ ಲತಾ ಮಂಗೇಶ್ಕರ್ ಜೊತೆಗೆ  ಚಂದಾ ಸೆ ಹೋಗಾ ವೊ ಪ್ಯಾರಾ ಹಾಡುವ ಅವಕಾಶ ನೀಡಿದಾಗ ಸ್ಥಾಪಿತ ಹಿಂದಿ ಗಾಯಕರು "ಒಬ್ಬ ಮದರಾಸಿಯಿಂದ ಹಾಡಿಸಿದರಲ್ಲ.  ನಾವಿರಲಿಲ್ಲವೇ" ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದರಂತೆ. ಆ ಕಾಲದಲ್ಲಿ ದಕ್ಷಿಣದವರ ಬಗ್ಗೆ ಹಿಂದಿ ವಲಯದಲ್ಲಿ ತುಂಬಾ ಅಸಡ್ಡೆ ಇತ್ತು. ಅವರ ಪ್ರತಿಭೆಯ ಅರಿವಿದ್ದ ಓರ್ವರು "ಶ್ರೀನಿವಾಸ್ , ಎಲ್ಲ ಕಡೆ ಇರುವಂತೆ ಹಿಂದಿ ಚಿತ್ರರಂಗದಲ್ಲೂ ಬಹಳ ರಾಜಕೀಯ ಇದೆ. ನನಗೆ ನಿಮ್ಮ ಸಾಮರ್ಥ್ಯ ಗೊತ್ತು.  ಆದರೇನು ಮಾಡೋಣ. ನೀವು ಪಂಜಾಬ್, ಬಂಗಾಳ ಅಥವಾ ಉತ್ತರ ಪ್ರದೇಶದಲ್ಲಿ ಹುಟ್ಟಲಿಲ್ಲವಲ್ಲ. ಅಲ್ಲಿಯವರು ಓರ್ವ ‘ಮದರಾಸೀ’ಯನ್ನು ಎಂದೂ ಒಪ್ಪಿಕೊಳ್ಳಲಾರರು" ಅಂದಿದ್ದರಂತೆ. ಹೀಗಾಗಿ ಪಿ.ಬಿ.ಎಸ್ ಅವರು ದಕ್ಷಿಣದಲ್ಲಿ ಅದ್ವಿತೀಯರಾಗಿ ಮೆರೆದರೂ ಹಿಂದಿಯ ಮಟ್ಟಿಗೆ ಡಬ್ ಆದ ಮತ್ತು ಕೆಲ ಲೊ ಬಜಟ್ ಚಿತ್ರಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಬೇಕಾಯಿತು.
 
ಘಂಟಸಾಲ ಅವರೊಂದಿಗೆ ಸಮಾಲೋಚನೆ.

  


ವೇದಿಕೆಯಲ್ಲಿ ನೆಲದ ಮೇಲೆ ಕೂತು ಹಾಡು.
  

ಎಸ್. ಜಾನಕಿ ಅವರೊಂದಿಗೆ ವೇದಿಕೆ ಹಂಚಿಕೊಂಡಾಗ.

  

ತಮಿಳಿನ ಟಿ. ಎಂ. ಸೌಂದರರಾಜನ್ ಅವರೊಂದಿಗೆ. ಇವರಿಬ್ಬರು ಹಾಡಿದ ಪಡಿತ್ತಾಲ ಮಟ್ಟುಂ ಪೋದುಮಾ ಚಿತ್ರದ ಪೊಣ್ ಒಂಡ್ರು ಕಂಡೇನ್ ಹಾಡು ಬಲು ಪ್ರಸಿದ್ಧ. ತಮಿಳಲ್ಲಿ ಇವರಿಬ್ಬರ ಅನೇಕ ಹಾಡುಗಳಿದ್ದು ಅತ್ತಿ ಕಾಯ್ ಕಾಯ್ ಕಾಯ್  ಎಂಬ ಭಲೇ ಪಾಂಡ್ಯನ್ ಚಿತ್ರದ ಕ್ವಾಡ್ರುಪ್ಲೆಟ್ ಹಾಡಲ್ಲಿ ಇವರ ಜೊತೆಗೆ ಪಿ.ಸುಶೀಲಾ ಮತ್ತು ಜಮುನಾರಾಣಿ ಧ್ವನಿಗಳಿವೆ.


ವಿಜಯ ಭಾಸ್ಕರ್ ಜೊತೆ ತಬ್ಲಾ ಮೇಲೆ ಕೈ ಆಡಿಸುತ್ತಾ! ರಫಿ ಅವರದ್ದೂ ಇಂಥದೇ ಫೋಟೊ ಇರುವುದು ಕಾಕತಾಳೀಯವಾಗಿರಬಹುದು.



ಧೋತಿ ಧರಿಸಿ ಟಿ.ಎಂ. ಸೌಂದರರಾಜನ್, ಎಸ್.ಪಿ. ಬಿ, ವಿಜಯಭಾಸ್ಕರ್ ಮುಂತಾದವರೊಂದಿಗೆ.

  

ರಾಜ್ ಅವರ ಜೊತೆ  P.B. Srinivas Sings for Raj Kumar ಧ್ವನಿಮುದ್ರಿಕೆಯೊಂದಿಗೆ. ಇಲ್ಲಿ ರಾಜ್ ಅವರು ಕುಲಗೌರವ ಚಿತ್ರದ ಮೇಕಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

  

ಕೋರಸ್ ಕಲಾವಿದರೊಂದಿಗೆ ವಿಜಯ ಭಾಸ್ಕರ್ ಧ್ವನಿಮುದ್ರಣದಲ್ಲಿ.

  

ಎಸ್.ಪಿ.ಬಿ ಮತ್ತು ಘಂಟಸಾಲ ಅವರೊಂದಿಗೆ.

  

ವಿಜಯಭಾಸ್ಕರ್ ನಿರ್ದೇಶನದಲ್ಲಿ ಪಿ.ಸುಶಿಲಾ ಜೊತೆ ಯುಗಳ ಗೀತೆ ರೆಕಾರ್ಡಿಂಗ್.

  

ವಿಜಯಭಾಸ್ಕರ್ ಸಾರಥ್ಯದ ಸ್ಟೇಜ್ ಕಾರ್ಯಕ್ರಮದಲ್ಲಿ.

  

ಬಿ.ಕೆ. ಸುಮಿತ್ರಾ ಅವರೊಂದಿಗೆ.

  

ಎಸ್. ಜಾನಕಿ ಅವರೊಂದಿಗೆ ಸ್ಟುಡಿಯೊದಲ್ಲಿ.



ರಾಜ್ ಅವರ ಹಸ್ತದಿಂದ ಭೂತಯ್ಯನ ಮಗ ಅಯ್ಯು ಚಿತ್ರದ ಶತದಿನೋತ್ಸವ ಸ್ಮರಣಿಕೆ ಸ್ವೀಕಾರ.

  

ಈ ಚಿತ್ರದಲ್ಲಿ ಎಸ್.ಪಿ. ಬಿ  ತನ್ನಿಂದ ಬಹಳ ಹಿರಿಯರಾದ ಪಿ.ಬಿ.ಎಸ್  ಹೆಗಲ ಮೇಲೆ  ಕೈ ಹಾಕಿ ನಿಂತಿರುವುದು ಅಚ್ಚರಿದಾಯಕ. ಭಾಗ್ಯದ ಬಾಗಿಲು ಚಿತ್ರದ ಹಗಲೇನು ಇರುಳೇನು ಹಾಡಿನಿಂದ ಆರಂಭವಾಗಿ ಇವರಿಬ್ಬರು ವಿಜಯಭಾಸ್ಕರ್ ನಿರ್ದೇಶನದಲ್ಲಿ ಅನೇಕ ಯುಗಳ ಗೀತೆಗಳನ್ನು ಹಾಡಿದ್ದರು.


ಕೊನೆ ಕ್ಷಣದ ತಯಾರಿ.



ಮೊದಲು ಹೆಚ್. ಎಂ. ವಿ. ಯಲ್ಲಿ ಅಧಿಕಾರಿಯಾಗಿದ್ದು ನಂತರ ತನ್ನದೇ ಸಂಗೀತಾ ಸಂಸ್ಥೆ ಸ್ಥಾಪಿಸಿದ ಹೆಚ್. ಎಂ. ಮಹೇಶ್ ಅವರೊಂದಿಗೆ ಮುಂಬೈ ಷಣ್ಮುಖಾನಂದ ಹಾಲಿನ ವೇದಿಕೆಯಲ್ಲಿ ಕೋಟಿ ಚೆನ್ನಯ ತುಳು ಚಿತ್ರದ ಕೆಮ್ಮಲೆತಾ ಬ್ರಹ್ಮಾ ಹಾಡುತ್ತಿರುವುದು.

 

ನಾಗರ ಹಾವು ಚಿತ್ರದ ಧ್ವನಿಮುದ್ರಣ ಸಂದರ್ಭದ ಈ ಚಿತ್ರದಲ್ಲಿ ಪಿ.ಸುಶೀಲಾ, ವಿಷ್ಣುವರ್ಧನ್, ವಿಜಯಭಾಸ್ಕರ್ ಮುಂತಾದವರನ್ನೂ ಕಾಣಬಹುದು. ಬಲಗಡೆಯಲ್ಲಿ ಮೊದಲಿನವರು ಪುಟ್ಟಣ್ಣ ಅನಿಸುತ್ತದೆ. ಪುಟ್ಟಣ್ಣ, ವಿಜಯಭಾಸ್ಕರ್ ಮತ್ತು ಕಣಗಾಲ್ ಪ್ರಭಾಕರ ಶಾಸ್ತ್ರಿ  ಪಿ.ಬಿ.ಎಸ್ ಅವರಿಗೆ ಕಡ್ಡಾಯ ನಿವೃತ್ತಿ ಆದ ಮೇಲೂ ಸಾಧ್ಯವಾದಾಗಲೆಲ್ಲ ಅವಕಾಶ ಕೊಡುತ್ತಾ ಬಂದವರು. ಪ್ರಭಾಕರ ಶಾಸ್ತ್ರಿ ಅವರಂತೂ ಪಿ.ಬಿ.ಎಸ್ ಹಾಡುವುದಿದ್ದರೆ ಮಾತ್ರ  ಹಾಡು ಬರೆಯುವುದಾಗಿ ಹೇಳುತ್ತಿದ್ದರಂತೆ.

  

1972ರಲ್ಲಿ ನೆಲ್ಕೋ ರೇಡಿಯೋದ ಜಾಹೀರಾತಲ್ಲಿ ಪಿ.ಬಿ.ಶ್ರೀನಿವಾಸ್ ಹೀಗೆ ಕಾಣಿಸಿಕೊಂಡಿದ್ದರು.



ಇಷ್ಟೆಲ್ಲ ಚಿತ್ರಗಳನ್ನು ನೋಡಿದ ಮೇಲೆ ಒಂದಾದರೂ ಪಿ.ಬಿ.ಎಸ್ ಹಾಡು ಇಲ್ಲದಿದ್ದರೆ ಹೇಗೆ.  ಇಲ್ಲಿದೆ ನೋಡಿ ಇದೇ ನಾಗರಹಾವು ಚಿತ್ರದ ಕನ್ನಡ ನಾಡಿನ ವೀರ ರಮಣಿಯ ಚರಿತೆ.  ಇದರಲ್ಲೇನು ವಿಶೇಷ, ಇದು ಯಾವಾಗಲೂ ನೋಡಲು ಸಿಗುವ ಹಾಡು ಅಂದಿರಾ. ಗ್ರಾಮೊಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ ಈ  ಹಾಡಿಗೂ ಚಿತ್ರದಲ್ಲಿರುವ ವರ್ಷನ್‌ಗೂ ವ್ಯತ್ಯಾಸ ಇದೆ. ಚಿತ್ರದಲ್ಲಿ ಸುದೀರ್ಘವಾಗಿ ಚಿತ್ರಿತವಾಗಿರುವ ಕೆಲವು ಸನ್ನಿವೇಶಗಳನ್ನು ಇಲ್ಲಿ ಪಿ.ಬಿ.ಎಸ್ ಚುಟುಕಾಗಿ ಮಾತಿನಲ್ಲಿ ನಿರೂಪಿಸಿದ್ದಾರೆ.  ಮೊದಲಿನಿಂದಲೂ ರೇಡಿಯೋದಲ್ಲಿ ಈ ಹಾಡು ಕೇಳಿಕೊಂಡು ಬಂದವರಿಗೆ ಇದು ಗೊತ್ತಿರುತ್ತದೆ.  ಈಗ ರೆಕಾರ್ಡಿನ ಎರಡೂ ಬದಿಗಳ ಭಾಗ ಕೇಳಿಸುವಷ್ಟು ವ್ಯವಧಾನ ಇಲ್ಲದಿರುವುದರಿಂದ ರೇಡಿಯೋದವರು ಹೆಚ್ಚಾಗಿ ಹಾಡನ್ನು ಅರ್ಧಕ್ಕೇ ಮೊಟಕುಗೊಳಿಸುತ್ತಾರೆ. ಈಗ ಪೂರ್ತಿ ಹಾಡು ಮತ್ತೊಮ್ಮೆ ಕೇಳಿ ಎರಡರ ವ್ಯತ್ಯಾಸ ಗಮನಿಸಿ.






Tuesday 30 July 2019

ದೋಸ್ತಿ ಮತ್ತು ನಮ್ಮೆಲ್ಲರ ಆಸ್ತಿ ರಫಿ


ಹಿಂದಿ ಚಿತ್ರಸಂಗೀತ ಕ್ಷೇತ್ರದಲ್ಲಿ ಆಗಷ್ಟೇ ಕಣ್ಣು ಬಿಡತೊಡಗಿದ್ದ ಲಕ್ಷ್ಮಿಕಾಂತ್-ಪ್ಯಾರೇಲಾಲ್ ಎಂಬ ಯುವ ಸಂಗೀತಕಾರರು  ರಫಿ ಎಂಬ ವಾಹಕದ ಸಹಾಯದಿಂದ  ರಾಕೆಟ್ಟಿನಂತೆ ಜಿಗಿದು ಜನಪ್ರಿಯತೆಯ ತುತ್ತ ತುದಿಗೇರಿದ್ದು ದೋಸ್ತಿ ಎಂಬ ಲಾಂಚ್ ಪ್ಯಾಡಿನಿಂದ. 1964ರಲ್ಲಿ ರಾಜಶ್ರೀ ಸಂಸ್ಥೆಯವರು ತಯಾರಿಸಿದ ದೋಸ್ತಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಬೇಕಾಗಿದ್ದವರು ರೋಶನ್.  ಆ ಸಂಸ್ಥೆಯ ಮೊದಲ ಚಿತ್ರ ಆರತಿಗೆ ಅವರದೇ ಸಂಗೀತವಿದ್ದದ್ದು.  ಆಗಲೇ ಬಂಗಾಲಿಯಲ್ಲಿ ಲಾಲೂ ಔರ್ ಭೋಲೂ ಎಂಬ ಹೆಸರಲ್ಲಿ ತೆರೆಕಂಡಿದ್ದ ದೃಷ್ಟಿಹೀನ ಮತ್ತು ವಿಕಲಾಂಗ ಹುಡುಗರಿಬ್ಬರ ಸುತ್ತ ಹೆಣೆದ ಕಥೆಯನ್ನು ಕೇಳಿದ ರೋಶನ್ ‘ದುಡ್ಡು ಕೊಟ್ಟು ಯಾರು ಅಳಲು ಬರುತ್ತಾರೆ’ ಎಂದು ಕೊಂಕು ನುಡಿದು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲು ನಿರಾಕರಿಸಿದರು. ಆಗ ನಿರ್ಮಾಪಕರ ಕಣ್ಣಿಗೆ ಬಿದ್ದದ್ದು ಆಗಷ್ಟೇ ಪಾರಸ್ ಮಣಿ ಚಿತ್ರದ ‘ಹಸ್ತಾ ಹುವಾ ನೂರಾನಿ ಚೆಹೆರಾ’ ಹಾಡಿನ ಮೂಲಕ ಗಮನ ಸೆಳೆದಿದ್ದ ಮುಗುಳ್ನಗೆಯ ತೇಜಸ್ವಿ ಮೊಗದ ನವಯುವಕರಾದ ಲಕ್ಷ್ಮಿಕಾಂತ್ ಪ್ಯಾರೇಲಾಲ್. 

ಮೊದಲು ಬಿಡುಗಡೆಯಾದ ಚಿತ್ರ ಪಾರಸ್ ಮಣಿಯಾದರೂ ಅದಕ್ಕೂ ಮೊದಲು ಲಕ್ಷ್ಮಿ ಪ್ಯಾರೆ  ಛೈಲಾ ಬಾಬು ಎಂಬ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು.  ಆದರೆ ಅದು ಅರ್ಧಕ್ಕೆ ನಿಂತು ಕೆಲವು ವರ್ಷಗಳ ನಂತರ ಬಿಡುಗಡೆ ಆಯಿತು.  ಅದಕ್ಕೂ ಮುನ್ನ  ಲಕ್ಷ್ಮಿಕಾಂತ್  ಮತ್ತು ಪ್ಯಾರೇಲಾಲ್ ಇತರ ಸಂಗೀತ ನಿರ್ದೇಶಕರ ಹಾಡುಗಳಲ್ಲಿ ಮ್ಯಾಂಡೊಲಿನ್ ಹಾಗೂ ವಯಲಿನ್ ನುಡಿಸುತ್ತಿದ್ದರು.  ಬರ್ಮನ್ ದಾದಾ ಅವರ ಲಾಜವಂತಿ ಚಿತ್ರದಲ್ಲಿ ಆಶಾ ಭೋಸ್ಲೆಯ  ‘ಕೋಯೀ ಆಯಾ’  ಸಾಲಿನ ಕೊನೆಗೆ ‘ಟಿರ್ಡಿ ಡಿಂ’ ಎಂದು ಮ್ಯಾಂಡೊಲಿನ್ ನುಡಿಸಿದ್ದು ಲಕ್ಷ್ಮಿಕಾಂತ್.   ಮದನ್ ಮೋಹನ್ ಅವರ ಹಕೀಕತ್ ಚಿತ್ರದ ರಫಿ ಹಾಡು ಮೈ ಯೇ ಸೋಚ್ ಕರ್ ಉಸ್ ಕೆ ದರ್ ಸೆ  ಉಠಾ ಥಾ ಹಾಡಿನಲ್ಲಿ ಕೇಳುವ ಸೋಲೊ ವಯಲಿನ್ ಪ್ಯಾರೆಲಾಲ್ ಅವರದ್ದು. ಕಲ್ಯಾಣ್ ಜೀ ಆನಂದ್ ಜೀ, ಖಯ್ಯಾಮ್ ಮುಂತಾದವರಿಗೆ ಅವರು ಸಹಾಯಕ ಹಾಗೂ arranger ಆಗಿಯೂ ಕೆಲಸ ಮಾಡಿದ್ದರು. ಆರ್.ಡಿ. ಬರ್ಮನ್ ಅವರ ಛೋಟೆ ನವಾಬ್ ಮತ್ತು ಭೂತ್ ಬಂಗ್ಲಾ ಚಿತ್ರಗಳಿಗೂ ಅವರು ಸಹಾಯಕರಾಗಿದ್ದರು.

ಅರ್ಧಕ್ಕೆ ನಿಂತಿದ್ದ ಚಿತ್ರ ಛೈಲಾ ಬಾಬೂ ಚಿತ್ರಕ್ಕಾಗಿ  ಲಕ್ಷ್ಮಿ ಪ್ಯಾರೆ ಅವರ ಮೊದಲ ಹಾಡು ‘ತೇರೆ ಪ್ಯಾರ್ ನೆ ಮುಝೆ ಗಮ್ ದಿಯಾ’ ರೆಕಾರ್ಡ್ ಆದದ್ದು ರಫಿ ಧ್ವನಿಯಲ್ಲೇ. ಆ ಹಾಡಿಗೆ ದೊರಕಿದ ಸಂಭಾವನೆಯನ್ನು ರಫಿ ಅವರು  ಲಕ್ಶ್ಮೀ ಪ್ಯಾರೆಗೆ ಮರಳಿಸಿ ಇಬ್ಬರೂ ಹಂಚಿಕೊಳ್ಳಿ ಅಂದಿದ್ದರಂತೆ.  ಮೊದಲು ಬಿಡುಗಡೆ ಆದ ಚಿತ್ರ ಪಾರಸ್ ಮಣಿಯಲ್ಲೂ ಒಂದೆರಡು ರಫಿ ಹಾಡುಗಳಿದ್ದವು.  ಆದರೆ ಅವರು ಪೂರ್ಣ ಪ್ರಮಾಣದಲ್ಲಿ ರಫಿಯನ್ನು ಬಳಸಿಕೊಂಡದ್ದು ದೋಸ್ತಿ ಚಿತ್ರದಲ್ಲಿ.  ಅದರ 6 ಹಾಡುಗಳ ಪೈಕಿ 5 ರಫಿ ಸೊಲೋಗಳು.  ದೋಸ್ತಿ ಹಾಡುಗಳ ಜನಪ್ರಿಯತೆ ಶಂಕರ್ ಜೈಕಿಶನ್, ಓ.ಪಿ.ನಯ್ಯರ್ ಮುಂತಾದ ಅಂದಿನ ಅತಿರಥ ಮಹಾರಥ ಸಂಗೀತ ನಿರ್ದೇಶಕರ ಕಾಲ ಕೆಳಗಿನ ನೆಲ ಅದುರುವಂತೆ  ಮಾಡಿತು. ಸಂಗಂ, ವೊ ಕೌನ್ ಥೀ, ಲೀಡರ್, ಕಶ್ಮೀರ್ ಕಿ ಕಲಿ, ಫಿರ್ ವಹೀ ದಿಲ್ ಲಾಯಾ ಹೂಂ, ಬೇಟಿ ಬೇಟೆ, ಎಪ್ರಿಲ್ ಫೂಲ್ ಮುಂತಾದ ಚಿತ್ರಗಳ ಪೈಪೋಟಿಯಿದ್ದರೂ ಆ ವರ್ಷದ ಫಿಲಂ ಫೇರ್ ಅವಾರ್ಡ್  ದೋಸ್ತಿಯ ಚಾಹೂಂಗಾ ಮೈ ತುಝೆ ಸಾಂಝ್ ಸವೇರೆ ಹಾಡಿಗೆ ದೊರಕಿತು. ಅದನ್ನು ಹಾಡಿದ ರಫಿಗೆ ಶ್ರೇಷ್ಠ ಗಾಯಕ, ಬರೆದ ಮಜರೂಹ್ ಸುಲ್ತಾನ್‌ಪುರಿಗೆ ಶ್ರೇಷ್ಠ ಗೀತ ರಚನಕಾರ,  ಲಕ್ಷ್ಮಿ ಪ್ಯಾರೆಗೆ ಶ್ರೇಷ್ಠ ಸಂಗೀತ ನಿರ್ದೇಶಕ ಅವಾರ್ಡುಗಳೂ ದೊರೆತವು. ಚಾಹೂಂಗಾ ಮೈ ತುಝೆ, ರಾಹಿ ಮನ್‌ವಾ ಮತ್ತು ಕೋಯಿ ಜಬ್ ರಾಹ ನ ಪಾಯೆ ಬಿನಾಕಾ ಗೀತ್ ಮಾಲಾದಲ್ಲೂ ರಾರಾಜಿಸಿದವು.

ಕಾಲು ಊನವಾದ ಹಾಡುಗಾರ ರಾಮು ಹಾಗೂ ನೇತ್ರಹೀನನಾದ ಹಾರ್ಮೋನಿಕಾ(ಮೌತ್ ಆರ್ಗನ್) ವಾದಕ ಮೋಹನ ಎಂಬ  ಹುಡುಗರ ಗೆಳೆತನದ ಸುತ್ತ ಹೆಣೆಯಲಾದ ಕಥೆಯ ದೋಸ್ತಿ ಚಿತ್ರದಲ್ಲಿ ರಾಮು ಪಾತ್ರ ನಿರ್ವಹಿಸಿದವರು ಸುಶೀಲ್ ಕುಮಾರ್.  ಇವರು ಆಗಲೇ ಫಿರ್ ಸುಭಾ ಹೋಗಿ, ಧೂಲ್ ಕಾ ಫೂಲ್, ಕಾಲಾ ಬಜಾರ್, ದಿಲ್ ಭೀ ತೇರಾ ಹಮ್ ಭೀ ತೇರೆ, ವಾಡಿಯಾ ಅವರ ಸಂಪೂರ್ಣ ರಾಮಾಯಣ, ಫೂಲ್ ಬನೆ ಅಂಗಾರೆ ಇತ್ಯಾದಿ ಚಿತ್ರಗಳಲ್ಲಿ ಬಾಲ ನಟನಾಗಿ ನಟಿಸಿದ್ದರು. ಮೋಹನನ ಪಾತ್ರದಲ್ಲಿದ್ದ ಸುಧೀರ್ ಕುಮಾರ್ ಸಂತ್ ಜ್ಞಾನೇಶ್ವರ್ ಮತ್ತು ಲಾಡಲಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.  ದೋಸ್ತಿ ಚಿತ್ರ ಅಷ್ಟು ಜನಪ್ರಿಯವಾದರೂ ಇವರಿಬ್ಬರಿಗೆ  ಆ ಮೇಲೆ ಹೆಚ್ಚು ಅವಕಾಶಗಳು ದೊರಕಲಿಲ್ಲ. ಈ ಚಿತ್ರದ ಸಂಗೀತದಲ್ಲಿ ಮೌತ್ ಆರ್ಗನ್‌ಗೆ ಪ್ರಾಮುಖ್ಯವಿದ್ದು ಅದನ್ನು ನುಡಿಸಿದ್ದು ಆರ್.ಡಿ. ಬರ್ಮನ್.  ಈ ಮೂಲಕ ಅವರು ಲಕ್ಷ್ಮಿ ಪ್ಯಾರೆಯೊಂದಿಗಿನ ತಮ್ಮ ‘ದೋಸ್ತಿ’ಯನ್ನು ನಿಭಾಯಿಸಿದ್ದರು!

ಹೀರೋ, ಹೀರೋಯಿನ್, ಮರಸುತ್ತುವ ಡ್ಯುಯೆಟ್ ಯಾವುದೂ ಇಲ್ಲದ  ಕಪ್ಪು ಬಿಳುಪಿನ ದೋಸ್ತಿಯ ಯಶಸ್ಸಿಗೆ ಕಾರಣ ಉತ್ತಮ ಕಥೆ, ಉತ್ತಮ ನಿರ್ದೇಶನ, ಉತ್ತಮ ನಟನೆ, ಉತ್ತಮ ಸಂಗೀತ ಮತ್ತು ಮಹಮ್ಮದ್ ರಫಿ. ಈಗ ಈ ಚಿತ್ರದ ಹಾಡುಗಳನ್ನು ಒಂದೊಂದಾಗಿ ಆಲಿಸುತ್ತಾ ಅವರ ಧ್ವನಿಯಲ್ಲಿ ಕಳೆದು ಹೋಗೋಣ

ಜಾನೆವಾಲೋಂ ಜರಾ


ಜಾನೆವಾಲೋಂ ಜರಾ ಮುಡ್ ಕೆ ದೇಖೋ ಮುಝೆ
ಏಕ್ ಇನ್ಸಾನ್ ಹೂಂ ಮೈ ತುಮ್ಹಾರೀ ತರಹ
ಜಿಸ್ ನೆ ಸಬ್ ಕೋ ರಚಾ ಅಪನೆ ಹೀ ರೂಪ್ ಸೇ
ಉಸ್ ಕೀ ಪಹಚಾನ್ ಹೂಂ  ಮೈ ತುಮ್ಹಾರೀ ತರಹ
ಜಾನೆವಾಲೋಂ ಜರಾ

ಇಸ್ ಅನೋಖೆ ಜಗತ್ ಕೀ ಮೈ ತಕದೀರ್ ಹೂಂ
ಮೈ ವಿಧಾತಾ ಕೆ ಹಾಥೋಂ ಕೀ ತಸವೀರ್ ಹೂಂ
ಏಕ್ ತಸವೀರ್ ಹೂಂ
ಇಸ್ ಜಹಾಂ ಕೇ ಲಿಯೆ ಧರತಿಮಾಂ ಕೇ ಲಿಯೆ
ಶಿವ್ ಕಾ ವರ್‌ದಾನ್ ಹೂಂ ಮೈ ತುಮ್ಹಾರೀ ತರಹ
ಜಾನೆವಾಲೋಂ ಜರಾ

ಮನ್ ಕೆ ಅಂದರ್ ಛುಪಾಯೇ ಮಿಲನ್ ಕೀ ಲಗನ್
ಅಪನೆ ಸೂರಜ್ ಸೆ ಹೂಂ  ಏಕ್ ಬಿಛಡೀ ಕಿರನ್
ಏಕ್ ಬಿಛಡೀ ಕಿರನ್
ಫಿರ್ ರಹಾ ಹೂಂ ಭಟಕತಾ ಮೈ ಯಹಾಂ ಸೇ ವಹಾಂ
ಔರ್ ಪರೇಶಾನ್ ಹೂಂ ಮೈ ತುಮ್ಹಾರೀ ತರಹಾ
ಜಾನೆವಾಲೋಂ ಜರಾ

ಮೇರೆ ಪಾಸ್ ಆವೊ ಛೋಡೋ ಯೆ ಸಾರಾ ಭರಮ್
ಜೊ ಮೇರಾ ದುಖ್ ವಹೀ ಹೈ ತುಮ್ಹಾರಾ ಭೀ ಗಮ್
ಹೈ ತುಮ್ಹಾರಾ ಭೀ ಗಮ್
ದೇಖತಾ ಹೂಂ ತುಮ್ಹೇಂ ಜಾನತಾ ಹೂಂ ತುಮ್ಹೇಂ
ಲಾಖ್ ಅಂಜಾನ್ ಹೂಂ ಮೈ ತುಮ್ಹಾರೀ ತರಹಾ
ಜಾನೆವಾಲೋಂ ಜರಾ

ರಾಹೀ ಮನವಾ ದುಖ್ ಕೀ ಚಿಂತಾ


ದುಖ್ ಹೋ ಯಾ ಸುಖ್
ಜಬ್ ಸದಾ ಸಂಗ್ ರಹೇ ನ ಕೋಯಿ
ಫಿರ್ ದುಖ್ ಕೊ ಅಪನಾಯಿಯೆ
ಕೆ ಜಾಯೆ ತೊ ದುಖ್ ನ ಹೋಯಿ

ರಾಹೀ ಮನವಾ ದುಖ್ ಕೀ ಚಿಂತಾ
ಕ್ಯೂಂ ಸತಾತೀ ಹೈ
ದುಖ್ ತೊ ಅಪನಾ ಸಾಥಿ ಹೈ
ಸುಖ್ ತೊ ಎಕ್ ಛಾಂವ್ ಢಲತೀ
ಆತೀ ಹೈ ಜಾತೀ ಹೈ
ದುಖ್ ತೊ ಅಪನಾ ಸಾಥಿ ಹೈ

ದೂರ್ ಹೈ ಮಂಜಿಲ್ ದೂರ್ ಸಹೀ
ಪ್ಯಾರ್ ಹಮಾರಾ ಕ್ಯ ಕಮ್ ಹೈ
ಪಗ್ ಮೆಂ ಕಾಂಟೇ ಲಾಖ್ ಸಹೀ
ಪರ್ ಯೆ ಸಹಾರಾ ಕ್ಯಾ ಕಮ್ ಹೈ
ಹಮರಾಹ್ ತೇರೆ ಕೋಯೀ ಅಪನಾ ತೊ ಹೈ
ಓ 
ಸುಖ್ ತೊ ಎಕ್ ಛಾಂವ್ ಢಲತೀ
ಆತೀ ಹೈ ಜಾತೀ ಹೈ
ದುಖ್ ತೊ ಅಪನಾ ಸಾಥಿ ಹೈ


ದುಖ್ ಹೈ ಕೋಯೀ ತಬ್ ಜಲತೇ ಹೈಂ
ಪಥ್ ಮೆಂ ದೀಪ್ ನಿಗಾಹೊಂ ಕೆ
ಇತನೀ ಬಡೀ ಇಸ್ ದುನಿಯಾ ಕೀ
ಲಂಬೀ ಅಕೇಲೀ ರಾಹೊಂ ಮೆಂ
ಹಮರಾಹ್ ತೇರೆ ಕೋಯೀ ಅಪನಾ ತೊ ಹೈ
ಓ 
ಸುಖ್ ತೊ ಎಕ್ ಛಾಂವ್ ಢಲತೀ
ಆತೀ ಹೈ ಜಾತೀ ಹೈ
ದುಖ್ ತೊ ಅಪನಾ ಸಾಥಿ ಹೈ

ಕೋಯಿ ಜಬ್ ರಾಹ ನ ಪಾಯೆ



ಕೋಯಿ ಜಬ್ ರಾಹ ನ ಪಾಯೆ
ಮೇರೇ ಸಂಗ್ ಆಯೆ
ಕೆ ಪಗ್ ಪಗ್ ದೀಪ್ ಜಲಾಯೇ
ಮೇರೀ ದೋಸ್ತೀ ಮೇರಾ ಪ್ಯಾರ್

ಜೀವನ್ ಕಾ ಯಹೀ ಹೈ ದಸ್ತೂರ್
ಪ್ಯಾರ್ ಬಿನಾ ಅಕೇಲಾ ಮಜಬೂರ್
ದೋಸ್ತೀ ಕೊ ಮಾನೇ ತೊ ಸಬ್ ದುಖ್ ದೂರ್
ಕೋಯೀ ಕಾಹೆ ಠೋಕರ್ ಖಾಯೆ
ಮೇರೇ ಸಂಗ್ ಆಯೇ
ಕೆ ಪಗ್ ಪಗ್ ದೀಪ್ ಜಲಾಯೇ
ಮೇರೀ ದೋಸ್ತೀ ಮೇರಾ ಪ್ಯಾರ್

ದೋನೊ ಕೆ ಹೈಂ ರೂಪ್ ಹಜಾರ್
ಪರ್ ಮೇರೀ ಸುನೇ ಜೊ ಸನ್ಸಾರ್
ದೋಸ್ತೀ ಹೈ ಭಾಯೀ
ತೊ ಬಹನಾ ಹೈ ಪ್ಯಾರ್
ಕೋಯೀ ಮತ್ ನೈನ್ ಚುರಾಯೇ
ಮೇರೇ ಸಂಗ್ ಆಯೇ
ಕೆ ಪಗ್ ಪಗ್ ದೀಪ್ ಜಲಾಯೇ
ಮೇರೀ ದೋಸ್ತೀ ಮೇರಾ ಪ್ಯಾರ್

ಪ್ಯಾರ್ ಕಾ ಹೈ ಪ್ಯಾರ್ ಹೀ ನಾಮ್
ಕಹೀಂ ಮೀರಾ ಕಹಿಂ ಘನಶ್ಯಾಮ್
ದೋಸ್ತೀ ಕಾ ಯಾರೋಂ ನಹೀಂ ಕೋಯಿ ಧಾಮ್
ಕೋಯೀ ಕಹೀಂ ದೂರ್ ನ ಜಾಯೇ
ಮೇರೇ ಸಂಗ್ ಆಯೇ
ಕೆ ಪಗ್ ಪಗ್ ದೀಪ್ ಜಲಾಯೇ
ಮೇರೀ ದೋಸ್ತೀ ಮೇರಾ ಪ್ಯಾರ್

ಚಾಹೂಂಗಾ ಮೈ ಯುಝೆ


ಚಾಹೂಂಗಾ ಮೈ ಯುಝೆ ಸಾಂಝ್ ಸವೇರೆ
ಫಿರ್ ಭೀ ಕಭೀ ಅಬ್ ನಾಮ್ ಕೊ ತೇರೆ
ಆವಾಜ್ ಮೈ ನ ದೂಂಗಾ

ದೇಖ್ ಮುಝೆ ಸಬ್ ಹೈ ಪತಾ
ಸುನತಾ ಹೈ ತೂ ಮನ್ ಕೀ ಸದಾ
ಮಿತವಾ
ಮೇರೇ ಯಾರ್ ತುಝ್ ಕೋ ಬಾರ್ ಬಾರ್
ಆವಾಜ್ ಮೈ ನ ದೂಂಗಾ

ದರ್ದ್ ಭೀ ತೂ ಚೈನ್ ಭೀ ತೂ
ದರಸ್ ಭೀ ತೂ ನೈನ್ ಭೀ ತೂ
ಮಿತವಾ
ಮೇರೇ ಯಾರ್ ತುಝ್ ಕೋ ಬಾರ್ ಬಾರ್
ಆವಾಜ್ ಮೈ ನ ದೂಂಗಾ

ಮೇರಾ ತೊ ಜೊ ಭೀ ಕದಮ್ ಹೈ


ಮೇರಾ ತೊ ಜೊ ಭೀ ಕದಮ್ ಹೈ
ವೊ ತೇರಿ ರಾಹ ಮೆ ಹೈ
ಕೆ ತೂ ಕಹೀಂ ಭೀ ರಹೆ ತೂ
ಮೇರೀ ನಿಗಾಹ ಮೆ ಹೈ

ಖರಾ ಹೈ ದರ್ದ್ ಕಾ ರಿಶ್ತಾ
ತೊ ಫಿರ್ ಜುದಾಯೀ ಕ್ಯಾ
ಜುದಾ ತೊ ಹೋತೆ ಹೈಂ ವೊ
ಖೋಟ್ ಜಿನ್ ಕೀ ಚಾಹ್ ಮೆಂ ಹೈ
ಮೇರಾ ತೊ ಜೊ ಭೀ ಕದಮ್ ಹೈ

ಛುಪಾ ಹುವಾ ಸಾ ಮುಝೀ ಮೆಂ
ಹೈ ತೂ ಕಹೀಂ ಏ ದೋಸ್ತ್
ಮೇರೀ ಹಂಸೀ ಮೆಂ ನಹೀಂ
ತೊ ಮೇರೀ ಆಹ್ ಮೆಂ ಹೈ
ಮೇರಾ ತೊ ಜೊ ಭೀ ಕದಮ್ ಹೈ







Saturday 29 June 2019

ಸದಾರಮೆಯ ಸದಾರಮ್ಯ ಗಾನ



ರಂಗಭೂಮಿಯಲ್ಲಿ ಆಸಕ್ತಿ ಇರುವವರಿಗೆಲ್ಲ ಸದಾರಮೆಯ ಕಥೆ ಗೊತ್ತಿರುವಂಥದ್ದೇ. ಒಬ್ಬ ರಾಜ.  ಆತನಿಗೊಬ್ಬ ರಾಜಕುಮಾರ. ವೇದಾಂತದತ್ತ ವಾಲಿದ್ದ ಆತ ಶ್ರೇಷ್ಠಿಯ ಮಗಳು ಸದಾರಮೆಯಲ್ಲಿ ಅನುರಕ್ತನಾಗುತ್ತಾನೆ.  ಆಕೆಯ ಸೋದರ ಆದಿಮೂರ್ತಿ  ಈ ವಿವಾಹವಾಗಬೇಕಾದರೆ ತನಗೆ ಪಟ್ಟಾಭಿಷೇಕವಾಗಬೇಕೆಂಬ ಪಟ್ಟು ಹಿಡಿಯುತ್ತಾನೆ.  ಮಗನ ಸುಖಕ್ಕಾಗಿ ಏನು ಮಾಡಲೂ ಸಿದ್ಧನಿದ್ದ ರಾಜ ಇದಕ್ಕೊಪ್ಪುತ್ತಾನೆ.  ರಾಜ್ಯವಿಹೀನನಾದ ರಾಜಕುಮಾರ ಸದಾರಮೆಯೊಡನೆ ಕಾಡುಮೇಡು ಅಲೆಯಬೇಕಾಗುತ್ತದೆ.  ಅರಣ್ಯದಲ್ಲಿ ಸದಾರಮೆ ಕ್ಷುದ್ಬಾಧೆಗೊಳಗಾದಾಗ ಆಕೆ ಕೈಯಾರೆ ತಯಾರು ಮಾಡಿದ್ದ ಕಸೂತಿಯ ಕರವಸ್ತ್ರವನ್ನು ವಿಕ್ರಯಿಸಿ ಆಹಾರ ತರಲು ರಾಜಕುಮಾರ ಸಮೀಪದ ರಾಜ್ಯಕ್ಕೆ ಹೋಗುತ್ತಾನೆ.  ವಿಷಯ ತಿಳಿದ  ಆ ರಾಜ್ಯದ ದುಷ್ಟನಾದ ರಾಜ ಆತನನ್ನು ಬಂಧಿಸಿ ಸುಳ್ಳು ಹೇಳಿ ಸದಾರಮೆಯನ್ನೂ ಕರೆಸಿಕೊಂಡು ಆಕೆಯಲ್ಲಿ ಪ್ರಣಯಭಿಕ್ಷೆ ಬೇಡುತ್ತಾನೆ. ಚತುರೆಯಾದ ಆಕೆ ಒಂದು ತಿಂಗಳ ಕಾಲಾವಕಾಶ ಕೇಳಿ ಅಲ್ಲಿಯ ವರೆಗೆ ತಾನು ಏಕಾಂತವಾಗಿರಲು  ಒಂದು ವಿಶೇಷ ಮಹಲನ್ನು ನಿರ್ಮಿಸಿ ಕೊಡಬೇಕೆಂದೂ ರಾಜಕುಮಾರನನ್ನು ಸೆರೆಯಿಂದ ಮುಕ್ತಗೊಳಿಸಬೇಕೆಂದೂ ಷರತ್ತು ವಿಧಿಸುತ್ತಾಳೆ.  ಕಾಮಾಂಧನಾದ ದುಷ್ಟ ರಾಜ ಇದಕ್ಕೊಪ್ಪುತ್ತಾನೆ.  ಅದೃಷ್ಟವಶಾತ್ ಆ ಮಹಲಿನ ಸಮೀಪ ರಾಜಕುಮಾರ ಆಕೆಗೆ ಕಾಣಸಿಗುತ್ತಾನೆ.  ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಅಲ್ಲಿಂದ ತಪ್ಪಿಸಿಕೊಳ್ಳುವುದೆಂದೂ, ಅದಕ್ಕಾಗಿ ಮಹಲಿನ ಮಹಡಿಯಿಂದಿಳಿಯಲು ನೂಲೇಣಿ ಮತ್ತು ತನಗೆ ಧರಿಸಲು ಗಂಡುಡುಗೆಯೊಂದಿಗೆ  ರಾಜಕುಮಾರ ಸಿದ್ಧನಾಗಿ ಬರಬೇಕೆಂದೂ ಇಬ್ಬರೂ ಮಾತನಾಡಿಕೊಳ್ಳುತ್ತಾರೆ.  ಅಲ್ಲೇ ಮರೆಯಲ್ಲಿದ್ದ ಕಳ್ಳನೊಬ್ಬ ಇದನ್ನು ಕೇಳಿಸಿಕೊಳ್ಳುತ್ತಾನೆ. ವಸ್ತುಗಳನ್ನೆಲ್ಲ ಸಿದ್ಧಪಡಿಸಿಕೊಂಡು ಆತುರದಲ್ಲಿ ಒಂದು ತಾಸು ಮೊದಲೇ ಅಲ್ಲಿಗೆ ಬಂದ ರಾಜಕುಮಾರ ಅಲ್ಲೇ ನಿದ್ರಿಸುತ್ತಾನೆ.  ಇದನ್ನೇ ಕಾಯುತ್ತಿದ್ದ ಕಳ್ಳ ನೂಲೇಣಿ ಮತ್ತು ಗಂಡುಡುಗೆ ಸಂಪಾದಿಸಿ ತಾನೇ ರಾಜಕುಮಾರನಂತೆ ನಟಿಸಿ ಸದಾರಮೆಯೊಂದಿಗೆ ಅಲ್ಲಿಂದ ಪಲಾಯನಗೈಯುತ್ತಾನೆ.  ಮೋಸವರಿತ ಸದಾರಮೆ ಹೊಟ್ಟೆ ನೋವೆಂದು ನಾಟಕವಾಡಿ ನೀರು ತರಲು ಕಳ್ಳನನ್ನು ದೂರ ಕಳಿಸುತ್ತಾಳೆ.  ಆತ ಹಿಂತಿರುಗುವಷ್ಟರಲ್ಲಿ ಅಲ್ಲಿಂದ ತಪ್ಪಿಸಿಕೊಂಡ ಆಕೆ ಇನ್ನೊಂದು ರಾಜ್ಯವನ್ನು ಸೇರುತ್ತಾಳೆ.  ಒಳ್ಳೆಯವಳಾದ ಅಲ್ಲಿಯ ರಾಣಿ ಛತ್ರದಲ್ಲಿ ಸದಾರಮೆಯ ಚಿತ್ರವನ್ನಿರಿಸುತ್ತಾಳೆ.  ಸದಾರಮೆಯನ್ನು ಹುಡುಕುತ್ತಾ ಬಂದ ದುಷ್ಟ ರಾಜ ಮತ್ತು ಕಳ್ಳ  ಛತ್ರದಲ್ಲಿದ್ದ ಆಕೆಯ ಚಿತ್ರವನ್ನು ದೂಷಿಸುತ್ತಾರೆ.  ರಾಣಿಯು ಅವರನ್ನು ಸೆರೆಮನೆಗಟ್ಟುತ್ತಾಳೆ.  ಕೆಲಕಾಲದ ನಂತರ ಅದೇ ಛತ್ರಕ್ಕೆ ಬಂದ ರಾಜಕುಮಾರ ಚಿತ್ರವನ್ನು ಕಂಡು ದುಃಖಿಸುತ್ತಾನೆ. ಈತನೇ ಸದಾರಮೆಯ ಪತಿ ಎಂದು ರಾಣಿಗೆ ತಿಳಿಯುತ್ತದೆ. ಪತಿ ಪತ್ನಿಯರ ಮಿಲನವಾಗುತ್ತದೆ.

ಚಂದಮಾಮದ ಕಥೆಯಂತಿರುವ ಇದರ ಮೂಲ ಕರ್ತೃ ಕೇರಳದ  ಕೆ.ಸಿ. ಕೇಶವ ಪಿಳ್ಳೈ ಎಂದು ಕೆಲವರು ಹೇಳುತ್ತಾರೆ.  ಕಳ್ಳನ ಪಾತ್ರದಲ್ಲಿ ನಟಿಸಿ ಇದನ್ನು ಅತಿ ಜನಪ್ರಿಯಗೊಳಿಸಿದ ಗುಬ್ಬಿ ವೀರಣ್ಣನವರಿಗಾಗಿ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಈ ಕಥೆ ಬರೆದರೆಂದೂ ಕೆಲವರ ಅಂಬೋಣ.  ಆದರೆ ಇದೆಲ್ಲ ಅಂತರ್ಜಾಲದಲ್ಲಿ ಸಿಕ್ಕಿದ ಮಾಹಿತಿ.  ಇಲ್ಲಿ ನಾನು ಬರೆದದ್ದನ್ನೂ ಸೇರಿಸಿ ಇಂಥ ಯಾವುದೇ ಮಾಹಿತಿಯನ್ನು ಪರಾಂಬರಿಸಿ ನೋಡದೆ ನಂಬಬಾರದು ಎಂಬುದು ಆರ್ಯೋಕ್ತಿ.

ಸಾಂಪ್ರದಾಯಿಕ  ಮತ್ತು ಆಧುನಿಕ ರಂಗಭೂಮಿ ಎರಡರಲ್ಲೂ ಈ ನಾಟಕ ಇಂದಿಗೂ ಜನಪ್ರಿಯ.  ಕಥೆಗಿಂತಲೂ ಆದಿಮೂರ್ತಿ, ಸದಾರಮೆ ಮತ್ತು ವಿಶೇಷವಾಗಿ ಕಳ್ಳನ ಪಾತ್ರಗಳಿಂದಾಗಿಯೇ ಇದು ಇನ್ನೂ ಜೀವಂತವಾಗಿರುವುದು ಎಂದರೆ ತಪ್ಪಾಗಲಾರದೇನೋ.



ಸದಾರಮೆಯ ಕಥೆ  ಎರಡು ಸಲ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿತು.  ಮೊದಲ ಸಲ ಕನ್ನಡದ ಮೂರನೆ ಮಾತನಾಡುವ ಚಲನಚಿತ್ರವಾಗಿ  1935ರಲ್ಲಿ.  ಇದನ್ನು ಶಕುಂತಲ ಫಿಲಂಸ್ ಲಾಂಛನದಲ್ಲಿ ಗುಬ್ಬಿ ವೀರಣ್ಣ ಮತ್ತು ಷಣ್ಮುಖ ಚೆಟ್ಟಿಯಾರ್ ನಿರ್ಮಿಸಿ ರಾಜಾ ಚಂದ್ರಶೇಖರ್ ನಿರ್ದೇಶಿಸಿದ್ದರು.  ಎರಡನೆಯ ಸಲ 1956ರಲ್ಲಿ ಕು.ರ.ಸೀ ಅವರ ನಿರ್ದೇಶನದಲ್ಲಿ ಕಲ್ಯಾಣ್ ಕುಮಾರ್, ಸಾಹುಕಾರ್ ಜಾನಕಿ, ನರಸಿಂಹರಾಜು ಮುಂತಾದವರ ತಾರಾಗಣದಲ್ಲಿ ಸದಾರಮೆ ತೆರೆ ಕಂಡಿತು. ಇದು ಭಾಗಶಃ ವರ್ಣದಲ್ಲಿತ್ತಂತೆ.  ದುರದೃಷ್ಟವಶಾತ್ ಈ ಎರಡೂ ಚಿತ್ರಗಳ ಪ್ರಿಂಟ್ ಆಗಲಿ ವೀಡಿಯೊ ಆಗಲಿ ಇದ್ದಂತಿಲ್ಲ. ಆದರೆ ಅದೃಷ್ಟವಶಾತ್ 1956ರ ಸದಾರಮೆಯ ಹತ್ತು ಸುಮಧುರ ಹಾಡುಗಳು ಲಭ್ಯವಿವೆ. ಕು.ರ.ಸೀ ನಿರ್ದೇಶನದ ಸದಾರಮೆ ತೆಲುಗಿನಲ್ಲೂ ತಯಾರಾಗಿತ್ತು. 

ಆಗ ಪ್ರಕಟವಾಗುತ್ತಿದ್ದ ನಗುವ ನಂದ ಎಂಬ ಮಾಸಪತ್ರಿಕೆಯ ಜೂನ್ 1956ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಸದಾರಮೆ ಚಿತ್ರದ ವಿಮರ್ಶೆಯನ್ನು ಇಲ್ಲಿ ನೋಡಬಹುದು.





ಕು.ರ.ಸೀ ನಿರ್ದೇಶನದ ಸದಾರಮೆ ಚಿತ್ರದ ಸಂಗೀತ ನಿರ್ದೇಶಕರು ಆರ್. ಸುದರ್ಶನಂ ಮತ್ತು ಗೋವರ್ಧನ್.  ಸಂಭಾಷಣೆ ಹಾಡುಗಳನ್ನು  ಬರೆದವರು ಸ್ವತಃ ಕು.ರ.ಸೀ. ಮಾಧವಪೆದ್ದಿ ಸತ್ಯಂ ಮತ್ತು ಎ.ಎಂ ರಾಜಾ ಅವರ ಧ್ವನಿ ಒಂದೊಂದು ಹಾಡಿನಲ್ಲಿ ಕೇಳಿಸುತ್ತದೆ. ಉಳಿದೆಲ್ಲವುಗಳನ್ನು ಹಾಡಿದವರು ಟಿ.ಎಂ. ಸೌಂದರರಾಜನ್ ಮತ್ತು ಪಿ.ಸುಶೀಲಾ. ಆಗಿನ ಚಿತ್ರಗಳಲ್ಲಿ ಪಿ.ಲೀಲಾ, ಸೂಲಮಂಗಲಂ ರಾಜಲಕ್ಷ್ಮಿ, ಜಿಕ್ಕಿ, ಜಮುನಾ ರಾಣಿ  ಮುಂತಾದವರ ಜೊತೆಯಲ್ಲಿ  ಪಿ. ಸುಶೀಲಾ  ಅವರ ಧ್ವನಿ ಆಗೊಮ್ಮೆ ಈಗೊಮ್ಮೆ ಅಷ್ಟೇ ಕೇಳಿ ಬರುತ್ತಿತ್ತು.  ಅವರೇ ಎಲ್ಲ ಹಾಡುಗಳನ್ನು ಹಾಡಿದ ಪ್ರಥಮ ಕನ್ನಡ ಚಿತ್ರ ಇದಾಗಿರಬಹುದೇನೋ ಎಂದು ನನ್ನ ಗುಮಾನಿ. ತಮಿಳು ಚಿತ್ರರಂಗದ ಆಥೆಂಟಿಕ್ ಧ್ವನಿ ಎಂದೇ ಖ್ಯಾತರಾದ ಟಿ.ಎಂ. ಸೌಂದರರಾಜನ್ ಈ ಚಿತ್ರದ ಮುಖ್ಯ ಗಾಯಕರಾಗಿದ್ದುದೂ ಒಂದು ವಿಶೇಷ.  ಇದನ್ನು ಬಿಟ್ಟರೆ ಕನ್ನಡದ ರತ್ನಗಿರಿ ರಹಸ್ಯ ಚಿತ್ರದಲ್ಲಿ ಒಂದೆರಡು ಹಾಡುಗಳು, ಓಹಿಲೇಶ್ವರ,  ಭಕ್ತ ಮಲ್ಲಿಕಾರ್ಜುನ, ಪ್ರೇಮಮಯಿ, ಸಿಂಹಸ್ವಪ್ನ ಮುಂತಾದ ಕೆಲ ಚಿತ್ರಗಳಲ್ಲಿ ಒಂದೊಂದು  ಹಾಡನ್ನಷ್ಟೇ ಅವರು ಹಾಡಿರುವುದು.  ಸದಾರಮೆಯಲ್ಲಿ ಹತ್ತು ಹಾಡುಗಳಿದ್ದರೂ ಅಂದಿನ ದಿನಗಳಲ್ಲಿ ಇವರು ಹಾಡಿದ ಬಾರೆ ಬಾರೆ ನನ್ನ ಹಿಂದೆ ಹಿಂದೆ ಮತ್ತು  ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ ಮಾತ್ರ ರೇಡಿಯೋದಲ್ಲಿ ಕೇಳಿಬರುತ್ತಿದ್ದುದು.   ಇವರ ಕತ್ತಿಯ ಅಂಚಿನಂಥ ಕಂಚಿನ ಕಂಠದಲ್ಲಿ ಈ ಹಾಡುಗಳನ್ನು ಕೇಳಿದ ಮೇಲೆ ಸೌಮ್ಯ ಧ್ವನಿಯ ಇತರ ಗಾಯಕರ ಹಾಡುಗಳು ಸಪ್ಪೆ ಎನಿಸಿ ಇವರೇ ಇನ್ನಷ್ಟು ಕನ್ನಡ ಹಾಡುಗಳನ್ನು ಹಾಡಬೇಕಿತ್ತು ಅನ್ನಿಸುತ್ತಿದ್ದುದೂ ಉಂಟು. ಸ್ವಲ್ಪ ಅನುನಾಸಿಕತೆ, ತಮಿಳು ಹಾಡುಗಳಿಗೆ ಬೇಕಾದ ಒರಟುತನ,  ಸ್ಪಷ್ಟ ಉಚ್ಚಾರ, ಶ್ರುತಿ ಶುದ್ಧತೆ, ಶಕ್ತಿ ಶಾಲಿ voice throw ಇವೆಲ್ಲ ಮೇಳೈಸಿದ ಇವರ ಧ್ವನಿಯನ್ನು ನಾನು ಹುಳಿ, ಸಿಹಿ, ಒಗರು ಎಲ್ಲ ರುಚಿಗಳು ಸೇರಿದ  ಹಾಗಲಕಾಯಿಯ ಚಟ್ಟುಹುಳಿಗೆ ಹೋಲಿಸುವುದುಂಟು!


ಇದಿಷ್ಟು ಪೂರ್ವರಂಗದ ನಂತರ ಈಗ ಆ ಹತ್ತು ಹಾಡುಗಳನ್ನು ಒಂದೊಂದಾಗಿ ಆಸ್ವಾದಿಸೋಣ. ಅತ್ಯುತ್ತಮ ಗುಣಮಟ್ಟದ ಧ್ವನಿಯ ಇವುಗಳನ್ನು ಹೆಡ್ ಫೋನಲ್ಲಿ ಆಲಿಸಿದರೆ ಹೆಚ್ಚಿನ ಆನಂದ ಹೊಂದಬಹುದು.

1. ವನರಾಣಿ ಎಲ್ಲಿಂದ ತಂದೆ
ಇದು ಪಿ.ಸುಶೀಲಾ ಧ್ವನಿಯಲ್ಲಿದೆ. ಸಖಿಯರೊಂದಿಗೆ ಉದ್ಯಾನವನದಲ್ಲಿ ವಿಹರಿಸುತ್ತಿರುವ ಸದಾರಮೆ ಇದನ್ನು ಹಾಡಿರಬಹುದೆಂದು ನನ್ನ ಊಹೆ.  ಪ್ರಕೃತಿಯನ್ನು ವರ್ಣಿಸುವ ಇಂತಹ ಇತರ ಚಿತ್ರಗೀತೆಗಳಿಂದ ಭಿನ್ನವೇನಲ್ಲ.  ಕೇಳಲು ಇಂಪಾಗಿದೆ.


ವನರಾಣಿ ಎಲ್ಲಿಂದ ತಂದೆ ಚೆಲುವ
ಮನವ ಸೆಳೆವ ಸುಂದರ ಭಾವ
ಹೇಳೆ ವನರಾಣಿ ಎಲ್ಲಿಂದ ತಂದೆ

ಎಲ್ಲ ಸಿಂಗಾರ ವೈಯಾರ ಯಾವುದೇ
ನಲ್ಲೆ ನಿನಗಿಂತ ಮಂದಾರ ಯಾವುದೇ
ಈ ಪರಿಯ ಮೈ ಸಿರಿಯ
ಯಾರಲ್ಲಿ ನೀ ತಂದೆ ಜಾಣೆ

ಬಿಡುವೇ ಇಲ್ಲದ ಸಡಗರವೇನೆ
ಸಂತಸವೀವ ಸಂಭ್ರಮವೇನೆ
ಎಲ್ಲೆಲ್ಲೂ ತುಂಬಿರುವೆ
ನೂರಾರು ಸಾಧನ
ಸಖಿ ನಿನ್ನ ಜೀವನ ಪಾವನ
ತಣಿಸಿರುವೆ ಕಣ್ಮನ



2. ಪ್ರೇಮವೇ ಲೋಕದ ಜೀವ
ಈ ಚಿತ್ರದಲ್ಲಿ ಎ.ಎಂ ರಾಜಾ ಹಾಡಿರುವ ಏಕೈಕ ಹಾಡಿದು.  ಜೊತೆಯಲ್ಲಿ ಪಿ.ಸುಶೀಲಾ ಕೂಡ ಇದ್ದಾರೆ. ಕಥೆಯಲ್ಲಿ ಕ್ಷತ್ರಿಯ ರಾಜಕುಮಾರನು ವೈಶ್ಯ ಕುಲದ ಸದಾರಮೆಯನ್ನು ವಿವಾಹವಾಗಿರುವುದರಿಂದ ಜಾತಿ ಮತ ಮೀರಿದ ನವೋದಯದ ಉಲ್ಲೇಖ ಇದರಲ್ಲಿರುವುದನ್ನು ಗಮನಿಸಬಹುದು. ರಾಜ್ಯ ಕಳೆದುಕೊಂಡರೂ ಹೊಸದಾಗಿ ವಿವಾಹವಾದ ಖುಶಿಯಲ್ಲಿ ನವದಂಪತಿಗಳು ಇದನ್ನು ಹಾಡಿರಬಹುದು.


ಪ್ರೇಮವೇ ಲೋಕದ ಜೀವ
ಆನಂದವೀ ಭಾವ
ಮನ್ಮಂದಿರದಧಿದೈವ
ನಿರಂತರ ತೇಜೋ ವೈಭವ

ಪ್ರೇಮಕೆನೆ ಬೇರೆ ಸೌಖ್ಯ
ಬೇರೆ ಭಾಗ್ಯ ನಾ ಕಾಣೆನೇ
ಪ್ರೇಮ ಗುರು ಪಾದ ಪೂಜೆ ಆರಾಧನೆ
ಪ್ರೇಮವೇ ಲೋಕದ ಜೀವ

ನಿರಾತಂಕವೀ ರೀತಿ
ಈ ನೀತಿ ನಿರ್ಮಲ ಪ್ರೀತಿ
ಪುರಾತನ ಪ್ರೀತಿ ಪಥಕೆ
ಜಾತಿ ಮತದ ಭೀತಿ
ನವೋದಯಕೆ ನೀನೇ ಜ್ಯೋತಿ
ನೀನೇ ಎನ್ನಯ ಕಾಂತಿ
ಪ್ರೇಮಿಗಳ ಪ್ರೀತಿ ಮುಂದು
ಜಾತಿ ಹಿಂದು ಎಂದಾದರೂ
ಪ್ರೇಮಿಗಳ ಕೀರ್ತಿಯೊಂದೇ
ಸ್ಪೂರ್ತಿ ಮುಂದೆ ಎಂದೆಂದಿಗೂ


3. ಬಿರುಗಾಳಿ ಬಡಿದ
ವಿಷಾದ ಭಾವದ ಈ ಹಾಡು ಪಿ.ಸುಶೀಲಾ ಅವರ ಧ್ವನಿಯಲ್ಲಿದೆ. ರಾಜಕುಮಾರನಿಂದ  ಬೇರ್ಪಟ್ಟು ಇತರರಿಂದ ಕಿರುಕುಳಕ್ಕೊಳಗಾದ ಸದಾರಮೆಯ ವೇದನೆ ಇದಾಗಿರಬಹುದು.


ಕೊನೆಯೇ ಕಾಣೆ ಈ ವೇದನಾ ಪರಂಪರೆಗೆ
ರಾಜಕುವರನ ಕೈ ಹಿಡಿದ ಅಪೂರ್ವ ಭಾಗ್ಯದ ಫಲ ಇದೇನೆ
ಇದೇನೆ

ಬಿರುಗಾಳಿ ಬಡಿದ ಹರಿಗೋಲ ತೆರದಿ
ಬದುಕೆಲ್ಲ ಬಯಲಾಯಿತೇ
ಬದುಕೆಲ್ಲ ಬಯಲಾಯಿತೇ ನೆನೆದ
ಸಿಹಿಯೆಲ್ಲ ಕಹಿಯಾಯಿತೇ

ಹೃದಯದ ವೇದನೆ ಅದರಲಿ ಶೋಧನೆ
ಹದಗೈವೆ ವಿಧಿ ನೀನೆ
ವಿಧಿ ನೀನೆ

ಮುಗಿಲೇರಿತೇ ಸೊಗ ಸಿಗದೆ ನೋಟಕೆ
ಜಗವೆಲ್ಲ ಹಗೆಯಾಯಿತೇಕೆ
ಮಾನವತೆ ತೊರೆದಾ ಜಗದಲ್ಲಿ
ಮಾನದಿ ಜೀವಿಸುವ ಸತಿಗೆ
ಮರುಭೂಮಿ ಧರೆಯಾಯಿತೇ


4. ಕರುಣಾಳು ಕಾಯೊ ದೇವ
ಪಿ.ಸುಶೀಲಾ ಅವರ ಧ್ವನಿಯಲ್ಲಿರುವ ಇದು ಕೂಡ ವಿಷಾದ ಭಾವದ ಗೀತೆ.


ಕರುಣಾಳು ಕಾಯೊ ದೇವ
ಪರದೇಸಿಯಾದೆ ನಾ
ಮೊರೆ ಲಾಲಿಸಿ ಪೊರೆ ಶೀಲವ
ಚಿರ ಕಾಲ ದೇವ ದೇವ

ತೆರೆದೀತೆ ಮರಳಿ ಬಾಳು
ಹರಿದೀತೆ ಸೆರೆವಾಸ
ಪರಿಹಾರದ ಪರಿ ಕಾಣೆನೊ
ಪೊರೆಯೈ ಮಹಾನುಭಾವ

ಮೊರೆ ಕೇಳಿ ಸತಿಯ ಕಾದೆ
ಕುರುರಾಜ ಸಭೆಯಲ್ಲಿ
ವರ ನೀಡಿದೆ ಕೃಪೆ ತೋರಿದೆ
ಅಪಮಾನ ದೂರಗೈದೆ

ದಯ ತೋರು ದಿವ್ಯ ರೂಪ
ಹರಿಸೆನ್ನ ಸಂತಾಪ
ತಡ ಮಾಡದೆ ಬಡ ದಾಸಿಯ
ಕೈ ನೀಡಿ ಕಾಯೊ ದೇವ


5. ಬಾಳುವೆಯ ದೇಗುಲದ
ಓ.ಪಿ. ನಯ್ಯರ್ ಅವರು ಹೊಸತನದ ಹಾಡುಗಳಿಗೆ ನಾಂದಿ ಬರೆದ  Mr and Mrs 55 ಚಿತ್ರದ ಥಂಡಿ ಹವಾ ಕಾಲಿ ಘಟಾ ಆ ಹೀ ಗಯಿ ಝೂಮ್ ಕೆ ಧಾಟಿಯಲ್ಲಿದೆ ಇದು.  50ರ ದಶಕದಲ್ಲಿ ಕನ್ನಡ ಚಿತ್ರಗಳಲ್ಲಿ ಹಿಂದಿ ಧಾಟಿಗಳನ್ನು ಬಳಸುವುದು ಸಾಮಾನ್ಯವಾಗಿತ್ತು.


ಬಾಳುವೆಯ ದೇಗುಲದ ಬಾಗಿಲ ನೀ ತೆರೆದೆಯಾ
ತಾಳಿಮಣಿ ತಂದೀವ ದೇವನಾಗಿ ಮೆರೆದೆಯಾ

ಬಾರಿ ಬಾರಿ ಹಾತೊರೆದ ಸಂತಸವ ತಂದೆಯಾ
ಕ್ರೂರ ಸೆರೆ ಕೊನೆಗೈದ ನನ್ನ ದೊರೆ ಬಂದೆಯಾ
ಪ್ರೇಮಜಲ ಭಕ್ತಿ ಸುಮ ಪೂಜೆಗಾಗಿ ತಂದಿಹೆ
ನಿನ್ನಡಿಯ ನೂರು ಬಗೆ ಸೇವೆಗಾಗಿ ಬಂದಿಹೆ

ಹೇಳಿ ಕೇಳಿ ಕಾಣದಿರುವ ಲೋಕಕೆಳೆವ ಸುಂದರ
ನಿನ್ನೊಲವೇ ಸ್ವರ್ಗ ಸುಖ ನೀಡೈ ನಿರಂತರ
ಎಡವಿದೆನೇ ದುಡುಕಿದೆನೇ ಘನತೆ ಮೀರಿ ನಡೆದೆನೇ
ವಿರಹಿಣಿಯ ಸರಳತೆಯ ಮನ್ನಿಸೈ ಮಹಾಶಯ

6.ಕಾಣದ ಹೆಣ್ಣ ಕರೆ ತಂದೋನೆ
ಪಿ.ಸುಶೀಲಾ ಮತ್ತು ಸೌಂದರರಾಜನ್ ಅವರ ಧ್ವನಿಯಲ್ಲಿರುವ ಈ ಹಾಡನ್ನು ಕೇಳಿದೊಡನೆ ನಿಮಗೆ ಬಂಬಯಿ ಕಾ ಬಾಬು ಚಿತ್ರದ ದೇಖನೆ ಮೆ ಭೋಲಾ ಹೈ ಬಾಬು ಚಿನ್ನನ್ನ ನೆನಪಾಗಬಹುದು.  ಆದರೆ ಗಮನಿಸಿ - ಅದು 1960ರ ಚಿತ್ರ.  ಸದಾರಮೆ ಬಂದದ್ದು 1957ರಲ್ಲಿ.  ಹೌದು, ಸರಿಯಾಗಿ ಊಹಿಸಿದಿರಿ. ಈ ಧಾಟಿ ದಕ್ಷಿಣದಿಂದಲೇ ಉತ್ತರಕ್ಕೆ ಹೋದದ್ದು.  ಆದರೆ ಕನ್ನಡದಿಂದಲ್ಲ.  ಈ ಮೊದಲೇ ಮದುರೈ ವೀರನ್ ಎಂಬ ತಮಿಳು ಚಿತ್ರದಲ್ಲಿ  ಮತ್ತು ವಹೀದಾ ರಹಮಾನ್ ನಟಿಸಿದ ಮೊದಲ ಚಿತ್ರ ತೆಲುಗಿನ ರೋಜುಲು ಮಾರಾಯಿ ಚಿತ್ರಗಳಲ್ಲಿ ಬಳಕೆಯಾಗಿತ್ತು. ಈ ಧಾಟಿಯನ್ನು ವಹೀದಾ ಅವರೇ ಮುಂಬಯಿಗೆ ಒಯ್ದದ್ದಂತೆ.  ಅಲ್ಲಿ ಇದು ಬಂಬಯಿ ಕಾ ಬಾಬು ಅಲ್ಲದೆ ಇನ್ನೂ ಒಂದೆರಡು ಚಿತ್ರಗಳಲ್ಲಿ ಬಳಕೆಯಾಯಿತು.


ಕಾಣದ ಹೆಣ್ಣ ಕರೆ ತಂದೋನೆ
ಜಾಣರ ಮೋರೆಗೆ ಮಸಿ ಬಳೆದೋನೆ
ಹ್ಯಾಂಗ ತಾನೇ ನಂಬಲೋ ಗೆಳೆಯ ನಾ ನಿನ್ನ
ಈ ಆಟವೆಲ್ಲ ಮೂರು ದಿನ ಬಲ್ಲೆ ನಾ ನಿನ್ನ

ಜೀವ ಇರೋ ತನಕ ದೇವರಾಂಗೆ ಕಾಣ್ತೀನಿ
ಜೀವ ನನ್ನ
ಜೀವ ಇರೋ ತನಕ ದೇವರಾಂಗೆ ಕಾಣ್ತೀನಿ
ನಿನ್ನ ಜೀವ ಇರೋ ತನಕ ದೇವರಾಂಗೆ ಕಾಣ್ತೀನಿ
ಆಸೆ ಇಟ್ಟ ಮ್ಯಾಲೆ ನಾನು ಮೋಸ ಮಾಡೊ ಹೈದ ಅಲ್ಲ
ಅಲ್ಲ ಅಲ್ಲ ಅಲ್ಲ
ದಿಟವೋ ಸಟೆಯೊ ಬರಿಯುಪ್ಪಟೆಯೊ
ದಿವಸದ ಬಾಳೋ ಜನುಮದ ಹಾಳೊ
ಹುತ್ತದಾಗೆ ಕೈಯ ಮಡಗಿದ ಮ್ಯಾಲೆ
ಮೆತ್ತಗಿರೊ ಮಣ್ಣೊ ಹಾವೊ ಚೇಳೊ
ಹ್ಯಾಂಗ ತಾನೇ ..

ಅಂಜಿಕೆಗೊಂದೇ ನಂಬಿಕೆ ಮದ್ದು
ಸುಖವೇ ಚಿಂತೆಗೆ ಸಿಡಿಮದ್ದು
ಅದಕೆ ಚಿನ್ನ ನಿನ್ನ ಕೈಯಾರೆ ಕದ್ದು
ನಾಜೂಕಿನಿಂದ ನಾ ಕರೆತಂದದ್ದು

ಅಂಜಿಕೆ ಬಿಟ್ಟು ನಂಬಿಕೆಯಿಟ್ಟು
ಮುಂಜಾನಿಂದ ಸಂಜೆ ತನಕ
ಆಡಿ ಹಾಡಿ ಕುಣಿಯೋಣು
ಜೋಕ ಆಡೋಣು
ಈ ಮೋಜಿನಾಗೆ ಗೆಣೆತನವ
ಬೆಳಸಿ ಬಾಳೋಣು

7. ಏಳುವೆ ಕಣಿ
ಸೌಂದರರಾಜನ್ ಹಾಡಿರುವ ಈ ಹಾಡು ಚಿತ್ರದ ಯಾವ ಸನ್ನಿವೇಶದ್ದಿರಬಹುದು ಎಂದು ಗೊತ್ತಿಲ್ಲ. ಸದಾರಮೆ ಕಥೆಯಲ್ಲಿ ಕೊರವಂಜಿ ಪಾತ್ರ ಇದ್ದಂತಿಲ್ಲ.  ಚಿತ್ರದಲ್ಲಿ ರಂಜನೆಗಾಗಿ ಸೇರಿಸಿರಬಹುದು.


ಏಳುವೆ ಕಣಿಯ ಏಳುವೆ ಕಣಿಯ
ಹೊಯ್
ಏಳುವೆ ಕಣಿಯ ಏಳುವೆ ಕಣಿಯ
ಏಳುವೆ ಕಣಿ ಏಳುವೆ ಕಣಿ  ಏಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಏಳುವೆ ಕಣಿಯ

ಇದ್ದುದೆಲ್ಲ ಇದ್ದಾಂಗೆ ಹೇಳುವೆ ಕಣಿಯ
ಮನಸಿನಾಗೆ ನೆನೆಸಿದಾಂಗ
ಎಳಿಯಾ ಬಿಳಿಯಾ ಗೆಳೆಯಾ
                           
ಹಾಳಿ ಮೂಳಿ ಗಾಳಿ ನನ್ನ ಕರ್ಣ ಪಿಸಾಚಿ
ಯಂತ್ರ ಮಂತ್ರ ತಂತ್ರ ಎಲ್ಲ ಬಲ್ಲೆ ಕುತಂತ್ರ
ಮದ್ದಿನ ಕಣಿ ಮಾಟದ ಕಣಿ ಭೂತದ ಕಣಿ ಪ್ರೇತದ ಕಣಿ
ಜಂಟಿ ಬಂದು ಕುಂತಳಕ್ಕೆ ಜಾರಿದ ಹಾರಿದ ಕಣಿಯಾ

ಹೊಸ ಸುದ್ದಿ ಕೇಳಿ ಹೊಸ ಸುದ್ದಿ
ಹೊಸ ಸುದ್ದಿ ಹೊಸ ಸುದ್ದಿ ಬಿಸಿ ಬಿಸಿ ಸುದ್ದಿ
ಹೊಳೆ ಸುದ್ದಿ ಮಳೆ ಸುದ್ದಿ ಹೇಳುವೆ ಬುದ್ಧಿ
ರೊಕ್ಕದ ಸುದ್ದಿ ಮಕ್ಕಳ ಸುದ್ದಿ
ಅಕ್ಕರೆಯ ಸಕ್ಕರೆಯ
ಚಿಕ್ಕ ಹೆಣ್ಣ ಕೈ ಹಿಡಿಯೊ ಲೆಕ್ಕದ ಕಣಿಯ


8. ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ
ಗ್ರಾಂಥಿಕ ಭಾಷೆಯ ಪದಪುಂಜಗಳನ್ನೊಳಗೊಂಡ ಪ್ರಾಸಬದ್ಧ ಹಾಡುಗಳಿಗೆ ಹೆಸರಾದ ಕು.ರ.ಸೀ ಅವರು ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ದೇಸೀ ಶೈಲಿಯಲ್ಲಿ ರಚಿಸಿದ ಗೀತೆ ಇದು.  ಸೌಂದರರಾಜನ್ ಅವರ ಗಾಯನ ಪ್ರತಿಭೆಯ ಪೂರ್ಣ ಅನಾವರಣ ಇಲ್ಲಾಗಿದೆ ಅನ್ನಬಹುದು. ಪಲ್ಲವಿ ಭಾಗ ಮಾತ್ರ ತಾಳದಲ್ಲಿದ್ದು ಸುದೀರ್ಘವಾದ ಮೂರೂ ಚರಣಗಳು ಆಲಾಪ ರೂಪದಲ್ಲಿವೆ. ಪಂಜಾಬಿನ ಹೀರ್ ಮತ್ತು ಮಹಾರಾಷ್ಟ್ರದ ಲಾವ್ಣಿ ಶೈಲಿಯಲ್ಲಿರುವ  ಈ ಆಲಾಪಗಳಲ್ಲಿ ಬರುವ ಡಿಜಿಟಲ್ ಶೈಲಿಯ ಒರಟುತನ ಹಾಡಿಗೆ ವಿಶೇಷ ಮೆರುಗು ನೀಡಿದೆ. ಸದಾರಮೆಯನ್ನು ಕದ್ದೊಯ್ದ ಮೇಲೆ ಕಳ್ಳನು ಆಕೆಗೆ ತನ್ನನ್ನು ಪರಿಚಯಿಸುವ ಸಂದರ್ಭದ ಹಾಡಾಗಿರಬಹುದು ಇದು. ಇದರ ಮೂರನೆ ಚರಣದಲ್ಲಿ ಮಂದಿಯ ಹೊಟ್ಟೆ ಮೇಲೆ ಹೊಡೆದು ಹಣಗಾರ ಸಂಪತ್ತು ಸಂಪಾದಿಸುತ್ತಾನೆ, ಅರಸ ತೆರಿಗೆ ರೂಪದಲ್ಲಿ ಆ ಹಣಗಾರನ ಸುಲಿಗೆ ಮಾಡುತ್ತಾನೆ ಎಂಬರ್ಥದ ಸಾಲುಗಳು ಗಮನ ಸೆಳೆಯುತ್ತವೆ.


ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ
ಈ ಸೀಮೆಗೆಲ್ಲ ಒಬ್ಬನೆ ನಾ ಜಾಣ
ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ
ಬಿಲ್ಲಿನಿಂದ ಬಿಟ್ಟ ಹಾಂಗೆ ಸುಂಯ್ ಬಾಣ
ನೀ ಬೀರಿ ಬೀರಿ ವಾರೆಗಣ್ಣ ಬಿನ್ನಾಣ

ಕೈ ಕೆಸರಾಗದೆ ಮಾಡುವೆ ಮೈ ಬೆವರದ ದುಡಿಮೆಯ
ನನಗಾಗಿ ಕೂಡ್ಸವ್ನೆ ಹಣಗಾರ ರಾಸಿ ಬಂಗಾರ
ಕೊಟ್ಟೇನೆ ಅಂತ ಕಾದವ್ನೆ ಪೂರ
ಸದ್ಯ ಕೊಟ್ಟೇನೆ ಅಂತ ಕಾದವ್ನೆ ಪೂರ
ಅವನ ಬುರುಡೆಗೆ ಕಾಸುವೆ ಬಿಸಿ ನೀರ
ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ
ಚಿನ್ನ ನನ್ನ ಪುರಾಣವ ಕೇಳ್ ಬ್ಯಾಡ್ವೆ  ಕೇಳ್ ಬ್ಯಾಡ್ವೆ ಕೇಳ್ ಬ್ಯಾಡ್ವೆ
ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ

ಕೋಟೆ ಮ್ಯಾಲೆ ನಿನ್ನ ಬಚ್ಚಿಟ್ಟು
ಕಣ್ ಮುಚ್ಚಿದನೊಬ್ಬ ಹುಲಿಯಣ್ಣ
ಮೂಟೆ ನೂಲೇಣಿ ಬಲವಾಗಿ ಕಟ್ಟಿ
ಕಾದಿದ್ದನಿನ್ನೊಬ್ಬ ಕಿರುಗಣ್ಣ
ಇಬ್ಬರಿಗೂ ಕೈ ಕೊಟ್ಟ ಮತ್ತೊಬ್ಬ ಅಣ್ಣ
ಆ ಇಬ್ಬರಿಗೂ ಕೈ ಕೊಟ್ಟ ಮತ್ತೊಬ್ಬ ಅಣ್ಣ
ಆ  ಭೂಪತಿ ನಾನೇ ನರಿಯಣ್ಣ
ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ

ಹತ್ತು ಜೀವಗಳ ತುತ್ತಿಗೆ ಕೈ ಇಕ್ಕಿ
ಹೊತ್ತು ಕೂಳುಣ್ಣುವ ನರ ಮಾನವ
ನೂರು ಮಂದಿಯ ಹೊಟ್ಟೆ ಮ್ಯಾಲೆ ಹೊಡೆದು
ಹಣಗಾರ ಹೇರುವ ಬಂಗಾರವ
ಹಣಗಾರರ ಸುಲಿಗೆ ಮಾಡ್ಯಾನೊ ಅರಸ
ಈ ಹಣಗಾರರ ಸುಲಿಗೆ ಮಾಡ್ಯಾನೊ ಅರಸ
ಈ ಸುಲಿಗೆಯ ಕಸುಬಿಗೆ ಗುರು ನಾನೇ
ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ

9. ಬಾರೆ ಬಾರೆ ನನ್ನ
ಚಿತ್ರದ ಅತಿ ಜನಪ್ರಿಯ ಹಾಡಿದು. ಪುರುಷ ಧ್ವನಿಗೆ ಹೆಚ್ಚಾಗಿ ಬಳಸದ G  ಅಂದರೆ ಬಿಳಿ 5 ಶ್ರುತಿಯಲ್ಲಿ ಸೌಂದರರಾಜನ್ ಇದನ್ನು ಹಾಡಿದ್ದಾರೆ.  ಚಲನಚಿತ್ರ ಗೀತೆಗಳ ಸಿದ್ಧ ಶೈಲಿಗೆ ಹೊರತಾದ ಇದರ ಎರಡು ಮತ್ತು ಮೂರನೆಯ ಚರಣಗಳು ಎಷ್ಟು ದೀರ್ಘವಾಗಿವೆ ಎಂಬುದನ್ನು ಗಮನಿಸಿ. ಟಂಗ್ ಟ್ವಿಸ್ಟರ್ ಮತ್ತು RAP ಸಂಗೀತಗಳ ಮಿಶ್ರಣವಾಗಿರುವ ಇದು ಕನ್ನಡದ ಈ ರೀತಿಯ ಏಕೈಕ ಹಾಡು ಅನ್ನಬಹುದು.


ಬಾರೆ ಬಾರೆ ನನ್ನ ಹಿಂದೆ ಹಿಂದೆ
ಹೆಣ್ಣೆ ಮೆಚ್ಚಿ ಬಂದ ಪುರುಸರೆಲ್ಲ ಒಂದೇ ಒಂದೇ
ಬ್ಯಾರೆ ದಾರಿ ನಿಂಗೆ ತೋರ್ಸ್ತೀನ್ ಮುಂದೆ
ನೀ ಬೆಚ್ಚಿ ಬಿದ್ದು ನೋಡಬ್ಯಾಡ ಹಿಂದೆ ಮುಂದೆ

ಗತ್ತು ತಿಂದ ಗಂಡನೋ ಸುತ್ತು ಹೊಡೆದ ಭಂಡನೋ
ಸಿಟ್ಟಿನಿಂದ ಕೈ ಹಿಡಿದ ಪುಂಡನೋ ಪ್ರಚಂಡನೋ
ಕುಂತಲ್ಲೇ ಕಾಯಿಸದೆ ಬಂದೋನೆ ಮನ್ಮಥ
ಬಾರೆ ಬಾರೆ ಬಾ ಬಾರೆ ನನ್ನ ಹಿಂದೆ ಹಿಂದೆ

ಬಿಂಕವಾಗಿ ಕರೆತಂದೆ ಮಂಕು ಬೂದಿ  ಊದಿ ಬಂದೆ
ಶಂಖವಾದ ಮಾಡ್ತಾರಲ್ಲೋ ಹರಹರಾ
ಕಿಂಕರರ ಕಾಪಾಡೋ ಶಂಕರ
ಸರಸರ ಮುಂದೆ ಸರಿ ಕಿರಿ ಕಿರಿ ಕಿನ್ನರಿ
ಸರಸರಸರ ಮುಂದೆ ಸರಿ ಕಿರಿ ಕಿರಿ ಕಿರಿ ಕಿನ್ನರಿ
ಚಿರುಮುರಿ ಜಾಣಮರಿ ಠಾಕು ಠೀಕು ಠಿಂಗರಿ
ಚಿರುಮುರಿ ಜಾಣಮರಿ ಠಕುಟಿ ಕುಟಿಕು ಠಿಂಗರಿ
ನಗುತ್ತಾ...  ಅಳುತ್ತಾ...
ಬಡಬಡನೆ...
ಹಾಗೆ ಹೀಂಗೆ ಇಡು ಅಡಿ ಬಿಡುಗಡಿ ನಡಿನಡಿ
ಗಡಿಬಿಡಿ ಇಡುಅಡಿ ನಡಿನಡಿ ಹಿಂದಡಿ ಮುಂದಡಿ ನಡಿನಡಿ
ತಾಂಗಿಡ್ತ ತಾಂಗಿಡ್ತ ತಾ
ಸುಸ್ಸಾಂಗ್ಡ್ತ್ ತತ್ತಾಂಗ್ ತಾ
ತಳಾಂಗು ಧಿನ್ನ ತಕ್ಕತಾ

ಒಂಟಿಯಾಗಿ ಕಾದಿದ್ದೆ......
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ತಂಟೆಗಿಂಟೆ ಮ್ಯಾಡ್ ಬ್ಯಾಡವೇ ಜಂಜೂಟಿ
ತುಂಟತನ ತೋರ್ ಬ್ಯಾಡ್ವೆ ಬಿತ್ತರಿ
ನೀ ತುಂಟತನ ತೋರ್ ಬ್ಯಾಡ್ವೆ ಬಿತ್ತರಿ
ಕುಡಿ ಕುಡಿ ನೋಟ ಹುಡುಗಾಟ
ಉಲ್ಟಾ ಪಲ್ಟಾ
ಬಾ ಝಣಕ್ಕ್ ಝಣಕ್ಕ್
ಕುಣಿಯುತ ಬಾ
ಝಂ ಝಂ ಝಂ ಝಂ ಜಿಗಿಯುತ ಬಾ
ನೆಟ್ಟಗೆ ಬಾ ಸೊಟ್ಟಗೆ ಬಾ
ಮದ್ದಾನೆ ಮರಿಯಾನೆ
ಕಿರ್ರಾ ಮರ್ರಾ ಕುಯ್ಯೋ ಮರ್ರೋ
ಚಿನ್ನ ರನ್ನ ಸೀಮೆ ಸುಣ್ಣ
ಗುಡುಗುಡುಗುಡುಗುಡು ಗುರ್ರ್ ತಕಝಣುತಾ
ಹಾಂ ಣಕಣಕಣಕಣಕ ಠರ್ರ್ ತಕಧಿಮಿತಾ
ಹಾಂ ಡುಂಡುಂಡುಂಡುಂ ತೆರೀಪ್ಪಡಿತ್ತೊಂತಾ
ಬಾರೆ ಬಾರೆ ನನ್ನ ಹಿಂದೆ ಹಿಂದೆ

10. ಪಟ್ಟಾಭಿಷೇಕ

ಮಾಧವಪೆದ್ದಿ ಸತ್ಯಂ ಹಾಡಿರುವ ಇಷ್ಟೊಂದು ಸುಂದರವಾದ ಈ ಹಾಡನ್ನು ನಾನು ಕೇಳಿದ್ದೇ ಇತ್ತೀಚೆಗೆ.  ಎಲ್ಲಿ ಅಡಗಿತ್ತೋ ಏನೋ ಇದು ಇಷ್ಟೊಂದು ದಿನ! ಆದಿಮೂರ್ತಿ ತನ್ನ ಪಟ್ಟಾಭಿಷೇಕ ಸಂದರ್ಭದಲ್ಲಿ ಹಾಡುವ ಹಾಡಿದು ಎಂಬುದರಲ್ಲಿ ಸಂಶಯವಿಲ್ಲ. ಆತನ ಮಡದಿ ವೆಂಕಟಸುಬ್ಬಿಯ ಉಲ್ಲೇಖವೂ ಇದೆ ಇದರಲ್ಲಿ. ಆತನ ಮನೆ ಮಾತು ತೆಲುಗಿಗೆ ಪ್ರಾತಿನಿಧಿಕವಾಗಿ ಪಾಕಂ ಪಪ್ಪು ಕೂಡ ಇದೆ.  ಆ ಪಾತ್ರದಲ್ಲಿ ನಟಿಸಿದವರು ನರಸಿಂಹರಾಜು ಎಂದು ನನ್ನ ಊಹೆ.  ಈ ಹಾಡನ್ನು ಕೇಳುತ್ತಿದ್ದಂತೆ ಅವರ ಹಾವಭಾವಗಳು ತಾನಾಗಿ ಕಣ್ಣ ಮುಂದೆ ಬರುತ್ತವೆ.


ಪಟ್ಟಾಭಿಷೇಕ ಹೊಯ್
ಪಟ್ಟಾಭಿಷೇಕ ಹೊಯ್
ಸಿಕ್ಕಿದ ದಕ್ಕಿದ ಬೆಕ್ಕಸ ಬೆರಗಿನ ಪಟ್ಟಾಭಿಷೇಕ
ಹೋ ಪಟ್ಟಾಭಿಷೇಕ
ಹೋ ಹೋ ಪಟ್ಟಾಭಿಷೇಕ
ಪಟ್ಟಾಭಿಷೇಕ ಪಟ್ಟಾಭಿಷೇಕ
ಸಿಕ್ಕಿದ ದಕ್ಕಿದ ಸೊಗಸಿನ
ಪಟ್ಟಾಭಿಷೇಕ ಪಟ್ಟಾಭಿಷೇಕ
ಪ ಟ್ಟಾ ಭಿ ಷೇ ಕ

ತಕ್ಕಡಿ ಬಟ್ಟು ಎತ್ತಿಟ್ಟು
ಲೆಕ್ಕದ ಕಟ್ಟು ಮುಚ್ಚಿಟ್ಟು
ತೊಲಗಿಸು ಅಂಗಡಿ ಇಕ್ಕಟ್ಟು
ಭಲೆ ಭಲೆ ಅರಮನೆ ಬಿಕ್ಕಟ್ಟು
ಗದ್ದುಗೆ ಏರಿ ಹದ್ದನು ಮೀರಿ
ಗೆದ್ದವ ಗದ್ದಲ ಮಾಡುವ
ಪ ಟ್ಟಾ ಭಿ ಷೇ ಕ

ಅರಮನೆ ಸೊಂಪು ನನಗೆ ನನಗೆ
ಪಾಕಂ ಪಪ್ಪು ನಿನಗೆ ನಿನಗೆ
ಕಾಡಿನ ಸೊಪ್ಪು ನನ್ನ ಭಾವನಿಗೆ
ಪಾಪ ಅಯ್ಯೊ ಪಾಪ
ಪಾಪ ತುಂಬಾ ಪಾಪ
ಪಾಪ ಪುಟ್ಟ ಪಾಪ
ಮುದ್ದು ಪಾಪ
ಪಾಪಪಪ್ಪಪಪ್ಪಪ್ಪಪ್ಪ
ಪಟ್ಟಾಭಿಷೇಕ
ಹೇ
ಪಟ್ಟಾಭಿಷೇಕ ಪಟ್ಟಾಭಿಷೇಕ
ಪ ಟ್ಟಾ ಭಿ ಷೇ ಕ

ಕಾಪಿನ ಭಟರೇ ಬನ್ನಿ ಬನ್ನಿ
ಕಾಲಿನ ಹೆಜ್ಜೆ ಹಾಕಿ ಹಾಕಿ
ಕಾಲಿನ ಹೆಜ್ಜೆ ಹಾಕಿ ಹಾಕಿ
ಕಾಲಿನ ಹೆಜ್ಜೆ ಹಾಕಿ ಹಾಕಿ
ಎಡ ಬಲ ಎಡ ಬಲ  ಎಡ ಬಲ
ಬಲ ಎಡ ಬಲ ಎಡ ಬಲ ಎಡ
ಎಡಬಲ ಎಡಬಲ ಎಡಬಲ
ಧಣ ಧಣ
ದಡ್ಡ ಬಂತು ದಡ್ಡ ಬಂತು
ದಡಬಡ ದಡಬಡ ದಡಬಡ ಬಂತು
ಪಟ್ಟಾಭಿಷೇಕ

ಸುಬ್ಬಿ
ಯೆಂಕಟ್ ಸುಬ್ಬಿ
ಸುಬ್ಬಿ ಸುಬ್ಬಿ
ಯೆಂಕಟ್ ಸುಬ್ಬಿ ಸುಬ್ಬಿ
ಕಷ್ಟವಿಲ್ಲದೆ ಬಾರೆ
ದೃಷ್ಟಿ ತೆಗೆದು ಹೋಗೆ
ಸುಬ್ಬಿ ಸುಬ್ಬಿ
ಯೆಂಕಟ್ ಸುಬ್ಬಿ ಸುಬ್ಬಿ

ಅಪ್ಪ ನೀನೆ ಮಗಳ ಕೊಟ್ಟ ಜಾಣ
ಬೆಪ್ಪ ರಾಜ ರಾಜ್ಯ ಬಿಟ್ಟ ಕೋಣ
ದುಡ್ಡು ಕಾಸು ಸುರಿಯಲಿಲ್ಲ ಝಣ ಝಣ
ಪುಕ್ಕಟ್ಟೆ ರಾಜ್ಯ ಬಂತು
ಥಣ ಥಣ ಥಣ ಥಣ ಥಣ ಥಣ
ಪಟ್ಟಾಭಿಷೇಕ ಪಟ್ಟಾಭಿಷೇಕ
ಪ ಟ್ಟಾ ಭಿ ಷೇ ಕ

ಪಟ್ಟಾಭಿಷೇಕ ಪಟ್ಟಾಭಿಷೇಕ
ಪ ಟ್ಟಾ ಭಿ ಷೇ ಕ

ಈ ಚಿತ್ರದ ಧ್ವನಿವಾಹಿನಿಯಾದರೂ ಲಭ್ಯವಿದ್ದಿದ್ದರೆ ಕು.ರ.ಸೀ ಅವರ ಪ್ರಾಸಬದ್ಧ ಸಂಭಾಷಣೆಗಳ ಸ್ವಾದವೂ ನಮಗೆ ದೊರಕುತ್ತಿತ್ತು.  ಈ ಹತ್ತು ಹಾಡುಗಳಾದರೂ ಇರುವುದು ನಮ್ಮ ಸುದೈವವೆಂದುಕೊಳ್ಳೋಣ.

1955ರ ಚಂದಮಾಮ ದೀಪಾವಳಿ ಸಂಚಿಕೆಯ ಜಾಹೀರಾತಿನಲ್ಲಿ ಈ ಚಿತ್ರದ ಉಲ್ಲೇಖ ಇರುವುದನ್ನು ಕಾಣಬಹುದು. ಇಲ್ಲಿರುವ ಮೂರೂ ಚಿತ್ರಗಳು ಈಗ ವೀಕ್ಷಣೆಗೆ ಲಭ್ಯವಿಲ್ಲದಿರುವುದು ಕಾಕತಾಳೀಯವಾಗಿರಬಹುದು. ಆಗ ಚಲನಚಿತ್ರಗಳ ಪ್ರಚಾರಕ್ಕೂ ಎಂತಹ ಶಿಷ್ಟ ಭಾಷೆಯ ಪ್ರಯೋಗವಾಗುತ್ತಿತ್ತು ಎಂಬುದನ್ನೂ ಈ ಜಾಹೀರಾತಲ್ಲಿ ಗಮನಿಸಬಹುದು.













Sunday 16 June 2019

ಹತ್ತು ಹಾರ್ಮೋನಿಯಂ ಹಾಡುಗಳು


ಮೆಚ್ಚಿನ ಸಂಗೀತೋಪಕರಣ ಯಾವುದು ಎಂದು ಯಾರಾದರೂ ಕೇಳಿದ್ದೇ ಆದರೆ ನನ್ನ ಉತ್ತರ ಹಾರ್ಮೋನಿಯಂ ಎಂದೇ ಆಗಿದ್ದೀತು. ಯೋಗ್ಯ ಕೈಗಳಿಗೆ ಸಿಕ್ಕಿದರೆ ಇದರಿಂದ ಹೊರಡುವ ನಾದ ಮಾಧುರ್ಯಕ್ಕೆ ಸರಿಸಾಟಿ ಯಾವುದೂ ಇಲ್ಲ.  ಇಂಥ ಕೈಗಳು ಶಾಸ್ತ್ರೀಯ ಸಂಗೀತ ಕೋವಿದರದ್ದೇ ಆಗಿರಬೇಕಾಗಿಲ್ಲ.  ಕತ್ತಿಗೆ ನೇತುಹಾಕಿಕೊಂಡ ಹಾರ್ಮೋನಿಯಂ ನುಡಿಸುತ್ತಾ ಜೊತೆಯಲ್ಲಿ ಹಾಡುವ ಸ ಪ ಸ ಎಂದರೇನೆಂದು ಅರಿಯದ ಅನೇಕ ಬೀದಿ ಬದಿ ಹಾಡುಗಾರರ ಶ್ರುತಿಶುದ್ಧತೆ ನನ್ನನ್ನು ಬೆರಗುಗೊಳಿಸಿದ್ದಿದೆ.  ವರ್ಷಕ್ಕೆ ಒಂದೆರಡು ಸಲವಾದರೂ ನಮ್ಮ ಮನೆಗೆ ಇಂಥ  ಸಂಚಾರಿ ಕಲಾವಿದರು ಬರುವುದಿತ್ತು. ನಮ್ಮ ತಾಯಿಯ ಮನೆಯಲ್ಲಿ ಹಾರ್ಮೋನಿಯಂ ಇತ್ತು.  ಆದರೆ ಮರದ ಪೆಟ್ಟಿಗೆಯಲ್ಲಿ ಭದ್ರವಾಗಿರುತ್ತಿದ್ದ ಅದನ್ನು ಮುಟ್ಟುವ ಅಧಿಕಾರ ನಮಗೆ ಇರಲಿಲ್ಲ.  ಬೇಸಿಗೆ ರಜೆಯಲ್ಲಿ ಅಲ್ಲಿಗೆ ಹೋದಾಗ ಎಲ್ಲರ ಕಣ್ತಪ್ಪಿಸಿ ಮೆಲ್ಲಗೆ ರೀಡುಗಳ ಮೇಲೆ ಕೈಯಾಡಿಸಲು ಪ್ರಯತ್ನಿಸುವುದಿತ್ತು.  ನಮ್ಮ ಮನೆಯಲ್ಲೂ ಹಾರ್ಮೋನಿಯಂ ಇರುತ್ತಿದ್ದರೆ ನಾನು ಕೊಳಲಿನ ಬದಲು ಅದನ್ನೇ ಆರಿಸಿಕೊಳ್ಳುತ್ತಿದ್ದೆನೋ ಏನೋ.

ವಿದೇಶಿ ವಾದ್ಯವಾದರೂ ಪಿಟೀಲಿನಂತೆ ಹಾರ್ಮೋನಿಯಂ ಕೂಡ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದೆ. ವಿದೇಶಗಳಲ್ಲಿ ಪಂಪ್ ಆರ್ಗನ್, ರೀಡ್ ಆರ್ಗನ್, ಮೇಲೋಡಿಯನ್ ಇತ್ಯಾದಿ ನಾಮಧೇಯಗಳನ್ನು ಹೊಂದಿದ ಇದು ನಮ್ಮಲ್ಲಿ ಪೇಟಿ, ಬಾಜಾ ಎಂದೂ ಕರೆಸಿಕೊಳ್ಳುತ್ತದೆ. ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ವಲಯದಲ್ಲಿ ಇದಕ್ಕೆ ಸಂವಾದಿನಿ ಎಂಬ ಆಕರ್ಷಕ ಹೆಸರೂ ಇದೆ.  ಸಿನಿಮಾ  ಸಂಗೀತಕ್ಕೂ ಹಾರ್ಮೋನಿಯಂಗೂ ಗಾಢ ನಂಟಿದೆ.  ನಾವು ಸುವರ್ಣಯುಗ ಎಂದು ಕರೆಯುವ ಕಾಲದ ಸಂಗೀತ ನಿರ್ದೇಶಕರೆಲ್ಲ ಹಾರ್ಮೋನಿಯಂನಲ್ಲೇ ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದುದು. ಆ ಮೇಲೆ ಅರೇಂಜರುಗಳು ವೈವಿಧ್ಯಮಯ ವಾದ್ಯಗಳನ್ನು ಬಳಸಿ  ಆ ಹಾಡುಗಳನ್ನು ಸಜ್ಜುಗೊಳಿಸುತ್ತಿದ್ದರು.  ಚಿತ್ರಸಂಗೀತದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದ್ದುದು ಡಾ|| ರಾಜ್  ಎದೆ ಹಾರ್ಮೋನಿಯಂ ಅನ್ನುತ್ತಿದ್ದ  ಎಕಾರ್ಡಿಯನ್ ಆದರೂ ಹಾರ್ಮೋನಿಯಂಗೂ ಕೆಲವು ಹಾಡುಗಳ ಭಾಗವಾಗುಳಿಯುವ ಭಾಗ್ಯ ಸಿಗುತ್ತಿತ್ತು.  ಇಂಥ ಹಾಡುಗಳನ್ನು ರೇಡಿಯೋದಲ್ಲಿ ಆಲಿಸುವುದು ಆಗಿನ ಕಾಲದಲ್ಲಿ ವಿಶೇಷ ಥ್ರಿಲ್ ಉಂಟುಮಾಡುತ್ತಿತ್ತು ಏಕೆಂದರೆ ಈ ಹಾಡುಗಳ ಭಾಗವಾಗಿ ಮಾತ್ರ ಆಗ ಹಾರ್ಮೋನಿಯಂ ಧ್ವನಿ ನಮ್ಮ ಕಿವಿಗೆ ಬೀಳುತ್ತಿದ್ದುದು. 1940ರಿಂದ 1974ರ ವರೆಗೆ  ಆಕಾಶವಾಣಿಯಲ್ಲಿ ಹಾರ್ಮೋನಿಯಂ ಬಳಕೆಗೆ ಇದ್ದ ನಿಷೇಧವೇ ಇದಕ್ಕೆ ಕಾರಣ.  

ಈ ರೀತಿ ಹಾರ್ಮೋನಿಯಂ ಬಳಕೆಯಾದ ನನ್ನ ಮೆಚ್ಚಿನ   ಹತ್ತು ಪ್ರಾತಿನಿಧಿಕ ಹಾಡುಗಳು ಇಲ್ಲಿವೆ.

1. ಸಿಗದಣ್ಣಾ ಇದು ನಾಳೆಗೆ ಸಿಗದು

ಇದು ಕಣ್ತೆರೆದು ನೋಡು ಚಿತ್ರದಲ್ಲಿ ಚಿಕ್ಕ ಚಿಕ್ಕ ತುಣುಕುಗಳ ರೂಪದಲ್ಲಿ ಇರುವ ಹಾಡಿನ ಭಾಗ.  ಪಿ.ಬಿ. ಶ್ರೀನಿವಾಸ್ ಹಾಡಿರುವ ಈ ಹಾಡಿನಲ್ಲಿ ಬಾಲಕೃಷ್ಣ ಅವರ ಧ್ವನಿಯೂ ಇದೆ. ಒಂದು ಕಡೆ ರಫಿಯ ಉಲ್ಲೇಖ ಇರುವುದನ್ನೂ ಗಮನಿಸಬಹುದು.  ಭಕ್ತ ಕನಕದಾಸ ಚಿತ್ರದಲ್ಲಿ ರಾಜ್ ಅವರ ಎಲ್ಲ ಹಾಡುಗಳನ್ನು ಹಾಡಿದ ಪಿ.ಬಿ.ಎಸ್ ಅವರಿಗೆ ಜಿ.ಕೆ. ವೆಂಕಟೇಶ್ ಸಂಗೀತವಿದ್ದ ಈ ಚಿತ್ರದ  ಹಾಡುಗಳು ಕನ್ನಡದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳಲು ಸಹಾಯ ಮಾಡಿದವು.  ಹೆಚ್ಚು ಕೇಳಲು ಸಿಗದ ಈ ಸ್ಟ್ರೀಟ್ ಸಿಂಗರ್ ಹಾಡಿನಲ್ಲಿ ಹಾರ್ಮೋನಿಯಂ ಜತೆಗೆ ವೈವಿಧ್ಯಕ್ಕಾಗಿ ಇತರ ವಾದ್ಯಗಳನ್ನೂ ಬಳಸಲಾಗಿದೆ.



2. ಬಂತು ನವಜೀವನ

ಜೀವನತರಂಗ ಚಿತ್ರದ  ಕವ್ವಾಲಿ ಶೈಲಿಯ ಈ ಹಾಡಿನಲ್ಲಿ ಬಳಕೆಯಾಗಿರುವುದು ತಬ್ಲಾ, ಹಾರ್ಮೋನಿಯಮ್ ಮತ್ತು ಕ್ಲಾರಿನೆಟ್ ಮಾತ್ರ. ಹಾಡಿನುದ್ದಕ್ಕೂ ಇರುವ ಹಾರ್ಮೋನಿಯಂ ಪಲುಕುಗಳು ಅತ್ಯಾಕರ್ಷಕ.  ಇದನ್ನು ಹಾಡಿದವರು  ಸತ್ಯ ರಾವ್ ಮತ್ತು ಸೌಮಿತ್ರಿ ಎಂಬ ಹೆಸರೇ ಕೇಳಿರದ ಕಲಾವಿದರು! ಚಿತ್ರದ ನಾಮಾವಳಿಯಲ್ಲೂ ಇವರ ಉಲ್ಲೇಖವೇ ಇಲ್ಲ! ಆದರೂ ಅದೆಂತಹ ಧ್ವನಿಭಾರ, ಅದೆಂತಹ voice throw, ಅದೆಂತಹ ಶ್ರುತಿ ಶುದ್ಧತೆ, ಅದೆಂತಹ ವೃತ್ತಿಪರತೆ!  ಈ ಗಾಯಕರು ಬಹುಶಃ ನಾಟಕರಂಗದಲ್ಲಿ ಪಳಗಿದವರಿರಬೇಕು. ಇದರ ಸಂಗೀತ ನಿರ್ದೇಶಕ  ಎಂ. ವೆಂಕಟರಾಜು ಅವರೂ ನಾಟಕದ ಹಿನ್ನೆಲೆಯಿಂದ ಬಂದವರೇ ಆಗಿದ್ದರಿಂದ ಈ ಪ್ರಯೋಗ ಮಾಡಿರಬಹುದು.


3. ನೀನೇ ಆಸೆ ಆಸರೆ

ಚಂದ್ರಕುಮಾರ ಚಿತ್ರಕ್ಕಾಗಿ ಪಿ.ಸುಶೀಲ ಹಾಡಿರುವ ಮುಜ್ರಾ ಶೈಲಿಯ ಈ ಹಾಡಿನಲ್ಲಿ ಸಾರಂಗಿ ಮತ್ತು ಹಾರ್ಮೋನಿಯಂಗಳ ವ್ಯಾಪಕ ಬಳಕೆ ಇದೆ.  ಹಿಂದಿಯ ದೇವದಾಸ್ ಚಿತ್ರದ ಆಗೆ ತೇರಿ ಮರ್ಜಿ ಹಾಡನ್ನು ಹೋಲುತ್ತದೆ ಇದು.  ಎಂ.ವೆಂಕಟರಾಜು ನಿಧನದ ನಂತರ ಟಿ. ಚಲಪತಿರಾವ್ ಈ ಚಿತ್ರದ ಸಂಗೀತದ ಹೊಣೆ ಹೊತ್ತಿದ್ದರು


4. ದೇಹಕೆ ಉಸಿರೇ ಸದಾ ಭಾರ

ಚಿನ್ನಾ ನಿನ್ನ ಮುದ್ದಾಡುವೆ ಚಿತ್ರಕ್ಕಾಗಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಅನಿತಾ ಚೌಧರಿ ಎಂಬ ಬಾಲಕಿ ಹಾಡಿದ ಈ ಹಾಡಿನ ಸಂಗೀತ ನಿರ್ದೇಶಕರು ಸಲಿಲ್ ಚೌಧರಿ.  ಅವರಿಗೆ ತನ್ನ ಹಿಂದಿ, ಬಂಗ್ಲಾ ಹಾಡುಗಳ ಧಾಟಿಯನ್ನು ಇತರ ಭಾಷೆಗಳಲ್ಲಿ ಬಳಸುವ ಹವ್ಯಾಸವಿತ್ತು.  ದೂರದಿಂದ ಬಂದಂಥ ಸುಂದರಾಂಗ ಜಾಣ ಹಿಂದಿಯ ನಾಮ್ ಮೇರಾ ನಿಮ್ಮೊ ಮುಕಾಮ್ ಲುಧಿಯಾನಾ ಎಂಬ ಹಾಡಿನ ಧಾಟಿ ಹೊಂದಿತ್ತು ಎಂದು ಅನೇಕರಿಗೆ ಗೊತ್ತಿರಲಾರದು.  ಆದರೆ ಇಲ್ಲಿ ಹಿಂದಿಯ ಮೀನೂ ಎಂಬ ಚಿತ್ರದಲ್ಲಿ ಮನ್ನಾಡೇ ಮತ್ತು ಅಂತರಾ ಚೌಧರಿ ಎಂಬ ಬಾಲಕಿ ಹಾಡಿದ ತೇರಿ ಗಲಿಯೊಂ ಮೆ ಹಮ್ ಆಯೇ ಎಂಬ ಹಾಡಿನ ಶೈಲಿಯನ್ನಷ್ಟೇ ಬಳಸಿದ್ದಾರೆ.  ರಾಗ ತಾಳ ಎರಡನ್ನೂ ಬದಲಿಸಿದ್ದಾರೆ.



ಇದಕ್ಕೆ ಸ್ಪೂರ್ತಿಯಾದ ಹಿಂದಿ ಹಾಡಿನ ತುಣುಕು ಇದು.


5. ಹೊಸ ಪ್ರೇಮದಲಿ

ರಾಜ್‌ಕುಮಾರ್ ಅವರು ಇಷ್ಟ ಪಟ್ಟು ಹಿಂದಿಯ ರೋಶನ್ ಅವರ ಶೈಲಿಯಲ್ಲಿ   ಉಪೇಂದ್ರಕುಮಾರ್ ಅವರಿಂದ ಈ  ಯಮನ್ ರಾಗಾಧಾರಿತ ಸಂಯೋಜನೆ ಮಾಡಿಸಿರಬಹುದು.  ರಾಘವೇಂದ್ರ ರಾಜ್‌ಕುಮಾರ್ ಹಾಡಿರುವ ಈ ಹಾಡಿನಲ್ಲಿ ಚಿತ್ರದ ಸನ್ನಿವೇಶಕ್ಕನುಗುಣವಾಗಿ ಹವ್ಯಾಸಿ ಹಾರ್ಮೋನಿಯಮ್ ವಾದಕನೋರ್ವ ಒಮ್ಮೆಗೆ ಒಂದೇ ರೀಡ್ ಒತ್ತಿ ನುಡಿಸುವಾಗ ಹೊರಡುವ ಟಕ್ ಟಕ್ ಸದ್ದೂ ಕೇಳಿಸುತ್ತದೆ!


6. ಬಹುತ್ ಶುಕ್ರಿಯಾ

ಓ.ಪಿ. ನಯ್ಯರ್ ಅವರಷ್ಟು ಚೆನ್ನಾಗಿ ಚಿತ್ರಸಂಗೀತದಲ್ಲಿ ಹಾರ್ಮೋನಿಯಂ ಬಳಸಿದವರು ಇನ್ಯಾರೂ ಇರಲಾರರು.  ಇದು ಏಕ್ ಮುಸಾಫಿರ್ ಏಕ್ ಹಸೀನಾ ಚಿತ್ರಕ್ಕಾಗಿ ರಫಿ-ಆಶಾ ಹಾಡಿದ ಹಾಡು.  ರಫಿ ಹತ್ತು ಹನ್ನೆರಡು ರೀತಿಯ ಧ್ವನಿಗಳಲ್ಲಿ ಹಾಡಬಲ್ಲವರಾಗಿದ್ದವರು.  ಈ ಹಾಡಲ್ಲಿ ಎಲ್ಲ ಸ್ಥಾಯಿಗಳಲ್ಲೂ ಅವರ ಧ್ವನಿ ಹಸನಾದ ಬೆಣ್ಣೆಯಂತಿದೆ!


7. ಸುಭಾನಲ್ಲಾ ಹಸೀಂ ಚೆಹರಾ


ಕಶ್ಮೀರ್ ಕೀ ಕಲಿ ಚಿತ್ರದ ನಯ್ಯರ್ ಅವರ ಈ ರಫಿ ಮಾಸ್ಟರ್ ಪೀಸ್ ನನ್ನ ಅತಿ ಮೆಚ್ಚಿನದ್ದು.  ಆ ಕಾಲದಲ್ಲಿ ರೇಡಿಯೋ ಸಿಲೋನಿನಲ್ಲಿ ಇದು ದಿನ ನಿತ್ಯವೆಂಬಂತೆ ಕೇಳಲು ಸಿಗುತ್ತಿತ್ತು.  ಒಂದು ವಿಶೇಷವೆಂದರೆ ರೆಕಾರ್ಡಲ್ಲಿ ಇದ್ದ ಒಂದು ಚರಣ ಸಿನಿಮಾದಲ್ಲಿಲ್ಲ, ಸಿನಿಮಾದಲ್ಲಿರುವ ಒಂದು ಚರಣ ರೆಕಾರ್ಡಲ್ಲಿಲ್ಲ.  ನಾನು ಅವೆರಡನ್ನೂ ಮೇಳೈಸಿ ಮಾಡಿದ ಮೂರೂ ಚರಣಗಳುಳ್ಳ  ವರ್ಷನ್ ಇಲ್ಲಿದೆ.  ಬೇರೆಲ್ಲೂ ಇದು ಕೇಳಲು ಸಿಗದು. 


8. ಕಜ್‌ರಾ ಮೊಹಬ್ಬತ್ ವಾಲಾ

ಒಂದು ಕಾಲದಲ್ಲಿ ತನ್ನ ಮುಖ್ಯ ಗಾಯಕಿಯಾಗಿದ್ದ ಶಂಶಾದ್ ಬೇಗಂ ಅವರ ಧ್ವನಿಯನ್ನು ಅನೇಕ ವರ್ಷಗಳ ನಂತರ ನಯ್ಯರ್ ಅವರು ಆಶಾ ಜತೆ ಬಳಸಿಕೊಂಡ ಈ ಹಾಡು ಕಿಸ್ಮತ್ ಚಿತ್ರದ್ದು. ತನ್ನ ಉತ್ತುಂಗದ ದಿನಗಳಲ್ಲಿ ಹಾಡೊಂದಕ್ಕೆ 300ರಿಂದ 400 ರೂಪಾಯಿ ದೊರಕುತ್ತಿದ್ದು ಅಪರೂಪಕ್ಕೆ ಹಾಡಿದ ಈ ಹಾಡಿಗೆ 1000 ರೂಪಾಯಿಗಳ ಸಂಭಾವನೆ ಸಿಕ್ಕಿತ್ತು ಎಂದು ಶಂಶಾದ್ ಬೇಗಂ ಒಂದು ಇಂಟರ್‌ವ್ಯೂದಲ್ಲಿ ಹೇಳಿದ್ದರು. ಕಿಸ್ಮತ್ ಚಿತ್ರ ಯಾರಿಗೂ ನೆನಪಿಲ್ಲದಿದ್ದರೂ ಈ ಹಾಡು ಅಜರಾಮರವಾಗಿ ಉಳಿಯಿತು.  


9. ಚಲತ್ ಮುಸಾಫಿರ್ ಮೋಹ್ ಲಿಯಾರೇ

ಕವಿ ಶೈಲೇಂದ್ರ ಅವರು ಸ್ವತಃ ನಿರ್ಮಿಸಿದ ತೀಸ್ರೀ ಕಸಂ ಚಿತ್ರದ ಹಳ್ಳಿಗಾಡು ಶೈಲಿಯ ಹಾಡಿದು. ಯಾವಾಗಲೂ  ವೈವಿಧ್ಯಮಯ ವಾದ್ಯಗಳ ದೊಡ್ಡ ಆರ್ಕೆಷ್ಟ್ರಾ ಬಳಸುತ್ತಿದ್ದ ಶಂಕರ್ ಜೈಕಿಶನ್ ಅವರ ಈ ಸರಳ ಹಾಡಿನಲ್ಲಿ ಮನ್ನಾಡೇ ಮತ್ತು ಕೋರಸ್ ಧ್ವನಿಯ ಜೊತೆ ಹಾರ್ಮೋನಿಯಂ ಮತ್ತು ಢೋಲಕ್‌ನದ್ದೇ ಪ್ರಮುಖ ಪಾತ್ರ. ಹಾಯಾಗಿ ಹಾಡು ಬರೆದುಕೊಂಡು ಇರುವುದು ಬಿಟ್ಟು ಈ ಚಿತ್ರ ತಯಾರಿಸಲು ಹೋಗಿ ತನ್ನವರೆನ್ನಿಸಿಕೊಂಡವರಿಂದಲೇ ಮೋಸ ಹೋಗಿ ಅದೇ ಕೊರಗಿನಲ್ಲಿ ಶೈಲೇಂದ್ರ ಬದುಕಿಗೆ ವಿದಾಯ ಹೇಳಿದರು. ಶಂಕರ್ ಜೈಕಿಶನ್ ತಂಡದ ಈ ಪ್ರಮುಖ ಕೊಂಡಿ ಈ ರೀತಿ ಕಳಚಿದ ಮೇಲೆ ಅವರ ಸಂಗೀತದಲ್ಲಿದ್ದ ಹಿಂದಿನ ವೈಭವ  ಮತ್ತೆಂದೂ ಮರಳಲಿಲ್ಲ.


10. ದೀವಾನೆ ಹೈಂ ದೀವಾನೊಂ ಕೋ ನ

ಅಮಿತಾಭ್ ಬಚ್ಚನ್ angry young man ಆಗಿ ಕಾಣಿಸಿಕೊಂಡ ಕಲ್ಯಾಣ್‌ಜೀ ಆನಂದಜೀ ಸಂಗೀತವಿದ್ದ ಜಂಜೀರ್ ಚಿತ್ರದ ಈ ರಫಿ-ಲತಾ ಹಾಡಿನಲ್ಲೂ ಢೋಲಕ್‌, ಹಾರ್ಮೋನಿಯಂಗಳದ್ದೇ ಪ್ರಮುಖ ಪಾತ್ರ.  ಇದನ್ನು ತೆರೆಯ ಮೇಲೆ ಅಭಿನಯಿಸಿದವರು ಈ ಹಾಡನ್ನು ಬರೆದ  ಗುಲ್ಶನ್ ಬಾವ್ರಾ ಮತ್ತು ಅವರ ಪತ್ನಿ ಸಂಜನಾ.  ಆ ಚಿತ್ರದಲ್ಲಿ ಹೀರೋ ಅಮಿತಾಭ್ ಅವರಿಗೆ ಒಂದೂ ಹಾಡಿಲ್ಲದಿರುವುದು ಗಮನಾರ್ಹ.  ದೇವಾನಂದ್ ಇದೇ ಕಾರಣಕ್ಕಾಗಿ ಆ ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲವಂತೆ.  ಪೋಲಿಸ್ ಇನ್ಸ್ಪೆಕ್ಟರ್ ಎಲ್ಲಾದರೂ ಮರ ಸುತ್ತಿ ಹಾಡುವುದುಂಟೇ ಎಂದು ನಿರ್ದೇಶಕ ಪ್ರಕಾಶ್ ಮೆಹ್ರಾ ಅವರ ವಾದವಾಗಿತ್ತು. ಇದೇ ಚಿತ್ರದ ಪಠಾಣ್ ಹಾಡು ಯಾರಿ ಹೈ ಈಮಾನ್ ಮೇರಾ ಹಾಡಿನ ಅಪಾರ ಜನಪ್ರಿಯತೆಯ ಮುಂದೆ ಈ ಹಾಡು ಮಂಕಾಯಿತು.  ಅದು ರಫಿ ಅವರು ಹಿನ್ನೆಲೆಗೆ ಸರಿದಿದ್ದ ಸಮಯವೂ ಆಗಿತ್ತು.



ಹಾರ್ಮೋನಿಯಂ ಬಳಸಿದ ಇನ್ನೂ ಎಷ್ಟೋ ಹಾಡುಗಳು ನಿಮಗೂ ಗೊತ್ತಿರಬಹುದಲ್ಲವೇ.