Wednesday, 2 September 2026

ಖಾಸಗಿ ಬಸ್ಸುಗಳು ಮತ್ತು ಏಜಂಟರು.


20ನೆಯ ಶತಮಾನದ  ಆರಂಭದಲ್ಲಿ ಸಾರ್ವಜನಿಕ ಬಸ್ಸು ಸಾರಿಗೆ‌ ಆರಂಭವಾದಾಗ ಯಾವ ಬಸ್ಸು ಎಲ್ಲಿಗೆ ಹೋಗುತ್ತದೆ  ಎಂದು ತಿಳಿಸಿ ಜನರನ್ನು ಒಟ್ಟು ಮಾಡಲು  ಪ್ರತೀ ಊರಲ್ಲಿ ಕಮಿಷನ್ ಆಧಾರದ ಮೇಲೆ ಒಬ್ಬೊಬ್ಬ ಏಜಂಟರನ್ನು  ನಿಯೋಜಿಸುವ ಪದ್ಧತಿ ಆರಂಭವಾಗಿರಬಹುದು.  ಬಸ್ಸುಗಳಲ್ಲಿ ಬೋರ್ಡುಗಳಿದ್ದರೂ ಆ ಕಾಲದಲ್ಲಿ  ಅನಕ್ಷರಸ್ಥರು ಹೆಚ್ಚು ಇದ್ದುದರಿಂದ    ಆಯಾ ಬಸ್ಸು ಬರುವ ಹೊತ್ತಿಗೆ ಅದು ಹಾದು ಹೋಗುವ ಊರುಗಳ ಹೆಸರನ್ನು ಗಟ್ಟಿಯಾಗಿ ಕೂಗುತ್ತಾ, ಬಸ್ಸು ಬಂದೊಡನೆ ತಾನೂ ಅದನ್ನೇರಿ  ಪ್ರಯಾಣಿಕರಿಗೆಲ್ಲ ಟಿಕೆಟ್ ಕೊಟ್ಟು, ಕಂಡಕ್ಟರರ ಟ್ರಿಪ್ ಶೀಟಿನಲ್ಲಿ ಎಂಟ್ರಿ ಮಾಡಿಸಿ,  ಇಳಿಯುವ ಮುನ್ನ 'ಯಾರಿಗಾದರೂ ಚಿಲ್ಲರೆ ಬಾಕಿ ಇದೆಯೇ' ಎಂದು ವಿಚಾರಿಸುವುದು ಅವರ ಕರ್ತವ್ಯವಾಗಿರುತ್ತಿತ್ತು. ದೊಡ್ಡ ಪಟ್ಟಣಗಳ ಮುಂದಿನ ಸ್ಟಾಪ್‌ಗಳಲ್ಲಿ ಸಿಗುವ ಪ್ರಯಾಣಿಕರಿಗೂ ಟಿಕೆಟ್ ಕೊಡಲು   ಏಜಂಟರು  ಊರ ಹೊರಗಿನ ವರೆಗೆ ಬಸ್ಸಿನಲ್ಲೇ ಬರುವ ಪದ್ಧತಿ ಆ ಮೇಲೆ ಆರಂಭವಾಯಿತು.  ಎದುರಿಂದ ಬರುವ ಅದೇ  ಕಂಪನಿಯ ಇನ್ನೊಂದು ಬಸ್ಸಿನಲ್ಲಿ ಅವರು  ಬಸ್ ಸ್ಟೇಂಡಿಗೆ ಮರಳುತ್ತಿದ್ದರು. ಆ ಮೇಲೆ ಮಾರ್ಗ ಮಧ್ಯದಲ್ಲಿ ಹತ್ತಿದ ಪ್ರಯಾಣಿಕರಿಗೆ ಕಂಡಕ್ಟರರೇ ಟಿಕೇಟು ಕೊಡುತ್ತಿದ್ದರು. 

ಸಿ.ಪಿ.ಸಿ, ಪಿ.ವಿ, ಶಂಕರ್ ವಿಠಲ್, ಹನುಮಾನ್ ಮುಂತಾದ ಕಂಪನಿಗಳು ಕಂಬೈಂಡ್ ಬುಕಿಂಗ್ ಏಜನ್ಸಿಯಡಿ ಕಾರ್ಯಾಚರಿಸುತ್ತಿದ್ದರೂ ಆ  ಕಂಪನಿಗಳ ಬಸ್ಸುಗಳಿಗೆ ಏಜಂಟರು ಬೇರೆ ಬೇರೆಯೇ ಇರುತ್ತಿದ್ದರು.  

ಪ್ರಯಾಣಿಕರು  ಸುಶಿಕ್ಷಿತರಾದರೂ, ದೊಡ್ಡ ದೊಡ್ಡ ಕಂಪನಿಗಳ ಕಾಲ ಮುಗಿದು ಒಂದೊಂದೇ ಬಸ್ಸು ಹೊಂದಿರುವವರ ಕಾಲ ಬಂದರೂ ಏಜಂಟರನ್ನು  ನಿಯೋಜಿಸುವ ಪದ್ಧತಿ ತೀರಾ ಇತ್ತಿಚಿನ ತನಕವೂ ಮುಂದುವರಿದಿತ್ತು. 

ವಿದ್ಯಾರ್ಥಿ ದೆಸೆಯಲ್ಲಿ  ಬಸ್ಸುಗಳೊಂದಿಗೆ ಹೆಚ್ಚು ಮುಖಾಮುಖಿಯಾಗುತ್ತಿದ್ದ ಉಜಿರೆಯ ಕೆಲವು ಏಜಂಟರು ನನಗೆ ನೆನಪಿದ್ದಾರೆ. ಶೆಟ್ಟಿ ಬಸ್ಸಿಗೆ ಏಜಂಟರಾಗಿದ್ದ  ತಾಮ್ರದಂಗಡಿಯ ಪಾಂಡುರಂಗರು ಬಸ್ಸಿನ ಬಳಿ ಬಂದು  'ಮಂಗಳೂರು ಯಾರು ಮಂಗಳೂರ್' ಎಂದು ಒಂದು ಸಲ ಮಾತ್ರ ಹೇಳುತ್ತಿದ್ದರು. ಚಾರ್ಮಾಡಿ ಗಡಿಯಿಂದ ಬೇರೆ ಬಸ್ಸಿಗೆ ಕನೆಕ್ಷನ್ ಇದ್ದ ಭಾರತ್ ಬಸ್ಸಿಗೆ ಸೋಡಾ ಅಂಗಡಿ ಇಟ್ಟುಕೊಂಡಿದ್ದ ಉಪೇಂದ್ರ ಪ್ರಭು ಏಜಂಟ್. ನೀಳ ಗಡ್ಡ ಹೊಂದಿದ್ದ  ಅವರನ್ನು ಕಂಡರೆ ನಮಗೆ ಭಯಮಿಶ್ರಿತ ಗೌರವ. ಅವರು ಬಸ್ಸಿನ ಬಾಗಿಲ ಬಳಿ ನಿಂತು ದೂರದ ಪ್ರಯಾಣಿಕರಿಗೆ ಮೊದಲು ಟಿಕೆಟ್ ಕೊಟ್ಟು ಒಳಗೆ ಕಳಿಸಿ  ನಂತರ ಸಮೀಪದ ನಿಡಿಗಲ್, ಮುಂಡಾಜೆಗೆ ಹೋಗುವವರನ್ನು ವಿಚಾರಿಸುತ್ತಿದ್ದರು. ಶಂಕರ್‌ವಿಠಲ್ ಬಸ್ಸುಗಳ ಏಜಂಟ್ ಆಗಿದ್ದವರು ಚಿನ್ನು ಎಂಬವರು. ನಾವು ಶಾಲೆಯಿಂದ ಮರಳುತ್ತಿದ್ದ ಶಾರದಾಂಬಾ ಬಸ್ಸಿಗೂ ಅವರೇ ಏಜಂಟ್.  ವಿದ್ಯಾರ್ಥಿಗಳಿಂದ  ಪೂರ್ತಿ ಚಾರ್ಜ್  ಪಡೆಯುತ್ತಿದ್ದ ಅವರ  ಕಣ್ಣು ತಪ್ಪಿಸಿ   ಕಂಡಕ್ಟರ್ ದೇವಾಡಿಗರಿಂದ ನಾವು ರಿಯಾಯತಿ  ಟಿಕೆಟ್ ಪಡೆಯುತ್ತಿದ್ದೆವು. ಸಿಪಿಸಿ, ಪಿ.ವಿ ಬಸ್ಸುಗಳ ಏಜಂಟರ ಆಫೀಸೇ ಉಜಿರೆಯಲ್ಲಿತ್ತು. ಅವರು ಎಂದೂ ಬಸ್ಸುಗಳ ಬಳಿಗೆ ಬರುತ್ತಿರಲಿಲ್ಲ.  ಬೇಕಿದ್ದರೆ ಅಲ್ಲಿ ಹೋಗಿ ಟಿಕೇಟು ಪಡೆಯಬೇಕಿತ್ತು. ಇಲ್ಲವಾದರೆ ಬಸ್ಸಿನಲ್ಲೇ ಕಂಡಕ್ಟರರಿಂದ ಪಡೆದರೂ ನಡೆಯುತ್ತಿತ್ತು. ಹನುಮಾನ್, ವೆಂಕಟೇಶ್, ಆಂಜನೇಯ, ಕೃಷ್ಣಾ express, ಜಯಪದ್ಮ, CKMS  ಮುಂತಾದ ಬಸ್ಸುಗಳಿಗೆ  ಉಜಿರೆಯಲ್ಲಿ ಏಜಂಟರಿರಲಿಲ್ಲ ಎಂದು ನನ್ನ ನೆನಪು.

ನಾನೊಮ್ಮೆ ಕಾರ್ಕಳದಿಂದ ಮಂಗಳೂರಿಗೆ ಪ್ರಯಾಣಿಸಿದ ಖಾಸಗಿ ಬಸ್ಸಿನ ಹಿರಿಯ ವಯಸ್ಸಿನ ಸಮಾಧಾನಿ  ಕಂಡಕ್ಟರರೊಡನೆ ಲೋಕಾಭಿರಾಮವಾಗಿ ಮಾತನಾಡುವಾಗ 'ಇತ್ತೀಚೆಗೆ ಬಸ್ಸುಗಳಲ್ಲಿ  ಏಜಂಟರೇಕೆ ಕಾಣ್ತಿಸ್ತಿಲ್ಲ' ಎಂದು ವಿಚಾರಿಸಿದೆ.  ETM, ಅಂದರೆ ಎಲೆಕ್ಟ್ರಾನಿಕ್ ಟಿಕೆಟ್ ಮಷೀನುಗಳು ಬಂದ ಮೇಲೆ ಏಜಂಟರು ಟಿಕೆಟ್ ಕೊಡುವ ಪದ್ಧತಿ ನಿಂತಿದೆ, ಜನರನ್ನು ಕೂಗಿ ಕರೆಯವುದು  ಮಾತ್ರ ಈಗ ಅವರ ಕೆಲಸ ಎಂದು ಅವರು  ಹೇಳಿದರು.  ಈಗ ಬಸ್ಸುಗಳ ಸಂಖ್ಯೆ ಜಾಸ್ತಿ ಆಗಿರುವುದರಿಂದ ಜನರನ್ನು ಕರೆಯುವ ಏಜಂಟರಿಗಿಂತ ಸಮಯ ಪಾಲನೆ ಮಾಡುವಂತೆ ನೋಡಿಕೊಳ್ಳುವ ಟೈಮ್ ಕೀಪರುಗಳ ಪ್ರಾಮುಖ್ಯ ಜಾಸ್ತಿ ಆಗಿದೆ ಎಂದೂ ಹೇಳಿದರು.