
ಆನಂದ ಕಂದ ಚಿತ್ರದ ನೀನಿದ್ದರೇನೊ ಹತ್ತಿರ ಎಷ್ಟೊಂದು ನಡುವೆ ಅಂತರ - ವಿಜಯಭಾಸ್ಕರ್, ಆರ್. ಎನ್. ಜಯಗೋಪಾಲ್ ಮತ್ತು ಪಿ.ಸುಶೀಲ ಅವರ ಪ್ರತಿಭೆಯ ಪರಾಕಾಷ್ಟೆಯ ಪ್ರತೀಕವಾದ ಈ ಹಾಡು ವಿವಿಧ ರೇಡಿಯೊ ನಿಲಯಗಳಿಂದ ಈಗಲೂ ಕೆಲವೊಮ್ಮೆ ಕೇಳಿ ಬರುವುದಿದೆ. ಪಿಯಾನೋ ಬಳಸಿರುವ ಕನ್ನಡ ಹಾಡುಗಳಲ್ಲೇ ಅತ್ಯುತ್ತಮವಾದದ್ದು ಎನ್ನಬಹುದಾದ ಇದು ಅಂತರ್ಜಾಲದಲ್ಲೂ ಲಭ್ಯವಿದೆ. ಆದರೆ ನಾನಿಲ್ಲಿ ಹೇಳ ಹೊರಟಿರುವುದು ಇತ್ತೀಚೆಗೆ ಹೆಚ್ಚು ಕೇಳ ಸಿಗದ ಅದೇ ಚಿತ್ರದ ತಣ್ಣನೆ ರಾತ್ರಿ ಸಣ್ಣಗೆ ಮುರಳಿ ಊದಿದ ಕೃಷ್ಣಯ್ಯ ಎಂಬ ಸುಂದರ ಹಾಡಿನ ಬಗ್ಗೆ.
ಆ ಚಿತ್ರ ನಾನು ನೋಡಿಲ್ಲ. ಅದರ ವೀಡಿಯೊ ಕೂಡ ಲಭ್ಯವಿಲ್ಲ. ಆದರೆ ಹಾಡನ್ನು ಗಮನಿಸುವಾಗ ವೇದಿಕೆಯಲ್ಲಿ ಪ್ರಸ್ತುತ ಪಡಿಸುವ ನೃತ್ಯದ ಸನ್ನಿವೇಶಕ್ಕೆ ಇದನ್ನು ಬಳಸಿರಬಹುದು ಅನ್ನಿಸುತ್ತದೆ. ಅನೇಕ ಸಲ ನಮ್ಮ ಈ ರೀತಿಯ ಕಲ್ಪನೆಯೇ ವಾಸ್ತವಕ್ಕಿಂತ ರಮ್ಯವಾಗಿರುತ್ತದಲ್ಲವೇ.
ಆರ್.ಎನ್. ಜಯಗೋಪಾಲ್ ಅವರು ಈ ಹಾಡಲ್ಲಿ ಪ್ರಾಸಬದ್ಧವಾದ ಸರಳ ಪದಗಳನ್ನೇ ಬಳಸಿದ್ದಾರೆ. ಪಲ್ಲವಿ ಭಾಗದಲ್ಲಿರುವ ಣಕಾರದ ಒಳಪ್ರಾಸ ಮತ್ತು ಕೃಷ್ಣಯ್ಯ ಪದದ ಪುನರಾವರ್ತನೆ ಹಾಡನ್ನು ಕೇಳುಗರ ಮನದಲ್ಲಿ ರಿಜಿಸ್ಟರ್ ಮಾಡಲು ಸಹಾಯ ಮಾಡುತ್ತದೆ. ಪ್ರತೀ ಪದದ ಪ್ರತೀ ಅಕ್ಷರವೂ ತಾಳದೊಡನೆ ಮೇಳೈಸುವುದರಿಂದ ಹಾಡಿನ ಲಾಲಿತ್ಯ ವೃದ್ಧಿಯಾಗಿದೆ. ಇಲ್ಲಿ ಬಣ್ಣದ ಬಣ್ಣದ ಎಂಬ ಪದಗಳ ಬಳಕೆಯಾದುದನ್ನು ವಿಶೇಷವಾಗಿ ಗಮನಿಸಬಹುದು. ಸಾಮಾನ್ಯವಾಗಿ ಹೇಳುವಂತೆ ಬಣ್ಣ ಬಣ್ಣದ ಎಂದಿರುತ್ತಿದ್ದರೆ ಲಯದ ಹರಿವಿಗೆ ತಡೆಯೊಡ್ಡಿದಂತಾಗಿ ಹಾಡು ಕಳೆಗುಂದುತ್ತಿತ್ತು. ಚರಣ ಭಾಗದಲ್ಲೂ ಲಯದ ಓಘಕ್ಕೆ ತಡೆಯೊಡ್ಡದ ಸರಳ ಪದಗಳ ಸುದೀರ್ಘ ಸಾಹಿತ್ಯವಿದ್ದು ಎಲ್ಲೂ ಸಾಲುಗಳ ಪುನರಾವರ್ತನೆ ಇಲ್ಲ.
ಈ ಹಾಡನ್ನು ಆಲಿಸಿದಾಗ ಮೇಲ್ನೋಟಕ್ಕೆ ಇದು ಸತ್ಯಂ ಅವರ ಸಂಗೀತ ಇರಬಹುದೇನೋ ಎನ್ನುವ ಭಾವನೆ ಮೂಡುತ್ತದೆ. ವಿಜಯ ಭಾಸ್ಕರ್ ಅವರ ವಿಶೇಷತೆಗಳಾದ ಅನಿರೀಕ್ಷಿತ ತಿರುವುಗಳು, jumping noteಗಳು ಇತ್ಯಾದಿ ಇಲ್ಲದ ಇದರ ಸರಳತೆ ಇದಕ್ಕೆ ಕಾರಣ. 22ನೇ ಮೇಳಕರ್ತ ಖರಹರಪ್ರಿಯ ಜನ್ಯ ರಾಗಗಳಾದ ಶುದ್ಧ ಧನ್ಯಾಸಿ, ಭೀಮ್ ಪಲಾಸ್, ಕಾಪಿ ಎಲ್ಲವುಗಳ ಛಾಯೆ ಇದರಲ್ಲಿ ಕಾಣ ಸಿಗುತ್ತದೆ. ಸುಮಾರು 40 ಸೆಕೆಂಡುಗಳ ಸುದೀರ್ಘ Interludeಗಳಲ್ಲಿ ತಬಲಾ ತರಂಗವನ್ನು ಸುಂದರವಾಗಿ ಬಳಸಲಾಗಿದೆ. ಸಿತಾರ್ ಹಾಗೂ ಏಕ ಕಾಲದಲ್ಲಿ ನುಡಿಯುವ ಚೇಲೊ ಮತ್ತು group violinಗಳು ಶಂಕರ್ ಜೈಕಿಶನ್ ಸಂಗೀತವನ್ನು ನೆನಪಿಸುತ್ತವೆ. ಕೃಷ್ಣನ ಕುರಿತ ಹಾಡಾದರೂ ಎಲ್ಲೂ ಕೊಳಲು ಪ್ರಮುಖವಾಗಿರದೆ ಅಲ್ಲಲ್ಲಿ ಕ್ಲಾರಿನೆಟ್ ಜೊತೆಗೆ ಮಾತ್ರ ಕೇಳಿಬರುತ್ತದೆ. ಜಾನಪದ ಶೈಲಿಗೆ ಒತ್ತು ಕೊಟ್ಟದ್ದರಿಂದ ಎಲ್ಲೂ ಕೌಂಟರ್ ಮೆಲೊಡಿ ಪ್ರಯೋಗಿಸಲಾಗಿಲ್ಲ.
ಕೋರಸ್ ಜೊತೆಗೆ ಹಾಡಿರುವ ಪಿ.ಸುಶೀಲ ಅವರ ಅನುನಾಸಿಕ ಧ್ವನಿ ತಾರ ಷಡ್ಜ ಮತ್ತು ಗಾಂಧಾರಗಳ ನಡುವೆ ಸಂಚಾರ ಇರುವ ಚರಣ ಭಾಗಕ್ಕೆ ವಿಶೇಷ ಮೆರುಗು ನೀಡಿದೆ. ಅಲ್ಲಲ್ಲಿ ಸುಂದರ ಮುರ್ಕಿಗಳ ಅಲಂಕಾರವೂ ಇದೆ.

ಬನ್ನಿ, ಈಗ ಈ ಅಪರೂಪದ ಹಾಡನ್ನು ಆಲಿಸಿ ಆನಂದಿಸಿ.
ಚಿತ್ರ : ಆನಂದ ಕಂದ
ಹಾಡಿದವರು : ಪಿ.ಸುಶೀಲ ಮತ್ತು ಸಂಗಡಿಗರು.
ಸಾಹಿತ್ಯ : ಆರ್.ಎನ್. ಜಯಗೋಪಾಲ್
ಸಂಗೀತ : ವಿಜಯಭಾಸ್ಕರ್

ತಣ್ಣನೆ ರಾತ್ರಿ ಸಣ್ಣಗೆ ಮುರಳಿ ಊದಿದ ಕೃಷ್ಣಯ್ಯ
ನಮ್ಮ ಕೃಷ್ಣಯ್ಯ
ಹುಣ್ಣಿಮೆ ಚೆಲುವು ಕಣ್ಣಲಿ ಪಡೆದ ಅಂದದ ಕೃಷ್ಣಯ್ಯ
ಅಂದದ ಕೃಷ್ಣಯ್ಯ
ಬಣ್ಣದ ಬಣ್ಣದ ಸುಂದರ ಕನಸನು ತಂದ ಕೃಷ್ಣಯ್ಯ
ಹೆಣ್ಣಿನ ಮನಸಿನ ನೆಮ್ಮದಿ ಕೆಡಿಸಿ ನಿಂದ ಕೃಷ್ಣಯ್ಯ
ನಮ್ಮ ಕೃಷ್ಣಯ್ಯ ಅಂದದ ಕೃಷ್ಣಯ್ಯ
ನಮ್ಮ ಕೃಷ್ಣಯ್ಯ ಅಂದದ ಕೃಷ್ಣಯ್ಯ
ಯಮುನಾ ನದಿಯ ತೀರದಲಿ
ಮಲ್ಲಿಗೆ ಹಂಬಿನ ತೋಟದಲಿ
ತಿಂಗಳ ಬೆಳಕಿನ ಸೆರಗಿನಲಿ
ತುಂಬದ ಬಯಕೆಯ ಕೊರಗಿನಲಿ
ನಾ ದಾರಿ ಕಾದು ನಿಂತೆ
ಏನೇನೊ ನೂರು ಚಿಂತೆ
ಎಲ್ಲೋ ಏನೋ ಕಾಣೆ ನಮ್ಮ
ಮೋಹನ ಕೃಷ್ಣಯ್ಯ
ಅವನಲಿ ಮೌನವ ತೋರಿಸುವೆ
ಕೋಪದಿ ಮೊಗವ ತಿರುಗಿಸುವೆ
ದೂರಕೆ ಸರಿದು ಕಾಡಿಸುವೆ
ಹೆಣ್ಣಲಿ ಕ್ಷಮೆಯನು ಬೇಡಿಸುವೆ
ಕೈಜೋಡಿಸೆನ್ನ ಬೇಡಿ
ಆ ಮೇಲೆ ಎನ್ನ ಕೂಡಿ
ತಪ್ಪಿನ ಕಾಣಿಕೆ ಕೆನ್ನೆಗೆ ಇತ್ತು ರಮಿಸುವ ಕೃಷ್ಣಯ್ಯ
****
ಜಯಗೋಪಾಲ್ ಅವರು ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಓದುತ್ತಿದ್ದಾಗ ವಾರ್ಷಿಕೋತ್ಸವ ಸಂದರ್ಭಕ್ಕೆ ಈ ಹಾಡು ರಚಿಸಿದ್ದರಂತೆ. ಅದನ್ನು ಬಹಳ ಇಷ್ಟಪಟ್ಟ ಅವರ ಗುರುಗಳಾದ ದ್ವಾರಕಾನಾಥ್ ಹದಿನಾಲ್ಕು ವರ್ಷಗಳ ನಂತರ ತಾವು ಆನಂದ ಕಂದ ಚಿತ್ರವನ್ನು ನಿರ್ದೇಶಿಸಿದಾಗ ಈ ಗೀತೆಯನ್ನು ಬಳಸಿಕೊಂಡರು ಎಂದು ಎನ್.ಎಸ್. ಶ್ರೀಧರಮೂರ್ತಿ ಅವರು ಮಾಹಿತಿ ಒದಗಿಸಿದ್ದಾರೆ. ಅಂದರೆ ಸುಮಾರು 1954ರ ಆಸುಪಾಸು ಈ ಗೀತೆಯ ರಚನೆ ಆಗಿರಬಹುದು. ಶ್ರೀಧರಮೂರ್ತಿ ಅವರ ಪ್ರತಿಕ್ರಿಯೆಯನ್ನು ಪುಟದ ಕೊನೆಯಲ್ಲಿರುವ ಕಮೆಂಟ್ಸ್ ವಿಭಾಗದಲ್ಲಿ ನೋಡಬಹುದು.
ನಮ್ಮ ಕೃಷ್ಣಯ್ಯ
ಹುಣ್ಣಿಮೆ ಚೆಲುವು ಕಣ್ಣಲಿ ಪಡೆದ ಅಂದದ ಕೃಷ್ಣಯ್ಯ
ಅಂದದ ಕೃಷ್ಣಯ್ಯ
ಬಣ್ಣದ ಬಣ್ಣದ ಸುಂದರ ಕನಸನು ತಂದ ಕೃಷ್ಣಯ್ಯ
ಹೆಣ್ಣಿನ ಮನಸಿನ ನೆಮ್ಮದಿ ಕೆಡಿಸಿ ನಿಂದ ಕೃಷ್ಣಯ್ಯ
ನಮ್ಮ ಕೃಷ್ಣಯ್ಯ ಅಂದದ ಕೃಷ್ಣಯ್ಯ
ನಮ್ಮ ಕೃಷ್ಣಯ್ಯ ಅಂದದ ಕೃಷ್ಣಯ್ಯ
ಯಮುನಾ ನದಿಯ ತೀರದಲಿ
ಮಲ್ಲಿಗೆ ಹಂಬಿನ ತೋಟದಲಿ
ತಿಂಗಳ ಬೆಳಕಿನ ಸೆರಗಿನಲಿ
ತುಂಬದ ಬಯಕೆಯ ಕೊರಗಿನಲಿ
ನಾ ದಾರಿ ಕಾದು ನಿಂತೆ
ಏನೇನೊ ನೂರು ಚಿಂತೆ
ಎಲ್ಲೋ ಏನೋ ಕಾಣೆ ನಮ್ಮ
ಮೋಹನ ಕೃಷ್ಣಯ್ಯ
ಅವನಲಿ ಮೌನವ ತೋರಿಸುವೆ
ಕೋಪದಿ ಮೊಗವ ತಿರುಗಿಸುವೆ
ದೂರಕೆ ಸರಿದು ಕಾಡಿಸುವೆ
ಹೆಣ್ಣಲಿ ಕ್ಷಮೆಯನು ಬೇಡಿಸುವೆ
ಕೈಜೋಡಿಸೆನ್ನ ಬೇಡಿ
ಆ ಮೇಲೆ ಎನ್ನ ಕೂಡಿ
ತಪ್ಪಿನ ಕಾಣಿಕೆ ಕೆನ್ನೆಗೆ ಇತ್ತು ರಮಿಸುವ ಕೃಷ್ಣಯ್ಯ
****
ಜಯಗೋಪಾಲ್ ಅವರು ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಓದುತ್ತಿದ್ದಾಗ ವಾರ್ಷಿಕೋತ್ಸವ ಸಂದರ್ಭಕ್ಕೆ ಈ ಹಾಡು ರಚಿಸಿದ್ದರಂತೆ. ಅದನ್ನು ಬಹಳ ಇಷ್ಟಪಟ್ಟ ಅವರ ಗುರುಗಳಾದ ದ್ವಾರಕಾನಾಥ್ ಹದಿನಾಲ್ಕು ವರ್ಷಗಳ ನಂತರ ತಾವು ಆನಂದ ಕಂದ ಚಿತ್ರವನ್ನು ನಿರ್ದೇಶಿಸಿದಾಗ ಈ ಗೀತೆಯನ್ನು ಬಳಸಿಕೊಂಡರು ಎಂದು ಎನ್.ಎಸ್. ಶ್ರೀಧರಮೂರ್ತಿ ಅವರು ಮಾಹಿತಿ ಒದಗಿಸಿದ್ದಾರೆ. ಅಂದರೆ ಸುಮಾರು 1954ರ ಆಸುಪಾಸು ಈ ಗೀತೆಯ ರಚನೆ ಆಗಿರಬಹುದು. ಶ್ರೀಧರಮೂರ್ತಿ ಅವರ ಪ್ರತಿಕ್ರಿಯೆಯನ್ನು ಪುಟದ ಕೊನೆಯಲ್ಲಿರುವ ಕಮೆಂಟ್ಸ್ ವಿಭಾಗದಲ್ಲಿ ನೋಡಬಹುದು.