
ಇದು ನಮ್ಮ ಊರಿನ ಹಳೆ ಮನೆಯ ಒಳಗಿನ ಹಜಾರದ ಚಿತ್ರ. ಚಿತ್ಪಾವನಿಯಲ್ಲಿ ಇದನ್ನು ಆಂತ್ಲಿ ಮಾಳಿ ಅನ್ನುವುದು. ನಾನು ಚಿಕ್ಕವನಾಗಿದ್ದಾಗ ಅಲ್ಲಿಯ ಕಿಟಿಕಿಯಲ್ಲಿ ಕುಳಿತು ಕಾಫಿ ಕುಡಿಯುತ್ತಿರುವುದನ್ನು ಈ AI ಚಿತ್ರದಲ್ಲಿ ನೋಡುತ್ತಿದ್ದೀರಿ. ಕಿಟಿಕಿಯಲ್ಲಿ ಕುಳಿತು? ಹೌದು, ಸರಿಯಾಗಿಯೇ ಓದಿದ್ದೀರಿ. ಒಂದು ಗಜ ದಪ್ಪದ ಮಣ್ಣಿನ ಗೋಡೆಯ ಮನೆಗಳ ಕಿಟಿಕಿಗಳು ಹೀಗೆಯೇ ಇರುತ್ತಿದ್ದುದು. ಅದರಲ್ಲಿ ಕುಳಿತು ಕಾಫಿ ಕುಡಿಯುವುದೇನು, ಒಂದು ಸಣ್ಣ ಎಲೆ ಹಾಕಿ ಊಟ ಮಾಡುವಷ್ಟು ಅಗಲದ ಜಾಗ ಇರುತ್ತಿತ್ತು. 1967ರಲ್ಲಿ ಆ ಮನೆಗೆ ವಿದ್ಯುತ್ತಿನ ವಯರಿಂಗ್ ಮಾಡುವಾಗ ಗೋಡೆಗೆ ತೂತು ಕೊರೆಯುವ ಪೈಪಿನ ಉದ್ದ ಸಾಕಾಗದೆ ಅರ್ಧ ಈ ಕಡೆಯಿಂದ , ಅರ್ಧ ಆ ಕಡೆಯಿಂದ ಕೊರೆಯಬೇಕಾಗಿ ಬಂದಿತ್ತು!
ಊಟದ ಮನೆಯೂ ಆಗಿದ್ದ ಇಲ್ಲಿ ಈ ಕಿಟಿಕಿಯ ಬುಡ ನಾನು ಊಟಕ್ಕೆ ಕುಳಿತುಕೊಳ್ಳುವ ಶಾಶ್ವತ ಜಾಗ ಆಗಿತ್ತು. ಆಗ ಚಿಕ್ಕವರು ಮಣೆಯ ಮೇಲೆ ಕೂತು ಉಣ್ಣುವ ಪರಿಪಾಠ ಇಲ್ಲದಿದ್ದರೂ ನನಗೆ ನಿತ್ಯವೂ ಮಣೆ ಬೇಕೇ ಬೇಕಿತ್ತು. ಕಿಟಿಕಿ ಬದಿಯ ಸಾಲಿನಲ್ಲಿ ಚಿಕ್ಕ ಮಕ್ಕಳು, ಎದುರುಗಡೆ ಸಾಲಿನಲ್ಲಿ ತಂದೆಯವರು, ಅಣ್ಣಂದಿರು ಕುಳಿತುಕೊಳ್ಳುತ್ತಿದ್ದರು. ಎಲ್ಲರಿಗೂ ಅವರವರ ನಿಶ್ಚಿತ ಜಾಗಗಳಿದ್ದವು.ದೇವರ ಕೋಣೆಯೂ ಇದೇ ಆಗಿತ್ತು. ಎಡ ಮೂಲೆಯಲ್ಲಿ ಕಾಣಿಸುವ ಕಪ್ಪು ಬಣ್ಣದ ಕಪಾಟಿನ ಒಳಗೆ ದೇವರ ಮಂಟಪ. ಕೆಂಪು ಬಣ್ಣದ ಚೌಕಾಕಾರದ ಸಿಮೆಂಟೇ ದೇವರ ಕೋಣೆಯನ್ನು ಬೇರ್ಪಡಿಸುವ demarcation. ದೇವರ ಮಂಟಪದ ಮೇಲ್ಭಾಗದಲ್ಲೂ ಕಪಾಟು ಇತ್ತು. ಕೆಳಗೆ ಶಾಶ್ವತವಾಗಿ ನಂದಾದೀಪ ಉರಿಯುತ್ತಿದ್ದುದರಿಂದ ಅದರೊಳಗೆ ಇಟ್ಟಿರುವ ವಸ್ತುಗಳೆಲ್ಲ ಬೂಸ್ಟು ಹಿಡಿಯದೆ ಬೆಚ್ಚಗಾಗಿ ಇರುತ್ತಿದ್ದವು.
ನಮ್ಮಲ್ಲಿ ನಿತ್ಯ ನಡೆಯುತ್ತಿದ್ದ ಷೋಡಶೋಪಚಾರ ಪೂಜೆಯ ಜೊತೆಗೆ ಸೋಮವಾರಗಳಂದು ರುದ್ರಾಭಿಷೇಕವೂ ಇರುತ್ತಿತ್ತು. ಪೂಜೆಯ ಕೊನೆಯಲ್ಲಿ ನೈವೇದ್ಯದ ಸಮಯ ಊದುಬತ್ತಿ, ಕರ್ಪೂರಗಳ ಸುವಾಸನೆ, ಬಿಸಿ ಬಿಸಿ ಅನ್ನದ ಹಬೆ, ಅಡುಗೆಮನೆಯಿಂದ ಬರುವ ಒಗ್ಗರಣೆಯ ಘಮ ಇವೆಲ್ಲ ಸೇರಿ ಒಂದು ದೈವಿಕ ವಾತಾವರಣ ಸೃಷ್ಟಿಯಾಗುತ್ತಿತ್ತು.
ಪ್ರತೀ ಶುಕ್ರವಾರ ರಾತ್ರಿ ಲಕ್ಷ್ಮೀನಾರಾಯಣ ಹೃದಯ ಗ್ರಂಥದ ಪಾರಾಯಣ ಇರುತ್ತಿತ್ತು. ಅದರಲ್ಲಿ ಬರುವ ಫಟು ಕುರು ಕುರು ಸ್ವಾಹಾ ಎಂಬ ಸಾಲುಗಳು ನಮಗೆಲ್ಲರಿಗೂ ಕಂಠಪಾಠವಾಗಿದ್ದವು! ಆ ಪುಸ್ತಕದಲ್ಲಿ ದೇವಿಯು ಚಂಡ ಮುಂಡರನ್ನು ವಧಿಸುವ ಸುಂದರವಾದ ವರ್ಣ ಚಿತ್ರವೊಂದಿತ್ತು. ಅದನ್ನು ತೋರಿಸುವಂತೆ ನಾವು ತಂದೆಯವರನ್ನು ಕೇಳುವುದಿತ್ತು. ಪಾರಾಯಣದ ಒಂದು ಹಂತದಲ್ಲಿ ಚಿಟಿಕೆಯಷ್ಟು ಮಂತ್ರಿಸಿದ ಭಸ್ಮವನ್ನು ತಂದೆಯವರು ನಮ್ಮ ಬಾಯಿಗೆ ಹಾಕುತ್ತಿದ್ದರು. ಶುಕ್ರವಾರದ ಪಾರಾಯಣ, ಚೌತಿ, ನವರಾತ್ರಿ ಮತ್ತು ನವಾನ್ನ ಪೂಜೆಯ ದಿನ ಮಾತ್ರ ಮಂಗಳಾರತಿಯ ಸಮಯ ಜಾಗಟೆ ಬಾರಿಸುವುದು ನಮ್ಮಲ್ಲಿದ್ದ ಅಲಿಖಿತ ನಿಯಮ.
ಚೌತಿಯ ಗಣೇಶ ಹೊರಗಿನ ಹಜಾರದಲ್ಲಿ ಪೂಜಿಸಲ್ಪಡುತ್ತಿದ್ದರೂ ಸಣ್ಣ ಮಂಟಪವೊಂದರಲ್ಲಿ ಹರತಾಳಿಕಾ ಗೌರಿ ಪೂಜೆ ಇಲ್ಲೇ ನಡೆಯುತ್ತಿತ್ತು. ನವರಾತ್ರಿ ಪೂಜೆ ನಿತ್ಯದ ದೇವರ ಮಂಟಪದಲ್ಲೇ ನಡೆಯುತ್ತಿದ್ದುದು. ಆಗ ನೀಲಿ ನಾಮದ ಗೋರಟೆ, ಹಳದಿ ಮೈಸೂರು ಗೋರಟೆ ಮತ್ತು ಕೆಂಪು ಕೇಪುಳ ಹೂಗಳ ಮಾಲೆಗಳಿಂದ ಮಂಟಪವನ್ನು ಅಲಂಕರಿಸಲಾಗುತ್ತಿತ್ತು. ಮರದ ತುಂಡೊಂದನ್ನು ಕೆತ್ತಿ ಒಂದು ಬ್ಯಾಟರಿ ಬಾಕ್ಸು ಮತ್ತು ಗೆರಟೆ ಹಾಗೂ ಒಂದು ಹಳೆಯ ಸ್ಪ್ರಿಂಗ್ ಉಪಯೋಗಿಸಿ ಒಂದು ಟಾಗಲ್ ಸ್ವಿಚ್ಚು ತಯಾರಿಸಿ ನವರಾತ್ರಿ ಪೂಜೆಯ ಹೊತ್ತಲ್ಲಿ ದೇವರ ಮೇಲೆ ಬಲ್ಬಿನ ಬೆಳಕು ಬೀಳುವ ವ್ಯವಸ್ಥೆ ನಮ್ಮಣ್ಣ ಮಾಡಿದ್ದರು. ಅದಕ್ಕೆ ರೇಡಿಯೋದ ನಿರುಪಯೋಗಿ ಬ್ಯಾಟರಿಯನ್ನು ಒಡೆದು ಅದರೊಳಗೆ ಇರುವ ಸೆಲ್ಲುಗಳನ್ನು ಅವರು ಉಪಯೋಗಿಸುತ್ತಿದ್ದರು.
ನವರಾತ್ರಿಯಲ್ಲಿ ಸಪ್ತಶತಿ ಪಾರಾಯಣ ನಡೆಯುತ್ತಿದ್ದುದು ಕಿಟಿಕಿಯಿಂದ ಸ್ವಲ್ಪ ಈಚೆಗೆ. ಪೂಜೆಮಾಡುವವರನ್ನುಳಿದು ಉಳಿದವರು ನಿತ್ಯ ಸಂಧ್ಯಾವಂದನೆ ಮಾಡುವ ಜಾಗವೂ ಅದೇ ಆಗಿತ್ತು. ಸಂಧ್ಯಾವಂದನೆಗೆ ಮೊದಲು ಹಗಲಿನಲ್ಲಿ ಗಂಧ, ರಾತ್ರೆ ಭಸ್ಮ ಧರಿಸುವ ಸಂಪ್ರದಾಯ ನಮ್ಮಲ್ಲಿತ್ತು.
ಬಾಣಂತಿಯರು ಶುದ್ಧ ಆದ ದಿನ ದೇವರೆದುರು ಕೂತು ಮನೆಯ ಸಣ್ಣ ಮಕ್ಕಳೆಲ್ಲರ ತಲೆಗೆ ಎಣ್ಣೆ ಹಚ್ಚಿ, ತುಪ್ಪದಲ್ಲಿ ಕಲಸಿದ ಶುಂಠಿಬೆಲ್ಲ ತಿನ್ನಲು ಕೊಡುವ ಕ್ರಮ ಇತ್ತು. ದೀಪಾವಳಿ ಸಮಯದಲ್ಲಿ ತೈಲಾಭ್ಯಂಗದ ದಿನ ಸ್ನಾನಾರಂಭಕ್ಕೆ ಮೊದಲು ಮನೆಯ ಕಿರಿಯ ಬಾಲಕನು ದೇವರೆದುರು ಭೂಮಿಯ ಮೇಲೆ ಎಣ್ಣೆಯ ಬೊಟ್ಟುಗಳನ್ನು ಇಟ್ಟು ಅರಸಿನ ಕುಂಕುಮ, ಹೂಗಳನ್ನು ಏರಿಸಿ ಭೂಮಿ ಪೂಜೆ ಮಾಡುವ ಪದ್ಧತಿ ಇತ್ತು. ನಾನು ಕಿಶೋರನಾಗಿರುವಷ್ಟು ಸಮಯ ಈ ಅವಕಾಶ ನನ್ನ ಪಾಲಿಗೆ ಬರುತ್ತಿತ್ತು.
ದೇವರ ಮಂಟಪದ ಪಕ್ಕದಲ್ಲಿ ಬಲಬದಿಗೆ ಕುಡಿಯುವ ನೀರನ್ನು ತುಂಬಿಡುವ ರಾಂಧಣಿ ಎನ್ನುವ ಮಣ್ಣಿನ ದೊಡ್ಡ ಪಾತ್ರೆ ಇಡುವ ಜಾಗ. ಅದರ ಮೇಲ್ಗಡೆ ತಾಯಿಯವರು ಮಾಡುತ್ತಿದ್ದ ಕೆಲವು ವಿಶೇಷ ಪೂಜೆಗಳಿಗಾಗಿ ಒಂದು ಸಣ್ಣ ದೇವರ ಗೂಡು. ಅದರಿಂದಾಚೆ ಅಡುಗೆ ಮನೆಗೆ ಹೋಗುವ ಬಾಗಿಲು.
ಅಡುಗೆ ಮನೆಯ ಬಾಗಿಲ ಬಲಬದಿಯಲ್ಲೊಂದು ಸಣ್ಣ ಕಂಬ ನೆಟ್ಟದ್ದು ಕಾಣಿಸುತ್ತಿದೆಯಲ್ಲವೇ? ಚಿತ್ಪಾವನಿಯಲ್ಲಿ ಇದರ ಹೆಸರು ತಾಕ್ಕಮೀಠಿ. ಇದಕ್ಕೆ ಕಡಗೋಲು ಕಟ್ಟಿಯೇ ರಂಗನಾಯಕ ರಾಜೀವ ಲೋಚನ ಎಂದು ಹಾಡುತ್ತಾ ಮನೆಯ ಮಹಿಳೆಯರು ಭರಣಿಯಲ್ಲಿ ಮಜ್ಜಿಗೆ ಕಡೆಯುತ್ತಿದ್ದುದು. ಚಿಕ್ಕ ಮಕ್ಕಳ ತಿಂಗಳ ಹುಟ್ಟುಹಬ್ಬಗಳ ಆಚರಣೆ ಇದರ ಎದುರೇ ನಡೆಯುತ್ತಿದ್ದುದು. ಅದರ ಮೇಲ್ಗಡೆ ಕಾಣಿಸುತ್ತಿರುವ ಸಣ್ಣ ಗೂಡು, ಒಳಗಡೆ ಕನ್ನಡಿ ಅಳವಡಿಸಿದ ಅರಸಿನ ಕುಂಕುಮದ ಪೆಟ್ಟಿಗೆ ಇಡುವ ಜಾಗ.
ಈ ಫೋಟೊದಲ್ಲಿ ಕಾಣಿಸುವ ಭಾಗಕ್ಕಿಂತ ಸ್ವಲ್ಪ ಹಿಂದೆ ಗೋಡೆ ಬದಿಯಲ್ಲಿ ಹೆಚ್ಚುವರಿಯಾಗಿ ನಿಲ್ಲಿಸಿದ ಕಂಬವೊಂದು ಇತ್ತು. ಚಿಕ್ಕ ಮಕ್ಕಳು ಕಂಬ ಮತ್ತು ಗೋಡೆಯ ನಡುವಿನ ಸಂದಿಯಲ್ಲಿ ನುಸಿಯುವ ಆಟ ಆಡುವುದಿತ್ತು. ಆ ಕಂಬಕ್ಕೆ ಸ್ವಲ್ಪ ಬೆಣ್ಣೆಯನ್ನು ಮೆತ್ತಿಟ್ಟು ನೀರೆಲ್ಲ ಇಳಿದ ಮೇಲೆ ಅದರಲ್ಲಿ ಸಾಲಿಸಿಲಿಕ್ ಎಸಿಡ್ ಬೆರೆಸಿ ಫಂಗಸ್ನಿಂದ ಉಂಟಾಗುವ ಸಿಬ್ಬದಂಥ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತಿತ್ತು.
ಇನ್ನೂ ಹಿಂದಕ್ಕೆ ಹೋದರೆ ವೇದಮಂತ್ರಗಳ ಅಮೂಲ್ಯ ಗ್ರಂಥಗಳನ್ನು ಇಡುವ ಮರದ ಕಪಾಟು ಇತ್ತು. ಆಗಿನ ಗ್ರಂಥಗಳೆಂದರೆ ಹೊಲಿಗೆ ಹಾಕಿ ಬೈಂಡ್ ಮಾಡಿದ ಪುಸ್ತಕಗಳಲ್ಲ. ಬಿಡಿ ಹಾಳೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಮೇಲೊಂದು ಕೆಳಗೊಂದು ಹಾಳೆಗಳ ಆಕಾರದ್ದೇ ಮರದ ತೆಳ್ಳಗಿನ ಹಲಗೆಗಳನ್ನಿಟ್ಟು ನಾರು ಬಟ್ಟೆಯಿಂದ ಗಟ್ಟಿಯಾಗಿ ಸುತ್ತಿ ಹಗ್ಗದಿಂದ ಬಿಗಿದ ವೇಷ್ಟಣಗಳು ಅವು. ಪುಸ್ತಕದ ಹುಳಗಳು ಬರದಂತೆ ಹಾವಿನ ಪೊರೆಯನ್ನು ಪುಟಗಳ ಮಧ್ಯೆ ಇರಿಸುವ ಕ್ರಮ ಇತ್ತು.
ಈ ಕಪಾಟಿನ ಪಕ್ಕದಲ್ಲೇ ಪ್ರತಿಸಾಂವತ್ಸರಿಕ ಶ್ರಾದ್ಧ, ಮಹಾಲಯಗಳು ನಡೆಯುತ್ತಿದ್ದುದು.
ಇನ್ನೂ ಹಿಂದೆ ಹೋದರೆ ಪಾತ್ರೆಗಳ ಕೋಣೆಗೆ ಹೋಗುವ ಬಾಗಿಲು. ಹೆಸರೇ ಸೂಚಿಸುವಂತೆ ದಿನನಿತ್ಯದ ಅಗತ್ಯಕ್ಕೆ ಬೇಕಾಗದ ಪಾತ್ರೆಗಳನ್ನಿರಿಸುವ ಕೋಣೆ ಇದು. ತಂದೆಯವರು ವೀಳ್ಯಕ್ಕೆ ಉಪಯೋಗಿಸುತ್ತಿದ್ದ ಹೊಗೆಸೊಪ್ಪನ್ನು ಶೇಖರಿಸಿಡುವ ಭರಣಿ ಈ ಕೋಣೆಯಲ್ಲೇ ಇರುತ್ತಿದ್ದುದು. ಈ ಕೋಣೆಯಲ್ಲಿರುತ್ತಿದ್ದ ಮರದ ಪೆಟ್ಟಿಗೆಯೊಂದು ಚೌತಿಯ ಗಣಪನನ್ನು ಮಂಟಪದ ಹಿಂದೆ ಎತ್ತರದಲ್ಲಿ ಕೂರಿಸುವ ಪೀಠವಾಗಿ ಉಪಯೋಗಿಸಲ್ಪಡುತ್ತಿತ್ತು.
ಬಾಹೆರ್ಲಿ ಮಾಳಿ
ಕಿಟಿಕಿಯಲ್ಲಿ ಕುಳಿತು ಕಾಫಿ ಕುಡಿಯುತ್ತಿದ್ದ ಕಾಲದ ಕಥಾನಕದಲ್ಲಿ ಮೊನ್ನೆ ಆಂತ್ಲಿಮಾಳಿಯಲ್ಲಿ (ಒಳಹಜಾರ) ಇದ್ದೆವು. ಇಂದು ಒಂದು ಬಾಗಿಲು ದಾಟಿ ಬಾಹೆರ್ಲಿಮಾಳಿಗೆ (ಹೊರಹಜಾರ) ಬರೋಣ.

ಚಿತ್ರದಲ್ಲಿ ಕಾಣುತ್ತಿರುವುದು 1950ರ ದಶಕದಲ್ಲಿದ್ದ ಆ ಭಾಗದ ರೂಪ. ಅಲ್ಲಿರುವ ಬೃಹದಾಕಾರದ ಕಡೆಯುವ ಕಲ್ಲಿನಲ್ಲಿ ನಮ್ಮ ತಾಯಿಯವರು ದೀಪಾವಳಿಗೆ ದೋಸೆ ಹಿಟ್ಟು ರುಬ್ಬುತ್ತಿರುವ ದೃಶ್ಯ AIಯ ಸೃಷ್ಟಿ. ಇದೇನಿದು ದೀಪಾವಳಿಗೆ ದೋಸೆಹಿಟ್ಟು ಎಂದು ಕೆಲವರಿಗೆ ಅನುಮಾನ ಮೂಡಬಹುದು. ದಕ್ಷಿಣ ಕನ್ನಡದಲ್ಲಿ ದೀಪಾವಳಿ ಎಂದರೆ ದೋಸೆ ಹಬ್ಬವೇ. ನಮ್ಮ ಕರಾವಳಿ ಭಾಗದಲ್ಲಿ ದೀಪಾವಳಿಯಂದು ದೋಸೆ ಮಾಡುವ ಸಂಪ್ರದಾಯ ಬಲು ಹಿಂದಿನಿಂದಲೂ ಇದೆ. ದೀಪಾವಳಿಯ ಮುನ್ನಾ ದಿನ ಪ್ರತಿ ಮನೆಯಲ್ಲಿ ದೊಡ್ಡ ಹಂಡೆಯಲ್ಲಿ ಮೂರು ದಿನಕ್ಕೆ ಸಾಕಾಗುವಷ್ಟು ದೋಸೆಹಿಟ್ಟು ರುಬ್ಬಿಟ್ಟುಕೊಳ್ಳಲಾಗುತ್ತಿತ್ತು. ಹಬ್ಬದ ವಿಶೇಷವಾಗಿ ಅದಕ್ಕೆ ಸ್ವಲ್ಪ ಅರಸಿನವನ್ನೂ ಬೆರೆಸಲಾಗುತ್ತಿತ್ತು. ನರಕ ಚತುರ್ದಶಿಯಂದು ಬೆಳಗಿನ ಜಾವ ಎಲ್ಲರ ತೈಲಾಭ್ಯಂಗದ ನಂತರ ಬಾಳೆಹಣ್ಣಿನ ಸೀಕರಣೆಯ ಜೊತೆ ದೋಸೆ ಮತ್ತು ನೈವೇದ್ಯದ ಸಿಹಿ ಅವಲಕ್ಕಿ ಮೆಲ್ಲುವ ಕಾರ್ಯಕ್ರಮ. ಹಿರಿಯರು ಅಂದು ಮಧ್ಯಾಹ್ನ ಎಂದಿನಂತೆ ಅನ್ನ ಉಣ್ಣುತ್ತಿದ್ದರೂ ನಾನೂ ಸೇರಿದಂತೆ ಕಿರಿಯರೆಲ್ಲರಿಗೆ ಆ ದಿನ ಮೂರು ಹೊತ್ತೂ ದೋಸೆಯೇ! ಮುಂದಿನ ಮೂರು ದಿನವೂ ಬೆಳಗ್ಗೆಗೆ ದೋಸೆ. ದಿನದಿಂದ ದಿನಕ್ಕೆ ಹುಳಿ ಹೆಚ್ಚಾಗುತ್ತಾ ಹೋಗುತ್ತಿದ್ದ ಹಿಟ್ಟಿಗೆ ಕೊನೆಯ ದಿನ ಹಸಿ ಮೆಣಸು ಕೊಚ್ಚಿ ಹಾಕಿ ಮಾಡಿದ ದೋಸೆಗೆ ಅದ್ಭುತ ರುಚಿ. ಆಗ ನಮ್ಮಲ್ಲಿ ದೋಸೆಗೆ ಜೊತೆಯಾಗಿ ಚಟ್ಣಿ ಬಳಸುವ ಪರಿಪಾಠ ಇರಲಿಲ್ಲ. ಮನೆಯಲ್ಲಿ ಯಥೇಚ್ಛ ಜೇನುತುಪ್ಪ ಇರುತ್ತಿದ್ದುದರಿಂದ ಅದನ್ನೇ ತುಪ್ಪದ ಜೊತೆ ಬೆರೆಸಿ ಬಳಸುತ್ತಿದ್ದುದು. ಗೋಪೂಜೆಯ ದಿನ ದನಕರುಗಳಿಗೂ ಎರಡೆರಡು ದೋಸೆ ತಿನ್ನುವ ಭಾಗ್ಯ. ಪೂಜೆ ಇಲ್ಲದಿದ್ದರೂ ಎಮ್ಮೆಗಳಿಗೂ ದೋಸೆ ಸಿಗುತ್ತಿತ್ತು.
ನಾನು ಒಂದನೆಯ ಅಥವಾ ಎರಡನೆ ಕ್ಲಾಸಿನಲ್ಲಿ ಇರುವಾಗ ಕಡೆಯುವ ಕಲ್ಲು ಇದ್ದ ಜಾಗದಲ್ಲಿ ಹೊರಗಿನ ‘ಹೊಸ ಜಗಲಿ’ಗೆ ಹೋಗುವ ಬಾಗಿಲು ಬಂತು. ಕಡೆಯುವ ಕಲ್ಲು ಹೊಸ ಜಗಲಿಗೆ ಸ್ಥಳಾಂತರಗೊಂಡಿತು. ಆಣ್ಣಿ ಆಚಾರಿ ಹೊಸ ಜಗಲಿಗೆ ಮರದ ದಳಿ ಮತ್ತು ಇಲ್ಲಿ ಬಾಗಿಲು ಕೂರಿಸಿದ್ದು ನನಗೂ ನೆನಪಿದೆ. ಈ ಬಾಗಿಲಿನ ಒಳಬದಿಯ ಚಿಲಕಕ್ಕೆ ಆತ ರಹಸ್ಯ ಜಾಗದಲ್ಲಿ ಕಳ್ಳ ಕೀಲು ರಚಿಸಿ ಕೊಟ್ಟಿದ್ದ. ಮರದ ಬಾಗಿಲುಗಳಿಗೆ ಸಾಮಾನ್ಯವಾಗಿ ವಿರುದ್ಧ ದಿಕ್ಕಿಗೆ ಚಲಿಸುವ ಎರಡು ಚಿಲಕಗಳು ಇರುವುದು ವಾಡಿಕೆ. ಬಾಗಿಲು ಭದ್ರಪಡಿಸುವಾಗ ಒಂದೇ ಚಿಲಕ ಹಾಕಬೇಕೆಂದು ಅಣ್ಣಿ ಆಚಾರಿ ಹೇಳುತ್ತಿದ್ದ. ಹೀಗೆ ಮಾಡಿದರೆ ಯಾರಾದರು ಮಂತ್ರವಾದ ಮಾಡಿ ಚಿಲಕ ಸರಿಯಲಿ ಎಂದು ಹೇಳಿದ ಪಕ್ಷದಲ್ಲಿ ಒಂದು ಚಿಲಕ ತೆರೆದರೆ ಇನ್ನೊಂದು ಮುಚ್ಚುತ್ತದೆ ಎಂದು ಅವನ ಅಂಬೋಣ! ಕಡೆಯುವ ಕಲ್ಲು ಇದ್ದಲ್ಲಿ ಬಾಗಿಲು ಬಂದ ಮೇಲೆ.
ಮಕ್ಕಳ ತೊಟ್ಟಿಲು ಬಾಹೆರ್ಲಿ ಮಾಳಿಯಲ್ಲೇ ಇದ್ದದ್ದು. ಎಂದೋ ಎಂದೋ, ಎಂದೋ ನಿನ್ನ ದರುಶನ ಎಂದು ಹಾಡುತ್ತಾ ಅಂಬಕ್ಕ ನನ್ನನ್ನು ತೂಗಿದ್ದು ಇಲ್ಲೇ. ಹರಿಹರ ಅಣ್ಣ ಸಂಜೆ ನಮ್ಮನ್ನು ತೊಟ್ಟಿಲಲ್ಲಿ ಕೂರಿಸಿ ತೂಗುತ್ತಾ ಬಾಯಿಪಾಠ ಹೇಳಿಕೊಡುತ್ತಿದ್ದರು. ಇದು ಶುಭಂ ಕರೋತು ಕಲ್ಯಾಣಂ ಶ್ಲೋಕದಿಂದ ಆರಂಭವಾಗಿ ಆದಿತ್ಯವಾರ ಸೋಮವಾರ, ಪಾಡ್ಯ ಯುಗಾದಿ ಪಾಡ್ಯ ಬಿದಿಗೆ ಸೋಮನ ಬಿದಿಗೆ, ಚೈತ್ರ ವೈಶಾಖ, ವಸಂತ ಋತು ಗ್ರೀಷ್ಮ ಋತು, ಮೇಷ ವೃಷಭ, ಅಶ್ವಿನಿ ಭರಣಿ, ಬವ - ಸಿಂಹ, ಬಾಲವ - ಹುಲಿ, ಪ್ರಭವ ವಿಭವ ಇತ್ಯಾದಿ ಕಾಲ ಗಣನೆಯ ಎಲ್ಲ ಕೋಷ್ಟಕಗಳನ್ನು ಒಳಗೊಂಡಿರುತ್ತಿತ್ತು. ಕೊನೆಯಲ್ಲಿ ಸಂಡೆ ಮಂಡೆ ಹೇಳಿಕೊಡುತ್ತಿದ್ದ ನಮ್ಮಣ್ಣ ಸಾಟರ್ಡೇ ಆದ ಮೇಲೆ ಪ್ರಾಸಬದ್ಧವಾಗಿ ಪತ್ರೋಡೆಯನ್ನೂ ಸೇರಿಸುತ್ತಿದ್ದರು!
ಸ್ವಲ್ಪ ದೊಡ್ಡವರಾದ ಮೇಲೆ ನಾವು ತೊಟ್ಟಿಲಿನ ಆಚೀಚೆ ಅಂಚುಗಳ ಮೇಲೆ ಇಬ್ಬರು ಕುಳಿತು ಜೀಕುತ್ತಾ ಬಾರೊ ಬಾರೊ ಬಾರೊ ಗಣಪ, ಗೆಳೆಯನೆ ಪೇಳುವೆ ಕೇಳಣ್ಣ, ಝನ್ ಝನ್ಕ ಝನ್ಕರೊ ಇತ್ಯಾದಿ ಹಾಡು ಹೇಳುತ್ತಿದ್ದೆವು.
ತೊಟ್ಟಿಲಿನ ಸಮೀಪ ಗೋಡೆಯಲ್ಲಿ ಇದ್ದ ಗೂಡು ಚಿಮಿಣಿ ದೀಪಗಳು ಮತ್ತು L ಆಕಾರದ outlet ಇದ್ದ ಹಸುರುಬಣ್ನದ ಚಿಮಿಣಿ ಎಣ್ಣೆಯ ಕ್ಯಾನ್ ಇಡುವ ಜಾಗವಾಗಿತ್ತು. ಇನ್ನೊಂದು ಬದಿಯಲ್ಲಿದ್ದ ಗೂಡಿನಲ್ಲಿ ತೆಂಗಿನೆಣ್ಣೆಯ ಉರುಳಿ ಇಡುತ್ತಿದ್ದ ಜಾಗ.
ಹೊರಗಿನ ಚಾವಡಿಯಿಂದ ಇಲ್ಲಿಗೆ ಬರುವ ಬಾಗಿಲಿನ ಮೇಲ್ಭಾಗದಲ್ಲಿ ಆಣಿ, ಸ್ಕ್ರೂ, ಬೋಲ್ಟ್, ನಟ್ ಇತ್ಯಾದಿ ಸಕಲ ಗುಜರಿ ವಸ್ತುಗಳನ್ನು ಹಾಕಿಡುವ ನಳೊ ಎಂಬ ಹೆಸರಿನ, ಮೇಲ್ಭಾಗ ತೆರೆದಿರುವ ಬಿದಿರಿನ ಅಂಡೆ ತೂಗಾಡುತ್ತಿತ್ತು. ಅಲ್ಲೇ ಸಮೀಪದಲ್ಲಿ ಕೃಷಿ ಕೆಲಸದ ಕತ್ತಿಗಳನ್ನು park ಮಾಡುವ ಸೀಳು ಬಿದಿರು.
ಚೌತಿಯ ಮಂಟಪ ಇಲ್ಲೇ ಇರುತ್ತಿದ್ದುದು. ಮಂಟಪವನ್ನು ನಿಲ್ಲಿಸಲು ಬೇಕಾಗುವ ಎರಡು ಬಿದಿರುಗಳು ಬಚ್ಚಲುಮನೆಯ ಅಟ್ಟದ ಮೇಲಿರುತ್ತಿದ್ದವು. ಅವುಗಳನ್ನು ಕೆಳಗಿಳಿಸಿ ತೊಳೆದು ಮಧ್ಯಾಹ್ನದೊಳಗೆ ಸೂಕ್ತ ಜಾಗದಲ್ಲಿ ಕಟ್ಟಿ ಮಾಳಿಗೆಯ ಮೇಲಿರುತ್ತಿದ್ದ ಮರದ ಮಂಟಪವನ್ನು ತಂದು ಅಳವಡಿಸುವ ಕೆಲಸ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು. ಮನೆಯ ಆಳು ಕಾಳುಗಳಿಗೂ ಚೌತಿ ಗಣಪನ ದರ್ಶನ ಭಾಗ್ಯ ಸಿಗಲಿ ಎಂಬ ಉದ್ದೇಶದಿಂದ ಮಂಟಪಕ್ಕೆ ದೇವರ ಕೋಣೆ ಇದ್ದ ಆಂತ್ಲಿಮಾಳಿಯ ಬದಲು ಹೊರ ಚಾವಡಿಯಿಂದಲೂ ವೀಕ್ಷಿಸಲು ಸಾಧ್ಯವಾಗುವ ಈ ಸ್ಥಳವನ್ನು ನಿಗದಿ ಪಡಿಸಿರಬಹುದು.
ನಾವು ಮನೆಯಲ್ಲಿ ಬೆಳ್ತಿಗೆ ಅಕ್ಕಿ ಬಳಸುವುದು. ತೋಟಕ್ಕೆ ಮದ್ದು ಬಿಡುವವರಿಗೆ ಮತ್ತು ಅಡಿಕೆ ಕೊಯ್ಲು ಮಾಡುವವರಿಗೆ ಹೊರಗಡೆ ಕುಚ್ಚಲು ಅಕ್ಕಿಯ ಅನ್ನ ಮಾಡಿ ಬಡಿಸುವುದಿತ್ತು. ಕೊಟ್ಟಣದ ಕುಚ್ಚಲಕ್ಕಿಯ ಪರಿಮಳಕ್ಕೆ ಮನಸೋತ ನಮಗೂ ಅದನ್ನು ಉಣ್ಣಬೇಕೆಂದು ಆಸೆಯಾದರೆ ಹೊರ ಹಜಾರದಲ್ಲಿ ಕುಳಿತು ಉಣ್ಣುವ ಅನುಮತಿ ಸಿಗುತ್ತಿತ್ತು. ಜೊತೆಗೆ ದೀಗುಜ್ಜೆಯ ಹುಳಿ ಏನಾದರೂ ಇದ್ದರೆ ನಿತ್ಯದ ಎರಡರಷ್ಟು ಅನ್ನ ನಮ್ಮ ಹೊಟ್ಟೆ ಸೇರುತ್ತಿತ್ತು. ಆ ಕಾಲದಲ್ಲಿ ಕುಚ್ಚಲು ಅಕ್ಕಿಗೆ ಒಳಗೆ ಪ್ರವೇಶವಿರಲಿಲ್ಲ.
ಎದುರು ಭಾಗದಲ್ಲಿ ಕಾಣುವ ಮರದ ಕಪಾಟು ತೀರಾ ಹಳೆ ಕಾಲದ್ದಲ್ಲ. ನಮ್ಮ ನೆನಪಿನಲ್ಲೇ ಇನ್ನೊಬ್ಬ ಆಣ್ಣಿ ಆಚಾರಿ ಮಾಡಿದ್ದು. ಆತ ಹವ್ಯಾಸಿ ಯಕ್ಷಗಾನ ಹಲಾವಿದ ಕೂಡ. ಅನೇಕ ವರ್ಷಗಳ ನಂತರ ನಾನು ಮಂಗಳೂರಲ್ಲಿ ಮನೆ ನಿರ್ಮಿಸಿದಾಗ ಕಿಟಿಕಿ ಬಾಗಿಲುಗಳನ್ನು ಆತನೇ ನಿರ್ಮಿಸಿ ಕೊಟ್ಟದ್ದು. ಕಪಾಟುಗಳಿಗೆ, ಬಾಗಿಲುಗಳಿಗೆ ಕುಸುರಿ ಕೆತ್ತನೆ ಮಾಡುವ ಕೌಶಲವೂ ಅವನಲ್ಲಿತ್ತು. ನಮ್ಮ ಮನೆಯ ಮುಂಬಾಗಿಲಿಗೂ ಚಂದದ ಡಿಸೈನ್ ಮಾಡಿ ಕೊಟ್ಟಿದ್ದಾನೆ.
ಮುಂದುಗಡೆ ಕಾಣುವ ಮಾಳಿಗೆ ಮೆಟ್ಟಲಿರುವ ಜಂಕ್ಷನ್ನ ಎದುರುಗಡೆ ಮೂಲೆಯಲ್ಲಿ ಕಡಿದ ಬಾಳೆಗೊನೆ ಇಡುವ ಜಾಗ. ಅಲ್ಲೇ ಎಡಕ್ಕೆ ತಿರುಗಿದರೆ ಹಿತ್ತಲ ಜಗಲಿಗೆ ಹೋಗುವ, ಬಿಜಾಗಿರಿ ಬದಲಿಗೆ ಮೇಲೆ ಮತ್ತು ಕೆಳಗೆ ಮೊಳೆಕ್ಕುತ್ತಿ ಇರುವ ದಪ್ಪದ ಬಾಗಿಲಿನ ಹಿಂಭಾಗ ಹಲಸಿನ ಬೀಜಗಳನ್ನು ಹಸಿಮಣ್ಣಿನೊಡನೆ ಕಲಸಿ ಗುಡ್ದದಂತೆ ಮೆತ್ತಿಡುವ ಜಾಗ. ಹೀಗೆ ಸಂರಕ್ಷಿಸಿದ ಹಲಸಿನ ಬೀಜಗಳು ಎಷ್ಟು ಸಮಯವಾದರೂ ಕೆಡುವುದಿಲ್ಲ. ಬೇಕೆನಿಸಿದಾಗ ಆ ಗುಡ್ಡವನ್ನು ಅಗೆದು ಬೀಜಗಳನ್ನು ಗುದ್ದಿ ಬಳಸಿದರಾಯಿತು.

ಚಿತ್ರದಲ್ಲಿ ಕಾಣುತ್ತಿರುವುದು 1950ರ ದಶಕದಲ್ಲಿದ್ದ ಆ ಭಾಗದ ರೂಪ. ಅಲ್ಲಿರುವ ಬೃಹದಾಕಾರದ ಕಡೆಯುವ ಕಲ್ಲಿನಲ್ಲಿ ನಮ್ಮ ತಾಯಿಯವರು ದೀಪಾವಳಿಗೆ ದೋಸೆ ಹಿಟ್ಟು ರುಬ್ಬುತ್ತಿರುವ ದೃಶ್ಯ AIಯ ಸೃಷ್ಟಿ. ಇದೇನಿದು ದೀಪಾವಳಿಗೆ ದೋಸೆಹಿಟ್ಟು ಎಂದು ಕೆಲವರಿಗೆ ಅನುಮಾನ ಮೂಡಬಹುದು. ದಕ್ಷಿಣ ಕನ್ನಡದಲ್ಲಿ ದೀಪಾವಳಿ ಎಂದರೆ ದೋಸೆ ಹಬ್ಬವೇ. ನಮ್ಮ ಕರಾವಳಿ ಭಾಗದಲ್ಲಿ ದೀಪಾವಳಿಯಂದು ದೋಸೆ ಮಾಡುವ ಸಂಪ್ರದಾಯ ಬಲು ಹಿಂದಿನಿಂದಲೂ ಇದೆ. ದೀಪಾವಳಿಯ ಮುನ್ನಾ ದಿನ ಪ್ರತಿ ಮನೆಯಲ್ಲಿ ದೊಡ್ಡ ಹಂಡೆಯಲ್ಲಿ ಮೂರು ದಿನಕ್ಕೆ ಸಾಕಾಗುವಷ್ಟು ದೋಸೆಹಿಟ್ಟು ರುಬ್ಬಿಟ್ಟುಕೊಳ್ಳಲಾಗುತ್ತಿತ್ತು. ಹಬ್ಬದ ವಿಶೇಷವಾಗಿ ಅದಕ್ಕೆ ಸ್ವಲ್ಪ ಅರಸಿನವನ್ನೂ ಬೆರೆಸಲಾಗುತ್ತಿತ್ತು. ನರಕ ಚತುರ್ದಶಿಯಂದು ಬೆಳಗಿನ ಜಾವ ಎಲ್ಲರ ತೈಲಾಭ್ಯಂಗದ ನಂತರ ಬಾಳೆಹಣ್ಣಿನ ಸೀಕರಣೆಯ ಜೊತೆ ದೋಸೆ ಮತ್ತು ನೈವೇದ್ಯದ ಸಿಹಿ ಅವಲಕ್ಕಿ ಮೆಲ್ಲುವ ಕಾರ್ಯಕ್ರಮ. ಹಿರಿಯರು ಅಂದು ಮಧ್ಯಾಹ್ನ ಎಂದಿನಂತೆ ಅನ್ನ ಉಣ್ಣುತ್ತಿದ್ದರೂ ನಾನೂ ಸೇರಿದಂತೆ ಕಿರಿಯರೆಲ್ಲರಿಗೆ ಆ ದಿನ ಮೂರು ಹೊತ್ತೂ ದೋಸೆಯೇ! ಮುಂದಿನ ಮೂರು ದಿನವೂ ಬೆಳಗ್ಗೆಗೆ ದೋಸೆ. ದಿನದಿಂದ ದಿನಕ್ಕೆ ಹುಳಿ ಹೆಚ್ಚಾಗುತ್ತಾ ಹೋಗುತ್ತಿದ್ದ ಹಿಟ್ಟಿಗೆ ಕೊನೆಯ ದಿನ ಹಸಿ ಮೆಣಸು ಕೊಚ್ಚಿ ಹಾಕಿ ಮಾಡಿದ ದೋಸೆಗೆ ಅದ್ಭುತ ರುಚಿ. ಆಗ ನಮ್ಮಲ್ಲಿ ದೋಸೆಗೆ ಜೊತೆಯಾಗಿ ಚಟ್ಣಿ ಬಳಸುವ ಪರಿಪಾಠ ಇರಲಿಲ್ಲ. ಮನೆಯಲ್ಲಿ ಯಥೇಚ್ಛ ಜೇನುತುಪ್ಪ ಇರುತ್ತಿದ್ದುದರಿಂದ ಅದನ್ನೇ ತುಪ್ಪದ ಜೊತೆ ಬೆರೆಸಿ ಬಳಸುತ್ತಿದ್ದುದು. ಗೋಪೂಜೆಯ ದಿನ ದನಕರುಗಳಿಗೂ ಎರಡೆರಡು ದೋಸೆ ತಿನ್ನುವ ಭಾಗ್ಯ. ಪೂಜೆ ಇಲ್ಲದಿದ್ದರೂ ಎಮ್ಮೆಗಳಿಗೂ ದೋಸೆ ಸಿಗುತ್ತಿತ್ತು.
ನಾನು ಒಂದನೆಯ ಅಥವಾ ಎರಡನೆ ಕ್ಲಾಸಿನಲ್ಲಿ ಇರುವಾಗ ಕಡೆಯುವ ಕಲ್ಲು ಇದ್ದ ಜಾಗದಲ್ಲಿ ಹೊರಗಿನ ‘ಹೊಸ ಜಗಲಿ’ಗೆ ಹೋಗುವ ಬಾಗಿಲು ಬಂತು. ಕಡೆಯುವ ಕಲ್ಲು ಹೊಸ ಜಗಲಿಗೆ ಸ್ಥಳಾಂತರಗೊಂಡಿತು. ಆಣ್ಣಿ ಆಚಾರಿ ಹೊಸ ಜಗಲಿಗೆ ಮರದ ದಳಿ ಮತ್ತು ಇಲ್ಲಿ ಬಾಗಿಲು ಕೂರಿಸಿದ್ದು ನನಗೂ ನೆನಪಿದೆ. ಈ ಬಾಗಿಲಿನ ಒಳಬದಿಯ ಚಿಲಕಕ್ಕೆ ಆತ ರಹಸ್ಯ ಜಾಗದಲ್ಲಿ ಕಳ್ಳ ಕೀಲು ರಚಿಸಿ ಕೊಟ್ಟಿದ್ದ. ಮರದ ಬಾಗಿಲುಗಳಿಗೆ ಸಾಮಾನ್ಯವಾಗಿ ವಿರುದ್ಧ ದಿಕ್ಕಿಗೆ ಚಲಿಸುವ ಎರಡು ಚಿಲಕಗಳು ಇರುವುದು ವಾಡಿಕೆ. ಬಾಗಿಲು ಭದ್ರಪಡಿಸುವಾಗ ಒಂದೇ ಚಿಲಕ ಹಾಕಬೇಕೆಂದು ಅಣ್ಣಿ ಆಚಾರಿ ಹೇಳುತ್ತಿದ್ದ. ಹೀಗೆ ಮಾಡಿದರೆ ಯಾರಾದರು ಮಂತ್ರವಾದ ಮಾಡಿ ಚಿಲಕ ಸರಿಯಲಿ ಎಂದು ಹೇಳಿದ ಪಕ್ಷದಲ್ಲಿ ಒಂದು ಚಿಲಕ ತೆರೆದರೆ ಇನ್ನೊಂದು ಮುಚ್ಚುತ್ತದೆ ಎಂದು ಅವನ ಅಂಬೋಣ! ಕಡೆಯುವ ಕಲ್ಲು ಇದ್ದಲ್ಲಿ ಬಾಗಿಲು ಬಂದ ಮೇಲೆ.

ಮಕ್ಕಳ ತೊಟ್ಟಿಲು ಬಾಹೆರ್ಲಿ ಮಾಳಿಯಲ್ಲೇ ಇದ್ದದ್ದು. ಎಂದೋ ಎಂದೋ, ಎಂದೋ ನಿನ್ನ ದರುಶನ ಎಂದು ಹಾಡುತ್ತಾ ಅಂಬಕ್ಕ ನನ್ನನ್ನು ತೂಗಿದ್ದು ಇಲ್ಲೇ. ಹರಿಹರ ಅಣ್ಣ ಸಂಜೆ ನಮ್ಮನ್ನು ತೊಟ್ಟಿಲಲ್ಲಿ ಕೂರಿಸಿ ತೂಗುತ್ತಾ ಬಾಯಿಪಾಠ ಹೇಳಿಕೊಡುತ್ತಿದ್ದರು. ಇದು ಶುಭಂ ಕರೋತು ಕಲ್ಯಾಣಂ ಶ್ಲೋಕದಿಂದ ಆರಂಭವಾಗಿ ಆದಿತ್ಯವಾರ ಸೋಮವಾರ, ಪಾಡ್ಯ ಯುಗಾದಿ ಪಾಡ್ಯ ಬಿದಿಗೆ ಸೋಮನ ಬಿದಿಗೆ, ಚೈತ್ರ ವೈಶಾಖ, ವಸಂತ ಋತು ಗ್ರೀಷ್ಮ ಋತು, ಮೇಷ ವೃಷಭ, ಅಶ್ವಿನಿ ಭರಣಿ, ಬವ - ಸಿಂಹ, ಬಾಲವ - ಹುಲಿ, ಪ್ರಭವ ವಿಭವ ಇತ್ಯಾದಿ ಕಾಲ ಗಣನೆಯ ಎಲ್ಲ ಕೋಷ್ಟಕಗಳನ್ನು ಒಳಗೊಂಡಿರುತ್ತಿತ್ತು. ಕೊನೆಯಲ್ಲಿ ಸಂಡೆ ಮಂಡೆ ಹೇಳಿಕೊಡುತ್ತಿದ್ದ ನಮ್ಮಣ್ಣ ಸಾಟರ್ಡೇ ಆದ ಮೇಲೆ ಪ್ರಾಸಬದ್ಧವಾಗಿ ಪತ್ರೋಡೆಯನ್ನೂ ಸೇರಿಸುತ್ತಿದ್ದರು!
ಸ್ವಲ್ಪ ದೊಡ್ಡವರಾದ ಮೇಲೆ ನಾವು ತೊಟ್ಟಿಲಿನ ಆಚೀಚೆ ಅಂಚುಗಳ ಮೇಲೆ ಇಬ್ಬರು ಕುಳಿತು ಜೀಕುತ್ತಾ ಬಾರೊ ಬಾರೊ ಬಾರೊ ಗಣಪ, ಗೆಳೆಯನೆ ಪೇಳುವೆ ಕೇಳಣ್ಣ, ಝನ್ ಝನ್ಕ ಝನ್ಕರೊ ಇತ್ಯಾದಿ ಹಾಡು ಹೇಳುತ್ತಿದ್ದೆವು.
ತೊಟ್ಟಿಲಿನ ಸಮೀಪ ಗೋಡೆಯಲ್ಲಿ ಇದ್ದ ಗೂಡು ಚಿಮಿಣಿ ದೀಪಗಳು ಮತ್ತು L ಆಕಾರದ outlet ಇದ್ದ ಹಸುರುಬಣ್ನದ ಚಿಮಿಣಿ ಎಣ್ಣೆಯ ಕ್ಯಾನ್ ಇಡುವ ಜಾಗವಾಗಿತ್ತು. ಇನ್ನೊಂದು ಬದಿಯಲ್ಲಿದ್ದ ಗೂಡಿನಲ್ಲಿ ತೆಂಗಿನೆಣ್ಣೆಯ ಉರುಳಿ ಇಡುತ್ತಿದ್ದ ಜಾಗ.
ಹೊರಗಿನ ಚಾವಡಿಯಿಂದ ಇಲ್ಲಿಗೆ ಬರುವ ಬಾಗಿಲಿನ ಮೇಲ್ಭಾಗದಲ್ಲಿ ಆಣಿ, ಸ್ಕ್ರೂ, ಬೋಲ್ಟ್, ನಟ್ ಇತ್ಯಾದಿ ಸಕಲ ಗುಜರಿ ವಸ್ತುಗಳನ್ನು ಹಾಕಿಡುವ ನಳೊ ಎಂಬ ಹೆಸರಿನ, ಮೇಲ್ಭಾಗ ತೆರೆದಿರುವ ಬಿದಿರಿನ ಅಂಡೆ ತೂಗಾಡುತ್ತಿತ್ತು. ಅಲ್ಲೇ ಸಮೀಪದಲ್ಲಿ ಕೃಷಿ ಕೆಲಸದ ಕತ್ತಿಗಳನ್ನು park ಮಾಡುವ ಸೀಳು ಬಿದಿರು.
ಚೌತಿಯ ಮಂಟಪ ಇಲ್ಲೇ ಇರುತ್ತಿದ್ದುದು. ಮಂಟಪವನ್ನು ನಿಲ್ಲಿಸಲು ಬೇಕಾಗುವ ಎರಡು ಬಿದಿರುಗಳು ಬಚ್ಚಲುಮನೆಯ ಅಟ್ಟದ ಮೇಲಿರುತ್ತಿದ್ದವು. ಅವುಗಳನ್ನು ಕೆಳಗಿಳಿಸಿ ತೊಳೆದು ಮಧ್ಯಾಹ್ನದೊಳಗೆ ಸೂಕ್ತ ಜಾಗದಲ್ಲಿ ಕಟ್ಟಿ ಮಾಳಿಗೆಯ ಮೇಲಿರುತ್ತಿದ್ದ ಮರದ ಮಂಟಪವನ್ನು ತಂದು ಅಳವಡಿಸುವ ಕೆಲಸ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು. ಮನೆಯ ಆಳು ಕಾಳುಗಳಿಗೂ ಚೌತಿ ಗಣಪನ ದರ್ಶನ ಭಾಗ್ಯ ಸಿಗಲಿ ಎಂಬ ಉದ್ದೇಶದಿಂದ ಮಂಟಪಕ್ಕೆ ದೇವರ ಕೋಣೆ ಇದ್ದ ಆಂತ್ಲಿಮಾಳಿಯ ಬದಲು ಹೊರ ಚಾವಡಿಯಿಂದಲೂ ವೀಕ್ಷಿಸಲು ಸಾಧ್ಯವಾಗುವ ಈ ಸ್ಥಳವನ್ನು ನಿಗದಿ ಪಡಿಸಿರಬಹುದು.
ನಾವು ಮನೆಯಲ್ಲಿ ಬೆಳ್ತಿಗೆ ಅಕ್ಕಿ ಬಳಸುವುದು. ತೋಟಕ್ಕೆ ಮದ್ದು ಬಿಡುವವರಿಗೆ ಮತ್ತು ಅಡಿಕೆ ಕೊಯ್ಲು ಮಾಡುವವರಿಗೆ ಹೊರಗಡೆ ಕುಚ್ಚಲು ಅಕ್ಕಿಯ ಅನ್ನ ಮಾಡಿ ಬಡಿಸುವುದಿತ್ತು. ಕೊಟ್ಟಣದ ಕುಚ್ಚಲಕ್ಕಿಯ ಪರಿಮಳಕ್ಕೆ ಮನಸೋತ ನಮಗೂ ಅದನ್ನು ಉಣ್ಣಬೇಕೆಂದು ಆಸೆಯಾದರೆ ಹೊರ ಹಜಾರದಲ್ಲಿ ಕುಳಿತು ಉಣ್ಣುವ ಅನುಮತಿ ಸಿಗುತ್ತಿತ್ತು. ಜೊತೆಗೆ ದೀಗುಜ್ಜೆಯ ಹುಳಿ ಏನಾದರೂ ಇದ್ದರೆ ನಿತ್ಯದ ಎರಡರಷ್ಟು ಅನ್ನ ನಮ್ಮ ಹೊಟ್ಟೆ ಸೇರುತ್ತಿತ್ತು. ಆ ಕಾಲದಲ್ಲಿ ಕುಚ್ಚಲು ಅಕ್ಕಿಗೆ ಒಳಗೆ ಪ್ರವೇಶವಿರಲಿಲ್ಲ.
ಎದುರು ಭಾಗದಲ್ಲಿ ಕಾಣುವ ಮರದ ಕಪಾಟು ತೀರಾ ಹಳೆ ಕಾಲದ್ದಲ್ಲ. ನಮ್ಮ ನೆನಪಿನಲ್ಲೇ ಇನ್ನೊಬ್ಬ ಆಣ್ಣಿ ಆಚಾರಿ ಮಾಡಿದ್ದು. ಆತ ಹವ್ಯಾಸಿ ಯಕ್ಷಗಾನ ಹಲಾವಿದ ಕೂಡ. ಅನೇಕ ವರ್ಷಗಳ ನಂತರ ನಾನು ಮಂಗಳೂರಲ್ಲಿ ಮನೆ ನಿರ್ಮಿಸಿದಾಗ ಕಿಟಿಕಿ ಬಾಗಿಲುಗಳನ್ನು ಆತನೇ ನಿರ್ಮಿಸಿ ಕೊಟ್ಟದ್ದು. ಕಪಾಟುಗಳಿಗೆ, ಬಾಗಿಲುಗಳಿಗೆ ಕುಸುರಿ ಕೆತ್ತನೆ ಮಾಡುವ ಕೌಶಲವೂ ಅವನಲ್ಲಿತ್ತು. ನಮ್ಮ ಮನೆಯ ಮುಂಬಾಗಿಲಿಗೂ ಚಂದದ ಡಿಸೈನ್ ಮಾಡಿ ಕೊಟ್ಟಿದ್ದಾನೆ.
ಮುಂದುಗಡೆ ಕಾಣುವ ಮಾಳಿಗೆ ಮೆಟ್ಟಲಿರುವ ಜಂಕ್ಷನ್ನ ಎದುರುಗಡೆ ಮೂಲೆಯಲ್ಲಿ ಕಡಿದ ಬಾಳೆಗೊನೆ ಇಡುವ ಜಾಗ. ಅಲ್ಲೇ ಎಡಕ್ಕೆ ತಿರುಗಿದರೆ ಹಿತ್ತಲ ಜಗಲಿಗೆ ಹೋಗುವ, ಬಿಜಾಗಿರಿ ಬದಲಿಗೆ ಮೇಲೆ ಮತ್ತು ಕೆಳಗೆ ಮೊಳೆಕ್ಕುತ್ತಿ ಇರುವ ದಪ್ಪದ ಬಾಗಿಲಿನ ಹಿಂಭಾಗ ಹಲಸಿನ ಬೀಜಗಳನ್ನು ಹಸಿಮಣ್ಣಿನೊಡನೆ ಕಲಸಿ ಗುಡ್ದದಂತೆ ಮೆತ್ತಿಡುವ ಜಾಗ. ಹೀಗೆ ಸಂರಕ್ಷಿಸಿದ ಹಲಸಿನ ಬೀಜಗಳು ಎಷ್ಟು ಸಮಯವಾದರೂ ಕೆಡುವುದಿಲ್ಲ. ಬೇಕೆನಿಸಿದಾಗ ಆ ಗುಡ್ಡವನ್ನು ಅಗೆದು ಬೀಜಗಳನ್ನು ಗುದ್ದಿ ಬಳಸಿದರಾಯಿತು.